Monday, November 28, 2016

ಮೊದಲ ಮೊದಲ ಢವ ಢವ .... :-)

"ಬೊಂಬೆಯಾಟವಯ್ಯ.. ಇದು ಬೊಂಬೆಯಾಟವಯ್ಯ.. ನೀ ಸೂತ್ರಧಾರಿ ನಾ ಪಾತ್ರಧಾರಿ ದಡವ ಸೇರಿಸಯ್ಯ" ಅಂದು ಬೆಳಿಗ್ಗೆಯಿಂದ ಅಣ್ಣಾವ್ರ ಈ ಹಾಡು ಬೇಡವೆಂದರೂ ಪದೇ ಪದೇ ತುಟಿಯ ಮೇಲೆ ಬರುತ್ತಲೇ ಇತ್ತು. ಕಾರಣ ಆಗ ಗೊತ್ತಿರಲಿಲ್ಲ, ಆದರೆ ಅದು ಗೊತ್ತಾದ ಹೊತ್ತು.. ವಾಹ್ ಸುಂದರ ಅನುಭವ...

"ನೀ ನನ್ನ ಗೆಲ್ಲಲಾರೆ" ಚಿತ್ರದಲ್ಲಿ ಕ್ಲೈಮಾಕ್ಸ್ ದೃಶ್ಯದಲ್ಲಿ ಪ್ರಖ್ಯಾತ ಖಳನಟ ತೂಗುದೀಪ ಶ್ರೀನಿವಾಸ್ ರಾಜ್ ಅವರಿಗೆ ಸವಾಲು ಹಾಕುತ್ತಾ, "ನೋಡಿದೆಯಾ ಹೇಗಿದೆ ನನ್ನ ಮಾಸ್ಟರ್ ಪ್ಲಾನ್" ಎಂದಾಗ, ಅಣ್ಣಾವ್ರು ತಮ್ಮದೇ ಶೈಲಿಯಲ್ಲಿ "ತಿಪ್ಪೆ ಮೇಲಿರುವ ಹುಳಾನಾ ನುಂಗೋಕೆ ಕಪ್ಪೆ ಬಾಯಿ ಬಿಟ್ಟುಕೊಂಡಿರುತ್ತಂತೆ, ಕಪ್ಪೆನಾ ನುಂಗೋಕೆ ಹಾವು ಕಾಯ್ತಾ ಇರುತ್ತಂತೆ, ಹಾವನ್ನ ಹಿಡಿಯೋಕೆ ಗರುಡ ಹಾರಾಡ್ತಾ ಇರುತ್ತಂತೆ, ಗರುಡನ ಮೇಲೊಬ್ಬ ಕೂತಿರ್ತಾನಂತೆ... ಮಾಸ್ಟರ್ ಪ್ಲಾನ್ ಅವನ್ದು ಕಣೋ.. " ಹಾಗೆ ನಮ್ಮದು ಏನೇ ಪ್ಲಾನ್ ಇದ್ದರೂ, ಕಡೆಯಲ್ಲಿ ನೆಡೆಯುವುದು ಆ ಪರಮಾತ್ಮನ ಪುಸ್ತಕದ ಚಿತ್ರಕಥೆ ಹೇಗಿದೆಯೋ ಹಾಗೆ..

ಈ ಪೀಠಿಕೆಗೆ ಕಾರಣ, ೩ಕೆ ತಂಡ ಆಯೋಜಿಸಿದ್ದ ಕರುನಾಡ ರಾಜ್ಯೋತ್ಸವ ಸಮಾರಂಭಕ್ಕೆ ಸರಿಯಾಗಿ ಮೂರು ಘಂಟೆಗೆ ಅಲ್ಲಿರಬೇಕಿದ್ದ ನಾನು, ಸಮಯ ೨. ೧೫ ಆಗಿದ್ದರೂ ನಾ ಇದ್ದದ್ದು ಅಲ್ಲಿಂದ ಸರಿ ಸುಮಾರು ಐವತ್ತು ಕಿಮಿ ದೂರದಲ್ಲಿರುವ ನನ್ನ ಆಫೀಸ್ನಲ್ಲಿ.. ಹೇಗೋ ತರಾತುರಿಯಲ್ಲಿ ಕೆಲಸ ಮುಗಿಸಿ ನನ್ನ ಬಾಸ್ ಕಾರಿನಲ್ಲಿ ಯಶವಂತಪುರಕ್ಕೆ ಬಂದು ನನ್ನ ಕಾರನ್ನು ತೆಗೆದು ಹೊರಟೆ.. "ಶ್ರೀಕಾಂತಣ್ಣ ನಾ ವಿಜಯನಗರದ ಹತ್ತಿರ ಇದ್ದೇನೆ.. ಈಗ ಹೆಂಗೆ ಹೋಗಬೇಕು".. ತಕ್ಷಣ ಹೇಳಿದೆ "ಒಂದು ಹತ್ತೈದು ನಿಮಿಷ ನೀವು ಇರುವ ಕಡೆಯೇ ಇರಿ ನಾ ಬರುತ್ತಿದ್ದೇನೆ, ಜೊತೆಯಲ್ಲಿಯೇ ಹೋಗೋಣ"..

ಮೊದಲೇ ಹೆದರಿದ್ದವನಿಗೆ ಜೊತೆಗಾರ ಸಿಕ್ಕಿದ್ದು ಸ್ವಲ್ಪ ಸಮಾಧಾನ ತಂದಿತು. ಹೇಳಿದ ಸ್ಥಳದಲ್ಲಿ ಕಾಯುತ್ತಿದ್ದ ಕಡೆ ಹೋಗಿ ಅವರ ಜೊತೆಯಲ್ಲಿ ಸಭಾಂಗಣಕ್ಕೆ ಬಂದಾಗ.. ಆಗಲೇ ಕಾರ್ಯಕ್ರಮ ಶುರವಾಗಿತ್ತು.. ಇತ್ತ ಕಡೆ ಮಗಳು ಆಗಲೇ ಒಂದೆರಡು ಕರೆ, ಸಂದೇಶಗಳನ್ನು ಮಾಡಿ ನನ್ನಲ್ಲಿನ ಎದೆಬಡಿತವನ್ನು ಇನ್ನಷ್ಟು ಹೆಚ್ಚಿಸಿದ್ದಳು.

ಕಾರು ನಿಲ್ಲಿಸಿ, ಅಂಗಣಕ್ಕೆ ಹೋಗಿ, ಯಾರು ಇದ್ದಾರೆ, ಯಾರೂ ಇಲ್ಲ, ಯಾವುದನ್ನು ಗಮನಿಸದೆ, ಸದ್ದಿಲ್ಲದೇ ನನ್ನ ಕ್ಯಾಮೆರಾ ಹಿಡಿದು ಹಿಂದಿನ ಸಾಲಿಗೆ ಹೋಗಿ ತಣ್ಣಗೆ ಕೂತು ಬಿಡುವ ಪ್ಲಾನ್ ಮಾಸ್ಟರ್ ಪ್ಲಾನ್ ನನ್ನದಾಗಿತ್ತು.  ಆದರೆ ಅಣ್ಣಾವ್ರು ಹೇಳುವ ಮಾಸ್ಟರ್ ಪ್ಲಾನ್ ಕತೃ.. ತನ್ನದೇ ಒಂದು ಪ್ಲಾನ್ ಮಾಡಿದ್ದ..

"ಕವನ ವಾಚಿಸಿದ ಕವಿಗೆ ಧನ್ಯವಾದ ಹೇಳುತ್ತಾ.. ಈಗ ಮುಂದಿನ ಕವಿತೆಯನ್ನು ಓದಲು ಬರುತ್ತಿದ್ದರೆ ಶ್ರೀಕಾಂತ್ ಮಂಜುನಾಥ್" ನನ್ನ ಗೆಳೆಯ ಅರುಣ್ ಶೃಂಗೇರಿ ಹಿಡಿದಿದ್ದ ಮೈಕಿಂದ ಹೊರಗೆ ಬಂದ ಮಾತುಗಳನ್ನು ಕೇಳಿ, ಒಮ್ಮೆಲೇ ಗಾಬರಿಯಾಗಿ, ಸ್ವಲ್ಪ ಹೊತ್ತು ಆಮೇಲೆ ಹೇಳುತ್ತೇನೆ ಅಂದೇ. ಆವಾಗ ಅರಿವಾಯಿತು, ನನ್ನ ಸರದಿ ಇನ್ನೂ ಮುಗಿದಿಲ್ಲ, ಹಾಗೆ ಮಾಸ್ಟರ್ ಪ್ಲಾನ್ ನಲ್ಲಿ ನನ್ನ ಸೀನ್ ಇನ್ನೂ ಬಂದಿಲ್ಲ ಅಂತ :-(

ಬಂದಿದ್ದ ಒಂದಷ್ಟು ಗೆಳೆಯರನ್ನು ಮಾತಾಡಿಸಿ, ಒಂದೆರಡು ಫೋಟೋಗಳನ್ನು ಕ್ಲಿಕ್ಕಿಸಿ, ಹೇಗೋ ಕೆಲ ಕ್ಷಣಗಳನ್ನು ತಳ್ಳಿದೆ.. "ಶ್ರೀಕಾಂತ್ ಮಂಜುನಾಥ್ ರವರು ಈಗ ತಮ್ಮ ಕವಿತೆಯನ್ನು ವಾಚಿಸಲಿದ್ದಾರೆ" ಬೇರೆ ಏನೂ ದಾರಿಯಿರಲಿಲ್ಲ, ಈಗ ಮತ್ತೆ ನಖರ ಮಾಡಿದರೆ, ಅಹಂಕಾರವಾಗುತ್ತದೆ.. ಜೊತೆಯಲ್ಲಿ ಅಲ್ಲಿದ್ದ ಮಹಾನ್ ದೈತ್ಯ ಪ್ರತಿಭೆಗಳ ಮುಂದೆ ನಾನು ಏನೂ ಅಲ್ಲಾ.. ಬಭೃವಾಹನದಲ್ಲಿ ಹೇಳುವ ರೀತಿಯಲ್ಲಿ "ತೃಣಕ್ಕೆ ಸಮಾನ" ಆಗಿ ಬಿಡುತ್ತೇನೆ ಎಂದು, ಢವ ಢವ ಗುಟ್ಟುತ್ತಿದ್ದ ಎದೆಯನ್ನು ಒಮ್ಮೆ ಹಾಗೆ ಸವರಿ "ಆಲ್ ವಿಲ್ ಬಿ ವೆಲ್" ಅಂತ ಸಮಾಧಾನ ಹೇಳಿ, ಹೊತ್ತು ತಂದಿದ್ದ ಕವಿತೆಯ ಪ್ರತಿಯನ್ನು ತೆಗೆದುಕೊಳ್ಳಲು ಹೋದೆ.. ಆಗ ಗೆಳೆಯ ಅರುಣ್ "ಶ್ರೀ ನಿಮ್ಮ ಕವಿತೆ ಇಲ್ಲಿದೆ ತೆಗೆದುಕೊಳ್ಳಿ" ಆಗ ಶುರುವಾಯಿತು..

ಹಾಗೆ ಮೇಲೆ ಒಮ್ಮೆ ನೋಡಿದೆ.. ಮಾಸ್ಟರ್ ಪ್ಲಾನ್ ಕತೃ ಹೇಳಿದ "ಲೈಟ್ಸ್, ಕ್ಯಾಮೆರಾ.. ಆಕ್ಷನ್"

"ಎಲ್ಲರಿಗೂ ನಮಸ್ಕಾರ"  ಧ್ವನಿ ನನಗೆ ಕೇಳಲಿಲ್ಲ
"ಶ್ರೀ ಮೈಕ್ ಆನ್ ಮಾಡಿಕೊಳ್ಳಿ".. ಪಕ್ಕದಿಂದ ಅಶರೀರವಾಣಿ ಬಂತು

"ನೋಡಿ ಪ್ರಾಬ್ಲಮ್ ಇಲ್ಲಿಂದ ಶುರುವಾಗಿದೆ.. " ಎಲ್ಲರೂ ಗೊಳ್ ಎಂದು ನಕ್ಕರು..
ಎದೆ ಬಡಿತದ ಒಂದೆರಡು ತಾಳಗಳು ಕಮ್ಮಿಯಾದವು.. ದೀರ್ಘ ಉಸಿರು ಎಳೆದುಕೊಂಡು..
"ನಾ ಮದುವೆ ಆಗುವಾಗಲೂ ಇಷ್ಟು ಹೆದರಿಕೆ ಆಗಿರಲಿಲ್ಲ" ಮತ್ತೆ ಸಭಿಕರು ನಕ್ಕರು..
ಇನ್ನೊಂದೆರಡು ತಾಳಗಳು ಕಮ್ಮಿಯಾದವು..
"ಇದನ್ನು ಓದುವಾಗ.. ನಾ ತೊದಲಿದರೆ, ಗಂಟಲು ಗಟ್ಟಿ ಬಂದರೆ. ಇದು ನನ್ನ ಹೆದರಿಕೆಗಿಂತ.. ನಾ ಆಯ್ದುಕೊಂಡ ವಸ್ತುವಿನ ಭಾರವೇ ಕಾರಣ"

ಮತ್ತೆ ಸಭೆಯಲ್ಲಿ ಲೈಟ್ ಆಗಿ ನಗು ಜೊತೆಯಲ್ಲಿ ಕೆಲವರ ಹುಬ್ಬು ಎರಡನೇ ಮಹಡಿ ಹತ್ತಿತ್ತು .. "ಈ ಪ್ರಾಣಿ ಬ್ಲಾಗ್ ನಲ್ಲಿ ಮಾತ್ರ ಪೀಠಿಕೆ ಅಲ್ಲಾ .. ಮಾತಾಡುವಾಗಲೂ ಹೀಗೆನಾ.. "

ಮುಂದುವರಿಸಿದೆ ....

"ಆಯ್ದುಕೊಂಡ ವಸ್ತು ಮಹಾಭಾರತ.. ಈ ಮಹಾಭಾರತದಲ್ಲಿ ಗಂಗೆ, ಜಲ ಎಷ್ಟು ಪ್ರಾಮುಖ್ಯತೆ ಪಡೆದಿದೆ ಎಂದು ಹೇಳುವ ಒಂದು ಪ್ರಯತ್ನ ನನ್ನದು"




"ಕಮಾನ್ ಶ್ರೀ" ನನಗೆ ದೇವರು ಕೊಟ್ಟ ಸ್ನೇಹಿತೆ ರೂಪ ಸತೀಶ್ ಅವರ ಪ್ರೋತ್ಸಾಹದ ಮಾತುಗಳು, ಸ್ಟೇಜ್ ಇಂದ ನಾನು ಯಾರನ್ನು ನೋಡದೆ ಇದ್ದರೂ, ನನ್ನ ಅದ್ಭುತ ಸ್ನೇಹಿತೆ ನಿವೇದಿತಾ ಚಿರಂತನ ಅವರ ಪ್ರೋತ್ಸಾಹ.. ಇದಕ್ಕಿಂತ ಮಿಗಿಲಾಗಿ ನನ್ನ ಮಡದಿ ಸವಿತಾ.. (ಹೊರಗಡೆ ಒಂದು ಮಣ ಮಾತಾಡುವ ಇವರು.. ಹೇಗೆ ಮಾತಾಡುತ್ತಾರೆ ಎಂಬ ಆತಂಕ ಒಂದು ಕಡೆ, ಇನ್ನೊಂದು ಕಡೆ.. ಈ ಪ್ರಾಣಿ ಏನಾದರೂ ಮಾತಾಡುತ್ತೆ.. ಸರಿಯಾಗುತ್ತೆ ಎನ್ನುವ ವಿಶ್ವಾಸ).. ಜೊತೆಯಲ್ಲಿ "ಅಪ್ಪ ನನ್ನ ಹೀರೋ.. ಯು ಕ್ಯಾನ್ ಡು ಇಟ್.. ಯು ವಿಲ್ ಡು ಇಟ್"  ಎಂದು ಸದಾ ನನಗೆ ಎನರ್ಜಿ ಕೊಡುವ ನನ್ನ ಮಗಳು ಅರ್ಥಾತ್ ನನ್ನ ಸ್ನೇಹಿತೆ ಶೀತಲ್ ಮುಂದಿನ ಸಾಲಿನಲ್ಲಿ ಕೂತಿದ್ದು ನನಗೆ ಆನೆ ಬಲ ಬಂದಷ್ಟು ಆಯಿತು.. ಅಶರೀರವಾಣಿಯಾಗಿ "ಶ್ರೀ ನಾನಿದ್ದೇನೆ ಜೊತೆಯಲ್ಲಿ ಯು ಗೋ ಅಂಡ್ ಹ್ಯಾವ್ ಏ ಬ್ಲಾಸ್ಟ್" ಎಂದ ಅರ್ಪಿತಾ.... ಜೊತೆಯಲ್ಲಿ ನನ್ನ ಕುಟುಂಬ ಸದಸ್ಯರು.. ಇವರ ಜೊತೆಯಲ್ಲಿ ಬಲಗೈನಲ್ಲಿ ಕೈ ಗಡಿಯಾರದ ರೂಪದಲ್ಲಿ ವಿರಾಜಿಸಿದ್ದ ನನ್ನ ಸ್ಫೂರ್ತಿ, ಒಳಗಿನ ಪರಮಾತ್ಮ ನನ್ನ ಅಪ್ಪ..

