Friday, December 31, 2021

ಅಕ್ಕ ಜನುಮದಿನದ ಶುಭಾಶಯಗಳು... !

ಮಂಕುತಿಮ್ಮ ಸಿನಿಮಾ... ದ್ವಾರಕೀಶ್ ನಾಯಕನಾಗಲು ನಿರ್ಮಿಸಿದ ಚಿತ್ರವಿದು.. 
ಅಕ್ಕ ನನ್ನನ್ನು ಶಿವಮೊಗ್ಗದ ಚಿತ್ರಮಂದಿರಕ್ಕೆ ಆಕೆಯ ಗೆಳತಿಯರ ಜೊತೆ ಕರೆದೊಯ್ದಳು.. ನಾನು ಪಕ್ಕ ಮಂಕುತಿಮ್ಮನಾಗಿದ್ದ ಪ್ರಸಂಗವದು.. ಚಿತ್ರಮಂದಿರದೊಳಗೆ ಚಿತ್ರದ ತುಣುಕುಗಳ ಸ್ಥಿರ ಚಿತ್ರಗಳನ್ನು ನೋಡುತ್ತಾ ನಿಂತಿದ್ದೆ.. ಯಾವುದೋ ಮಾಯದಲ್ಲಿ ತಪ್ಪಿಸಿಕೊಂಡಿದ್ದೆ.. ಇವರೆಲ್ಲಾ ಚಿತ್ರಮಂದಿರದೊಳಗೆ ಹೋದರು .. ನಾನು ಎಲ್ಲಿಗೆ ಹೋಗಬೇಕೆಂದು ಗೊತ್ತಾಗದೆ.. ಟಾಕೀಸಿನ ಹೊರಗೆ ಬಂದೆ.. ಇನ್ನೂ ಚಿಕ್ಕ ವಯಸ್ಸಾದ್ದರಿಂದ ಟಿಕೀಟಿನ ಜಂಜಾಟ ಇರಲಿಲ್ಲ.. ಗೇಟ್ ಕೀಪರ್ ಏನು ಎಂದಾ.. ಹೊರಗೆ ಹೋಗಬೇಕು ಅಂದೇ.. ಬಾಗಿಲು ತೆಗೆದು ಕಳಿಸಿದ.. 

ನಾ ಸೀದಾ ಮನೆಗೆ ಬಂದೆ., ಅಮ್ಮ ಬಿಸಿ ಬಿಸಿ ಕೋಡುಬಳೆ ಮಾಡ್ತಾ ಇದ್ದರು.. ಸರಿಯಾಗಿ ಮುಕ್ಕಿದೆ.. ಸಿನೆಮಾಗೆ ಹೋಗ್ತೀನಿ ಅಂದ್ಯಲ್ಲೋ ಅಂದ್ರು ಅಮ್ಮ.. ಹೋಗಿದ್ದೆ ಅಕ್ಕ ಕಾಣಲಿಲ್ಲ ಮನೆಗೆ ಬಂದೆ .. ಅಂದೇ.. 

ಮನೆಗೆ ಬಂದ ಮೇಲೆ ನನಗೆ ಅಕ್ಕ ಸರಿಯಾಗಿ ಪೂಜೆ ಮಾಡಿದಳು... 

****** 

ನಾ ನಿನ್ನ ಬಿಡಲಾರೆ ಚಿತ್ರ.. ಆ ಕಾಲದಲ್ಲಿ ಸುಮಧುರ ಹಾಡಿಗಷ್ಟೇ ಅಲ್ಲದೆ.. ದೆವ್ವ ಭೂತ ದೇವರು ಇವುಗಳ ಮೇಲೆ ಆಧಾರಿತ ಚಿತ್ರ ಪ್ರೇಕ್ಷಕರ ಮನವನ್ನು ಸೆಳೆದಿತ್ತು.. ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿದ ಚಿತ್ರವಿದು.. ಅನಂತ್ ನಾಗ್ ಮೈ ಮೇಲೆ ದೆವ್ವ ಬರುವ ದೃಶ್ಯ ಬಂದಾಗಲೆಲ್ಲ.. ಅಕ್ಕ ನನ್ನನ್ನು ಮತ್ತು ನನ್ನ ತಮ್ಮ ಮುರುಳಿಯನ್ನು ಸೀಟಿನ ಕೆಳಗೆ ಮುಖ ಮಾಡಿ ಅಂತ ಹೇಳುತ್ತಿದ್ದಳು.. ಇಡೀ ಚಿತ್ರದಲ್ಲಿ ದೆವ್ವದ ದೃಶ್ಯ ಬಂದಾಗಲೆಲ್ಲ ಇದೆ ಕಾಯಕ ಮುಂದುವರೆಯುತ್ತಿತ್ತು .. 

****** 

ಆಗ ನಾ ಇನ್ನೂ ಚಿಕ್ಕ ಮಗು.. ಅಕ್ಕನಿಗೆ ಆಡುವ ವಯಸ್ಸು... ನನ್ನ ಅಮ್ಮ ನನ್ನನ್ನು ಅಕ್ಕನಿಗೆ ಕೊಟ್ಟು ನೋಡಿಕೋ ಎಂದು ಹೇಳಿ ತಮ್ಮ ಕಾಯಕ ಮಾಡುತ್ತಿದ್ದರು.. ಆಡುವ ವಯಸ್ಸು ಅಕ್ಕನಿಗೆ.. ಅವಳ ಗೆಳತಿಯರ ಜೊತೆ ಕುಂಟೆ ಬಿಲ್ಲೆ, ಕೊಕ್ಕೋ ಆಟದಲ್ಲಿ ನನ್ನನ್ನು ಮರೆಯುತ್ತಿದ್ದಳು.. ಕಲ್ಲು ಬೆಂಚಿನ ಮೇಲೆ ಕೂರಿಸಿ ಆಟವಾಡುತ್ತಿದ್ದಳು.. ನಾನು ಅಲ್ಲಿಂದ ದಬ್ ಅಂತ ಕೆಳಗೆ ಬಿದ್ದು ಬಡ್ಕೋತಾ ಇದ್ದಾಗ ಅಕ್ಕ ಪಕ್ಕದ ಮನೆಯವರು ರೀ ವಿಶಾಲಮ್ಮ ನಿಮ್ಮ ಮಗ ಅಳ್ತಾ ಇದ್ದಾನೆ ನೋಡಿ ಅಂದಾಗ ಅಮ್ಮ ಬಂದು ಅಕ್ಕನಿಗೆ ಪೂಜೆ ಮಾಡುತ್ತಿದ್ದರು.. 

