Sunday, June 25, 2017

ಬರೆಯುವೆ ನಿನಗಾಗಿ..ಹೃದಯದೇ ಹಿತವಾಗಿ..


ತಣ್ಣನೆ ಗಾಳಿ.. ಮಸುಕು ಮಸುಕು ಪ್ರದೇಶ.. ಚುಮು ಚುಮು ಎನ್ನಿಸುವ ಮೈ ಮನಸ್ಸನ್ನು ಕಟ್ಟಿಗೆ ಮಾಡುವಂತಹ ಚಳಿ.. ಅಲ್ಲೊಂದು ಚಹಾದ ಅಂಗಡಿ.. ಅದರ ಸುತ್ತಾ ಮುತ್ತಾ ಒಂದಷ್ಟು ಮಂದಿ.. ಸಿಗರೇಟ್, ಬೀಡಿಗಳ ಧೂಮ.. ಕಂಡು ಕಾಣದಂತೆ ಮಾಯವಾಗುತ್ತಿದ್ದ ವಾಹನಗಳ ಬೆಳಕು.. 

ಇದರ ಮದ್ಯೆ ಎಫ್ ಎಂ ರೇಡಿಯೋದಲ್ಲಿ ಅಣ್ಣಾವ್ರ ದಾರಿ ತಪ್ಪಿದ ಮಗ ಚಿತ್ರದ ಅದ್ಭುತ ಹಾಡು ಪಿಬಿಎಸ್ ಧ್ವನಿಯಲ್ಲಿ... !
"ಕಣ್ಣಂಚಿನ ಈ ಮಾತಲಿ ಏನೇನೂ ತುಂಬಿದೆ.. "

ರಾಜೀವ್ ಒಂದು ಪುಟ್ಟ ಕೆಲಸದ ಮೇಲೆ ಒಂದು ಪುಟ್ಟ ಹಳ್ಳಿಗೆ ಹೋಗಿದ್ದ.. ಅದು ಹಳ್ಳಿಯಾಗಿದ್ದರೂ ಕೂಡ ನಾಗರೀಕತೆ, ಆಧುನಿಕತೆಗೆ ಕೊರತೆ ಇರಲಿಲ್ಲ.. ಆದರೂ ಹೊಸ ಜಾಗ.. ಹೊಸ ಜನ.. ಅವನ ಹೊಟ್ಟೆಯೊಳಗೆ ಚಿಟ್ಟೆಗಳನ್ನು ಅರಳಿಸಿದ್ದು ಸುಳ್ಳಾಗಿರಲಿಲ್ಲ.. 

ಆದದ್ದು ಆಗಲಿ.. ಬಂದದ್ದು ಬರಲಿ.. ಜಗತ್ತು ಇರುವಾಗ ಅದರ ಗತ್ತನ್ನು ನೋಡಿ ಬಿಡೋಣ ಎನ್ನುವ ಉತ್ಸಾಹ ಅವನದ್ದು.. 
ಬಸ್ಸಿನಿಂದ ಇಳಿದ ಅವನ ಕಣ್ಣಿಗೆ ಬಿದ್ದದ್ದು ಸುತ್ತ ಮುತ್ತಲ ದೃಶ್ಯಗಳು.. 

ಚಳಿ ಹೌದು ಕೊರೆಯುತ್ತಿತ್ತು.. ಉತ್ಸಾಹ ಆ ಚಳಿಯನ್ನು ಮರೆಸುತ್ತಿತ್ತು.. 

ಒಂದು ಕಿಂಗ್ ಸಿಗರೇಟ್ ಹಚ್ಚಿಕೊಂಡು.. ತನಗೆ ಇಷ್ಟವಾಗಿದ್ದ ಸ್ಟ್ರಾಂಗ್ ಕಾಫಿ ತೆಗೆದುಕೊಂಡು.. ಅಲ್ಲಿಯೇ ಒಂದು ಪುಟ್ಟ ಹಲಗೆಯಿಂದ ಮಾಡಿದ್ದ ಬೆಂಚಿನ  ಮೇಲೆ.. ಆರಾಮಾಗಿ ಹೊಗೆ ಬಿಡುತ್ತಾ ಕೂತಿದ್ದ.. 