ಧೈರ್ಯ ಮಾಡಿ ಶುರುಮಾಡಿಯೇ ಬಿಟ್ಟೆ

"ಗಂಗಾಜಲಭಾರತ"

ಕಾಯುತ್ತಿದ್ದ ಶಂತನು
ಒಂದಾಯಿತು ಎರಡಾಯಿತು
ಸಿಗಲೇ ಇಲ್ಲ ಕಂದಮ್ಮನ ಮುದ್ದು ಅಪ್ಪುಗೆ 
ತಡೆಯಲಾಗದ ಶಂತನು 
ಧರೆಗಿಳಿದನು ದೇವವ್ರತ 
ಭಾರತ ಮಹಾಭಾರತವಾಗಲು ಒಂದು ಕುರುಹಾದ
ಗಂಗೆಯ ಕಂದನಾದ ದೇವವ್ರತ
ಅವನ ಮಡಿಲಲ್ಲಿ ಅರಳಿತು ಮಹಾಭಾರತದ ಸಂಸ್ಕೃತಿ!

ಕೊಟ್ಟ ವರವನ್ನು ಮರ್ಕಟ ಮನದ ಕುಂತಿ 
ಇಟ್ಟೆ ಬಿಟ್ಟಳು ಪರೀಕ್ಷೆಗೆ
ನಿಗಿ ನಿಗಿ ಹೊಳೆಯುವ ಕಂದಮ್ಮ 
ದಿನಕರನ ಕೊಡುಗೆಯಾಗಿ 
ಮರದ ತೊಟ್ಟಿಲಿನಲ್ಲಿ ಗಂಗೆಯಲ್ಲಿ ಹೊರಟೇ ಬಿಟ್ಟಿತು
ರಾಧೇಯನಾದ ಕರ್ಣ 
ಭಾರತಕ್ಕೆ ಇನ್ನಷ್ಟು ತೂಕ ಸಿಗುವಂತೆ ಮಾಡಿದ 
ಅವನ ಜನ್ಮದಿಂದ ತೂಗಿತು ಮಹಾಭಾರತದ ಸಂಸ್ಕೃತಿ!

ಪಾಪಿ ಗಂಗೆ ಎಂದು ಕೂಗಿದಳು ಜ್ವಾಲೆ  
(ಅಣ್ಣಾವ್ರ ಬಭೃವಾಹನ ಚಿತ್ರ ನೋಡಿದವರಿಗೆ ಇದು ಗೊತ್ತಿರುತ್ತದೆ.. ಎಂದೇ ಉಪ ಪೀಠಿಕೆ ಹಾಕಿದೆ.. ಮತ್ತೊಮ್ಮೆ ಎಲ್ಲರೂ ನಕ್ಕರು)
ಕುಪಿತಗೊಂಡಳು ಗಂಗೆ 
ಕಾರಣ ಕೇಳಲು ಗಂಗೆ 
ಜ್ವಾಲೆ ಇಟ್ಟಳು ಗಂಗೆಯ ಒಡಲಿಗೆ ಮತ್ಸರದ ಬೆಂಕಿ 
ಒಡನೆ ಮೂಡಿತು ಮತ್ತೊಂದು ಅಸ್ತ್ರ 
ಬಭೃವಾಹನನಿಂದ ಹರಿಯಿತು ಕಿರೀಟಿ ಅಭಿಮಾನದ ವಸ್ತ್ರ 
ಭರತನ ಕಥೆಗೆ ಇನ್ನೊಂದು ಗರಿ ಮೂಡಿತು ಗಂಗೆಯ ಮುನಿಸಿನಿಂದ 
ಆ ಜ್ವಾಲೆಯಿಂದ ನುಗ್ಗಿತು ಮಹಾಭಾರತದ ಸಂಸ್ಕೃತಿ!

ಮಹಾಭಾರತದಲ್ಲಿ ತಮಗರಿವಿಲ್ಲದೆ ಭುವಿಗಳಿದ 
ಜೀವಿಗಳು ಭರತ ವಂಶದ ಕಥೆಗೆ 
ಬಲವಾದ ತಿರುವು ಕೊಡಲು ಕಾರಣವಾಗಿದ್ದು ಜಲ ಸಂಸ್ಕೃತಿ
ತನ್ನ ಒಡಲಿಗೆ ಬಿಟ್ಟ ಯಾವುದೇ ವಸ್ತುವನ್ನು 
ಜತನದಿಂದ ಕಾಪಾಡಿ ಅದಕ್ಕೊಂದು 
ತಿರುವು ನೀಡಿ ಕಥೆಗೆ ಮಹತ್ ಪಾತ್ರ ಕೊಡುವ ಗಂಗೆ 
ಗಂಗಾಜಲ ಸಂಸ್ಕೃತಿ ಕೊಟ್ಟ ತಿರುವು ಭಾರತಕ್ಕೆ ಭಾರವಾಯಿತು!!!

ಉಪಸಂಹಾರ : "ಭೀಷ್ಮ, ಕರ್ಣ, ಬಭೃವಾಹನ ಮಹಾಭಾರತದ ಕತೆಗೆ ಕೊಟ್ಟ ತಿರುವುದು ಬಲು ದೊಡ್ಡದು..
ಈ ಪದ್ಯದ ರೂಪದ ಕವಿತೆಯನ್ನು ಗದ್ಯದ ರೂಪದಲ್ಲಿ ನಾ ಓದಿದ್ದರೆ.. ನನ್ನ ಅನುಭವ ಎಷ್ಟು ದೊಡ್ಡದು ಎಂದು ನೀವೇ ಊಹಿಸಿಕೊಳ್ಳಿ.. ಎಲ್ಲರಿಗೂ ನಮಸ್ಕಾರ"

ಚಪ್ಪಾಳೆಗಳು ಬಿತ್ತು . ಖುಷಿಯಾಯಿತು..

ಕೂತಿದ್ದವರು "ಅಣ್ಣ ಸೂಪರ್ ಅಣ್ಣ ಚೆನ್ನಾಗಿದೆ.. ಚೆನ್ನಾಗಿತ್ತು ಅಂದರು"

ಇನ್ನಷ್ಟು ಖುಷಿಯಾಯಿತು.. ಭಾರವಾಗಿದ್ದ ಮನಸ್ಸು ಹಕ್ಕಿಯ ಹಾಗೆ ಹಾರಾಡ ತೊಡಗಿತು..

(ಕವಿತೆಯನ್ನು ವಾಚನ ಮಾಡುವಾಗ ಅಲ್ಪ ಪ್ರಾಣಗಳು ಮಹಾ ಪ್ರಾಣಗಳು ಬಹಳ ತೊಂದರೆ ಕೊಟ್ಟವು.. ಭಾರತ "ಬಾರತ" ವಾಯಿತು, ಭಾರ "ಬಾರಾ" ವಾಯಿತು, ಭರತ "ಬರತ"ವಾಯಿತು.. ಯಾಕೆ ಗೊತ್ತೇ.. ಅಲ್ಲಿ ನಿಂತು ಓದುವಾಗ, ನನ್ನ ಮಹಾಪ್ರಾಣವೇ ಸ್ವಲ್ಪ ಅಲ್ಪವಾಗಿ ಹೋಗಿತ್ತು :-)

ಈ ಒಂದು ಸುಂದರ ಅವಕಾಶಕ್ಕೆ ಅನುವು ಮಾಡಿಕೊಟ್ಟ ೩ಕೆ ತಂಡಕ್ಕೆ ಮತ್ತೆ ನನ್ನನ್ನು ಪ್ರೋತ್ಸಾಹಿಸಿದ ಮೇಲೆ ಹೆಸರು ಕಾಣಿಸಿದ ಸುಂದರ ಮನದ ಜೀವಿಗಳಿಗೂ.. ಅಣ್ಣಾವ್ರ ಸ್ಟೈಲ್ ನಲ್ಲಿ "ಧನ್ಯವಾದಗಳು"

ಕವಿಗಳಿಗೆ ಅಭಿನಂದನಾ ಪತ್ರ ಕೊಡುವಾಗ ನಾ ಎಲ್ಲರ ಚಿತ್ರ ತೆಗೆಯುತ್ತಿದ್ದೆ, ನನ್ನ ಸರದಿ ಬಂದಾಗ, ನನ್ನ ಕ್ಯಾಮೆರಾ ಅಲ್ಲಿಯೇ ಕೂತಿದ್ದವರಿಗೆ ಕೊಟ್ಟು ನಾ ವೇದಿಕೆಗೆ ಜಂಪ್ ಹೊಡೆದೆ.. ಎದುರಿಗೆ ಪ್ರಖರವಾದ ದೀಪ.. ನನ್ನ ಭ್ರಮೆ, ಯಾರೋ ಫೋಟೋ ತೆಗೆಯುತ್ತಾರೆ ಎಂದು.. ವೇದಿಕೆ ಮೇಲಿದ್ದ ಗಣ್ಯ ವ್ಯಕ್ತಿಗಳು ನನಗೆ ಹಸ್ತ ಲಾಘವ ಕೊಡಲು ಕೈ ಚಾಚಿದರೆ, ಗಾಬರಿಯಾಗಿದ್ದ ನಾನು ಅವರ ಕೈ ನೋಡದೆ, ಫೋಟೋಗೆ ಪೋಸ್ ಕೊಡ್ತಾ ಇದ್ದೆ, ಅಲ್ಲಿ ಫೋಟೋ ತೆಗೆದರೋ ಇಲ್ಲವೋ ಗೊತ್ತಿಲ್ಲ.. ಕ್ಷಣ ಕಾಲ.. ಕವಿ ಬದಲು ಕಪಿಯಾಗಿದ್ದೆ.. .... :-)
ಅಭಿನಂದನಾ ಪಾತ್ರ 
ವೇದಿಕೆಯಿಂದ ಇಳಿದಾಗ.. ಅಲ್ಲಿದ್ದವರು.. ಅಣ್ಣಾ ಅವರು ಶೇಕ್ ಹ್ಯಾಂಡ್ ಮಾಡಲು ಕೈ ಕೊಟ್ಟರೆ.. ನೀವು ಫೋಟೋಗೆ ಪೋಸ್ ಕೊಡ್ತಾ ಇದ್ದೀರಾ. ಅಂತ ಜೋರಾಗಿ ನಗುತ್ತಿದ್ದರು.. ನಾ ನನ್ನ ಹಲ್ಲನ್ನು ಬಿಟ್ಟು ಬಿಡದೆ ಬೇರೆ ದಾರಿಯಿರಲಿಲ್ಲ :-)

ಈ ಕಾರ್ಯಕ್ರಮಕ್ಕೆ ನನ್ನ ಜೊತೆಯಲ್ಲಿ ಒಬ್ಬರು ಬಂದರು ಅಂದೆನಲ್ಲ ಅವರ ಹೆಸರು "ಪ್ರಶಸ್ತಿ ಪ್ರಭಾಕರ್" .. ಈ ಕಾರ್ಯಕ್ರಮ ಮುಗಿದ ಮೇಲೆ ಅನುಭವಕ್ಕೆ ಬಂತು "ಅರೆ ಪ್ರಶಸ್ತಿ ಜೊತೆಯಲ್ಲಿ ನಾ ಬಂದಿದ್ದೇನೆ.. ನನ್ನ ಜೊತೆಯಲ್ಲಿ ಪ್ರಶಸ್ತಿ ಬಂದ ಮೇಲೆ ಅದೇ ನನಗೆ ಸಿಕ್ಕ ಮೊದಲ ಪ್ರಶಸ್ತಿ ಎಂದು ಅರಿವಾಯಿತು... ಈ ಸುಂದರ ಮೊಗದ ನನ್ನ ಲೇಖನದ ಮೂಲಕ ಸರದಾರನಿಗೆ ಧನ್ಯವಾದಗಳು!!!

Thursday, November 24, 2016

ಕಣ್ಣಂಚಿನ ನೋಟ - 270° ಕೋನದಲ್ಲಿ



ಮುಂದುವರಿದ ನೋಟ!!!

ತನ್ನ ಮ್ಯಾನೇಜರ್ ಗೆ ಎರಡು ದಿನ ಮನೆಯಿಂದಲೇ ಕೆಲಸ ಮಾಡುತ್ತೇನೆ ಎಂದು ಹೇಳಿದಾಗ.. ಆತ ಕರೆಮಾಡಿ ತುಸು ಗೊಣಗುಟ್ಟಿದರೂ, ರಜೆ ತುಂಬಾ ತುಂಬಾ ಕಡಿಮೆ ಹಾಕುತ್ತಿದ್ದ, ಮತ್ತು ತನ್ನ ಅತ್ಯಂತ ಶಿಸ್ತುಬದ್ಧ ಸ್ಟಾಫ್ ಗಳಲ್ಲಿ ಒಬ್ಬಳಾಗಿದ್ದ ವೀಣಾಳ ಅಪರೂಪದ ಕೋರಿಕೆಯನ್ನು ಇಲ್ಲ ಎನ್ನುವುದಕ್ಕೆ ಮನಸ್ಸು ಬಾರದೆ ಒಪ್ಪಿಕೊಂಡಿದ್ದ.. 

ತನ್ನ ಮ್ಯಾನೇಜರ್ "ವಾರಾಂತ್ಯ ಶುಭಪ್ರದವಾಗಿರಲಿ" ಎಂಬ ಸಂದೇಶ ಕೂಡಿದ್ದ ಇಮೇಲ್ ನೋಡಿ ವೀಣಾಳಿಗೆ ಬಲು ಸಂತಸವಾಗಿತ್ತು.  

ರೇವಂತ್ ಮನೆಗೆ ಬಿಟ್ಟು ಹೋಗಿದ್ದರಿಂದ, ಮತ್ತು ಹೋಟೆಲ್ನಲ್ಲಿ ಹೊಟ್ಟೆ ತುಂಬಾ ತಿಂದಿದ್ದರಿಂದ, ಮನೆಯಲ್ಲಿ ಮಾಡಬೇಕಾದ ಕೆಲಸವೇನು ಇರಲಿಲ್ಲ. ಮನೆಗೆ ಬಂದಾಗ, ಅಮ್ಮ ಅಪ್ಪ ಕಾಲು ನೀಡಿಕೊಂಡು ಕೂತಿದ್ದರು. ವೀಣಾ ತನ್ನ ನಿತ್ಯದ ಅಭ್ಯಾಸದಂತೆ ಅಮ್ಮನ ಹತ್ತಿರ ಬಂದು.. ಹಾಗೆ ಒಮ್ಮೆ ಆಲಂಗಿಸಿಕೊಂಡು, ಅಮ್ಮನ ಕೆನ್ನೆಗೆ ಮುತ್ತು ಕೊಟ್ಟಳು, ಅಮ್ಮನೂ ಕೂಡ ತನ್ನ ಮುದ್ದಿನ ಮಗಳ ಸಂತಸವನ್ನು ಕಂಡು, ಒಮ್ಮೆ ಕೈಬೆರಳುಗಳಿಂದ ದೃಷ್ಟಿ ತೆಗೆದರು. ಲಟಲಟ ಎಂದು ಬೆರಳುಗಳು ಸದ್ದು ಮಾಡಿದ್ದನ್ನು ಕಂಡು "ಲೇ ವೀಣಾ ಏನೇ ಇದು ಈ ಪಾಟಿ ದೃಷ್ಟಿಯಾಗಿದೆ .. ಹೋಗು.. ಕಾಲು ಕೈ ತೊಳೆದು ಬೆಳವಾಡಿ ಗಣಪನಿಗೆ ಕೈಮುಗಿದು ಬಾ". 

"ಅಮ್ಮ ನನ್ನ ಮುದ್ದು ಅಮ್ಮ" ಎಂದು ಮತ್ತೊಮ್ಮೆ ಮುತ್ತು ಕೊಟ್ಟು..ಅಪ್ಪನಿಗೆ ಹೈ ಫೈವ್ ಹೊಡೆದು.. ತನ್ನ ಕೋಣೆಗೆ ಓಡಿದಳು.. ಅಮ್ಮ ಹೇಳಿದಂತೆ.. ಗಣಪನಿಗೆ ಕೈಮುಗಿದು ಬಂದು.. ಟಿವಿ ನೋಡುತ್ತಿದ್ದ ಅಪ್ಪ ಅಮ್ಮನ ಜೊತೆಯಲ್ಲಿ ಕೂತಳು..  