******
ಬಡತನಕ್ಕೆ ಹಸಿವು ಜಾಸ್ತಿ ಅನ್ನುತ್ತಾರೆ.. ಮಗು ಅಂತ ನನಗೆ ಒಂದು ಇಡ್ಲಿ ತರಿಸಿ ತಿನ್ನಿಸಲು ಅಕ್ಕನಿಗೆ ಕೊಟ್ಟರೆ.. ಅಕ್ಕ ನನಗೆ ಒಂದೆರಡು ತುತ್ತು ತಿನ್ನಿಸಿ ಒಂದು ಚೂರು ತನ್ನ ಬಾಯಿಗೆ ಹಾಕಿಕೊಂಡರೆ ಮುಗಿಯಿತು.. ನನ್ನ ಬಾಯಿ ಬೊಂಬಾಯಿ ಆಗುತಿತ್ತು.. ತಗೋ ಅಕ್ಕನಿಗೆ ಪೂಜೆ... 

******
ಬೆಂಗಳೂರಿಗೆ ಬಂದ ಮೇಲೆ.. ಹಬ್ಬ ಹರಿದಿನಗಳು ಅಂದರೆ.. ಕೆಲಸಕ್ಕೆ ಸೇರಿದ್ದ ಅಕ್ಕ ನನಗೆ ಮತ್ತು ನನ್ನ ತಮ್ಮ ಮುರುಳಿಗೆ ಬಟ್ಟೆ ತರುವುದು ಖಾಯಂ ಆಗಿತ್ತು.. ನಾನು ಮುರಳಿ ಇಬ್ಬರೂ ವಠಾರದ ಮನೆಯ ಬಾಗಿಲಲ್ಲೇ ಕಾಯುತ್ತಾ... "ಮುರುಳಿ ಅಕ್ಕ ಈಗ ಬರುತ್ತಾಳೆ.. ಇನ್ನೇನೂ ಬರುತ್ತಾಳೆ" ಅಂತ ಸಮಾಧಾನ ಮಾಡಿಕೊಳ್ಳುತ್ತಿದ್ದೆವು.. ಅಕ್ಕ ದೂರದಿಂದ ಬರುವುದು ಕಂಡೊಡನೆ ಇಬ್ಬರೂ ರೇಸಿಗೆ ಬಿದ್ದಂತೆ ಅಕ್ಕನ ಬಳಿ ಓಡುತ್ತಾ ಹೋಗಿ.. ಅವಳ ಕೈಲಿದ್ದ ಕವರ್ ತೆಗೆದುಕೊಂಡರೆ ರಾಜ್ಯ ಗೆದ್ದಂತೆ.. 

ಒಮ್ಮೆ ಒಂದು ಹಬ್ಬದಲ್ಲಿ ಹಣಕಾಸಿನ ಕೊರತೆಯೋ ಅಥವ ಆಗಲಿಲ್ಲವೋ... ಹೊಸ ಬಟ್ಟೆ ಬರಲಿಲ್ಲ.. ಆಗಲೇ ಸಂಜೆ ಎಂಟು ಘಂಟೆ ದಾಟಿತ್ತು... ಅಕ್ಕ ಬರುವುದನ್ನೇ ನಾನು ಮುರುಳಿ ಕಾಯುತ್ತಿದ್ದೆವು.. ಕಂಡ ಕೂಡಲೇ ಓಡಿದ್ದೆ ಕೆಲಸ.. ಆದರೆ ನಿರಾಸೆ.. ಅಕ್ಕನ ಕೈ ಬರಿದಾಗಿತ್ತು.. 

ಮನಸ್ಸು, ಮುಖ ಎರಡೂ ಬಾಡಿತ್ತು.. ಇಬ್ಬರೂ ಅಕ್ಕನ ಕೈ ಹಿಡಿದುಕೊಂಡು ಮನೆಗೆ ಬಂದೆವು.. ಬಾಡಿದ ಮುಖ ಕಂಡು ಅಮ್ಮನಿಗೆ ಅರ್ಥವಾಯಿತು.. ಅಕ್ಕ ಅಮ್ಮನ ಕಣ್ಣುಗಳು ಏನೋ ಮಾತಾಡಿದವು.. ಅಕ್ಕ ನಮ್ಮಿಬ್ಬರ ತಲೆಯನ್ನು ನೇವರಿಸಿ.. ಬೆಳಿಗ್ಗೆ ತಂದು ಕೊಡ್ತೀನಿ ಆಯ್ತಾ.. ಎಂದಳು.. 

ನಮ್ಮಿಬ್ಬರದು ಒಂದೇ ಹಠ ಹಬ್ಬಕ್ಕೆ ಬಟ್ಟೆ ಬೇಕು ಅಂತ.. ಪರಿಸ್ಥಿತಿ ಅರ್ಥ ಮಾಡಿಕೊಳ್ಳುವಂತಹ ವಯಸ್ಸಲ್ಲ.. ಏನಾಗಿತ್ತೋ ಇಬ್ಬರೂ ಅವತ್ತು ಹಠ ಮಾಡಿದೆವು.. ನನಗೆ ಮುರುಳಿಗೆ ಅಮ್ಮನಿಂದ ಕವತಾಗಳು ಬಿದ್ದವು.. ಅಳುತ್ತಲೇ ಇಬ್ಬರೂ ಮಲಗಿದೆವು.. 

ಬೆಳಿಗ್ಗೆ ಅಕ್ಕ ಬಟ್ಟೆ ತಂದು ಕೊಟ್ಟ ಮೇಲೆಯೇ ಮುದುಡಿದ ತಾವರೆ ಅರಳಿದ್ದು.. 

******
ಅಮ್ಮ ಶ್ರೀಕಾಂತ ಕಾಲೇಜಿಗೆ ಹೋಗುತ್ತಾನೆ ಪಾಪ ಒಳ್ಳೆಯ ಬಟ್ಟೆಗಳೇ ಇಲ್ಲ.. ಮುಂದಿನ ತಿಂಗಳು ಸಂಬಳ ಬಂದ ಮೇಲೆ ಬಟ್ಟೆ ತೆಗೆದು ಕೊಡುತ್ತೇನೆ.. ಹೇಳಿದಂತೆಯೇ.. ಮುಂದಿನ ತಿಂಗಳು ಎರಡು ಜೊತೆ ಪ್ಯಾಂಟ್ ಶರ್ಟ್ ಬಟ್ಟೆ ಬಂತು.. ಟೇಲರ್ ಹತ್ತಿರ ಹೊಲಿಸಿಕೊಂಡು ಬಂದ ಮೇಲೆ ಹಾಕಿಕೊಂಡು ನಲಿಯುವ ಮೊದಲು ಅಪ್ಪ ಅಮ್ಮನಿಗೆ ಮತ್ತು ಅಕ್ಕನಿಗೆ ನಮಸ್ಕರಿಸಿದ್ದು ಇನ್ನೂ ಹಸಿರು.. 

