Saturday, December 26, 2020

ಬ್ಲಾಗ್ ಲೋಕವೇ ಕಲ್ಲು ಸಕ್ಕರೆ ಕಾಣಿರೋ ... !

ಕಲ್ಲು ಸಕ್ಕರೆ ಕೊಳ್ಳಿರೋ ನೀವೆಲ್ಲರೂ 

ಬ್ಲಾಗ್ ಲೋಕವೇ ಕಲ್ಲು ಸಕ್ಕರೆ ಕಾಣಿರೋ 

ಒಮ್ಮೆ ನನಗೆ ನಾನೇ ಚುಗುಟಿಕೊಂಡೇ.. ಅರೆ ಇದು ಕನಸೋ.. ನನಸೋ ಅರಿವಾಗಲಿಲ್ಲ.. ಮೆಲ್ಲಗೆ ನನ್ನ ಕನಸನ್ನು ಜೂಮ್ ಮಾಡಿದೆ.. ಆಗ ಗೊತ್ತಾಯಿತು.. ಅದು ಅಜಾದ್ ಸರ್ ಅವರು ಅಕ್ಷರ ಮಾರುಕಟ್ಟೆಯಲ್ಲಿ ಹೇಳುತ್ತಿದ್ದ ಹಾಡು.. 

ನಿಜ.. ಟೆಸ್ಟ್ ಕ್ರಿಕೆಟ್ ಎಂದೂ ಸೊರಗೋದಿಲ್ಲ.. ತಿಳಿಯಾದ ಊಟದ ಮುಂದೆ.. ಪಾನಿ ಪುರಿ ಎಂದಿಗೂ ಸದಾ ನಿಲ್ಲೋಲ್ಲ.. ಈ ತಂತ್ರಜ್ಞಾನದ ಮಾಯಾಜಾಲದ ಲೋಕದಲ್ಲಿ ದಿಢೀರ್ ಯಶಸ್ಸು.. ದಿಢೀರ್ ಹೆಸರುಗಳು ಏನೇ ಬಂದರೂ ಬ್ಲಾಗ್ ಎಂಬ ಮಾಯಾ ಅಕ್ಕರೆಯ ಅಕ್ಕರದ ಕಾನನದಲ್ಲಿ ಮತ್ತೆ ಗಜರಾಜ  ಗೀಳಿಟ್ಟು ಎಲ್ಲರನ್ನೂ ಕರೆಯುವಂತೆ.. ಬ್ಲಾಗ್ ಲೋಕದ ಧೃವತಾರೆಗಳನ್ನು ಮತ್ತೆ ಸೇರಿಸುವ ಸಾಹಸ ಮಾಡಿದ್ದಾರೆ.. 

ಶ್ರೀಮನ್ ಶ್ರೀಮನ್ ಯಾರೋ ಕೂಗಿದ ಹಾಗೆ ಕೇಳಿಸಿತು.. 

ತಿರುಗಿ ನೋಡಿದೆ... ಅಜಾದ್ ಸರ್.. ಕೂಗಿದರು.. 

ಶ್ರೀಮನ್ ಈ ಬ್ಲಾಗ್ ಲೋಕದ ಮಾಯಾಲೋಕವನ್ನು ಬಡಿದು ಬಡಿದು ತಟ್ಟಿ ಎಬ್ಬಿಸುತಿದ್ದದ್ದು ಬದರಿ .. ಬ್ಲಾಗ್ ಬ್ಯಾಡರಿ ಅನ್ನೋರನ್ನೆಲ್ಲ ಮತ್ತೆ ಮತ್ತೆ ಕರೆ ಕೊಡುತ್ತಿದ್ದದ್ದು ಅವರೇ.. ಈ ಬ್ಲಾಗ್ ಕೂಟಕ್ಕೆ ಅಧಿಕೃತ ಚಾಲನೆಗೆ ಗೇರ್ ಹಾಕಿದ್ದು.. ಹಾಗಾಗಿ ಯಶಸ್ಸಿನ ಕಿರೀಟ ಅವರಿಗೆ ಸಲ್ಲಬೇಕು.. ನಾನೂರು x  ನಾನೂರು ರಿಲೇ ಓಟದಲ್ಲಿ ಬ್ಯಾಟನ್ ಕೊಡುವಂತೆ ನನಗೆ ಕೊಟ್ಟರು ನಾನು ಓಡುತ್ತಿದ್ದೇನೆ ಅಷ್ಟೇ ಶ್ರೀಮನ್ ಎಂದರು.. 

ಆಗಲಿ ಸರ್..ಹಾಗೆ ಹೇಳುತ್ತೇನೆ ಎಂದು ಮತ್ತೆ ಕೂತೆ.. 

ಟನ್ ಟನ್ ಅಂತ ಸದ್ದಾಯಿತು.. !

*****

ಒಂದು ಆಲದ ಮರ.. ಅದರ ಸುತ್ತಾ ಒಂದು ಕಟ್ಟೆ .. ಅಲ್ಲಿ ಗುರುಗಳಾದ ಸುನಾಥ್ ಕಾಕಾ ಕೂತಿದ್ದರು..ಬ್ಲಾಗ್ ಲೋಕದ ಬರಹಗಾರರು ಎಲ್ಲರೂ ಕೂತಿದ್ದರು... 

ನೋಡ್ರಪ್ಪಾ ಬ್ಲಾಗ್ ಲೋಕ ಅನ್ನೋದು ಒಂದು ತಪಸ್ಸಿದ್ದಂತೆ... ಅಕ್ಷರಗಳೇ ಅಲ್ಲಿ ಧ್ಯಾನಕ್ಕೆ ಬೇಕಾಗುವ ಮಂತ್ರಗಳು. .. ಶಾರದಾ ದೇವಿಯೇ ಈ ಬರಹಗಾರರನ್ನು ಪೊರೆಯುವ ತಾಯಿ. ಬೇಂದ್ರೆ ಶರೀಫ ಇವರ ಬರಹಗಳನ್ನು ಓದುತ್ತಾ ಬೆಳೆದ ನನಗೆ.. ನೀವುಗಳು ಬರೆಯುವ ಕಥಾನಕಗಳು ಅಚ್ಚರಿ ಮೂಡಿಸುತ್ತವೆ.. ಆಗಲಿ ನನಗೆ ತಿಳಿದಷ್ಟು... ಅನುಭವ ಪಾಕದಲ್ಲಿ ಸಿಕ್ಕ ಒಂದೆರಡು ಹನಿಗಳನ್ನು ಹಂಚಿಕೊಳ್ಳುವ ಪ್ರಯತ್ನ ಮಾಡುತ್ತೇನೆ.. 

ನೋಡ್ರಪ್ಪಾ ಬರಹ ಅನ್ನುವ ಒಂದು ಪ್ರಯತ್ನ ನೀವುಗಳು ಬಾವಿ ತೆಗೆದಂತೆ.. ನೆಲ ಕೊರೆದಷ್ಟು ಶುದ್ಧ ನೀರು ಸಿಗುವಂತೆ... ಬರೆಯುತ್ತಾ ಹೋದಂತೆ ಮನದೊಳಗೆ ಇನ್ನಷ್ಟು ಸುವಿಚಾರಗಳು ತುಂಬಿಕೊಳ್ಳುತ್ತಾ ಹೋಗುತ್ತದೆ... ಹಾಗಾಗಿ ಬರೆಯೋದನ್ನು ನಿಲ್ಲಿಸಬೇಡಿ.. ಜೊತೆಗೆ ಫೇಸ್ಬುಕ್ ವಾಟ್ಸಾಪ್ ಇನ್ಸ್ಟಾಗ್ರಾಮ್... ಇವೆಲ್ಲಾ ನಿಮ್ಮನ್ನು ಹೊರಜಗತ್ತಿಗೆ ಪರಿಚಯಿಸುತ್ತದೆ.. 

ಜಿಮ್ನಾಸ್ಟಿಕ್ಸ್ ನಲ್ಲಿ ಒಂದು ಮೆತ್ತನೆಯ ಹಾಸು ಅಥವಾ ಸ್ಪ್ರಿಂಗ್ ಇರುವ ಹಾಸಿನ ಮೇಲೆ ಒಮ್ಮೆ ಚಿಮ್ಮಿ ಎತ್ತರಕ್ಕೆ ಏರುವಂತೆ.. ಈ ಜಾಲತಾಣದಲ್ಲಿ ಗುರುತಿಸುಕೊಂಡು ಆ ಗುರುತಿಸುವಿಕೆಯನ್ನು ಬರಹವನ್ನು ಮೊನಚುಗೊಳಿಸಲು ಉಪಯೋಗಿಸಿಕೊಳ್ಳಿ.. 

ಇಷ್ಟೇ ನನ್ನ ಪುಟ್ಟ ಪುಟ್ಟ ಮಾತುಗಳು!

****

ಅರೆ ಗುರುಗಳೇ ಎಷ್ಟು ಚುಟುಕಾಗಿ.. ಅಗಸ್ತ್ಯರು ಒಂದು ಬೊಗಸೆಯಲ್ಲಿ ಶರಧಿಯನ್ನೇ ಆಪೋಶನ ಮಾಡಿದಂತೆ.. ಎಷ್ಟು ಸರಳವಾಗಿ ಮನಮುಟ್ಟುವಂತೆ ಹೇಳಿಬಿಟ್ಟಿರಿ.. ಧನ್ಯವಾದ ಗುರುಗಳೇ ಎನ್ನುತ್ತಾ ಸುತ್ತಲೂ ನೋಡಿದೆ.. 

ಅಲ್ಲಿ ಶಿವ ಪಾರ್ವತಿಯರು ಸುಬ್ರಮಣ್ಯ ಮತ್ತು ಗಣಪನಿಗೆ ಒಂದು ಪರೀಕ್ಷೆ ಇಟ್ಟಿದ್ದರು... ಮೂರು ಲೋಕವನ್ನು ಸುತ್ತಿ ಸರಸ್ವತಿಯ ದರ್ಶನ ಮಾಡಿ ಎಂದರು..  

ಸುಬ್ರಮಣ್ಯ ಹಿಂದೆ ಇದೆ ರೀತಿ ಮಾಡಿದಂತೆ ಮಾಡದೆ.. ಸೀದಾ ಅಪ್ಪ ಅಮ್ಮನನ್ನು ಸುತ್ತಿ ಮೂರು ಲೋಕ ಸುತ್ತಿ ಬಂದೆ.. ನೀವೇ ನನಗೆ ಮೂಲೋಕ.. ನೀವೇ ನನಗೆ ಅಕ್ಷರ ಕಳಿಸಿದ ಗುರುಗಳು ಅಂದಾಗ.. ಯಥಾ ಪ್ರಕಾರ ಗಣಪ.. ವಿಶಿಷ್ಟ ರೀತಿಯ ಆಕಾರಕ್ಕೆ ಅಷ್ಟೇ ಅಲ್ಲದೆ ವಿಶಿಷ್ಟ ಚಿಂತನೆಗೂ ಹೆಸರಾದ ಹಾಗೆ.. ತಕ್ಷಣ ಬ್ಲಾಗ್ ಲೋಕದ ವಾಟ್ಸಾಪ್ ಗ್ರೂಪ್ ನೋಡಿ.. ಅಜಾದ್ ಸರ್ ಅವರು ಕೊಟ್ಟ ಜೂಮ್ ಕೊಂಡಿ ಒತ್ತಿದ ತಕ್ಷಣ.. ಪ್ರಪಂಚದ ನಾನಾ ಮೂಲೆಯಿಂದ ಅಕ್ಷರಗಳ ನುಡಿಯರ್ಚನೆ ಮಾಡುತ್ತಿರುವ ಅನೇಕ ಬರಹಗಳ ಸಮೂಹವೇ ಸಿಕ್ಕಿತು.. ಇವರೇ ಅಲ್ಲವೇ ಅಕ್ಷರ ಪುತ್ರರು ಎಂದು ಗಣಪ ಅದನ್ನೇ ಕಂಡು ನಮಿಸಿದಾಗ.. ಸುಬ್ರಮಣ್ಯಾದಿಯಾಗಿ ಶಿವ ಶಕ್ತಿಯರ ಜೊತೆಯಲಿ ಇಡೀ ದೇವ ಪರಪಂಚವೆ ನಮಿಸಿತು.. !

**

ಹೌದು ಇದು ಉತ್ಪ್ರೆಷೆಯಲ್ಲ.. ಇದೊಂದು ಅದ್ಭುತ ಲೋಕ.. ಈ ಬ್ಲಾಗ್ ಲೋಕದ ಕಾನನದಲ್ಲಿ ಅರಳಿದ ಸುಮಗಳು ಒಂದುಗೂಡಿ ಅಕ್ಷರೋದ್ಯಾನದಲ್ಲಿ ಮತ್ತೆ ಅರಳುತ್ತಿರುವ ಸುಂದರ ಸಮಯ. 

ಎಲ್ಲರೂ ಕಿವಿಗೊಟ್ಟು ಕೇಳಿದರು.. 

ಸಂತಸ ಅರಳುವ ಸಮಯ..                                                                                                                        ಮರೆಯೋಣ ಚಿಂತೆಯ                                                                                                                                (ಇದು ಬ್ಲಾಗ್ ಲೋಕದ)                                                                                                                                ಇದು ರಮ್ಯಾ ಚೈತ್ರ ಕಾಲ                                                                                                                              ಇದು ಬ್ಲಾಗ್ ಚೈತ್ರ ಕಾಲ 

ಬನ್ನಿ ಮತ್ತೆ ಬ್ಲಾಗಿಸೋಣ.. ಬ್ಲಾಗಿಸೋಣ.. !

****

ಈ ಲೋಕಕ್ಕೆ ದಾಂಗುಡಿಯಿಟ್ಟ 

ಸುನಾಥ್ ಕಾಕಾ 

ಅಜಾದ್ ಸರ್ 

ಮಾಧವ್ 

ಶ್ರೀನಿಧಿ 

ಅಮಿತ ರವಿಕಿರಣ್ 

ದಿನಕರ್ 

ಗುರು ಪ್ರಸಾದ್ 

ರಂಗಸ್ವಾಮಿ ಜೆ ಬಿ 

ಜಯಲಕ್ಷ್ಮಿ ಪಾಟೀಲ್ 

ಮಹಿಮಾ 

ಪ್ರದೀಪ್ 

ರಮಾನಾಥ್ 

ರೂಪ ಸತೀಶ್ 

ಸವಿತಾ 

ಸುಗುಣ 

ಮಹೇಶ್ 

ವನಿತಾ 

ಈ ಸುಮಗಳ ಜೊತೆಯಲ್ಲಿ ಉದ್ಯಾನವನದಲ್ಲಿ ನಲಿದ ಸುಂದರ ಅನುಭವ ನನ್ನದು.. 

ಕಿರುಪರಿಚಯ.. ಅವರುಗಳು ರಚಿಸಿದ ಕವನಗಳು, ಅನುಭವಗಳು ಎಲ್ಲವೂ ದೊಡ್ಡ ಬಾಳೆಯೆಲೆಯಲ್ಲಿ ಬಡಿಸಿದ ಮೃಷ್ಟಾನ್ನ ಭೋಜನದಂತೆ ಸೊಗಸಾಗಿತ್ತು.. ಆನ್ಲೈನ್ ಆಗಿದ್ದರಿಂದ ಚಿತ್ರಗಳು ಇರಲಿಲ್ಲ.. ಆದರೆ ಭಾಗವಹಿಸಿದ ಹೆಸರುಗಳು ಮನದಲ್ಲಿಯೇ ಅಚ್ಚಳಿಯದ ಅನುಭವವನ್ನು ಮೂಡಿಸಿದೆ.. 

ಎಂದರೋ ಮಹಾನುಭಾವುಲು ಅಂದರೀಕಿ ವಂದನಮು... !

Friday, December 11, 2020

ಗುಂಡ ಮಾವ ಎನ್ನುವ ನನ್ನ ಬದುಕಿನ ಅದ್ಭುತ ವ್ಯಕ್ತಿ..!


 ಏನೋ ಶ್ರೀಕಾಂತ ಇದು...ಹೀಗಾಗಿ ಬಿಡ್ತು..

ಹೌದು ಕಣಮ್ಮ..ಈ ವರ್ಷದ ಮೇಲೆ ಜುಗುಪ್ಸೆ ಬರೋ ಹಾಗೆ ಆಗೋಯ್ತು...

ನನಗೆ ಗೊತ್ತು ನಿನ್ನ ಮನದಲ್ಲಿ ಓಡುತ್ತಿರುವ ಪದಗಳು..ನಾ ಹೇಳ್ತೀನಿ...ನೀ ಬರೀ..

ಅದ್ನೇ ಅಲ್ವಾ ನಾ ಯಾವಾಗಲೂ ಮಾಡೋದು..ನೀವುಗಳು ಹೇಳೊದನ್ನ ಬರೆಯೋದೆ ಕೆಲಸ ನನ್ನದು..!

****

ಅಮ್ಮ ನಾನು ಸೀಮಾಳನ್ನು ಮದುವೆಯಾಗುವ ನಿರ್ಧಾರ ಮಾಡಿದ್ದೀನಿ..ಶೀತಲ್ ಒಪ್ಪಿದ್ದಾಳೆ..ಮುಂದಿನ ಕಾರ್ಯಕ್ರಮ ನಿನಗೆ ಒಪ್ಪಿಸ್ಸಿದ್ದೀನಿ ಅಂದಾಗ..ನನ್ನ ತಲೆಯಲ್ಲಿ ಮಿಂಚಿನ ಯೋಚನೆಗಳು ಮೂಡಿದವು..

ಧಾರೆ ಎರೆಸಿಕೊಳ್ಳೋಕೆ ನಿನ್ನ ಅಣ್ಣ ಅತ್ತಿಗೆ ಇದ್ದಾರೆ..ಧಾರೆ ಎರೆದು ಕೊಡೋಕೆ ಸೀಮಾಳ ಅಪ್ಪ ಅಮ್ಮ ಈ ಹಾಳಾದ್ದು ಕೊರೊನಾ ಸಲುವಾಗಿ ಬರೋಕೆ ಆಗ್ತಾ ಇಲ್ಲ..ಏನು ಮಾಡೋದು..ಅಂತ ಯೋಚಿಸಿದೆ..

ತಕ್ಷಣ ನೆನಪಿಗೆ ಬಂದದ್ದು ಗುಂಡ..ಅವನನ್ನು ಕೇಳು ಅಂದೆ..ತಕ್ಷಣ ...ಓಕೆ ಓಕೆ..ನೀನೆ ಬರೀ...ನಿನ್ನ ಬರಹ ಓದೋಕೆ ಚೆನ್ನಾ ಅಂತ ಅಮ್ಮ ನಿಲ್ಲಿಸಿದರು..

ಮುಂದೆ ಡ್ರೈವರ್ ಸೀಟಿನಲ್ಲಿ ನಾ ಕುಳಿತೆ..

ಮದುವೆ ಹುಡುಗ ಹುಡುಗಿ..ಸ್ಥಳ..ಪುರೋಹಿತರು..ಊಟ ತಿಂಡಿಯ ವ್ಯವಸ್ಥೆ ಇವೆಲ್ಲವೂ ಸಿದ್ದವಾಗಿತ್ತು..ಮುಖ್ಯ ಧಾರೆ ಎರೆದು ಕೊಡುವ ಎರಡು ಸುಮಧುರ ಮನಸ್ಸುಗಳು ಬೇಕಿತ್ತು..

ಆಗ ಒಂದು ಕರೆ..ಚಟಾಪಟ ಮಾತಾಡುವ ಸುಧಾ ಅತ್ತೆ..ನಾನೂ ನಿನ್ನ ಮಾವ..ಡ್ರೆಸ್ ರೆಡಿ ಮಾಡ್ಕೋತೀವಿ...ನಮ್ಮನ್ನು ಕರೆದುಕೊಂಡು ಬಂದು ಕಳಿಸಿಕೊಡುವ ಜವಾಬ್ದಾರಿ ನಿನ್ನದು ಅಂದರು..

ನನ್ನ ಅಮ್ಮನ ಮೇಲೆ..ನಮ್ಮ ಮನೆಯ ಸದಸ್ಯರ ಮೇಲೆ ಗುಂಡ ಮಾವನಿಗೆ ಇರುವ ಅಭಿಮಾನ ಆ ಮಟ್ಟದ್ದು..

ಎರಡನೇ ಮಾತೇ ಇಲ್ಲ..ತಮಗೆ ಅಷ್ಟು ಹುಷಾರಿಲ್ಲದೇ ಹೋದರು ನನ್ನ ಬದುಕಿನ ತಿರುವಿಗೆ ಸಾಕ್ಷಿಯಾಗಿ ನಿಂತವರು ಗುಂಡ ಮಾವ..

ಸದಾ ಬಿರುಸು ಮಾತಿನಲ್ಲೇ ಬೈದರೂ ಅದರ ಹಿಂದೆ ಅಪಾರ ಪ್ರೀತಿ ಮಮಕಾರವಿತ್ತು..

ನಿಮಗೆ ಮನೆ ಬರೋಕೆ ಕರೆ ಕಳಿಸಬೇಕಾ..ಸುಮ್ಮನೆ ಬಂರ್ರೋ ಅಂತಾ ಸದಾ ಅಭಿಮಾನ ತುಂಬಿದ ಮಾತುಗಳ ಸರದಾರ ಗುಂಡ ಮಾವ..

ಫೇಸ್‌ಬುಕ್‌ ನಲ್ಲಿ ಅವರ ಆಹ್ವಾನ ಬಂದಾಗ..ಅವರ ನಿಜ ಹೆಸರೇ ಮರೆತು ಹೋಗಿದ್ದ ನನಗೆ ಅರೇ ಯಾರಿದು ಎಸ್ ಎ ನಾಗೇಶ್ ಅಂತ ಅವರಿಗೆ ಮೆಸೇಜ್ ಮಾಡಿ ಕೇಳಿದೆ..

ನನಗೆ ನೀವು ಹೇಗೆ ಗೊತ್ತು ಅಂದೆ..

ನಿಮ್ಮ ಮನೆಯವರೆಲ್ಲಾ ಗೊತ್ತು ನನಗೆ ಅಂದರು..

ಯಾವಾಗಿಂದ ಅಂದೆ

ನೀನು ಹುಟ್ಟುವುದಕ್ಕಿಂತ ಮೊದಲಿಂದಲೂ ಅಂದ್ರು..

ಆಗ ಪರಸ್ಪರ ಸ್ನೇಹಿತರ ಪಟ್ಟಿ ನೋಡಿದಾಗ ಗೊತ್ತಾಯಿತು..

ಅರೇ ಗುಂಡ ಮಾವ...ಕ್ಷಮಿಸಿ ಅಂತ ಕೆಟ್ಟದಾಗಿ ಹಲ್ಲು ಬಿಟ್ಟೆ..

ನಂತರ ಯಾವುದೋ ಒಂದು ಕಾರ್ಯಕ್ರಮದಲ್ಲಿ ಸಿಕ್ಕಾಗ..ನನ್ನ ನೋಡಿ ಜೋರಾಗಿ ನಕ್ಕರು..ನಾನು ಅವರನ್ನ ತಬ್ಬಿಕೊಂಡು ಹಲ್ಲು ಬಿಟ್ಟಿದ್ದೆ..

ನಮ್ಮ ಮನೆಯ ಯಾವುದೇ ಕಾರ್ಯಕ್ರಮವಾಗಲಿ ಗುಂಡಮಾವ ಸದಾ ಬರುತ್ತಿದ್ದರು..ನಮಗೆ ಮಾರ್ಗದರ್ಶನ ನೀಡುತ್ತಿದ್ದರು.

ನನನ ಬದುಕಿನ ತಿರುವಿಗೆ ಸಾಕ್ಷಿಯಾಗಿ ಜೊತೆಯಾಗಿ ನಿಂತಿದ್ದ ಗುಂಡ ಮಾವನ ಆಶೀರ್ವಾದ ಸದಾ ಹಸಿರಾಗಿರುತ್ತದೆ..!

**""

ಚಂದ ಕಣೋ ಶ್ರೀಕಾಂತ ಹೇಳಬೇಕಾದ್ದು ಸರಿಯಾಗಿದೆ..ಗುಂಡ ಜೀವನದಲ್ಲಿ ಕಷ್ಡ ಪಟ್ಟು ಮೇಲೆ ಬಂದವನು..ಆದರೆ ಗರ್ವ ಎಂದಿಗೂ ಅವನ ಸುತ್ರಾ ಸುಳಿಯಲಿಲ್ಲ..

ವಿಶಾಲು.. ಭಾವ ..ಅಂತ ಸದಾ ಪ್ರೀತಿ ‌ತೋರಿಸುತ್ತಿದ್ದ ಗುಂಡನನ್ನು ನನ್ನ ಕಡೆ ದಿನಗಳಲ್ಲಿ ನೋಡಲಾಗಲಿಲ್ಲ..ಆದರೆ ಈಗ ಇಲ್ಲಿಗೆ ಬರುತ್ತಿರುವುದು ನನಗೆ ತಡೆಯಲಾಗದಷ್ಡು ನೋವು ಕೊಡುತ್ತಿದೆ..

ಇಲ್ಲಿಗೆ ಬರುವ ವಯಸ್ಸಲ್ಲಾ..ತನ್ನ ಮಕ್ಕಳ ಏಳಿಗೆಯನ್ನು ಕಂಡು..ಮೊಮ್ಮಕ್ಕಳ ಜೊತೆಯಲ್ಲಿ ಮಡದಿಯ ಜೊತೆಯಲ್ಲಿ..ಇನ್ಮಷ್ಟು ವರ್ಷ ಇರಬೇಕಾದವನು ಹೀಗೆ ತಟಕ್ ಅಂತ ಹೊರಟಿದ್ದಾನೆ...ಆ ದೇವನ ಇಚ್ಚೆಯೇನೋ ಯಾರು ಬಲ್ಲರು..

****

ಗುಂಡ ಮಾವ..ಎಲ್ಲೇ ಇರಿ ಹೇಗೆ ಇರಿ ..ನಮ್ಮನ್ನೆಲ್ಲಾ ಸದಾ ಹರಸುತ್ತಿರಿ..!

Thursday, December 3, 2020

ಅಮ್ಮ ಎನ್ನುವ ದೈತ್ಯ Server - ಭಾಗ ೫

ಹದಿಮೂರನೇ ದಿನವಾಗಿತ್ತು.. ಮನಸ್ಸು ಕದಡಿದ ಕೆರೆಯ ನೀರಾಗಿತ್ತು. ನಮ್ಮ ಜೊತೆಯಲ್ಲಿಯೇ ಇದ್ದ ನದಿ ಕಡಲು ಸೇರಿ ದಿನಗಳು ಉರುಳಿ ಹೋಗಿದ್ದವು.. 

ಬೈಕಿನಲ್ಲಿ ಅಮ್ಮನ ಮನೆಗೆ ಬರುತ್ತಿದ್ದೆ.. ಮನೆಯ ಹತ್ತಿರ ಬಂದು ಮಾಮೂಲಿ ಅಭ್ಯಾಸದಂತೆ ತಲೆ ಎತ್ತಿ ನೋಡಿದೆ.. ಬಾಲ್ಕನಿ / ಮೆಟ್ಟಿಲ ಹತ್ತಿರ.. ಇಲ್ಲವೇ ಅಡಿಗೆ ಮನೆಯ ಪೋರ್ಟಿಕೋದಲ್ಲಿ ಕಾಣುತಿದ್ದ ದೃಶ್ಯ ಕಾಣಲಿಲ್ಲ.. 

ಆದರೆ ಒಮ್ಮೆ ಗಾಬರಿಯಾದೆ.. ಮೈಯೆಲ್ಲಾ ಜುಮ್ ಎಂದಿತು.. ಸಣ್ಣಗೆ ಬೆವರು.. ನೋಡಿದರೆ ಅಮ್ಮ ಉಡುತಿದ್ದ ಸೀರೆಯಲ್ಲಿ ಒಂದು ಆಕೃತಿ ಓಡಾಡುತ್ತಿದ್ದ ದೃಶ್ಯ.. ಅದು ಇನ್ನೂ ಬೆಳಗಿನ ಜಾವ ಅಷ್ಟೊಂದು ಬೆಳಕು ಹರಿದಿರಲಿಲ್ಲ.. ಸಣ್ಣಗೆ ಬೆನ್ನು ಹುರಿಯಲ್ಲಿ ನಡುಕ.. ತೀಕ್ಷ್ಣವಾಗಿ ಗಮನಿಸಿದೆ.. 

ಅರೆ.. ಅಮ್ಮ ಸಾಮಾನ್ಯವಾಗಿ ಉಡುತಿದ್ದ ಸೀರೆಯಲ್ಲಿ ಅಕ್ಕ ಓಡಾಡುತಿದ್ದಳು.. ಭಗವಂತನ ಲೀಲೆಯೇ ಹಾಗೆ ಅಲ್ಲವೇ.. ಸದಾ ಅಮ್ಮ ಇರೋಕೆ ಆಗೋಲ್ಲ ಅಂತ ಅಕ್ಕನ ರೂಪದಲ್ಲಿ ಅಮ್ಮ ನಿಂತಿರುತ್ತಾಳೆ.. 

ಇದೆಲ್ಲಾ ನೆಡೆದದ್ದು ಹತ್ತು ಸೆಕೆಂಡುಗಳಲ್ಲಿ .. 

ಆಗಸದತ್ತ ನೋಡಿದೆ.. ಅಮ್ಮನ ಫೋಟೋದಲ್ಲಿರುವ ಅದೇ ನಗು ಮೊಗ ಕಾಣಿಸಿತು.. ಬಾಪ್ಪಾ ಅಂತ ಕರೆದ ಅನುಭವ.. ಕಣ್ಣು ತುಂಬಿ ಬಂದಿತ್ತು.. 

ಹಾಗೆ ಕಣ್ಣೊರೆಸಿಕೊಂಡು.. ಮುಂದಿನ ಕಾರ್ಯಗಳ ಕಡೆಗೆ ಗಮನ ಕೊಟ್ಟೆ.. 

ಹೌದು ಅಮ್ಮನ ನೆನಪು.. ಅರೆ ನೆನಪೆಲ್ಲ ಅವರ ಛಾಯೆ ಹೋಗೋಲ್ಲ.. ಹೋಗೋಕೆ ಸಾಧ್ಯವೂ ಇಲ್ಲ.. 

ಅದಕ್ಕೆ ಅಲ್ಲವೇ ಅಣ್ಣಾವ್ರ ಚಿತ್ರದಲ್ಲಿ ಹಾಡಿರುವುದು.. ಸಾವಿರ ನದಿಗಳು ಸೇರಿದರೇನೂ ಸಾಗರಕೆ ಸಮನಾಗುವುದೇನು.. ಶತಕೋಟಿ ದೇವರು ಹರಸಿದರೇನು ಅಮ್ಮನ ಹರಕೆಗೆ ಸರಿಸಾಟಿಯೇನು.. 

ನಲವತ್ತೈದು ದಿನಗಳು ಕಳೆದೆ ಹೋದವು.. ಅಮ್ಮನ ಪಯಣ ಸ್ವರ್ಗದತ್ತ ಸಾಗುತ್ತಲಿದೆ.. ತನ್ನ ಪೂರ್ವಜರನ್ನು.. ಅಲ್ಲಿರುವ ಅನೇಕ ಬಂಧು ಮಿತ್ರರರನ್ನು.. ತನಗೆ ಕುಂಕುಮ ಭಾಗ್ಯ ಕೊಟ್ಟ ಯಜಮಾನರನ್ನು ಕಾಣಲು ಹೋಗುತ್ತಿದ್ದಾರೆ.. 

