Friday, December 27, 2019

ಒಲಿದು ಹೊಲೆದ ಬಂಧ!!!

ಬಲಶಾಲಿಯೇನೂ ಅಲ್ಲ.. ರವೀಶ.. ಆದರೆ ಅವನ ತೋಳಿನ ಸ್ನಾಯುಗಳು ನಿಮಿಷಕ್ಕೊಮ್ಮೆ ಊದಿ ಬಿಡುತ್ತಿದ್ದವು.. ಮತ್ತೆ ಒಂದೈದು ಕ್ಷಣಗಳು ಯಥಾಸ್ಥಿತಿಗೆ ಮರಳುತ್ತಿದ್ದವು.. ಕೋಣೆಯಲ್ಲೆಲ್ಲಾ ಕತ್ತಲೆಯೋ ಕತ್ತಲೆ ಅನುಭವ .. ಏನಾಗುತ್ತಿದೆ ಅರಿವಿಲ್ಲ.. ಕಣ್ಣಿಗೆ ಕಪ್ಪುಗಟ್ಟಿತ್ತು.. ನೋವು ಇದೆ ಅಂದರೆ ಇದೆ ಇಲ್ಲ ಅಂದರೆ ಇಲ್ಲ.. ಈ ರೀತಿಯ ಅವಸ್ಥೆ ಅವನದು..

ಪ್ರಯಾಸ ಪಟ್ಟು ಕಣ್ಣು ತೆರೆದ.. ಎದುರಿನ ಗೋಡೆ ಗಡಿಯಾರ ಒಂಭತ್ತು ನಲವತ್ತು ಅಂತ ಸಮಯ ಸಾರುತ್ತಿತ್ತು.. ಅದು ಬೆಳಿಗ್ಗೆಯೋ ಸಂಜೆಯೋ ಅರಿಯದು.. ಎಲ್ಲೆಲ್ಲೂ ನೀಲಿವರ್ಣದ ಸಮವಸ್ತ್ರಧಾರಿಗಳು.... ಒಬ್ಬಾತ ಬಳಿಬಂದ..

"ರವೀಶ ಏನಾದರೂ ಕುಡಿಯುತ್ತೀರಾ.. "

ತಲೆ ಅಲ್ಲಾಡಿಸಿದ.. ಬಾಯಿಂದ ಮಾತುಗಳು ಹೊರಬರುತ್ತಿಲ್ಲ.. ಅರೆ ಏನಾಯಿತು.. ಮರದ ಬಾಯಿಯಾಗಿದ್ದರೆ ಇಷ್ಟೊತ್ತಿಗೆ ಒಂದು ಹತ್ತು ಜೊತೆ ಒಡೆದು ಹೋಗುತ್ತಿತ್ತು ಎಂದು ಸಿಕ್ಕ ಸಿಕ್ಕವರೆಲ್ಲರ ಹತ್ತಿರ ಪ್ರೀತಿಯಿಂದ ಬಯ್ಸಿಕೊಳ್ಳುತ್ತಿದ್ದ ರವೀಶನ ಗಂಟಲಿಂದ ಮಾತುಗಳಿಲ್ಲ..

ಕೈಯಿಂದಲೇ ಸನ್ನೆ ಮಾಡಿದ.. ಏನಾಗಿದೆ ಅಂತ.. "ಏನಿಲ್ಲ ಸರ್ ಒಂದು ಪುಟ್ಟ ಅಪಘಾತ.. ಸರಿ ಹೋಗುತ್ತೀರಾ ಬಿಡಿ.. " ಮುಂದಿನ ವಿವರ ಆವ ಹೇಳಿದನೋ ಇಲ್ಲ ರವೀಶನಿಗೆ ಕೇಳಿಸಿತೋ ಅರಿಯದು..

ಆಸ್ಪತ್ರೆ ಎಂದರೆ ಅದೊಂದು ರೀತಿಯ ಬಲವಂತದ ಮಾಘ ಸ್ನಾನ ಎಂದುಕೊಂಡಿದ್ದ ರವೀಶನಿಗೆ.. ಇದೊಂದು ರೀತಿಯ ಪರೀಕ್ಷೆ ಎನ್ನಬಹುದು.. ಏನಾಗಿದೆ ಗೊತ್ತಿಲ್ಲ.. ಗೊತ್ತಿದ್ದರೂ ಹೇಳದ ಸಮವಸ್ತ್ರಧಾರಿಗಳು.. ನೀ ಜೊತೆಯಿದ್ದರೆ ನನಗೆ ಆನೆ ಬಲ ಕಣೆ ಎಂದು ಮಾತಿಗೆ ಹೇಳುತ್ತಿದ್ದ ರವೀಶನ ತೋಳುಗಳಿಗೆ ಕ್ಷಣಕ್ಕೊಮ್ಮೆ ಆನೆ ಬಲ ಬರುತ್ತಿತ್ತು..

ಅದೇನು ಅಂದ್ರಾ.. ಬಿಪಿ ಮಾನಿಟರ್ ಮಾಡೋಕೆ ತೋಳಿಗೆ ಕಟ್ಟಿದ್ದ ಉಪಕರಣದ ಬೆಲ್ಟ್.. ಕ್ಷಣಕ್ಕೊಮ್ಮೆ ಗಾಳಿ ಒತ್ತಡ ಹೇರಿ.. ತೋಳುಗಳು ಸಿಕ್ಸ್ ಪ್ಯಾಕ್ ಸೆವೆನ್ ಪ್ಯಾಕ್ ಯೈಟ್ ಪ್ಯಾಕ್ ಎನ್ನುವಂತೆ ಭಾಸವಾಗುತ್ತಿದ್ದ ಕ್ಷಣಗಳು.. ಏನೋ ಒಂದು ರೀತಿಯ ಖುಷಿ.. ನನಗೂ ಪೈಲ್ವಾನ್ ಆಗುವ ಯೋಗವಿದೆ ಅಂತ..

ಅಂದಿನ ರಾತ್ರಿ ನೋಡಲು ಯಾರೂ ಬರಲಿಲ್ಲ.. ಅಥವಾ ಬಂದಿದ್ದರೂ ಅರಿವಿರಲಿಲ್ಲ..ಮರುದಿನ ನೋಡಲು ಯಾರೋ ಬಂದರು.. ಗುರುತು ಸಿಗಲಿಲ್ಲ.. ಗಗನಯಾತ್ರಿಗಳ ಹಾಗೆ ಕೈಗೆ, ಮೊಗಕ್ಕೆ, ದೇಹಕ್ಕೆ ಎಲ್ಲೆಲ್ಲೂ ಸಮವಸ್ತ್ರ.. ಮೆಲ್ಲಗೆ ಮೊಗದ ಮೇಲಿನ ಬಟ್ಟೆ ತೆಗೆದು.. ನಾನು ಕಣೋ ರವೀಶ ಎಂದಾಗ.. ಏನಾಯಿತು ನನಗೆ ಎಂದು ಕೇಳಿದ.. "ಹೀಗಾಯಿತು.. ಹಾಗಾಯಿತು.. ತಲೆ ಕೆಡಿಸಿಕೊಳ್ಳಬೇಡ.. ಎವ್ರಿಥಿಂಗ್ ವಿಲ್ ಬಿ ಆಲ್ ರೈಟ್" ಅಂತ ಹೇಳಿ ತಲೆ ಸವರಿ ಕಣ್ಣುಗಳಲ್ಲಿ ಜಿನುಗುತ್ತಿದ್ದ ಭೋರ್ಗರೆತ ತಡೆದು ಹೊರಟೆ ಬಿಟ್ಟಿತ್ತು ಆ ವ್ಯಕ್ತಿ..

ಅಂದಿನಿಂದ.. ಅದೊಂತರ ನಿರಂತರ ಕಾಯಕವಾಗಿ ಬಿಟ್ಟಿತ್ತು.. ಬರುವವರು ಬಂದು ಕುಶಲ ಕ್ಷೇಮ ವಿಚಾರಿಸಿ.. ತೋಳುಗಳಲ್ಲಿ ಆನೆ ಬಲವಿದ್ದರೂ ಧೈರ್ಯ ಹೇಳಿ ಹೋಗುತ್ತಿದ್ದರು... ಗಂಜಿ, ಕಾಫಿ, ಮಾತ್ರೆಗಳು, ನೀರು ಬಾಯಿಗೆ ಹೋಗುತ್ತಿದ್ದರೇ.. ಇಂಜೆಕ್ಷನ್ ರೂಪದಲ್ಲಿ ಸುಧಾರಿಸಿಕೊಳ್ಳೋಕೆ ಔಷಧಿಗಳು ನರಗಳ ಮೂಲಕ  ದೇಹವನ್ನು  ಸೇರುತ್ತಿದ್ದವು.. ಕಣ್ಣಿನ ಭಾದೆ ಇದ್ದರೂ, ಅಲ್ಲಿನ ಸಮವಸ್ತ್ರಧಾರಿಗಳ ಹತ್ತಿರ ನಿಮ್ಮ ಊರು, ನಿಮ್ಮ ಕೆಲಸ, ನಿಮ್ಮ ಹೆಸರು ಅದು ಇದು ಮಾತಾಡುತ್ತಾ, ಅವರನ್ನು ನಗಿಸುತ್ತಾ.. "ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗುತ್ತಿದ್ದವನಿಗೆ ಒಂದು ಚೂರು ರೆಸ್ಟ್ ಎಂದು ಹೀಗಾಗಿದೆ" ಎಂದು ಅವರಿಗೆ ಹೇಳುತ್ತಾ ತನಗೆ ತಾನೇ ಸಮಾಧಾನ ಮಾಡಿಕೊಳ್ಳುತ್ತಿದ್ದ ರವೀಶ..

ಒಂದು ಕಣ್ಣು ಮುಚ್ಚಿದ್ದರೂ.. ಇನ್ನೊಂದು ಕಣ್ಣಿನಲ್ಲಿ ಸುತ್ತಮುತ್ತಲ ಜಗತ್ತು ನೋಡುತ್ತಿದ್ದ ರವೀಶನಿಗೆ ಅಚ್ಚರಿ ಕಾದಿತ್ತು.. ಹಸಿರು ಬಣ್ಣದ ಕೋಟು ತೊಟ್ಟ ಒಬ್ಬರು ಬಂದು.. ರವೀಶ ಹೇಗಿದ್ದೀರಾ.. ನಾಲಿಗೆ ತೆಗೆಯಿರಿ.. ಕೈ ಎತ್ತಿ.. ಕೂರೋಕೆ ಆಗುತ್ತಾ.. ಎಲ್ಲಿ ಕಾಲನ್ನು ಆಡಿಸಿ.. ಒಂದು ಕಾಲನ್ನು ಮೇಲೆ ಎತ್ತಿ.. ಆ ಗುಡ್.. ಹುಷಾರಾಗುತ್ತೀರಾ ಯೋಚನೆ ಮಾಡ್ಬೇಡಿ ಎಂದು ಧೈರ್ಯ ತುಂಬಿ ಹೋಗುತ್ತಿದ್ದರು.. ಅವರ ಹೆಸರು ತಿಳಿದುಕೊಳ್ಳುವ ಬಯಕೆ.. ಆದರೆ ಕೇಳುವುದು ಹೇಗೆ.. ಮಾರನೇ ದಿನ ಹೇಗಾದರೂ ಹೆಸರು ಕಂಡು ಹಿಡಿಯಲೇ ಬೇಕು ಎಂದು ಆಕೆ ತೊಟ್ಟಿದ್ದ ಕೋಟಿನ ಅಂಚಿನಲ್ಲಿ ಕಂಡ ಹೆಸರು ಒಂದು ಕ್ಷಣ ಒಂದು ಕಣ್ಣನ್ನು ಅರಳಿಸಿತು..

"ಗೀತಾ" ಅರೆ ವಾಹ್.. ಅವನಿಗೆ ಬಲು ಇಷ್ಟವಾದ ಪ್ರೀತಿಯ ಹೆಸರು.. ಜಗದಲ್ಲಿ ಆ ಹೆಸರನ್ನು ಅವನು ಪ್ರೀತಿಸಿದಷ್ಟು ಯಾರೂ ಪ್ರೀತಿಸಲು ಸಾಧ್ಯವಿಲ್ಲವೇನೋ ಎನ್ನುವಷ್ಟು. ಮೊಗ ನೋಡಿದ.. ಸ್ವಲ್ಪ ಗೋಧಿಬಣ್ಣ.. ಮುಖ ಲಕ್ಷಣ ಅದೇ ಇತ್ತು.. ಮನಸ್ಸು ಮೆಲ್ಲಗೆ ಕಾಲೇಜಿನ ದಿನಗಳಿಗೆ ಜಾರಿತ್ತು..

"ಮೇಡಂ.. ನಿಮ್ಮ ನೋಟ್ಸ್ ಕೊಡುತ್ತೀರಾ.. "

"ಇವತ್ತು ಸ್ವಲ್ಪ ಬರೀಬೇಕು.. ನಾಳೆ ಕೊಟ್ಟರೆ ಆಗುತ್ತಾ.. ನಾಳೆ ಖಂಡಿತ ಕೊಡುವೆ"

"ಸರಿ ಮೇಡಂ"

ಸೂರ್ಯನ ಉದಯಕ್ಕೆ ಕಾದು... ಶಿಸ್ತುಗಾರ ಪುಟ್ಟಸ್ವಾಮಿಯ ಹಾಗೆ ಸಿದ್ಧವಾಗಿ ಕಾಲೇಜಿಗೆ ಬಂದ.. ಅವಳನ್ನು ಕಂಡ ಕೂಡಲೇ.. ಹಲ್ಲು ಕಿರಿದ.. ಅವಳು ನಸು ನಕ್ಕಳು.. ಕಾಲೇಜು ಮುಗಿದು ಮನೆಗೆ ಹೊರಡಲು ತಯಾರಾಗಿದ್ದಾಗ.. ಅವಳೇ ಬಂದು.. "ರವೀಶ.. ಎರಡು ದಿನ ಆದ ಮೇಲೆ ಕೊಡಿ.. " ಎಂದು ನಾ ಅವಧಿ ಕೇಳುವ ಮೊದಲೇ ತನ್ನ ಸಮಯ ಕೊಟ್ಟು ಕೈಬೀಸಿಕೊಂಡು ನಗುತ್ತಾ ರವೀಶನ ಮುಂದೆ ಸಾಗಿದ್ದಳು.. ಸುಂದರ ನೆಡಿಗೆಯ ಆ ಹುಡುಗಿ ಬಸ್ ಸ್ಟಾಪ್ ಹತ್ತಿರ.. ಒಮ್ಮೆ ತಿರುಗಿ ನೋಡಿ... ಕಿಸಕ್ ಅಂತ ಕಣ್ಣಿನಲ್ಲಿಯೇ ನಕ್ಕಾಗ.. ರವೀಶನ ಎದೆ ನಗಾರಿಯಾಗಿತ್ತು..

ಮುದ್ದಾದ ಅಕ್ಷರಗಳು.. ಪುಸ್ತಕದಲ್ಲೆಲ್ಲಾ ಹರಡಿತ್ತು... ಎಷ್ಟು ನಾಜೂಕಾಗಿ ನೋಟ್ಸ್ ಬರೆದುಕೊಂಡಿದ್ದಾಳೆ.. ಹಾಟ್ಸ್ ಆಫ್ ಗೀತಾ.. ಎಂದು.. ಹೇಳುತ್ತಾ.. ತನಗೆ ಬೇಕಾದಷ್ಟು ನೋಟ್ಸ್ ಬರೆದುಕೊಂಡು.. ಅವಳು ಎರಡು ದಿನ ಅವಧಿಕೊಟ್ಟಿದ್ದರೆ.. ಇವನು ಒಂದೇ ದಿನದಲ್ಲಿ ಮುಗಿಸಿ.. ಮಾರನೇ ದಿನವೇ ನೋಟ್ಸ್ ವಾಪಸ್ ಕೊಡಲು ಅವಳನ್ನು ನೋಡಲು ಹೋದ..

"ನಾಳೆ ಕೊಟ್ಟಿದ್ದರೆ ಚೆನ್ನಾಗಿತ್ತು.. ಇವತ್ತು ಆ ಕ್ಲಾಸ್ ಇಲ್ಲ.. ಪುಸ್ತಕ ಸುಮ್ಮನೆ ಹೊರೆ.. ನಾಳೆ ಕೊಡಬಹುದಾ ಇಫ್ ಯು ಡೋಂಟ್ ಮೈಂಡ್.. "

ಆ ಧ್ವನಿಗೆ ಯಾರೇ ಆದರೂ ಮರುಳಾಗಬೇಕಿತ್ತು.. ಅರೆ ನನ್ನ ಗೀತಾ.. ಬೆಟ್ಟದ ಮೇಲಿಂದ ಧುಮುಕು ಅಂದರೂ ಧುಮುಕುವ ರವೀಶನ ಮನಸ್ಸು.. ಅವಳು ಹೇಳಿದ್ದಕ್ಕೆ ಸರಿ ಎಂದಿತ್ತು..

ಮಾರನೇ ದಿನ.. ಹೊಸ ವರ್ಷ.. ಶುಭಾಶಯಗಳನ್ನು ಹೇಳಿ ತನ್ನ ಮನದಿಂಗಿತ ಹೇಳಬಹುದು ಎಂದು.. ಎರಡು ಮುದ್ದಾದ ಬಿಳಿ ಪಾರಿವಾಳಗಳು ಪ್ರೀತಿಸುವ ಹೃದಯವನ್ನು ಎತ್ತಿಕೊಂಡು ಹಾರುತ್ತಿರುವ ಒಂದು ಸುಂದರ ಗ್ರೀಟಿಂಗ್ ಕಾರ್ಡ್ .. ಅದರಲ್ಲಿ "ಒಲವಿನ ಗೀತಾ.. ನನಗೆ ನೀವೆಂದರೆ ಇಷ್ಟ.. ನಿಮಗೂ ಇಷ್ಟವಾದರೆ.. ಈ ಹೀರೋ ಪೆನ್ನಿನಲ್ಲಿ ಆಟೋಗ್ರಾಫ್ ಹಾಕಿ.. ಪೆನ್ನನ್ನು ನೀವು ಇಟ್ಟುಕೊಳ್ಳಿ.. ನಿಮ್ಮ ಹೀರೊ ಆಗೋಕೆ ನನಗೆ ಅವಕಾಶ ಕೊಡಿ" ಅಂತ ಪುಟ್ಟದಾದ ನೋಟ್ ಒಂದನ್ನು ಆ ಪುಸ್ತಕದಲ್ಲಿಟ್ಟು.. ಅವಳಿಗೆ ಕೊಟ್ಟ.