******
ಕಾಲೇಜು ಮುಗಿಯಿತು.. ಏನು ಮಾಡ್ತೀಯ.. ಶ್ರೀಕಾಂತ?
ಗೊತ್ತಿಲ್ಲ ಅಕ್ಕ.. 
ಸರಿ ನಮ್ಮ ಆಫೀಸಿನಲ್ಲಿ ಬಾ ಕೆಲಸ ಕೊಡಿಸ್ತೀನಿ.. 
ಹೇಳಿದಂತೆಯೇ ನನ್ನ ಮೊದಲ ಕೆಲಸ ಶುರು ಆಗಿದ್ದು ಅಕ್ಕನ ಆಫೀಸ್ನಲ್ಲಿಯೇ..... 

ಆಗ ಕಂಪ್ಯೂಟರ್ ಯುಗ ಆಗ ತಾನೇ ಕಣ್ಣು ಬಿಡುತ್ತಿತ್ತು.. ಕಂಪ್ಯೂಟರ್ ಕಲಿ ಒಳ್ಳೆ ಕೆಲಸ ಸಿಗುತ್ತೆ ಅಂತ ಹೇಳಿ.. ಆ ಕಾಲದಲ್ಲಿ ಸುಮಾರು ಹದಿನೈದು ಸಾವಿರ ರೂಪಾಯಿಗಳನ್ನು ಸಿದ್ಧ ಮಾಡಿ ಕಂಪ್ಯೂಟರ್ ಕ್ಲಾಸಿಗೆ ಸೇರಿಸಿದಳು.. ಅಲ್ಲಿನ ನನ್ನ ಬದುಕು ವಿಭಿನ್ನ ಹಾದಿ ತುಳಿಯಿತು. ಇಂದು ನಾ ಏನಾದರೂ ಆಗಿದ್ದೇನೆ ಎಂದರೆ ಅದಕ್ಕೆ ಅಡಿಗಲ್ಲು ಹಾಕಿದವಳು ಅಕ್ಕ.. 

******
ಮನೆ ಕ್ಲೀನ್ ಮಾಡುವ ಹುಚ್ಚು ಯಾವಾಗಲೂ ಇತ್ತು, ಇದೆ, ಇರುತ್ತೆ.. ಹಲವಾರು ಬಾರಿ ಎಲ್ಲಾ ರಂಪ ಹಾಕಿಕೊಂಡು ಒಂದೊಂದೇ ಜೋಡಿಸುತ್ತಾ.. ಕೆಲವೊಮ್ಮೆ ಸುಸ್ತಾಗಿ ಆ ಕಸದ ಮಧ್ಯೆ ಮಲಗಿ ಬಿಡುತ್ತಿದ್ದೆ.. ಸರಿಯಾದ ಸಮಯದಲ್ಲಿ ಅಕ್ಕ ಬರುತ್ತಿದ್ದಳು.. ಮುಂದೆ ಹೇಳಬೇಕೇ..  ಶಂಖ ವಾದ್ಯ... 

ಮನೇಲಿ ಇರ್ತೀಯ ಮನೆ ಕ್ಲೀನ್ ಮಾಡೋಕೆ ಆಗೋಲ್ವಾ.. ಸುಮ್ಮನೆ ಮನೇಲಿ ನಿದ್ದ ಮಾಡ್ತೀಯ ಅನ್ನೋಳು.. ಸಿಟ್ಟು ಬರೋದು.. ಆದರೆ ಕೆಲಸವಿಲ್ಲದೇ ವಿದ್ಯಾಭ್ಯಾಸ ಮುಗಿಸಿ ಮನೇಲಿ ಇರುತ್ತಿದ್ದ ನನಗೆ ಬೇರೆ ಮಾತುಗಳು ಹೇಳೋಕೆ ಸಾಧ್ಯವಾಗುತ್ತಿರಲಿಲ್ಲ.. 

ಸರಿ ಅಕ್ಕನ ಮಾತುಗಳು ಮತ್ತೆ ಬರಬಾರದು ಅಂತ.. ಮನೆಯನ್ನು ಸ್ವಚ್ಛ ಮಾಡಿ.. ಅಕ್ಕ ಬರುವ ಹೊತ್ತಿಗೆ ಮನೆ ಲಕ ಲಕ ಹೊಳೆಯುತ್ತ ಇರೋದು.. ನನ್ನ ಹಣೆ ಬರಹ ಅವತ್ತು ಅಕ್ಕ ತಡವಾಗಿ ಬರುತ್ತಿದ್ದಳು.. ಅಷ್ಟೊತ್ತಿಗೆ ಅಮ್ಮ ಬಂದು ಮನೆಯ ಸ್ವಚ್ಛತಾ ಕೆಲಸ ಅಡುಗೆ ಮನೆಯಿಂದ ಶುರು ಮಾಡುತ್ತಿದ್ದರು.. ಅಕ್ಕ ನೋಡೇ ಮನೆ ಎಷ್ಟು ಕ್ಲೀನ್ ಆಗಿದೆ ಎಂದಾಗ.. ನೀನಲಿ ಮಾಡಿದ್ದೀಯಾ.. ಕಸದ ಮಧ್ಯೆ ನಿದ್ದೆ ಹೊಡೆದಿರ್ತೀಯ... ಇದು ಅಮ್ಮನ ಕೆಲಸ. ಅಮ್ಮನೇ ಮಾಡಿರೋದು... ನೀ ನಿದ್ದೆ ಹೊಡೆದಿದ್ದೀಯ ಅಷ್ಟೇ.. ಎಂದಾಗ ಅಮ್ಮನ ಕಡೆ ನೋಡುತಿದ್ದೆ.. ಅಮ್ಮ ನಗುತಿದ್ದರು.. ಸರಿ ಮತ್ತೆ ಅಕ್ಕನಿಂದ ವಿಷ್ಣು ಸಹಸ್ರನಾಮ.. 

*******
ಒಂದು ಮನೆಯಲ್ಲಿ ಈ ರೀತಿಯ ಅಕ್ಕ ಇದ್ದಾಗ ಮನೆ ಕೆಲಸಗಳು ಆರಾಮ್ ಅನಿಸುತ್ತದೆ.. ಆ ಕಾಲದಲ್ಲಿ ಕೋಪ ಬರುತ್ತಿತ್ತು.. ಬಟ್ಟೆ ತರದೇ ಹೋದರೆ ಅಕ್ಕನ ಮೇಲೆ ಮುನಿಸು ಬರುತ್ತಿತ್ತು.. ಆದರೆ ಇಂದು ಅದೆಲ್ಲದರ ಹಿಂದಿನ ನೋವು, ಕಷ್ಟಗಳು, ಅವಳ ಸಾಹಸಗಳು ನೆನಪಿಗೆ ಬರುತ್ತವೆ.. ಹೌದು ಇವತ್ತು ನೂರಾರು ರೂಪಾಯಿಗಳನ್ನು ಸಂಪಾದನೆ ಮಾಡುವ ಯೋಗ್ಯತೆ ಇದೆ, ಯೋಗವೂ ಇದೆ.. ಆದರೆ ಅದಕ್ಕೆಲ್ಲ ಅಡಿಪಾಯ ಹಾಕಿದ್ದು ನನ್ನ ಪ್ರೀತಿಯ ಅಕ್ಕ.. 