ತಲೆಯಲ್ಲಿ ಅನೇಕ ಯೋಚನೆಗಳು.. ಜೀವನದ ಗುರಿಗಳು, ತನ್ನ ಕೆಲಸದಲ್ಲಿ ಸಾಧಿಸಬೇಕಿದ್ದ ಮೈಲಿಗಲ್ಲುಗಳು.. ತನ್ನ ಜೀವನಕ್ಕೆ ಮಾಡಿಕೊಳ್ಳಬೇಕಿದ್ದ ಕೆಲವು ಅವಶ್ಯಕತೆಗಳು.. ಒಳಗೆ ಹೋಗಿ ಹೊರಬರುತ್ತಿದ್ದ ನಿಕೋಟಿನ್ ಅಂಶ.. ಮತ್ತು ಒಳಗೆ ಹೋಗಿ ಬೆಚ್ಚಗೆ ಮಾಡುತ್ತಿದ್ದ ಕೆಫೀನ್ ಅಂಶ ಒಂದು ರೀತಿಯಲ್ಲಿ ಸ್ಫೂರ್ತಿ ಕೊಡುತ್ತಿತ್ತು.. (ಸಿಗರೇಟ್ ಸೇವನೆ ಹಾನಿಕರ ಎಂದು ಅರಿವಿದ್ದ ಅವನಿಗೆ ವರ್ಷಕ್ಕೆ ಒಂದೋ ಎರಡೋ ಮಾತ್ರ ... ಅದೂ ಸಹಿಸಲಾರದ ಚಳಿ ಇದ್ದಾಗ ಮಾತ್ರ ಅಥವಾ ಸಿಗರೇಟ್ ಬೇಕು ಅನಿಸಿದಾಗ ಮಾತ್ರ.. ಹವ್ಯಾಸವೂ ಅಲ್ಲಾ.. ಅಭ್ಯಾಸವೂ ಅಲ್ಲದ ಮಧ್ಯದ ಸ್ಥಿತಿಯಲ್ಲಿತ್ತು.. .. ಈ ಲೇಖನ ಧೂಮಪಾನವನ್ನು ಉತ್ತೇಜಿಸುವುದಿಲ್ಲ :-) )

ಇದೆ ಮತ್ತಿನಲ್ಲಿ ಹಾಗೆ ಕುಳಿತಿದ್ದ ಅವನಿಗೆ, ಸಿಗರೇಟ್ ತನ್ನ ಉಷ್ಣವನ್ನು ಕಳೆದುಕೊಂಡು ನಿಸ್ತೇಜವಾಗಿದ್ದು ಅರಿವಿಗೆ ಬಂದಿರಲಿಲ್ಲ.. ಕುಡಿದಿದ್ದ ಕಾಫಿ ಕಪ್ ಆ ಚಳಿಗೆ ಮುದುಡಿ ಬಾಡಿತ್ತು .. 

"ಅರೆ ರಾಜೀವ್.. ಹೇಗಿದ್ದೀರಾ?"

ಬಂಗಾರದ ವರ್ಣದ ಸೂರ್ಯ.. ತನ್ನ ಕಚೇರಿಗೆ ಮರಳುವ ಸಮಯವಾಗಿತ್ತು... ಅಂಬರವೆಲ್ಲಾ ರಂಗು ರಂಗಿನ ಚಿತ್ತಾರ.. ಸೂರ್ಯನ ಕಿರಣಗಳು..ಆ ಇಂಪಾದ ಧ್ವನಿಗೆ ಮತ್ತಷ್ಟು ಮಧುರತೆಯನ್ನು ತುಂಬಿತ್ತು.. 