ಪುಸ್ತಕ ಪಡೆದವಳು.. ಯಾವುದೇ ಭಾವ ತೋರದೆ ತನ್ನ ಬ್ಯಾಗಿನಲ್ಲಿ ಇಟ್ಟುಕೊಂಡು ಥ್ಯಾಂಕ್ಸ್ ರವೀಶ ಎಂದು ಹೇಳಿ ಮಿಲಿಯನ್ ವಾಟ್ ನಗು ಕೊಟ್ಟು ಮನೆಯ ಹಾದಿ ಹಿಡಿದಳು..

ಮರುದಿನ ಅವಳ ಬರುವಿಕೆಗೆ ಕಾಯುತ್ತಿದ್ದ.. ತನಗಿಷ್ಟವಾದ ನೀಲಿ ವರ್ಣದ ಚೂಡಿದಾರ.. ತಲೆಗೆ ಚಂದದ ಮಲ್ಲಿಗೆ ಹೂವು ಅವಳ ನೀಳ ಜಡೆಯನ್ನು ಅಲಂಕರಿಸಿತ್ತು.. ನೀಳ ನಾಸಿಕ.. ಮುದ್ದಾದ ಕಣ್ಣುಗಳು.. ಇನ್ನೇನೂ ನಾವಿಬ್ಬರೂ ಕೂಡಿಬಿಡುತ್ತೇವೆ ಎನ್ನುವಂತಹ ಅವಳ ಹುಬ್ಬು.. ಕುಂಕುಮದ ಬೊಟ್ಟು.. ಎರಡೂ ಕೈಗಳಲ್ಲಿ ಯಾವಾಗಲೂ ಮಿನಿಮಮ್ ಆರು ಆರು ಬಳೆಗಳು.. ಕಾಲಲ್ಲಿ ಗೆಜ್ಜೆ.. ಅದುವರೆವಿಗೂ ಅವಳು ಅಷ್ಟು ಸುಂದರಿ ಎನಿಸಿರಲಿಲ್ಲ

ಹತ್ತಿರ ಬಂದು.. "ರವೀಶ.. ಕಾಲೇಜು ಮುಗಿದ ಮೇಲೆ ಸಿಗುತ್ತೀರಾ.. " ಅಷ್ಟೇ ಹೇಳಿ ತನ್ನ ಗೆಳತಿಯರ ಕೂಡ ಹೊರಟಿದ್ದಳು.. ಅಂದು ಕಾಲೇಜಿನಲ್ಲಿ ಏನು ಪಾಠ ಹೇಳಿದರೋ.. ಏನು ನೋಟ್ಸ್ ಕೊಟ್ಟರೋ ಒಂದೂ ಅರಿವಿಲ್ಲ.. ಕೊನೆ ಪೀರಿಯಡ್ಡಿಗೆ ಕಾಯುತ್ತಿತ್ತು ಮನಸ್ಸು..

ಘಂಟೆ ಜೋರಾಗಿ ಹೊಡೆದಾಗ.. ಅದು ಕೇಳಿಸಲಿಲ್ಲ.. ಕಾರಣ ರವೀಶನ ಹೃದಯ ಅದಕ್ಕಿಂತ ಜೋರಾಗಿ ಹೊಡೆದುಕೊಳ್ಳುತ್ತಿತ್ತು..

ಕಾಲೇಜಿನ ಕ್ಯಾಂಟೀನ್ ಹತ್ತಿರ ನಿಂತಿದ್ದಳು. ಕೈಯಲ್ಲಿ ಒಂದು ಗುಲಾಬಿ ಹೂವು..

"ರವೀಶ..ನಿಮ್ಮ ಪ್ರೀತಿಗೆ ನಾ ಚಿರಋಣಿ.. ನಿಮ್ಮನ್ನು ನಾಯಕನಾಗಿ ನನ್ನ ಬಾಳಿನಲ್ಲಿ ಮೂಡಿಸಬೇಕು ಎಂಬ ಆಸೆ ನನಗೂ ಇತ್ತು.. ನೀವು ಅದನ್ನು ಹೇಳಿ ನನ್ನ ಕೆಲಸ ಹಗುರ ಮಾಡಿದಿರಿ..ನೀವು ಕೊಟ್ಟ ಗ್ರೀಟಿಂಗ್ ಕಾರ್ಡ್ ಅದ್ಭುತವಾಗಿದೆ.. ಖಂಡಿತ ಪ್ರೀತಿಯನ್ನು ಆ ಎತ್ತರಕ್ಕೆ ಏರಿಸಬಲ್ಲವು ನಾವು.. ಆದರೆ.. "

"ಸರ್.. ಸರ್... ಮಾತ್ರೆ ತೆಗೆದುಕೊಳ್ಳಬೇಕು ಏಳಿ ಸರ್"

ನರ್ಸಮ್ಮ ಬಂದು ಎಬ್ಬಿಸಿದಾಗ ಹಳೆ ನೆನಪುಗಳು ಕೈಗೆ ಹಾಕಿದ ಗ್ಲುಕೋಸ್ ಡ್ರಿಪ್ ತರಹ ಕರಗಿಹೋಗಿತ್ತು..

ಮಾತ್ರೆ ನುಂಗಿ ನೀರು ಕುಡಿದ ಮೇಲೆ.. ಒಂದು ರೀತಿಯ ಮಂಪರು.. ಕಣ್ಣುಗಳು ಮತ್ತೆ ನೆನಪಿನಾಳಕ್ಕೆ ಜಾರಿದವು.. 

"ಆದರೆ ರವೀಶ.. ನಿಮ್ಮ ಅಚ್ಚುಮೆಚ್ಚಿನ ಗೆಳೆಯ ಇದ್ದಾನಲ್ಲ.. ಸುಧೀಂದ್ರ.. ಅವನನ್ನು ಮದುವೆಯಾಗುತ್ತಿದ್ದೇನೆ.. ಅವನು ನನ್ನ ಬಾಲ್ಯದ ಗೆಳೆಯ.. ನಮ್ಮ ಮನೆ ಅವನ ಮನೆ ಮೊದಲಿಂದಲೂ ಪರಿಚಯ.. ಹಾಗಾಗಿ ಅವನ ಜೊತೆ ನನ್ನ ಹೆಜ್ಜೆಗಳು.. ಆದರೆ ಒಂದು ಮಾತು ರವೀಶ.. ಅವನಿಲ್ಲದಿದ್ದರೆ.. ನೀವೇ ನನ್ನ ಮೊದಲ ಆಯ್ಕೆಯಾಗಿರುತ್ತಿದ್ದಿರಿ  ".. ಮಿಕ್ಕ ಮಾತುಗಳು ಕಿವಿಗೆ ಮಾತ್ರ ಬೀಳುತ್ತಿದ್ದವೇ ಹೊರತು.. ಹೃದಯಕ್ಕೆ ಅಲ್ಲ.. ಮ್ಲಾನಮುಖವಾಗಿತ್ತು.. ಆದರೂ ತೋರ್ಪಡಿಸಿಕೊಳ್ಳದೆ.. ಕೈಕುಲುಕಿ ಹೆಜ್ಜೆ ಹಾಕಿದ್ದ ತನ್ನ ಮನೆಯ ಕಡೆಗೆ ...

ನಂತರ ಕಾಲೇಜಿನಲ್ಲಿ ಮತ್ತೆ ಅವಳನ್ನು ನೋಡಲಿಲ್ಲ.. ಅವಳು ಕಂಡರೂ ಕಾಣದ ಹಾಗೆ ಓಡಾಡುತ್ತಿದ್ದ.. ಪರೀಕ್ಷೆ.. ಫಲಿತಾಂಶ.. ಅವರಿಬ್ಬರನ್ನೂ ತಮ್ಮ ತಮ್ಮ ಹಾದಿಗೆ  ಎಳೆದೊಯ್ದವು.. ಮತ್ತೆ ಭೇಟಿ ಆಗಿರಲೇ ಇಲ್ಲ..

ಈ ರೀತಿಯ ಅಚಾನಕ್ ಭೇಟಿ ಅದು ಆಸ್ಪತ್ರೆಯಲ್ಲಿ.. ಅವಳು ಡಾಕ್ಟರ್ ಆಗಿ ತಾನು ಅವಳಿಂದ ಚಿಕಿತ್ಸೆ ಪಡೆದುಕೊಳ್ಳುವವನಾಗಿ.. ದೇವಾ ಏನಪ್ಪಾ ನಿನ್ನ ಜಾಯಿಂಟ್.. ಒಂದಕ್ಕೊಂದು ಸಂಬಂಧಕ್ಕೆ ಬೆಸುಗೆ ಹೊಡೆದು ರಿವೇಟ್ ಹೊಡೆದು ಬಿಟ್ಟಿದ್ದೀಯಲ್ಲಪ್ಪ.. ಎಂದುಕೊಂಡು ಕಣ್ಣು ಮುಚ್ಚಿದ..

ಮರುದಿನ.. ಕಣ್ಣುಗಳು ಭಾರವಾಗಿದ್ದವು.. ತೆಗೆಯಲು ಕಷ್ಟವಾಗುತ್ತಿತ್ತು. ನೋವು ಭಾದಿಸುತ್ತಿತ್ತು.. ಕಿಸಿ ಕಿಸಿ ನಗೆ.. ಕಣ್ಣು ಬಿಟ್ಟಾಗ.. ಛಾವಣಿಯಲ್ಲಿ ದೀಪಗಳೇ ದೀಪಗಳು.. ಸುತ್ತಮುತ್ತಲು ಕಣ್ಣು ಬಿಟ್ಟು ನೋಡಿದ .. ಚೂರಿ ಚಾಕು, ಇಕ್ಕಳ ತರಹದ ಹಲವಾರು ಹತಾರಗಳು ಇದ್ದವು.. ಕಣ್ಣುಗಳು ಭಾರವಾಗಿ ಹಾಗೆ ಕಣ್ಣು ಮುಚ್ಚಿದವು..

"ಮಗನೆ.. ನಿನ್ನ ಹುಡುಕಿ ಹುಡುಕಿ ನನ್ನ ಕಣ್ಣುಗಳು ಬಿದ್ದು ಹೋಗಿದ್ದವು.. ಈ ರೀತಿ ಸಿಗುತ್ತೀಯ ಅಂತ ತಿಳಿದಿರಲಿಲ್ಲ ಮಗಾ.. " ಎಂದು ಮೆಲ್ಲನೆ ಹೊಟ್ಟೆಯ ಮೇಲೆ ಒಂದು ಪೆಟ್ಟು ಕೊಟ್ಟ ಮಾತುಗಳನ್ನು ಕೇಳಿ.. ಮೆಲ್ಲಗೆ ತಿರುಗಿದಾಗ ಬಾಲ್ಯದ ಗೆಳಯ ಸುಧೀಂದ್ರ.. ಫ್ರೆಂಚ್ ಗಡ್ಡ.. ಕಪ್ಪು ಫ್ರೇಮಿನ ಕನ್ನಡಕ.. ಚೆಲುವ.. ಬಿಳಿಕೋಟಿನಲ್ಲಿ ಮಿಂಚುತ್ತಿದ್ದ..

"ಏನ್ಲಾ ನೀ ಇಲ್ಲಿ" ಗುರುತು ಹಿಡಿದು ಮಾತಾಡಿಸಿದಾಗ..

ಇಬ್ಬರು ಹಳೆಯ ಗೆಳೆಯರು ಭೇಟಿಯಾದ ಸಂದರ್ಭ..

ಇತ್ತ ಗೀತಾ ಬಂದು.. "ನೋಡಿ ಸುಧಿ.. ಅವತ್ತು ತಪ್ಪಿಸಿಕೊಂಡವ ಇವತ್ತು ನಮ್ಮ ಆಸ್ಪತ್ರೆಯಲ್ಲಿ ಗಾಯಾಳುವಾಗಿ ಬಂದಿದ್ದಾನೆ..  "

"ಸುಧಿ.. ಒಂದು ಉಪಕಾರ ಕಣೋ.. ನೀ ಆಪರೇಷನ್ ಏನಾದರೂ ಮಾಡಿಕೊ.. ಆದರೆ ನನಗೆ ಅರವಳಿಕೆ ಕೊಡದ ಹಾಗೆ ಮಾಡಬಹುದೇ.. " 

"ಇಲ್ಲ ಕಣೋ.. ಹಾಗೆ ಮಾಡಲು ಸಾಧ್ಯವಿಲ್ಲ.. ಆದರೆ ನಿನಗೆ ಆಪರೇಷನ್ ಮಾಡೋದು ವಿಡಿಯೋ ಮಾಡೋಕೆ ಗೀತಾಗೆ ಹೇಳುತ್ತೀನಿ.. ನೀ ಆಮೇಲೆ ನೋಡುವೆಯಂತೆ..

"ಸರಿ.." 

ಆಪರೇಷನ್ ಮುಗಿದಿತ್ತು.. ವಾರ್ಡಿಗೆ ಶಿಫ್ಟ್ ಮಾಡಿದ್ದರು..

ಗಂಡ ಹೆಂಡತಿ ಇಬ್ಬರೂ ತಮ್ಮ ಜೀವದ ಗೆಳೆಯನನ್ನು ಮಾತಾಡಿಸಲು ಬಂದರು.. "ಏನೋ ಮಗ ಹೇಗಿದ್ದೀಯಾ.." ಸುಧೀಂದ್ರನ ಚಿರಪರಿಚಿತ ಧ್ವನಿ..

"ಹೇ ಹೇ ಹೇ.. ಆರಾಮ್ ಕಣೋ.. ಗೀತಾ ಆ ವಿಡಿಯೋ ತೋರಿಸಿ  ಪ್ಲೀಸ್.. "

ವಿಡಿಯೋ ನೋಡತೊಡಗಿದ.. ಮೂಗು.. ಕಣ್ಣಿಗೆ ಬಲವಾದ ಪೆಟ್ಟು ಬಿದ್ದದರಿಂದ.. ಪ್ಲಾಸ್ಟಿಕ್ ಸರ್ಜರಿ ಮಾಡಿ ಮೊದಲಿನ ಸ್ಥಿತಿಗೆ ತರಲು ಗಂಡ ಹೆಂಡತಿ ಹೆಣಗುತ್ತಿದ್ದದ್ದು.. ನಂತರ ಯಶಸ್ವಿಯಾದದ್ದು.. ಜೊತೆಯಲ್ಲಿ ಕೈಸನ್ನೆಯಲ್ಲಿಯೇ ತನ್ನನ್ನು ತೋರಿಸಿ.. ಹೀ ವಿಲ್ ಬಿ ಆಲ್ ರೈಟ್ ಅಂತ ಹೇಳಿದ್ದು ಎಲ್ಲವೂ ಖಂಡಿತು..

ದಶಕಗಳ ಹಿಂದೆ ಸ್ನೇಹದ  ಕೊಂಡಿ ಕಳಚಿಕೊಂಡದ್ದು ನಿಜವಾದರೂ.. ಗೀತಾ ಬರಿ ತನ್ನ ಕಣ್ಣಿಗೆ ಮತ್ತು ಮೂಗಿಗೆ ಹೊಲಿಗೆ ಮಾತ್ರವಲ್ಲದೆ.. ನಮ್ಮ ಅಪೂರ್ವ ಗೆಳೆತನಕ್ಕೂ ಹೊಲಿಗೆ ಹಾಕುತ್ತಿದ್ದಳು..ಎನಿಸಿತು ರವೀಶನಿಗೆ !!!

Friday, December 13, 2019

ಅರಿಯದ ಪ್ರಮಾದ...!

ಮಧ್ಯ ರಾತ್ರಿಯಲ್ಲಿ ಪೊಲೀಸ್ ಸ್ಟೇಷನ್ ಫೋನ್ ಟ್ರಿಣ್ ಟ್ರಿಣ್ ಹೊಡೆದುಕೊಳ್ತಾನೆ ಇತ್ತು.. ರಾತ್ರಿ ಪಾಲಿಯಲ್ಲಿದ್ದವರು ಕಾಫೀ ಜೊತೆಗೆ ಸಿಗರೇಟ್ ಬ್ರೇಕ್ ಅಂತ ಹೊರಗೆ ಹೋಗಿದ್ದರು.. ಫೋನ್ ಹೊಡೆದುಕೊಳ್ಳೋದು ಕಡಿಮೆ ಮಾಡಿರಲಿಲ್ಲ.. ಹೊರಗೆ ಚುಮುಚುಮು ಚಳಿ.. ಬೆಚ್ಚಗೆ ಕಾಫಿ ಜೊತೆಯಲ್ಲಿ ಒಂದು ಕಿಂಗ್ ದಂ ಹೊಡೆದು ಸ್ಟೇಷನ್ ಒಳಗೆ ಕಾಲಿಟ್ಟ ಕೂಡಲೇ.. ಫೋನ್ ರಣ ರಣ ಸದ್ದು ಮಾಡುತ್ತಿದ್ದದು ಗೊತ್ತಾಯಿತು.. ಮೊಬೈಲ್ ಇಲ್ಲದ ಕಾಲವದು.. ಸ್ಥಿರ ದೂರವಾಣಿಯ ಮೂಲಕವೇ ಲೋಕ ನೆಡೆಯುತ್ತಿದ್ದ ಕಾಲ..