ಉದಯ ಮೂವೀಸ್ ನಲ್ಲಿ ಅಣ್ಣಾವ್ರ ಚಿತ್ರ "ಶಂಕರ್ ಗುರು" ಅಣ್ಣಾವ್ರು ಪದ್ಮಪ್ರಿಯಾಳನ್ನು ರೇಗಿಸುವ ದೃಶ್ಯ.. ಅಣ್ಣಾವ್ರ ಅಭಿನಯದಲ್ಲಿ ಮುಳುಗಿಹೋಗಿದ್ದಳು.. ಮತ್ತೆ ತನ್ನ ಮಾರನೇ ದಿನದ ಮುಖ್ಯ ಕಾರ್ಯ ನೆನಪಿಗೆ ಬಂದು.. ಅಮ್ಮ ಬೆಳಿಗ್ಗೆ ಸ್ವಲ್ಪ ತಡವಾಗಿ ವಾಕಿಂಗಿಗೆ ಹೋಗುತ್ತೇನೆ.. ನನ್ನನ್ನು ಬೇಗ ಎಬ್ಬಿಸಬೇಡ.. ಸರಿ ನಾ ಮಲಗುತ್ತೇನೆ ಎಂದು ಹೇಳಿ ಅಪ್ಪ ಅಮ್ಮನಿಗೆ ಒಂದೊಂದು ಮುತ್ತನ್ನು ನೀಡಿ-ಪಡೆದು ತನ್ನ ಕೋಣೆಗೆ ಜಿಂಕೆಯಂತೆ ಓಡಿದಳು. 

ನಿದ್ದೆ ಬರದೇ ಹೊರಳಾಡುತ್ತಲೇ ಇದ್ದಳು.. ಶಂಕರ್ ಗುರು ಚಿತ್ರದ "ಏನೇನೋ ಆಸೆ ನೀ ತ೦ದಾ ಭಾಷೆ ಇ೦ದು ಹೊಸತನ ತ೦ದು ತನು ಮನ ಕೂಗುತಿದೆ ಬಾ ಎ೦ದು ನಿನ್ನ" ಹಾಡು ಬೇಡವೆಂದರೂ ಮತ್ತೆ ಮತ್ತೆ ಬಂದು ಕಾಡುತ್ತಿತ್ತು.. 

"ಕರಾಗ್ರೇ ವಸತೇ ಲಕ್ಷ್ಮಿ... " ಮೊಬೈಲ್ ನಲ್ಲಿ ಇಟ್ಟಿದ್ದ ಅಲಾರಾಂ ಹೊಡೆದುಕೊಳ್ಳತೊಡಗಿತು.. ದಿಗ್ಗನೆ ಎದ್ದು.. ಮೋರೆ ತೊಳೆದು.. ಕೈಯಲ್ಲಿಯೇ ತಲೆಗೂದಲನ್ನು ಸರಿಮಾಡಿಕೊಂಡು.. ಅಮ್ಮ ಕಾಫಿ ಕುಡಿದು ಹೋಗು ವೀಣಾ ಎಂದಿದ್ದನ್ನು ಕೇಳಿಸಿಕೊಳ್ಳದೆ ಪಾರ್ಕ್ ಕಡೆಗೆ ಚಿಗರೆಯಂತೆ ಓಡಿದಳು.. 

ಇಂದು ವಾಕಿಂಗ್ ಮಾಡುವ ಮೂಡ್ ಇರಲಿಲ್ಲ.. ಅಕಸ್ಮಾತ್ ತಾನು ಅವನನ್ನು ನೋಡದೆ ಹೋದರೆ.. ಅಥವಾ ಅವ ಇಂದು ಬರದೇ ಹೋದರೆ.. ಅಥವಾ ಅವನು ನನ್ನ ತರಹ ಸಮಯ ಬದಲಿಸಿಕೊಂಡಿದ್ದರೇ.. ಹೀಗೆ ರೇ... ಪ್ರಪಂಚದಲ್ಲಿಯೇ ನೀರಿಗೆ ಬಿದ್ದ ಮಂಜುಗಲ್ಲಿನಂತೆ ಮುಳುಗದೇ.. ತೇಲದೇ ಒದ್ದಾಡುತ್ತಿದ್ದಳು.. ನಿಧಾನವಾಗಿ ಮೈಯೆಲ್ಲಾ ಕಣ್ಣಾಗಿ ಮಕ್ಕಳು ಹೆಜ್ಜೆ ಇಡುವಂತೆ ತನ್ನ ವಾಕಿಂಗ್ ಶುರುಮಾಡಿದಳು... ಅವನು ಬರುವ ಸಮಯವಾಯಿತು.. ಕಣ್ಣುಗಳು ದುರ್ಬಿನುಗಳಾಗಿದ್ದವು.. 
ಐದು ಸುತ್ತಾಯಿತು.. ಹತ್ತು ಸುತ್ತಾಯಿತು.. ಉಹೂಂ.. ಅವನ ಸುಳಿವಿಲ್ಲ.. ಎಂದಿಗಿಂತ ಇನ್ನೂ ಹತ್ತು ರೌಂಡ್ ಹೆಚ್ಚಿಗೆ ಹಾಕಿದಳು.. ಅವನು ಆಫೀಸಿಗೆ ಹೋಗುವ ಸಮಯ ಮೀರಿತ್ತು ಅನ್ನಿಸಿತು.. ಬೇಸರದಿಂದ ಮನೆ ಕಡೆಗೆ ಹೆಜ್ಜೆ ಹಾಕಿದಳು.. ಅವಳು ಮನೆಯ ಕಡೆ ತಿರುಗಬೇಕು.. ಯಾವುದೋ ಒಂದು ಅದೃಶ್ಯ ಶಕ್ತಿ ಅವಳನ್ನು ಬಲವಂತವಾಗಿ ತಿರುಗಿ ನೋಡುವಂತೆ ಮಾಡಿತು.. ಗರ್ ಅಂತ ಹಾಗೆ ತಲೆ ತಿರುಗಿಸಿನೋಡಿದಳು.. ಅರೆ ಚಿರಪರಿಚಿತ ತನ್ನ ಇಷ್ಟದ ಬಿಳಿ ಶರ್ಟ್..! 

ಆವನು ಒಂದು ತುಸು ತಡವಾಗಿ ಹೊರಟಿದ್ದ ಅನ್ನಿಸುತ್ತದೆ.. ವೀಣಾ ತನ್ನ ತಲೆಯನ್ನು ತಾನೇ ಬಡಿದುಕೊಂಡು.. ಛೆ ಇನ್ನೊಂದು ರೌಂಡ್ ಹೊಡೆದಿದ್ದರೆ ಸಿಕ್ಕಿಯೇ ಬಿಡುತ್ತಿದ್ದ ಅನ್ನಿಸಿತು. ತನ್ನ ಮನೆಯ ಗೇಟ್ ಹತ್ತಿರ ಬಂದು.. ಒಳಗೆ ಹೋಗದೆ ಗೇಟನ್ನು ಹಿಡಿದು.. ಯೋಚಿಸತೊಡಗಿದಳು.. "ಅವನ ಬಣ್ಣ ತುಸು ಕಪ್ಪು.. ಆದರೆ ರೇಷ್ಮೆಯಂತಹ ಅವನ ತಲೆಗೂದಲು .. ಭಕ್ತಿ ಭಾವ ತುಸು ಹೆಚ್ಚು ಎನ್ನಿಸುವ ಅವನ ಹಣೆಯಲ್ಲಿನ ಕುಂಕುಮ, ಕೈಗೆ ಬೆಳ್ಳಿಯ ಬಳೆ.. ಬಲಗೈಗೆ ವಾಚು.. ಒಂದು ರೀತಿಯಲ್ಲಿ ಸಾಧಾರಣ ಎನಿಸಿದರೂ, ಇನ್ನೊಮ್ಮೆ ನೋಡಬೇಕು ಎಂದು ಅವಳಲ್ಲಿ ಆಸೆ ಹುಟ್ಟಿಸುತ್ತಿತ್ತು.. ಮುಂಚೆ ಪ್ರತಿದಿನವೂ ಅವನನ್ನು ನೋಡುತಿದ್ದಾಗ, ಅವನ ವಸ್ತ್ರ ವಿನ್ಯಾಸ, ಅಭಿರುಚಿ ಇಷ್ಟವಾಗುತ್ತಿತ್ತು.. ಅವಳ ಸೂಕ್ಷಮತಿ ಅವನ ಡ್ರೆಸ್ ಕೋಡ್ ಬಗ್ಗೆ ತುಸು ನಿಖರವಾದ ಅಭಿಪ್ರಾಯಕ್ಕೆ ಬಂದಿದ್ದಳು. ಅವನದು ವಾರದ ದಿನಕ್ಕೆ ತಕ್ಕಂತೆ ಒಂದು ರೀತಿಯಲ್ಲಿ ಬಣ್ಣ ಬಣ್ಣದ ವಸ್ತ್ರಗಳನ್ನು ಹಾಕಿಕೊಳ್ಳುತ್ತಿದ್ದ. ಸೋಮವಾರ ನೀಲಿ, ಮಂಗಳವಾರ ತುಸು ಕಡುನೀಲಿ, ಬುಧವಾರ ಪಿಂಕ್, ಗುರುವಾರ ಕ್ರೀಮ್, ಶುಕ್ರವಾರ ಬಿಳಿ ಶರ್ಟ್ ಮತ್ತು  ಕಡು ನೀಲಿ ಜೀನ್ಸ್.. ಕೃಷ್ಣಕಾಂತನಿಗೆ ಬಿಳಿ ಶರ್ಟ್ ಮತ್ತು ಕಡು ನೀಲಿ ಜೀನ್ಸ್ ಎಂದರೆ ಪ್ರಾಣ ಎಂದು ಅವಳಿಗೆ ಅನ್ನಿಸುತಿತ್ತು. .. ಅವಳಿಗೆ ಗೊತ್ತಿತ್ತು ಈ ಕಾಂಬಿನೇಶನ್ ಚೆನ್ನಾಗಿ ಒಪ್ಪುತ್ತದೆ ಎಂದು.. ಹಾಗಾಗಿ ಸಾಮಾನ್ಯ ಶುಕ್ರವಾರದಂದು ಆ ಕಾಂಬಿನೇಶನಿಗೆ ಮೊರೆ ಹೋಗುತ್ತಿದ್ದ ಎಂಬುದು ಅವಳ ಗಮನಿಸುವಿಕೆಯ ಮೂಲಕ ಅರಿವಾಗಿತ್ತು. .. ಅರಿವಿಲ್ಲದ ಅವನ ಈ ಅಭ್ಯಾಸ ವೀಣಾಳಿಗೆ ಇಷ್ಟವಾಗಿತ್ತು. 

"ಅಯ್ಯೋ ಒಂದು ದಿನ ಅನ್ಯಾಯವಾಗಿ ಮಿಸ್ ಮಾಡಿಕೊಂಡೆ.. ನಾಳೆ ತುಸು ಬೇಗನೆ ಹೋಗಿ ಪಾರ್ಕ್ ನಲ್ಲಿ ಕಾಯುತ್ತೇನೆ.. ಆವ ಬರುವ ತನಕ ಪಾರ್ಕಿನಿಂದ ಹೋಗುವುದು ಬೇಡ" ಎಂದು ವೀರ ಭೀಷ್ಮ ಶಪಥ ಮಾಡಿ.. ತನ್ನ ನಿತ್ಯ ಕಾಯಕಕ್ಕೆ ತೊಡಗಿಕೊಂಡಳು.. 

ರೇವಂತ್ ಗೆ ಮೆಸೇಜ್ ಮಾಡುವುದು ಮರೆಯಲಿಲ್ಲ 

"ರೇವ್.. ಜಸ್ಟ್ ಮಿಸ್ ಆಯ್ತು ಕಣೋ.. ನಾಳೆ ಬೆಳಿಗ್ಗೆ ಖಂಡಿತಾ ಮೀಟ್ ಮಾಡುತ್ತೇನೆ.. :-) "
ಆ ಕಡೆಯಿಂದ "ಮುದ್ದು ಮೈ ಲವ್.. ಆಲ್ ದಿ ಬೆಸ್ಟ್ ಕಣೋ"..  
"ಥ್ಯಾಂಕ್ ಯು ರೇವ್.. ಹ್ಯಾವ್ ಏ ಗುಡ್ ಡೇ"
"ಯೂ ಟೂ ಮೈ ಲವ್ :-)" 

ನಿರಾಳವಾಗಿ ತನ್ನ ಕೆಲಸ ಮುಗಿಸಿ... ಮಧ್ಯಾಹ್ನ ಒಂದು ಪುಟ್ಟ ನಿದ್ದೆ ಮುಗಿಸಿ.. ಸಂಜೆ ದೇವರಮನೆಯಲ್ಲಿ ದೀಪ ಹಚ್ಚಿ.. ಮನೆಯ ಹತ್ತಿರವೇ ಇದ್ದ ಹನುಮನ ಗುಡಿಗೆ ಹೋಗಿ ಬಂದಳು.. ಮನಸ್ಸು ಅರಿವಿಲ್ಲದೆ ಒಂದು  ರೀತಿಯ ಸುಖದ ನಶೆಯಲ್ಲಿ ತೇಲಾಡುತ್ತಿತ್ತು.. 

ಸಂಜೆಯಿಂದ ರಾತ್ರಿಯಾಯಿತು.. ರಾತ್ರಿಯಿಂದ ಬೆಳಗಾಯಿತು.. ತಾನು ಕಾಯುತ್ತಿದ್ದ ಆ ಸವಿ ಘಳಿಗೆ ಇನ್ನೇನೂ ಹತ್ತಿರದಲ್ಲಿಯೇ ಇತ್ತು...  ಪ್ರತಿದಿನಕ್ಕಿಂತಲೂ ತುಸು ಬೇಗನೆ ಪಾರ್ಕ್ ಒಳಗೆ ಹೋಗಿ.. ಅವನು ಬರುವ ಹಾದಿ ಕಾಣುವಂತೆ ಒಂದು ಕಲ್ಲು ಬೆಂಚಿನ ಮೇಲೆ ಕೂತಳು.. 

ಅವನು ಬಂದಾಗ ಹೇಗೆ ಮಾತಾಡುವುದು.. ಏನು ಮಾತಾಡುವುದು.. ಈ ಪಾರ್ಕಿನಲ್ಲಿ ಎಲ್ಲರೂ ಚಿರಪರಿಚಿತರು.. ಅವರ ಮುಂದೆ ಈ ಹುಡುಗನ ಹತ್ತಿರ ಮಾತಾಡಿದರೆ ಹೇಗೆ ಇರುತ್ತದೆ.. ನೂರಾರು ಯೋಚನೆಗಳು ಬೆಂಗಳೂರಿನ ಏರ್ ಪೋರ್ಟ್ ರಸ್ತೆಯ ಮೇಲಿನ ವಾಹನ ದಟ್ಟಣೆಯಂತೆ ಅವಳ ಮನದ ಪಟಲದಲ್ಲಿ ದಟ್ಟೈಸುತ್ತಿತ್ತು.. 

"ಏನೇ ವೀಣಾ.. ಸುತ್ತು ಹೊಡೆಯೋದು ಬಿಟ್ಟು. .ಸುಸ್ತಾಗಿ ಕೂತುಬಿಟ್ಟಿದ್ದೀಯ.. ಯಾಕೆ ಮೈಗೆ ಹುಷಾರಿಲ್ಲವೇ.. ಈ ಚಳಿಗೆ ಯಾಕೆ ಬರುತ್ತೀಯ.. ಹೋಗು ಮನೆಗೆ ಹೋಗಿ ಬೆಚ್ಚನೆ ಮಲಗಿಕೊ" ಪಕ್ಕದ ಮನೆಯ ವನಜ ಆಂಟಿ ಕೂಗಿದಾಗ ಮತ್ತೆ ವಾಸ್ತವಕ್ಕೆ ಬಂದಳು ವೀಣಾ. 

"ಇಲ್ಲ ಆಂಟಿ.. ಹಾಗೆ ಕೂತು ಜಪ ಮಾಡುತ್ತಿದ್ದೇನೆ.. ನಾ ಆರಾಮಾಗಿದ್ದೀನಿ.. ನೀವು ಯೋಚನೆ ಮಾಡಬೇಡಿ.. ಒಂದು ಹತ್ತು ನಿಮಿಷ ಜಪ ಮುಗಿಸಿ ಬರುತ್ತೇನೆ.. "

"ಮುದ್ದು ವೀಣಾ.. " ಆಂಟಿ ಹತ್ತಿರ ಬಂದು.. ವೀಣಾಳ ಕೆನ್ನೆಯನ್ನು ಸವರಿ ಮುಂದಕ್ಕೆ ಹೋದರು. 