ಸ್ಫೂರ್ತಿ ಬೇಕು.. ಹೋರಾಟದ ಜೀವನಕ್ಕೆ ಇಂಧನ ಬೇಕು ಎಂದಾಗ.. ದೇವರಲ್ಲಿ, ಅಪ್ಪ ಅಮ್ಮನಲ್ಲಿ ಪ್ರಾರ್ಥನೆ ಖಂಡಿತ ಮಾಡುತ್ತೇನೆ.. ಆಗೆಲ್ಲ ಫೋಟೋದಲ್ಲಿರುವ ದೇವರು  ಶ್ರೀ ನಿನ್ನ ಅಕ್ಕ ಒಬ್ಬಳು ಸಾಕು ಕಣೋ.. ಅವಳನ್ನು ನೋಡು ಸಾಕು ಎಂದು ಹೇಳುತ್ತಾರೆ.. 

ನಿಜ ಸ್ಫೂರ್ತಿ ಬೇಕು ಎಂದಾಗ.. ನಾ ಪುಸ್ತಕ, ಸಿನಿಮಾ, ಭಾಷಣ ಇದ್ಯಾವುದು ನನ್ನ ಗಮನಕ್ಕೆ ಬರದೇ ಅಕ್ಕನ ಹೋರಾಟದ ಸಾರ್ಥಕ ಜೀವನ ನೆನಪಿಗೆ ಬರುತ್ತದೆ.. ತಕ್ಷಣ ಒಂದು ರೀತಿಯ ಚೈತನ್ಯ ಮನದ ಮೂಲೆಯಲ್ಲಿ ಬೆಳೆಯುತ್ತಾ ಹೋಗುತ್ತದೆ.. 

ಇಂತಹ ಪ್ರೀತಿಯ ಮಮತಾ ಮಯಿ ಅಕ್ಕನಿಗೆ ಇಂದು ಜನುಮದಿನ.. ಕೊಡಲು ನನ್ನ ಹತ್ತಿರ ಏನಿದೆ.. ಆದರೆ ಅವಳು ನೀಡಿದ ಅದ್ಭುತ ಬದುಕಿನ ಸಾರ್ಥಕ ಕ್ಷಣಗಳನ್ನು,  ಘಟನೆಗಳನ್ನು ಹೆಕ್ಕಿ ತೆಗೆದು.. ಲೇಖನ ಮಾಲೆ ಮಾಡಿದ್ದೇನೆ.. 

ಅಕ್ಕ ಜನುಮದಿನದ ಶುಭಾಶಯಗಳು... !

 

Sunday, December 26, 2021

ಮನೋ ನಿರ್ಧಾರ - ಅಪ್ಪನ ಸ್ಥಾನದಲ್ಲಿ ನಿಂತಿರುವ ಅಣ್ಣ ನಿನಗೆ ಹುಟ್ಟು ಹಬ್ಬದ ಶುಭಾಶಯಗಳು

 ಮನೋ ನಿರ್ಧಾರಕ್ಕೆ, ಧೃಡತೆಗೆ ದೈವ ಸಹಾಯ ಹೇಗಿರುತ್ತದೆ ಎನ್ನುವುದಕ್ಕೆ ಈ ಕೆಳಕಂಡ ಘಟನೆ ಸಾಕ್ಷಿ 

ಮತ್ತೊಮ್ಮೆ ಕೆಲವು ದಶಕಗಳ ಹಿಂದಕ್ಕೆ ನಿಮ್ಮನ್ನೆಲ್ಲ ಕರೆದೊಯ್ಯುತ್ತಿದ್ದೇನೆ. ನನ್ನ ಕುಟುಂಬದಲ್ಲಿ ನಡೆದ ಘಟನೆಗಳೇ ಹಾಗೆ.. 

ಸುಮಾರು ೧೯೭೬-೭೭... ಮೊದಲ ಮಗನಿಗೆ ಹನ್ನೊಂದು ವರ್ಷ ತುಂಬಿದ ಸಂಭ್ರಮ.. ಹನ್ನೊಂದಕ್ಕೆ ಮುಂಜಿ ಅಂದರೆ ಉಪನಯನ ಮಾಡಬೇಕು ಎನ್ನುವುದು ನಮ್ಮ ಅಪ್ಪನ ಆಸೆ. ಪರಿಚಯದವರು ಕೊಟ್ಟ ಮಾಹಿತಿ ಪ್ರಕಾರ, ಸಾಮೂಹಿಕ ಉಪನಯನ ನಡೆಯುತ್ತಿದೆ ಎಂದು ಗೊತ್ತಾಯಿತು. 

ಯೋಚನೆಯೇ ಇಲ್ಲ.. ತಕ್ಷಣ ಯೋಚನೆ ಮಾಡದೆ ಪರಿವಾರ ಸಮೇತ ಹೊರಟಿದ್ದು ದಾವಣಗೆರೆ ಚನ್ನಗಿರಿಯ ಬಳಿಯ ಬಸವಾಪಟ್ಟಣಕ್ಕೆ. 

ಆ ಸಮಯದಲ್ಲಿ ಅದ್ಭುತ ಎನ್ನಿಸುವಂಥ ಯಾಗ ನಡೆಯುತ್ತಿತ್ತು.  ಬಂದ ಭಕ್ತಾದಿಗಳಿಗೆ ಊಟ ಉಪಚಾರ ವ್ಯವಸ್ಥೆ ಬಗ್ಗೆ ನನ್ನ ಅಪ್ಪ ಅಮ್ಮ ಹೇಳಿದ್ದು ಇನ್ನೂ ಕಿವಿಯಲ್ಲಿ ಗುಯ್ ಅನ್ನುತ್ತಿದೆ. ಆಪಾಟಿ ದೊಡ್ಡ ದೊಡ್ಡ ಕಡಾಯಿಗಳಲ್ಲಿ ಅನ್ನ, ಸಾರು,ಹುಳಿ, ಮಜ್ಜಿಗೆ ಇರುತ್ತಿದ್ದವು ಎಂದು. 