"ಹಲೋ ಯಾರೀ ಅದು .. ಹೇಳ್ರಿ.. ಇಷ್ಟು ಹೊತ್ತಲ್ಲಿ ಏನ್ರಿ ನಿಮ್ಮ ಪಜೀತಿ ಬೆಳಿಗ್ಗೆ ಮಾಡ್ರಿ " ಆ ಕಡೆಯಿಂದ ಉತ್ತರ ಕೇಳಿಸಿಕೊಳ್ಳುವ ಗೋಜಿಗೆ ಹೋಗದೆ  ಫೋನ್ ಪಟಕ್ ಅಂತ ಇಟ್ಟರು ಕಾನ್ಸ್ಟೇಬಲ್ ಕರಿಯಣ್ಣ..

ಅವರಿಗೂ ಸಾಕಾಗಿತ್ತು.. ಬಯಲು ಸೀಮೆಯ ಪೊಲೀಸ್ ಸ್ಟೇಷನ್ ಅದೊಂದೇ.. ಸುತ್ತ ಮುತ್ತಲ ಹಳ್ಳಿಗಳಿಗೆ ಅದೊಂದೇ ಆರಕ್ಷಕ ಠಾಣೆ... ಕಳ್ಳತನ, ಗುದ್ದಾಟ,  ಅಸ್ತಿ ವಿವಾದ, ಆತ್ಮಹತ್ಯೆ.. ಕಡೆಗೆ ಬಟ್ಟೆ , ಜಾನುವಾರುಗಳು ಕಳೆದುಹೋಗಿದ್ದರೆ ಆ ದೂರು ಸಹ ಇಲ್ಲಿಯೇ.. ಹಾಗಾಗಿ ಫೋನ್ ಕರೆ ಬಂತು ಅಂದರೆ.. ಬಿಪಿ ತಾರಕಕ್ಕೆ ಏರುತ್ತಿತ್ತು..

ಮತ್ತೆ ಫೋನ್ ಟ್ರಿಣ್ ಟ್ರಿಣ್.. ತಲೆ ಕೆಟ್ಟ ಕರಿಯಣ್ಣ.. ಫೋನ್ ತೆಗೆದುಕೊಂಡು.. "ಏನ್ರಿ ನಿಮಗೆ ತಲೆ ಇಲ್ವಾ.. .. ಸರ್ ಸರ್ ನೀವಾ.. ಗೊತ್ತಾಗಲಿಲ್ಲ ಸರ್.. ಕ್ಷಮಿಸಿ ಸರ್.. ಕುರಿ ಕಳೆದುಹೋಗಿದೆ ಅಂತ.. ಈ ಒಂದು ಘಂಟೆಯಲ್ಲಿ ನೂರು ಸಾರಿ ಕರೆ ಮಾಡಿದ್ದ ಒಬ್ಬ.. ಅವನಿಗೆ ಉತ್ತರ ಕೊಟ್ಟು ಕೊಟ್ಟು ತಲೆ ಕೆಟ್ಟು ಹೋಗಿತ್ತು.. ಸರಿ ಸರ್.. ಎಷ್ಟೊತ್ತಿಗೆ ಸರ್.. ಸಾರಿ ಸರ್.. ನಾನು ಪರಮೇಶಿ ಈಗಲೇ.. ಹಾ ಸರ್.. ಇರ್ತೀವಿ ಸರ್.. ಓಕೇ ಸರ್ ಓಕೇ .. ಸ ..... " ಮಾತು ಇನ್ನೂ ಮುಗಿದಿರಲಿಲ್ಲ.. ಕರೆ ಕಟ್ಟಾಗಿತ್ತು..

"ಏನ್ಲಾ ಕರಿಯ.. ಪೋಸು ಕೊಡ್ತಾ ಇದ್ದೆ.. ಬಸ್ ಚಕ್ರ ಪುಸ್ ಆದಂಗೆ ಹವಾ ಕಳ್ಕೊಂಡೆ.. ಏನಾಯ್ತು.. ಯಾರೋ ಆ ಕಡೆ ಇದ್ದದ್ದು .. " ಎಲೆ ಅಡಿಕೆ ಮೆಲ್ಲುತ್ತಾ.. ಪರಮೇಶಿ ದೇಶಾವರಿ ನಗೆ ನಕ್ಕು ಕೇಳಿದಾಗ.. ಕರಿಯಣ್ಣನ ಬಿಪಿ ರುದ್ರತಾಂಡವ..

"ಲೇ ಸಾಹೇಬ್ರು ಕನ್ಲಾ.. ನೆಡಿ.. ಸಾಹೇಬ್ರು ಕರೀತಾವ್ರೆ.. ಆ ಚಿಕ್ಕಣ್ಣನಿಗೆ ಇಲ್ಲಿಗೆ ಬರೋಕೆ ಹೇಳು.. ಅವನು ಬರುವ ಹೊತ್ತಿಗೆ.. ರೈಫಲ್.. ಬಂದೂಕ.. ಬುಲೆಟ್ಟುಗಳು..ಎಲ್ಲವನ್ನು ಒಮ್ಮೆ ಸರಿಯಾಗಿದೆಯೇ ಎಂದು ಚೆಕ್ ಮಾಡೋಕೆ ಹೇಳು .. ಬೇಗ ಹೊರಡು.. ಹೊರಡು"

ಕರಿಯ, ಪರಮೇಶಿ ಇಬ್ಬರೂ ಸಿದ್ಧರಾಗಿ ಹೊರಡುವ ಹೊತ್ತಿಗೆ ಚಿಕ್ಕಣ್ಣ ಒಳಗೆ ಬಂದ. ಕರಿಯಣ್ಣ ಕ್ಷಿಪ್ರವಾಗಿ ಎಲ್ಲವನ್ನು ಚಿಕ್ಕಣ್ಣನಿಗೆ ಹೇಳಿ.. ಇಬ್ಬರೂ ಸೈಕಲ್ ಹತ್ತಿ ತಮ್ಮ ಸಾಹೇಬ್ರು ಇದ್ದ ಜಾಗಕ್ಕೆ ಹೊರಟರು..

ಆಗಲೇ ತುಂಬಾ ಜನ ಸೇರಿದ್ದರು.. ಚಳಿ ಚಳಿ.. ಜನಗಳು ಮಾತಾಡಿದರೆ ಅವರ ಒಳಗೆ ಇರುವ ಅಸೂಯೆ, ದ್ವೇಷ, ಪ್ರೀತಿ, ವಿಶ್ವಾಸ ಇವೆಲ್ಲಾ ಸುಟ್ಟು ಹೊಗೆಯಾಗಿ ಬಾಯಿಯಿಂದ ಹೊರಗೆ ಬರುತ್ತಿದೆಯೇನೋ ಅನ್ನಿಸುವಂತೆ.. ಮಾತಾಡಿದರೆ ಬಾಯಿಂದ ಹೊಗೆ ಬರುತ್ತಿತ್ತು..

ಅಲ್ಲೊಂದು ಜೀನ್ಸ್ ಪ್ಯಾಂಟ್ ಮತ್ತು ಟೀ ಶರ್ಟ್ ತೊಟ್ಟಿದ್ದ ವ್ಯಕ್ತಿ ಹೆಣವಾಗಿ ಬಿದ್ದಿತ್ತು.. ಮಹಜರ್ ಮಾಡಿಸಿ ಸಾಹೇಬ್ರು ಅಲ್ಲಿಯೇ ಇದ್ದ ಮೈಲಿಗಲ್ಲಿನ ಮೇಲೆ ಸಿಗರೇಟ್ ಎಳೆಯುತ್ತಾ ಯಾವುದೋ ಗಾಢವಾದ ಯೋಚನೆಯಲ್ಲಿ ಕೂತಿದ್ದರು..

"ಸಾರ್.. ಬಂದ್ವಿ ಸಾರ್.. ಏನು ಮಾಡೋದು ಹೇಳಿ" ಸಲ್ಯೂಟ್ ಹೊಡೆದ ಬೂಟ್ಸ್ ಸಪ್ಪಳ ಮತ್ತು ಕರಿಯಣ್ಣನ ಕೀರಲು ಧ್ವನಿಯಿಂದ ಮತ್ತೆ ಇಹಲೋಕಕ್ಕೆ ಮರಳಿದ ಸಾಹೇಬ್ರು.. "ಕರಿಯಣ್ಣ.. ಮಹಜರ್ ಆಗಿದೆ.. ಪಂಚನಾಮೆ ಮಾಡಿದ್ದಾರೆ.. ಆ ವ್ಯಕ್ತಿಯ ವಸ್ತುಗಳನ್ನೆಲ್ಲ ಪಟ್ಟಿ ಮಾಡಿ.. ಒಂದು ಕಡೆ ಇಟ್ಟಿದ್ದಾರೆ.. ಅದನ್ನು ಸ್ಟೇಷನಿಗೆ ತೆಗೆದುಕೊಂಡು ಹೋಗಿ.. ಪರಮೇಶಿನ ನನ್ನ ಜೊತೆಯಲ್ಲಿ ಬಿಟ್ಟು ನೀವು ಹೊರಡಿ.. ನಾ ಸ್ಟೇಷನಿಗೆ ಬರುವ ಹೊತ್ತಿಗೆ ಆ ವಸ್ತುಗಳನ್ನೆಲ್ಲ ಒಮ್ಮೆ ಕೂಲಂಕುಶವಾಗಿ ಗಮನಿಸಿ.. ನಿಮ್ಮ ರಿಪೋರ್ಟ್ ಕೊಡಿ.. ಹಾ ಹೊರಡಿ"

ಕರಿಯಣ್ಣನ ಪ್ರತಿಕ್ರಿಯೆಗೂ ಕಾಯದೆ.. "ರೀ ಪರಮೇಶಿ.. ನೀವು ಬನ್ನಿ ಇಲ್ಲಿ.. ನಾ ಹೇಳೋದು ಸರಿಯಾಗಿ ಕೇಳಿ.. ಹಾಗೆ ಮಾಡಿ.. "

ಕಿವಿಯಲ್ಲಿ ಏನೋ ಉಸುರಿದರು.. ಪರಮೇಶಿಯ ಮೊಗ ಪೇಲವವಾಯಿತು.. ಜೊತೆಗೆ ಚಿಂತೆಯ ಗೆರೆಗಳು ಕೂದಲು ಹಿಂದೆ ಸರಿಯುತ್ತಿದ್ದ ಅವರ ಹಣೆಯಲ್ಲಿ ಮೂಡಲು ಶುರುವಾಯಿತು..

ಪರಮೇಶಿ.. ದಿಕ್ಕು ತೋಚದೆ... ಆದರೆ ಸಾಹೇಬರ ಆದೇಶ ಪಾಲಿಸಲೇಬೇಕಾಗಿದ್ದರಿಂದ ಅವರು ಹೇಳಿದ ಕಡೆಗೆ ಹೊರಟ... ಸಾಹೇಬರು ತಮ್ಮ ಬೈಕ್ ಹತ್ತಿ ಹೊರಟರು.... ಎಲ್ಲಿಗೆ ಎಂದು ಅವರಿಗೆ ಖಚಿತ ಮಾಹಿತಿ ಇತ್ತು..

ಕರಿಯಣ್ಣ.. ಒಂದೊಂದೇ ವಸ್ತುವನ್ನು ತೆಗೆದು.. ಅದರ ಗಮನಿಸಿ ತನಗೆ ತೋಚಿದಂತೆ ರಿಪೋರ್ಟ್ ಸಿದ್ಧ ಮಾಡುತ್ತಿದ್ದ.. ಕಿಟಕಿಯಿಂದ ಇದನ್ನೆಲ್ಲಾ ಪರಮೇಶಿ ಗಮನಿಸುತ್ತಿದ್ದ.
ಕರಿಯಣ್ಣ ಸುಮಾರು ಮೂವತ್ತು ನಿಮಿಷ.. ಎಲ್ಲವನ್ನೂ ಗಮನಿಸಿ.. ಒಂದು ಹಾಳೆಯಲ್ಲಿ ತನಗನಿಸಿದ ವಿವರಗಳೆನ್ನೆಲ್ಲ ಬರೆದ.. ಒಮ್ಮೆ ನಕ್ಕ.. ವಿಚಿತ್ರ ಅನ್ನಿಸಿತು ಪರಮೇಶಿಗೆ.. ಕರಿಯಣ್ಣ ಯಾಕೆ ನಗುತ್ತಿದ್ದಾನೆ ಅಂತ ಅರ್ಥವಾಗಲಿಲ್ಲ..

ಸುಮಾರು ಸಂಜೆಯ ವೇಳೆಗೆ ಸಾಹೇಬ್ರು ಸ್ಟೇಷನೊಳಗೆ ಬಂದರು.. ಪರಮೇಶಿಯನ್ನು ಕಣ್ಣುಗಳು ಹುಡುಕಿತು.. ತನ್ನ ಟೇಬಲ್ ಬಿಟ್ಟು ಇನ್ನೊಬ್ಬರ ಟೇಬಲಿನ ಹತ್ತಿರವಿದ್ದ ಅಪರಾಧಿಗಳನ್ನು ಕೂರಿಸುವ ಬೆಂಚಿನ ಮೇಲೆ ಕೂತಿದ್ದ.. ಸಾಹೇಬರನ್ನು ಕಂಡ ತಕ್ಷಣ ಎದ್ದು ನಿಂತು ಸಲ್ಯೂಟ್ ಹೊಡೆದ.. ಸಾಹೇಬ್ರು ಕಣ್ಣಿನಲ್ಲಿಯೇ ಏನೋ ಪ್ರಶ್ನೆ ಕೇಳಿದರು.. ತಲೆ ತಗ್ಗಿಸಿ ಆಯ್ತು ಎನ್ನುವಂತೆ ಪರಮೇಶಿ ಕರಿಯಣ್ಣನ ಕಡೆ ಒಮ್ಮೆ ನೋಡಿ ಮತ್ತೆ ತಲೆ ತಗ್ಗಿಸಿದ..

ತನ್ನ ಕೆಲ್ಸದಲ್ಲಿ ಮಗ್ನನಾಗಿದ್ದ ಕರಿಯಣ್ಣ ಸಾಹೇಬ್ರು ಬಂದದ್ದು.. ಪರಮೇಶಿ ಸಲ್ಯೂಟ್ ಹೊಡೆದದ್ದು ಯಾವುದು ಕೇಳಿಸಿರಲಿಲ್ಲ.. ಹತ್ತಿರಬಂದ ಸಾಹೇಬ್ರು "ಕರಿಯಣ್ಣ ಎಲ್ಲಾ ಸಿದ್ಧವಾಯ್ತಾ.. ಏನನ್ನುತ್ತೆ ನಿಮ್ಮ ರಿಪೋರ್ಟ್.. ?"

ತಕ್ಷಣ ಬಂದ ಧ್ವನಿಗೆ ಗಲಿಬಿಲಿಯಾಗಿ ಕರಿಯಣ್ಣ ತಲೆ ಎತ್ತಿ ನೋಡಿ.. ಗಾಬರಿಯಿಂದ "ಗುಡ್ ಇವಿನಿಂಗ್ ಸಾರ್.. ಕ್ಷಮಿಸಿ ನೀವು ಬಂದದ್ದು ನನ್ನ ಗಮನಕ್ಕೆ ಬರಲಿಲ್ಲ.. ಏಏ ಪರಮೇಶಿ ನೀನಾದರೂ  ಹೇಳಬಾರದೇ.. ಚಿಕ್ಕಣ್ಣ ಎತ್ತಗೆ ಹೋದಾ.. ಹೀಗೆ ಬಡಬಡಿಸುತ್ತಿದ್ದ ಕರಿಯಣ್ಣನನ್ನು ಕಣ್ಣಲ್ಲೇ ಕೂರೋಕೆ ಹೇಳಿ.. ತಮ್ಮ ಕೋಣೆಗೆ ಹೋಗಿ ಬೆಲ್ ಬಾರಿಸಿದರು...

ಕರಿಯಣ್ಣ ಬೆವರಿನ ಮೊಗವನ್ನು ಒರೆಸಿಕೊಂಡು.. ತಲೆಗೆ ಟೋಪಿ ಹಾಕಿಕೊಂಡು ಸಾಹೇಬ್ರ ಕೋಣೆಗೆ ಹೋದ..

"ಕರಿಯಣ್ಣನವರೇ ನಿಮಗೆ ಒಂದು ಘಂಟೆ ಕಾಲ ಸಮಯ ಕೊಡ್ತೀನಿ.. ಆ ಸತ್ತ ವ್ಯಕ್ತಿ ಯಾರು.. ಅವನಿಗೂ ನಿಮಗೂ ಏನೂ ಸಂಬಂಧ.. ಈ ಕೊಲೆಯನ್ನು ಮಾಡಿದವರಾರು.. ಚಿಕ್ಕಣ್ಣ ಎಲ್ಲಿ.... ಇಷ್ಟು ಪ್ರಶ್ನೆಗೂ ಉತ್ತರ ಹೇಳಿ.. ಸರಿ ಹೋಗಿ.. "

ಹೊರಗೆ ಬಂದ ಕರಿಯಣ್ಣನ ಮೊಗ.. ಬಾಣಲಿಯಲ್ಲಿ ಸುಟ್ಟುಹೋದ ಬೋಂಡಾದ .. ಬಂದವನೇ ದಪ್ ಅಂತ ಕುರ್ಚಿಯಲ್ಲಿ ಕೂತು.. ಮೆಲ್ಲನೆ ಯೋಚಿಸತೊಡಗಿದ.. ಕಣ್ಣು ಮುಚ್ಚಿದ... ಹಾಗೆ ಎಷ್ಟು ಹೊತ್ತು ಕೂತಿದ್ದನೋ ಗೊತ್ತಿಲ್ಲ..

ಪರಮೇಶಿ ಬಂದು.. ಣೋ.. ಅಣ್ಣೋ.. ಕರಿಯಣ್ಣೋ ಸಾಹೇಬ್ರು ಕರೀತಾವ್ರೆ.. ಎಂದಾಗ ಎಚ್ಚರ..