ಈ ಕಡೆ ಇದರ ಯಾವುದೇ ಸುಳಿವಿಲ್ಲದ  ಕೃಷ್ಣಕಾಂತ್ ಪ್ರತಿದಿನದಂತೆ, ನಿತ್ಯ ಕರ್ಮ ಮುಗಿಸಿ.. ಆಫೀಸ್ ಕ್ಯಾಬ್ ಕಡೆ ಹೆಜ್ಜೆ ಹಾಕುತ್ತಿದ್ದ.. ತಾನು ಕಿವಿಗೆ ಹಾಕಿಕೊಂಡಿದ್ದ ಹ್ಯಾಂಡ್ಸ್ ಫ್ರೀ ನಲ್ಲಿ ಹಾಡು ಬರುತ್ತಿತ್ತು.. ಅಣ್ಣಾವ್ರ ಪರಮ ಅಭಿಮಾನಿಯಾಗಿದ್ದ ಅವನಿಗೆ ಅವರ ಹಾಡುಗಳು ಬಂದರೆ ಏಕ್ ದಂ ಮಂಜಿನ ಹನಿಗಳಿಂದ ಮೋರೆ ತೊಳೆದುಕೊಂಡ ಉದ್ಯಾನವನದ ಗರಿಕೆಯಂತಾಗಿಬಿಡುತ್ತಿದ್ದ.. 

"ಹೃದಯದಲಿ ಇದೇನಿದು.. ನದಿಯೊಂದು ಓಡಿದೆ" ಮನಸ್ಸು ಹಕ್ಕಿಯ ಹಾಗೆ ಹಾರುತಿತ್ತು.. ಅಣ್ಣಾವ್ರ ಚಿತ್ರಗಳು, ಹಾಡುಗಳು, ಸಂಭಾಷಣೆಗಳ ಶಕ್ತಿ ಇದೇ ಅಲ್ಲವೇ.. 

"ಸರ್ ಒಂದು ನಿಮಿಷ"  ಎಫ್ ಎಂ ಹಾಡು ಬದಲಾಗಿತ್ತು.. "ಕೋಗಿಲೆ ಹಾಡಿದೆ ಕೇಳಿದೆಯಾ" ಧ್ವನಿ ಬಂದ ಕಡೆ ತಿರುಗಿದ.. ಹೃದಯದ ಬಡಿತ "ಒಂದು ಕ್ಷಣ ಇರೋ ಈಗ ಬಂದೆ" ಎನ್ನುವ ಹಾಗೆ ಧಡಕ್ ಅಂತ ನಿಂತು ಮತ್ತೆ ಹೊಡೆದುಕೊಳ್ಳತೊಡಗಿತು.. 

ತನ್ನ ಕಣ್ಣನ್ನೇ ತಾ ನಂಬದಾದ.. ತಾನು ಇಷ್ಟಪಡುವ, ಮನದಲ್ಲಿಯೇ ಆರಾಧಿಸುವ, ಯಾವುದೇ ನಿಷ್ಕಲ್ಮಶ ಭಾವ ಇಲ್ಲದ ಗೆಳತಿ ತನ್ನ ಕಣ್ಣ ಮುಂದೆ.. ಹಾಗೆ ಒಮ್ಮೆ ನೋಡಿದ.. 

ಘಟ್ಟ ಪ್ರದೇಶದ ಅಂಕು ಡೊಂಕಿನ ರಸ್ತೆಯಂತಿದ್ದ ಆಕೆಯ ಬೈತಲೆ.. ಇಳಿ ಬಿದ್ದಿದ್ದ ನೀಳಗೂದಲು.. ಮಕ್ಕಳಿಗೆ ಕೂಕ್ ಕೂಕ್ ಎಂದು ಕಣ್ಣಾ ಮುಚ್ಚಾಲೆ ಆಡುವಂತೆ, ಬೆಳಗಿನ ತಂಗಾಳಿಗೆ  ಸೊಂಟದ ಬದಿಯಿಂದ ಇಣುಕುತ್ತಿತ್ತು.. ಚಳಿಗೆ ಧರಿಸಿದ್ದ ತುಂಬು ತೋಳಿನ ಸ್ವೆಟರ್ .. ಮುಖ ನೋಡಲು ಧೈರ್ಯ ಬರುತ್ತಿಲ್ಲ.. 

"ಸರ್ ಸರ್ ಒಂದು ನಿಮಿಷ" ಮತ್ತೆ ಕೋಗಿಲೆ ಧ್ವನಿ.. 

ಧರೆಗಿಳಿದು ಬಂದ ಕೃಷ್ಣಕಾಂತ್.. 

ಹಾಗೆ ಆಕೆಯ ಮೊಗವನ್ನು ದಿಟ್ಟಿಸಿ ನೋಡಿದ.. ಅದ್ಭುತವಾದ ಹೊಳೆಯುವ ಕಂಗಳು.. ಸೂಪರ್ ಮೂನನ್ನು ನಾಚಿಸುತಿತ್ತು... ಸುಂದರವಾಗಿ ತಿದ್ದಿ ತೀಡಿದಂತಹ ತುಸು ತೆಳುವಾದ ಹುಬ್ಬುಗಳು, ಆ ಕಣ್ಣುಗಳಿಗೆ ಬಾಲಕ ಕೃಷ್ಣ ಗೋವರ್ಧನಗಿರಿಯನ್ನು ಎತ್ತಿ ಹಿಡಿದು ಊರ ಜನರಿಗೆ ರಕ್ಷಣೆ ಮಾಡಿದಂತೆ ಇತ್ತು.  ಆ ಹೊಳೆಯುವ ಕಂಗಳಿಗೆ ಸವಾಲು ಎನ್ನುವಂತೆ, ಆಕೆಯ ಮುದ್ದಾದ ಮೂಗಿಗೆ ಸರಿಯಾಗಿ ಅಲಂಕರಿಸಿಕೊಂಡಿತ್ತು ಫಳ ಫಳ ಹೊಳೆಯುವ ಮೂಗುತಿ.  ತುಟಿಯ ಮೇಲೆ ಸದಾ ಜಿನುಗುತ್ತಿದ್ದ ತಾ ಇಷ್ಟಪಡುವ ಮಂದಹಾಸ "ಕೃಷ್ಣಕಾಂತ್ ನೀ ಬಂದೆ.. ನನ್ನ ಮಂದಹಾಸಕ್ಕೆ ಒಂದು ನೂರು ಗ್ರಾಂ ತೂಕ ಜಾಸ್ತಿ ಬಂತು" ಎನ್ನುವಂತಿತ್ತು. 
ಚಿತ್ರಕೃಪೆ : ಗೂಗಲ್ ನೋಟದಲ್ಲಿ ಸಿಕ್ಕಿದ್ದು 

"ಸರ್ ನಿಮ್ಮ ಹತ್ತಿರ ಸ್ವಲ್ಪ ಮಾತಾಡಬೇಕಿತ್ತು"

ಜೋರಾಗಿ ಎದೆಯೊಳಗೆ ನಗಾರಿ ಬಾರಿಸುತ್ತಿತ್ತು.. ಇವೆಲ್ಲವೂ ಕೆಲವೇ ಕ್ಷಣಗಳಲ್ಲಿ ನೆಡೆದರೂ, ಯಾಕೋ ಅರಿವಿಲ್ಲದೆ ಕೃಷ್ಣಕಾಂತನಿಗೆ ಯುಗ ಯುಗದಿಂದ ಅಲ್ಲೇ ನಿಂತಿದ್ದೇನೆ ಎನ್ನುವಂತಿತ್ತು. ಮೊಬೈಲ್ ಹೊಡೆದುಕೊಳ್ಳುತ್ತಿತ್ತು, ಅದಕ್ಕೆ ಸವಾಲ್ ಎನ್ನುವಂತೆ ಅವನ ಹೃದಯದ ಬಡಿತವೂ ಕೂಡ !!!

"ಮೇಡಂ.. ನೀವು... ನನ್ನನ್ನು.. ಆಹಾ.. ಏನು ಸಮಾಚಾರ.. ಹೇಳಿ.. "

"ಸರ್.. ಇಂದು ಸಂಜೆ ಏಳು ಘಂಟೆಗೆ ನೀವು  ಇಲ್ಲಿಯೇ ಸಿಗಬಹುದೇ.. ನಿಮ್ಮ ಬಳಿ ಮಾತಾಡುವುದಿದೆ" ಇವನ ಉತ್ತರಕ್ಕೆ ಕಾಯದೆ ಹಾಗೆ ಅವನನ್ನು ಬಳಸಿ ಮುಂದೆ ಹೋಗಿ ಒಮ್ಮೆ ತಿರುಗಿ ಅವಳ ಹೊಳೆಯುವ ಕಂಗಳನ್ನು ಒಮ್ಮೆ ಮಿಟುಕಿಸಿ ಹೊರಟೆ ಬಿಟ್ಟಳು.. 

ಜೀವ ಡಗ್ ಎಂದಿತು.. ಅಚಾನಕ್ ಅವಳು ಬಂದು ನಿಂತದ್ದು.. ಮಾತಾಡಿದ್ದು.. ಈಗ ಸಂಜೆ ಇಲ್ಲಿಯೇ ಸಿಗೋಣ ಎಂದಿದ್ದು..ಎಲ್ಲವೂ ಯಾವುದೋ ಯಕ್ಷ ಲೋಕದ ಯಕ್ಷಿಣಿ ಎನ್ನುವಂತಿತ್ತು.. 

ಕೈಯಲ್ಲಿದ್ದ ಮೊಬೈಲ್ ಮತ್ತೆ ಕೂಗತೊಡಗಿತು.. "ಬಂದೆ ಬಂದೆ ಒಂದೆರಡು ನಿಮಿಷ" ಎಂದು ಹೇಳಿ ದಪ ದಪ ಕಾಲು ಹಾಕುತ್ತಾ .. ತನ್ನ ಕ್ಯಾಬ್ ಕಡೆಗೆ ಹೊರಟ ಕೃಷ್ಣಕಾಂತ್ ... 

ಆಹ್.. ಮನಸು ಉಯ್ಯಾಲೆಯಂತೆ ತೂಗಾಡತೊಡಗಿತ್ತು .. ಮೊಬೈಲ್ ನ ಸೌಂಡನ್ನು ಜಾಸ್ತಿ ಮಾಡಿದ.. "ನಿನ್ನ ರೂಪು ಎದೆಯ ಕಲಕಿ ಕಣ್ಣು ಮಿಂದಾಗ.. ನಿನ್ನ ನೋಟ ಕೂಡಿದಾಗ ಕಂಡೆ ಅನುರಾಗ" ಈ ಹಾಡು ಪ್ರೇಮಮಯವಾಗಿದ್ದರೂ.. ತನ್ನ ಕಲ್ಮಶವಿಲ್ಲದ ಗೆಳೆತನಕ್ಕೆ ಒಂದು ಸುಂದರ ಆತ್ಮೀಯತೆಯ ರಂಗು ಕೊಟ್ಟಿತ್ತು. 

ಆಫೀಸ್ ನಲ್ಲಿ ಕೃಷ್ಣಕಾಂತ್ ಗೆ ಹೊತ್ತೇ ಹೋಗುತ್ತಿಲ್ಲ.. "ಆ ಮೋಡ ಬಾನಲ್ಲಿ ತೇಲಾಡುತ್ತಾ.. ನಿನಗಾಗಿ ನಾ ಬಂದೆ ನೋಡೆನ್ನುತಾ.. ನಲ್ಲೆ ನಿನ್ನ ಸಂದೇಶವಾ ನನಗೆ ಹೇಳಿದೆ" ಹೀಗೆ ಮನಸ್ಸು ಹಕ್ಕಿಯ ರೂಪ ಪಡೆದುಕೊಂಡು ಗರಿಬಿಚ್ಚಿ ಹಾರತೊಡಗಿತು. ವೀಣಾಳನ್ನು ಹತ್ತಿರದಿಂದ ನೋಡಿದ್ದು, ಅವಳ ಜೇನುಧ್ವನಿಯನ್ನು ಕೇಳಿದ್ದು, ಅವಳು ಹೋಗುವಾಗ ಕಣ್ಣು ಮಿಟುಕಿಸಿ ನಕ್ಕಿದ್ದು.. ಒಂದು ಹೇಳಿಕೊಳ್ಳಲಾಗದ ಅನುಭವ ನೀಡಿತ್ತು.. ಉತ್ಸಾಹದಿಂದ ಕೆಲಸಗಳು ಸಲೀಸಾಗಿ ಮುಗಿಯುತ್ತಿದ್ದವು, ಆದರೆ ಅವನ ಬಲಗೈಗೆ ಕಟ್ಟಿದ್ದ ಕೈಗಡಿಯಾರ ಮಾತ್ರ ಮುಷ್ಕರ ಹೂಡಿ ಕುಳಿತಿರುವಂತೆ ಭಾಸವಾಗುತ್ತಿತ್ತು.. ಎಷ್ಟೋ ಬಾರಿ ನಿಂತು ಹೋಗಿದೆಯೇ ಎಂದು ಕಿವಿಗೆ ಆನಿಸಿಕೊಂಡು, ಮೊಬೈಲ್ ನಲ್ಲಿ ಸಮಯ ನೋಡಿಕೊಳ್ಳುತ್ತಲೇ, ಆಫೀಸ್ ನಲ್ಲಿ ಇದ್ದ ಗಡಿಯಾರ, ತನ್ನ ಲ್ಯಾಪ್ಟಾಪ್ನ ಸಮಯದ ಗೆರೆ... ಹೀಗೆ... ತನ್ನ ನಿರಪರಾಧಿ ಕಕ್ಷಿದಾರನನ್ನು ಉಳಿಸಲು ವಕೀಲರು ತಮ್ಮ ಜ್ಞಾನವನ್ನು ಪಣಕ್ಕಿಟ್ಟು ಹೋರಾಡುವಂತೆ,  ಎಲ್ಲಾ ರೀತಿಯಲ್ಲಿಯೂ ಎಲ್ಲವೂ ಸರಿಯಾಗಿದೆ ಎನ್ನುವುದನ್ನು ಖಾತ್ರಿ ಪಡಿಸಿಕೊಳ್ಳುತ್ತಿದ್ದ.  

ಆದರೆ ಅವನಿಗೆ ಆ ಕಡೆ ವೀಣಾಳ ಮನದಲ್ಲಿ ತರಂಗಗಳು ಏಳುತ್ತಿದ್ದ ಪರಿಯ ಬಗ್ಗೆ ಅರಿವಿರಲಿಲ್ಲ.. !

ಅತ್ತ ಕಡೆ ವೀಣಾ.. ಇತ್ತ ಕಡೆ ಕೃಷ್ಣಕಾಂತ್.. ವಸುಂಧರೆಯ ಮನೆಯಲ್ಲಿನ ಶಂಖ ಏಳು ಬಾರಿಗೆ ಹೊಡೆದುಕೊಳ್ಳುವುದಕ್ಕೆ ಕಾಯುತ್ತಿದ್ದರು.. 

ಕೃಷ್ಣಕಾಂತ್ ಆಫೀಸಿಂದ ಮನೆಗೆ ಬರುವ ಸಮಯ.. ಆಫೀಸಿಂದ ಕ್ಯಾಬ್ ಹತ್ತುವಾಗ ಸ್ವಲ್ಪ ಮಟ್ಟಿಗೆ ಸಿಂಗರಿಸಿಕೊಂಡೆ ಬಂದಿದ್ದ.. ಬಲವಂತವಾಗಿ ಬರುತ್ತಿದ್ದ ನಿದ್ದೆಯನ್ನು ತಡೆದುಹಿಡಿದಿದ್ದ.. ತನ್ನ ನೆಚ್ಚಿನ ಪೂರ್ಣ ಚಂದ್ರ ತೇಜಸ್ವಿ ಬರೆದಿದ್ದ ಜುಗಾರಿ ಕ್ರಾಸ್ ಕಥೆ ಓದುತ್ತಿದ್ದ. ಅವನಿಗೆ ಅರಿವಿರಲಿಲ್ಲ ಇಂದಿನ ಘಟನೆ ಕೂಡ ಜುಗಾರಿ ಕ್ರಾಸ್ ಕತೆಯ ತರಹ ರೋಮಾಂಚಕವಾಗಿದೆ ಎಂದು
೬.೫೧... ೬.೫೨... ೬.೫೩.. ೬.೫೪... ೬.೫೫.. ೬.೫೬.. ೬.೫೭.. ೬.೫೮.. ೬.೫೯.. ೭.೦೦

ಪಾರ್ಕ್ ಹತ್ತಿರ ಕೃಷ್ಣಕಾಂತ್.. ಬೆಳಿಗ್ಗೆ ವೀಣಾ ನಿಂತು ಮಾತಾಡಿಸಿದ ಜಾಗದಲ್ಲಿಯೇ ನಿಂತಿದ್ದ.. 
"ಫಿರ್ ಫಿರ್" ಎಂದು ಸದ್ದು ಮಾಡುತ್ತಾ.. ಬಿಳಿ ಹೋಂಡಾ ಆಕ್ಟಿವಾ ಬಂದು ನಿಂತಿತು.. ಬೆಳದಿಂಗಳ ಬಾಲೆಯ ಹಾಗೆ ಬಿಳಿ ಚೂಡಿದಾರ್ ನಲ್ಲಿ ಈಕೆ ಇನ್ನೂ ಹೊಳೆಯುತ್ತಿದ್ದಳು.. ಬೇಡ ಬೇಡವೆಂದರೂ.. ಆ ರಸ್ತೆಯಲ್ಲಿನ ಬೀದಿ ದೀಪದ ಬೆಳಕು ಅವಳ ಮೂಗುತಿಯನ್ನು ಕನ್ಯಾಕುಮಾರಿ ದೇವಸ್ಥಾನದಲ್ಲಿನ ಹೊಳೆಯುವ ಮೂಗುತಿಯ ತರಹ ಫಳ ಫಳ ಬೆಳಗಿಸುತಿತ್ತು .. 