ಮಹಾ ಯಜ್ಞಕ್ಕೆ ತಯಾರಾದ ಶಿಬಿರಗಳು - ಕೃಪೆ ಗೂಗಲೇಶ್ವರ 


ಅಡಿಗೆ ತಯಾರು  ಮಾಡಿದ ಸಾಹಸಿ ಬಾಣಸಿಗರು
 - ಕೃಪೆ ಗೂಗಲೇಶ್ವರ 


ಅಡಿಗೆ ತಯಾರು  ಮಾಡಿದ ಸಾಹಸಿ ಬಾಣಸಿಗರು
 - ಕೃಪೆ ಗೂಗಲೇಶ್ವರ 



 ಸಾಹಸಿ ಬಾಣಸಿಗರ ಪರಿಶ್ರಮ ಅನ್ನದ ಪರ್ವತ 
 - ಕೃಪೆ ಗೂಗಲೇಶ್ವರ 

ಇರಲಿ, ವಿಷಯ ಏನಂದರೆ, ಉಪನಯನ ಕಾರ್ಯಕ್ರಮ ಶುರುವಾಗಬೇಕಿತ್ತು.. ಉಪಯನಯನದ ಹುಡುಗ ಅರ್ಥಾತ್ ನನ್ನ ಅಣ್ಣ ವಿಜಯನಿಗೆ ಜ್ವರ ಅಂದರೆ ಜ್ವರ. ಸುಡುವ ಕಾವಲಿಯಾಗಿತ್ತು ಮೈ. ಅಪ್ಪ ಅಮ್ಮ ಒಂದು ಮರದ ಕೆಳಗೆ, ಈ ಮಗುವನ್ನು ತೊಡೆಯ ಮೇಲೆ ಹಾಕಿಕೊಂಡು, ಕೂತಿದ್ದ ಸ್ಥಿತಿ ನೋಡಿ, ಅಲ್ಲಿ ಓಡಾಡುವ ಜನರೆಲ್ಲಾ, ಮತ್ತು ಜೊತೆಯಲ್ಲಿದ್ದ ಬಂಧುಗಳು, ಅಯ್ಯೋ ಈ ಮಗುವಿಗೆ ಈ ಯಾಕೆ ಉಪಯನಯನ, ಮೊದಲು ಜ್ವರ ಬಿಡಲಿ ಎಂದು ಹೇಳಿದರು ಅಪ್ಪನದು ಒಂದೇ ಮಾತು. 

"ಗಾಯಿತ್ರಿ ಉಪದೇಶ ಮಾಡಿಸಲು ಕರೆದುಕೊಂಡು ಬಂದಿದ್ದೀನಿ. ಆ ದೇವಿ ಮತ್ತು ಇಲ್ಲಿನ ಗುರುಗಳು ಅವನನ್ನು ಉಳಿಸಿಕೊಳ್ಳುತ್ತಾರೆ.. ಆ ನಂಬಿಕೆ ನನದು ಇಷ್ಟರ ಮೇಲೆ ಆ ದೇವರ ಇಚ್ಛೆ. ... "  

ಇವತ್ತಿಗೂ ಅಣ್ಣ ಹೇಳುತ್ತಾನೆ, "ಅಂದು ಇಡಿ ಉಪಯನಯನ ಕಾರ್ಯಕ್ರಮದಲ್ಲಿ ಅವನಿಗೆ ನೆನಪಲ್ಲಿ ಉಳಿದದ್ದು ತನ್ನ ತಂದೆಯಿಂದ ಉಪದೇಶಿಸಿದ ಗಾಯಿತ್ರಿ ಮಂತ್ರ ಮಾತ್ರ.. ಇನ್ನೇನೂ ನೆನಪಿಲ್ಲ" 

ವಟುವಿಗೆ ಈ ಉಪನಯನ ಎರಡನೇ ಜನ್ಮ ಇದ್ದಂತೆ ಅಂದರೆ ಇನ್ನೊಂದು ಕಣ್ಣು ಬಂದಂತೆ. ಆಧ್ಯಾತ್ಮ ಪ್ರಪಂಚಕ್ಕೆ ಕಾಲಿಡಲು ಬೇಕಾದ ಇನ್ನೊಂದು ನಯನ ಉಡುಗೆಯಾಗಿ ಸಿಗುವ ಕ್ಷಣವೇ ಈ ಉಪನಯನ.

ಆ ಜಾಗವನ್ನು ನೋಡಬೇಕು, ಅಲ್ಲಿ  ಓಡಾಡಬೇಕು ಎನ್ನುವ ಹಂಬಲವಿದೆ  .. ಖಂಡಿತ ಆ ಹಂಬಲದ ಗುರಿಯನ್ನು ತಲುಪುತ್ತೇನೆ .. ಆದರೆ ಮನುಷ್ಯನಿಗೆ  ಆತುರ ಅಲ್ಲವೇ .. ಅಂತರ್ಜಾಲ ತಾಣವನ್ನು ಪಾತಾಳ ಗರಡಿ ಹಾಕಿ ಶೋಧಿಸುತ್ತಿದ್ದೆ.. ಆಗ ಸಿಕ್ಕಿದ ಅನರ್ಘ್ಯ ಚಿತ್ರಗಳು ಇವು ,. ಮನಸ್ಸಿಗೆ ಖುಷಿಯಾಯಿತು.. ಕೆಲವು ಚಿತ್ರಗಳು ಆ ಸ್ಥಳದ, ಆ ಸಮಯದ್ದು ಅಲ್ಲದೆ ಇರಬಹುದು.. ಆ ಗೂಗಲೇಶ್ವರನ ಮಡಿಲಲ್ಲಿ ಹೆಕ್ಕುವಾಗ ಅನರ್ಘ್ಯ ಮುತ್ತುಗಳ ಜೊತೆಯಲ್ಲಿ ವೈಡೂರ್ಯಗಳು ಸೇರಿಬಿಡುತ್ತದೆ.. 







ಕೃಪೆ ಗೂಗಲೇಶ್ವರ 

ಕೃಪೆ ಗೂಗಲೇಶ್ವರ 

 ನಾವು ಸಿದ್ಧ - ಕೃಪೆ ಗೂಗಲೇಶ್ವರ 

ಮಹಾಭಕ್ತರ ಕಡಲು - ಕೃಪೆ ಗೂಗಲೇಶ್ವರ 

ಅಣ್ಣಾವ್ರು ಇಲ್ಲ ಅಂದರೆ ನನ್ನ ಲೇಖನ
ಪೂರ್ಣ ಅನಿಸೋಲ್ಲ - ಕೃಪೆ ಗೂಗಲೇಶ್ವರ 


ವೆಬ್ಸೈಟ್ - ಕೃಪೆ ಗೂಗಲೇಶ್ವರ 


ಇಂದು ಆ ಮಗು ಇನ್ನೊಂದು ವರ್ಷಕ್ಕೆ ಕಾಲಿಟ್ಟು ಸಂಭ್ರಮಿಸುತ್ತಿದೆ.   