ಕರಿಯಣ್ಣ ಏನೋ ನಿರ್ಧರಿಸಿದವನಂತೆ.. ಸೀದಾ ಒಳಗೆ ಹೋದ.. ಪರಮೇಶಿ ಅವನ ಹಿಂದೆಯೇ ಒಳಗೆ ಬಂದ.. ಕರಿಯಣ್ಣ ಸೀದಾ ಒಂದು ಸೆಲ್ ಒಳಗೆ ಹೋಗಿ.. "ಪರಮೇಶಿ ಸರ್.. ಚಿಲಕಹಾಕಿಕೊಳ್ಳಿ .. ಹಾಗೆ ಸಾಹೇಬ್ರನ್ನ ಬರೋಕೆ ಹೇಳಿ ಪ್ಲೀಸ್.. " ಏಕವಚನದಿಂದ ಬಹುವಚನಕ್ಕೆ ತಿರುಗಿತ್ತು.. ಲಾಕಪ್ಪಿನೊಳಗೆ ಅವನೇ ಹೋಗಿ ಕೂತದ್ದು.. ಸಾಹೇಬರಂನ ಕರೆಯೋಕೆ ಹೇಳಿದ್ದು.. ಪರಮೇಶಿಗೆ ಅರ್ಥವಾಗುತ್ತಿಲ್ಲ..

ಸರಿ.. ತಲೆ ಕೆಡಿಸಿಕೊಳ್ಳದೆ.. ಪರಮೇಶಿ ಸೀದಾ ಸಾಹೇಬ್ರ ಕೋಣೆಗೆ ಹೋಗಿ ಸಲ್ಯೂಟ್ ಹೊಡೆದು.. "ಸಾಹೇಬ್ರೆ.. ನೀವು ಹೇಳಿದಂತೆ ಆಗದೆ.. ಕರಿಯಣ್ಣ ಲಾಕಪ್ಪಿನೊಳಗೆ ಕೂತಿದ್ದಾನೆ.. ಸಾರಿ ಕೂತಿದ್ದಾರೆ.. ನಿಮ್ಮನ್ನು ನೋಡಬೇಕು ಅಂತಿದ್ದಾರೆ"

ಟೋಪಿ ಧರಿಸಿ.. ಸಾಹೇಬ್ರು ಸೀದಾ ಲಾಕಪ್ಪಿನ ಹತ್ತಿರ ಬಂದು "ಕರಿಯಣ್ಣನವರೇ ಹೇಳಿ.. "

"ಸರ್ ತಪ್ಪಾಯಿತು ಸರ್.. ನನ್ನ ಕ್ಷಮಿಸಿ ಬಿಡಿ ಸರ್.. ನೀವೇನು ಮುಂದೆ ಹೇಳುತ್ತೀರೋ ಹಾಗೆ ಆಗಲಿ... "

ಕಾರ್ಯದಕ್ಷತೆಗೆ ಹೆಸರಾಗಿದ್ದ ಇನ್ಸ್ಪೆಕ್ಟರ್ ರವಿಚಂದ್ರ.. ಅವರ ಮೊಗದಲ್ಲೊಂದು ಕಿರು ನಗೆ ಹಾಗೆ ಬಂದು ಹೋಯ್ತು..

"ಪರಮೇಶಿ. ಹೋಗಿ ಚಿಕ್ಕಣ್ಣನನ್ನು ಕರೆ ತನ್ನಿ.. ಹಾಗೆ ಕರಿಯಣ್ಣನವರಿಗೆ ಒಂದು ಪೇಪರ್ ಪೆನ್ನು ಕೊಡಿ.. "

ಲಾಕಪ್ಪಿನೊಳಗಿಂದ.. ಕರಿಯಣ್ಣ "ಸರ್ ಪೇಪರ್ ಪೆನ್ನು ಏನೂ ಬೇಡ.. ನಾ ಆಗಲೇ ಬರೆದಿಟ್ಟಿದ್ದೇನೆ.. ನನ್ನ ಟೇಬಲ್ಲಿನ ಮೇಲಿದೆ.. ತಗೊಳ್ಳಿ ಸರ್"

ಅಚ್ಚರಿಯಾಯಿತು..ಆದರೂ ತೋರಗೊಡದೆ.. ಅದನ್ನು ತೆಗೆದುಕೊಂಡು ಓದತೊಡಗಿದರು.. 

"ಸರ್ ಸತ್ತ ವ್ಯಕ್ತಿ.. ರವೀಂದ್ರ ಅಂತ.. ನನ್ನ ದೂರದ ಸಂಬಂಧಿ.. ನನ್ನ ಮನೆತನಕ್ಕೂ ಅವನ ಮನೆತನಕ್ಕೂ ತಲೆತಲಾಂತರದ ದ್ವೇಷ.. ಏನೋ ಒಂದು ಚೂರು ಅಸ್ತಿ, ಜಾಮೀನು ತಗಾದೆ.. ಅದು ಎರಡು ತಲೆಮಾರುಗಳಿಂದ ನೆಡೆದೆ ಇತ್ತು.. ಇದಕ್ಕೊಂದು ಮಂಗಳ ಹಾಡಬೇಕು.. ಮತ್ತೆ ಎರಡೂ ಮನೆಗಳು ಒಂದಾಗಬೇಕು ಎನ್ನುವ ಅಭಿಲಾಷೆ ಹೊತ್ತು ಅವನ ಜೊತೆ ಮಾತಾಡೋಣ ಅಂತ ಕರೆದಿದ್ದೆ.. ಅವನು ಒಳ್ಳೆಯವನೇ..  ಅವನಿಗೂ ಇದು ಇಷ್ಟವಿತ್ತು.. ನಿನ್ನೆ ರಾತ್ರಿ ಇಬ್ಬರೂ ಒಂದು ಡಾಬಾದಲ್ಲಿ ಊಟ ಮಾಡಿ..ಮಾತಾಡೋಕೆ ಶುರು ಮಾಡಿದೆವು.. ನನ್ನ ಮಾತಿಗೆ ಒಪ್ಪಿಗೆ ಸೂಚಿಸಿದ್ದ.. ಇಬ್ಬರೂ ಖುಷಿಯಾಗಿ ಅಲ್ಲಿಂದ ಹೊರಟೆವು.. ಆವ ಮನೆಗೆ ಹೋದ... ನಾ ಸ್ಟೇಷನಿಗೆ ಬಂದೆ.. ಸುಮಾರು ಒಂದು ಘಂಟೆಗೆ ರವೀಂದ್ರ ಸ್ಟೇಷನಿಗೆ ಕರೆ ಮಾಡಿದ.. ನಾ ಶಸ್ತ್ರಗಳ ಇನ್ ಚಾರ್ಜ್ ಆಗಿದ್ದ ಚಿಕ್ಕಣ್ಣನಿಗೆ ಹೇಳಿ.. ಹೊರಬಂದೆ.. "

ಲಾಕಪ್ಪಿನೊಳಗೆ ಕರಿಯಣ್ಣ ಸಾಹೇಬ್ರು ಪತ್ರ ಓದೋದನ್ನೇ ನೋಡುತ್ತಿದ್ದ..

"ಹೊರಬರುವ ಮುನ್ನ.. ಚಿಕ್ಕಣ್ಣನಿಗೆ ಹೇಳಿ.. ಠಾಣೆಯಲ್ಲಿದ್ದ ಒಂದು ರಿವಾಲ್ವರ್ ತೆಗೆದುಕೊಂಡು ಹೋಗಿದ್ದೆ.. ಈ ವಿಷಯ ನಮ್ಮಲ್ಲಿಯೇ ಇರಲಿ.. ಹೊರಗೆ ಹೇಳಬೇಡ ಎಂದು ಹೇಳಿ.. ಅವನ ಕೈಗೆ ಒಂದು ಸಾವಿರ ರೂಪಾಯಿಗಳನ್ನು ಕೊಟ್ಟು.. ಈ ರಿವಾಲ್ವರ್ ಹಾಗೆ ವಾಪಾಸ್ ಕೊಡ್ತೀನಿ ಅಂದೇ.. ಚಿಕ್ಕಣ್ಣ ಸರ್.. ಜೋಪಾನ.. ಅದರೊಳಗೆ ಹಾಕಿರುವ ಬುಲೆಟ್ ಲೆಕ್ಕದೊಳಗೆ ಸೇರಿರುತ್ತೆ.. ಹಾಗಾಗಿ ಉಪಯೋಗಿಸದೆ ಹಾಗೆ ತಂದು ಕೊಡಿ.. ಅಂದಿದ್ದಕ್ಕೆ ನಾ ಹೇಳಿದ್ದೆ.. ಚಿಕ್ಕಣ್ಣ ಇದು ಇದು ಇದು ಬರಿ ಸೇಫ್ಟಿಗೆ ಮಾತ್ರ.. ಉಪಯೋಗಿಸೋಕೆ ಅಲ್ಲ ಎಂದು ಹೇಳಿ ಹೊರಬಿದ್ದಿದ್ದೆ.. "

"ಸೀದಾ ನಿಗಧಿಯಾಗಿದ್ದ ಸ್ಥಳಕ್ಕೆ ಬಂದೇ.. ಆಗಲೇ ರವೀಂದ್ರ..  ಅಲ್ಲಿಗೆ ಬಂದಿದ್ದ.. ಜೊತೆಯಲ್ಲಿ ಅವನ ಭಂಟನನ್ನು ಕರೆ ತಂದಿದ್ದ.. ಇದು ನನಗೆ ಗೊತ್ತಿರಲಿಲ್ಲ. ಗೊತ್ತಿದ್ದರೆ ಹೀಗಾಗುತ್ತಿರಲಿಲ್ಲ.. ಊಟದ ಸಮಯದಲ್ಲಿ ಸಂಧಾನವಾಗಿ.. ಸಮಾಧಾನವಾಗಿ ಮಾತಾಡಿ.. ಎಲ್ಲದ್ದಕ್ಕೂ ಒಪ್ಪಿ.. ಹಾಗೆ ಮಾಡೋಣ.. ಎಂದು ಹೇಳಿ ಹೋದ ರವೀಂದ್ರ ಕೆಲವೇ ಹೊತ್ತಿನಲ್ಲಿ ಮತ್ತೆ ಬಂದದ್ದು ಅಚ್ಚರಿಯಾಗಿತ್ತು.. ಇರಲಿ ಎಂದು ರವೀಂದ್ರ ಹೇಳಪ್ಪ.. ನಮ್ಮಿಬ್ಬರ ಮಾತುಕತೆಯಲ್ಲಿ ಇನ್ನೊಬ್ಬರು ಬೇಕೇ.. ಏನು ಸಮಾಚಾರ.. ಬೇರೆ ಏನಾದರೂ ಮಾತಾಡೋದು ಇದೆಯಾ ಎಂದು ಕೇಳಿದೆ... ಸ್ವಲ್ಪ ಹೊತ್ತು ಮೌನವಾಗಿದ್ದ ರವೀಂದ್ರ.. ಒಂದು ಸಿಗರೇಟ್ ಹಚ್ಚಿ.. ಕರಿಯಣ್ಣ.. ನನಗೆ ತಕ್ಷಣಕ್ಕೆ ಹತ್ತು ಲಕ್ಷ ಬೇಕಿದೆ.. ಅದನ್ನು ಕೊಟ್ಟು ಬಿಡಿ.. ನೀವು ಹೇಳಿದ ಹಾಗೆ ಕೇಳುತ್ತೇನೆ ಮತ್ತೆ ಎಲ್ಲರನ್ನೂ ಒಪ್ಪಿಸುತ್ತೇನೆ.. ನಂತರ ಅಸ್ತಿ ಸರಿಯಾಗಿ ಭಾಗ ಮಾಡಿ.. ಎಲ್ಲರಿಗೂ ಹಂಚಿದ ಮೇಲೆ ಸಂತೋಷವಾಗಿ ಇರೋಣ.. ಏನಂತೀರಾ ಎಂದಿದ್ದು ನನಗೆ ಗರ ಬಡಿದಂತೆ ಆಗಿತ್ತು... ಈ ಅಸ್ತಿ ವಿಚಾರದಲ್ಲಿ ಸ್ವಲ್ಪ ತನಗೆ ಅಂದರೆ ತನ್ನ ಮನೆಯ ಕಡೆಯವರಿಗೆ ತುಸು ಹೆಚ್ಚೇ ಬರುವಂತೆ ಸ್ಕೀಮ್ ಹಾಕಿದ್ದೆ.. ಅದರ ವಾಸನೆ ಹಿಡಿದ ರವೀಂದ್ರ... ಮತ್ತೆ ಬೆನ್ನು ಬಿದ್ದಿದ್ದ... ಹತ್ತು ಲಕ್ಷ. ಯಪ್ಪಾ ಅದನ್ನು ಹೇಗೆ.. ಈ ಯೋಚನೆಯಲ್ಲಿದ್ದಾಗಲೇ ಹೊಳೆದದ್ದು ಅವನನ್ನು ಹೆದರಿಸಿ ಓಡಿಸೋದು. ಅದಕ್ಕೆ ರಿವಾಲ್ವರ್ ತಂದಿದ್ದೆ.. "

"ಮತ್ತೆ ಮಾತಾಡೋಕೆ ಏನಿದೆ ರವೀಂದ್ರ.. ನಿನಗೆ ತಿಳಿದಿದೆ.. ಈ ಆಸ್ತಿ ವಿಚಾರ ನಮ್ಮಿಬ್ಬರ ಮನೆತನವನ್ನು ದ್ವೇಷದ ಉರಿಗೆ ಸಿಕ್ಕಿಸಿದೆ.. ನಾ ಹೇಳಿರುವ ಉಪಾಯ ನ್ಯಾಯವಾಗಿದೆ ಇದೆ.. ಹೌದು ಸ್ವಲ್ಪ ನನ್ನ ಪರವಾಗಿದೆ ಆದರೆ.. ಈ ಭಾಗ ಆದ ಮೇಲೆ.. ಅದರ ಪಾಲು ನಿನಗೂ ಕೊಡುವೆ .. ಅದನ್ನ ಆಮೇಲೆ ಹೇಳುವೆ ಅಂದು ಕೊಂಡೆ.. ಆದರೆ ನೀ ಅರ್ಜೆಂಟ್ ಮಾಡಿದೆ.. ಇರಲಿ.. ಎರಡು ಲಕ್ಷ ನಿನಗೆ ಕೊಡುವೆ.. ಆದರೆ ಅಸ್ತಿ ಭಾಗವಾದ ಮೇಲೆ ಮಾತ್ರ .. ಕಾರಣ ನಾನು ಸರ್ಕಾರಿ ನೌಕರ.. ಅಸ್ತಿ ಬಂದ ವಿಚಾರ.. ಅದರ ಪರಭಾರೆ.. ಆದಾಯ.. ಎಲ್ಲವನ್ನೂ ನಾ ಸರಕಾರಕ್ಕೆ ತಿಳಿಸಬೇಕು.. ಅಲ್ಲಿಂದ ಉತ್ತರ ಬಂದ ಮೇಲೆ..
ಆ ಜಮೀನನ್ನು ಮಾರಿ.. ನಿನಗೂ ಅದರ ಭಾಗ ಕೊಡುತ್ತೇನೆ.. ಆದರೆ ಇದು ನಮ್ಮಿಬ್ಬರ ನಡುವೆ ಮಾತ್ರ ಇರಬೇಕು.. ಆಯ್ತಾ.. ಎಂದಿದ್ದಕ್ಕೆ..

ನೋಡಿ ಕರಿಯಣ್ಣ ಈ ಹರಿಕಥೆ ಎಲ್ಲಾ ಬೇಡ.. ಎಲ್ಲಾರೂಸಹಿ ಹಾಕಿದ ಮೇಲೆ.. ನೀವೆಲ್ಲಿ ನನ್ನ ಕೈಗೆ ಸಿಗ್ತೀರಾ.. ಎರಡು ದಿನ ಸಮಯ ಕೊಡ್ತೀನಿ ಹತ್ತು ಲಕ್ಷ ಕೊಡಿ ಇಲ್ಲ ಅಂದ್ರೆ ನಿಮ್ಮ ಪ್ಲಾನ್ ಎಲ್ಲರಿಗೂ ಹೇಳಿ.. ನಿಮಗೆ ಒಂದು ದಮ್ಮಡಿ ಸಿಗದ ಹಾಗೆ ಮಾಡ್ತೀನಿ.. ನಾವೇನು ಕಿವಿಯಲ್ಲಿ ಹೂ ಇಟ್ಟುಕೊಂಡಿಲ್ಲ.. ಸ್ವಲ್ಪ ಕಟುವಾಗಿತ್ತು ಅವನ ಮಾತು.. ನನಗೆ ಗತ್ಯಂತರವಿರಲಿಲ್ಲ.. ಬಾ ನಿನ್ನ ಜೊತೆ ಸ್ವಲ್ಪ ಹೊತ್ತು ಮಾತಾಡಬೇಕು.. ನಿನ್ನ ಭಂಟನನ್ನು ಸಿಗರೇಟ್ ತರೋಕೆ ಹೇಳು.. ಹಾಗೆ ಸ್ವಲ್ಪ ಹೊತ್ತು ಬಿಟ್ಟು ಬರೋಕೆ ಹೇಳು..