"ಸರ್.. ನಾಳೆ.... ನ್ಯೂ ಶಾಂತಿ ಸಾಗರ್ ಹೋಟೆಲ್ ಹತ್ತಿರ ಬನ್ನಿ.. ನಿಮ್ಮ ಬಳಿ ಮಾತಾಡುವುದಿದೆ.. ನೀವು ನನ್ನ ಅದ್ಭುತ ಗೆಳೆಯರಲ್ಲಿ ಒಬ್ಬರು.. ದಯಮಾಡಿ ಬನ್ನಿ.. ನಾ ನಿಮಗಾಗಿ ಅಲ್ಲಿಯೇ ಕಾದಿರುತ್ತೇನೆ.. ನೀವು ನೀಲಿ ಜೀನ್ಸ್ ಮತ್ತು ಬಿಳಿ ಶರ್ಟ್ ತೊಟ್ಟು ಬನ್ನಿ ಪ್ಲೀಸ್.. ಓಕೆ ಬೈ" ಎಂದು ಮತ್ತೊಮ್ಮೆ ಕಣ್ಣು ಮಿಟುಕಿಸಿ ತನ್ನ ಗಾಡಿಯನ್ನು ಏರಿ ಹೋಗಿಯೇ ಬಿಟ್ಟಳು. 

ಕೃಷ್ಣಕಾಂತನಿಗೆ ಅರೆ ಏನಿದು ಎನ್ನುವ ಗೊಂದಲವಿದ್ದರೂ.. ವೀಣಾ ಬಂದು ಮಾತಾಡಿಸಿದ್ದು ಖುಷಿಯಾಗಿತ್ತು.. ಕಿವಿಗೆ ಸಿಕ್ಕಿಸಿಕೊಂಡಿದ್ದ ಹ್ಯಾಂಡ್ಸ್ ಫ್ರೀ "ಬೊಂಬೆಯಾಟವಯ್ಯ ಇದು ಬೊಂಬೆಯಾಟವಯ್ಯ.. ನೀ ಸೂತ್ರಧಾರಿ.. ನಾ ಪಾತ್ರಧಾರಿ.. ದಡವ ಸೇರಿಸಯ್ಯಾ" ಅಣ್ಣಾವ್ರ ಹಾಡು ಕೇಳಿಸುತ್ತಿತ್ತು.. .. 

ಮನಸ್ಸು ನಾಳಿನ ದಿನಕ್ಕೆ ಕಾಯುತ್ತಿತ್ತು... 

"ಈ ಸಮಯ ಆನಂದಮಯ ನೂತನ ಬಾಳಿನ ಶುಭೋದಯ"  ಬಭೃವಾಹನದ ಅಣ್ಣಾವ್ರ ಗಾನ ಅಲ್ಲಿಯೇ ಇದ್ದ ಬೇಕರಿಯಿಂದ ಕೇಳಿ ಬರುತ್ತಿತ್ತು.. !

Friday, November 18, 2016

ಕಣ್ಣಂಚಿನ ನೋಟ.....ಈ ಕಡೆ ದೃಶ್ಯ!

ಕಣ್ಣಂಚಿನ ನೋಟ - ಆ ಕಡೆ ದೃಶ್ಯ

ಕನ್ನಡಿ ಮುಂದೆ ನಿಂತ ವೀಣಾ, ತನ್ನ ಸಾಧಾರಣ ಎನ್ನಿಸುವ ರೂಪವನ್ನೊಮ್ಮೆ ನೋಡಿಕೊಂಡಳು. ತನ್ನ ನೀಳಕೇಶ ರಾಶಿಯನ್ನೊಮ್ಮೆ ಸರಿ ಮಾಡಿಕೊಂಡಳು, ನಿದ್ದೆ ಮಾಡಿ ಎದ್ದದ್ದರಿಂದ, ತಲೆಗೂದಲು ಗಾಳಿಗೆ ಸಿಕ್ಕ ಹುಲ್ಲುಗಾವಲಾಗಿತ್ತು. ಒಮ್ಮೆ ಹಾಗೆ ಕೈಯಲ್ಲಿಯೇ, ಮಕ್ಕಳು ಸ್ಲೇಟನ್ನು ತಮ್ಮ ಅಂಗೈಯಲ್ಲಿ ಮನಸ್ಸಿಗೆ ಬಂದಂತೆ ಒರೆಸುವಂತೆ, ಸರಿ ಮಾಡಿಕೊಂಡು ಮನೆಯ ಹತ್ತಿರವೇ ಇದ್ದ ಪಾರ್ಕ ಕಡೆಗೆ ಹೆಜ್ಜೆ ಇಟ್ಟಳು.

ಗೇಟ್ ಕಿರ್ರ್ ಎಂದು ಸದ್ದು ಮಾಡುತ್ತಾ ತೆರೆದುಕೊಂಡಿತು, ಗೇಟಿನ ಬಳಿಯೇ ಮಲಗಿದ್ದ ಬೀದಿ ನಾಯಿ ಒಮ್ಮೆ ಹಾಗೆ ವೀಣಾಳನ್ನು ನೋಡಿ ಹಲ್ಲು ಕಿಸಿದು ಬಾಲ ಅಲ್ಲಾಡಿಸಿತು. ಕೈಯಲ್ಲಿದ್ದ ಬಿಸ್ಕತ್ತನ್ನು ನಾಯಿಗೆ ಹಾಕಿ, ಒಮ್ಮೆ ತಲೆ ಸವರಿ ಹೊರಟಳು. ಎದುರು ಮನೆಯ ಆಂಟಿ, "ವೀಣಾ ಯಾಕೆ ಇವತ್ತು ಸ್ವಲ್ಪ ಲೇಟ್.."

"ಹೌದು ಆಂಟಿ ನಿನ್ನೆ ಬಂಗಾರದ ಮನುಷ್ಯ ಚಿತ್ರ ನೋಡ್ತಾ ಇದ್ದೆ,  ಎದ್ದಿದ್ದು ಲೇಟ್ ಆಯಿತು", ಆಂಟಿ ನಕ್ಕರು.

"ಒಂದೆರಡು ರೌಂಡ್ ಕಡಿಮೆ ಮಾಡಿದರೆ ಆಯ್ತು.. ಕೆಲಸಕ್ಕೆ ಹೋಗೋಕೆ ಸಮಯ ಅಡ್ಜಸ್ಟ್ ಆಗುತ್ತೆ ಅಲ್ವೇ ಆಂಟಿ"

"ವೀಣಾ.. ನೀನು ಉಪೇಂದ್ರಿ.... "

ಇಬ್ಬರೂ ಜೋರಾಗಿ ನಕ್ಕರು..

ಆಂಟಿ ನಿಧಾನವಾಗಿ ಹೆಜ್ಜೆ ಹಾಕುತ್ತಿದ್ದರು. ಇವಳಿಗೆ ಆತುರ, ಕಾತುರ, ತಳಮಳ.. ಆದರೆ ಆಂಟಿಗೆ ವಯಸ್ಸಾದ ಕಾರಣ, ಬೇಗನೆ ಹೆಜ್ಜೆ ಹಾಕಲು ಸಾಧ್ಯವಿರಲಿಲ್ಲ.

ಪಾರ್ಕಿಗೆ ಬಂದ ಕೂಡಲೇ, ಯಥಾಪ್ರಕಾರ, ಮೊದಲನೇ ಸುತ್ತು ಮಾತ್ರ ಇಬ್ಬರೂ ಜೊತೆಯಲ್ಲಿ ಸುತ್ತಿದರು, ನಂತರ, ಬೆಂಗಳೂರಿನ ಆಟೋ ತರಹ ವೇಗ ಪಡೆದುಕೊಂಡಳು ವೀಣಾ.  ಎರಡು ಕೈಯನ್ನು ಬೀಸುತ್ತಾ, ನೆಲ ನೋಡಿಕೊಂಡು ತನ್ನ ಪಾಡಿಗೆ ಹೆಜ್ಜೆ ಹಾಕತೊಡಗಿದಳು. ಮನಸ್ಸಲ್ಲಿ ಒಂದು ರೀತಿಯ ತಳಮಳ.. ಮನಸ್ಸು ಅರಿಯದೆ ಹಿಂದಿನ ದಿನದ ಸಂಜೆಗೆ ಓಡಿತು.

ಮರಗಿಡಗಳ ಮಧ್ಯೆ ತೂರಿ ಬರುತ್ತಿದ್ದ ಚಂದಿರನ ಬೆಳದಿಂಗಳು.. ಹಣ್ಣಿನ ಅಂಗಡಿ ಮುಂದೆ ಜನ. ಅದರ ಪಕ್ಕದಲ್ಲಿಯೇ ಇದ್ದ ಏಟಿಎಂ ಮುಂದೆ ನೂರಾರು ಮಂದಿ (ಕಾರಣ ಹೇಳಬೇಕಿಲ್ಲ ಅಲ್ಲವೇ.. ಎಲ್ಲರಿಗೂ ಗರಿ ಗರಿ ೨೦೦೦ ನೋಟನ್ನು ನೋಡುವ, ಮುಟ್ಟುವ ತವಕ.. ಖರ್ಚು ಮಾಡೋಕೆ ಅಲ್ಲ.. ನಮ್ಮೆಲ್ಲರ ಹೆಮ್ಮೆಯ ಪ್ರಧಾನಿ ಇತ್ತೀಚಿಗಷ್ಟೇ ಬೀಸುತ್ತಿರುವ ಒಂದು ಬದಲಾವಣೆಯ ಗಾಳಿಗೆ ಮೈಯೊಡ್ಡುವ ತವಕ...!), ಅವರು ನಿಲ್ಲಿಸಿದ್ದ ಗಾಡಿಗಳು, ಮಕ್ಕಳು ಆಟದ ಸಾಮಾನುಗಳನ್ನು ಎಲ್ಲೆಂದರಲ್ಲಿ ಬಿಸಾಕಿದ ರೀತಿ ಇತ್ತು..!

ಅಚಾನಕ್, ಒಂದು ಚಹರೆ ತನ್ನನ್ನು ಹಾದು ಹೋದಂತೆ ಅನುಭವ.  ಅರೆ ಅರೆ.. ಉಫ್.. ಓಹ್.. ಛೆ.. ಅನ್ನುವಷ್ಟರಲ್ಲಿ ಹಾಗೆ ಮುಂದಕ್ಕೆ ಹೋದರೆ, ಆಗಲೇ ಆ ವ್ಯಕ್ತಿ ಅಲ್ಲಿಯೇ ಅಡ್ಡ ಬಂದ ಗಾಡಿಯವನಿಗೆ ಸಾರಿ ಹೇಳುತ್ತಾ ನಿಂತಿದ್ದ. . ವೀಣಾ ಗಾಡಿಯನ್ನು ತೆಗೆಯುವಾಗ, ಪಕ್ಕದ ಗಾಡಿಗೆ ತಗುಲಿ, ಅದರ ಒಡತಿ ಆ ಮಂದ ಬೆಳಕಲ್ಲೂ ಕಣ್ಣನ್ನು ಕೆಂಪಗೆ ಮಾಡಿಕೊಂಡದ್ದು ಕಂಡು ಬಂತು. ಆಕೆಗೆ ಸಾರಿ ಹೇಳಿ, ಗಾಡಿ ತೆಗೆದುಕೊಂಡು ಹೊರಟ ವೀಣಾಳಿಗೆ ಮನದಲ್ಲಿಯೇ ಸಾಗರ ತರಂಗಗಳು. ಒಮ್ಮೆ ತಿರುಗಿ ನೋಡಿದಳು.. ಅದೇ ಚಹರೆ.. ಅನುಮಾನವೇ ಇಲ್ಲ.. ಮೊಗದಲ್ಲಿ ಮಂದಹಾಸ ಹಾಗೆ ಬಂದು ಹೋಯಿತು..

ನಿಲ್ಲಿಸಲೇ, ಬೇಡವೇ.. ಮಾತಾಡಲೇ, ಏನು ಅಂದುಕೊಳ್ಳುತ್ತಾರೋ ಏನೋ.. ಈ ತುಮುಲಗಳಲ್ಲಿಯೇ ಇದ್ದ ವೀಣಾ ಹಾಗೆ ಮುಂದಕ್ಕೆ ಬಂದುಬಿಟ್ಟಿದ್ದಳು. ಹಾಗೆ ತುಸು ತಿರುಗಿನೋಡಿದಳು..  ಆ ಚಂದ್ರನನ್ನು ನೋಡುತ್ತಾ.. ಏನೋ ಯೋಚನೆಯಲ್ಲಿಯೇ ನೆಡೆದುಹೋಗುತ್ತಿದ್ದ ವ್ಯಕ್ತಿಯ ಮೊಗವನ್ನು ನೋಡಿ.. ಇವನು ಆ ವ್ಯಕ್ತಿಯೇ ಎಂದು ಧೃಡ ಪಡಿಸಿಕೊಂಡಳು.

"ಹೇ ವೀಣಾ ಇದೇನೇ ಇವತ್ತು ಇಷ್ಟೊಂದು ಸುತ್ತು ಹೊಡಿತಿದ್ದೀಯಾ.. ಬರೋಲ್ವಾ ಮನೆಗೆ.. ನಿನ್ನ ಕ್ಯಾಬ್ ಬೇಗ ಬರುತ್ತೆ ಅಲ್ವಾ"

ಆ ವ್ಯಕ್ತಿಯ ಯೋಚನೆಯಲ್ಲಿಯೇ ಇದ್ದ ವೀಣಾಳಿಗೆ.. ಹಿಂದಿನ ದಿನದಿಂದ ಇಂದಿನ ದಿನದ ಬೆಳಿಗ್ಗೆಗೆ ಜರ್ ಅಂತ ಇಳಿದು ಬಂದಳು.

ಆಫೀಸ್ ಕ್ಯಾಬ್ ಹತ್ತಿದಾಗ.. ಕನ್ನಡ ಪ್ರೇಮಿ ಡ್ರೈವರ್ ಹಾಕಿದ್ದ ೯೨.೭ ಎಫ್ ಎಂ ನಲ್ಲಿ "ಈ ಹೃದಯ ಹಾಡಿದೆ ಆಸೆಗಳ ತಾಳದೆ ಹುಡುಕುತ ನಿನ್ನ ಕೂಗಿದೆ ಸುಮವೇ ನಿನಗಿನ್ನು ಕೇಳದೆ" ಆ ಹಾಡನ್ನು ಕೇಳುತ್ತಾ ಹಾಗೆ ಒಂದು ವರ್ಷದ ಹಿಂದಕ್ಕೆ ಓಡಿತು ಅವಳ ಮನಸ್ಸು.

ದಿನವೂ, ೨೫ ಕಿಮಿ ದೂರದ ಆಫೀಸ್ ಹೋಗಬೇಕಿತ್ತು... ಹೊತ್ತು ಗೊತ್ತಿಲ್ಲದೇ ಆಫೀಸ್ ಕೆಲಸ, ಊಟ, ತಿಂಡಿ ಸರಿಯಾದ ಸಮಯಕ್ಕೆ ತಿನ್ನದೇ, ಬೊಂಡ ಬಜ್ಜಿ ಅದು ಇದು ಅಂತ ತಿಂದು, ಸ್ವಲ್ಪ ಮಟ್ಟಿಗೆ ದೇಹದ ತೂಕ ಏರಿತ್ತು. ಆಫೀಸಿನಲ್ಲಿ ವೈದ್ಯರನ್ನು ಕಂಡು ಕೇಳಿದಾಗ, ಬೆಳಿಗ್ಗೆ ೨೦-೨೫ ನಿಮಿಷ ವಾಕಿಂಗ್ ಮಾಡಿ ಅಂತ ಹೇಳಿದ್ದರು. ಮನೆಯ ಹತ್ತಿರ ಇದ್ದ ಪಾರ್ಕಿಗೆ, ಜನುಮೇಪಿ ಹೋಗದ ವೀಣಾಳಿಗೆ, ಹೋಗಲೇಬೇಕಾದ ಅನಿವಾರ್ಯತೆ.. ಇಲ್ಲದೆ ಹೋದರೆ, ಇಷ್ಟ ಪಟ್ಟು ಕೊಂಡುಕೊಂಡ ಬಟ್ಟೆಗಳೆಲ್ಲ ಮುಷ್ಕರ ಹೂಡಲು ಸಿದ್ಧವಾಗಿದ್ದವು.