ನಮ್ಮೆಲ್ಲರ ಹಾರೈಕೆ ವಿಜಯನಿಗೆ.. 

ಅಪ್ಪನ ಸ್ಥಾನದಲ್ಲಿ ನಿಂತಿರುವ ಅಣ್ಣ ನಿನಗೆ ಹುಟ್ಟು ಹಬ್ಬದ ಶುಭಾಶಯಗಳು

ಅಪ್ಪನ ಛಲ, ತಾಳ್ಮೆ ಎರಡನ್ನು ವರವಾಗಿ ಪಡೆದಿದಿರುವ ನಿನಗೆ ಜೀವನದ ಪಥ ಯಶಸ್ವಿ ಹೂವಿನ ಪಥವಾಗಲಿ. 

ಹುಟ್ಟು ಹಬ್ಬದ ಶುಭಾಶಯಗಳು...!

Saturday, December 4, 2021

ಶಿವರಾಂ ಸ್ಪೆಷಾಲಿಟಿ.. .ಹೆಗಲು ಕೊಡುತ್ತಿದ್ದ ಭುಜಗಳನ್ನು ಹೊರುವ ಸಮಯ.. ಹೊರಟೆ ಬಿಟ್ಟರು

 




ನಾಗರಹಾವು 

"ಮೇರೇ ಸಪನೋಂಕಿ ರಾಣಿ ಕಬ್ ಆಯೆಗೀತು.. ಈಗಿನ ಕಾಲದ ಹುಡುಗರಿಗೆ ಹಿಂದಿ ಹಾಡು ಹೇಳೋದು ಹುಡುಗಿಯರನ್ನು ರೇಗಿಸೋದು.. ಯಾಕೆ ಕನ್ನಡ ಹಾಡು ಬರೋಲ್ವಾ.. ಅದೇ ಅವರ ಸ್ಪೆಷಾಲಿಟಿ.. "

"ಸಾರ್ ನಮ್ಮ ಕಾಲೇಜಿನಲ್ಲಿ ಎರಡು ತರಹ ಗೊರಿಲ್ಲಾಗಳನ್ನು ಕಂಡು ಹಿಡಿದ ಮಾರ್ಗರೇಟ್ ಅವರಿಗೆ ಅಂತಿಥಹ ಪ್ರಶಸ್ತಿ ಅಲ್ಲಾ.. ಒಳ್ಳೆಯ ಪ್ರಶಸ್ತಿಯನ್ನೇ ಕೊಡಬೇಕು"

"ತುಕಾ.. ಡೆಸ್ಕ್ ಮೇಲೆ ಬೀಳುತ್ತಿರುವ ಟಸ್ಸೆ ನಿನ್ನ ಮುಖದ ಮೇಲೆ ಬಿದ್ದಾತು ಕಣೋ.. ನಿನ್ನ ಪ್ಲೇಸ್ ಲಾಸ್ಟ್ ಬೆಂಚ್ ಕಣೋ"

ಈ ರಾಮಾಚಾರಿಗೆ ಇರೋ ಧೈರ್ಯ ನನಗೆ ಯಾಕೆ ಇಲ್ಲ.. ಅದು ನನ್ನ ಸ್ಪೆಷಾಲಿಟಿ

ಉಪಾಸನೆ                                                                                                                          ಸಂಗೀತದಲ್ಲಿರುವ ಉತ್ತರಾದಿ, ದಕ್ಷಿಣಾದಿ, ಪೂರ್ವಾದಿ, ಪಶ್ಚಿಮಾದಿ, ಪಾಶ್ಚಾತ್ಯಾದಿ ಸಂಗೀತ ಪ್ರಕಾರಗಳನ್ನು ಕಲಸಿ, ಬೆರೆಸಿ, ಪ್ರೇಕ್ಷಕರನ್ನು ನಲಿಸಿ, ಕುಣಿಸಿ, ತಣಿಸಿ,ಬೆದರಿಸಿ ಸ್ಟನ್ ಮಾಡಬೇಕೆಂಬುದೇ ಈ ಶಂಕರಾಭರಣನ ಲೈಫ್ ಆಂಬಿಶನ್

ಪಿಟೀಲಿಗೆ ಕಮಾನ್ ಹಾಕೋದು ಕಾಮನ್.. ತಂಬೂರಿಗೆ ಕಮಾನ್ ಹಾಕಿ ಕಮಾಲ್ ಮಾಡಬೇಕು 

ಎಡಕಲ್ಲು ಗುಡ್ಡದ ಮೇಲೆ                                                                                                                          ನಾ ಹೇಳಿದ ಹಾಗೆ ಕೇಳು.. ಆದರೆ ನಾ ಮಾಡಿದಂತೆ ಮಾಡಬೇಡ..                                                                ಲಿಮಿಟ್, ಗಮ್ಮತ್ತು.. ಈ ಎರಡು ಪದಗಳ ಜೊತೆಯಲ್ಲಿ ಆಟವಾಡುವ ಶೈಲಿ ಸೂಪರ್

ಶುಭಮಂಗಳ                                                                                                                                              ಸೂರ್ಯಂಗೂ ಚಂದ್ರಂಗೂ ಹಾಡಿನಲ್ಲಿ ಹೇಮಾ ಮತ್ತು ಪ್ರಭಾಕರನನ್ನು ಸೇರಿಸಲು ಪಡುವ ಪಾಡು ಇಷ್ಟವಾಗುತ್ತದೆ. 

"ಸಮುದ್ರದಲ್ಲಿ ಈ ಪಾಟಿ ನೀರೈತೆ.. ಕುಡಿಯೋಕೆ ಒಂದು ನೀರು ಸಿಗುತ್ತಾ ಹೇಳಿ"

ಕರ್ಣ                                                                                                                                                          ನಾ ಅಲ್ಲ ದೊಡ್ಡವರು.. ನೋಡಿ ಈ ಮನೆ ಇವರದ್ದು, ಹೊರಗೆ ನಿಂತಿರುವ ಕಾರು ಇವರದ್ದು, ಎಲ್ಲಾ ಇವರದ್ದು. .ಆದರೆ ಅವರು ಹಾಕಿಕೊಂಡಿರುವ ಜುಬ್ಬಾ ಮಾತ್ರ ನನ್ನದು 

ಚಲಿಸುವ ಮೋಡಗಳು                                                                                                                            ಹೇಳಿದ್ದನ್ನು ನೋಡಿದರೆ ಸಾಕು.. ಐ ಮೀನ್ ನೋಡಿದ್ದನ್ನು ಹೇಳಿದರೇ ಸಾಕು 

ಹೊಸ ಬೆಳಕು                                                                                                                                              ನೋಡಿ ರಾಜಾ ಕಿ ರಾವ್.. ನನಗೆ ನನ್ನ ಹೆಣ ಕೊಡಿ..  ನೋಡ್ರಪ್ಪಾ ಇಷ್ಟು ದಿನ ಸುಮ್ಮನಿದ್ದಿರಿ.. ಇನ್ನು ಸ್ವಲ್ಪ ದಿನ ಸುಮ್ಮನಿರಿ.. ಇವರಿಗೆ ಹಣ.. ನಿಮಗೆ ಹೆಣ ಕೊಡ್ತೀನಿ.. 