ನನ್ನ ನಂಬಿದ ರವೀಂದ್ರ ಅವನ ಭಂಟನಿಗೆ ಹಾಗೆ ಹೇಳಿದ.. ನಾವಿಬ್ಬರೂ ಹಾಗೆ ಡಾಬದಿಂದ ಹೊರಗೆ ಬಂದು.. ನೇಚರ್ ಕರೆ ಮುಗಿಸಿ.. ಹಾಗೆ ಸ್ವಲ್ಪ ದೂರ ಮಾತಾಡುತ್ತಾ ಹೋದೆವು.. ನಾ ಸುತ್ತಮುತ್ತಲು ನೋಡುತ್ತಿದ್ದೆ..ಯಾರೂ ಇಲ್ಲದ ಜಾಗ ಅನಿಸಿ.. ಅಲ್ಲಿಯೇ ನಿಲ್ಲಿಸಿ.. ನೋಡು ರವೀಂದ್ರ.. ನಾ ಮೊದಲೇ ಹೇಳಿದ ಹಾಗೆ ಅಸ್ತಿ ಭಾಗ ಆಗಲಿ.. ತಕ್ಷಣ ಕೊಡುವೆ.. ಹತ್ತು ಲಕ್ಷ ಆಗೋಲ್ಲ.. ನಾ ಎರಡು ಅಂದೇ.. ಇರಲಿ ನೀನು ನಮ್ಮವನೇ.. ಹಾಗಾಗಿ ಮೂರು ಲಕ್ಷ ಕೊಡುತ್ತೇನೆ.. ಒಪ್ಪಿಸಿಬಿಡು.. ಅಂತ ಕೋರಿಕೊಂಡೇ.. ಮತ್ತೆ ಅವನು ತಕರಾರು ಮಾಡಲು ಶುರು ಮಾಡಿದ.. ನಾ ನನ್ನ ಬುದ್ಧಿಯೆಲ್ಲಾ ಖರ್ಚು ಮಾಡಿದರೂ ಅವನು ಒಪ್ಪಿಕೊಳ್ಳುವ ಹಾದಿಗೆ ಬರಲಿಲ್ಲ.. ಕಡೆಗೆ ಇನ್ನೇನು ಮಾಡುವುದು ಎಂದು ರಿವಾಲ್ವರ್ ತೆಗೆದು.. ನೋಡು ರವೀಂದ್ರ.. ನಾ ಮೊದಲೇ ಪೋಲೀಸಿನವ... ಈಗಲೇ ನಿನ್ನ ಮಲಗಿಸಿದರೂ ಯಾವುದೋ ಒಂದು ಕಾರಣಕ್ಕೆ ನೀ ರೌಡಿ ಅಂತ ರಿಪೋರ್ಟ್ ಮಾಡಿ ನಿನ್ನ ಕತೆ ಮುಗಿಸುತ್ತೇನೆ.. ಸುಮ್ಮನೆ ಹಠ ಮಾಡಬೇಡ.. ಈ ವಿಚಾರ ಇಲ್ಲಿಗೆ ಮುಗಿಸೋಣ ಇದು ನನಗೂ ಒಳ್ಳೆಯದು ನಿನಗೂ ಒಳ್ಳೆಯದು.. ದಯಮಾಡಿ ಹಠ ಮಾಡಬೇಡ.. ಅಂದೆ"

ಇದಕ್ಕೆ ಒಪ್ಪದ ರವೀಂದ್ರ .. ಓಹೋ ಹೇಗೆಲ್ಲ ಇದೆಯಾ ನಿನ್ನ ಪ್ಲಾನ್.. ಅದೇನು ಮಾಡ್ತೀಯೋ ಮಾಡು.. ನಾನೇನೂ ಬಳೆ ತೊಟ್ಟಿಲ್ಲ.. ನಾನು ಒಂದು ಕೈ ನೋಡ್ತೀನಿ ಎಂದು.. ತನ್ನ ಜೇಬಿನಲ್ಲಿದ್ದ ಚೂರಿ ತೆಗೆದ.. ಇವನು ನನ್ನ ತರಹವೇ ಸಿದ್ಧವಾಗಿ ಬಂದದ್ದು.. ಸ್ವಲ್ಪ ಯೋಚನೆಗೆ ಈಡು ಮಾಡಿತು.. ತಕ್ಷಣ.. ಬೇರೆ ದಾರಿ ಕಾಣದೆ ಅವನ ಕಡೆ  ಗುರಿ ಮಾಡಿ ರಿವಾಲ್ವರ್ ಟ್ರಿಗರ್ ಒತ್ತಿಯೇ ಬಿಟ್ಟೆ.. . ಆ ಡಂ ಎಂಬ ಶಬ್ದಕ್ಕೂ ಅದೇ ಸಮಯಕ್ಕೆ ಹೆದ್ದಾರಿಯ ರಸ್ತೆಯಲ್ಲಿ ದೊಡ್ಡ ಲಾರಿಯ ಟೈರ್ ಸಿಡಿಯುವ ಸದ್ದಿಗೂ ಸರಿಯಾಗಿ... ಯಾರಿಗೂ ನಾ ಹಾರಿಸಿದ ಗುಂಡಿನ ಸದ್ದು ಕೇಳಿಸಲಿಲ್ಲ.. ರವೀಂದ್ರ  ಹಾಗೆ ಕುಸಿದು ಬಿದ್ದ.. ನನಗೆ ಏನು ನೆಡೆಯುತ್ತಿದೆ ಎಂದು ಅರಿವಾಗುವಷ್ಟರಲ್ಲಿ ಅನಾಹುತ ನೆಡೆದೆ ಹೋಗಿತ್ತು.. ರವೀಂದ್ರ ಜಾರಿ ಕುಸಿದು ಬಿದ್ದ ಜಾಗದಲ್ಲಿ ಒಂದು ಹೊಂಡವಿತ್ತು.. .. ಒದ್ದೆಯಾಗಿದ್ದ ನೆಲ.. ಹೊಂಡದೊಳಗೆ ಜಾರಿದ .. ನನಗೆ ಏನು ಮಾಡಬೇಕೆಂದು ತೋಚದೆ..ಹೊಂಡಕ್ಕೆ ಇಳಿದರೆ ಹತ್ತಲು ಕಷ್ಟವಾಗುತ್ತದೆ.. ಮತ್ತೆ ನನ್ನ ಗುರುತುಗಳು ಸಿಕ್ಕಿ ಬಿಟ್ಟರೆ ಇಲ್ಲದ ಫಜೀತಿಗೆ ಸಿಕ್ಕಿಕೊಳ್ಳುತ್ತೇನೆ ಎಂದು ಹೆದರಿ.. ಅಲ್ಲಿಂದ ಸೀದಾ ಸ್ಟೇಷನಿಗೆ ಬಂದೆ..

ಚಿಕ್ಕಣ್ಣನಿಗೆ ರಿವಾಲ್ವರ್ ಕೊಟ್ಟು ಮತ್ತೆ ಇದ್ದ ಜಾಗದಲ್ಲಿಯೇ ಇಡಲು ಹೇಳಿ.. ಇನ್ನೊಂದು ಸಾವಿರ ರೂಪಾಯಿ ಅವನ ಕೈಗೆ ತುರುಕಿ.. ನೋಡಪ್ಪ ಗಾಬರಿಯಲ್ಲಿ ಒಂದು ಬುಲೆಟ್ ಎಲ್ಲೋ ಬಿದ್ದು ಹೋಗಿದೆ.. ಡಮ್ಮಿ ಬುಲೆಟ್ ಸಿಗುತ್ತೆ ಆಲ್ವಾ.. ಅದನ್ನು ತಂದು ಇಲ್ಲಿಗೆ ಸೇರಿಸಿ ಸರಿ ಮಾಡಿಬಿಡು.. ಅಂದೇ..

ಚಿಕ್ಕಣ್ಣ ಸರ್ ಡಮ್ಮಿ ಬುಲೆಟ್ ನಾ ಎಲ್ಲಿ ತರಲಿ ಸರ್ ಎಂದ..
ಒಂದೆರಡು ದಿನಗಳ ಹಿಂದೆ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ಪಡೆದು.. ತಾವು ತೆಗೆಯಲಿರುವ ದೃಶ್ಯಗಳ ಬಗ್ಗೆ ಹೇಳಿದ್ದರು.. ಅದರಲ್ಲಿ ಡಮ್ಮಿ ಬುಲೆಟ್ ಉಪಯೋಗಿಸಿ ಫೈಟ್ ದೃಶ್ಯಗಳನ್ನು ಚಿತ್ರೀಕರಿಸುವ ಬಗ್ಗೆ ಹೇಳಿದ್ದರು.. ಹಾಗಾಗಿ ಅಲ್ಲಿಗೆ ಹೋಗಿ ನನ್ನ ಹೆಸರು ಹೇಳಿ.. ಒಂದೇ ಒಂದು ಬುಲೆಟ್ ತಂದು ಇದರೊಳಗೆ ಹಾಕಿ ಸರಿ ಮಾಡಿಬಿಡು.. ಪ್ಲೀಸ್.. " ಎಂದು ಕೋರಿಕೊಂಡೆ.. ಜೊತೆಯಲ್ಲಿ ಮತ್ತಷ್ಟು ಹಣ ಕೊಡುವ ಆಮೀಷ ತೋರಿಸಿದೆ ..

ದುಡ್ಡಿನಾಸೆಗೋ.. ಅಥವಾ ಸ್ಟೇಷನಿನಲ್ಲಿ ನನ್ನ ಮಾತು ಕೊಂಚ ನೆಡೆಯುತ್ತಿತ್ತು ಅನ್ನುವ ಕಾರಣಕ್ಕೋ.. ಮತ್ತು ಸಾಹೇಬರಿಗೆ ಕೊಂಚ ಹತ್ತಿರ ಇದ್ದದರಿಂದ.. ಚಿಕ್ಕಣ್ಣ ನನ್ನ ಮಾತಿಗೆ ಒಪ್ಪಿಕೊಂಡ.. ಇಷ್ಟೇ ಸರ್.. ನೆಡೆದದ್ದು.."

ಇಂತಿ ನಿಮ್ಮ ಕಾನ್ಸ್ಟೇಬಲ್
ಕರಿಯಣ್ಣ - ೧೮೪

ದೀರ್ಘ ಪತ್ರ ಓದಿದ ಸಾಹೇಬ್ರು.. ಕೊಂಚ ನಿರಾಳವಾಗಿ.. "ಪರಮೇಶಿ ಚಿಕ್ಕಣ್ಣ ಅವರನ್ನು ಒಳಗೆ ಕರೆ ತನ್ನಿ.. ಹಾಗೆ ಕರಿಯಣ್ಣ ಅವರಿಗೆ ಕುಡಿಯಲು ನೀರು ಕೊಡಿ.. ಮತ್ತೆ ಕರಿಯಣ್ಣ ಮತ್ತು ಚಿಕ್ಕಣ್ಣ ಅವರನ್ನು ನನ್ನ ಆಫೀಸಿಗೆ ಕರೆ ತನ್ನಿ... ಜೊತೆಯಲ್ಲಿ ನೀವು ಬನ್ನಿ"

ಮೂವರಿಗೂ ಅಚ್ಚರಿ.. ಆದರೂ ತೋರ್ಪಡಿಸಿಕೊಳ್ಳದೆ..ಸುಮ್ಮನಾದರು..

ಮೂವರು ಸಾಹೇಬರ ಕೋಣೆಗೆ ಹೋದರು..

ಕರಿಯಣ್ಣನವರೇ.. ಮೊದಲು ನೀವು ಮಾಡಿದ್ದು ತಪ್ಪು ಠಾಣೆಯ ಶಸ್ತ್ರಗಳನ್ನು ಹಾಗೆ ಹೊರಗೆ ತೆಗೆದುಕೊಂಡು ಹೋಗಬಾರದು.. ಅದಕ್ಕೆ ನಿಮ್ಮನ್ನು ಒಂದು ವಾರ ಅಮಾನತ್ತಿನಲ್ಲಿಟ್ಟಿರುತ್ತೇನೆ.. ಮತ್ತೆ ಸಹೋದ್ಯೋಗಿಗೆ ಲಂಚ ಕೊಟ್ಟು ಅಪರಾಧ ಮಾಡಲು ಪ್ರಯತ್ನ ಪಟ್ಟಿರೋದು ಅದಕ್ಕೆ ನಿಮಗೆ ಜುಲ್ಮಾನೆಯೂ ಇದೆ ಜೊತೆಯಲ್ಲಿ ಒಂದು ತಿಂಗಳ ನಿಮ್ಮ ವೇತನಕ್ಕೆ  ನಿರ್ಬಂಧ ಹಾಕಿರುತ್ತೇನೆ.. ಚಿಕ್ಕಣ್ಣ ನಿಮಗೂ ಇದೆ ಶಿಕ್ಷೆ.... ಬೆಳಿಗ್ಗೆ ನಮ್ಮ ಟೈಪಿಸ್ಟ್ ಈ ಪತ್ರಗಳನ್ನು ಸಿದ್ಧ ಮಾಡಿರುತ್ತಾರೆ.. ಬೆಳಿಗ್ಗೆ ಬಂದು ಸಹಿ ಹಾಕಿ ಹೋಗಿ ಮತ್ತೆ ನನಗೆ ಹೇಳದೆ ಊರು ಬಿಟ್ಟು ಹೋಗೋದು.. ಅಸ್ತಿ ಮಾಡಿಕೊಳ್ಳುವುದು.. ಮಾಡಬಾರದು.. ಎಲ್ಲವನ್ನು ನನ್ನ ಗಮನಕ್ಕೆ ಮತ್ತು ಸರಕಾರದ ಅಂದರೆ ನಮ್ಮ ಇಲಾಖೆಯ ಗಮನಕ್ಕೆ ತರಲೆ ಬೇಕು..  ಮತ್ತೆ ಈ ರೀತಿಯ ತಪ್ಪು ಮಾಡಬೇಡಿ....ಹೋಗಿ ಬೆಳಿಗ್ಗೆ ಬನ್ನಿ.. ಅಮಾನತ್ತಿನಲ್ಲಿರುವಾಗ ಧರ್ಮಸ್ಥಳ, ಸುಬ್ರಮಣ್ಯ, ಹೊರನಾಡು, ಶೃಂಗೇರಿ ಕಡೆಗೆ ಹೋಗಿ..ಮನಸ್ಸನ್ನು ಹಗುರಮಾಡಿಕೊಳ್ಳಿ.. ನಾ ಮನೆಗೆ ಹೋಹೊರಡುತ್ತಿದ್ದೇನೆ ಬೆಳಿಗ್ಗೆ ಬನ್ನಿ . " ಎನ್ನುತ್ತಾ ಎದ್ದು ನಿಂತರು..

ಮೂವರಿಗೂ ಅಚ್ಚರಿ.. ಸಾಹೇಬರು ಏನೂ ಮಾತಾಡುತ್ತಿದ್ದಾರೆ.. ಯಾಕೆ ಏನಾಗುತ್ತಿದೆ ಒಂದು ಅರ್ಥವಾಗುತ್ತಿಲ್ಲ.. ಪರಮೇಶಿಯೇ ಸ್ವಲ್ಪ ಧೈರ್ಯ ಮಾಡಿ..

"ಸರ್ ನಿಮ್ಮ ಮಾತುಗಳು ಅರ್ಥವಾದರೂ ಏನೋ ಗೊಂದಲ ಕಾಡುತ್ತಿದೆ.. ನನ್ನನ್ನು ಶೂಟಿಂಗ್ ಜಾಗಕ್ಕೆ ಕಳಿಸಿದ್ದು..ನಂತರ ಹಾರಿದ ಬುಲೆಟ್ ಹುಡುಕಿಸಿದ್ದು..ಚಿಕ್ಕಣ್ಣನ ಮಾವನ ಮನೆಗೆ ನನ್ನ ಕಳಿಸಿದ್ದು.. ಆ ಹೆಣ.. ಕರಿಯಪ್ಪ ಮಾಡಿದ ತಪ್ಪು.. ಎಲ್ಲವೂ ಬಿಡಿ ಬಿಡಿಯಾದ ಚುಕ್ಕಿಗಳಾಗಿವೆ.. ದಯಮಾಡಿ ಅದನ್ನು ಸೇರಿಸಿ ಒಂದು ಸ್ಪಷ್ಟ ಚಿತ್ರಣ ಕೊಡಿ ಸರ್.. "

ಕರಿಯಣ್ಣ ಮತ್ತು ಚಿಕ್ಕಣ್ಣ ಕೂಡ ನಮ್ಮ ಮಾತು ಅದೇ ಎಂದು ತಲೆಯಾಡಿಸಿದರು..