ರೈಲು ನಿಲ್ದಾಣಕ್ಕೆ ಸರಿಯಾದ ಸಮಯಕ್ಕೆ ಬರುವಂತೆ, ಒಂದು ಸಮಯ ನಿಗದಿ ಪಡಿಸಿಕೊಂಡು, ಪ್ರತಿದಿನವೂ ಪಾರ್ಕಿಗೆ ವಾಕಿಂಗ್ ಹೋಗೋಕೆ ಶುರುಮಾಡಿದಳು. ಎದುರು ಮನೆಯ ಆಂಟಿ ಕೂಡ ಇವಳಿಗೆ ಜೊತೆಯಾದರು. ಹೀಗೆ ಸಾಗಿತ್ತು ದಿನಚರಿ. ಇಪ್ಪತ್ತು ನಿಮಿಷ ವಾಕಿಂಗ್, ತದನಂತರ, ಆಫೀಸಿಗೆ ಸಿದ್ಧವಾದರೆ ಸಾಕು, ಅದು ಹೇಗೋ ಸಂಜೆಯ ತನಕ ಸಮಯ ಓಡುವುದೇ ಅರಿವಾಗುತ್ತಿರಲಿಲ್ಲ.

ನಿಧಾನವಾಗಿ ಹೆಜ್ಜೆ ಹಾಕುತ್ತಿದ್ದ ಆಂಟಿಗೆ, "ಆಂಟಿ ನೀವು ಬರುತ್ತಿರಿ, ನಾನು ಸುತ್ತು ಜಾಸ್ತಿ ಹಾಕುತ್ತೇನೆ ಎಂದಳು"

"ಆಹಾ ಸುಂದರಿ ಕಣೆ ನೀನು.. ಸರಿ ಈ ಮುದುಕಿ ಜೊತೆಯಲ್ಲಿ ನಿಧಾನಕ್ಕೆ ಹೆಜ್ಜೆ ಹಾಕೋಕೆ ನಿನಗೆಲ್ಲಿ ಆಗುತ್ತೆ.. ಸರಿ ಹಾಗೆ ಮಾಡು"

ವೀಣಾ.. ಬಿಲ್ಲಿನಿಂದ ಬಿಟ್ಟ ಬಾಣದ ತರಹ.. ತಲೆ ತಗ್ಗಿಸಿಕೊಂಡು ಭರ ಭರ ಹೆಜ್ಜೆ ಹಾಕೋಕೆ ಶುರುಮಾಡಿದಳು.. ಪೇಪರ್ ಹಂಚುವ ಹುಡುಗನ ಸೈಕಲ್ ಕಿರ್ ಕಿರ್ ಎಂದು ಬ್ರೇಕ್ ಹಾಕುವುದ ಕೇಳಿ.. ಆ ಕಡೆ ಕಣ್ಣಾಯಿಸಿದಳು.. ತುಸುಗಪ್ಪು ಬಣ್ಣ, ಆಕರ್ಷಕ ಅನ್ನಿಸದೆ ಇದ್ದರೂ, ಒಮ್ಮೆ ನೋಡಿದರೆ.. ಇರಲಿ ಇನ್ನೊಮ್ಮೆ ನೋಡಬಹುದು ಎನ್ನಿಸುವಂತಹ ಮುಖಚರ್ಯೆ, ಬೆರಳಲ್ಲಿ ಏನೋ ಎಣಿಸುತ್ತಾ ಹೆಜ್ಜೆ ಹಾಕುವುದು ಕಾಣಿಸಿತು. ಬೆನ್ನಿಗೆ ಆಫೀಸ್ ಬ್ಯಾಗ್, ಕೈಯಲ್ಲಿ ಊಟದ ಡಬ್ಬಿ ಹಿಡಿದು ಸಾಗುತ್ತಿದ್ದ.. ಬೇಡ ಎಂದರೂ ಆ ಕಣ್ಣುಗಳು ಕೆಲ ಕ್ಷಣ ಅವನನ್ನೇ ಹಿಂಬಾಲಿಸಿತು. ಆ ರಸ್ತೆಯ ತಿರುವಿನ ತನಕ ಹೋಗಿ ಮರೆಯಾದ.. ಅಂದು ಏನೂ ವಿಶೇಷ ಎನ್ನಿಸಲಿಲ್ಲ..

ಮಾರನೇ ದಿನ, ಸರಿ ಸುಮಾರು ಅದೇ ಸಮಯ.. ಮತ್ತೆ ಪುನಾವಾರವರ್ತನೆ... ಹೀಗೆ ಸಾಗಿತ್ತು ಅನೇಕ ದಿನಗಳು, ವಾರಗಳು, ತಿಂಗಳುಗಳು..

ಪಾರ್ಕಿಗೆ ಬರುವುದು, ಇವನನ್ನು ನೋಡಲೇ ಎನ್ನುವಂತಾಗಿತ್ತು ಅವಳ ಮನಸ್ಸಿಗೆ, ಆದರೂ, ವೀಣಾ ಬರಿ ತನ್ನ ಕಾಯಕ ಮುಂದುವರೆಸುತ್ತಿದ್ದಳು, ಆದರೆ ದಿನ ದಿನಕ್ಕೆ ಅವನ ಬಗ್ಗೆ ಅವಳಿಗೆ ಆಕರ್ಷಣೆ ಹೆಚ್ಚಾಯಿತು. ಶಿಸ್ತುಬದ್ಧವಾಗಿ ಅಲಂಕರಿಸಿಕೊಂಡು, ತನ್ನ ಬಣ್ಣಕ್ಕೆ ಒಪ್ಪುವ ಅವನ ವೇಷಭೂಷಣ, ಮೊಗದಲ್ಲಿ ಯಾವಾಗಲೂ ಮಂದಹಾಸ, ಬೆಳಗಿನ ತಣ್ಣನೆ ಗಾಳಿಗೆ ರೇಷ್ಮೆಯಂತಹ ಅವನ ತಲೆಗೂದಲು ಹಾರಾಡುವಾಗ ಅವನು ರಜನಿಕಾಂತ್ ತರಹ ತಲೆಗೂದಲನ್ನು ಸರಿಪಡಿಸಿಕೊಂಡು ಹೋಗುವ ರೀತಿ, ಸುತ್ತಮುತ್ತಲೂ ನೋಡಿಕೊಂಡೆ ಹೋಗುವ ಅವನ ಸಿಂಹಾವಲೋಕನಾದ ನಡಿಗೆ, ಆಕರ್ಷಕ ಎನ್ನಿಸುವ ಕಂದು ಬಣ್ಣದ ಕಣ್ಣುಗಳು.. ಒಂದು ರೀತಿಯಲ್ಲಿ ವೀಣಾಳ ಮನಸ್ಸಿನೊಳಗೆ ಕೂತಿದ್ದ.

ಯಾವುದೇ ಮೋಹಪಾಶ ಸೆಳೆಯುತ್ತಲಿರಲಿಲ್ಲ, ಆದರೆ ಈ ವ್ಯಕ್ತಿಯ ವ್ಯಕ್ತಿತ್ವದಲ್ಲಿ ಏನೋ ಅಯಸ್ಕಾಂತ ಇದೆ ಎನ್ನಿಸುತ್ತಿತ್ತು ವೀಣಾಳಿಗೆ.  ದಿನವೂ ಅವನೂ ಕೂಡ ಓರೇ ಗಣ್ಣಿನಲ್ಲಿ ನೋಡುವುದು ಅರಿವಾಗುತ್ತಿತ್ತು. ಕೆಲವೊಮ್ಮೆ, ತಾನು ಪಾರ್ಕಿಗೆ ಹೋಗುವುದು ತಡವಾದರೆ, ಅವನು ಹಾದು ಹೋಗುವಾಗ, ಅಲ್ಲಿ ಓಡಾಡುವ ಜನರ ಮಧ್ಯೆ ನನ್ನನ್ನು ಹುಡುಕುವ ಅವನ ಕಣ್ಣುಗಳು ಇಷ್ಟವಾಗುತ್ತಿತ್ತು, ಎಷ್ಟೋ ದಿನ, ಎದುರಿಗೆ ಸಿಕ್ಕ ಉದಾಹರಣೆಗಳು ಇದ್ದವು, ಆಗ ಆತ ನನ್ನ ಮೊಗವನ್ನು ದಿಟ್ಟಿಸಿ ನೋಡದೆ, ಒಮ್ಮೆ ಒಂದು ಝಲಕ್ ಕೊಟ್ಟು, ಮತ್ತೆ ಆಗಸ ನೋಡುತ್ತಾ ಸಾಗುವುದ ನೋಡಿ, ಅವನ ಬಗ್ಗೆ ಗೌರವ ಭಾವ ಹೆಚ್ಚಾಗಲು ಶುರುವಾಗಿತ್ತು.

ಗೆಳೆಯ ಅಂದರೆ ಇವನ ರೀತಿ ಇರಬೇಕು ಅನ್ನಿಸುವ ರೀತಿಯಲ್ಲಿ, ಹೇಳಿ ಮಾಡಿಸಿದಂತಹ ವ್ಯಕ್ತಿ ಎಂದು ಯಾಕೋ ಅವಳ ಮನಸ್ಸಿಗೆ ಪದೇ ಪದೇ ಅನ್ನಿಸುತ್ತಿತ್ತು. ಒಮ್ಮೆಯಾದರೂ ಮಾತಾಡಿಲ್ಲ, ಬರಿ ನೋಟ ನೋಟ ನೋಟ ಅಷ್ಟೇ. ಆದರೆ ದಿನ ಕಾಣುವ ಹುಡುಗಿಯನ್ನು ಕೆಟ್ಟ ನೋಟದಲ್ಲಿ ನೋಡದ ಅವನ ವ್ಯಕ್ತಿತ್ವ ಇಷ್ಟವಾಗತೊಡಗಿತ್ತು. ಅವನನ್ನು ಕಾಣದ ದಿನ ಸೂರ್ಯನನ್ನು ಕಾಣದ ಕಮಲದಂತೆ ಆಗುತ್ತದೆ ಎನ್ನುವ ಒಂದು ಭಾವ ವೀಣಾಳ ಮನದೊಳಗೆ ಕಾಲಿಡುತ್ತಲೇ ಇತ್ತು. 

ಸಂಜೆ ಆಫೀಸ್ ಹತ್ತಿರ ಕ್ಯಾಬಿಗೆ ಕಾಯುತ್ತಾ ನಿಂತಿದ್ದಾಗ, ಮೊಬೈಲ್ ಹೊಡೆದುಕೊಂಡಿತು, ಮೊಗದಲ್ಲಿ ಹಾಗೆ ಮಂದಹಾಸ.. ತನ್ನ ಭಾವಿ ಪತಿರಾಯ.. !

"ವೀಣಾ.. ಇಲ್ಲಿ ಇದ್ದೀನಿ.. ಬಾ ಇವತ್ತು ಸುತ್ತಾಡಿ ಬರೋಣ.. ನಿಮ್ಮ ಮನೆಗೆ ಫೋನ್ ಮಾಡಿ ಹೇಳಿದ್ದೀನಿ.. ಸ್ವಲ್ಪ ಹೊತ್ತಾಗುತ್ತೆ ಅಂತ"

ಮನಸ್ಸು ಹಕ್ಕಿಯ ಹಾಗೆ ಹಾರಾಡಿತು...ಆಕಾಶ ನೀಲಿ ಬಣ್ಣದ ಅವಳ ಚೂಡಿದಾರ್, ಪೂರ್ತಿ ಇಳಿಬಿಟ್ಟಿದ್ದ ನೀಳ ತಲೆಗೂದಲು ಸಂಜೆಯ ಗಾಳಿಗೆ ಹಾರಾಡುತ್ತಿತ್ತು. ಅಲ್ಲಿಯೇ ನಿಂತಿದ್ದ ಬೈಕಿನ ಕನ್ನಡಿಯಲ್ಲಿ ಒಮ್ಮೆ ತನ್ನನ್ನೇ ನೋಡಿಕೊಂಡಳು. ಹಣೆಗೆ ಇಟ್ಟಿದ್ದ ಬೊಟ್ಟು, ಆಫೀಸಿನಲ್ಲಿ ತನ್ನ ಗೆಳತಿ ಕೊಟ್ಟ ಗಣಪನ ಪ್ರಸಾದದ ಕುಂಕುಮವನ್ನು ಆ ಬೊಟ್ಟಿನ ಕೆಳಗೆ ಇಟ್ಟುಕೊಂಡಿದ್ದರಿಂದ, ಅವಳ ಮೊಗದ ಚೆಲುವು ಇನ್ನಷ್ಟು ಹೆಚ್ಚಿತ್ತು, ಕಣ್ಣಿಗೆ ಹಚ್ಚಿದ್ದ ಕಾಡಿಗೆ ಅವಳ ಸೌಂದರ್ಯವನ್ನು ಇಮ್ಮಡಿಗೊಳಿಸಿತ್ತು. ತನ್ನ ಭಾವಿ ಪತಿರಾಯ ಯಾವಾಗಲೂ ಹೇಳುತ್ತಿದ್ದ "ವೀಣಾ.. ನಿನ್ನ ಕಣ್ಣುಗಳು ಮತ್ತು ನಿನ್ನ ಮೂಗುತಿ ಹೊತ್ತ ನಾಸಿಕ ತುಂಬಾ ಕಾಡುತ್ತದೆ ಕಣೆ.. ಬ್ರಹ್ಮ ನನಗಾಗಿಯೇ ಪುರುಸೊತ್ತಾಗಿ ಸೃಷ್ಟಿ ಮಾಡಿದ ರತ್ನಮಣಿ ಕಣೆ ನೀನು"
ಚಿತ್ರ ಕೃಪೆ : ಗೂಗಲ್ ಕಣ್ಣಿಂದ ನೋಡಿದ್ದು 

ಈ ಮಾತನ್ನು ಕಳೆದ ಆರು ತಿಂಗಳಿಂದ ಹೇಳುತ್ತಲೇ ಇದ್ದ. ಅವಳಿಗೂ ಕೂಡ ಈ ಮಾತನ್ನು ಕೇಳುವುದು ಎಂದರೆ ಖುಷಿಯೋ ಖುಷಿ.. ಒಮ್ಮೆ ತಲೆಗೂದಲನ್ನು ಸರಿ ಪಡಿಸಿಕೊಂಡು, ಭಾವಿ ಪತಿರಾಯನ ಬೈಕ್ ಏರಿದಳು.

ಶಾಪಿಂಗ್ ಎಲ್ಲಾ ಮುಗಿದು, ಹೋಟೆಲಿನಲ್ಲಿ ಊಟ ಮಾಡುತ್ತಾ ಕೂತಿದ್ದಾಗ.. ವೀಣಾ ಹಿಂದಿನ ದಿನದ ಘಟನೆ ಬಗ್ಗೆ ಹೇಳಿದಳು..ಇಬ್ಬರೂ ಕೂಡ ಒಬ್ಬರಿಗಾಗಿಯೇ ಒಬ್ಬರು ಹುಟ್ಟಿದ್ದಾರೆ ಎನ್ನುವಂತಹ ಜೋಡಿ, ಅಸೂಯೆ, ಅನುಮಾನ ಎನ್ನುವ ಪದದ ಅರ್ಥ ಏನು ಎನ್ನುವಂತಹ ನಂಬಿಕೆ ಇಬ್ಬರಲ್ಲೂ ಇತ್ತು. ಎಲ್ಲಾ ವಿಷಯವನ್ನು ಇಬ್ಬರೂ ಹಂಚಿಕೊಳ್ಳುತ್ತಿದ್ದರು, ಗುಟ್ಟು, ರಹಸ್ಯ ಎನ್ನುವ ಪದಗಳು ಇಬ್ಬರಿಗೂ ಗೊತ್ತಿರಲಿಲ್ಲ.