ಶ್ರೀಕಾಂತ ಅಂದು ನನ್ನ ಮನೆಯಿಂದ ಹೊರಟಾಗ ಒಂದು ವಿಶೇಷ ಘಟನೆ ನೆಡೆಯಿತು.. ನಿನಗೆ ಅರ್ಥವಾಗಿದೆ.. ಅದನ್ನು ನೀನು ಬರೆಯುತ್ತೀಯ ಅಂತ ಕಾಯುತ್ತಿದ್ದೇನೆ.. 

ಅಮ್ಮ ಬರೆಯುವೆ.. ಒಂದು ವಿಶೇಷ ದಿನಕ್ಕೆ ಕಾಯುತಿದ್ದೆ.. ಇಂದಿಗೆ ನಲವತ್ತೈದು ದಿನವಾಯಿತು.. ಹಾಗೆ ಕೆಲಸ ಕಾರ್ಯಗಳ ನಡುವೆ.. ಕೊಂಚ ಬರವಣಿಗೆ ಕೂಡ ಕುಂಟುತ್ತಿತ್ತು.. ಅದಕ್ಕೆ ಇವತ್ತು ಸಮಯ ಮಾಡಿಕೊಂಡು ಬರೆಯುತ್ತಿದ್ದೇನೆ.. 

ಹಾ ಸರಿ.. ಓದಲು ಕಾಯುತ್ತಿರುವೆ.. 

*******ಆದಿತ್ಯ ಜನಿಸಿದಾಗ ಮನೆಯಲ್ಲಿ ಸಂಭ್ರಮ.. ಅಪ್ಪ ಅಮ್ಮನಿಗೆ ತಮ್ಮ ಮುಂದಿನ ಪೀಳಿಗೆಯ ಸರದಾರ ಬಂದ ಎಂಬ ಸಂಭ್ರಮ.. ನಮಗೆ ಪುಟ್ಟ ಮಗು.. ಅದರ ತುಂಟಾಟಗಳನ್ನು ನೋಡುವ ತವಕ.. ಅಪ್ಪ ಆದಿತ್ಯನನ್ನು ಎತ್ತಿಕೊಂಡ ಫೋಟೋ ಇನ್ನೂ ಹಸಿರಾಗಿದೆ.. 

ಸದಾ ತುಂಟತನಕ್ಕೆ ಹೆಸರಾಗಿದ್ದ ಆದಿತ್ಯ.. ಅಜ್ಜಿಯನ್ನು ರೇಗಿಸುತ್ತಲೇ ಇರುತಿದ್ದ.. ಬಾಲ್ಯದಿಂದಲೂ ಅಜ್ಜ ಅಜ್ಜಿಯ ಬಗ್ಗೆ ವಿಶೇಷ ಗೌರವ ಇದ್ದರೂ.. ರೇಗಿಸೋದನ್ನು ಬಿಡುತ್ತಿರಲಿಲ್ಲ.. ಹಲವಾರು ಬರಿ ಅಜ್ಜಿ ಥೂ ಹೋಗಾಚೆ ಅಂತ ಹುಸಿಮುನಿಸಿನಿಂದ ಬಯ್ದಿದ್ದರು ಮತ್ತೆ ಕೆನ್ನೆ ಹಿಂಡುವುದು, ಮೊಸರು ಹಾಕುವುದು, ಅನ್ನ ಹಾಕುವುದು, ನೀರು ಕುಡಿ ಅಜ್ಜಿ ಅಂತ ಕುಡಿಸುವುದು, ಕಾಫಿ ಕುಡಿಯಬೇಡ ಅನ್ನೋದು.. ಬಿಪಿ ಮಾತ್ರೆ ತಗೊಂಡ್ಯಾ.. ಅಂತ ಕಾಳಜಿ ವಹಿಸುವುದು ಮಾಡುತ್ತಲೇ ಇರುತ್ತಿದ್ದ.. 

ಹಲವಾರು ಬಾರಿ ಆದಿತ್ಯ ಎಷ್ಟು ಕಾಳಜಿ ತೋರಿಸುತ್ತಾನೆ ಅಂತ ನನ್ನ ಬಳಿ ಹೇಳಿದ್ದರು.... ಬಿಂದಾಸ್ ಸ್ವಭಾವದಲ್ಲೂ ಒಂದು ರೀತಿಯ ಪ್ರೀತಿ ಇರುತ್ತಿತ್ತು ಈ ಹುಡುಗನಲ್ಲಿ.. 

ಪುರೋಹಿತರು ತಮ್ಮ ಕಾರ್ಯದಲ್ಲಿ ಮಗ್ನರಾಗಿದ್ದರು.. ಎಲ್ಲವೂ ಕಡೆ ಹಂತಕ್ಕೆ ಬರುತಿತ್ತು.. ಬಂದವರೆಲ್ಲ ಅಂತಿಮ ನಮನ ಸಲ್ಲಿಸಲು ಸಿದ್ಧವಾಗಿದ್ದರು..ಅಕ್ಕ ಬಿಕ್ಕಿ ಬಿಕ್ಕಿ ಅಳುತ್ತಲೇ ತನ್ನ ಗೌರವ ಸಲ್ಲಿಸಿದರು.. 

"ಕೃಷ್ಣವೇಣಿ ಇರೋತನಕ ಚೆನ್ನಾಗಿ ನೋಡಿಕೊಂಡಿದ್ದೀಯ..ಕಳಿಸುವಾಗ ಅಳಬಾರದು.. ಎಷ್ಟು ದಿನ ಇದ್ದರೂ ಇರಬೇಕು ಅನ್ನುವಂತಹ ಪದಾರ್ಥ "ಅಮ್ಮ" ಅನ್ನೋದು ಆದರೆ ಏನು ಮಾಡೋದು.. ವಿಧಿ ಬರಹ.. ಧೈರ್ಯ ತಂದುಕೊ ಎನ್ನುತ್ತಾ ಅಮ್ಮನ ಸೋದರತ್ತೆಯ ಮಗ ಸತೀಶ ಅಕ್ಕನನ್ನು ಸಮಾಧಾನ ಪಡಿಸಿದ.. 

ಇಲ್ಲಿ ಸತೀಶನ ಬಗ್ಗೆ ಒಂದೆರಡು ಮಾತುಗಳು.. ತನ್ನ ಬಂಧು ಮಿತ್ರರ ಮನೆಯಲ್ಲಿ ಶುಭ ಅಶುಭ ಯಾವುದೇ ಕಾರ್ಯವಿದ್ದರೂ ಇವನ ಉಪಸ್ಥಿತಿ ಇದ್ದೆ ಇರುತ್ತದೆ.. ಕೊರೊನ .. ಅದು ಇದು ಎನ್ನುವುದನ್ನು ಲೆಕ್ಕಿಸುವುದೇ ಇಲ್ಲ.. ಮೊದಲು ಅವರ ಸಂತಸ ದುಃಖದ ಕ್ಷಣಗಳಲ್ಲಿ ಜೊತೆಯಾಗಿರಬೇಕು.. ಆಮೇಲೆ ಮುಂದಿನದು.. ಎನ್ನುವ ಮನೋಭಾವ ಅವನದು.. ಜೊತೆಯಲ್ಲಿ ಅವನಿಗೆ ಅಸಾಧ್ಯವಾದ ಬೆನ್ನು ನೋವು ಇದ್ದರೂ ಅದನ್ನು ಲೆಕ್ಕಿಸದೆ.. ಎಲ್ಲರಿಗೂ ಸಹಕಾರ ನೀಡುವುದು.. ನಿಜಕ್ಕೂ ಶ್ಲಾಘನೀಯ.. 

ಅದೇ ರೀತಿ ಅಮ್ಮನ ಸೋದರಮಾವನ ಮಗ.. ಶಾಮಣ್ಣ.. ನಿಮ್ಮ ಅಮ್ಮ ಅನ್ನಪೂರ್ಣೇಶ್ವರಿ ಕಣೋ ಶ್ರೀಕಾಂತ ಅನ್ನುತ್ತಿದ್ದ ಸದಾ.. ಅವನು ನಮ್ಮ ಮನೆಯ ಎಲ್ಲಾ ಕಾರ್ಯಕ್ರಮಗಳಿಗೂ ತಪ್ಪದೆ ಬರುತ್ತಾನೆ.. ಜೊತೆಯಲ್ಲಿ ಇದ್ದು ಧೈರ್ಯ ಕೊಡುತ್ತಾನೆ. 

ಇವರಿಬ್ಬರ ಬದುಕು ಸುಂದರವಾಗಿರಲಿ ಇದು ನನ್ನ ಅಮ್ಮನ ಆಶೀರ್ವಾದ.. 

ಬಂಧು ಮಿತ್ರರು ಬಂದು ಅಂತಿಮ ನಮನ ಸಲ್ಲಿಸಿ ಆಯ್ತು.. ಅಮ್ಮನನ್ನು ಆಂಬುಲೆನ್ಸ್ ನಲ್ಲಿ ಮಲಗಿಸಿದೆವು.. ಮಡಕೆ ಹಿಡಿದುಕೊಂಡ ಅಣ್ಣ .. ಅವನ ಹಿಂದೆ ಬಂದ ನಾನು. ಅಳುತ್ತಲೇ ಗಾಡಿ ಹತ್ತಿದ ತಮ್ಮ ಮುರುಳಿ.. ನಮ್ಮ ಎದುರಲ್ಲಿ ಸಾಹಸಮಯ ಬದುಕು ನಿಭಾಯಿಸಿ ನಮ್ಮನ್ನೆಲ್ಲ ಒಂದು ದಡಕ್ಕೆ ಸೇರಿಸಿ.. ಕಡೆಗೆ ಸಾಕು ಕಣೋ ಅಂತ ಹೊರಟಿದ್ದ ಅಮ್ಮ.. 

ಇನ್ನೇನು ಗಾಡಿ ಹೊರಡಬೇಕು... ಆದಿತ್ಯ ಓಡಿ ಬಂದು ಆಂಬುಲೆನ್ಸ್ ಹತ್ತಿದ.. ನಮಗೆ ಬೇಡ ಎನ್ನಲು ಮನಸ್ಸಿಲ್ಲ.. ಆದರೆ ಏನು ಹೇಳೋದು ಅಂತ ಸುಮ್ಮನೆ ಕುಳಿತಿದ್ದೆವು.. 

ಕಣ್ಣಲ್ಲಿ ನೀರು ತುಂಬಿಕೊಂಡು.. ಮೆಲ್ಲಗೆ ಅಜ್ಜಿಯ ಕೆನ್ನೆಯನ್ನು ಒಮ್ಮೆ ಹಿಂಡಿ.. ಕೆನ್ನೆಯನ್ನು ಸವರಿ ಇಳಿದು ಹೋದ.. 

ನಾನು ನಾಲ್ಕೈದು ಲೇಖನಗಳನ್ನು ಬರೆದಿರಬಹುದು.. ನಾವೆಲ್ಲರೂ ಒಂದಷ್ಟು ಕಣ್ಣೀರು ಹಾಕಿ..ಅಗಲಿದ ಆ ಹಿರಿಯ ಜೀವದ ಬಗ್ಗೆ ಒಂದಷ್ಟು ಅಭಿಮಾನದ ಮಾತುಗಳನ್ನು ಆಡಿರಬಹುದು.. ಆದರೆ ಆ ಒಂದು ಸ್ಪರ್ಶದಲ್ಲಿ ಆದಿತ್ಯ ಎಲ್ಲರ ಭಾವನೆಗಳನ್ನು ಹೊತ್ತ ಸರದಾರನಾಗಿ ಬಿಟ್ಟ.. 

ಥೋ ಸುಮ್ಮನಿರೋ ಆದಿತ್ಯ.. ಯಾಕೆ ಹಾಗೆ ಗೋಳು ಹುಯ್ಕೋತೀಯೋ ಅಂತ ಅಜ್ಜಿ ಕೂಗಿದ ಹಾಗೆ ಅನಿಸಿತು. 

***

ವಾಹ್ ಸೊಗಸಾಗಿದೆ ಶ್ರೀಕಾಂತ.. ನೀನು ಇದರ ಬಗ್ಗೆ ಯಾಕೆ ಬರೆದಿಲ್ಲ ಅಂತ ಯೋಚಿಸುತ್ತಿದ್ದೆ.. ಈಗ ಸಮಾಧಾನ ಆಯ್ತು.. ಸರಿ ನೀವುಗಳೆಲ್ಲ ಗುರುಗಳ ಆಜ್ಞಾನುಸಾರ ಕಾರ್ಯಗಳನ್ನು ಮಾಡುತ್ತಿದ್ದೀರಾ.. ನನ್ನ ಆಶೀರ್ವಾದ ಸದಾ ಇರುತ್ತೆ.. ಆದಿತ್ಯನಿಗೆ ಈ ಮೂಲಕ ಜನುಮದಿನಕ್ಕೆ ತಡವಾದ ಶುಭಾಶಯಗಳನ್ನು ತಿಳಿಸು.. ಅವತ್ತೇ ಆಶೀರ್ವಾದ ಮಾಡಬೇಕಿತ್ತು.. ಆದರೆ ನಿನ್ನ ಬರಹ ಬರಲಿ ಅಂತ ಕಾಯ್ತಾ ಇದ್ದೆ ಕಣೋ..!

ಆಗಲಿ ಅಮ್ಮ.. ಅವನಿಗೆ ಖಂಡಿತ ಆಶೀರ್ವದಿಸುತ್ತೇನೆ.. ಮೊದಲನೇ ಮೊಮ್ಮಗ.. ಅಲ್ಲವೇ.. ಪ್ರೀತಿ ತುಸು ಹೆಚ್ಚೇ.. 

ಮತ್ತೆ ಬರುವೆ.. ಹದಿನಾಲ್ಕು ದಿನಗಳ ಯಾತ್ರೆಯನ್ನೊಮ್ಮೆ ಮೆಲುಕು ಹಾಕೋಣ.. ಏನಂತೀಯಾ.. !!!

Sunday, November 15, 2020

ಅಮ್ಮ ಎನ್ನುವ ದೈತ್ಯ Server - ಭಾಗ ೪

ಮತ್ತೆ ಬರ್ತೀನಿ ಅಂದಿದ್ದೆ ಆಲ್ವಾ ಹಿಂದಿನ ಲೇಖನದಲ್ಲಿ.. ನೋಡಿ ಮತ್ತೆ ಬಂದೆ.. 

ಗರುಡ ಪುರಾಣ.. ಪಂಚಾಂಗ.. ನಮ್ಮ ಶಾಸ್ತ್ರಗಳು ಸಾವಿನಾಚೆಯ ಪ್ರಪಂಚವನ್ನು ಸೂಕ್ಷ್ಮವಾಗಿ ಹೇಳುತ್ತವೆ.. ನಿಮಗೆಲ್ಲ ಗೊತ್ತಿರುವ ಹಾಗೆ ೨೭ ನಕ್ಷತ್ರಗಳು ಮಿನುಗುತ್ತಲೇ ಮನುಷ್ಯನ ಜೀವನದ ಮೇಲೆ ಪರಿಣಾಮ ಬೀರುತ್ತಲೇ ಇರುತ್ತದೆ.. ಅದನ್ನು ಮನಸ್ಸಿಗೆ ಇಳಿಯುವಂತೆ ಸರಳವಾಗಿ ತಮ್ಮತನದ ಬಗ್ಗೆ ಉಪದೇಶ ಮಾಡದೆ ತಿಳಿ ಹೇಳುವವರೇ ಗುರುಗಳು.. 

ಹೀಗೆ ನಾ ಸಾಕು.. ಸಾಕಾಗಿದೆ.. ಸುಸ್ತಾಗಿದೆ.. ಹುಟ್ಟಿನಿಂದ ದಣಿವರಿಯದೆ ದುಡಿದಿದ್ದ ಈ ನನ್ನ ದೇಹ ಸಾಕು ವಿಶಾಲೂ... ಹೊರಡೋಣ ಅಂದಾಗ.. ಸುಮ್ಮನೆ ತಲೆಯಾಡಿಸಿದ್ದೆ.. 

ಪಂಚಾಂಗದ ಪ್ರಕಾರ ನಾ ಈ ಭೂಮಿಯಿಂದ ಹೊರಟ ದಿನ ವಿಶಾಖ ನಕ್ಷತ್ರವಿತ್ತು ಅಂತ ಹೇಳುತ್ತದೆ ಪಂಚಾಂಗ.. ಪ್ರತಿ ನಕ್ಷತ್ರವನ್ನು ದಾಟಿ ದಾಟಿ.. ದಿನಕ್ಕೊಂದರಂತೆ ನಕ್ಷತ್ರಗಳನ್ನು ಎಣಿಸುತ್ತಾ ಮತ್ತೆ ನನ್ನ ಅನುಗ್ರಹ ಸದನಕ್ಕೆ ಬಂದ ಛೆ ಎಂಥಹ ಮಾತುಗಳನ್ನು ಆಡುತ್ತಿದ್ದೇನೆ.. ನನ್ನ ದೇಹ ಮಾತ್ರ ಅನುಗ್ರಹ ಸದನ ಬಿಟ್ಟಿದೆ.. ನನ್ನ ಆತ್ಮ ಇಂದಿಗೂ, ಎಂದೆಂದಿಗೂ ಇರೋದು ಅನುಗ್ರಹ ಸದನವೇ.. ಇರಲಿ ಆ ಮಾತು 

ಮತ್ತೆ ನಾ ಅನುಗ್ರಹ ಸದನಕ್ಕೆ ಬಂದೆ.. ನಿಮಗೆ ಹಾಗೆ ನನ್ನ ಇಪ್ಪತ್ತೇಳು ದಿನದ ಪಯಣವನ್ನು ಹೇಳದೆ, ಇಪ್ಪತೇಳು ನಕ್ಶತ್ರಗಳ ಹೆಸರನ್ನೇ ತೆಗೆದುಕೊಂಡು, ಹಾಗೆ ಸುಮ್ಮನೆ ನನ್ನ ಬದುಕನ್ನು ಒಮ್ಮೆ ತಿರುಗಿ ನೋಡುವ ಪ್ರಯತ್ನ ಮಾಡುವೆ.. 

ನೋಡಿ ಮೊದಲೇ ಹೇಳಿ ಬಿಡುತ್ತೇನೆ, ನಕ್ಷತ್ರಗಳ ಹೆಸರನ್ನು ಅದಕ್ಕೆ ಅರ್ಥ ಹೊಳೆದರೆ ಅದಕ್ಕೆ ತಕ್ಕಂತೆ ಒಂದಷ್ಟು ಪದಗಳನ್ನು ಹಾಕಿ ಶ್ರೀಕಾಂತನಿಗೆ ಹೇಳಿದ್ದೀನಿ, ಅರ್ಥ ಸಿಗದೇ ಇದ್ದಾಗ, ಆ ಪದದ ಹತ್ತಿರಕ್ಕೆ ಬರುವ ಹಾಗೆ ನನಗಾಣಿಸಿದ ಮಾತನ್ನು ಹೇಳಿದ್ದೀನಿ.. ಇದಕ್ಕೂ ಜ್ಯೋತಿಶಾಸ್ತ್ರಕ್ಕೂ ಏನೂ ನಂಟಿಲ್ಲ.. ನನ್ನ ಬದುಕನ್ನು ತೆರೆದಿಡುವ ಒಂದು ಪ್ರಯತ್ನ ಅಷ್ಟೇ . !

ವಿಶಾಖ - 19.10.2020
ವಿಶಾಲೂ ಎಂದು ಎಲ್ಲರೂ ಪ್ರೀತಿಯಿಂದ ಕರೆಯುತಿದ್ದ ನನ್ನನ್ನು.. ವಿಶಾಖ ನಕ್ಷತ್ರದಂದೇ ಹೊರಟು ಬರುತ್ತೇನೆ ಎಂದು ಯಾರೂ ಅರಿತಿರಲಿಲ್ಲ... ವಿಶಾಖ ಶಾಖ ವಿಶಾಲವಾದ ನನ್ನ ಬದುಕನ್ನು ಬಿಸಿ ಮಾಡಿತ್ತು.. ಕಷ್ಟ ನಷ್ಟಗಳು ನನ್ನ ಮನಸ್ಸನ್ನು ಬಿಸಿ ಮಾಡಿದ್ದರೂ, ದೇಹ ಮಾತ್ರ ನನಗೆ ಸಾತ್ ನೀಡಿತ್ತು. ಕಷ್ಟಕೋಟಲೆಗಳನ್ನು ದಾಟುತ್ತಾ ನೆಡೆಯುವ ನನ್ನ ಮನಸ್ಸಿಗೆ ಶಾಖ ನೀಡಿದ್ದು ಈ ವಿಶಾಖ ನಕ್ಷತ್ರವೇ.. 

ಅನುರಾಧ - 20.10.2020
ಅನುದಿನವೂ ರಾಧ ಕೃಷ್ಣನನ್ನು ನೆನೆಸಿಕೊಳ್ಳುವ ಹಾಗೆ.. ನನ್ನ ಪ್ರೀತಿಯ ಬಂಧು ಬಳಗವನ್ನು, ನನ್ನ ಪ್ರೀತಿಯ ಅನುಗ್ರಹ ಸದನಕ್ಕೆ ಶುಭಕೋರುವ ಪ್ರತಿಯೊಬ್ಬರನ್ನು ಅನುಸರಿಸುತ್ತಲೇ ಇದ್ದೆ.. ಇರುತ್ತೇನೆ.. 

ಜ್ಯೇಷ್ಠ - 21.10.2020
ನಮ್ಮ ಯಜಮಾನರು ಜೇಷ್ಠ ಪುತ್ರರಾಗದಿದ್ದರೂ, ನಮ್ಮ ಭಾವನವರಾದ ಅಪ್ಪು ಅಲಿಯಾಸ್ ರಾಮಸ್ವಾಮಿ ಕೂಡ ಅಪ್ಪು ಬಂದ ಎಲ್ಲರೂ ಸುಮ್ಮನಿರಿ ಎನ್ನುವಷ್ಟು ಗೌರವ ಪಡೆದಿದ್ದರು.. ದೊಡ್ಡವರಾಗಬೇಕಾದರೆ, ದೊಡ್ಡವರೇ ಆಗಬೇಕಿಲ್ಲ.. ವ್ಯಕ್ತಿತ್ವ ದೊಡ್ಡದಾಗಿರಬೇಕು.. ಜೇಷ್ಠ ನಕ್ಷತ್ರದಂತೆ ಎಲ್ಲರಲ್ಲೂ ತಮ್ಮ ನೆಡೆ ನುಡಿಯಿಂದ ಜೇಷ್ಠರಾಗೆ ಇದ್ದ ನನ್ನ ಯಜಮಾನರನ್ನು ಅನುಸರಿಸುತ್ತಾ ಬಂದೆ 

ಮೂಲ 22.10.2020
ನಮ್ಮ ಯಜಮಾನರ ಮೂಲ ಸ್ಥಾನ ಹಾಸನದ ಬಳಿಯ ಕೋರವಂಗಲ.. ನನ್ನ ಮೂಲ ಸ್ಥಾನ ಯಾವುದೇ ಇದ್ದರೂ.. ನನ್ನ ಬದುಕಿನ ಪ್ರಕಾರ ನನ್ನ ಮೂಲ ಸ್ಥಾನ ಕಿತ್ತಾನೆ.. ಕೋರವಂಗಲಕ್ಕೆ ಒಮ್ಮೆ ನನ್ನ ಮಕ್ಕಳು ಹೋದಾಗ ವಿಜಯನನ್ನು ನೋಡಿ ನಮ್ಮ ಯಜಮಾನರನ್ನು ನೆನೆಪಿಟ್ಟುಕೊಂಡವರು.. ಮಂಜಯ್ಯನ ಮಗನಾ... ಅದೇ ಅಂದುಕೊಂಡೆ ಮಾತು, ಮುಖ ಲಕ್ಷಣ ನೋಡಿ ಮಂಜಯ್ಯನ ಮಗನೆ ಇರಬೇಕು ಅಂತ ಅನ್ನುವಷ್ಟು ಹೆಸರಾಗಿದ್ದರು ತಮ್ಮ ವ್ಯಕ್ತಿತ್ವದಿಂದ.. 

ಪೂರ್ವಾಷಾಡಾ - 23.10.2020
ನಮ್ಮ ಪೂರ್ವದ ಜೀವನ ನಮಗೆ ಬದುಕುವ ಪಾಠವನ್ನು ಕಲಿಸಿತು.. ಯಾವುದಕ್ಕೂ ಕೊರಗದೆ, ಕಷ್ಟಕ್ಕೆ ನಲುಗದೆ ಬದುಕುವ ಜೀವನವನ್ನು ನಮ್ಮ ಪೂರ್ವಶ್ರಮ ತಿಳಿಸಿಕೊಟ್ಟಿತು.. 

ಉತ್ತರಾಷಾಡಾ - 24.10.2020
ನಮ್ಮ ಬದುಕಿನ ಉತ್ತರ ಭಾಗ ಕೊಂಚ ಹಾಯ್ ಎನಿಸಿತ್ತು.. ಪಟ್ಟ ಬವಣೆ, ಬದುಕಿನ ಸಂಕಷ್ಟಗಳು ಸ್ವಲ್ಪ ಸ್ವಲ್ಪವೇ ಮರೆಯಾಗಿ ತಂಗಾಳಿ ಸುಯ್ ಎಂದು ಬರುವಂತೆ ಗಾಳಿ ಬೀಸಲು ಶುರು ಮಾಡಿತ್ತು.. 

ಶ್ರವಣ - 25.10.2020
ಅಪ್ಪ ಅಮ್ಮನಿಗೆ ಶ್ರವಣಕುಮಾರ ಸೇವೆ ಮಾಡಿದಂತೆ ಸೇವೆ ಮಾಡಬೇಕು ಎನ್ನುವ ಆಸೆಯಿತ್ತು.. ಆದರೆ ವಿಧಿ.. ಅಪ್ಪನಿಗೆ ಬೇಡವಾದ ಮಗಳಾದೆ.. ಅಮ್ಮ ಎಂದು ನಾ ಗುರುತಿಸುವ ಮೊದಲೇ ಜನ್ಮ ನೀಡಿದ ಅಮ್ಮ ಸಾಕು ಮಗಳೇ ಈ ಪ್ರಪಂಚ ಎಂದು ಹೊರಟೆ ಬಿಟ್ಟಿದ್ದರು.. ನನ್ನ ಅಜ್ಜ ಅಜ್ಜಿ, ಸೋದರ ಮಾವ ಅತ್ತೆಯರು.. ಜೊತೆಗೆ ನನ್ನ ದೊಡ್ಡಪ್ಪ ದೊಡ್ಡಮ್ಮಂದಿರನ್ನೇ ತಾಯಿ ತಂದೆ ಎಂದು ಅವರಿಗೆ ಸೇವೆ ಮಾಡಿದೆ.. ಮದುವೆಯ ನಂತರ ನನ್ನ ಅತ್ತೆ ಮಾವನೇ ನನಗೆ ಮಾತಾ ಪಿತೃಗಳಾಗಿದ್ದರು.. 

ಧನಿಷ್ಠ - 26.10.2020
ಜೀವನ ಕನಿಷ್ಟವಾಗೇನೋ ಇರೋಲ್ಲ.. ಸಂಪತ್ತುಗಳು ಧನಿಷ್ಠವಾಗೇನೋ ಇರದೇ ಇದ್ದರೂ.. ಬದುಕನ್ನು ಅತಿ ಕೆಳಮಟ್ಟದಿಂದ ಮೇಲಕ್ಕೆ ಎತ್ತಿಕೊಂಡು ಬರಲು ಸಹಕಾರ ನೀಡಿದ ನನ್ನ ಬಂಧು ಮಿತ್ರರು, ನಮ್ಮ ಅನುಗ್ರಹ ಸದನ ಧನಿಷ್ಠ ಮಟ್ಟದ ಜೀವನವನ್ನು ಕಾಣಲು ಸಹಾಯ ಮಾಡಿತು.. 

ಶತಭಿಷ - 27.10.2020
ಶತಮಾನ ಮುಟ್ಟಬೇಕೆಂಬ ಅಭಿಲಾಷೆ ಅವರಿಗೂ ಇತ್ತು, ನನಗೂ ಇತ್ತು.. ಆದರೆ ಏನು ಮಾಡುವುದು, ನೆಟ್ವರ್ಕ್ ಚೆನ್ನಾಗಿ ಇತ್ತು, ಆದರೆ ಮೊಬೈಲಿನಲ್ಲಿ ಚಾರ್ಜ್ ಇಲ್ಲದ ಸ್ಥಿತಿ ನಮ್ಮಿಬ್ಬರದಾಗಿತ್ತು.. ಹಾಗಾಗಿ ಶತಾಯುಷಿ ಆಗಬೇಕೆಂಬ ಅಭಿಲಾಷೆಯನ್ನು ಕಳಚಿ ಹೊರತು ಬಂದೆವು... 

ಪೂರ್ವಭಾದ್ರ - 28.10.2020
ನಮ್ಮ ಪೂರ್ವ ಜೀವನ ಭದ್ರಪಡಿಸಲು ಅನುಕೂಲವಾಗಿದ್ದು ಬದುಕು ಹಸಿವಿನಲ್ಲಿ ಕಲಿಸಿದ ಪಾಠ .. ಹಸಿವು, ಜೀವನದಲ್ಲಿ ಮುಂದೆ ಬರುವ ಹಪಾಹಪಿ ಎಂಥಹ ಬದುಕನ್ನು ಹಸನು ಮಾಡುತ್ತೆ.. 

ಉತ್ತರಭಾದ್ರ - 29.10.2020
ಉತ್ತರಾರ್ಧ ಬದುಕು ಸುಂದರಕಾಂಡವಾಗುವ ಎಲ್ಲಾ ಲಕ್ಷಣಗಳು ಇತ್ತು.. ಬದುಕು ಹಸನಾಗಲು ಆರಂಭವಾಗಿತ್ತು... ಮಕ್ಕಳು ಏಳಿಗೆಯನ್ನು ಕಾಣಲು ಶುರು ಮಾಡಿದ್ದರು.. ನಮಗೆ ಮಾಡಬೇಕಾದ ಎಲ್ಲಾ ಸಂಸ್ಕಾರಗಳನ್ನು ಮಾಡುತ್ತಾ ಸಾಗಿದರು ಮಕ್ಕಳು.. 

ರೇವತಿ - 30.10.2020
ಕರುಣಾ ರಸ ಸೂಸುವ ರೇವತಿ ರಾಗದಂತೆ ನನ್ನ ಬದುಕು ಸುಮಧುರವಾಗಿ ಏರಿಳಿತದ ಹಾದಿಯಲ್ಲಿ ಸಾಗಿತ್ತು.. ಜಗ್ಗದೆ ಕುಗ್ಗದೆ ಸಾಗುವ ನಮ್ಮಿಬ್ಬರ ಮನೋಭಾವವೇ ಮಕ್ಕಳಿಗೂ ಹರಡಿತ್ತು.. ಹಾಗಾಗಿ ಬದುಕು ಹಸನಾಗಿತ್ತು... !