ಹೊರಟು ನಿಂತ ರವಿಚಂದ್ರ ಮತ್ತೆ ತಮ್ಮ ಕುರ್ಚಿಯಲ್ಲಿ ಕೂತು "ಕರಿಯಣ್ಣ ನವರೇ.. ಮೊದಲು ನಿಮ್ಮನ್ನು ಕರಿಯಣ್ಣನವರೇ ಎಂದು ಕರೆಯುವ ಹಿಂದೆ ನಿಮ್ಮ ನಿಸ್ವಾರ್ಥ ಸೇವೆ.. ಮತ್ತು ನಿಮ್ಮ ಮೇಲಿನ ಗೌರವ ಅಡಗಿದೆ.. ಜೀವನದಲ್ಲಿ ತಪ್ಪು ಮಾಡುತ್ತಾರೆ ನೀವು ಹಾಗೆ ಅಸ್ತಿಯ ಮೇಲಿನ ಅಸೆ ನಿಮ್ಮನ್ನು ಹೀಗೆ ಮಾಡಿಸಿತು.. ಆದರೆ ನಿಮಗೆ ತಿಳಿದಿರಲಿ.. ನೀವು ರವೀಂದ್ರನ ಕೊಲೆ ಮಾಡಿಲ್ಲ.. ಅವನಿಗೆ ಹೃದಯಾಘಾತವಾಗಿ ಸತ್ತದ್ದು. ಜೊತೆಯಲ್ಲಿ ನೀವು ಮೊದಲು ಮಾತಾಡಿ ಹೋದ ಮೇಲೆ.. ಅವನು ಸ್ವಲ್ಪ ಗುಂಡು ಹಾಕಿದ್ದ.. ಆ ನಶೆಯಲ್ಲಿ ಅವನ ಭಂಟರು ಅವನಿಗೆ ಬೇಡ ಐಡಿಯಾ ಕೊಟ್ಟು ಮತ್ತೆ ನಿಮಗೆ ಕರೆ ಮಾಡಿ ಹತ್ತು ಲಕ್ಷದ ಬೇಡಿಕೆ ಇಟ್ಟದ್ದು... ಅವನ ಭಂಟರು ಹತ್ತು ಲಕ್ಷ ಸಿಗುವ ಬಗೆ ದಾರಿ ಹೇಳಿಕೊಟ್ಟು .ಜೊತೆಯಲ್ಲಿ ನಾವು ಇರ್ತೀವಿ ಅಂತ ಹುಂಬ ಧೈರ್ಯ ಕೊಟ್ಟು ಅದರಲ್ಲಿ ಒಬ್ಬ ಮಾತ್ರ ಅವನ ಜೊತೆ ನಿಮ್ಮನ್ನು ಕಾಣಲು ಮತ್ತೆ ಬಂದದ್ದು.. .ಆ ಬಂಟರ ಪ್ಲಾನ್ ಬೇರೆಯಾಗಿತ್ತು.. ಕುಡಿದಿದ್ದರಲ್ಲಿ ಸ್ವಲ್ಪ ಮತ್ತು ಬರುವ ವಿಷವನ್ನು ಸೇರಿಸಿ.. ಅವನಿಗೆ ತಲೆ ಸುತ್ತು ಬರುವ ಹಾಗೆ ಮಾಡಿ.. ನಿಮ್ಮಿಬ್ಬರ ಚಕಮಕಿಯಲ್ಲಿ ಅವನ ಪ್ರಾಣ ಹೋದರೆ.. ಅದನ್ನೇ ದೊಡ್ಡ ವಿಷಯ ಮಾಡಿ ನಿಮ್ಮಿಂದ ಸುಳಿಯಬೇಕು ಎನ್ನುವ ಯೋಚನೆ ಅವರದಾಗಿತ್ತು.. ಆದರೆ ಅಲ್ಲಿ ನೆಡೆದದ್ದು ಬೇರೆ.. ತನ್ನ ಮಿತಿ ತಿಳಿದಿದ್ದ ರವೀಂದ್ರ.. ಅವರು ಬೆರೆಸಿ ಕೊಟ್ಟಿದ್ದ ಕಡೆ ಗ್ಲಾಸ್ ಕುಡಿಯದೆ ಸುಮ್ಮನೆ ಕುಡಿದ ಹಾಗೆ ನಟಿಸಿದ್ದ.. ನೀವು ರಿವಾಲ್ವರ್ ತೆಗೆದಾಗ ಅವನ ಹೃದಯ ಕಂಪಿಸಿತ್ತು.. ತಣ್ಣನೆ ಗಾಳಿ, ಬೆವೆತ ದೇಹ.. ಹೆದರಿದ್ದ ಎದೆ.. ಕುಡಿದಿದ್ದ ಮದ್ಯ.. ಬೇಡ ಯೋಚನೆಗಳು.. ಅದರ ಜೊತೆಯಲ್ಲಿಯೇ ಟೈರ್ ಸಿಡಿದ ಸದ್ದು.. ನಿಮ್ಮ ರಿವಾಲ್ವರಿನಿಂದ ಹಾರಿದ ಗುಂಡು ಅವರ ಕಿವಿಯ ಪಕ್ಕದಲ್ಲಿ ಹಾದು ಹೋಗಿದ್ದು.. ಆ ಸದ್ದು ಅವರಿಗೆ ಹೃದಯಾಘಾತ ಮಾಡಿತು..

ಅಲ್ಲಿದ್ದ ಡಾಬಾದಲ್ಲಿದ್ದ ಪುಟ್ಟ ಹುಡುಗ.. ನೀವು ಬುಲೆಟ್ ಹಾರಿಸಿದಾಗ ಅಲ್ಲಿಯೇ ಮೂತ್ರ ವಿಸರ್ಜನೆ ಮಾಡಲು ಬಂದಿದ್ದ ಪಾತ್ರೆ ತೊಳೆಯುವ ಹುಡುಗ ನೋಡಿದ್ದ.. ಆದರೆ ಯಾರಿಗೂ ಹೇಳೋದಕ್ಕೆ ಹೆದರಿದ್ದ.. ನಾನು ನಿಧಾನವಾಗಿ ವಿಚಾರಿಸಿದಾಗ ತಿಳಿದು ಬಂತು..

ಪರಮೇಶಿಗೆ ನಾ ಹೇಳಿದ್ದು ಆ ಬುಲೆಟ್ ಹುಡುಕಿಸಿ ತೆಗೆದುಕೊಂಡು ಬಾ.. ಮತ್ತೆ ಇದು ಕರಿಯಣ್ಣನವರ ಹತ್ತಿರ ರಿವಾಲ್ವರ್ ಇಲ್ಲ ಎಂದು ಗೊತ್ತಿದ್ದ ನನಗೆ.. ಇದು ಚಿಕ್ಕಣ್ಣನ ಕೈವಾಡ ಎಂದು ಅರಿವಾಯಿತು.. ಚಿಕ್ಕಣ್ಣ ರಾತ್ರಿಯಿಂದ ಕಂಡಿಲ್ಲ ಎನ್ನುವುದು ನನಗೆ ಅರಿವಾಗಿತ್ತು.. ಅದಕ್ಕೆ ಪರಮೇಶಿಗೆ ಮೊದಲು ಬುಲೆಟ್ ಹುಡುಕಿಸಿ.. ನಂತರ ಚಿಕ್ಕಣ್ಣನನ್ನು ಹುಡುಕಿ ಕರೆ ತರುವಂತೆ ಹೇಳಿದೆ.. ಬೆಳಿಗ್ಗೆ ನಾ ಕರಿಯಣ್ಣನವರಿಗೆ ಕರೆ ಮಾಡಿ.. ಬಂದೂಕು, ಬುಲೆಟ್, ರಿವಾಲ್ವರ್ ಇವುಗಳ ಲೆಕ್ಕ ಸರಿಯಾಗಿ ಇಡಬೇಕೆಂದು ಚಿಕ್ಕಣ್ಣನಿಗೆ ಹೇಳಿ ಎಂದು ಹೇಳಿದಾಗ ನಿಮಗೆ ಅರಿವಾಗಿತ್ತು.. ಅದಕ್ಕೆ ನಾ ಕೇಳಿದ ಮೇಲೆ.. ನೀವು ಈ ತಪ್ಪೊಪ್ಪಿಗೆ ಬರೆದುಕೊಟ್ಟಿದ್ದು.. ಈಗ ಗೊತ್ತಾಯಿತೇ.. ನೀವು ಕೊಲೆ ಮಾಡಿಲ್ಲ.. ಆದರೆ ಸಂದರ್ಭ ನಿಮ್ಮನ್ನು ತಪ್ಪಿತಸ್ಥ ಎನ್ನುವ ಹಾಗೆ ಮಾಡಿದೆ.. ಪೋಸ್ಟ್ ಮಾರ್ಟಮ್ ರಿಪೋರ್ಟ್ ಕೂಡ ಹೃದಯಾಘಾತ ಎಂದು ಹೇಳಿದೆ.. ಹಾಗಾಗಿ ನಿಮ್ಮ ಮೇಲೆ ಕೊಲೆ ಆಪಾದನೆ ಬರೋಲ್ಲ..

ಚಿತ್ರ ಕೃಪೆ : ಗೂಗಲೇಶ್ವರ 

ಅವನಿಗೆ ಎರಡು ಬಾರಿ ಹೃದಯದ ಶಸ್ತ್ರ ಚಿಕಿತ್ಸೆ ಆಗಿದೆ ಎಂಬ ರಿಪೋರ್ಟ್ ಸಿಕ್ಕಿತು.. ಹಾಗಾಗಿ ನಿಮ್ಮ ಮೇಲೆ ಯಾವ ಆಪಾದನೆ ಬರೋಲ್ಲ.. ನಿರಾಳವಾಗಿರಿ..  ಆದರೆ ಅಸ್ತಿ ವಿಷಯ ಸದ್ಯಕ್ಕೆ ಕೈ ಹಾಕೋಕೆ ಹೋಗಬೇಡಿ.. ಆಮೇಲೆ ನಿಮ್ಮ ಕೊರಳ ಸುತ್ತಲೇ ಸುತ್ತುತ್ತದೆ.. ಒಂದಷ್ಟು ಆಸ್ತಿ ಹೋದರೆ ಹೋಗಲಿ ಬಿಡಿ.. ನಿಮ್ಮ ಜೀವನ ನಿಮಗೆ ಮುಖ್ಯ.. ಆಸ್ತಿಯಿದೆ..  ಸರ್ಕಾರಿ ನೌಕರಿ ಇದೆ.. ನೆಮ್ಮದಿಯಾಗಿರಿ.. ಬಂದರೆ ಅಸ್ತಿ ಬರಲಿ.. ಇಲ್ಲದೆ ಹೋದರೆ ನೀವೇ ಬರೆದುಕೊಟ್ಟು ಬಿಡಿ.. ನೀವು ದೊಡ್ಡವರಾಗುತ್ತೀರಿ.. !!! ಸರಿ ಬರ್ಲಾ..

ನಾ ಹೇಳಿದ್ದು ನೆನಪಿರಲಿ... !!!

ಚಿಕ್ಕಣ್ಣ ಸ್ಟೇಷನಲ್ಲಿದ್ದ ದೇವರ ಫೋಟೋಗೆ ಕೈ ಮುಗಿದರೆ.. ಪರಮೇಶಿ ಸಾಹೇಬರ ಬುದ್ಧಿಮತ್ತೆಗೆ ಒಂದು ಸಲ್ಯೂಟ್ ಹೊಡೆದ.. ಆದರೆ ಕರಿಯಣ್ಣ ಕಾಣುವ ದೇವರಿಗೆ ಕೈಮುಗಿಯಲೇ.. ಇಲ್ಲ ನನ್ನ ಕಣ್ಣೆದೆರು ಇಷ್ಟು ಹೊತ್ತು ಮಾತಾಡಿದ ದೇವರಿಗೆ ನಮಸ್ಕರಿಸಲೇ ಎನ್ನುವ ಗೊಂದಲದಲ್ಲಿ ಕೈಮುಗಿದು ನಿಂತೇ ಇದ್ದ.. !!!

Saturday, November 30, 2019

"ರಾಮ"ಕ್ಕಯ್ಯ "ಶಶಿ"ದೇವರಗುಡ್ಡದಲ್ಲಿ ವೆಂಕಿಶ್ರೀ

ಮಾತಾಡೋಕೆ ಅವಕಾಶ ಕೊಡಿ ಅಕ್ಕಯ್ಯ..

ಸಾಧ್ಯಾನೇ ಇಲ್ಲ.. ನಿಮಗೆ ಮಾತಾಡೋಕೆ ಅವಕಾಶ ಕೊಟ್ರೆ ನನ್ನ ಒಪ್ಪಿಸಿಬಿಡ್ತೀರ ಅಣ್ಣಯ್ಯ.. ಅದಕ್ಕೆ ನನ್ನ ಕೋಪವನ್ನ ನಿಮ್ಮ ಮೇಲೆ ತೀರಿಸಿಕೊಳ್ಳಲೇ ಬೇಕು..

ಇದು ಪ್ರತಿ ಬಾರಿ ನಮ್ಮಿಬ್ಬರ ನಡುವೆ ನೆಡೆಯುವ ಸಾಮಾನ್ಯ ಸಂಭಾಷಣೆ.. ಜಗಳ, ಕೋಪದಿಂದಲೇ ಶುರು.. ಸರಿ ನಾ ಶಾಲೆಯಲ್ಲಿ ಓದಿದ್ದು, ಕಾಲೇಜಲ್ಲಿ ಕಲಿತಿದ್ದು.. ಜೀವನದಿಂದ ಕಲಿತಿದ್ದು ಎಲ್ಲವನ್ನು ಉಪಯೋಗಿಸಿ.. ಅಕ್ಕಯ್ಯ ದುರ್ಗಾದೇವಿಯನ್ನು ಶಾಂತ ಮಾಡಿದ ಮೇಲೆ.. ನಂತರ ಮಿಕ್ಕ ಮಾತು ಶುರು ಆಗುತ್ತದೆ..

ಮೊದಲ ಶ್ರಾವಣ ಶನಿವಾರ ಕಾಂಚಿಪುರಂ ಅತ್ತಿ ವರದರಾಜ ಸ್ವಾಮಿಯನ್ನು ನೋಡಲು ಹೋಗಿದ್ದು.. ನೀವು ಓದಿದ್ದೀರಾ .. ಹೀಗೆ ಆ ಪ್ರವಾಸದ ನೆನಪಲ್ಲಿ ನಾಲ್ಕು ವಾರಗಳು ಕಳೆದಿದ್ದವು.. ಅಚಾನಕ್.. ವೆಂಕಿ.. ಕರೆ ಮಾಡಿ.. ಮಗಾ ರಾಮನಗರಕ್ಕೆ ಹೋಗೋಣ್ವಾ.. ರಾಮದೇವರ ಗುಡ್ಡ.. ಶ್ರಾವಣ ಶನಿವಾರ..

ಎರಡನೇ ಮಾತಿಲ್ಲದೆ ಓಕೆ ಅಂದಿದ್ದೆ.. ಶಶಿ ಮತ್ತು ಅಕ್ಕಯ್ಯ ಬರ್ತೀವಿ ಅಂತ ಆಯ್ತು.. ಸರಿ.. ವೆಂಕಿ ಮನೆಗೆ ಹೋದೆ .. (ಸರಿಯಾದ ಸಮಯಕ್ಕೆ ಅಂದ್ರಾ.. ಚಾನ್ಸ್ ಇಲ್ಲ.. ನನ್ನ ಸಮಯ ಸರಿಯಾಗಿದೆಯೋ ಇಲ್ವೋ.. ಆದರೆ ಈ ನನ್ನ ಗೆಳೆಯರ ಕಾರ್ಯಕ್ರಮಕ್ಕೆ ಏನಾದರೂ ವಿಘ್ನ ಇದ್ದೆ ಇರುತ್ತೆ.. ) ಹೋದ ಕೂಡಲೇ ತೀರ್ಥ ಪ್ರಸಾದ ಮುಗಿದಿತ್ತು.. ನನಗೆ ಸಹಸ್ರನಾಮ ಅರ್ಚನೆ ಆಯ್ತು..

ಹಲ್ಲು ಬಿಟ್ಟು ಸ್ವೀಕರಿಸಿ.. ಶಶಿಯ ಕಾರು ರಾಮನಗರದ ಕಡೆಗೆ ದೌಡಾಯಿಸಿತು.. ಇನ್ನೇನು ದಾರಿಯುದ್ದಕ್ಕೂ ನಮ್ಮ ತರಲೆ ಮಾತುಗಳು ಅಕ್ಕಯ್ಯನ ಕೈಲಿ ಒದೆಗಳು.. ಶಶಿಯ ಸ್ಪಾಟ್ ಆನ್ ಮಾತುಗಳು.. ವೆಂಕಿಯ ತರಲೆ.. ಇದ್ದೆ ಇದ್ದವು..

ಮಾತಿಲ್ಲದೆ ಹೋದರೆ ಅದು ಪ್ರವಾಸವೇ.. ನನ್ನ ಭಾಗ್ಯ ನನಗೆ ಸಿಗೋರೆಲ್ಲ ಸೊಗಸಾಗಿ ಮಾತಾಡೋರೇ.. ಹಾಗಾಗಿ ನಾ ಆರಾಮು..
ಹೆಬ್ಬಾಗಿಲಿನಲ್ಲಿ ಹರಸಿದ ಹನುಮ 

ರಾಮನಗರದ ಹೆದ್ದಾರಿಯಲ್ಲಿ ದೊಡ್ಡ ಹನುಮನ ವಿಗ್ರಹ ಹೊಂದಿರುವ ಹೆಬ್ಬಾಗಿಲು ನಮಗೆ ಸ್ವಾಗತಿಸಿತು.. ವೆಂಕಿ ಸ್ಥಳೀಯ ಆಗಿದ್ದರಿಂದ.. ಅವ "ಶಶಿ ಕಾರನ್ನು ಇಲ್ಲೇ ಹಾಕು .. ಮುಂದೆ ಹೋಗೋಕೆ ಕಷ್ಟ.. ಸಿಕ್ಕಾಪಟ್ಟೆ ಕಾರುಗಳು, ವಾಹನಗಳು ಇರ್ತವೆ.. . " ಸ್ವಲ್ಪ ವಾದವಿವಾದ ಆಯ್ತು.. ಕಡೆಗೆ ಸಾಮಾನ್ಯ ವೆಂಕಿಯ ಪ್ಲಾನ್ ಯಶಸ್ವೀ ಯಾಗೋದು ಇತ್ತೀಚಿಗೆ ಪಕ್ಕ ಇತ್ತು. .. ಹಾಗಾಗಿ ಅವನ ತರ್ಕಕ್ಕೆ ತಲೆ ಬಾಗಿ.. ಆಟೋ ಹಿಡಿದೆವು.. ಮತ್ತೆ ವೆಂಕಿಯ ಪ್ಲಾನ್.. ಆಟೋ ಚಾಲಕನ ಜೊತೆ ಕಚಪಚ.. ..  ದಾರಿಯುದ್ದಕ್ಕೂ ಜನಜಾತ್ರೆ.. ಗಾಡಿಗಳು.. ಕಾರುಗಳು ದೌಡಾಯಿಸುತ್ತಿದ್ದವು..
ಹನುಮಂತ  ರಾಯ ಮಳೆರಾಯನ 
ಜೊತೆಯಲ್ಲಿ ಮಿಂದ ಕ್ಷಣ 

ರಾಮದೇವರ ಬೆಟ್ಟದ ಬಾಗಿಲಿಗೆ ಬಂದಾಗ.. ಅರಿವಾಯಿತು.. ಆಟೋದಲ್ಲಿಯೇ  ಒಳ್ಳೆದಾಯ್ತು ಅಂತ.. ವೆಂಕಿಯ ಕಡೆಗೆ ನೋಡಿದರೆ ಅವ ಹೊಗಳಿಕೆಯಿಂದ ಮರ ಹತ್ತಿಬಿಡುತ್ತಾನೆ ಎಂಬ ಭಯದಿಂದ.. ಮನದಲ್ಲಿಯೇ ಅವನಿಗೆ ಅಭಿನಂದನೆ ಸಲ್ಲಿಸಿದೆವು.