ಮೆಲ್ಲಗೆ ಆ ಇನಿದನಿಯ ದಿಕ್ಕಿಗೆ ತಿರುಗಿದಾಗ.. ಆ ದಿನಕರನ ಕಿರಣಗಳ ಪ್ರಕಾಶದಲ್ಲಿ ಆ ದನಿಯ ಒಡತಿಯ ಮೊಗಾರವಿಂದ ಇನ್ನಷ್ಟು ಚೆಲುವಿನ ಗಣಿಯನ್ನು ತುಂಬಿತ್ತು.. ಮೊದಲೇ ಸುಂದರಿಯಾಗಿದ್ದ ಆಕೆ ಇನ್ನಷ್ಟು ಸುಂದರತೆಯನ್ನು ಬೀರಲು ಆ ಭಾಸ್ಕರ ತನ್ನ ಶಕ್ತಿ ಮೀರಿ ಪ್ರಯತ್ನ ಪಟ್ಟಿದ್ದು ಅರಿವಾಗುತ್ತಿತ್ತು.. 

ರಾಜೀವ ಒಂದಷ್ಟು ಹೊತ್ತು ಆ ಸುಂದರಿಯ ಮೊಗವನ್ನು ನೋಡುತ್ತಿದ್ದ.. ಅವಳ ಸುಕೋಮಲ ಕೈಗಳು ಇವನ ಕೈಯನ್ನು ಸೇರಿ ಹಸ್ತಲಾಘವ ಮಾಡುತ್ತಿತ್ತು.. ಆದರೆ ಆ ಸ್ಪರ್ಶದ ಅನುಭವವೇ ಇರಲಿಲ್ಲ.. ಬದಲಿಗೆ ಆ ಸುಂದರಿಯ ಮುಗ್ಧ ಸ್ನಿಗ್ಧ ಚೆಲುವು ಅವನ ಮನಸ್ಸನ್ನು ಆಕರ್ಷಿಸುತ್ತಿತ್ತು..

ಅವಳ ಕರದ ಸ್ಪರ್ಶ ಖುಷಿ ನೀಡುತ್ತಿತ್ತು..ಗಂಟಲಲ್ಲಿ ಮಾತು ಹೊರಡುತ್ತಿಲ್ಲಾ....

"ರಾಜೀವ್ ಹೇಗಿದ್ದೀರಾ?" ಮತ್ತದೇ ಕೋಗಿಲೆ ಗಾನ..

ಕೈ ಬಿಡಿಸಿಕೊಂಡು..ಮತ್ತೆ ಲೋಕಕ್ಕೆ ಮರಳಿದ ರಾಜೀವ..ಆ ಅನುಪಮ ಸೌಂದರ್ಯದಿಂದ ಕಂಗೊಳಿಸುತ್ತಿದ್ದ ಅವಳನ್ನು‌ ಮತ್ತೊಮ್ಮೆ ಮನಸಾರೆ ಕಣ್ಣಲ್ಲಿ ತುಂಬಿಕೊಂಡು...

"ಅರೇ...ಗೀತಾ ನೀನು...ನನಗೆ ನಂಬೋಕೆ ಆಗ್ತಿಲ್ಲಾ...ಅರೇ ವಾಹ್....ತುಂಬಾ ಖು...ನಂ....ಏನ್...so happ...".

ಯಾವ ಪದವೂ ಪೂರ್ಣ ಆಗುತ್ತಿಲ್ಲಾ..

ಅವಳಿಗೆ ಅರ್ಥವಾಯಿತು..
ಮತ್ತೊಮ್ಮೆ ಅವನ ಎರಡು ಕರಗಳನ್ನು ಹಿಡಿದು.."ರಾಜೀವ..ಮೊದಲು ನೀರು‌ ಕುಡಿ..ನಂತರ ಆ ಪುಟ್ಟ ಅಂಗಡಿಯಲ್ಲಿ‌ ಕಾಫಿ‌ಕುಡಿದು ಮಾತಾಡೋಣ....ಹಾ..ಆಮೇಲೆ ಒಂದು‌ ಮಾತು ನಿನಗೆ ಹೇಳಬೇಕು..!"..

ರಾಜೀವನ‌ ಹೃದಯದ ಬಡಿತ ತಾರಕಕ್ಕೆ....

ಕಾಫೀ ಆಯಿತು..ನಿಪ್ಪಟ್ಟು ಆಯಿತು..ಬೆಣ್ಣೆ ಬಿಸ್ಕತ್ತು ಆಯಿತು....