ಅಶ್ವಿನಿ ನಕ್ಷತ್ರ - 31.10.2020
ಅಶ್ವಿನಿ ದೇವತೆಗಳು ನೋಡಲು ಸುಂದರ.. ನನ್ನ ಮಕ್ಕಳು ಸ್ಪುರದ್ರೂಪಿಯಾಗದೆ ಇದ್ದರೂ (ಮಕ್ಕಳ ಬೈಯ್ಯ ಬೇಡ್ರಪ್ಪ) ಬದುಕನ್ನು ಸುಂದರ ಮಾಡಿಕೊಂಡರು.. ಅದೇ ತಾನೇ ನಿಲ್ಲುವುದು.. ಬದುಕನ್ನು ಎತ್ತಿ ಹಿಡಿದು ನಿಲ್ಲಬೇಕು.. ಆಗಲೇ ಬದುಕಿಗೆ ಒಂದು ಸಾರ್ಥಕತೆ.. !

ಭರಣಿ - 01.11.2020
ಬಡತನದ ಬೇಗೆಯಲ್ಲಿ ಬಳಲುವಾಗ ಭರಣಿಯಲ್ಲಿ ಕೂಡಿಟ್ಟ ಅಷ್ಟೋ ಇಷ್ಟೋ ಪುಡಿಗಾಸು ಕೈ ಹಿಡಿದಿತ್ತು.. ಬೆರಣಿಯಲ್ಲಿ ಸೌದೆಯಲ್ಲಿ ಬೆಂದ ಅಡಿಗೆ.. ಭರಣಿಯಲ್ಲಿ ಕೂಡಿಟ್ಟ ಧನ ಅಂದ ಎನ್ನುವ ಹಾಗೆ .. ಎಷ್ಟೋ ವಾರಗಳನ್ನು ಹಿಡಿದಿಟ್ಟಿದ್ದು ಇದೆ ಭರಣಿಯಲ್ಲಿ ಕೂಡಿಡುವ ಅಭ್ಯಾಸ.. !

ಕೃತಿಕಾ - 02.11.2020
ಕಾರ್ತಿಕ ಮಾಸ ಬಲು ಸೊಗಸು.. ಕತ್ತಲೆಯನ್ನು ಹೊಡೆದೋಡಿಸುವ ಬೆಳಕಿನ ಹಬ್ಬ ಮೂಡುವ ಮಾಸ.. ಅದೇ ಗುಂಗಿನಲ್ಲಿ ಇರುವ ಎಲ್ಲರ ಬದುಕು.. ಕತ್ತಲೆಯಿಂದ ಬೆಳಕಿಗೆ ಬರಲೇ ಬೇಕು.. ಬಂದೆ ಬರುತ್ತದೆ.. ಅದಕ್ಕೆ ನಮ್ಮ ಬದುಕೇ ಸಾಕ್ಷಿ.. !

ರೋಹಿಣಿ - 03.11.2020
ಕೃಷ್ಣ ಹುಟ್ಟಿದ್ದು ರೋಹಿಣಿ ನಕ್ಷತ್ರದಲ್ಲಿ. ಹೆತ್ತ ಅಪ್ಪ ಅಮ್ಮನ ಮಮತೆ ಸಿಗಲಿಲ್ಲ.. ಆದರೆ ಸಾಕು ತಾಯಿ ತಂದೆಯ ಪ್ರೀತಿಯಾಮೃತವನ್ನು ಸವಿದು ಬೆಳೆದು ಬಂದ.. ನನಗೂ ಹಾಗೆ ಹೆತ್ತವರ ಪ್ರೀತಿ ಹೃದಯಕ್ಕೆ ತಾಗಲಿಲ್ಲ.. ಆದರೆ ಆ ಪ್ರೀತಿಗಿಂತ ಮಿಗಿಲಾಗಿ ನನ್ನ ಬದುಕಿಸಿದ್ದು ನನ್ನ ಪ್ರೀತಿಯ ಕಿತ್ತಾನೆಯ ಮತ್ತು ಹಾಸನದ ಕುಟುಂಬ.. 

ಮೃಗಶಿರ - 04.11.2020
ಮೃಗಕ್ಕೆ ಶಿರ ಮುಖ್ಯ ಕಾರಣ.. ಪ್ರಪಂಚವನ್ನು ನೋಡುತ್ತದೆ.. ನಮ್ಮ ಬದುಕು ಕೂಡ ಕಷ್ಟಗಳು ಬಂದಾಗ ತಲೆ ಎತ್ತಿ ಎದುರಿಸಿ, ಯಶಸ್ಸು ಬಂದಾಗ ಶಿರಬಾಗಿ ನೆಡೆದೆವು.. ಅದೇ ನಮ್ಮ ಬದುಕನ್ನು ರೂಪಿಸಿತು.. !

ಆರ್ದ್ರಾ (ಆರಿದ್ರಾ) - 05.11.2020
ಇದನ್ನು ಕೆಂಪು ಮಹಾ ನಕ್ಷತ್ರ ಅಂತ ಹೇಳ್ತಾರೆ ಅನ್ನುತ್ತೆ ಜ್ಯೋತಿಶ್ಯಾಸ್ತ್ರ... ನನಗೆ ಗೊತ್ತಿಲ್ಲ.. ಆದರೆ ಕೆಂಪು ಕೆಂಪಾಗಿ ಶುರುವಾಗಿದ್ದ ಜೀವನ ತಂಪು ತಂಪಾಗಿ ಬದಲಾಗಿದ್ದು ಅಚ್ಚರಿ ಅನಿಸಿದರೂ.. ಅದರ ಹಿಂದೆ ಅನೇಕ ಸಹಾಯಕ ಪೋಷಕರ ಕೈಗಳು ಕಾಣುವುದಿಲ್ಲ.. ಮರೆಯಲ್ಲಿಯೇ ನಿಂತು ನನ್ನ ಅನುಗ್ರಹ ಸದನವನ್ನು ಅನುಗ್ರಹಿಸಿದ್ದು ನಮ್ಮ ಬದುಕಿನ ವಿಶಿಷ್ಟ ಸಂಗತಿಗಳಲ್ಲಿ ಒಂದು.. 

ಪುನರ್ವಸು - 06.11.2020
ಈ ಹೆಸರಿನ ಒಂದು ಬಿದಿರಿನ ವರ್ಗವಿದೆ ಅಂತ ತಿಳಿಯಿತು.. ಬಿದಿರು ಒಳಗೆ ಟೊಳ್ಳಾಗಿದ್ದರೂ ಒತ್ತಡ ತಡೆದುಕೊಂಡು ಅನೇಕ ಪೀಠೋಪಕರಣಗಳಿಗೆ ಉಪಯೋಗಕ್ಕೆ ಬರುತ್ತದೆ.. ಬದುಕು ಹಾಗೆ ಅಲ್ಲವೇ ಒಳಗೆ ಹೇಗಾದರೂ ಇರಲಿ, ಎಲ್ಲರ ಉಪಯೋಗಕ್ಕೆ ಬದುಕಬೇಕು.. ಯಾವುದೇ ಕಾರ್ಯಕ್ರಮವಾದರೂ ಮೈಮುರಿಯುವಂತೆ ಕೆಲಸ ಮಾಡುತ್ತಾ, ನಮ್ಮ ಭಾಗವಹಿಸುವಿಕೆಯನ್ನು ತೋರಿಸುತ್ತಿದ್ದ ರೀತಿ ಹೀಗೆ ಇತ್ತು.. ಪುನಃ ಪುನಃ ವಸು ಅಂದರೆ ಅಭಿವೃದ್ಧಿಯಾಗುತ್ತಲೇ ಇರಲಿ ಎನ್ನುವಂತೆ ಸಾಗಿತ್ತು ಬದುಕು.. ! 

ಪುಷ್ಯ - 07.11.2020
ಪುಷ್ಯ ಮಾಸದಲ್ಲಿ ಶಾಖ ಕಡಿಮೆಯಾಗಿ ಕೊಂಚ ಚಳಿ ಹೆಚ್ಚು ಎನ್ನುತ್ತಾರೆ.. ಬದುಕು ಹಾಗೆ ಅಲ್ಲವೇ.. ಸಂಕಷ್ಟಗಳ ಬವಣೆ ದಾಟುತ್ತಾ ಹೋದ ಹಾಗೆ ಶಾಖ ಕಡಿಮೆಯಾಗಿ ತಂಪು ಹೆಚ್ಚಾಗುತ್ತದೆ.. ಬದುಕು ಒಂದು ಹೂವಿನ ಹಾಗೆ.. ನಗುವೇ ಆ ಸುಮದ ಪರಿಮಳವು ಅನ್ನುವ ಹಾಡಿನಂತೆ.. ಬದುಕಿಗೆ ತಿರುವು ಸಿಗುತ್ತಲೇ ಇರುತ್ತದೆ.. ಬೇಕಾಗಿರೋದು ಕೊಂಚ ತಾಳ್ಮೆ!

ಆಶ್ಲೇಷ - 08.11.2020
ಆಹಾ.. ಬದುಕನ್ನು ಒಂದು ಹಾವಿಗೆ ಹೋಲಿಸುವುದಾದರೆ, ಈ ಅಶ್ಲೇಷದಂತೆ ಬದುಕು ಸಾಗುತ್ತದೆ.. ಸಂಕಷ್ಟಗಳ ಪೊರೆಯನ್ನು ಕಳಚಿ ಮುಂದೆ ಹೊಸ ಬದುಕು ಎಂಬ ಪೊರೆಯನ್ನು ಬೆಳೆಸಿಕೊಳ್ಳುತ್ತಾ ಸಾಗಬೇಕು.. !

ಮಖ - 09.11.2020
ಪುಷ್ಯ ಮಾಸ ಜಾರಿ ಮಾಘ ಮಾಸ ಬಂದಾಗ ಮೆಲ್ಲಗೆ ಶಾಖವೂ ಹೆಚ್ಚುತ್ತದೆ.. ತಂಪು ತಂಪು ಹೆಚ್ಚಾದಾಗ ಕಷ್ಟದ ಅರಿವು ಬೇಕು ಎನ್ನುವ ಹಾಗೆ ಮೆಲ್ಲನೆ ಬದುಕಿನಲ್ಲಿ ಬಿಸಿ ಏರುತ್ತದೆ.. ಬದುಕಬೇಕು ಎನ್ನುವ ಹಂಬಲ ಹೆಚ್ಚಾಗಿ, ಜಡತ್ವ ತೊರೆಯಲು ಈ ಮಘಾ ಅಥವ ಮಾಘ ಮಾಸ ಸಹಕಾರಿಯಾಗುತ್ತದೆ.. ನನ್ನ ಬದುಕಿನಲ್ಲಿ ಈ ರೀತಿ ಮಾಘ ಮಾಸಗಳು ಬಂದು, ನಮ್ಮ ಬದುಕಿನ ಮಖವನ್ನು ಬದಲಿಸಿತು.. 

ಪುಬ್ಬ (ಪೂರ್ವ ಫಲ್ಗುಣಿ) - 10.11.2020
ಸಂವತ್ಸರದ ಅಂತ್ಯ ಎನ್ನುವಂತೆ ಬರುವ ಈ ಪೂರ್ವ ಫಾಲ್ಗುಣ ಮಾಸ.. ಫಲ್ಗುಣಿ ತಾರೆಯಂತೆ ಹೊಸ ಋತುವಿಗಾಗಿ ಕಾಯುತ್ತದೆ.. ಬದುಕಲ್ಲಿ ಮತ್ತೆ ವಸಂತವಾಗಲು ಇದೆ ನಾಂದಿ.. ಪುಬ್ಬೇ ಎನ್ನುವಂತೆ ಬದುಕು ಹೊಸ ಹಾದಿಗೆ ಹೊರಳುವ ಪರಿ ಸುಂದರ ಅನನ್ಯ.. !

ಉತ್ತರಾ (ಉತ್ತರ ಫಲ್ಗುಣಿ) - 11.11.2020
ಎಲ್ಲಾ ಪ್ರಶ್ನೆಗಳಿಗೂ ಉತ್ತರಾ ಕೊಡುವೆ ಎನ್ನುವ ಛಲ ಬದುಕಲ್ಲಿ ಬಂದಾಗ ಪ್ರತಿ ಕ್ಷಣವೂ ಸುಂದರ ಎನ್ನುವುದನ್ನು ಈ ಉತ್ತರಾ ಫಾಲ್ಗುಣದಲ್ಲಿ ಕಲಿಯುವ ಅವಕಾಶ ನನ್ನ ಬದುಕಿನಲ್ಲಿ ಹಲವಾರು ಬಾರಿ ಬಂದಿತು.. !

ಹಸ್ತ - 12.11.2020
ಸಂಕಷ್ಟಗಳು ಬದುಕನ್ನು ಹಣ್ಣು ಹಣ್ಣು ಮಾಡಲು ಹಾತೊರೆಯುವಾಗ.. ಹಸ್ತವನ್ನು ತಲೆಯ ಮೇಲೆ ಇಟ್ಟುಕೊಳ್ಳದೆ, ಅದೇ ಹಸ್ತದಲ್ಲಿ ಬದುಕೆಂಬ ಶಿಲೆಯನ್ನು ಕೆತ್ತುವ ಶಿಲ್ಪಿಯಾಗಬೇಕು ನಾವು.. ಅದೇ ಹಾದಿಯಲ್ಲಿ ಸಾಗಿದಾಗ ಬದುಕು ಹಸನಾಗಿದ್ದು ಕಂಡು ಮನಸ್ಸಿಗೆ ಹಾಯ್ ಎಂದಿತು.. !

ಚಿತ್ತಾ - 13.11.2020
ಬದುಕಲೇ ಬೇಕು ಎಂಬ ಆಶಯ, ಛಲ ಚಿತ್ತದೊಳಗೆ ಬಂದರೆ ಸಾಕು, ಅಡೆ ತಡೆಗಳು ಹೂವಿನ ಸರವಾಗುತ್ತದೆ.. ಬದುಕುವ ಛಲವೆಂಬುದು, ಹರಿಯುವ ನೀರಿನಂತೆ, ಒಮ್ಮೆ ಹರಿಯಲು ಶುರು ಮಾಡಿದ ನದಿ, ಯಾವುದೇ ಅಡೆ ತಡೆಗಳಿಗೆ ಜಗ್ಗದೆ ಸಾಗುವ ಹಾಗೆ, ಬದುಕಿಗೆ ಹಾದಿಯನ್ನು ಹುಡುಕುತ್ತಾ ಮುನ್ನುಗ್ಗಬೇಕು.. ಇದೆ ನಾ ಕಂಡುಕೊಂಡ ಯಶಸ್ಸಿನ ಸೂತ್ರ!

ಸ್ವಾತಿ - 14.11.2020
ಈ ಸ್ವಾತಿ ಮುತ್ತಿನ ಹನಿಗಳು ಮುತ್ತನ್ನು ಮಾಡುತ್ತದೆ ಎನ್ನುತ್ತಾರೆ.. ದೇಹಕ್ಕೂ ಮನಸ್ಸಿಗೂ ಈ ಸ್ವಾತಿ ಮಳೆಯ ಹನಿಗಳು ಒಳ್ಳೆಯದು ಎಂದು ಎಲ್ಲೋ ಕೇಳಿದ್ದ ನೆನಪು.. ಇರಲಿ, ಮುತ್ತಾಗುವ ಈ ಹನಿಗಳು, ಬದುಕನ್ನೇ ಬದಲಿಸುತ್ತವೆ ಎನ್ನುವುದು ಮಾತ್ರ ಸುಳ್ಳಲ್ಲ. 

ವಿಚಿತ್ರ ಅನ್ನಿಸುತ್ತೆ ಅಲ್ವೇ ಈ ಲೇಖನ.. ಮನುಕುಲದ ಬದುಕೇ ಒಂದು ವಿಚಿತ್ರ ಪುಸ್ತಕ..ಅದರಲ್ಲಿ ನನ್ನ ಬದುಕಿನ ಕೆಲವು ಪುಟಗಳು ನಿಮಗಾಗಿ.. ಅಷ್ಟೇ.. 

ಮತ್ತೆ ಸಿಗುವೆ.. !

Sunday, November 1, 2020

ಅಮ್ಮ ಎನ್ನುವ ದೈತ್ಯ Server - ಭಾಗ ೩

ಜಗದಗಲದ ಹೃದಯದ ವಿಶಾಲುವಿನ ಸ್ವಗತ ಮಾತುಗಳು !!!

ಸಗ್ಗದಿಂದ ಸಗ್ಗಕ್ಕೆ  ನನ್ನ ಪಯಣದ ಹಾದಿಯಲ್ಲಿ ಬಂದ  ಹೂವಿನ ಪಥದಷ್ಟೆ ಕಲ್ಲಿನ ಏರು ಪೇರುಗಳ ಹಾದಿಯೂ ಕೂಡಿತ್ತು...!

ಸಗ್ಗ ಅಂದೇ ಅಲ್ವೇ...ಹೌದು ನಾ ಸುಮ್ಮನೇ ಹೇಳಿಲ್ಲ...ಕಿತ್ತಾನೆ ಎಂಬ ಸ್ವರ್ಗದಲ್ಲಿ ಹುಟ್ಟಿ ಬೆಳೆದ ನನಗೆ..ತಾತಾ ಬೊಬ್ಬೆ ರಾಮಯ್ಯ..ಅಜ್ಜಿ ಲಕ್ಷ್ಮಿ ದೇವಿ..ದೊಡ್ಡ ಮಾವ..ಸಣ್ ಮಾವ..ಅತ್ತೆಯಂದಿರು..ಎಲ್ಲರೂ  ನನಗೆ ಪ್ರೀತಿಯನ್ನು ಉಣ ಬಡಿಸಿದವರೇ..

ಅವರ ಮುಂದಿನ ಜನಾಂಗ ಕೂಡಾ..ವಿಶಾಲೂ ಎಂದರೆ ಸಾಕು ..ಮೊಗವರಳುತ್ತಿತ್ತು..ಅದೇನು ಪುಣ್ಯ ಮಾಡಿದ್ದೆನೋ...ನನ್ನ ಕಂಡರೆ ಹುಣ್ಣಿಮೆಯಲ್ಲಿ ಸಾಗರ ಉಕ್ಕುವ ಹಾಗೆ ಅವರ ಹೃದಯ ತುಂಬಿ ಬರುತ್ತಿತ್ತು..

ನಾ ಎಷ್ಟೇ ಜನ್ಮವೆತ್ತಿದರೂ ಈ ಋಣವನ್ನು ತೀರಿಸಲಾರೆ..

ಕಿತ್ತಾನೆಯ ಬೊಬ್ಬೆರಾಮಯ್ಯನವರ ವಂಶದ ಪ್ರತಿಯೊಬ್ಬರಿಗೂ ನನ್ನ ಶಿರಸಾ ನಮಾಮಿ..

ಇದಕ್ಕೆಲ್ಲಾ ಕಳಸವಿಟ್ಟಂತೆ ಹೋದ ವರ್ಷ ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ನನ್ನನ್ನು ಸತ್ಕರಿಸಿ...ಗೌರವಿಸಿ ಅವರ ಅಭಿಮಾನದ ಕಿರೀಟವನ್ನು ತೊಡಿಸಿದ್ದು ನನ್ನ ಜೀವನದ ಸಾರ್ಥಕತೆಯ ಕ್ಷಣಗಳು...!

ಆ ಸಗ್ಗದಲ್ಲಿ ಬೆಳೆದು ..ಆಲೆಮನೆಯ ಕಬ್ಬಿನ ಹಾಲು..ತೋಟದ ಎಳನೀರು..ಗೆಡ್ಡೆ ಗೆಣಸುಗಳು ನನ್ನ ಬಾಲ್ಯವನ್ನು ಬೆಳೆಸಿತು!

ಪ್ರಾಯಕ್ಕೆ ಬರುವ ತನಕ..ನನಗೆ ತಾಯಿ ಇಲ್ಲ ಎನ್ನುವುದೇ ತಿಳಿದಿರಲಿಲ್ಲ...ನನಗೆ ಎರಡು ವರ್ಷವಿದ್ದಾಗಲೇ ಅಸುನೀಗಿದರು ಎಂಬ ಸತ್ಯ ಗೊತ್ತಾಗುವಷ್ಟರಲ್ಲಿ ಚಿಕ್ಕಮ್ಮ ಬಂದಾಗಿತ್ತು...

ಮುಂದಿನ ಬದುಕಿಗೆ ಪ್ರೀತಿ ಧಾರೆಯೆರೆದು ಹೆಮ್ಮರವಾಗಿಸಿದ್ದು ಶಂಖದ ಕುಟುಂಬ..ನನ್ನ ಪ್ರೀತಿಯ ರಾಮಣ್ಣ, ಕಿಟ್ಟಣ್ಣ, ಅನಂತ..ಹಾಗೂ ನನ್ನ ತವರು ಮನೆ ಮತ್ತು ಅವರ ಕುಟುಂಬದವರು ನನ್ನ ಬದುಕಿಗೆ ಇನ್ನಷ್ಟು ಹೊಳಪನ್ನು ನೀಡಿತು..

ನನ್ನ ಸೋದರತ್ತೆಯರಾದ ಕೌಶಿಕದ ಗೌರಮ್ಮ..ಹೊಳಲಕೆರೆಯ ಪುಟ್ಟಿ ಅಂತಾನೇ ಜನಜನಿತವಾಗಿದ್ದರು..ಕಿತ್ತಾನೆಯ ಅನ್ನಪೂರ್ಣೆ..ಸದ್ಯಕ್ಕೆ ವಯೋಸಹಜವಾಗಿ ಕೆಲವು ಹೆಸರುಗಳು ನನ್ನ ಮಾತಲ್ಲಿ ಇಲ್ಲದಿದ್ದರೂ..ನನ್ನ ಮನೆ ಮನದೊಳಗೆ ಸದಾ ಹಸಿರಾಗಿದ್ದಾರೆ...

ಕಿತ್ತಾನೆ, ಹಾಸನ, ಪಾಳ್ಯ, ಕೌಶಿಕ, ಶಿವಮೊಗ್ಗ, ಮೊಸಳೆ, ಕೋರವಂಗಲ..ಬೆಂಗಳೂರು..ಅದರ ಅಕ್ಕ ಪಕ್ಕದ ಊರುಗಳು ಎಲ್ಲೆಡೆ ಪಸರಿಸಿದ್ದ ನನ್ನ ಬಂಧುಮಿತ್ರರ ಸಹೃದಯತೆಗೆ ಮನಸ್ಸು ಕರಗಿ ನೀರಾಗಿತ್ತು!

ಮುಂದಿನ ಪೀಳಿಗೆ ಕೂಡಾ ತಮ್ಮ ಹೃದಯದೊಳಗೆ ವಿಶಿಷ್ಟವಾದ ಸ್ಥಾನ ನೀಡಿದರು..

ಕಿತ್ತಾನೆಯ ಗಿರಿಜಾ, ಮಂಗಳ,ಅನುಸೂಯ,ಪದ್ಮ, ಗಾಯಿತ್ರಿ, ಚಂದ್ರ, ಶ್ರೀರಾಮ,ಸತ್ಯನಾರಾಯಣ..ಮಂಜು..ಉಮೇಶ ದೇವರಸ್ವಾಮಿ,ಗೋಪಾಲ, ವಸಂತ..ಶ್ಯಾಮಲಾ ಕುಮಾರಿ..ಶಾಮಣ್ಣ..ಸೂರಾ..ಶ್ರೀಧರ ..ಮತ್ತುಅವರೆಲ್ಲರ ಕುಟುಂಬ ನನ್ನ ಉಡಿಯನ್ನು ತುಂಬಿಸಿಕೊಟ್ಟ ಪ್ರೀತಿಗೆ ಬೆಲೆಕಟ್ಟಲಸಾಧ್ಯ

ಒಂದೇ ತಾಯಿಯ ಮಕ್ಕಳಲ್ಲದಿದ್ದರೂ..ಒಡಹುಟ್ಟಿದವಳಿಗಿಂತ ಹೆಚ್ಚು ಪ್ರೀತಿ ತೋರಿಸಿದ ಗೋಪಾಲ..ಶಂಕರ..ರಾಜಾ..ಸರೋಜ ಇವರ ಪ್ರೀತಿಯನ್ನು ಹೇಗೆ ಮರೆಯಲಿ..ಅವರ ಕುಟುಂಬ ಮತ್ತು ಮಕ್ಕಳು ಕೂಡ ನನ್ನನ್ನು ಅಷ್ಟೇ ಅಕ್ಕರೆಯಿಂದ ನೋಡಿಕೊಂಡರು... 

ನನ್ನ ದೊಡ್ಡಪ್ಪ ಚಿಕ್ಕಪ್ಪನ ಮಕ್ಕಳಾದ ವಿಶ್ವ, ಅಣ್ಣಯ್ಯ, ರಾಜು..ಸರಸ್ವತಿ.. ಉಮಾ..ಗುಂಡಾ..ಕಮಲ..ಶೈಲಾ..ಮಣಿ... ಗೀತಾ..ಶಾರದ..ವೀಣಾ...ತ್ರಿವೇಣಿ..ಮತ್ತು ಅವರ ಕುಟುಂಬದವರ ಪ್ರೀತಿ ನನ್ನ ಮೂಖನನ್ನಾಗಿಸಿತು...

ಬಾಳ ಸಂಗಾತಿಯಾಗಿ ನನ್ನ ಬದುಕಿಗೆ ಹಾಲು ಜೇನು ಉಣಬಡಿಸಿದ ನನ್ನ ಯಜಮಾನರನ್ನು ಹೇಗೆ ಮರೆಯಲಿ..!

ಮಂಜಿನಂತಹ ತಣ್ಣಗಿನ ವ್ಯಕ್ತಿತ್ವ..ಮೃದು ಮಾತು..ಗುರಿ ಸಾಧಿಸುವ ಛಲ..ಕುಹಕಗಳು ಹಾದಿಯಲ್ಲಿ ಬಂದರೂ ತಲೆ ಕೆಡಿಸಿಕೊಳ್ಳದೇ ತಾನು ನಂಬಿದ್ದ ಹಾದಿಯನ್ನು ಬಿಡದೇ ನನ್ನನ್ನು ಅದೇ ಮಾರ್ಗದಲ್ಲಿ ನೆಡೆಸಿದ..ನನ್ನ ಪತಿರಾಯರ ಸಂಗವೇ ಸಗ್ಗವಾಗಿತ್ತು!

ಅವರು ಕೊಟ್ಟ ನಾಲ್ಕು ಮುದ್ದಿನ ಮಣಿಗಳು .. ನಮಗೆ ಯೋಗ್ಯತೆಯಿತ್ತೋ .ಮಕ್ಕಳಿಗೆ ಯೋಗವಿತ್ತೋ ಅರಿಯೆನು.. ಆದರೆ  ನಮಗೆ ಸಲ್ಲಬೇಕಾದ ಪ್ರತಿ ಸಂಸ್ಕಾರವನ್ನೂ ಮಾಡಿದರು ..ಅರವತ್ತನೇ ವರ್ಷದ ಶಾಂತಿ..ಎಪ್ಪತ್ತನೇ ವರ್ಷದ ಶಾಂತಿ ಭರ್ಜರಿಯಾಗಿ ನೆಡೆಸಿದರು..ನಮ್ಮ ಮದುವೆಯಾಗಿ ಐವತ್ತು ವರ್ಷಗಳ ಸಂಭ್ರಮವನ್ನು ಅದ್ದೂರಿಯಾಗಿ ಮಾಡಿದರು.. 

ಎಪ್ಪತ್ತನೇ ವರ್ಷದ ಶಾಂತಿ ಮಾಡಿದಾಗ ಬೆಂಗಳೂರಿಗೆ ಬರಲು ಪ್ರೇರೇಪಿಸಿದ ಶಿವಮೊಗ್ಗದ ಶೋಮಿ (ಅರ್ಥಾತ್ ನಾಗರತ್ನ ಮಗ ಸೋಮಶೇಖರ್) ಹೇಳಿದ್ದು.. ಮಂಜಣ್ಣ ಇಂತಹ ಮಕ್ಕಳನ್ನು ಪಡೆದ ನೀನೆ ಧನ್ಯ.. ಎಂದಾಗ ನನ್ನ ಯಜಮಾನರ ಕಣ್ಣಲ್ಲಿ ಸಾರ್ಥಕತೆ ಜಿನುಗಿತ್ತು.. 

ಶಿವಮೊಗ್ಗದ ಕಷ್ಟದ ದಿನಗಳಲ್ಲಿ ಸಹಾಯಕ್ಕೆ ನಿಂತಿದ್ದ ಕಿತ್ತಾನೆಯ ಸುರೇಶನನ್ನು ಮರೆಯಲಾರೆ.. 

ಬೆಂಗಳೂರಿಗೆ ಬಂದಾಗ "ದೊರೆ ನೀನು ನೆಲೆ ನಿಂತು ನಂತರ ನಿನ್ನ ಪರಿವಾರವನ್ನು ಕರೆದುಕೊಂಡು ಬಾ" ಎಂದು ಹುರಿದುಂಬಿಸಿ.. ನೆರಳಾಗಿ ನಿಂತ ನನ್ನ ಯಜಮಾನರ ಸೋದರತ್ತೆ ಮಗ ಗುಂಡನ ಸಹಾಯವನ್ನು ಸದಾ ನೆನಪಲ್ಲಿ ಇಟ್ಟುಕೊಂಡಿದ್ದೆ.. 

ಮಕ್ಕಳು ಸಹಸ್ರ ಚಂದ್ರ ದರ್ಶನ ಮಾಡಬೇಕಿತ್ತು ಅಂತ ಪ್ಲಾನ್ ಮಾಡಿದ್ದರು ..ಸಾಕು ಕಣೇ ಅಂತ ಅವರು ಹೊರಟು ಬಿಟ್ಟರು.. ನನಗೆ ಮಾಡಬೇಕು ಅಂತ ಮಕ್ಕಳು ಪ್ಲಾನ್ ಮಾಡಿದರು..ಮಕ್ಕಳೇ ನನಗೆ ಸಾಕು ದಣಿವಾಗಿದೆ ಅಂತ ನಾನೂ ಹೊರಟು ಬಿಟ್ಟೆ...!

ನನ್ನತ್ತೆ ತಾಯಿ ಪ್ರೀತಿ ತೋರಿಸಿದರು..ಸುಬ್ಬನರಸಮ್ಮನನ್ನು ನರಸು ಅಂತ ಮದುವೆಗೆ ಮುಂಚೆ ಕರೆಯುವಷ್ಟು ಸಲುಗೆ ಇತ್ತು..ನಾಗರತ್ನ..ಜಯ..ಸುಬ್ಬಲಕ್ಷಮ್ಮ ಎಲ್ಲರೂ ನನ್ನ ಪ್ರೀತಿಸಿದರು‌...ಆಶೀರ್ವದಿಸಿದರು!

ನನ್ನ ಅತ್ತೆ ಮಾವನ ಜೊತೆ..ನನ್ನ ಭಾವ..ಮೈದುನರಾದ ಅಪ್ಪು..ಕೃಷ್ಣ..ಕುಮಾರ..ನಾಗರಾಜ..ಮತ್ತು ಅವರ ಪತ್ನಿಯರಾದ ಸರಸ್ವತಿ..ರಾಧ..ಉಷಾ..ಪದ್ಮ..ಎಲ್ಲರ ಪ್ರೀತಿ ಗೌರವಗಳು ಅವರ ಮಕ್ಕಳ ಪರಂಪರೆಯಲ್ಲೂ ಮುಂದುವರೆಯಿತು!  