ಜನಸಾಗರ 
ಮೆಟ್ಟಿಲುಗಳ ರಾಶಿಯನ್ನು ಹತ್ತಿ ಹೋಗುವಾಗ.. ನಗು, ಮಾತು, ಕಿಚಾಯಿಸುವಿಕೆ.. ಅಕ್ಕಯ್ಯನಿಂದ ಹೊಡೆತ ಎಲ್ಲವೂ ಅವಿರತವಾಗಿ ಸಾಗುತ್ತಿತ್ತು.. ಜೊತೆಯಲ್ಲಿ ನನ್ನ ಕ್ಯಾಮೆರಾ ತನ್ನ ಕೆಲಸವನ್ನು ನಿಷ್ಠೆಯಿಂದ ಮಾಡುತಿತ್ತು..

ರಾಮದೇವರ ದರ್ಶನ ಮಾಡಿ.. ವೆಂಕಿ ಕೊಟ್ಟ ದುಡ್ಡಿನಿಂದ ಭಕ್ತಿಯ ದಾರವನ್ನು ಕೈಗೆ ಕಟ್ಟಿಸಿಕೊಂಡು.. ಹೊರಗೆ ಬಂದಾಗ.. ಪ್ರಸಾದ ಕಾಯುತಿತ್ತು.. ಪ್ರಸಾದವನ್ನು ಪಡೆದು.. ಮೇಲಿನ ಬೆಟ್ಟದ ಹಾದಿಯಲ್ಲಿ ಒಂದು ಹೆಬ್ಬಂಡೆಯ ಮೇಲೆ ಕೂತು.. ಪ್ರಸಾದವನ್ನು ಗುಳುಂ ಸ್ವಾಹಾ ಮಾಡಿ.. ಮತ್ತೆ ಒಂದಷ್ಟು ಫೋಟೋಗಳು ಮೂಡಿದವು..
ಪ್ರಸಾದ ಮುಕ್ಕುವ ಸಮಯ 

ಅಣ್ಣಯ್ಯ ಇವರ  ಯಶಸ್ಸಿನ ಹಿಂದೆ ಇರೋದು  ನಾನೇ 

 ಸೂಪರ್ ಜೋಡಿ ಶಶಿ ಪ್ರತಿಭಾಕ್ಕಯ್ಯ 

ತ್ರಿಮೂರ್ತಿ ಶ್ರೀ ಶಶಿ ವೆಂಕಿ 

ತುಂಬಾ ಜನವಿದ್ದರಿಂದ.. ಪೊಲೀಸರು ಒಂಟಿ ಕಂಬಿ ಬೆಟ್ಟದ ನೆತ್ತಿಗೆ ಹತ್ತಲು ಅವಕಾಶ ನಿರ್ಬಂಧಿಸಿದ್ದರು.. ಹಾಗಾಗಿ ಅಲ್ಲಿಯೇ ಕೂತು ಇನ್ನಷ್ಟು ಮಾತುಗಳನ್ನು ಮುಗಿಸಿ.. ಬೆಟ್ಟದ ಬುಡಕ್ಕೆ ಇಳಿಯಲು ಶುರು ಮಾಡಿದೆವು..

ಆಗ ಒಂದು ಆಶ್ಚರ್ಯಕರ ಘಟನೆ ನೆಡೆಯಿತು.. ಕಾಲೇಜು ದಿನಗಳಲ್ಲಿ ರಸ್ತೆ ಬದಿಯ ತಿಂಡಿ ತಿನಿಸುಗಳನ್ನು ತಿಂದು ಅರಗಿಸಿಕೊಳ್ಳುತಿದ್ದ ದೇಹ..  ನಮಗೂ ವಯಸ್ಸಾದಂತೆ (ಕೆಲವು ಒಪ್ಪಿಕೊಳ್ಳೋಲ್ಲ.. ವಯಸ್ಸಾಗಿದೆ ಎಂದು) ಅದನ್ನು ಕಡಿಮೆ ಮಾಡಿದ್ದು ಸುಳ್ಳಲ್ಲ.. ಆದರೆ ಅಲ್ಲಿದ್ದ ಬೋಂಡಾದ ವಾಸನೆ ವೆಂಕಿಯನ್ನು ಎಳೆಯಿತು. "ಶ್ರೀಕಿ ಒಂದಷ್ಟು ಬೋಂಡಾ ತಿನ್ನೋಣ" ಅನ್ನುತ್ತಾ ಬಿಸಿ ಬಿಸಿ ಬೋಂಡಾ ಮುಕ್ಕಿದೆವು.. ಕಡಲೆ ಪುರಿ ಕೊಂಡೆವು.. ಯಾಕೋ ಬೋಂಡಾದ ರುಚಿಗೆ ನಾಲಿಗೆ ಶರಣಾಗಿತ್ತು.. ಇನ್ನೊಂದು ಮೂವತ್ತು ರೂಪಾಯಿಗಳಿಗೆ ಬೋಂಡಾ ಕೊಂಡು.. ಕೆಳಗೆ ಇಳಿದೆವು..











ನಾವು ಕೆಳಗೆ ಇಳಿದೆವು.. ತಿಂದಿದ್ದು ಹೊಟ್ಟೆಯೊಳಗೆ ಆರಾಮಾಗಿ ನುಸುಳಿತ್ತು..

ದಾರಿಯುದ್ದಕ್ಕೂ ಮಳೆ ಬಂದು ರಾಡಿಯಾಗಿದ್ದ ರಸ್ತೆಯಾಗಿದ್ದರೂ ತಲೆ ಕೆಡಿಸಿಕೊಳ್ಳದೆ ಆರಾಮಾಗಿ ಹೆಜ್ಜೆ ಹಾಕಿದೆವು.. ಅಲ್ಲೀತನಕ ಕಣ್ಣ ಮುಚ್ಚಾಲೆ ಆಡುತ್ತಿದ್ದ ಮಳೆರಾಯ.. ಹಠಾತ್ "ಹೋಗಲೇ ಇನ್ನು ತಡೆಯೋಕೇ ಆಗೋಲ್ಲ" ಎನ್ನುವ ಮಗುವಿನಂತೆ ರಚ್ಚೆ ಹಿಡಿದು ಸುರಿಯತೊಡಗಿದ.. ಆಟೋದಲ್ಲಿ ಕೂತಿದ್ದರು ಇರುಚಲು ಮಳೆಯಿಂದಾಗಿ ವೆಂಕಿ ಒಂದು ಬದಿಯಲ್ಲಿ ತೋಯ್ದು ತೊಪ್ಪೆಯಾಗಿದ್ದ..

ಅಲ್ಲಿಂದ ಸೀದಾ ವೆಂಕಿಯ ಮನೆಗೆ ಹೋಗಿ.. ಅವರ ಅಮ್ಮನ ಉಭಯಕುಶಲೋಪರಿ ವಿಚಾರಿಸಿ.. ಅವರ ಜೊತೆಯಲ್ಲಿ ಒಂದಷ್ಟು ಹರಟಿ.. ಬೆಂಗಳೂರಿನ ಕಡೆಗೆ ಹೊರಟೆವು..

ಬಿಡದಿ ದಾಟಿ ಆನಂದ್ ಆಡ್ಯಾರ್ ಭವನದಲ್ಲಿ ಊಟಕ್ಕೆ ಬಂದೆವು.. ಊಟ ಬೇಡ ಅಂತ ಒಬ್ಬರು.. ಊಟವಿರಲಿ ಅಂತ ಒಬ್ಬರು.. ಹೀಗೆ ಎರಡು ಪಕ್ಷವಾದ್ದರಿಂದ.. ಯಥಾಪ್ರಕಾರ ಊಟದಲ್ಲಿ ಎತ್ತಿದ ಕೈಯಾದ ವೆಂಕಿ ಮತ್ತು ನಾನು ಊಟ ಕೊಂಡೆವು.. ಶಶಿ ಮತ್ತು ಅಕ್ಕಯ್ಯ ತಮಗಿಷ್ಟವಾದ ತಿಂಡಿ ಬಾರಿಸಿದರು..

ನಾ ಊಟದಲ್ಲಿ ನಿಧಾನ.. " ನಿನ್ನ ಹೊಟ್ಟೆ ಸೇದೋಗ .. ಆರಾಮಾಗಿ ತಿನ್ನು.. ಒಂದು ಚೂರು ಬಿಡಬೇಡ" ಅಂತ ವೆಂಕಿಯ ಮಾತಿಗೆ ಬೆಲೆಕೊಟ್ಟು.. ಸಾವಕಾಶವಾಗಿ ತಿಂದು ಮುಗಿಸಿದೆ..

ವೆಂಕಿ  ಬಿಡೋದು ಹಲ್ಲು ಹಿಂಗೇ 

ನಾಚಿ ನೀರಾದ 

ವಯಸ್ಸಾದರೇನಂತೆ ಮನ ಯಾವತ್ತೂ ಮಂಗವೇ ಅಲ್ವೇ 

ಮತ್ತೆ ಕಾರಿಗೆ ಬಂದು ಕೂತಾಗ ಬೆಂಗಳೂರಿನ ಕಡೆಗೆ ಮನ ಎಳೆಯುತ್ತಿತ್ತು .. ಅದೇ ಗುಂಗಿನಲ್ಲಿ ವೆಂಕಿ ಮನೆಗೆ ಬಂದು.. ಒಂದಷ್ಟು ಹೊತ್ತು ಹಲ್ಲು ಬಿಟ್ಟು.. ಮನೆ ಕಡೆ ಹೊರಟೆವು..

ತಮಾಷೆ ಅಂದರೆ.. ಈ ವರ್ಷ ಶ್ರಾವಣ ಮಾಸದ ಮೊದಲ ಶನಿವಾರ ಮತ್ತು ಕಡೆಯ ಶನಿವಾರ ಜೀವದ ಗೆಳೆಯರ ಜೊತೆಯಲ್ಲಿ ಕಳೆದದ್ದು..

ಅದು ಖುಷಿ ಕೊಡುವ ಸಂಗತಿ.. ಜೊತೆಯಲ್ಲಿ ಸುಮಾರು ಮೂರು ತಿಂಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಈ ಪ್ರವಾಸ ಮಾಲಿಕೆ.. ಶಶಿ ಮತ್ತು ಅಕ್ಕಯ್ಯನವರ ವಿವಾಹ ಸಂಭ್ರಮದ ಶುಭ ಸಮಯಕ್ಕೆ ಮೂಡಿ ಬಂದಿದ್ದು ಸೋನೇ ಫೆ ಸುಹಾಗ್ ಎನ್ನುವಂತೆ ಬಂದಿದೆ..





ಅಕ್ಕಯ್ಯ ಶಶಿ ೨೧ ಸಂಭ್ರಮದ ವರ್ಷದಿಂದ ಇಪ್ಪತ್ತೆರಡನೆ ವರ್ಷಕ್ಕೆ ಕಾಲಿಟ್ಟಿರುವ ನಿಮ್ಮ ದಾಂಪತ್ಯದಲ್ಲಿ ಸೌಖ್ಯ, ನೆಮ್ಮದಿ, ಶಾಂತಿ ಎಲ್ಲವೂ ನಿಮಗಿರಲಿ.. ನೀವು ನೆಡೆಯುವ ಹಾದಿಯಲ್ಲಿ ಬರುವ ಸಂತಸ, ನಗು, ಉಲ್ಲಾಸ, ಉತ್ಸಾಹಗಳನ್ನು ನೋಡುವ ಸೌಭಾಗ್ಯ ನಮಗೆ ಸದಾ ಇರಲಿ..

ವಿವಾಹ ಸಂಭ್ರಮದ ಶುಭಾಶಯಗಳು!!!

Sunday, November 24, 2019

ಸಹಾಯ....!

ಮೈ ಬೆವರುತ್ತಿತ್ತು.. 

ಒಂದು ಎರಡು ಮೂರು ನಾಲ್ಕು.. ಹತ್ತು .. ಹದಿನೈದು.. ತನ್ನ ಪ್ರೀತಿಯ ಬೈಕ್ ಸಾಮಾನ್ಯ ಎರಡನೇ ಕಿಕ್ಕಿಗೆ ಶುರುವಾಗಬೇಕಿತ್ತು.. ಕತ್ತಲೆ ಗವ್ ಅಂತ ಇತ್ತು.. ಜೀರಂಬೆಗಳ ಸದ್ದು.. ನರಿಗಳು ಊಳಿಡುವ ಶಬ್ದ.. ಯಾಕೋ ಪರಿಸ್ಥಿತಿ ಸರಿಯಿಲ್ಲ ಅನ್ನುವ ಅನುಭವ.. 

ಮತ್ತೆ ಕಿಕ್ ಹೊಡೆಯಲು ಶುರುಮಾಡಿದ... ಹೆಲ್ಮೆಟ್, ಜಾಕೆಟ್ ಎಲ್ಲವು ಒದ್ದೆಮಯವಾಗಿತ್ತು. ಅದನ್ನು ತೆಗೆದು ಬೈಕಿನ ಮೇಲೆ ಇಟ್ಟ  ಸುಸ್ತಾಗಿದ್ದ . ತಲೆ ಕೆಟ್ಟಿತ್ತು.. ಕಿಂಗ್ ಹಚ್ಚಲು ಜಾಕೆಟ್ ಜೇಬಿಗೆ ಕೈ ಹಾಕಿ ಸಿಗರೇಟ್ ತೆಗೆದು ತುಟಿಯ ಮಧ್ಯೆ ಇಟ್ಟು  ಲೈಟರ್ ಫರ್ ಫರ್ ಸದ್ದು ಮಾಡಿತೇ ವಿನಃ.. ಬೆಳಗಲಿಲ್ಲ.. ಥೂ ಥರಿಕೆ ಎಂದು ಬಯ್ದುಕೊಂಡು.. ಎಮರ್ಜೆನ್ಸಿ ಅಂತ ಇಟ್ಟುಕೊಂಡಿದ್ದ ಬೆಂಕಿ ಪೊಟ್ಟಣ ತೆಗೆದ.. ಚರ್ ಕಡ್ಡಿ ಗೀರಿ ಹತ್ತಿಕೊಂಡಿತು... ಆ ಬೆಳಕಲ್ಲಿ ಕಂಡ ದೃಶ್ಯ ಕಂಡು ಹೌಹಾರಿದ.. 

ಅನತಿ ದೂರದಲ್ಲಿಯೇ ಬೆಳ್ಳನೆಯ ಒಂದು ಆಕೃತಿ... ಮೈ ಕೈ ಕಾಲು ನಡುಗ ಹತ್ತಿತು.. ಓಡಿ ಹೋಗೋದಾ . ನಿಲ್ಲೋದ.. ಏನೂ ಯೋಚನೆ ಮಾಡಲಾಗದ ಪರಿಸ್ಥಿತಿ.. ತುಟಿಯಲ್ಲಿದ್ದ ಸಿಗರೇಟ್ ಆ ನಡುಕದಲ್ಲಿ ಬಿದ್ದು ಹೋಗಿತ್ತು.. 

ಬೆಂಕಿ ಕಡ್ಡಿ ಕೊನೆ ತನಕ ಉರಿದು.. ಇನ್ನೂ ನನಗಾಗದು ಅಂತ ಅವನ ಕೈ ಬೆರಳುಗಳಿಗೆ ತನ್ನ ಇರುವನ್ನು ತೋರಿಸಿದ ಮೇಲೆ.. ಗಾಬರಿಯಾಗಿ ಕಡ್ಡಿ ಕೆಳಗೆ ಬೀಳಿಸಿದ.. 

ಒಣಗಿದ ಹುಲ್ಲು..  ಅಲ್ಪ ಸ್ವಲ್ಪ ಬೆಂಕಿಯ ಕೆಂಡವಿದ್ದ ಬೆಂಕಿ ಕಡ್ಡಿ.. ಆಗೊಮ್ಮೆ ಈಗೊಮ್ಮೆ ತಣ್ಣಗೆ ಬೀಸುತ್ತಿದ್ದ ಗಾಳಿ.. ಇಷ್ಟು ಸಾಕಾಗಿತ್ತು.. ಎಲ್ಲೋ ಸುಟ್ಟ ವಾಸನೆ.. ಹೊಗೆ ಕಣ್ಣಿಗೆ ಉರಿಕೊಟ್ಟಾಗ ಮತ್ತೆ ಧರೆಗಿಳಿದ ರಾಜೇಶ.. ನೋಡು ನೋಡುತ್ತಿದ್ದಂತೆಯೇ.. ಹತ್ತಿರದ ಹುಲ್ಲಿನ ರಾಶಿಗೆ ಬೆಂಕಿ.. ಕಪ್ಪು ಕತ್ತಲೆಯಿದ್ದ ಪ್ರದೇಶ ಅಚಾನಕ್ ಬೆಳಕಿನ ಹೊಂಡವಾಗಿತ್ತು.. 

ಏನನ್ನೋ ನೆನಸಿಕೊಂಡು.. ಮತ್ತೆ ಆ ಕಡೆ ನೋಡಿದ.. ಆ ಹೊಗೆ.. ಆ ಬೆಂಕಿಯ ಜ್ವಾಲೆಯ ಮಧ್ಯದಲ್ಲಿಯೂ ಆ ಬೆಳ್ಳಗಿನ ಆಕೃತಿ ಕಾಣಿಸಿತು.. ತನ್ನತ್ತ ಬರಲು ಕೈಬೀಸಿದಂತೆ ಭಾಸವಾಯಿತು.. ನಡುಕ.. ಆದರೆ ಬೇರೆ ದಾರಿಯಿಲ್ಲ.. ಮೆಲ್ಲಗೆ ಬೆಂಕಿಯನ್ನು ಬಳಸಿಕೊಂಡು ಅತ್ತ ಕಡೆ ಹೆಜ್ಜೆ ಹಾಕಿದ.. ಒಂದೈವತ್ತು ಮೀಟರ್ ಇರಬಹುದು.. ಹತ್ತಿರ ಬಂದ... ಉದ್ದನೆಯ ಬಿಳಿಯ ನಿಲುವಂಗಿ.. ತಲೆಗೆ ಬಿಳಿಬಣ್ಣದ ಮಂಕಿ ಕ್ಯಾಪ್.. ಪಾದರಕ್ಷೆಯಿಲ್ಲದ ಕಾಲುಗಳು ಹುಲ್ಲಿನ ಹಾಸಿನಲ್ಲಿ ಮುಚ್ಚಿ ಹೋಗಿತ್ತು.. ಬೆಂಕಿ ಇನ್ನೂ ತನ್ನ ಕೆನ್ನಾಲಿಗೆಯನ್ನು ಇಲ್ಲಿಯ ತನಕ ಚಾಚಿರಲಿಲ್ಲ.. ಬೀಸುವ ಗಾಳಿಗೆ ತೊಯ್ದಾಡುತ್ತಿತ್ತು.. 