"ವೀಣಾ.. ನನಗೆ ಅರ್ಥವಾಗುತ್ತೆ ನಿನ್ನ ತಳಮಳ.. ನೀನು ನಿನ್ನ ಬದಲಾದ ಆಫೀಸ್ ವಿಳಾಸದಿಂದ ನಿನ್ನ ಆಫೀಸ್ ಸಮಯವೂ ಬದಲಾಗಿದೆ, ಅದಕ್ಕಾಗಿ ನಿನ್ನ ವಾಕಿಂಗ್ ಸಮಯ ಕೂಡ ಬದಲಾಗಿದೆ.. ನೀನು ಅವನನ್ನು ನೋಡಲಾಗುತ್ತಿಲ್ಲ.. ಜೊತೆಯಲ್ಲಿ ನಿನ್ನೆ ನೀನು ಸ್ವಲ್ಪ ಯೋಚಿಸಿದ್ದರೆ, ಇದುವರೆಗೂ ಮಾತಾಡದೆ ಬೆಳೆದು ನಿಂತಿರುವ ನಿಮ್ಮ ನಿರ್ಮಲ ಸ್ನೇಹಕ್ಕೆ ಒಂದು ಅದ್ಭುತ ಆರಂಭ ಸಿಗುತ್ತಿತ್ತು. ಇರಲಿ ಯೋಚಿಸಬೇಡ..ಅವನ ಮೊಗವನ್ನು ನೀ ಗುರುತಿಸಬಲ್ಲೆ, ಅವನ ಹೆಸರು ತಿಳಿದುಕೊಂಡರೆ, ಫೇಸ್ಬುಕ್ ನಲ್ಲಿ ಹೇಗಾದರೂ ಹುಡುಕಬಹುದು.. ಮತ್ತೆ ಇನ್ನೊಂದು ಉಪಾಯ.. ಒಂದೆರಡು ದಿನ ಮನೆಯಿಂದಲೇ ಕೆಲಸ ಮಾಡುತ್ತೇನೆ ಎಂದು ನಿನ್ನ ಮ್ಯಾನೇಜರ್ ಗೆ ಹೇಳಿ, ನಿನ್ನ ಮೊದಲ ಸಮಯಕ್ಕೆ ವಾಕಿಂಗಿಗೆ ಹೋಗು.. ಆಗ ಅವನು ಸಿಕ್ಕಿದರೇ , ಸ್ವಲ್ಪ ಧೈರ್ಯ ಮಾಡಿ ನೀನೇ ಮಾತಾಡು.. ಮನಸ್ಸಿಗೆ ಗೊಂದಲ ಕಡಿಮೆಯಾಗುತ್ತದೆ.."

ವೀಣಾಳ ಕಣ್ಣಲ್ಲಿ ಹೊಳಪು.. ತನ್ನ ಭಾವಿ ಪತಿರಾಯನ ಬಗ್ಗೆ ಶಭಾಷ್ ಎನ್ನಿಸಿತು...

"ರೇವಂತ್.. ಎಂತಹ ಅದ್ಭುತ ಗೆಳೆಯ ನೀನು.. ನಿನ್ನ ಪಡೆದ ನಾನೇ ಧನ್ಯ.. ಸಾಮಾನ್ಯ ಈ ರೀತಿಯ ಸನ್ನಿವೇಷ ಎದುರಾದಾಗ.. "

ಇನ್ನೂ ವೀಣಾ ಮಾತನ್ನು ಮುಗಿಸಿರಲಿಲ್ಲ.. "ನೋಡು ಬಂಗಾರಿ ನಿನ್ನ ಮನಸ್ಸು ನನಗೆ ಗೊತ್ತು.. ನಿನ್ನ ಬಗ್ಗೆ ನನಗೆ ಗೊತ್ತು..ಸ್ನೇಹ ಎಂದರೆ ಹಾತೊರೆಯುವ ಮನಸ್ಸು ನಿನ್ನದು.. ನಿನ್ನ ಬಾಳಸಂಗಾತಿಯಾಗಿ ಪಡೆದ ನಾನೇ ಧನ್ಯ.. ಇಂತಹ ಅದ್ಭುತ ಗೆಳತಿಯ ಬಗ್ಗೆ ಅನುಮಾನ ಯಾಕೆ ಪಡಬೇಕು.. ನೀನು ಪ್ರತಿಯೊಂದನ್ನು ನನ್ನ ಬಳಿ ಹೇಳುವುದೇ ತಿಳಿಸುತ್ತೆ ನಿನ್ನ ಮನಸ್ಸು ತಿಳಿಯಾದ ಮಾನಸ ಸರೋವರ ಎಂದು.. ಯೋಚಿಸಬೇಡ ಬಂಗಾರಿ.. ಆ ವ್ಯಕ್ತಿಯ ಬಗ್ಗೆ ವಿಷಯ ತಿಳಿದರೆ... ಹೇಳು..ಒಮ್ಮೆ ಹೋಟೆಲಿನಲ್ಲಿ ಊಟ ಮಾಡೋಣ.. ನಿನ್ನ ಗೆಳೆಯ ನಮ್ಮ ಗೆಳೆಯ.. "

ಹೋಟೆಲಿನಲ್ಲಿ ಕೂತಿದ್ದರೂ, ಎಂದೂ ಭಾವೋದ್ವೇಗಕ್ಕೆ ಒಳಗಾಗದ ವೀಣಾ.. ಎದುರು ಕೂತಿದ್ದ ಭಾವಿ ಪತಿ ದೈವನ ಕೈಯನ್ನು ತನ್ನ ಎದೆಗೆ ಆನಿಸಿಕೊಂಡು "ರೇವಂತ್.. ಮೈ ಲವ್.. ಐ ಲವ್ ಯು ಕಣೋ"

ಪಕ್ಕದ ಟೇಬಲಿನಲ್ಲಿ ಕೂತಿದ್ದ ಇಳಿ ವಯಸ್ಸಿನ ದಂಪತಿಯೊಬ್ಬರ ಮೊಬೈಲಿಗೆ ಕರೆ ಬಂತು ಕಾಲರ್ ಟ್ಯೂನ್
"ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳಿಗೆ"

ಆದಷ್ಟು ಬೇಗ ಆ ವ್ಯಕ್ತಿಯನ್ನು ಮಾತಾಡಿಸಲೇ ಬೇಕು.. ಎಂದು ನಿರ್ಧರಿಸಿ ತನ್ನ ಮ್ಯಾನೇಜರ್ ಗೆ ಸಂದೇಶ ಕಳಿಸಿದಳು
"ಡಿಯರ್ ಕಾರ್ತಿಕ್
ಐ ವಿಲ್ ಬಿ ವರ್ಕಿಂಗ್ ಫ್ರಮ್ ಹೋಂ ಟುಮಾರೋ ಅಂಡ್ ಡೇ ಆಫ್ಟರ್ ಟುಮಾರೋ ...
ದಿಸ್ ಐಸ್ ಫಾರ್ ಯುವರ್ ಇನ್ಫರ್ಮೇಷನ್..
ವೀಣಾ"

Tuesday, November 15, 2016

ಕಣ್ಣಂಚಿನ ನೋಟ.....ಆ ಕಡೆ ದೃಶ್ಯ!.!

ಕೃಷ್ಣಕಾಂತ್ ತುಂಬಾ ಸರಳ ಜೀವಿ. ಅವನಲ್ಲಿ ಅದೇನೋ ಅಪರಿಮಿತ ಧನಾತ್ಮಕ ಗುಣ.. ಕಾರಣವಿಲ್ಲದೆ ಎಲ್ಲರನ್ನೂ ಪ್ರೀತಿಸುವ ಮನುಷ್ಯ, ಆದರೆ ಸಕಾರಣವಿದ್ದರೆ ಮಾತ್ರ ಯಾರನ್ನೇ ಆದರೂ ದೂರ ಇಡಬಲ್ಲ ವ್ಯಕ್ತಿತ್ವ.. ಒಮ್ಮೆ ಕೃಷ್ಣಕಾಂತ್ ದೂರ ಇಟ್ಟರೆ ಮುಗೀತು... ಭಗವಂತನೇ ಕಷ್ಟ ಪಡಬೇಕು :-)
ಪ್ರತಿದಿನ ಸಂಧ್ಯಾವಂದನೆ ಮಾಡಿ, ದೇವರಿಗೆ, ತನ್ನ ದೇವರಿಗೆ ನಮಿಸಿ ಆಫೀಸ್ ಗೆ ಹೋರಡುವ ಇವನಿಗೆ.. ಪ್ರತಿ ಕ್ಷಣಕ್ಕೂ ಕಣ್ಣಿಗೆ ಕಾಣುವ ದೃಶ್ಯವನ್ನು ಆರಾಧಿಸುವುದು, ಇಷ್ಟಪಡುವುದು, ಅದರ ಬಗ್ಗೆ ಯೋಚಿಸುವುದು, ಅದರಿಂದ ಧನಾತ್ಮಕವಾಗಿ ಯೋಚಿಸಿ ಪ್ರೇರೇಪಣೆ ಪಡೆಯುವುದು.. ಇದು ಅವನ ನಿತ್ಯದ ದಿನಚರಿ. ಕಣ್ಣಿಗೆ ಕಾಣುವ ಯಾವುದೇ ಸ್ಫೂರ್ತಿ ಉಕ್ಕುವ ವಿಷಯವನ್ನು ಬಿಡದ ಅವನಿಗೆ ಒಂದು ಅಚ್ಚರಿ ಸಂಗತಿ ನೆಡೆಯುತ್ತಿದ್ದದು ಅರಿವಿಗೆ ಬರುತ್ತಲೇ ಇರಲಿಲ್ಲ. 

ಪ್ರತಿದಿನ ಬೆಳಿಗ್ಗೆ ತನ್ನ ಆಫೀಸ್ ಗಾಡಿಗೆ ಹತ್ತುವ ಜಾಗಕ್ಕೆ ಸುಮಾರು ಒಂದು ಕಿ.ಮೀ. ಗಳು.. ನೆಡೆಯುತ್ತಾ ಹೋಗುವಾಗ.. ಹಾದಿಯಲ್ಲಿ ಒಂದು ಉದ್ಯಾನವನ.. ಅಲ್ಲಿ ವ್ಯಾಯಾಮ ಸಲುವಾಗಿ ನೆಡೆದಾಡುವ ಮಂದಿ ಹಲವರು.. ಒಮ್ಮೆ ಹೀಗೆ ಹೋಗುತ್ತಿರುವಾಗ, ಒಂದು ಹುಡುಗಿ ಕಣ್ಣಿಗೆ ಬೀಳುತ್ತಾರೆ  ವಾಕಿಂಗ್ ಅಂತ ಬರುವವರಲ್ಲಿ ಅನೇಕರು ಕಿವಿಗೆ ಸಿಕ್ಕಿಸಿಕೊಂಡು ಹಾಡು, ಸಂಗೀತ ಕೇಳುತ್ತಾ ಹೋಗುವವರು ಕೆಲವರು, ಎಲ್ಲರೂ ನೋಡಲಿ ಅಂತ ಚಿತ್ರ ವಿಚಿತ್ರ ವೇಷ ಹಾಕಿಕೊಂಡು ಬರುವ ಮಂದಿ ಕೆಲವರು, ಇನ್ನೂ ಕೆಲವರು ಜೋರಾಗಿ ಕಸರತ್ತು ಮಾಡುತ್ತಾ ಎಲ್ಲರ ಗಮನವನ್ನು ಸೆಳೆಯಲು ಹೊಂಚು ಹಾಕುವವರು ಇದ್ದರು.. ಆದರೆ ಇದರ ಮಧ್ಯದಲ್ಲಿ ನಿಯತ್ತಾಗಿ ತಮ್ಮ ದೇಹವನ್ನು ದಂಡಿಸುತ್ತಾ, ತಮ್ಮ ಆರೋಗ್ಯದ ಬಗ್ಗೆ ಮಾತ್ರ ಗಮನ ಹರಿಸಿ, ಸುತ್ತಾ ಮುತ್ತಾ ಏನು ನೆಡೆಯುತ್ತಿದೆ ಎಂಬ ಚಿಂತೆಗೆ ತಲೆ ಕೊಡದೆ, ತಮ್ಮ ಪಾಡಿಗೆ ತಮ್ಮ ಕಾಯಕ ಮಾಡುವವರಲ್ಲಿ ಈ ಹುಡುಗಿ ಕೂಡ ಒಂದು.  

ಸುಂದರ ಮೊಗ, ತುಸು ಪುಟ್ಟ ಮೂಗಿಗೆ ಮುದ್ದಾದ ಹೊಳೆಯುವ ಮೂಗುತಿ, ನಿದ್ದೆಯಿಂದ ಎದ್ದು ಬೆಳಿಗ್ಗೆ ವಾಕಿಂಗ್ ಬರೋದರಿಂದ, ಬೈತಲೆ ಮೈಸೂರು ರಸ್ತೆಯ ರೀತಿ ಅಂಕು ಡೊಂಕಾದ  ರೀತಿಯಲ್ಲಿದ್ದರೂ ನೀಳ ಕಪ್ಪು ಜಡೆ ಆಕರ್ಷಕವಾಗಿ ಕಾಣುತ್ತಿತ್ತು .. ಸಿಂಗಾರವಿಲ್ಲದಿದ್ದರೂ, ಒಮ್ಮೆ ನೋಡಿದರೆ ಮತ್ತೊಮ್ಮೆ ಆಹಾ ಈ ರೀತಿಯ ಹುಡುಗಿ ಎಲ್ಲರ ಮನೆಯಲ್ಲಿ ಇರಬಾರದೇ ಎನ್ನುವಷ್ಟು ಮುದ್ದಾದ ಮೊಗವುಳ್ಳ ಹುಡುಗಿ ಇವರು..ಕಾಲಿಗೆ ಕಟ್ಟಿದ್ದ ಗೆಜ್ಜೆ ಝಲ್ ಝಲ್ ಎಂದು ಸದ್ದು ಮಾಡುತ್ತಿದ್ದರೆ ಕೃಷ್ಣಕಾಂತ್ ಮನಸ್ಸಲ್ಲಿ ಏನೋ ಒಂದು ರೀತಿಯ ಸಂತಸ. 

ಪಾಪ ಕೆಟ್ಟ ದೃಷ್ಟಿಯಲ್ಲಿ ಎಂದೂ ಆ ಹುಡುಗಿಯನ್ನು ನೋಡಿರಲಿಲ್ಲ.. ಕೆಲವರು ಹಾಗೆ.. ಒಂದು ಹುಡುಗಿ ತಂಗಿಯಾಗಬಹುದು, ಅಕ್ಕನಾಗಬಹುದು, ಗೆಳತಿಯಾಗಬಹುದು.. ಆದರೆ ಯಾವುದೇ ಭಾವವಿರದ, ಯಾವುದೇ ಬಂಧನವಿರದ ಒಂದು ರೀತಿಯ ದೈವಿಕ ಬಾಂಧವ್ಯ ಕೆಲವು ಬಂಧನಗಳಿಗೆ ಇರುತ್ತದೆ. ಅಂತಹ ಒಂದು ಬಂಧ ಈ ಹುಡುಗಿ ಮತ್ತು ಕೃಷ್ಣಕಾಂತ್ ಮಧ್ಯೆ ಇತ್ತು. 

ದಿನ ನಿತ್ಯವೂ ನೋಡುತ್ತಿದ್ದರಿಂದ, ಓರೇಗಣ್ಣುಗಳಲ್ಲಿ ಮಾತು ಇಲ್ಲದೆ ಬರಿ ನೋಟಕ್ಕೆ ಮಾತ್ರ ಮೀಸಲಾಗಿತ್ತು. ಆಕೆಯೂ ಕೂಡ ವಾಕಿಂಗ್ ಮಾಡುತ್ತಿದ್ದರೂ, ಇವ ಹೋಗುವಾಗ ಹಾಗೆ ಒಂದು ಎದೆ ಝಲ್ ಎನ್ನಿಸುವಂತಹ ನೋಟ ಬೀರಿ ತನ್ನ ಪಾಡಿಗೆ ಹೋಗುತ್ತಿದ್ದರು. 
ಕೃಪೆ : ಅಂತರ್ಜಾಲದಲ್ಲಿ ಒರೆಗಣ್ಣಿನಲ್ಲಿ ತೆಗೆದದ್ದು 
ಈ ನೋಟದ ಸಲುಗೆ, ಆ ಹುಡುಗಿಯ ಬಗ್ಗೆ ಯೋಚಿಸುವಾಗ ಬಹುವಚನ ಮಾಯವಾಗಿ ಏಕವಚನ ರೂಪುಗೊಂಡಿತ್ತು. 

ಕೃಷ್ಣಕಾಂತನಿಗೆ ಒಂದು ರೀತಿಯಲ್ಲಿ ಈ ಹುಡುಗಿ ಶುಭದ ಸಂಕೇತವಾಗಿದ್ದಳು. ಅವಳನ್ನು ನೋಡಿ, ಅವಳ ಮುದ್ದಾದ ಮೊಗವನ್ನು ಕಣ್ಣು ತುಂಬಾ ತುಂಬಿಕೊಂಡು, ಆವ ಇಷ್ಟಪಡುವ ಮುದ್ದಾದ ಮೂಗುತಿ ಹೊತ್ತ ನಾಸಿಕದ ಕೆಳಗಿನ ತುಟಿಯಂಚಿನ ಮಂದಹಾಸವನ್ನು ಕಂಡರೆ, ಅಂದಿನ ದಿನ ಎಂಥಹ ಕ್ಲಿಷ್ಟ ಪರಿಸ್ಥಿತಿಯನ್ನು ಕೂಡ ಎದುರಿಸುತ್ತೇನೆ ಎನ್ನುವಂತಹ ಆತ್ಮ ವಿಶ್ವಾಸ ಅವನಲ್ಲಿ ಮೂಡುತ್ತಿತ್ತು. 