ಮಾಂಗಲ್ಯ ಭಾಗ್ಯ                                                                                                                                      ನೋಡು.. ಜೀವನದಲ್ಲಿ ಆಸೆ ಪಡಬಾರದು.. ಪಟ್ಟರೆ ಅದನ್ನು ದಕ್ಕಿಸಿಕೊಳ್ಳಬೇಕು.. you must aim it and get it

ಸರ್ವರ್ ಸೋಮಣ್ಣ 

ಏನ್ ಸರ್ ಟೆನ್ಶನ್ ನಲ್ಲಿ ಕಾಯ್ತಾ ಇದ್ದೀರಾ?                                                                                                ಇಲ್ಲಪ್ಪ ಕಾದು ಕಾದು ಟೆನ್ಶನ್ ಗೆ ಬಂದಿದ್ದೀನಿ!

ಆಪ್ತ ಮಿತ್ರ 

ನಾನು ಹೊರಗೆ ಹೋಗೋದರ ಬಗ್ಗೆ ಯೋಚಿಸುತ್ತಿಲ್ಲ... ನೀವು ಒಳಗೆ ಹೋಗೋದರ ಬಗ್ಗೆ ಯೋಚಿಸುತ್ತಿದ್ದೀನಿ 

ಹೀಗೆ ಹಾಸ್ಯ, ವೇದಾಂತ, ಉಡಾಫೆ, ಸಿಟ್ಟು, ಯಾವುದೇ ರೀತಿಯ ಮಾತುಗಳಿಗೆ ತಮ್ಮ ಛಾಪು ಕೊಟ್ಟು ಅದನ್ನು ಚಿರಸ್ಥಾಯಿಯಾಗಿ ನಿಲ್ಲಿಸುವ ತಾಕತ್ತು ಶಿವರಾಂ ಅವರಲ್ಲಿ ಅಪಾರವಾಗಿತ್ತು ಎಂಬುದು ಅವರ ಅವಿಸ್ಮರಣೀಯ ಚಿತ್ರಗಳಲ್ಲಿ ಕಾಣುತ್ತದೆ.. 

ಕನ್ನಡ ಚಿತ್ರಗಳ ಅಭಿಮಾನಿಯಾಗಿ ಸುಮಾರು ಐವತ್ತರ ದಶಕದ ಸಿನಿಮಾಗಳಿಂದ ಇತ್ತೀಚಿನ ಚಿತ್ರಗಳವರೆಗೆ ನೂರಾರು ಚಿತ್ರಗಳನ್ನು ನೋಡಿದ್ದೀನಿ.. ಶಿವರಾಂ ಅವರ ಪ್ರತಿ ಪಾತ್ರವು ವಿಭಿನ್ನ.. ಮತ್ತು ಪ್ರತಿ ಚಿತ್ರಗಳಲ್ಲಿಯೂ ಒಂದಲ್ಲ ಒಂದು ರೀತಿಯಲ್ಲಿ ವಿಭಿನ್ನವಾಗಿ ತೆರೆಯ ಮೇಲೆ ತರಲು ಪ್ರಯತ್ನ ಮಾಡುತ್ತಿದ್ದರು.. ಹಾಗಾಗಿ ಅವರ ಪ್ರತಿ ಪಾತ್ರವೂ ವಿಭಿನ್ನ ಛಾಪು ಮೂಡಿಸಿತ್ತು.. ಅವರ ಎಲ್ಲಾ ಚಿತ್ರಗಳ ಪಾತ್ರಗಳನ್ನೂ ಅಕ್ಕ ಪಕ್ಕದಲ್ಲಿ ಇಟ್ಟು ಜೋಡಿಸಿದರೆ ಪ್ರತಿ ಪಾತ್ರವೂ ಸೋಮವಾರ ಮಂಗಳವಾರ ಬುಧವಾರದ ಹಾಗೆ ಪ್ರತಿ ಪಾತ್ರವೂ ವಿಭಿನ್ನವಾಗಿ ಕಾಣುತ್ತದೆ.. 

ನೀವು ನನಗೆ ಬಯ್ತಾ ಇದ್ದೀರಾ ಅಂತ ಗೊತ್ತು.. ಶಿವರಾಂ ಅವರನ್ನು ಶರಪಂಜರ ಶಿವರಾಂ ಅಂತ ಮೊದಲು ಮೊದಲು ಗುರುತಿಸುತ್ತಿದ್ದ ಶರಪಂಜರದ ಭಟ್ಟನ ಪಾತ್ರದ ಬಗ್ಗೆ ಬರೆದಿಲ್ಲ ಅಂತ.. ಹೌದು ಹೌದು.. ನನಗೆ ಶಿವರಾಂ ಅಂತ ಮೊದಲು ಪರಿಚಯವಾಗಿದ್ದು ಇದೆ ಚಿತ್ರದಿಂದ.. 

"ಪ್ರತಿ ಪಂಗಡಕ್ಕೂ ಒಂದೊಂದು ಬಾವುಟ.. ಒಂದು ಬಾವುಟ ಕೇಳುತ್ತದೆ ಹಣ,, ಇನ್ನೊಂದು ಬಾವುಟ ಕೇಳುತ್ತದೆ ಕೆಲಸ.. ಆದರೆ ಈ ನಮ್ಮ ಬಾವುಟ ಹಿಡಿದರೆ ರುಚಿ ರುಚಿಯಾದ ಊಟವೋ ಊಟ.. "

"ಕಿಟಕಿ ಕಾಮಾಕ್ಷಮ್ಮ ಅಂತ ಹೆಸರಿಟ್ಟಿದ್ದೀನಿ.. ನೋಡಿ ನೋಡಿ ಕೊಂಕಳಲ್ಲಿ ಇಟ್ಟಿರುವ ಆ ಬಟ್ಟಲನ್ನು ಕೊಡಿ.. ಅದೇನು ಬೇಕೋ ಕೇಳಿ.. ನೋಡಿ ಮುಂಡೇದು ಸಾಲ ಕೇಳೋಕೆ ಅಂತಾನೆ ಹುಟ್ಟಿರುವ ಈ ಬಟ್ಟಲು.. "

"ನೋಡಿ ತೆಗೆದುಕೊಂಡಿರುವ ಸಾಲವನ್ನು ಕೊಡೊ ಅಭ್ಯಾಸ ಅವರಿಗೆ ಇಲ್ಲ . ನಿಮಗೆ ಕೇಳೋ ಅಭ್ಯಾಸವಿಲ್ಲ.. ನೋಡಿ.. ಅವರ ಮನೇಲಿ ಎಷ್ಟು ಜನರಿದ್ದಾರೋ ಕೇಳಿ.. ಇಲ್ಲೇ ಅಡಿಗೆ ಮಾಡಿ ಇದೆ ಹಾದಿಯಲ್ಲಿ ಸಾಗಿಸೋಣ"

ನುಣ್ಣನೆ ತಲೆ.. ಹಣೆಯ ಉದ್ದಕ್ಕೂ ನಾಮ.. ಸದಾ ಎಲೆ ಅಡಿಕೆ ಮೆಲ್ಲುವ ಬಾಯಿ.. ಸದಾ ಪಟ ಪಟ ಅಂತ ಮಾತಾಡುವ ಪಾತ್ರ.. ಶಿವರಾಂ ಸದಾ ಜೀವಂತ.. 