ನನ್ನ ಯಜಮಾನರ ಜೊತೆ ಬೆರೆತು..ಹಾಸನ ..ಶಿವಮೊಗ್ಗದಲ್ಲಿ..ಬೆಳೆಸಿದ ನನ್ನ ಸಂಸಾರ ಮಾಯನಗರಿಯಲ್ಲಿ ತಮ್ಮ ಅಸ್ತಿತ್ವ ಕಂಡುಕೊಂಡಿದ್ದು ನನಗೆ ಬಹಳ ನೆಮ್ಮದಿ ನೀಡಿತು..

ಕೃಷ್ಣವೇಣಿ ಹೋರಾಟದ ಬದುಕು ಕಂಡು..ಮನೆ ಮಾಡಿದಳು..ವಿಜಯ ಅಪ್ಪ ಹಾಕಿದ ಆಲದ ಮರದಿಂದಲೇ ಸಾಧನೆಯ ಹಾದಿಯಲ್ಲಿ ಹೆಜ್ಜೆಯಿಟ್ಟು ಮನೆ ಕಟ್ಟಲು ಅಣಿಯಾಗಿದ್ದಾನೆ...ಶ್ರೀಕಾಂತನ ಬದುಕು ಹಠಾತ್ ತಿರುವು ಕಂಡರೂ ಅದನ್ನು ಎದುರಿಸಿ ಮತ್ತೆ ಬದುಕು ಕಟ್ಟಿಕೊಂಡಿದ್ದಾನೆ ...ಮುರುಳಿಯ ಬದುಕು ಶೀಘ್ರದಲ್ಲಿಯೇ ಹಸನಾಗುತ್ತದೆ...

ನನ್ನ ಸೊಸೆಯರಾದ ವಿಜಯನ ಮಡದಿ ವಾಣಿ, ಸ್ವರ್ಗದಲ್ಲಿರುವ ಶ್ರೀಕಾಂತನ ಸವಿತಾ.. ಮತ್ತೆ ಅವನ ಬದುಕನ್ನು ಹಸನು ಮಾಡಿದ ಸೀಮಾ.. ಮೊಮ್ಮಕ್ಕಳು ಆದಿತ್ಯ, ವರ್ಷ, ಶೀತಲ್, ವಿಷ್ಣು, ಐಶ್ವರ್ಯ ಎಲ್ಲರೂ ನನ್ನ ಕುಟುಂಬವನ್ನು ಬೆಳೆಸಿದ್ದಾರೆ.. 

ನನ್ನ ಅನುಗ್ರಹ ಸದನ ಸದಾ ಸಂತಸದಿಂದ ತುಂಬಿರುತ್ತೆ.. ಇದು ನನ್ನ ಆಶೀರ್ವಾದ.. 

ವಿಶಾಲವಾದ ಜಗದಲ್ಲಿ ನನ್ನ ಕುಟುಂಬಕ್ಕೂ ಜಾಗಕೊಟ್ಟ ಈ ಜಗಕ್ಕೆ ವಂದಿಸುತ್ತಾ..ಹೊರಟಿದ್ದೇನೆ ..ನನ್ನ ಕುಟುಂಬವನ್ನು ಹರಸಿ ..ಬೆಳೆಸಿ..!

ಎಂದರೋ ಮಹಾನುಭಾವುಲು ಅಂದರೀಕಿ ವಂದನಮು!!

ಮತ್ತೆ....... ಹೋಗಿ ಬರಲೇ!

Saturday, October 24, 2020

ನಾನು ನನ್ನ ಪರ್ಪಲ್ ರೈನ್ ಕೋಟ್... ಸಿಬಿ ಜನುಮದಿನದ ಶುಭಾಶಯಗಳು

 ಇದೊಂದು ವಿಚಿತ್ರ ರೀತಿಯ ಹುಚ್ಚು ಸರಿ ಸುಮಾರು ಎರಡು ವರ್ಷಗಳ ಹಿಂದೆ ಒಂದು ಕವಿತೆಯ ಸ್ಪೂರ್ತಿಯಿಂದ ಬರೆದ ಬರಹವನ್ನು ಮುಂದುವರೆಸೋದು.. 

ಹಲವಾರು ಈ ರೀತಿಯ ಹುಚ್ಚೇ ಮನಸ್ಸಿನ ನಿರ್ವಾತವನ್ನು ತುಂಬುವುದು.. ಮತ್ತು ಬದುಕಿಗೆ ಇನ್ನಷ್ಟು ಹುಮ್ಮಸ್ಸು ತುಂಬುವುದು.. 

ನಾನು ನನ್ನ ಪರ್ಪಲ್ ರೈನ್ ಕೋಟ್... !

ಹಿಂದಿನ ಸಂಚಿಕೆಯಲ್ಲಿ  (ಹಿಂದಿನ ಸಂಚಿಕೆ ಹ ಹ ಹ.. ಕಳೆದ ಶತಮಾನದ್ದು ಅನ್ನಿ) ಅರ್ಪಿತಾ ಮತ್ತು ಮನು ಬೆಟ್ಟದ ತುದಿಯಲ್ಲಿ ಚಳಿಗಾಳಿಗಳ ನಡುವೆ ಒಂದಷ್ಟು ಫೋಟೋ ತೆಗೆದು.. ಬೋಂಡ, ಅಂಬೊಡೆಯನ್ನು ಮೆಲ್ಲುತ್ತಿದ್ದಾಗ.. ಆ ಬೋಂಡಾ ಸುತ್ತಿದ್ದ ಕಾಗದದಲ್ಲಿ ಒಂದು ಪುಟ್ಟ ಕವಿತೆ ಅರ್ಪಿತಾಳ ಮನಸ್ಸನ್ನು ಕಲಕಿತ್ತು.. ಮನು ಕೂಡ ಸುಮ್ಮನೆ ಈ ಕವಿತೆಯೊಳಗೆ ಏನೋ ಇದೆ ಅನ್ನುವ ದೇಶಾವರಿ ಮಾತನ್ನು ಸ್ವಲ್ಪ ಸೀರಿಯಸ್ ಆಗಿಯೇ ಅರ್ಪಿತಾ ತೆಗೆದುಕೊಂಡಿದ್ದಳು.. ಆ ಕವಿತೆಯನ್ನು ಮತ್ತೆ ಮತ್ತೆ ಓದುತ್ತಲೇ ಇದ್ದಳು.. 

​"ಆ ಕಣಿವೆಯ ತುದಿಯಲ್ಲಿದ್ದಾನಂತೆ ಜಾದೂಗಾರ
ನೊಂದ ಹೃದಯಕೆ ಮುಲಾಮು ಹಚ್ಚುವ ಕನಸುಗಾರ
ಕನಸಿನಾ ಮೊಗ್ಗಲು ಮಗಚುವಾಗ ನೆನಪಾದ ಅವನಂದು
ಹೆಜ್ಜೆ ಮೇಲೆ ಹೆಜ್ಜೆಯಿಟ್ಟು ಹುಡುಕಿ ಹೊರಟೆವು ನಾವಿಂದು
ನಾನು ನನ್ನ ಪರ್ಪಲ್ ರೈನ್ ಕೋಟ್"

 ಕವಿತೆಯನ್ನು ಬರೆದವರ ಹೆಸರು ಹೇಮಂತ್ ಮತ್ತು ದಿನಾಂಕ ೨೪. ೧೦. ೨೦೧೭ ಅಂತ ಇತ್ತು ... 

ಅರ್ಪಿತಾಳ ಪುಟ್ಟ ತಲೆಯಲ್ಲಿ ನೂರಾರು ಪ್ರಶ್ನೆಗಳು ಓಡುತ್ತಿದ್ದವು.. ಆ ದಿನಾಂಕ ತುಸು ಗೊಂದಲಗೀಡು ಮಾಡಿತ್ತು.. ಬೈಕಿನಲ್ಲಿ ಸುಮ್ಮನೆ ಕೂತಿದ್ದರು.. ತಲೆ ಮಾತ್ರ ವಾಯುವೇಗದಲ್ಲಿ ಯೋಚಿಸುತ್ತಿತ್ತು.. ಈ ದಿನಾಂಕಕ್ಕೂ ಹೇಮಂತ್ ಕಾಣೆಯಾಗಿದ್ದಕ್ಕೂ ಏನೋ ಲಿಂಕ್ ಇದೆ.. ಮನುಗೆ ಹೇಳಿದರೆ.. ಅವನು ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳದಿದ್ದದ್ದು ಅರ್ಪಿತಾಳಿಗೆ ಕೊಂಚ ಯೋಚನೆಯಾದರೂ.. ಮನುವಿನ ಬಗ್ಗೆ ಚೆನ್ನಾಗಿ ಗೊತ್ತಿದ್ದ ಕಾರಣ ಏನೂ ಮಾತಾಡದೆ ತನ್ನ ಪಾಡಿಗೆ ಯೋಚಿಸತೊಡಗಿದಳು.. 

ಹೇಮಂತ್.. ಅರ್ಪಿತಾ ಮತ್ತು ಮನುವಿನ ಆಪ್ತ ಗೆಳೆಯ.. ಎಲ್ಲಿ ಹೋದರೂ ಜೊತೆಗಿರಲೇಬೇಕಿತ್ತು.. ಆದರೆ ಆ ಮೇಲೆ ಹೇಳಿದ ದಿನಾಂಕದ ನಂತರ ಹೇಮಂತ್ ಅಚ್ಚರಿಯ ರೀತಿಯಲ್ಲಿ ಕಾಣ ಸಿಕ್ಕಿರಲಿಲ್ಲ... ಮೊಬೈಲಿಗೆ ಕರೆ.. ವಾಟ್ಸಾಪ್ ಸಂದೇಶ.. ಎಸ್ ಎಂ ಎಸ್ ಗಳಿಗೆ ಪ್ರತಿಕ್ರಿಯೆ ಇರಲಿಲ್ಲ.. ಇಮೇಲ್ ಕೂಡ ನಿರುತ್ತರ ಕಂಡಿತ್ತು.. ಪೋಲೀಸು ಅದು ಇದು ಬೇಡ ಎಂದು ಅವರ ಮನೆಯವರು ಸುಮ್ಮನಿದ್ದರು.. ಕಾರಣ ಹೇಮಂತ್ ಕೆಲಸ ಮಾಡುತ್ತಿದ್ದ ಆಫೀಸ್ ತುಂಬಾ ಗುಪ್ತವಾಗಿತ್ತು.. ಯಾವುದೋ ಪ್ರಾಜೆಕ್ಟ್ ಮೇಲೆ ಆವ ಕೆಲಸ ಮಾಡುತ್ತಿದ್ದ... ಅದು ಮನೆಯವರಿಗೂ ಗೊತ್ತಿರಲಿಲ್ಲ.. ತನ್ನ ಆಪ್ತ ಗೆಳೆಯರಿಗೂ ಗೊತ್ತಿರಲಿಲ್ಲ... ಆದರೆ ಗೆಳೆತನವನ್ನು ಮತ್ತು ಅವರ ಜೊತೆಗಿನ ಒಡನಾಟವನ್ನು ಎಂದೂ ದೂರಮಾಡಿರಲಿಲ್ಲ.. 

ಒಂದೆರಡು ದಿನವಾದ ಮೇಲೆ.. ಅರ್ಪಿತಾ ಮನುವಿಗೆ ಒಂದು ಮೆಸೇಜ್ ಕಳಿಸಿ.. "ಮನು ನಾನು ಒಂದೆರಡು ದಿನ ನಮ್ಮ ಊರಿಗೆ ಹೋಗಿ ಬರುವೆ.. ಸರಿಯಾಗಿ ಎರಡು ದಿನವಾದ ಮೇಲೆ ನನ್ನ ಮೊಬೈಲಿಗೆ ಕರೆ ಮಾಡು.. ಉತ್ತರ ಬರಲಿಲ್ಲ ಅಂದರೆ.. ಸೀದಾ ನಮ್ಮೂರಿಗೆ ಬಂದು ಬಿಡು.. " 

ಅರ್ಪಿತಾಳ ಸಾಹಸ ಪ್ರವೃತ್ತಿ ಗೊತ್ತಿದ್ದ ಮನುವಿಗೆ ಸರಿ ಅನ್ನದೆ ಬೇರೆ ಉತ್ತರವಿರಲಿಲ್ಲ.. ಜೊತೆಯಲ್ಲಿ ಅವನಿಗೆ ಗೊತ್ತಿತ್ತು.. ಅವಳು ಒಂದು ಕೆಲಸಕ್ಕೆ ಕೈ ಹಾಕಿದರೆ.. ತುಂಬಾ ಸೂಕ್ಷ್ಮವಾಗಿ ಅದರ ಸಾಧಕ ಬಾಧಕಗಳನ್ನು ಯೋಚಿಸಿ.. ತುಂಬಾ ಸುರಕ್ಷತೆಯಿಂದ ಕೆಲಸ ನಿಭಾಯಿಸುತ್ತಾಳೆ.. ಮತ್ತೆ ಅಪಾಯ ಅನ್ನುವಂತಹ ಸಂದರ್ಭದಲ್ಲಿ ತನ್ನ ಸಹಾಯ ಪಡೆಯದೇ ಇರೋಲ್ಲ ಅಂತ.. ಹಾಗಾಗಿ ಸರಿ ಕಣೆ ಹುಷಾರು ಅಂತ ಪ್ರತಿಕ್ರಿಯೆ ಕೊಟ್ಟಿದ್ದ.. 

ಅವಳು ಹೇಳಿದ ಹಾಗೆ ಎರಡು ದಿನ ಆಗಿತ್ತು.. ಇರಲಿ ಇನ್ನೊಂದು ದಿನ ಬೆಳಿಗ್ಗೆ ಕರೆ ಮಾಡುವೆ ಎಂದು ಮನು ಮಾನಸಿಕವಾಗಿ ಸಿದ್ಧವಾಗಿದ್ದ.. 

ಮೂರನೇ ದಿನ.. ಅರ್ಪಿತಾಳ ಸಂದೇಶ.. "ಮನು.. ಮಿಷನ್ ಕಂಪ್ಲೇಟಿಡ್.. ಕಮ್" 

ಮನು ತನ್ನ ಬುಲೆಟ್ ತೆಗೆದುಕೊಂಡು ಹೊರಟ.. ದಾರಿಯುದ್ದಕ್ಕೂ ಅವನ ತಲೆ ಯೋಚಿಸಿ ಭಾರವಾಗಿತ್ತು... ಮೊಬೈಲಿನ ಹಾಡುಗಳು ಅವನ ಮನಸ್ಸನ್ನು ಆಹ್ಲಾದಕರವಾಗಿಟ್ಟಿತ್ತು.. ತಣ್ಣಗಿನ ವಾತಾವರಣ.. ತಂಗಾಳಿ.. ಹಸಿರು ಸೀರೆಯುಟ್ಟ ಪ್ರಕೃತಿ ಎಲ್ಲವೂ ಅವನ ಬ್ಯುಸಿ ಕೆಲಸಕ್ಕೆ ಅಲ್ಪವಿರಾಮ ಕೊಟ್ಟಿತ್ತು.. 

ಊರೊಳೊಗೆ ಹೋದ..... ಸಾಲು ಸಾಲು ಕಂಬದ ಮನೆ..ಸುಮಾರು ನೂರು ವರ್ಷ ದಾಟಿದ ಮನೆ.. ಸುಸ್ಥಿತಿಯಲ್ಲಿತ್ತು.. ಮನೆ ಮುಂದೆ ಎತ್ತಿನ ಗಾಡಿ.. ಎತ್ತುಗಳು ಹುಲ್ಲನ್ನು ಮೇಯುತಿತ್ತು.. ಹಸುಗಳು ಅಲ್ಲಿಯೇ ಮಲಗಿದ್ದವು.. ಮನೆ ಹಿಂದಿನ ಹಿತ್ತಲಿನಿಂದ ಹೊಗೆ ಬರುತಿತ್ತು.. ಮನಸ್ಸಿಗೆ ಮುದ ಕೊಡುವ ಪ್ರಕೃತಿಯ ಮಧ್ಯೆ ಅರ್ಪಿತಾಳ ಮನೆ.. 

ಬೇವಿನ ಕಡ್ಡಿಯಿಂದ ಹಲ್ಲನ್ನು ಉಜ್ಜುತ್ತಾ ಒಂದು ಆಕೃತಿ ಬಂತು.. ಗಡ್ಡ ನೀಳವಾಗಿತ್ತು..ದೇಹ ಕೊಂಚ ಕೃಶವಾಗಿತ್ತು.. ಕಣ್ಣುಗಳ ಹೊಳಪು ಕಡಿಮೆಯಾಗಿರಲಿಲ್ಲ.. ಕಡ್ಡಿಯನ್ನು ಅತ್ತ ಬಿಸಾಡಿ.. ಬಾಯಿಗೆ ನೀರು ಹಾಕಿಕೊಂಡು ಗಳಗಳ ಮಾಡಿ.. ಆ ಆಕೃತಿ ಓಡಿ ಬಂದು ಮನುವನ್ನು ತಬ್ಬಿಕೊಂಡಿತು.. 

ಮನುವಿಗೆ ಒಂದು ಕ್ಷಣ ಗಾಬರಿ ... ತಬ್ಬಿಕೊಂಡ ವ್ಯಕ್ತಿ ಯಾರು ಅಂತ ತಿಳಿದಾಗ.. ಗಾಬರಿ ದೂರವಾಗಿತ್ತು.. ಮನಸ್ಸಿಗೆ ಸಂತೋಷವಾಗಿತ್ತು.. "ಹೇಮು .. ಹೇಗಿದ್ದೀಯೋ.. ಎಷ್ಟು ದಿನ ಆಯಿತು ನಿನ್ನ ನೋಡಿ.. ಎಲ್ಲಿದ್ದೆ ಇಲ್ಲಿ ತನಕ.. " ಪ್ರಶ್ನೆಗಳ ಸರಮಾಲೆಯನ್ನೇ ಪೋಣಿಸಿದ್ದ.. 

ಅರ್ಪಿತಾ ಬಿಸಿ ಬಿಸಿ ಕಾಫಿಯನ್ನು ತಂದು.. ಇಬ್ಬರಿಗೂ ಕೊಟ್ಟು "ಹೇಮುವಿಗೆ ತೊಂದರೆ ಕೊಡಬೇಡ ಮನು.. ನಾನು ಹೇಳುವೆ.. " ಎಂದು ಹೇಮಂತನ ಕಡೆ ಕಣ್ಣು ಹೊಡೆದು ಶುರುಮಾಡಿದಳು.. 

​"ಆ ಕಣಿವೆಯ ತುದಿಯಲ್ಲಿದ್ದಾನಂತೆ ಜಾದೂಗಾರ
ನೊಂದ ಹೃದಯಕೆ ಮುಲಾಮು ಹಚ್ಚುವ ಕನಸುಗಾರ
ಕನಸಿನಾ ಮೊಗ್ಗಲು ಮಗಚುವಾಗ ನೆನಪಾದ ಅವನಂದು
ಹೆಜ್ಜೆ ಮೇಲೆ ಹೆಜ್ಜೆಯಿಟ್ಟು ಹುಡುಕಿ ಹೊರಟೆವು ನಾವಿಂದು
ನಾನು ನನ್ನ ಪರ್ಪಲ್ ರೈನ್ ಕೋಟ್"

"ಮನು ಈ ಕವಿತೆಯನ್ನು ಓದಿ.. ಓದಿ.. ಅದರ ಒಳಾರ್ಥ ತಿಳಿದುಕೊಳ್ಳುವುದಕ್ಕೆ ಪ್ರಯತ್ನ ಮಾಡಿದೆ.. ... 

ಕಣಿವೆಯ ತುದಿಯಲ್ಲಿ ಕೂತಿದ್ದಾನೆ.. ತನ್ನ ಪ್ರಾಜೆಕ್ಟನ್ನು ನಿಭಾಯಿಸುವುದಕ್ಕೆ ಎಲ್ಲರಿಂದ ದೂರ ಬಂದು ನಿಂತಿದ್ದಾನೆ.. ತನ್ನ ಕನಸ್ಸಿನ ಪ್ರಾಜೆಕ್ಟ್ ಯಾವಾಗಲೂ ಕಣ್ಣ ಮುಂದೆ ಇದ್ದುದರಿಂದ ಅದನ್ನು ಪೂರ್ಣ ಮಾಡದೆ ಆವ ಮಗ್ಗುಲು ಬದಲಿಸುವುದಿಲ್ಲ ಎಂದು ಅರಿವಾಯಿತು.. ಅವನು ಸದಾ ಇಷ್ಟ ಪಡುತಿದ್ದ ಪರ್ಪಲ್ ರೈನ್ ಕೋಟು ನನಗೆ ದಾರಿ ತೋರಿಸಿತು.. 

ಕಣಿವೆಯ ಪ್ರದೇಶಕ್ಕೆ ಹೋದಾಗ.. ಅಲ್ಲಿ ರೈನ್ ಕೋಟು ಬಿದ್ದಿತ್ತು.. ಆಗ ಅರಿವಾಯಿತು.. ಹೇಮು ಇಲ್ಲೇ ಎಲ್ಲೋ ಇದ್ದಾನೆ ಅಂತ.. ಅದೇ ಹಾದಿಯಲ್ಲಿ ಸಾಗಿದಾಗ ಕೆಲವು ದೃಢವಾದ ಹೆಜ್ಜೆಗಳ ಗುರುತು.. ನನ್ನನ್ನು ಕಣಿವೆಯ ತುತ್ತ ತುದಿಗೆ ತಂದಿತ್ತು.. ಮೊದಲೇ ನಿರ್ಧಾರ ಮಾಡಿಕೊಂಡು ಬಂದದ್ದರಿಂದ.. ಬೆಚ್ಚನೆಯ ಉಡುಪು.. ಆಹಾರ ಸಾಮಗ್ರಿ ಎಲ್ಲವನ್ನು ಹೊತ್ತು ತಂದಿದ್ದೆ..ಝರಿಗಳು ಹೇರಳವಾಗಿದ್ದರಿಂದ ನೀರಿನ ಬರ ಇರಲಿಲ್ಲ.. ಕಣಿವೆಯ ತುತ್ತ ತುದಿಯಲ್ಲಿ ಒಂದು ಗುಹೆಯಿತ್ತು.. ಆ ಗುಹೆಯ ಬಾಗಿಲಲ್ಲಿ ಒಂದು ಆಕೃತಿ ಮಲಗಿದ್ದು ಕಾಣಿಸಿತು.. ದೇಹ ಕೃಶವಾಗಿತ್ತು.. ತಲೆಗೂದಲು, ಗಡ್ಡ ನೀಳವಾಗಿ ಬೆಳೆದಿತ್ತು.. ಸರಿ ಸುಮಾರು ಒಂದು ವರ್ಷ ಆಗಿತ್ತು.. ಹೇಮು ನಮ್ಮ ಕಣ್ಣಿನಿಂದ ದೂರವಾಗಿ.. ಆವ ಬರೆದಿದ್ದ ಕವಿತೆಯ ಪುಸ್ತಕದ ಹಾಳೆಗಳು ಹಾದಿಯಲ್ಲಿ ಬಿದ್ದು ಹೋಗಿ.. ದನಕಾಯುವ ಹುಡುಗರಿಂದ ಬೋಂಡದ ಅಂಗಡಿ ಸೇರಿತ್ತು.. ಹಾಗಾಗಿ ಈ ಕವಿತೆಯ ಹಾಳೆ ಅರ್ಪಿತಾಳ ಕೈ ಸೇರಿದ ಮೇಲೆ.. ಹುಡುಕಾಟದಲ್ಲಿ ಹೇಮು ಸಿಕ್ಕಿದ್ದ.. 

ಹೇಮುವಿನ ಪ್ರಾಜೆಕ್ಟ್ ತುಂಬಾ ಗುಪ್ತವಾಗಿದ್ದರಿಂದ.. ಅದರ ವಿವರ ಅವನು ಹೇಳಲಿಲ್ಲ.. ನಾನೂ ಕೇಳಲಿಲ್ಲ.. ಆದರೆ ತುಂಬಾ ಮುಖ್ಯವಾದ ಮಾಹಿತಿಗೆ ಕಾಯುತಿದ್ದ.. ಮತ್ತು ಆ ಮಾಹಿತಿಯನ್ನು ಹೊತ್ತು ತರಬೇಕಾದವ ಇನ್ನೂ ಬಂದಿರಲಿಲ್ಲ.. ಅವನು ಬರದೇ.. ಇವ ಆ ಜಾಗವನ್ನು ಬಿಟ್ಟು ಬರುವ ಹಾಗಿರಲಿಲ್ಲ.. ಹಾಗಾಗಿ ತನ್ನ ಬಳಿಯಿದ್ದ ಆಹಾರ ಸಾಮಗ್ರಿಯನ್ನು, ಕಣಿವೆಯಲ್ಲಿ ಸಿಗುವ ಹಣ್ಣುಗಳನ್ನು ತಿಂದು ಬದುಕಿದ್ದಾನೆ.. ನಿನ್ನೆ ಊರಿಗೆ ಬಂದ ಮೇಲೆ ಒಂದು ವರ್ಷದ ದಿನಪತ್ರಿಕೆಯನ್ನು ಓದಿದ.. ತಡಕಾಡಿದ.. ನಂತರ ತಿಳಿದದ್ದು.. ಮಾಹಿತಿ ತರಬೇಕಾದವ ಕಾಡಿನ ನಡುವಿನ ಒಂದು ಜಲಪಾತದಲ್ಲಿ ಬಿದ್ದು ಘಾಸಿಗೊಂಡು.. ಪಟ್ಟಣದ ಆಸ್ಪತ್ರೆಗೆ ದಾಖಲಾಗಿದ್ದ.. ಮತ್ತು ಬಿದ್ದಿದ್ದ ಪೆಟ್ಟಿಗೆ ನೆನಪಿನ ಶಕ್ತಿ ಎಲ್ಲವನ್ನು ಕಳೆದುಕೊಂಡಿದ್ದಾನೆ.. ಅವನಿಗೆ ಮಾತ್ರ ಗೊತ್ತಿತ್ತಂತೆ ಹೇಮು ಎಲ್ಲಿದ್ದಾನೆ ಎಂದು.. ಅವನಿಗೆ ನೆನಪಿನ ಶಕ್ತಿ ಇಲ್ಲ.. ಇವನು ಅವನು ಬರೋ ತನಕ ಜಾಗ ಬಿಟ್ಟು ಬರುವ ಹಾಗಿಲ್ಲ.. ಇದು ಹೇಮುವಿನ ಕತೆ.. "

"ಯಪ್ಪಾ ಛಲಗಾರ್ತಿ ಕಣೆ ಅರ್ಪಿ.. ಒಬ್ಬಳೇ ಈ ರೀತಿಯ ಸಾಹಸ ಮಾಡಿದೆಯಲ್ಲಾ. ಶಭಾಷ್.. ಅಲ್ಲ ಕಣೆ.. ನನಗೆ ಒಮ್ಮೆ ಹೇಳಬಾರದಿತ್ತೇ.. ನಮ್ಮ ಆತ್ಮೀಯ ಹೇಮುವನ್ನು ಹುಡುಕುವುದಕ್ಕೆ ನಾನು ಬರುತ್ತಿದ್ದೆ.. "

"ಹಾಗಲ್ಲ ಕಣೋ ಮನು.. ನಿನ್ನ ಮನೆಯಿಂದ ಅಷ್ಟು ಸುಲಭವಾಗಿ ಬಿಡೋಲ್ಲ.. ಜೊತೆಗೆ ನನಗೆ ಖಾತ್ರಿ ಇತ್ತು ಇದು ಹೇಮುವಿನ ಕವಿತೆ.. ಮತ್ತು ಅವನ ಕವಿತೆ ಹುಚ್ಚು ಅವನು ಇರೋ ತಾಣವನ್ನು ಗುಟ್ಟಾಗಿ ಬಿಚ್ಚಿಟ್ಟಿದ್ದಾನೆ ಎಂದು.. ಮತ್ತೆ ಅವನ ಕೆಲಸವೇ ಗುಟ್ಟು ಎಂದಾಗ.. ಅವನನ್ನು ಹುಡುಕುವ ಕೆಲಸವೂ ಕೂಡ ಗುಟ್ಟಾಗಿರಲೇ ಬೇಕಲ್ವಾ.. " ಎನ್ನುತ್ತಾ ಇಬ್ಬರ ಕಡೆ ಕಣ್ಣು ಮಿಟುಕಿಸಿದಳು.. 

ಹೇಮು ಮತ್ತು ಮನು ಇಬ್ಬರೂ.. ಅರ್ಪಿತಾಳನ್ನು ಆಲಂಗಿಸಿದರು.. ಮೂವರಿಗೂ ಸಮಾಧಾನ ಮತ್ತೆ ಗೆಳೆತನ ಮುಂದುವರೆಯುತ್ತಿದೆ ಎಂದು.. !

******

ವಿಚಿತ್ರ ಅಲ್ಲವೇ.. ಎರಡು ವರ್ಷಗಳ ಹಿಂದಿನ ಬರಹವನ್ನು ಮುಂದುವರೆಸಿ... ಅದಕ್ಕೊಂದು ತಾರ್ಕಿಕ ಅಂತ್ಯ ಕೊಡಲು ಪ್ರಯತ್ನ ಪಟ್ಟಿದ್ದೇನೆ... 

ಇದಕ್ಕೆ ಕಾರಣ ನನ್ನ ಅದ್ಭುತ ಗೆಳತೀ ನಿವೇದಿತಾ ಚಿರಂತನ್ ಅವರ ಪುಟ್ಟ ಕವಿತೆ.. ಮತ್ತು ಅವರೇ ಸೃಷ್ಟಿ ಮಾಡಿದ ಪಾತ್ರ ಅರ್ಪಿತಾ.. 

ಇವರೆಡರ ಸಮಾಗಮ.. ಈ ಕಥಾನಕ.. 

ಇಂದು ನಿವೇದಿತಾ ಅವರ ಜನುಮದಿನ.. ಅದಕ್ಕೊಂದು ಬರಹ ಕೊಡೋಣ ಅಂತ ಮನಸ್ಸಿಗೆ ಬಂದಾಗ.. ಅರೆ ಅವರ ಕವಿತೆಯನ್ನು ಇಟ್ಟುಕೊಂಡು ಬರೆದಿದ್ದ ಬರಹಕ್ಕೆ ಮುಂದುವರೆದ ರೂಪ ಕೊಡೋಣ ಅನ್ನಿಸಿತು.. ಅದರ ಫಲಿತಾಂಶ ಈ ಬರಹ.. 

ಸಿಬಿ ನಿಮ್ಮೆಲ್ಲ ಆಸೆಗಳು ಈಡೇರಲಿ.. ಜನುಮದಿನ ಸುಂದರವಾಗಿರಲಿ.. 

ಜನುಮದಿನದ ಶುಭಾಶಯಗಳು!

Friday, October 23, 2020

ಅಮ್ಮ ಎನ್ನುವ ದೈತ್ಯ Server - ಭಾಗ ೨

 ಸುಮ್ಮನೆ ಉರಿದು ಬೂದಿಯಾಗಿದ್ದ ಕಟ್ಟಿಗೆಯ ರಾಶಿಯನ್ನು ನೋಡುತಿದ್ದೆ... ಎರಡು ದಿನದ ಹಿಂದಷ್ಟೇ ಜೀವ ತುಂಬಿದ್ದ ಶರೀರ ಇಂದು ಕಟ್ಟಿಗೆಯ ಜೊತೆಯಲ್ಲಿ ಉರಿದು ಅಸ್ಥಿ ಬಿಟ್ಟುಕೊಂಡು.. ಬೂದಿಯಾಗಿ ಚೆಲ್ಲಾಡಿತ್ತು.. 