ಅದು ನಿಜವೂ ಆಗಿತ್ತು, ಬೆಳಿಗ್ಗೆಯೇ ಆಕೆಯನ್ನು ನೋಡಿದರೆ, ಏನೋ ಸಂತೋಷ, ಉಲ್ಲಾಸ ಪುಟಿಯುತ್ತಿತ್ತು. ಇಬ್ಬರದೂ ಮೌನ ಗೆಳೆತನ.. ಆದರೆ ಇಬ್ಬರ ನಡುವೆ ಮಾತಿಲ್ಲ ಕಥೆಯಿಲ್ಲ ಬರಿ ಮೌನ ಮೌನ ಮೌನ ಮತ್ತು ಉಲ್ಲಾಸ ಪುಟಿಯುವ ಮಂದಹಾಸ ಮಾತ್ರ. 

ಬೆಳಿಗ್ಗೆ ಮಾತ್ರ ಕಾಣ ಸಿಗುವ ಆಕೆ ಅವನ ಹೃದಯದ ಹೂವಾಗಿದ್ದಳು. ದಿನ ಬೆಳಿಗ್ಗೆ ಆಕೆಯ ವೇಷಭೂಷಣಗಳಲ್ಲಿಯೇ ಕಾಣ ಸಿಗುತ್ತಿದ್ದ ಆಕೆ, ಒಮ್ಮೆ ಸಂಜೆ ಇವ ಆಫೀಸ್ ಗಾಡಿಯಿಂದ ಇಳಿದು ನೆಡೆದು ಬರುವಾಗ, ಅಚಾನಕ್ ಒಂದು ಒಡವೆ ಅಂಗಡಿಯಿಂದ ಹೊರಬಂದಳು. ಇವನನ್ನು ನೋಡಿದ ಆಕೆಯ ಕಣ್ಣಲ್ಲಿನ ಕಾಂತಿಯನ್ನು ನೋಡಿ ಕೃಷ್ಣಕಾಂತ್ ಉಲ್ಲಸಿತನಾಗಿದ್ದ. 

ಅದಕ್ಕೆ ಕಾರಣ, ಬೆಳಿಗ್ಗೆ ಹೊಳೆಯುವಂತೆ ಸಿದ್ಧಗೊಂಡು ಆಫೀಸ್ ಗೆ ಹೋಗುತ್ತಿದ್ದ ಕೃಷ್ಣಕಾಂತ್ ಒಂದು ಕಡೆ, ಹಾಸಿಗೆಯಿಂದ ಎದ್ದು, ಸಿಂಗಾರವಿಲ್ಲದ ಮೊಗ ಹೊತ್ತು, ವಾಕಿಂಗ್ ಮಾಡಲು ಬರುವ ಹುಡುಗಿ ಇನ್ನೊಂದು ಕಡೆ.. ಈ ಸನ್ನಿವೇಶ ಪೂರ್ತಿ ತಿರುಗು ಮುರುಗಾಗಿತ್ತು. 

ಆಫೀಸಿನಿಂದ ಬಸವಳಿದು ಬರುತ್ತಿದ್ದ ಕೃಷ್ಣಕಾಂತ್, ಆಗ ತಾನೇ ಸಿಂಗರಿಸಿಕೊಂಡು ಬಂದು, ಒಡವೆ ಅಂಗಡಿಯಲ್ಲಿ ತನಗಿಷ್ಟವಾದ ಒಡವೆ ಕೊಂಡು, ಹೊರಬರುತ್ತಿದ್ದ ಪೂರ್ಣ ಚಂದ್ರನಂತಹ ಹುಡುಗಿ ಇನ್ನೊಂದು ಕಡೆ. ಇಬ್ಬರ ಸಮಾಗಮ ರಸ್ತೆಯಲ್ಲಿ, ಎಂದಿನಂತೆ ಮಾತಿಲ್ಲ.. ಆದರೆ ಇವನನ್ನು ಸಂಜೆ ನೋಡಿ ಹೊಳೆಯುತ್ತಿದ್ದ ಆಕೆಯ ಕಂಗಳ ಕಾಂತಿ ಕಂಡು, ಆಗಸದ ಚಂದಿರನು ಕೂಡ ಒಂದು ಕ್ಷಣ ದಂಗಾಗಿ ಹೋಗಿದ್ದು ಮಾತ್ರ ಸುಳ್ಳಲ್ಲ. 

ಹಾಗೆ ಒಂದು ಬೆಳದಿಂಗಳಿನ ನಗೆಯನ್ನು ಕೃಷ್ಣಕಾಂತ್ ಮೇಲೆ ಬೀರಿ ತನ್ನ ಗೆಳತಿಯ ಜೊತೆ ಗಾಡಿಯನ್ನು ಏರಿ ಹೋಗಿಯೇ ಬಿಟ್ಟಳು. ಬೆಳಿಗ್ಗೆ ಅವಳನ್ನು ಮತ್ತೆ ಪಾರ್ಕ್ ನಲ್ಲಿ ನೋಡುವ ತನಕ ಅವನಿಗೆ ನೆಮ್ಮದಿ ಇರಲಿಲ್ಲ. ಇದು ಲವ್, ಪ್ಯಾರ್, ಇಷ್ಕ್, ಮೊಹಬ್ಬತ್ ಯಾವುದೂ ಅಲ್ಲ.. ಸ್ಪೂರ್ತಿಗಾಗಿ ಕಾಡು ಮೇಡು ಅಲೆಯುವ ಕವಿಯ ಮನಸ್ಸು ಹಂಬಲಿಸುವ ಸ್ಪೂರ್ತಿಯ ಹುಡುಕಾಟ ಅಷ್ಟೇ. 

ಹೀಗೆ ದಿನವೂ ಸಾಗುತ್ತಿತ್ತು.. "ನೋಟದಾಗೆ ನಗೆಯ ಮೀಟಿ"  ಎನ್ನುವ ತರಂಗ ಅವನ ಹೃದಯದಲ್ಲಿ ಸದಾ ಮೀಟುತ್ತಿತ್ತು.  ಇಂತಹ ಮುದ್ದಾದ ಹುಡುಗಿಯ ಹೆಸರು ವೀಣಾ ಇರಬೇಕು ಎನ್ನಿಸಿತು ಕೃಷ್ಣಕಾಂತನಿಗೆ.. ಯಾರಿಗೆ ಗೊತ್ತು.. ಏನು ಹೆಸರೋ ಏನೂ ಕಥೆಯೋ.. 

ಹೀಗೆ ಸಾಗುತ್ತಿರಲು, ಅಚಾನಕ್ ಆ ಹುಡುಗಿ ಕಾಣದೆ ಹೋದಳು.. ಪಾರ್ಕ್ ನಲ್ಲಿ ಬಿಟ್ಟ ಕಣ್ಣು ಬಿಟ್ಟ ಹಾಗೆ ದಿನವೂ ಹುಡುಕುತಿತ್ತು ಆಕೆಯನ್ನು ಇವನ ಕಂಗಳು. ಆದರೆ ಇಲ್ಲ.. ಅದೃಷ್ಟ ಇಲ್ಲ.. ಹತಾಶೆಗೊಳ್ಳಲಿಲ್ಲ, ಆದರೆ ಆಕೆಯನ್ನು ಒಮ್ಮೆಯಾದರೂ ನೋಡಲೇ ಬೇಕು ಅನ್ನಿಸುತ್ತಿತ್ತು.. ಮನದೊಳಗೆ ನೂರಾರು ಯೋಚನೆ.. 

೧) ಆಕೆ ಮನೆ ಖಾಲಿ ಮಾಡಿ ಹೋಗಿರಬಹುದೇ 
೨) ಕೆಲಸ ಬದಲಾವಣೆಯಾಗಿ, ಸಮಯ ಸಾಲದೇ ವಾಕಿಂಗ್ ಬಿಟ್ಟಿರಬಹುದೇ 
೩) ವಾಕಿಂಗ್ ಸಮಯ ಬದಲಾವಣೆ ಮಾಡಿರಬಹುದೇ 
೪) ತಾನು ಆಕೆಯನ್ನು ನೋಡುತ್ತಿರುವ ಬಗ್ಗೆ ಆಕೆಗೆ ಬೇಸರವಾಗಿ, ವಾಕಿಂಗ್ ಬೇಡವೇ ಬೇಡ ಅಂತ ನಿರ್ಧರಿಸಿರಬಹುದೇ 

ಹೀಗೆ ತಾಳಮೇಳವಿಲ್ಲದ ಪ್ರಶ್ನೆಗಳು ಸಾಗಿದ್ದವು.. 

ಆದರೆ ದಿನವೂ ಆಕೆಯ ಮುಗ್ಧ ಮೊಗವನ್ನು ಹುಡುಕುವ ಕಣ್ಣುಗಳು ಮಾತ್ರ ತಮ್ಮ ಕೆಲಸ ನಿಲ್ಲಿಸಿರಲಿಲ್ಲ.. ಭೂಮಿ ಗುಂಡಾಗಿದೆ.. ಎಂದಾದರೂ ಒಮ್ಮೆ ಸಿಕ್ಕಿಯೇ ಸಿಗುತ್ತಾಳೆ.. ಆಗ ಮಾತಾಡಿಸಲೇಬೇಕು ಎನ್ನುವ ಬಯಕೆ ಮಾತ್ರ ಮನದಲ್ಲಿ ನಿಂತಿತ್ತು. ಆನಂದ್ ಚಿತ್ರದಲ್ಲಿ ಹೇಳುವಂತೆ "ಪ್ರತಿಯೊಬ್ಬರ ದೇಹದಲ್ಲಿ ಟ್ರಾನ್ಸ್ಮೀಟರ್, ರಿಸೀವರ್ ಇರುತ್ತೆ.. ಸರಿಯಾದ ಸ್ನೇಹದ ಸಿಗ್ನಲ್ ವೈಬ್ರೆಷನ್ ಬಂದಾಗ ಸ್ನೇಹದ ಬಂಧ ಅರಳುತ್ತದೆ". 

ಎಷ್ಟು ನಿಜ  ಅಲ್ವೇ.. ಒಂದು ನಿರ್ಮಲ ಸ್ನೇಹಕ್ಕೆ ಕೈಚಾಚುತ್ತಿತ್ತು ಅವನ ಮನಸ್ಸು. 

ಹೀಗೆ ಯಾವುದೋ ಯೋಚನೆ ಮಾಡುತ್ತಾ, ಕಚೇರಿಯಲ್ಲಿ ಸುಸ್ತಾಗುವಂಥ ಕೆಲಸ ಮುಗಿಸಿ, ಗಾಡಿಯಲ್ಲಿ ಚೆನ್ನಾಗಿ ನಿದ್ದೆ ಮಾಡಿಕೊಂಡು, ತನ್ನ ಜಾಗಕ್ಕೆ ಬಂದರೂ ನಿದ್ದೆ ಹರಿಯದೇ ಮಲಗಿದ್ದ ಕೃಷ್ಣಕಾಂತನನ್ನು ತಟ್ಟಿ ಎಬ್ಬಿಸಿದ ಡ್ರೈವರ್.. "ಸಾರ್ ನಿಮ್ಮ ಸ್ಟಾಪ್ ಬಂತು ಮನೆಗೆ ಹೋಗಲ್ವಾ.. ಅಕ್ಕ ಅವರು ಕಾಯುತ್ತಾ ಇರ್ತಾರೆ.. ಏಳಿ ಸಾರ್" ಎಂದಾಗಲೇ ಎಚ್ಚರ ಇವನಿಗೆ. 

ಒಂಥರಾ ಟ್ರಾನ್ಸ್ ನಲ್ಲಿಯೇ ನೆಡೆಯುತ್ತಾ ಬರುತ್ತಿದ್ದ ಕೃಷ್ಣಕಾಂತ್.. ಅಚಾನಕ್ ಒಂದು ಗಾಡಿ ಅಡ್ಡ ಬಂತು.. ತಕ್ಷಣ ಕಣ್ಣನ್ನು ಇನ್ನೊಮ್ಮೆ ಉಜ್ಜಿಕೊಂಡು, ತಲೆಗೂದಲನ್ನು ಸರಿಮಾಡಿಕೊಂಡು, ಗಾಡಿಯವನಿಗೆ ಸಾರಿ ಹೇಳಿ ಮುಂದೆ ಬಂದ. ಯಾವುದೋ ಒಂದು ಸೆಳೆತ ಅವನನ್ನು ಕೈಚಾಚಿ ಕರೆದಂತಾಯಿತು.. ಅರೆ ಚಿರಪರಿಚಿತ ಜರ್ಕಿನ್.. ಆ ಮಂದ ಬೆಳಕಿನಲ್ಲಿಯೂ, ಚಂದಿರನ ಬೆಳದಿಂಗಳಲ್ಲಿ , ಅಂಗಡಿಯ ಮುಂದೆ ಹಾಕಿದ್ದ ಸಣ್ಣ ದೀಪದ ಬೆಳಕಿನಲ್ಲಿ ಫಳ್ ಎಂದು ಹೊಳೆದ ಮೂಗುತಿ. ಕೃಷ್ಣಕಾಂತನ ಹೃದಯದಲ್ಲಿ ಜೋಗದ ಜಲಪಾತ.  ಅರೆ "ಇವಳೇ ಇವಳೇ ಚಂದನದ ಗೊಂಬೆ ಚೆಲುವಾದ ಗೊಂಬೆ ಚಂದನದಾ ಗೊಂಬೆ" ಹಾಡು ಹೃದಯದಲ್ಲಿ ಹಾಡತೊಡಗಿತು. 
ಕೃಪೆ : ಮನದ ಮಡಿಲಲ್ಲಿ ಅರಳಿದ ಹೂಗಳು.. ಅಂತರ್ಜಾಲದ ಉದ್ಯಾನವನದಲ್ಲಿ ಕಿತ್ತದ್ದು 
ಇನ್ನೊಮ್ಮೆ ನೋಡೋಣ ಅನ್ನಿಸಿತು.. ಮಾತಾಡಲೇಬೇಕು ಎನ್ನಿಸಿತು.. ಆ ಮುದ್ದಾದ ಮೊಗವನ್ನು ನೋಡಿ, ಆಕೆಯ ಹೊಳೆಯುವ ಕಂಗಳನ್ನು ಒಮ್ಮೆ ಕಣ್ಣ ತುಂಬಾ ತುಂಬಿಕೊಂಡು, ಸದಾ ಅರಳುತ್ತಿದ್ದ ಆಕೆಯ ಮಲ್ಲಿಗೆ ನಗೆಯನ್ನು ಮತ್ತು ಆ ನಗೆಯು ಕೊಡುತ್ತಿದ್ದ ಉತ್ಸಾಹದ ಬಗ್ಗೆ, ಆಕೆಯ ಬೆಳಗಿನ ಮಂದಹಾಸದ ದರುಶನದಿಂದ ತನಗೆ ಸಿಗುತ್ತಿದ್ದ ಉತ್ಸಾಹ, ಉಲ್ಲಾಸ ಇದರ ಬಗ್ಗೆ ಹೇಳಲೇಬೇಕು.. ಇವಿಷ್ಟು ಆ ಎರಡು ಕ್ಷಣಗಳಲ್ಲಿ ಅನ್ನಿಸಿತು.. ಆದರೆ ಆ ಮಂದ ಬೆಳಕಿನಲ್ಲಿ ಮತ್ತೆ ತಿರುಗಿ ಮಾತಾಡಿಸಲೇ, ಅಥವಾ ಆಕೆಯಲ್ಲದೆ ಬೇರೆ ಯಾರೋ ಆಗಿದ್ದರೆ ಎಷ್ಟು ಅಭಾಸವಾಗುತ್ತದೆ.. ಎನ್ನಿಸಿತು ಮನಸು.. 

ಆಕೆ ತನ್ನ ಗಾಡಿಯನ್ನು ಸ್ಟಾರ್ಟ್ ಮಾಡಿಕೊಂಡು ಆ ಕತ್ತಲಲ್ಲಿ ಮರೆಯಾದಳು.. ಹಣ್ಣಿನ ಅಂಗಡಿಯಿಂದ ಎಫ್ ಎಂ ನಲ್ಲಿ ಹಾಡು ಬರುತ್ತಿತ್ತು

"ಕಣ್ಣಂಚಿನ ಈ ಮಾತಲಿ ಏನೇನೋ ತುಂಬಿದೆ.. "