ಗೀತಾ ತನ್ನ ಬದುಕು, ತನ್ನ ಮನೆ, ಮನೆತನ, ಕೆಲಸ, ದೇಶ, ಭಾಷೆ, ಜಗತ್ತು ಎಲ್ಲದರ ಬಗ್ಗೆ ಅನಾಯಸವಾಗಿ ಮಾತಾಡುತ್ತಿದ್ದಳು...ರಾಜೀವನ ಕಿವಿಗೆ ಬೀಳುತ್ತಿತ್ತು ಆದರೆ ಹೃದಯಕ್ಕೆ ತಾಗುತ್ತಿರಲಿಲ್ಲ.......

"ಹೇ..ರಾಜೀವ..ಕೇಳಿಸ್ತಾ ಇದೆಯಾ.."

"ಹಾ ..ಹೇಳು..ಹೇಳು"

"ನಿನಗಾಗಿ‌ ಹುಡುಕುತ್ತಾ ಇದ್ದೇ ಕಣೋ..ಕಾಲೇಜುದಿನದ ಕೊನೆಯಲ್ಲಿ ನೀ ಹಸ್ತಾಕ್ಷರ ಕೇಳಿದಾಗ..ನಾ ನಾಳೆ ಅಂದೆ..ನೀ ಬರಲೇ ಇಲ್ಲಾ..ಆಮೇಲೆ ಪರೀಕ್ಷೆ..ನಾ ಎಲ್ಲೋ ನೀ ಎಲ್ಲೋ..ನೀನು ಕೊಟ್ಟ ಗ್ರೀಟಿಂಗ್ ಕಾರ್ಡ ಇನ್ನು ನನ್ನ ಬಳಿ‌ ಇದೆ...ನೀ ಸಿಗುತ್ತೀಯಾ ಎಂಬ ನಂಬಿಕೆ‌ ಇತ್ತು..."

"ಹೋಗಲಿ ಬಿಡು‌ ಹಳೆ ವಿಷಯ ಯಾಕೆ..ನೀ‌ ಹೇಗಿದ್ದೀಯಾ..?"

" ಆರಾಮ ಇದ್ದೀನಿ ಕಣೋ..ನೀನು‌ ಹೇಗಿದ್ದೀಯಾ...ಮದುವೆ ಆಯ್ತಾ..ಮಕ್ಕಳು"

ಕೊಂಚ ಮೌನಕ್ಕೆ ಶರಣಾದ ರಾಜೀವ..ಅವಳಿಗೆ ಅರಿವಾಯಿತು...

"ಹೋಗಲಿ ಬಿಡು..ಮತ್ತೆ ನಾ ಹೇಳಬೇಕಂಬ ವಿಷಯ..."

ಮೈಯೆಲ್ಲಾ ಕಿವಿಯಾದ

"ಹಾ ಹೇಳು..,ಗೀತಾ"..ಆ ಗೀತಾ ಎನ್ನುವ ದನಿಯಲ್ಲಿ ಮಮತೆ ಪ್ರೀತಿ ಇತ್ತು....

"ಲವ್ ಯೂ ರಾಜೀವ.....ಉಳಿದ ಬದುಕನ್ನು ನಿನ್ನ ಜೊತೆ ಕಳಿಯಬೇಕು ಎಂಬ ಆಸೆ..."

ರಾಜೀವ ಮಾತಿಲ್ಲಾ...ಏನು ಹೇಳ ಬೇಕೆಂಬ ಗೊಂದಲ...

ಹಿಡಿದಿದ್ದ ಕೈ ಬಿಡಿಸಿಕೊಂಡು ಹಾಗೆ ತಬ್ಬಿದಳು ರಾಜೀವನನ್ನು...ಅವಳ ಕೈಯಲ್ಲಿ ಹಿಡಿದಿದ್ದ ಮೊಬೈಲ್ ನಲ್ಲಿ ರಾಜೀವನ  ಜೀವನದ
ಇತಿಹಾಸ ಇದ್ದ ಮಾಹಿತಿ ಪತ್ರ ಇತ್ತು...ಅದನ್ನು ನೋಡಿ ಮೊಬೈಲಿಗೆ ಒಂದು ಕಿರು ಮುತ್ತನ್ನು ನೀಡಿದಳು....:-)