ಕಿತ್ತಾನೆಯಿಂದ ಜನ್ಮ ತಳೆದ ಈ ಪುಟ್ಟ ಜೀವ.. ಸಂಸಾರಗಳ ಕಷ್ಟ ನಷ್ಟ ಸುಖ ದುಃಖಗಳನ್ನು ಹೀರಿಕೊಂಡು ಬೆಳೆದು ನಿಂತಿದ್ದ ಈ ಜೀವ ಇಂದು ಒಂದು ಮಡಿಕೆಯಲ್ಲಿ ತುಂಬಬಹುದಾದಷ್ಟು ಗಾತ್ರಕ್ಕೆ ಕುಗ್ಗಿದ್ದು.. ಮನುಜನ ದೇಹ ದೊಡ್ಡದಲ್ಲ.. ಜೀವನ ದೊಡ್ಡದು ಎನ್ನುವ ಮಾತನ್ನು ನಿಜ ಎಂದು ಸಾರಿತು.. 

ಅಪ್ಪನ ಕೆಲಸ ಮಾಡುವಾಗಲೂ.. ಸವಿತಾಳ ದೇಹದ ಪಳೆಯುಳಿಕೆಗಳನ್ನು ನೋಡಿದಾಗಲೂ ಆಗದ ಒಂದು ವಿಚಿತ್ರ ಸಂಕಟ ಅಂದು ನಮ್ಮನ್ನು ಕಾಡಿತು.. 

ಮನುಜನ ಅಸ್ತಿತ್ವವನ್ನು ಅಸ್ಥಿಗಳ ಮಧ್ಯೆ ಹುಡುಕುವ ಪರಿ ನಿಜಕ್ಕೂ ಘೋರ.. ಆದರೆ ಅದೇ ಸತ್ಯ.. 

ನಮ್ಮ ಮನವನ್ನು ಪೂಜಾ ಸಂಸ್ಕಾರ ಮಾಡಿಸಲು ಬಂದಿದ್ದ ಗುರುಗಳು ಗಮನಿಸಿದರೋ ಏನೋ ಎನ್ನುವಂತೆ... ಆ ಮಡಿಕೆಯಲ್ಲಿ ತುಂಬಿಕೊಳ್ಳಿ.. ಬೆಳ್ಳಗೆ ಇರೋದನ್ನ ಆರಿಸಿಕೊಳ್ಳಿ.. ತಲೆಯ ಭಾಗದಿಂದ ಶುರು ಮಾಡಿ ಎಂದರು.. ಬಿಸಿ ಇರುತ್ತೆ.. ನೀರನ್ನು ಚೆನ್ನಾಗಿ ಚುಮುಕಿಸಿ ದಪ್ಪ ದಪ್ಪನಾದ ಬೆಳ್ಳಗೆ ಇರುವ ಅಸ್ಥಿಯನ್ನು ತುಂಬಿಕೊಳ್ಳಿ.. ನೀವು ನಿಮ್ಮ ಅಣ್ಣನಿಗೆ ಸಹಾಯ ಮಾಡಿ ಅಂದರು.. 

ನಮ್ಮನ್ನು ಎತ್ತಾಡಿಸಿ, ಸಾಕಿ, ಬೆಳೆಸಿದ ಅಮ್ಮ ಇಂದು ಬೂದಿಗಳ ನಡುವೆ ಮಲಗಿದ್ದರು.. 

ಅಪ್ಪನ ಹಾಗೂ ಸವಿತಾಳ ಅಂತ್ಯ ಸಂಸ್ಕಾರ ವಿದ್ಯುತ್ ಚಿತಾಗಾರಗಳಲ್ಲಿ ನೆಡೆದಿದ್ದರಿಂದ.. ರುದ್ರಭೂಮಿಯವ ಒಂದು ಮಡಿಕೆಯಲ್ಲಿ ತುಂಬಿಕೊಟ್ಟಿದ್ದನ್ನು ಶ್ರದ್ಧಾ ಭಕ್ತಿಯಿಂದ ಸಂಚಯನ ಕಾರ್ಯ ಮಾಡಿದ್ದೆವು... ಆದರೆ ಅಮ್ಮನ ದೇಹದ ಅಂತ್ಯಸಂಸ್ಕಾರ ಕಟ್ಟಿಗೆಗಳ ನಡುವೆ ಚಿತೆಯಾಗಿ ಬೆಂದಿದ್ದು .. ನಂತರದ ದೃಶ್ಯ ಮನಕಲಕುವಂತೆ ಕಣ್ಣ ಮುಂದೆ ನೆಡೆದಿತ್ತು.. 

ಅಲ್ಲಿಯವರೆಗೂ ಅಸ್ಥಿ ಸಂಚಯನ ಅಂದರೆ.. ಸಿನೆಮಾಗಳಲ್ಲಿ ತೋರಿಸುವ ಹಾಗೆ ಬರಿ ಬೂದಿಯನ್ನು ಪುಣ್ಯ ಕ್ಷೇತ್ರಗಳಲ್ಲಿ ನದಿ ನೀರಿಗೆ ಸೇರಿಸಬೇಕು ಎಂದು ತಿಳಿದಿದ್ದ ನನಗೆ.. ತಾಯಿ ಲೀನವಾದ ಮೂರನೇ ದಿನ ರುದ್ರಭೂಮಿಯಲ್ಲಿ ಅಸ್ಥಿಗಳನ್ನು ನಮ್ಮ ಕೈಯಾರೆ ಮಡಿಕೆಯಲ್ಲಿ ತುಂಬುತ್ತಿದ್ದದ್ದು ಒಂದು ರೀತಿಯ ಅನನ್ಯ ಅನುಭವ. 

ಪ್ರತಿಯೊಂದು ಅಸ್ಥಿಯನ್ನು ಹೆಕ್ಕುವಾಗ ಅಮ್ಮನ ದನಿ "ಕಂದಮ್ಮಗಳ ನನ್ನ ಉಳಿದ ಭಾಗಗಳನ್ನು ನಿಧಾನವಾಗಿ ಎತ್ತಿಕೊಳ್ಳಿ.. ಬಿಸಿ ಇರುತ್ತೆ.. ಅಸ್ಥಿಯ ಚೂಪಾದ ಭಾಗ ಕೈಗೆ ಚುಚ್ಚಬಹುದು.. ಮೆಲ್ಲನೆ ಆರಿಸಿಕೊಳ್ಳಿ ಧಾವಂತ ಬೇಡ" ಎಂದು ಹೇಳಿದ ಹಾಗೆ ಭಾಸವಾಯಿತು.. 

ರುದ್ರಭೂಮಿಯಲ್ಲಿ ನೆಡೆಯಬೇಕಿದ್ದ ಪೂಜಾ ವಿಧಾನಗಳನ್ನು ಗುರುಗಳು ಸಂಯಮದಿಂದ ಮಾಡಿಸಿದರು.. ಹಾಗೆಯೇ ತುಸು ಅರ್ಥ ವಿಸ್ತಾರವನ್ನು ಹೇಳಿದರು.. ಮನಸ್ಸಿನ ಕಡಲಿಗೆ ಸಮಾಧಾನದ ಅಲೆಗಳು ಬಡಿಯುತ್ತಿದ್ದವು.. 

ಜೀವನ ಬದುಕಿದಾಗ ಮಾತ್ರವಲ್ಲ.. ಆಳಿದ ಮೇಲೆಯೂ ಜೀವನ ಇರುತ್ತದೆ.. ಇದು ನನ್ನ ಅಭಿಪ್ರಾಯ.. ಇರೋತನಕ ಚೆನ್ನಾಗಿ ನೋಡಿಕೊಂಡು ಅಂತ್ಯ ಸಂಸ್ಕಾರವನ್ನು ಅಷ್ಟೇ ಶ್ರದ್ದೆಯಿಂದ ನೆರವೇರಿಸಿದಾಗ ಮನಸ್ಸಿಗೆ ನೆಮ್ಮದಿ.. 

ಅಮ್ಮ ಚಿಕ್ಕವರಾಗಿದ್ದಾಗ ಕಿತ್ತಾನೆಯಲ್ಲಿ ಹಿರಿಯರೊಬ್ಬರ ಸಾವಿನ ನಂತರ ಕೇಳಿದ್ದ ಗರುಡ ಪುರಾಣದಲ್ಲಿನ ಕೆಲವು ಘಟನೆಗಳನ್ನು ನನಗೆ ಆಗಾಗ ಹೇಳುತ್ತಿದ್ದರು.. ವೈತರಣೀ ನದಿಯನ್ನು ದಾಟಿಕೊಂಡು ಬಿರು ಬಿಸಿಲ ಮರಳುಗಾಡಿನಲ್ಲಿ ಹೋಗುವಾಗ.. ಯಮಕಿಂಕಕರು ಎಳೆದೊಯ್ಯುವ ಜೀವಿಯನ್ನು ಕೇಳುತ್ತಾರಂತೆ.. ನಿನ್ನ ಮಕ್ಕಳು ನಿನಗೆ ಬಾಯಾರಿಕೆಗೆ ನೀರು ಕೊಟ್ಟಿದ್ದಾರೆಯೇ... ಬಿಸಿಲು ಎಂದು ಛತ್ರಿ ಕೊಟ್ಟಿದ್ದಾರೆಯೇ.. ಸುಡುವ ಕಾಲಿಗೆ ಪಾದರಕ್ಷೆಯನ್ನು ಕೊಟ್ಟಿದ್ದಾರೆಯೇ .. ಊಟಕ್ಕೆ ಪಿಂಡವನ್ನು ಕೊಟ್ಟಿದ್ದಾರೆಯೇ .. ಎಳ್ಳು ನೀರನ್ನು ಕೊಟ್ಟಿದ್ದಾರೆಯೇ... ದಣಿವಾರಿಸಿಕೊಳ್ಳೋಕೆ ಚಾಪೆಯನ್ನು ನೀಡಿದ್ದಾರೆಯೇ.. ಇದಕ್ಕೆಲ್ಲ ಉತ್ತರ ಹೌದು ಎಂದಾದರೆ ನೀವು ಪುಣ್ಯ ಮಾಡಿದ್ದೀರಾ... ಮತ್ತೆ ನಿಮ್ಮ ಪಯಣ ಸುಖಕರವಾಗಿರುತ್ತೆ ಎನ್ನುತ್ತಾ ಪಾಪ ಪುಣ್ಯಗಳ ವಿಶ್ಲೇಷಣೆಗೆ ಯಮಾಲಯಕ್ಕೆ ಕರೆದೊಯ್ಯುತ್ತಾರಂತೆ ... 

ಸಾವಿನ ನಂತರವೂ ಜೀವನವಿದೆ ಎನ್ನುವುದನ್ನು ಗರುಡ ಪುರಾಣ ಓದಿ ತಿಳಿಯಬೇಕು ಎಂದು ಹೇಳಿದ್ದರು.. ಈ ಕುತೂಹಲದ ವಿಚಾರದ ಆಳಕ್ಕೆ ಇಳಿದು.. ಅಪ್ಪ ನಮ್ಮನ್ನು ಬಿಟ್ಟು ಹೋದಾಗ.. ಪುಸ್ತಕದ ಅಂಗಡಿಗಳನ್ನು ತಡಕಾಡಿ ಪ್ರೇತ ಕಾಂಡ ಭಾಗವನ್ನು ತಂದು ಒಬ್ಬನೇ ಓದಿದ್ದೆ.. ಮೈ ಜುಮ್ ಎಂದಿತ್ತು.. 

ಇಂದು ಅಮ್ಮನ ಅಸ್ಥಿ ಸಂಚಯನ ಮಾಡುವಾಗ ಅದೆಲ್ಲಾ ನೆನಪಿಗೆ ಬಂತು.. 

ಅಣ್ಣ ಅಮ್ಮನ ಅಸ್ಥಿಯನ್ನು ಮಡಕೆಯಲ್ಲಿ ಇಟ್ಟುಕೊಂಡು ಪಶ್ಚಿಮವಾಹಿನಿಯ ದಡದಲ್ಲಿ ಕೂತಾಗ.. ಕಣ್ಣು ಮನಸ್ಸು ತುಂಬಿ ಬಂತು..ಕರುನಾಡಿನ ಜೀವನದಿ ತುಂಬಿ ಹರಿಯುತ್ತಿದ್ದಳು... ಅದಕ್ಕೆ ಸರಿ ಸಮಾನವಾಗಿ ನಮ್ಮ ಕಣ್ಣುಗಳು.. ಮನಸ್ಸು ತುಂಬಿ ತುಳುಕುತ್ತಿತ್ತು... 

"ನೋಡಿ ಸರ್.. ಮಡಕೆಯನ್ನು ಭುಜದ ಮೇಲೆ ಇಟ್ಟುಕೊಂಡು.. ಇವರು ತೆಪ್ಪದಲ್ಲಿ ನದಿಯ ಮಧ್ಯಭಾಗಕ್ಕೆ ಕರೆದುಕೊಂಡು ಹೋಗುತ್ತಾರೆ.. ಅಲ್ಲಿ ಸದ್ದು ಮಾಡದ ಹಾಗೆ ಮಡಕೆಯನ್ನು ನೀರಿನಲ್ಲಿ ಮುಳುಗಿಸಿ.. ಆ ಸದ್ದು ನಿಮಗೆ ಕೇಳಿಸದಂತೆ ಕಿವಿ ಮುಚ್ಚಿಕೊಳ್ಳಿ .. ಮತ್ತೆ ಆ ಕಡೆ ತಿರುಗಿ ನೋಡದೆ.. ನಾರಾಯಣ ನಾರಾಯಣ ಎನ್ನುತ್ತಾ ವಾಪಸ್ಸು ಬಂದು ಬಿಡಿ.." ಎಂದರು..

ಹಾಗೆ ಮಾಡಿದೆವು.. 

ಎಪ್ಪತೊಂಭತ್ತು ವಸಂತಗಳು ಈ ಭೂಮಿಯ ಮೇಲೆ ಓಡಾಡಿದ್ದ ನಮ್ಮ ಮನೆಯ ಜೀವನಾಡಿ ಕರುನಾಡಿನ ಜೀವನದಿಯಲ್ಲಿ ಲೀನವಾಗಿ ಹೋದರು.. 

ಅಮ್ಮ ಎನ್ನುವುದು ಜೀವವಲ್ಲ.. ವಸ್ತುವಲ್ಲ.. ಅದೊಂದು ಅದ್ಭುತ ಅನುಭವ.. ಅದ್ಭುತ ಕಡಲು.. ಬಂದಷ್ಟು ಅಲೆಗಳೇ... ಹೆಕ್ಕಿದಷ್ಟು ನೆನಪುಗಳೇ.. 

ಕಿತ್ತಾನೆಯಿಂದ ಶುರುವಾದ ಪಯಣ.. ಹಾಸನ.. ಶಿವಮೊಗ್ಗ.. ಬೆಂಗಳೂರಿನಲ್ಲಿ ಹರಡಿ.. ತನ್ನ ಕಡೆಯ ತಾಣವನ್ನು ಕಂಡುಕೊಂಡಿದ್ದು ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯಲ್ಲಿ.. 

                        ಚಿತ್ರಕೃಪೆ ... ಗೂಗಲೇಶ್ವರ

ಅಲ್ಲಿಯ ತನಕ ಅಮ್ಮ  ಅಲ್ಲಿದ್ದಾರೆ.. ಇಲ್ಲಿದ್ದಾರೆ ಎನಿಸುತಿದ್ದ ಮನಸ್ಸಿಗೆ ಬಂದದ್ದು.. ಅಮ್ಮ ಎನ್ನುವ ದೈತ್ಯ ಶಕ್ತಿ ನಮ್ಮೊಳಗೇ ಮೆಲ್ಲನೆ ಪ್ರವೇಶಿಸುತ್ತಿದ್ದಾರೆ ಎಂದು...ಅರಿವಾದ ಕ್ಷಣವದು!

Monday, October 19, 2020

ಅಮ್ಮ ಎನ್ನುವ ದೈತ್ಯ Server ಲಾಗ್ ಆಫ್ ಆದ ದಿನ

ಬರ್ತಾ ಇದ್ದೀನಿ.. ಅಂದ ಅಣ್ಣ.. 

ನಾನೂ ಹೊರಟೆ ಅಂದೇ ನಾನು... 

ಮನೆ ಹತ್ತಿರ ಬೈಕ್ ನಿಲ್ಲಿಸಿ ಲಗುಬಗೆಯಿಂದ ಮನೆಯೊಳಗೇ ಓಡಲು ಶುರು ಮಾಡಿದೆ.. ಮೆಟ್ಟಿಲು ಹತ್ತಿರಾನೇ ಮುರುಳಿ ಕಂಡು ತಲೆ ಅಲ್ಲಾಡಿಸಿದ.. 

ಮನದೊಳಗೆ ಒಂದು ತಂತಿ ಸಣ್ಣಗೆ ಮಿಡಿಯಿತು.. ಏನೋ ಅನಾಹುತವಾಗಿದೆ ಅಂತ ಅರಿವಾಯಿತು.. 

ಭಾರವಾದ ಹೆಜ್ಜೆಗಳಿಂದ ಮೊದಲನೇ ಮಹಡಿಗೆ ಬಂದೆ.. 

ಹೃದಯ ಒಡೆದು ಹೋಗುವಂತಹ ಅಳು.. ಅಕ್ಕ ಆ ರೀತಿ ಎಂದೂ ಅತ್ತಿದ್ದು ನೋಡಿರಲಿಲ್ಲ.. ಕೇಳಿರಲಿಲ್ಲ.. ತಾಯಿಯನ್ನು ತಾಯಿಯಂತೆ  ನೋಡಿಕೊಂಡಿದ್ದ ಅಕ್ಕನ ಮನಸ್ಸು ಅಕ್ಷರಶಃ ಕಣ್ಣೀರಾಗಿ, ಅಳುವಾಗಿ ಹೊರಬರುತ್ತಿತ್ತು.. 

ಅಲ್ಲಿ ನಿಲ್ಲಲಾರದೆ ಕೆಳಗೆ ಆಂಬುಲೆನ್ಸ್ ಬಳಿ ಬಂದೆ.. ಅಲ್ಲಿಂದ ಮೆಲ್ಲಗೆ ಮಂಚದ ಮೇಲೆ ಮಲಗಿಸಲು ಎತ್ತಿ ತರುವಾಗ ಅಮ್ಮನ ಕೈಗಳು ಅಚಾನಕ್ ಚಲನೆ ಬಂದ ಹಾಗೆ ಭಾಸವಾಯಿತು.. 

ಅದೇ ಉತ್ಸಾಹಭರಿತ ಮುಖ.. ಆದರೆ ಅಲ್ಲಿ ಜೀವ ಮಾತ್ರ ಇರಲಿಲ್ಲ.. 

ತಾನು ಇಷ್ಟಪಡುತ್ತಿದ್ದ ಹಿರಿಯರನ್ನು, ಕಿತ್ತಾನೆಯ  ಕಿರಿ ಹಿರಿಯರನ್ನು,  ತನ್ನ ಪತಿರಾಯನನ್ನು, ತನಗೆ ಎರಡನೇ ತಾಯಿ ಎನಿಸಿಕೊಂಡಿದ್ದ ತನ್ನ ಅತ್ತೆಯನ್ನು ಸೇರಲು ಹೊರಟೇಬಿಟ್ಟಿದ್ದರು.. 

ಅಮ್ಮ ಎನ್ನುವ ಪದದ ಅರ್ಥ ನನಗೆ ಅರ್ಥವಾದದ್ದು ಬಾಲ್ಯದಲ್ಲಿ.. ಹೊಟ್ಟೆ ಹಸಿದು, ನೆಲಕ್ಕೆ ಹೊಟ್ಟೆ ತಾಗಿಸಿಕೊಂಡು ಹಸಿವನ್ನು ಮರೆಮಾಚುವ ಪ್ರಯತ್ನ ಮಾಡುತಿದ್ದಾಗ, ಹಸಿದ ಹೊಟ್ಟೆಗೆ ಒಂದಷ್ಟು ತಿಂಡಿ ತರುತ್ತಾರೆ ಎನ್ನುವ ಕಾಯುವಿಕೆಯಲ್ಲಿ.. 

ಸಾಹಸ, ಛಲದ ಜೀವನ, ವಿಧಿಯ ಆಟಕ್ಕೆ ತಲೆಬಾಗದೆ.. ತನ್ನ ಪತಿರಾಯನ ಹೆಗಲಿಗೆ ಹೆಗಲು ಕೊಟ್ಟು ತನ್ನ ನಾಲ್ಕು ಮಕ್ಕಳನ್ನು ಯಾರ ಹಂಗು ಇಲ್ಲದಂತೆ ಬೆಳೆಸಿ.. ತನ್ನ ಅತ್ತೆ ಅರ್ಥಾತ್ ತನ್ನ ಪತಿದೇವರ ಅಮ್ಮನ ಹೇಳಿದಂತೆ.. ನನ್ನ ಮಗನನ್ನು ನನ್ನ ಮೊಮ್ಮಕ್ಕಳನ್ನು ಯಾರ ಮನೆ ಬಾಗಿಲಿಗೂ ಕಳಿಸದೆ ಸಾಕಬೇಕು ಎಂದು ಹೇಳಿದ ಮಾತು.. ವಿಶಾಲೂ ನನ್ನ ಮಗನೂ ಸೇರಿದಂತೆ ನಿನಗೆ ಐದು ಮಕ್ಕಳು..  ಅವರ ಜವಾಬ್ಧಾರಿ ನಿನದು ಎಂದು ಭಾಷೆ ತೆಗೆದುಕೊಂಡಿದ್ದನ್ನು ಅಮ್ಮ ಸದಾ ಹೇಳುತ್ತಿದ್ದರು.. 

ಸಾಹಸ ಎಂದರೇನು, ಬದುಕು ಎಂದರೇನು.. ಇದನ್ನು ನಾ ನೋಡಿ ಕಲಿತದ್ದು ಅಮ್ಮನಿಂದ.. ಜೀವನದಲ್ಲಿ ಕಿರುಚಾಡದೆ, ಕೂಗಾಡದೆ.. ಎಲ್ಲರ ಮುಂದೆ ತಲೆ ಎತ್ತಿ ನಿಲ್ಲುವುದನ್ನು ಕಲಿಸಿದ ಅಮ್ಮ ಎಂದು ಗಗನತಾರೆಯಾಗಿದ್ದಾರೆ.. 

ಚಾಮರಾಜಪೇಟೆಯ ಟಿ ಆರ್ ಮಿಲ್ ರುದ್ರಭೂಮಿಯಲ್ಲಿ ಚಿತೆಯನ್ನು ಸಿದ್ಧಪಡಿಸಿ ಅಂತ್ಯ ಸಂಸ್ಕಾರ ನೆರೆವೇರಿಸಿದೆವು.. ಚಿತೆ ಧಗ ಧಗ ಉರಿಯುತ್ತಿತ್ತು.. ಹಾಗೆ ಉರಿಯುತ್ತಿದ್ದ ಚಿತೆಯನ್ನು ನೋಡುತ್ತಾ  ಸ್ವಲ್ಪ ಹೊತ್ತು ನಿಂತಿದ್ದೆ.. 

ಚಿತೆಯೊಳಗೆ ಮಲಗಿದ್ದ ಅಮ್ಮ.. "ಶ್ರೀಕಾಂತಾ ಇದು ಬೆಂಕಿಯಲ್ಲ.. ನನ್ನ ಬಾಲ್ಯದಿಂದಲೂ ಹತ್ತಿ ಉರಿಯುತ್ತಿರುವ ಉತ್ಸಾಹದ ಜ್ಯೋತಿಯಿದು.. ಈ ಬೆಳಕಿನಲ್ಲಿ ನನ್ನ ಬದುಕನ್ನು ನಿನ್ನ ಅಪ್ಪನ ಜೊತೆ ಹೆಜ್ಜೆ ಹಾಕುತ್ತಾ ಸಾಗಿದೆ.. ಇಂದು ಆ ಜ್ಯೋತಿ ಜ್ವಾಲೆಯಾಗಿ ನನ್ನ ಭೌತಿಕ ಶರೀರವನ್ನು ದಹಿಸುತ್ತಿರಬಹುದು.. ಆದರೆ ಇದು ನನ್ನ ಸುಡುತ್ತಿಲ್ಲ.. ಬದಲಿಗೆ ನಿಮ್ಮ ಜೀವನದ ಹಾದಿಗೆ ಬೆಳಕಾಗಿರುತ್ತದೆ.. 


"ಒಂದೆರಡು ಕಣ್ಣೀರ ಹನಿಗಳು ಜಾರಬಹುದು.. ಆದರೆ ಈ ಜ್ಯೋತಿ ಎಂದಿಗೂ ನಂದಿ ಹೋಗದು.." 

"ನನ್ನ ಆಶೀರ್ವಾದ ಅನುಗ್ರಹ ಸದನದ ಮೇಲೆ ಸದಾ ಇರುತ್ತದೆ.. ನನ್ನ ಎಲ್ಲಾ ಮಕ್ಕಳೂ ಸಾಧನೆಯ ಹಾದಿಯಲ್ಲಿ ಸಾಗುತ್ತಿದ್ದೀರಾ ನಿಮಗೆ ಸದಾ   ಒಳ್ಳೆಯದೇ ಆಗುತ್ತದೆ.. "

ತಲೆ ಎತ್ತಿ ಆಗಸ ನೋಡಿ.. ನಕ್ಷತ್ರದ ಬೆಳಕಲ್ಲಿ ನಾ ಇರುತ್ತೇನೆ ಎಂದು ಹೇಳುತ್ತಾ ಆ ಜ್ಯೋತಿಯಲ್ಲಿ ಜ್ವಾಲೆಯಾಗಿ ಆಗಸಕ್ಕೆ ಸಾಗಿದರು.. !

ಅಮ್ಮ.. ನಿನ್ನ ತ್ಯಾಗಕೆ ಸರಿಸಾಟಿ ಯಾರೂ ಇಲ್ಲ ಎಂದಿತು ಒಂದು ಧ್ವನಿ.. 

ಸಾವಿರ ನದಿಗಳು ಸೇರಿದರೇನು ಸಾಗರಕೆ ಸಮನಾಗುವುದೇನು.. 

ಶತಕೋಟಿ ದೇವರ ಪೂಜಿಸಿದರೇನು ಅಮ್ಮನ ಹರಕೆಗೆ ಸರಿಸಾಟಿಯೇನು.. 

ತಾಯಿಗೆ ಆನಂದ ತಂದರೆ ಸಾಕು ಬೇರೆ ಪೂಜೆ ಏತಕೆ ಬೇಕು.. 

ಅಮ್ಮ ನೀನು ನಮಗಾಗಿ ಸಾವಿರ ವರುಷ ಸುಖವಾಗಿ ಬಾಳಲೆ ಬೇಕು ಈ ಮನೆ ಬೆಳಕಾಗಿ!!!!

Sunday, October 11, 2020

ಯಶಸ್ಸಿಗೆ ಇನ್ನೊಂದು ಹೆಸರೇ ವಿಜಯ್...

 ಸಿನೆಮಾಗಳ ಟೈಟಲ್ ಕಾರ್ಡಿನಿಂದ ನೋಡುವ ಆಸೆ ಅರಿವಿಲ್ಲದೆ ಸಣ್ಣ ವಯಸ್ಸಿನಿಂದ ಹತ್ತಿತ್ತು ಟೈಟಲ್ ಕಾರ್ಡಿನಿಂದ ಸಿನಿಮಾ ನೋಡದೆ ಹೋದರೆ ಅದೇನೋ ಕಳೆದುಕೊಂಡ ಅನುಭವ.. ಈಗಲೂ ಅಷ್ಟೇ ಟಿವಿಯಲ್ಲಿಯೇ ಆಗಲಿ ಟಾಕೀಸಿನಲ್ಲಿ ಆಗಲಿ.. ಬಿಳಿ ಪರದೆಯಿಂದ ಬಿಳಿ ಪರದೆಯ ತನಕ ನೋಡಿದರೇನೇ ಸಮಾಧಾನ.. 

ನನ್ನ ಸಿನಿಮಾ ಹುಚ್ಚಿನ ಆರಂಭದ ದಿನಗಳಲ್ಲಿ ಹೀಗೆ ಮನಸೆಳೆದದ್ದು ಪುಟ್ಟಣ್ಣ ಕಣಗಾಲ್, ದೊರೈ ಭಗವಾನ್, ಹುಣುಸೂರು ಕೃಷ್ಣಮೂರ್ತಿ, ಜೊತೆಯಲ್ಲಿ ಇನ್ನೊಂದು ಹೆಸರೇ ವಿಜಯ್... 


ಮೇಲೆ ಹೇಳಿದ ನಿರ್ದೇಶಕರು ಒಬ್ಬರಿಗಿಂತ ಒಬ್ಬರು ಭಿನ್ನ ವಿಭಿನ್ನ.. ಒಬ್ಬರ ಸಿನಿಮಾ ಛಾಯೆ ಇನ್ನೊಬ್ಬರ ಮೇಲೆ ಇರಲಿಲ್ಲ .. 

ವಿಜಯರೆಡ್ಡಿ ಅಂತ ಹೆಸರಿದ್ದರೂ ವಿಜಯ್ ಎಂದೇ ಪ್ರಖ್ಯಾತರಾಗಿದ್ದ ನಿರ್ದೇಶಕರು ಇವರು... ಹೆಸರಲ್ಲಿ ಒಂದು ರೀತಿಯ ನಮ್ಮ ಮನೆಯವರು ಎನ್ನುವಂತಹ ಆತ್ಮೀಯತೆ ಕಾಣುತಿತ್ತು.. 

ಈ ಮಹಾ ನಿರ್ದೇಶಕ ಕನ್ನಡ ಚಿತ್ರರಂಗಕ್ಕೆ ಕೊಟ್ಟ ಅದ್ಭುತ ರತ್ನಗಳು ಅನೇಕಾನೇಕ.. ಸಾಮಾನ್ಯ ಹೇಳುತ್ತಾರೆ ಯಾವುದೇ ಕಲೆ ನಿಧಾನವಾಗಿ ಪ್ರಗತಿಯ ಪಥವೇರುತ್ತದೆ.. ಈ ಮಾತು ನಿಜವಾದರೂ ಈ ಮಹನೀಯರು ಮೊದಲ ಮೆಟ್ಟಿಲಿನಿಂದಲೇ ಯಶಸ್ಸಿನ ತೀವ್ರಗತಿ ಕಂಡವರು. 

ಅಣ್ಣಾವ್ರ ಸಿನಿಮಾಗಳು, ಅಣ್ಣಾವ್ರ ಚಿತ್ರ ತಂಡ ಸೇರುವುದು ಸಾಮಾನ್ಯದ ಮಾತಾಗಿರಲಿಲ್ಲ.. ಚಿನ್ನವನ್ನು ಓರೇ ಹಚ್ಚಿ ನೋಡುವ ದೊಡ್ಡ ತಂಡವೇ ಅಲ್ಲಿತ್ತು.. 

ಅಣ್ಣಾವ್ರು, ಅವರ ತಮ್ಮ ವರದಪ್ಪ, ಪಾರ್ವತಮ್ಮ, ಚಿ ಉದಯಶಂಕರ್.. ಇವರಿಗೆಲ್ಲ ಒಪ್ಪಿಗೆಯಾದರೆ ಮಾತ್ರ ತಂಡದೊಳಗೆ ಪ್ರವೇಶ ಅನ್ನುವಂತಹ ಸ್ಥಿತಿ.. 