ಹಾಸ್ಯ ಪಾತ್ರ, ಮೆಲ್ಲನೆ ಸಮಯ ಸಾಧಿಸುವ ಬುದ್ದಿವಂತ ಪಾತ್ರ.. ಅವರ ಜೀವನದ ಉತ್ತರಾರ್ಧದಲ್ಲಿ ತೂಕದ ಪಾತ್ರ ಮಾಡುತ್ತಾ.. ಸಂದೇಶ ಕೊಡುವ ಸಂಭಾಷಣೆ ಹೇಳುವ ಶೈಲಿ ಸೊಗಸು.. 

ಅವರ ಭಾಷಾ ಸ್ಪಷ್ಟತೆ..ಚಿತ್ರರಂಗದ ಇತಿಹಾಸವನ್ನು ಜತನದಿಂದ ನೆನಪಲ್ಲಿ ಇಟ್ಟುಕೊಂಡು.. ಕೇಳಿದಾಗ ಸ್ಪಷ್ಟತೆ ಇಂದ ಹೇಳುವ ಚಂದ.. ಎಲ್ಲವೂ ಯು ಟ್ಯೂಬ್ ಗಳಲ್ಲಿ ಜೀವಂತವಾಗಿದೆ.. 

ನಟರಾಗಿ, ನಿರ್ಮಾಪಕರಾಗಿ, ನಿರ್ದೇಶಕರಾಗಿ, ಅನೇಕ ಚಿತ್ರಗಳಿಗೆ ದುಡಿದ ಹೆಚ್ಚುಗಾರಿಕೆ ಅವರದ್ದು.. 

ರಾಶಿ ಸಹೋದರರು ಎಂದು ಹೆಸರಾಗಿ.. ತಮ್ಮ ಸಹೋದರ ರಾಮನಾಥ್ ಜೊತೆಗೂಡಿ ಕನ್ನಡ ಚಿತ್ರಗಳನ್ನು ನಿರ್ಮಿಸಿದ್ದೇ ಅಲ್ಲದೆ, ಹಿಂದಿಯಲ್ಲಿ ಕೂಡ ಅಮಿತಾಬ್ ನಾಯಕತ್ವದಲ್ಲಿ ಚಿತ್ರಮಾಡಿ ಹೆಸರಾಗಿದ್ದರು.. 

ಆರಂಭಿಕ ಪುಟ್ಟಣ್ಣ ಅವರ ಚಿತ್ರಗಳಲ್ಲಿ ಜೀವ ತುಂಬಿ ಎಲ್ಲಾ ಘಟಕಗಲ್ಲಿಯೂ ಕೆಲಸ ಮಾಡಿ, ಪುಟ್ಟಣ್ಣ ಅವರಿಗೆ ಅಕ್ಷರಶಃ ಬಲಗೈ ಆಗಿದ್ದರು.. ಶರಪಂಜರ, ಗೆಜ್ಜೆಪೂಜೆ, ನಾಗರಹಾವು, ಎಡಕಲ್ಲು ಗುಡ್ಡದ ಮೇಲೆ, ಉಪಾಸನೆ, ಶುಭಮಂಗಳ ಚಿತ್ರಗಳಲ್ಲಿ ಅವರ ತೆರೆಯ ಮೇಲಿನ ಪಾತ್ರದಷ್ಟೇ ಅವರ ತೆರೆಯ ಹಿಂದಿನ ಪರಿಶ್ರಮವೂ ಅಷ್ಟೇ ವಿಶಿಷ್ಟ. 

ಅಣ್ಣಾವ್ರ ಹಲವಾರು ಚಿತ್ರಗಳಲ್ಲಿ ವಿಶಿಷ್ಟ ಅಭಿನಯ, ಸಂಭಾಷಣೆ, ಹಾಡುಗಳು ಎಲ್ಲದರಲ್ಲಿಯೂ ಮೆರೆದವರು ಶಿವರಾಂ.. 

ಅವರ ಜೀವನವನ್ನು ಪ್ರಣಯ ರಾಜ ಶ್ರೀನಾಥ್ ಅವರು ಒಂದು ಮಾತಿನಲ್ಲಿ ಒಂದು ಸಂದರ್ಶನದಲ್ಲಿ ಹೇಳಿದರು.. 

"ಕನ್ನಡ ಚಿತ್ರರಂಗದಲ್ಲಿ ಯಾರೇ ಇಹಲೋಕ ತ್ಯಜಿಸಿದರು ಒಂದು ಜೊತೆ ಭುಜ ಸದಾ ಸಿದ್ಧವಾಗಿರುತ್ತೆ.. ಅದು ಶಿವರಾಮಣ್ಣ ಅವರದ್ದು" 

ಇದು ಅಲ್ಲವೇ ಬದುಕಿನ ಸಾರ್ಥಕತೆ.. ಅನೇಕಾನೇಕ ಜೀವಗಳನ್ನು ಹೊತ್ತು ಅಂತಿಮ ಯಾತ್ರೆಗೆ ಸಹಕರಿಸಿದ ಅವರ ಭುಜಗಳು ಇಂದು ನಾಲ್ಕು ಭುಜಗಳ ಮೇಲೆ ಹೋರಾಡಲು ಸಿದ್ಧವಾಗಿದೆ.. 

ಬದುಕೇ ಹಸಿರು ಪ್ರೀತಿ ಬೆರೆತಾಗ.. .ಇದು ಅಣ್ಣಾವ್ರ ಒಂದು ಹಾಡಿನ ಸಾಲು.. ಶಿವರಾಂ ಅವರು ಇದೆ ರೀತಿ ಬದುಕಿ ಬಾಳಿದ್ದರು.. ಇಂದು ಅವರು ಬೆಳ್ಳಿ ತೆರೆಯಲ್ಲಿ ಅಜರಾಮರ.. !!!