ಅಂತಹ ಪರಿಸ್ಥಿತಿಯಲ್ಲಿ ತಮ್ಮ ನಿರ್ದೇಶನದ ನಾಲ್ಕನೇ ಪ್ರಯತ್ನವೇ ಕರುನಾಡಿನ ಮನೆಮಾತಾದ ಗಂಧದ ಗುಡಿ ಎಂದರೆ ಇವರ ಅಗಾಧವಾದ ಪ್ರತಿಭೆಯ ಅರಿವಾಗುತ್ತದೆ.. 

ಬರೋಬ್ಬರಿ ಒಂಭತ್ತು ಅಣ್ಣಾವ್ರ ಚಿತ್ರರತ್ನಗಳನ್ನು ಕೊಟ್ಟ ನಿರ್ದೇಶಕರು ಇವರು.. 

ಗಂಧದ ಗುಡಿ - ಅರಣ್ಯದ ಹಿನ್ನೆಲೆಯ  ಕಳಕಳಿಯ ಚಿತ್ರ 

ಶ್ರೀ ಶ್ರೀನಿವಾಸ ಕಲ್ಯಾಣ - ಪೌರಾಣಿಕ ಚಿತ್ರ 

ಮಯೂರ .. ಐತಿಹಾಸಿಕ ಚಿತ್ರ 

ನಾ ನಿನ್ನ ಮರೆಯಲಾರೆ .. ಸಾಮಾಜಿಕ ಪ್ರೇಮ ಕಥೆ 

ಬಡವರ ಬಂಧು .. ಸಾಮಾಜಿಕ ತಂದೆ ಮಗನ ಸಂಬಂಧದ ಚಿತ್ರ 

ಸನಾದಿ ಅಪ್ಪಣ್ಣ .. ಸಂಗೀತ ಕಲಾವಿದನ ಅದ್ಭುತ ಚಿತ್ರಣ 

ಹುಲಿಯ ಹಾಲಿನ ಮೇವು .. ಕೊಡಗಿನ ವೀರನ ಕಥಾನಕ 

ನೀ ನನ್ನ ಗೆಲ್ಲಲಾರೆ .. ಗೆದ್ದು ಸಾಧಿಸುವ ಸಾಮಾಜಿಕ ಕಥಾನಕ 

ಭಕ್ತ ಪ್ರಹ್ಲಾದ .. ಪೌರಾಣಿಕ ಚಿತ್ರ 

ಪ್ರತಿಯೊಂದು ಚಿತ್ರವೂ ವಿಭಿನ್ನ.. ಅಣ್ಣಾವ್ರ ಬಹುಮುಖ ಪ್ರತಿಭೆಯನ್ನು ಇನ್ನಷ್ಟು ಹೊಳಪಿಗೆ ತಂದ ಚಿತ್ರಗಳಿವು. 

ತೆಲುಗು ಮಾತೃಭಾಷೆಯಾದರೂ ಕನ್ನಡಲ್ಲಿ ಸುಮಾರು ನಲವತ್ತಕ್ಕೂ ಹೆಚ್ಚಿನ ಚಿತ್ರಗಳನ್ನು ನಿರ್ದೇಶಿಸಿದರು. ಶಂಕರ್  ನಾಗ್ ಅವರಿಗೆ ಮರು ಜೀವ ಕೊಟ್ಟ ಚಿತ್ರ ಆಟೋ ರಾಜ, ವಿಷ್ಣುವಿನ ಸಾಹಸದ ಮಜಲಿಗೆ ಇನ್ನಷ್ಟು ಹೊಳಪು ಕೊಟ್ಟ ವೀರಾಧಿವೀರ, ದೇವಾ, ಅಂಬಿಗೆ ರೆಬೆಲ್ ಇಮೇಜ್ ಬರುವಂತೆ ಮಾಡಿದ ಅನೇಕ ಚಿತ್ರಗಳಲ್ಲಿ ಖದೀಮ ಕಳ್ಳರು ಕೂಡ ಒಂದು.. ಹಾಗೆ ದೆವ್ವ ಭೂತದ ಕಾಡುವ ಕತೆಯನ್ನು, ದೆವ್ವದ ಶಕ್ತಿಯ ಮೇಲೆ ದೇವರ ಶಕ್ತಿ ಗೆಲ್ಲುವ ಅನಂತ್ ನಾಗ್ ಅವರ ನಾ ನಿನ್ನ ಬಿಡಲಾರೆ.. ಎಲ್ಲವೂ ಸುಂದರ .. ಪ್ರಭಾಕರ್... ಹೊಸ ಪೀಳಿಗೆಯ ಚರಣ್ ರಾಜ್, ಹೀಗೆ ಅನೇಕ ನಟ ನಟಿಯರಿಗೆ ಹೊಸ ಚಿತ್ರ ಬದುಕು ಕೊಟ್ಟವರು.. 


ಇವರ ಮೊದಲ ಸಿನೆಮಾದಿಂದ ಕಡೆಯ ಸಿನೆಮಾದವರೆಗೂ ಹಾಡುಗಳು, ಮತ್ತು ಚಿತ್ರ ಸಂಗೀತ ಅಸಾಧಾರಣವಾಗಿತ್ತು.. ಅದ್ಭುತ ಯಶಸ್ಸಿಗೆ ಹಾಡುಗಳು ಎಷ್ಟು ಕಾರಣವೋ.. ಹಾಗೆ ಅಶ್ಲೀಲತೆ ಇಲ್ಲದೆ ಮನೆ ಮಂದಿಯೆಲ್ಲಾ ಕೂತು ನೋಡಬಹುದಾದ ಚಿತ್ರಗಳನ್ನು ಕೊಟ್ಟಿದ್ದು ಇವರ ಹೆಗ್ಗಳಿಕೆ. 

ನನಗರಿವಿಲ್ಲದೆ ಇಂದಿನ ಶುಭನುಡಿಯನ್ನು ಇವರ ನಿರ್ದೇಶಕನ ಪ್ರತಿಭೆಗೆ ಅರ್ಪಿಸಿದೆ. 

ಕತೆ..ಚಿತ್ರಕತೆ..ಸಂಭಾಷಣೆ..ಸಾಹಿತ್ಯ.. ಹೀಗೆ ಹಲವಾರು ವಿಭಾಗಗಳಲ್ಲಿ ಕೆಲಸ ಮಾಡಿಕೊಡುತ್ತಾರೆ...ಇವರನ್ನೆಲ್ಲಾ ಸರಿಯಾಗಿ ತೂಗಿಸಿಕೊಂಡು ತನ್ನ ಕಲ್ಪನಾ ಶಕ್ತಿ ಮತ್ತು ಕ್ರಿಯಾತ್ಮಕ ಕಲೆಯನ್ನು ಉಪಯೋಗಿಸಿಕೊಂಡು ಉತ್ತಮ ಚಿತ್ರ ನಿರೂಪಿಸುವುದು ನಿರ್ದೇಶಕನ ಕೆಲಸ!

ನಮ್ಮ ಬದುಕಿನ ನಿರ್ದೇಶಕರು ನಾವೇ!

ಶುಭದಿನ!

ನಂತರ ನನ್ನ ನೆಚ್ಚಿನ ಸಹೋದರ ಸತೀಶ್ ಕನ್ನಡಿಗ ಸಂದೇಶ ಕಳಿಸಿದರು.. ಅಣ್ಣ ನಿರ್ದೇಶಕ ವಿಜಯ್ ಅವರ ಬಗ್ಗೆ ಒಂದು ಲೇಖನ ಬರಲಿ.. ನಿಮ್ಮ ಬರವಣಿಗೆಯಲ್ಲಿ ಅವರನ್ನು ಕಾಣುವ ಆಸೆ ಅಂತ.. 

ಆ ಹರಿವಿನಲ್ಲಿಯೇ ಮೂಡಿಬಂದದ್ದು ಈ ಲೇಖನ.. 

ನಿರ್ದೇಶಕ ವಿಜಯ್ ಅವರ ಎಕ್ಸಿಟ್ ನಿಂದ ಕನ್ನಡ ಚಿತ್ರರಂಗ ಬಡವಾಗಿದೆ, ತುಂಬಲಾರದ ನಷ್ಟ ಎಂಬ ಸವಕಲು ಮಾತುಗಳನ್ನು ಹೇಳೋಕೆ ಇಷ್ಟಪಡೋಲ್ಲ.. 

ಅವರು ತಮ್ಮ ಪ್ರತಿಭೆಯನ್ನೆಲ್ಲಾ ಧಾರೆಯೆರೆದು ಚಿತ್ರಗಳನ್ನು ಕೊಟ್ಟಿದ್ದಾರೆ, ಅದನ್ನು ನೋಡಿ ಆನಂದಿಸಿವುದೇ ನಮ್ಮ ಕೆಲಸ.. ಮತ್ತು ಅದೇ ಅವರನ್ನು ಸದಾ ನೆನಪಿಸಿಕೊಳ್ಳುವಂತೆ ಮಾಡುವುದು.. 

ವಿಜಯ್ ಸರ್.. ನೀವು ಕೊಟ್ಟ ಚಿತ್ರಗಳು ಅದ್ಭುತ,ಅಮೋಘ .... ಪ್ರತಿ ಚಿತ್ರದಲ್ಲೂ ನೀವು ಜೀವಂತವಾಗಿದ್ದೀರಾ.. 

ಭಕ್ತ ಅಂಬರೀಷ ಅಣ್ಣಾವ್ರ ನಟನೆಯಲ್ಲಿ ನಿಮ್ಮ ನಿರ್ದೇಶನದಲ್ಲಿ ಮೂಡಿ ಬಂದಿದ್ದರೆ ಖಂಡಿತ ಅದೊಂದು ಅದ್ಭುತ ಚಿತ್ರವಾಗುತ್ತಿತ್ತು.. ಆದರೆ ಅಣ್ಣಾವ್ರ ಮಂಡಿ ನೋವು.. ಹಾಗೂ ಸಾಹಿತ್ಯ ರತ್ನ ಚಿ ಉದಯಶಂಕರ್ ಅವರ ಅನುಪಸ್ಥಿತಿ ಈ ಚಿತ್ರವನ್ನು ಮೇಲೆತ್ತಲು ಸಾಧ್ಯವಿಲ್ಲ ಎನ್ನುವ ಸತ್ಯ ಬಹುಶಃ ಆ ದೇವರಿಗೂ ಅರಿವಾಗಿ ಚಿತ್ರೀಕರಣವಾಗಲೇ ಇಲ್ಲ ಅನ್ನಿಸುತ್ತದೆ .. 


ಇರಲಿ ಕತೆಯನ್ನು ಹೊಳಪಾಗುವಂತೆ ಮಾಡುವ ವರದಪ್ಪ, ಸಾಹಿತ್ಯವನ್ನು ಕೊಡುವ ಚಿ ಉದಯಶಂಕರ್, ಸಂಗೀತವನ್ನು ವಿಜೃಂಭಿಸುವಂತೆ ಮಾಡುವ ಎಂ ರಂಗರಾವ್,  ಟಿಜಿ ಲಿಂಗಪ್ಪ, ಛಾಯಾಗ್ರಾಹಕ ಎಸ್ ವಿ ಶ್ರೀಕಾಂತ್ ಅಲ್ಲೇ ಇದ್ದಾರೆ.. ಇವರೆಲ್ಲ ಜೊತೆಯಲ್ಲಿ ನಿರ್ಮಾಪಕಿ ಪಾರ್ವತಮ್ಮನವರು ಇದ್ದಾರೆ.. ಖಂಡಿತ ಒಂದು ಒಳ್ಳೆ ಚಿತ್ರವನ್ನು ಅಲ್ಲಿ ಚಿತ್ರೀಕರಿಸಿ ತೆರೆಗೆ ತನ್ನಿ.. !

ನಿಮ್ಮ ಹೆಸರು ಮತ್ತು ಚಿತ್ರಗಳು ಸದಾ ಹಸಿರು... !!!

Monday, September 28, 2020

ರಫೀ ಬಾಲೂ ಜುಗಲ್ ಬಂದಿ

ರಫೀ

ರಫೀ ಸಾಬ್ 

ಮೊಹಮ್ಮದ್ ರಫೀ 

ಗುರುಗಳು ರಫೀ 

ದಿಲ್ ಜೂಮಾ 

ಲಿಖ್ ಹೇ ಜೋ ಕತ್ ತುಜೆ...!

ರಫೀ ಸಾಬ್ ಅವರಿಗೆ ಅಚಾನಕ್ ಎಚ್ಚರವಾಯ್ತು.. ಅರೆ ಇದೇನಿದು ನನ್ನ ಹೆಸರೇ ಕೇಳಿಸ್ತಾ ಇದೆ.. ನನ್ನ ಹಾಡುಗಳ ಕೆಲವು ಸಾಲುಗಳು ನಾ ಹೇಳಿದಂತೆ ಭಾಸವಾಗುತ್ತಿದೆ..ಎಂದು ಕಣ್ಣುಜ್ಜಿಕೊಂಡು .. ಎರಡು  ಕೈಗಳನ್ನು ಜೋಡಿಸಿ.. "ಯಾ ಅಲ್ಲಾ ಪರವರ್ದಿಗಾರ್".. ಎನ್ನುತ್ತಾ ಮನೆಯ ಹೊರಗೆ ಬಂದರು.. 

ಅವರ ಮನೆಯ ಮುಂದೆ.. "ಪವಡಿಸು  ಪರಮಾತ್ಮ ಶ್ರೀ ವೆಂಕಟೇಶ ಸಪ್ತಗಿರಿವಾಸ" ಹಾಡನ್ನು ಹೇಳಿಕೊಂಡು ನಿಂತಿದ್ದರು ಎಸ್ ಪಿ ಬಿ.. 

ರಫೀ ಸಾಬ್ ಅವರಿಗೆ ಅಚ್ಚರಿ.. 

"ಅರೆ ಬಾಲೂ ಸರ್.. ಏನಾಯಿತು.. ಇಲ್ಲಿ ಯಾಕೆ ಬಂದಿರಿ.. "

"ಅರೆ ಬಾಲೂಗಾರು  ನೂವು ಎಂದುಕು ಇಕ್ಕಡ ಉನ್ನಾವು.. ಎಮಾಯಿಂದಿ.."

"ಅರೇ ಬಾಲೂ ಜಿ.. ಆಪ್ ಕೈ ಸೆ ಹೊ.. ಇದರ್ ಕ್ಯೂ ಆಯೆಹೋ ಆಪ್"

"ಅರೆ ಬಾಲೂ ನಿಂಗೋ ಎತ್ತುಕ್ಕೂ ಇಂಗೆ ವಂದಿಂಗೋ... "

"ಆಹಾ ಬಾಲೂ ಎಂಥ ಇವಿಡೇ.."

ಆಹಾ.. ಗುರುಗಳೇ.. ಎಂಥಹ ಪುಣ್ಯವಿದು.. ನಿಮ್ಮನ್ನು ನೋಡಲು ಬಂದೆ ನೀವೇ ನನ್ನನು ನೋಡಲು ಬಂದಿರಿ.. ಖುಷಿಯಾಯಿತು ರಫಿ ಸಾಬ್.. !

"ಬಾಲೂ ನಾನು ಒಂದಷ್ಟು ಹಾಡು ಹಾಡಿದ್ದೇ.. ಒಂದಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದೇ.. ನನ್ನ ಹಾಡುಗಳನ್ನು ಇಷ್ಟ ಪಟ್ಟು ಕೇಳುವ ವರ್ಗವೊಂದಿದೇ.. ಆದರೆ ಮಾನಸಿಕ ಗುರುಗಳಾಗಿ ನನ್ನ ಸ್ವೀಕರಿಸಿ, ನನ್ನ ಹಾಡುಗಳ ಬಗ್ಗೆ ಇನ್ನಷ್ಟು ಮಾಹಿತಿ ನೀಡಿ ನನ್ನ ಹಾಡುಗಳ ಅಭಿಮಾನಿಗಳ ಸಂಖ್ಯೆ ಹೆಚ್ಚಾದದ್ದು ನಿಮ್ಮಿಂದ.. ಅದಕ್ಕೆ ನಾ ಚಿರಋಣಿ.. "

"ಗುರುಗಳೇ ಎಂಥಹ ಮಾತಾಡಿದಿರಿ.. ನೀವು ಹಾಡುವ ಶೈಲಿಯನ್ನು ಕೇಳಿ ಕೇಳಿ ನಾನು ನಿಮ್ಮ ಅಭಿಮಾನಿಯಾದೆ ಮತ್ತೆ ನಿಮ್ಮ ಹಾಡುವ ರೀತಿಯನ್ನು ಕಲಿಯಲು ಪ್ರಯತ್ನ ಮಾಡಿದೆ.. ನಿಮ್ಮ ಹಾಡುಗಳನ್ನು ಕೇಳುವಾಗ ಕಣ್ಣು  ಮುಚ್ಚಿ ಕೇಳುತ್ತಾ ಇದ್ದಾಗ ಅಲ್ಲಿ ನಮಗೆ ಕಾಣುವುದು ಶಮ್ಮಿ ಕಪೂರ್, ರಾಜೇಂದ್ರ ಕುಮಾರ್, ರಾಜಕುಮಾರ್,  ದಿಲೀಪ್ ಕುಮಾರ್, ದೇವಾನಂದ್ ಯಾರೂ ಕಣ್ಣ ಮುಂದೆ ಬರೋಲ್ಲ..  ನೀವೇ ನನ್ನ ಕಣ್ಣ ಮುಂದೆ ಬರೋದು.. .. ಆ ಆ ನಾಯಕಿಯರು ನಿಮ್ಮನ್ನು ಪ್ರೀತಿ ಮಾಡಬೇಕು ತೆರೆಯ ಮೇಲೆ ಕಾಣೋ ನಾಯಕರನ್ನಲ್ಲ.. "


ಚಿತ್ರಕೃಪೆ ... ಗೂಗಲೇಶ್ವರ 

 ಎಂದಾಗ ರಫಿ ಅವರು ಜೋರಾಗಿ ನಗಲು  ಮಾಡಿದರು.. 

"ಬಾಲೂ ಇದು ನಿಮ್ಮ ಹೃದಯವಂತಿಕೆಗೆ ನಿದರ್ಶನ..  ನಾವು ಕಲಾದೇವಿಯ ಆರಾಧಕರು.. ಅಷ್ಟೇ ನಾ ಹೇಳೋಕೆ ಆಗೋದು"

"ಗುರುಗಳೇ.. ಒಂದು ಪ್ರಶ್ನೆ.. "

"ಕೇಳಿ ಬಾಲೂ ಜಿ"

"ನಿಮ್ಮ ದನಿಯಲ್ಲಿ ಏ ದೇಖ್ ಕೆ ದಿಲ್ ಜೂಮಾ..ಲೇ ಪ್ಯಾರ್ ಕಿ ಅಂಗಡಾಯಿ.. .. ತೂ ಮೇರೇ ಜಿಂದಗಿ ಹೊ... ಈ ರೀತಿಯ ಅನೇಕ ಹಾಡುಗಳಲ್ಲಿ ನೀವು ಆ ಕೆಲವು ಪದಗಳಿಗೆ ಅಕ್ಷರಗಳಿಗೆ ಭಾವ ತುಂಬಿ ಹೇಳುವುದನ್ನು ಕೇಳಿ ಕೇಳಿಯೇ ನಿಮ್ಮ ಅಭಿಮಾನಿಯಾಗಿದ್ದೀನಿ.. ಅದು ಹೇಗೆ ಸಾಧ್ಯವಾಯಿತು ಗುರುಗಳೇ.. "

"ಬಾಲೂ ಜಿ.. ಹಾಡುಗಾರಿಕೆ ಅನ್ನೋದು ದೈವತ್ವದ ಕೊಡುಗೆ.. ಸಂಗೀತ  ನಿರ್ದೇಶಕರು ಆ ಸಂಗೀತ ಸರಸ್ವತಿಯನ್ನು ಆಹಾವನೇ ಮಾಡಿಕೊಂಡು.. ಒಂದು ನಾದವನ್ನು ರಚಿಸುತ್ತಾರೆ.. ಅದಕ್ಕೆ ಜೀವ ತುಂಬೋದು ಸಾಹಿತಿಗಳು.. ತಮ್ಮ ಕಲಾಜ್ಞಾನವನ್ನು ಹಿಂಡಿ ಅಕ್ಷರಗಳಾಗಿ ಮೂಡಿಸುತ್ತಾರೆ.. ನಿರ್ದೇಶಕರು ಹಾಡಿನ ಪ್ರಸಂಗ ಮತ್ತು ಅದರ ಹಿನ್ನೆಲೆಯನ್ನು ಹೇಳುತ್ತಾರೆ.. ಸಂಗೀತ ನಿರ್ದೇಶಕರ ಮತ್ತು ಸಾಹಿತಿಗಳ ಭ್ರೂಣ ಜನನವಾಗೋದು ಈ ಹಾಡನ್ನು ರೆಕಾರ್ಡ್ ಮಾಡಿದಾಗ.. ಆ  ಸಮಯದಲ್ಲಿ ಆ ಮಗುವಿಗೆ ಜೀವ ತುಂಬಿ, ಸೂಸುತ್ರವಾಗಿ ಭುವಿಗೆ ಬರುವಂತೆ ಮಾಡೋದು ಗಾಯಕರಾದ ನಮ್ಮ ಕೆಲಸ.. ಅದನ್ನಷ್ಟೇ ನಾನು ಮಾಡುತ್ತಿದ್ದದ್ದು.. ಹಾಗೆ ಜೀವ ತುಂಬುವಾಗ ಕೆಲವು ಕಡೆ ಇನ್ನಷ್ಟು ಜೀವ ತುಂಬಬೇಕು ಅಂತ ನನಗನಿಸಿದಾಗ ನನಗೆ ಅರಿವಿಲ್ಲದೆ ಬಂದದ್ದೇ ಈ ಪದಗಳು ಅಥವ ಅಕ್ಷರಗಳು.. "


ಚಿತ್ರಕೃಪೆ ... ಗೂಗಲೇಶ್ವರ

"ವಾಹ್ ಅದ್ಭುತ ಅದ್ಭುತ ಗುರುಗಳೇ.. ನಿಮ್ಮ ಚರಣಕಮಲಗಳಿಗೆ ನನ್ನ ನಮನಗಳು.. "


ಚಿತ್ರಕೃಪೆ ... ಗೂಗಲೇಶ್ವರ


ಚಿತ್ರಕೃಪೆ ... ಗೂಗಲೇಶ್ವರ

ಬೆನ್ನು ತಟ್ಟಿ ಎಬ್ಬಿಸಿ... "ಬನ್ನಿ ಬಾಲೂ ಜಿ.. " ಸಂಗೀತ ಸಾಗರದ ನೌಕೆಯಲ್ಲಿ ಹತ್ತಿದರು.. 

*****

ಕನ್ನಡದ ಹಾಡುಗಳು ಉತ್ತುಂಗ ಶಿಖರದಲ್ಲಿದಾಗ ನಾ ಹಾಡುಗಳನ್ನು ರೇಡಿಯೋ ಮೂಲಕ ಕೇಳುತ್ತಿದ್ದೆ.. 

ಮಾಮರವೆಲ್ಲೋ ಕೋಗಿಲೆಯೆಲ್ಲೋ 

ತೇರಾನೇರಿ ಅಂಬರದಾಗೆ ನೇಸರ ನಗುತಾನೆ 

ಎಲ್ಲಿದ್ದೆ ಇಲ್ಲೀ ತನಕ ಎಲ್ಲಿಂದ ಬಂದ್ಯವ್ವ 

ನನ್ನಹೆಸರಲ್ಲೇ ಕಮಾಲ್ ನಾನೇ ಕನ್ವರ್ ಲಾಲ್ 

ಹಾವಿನ ದ್ವೇಷ ಹನ್ನೆರಡು ವರ್ಷ 

ಕೆಂಪಾದವೋ ಎಲ್ಲಾ ಕೆಂಪಾದವೋ 

ಅನುಪಮಾ ಚೆಲುವು 

ಎಲ್ಲಿರುವೆ ಮನವ  ಕಾಡುವ 

ಹೊಸಬಾಳಿಗೆ ನೀ ಜೊತೆಯಾದೆ 

ನಾನೂ ನೀನು ಒಂದಾದ ಮೇಲೆ 

ನೆರಳನು ಕಾಣದ ಲತೆಯಂತೆ 

ನಾನೇನು ನೀನೇನು ಅವನೇನು 

ಊರಿಂದ ಬಂದನು ಮಿಸ್ಟರ್ ಮಾರನು 

ಆಸೆಯ ಭಾವ ಒಲವಿನ ಜೀವ 

ಕೇಳು ಮಗುವೇ ಕತೆಯ ಆಸೆ ತಂದ ವ್ಯಥೆಯ 

ನೂರು ಕಣ್ಣು ಸಾಲದು 

ಹೀಗೆ  ಅಸಂಖ್ಯಾತ ಹಾಡುಗಳನ್ನು ಕೇಳಿ ಕೇಳಿ .. ತೆರೆಯ ಮೇಲೆ ಆ ನಾಯಕರೇ ಈ ಹಾಡುಗಳನ್ನು ಹೇಳೋದು ಅಂತ ತಿಳಿದಿದ್ದೆ.. ಎಪ್ಪತ್ತರ ದಶಕದ ಅಂತ್ಯ.. ಎಂಭತ್ತರ ದಶಕದ ಆರಂಭ ಕನ್ನಡ ಹಾಡುಗಳು ನನ್ನ ಮನಸ್ಸನ್ನು ಸೂರೆಗೊಂಡಿದ್ದವು.. 

ಸರಿ ಚಿತ್ರಗಳ ಹಾಡಿನ ಬಗ್ಗೆ ತಿಳಿದುಕೊಳ್ಳೋಣ ಅನ್ನುವ ಆಸಕ್ತಿ ಹುಟ್ಟಿ.. ಸಂಗೀತ ನಿರ್ದೇಶಕರು,  ಸಾಹಿತಿಗಳು, ನಿರ್ದೇಶಕರು, ಗಾಯಕ ಗಾಯಕಿಯರ ಬಗ್ಗೆ ತಿಳಿದುಕೊಳ್ಳುತ್ತಾ ಹೋದ ಹಾಗೆ ನನಗರಿಯದೆ ಮೋಡಿ ಮಾಡಿದ್ದು.. 

ರಾಜನ್ ನಾಗೇಂದ್ರ  ಅವರ ಸಂಗೀತ 

ಚಿ ಉದಯಶಂಕರ್ ಅವರ ಸಾಹಿತ್ಯ 

ಎಸ್ ಪಿ  ಬಾಲಸುಬ್ರಮಣ್ಯಂ ಮತ್ತು ಎಸ್ ಜಾನಕೀ.. 

ಈ ಕಾಲಘಟ್ಟದಲ್ಲಿ ತಿರುಗುಬಾಣ ಚಿತ್ರವನ್ನು ಹನುಮಂತನಗರದ ರಾಜಲಕ್ಷ್ಮಿ ಟೆಂಟ್ ನಲ್ಲಿ ನೋಡಿದಾಗ.. ತೆರೆಯ ಮೇಲೆ ಗುಂಡು ಗುಂಡಾಗಿ ಮೂಡಿ ಬಂದಿದ್ದ ದೃಶ್ಯದ ಹಾಡು "ಇದೆ ನಾಡು ಇದೆ ಭಾಷೆ ಎಂದೆಂದೂ ನನ್ನದಾಗಿರಲಿ" ಈ ಹಾಡಿನಲ್ಲಿ ತೆರೆಯ ಮೇಲೆ ಬಂದಿದ್ದು ಅಂಬರೀಷ್ ಅಲ್ಲ .. ಅವರೇ ಎಸ್ಪಿಬಿ.. 


ಚಿತ್ರಕೃಪೆ ... ಗೂಗಲೇಶ್ವರ


ಚಿತ್ರಕೃಪೆ ... ಗೂಗಲೇಶ್ವರ


ಚಿತ್ರಕೃಪೆ ... ಗೂಗಲೇಶ್ವರ

ಆಗಲೇ ಗೊತ್ತಾಗಿದ್ದು ಓಹೋ ಇವರೇ ಅಂಬರೀಷ್, ಅನಂತ್ ನಾಗ್, ವಿಷ್ಣುವರ್ಧನ್, ಶಂಕರ್ ನಾಗ್, ಶ್ರೀನಾಥ್, ಚಂದ್ರ ಶೇಖರ್, ರಾಜೇಶ್ ಮುಂತಾದ ಅನೇಕ ನಾಯಕ ನಟರಿಗೆ ಹಾಡುತ್ತಿದ್ದದ್ದು ಅಂತ.. 

ನಂತರ ಇವರ ಹಾಡುಗಳನ್ನು ಮೊದಲಿಂದಲೂ ಅನುಸರಿಸ ತೊಡಗಿದೆ .. ನಕ್ಕರೆ ಅದೇ ಸ್ವರ್ಗ ಚಿತ್ರದ "ಕನಸಿದೋ ನನಸಿದೋ" ಎಂ ರಂಗರಾವ್ ಅವರ ಸಂಗೀತದಲ್ಲಿ ಮೂಡಿ ಬಂದ ಹಾಡು ಇವರ ಮೊದಲ ಕನ್ನಡ ಹಾಡು ಅಂತ ತಿಳಿಯಿತು.. 

ಆಮೇಲೆ ಇವರ ಧ್ವನಿಯನ್ನು ಅನುಸರಿಸುತ್ತ ಹೋದರೆ.. ತೆರೆಯ ಮೇಲೆ ನಾಯಕ ನಟರು ಹಾಡಿದ್ದು ಅರಿವಾಗುತ್ತಿತ್ತು.. ಆದರೆ ರೇಡಿಯೋದಲ್ಲಿ ಕೇಳಿದಾಗ ನಾಯಕ ನಂತರ ಮೊಗವೆ ಕಣ್ಣ ಮುಂದೆ ಬರುತಿತ್ತು.. ಒಬ್ಬೊಬ್ಬ ನಾಯಕ ಮಾತಾಡುವ ಶೈಲಿಯನ್ನು ಅನುಸರಿಸಿ ಹಾಡುತ್ತಿದ್ದರು.. ತೇಲಿಸಿ ಮಾತಾಡುವ ಶಂಕರ್ ಶೈಲಿ, ಒತ್ತು ಕೊಟ್ಟು ಮಾತಾಡುವ ಅನಂತ್ ಶೈಲಿ, ಜೀವ ತುಂಬಿ ಮಾತಾಡುವ ವಿಷ್ಣು ಶೈಲಿ, ಅಬ್ಬರಿಸಿ ಮಾತಾಡುವ ಅಂಬಿ, ಮುದ್ದಾಗಿ ಆಪ್ತ ಗೆಳೆಯನಂತೆ ಮಾತಾಡುವ ಶ್ರೀನಾಥ್ ಶೈಲಿ, ಅಣ್ಣನಂತೆ ಮಾತಾಡುವ ರಾಜೇಶ್ ಹೀಗೆ ನಾಯಕರಿಗೆ ತಕ್ಕಂತೆ ಅವರ ಹಾಗೆ ಅಭಿನಯಿಸುತ್ತಾ ಹಾಡುತ್ತಿದ್ದ ಎಸ್ಪಿಬಿ ಇನ್ನಷ್ಟು ಹತ್ತಿರವಾಗಿದ್ದು "ಎದೆ ತುಂಬಿ ಹಾಡುವೆನು" ಕಾರ್ಯಕ್ರಮದ ಮೂಲಕ.. 

ಹಾಡಿನ ಹಿಂದಿನ ಕತೆಯನ್ನು, ಸ್ವಾರಸ್ಯಕರ ಪ್ರಸಂಗವನ್ನು ತಿಳಿದುಕೊಳ್ಳುವ ಹುಚ್ಚಿನ ನನ್ನ ಮನಸ್ಸು ಇವರಿಗೆ ಶರಣಾಗಿದ್ದು ಎರಡನೇ ಬಾರಿ..

ಮೊದಲ ಬಾರಿಗೆ ರಾಜನ್ ನಾಗೇಂದ್ರ ಅವರ ಅದ್ಭುತ ಸಂಗೀತದ ಹಾಡುಗಳಿಗೆ ಇವರು ದನಿಯಾಗಿದ್ದಕ್ಕೆ ಇವರಿಗೆ ಶರಣಾಗಿದ್ದೆ.. 

ಹೇಳೋಕೆ ಹೊರಟರೆ ನೂರಾರು ಹಾಡುಗಳು ಮೈಮನ ಆವರಿಸುತ್ತವೆ.. ಅಂತಹ ಅದ್ಭುತ ಗಾಯಕ ನನ್ನ ಮನದೊಳಗೆ ಇಳಿದು ಈ ಲೇಖನ ಬರೆಯೋಕೆ ಸ್ಫೂರ್ತಿಯಾಗಿದ್ದಾರೆ.. 

ಎಸ್ಪಿಬಿ ತಮ್ಮ ಹಾಡುಗಳಲ್ಲಿ, ತಮ್ಮ ವಿನಯಪೂರ್ವಕ ನೆಡೆವಳಿಕೆಯಿಂದ ನಮ್ಮ ಮನೆಯ ಒಬ್ಬ ಸದಸ್ಯರಾಗಿ ಬಿಟ್ಟಿದ್ದಾರೆ .. ಅವರಿಲ್ಲ ಅನಿಸೋದೇ ಇಲ್ಲ.. ಇಲ್ಲೇ ಎಲ್ಲೋ ತರಕಾರಿ ತರೋಕೆ ಹೋಗಿದ್ದಾರೆ ಅಂತಲೋ.. ಯಾವುದೋ ಊರಿಗೆ ಹೋಗಿದ್ದಾರೆ ಅಂತಲೋ.. ವಾಕಿಂಗ್ ಹೋಗಿದ್ದಾರೆ ಅಂತಲೋ ಅನಿಸುತ್ತದೆ.. 


ಚಿತ್ರಕೃಪೆ ... ಗೂಗಲೇಶ್ವರ


ಚಿತ್ರಕೃಪೆ ... ಗೂಗಲೇಶ್ವರ

ಗಾನ ಸಾಗರದ ಅಲೆಗಳನ್ನು ಏರುತ್ತಲೇ ತಂಗಾಳಿಯಾಗಿ ಬೀಸುತ್ತಾ ನಮ್ಮ ಮನದೊಳಗೆ ಕೂತಿರುವ ಈ ಅಗಾಧ ಪ್ರತಿಭಾ ಕಡಲಿಗೆ ನಮ್ಮ ಕಡೆಯಿಂದ ಒಂದಷ್ಟು ಅಕ್ಷರಗಳ ಅಭಿಷೇಕ ಮಾಡಬೇಕಿನಿಸಿ ಈ ಲೇಖನ ಅವರ ಚರಣಕಮಲಗಳಿಗೆ ಅರ್ಪಿಸುತ್ತಿದ್ದೇನೆ.. ~!

Sunday, August 23, 2020

ಸವಿತಾರ್ಥಕತೆ ಒಂದು ಬದುಕು

ಸುಮಾರು ಮೂವತ್ತು ವರ್ಷಗಳ ಹಿಂದೆ.. ದೂರದರ್ಶನದಲ್ಲಿ ಅಮಿತಾಭ್ ಅವರ ತ್ರಿಶೂಲ್ ಸಿನಿಮಾ ನೋಡುತಿದ್ದೆ.. ಅಮ್ಮನ ಆಸೆ ನೆರವೇರಿಸೋಕೆ.. ಸಂಜೀವ್ ಕುಮಾರ್ ಬಳಿ ಒಂದು ನಿವೇಶನ ಖರೀದಿ ಮಾಡಲು ಬರುತ್ತಾರೆ.. ಚಟಪಟ ಮಾತುಗಳು ಆಗುತ್ತವೆ.. ಸಂಜೀವ್ ಕುಮಾರ್ ಅವರ ಒಂದು ಮಾತಿಗೆ ಸಿಡಿದು ಅಮಿತಾಭ್ ಹೇಳುವ ಮಾತು.. 

"ಮೇ ಪಾಂಚ್ ಲಾಖ್ ಕ ಸೌಧಾ ಕರ್ನೆ ಆಯಾ ಹೂ.. ಮಗರ್ ಜೆಬ್ ಮೇ ಪಾಂಚ್ ಬೂಟಿ ಕವಡಿಯ ಭೀ ನಹಿ ಹೇ.. !"




ತುಂಬಾ ಪವರ್ ಫುಲ್ ಅನ್ನಿಸ್ತು ಈ ಸಂಭಾಷಣೆ.. ಮೈ ಎಲ್ಲಾ ಜುಮ್ ಅನ್ಸಿತ್ತು .. ಅಂದಿನಿಂದ ಇವತ್ತಿನ ತನಕ ಲೆಕ್ಕವಿಲ್ಲದಷ್ಟು ಬಾರಿ ಈ ಸಿನಿಮಾ ಇದೆ ಸಂಭಾಷಣೆಗಾಗಿ ನೋಡಿದ್ದೀನಿ.. ಅಬ್ಬಬ್ಬಾ ಅನ್ನಿಸುತ್ತೆ.. 

ನನ್ನ ಮನೆ ಮಾಡುವ ಬಯಕೆ ಕೂಡ ಇದೆ ಚಿತ್ರದ ಸಂಭಾಷಣೆಯಂತೆ ನೆಡೆಯಿತು.. ಅಕ್ಕ ತಾನು ಓಡಾಡುವ ಹಾದಿಯಲ್ಲಿ ಕಂಡ ಒಂದು ಜಾಹಿರಾತನ್ನು ನೋಡಿ.. ನನ್ನ ಬಲವಂತ ಮಾಡಿ ಮನೆಯನ್ನು ತೋರಿಸಿದಳು.. ಅಲ್ಲಿದ್ದ ನಿರ್ವಾಹಕಿ ದಿವ್ಯಾ ಮೇಡಂ ಮತ್ತು ಶ್ರೀ ಸಬರೀಶ್ ಕೂಡ ನನಗೆ ಅತ್ಯುತ್ತಮ ಸಹಕಾರ ನೀಡಿ ಮನೆಯನ್ನು ನನದಾಗಿಸಿಕೊಳ್ಳಲು ಸಹಾಯಮಾಡಿದರು... 



ಶ್ರೀ ರಾಮ ಲಂಕೆಗೆ ಸೇತುವೆ ಕಟ್ಟುವಾಗ ವಾನರ ಸೇನೆಯಲ್ಲದೆ.. ಅದೆಷ್ಟೋ ಕಾಣದ ಕೈಗಳು ಸಹಾಯ ಮಾಡಿದ ಹಾಗೆ ನನ್ನ ಭುಜಕ್ಕೆ ಭುಜ ಕೊಟ್ಟು ಸವಿತಾಳ ಕನಸನ್ನು ನನಸು ಮಾಡಿದ ಕೀರ್ತಿ ಅವರಿಗೆಲ್ಲಾ ಸಲ್ಲುತ್ತದೆ.. 





ಯಾವ ಫ್ಲೋರ್ ಅಂದಾಗ.. ನನ್ನ ಅದೃಷ್ಟ ಸಂಖ್ಯೆ ಎಂಟಕ್ಕೆ ಬಂದು ನಿಂತೇ.. ಪೂರ್ವ ದಿಕ್ಕಿನ ಬಾಗಿಲು ಒಳಿತು ಅಂತ ನನ್ನ ಮಾನಸಿಕ ಗುರು ಶ್ರೀ ನಾಗಭೂಷಣ ಹೇಳಿದರು.. 

ಅಂದುಕೊಂಡದ್ದಕ್ಕಿಂತ ಸರಳವಾಗಿ, ಸುಸೂತ್ರವಾಗಿ ಮನೆಯ ರಿಜಿಸ್ಟ್ರೇಷನ್ ಆಯಿತು.. ಹಾಗೂ ಹೀಗೂ ನನ್ನ ಮಗ ಎಂಟಕ್ಕೆ ದಂಟು ಅಂದ ಅನ್ನೋ ರೀತಿಯಲ್ಲಿ ಬೆಂಗಳೂರಿನ ಈ ಮಹಾನಗರಿಯಲ್ಲಿ ನಮ್ಮ ಅಪ್ಪನ ಸಾಹಸಿ ಬದುಕಿಗೆ ಸಾಕ್ಷಿಯಾಗಿ ಇನ್ನೊಂದು ಸದನ ನೆಲೆ ನಿಂತಿತು.. 

ನನ್ನ ಅಕ್ಕನ ಮನೆಯ ಗೃಹ ಪ್ರವೇಶವಾದಾಗ.. ಪೂಜೆ ಮಾಡಿಸಿದ ಗುರುಗಳು ಕೇಳಿದರು.. ಶ್ರೀಕಾಂತ್ ನಿಮ್ಮ ಮನೆ ಯಾವಾಗ ಅಂತ.. ಅರಿವಿಲ್ಲದೆ ಹೇಳಿದ್ದೆ.. ಗುರುಗಳೇ ಸಧ್ಯದಲ್ಲಿಯೇ.. ಆದರೆ ಮನೆಯ ಹೆಸರು "ಅನುಗ್ರಹ ಸದನ - ೨" ಅಂತಾನೆ ಇಡೋದು ಅಂದಿದ್ದೆ.. ಸವಿತಾ ಮೆಲ್ಲನೆ ತಲೆ ಮೇಲೆ ಕುಟ್ಟಿದ್ದಳು.. 

ಯಾಕೆ ಶ್ರೀಕಾಂತ್ ಆ ಹೆಸರು ಅಂತ ಗುರುಗಳು ಕೇಳಿದಾಗ 

ನಮ್ಮ ವಿಜಯನಗರದ ಬಾಡಿಗೆ ಮನೆಯ ಹೆಸರು "ಅನುಗ್ರಹ ಸದನ" ಹದಿನಾಲ್ಕು ವರ್ಷ ಆ ಹೆಸರು ಉಪಯೋಗಿಸಿ ರೂಡಿಯಾಗಿ ಅಭಿಮಾನ ಉಕ್ಕಿತ್ತು.. ಅಕ್ಕನ ಮನೆಗೆ ಹೆಸರಿಡಬೇಕು ಎಂದು ಕೇಳಿದಾಗ ಅರಿವಿಲ್ಲದೆ ಬಂದ ಹೆಸರು.. "ಅನುಗ್ರಹ ಸದನ" ಹಾಗಾಗಿ ಆ ಹೆಸರಿನ ಮೇಲಿನ ಲವ್.. ಮುಗಿಯಬಾರದು ಎಂದು.. ಇದಕ್ಕೆ ಅನುಗ್ರಹ ಸದನ - ೨ ಎಂದು ಹೆಸರಿಡಬೇಕು ಎಂದು ನಿರ್ಧರಿಸಿದ್ದೆವು.. ಕೂಸು ಹುಟ್ಟೋಕೆ ಮುಂಚೆನೇ ಕುಲಾವಿ ಅಂತಾರಲ್ಲ ಹಾಗೆ ಇದು ಕೂಡ ಎಂದಿದ್ದೆ.. 

ಗುರುಗಳು ನಗುತ್ತಾ.. ನಿಮ್ಮ ಆಸೆ ಖಂಡಿತ ಈಡೇರುತ್ತೆ.. ಶುಭವಾಗಲಿ ಎಂದು ಹಾರೈಸಿದ್ದರು.. 

ಆದರೆ ಸವಿತಾಳ ಕನಸಾದ ಈ ಗೃಹ.. ನನಸಾಗುವ ವೇಳೆಗೆ ಅವಳು ಹಿರಿಯರನ್ನು ಸೇರಲು ನನ್ನನ್ನು ಬದುಕಿಸಿ ಹೊರಟೆ ಬಿಟ್ಟಿದ್ದಳು.. ಹಾಗಾಗಿ ಮನೆಯ ಹೆಸರಾಯಿತು 

ಸವಿತಾರ್ಥಕತೆ 
(ಅನುಗ್ರಹ ಸದನ - ೨)


ಶ್ರೀ ಮನೆಯೇನೋ ಆಯಿತು.. ಅದಕ್ಕೆ ಚಂದದ ಹೆಸರು ಇಟ್ಟಿರಿ.. ಈ ಮನೆಯೊಳಗೇ ಸದಾ ಶಾಂತಿ ನೆಮ್ಮದಿ ನೆಲಸಿರಲಿ ಎಂದು ಆಶೀರ್ವದಿಸುತ್ತೇನೆ.. ಆದರೆ ಮನೆಗೆ ದೀಪ ಬೆಳಗುವ ಒಂದು ಜೊತೆ ಬೇಕು ಶ್ರೀ.. ಮನಸ್ಸು ಮಾಡಿ ಎಂದಳು ಸವಿತಾ.. 

ತುಂಬಾ ಯೋಚನೆ ಮಾಡಿ.. 

ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ  
ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ 
ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ 
ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ 
ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ 
ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ 
ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ 
ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ 
ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ 
ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು ಬೇಡ ಬೇಕು

ಬೇಡ ಅಂತ ಶುರುವಾಗಿ ಕಡೆಗೆ ಬಂದು ನಿಂತದ್ದು ಬೇಕು ಅಂತ.. 

ಮನೆಯವರೆಲ್ಲರ ಪ್ರೋತ್ಸಾಹ.. ಗೆಳೆಯ ಗೆಳತಿಯರ ಒತ್ತಾಯ.. ಎಲ್ಲವೂ ಸಾಲಾಗಿ ನಿಂತು ಜೊತೆಗೆ ನನ್ನ ಮುದ್ದಿನ ಗೆಳತೀ ಶೀತಲ್ ತನ್ನ ಒಪ್ಪಿಗೆಯ ಮುದ್ರೆಯನ್ನೊತ್ತಿದಾಗ ನೆಡೆದು ಬಂದವಳೇ ಸೀಮಾ.. ಎಲ್ಲಾ ಸೀಮೆಯನ್ನು ದಾಟಿ....ಮಗಳು ಐಶ್ವರ್ಯ ಜೊತೆ ನನ್ನ ಬದುಕಿಗೆ ಹೆಜ್ಜೆ ಇಟ್ಟಳು.. 



ಶ್ರೀವಿತಲ್ ಜೊತೆ ಸೀಮೈಶ್ವರ್ಯ ಸೇರಿಕೊಂಡು "ಸವಿತಾರ್ಥಕತೆ "ಯನ್ನು ಬೆಳಗುವ ಕಾಯಕ ಶುರುವಾಗಿದೆ.. ಸವಿತಾ ಸ್ವರ್ಗದಿಂದ ಈ ತುಂಬು ಸಂಸಾರವನ್ನು ಹರಸುತ್ತಾ ಸದಾ ನಮ್ಮ ಮನದಲ್ಲಿರುತ್ತಾಳೆ.. 

ಮಕ್ಕಳಿಬ್ಬರ ಬದುಕನ್ನು ಕಟ್ಟಿಕೊಟ್ಟು.. ಅವರ ಕನಸನ್ನು ನನಸು ಮಾಡುವುದು ನಮ್ಮ ಮುಂದಿನ ಕಾಯಕ.. 



ಏಶಿಯನ್ ಪೇಂಟ್ಸ್ ಜಾಹಿರಾತಿನಂತೆ.. ಹೊಸ ಮನೆ...  ಹೊಸ ಮಡದಿ...  ಹೊಸ ಸಂಸಾರ ಎಲ್ಲವೂ ಸುಸೂತ್ರವಾಗಿ ಸಾಗಲೆಂದು ಆ  ಭಗವಂತನನ್ನು ಪ್ರಾರ್ಥಿಸುತ್ತಾ.. ನಿಮ್ಮೆಲ್ಲರ ಶುಭ ಹಾರೈಕೆ ಸದಾ ಇರಲಿ ಎಂದು ಪ್ರಾರ್ಥಿಸುವೆ.. !!!

Wednesday, August 5, 2020

ಜೈ ಶ್ರೀರಾಮ್!

ಕಲ್ಲಾಗಿದ್ದ ಅಹಲ್ಯೆ.. ಯೋಚಿಸುವುದನ್ನೇ ಬಿಟ್ಟಿದ್ದಳು.. ನನ್ನನು ಕಲ್ಲು ಮಾಡಿದ್ದು ದೇವರ ಇಚ್ಛೆ.. ಅದನ್ನು ಮುಕ್ತಿಗೊಳಿಸುವುದು ದೇವರ ಇಚ್ಛೆ.. ಅದಕ್ಕೆ ತಲೆ ಕೆಡಿಸಿಕೊಳ್ಳದೆ ತನ್ನ ಪಾಡಿಗೆ ಕಲ್ಲಾಗಿ ಕುಳಿತಿದ್ದಳು. .. 

ಹಣ್ಣಿನ ಮರದ ಕೆಳಗೆ ಬಿದ್ದಿದ್ದ ರುಚಿಯಾದ ಹಣ್ಣನ್ನೆಲ್ಲ ಆರಿಸಿ ಎತ್ತಿಡುತಿದ್ದ ಹಣ್ಣು ಹಣ್ಣು ಮುದುಕಿ ಮನದಲ್ಲಿ ತಳಮಳ ಆದರೆ ಅದನ್ನು ಮೀರಿಸಿ ಜಪಿಸುತಿದ್ದ ರಾಮ ನಾಮ  ಆಕೆಗೆ ಬಲ ನೀಡುತಿತ್ತು .. ಒಂದಲ್ಲ ಒಂದು ದಿನ ತನ್ನ ಹೃದಯದಲ್ಲಿರುವ ಶ್ರೀ ರಾಮ ಪ್ರಭು ಬಂದೆ ಬರುತ್ತಾನೆ ಅಂತ ಆಕೆಯ ಮನ ಹೇಳುತ್ತಲೇ ಇತ್ತು.. 

ಏಟು ಬಿದ್ದು ಮರಣ ಶಯ್ಯೆಯಲ್ಲಿದ್ದರೂ ಕುಟುಕು ಜೀವ ಉಳಿಸಿಕೊಂಡಿದ್ದ ಜಟಾಯುವಿಗೆ ಅರಿವಿತ್ತು ತನ್ನ ಇಷ್ಟ ದೇವತೆ ರಾಮನನ್ನ ನೋಡಿಯೇ ನೋಡುತ್ತೀನಿ ಅಂತ.. 

ಹೀಗೆ ತ್ರೇತಾಯುಗದ ಈ ಮೂವರು ಮಹನೀಯರು ಒಂದು ಯುಗ ದಾಟಿ ಕಲಿಯುಗಕ್ಕೆ ಬರುತ್ತಾರೆ.. 

ತಾನು ಕಲ್ಲಾಗಿದ್ದ ತಾಣವನ್ನು ಅಹಲ್ಯೆ ಹುಡುಕಿ.. ಅರೆ ಇಲ್ಲಿಯೇ ನನಗೆ ಶ್ರೀ ರಾಮ ಶಾಪ ವಿಮೋಚನೆ ಮಾಡಿದ್ದು.. ಈ ಜಾಗ ನನ್ನ ನೆಚ್ಚಿನ ಜಾಗ.. ಶಬರಿ.. ಇಲ್ಲಿಯೇ ಸ್ವಲ್ಪ ಹೊತ್ತು ಕೂತು ಮುಂದಕ್ಕೆ ಹೋಗೋಣ ಅಂತ ಮೂವರು ಕೂತರು.. 

ಜಟಾಯು ಅಲ್ಲಿಯೇ ಇದ್ದ ಒಂದು ಮರದ ಮೇಲೆ ಕೂತು ಅತ್ತಿತ್ತ ನೋಡುತ್ತಾ ಮರವನ್ನೊಮ್ಮೆ ಅಲ್ಲಾಡಿಸಿತು.. ಒಂದಷ್ಟು ಹಣ್ಣುಗಳು ಉದುರಿ ಬಿದ್ದವು.. 

ಹಣ್ಣುಗಳು ಬಿದ್ದ ಸದ್ದಿಗೆ ಶಬರಿ ಅತ್ತ ಕಡೆ ತಿರುಗಿ.. ಆಹಾ ಎಷ್ಟು ಸೊಗಸಾಗಿವೆ ಎಂದು ಒಂದು ಹಣ್ಣನ್ನು ಕಚ್ಚಿದಳು.. ಅಬ್ಬಬ್ಬಾ ಎನ್ನುವಷ್ಟು ಸಿಹಿಯಾಗಿತ್ತು.. ನನ್ನ ಪ್ರಭುವಿಗೆ ಈ ಹಣ್ಣನ್ನು ಕೊಡುವೆ ಎನ್ನುತ್ತಾ ತನ್ನ ಉಡಿಯಲ್ಲಿ ಕಟ್ಟಿಕೊಂಡಳು.. 

ಜಟಾಯು ಹಣ್ಣನ್ನು ಉದುರಿಸಿದ್ದಕ್ಕೆ ಶಬರಿ ಧನ್ಯವಾದ ಹೇಳಿದಳು.. ಜಟಾಯುವಿಗೆ ಖುಷಿಯಾಯಿತು.. ತಾನು ಬಿದ್ದಿದ್ದ ತಾಣವನ್ನು ತನ್ನ ದಿವ್ಯ ದೃಷ್ಟಿಯಿಂದಲೇ ನೋಡುತ್ತಾ ಆ ದಿನದ ಘಟನೆ ನೆನೆಯುತ್ತಾ ಸಂಕಟ ವ್ಯಕ್ತಪಡಿಸಿದಾಗ.. ಅಹಲ್ಯೆ ಮತ್ತು ಶಬರಿ, ಜಟಾಯುವಿಗೆ ಸಮಾಧಾನ ಹೇಳಿದರು.. 

ಮತ್ತೆ ಮೂವರು ಎದ್ದು ನೆಡೆಯುತ್ತಾ ಹೊರಟಾಗ.. ತಂಗಾಳಿ ಬೀಸಿತು.. ಗಾಳಿಯಲ್ಲಿ ತೇಲುತ್ತಾ ಒಂದು ಬಿತ್ತಿ ಪತ್ರ ಹಾರಿ ಬಂದಿತು.... 

ಜಟಾಯು ಗಾಳಿಯಲ್ಲಿ ಹಾರಾಡುತ್ತಿದ್ದ ಬಿತ್ತಿ ಪತ್ರವನ್ನು ಹಾರಿ ಕಚ್ಚಿ ಹಿಡಿದು..  ಅಹಲ್ಯೆಗೆ ತಂದು ಕೊಟ್ಟಿತು.. 

ಅಹಲ್ಯೆ ಮುಖ ಊರಗಲವಾಯಿತು... ಶಬರಿಗೆ ತೋರಿಸಿದಳು.. ಶಬರಿ ಇನ್ನಷ್ಟು ಹಣ್ಣನ್ನು ತನ್ನ ಉಡಿಯಲ್ಲಿ ತುಂಬಿಕೊಂಡು ಉತ್ಸಾಹದಿಂದ ನಿಂತಳು.. ಜಟಾಯು.. ಆಹಾ ಮತ್ತೊಮ್ಮೆ .. ತುಂಬಾ ಸಂತೋಷ ಎನ್ನುತ್ತಾ.. ಉತ್ಸಾಹದಿಂದ ...ಮಾತೆಯರೇ.. ನನ್ನ ಬೆನ್ನ ಮೇಲೆ ಕುಳಿತುಕೊಳ್ಳಿ ಆ ದಿವ್ಯವಾದ ಅನುಭವಕ್ಕೆ ನಾವು ಸಾಕ್ಷಿಯಾಗೋಣ ಎನ್ನುತ್ತಾ ತನ್ನ ಬೆನ್ನ ಮೇಲೆ ಕೂರಿಸಿಕೊಂಡು ಹಾರಿತು.. 

ಆ ತಾಣಕ್ಕೆ ಬಂದರೆ ಆಗಲೇ ತನ್ನಂತೆ ಹಲವಾರು ಯಂತ್ರ ಹಕ್ಕಿಗಳು ಹಾರಾಡುತ್ತಿದ್ದವು.. "ಜಟಾಯು ಗಾಬರಿ ಬೇಡ.. ಅದು ನಿನ್ನ ಬಾಂಧವರಲ್ಲ.. ಆದರೆ ನಿನ್ನಂತೆ ಇರುವವರು.. ಅವುಗಳನ್ನು ಡ್ರೋನ್ ಎನ್ನುತ್ತಾರೆ.. ಊರಿನ ವಿಹಂಗಮ ದೃಶ್ಯಗಳನ್ನು ಸೆರೆ ಹಿಡಿಯುತ್ತದೆ.. " ಅಹಲ್ಯೆ ತಾಂತ್ರಿಕ ಜ್ಞಾನವನ್ನು ಹೆಚ್ಚಿಸಿಕೊಂಡಿದ್ದರ ಫಲ ಜಟಾಯುವಿಗೆ ಗೊಂದಲ ದೂರವಾಯಿತು.. 

ಅಲ್ಲಿಂದ ಸೀದಾ ಇಳಿದದ್ದು ಹನುಮಂತನ ಗುಡಿಯ ಮುಂದೆ.. 

ಅಲ್ಲಿಯೇ ಮರದ ಮೇಲೆ ಕುಳಿತು.. ಮೂವರು ನೆಡೆಯುತ್ತಿದ್ದ ದೃಶ್ಯಾವಳಿಗಳನ್ನು ನೋಡ ತೊಡಗಿದರು.. 

ಭಾರತಾಂಬೆಯೆ ಹೆಮ್ಮೆಯ ಪುತ್ರ ಶ್ರೀ ನರೇಂದ್ರ ಮೋದಿ ಬರುತ್ತಿದ್ದಾರೆ  ಅಂತ ಮೈಕ್ ಧ್ವನಿಯಿಂದ ತಿಳಿಯಿತು.. 

ಇಲ್ಲಿಂದ ಮುಂದೆ ಶಬರಿ ತನ್ನ ಇಳಿ ದನಿಯಲ್ಲಿ ನಿರೂಪಣೆ ಮಾಡತೊಡಗಿದಳು.. ಅವಳ ಕತ್ತಿನಲ್ಲಿದ್ದ ವಿಡಿಯೋ ಕ್ಯಾಮೆರಾ ಮತ್ತು ಮೈಕ್ರೋಫೋನ್ ಮಾತುಗಳನ್ನು ದೃಶ್ಯಗಳನ್ನು ಪರಿಣಾಮಕಾರಿಯಾಗಿ ಬಿತ್ತರ ಮಾಡುತ್ತಿತ್ತು ತನ್ನ ಆಶ್ರಮ ನಿವಾಸಿಗಳ ತಾಣಗಳಿಗೆ!


"ನೋಡಿ ವೀಕ್ಷಕರೇ.. ಈಗ ತಾನೇ ರೇಷ್ಮೆ ವಸ್ತ್ರಧಾರಿಯಾಗಿ ನಮ್ಮ ಭಾರತದ ಹೆಮ್ಮೆಯ ಪುತ್ರ ಶ್ರೀ ನರೇಂದ್ರ ಮೋದಿ ಬಂದಿದ್ದಾರೆ.. ಹನುಮಂತನಿಗೆ ಆರತಿ ಮಾಡಿ, ಪೂಜೆ ಸಲ್ಲಿಸಿ.. ಗುಡಿಗೆ ಒಂದು ಪ್ರದಕ್ಷಿಣೆ ಬಂದಿದ್ದಾರೆ.. ಅವರ ಮುಖಭಾವ ಹಾಕಿಕೊಂಡಿರುವ ಮಾಸ್ಕಿನಿಂದ ಮರೆಯಾಗಿದ್ದರೂ ಅವರ ದೇಹ ಭಾಷೆ ಅವರ ಭಕ್ತಿ ಭಾವವನ್ನು ತೋರಿಸುತ್ತಿದೆ.. ಧನ್ಯರಾಗಿರುವಂಥಹ ಅವರ ದೇಹ ಭಾಷೆ ನಿಜಕ್ಕೂ ಅನುಕರಣೀಯ.. "

"ಶ್ರೀ ರಾಮಲಲ್ಲಾನ ದೇವಸ್ಥಾನಕ್ಕೆ ಬಂದು.. ಭಕ್ತಿಯಿಂದ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಸಾಷ್ಟ್ರಾಂಗ ಮಾಡಿದ್ದು ಈ ಹೆಮ್ಮೆಯ ಭಾರತ ಪುತ್ರನ ಬಗ್ಗೆ ಅಭಿಮಾನ ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ .. ತಾವು ಮಾಡಬೇಕಾದ ಕೆಲಸ ಮುಖ್ಯವೇ ಹೊರತು ಪದವಿಯಲ್ಲ ಎನ್ನುವ ಮಹಾನ್ ಸಂದೇಶ ತಿಳಿಸಿದರು.."


"ಪಾರಿಜಾತ ಗಿಡವನ್ನು ನೆಟ್ಟು, ಅದಕ್ಕೆ ಮಣ್ಣು, ನೀರು ಹಾಕಿ ಕೈ ಮುಗಿದರು.. ಪಾರಿಜಾತ ಹೂವು ದೇವಲೋಕದ ಪುಷ್ಪ, ಅಂತಹ ಗಿಡವನ್ನು ನೆಟ್ಟು, ಭರತ ಭೂಮಿಯನ್ನು ಸ್ವರ್ಗವನ್ನಾಗಿ ಮಾಡಲು ಹಗಲಿರುಳು ಶ್ರಮಿಸುತ್ತಿರುವ ಈ ಮಹಾನ್ ನಾಯಕರಿಗೆ ನಮ್ಮೆಲ್ಲರ ಹೃದಯಪೂರ್ವಕ ಧನ್ಯವಾದಗಳು.. "


"ಅಲ್ಲಿಂದ ಹೊರಟ ಈ ಪುತ್ರ, ಶಿಲಾನ್ಯಾಸದ ಸ್ಥಳಕ್ಕೆ ಬಂದಿದ್ದಾರೆ.. ಇಡೀ ದೇಶವನ್ನು ಮುನ್ನೆಡೆಸಿ, ಇಡೀ ಪ್ರಪಂಚವೇ ಇವರತ್ತ ತಿರುಗಿ ನೋಡುವಂತೆ ಮಾಡಿರುವ ಈ ಮಹಾನ್ ಜೀವಿ, ಅಲ್ಲಿದ್ದ ಪುರೋಹಿತರ ಪ್ರತಿಯೊಂದು ವಾಕ್ಯವನ್ನು, ಮಂತ್ರವನ್ನು, ಶ್ಲೋಕಗಳನ್ನು ಸರಿಯಾಗಿ ಧನ್ಯತಾಭಾವದಿಂದ, ಭಕ್ತಿಯಿಂದ ಕೇಳಿಸಿಕೊಳ್ಳುತ್ತಾ, ಅವರು ಹೇಳಿದಂತೆ ಸುಮಾರು ಒಂದು ಘಂಟೆಗೂ ಮಿಗಿಲಾಗಿ ಪಾಲಿಸಿದ್ದು, ಅವರ ಧರ್ಮ ಶ್ರದ್ಧೆ, ಭಕ್ತಿ ಮಾರ್ಗವನ್ನು ಜಗತ್ತಿಗೆ ತೋರಿಸುವಂತಿತ್ತು. ಆ ಕ್ಷಣಕ್ಕೆ ಅವರಿಗೆ ಆ ಕಾರ್ಯ ಬಿಟ್ಟು ಬೇರೆ ಏನೂ ತಲೆಯಲ್ಲಿರಲಿಲ್ಲ ಎನಿಸಿತು"

"ಅವರು ಪ್ರತಿ ಬಾರಿಯೂ ಹೂವು, ಮಂತ್ರಾಕ್ಷತೆಯೊಡನೆ ಅರ್ಘ್ಯ ಬಿಟ್ಟಾಗ, ಧಾರೆಯೆರೆದಾಗ.. ತಾವು ಇಷ್ಟ ಪಡುವ ಭರತ ಭುವಿಗೆ ತಮ್ಮ ಶ್ರಮವನ್ನ, ಸಮಯವನ್ನು, ಮನಸ್ಸನ್ನು   ಧಾರೆಯೆರೆಯುತ್ತಿದ್ದಾರೆ ಎನಿಸಿತು.. ಅದ್ಭುತ ದೃಶ್ಯವದು"

"ಅಕ್ಷತೆ ಹಿಡಿದ ಕೈಗಳು ಮೆಲ್ಲನೆ ಕಂಪಿಸುತ್ತಿದ್ದದ್ದು ಕಂಡಾಗ.. ಅವರು ಎಷ್ಟು ಭಾವುಕರಾಗಿದ್ದಾರೆ.. ಮತ್ತು ಆ ಜನ್ಮಭೂಮಿಯ ಶಕ್ತಿಶಾಲಿ ಕಂಪನಗಳು ಅವರ ದೇಹದಲ್ಲಿ ಮೂಡಿಸುತ್ತಿರುವ ಕಂಪನವನ್ನು ಬಿಂಬಿಸುತಿತ್ತು.. "



"ಶಿಲಾನ್ಯಾಸ ಮಾಡಿ... ಅಷ್ಟೆಲ್ಲಾ ಹೊತ್ತು ಅಲ್ಲಿ ಕುಳಿತಿದ್ದರೂ.. ದಣಿವರಿಯದ ಇವರು.. ಎಲ್ಲರೂ ಮಾತುಗಳನ್ನು ಮುಗಿಸಿದ ಮೇಲೆ.. ಅದ್ಭುತವಾಗಿ ಸುಮಾರು ಮೂವತ್ತು ನಿಮಿಷಗಳ ಮಾತುಗಳು ಚೈತನ್ಯ ನೀಡುವ ಶಕ್ತಿಯಾಗಿತ್ತು.. ಸನಾತನ ಪರಂಪರೆಯನ್ನು ಉಳಿಸಿ ಬೆಳೆಸಿಕೊಳ್ಳುವ ಹಾದಿಯಲ್ಲಿ ಇವರ ಪರಿಶ್ರಮ ಭಾರತಕ್ಕೆ ಬೇಕಾಗಿತ್ತು.. ನೋಡುತ್ತಲೇ ಇರಿ ಭಾರತ ಇಡೀ ವಿಶ್ವಕ್ಕೆ ಸನಾತನ ಧರ್ಮದ ಗುರುವಾಗುವುದರಲ್ಲಿ ಅಚ್ಚರಿಯೇ ಇಲ್ಲ.. "



"ತಮ್ಮ ಮಾತುಗಳನ್ನು ಮುಗಿಸಿದ ತಕ್ಷಣ, ಕಾರ್ಯನಿರತ ಶ್ರೀ ನರೇಂದ್ರ ಮೋದಿಯವರು ತಮ್ಮ ಮುಂದಿನ ಕಾಯಕಕ್ಕೆ ಹೊರಟೆ ಬಿಟ್ಟರು.. ಅಲ್ಲಿಗೆ ನಮ್ಮೆಲ್ಲರ ನೆಚ್ಚಿನ ಪ್ರಭು ಶ್ರೀ ರಾಮಚಂದ್ರರ ಭವ್ಯ ದೇವಾಲಯಕ್ಕೆ ಭೂಮಿ ಪೂಜೆ ನೆರೆವೇರಿತು.. ಇನ್ನೊಂದಷ್ಟು ವರ್ಷಗಳಲ್ಲಿ ಭವ್ಯವಾದ ಆ ದೇವಾಲಯದ ದರ್ಶನಕ್ಕೆ ಬಂದಾಗ ಮತ್ತೆ ಸಿಗುತ್ತೇವೆ.. " ಎನ್ನುತ್ತಾ ಶಬರಿ ತನ್ನ ಮಾತನ್ನು ಮುಗಿಸಿದಳು.. 

ಶಾಪ ಮುಕ್ತವಾಗಿದ್ದ ಅಹಲ್ಯೆ.. ಶಬರಿಯ ಮಾತುಗಳನ್ನು ಕೇಳುತ್ತ.. ಅಲ್ಲಿ ನೆಡೆಯುತಿದ್ದ ಕಾರ್ಯಕ್ರಮವನ್ನು ನೋಡುತ್ತಾ ಅಕ್ಷರಶಃ ಕಲ್ಲಾಗಿಯೇ ಹೋಗಿದ್ದಳು.. ಶಬರಿಯೇ ಒಮ್ಮೆಲೇ.. ಮಾತೆ ಅಹಲ್ಯೆ ಎಂದು ಅಲುಗಾಡಿಸಿದಾಗ.. "ಅರೆ ಶಬರಿ.. ಇದೆಲ್ಲ ಕನಸೋ ನನಸೋ ಅರಿಯದಾಗಿದೆ... ನಿಜಕ್ಕೂ ಇದೊಂದು ಅದ್ಭುತ ಕ್ಷಣ.. ಯುಗ ಯುಗ ದಾಟಿ ಬಂದ ನಮಗೆ ಇಂತಹ ಕ್ಷಣಕ್ಕೆ ಸಾಕ್ಷಿಯಾಗುತ್ತೇವೆ ಎನ್ನುವ ಒಂದು ಚೂರು ಕಲ್ಪನೆ ಕೂಡ ನಮಗಿರಲಿಲ್ಲ.. ಜಟಾಯು ನಿನ್ನ ಸಹಾಯ ಎಂದಿಗೂ ಮರೆಯಲಾರದು.. ಅಂದು ಶ್ರೀ ರಾಮಚಂದ್ರನಿಗೆ ಸೀತೆಯ ಅಪಹರಣದ ಬಗ್ಗೆ ಸುಳಿವು ನೀಡಿದ್ದು ನೀನು.. ಇಂದು ಆ ಪ್ರಭುವಿನ ಮಂದಿರದ ನಿರ್ಮಾಣಕ್ಕೆ ನೆಡೆಯುತಿದ್ದ ಪೂಜೆಗೆ ಸಾಕ್ಷಿಯಾಗಲು ಕರೆತಂದದ್ದು ನೀನೆ.. ನೀ ಧನ್ಯ ಜಟಾಯು... ನಿನಗೆ ಧನ್ಯವಾದಗಳು.. "

"ಮಾತೆ ಅಹಲ್ಯೆ, ಮಾತೆ ಶಬರಿ.. ನಿಮ್ಮಿಂದಾಗಿ ನನಗೆ ಈ ಗೌರವ ಸಿಕ್ಕಿಗೆ.. ನಿಮಗೆ ಧನ್ಯವಾದಗಳು..ಹೂವಿನಿಂದ ನಾರು ಸ್ವರ್ಗಕ್ಕೆ ಸೇರಿದ ಅನುಭವ ನನಗೆ" ಎನ್ನುತ್ತಾ ಮತ್ತೆ ಅವರಿಬ್ಬರನ್ನು ಕೂರಿಸಿಕೊಂಡು ಸ್ವರ್ಗ ಲೋಕದತ್ತ ಪಯಣ ಶುರು ಮಾಡಿತು.. !

****

ಅಂದು ದೇಶವೆಲ್ಲಾ ಗಲಭೆಯಿಂದ ಕೂಡಿತ್ತು.. ನಾವು ಮೂವರು ಅಣ್ಣ ತಮ್ಮಂದಿರು.. ಸುಮಾರು ಹನ್ನೆರಡು ವರ್ಷಗಳಾದ ಮೇಲೆ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗಕ್ಕೆ ಹೋಗಿ.. ಅಲ್ಲಿಂದ ಅದ್ಭುತ ಜೋಗದ ಜಲಪಾತದ ದರ್ಶನ.. ಮತ್ತೆ ಜಲಪಾತದ ಬುಡದ ತನಕ ಹೋಗಿ, ಮಿಂದು ಬಂದಿದ್ದ ಸಾರ್ಥಕತೆ.. ಶಿವಮೊಗ್ಗಕ್ಕೆ ಬಂದಾಗ ಅರಿವಾಗಿದ್ದು.. ಕರ್ಫ್ಯೂ ಹಾಕಿದ್ದಾರೆ ಅಂತ.. ಆದರೆ ಬಸ್ಸಿನ ಟಿಕೇಟನ್ನು ಮುಂಗಡವಾಗಿಯೇ ಕಾದಿರಿಸಿದ್ದರಿಂದ ಸಮಸ್ಯೆ ಇರಲಿಲ್ಲ.. ನಮ್ಮ ಬಂಧುಗಳು ನಟೇಶ ಮತ್ತು ಸುಬ್ಬರಾಮು ತಮ್ಮ ಸೈಕಲ್ಲಿನಲ್ಲಿ ಬಸ್ ನಿಲ್ದಾಣದ ತನಕ ಬಿಟ್ಟರು.. ಹಾದಿಯಲ್ಲಿ ಪೊಲೀಸರು ತಡೆಯೊಡ್ಡಿದಾಗ ನಾವು ಬೆಂಗಳೂರಿಗೆ ಹೋಗುತ್ತಿರುವ ವಿಷಯ ಹೇಳಿದೆವು.. ಸರಿ ಬೇಗ ಸೇರಿಕೊಳ್ಳಿ ಎಂದು ನಮ್ಮನ್ನು ಬಿಟ್ಟರು.. ಆದರೆ ನಟೇಶ್ ಮತ್ತು ಸುಬ್ಬರಾಮು ವಾಪಸ್ಸು ಹೋಗುವಾಗ ಅವರಿಗೆ ಕಾರಣ ಹೇಳಲು ಏನೂ ಇರಲಿಲ್ಲ. ಸುಮ್ಮನೆ ತಿರುಗಾಡುತ್ತಿದ್ದಾರೆ ಎಂದು ಒಂದೆರಡು ಬಿಟ್ಟು ಕಳಿಸಿದ್ದರಂತೆ.. 

ಬೆಂಗಳೂರಿಗೆ ಬಂದ ಮೇಲೆ ತಿಳಿಯಿತು.. ರಾಮನ ಜನುಮ ತಾಣದಲ್ಲಿದ್ದ ಕಟ್ಟಡವನ್ನು ನೆಲಸಮ ಮಾಡಿ.. ಅಲ್ಲಿ ರಾಮ ಮಂದಿರ ನಿರ್ಮಿಸುವ ಹೋರಾಟ ಶುರುವಾಗಿದೆ ಅಂತ.. ಅಂದು ೧೯೯೨ ಡಿಸೆಂಬರ್ ಆರು.. 

ಇಂದು ಆಗಸ್ಟ್ ೫ ೨೦೨೦.. ಬರೋಬ್ಬರಿ ೨೮ ವಸಂತಗಳು ಮತ್ತು ಅದಕ್ಕೂ ಮುನ್ನ ಇತಿಹಾಸ ಇರುವ ಸುಮಾರು ಐದು ಶತಮಾನಗಳಿಗೂ ಹೆಚ್ಚಿನ ಹೋರಾಟಕ್ಕೆ ಇಂದು ಬಿಡುಗಡೆ.. ಅಂದಿನ ಕನಸ್ಸು ಇಂದಿನ ನನಸಾಗಿದೆ.. 

****

ಕಲ್ಲಾಗಿದ್ದಳು ಅಹಲ್ಯೆ ಅಂದು 
ಶ್ರೀ ರಾಮ ಪ್ರಭುವಿನ ಪಾದ ಸ್ಪರ್ಶ 
ಸಿಕ್ಕಿತು ಅಹಲ್ಯೆಗೆ ಶಾಪ ವಿಮೋಚನೆ 

ಕಾದಿದ್ದಳು ಶಬರಿ 
ರಾಮ ಬರುವನೆಂದು 
ರುಚಿಯಾದ ಹಣ್ಣುಗಳನ್ನು
ತೆಗೆದಿಡುತ್ತಿದ್ದಳು 
ರಾಮಚಂದ್ರ ಬಂದಾಗ 
ಖುಷಿಯಿಂದ ಕಣ್ಣಾಲಿಗಳು ತುಂಬಿ ಬಂದು 
ಕಣ್ಣೀರಿನಿಂದ ಸಿಹಿಯಾದ ಹಣ್ಣು 
ಉಪ್ಪಾಯಿತೇನೋ ಎನ್ನುವ 
ಆತಂಕ ಶಬರಿಗೆ!

ಅಹಲ್ಯೆಯನ್ನು ಶಾಪವಿಮೋಚನೆಗೊಳಿಸಿದ ರಾಮ 
ಶಬರಿಗೆ ಮುಕ್ತಿ ಕೊಟ್ಟ ಶ್ರೀ ರಾಮ 
ತನ್ನ ಜನ್ಮಭೂಮಿಯ ಮಂದಿರಕ್ಕೆ 
ಇದ್ದ ಕಾನೂನಿನ ತೊಡಕನ್ನು ಗೆದ್ದು  
ಮೋದಿಗೆ ಆಶೀರ್ವಾದ ನೀಡಿದಾಗ 
ಶುರುವಾಗಿದ್ದೇ ಜಯಘೋಷ 
ಜೈ ಶ್ರೀರಾಮ್ ಜೈ ಶ್ರೀ ರಾಮ್!

***

ಇಂತಹ ಒಂದು ಐತಿಹಾಸಿಕ ಕಾಲಘಟ್ಟದಲ್ಲಿ ಇಂತಹ ಭವ್ಯ ಘಟನೆಗೆ ನಾವು ಸಾಕ್ಷಿಯಾಗುತ್ತೇವೆ, ಸಾಕ್ಷಿಯಾಗಿದ್ದೀವಿ, ಸಾಕ್ಷಿಯಾಗಿದ್ದೆವು ಎನ್ನುವುದೇ ಮನ ತುಂಬುವ ಘಳಿಗೆಗಳು!!!

ಜೈ ಶ್ರೀರಾಮ್!

Friday, July 3, 2020

ಸಾಧನೆಯ ಹಾದಿಯಲ್ಲಿ.. ಮಗುವಿನ ಸಂಭ್ರಮ

ಕಣ್ಣು ಬಿಟ್ಟೆ.. ಚಂದದ ಕನಸ್ಸು .. ನೆನಪಾಯ್ತು .... ಮನಸ್ಸು ಹಗುರಾಗಿತ್ತು.. 

ಮಾರನೇ ದಿನ ವಿಚಾರ ಹೇಳಿದೆ.... ಮೊದಲು ಕಲಿತುಕೊಳ್ಳಿ ಆಮೇಲೆ  ಕತೆ ಬಿಡೋರಂತೆ.. ಮಾಮೂಲಿ ಬಾಣದಂತಹ ಮಾತು.. 

ತಲೆ ಕೆಡಿಸಿಕೊಳ್ಳಲಿಲ್ಲ.. ಕರುಳಕುಡಿ ಹೊತ್ತ ಅವಳ ಮುಂದೆ ಹಾಜರಾದೆ.. 

ಈ ಸಂಭ್ರಮ ಕಂಡು ನಾಚಿ ಆ ಕಡೆ ತಿರುಗಿದೆ 

ಅಯ್ಯೋ ಸೂಪರ್ ಇದೆ .. ಸೊಗಸಾಗಿದೆ.. ಖುಷಿಯಾಯ್ತು.. 

ಈ  ಮಾತನ್ನು ಕೇಳಿ ಖುಷಿ ಪಟ್ಟೆ.. !

ಅಲ್ಲಿಂದ ಶುರುವಾದ ಕಥೆ ಮುಂದುವರಿಯುತ್ತಲೇ ಇದೆ.. !

*****
ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಕೆಲಸ ಮಾಡುತ್ತಿದ್ದಾಗ ಪರಿಚಯವಾಗಿದ್ದ  ನಮ್ಮ ಕಂಪನಿಯ ಉದ್ಯೋಗಿ ರಾಜಾಸಿಂಗ್ (ಈಗ ಎಲ್ಲಿದ್ದಾರೋ ಹೇಗಿದ್ದಾರೋ ಗೊತ್ತಿಲ್ಲ) ಬನ್ನಿ ಸರ್ ಒಳ್ಳೆ ಗಾಡಿ ಕೊಡಿಸುತ್ತೀನಿ ಅಂತ ಹೇಳಿ ಈಗಿನ ಫೋರಮ್ ಕೋರಮಂಗಲದ ಎದುರಿನ ಟ್ರಿನಿಟಿ ಮೋಟರ್ಸ್ ನಲ್ಲಿ ಕೊಂಡುಕೊಂಡ ಹೊಚ್ಚ ಹೊಸ ಗಾಡಿ TVS Victor.. ಆಗ ಮಾರುಕಟ್ಟೆಯಲ್ಲಿ ಹೆಸರಾಗಿದ್ದ ಗಾಡಿಯದು.. 

ಮಸ್ತ್ ಬೈಕ್.. ಮಧ್ಯಮ ವರ್ಗದವರಿಗೆ ಎಟುಕುವಂಥಹ ಗಾಡಿಯಾಗಿತ್ತು.. ಕಿಮಿಗೆ ಸುಮಾರು ೬೦ಕಿಮಿ ತನಕ ಬರುತ್ತಿತ್ತು (ಹೊಸದರಲ್ಲಿ)... .. 

ನಾ ಒಂದು ವಿಚಿತ್ರ ಪ್ರತಿಜ್ಞೆ ಮಾಡಿದ್ದೆ ಮಗಳು ಬರುವ ಹೊತ್ತಿಗೆ ಮನೆಗೆ ಗಾಡಿ ಬರಬೇಕು ಅಂತ.. ಹಾಗೆಯೇ ಆಯ್ತು.. ಮಗಳು ಬರುವ ನಲವತ್ತೊಂಬತ್ತು ದಿನಗಳ ಮೊದಲು ನನ್ನ ಮನೆ ಸೇರಿತ್ತು.. 

ಹಾಗಾಗಿ ಇದೆ ನನ್ನ ಮೊದಲ ಮಗು.. !

ನನ್ನ ಮುದ್ದು 


ಶ್ರೀ ಇದರ ಜೊತೆಯಲ್ಲಿ ಕಳೆದ ಸುವರ್ಣ ಕ್ಷಣಗಳನ್ನು ಹೇಳಿ.. ನಿಮ್ಮ ಮಾತಿನಲ್ಲಿ ಕೇಳೋಕೆ ಚನ್ನ.. 

ಆಗಲಿ ಟೀ.. ಒಂದೊಂದು ಅದ್ಭುತ ಕ್ಷಣಗಳು.. 

*****

ಬೆಂಗಳೂರು - ಶಿವಗಂಗೆ - ಬೆಂಗಳೂರು 

ಶೀತಲ್ ಗೆ ಇನ್ನೂ ಎರಡು ಮೂರು ವರ್ಷ ಈ ಬೈಕಿನಲ್ಲಿ ಶಿವಗಂಗೆಗೆ ಹೋಗಿದ್ದೆವು.. ಹೋಗುವಾಗ ಸೂಪರ್ ಇತ್ತು.. ಬರುವಾಗ ಕಣ್ಣೇ ಕಾಣದಷ್ಟು ಮಳೆ.. ಮಗು ಮಳೆಯಲ್ಲಿ ನೆಂದು ತೊಪ್ಪೆಯಾಗಿತ್ತು..  ನನ್ನ ಜರ್ಕಿನ್ ನೀನು ಹಾಕಿಕೊಂಡು ಮಗುವನ್ನು ಎದೆಗೆ ಆನಿಸಿಕೊಂಡು ಶಿವಗಂಗೆ ಇಂದ ಮನೆಯ ತನಕ ಮಳೆಯಲ್ಲಿಯೇ ಬಂದದ್ದು ಅದ್ಭುತ ಅನುಭವ.. 

 ಘಾಟಿ ಸುಬ್ರಮಣ್ಯದ ಹಾದಿಯಲ್ಲಿ 
ಬೆಂಗಳೂರು - ಚಾಮುಂಡಿ ಬೆಟ್ಟ - ಮೈಸೂರು - ಬೆಂಗಳೂರು
ಮೈಸೂರಿನಲ್ಲಿ ಒಂದು ಉಪನಯನ ಕಾರ್ಯಕ್ರಮ.. ಹೋಗಲೇ ಬೇಕಿದ್ದ ಅನಿವಾರ್ಯತೆ.. ಸರಿ ಮಗುವನ್ನು ಮನೆಯಲ್ಲಿಯೇ  ಬಿಟ್ಟು.. ಮೈಸೂರು ರಸ್ತೆಯ ನಿಲ್ದಾಣದಲ್ಲಿ ಬೈಕ್ ನಿಲ್ಲಿಸಿ ಬಸ್ಸಿನಲ್ಲಿ ಹೋಗುವ ನಿರ್ಧಾರ.. ಕಡೆಯ ಹೊತ್ತಿಗೆ ನಿರ್ಧಾರ ಬದಲಿಸಿ ಬೈಕಿನಲ್ಲಿಯೇ ಮೈಸೂರಿಗೆ ಹೋಗಿ ಬಂದದ್ದು.. ದಾರಿಯಲ್ಲಿ ಪಂಚರ್ ಆದರೂ ತೊಂದರೆ ಕೊಡದೆ.. ಪಂಚರ್ ಶಾಪಿನ ಹತ್ತಿರವೇ ನಿಂತುಹೋಗಿದ್ದ ಬೈಕನ್ನು ಸರಿ ಮಾಡಿಸಿ ಹೋಗಿದ್ದು .... ಮೈಸೂರಿನಲ್ಲಿ ಎಲ್ಲರೂ ಅಚ್ಚರಿ ಪಟ್ಟಿದ್ದರು.. 

ಚಾಮುಂಡಿ ಬೆಟ್ಟದ ಹಾದಿಯಲ್ಲಿ ಬೈಕಿನಲ್ಲಿ 

ಹೀಗೊಂದು ಪೋಸು 

ಮೈಸೂರಿಗೆ ಬೈಕ್ ನಲ್ಲಿ 

ಬೆಂಗಳೂರು - ಘಾಟಿ ಸುಬ್ರಮಣ್ಯ - ಬೆಂಗಳೂರು
ಈ  ಪ್ರವಾಸ ಲೆಕ್ಕವೇ ಇಲ್ಲ.. ಹೋಗಬೇಕೆಂದು ಅನಿಸಿದಾಗೆಲ್ಲ ಬೈಕಿಗೆ ಪೆಟ್ರೋಲ್ ತುಂಬೋದು .. ಗಾಡಿಯ ಮೈ ಸವರೋದು.. ಹೊರಡೋದು .. ಹತ್ತಕ್ಕೂ ಹೆಚ್ಚು ಬಾರಿ ಹೋಗಿದ್ದ ಪುಣ್ಯ ಸ್ಥಳವಿದು.. 

ಬೆಂಗಳೂರು - ಸಾವನದುರ್ಗ - ಮಂಚನಬೆಲೆ - ಬೆಂಗಳೂರು
ನಮ್ಮ ಕೊರವಂಗಲದ ಕುಟುಂಬದ ಸದಸ್ಯರು ಬೈಕಿನಲ್ಲಿ ಸಾವನದುರ್ಗ ಬೆಟ್ಟಕ್ಕೆ ಹೋಗಿ ಬೆಟ್ಟ ಹತ್ತಿ ಬಂದದ್ದು ಖುಷಿ ಕೊಟ್ಟಿತ್ತು.. 

ಪೆಟ್ರೋಲ್ ಖಾಲಿ ಆಯ್ತಾ.. ಪೆಟ್ರೋಲ್ ಬಂಕ್ ಹತ್ತಿರ ಇರುತ್ತೆ.. 
ಪಂಚರ್ ಆಯಿತು ಅಂದರೆ .. ಪಂಚರ್ ಶಾಪ್ ಅನತಿ ದೂರದಲ್ಲಿಯೇ ಇರುತ್ತೆ 

ಇವೆರಡು ಬಿಟ್ಟರೆ ಇನ್ಯಾವುದೇ ಕಾರಣಕ್ಕೂ ಬೈಕ್ ನಿಂತಿಲ್ಲ.. 

ಮುತ್ತತ್ತಿಗೆ ಹೋಗಿದ್ದಾಗ ಬೈಕ್ ಪಂಚರ್ ಆಯ್ತು.. ಅಲ್ಲಿಂದ ತಿರುವುಗಳ ರಸ್ತೆ ೨೮-೩೦ ಕಿಮೀಗಳು.. ಪೆಟ್ರೋಲ್ ಟ್ಯಾಂಕ್ ಮೇಲೆ ಕೂತುಕೊಂಡು ಬಂದದ್ದು ಅದ್ಭುತ ಅನುಭವ.. 

ಪಂಚರ್ ಹಾಕಿಸಿ.. ಅದರ ತಲೆಯನ್ನೊಮ್ಮೆ ಸವರಿದಾಗ ಅದಕ್ಕೆ ಖುಷಿಯೋ ಖುಷಿ.. ಶ್ರೀ ನನಗೆ ಸಿಕ್ಕ ಅದ್ಭುತ ಯಜಮಾನ ನೀನು ಅಂದಿತ್ತು. 

ಕುಣಿಗಲ್ ಹತ್ತಿರದ ಒಂದು ದೇವಾಲಯ 

ಜಾನಪದ ಲೋಕದಲ್ಲಿ 


ಮಾಕಳಿದುರ್ಗದ ಬಳಿ 

ರಾಮದೇವರ ಬೆಟ್ಟದಲ್ಲಿ 


ಕನಕಪುರ ರಸ್ತೆಯ ಪಿರಮಿಡ್ ವ್ಯಾಲಿ 

ಬಜ್ಜಿ ಮಾಡೋಕೆ ಪೂರ್ವ ಸಿದ್ಧತೆ 

ರಾತ್ರಿ ಬಜ್ಜಿ .. ಆಹಾ.. 

ಮುತ್ತತ್ತಿಯ ಚಾರಣ 

ರಿಪೇರಿ ಕೆಲಸ.. ಪಂಚರ್ 

ನನ್ನ ಮಗು.. ಸುಂದರ ಮಗು 

ನಿಮಿಶಾಂಬ ದೇವಸ್ಥಾನ 

ಅಲ್ಲಿಂದ ಮುಂದೆ ಅಲೆಮಾರಿಗಳು ತಂಡ ಕಟ್ಟಿದ್ದು.. ಹಿಮವದ್ ಗೋಪಾಲಸ್ವಾಮೀ ಬೆಟ್ಟ, ಮೇಕೆದಾಟು, ಮೇಲುಕೋಟೆ, ಶ್ರವಣ ಬೆಳಗೊಳ, ಹಾಸನ, ಕಳಸಾಪುರ, ಬೆಳವಾಡಿ, ಕೋಲಾರ, ನಂದಿಬೆಟ್ಟ, ಮಾಕಳಿದುರ್ಗ, ಹೊಸೂರು, ರಾಮನಗರ, ಮುತ್ತತ್ತಿ.. ಹೀಗೆ ಬೈಕ್ ಓಡಾಡದ ಜಾಗಗಳಿಲ್ಲ.. 

ಸಾವನದುರ್ಗದ ಹಾದಿಯಲ್ಲಿ 

ಹಿಮವದ್ ಗೋಪಾಲ ಸ್ವಾಮಿ ಬೆಟ್ಟದ ತಪ್ಪಲು 

ಹಿಮವದ್ ಗೋಪಾಲಸ್ವಾಮಿ ಬೆಟ್ಟ 

ರಾತ್ರಿ ಚಾರಣ ಮಾಕಳಿದುರ್ಗ 

ಸಾವನ ದುರ್ಗದ ಹಾದಿ 

ಮುತ್ತತ್ತಿ ಹಾದಿಯಲ್ಲಿ 

ಮುತ್ತತ್ತಿಯಿಂದ ಸಾತನೂರು ತನಕ ಪಂಚರ್ ಆಗಿದ್ದರೂ ಸಾತ್ ನೀಡಿದ 

ನಾನು ನನ್ನ ಮಗು ನಂದಿ ಬೆಟ್ಟದ ಹಾದಿಯಲ್ಲಿ 


*****
ಸೂಪರ್ ಶ್ರೀ.. ಖುಷಿಯಾಗುತ್ತೆ ಎಂಥಹ ಅದ್ಭುತ ಸಾಥಿ ಅಲ್ಲವೇ. ಎಂದೂ ಆಗೋಲ್ಲ ಅನ್ನದೆ ಕರೆದಾಗೆಲ್ಲ ಜೊತೆಯಾದ ಈ ಮುದ್ದು ಗಾಡಿ.. ಛೆ ಗಾಡಿಯಲ್ಲ ಇದು ನಮ್ಮ ಮೊದಲನೇ ಮಗು.. ನಮ್ಮನ್ನು ಎಷ್ಟು ಚೆನ್ನಾಗಿ ನೋಡಿಕೊಂಡಿದೆ..

ಲಕ್ಷದ ಗಡಿಯಲ್ಲಿ 

ಒಂದು ಲಕ್ಷ ಕಿಮಿ ಓಡಿದ ಸಂತಸ 

ಹೌದು ಟೀ.. ನಿನಗೆ ಗೊತ್ತಾ.. ಇತ್ತೀಚಿಗೆ ತಾನೇ ಒಂದು ಲಕ್ಷ ಕಿಮೀಗಳ ಪಯಣ ಆಯಿತು.. ಒಂದು  ದಿನವೂ ತೊಂದರೆ ಕೊಡದೆ.. ಇವತ್ತಿಗೂ ಜೂಮ್ ಎನ್ನುತ್ತಾ ಓಡುತ್ತಿರುವ ಈ ಸುಂದರ ಸಾರಥಿಗೆ ಶುಭಾಶಯಗಳನ್ನು ಹೇಳುತ್ತಾ.. ಈ ಲೇಖನವನ್ನು ಅರ್ಪಣೆ ಮಾಡೋಣ.. 

ಹೌದು ಶ್ರೀ.. ಇಷ್ಟವಾದ ಬೈಕ್.. ಸುಂದರ ನಂಬರ್.. ಸುಂದರ ಸಾರಥಿ ಸದಾ ನಿಮಗೆ ಯಶಸ್ಸನ್ನು ತರುತ್ತಲೇ ಇರಲಿ.. 

ಒಂದು ಲಕ್ಷ ಕಿಮಿ ದಾಟಿ ಮುಂದುವರೆಯುತ್ತಿರುವ ನಮ್ಮ  ಮುದ್ದು  ಮಗುವಿಗೆ ಅಭಿನಂದನೆಗಳು.. !