"ನಾನು ಪಕ್ಕದ ಊರಿನಲ್ಲಿರುವ ಚರ್ಚಿನ ಪಾದ್ರಿ.. ನನ್ನನ್ನು ಆ ಚರ್ಚಿನ ತನಕ ಬಿಡುತ್ತೀಯಾಪ್ಪಾ.. ಚಪ್ಪಲಿ ಇಲ್ಲದ ಕಾಲುಗಳು ಚುಚ್ಚುತ್ತಿವೆ.. "

"ಸರಿ ಫಾಧರ್ ಬನ್ನಿ... ಆದರೆ ನನ್ನ ಬೈಕ್ ಸಮಸ್ಯೆ ಕೊಡುತ್ತಿದೆ.. ಸ್ಟಾರ್ಟ್ ಆಗುತ್ತಿಲ್ಲ.. ಬಹುಶಃ ಪೆಟ್ರೋಲ್ ಖಾಲಿಯಾಗಿರಬಹುದು.. "

"ನೋಡು ಚೈಲ್ಡ್.. ಚರ್ಚಿಗಾಗಿ ಪೆಟ್ರೋಲ್ ಬೇಕಿತ್ತು.. ಒಂದು ಬಾಟಲಿಯಲ್ಲಿ ಹಾಕಿಕೊಂಡಿದ್ದೇನೆ.. ಸ್ವಲ್ಪ ನೀನು ಬೈಕಿಗೆ ಹಾಕಿ ಶುರು ಮಾಡು. ಚರ್ಚ್ ತನಕ ಬಂದರೆ ಸಾಕು... ಇವತ್ತು ಅಲ್ಲಿಯೇ ಮಲಗಿದ್ದು.. ಬೆಳಿಗ್ಗೆ ಹೋಗುವಂತೆ.. ನಿನ್ನ ಬೈಕಿಗೆ ಪೆಟ್ರೋಲ್ ಹೊಂದಿಸುವ ಹೊಣೆಗಾರಿಕೆ ನನ್ನದು.. ಆಗಬಹುದಾ"

ಬೇರೆ ದಾರಿಯಿರಲಿಲ್ಲ.. ಒಪ್ಪಿಕೊಂಡ.. 

ಇಬ್ಬರೂ ಸೇರಿ ಅಲ್ಪ ಸ್ವಲ್ಪ ಉರಿಯುತ್ತಿದ್ದ ಬೆಂಕಿಗೆ ಮಣ್ಣು, ಮರಳು, ಕಲ್ಲುಗಳನ್ನು ಹಾಕಿ ಪೂರ್ಣ ಆರಿಸಿದ್ದರು... 

ಪಾದ್ರಿ ಕೊಟ್ಟ ಬಾಟಲಿನಲ್ಲಿದ್ದ ಪೆಟ್ರೋಲ್  ಹಾಕಿ.. ಬೈಕಿಗೆ ಒಂದು ಕಿಕ್.. ಡುಗು ಡುಗು ತನ್ನ ಇಷ್ಟವಾದ ರಾಯಲ್ ಎಂಫಿಎಲ್ಡ್ ಓಡಲು ಶುರುಮಾಡಿತು.. 

ಅಲ್ಲಿಂದ ಹೊರಡುವ ಮೊದಲು.. ಉರಿಯುತ್ತಿದ್ದ ಬೆಂಕಿಯನ್ನೊಮ್ಮೆ ಇಬ್ಬರೂ ನೋಡಿದರು.. ಗಾಳಿಗೆ ಬೆಂಕಿ ಹೊತ್ತಿಕೊಂಡಿದ್ದ ಹುಲ್ಲಿನ ರಾಶಿ ಕ್ರಮೇಣ ತನ್ನ ಶಕ್ತಿಯನ್ನು ಕಳೆದುಕೊಂಡು. ನಿತ್ರಾಣವಾಗತೊಡಗಿತ್ತು.. 
ಹಾಗಾಗಿ ಅದರ ಯೋಚನೆಯಿಲ್ಲದೇ... ಪಾದ್ರಿ ಹೇಳಿದ ಹಾದಿಯಲ್ಲಿ ಬೈಕ್ ಡುಗು ಡುಗು ಸದ್ದು ಮಾಡುತ್ತಾ.. ಕಾಡಿನ ನೀರವತೆಯನ್ನು ಭೇದಿಸಿ ನುಗ್ಗತೊಡಗಿತ್ತು.. 

ಸುಮಾರು ಒಂದು ಘಂಟೆಗಳ ಪಯಣ ಇರಬಹುದು.. ಇಲ್ಲೇ ಕಣಪ್ಪ ಅಂತ ಪಾದ್ರಿ ರಾಜೇಶನ ಬೆನ್ನ ಮೇಲೆ ಕೈ ಇಟ್ಟು ಅಮುಕಿ ಹೇಳಿದಾಗ ಬೈಕ್ ನಿಂತಿತು.. 

ವಿದ್ಯುತ್ ಇಲ್ಲದ ಹೊತ್ತು.. ಸುತ್ತಲ ಮುತ್ತಲ ಪ್ರದೇಶ ಸರಿಯಾಗಿ ಕಾಣುತ್ತಿಲ್ಲ.. ಆದರೂ ಇಲ್ಲೊಂದು ಭವ್ಯವಾದ ಕಟ್ಟಡವಿದೆ ಎಂದು ಭಾಸವಾಗುತಿತ್ತು... ಮತ್ತೆ ಲೈಟರ್ ಫರ್ ಫರ್ ಅಂತ ಸದ್ದು ಮಾಡಿ.. ಈ ಬಾರಿ ಹೊತ್ತಿಕೊಂಡಿಯೇ ಬಿಟ್ಟಿತು..  

ಸಿಗರೇಟ್ ಸೇದುವ ಆಸೆಯಿದ್ದರೂ.. ಈ ಪ್ರದೇಶದಲ್ಲಿ ಬೇಡ ಎಂದುಕೊಂಡು ಸುತ್ತಲೂ ಲೈಟರ್ ತಿರುಗಿಸಿ.. ಆ ಮಂದಬೆಳಕಲ್ಲಿ ಅಲ್ಲಿ ಏನಿದೆ ಅನ್ನೋದನ್ನು ತನ್ನ ಕಣ್ಣಿಗೆ ಮತ್ತು ಬುದ್ದಿಗೆ ಅರಿವಾಗುವಷ್ಟು ಗಮನಿಸಿದ.. 

ಪಾದ್ರಿ ಮತ್ತೆ ಬಂದು.. ಹೆಗಲ ಮೇಲೆ ಕೈಯಿಟ್ಟು..ಒಂದು ಪಂಜನ್ನು ಹಿಡಿದು  "'ನಡಿ ಹೋಗೋಣ" ಎಂದು ಒಳಗೆ ಕರೆದುಕೊಂಡು ಹೋದರು... ಭವ್ಯವಾದ ಕಟ್ಟಡ.. ಅದರ ಒಳಾಂಗಣ .. ಆ ಮಂದ ಬೆಳಕಿನಲ್ಲಿಯೂ ಸೌಂದರವಾಗಿ ಕಾಣುತ್ತಿತ್ತು.. 
 
ಒಂದು ಕೋಣೆಗೆ ಕರೆದೊಯ್ದು.. ಇಲ್ಲಿ ನಾನೊಬ್ಬನೇ ಇರುವುದು.. ವರ್ಷಕ್ಕೊಮ್ಮೆ ಯಾವಾಗಲೋ ಕೆಲವರು ಬರುತ್ತಾರೆ.. confess ಮಾಡಿಕೊಳ್ಳೋಕೆ ಬಂದು ಹೋಗುತ್ತಾರೆ.. ಹಾಗಾಗಿ ಯಾವುದೇ ಸೌಲಭ್ಯಗಳಿಲ್ಲ.. ನೀ ಮಲಗಿಕೊ.. ಅತ್ತ ಕಡೆ ಒಂದು ಲೋಟ ಹಾಲನ್ನು ಇಟ್ಟಿರುವೆ.. ಹಣ್ಣುಗಳಿವೆ.. ನಾ ಇಲ್ಲಿಗೆ ಬರುವಾಗ ತಂದದ್ದು. ತಿಂದು ಮಲಗಿಕೊ.. ಬೆಳಿಗ್ಗೆ ನೋಡೋಣ.. 

ಇಷ್ಟು ಹೇಳಿ ಆ ಪಾದ್ರಿ ಹೋಗುತ್ತಾ ಹೋಗುತ್ತಾ ಒಂದು ಕೋಣೆಯೊಳಗೆ ಹೋದರು.. ಅದನ್ನೇ ನೋಡುತ್ತಾ.. ಎಷ್ಟನೇ ರೂಮು ಅಂತ ಲೆಕ್ಕ ಹಾಕಿ.. ಬೆಳಿಗ್ಗೆ ಪಾದ್ರಿಗೆ ಒಂದು ಥ್ಯಾಂಕ್ಸ್ ಹೇಳಿ ಹೊರಡಬಹುದು... ಎಂದು ಕೊಂಡು.. ಹಾಸಿಗೆ ಮೇಲೆ ಮಲಗಿದ್ದೆ ಗೊತ್ತು.. ಗಾಢವಾದ ನಿದ್ರೆ ಆವರಿಸಿಕೊಂಡಿತ್ತು.. 

ಗಾಳಿ.. ಮೊಗದ ಮೇಲೆ ಬೀರುತ್ತಿದ್ದ ದಿನಕರನ ಕಿರಣಗಳು.. ಮಣ್ಣಿನ ವಾಸನೆ.. ಎಲ್ಲೋ ನೀರಿನಲ್ಲಿ ಹಕ್ಕಿಗಳು ಮುಳುಗಿ ಏಳುತ್ತಿದ್ದ ಸದ್ದು.. ಇದನ್ನೆಲ್ಲಾ ಕೇಳಿ ನೋಡಿ.. ಅರೆ ಹೊತ್ತಾಗಿ ಹೋಯ್ತಲ್ಲ.. ಪಾದ್ರಿಗೆ ಹೇಳಿ ಹೊರಡೋಣ ಎಂದುಕೊಂಡು ಹೊರಗೆ ಬಂದರೆ ಅವಕ್ಕಾದ.. 

ಶಿಥಿಲಗೊಂಡಿದ್ದ ಚರ್ಚಿನ ಕಟ್ಟಡ ಅದಾಗಿತ್ತು.. ಯಾವಾಗ ಬೇಕಾದರೂ ಬೀಳಬಹುದೇನೋ ಎನ್ನುವ ಹಾಗಿತ್ತು.. ದೊಡ್ಡ ದೊಡ್ಡ ಮಿನಾರುಗಳು.. ಕಿಟಕಿಗಳು, ಜಾಲಂಧ್ರಗಳು.. ನೆಲಕ್ಕೆ ಹಾಸಿದ್ದ ಟೈಲುಗಳು ಕಿತ್ತುಹೋಗಿ ನನ್ನ ನೋಡ್ರೋ... ಎನ್ನುವ ಹಾಗೆ ಬೇಸರದ ಮೊಗ ಹೊತ್ತಿದ್ದವು.. ಮಾಸಲು ಗೋಡೆ.. ಏನಿಲ್ಲವೆಂದರೂ ಸುಮಾರು ನೂರೈವತ್ತು ವರ್ಷಗಳು ಆಗಿರಬಹುದು ಎನ್ನುವ ಸೂಚನೆ.. ಧೈರ್ಯ ಮಾಡಿಕೊಂಡು ರಾಜೇಶ.. ಪಾದ್ರಿ ನಿನ್ನೆ ರಾತ್ರಿ ಹೋಗಿರಬಹುದಾದ ಕೋಣೆಯ ಕಡೆಗೆ ಹೆಜ್ಜೆ ಹಾಕಿದ.. 

ಕಿರ್ ಕಿರ್ ಬಾಗಿಲು ತೆರೆದುಕೊಂಡಿತು.. ನೀಳ್ಗನ್ನಡಿ.. ಅದರ ಪಕ್ಕದಲ್ಲಿ ಒಂದು ನೀಳವಾದ ಶುಭ್ರ ಬಿಳಿಯ ಕೋಟು.. ಹ್ಯಾಟು.. ಕೈಗವಸು . ಬಿಳಿಯ ವರ್ಣದ ಚಪ್ಪಲಿಗಳು.. ಒಂದು ಮಣಿಯ ಸರ.. ಅದರ ತುದಿಯಲ್ಲಿ ಕ್ರಾಸ್ ಇತ್ತು... ಆದರೆ ಅಲ್ಲಿ ಯಾರೋ ಮಲಗಿದ್ದರು ಎನ್ನುವ ಯಾವ ಸುಳಿವು ಇರಲಿಲ್ಲ.. ಆ ಬಟ್ಟೆಗಳ ಮೇಲೆ ಒಂದು ಚೂರು ಧೂಳಾಗಲಿ.. ಸುಕ್ಕಾಗಲಿ ಇರಲಿಲ್ಲ... ಆದರೆ ಆ ರೂಮಿನೊಳಗೆಲ್ಲಾ ಕಸ ಕಡ್ಡಿ.. ಧೂಳು.. ಜೇಡರ ಬಲೆ ಯಥೇಚ್ಛವಾಗಿತ್ತು.. 

ಅಚ್ಚರಿಯಾಗಿ ಒಂದು ಸುತ್ತು ಬಂದ.. ಯಾರೂ ಕಾಣಿಸಲಿಲ್ಲ.. ಅನತಿ ದೂರದಲ್ಲಿ ಒಂದು ಪುಟ್ಟ ಕೆರೆ.. ಈ ಚರ್ಚು ಕೆರೆಯ ನೀರಿನಿಂದ ತುಸು ಎತ್ತರದಲ್ಲಿದ್ದರಿಂದ.. ಮಳೆಗಾಲದಲ್ಲಿ ಪೂರ್ಣಪ್ರಮಾಣದ ಮಳೆಯಾದರೆ ಮಾತ್ರ ಚರ್ಚು ಮುಳುಗಡೆಯಾಗಬಹುದು ಎನ್ನುವ ಸೂಚನೆ ಇತ್ತು ಅನಿಸಿತ್ತು.. 

ಪುಟ್ಟ ತೆಪ್ಪದಲ್ಲಿ ಒಬ್ಬ ಹರಿಗೋಲನ್ನು ಹಾಕುತ್ತ.. "ಸ್ವಾಮಿ.. ಅಲ್ಲಿ ಹೆಚ್ಚು ಹೊತ್ತು ಇರಬೇಡಿ.. . ನಾ ಕರೆದೊಯ್ಯುವೆ ಆ ದಡಕ್ಕೆ ಹೋಗೋಣ.. ಅಲ್ಲಿ ನಮ್ಮಳ್ಳಿ ಇದೆ.. "

ಏನೂ ಯೋಚಿಸದೆ.. ತನ್ನ ಬೈಕನ್ನು ಅಲ್ಲಿಯೇ ಬಿಟ್ಟು.. ಲಗುಬಗೆಯಿಂದ.. ತೆಪ್ಪ ಬರುವ ಕಡೆಗೆ ಓಡಿದ... ಐದು ನಿಮಿಷ ತೆಪ್ಪ ಬಂತು.. ಅದರೊಳಗೆ ಕುಳಿತ.. 

"ಏನಪ್ಪಾ ಇದು ವಿಚಿತ್ರ.. ನಿನ್ನೆ ರಾತ್ರಿ ಭವ್ಯವಾದ ಕಟ್ಟಡದ ಹಾಗೆ ಆ ಪಂಜಿನ ಬೆಳಕಲ್ಲಿ ಕಂಡಿತ್ತು.. ಇಂದು ನೋಡಿದರೆ ಎಲ್ಲವೂ ವಿಚಿತ್ರ.. ಏನಪ್ಪಾ ಇದರ ಕತೆ.. "

ಇರಿ ಸ್ವಾಮಿ.. ಎಂದು ಸನ್ನೆ ಮಾಡಿ ಜೇಬಿನಿಂದ ಒಂದು ಪುಟ್ಟ ಪತ್ರವನ್ನು ತೆಗೆದುಕೊಟ್ಟ.. ಓದಿ ಎಂದ.. 

"ಈ ಊರಿನ ಜನಕ್ಕೆ.. 

ನಿಮ್ಮೂರನ್ನು ತಲುಪುವುದು ಇಂದಿಗೂ ದುಸ್ತರವಾಗಿರೋದಿಂದ.. ನನಗೆ ಕಾಡು ದಾರಿಯಲ್ಲಿ ಸಿಗುವ ಅಲೆಮಾರಿಯನ್ನು ಇಲ್ಲಿಗೆ ಕರೆತರುತ್ತೇನೆ.. ಉಪಚಾರ ಮಾಡಿ. ಬೆಳಿಗ್ಗೆ ಅವರ ಹಾದಿ ಅವರು ಹಿಡಿಯಬಹುದು.. ಸುಪ್ತ ಮನಸ್ಸು.. ಒಳ್ಳೆಯ ವಿಚಾರಗಳು.. ಸದ್ಭಾವನೆ ಇದ್ದವರು ಮಾತ್ರ ನನ್ನಿಂದ ಉಪಚಾರ ಪಡೆದುಕೊಳ್ಳುತ್ತಾರೆ.. ಮತ್ತು ಆ ಹೊತ್ತಿಗೆ ಈ ಕಟ್ಟಡ ಭವ್ಯವಾಗಿ ಕಾಣುತ್ತದೆ.. ಮರುದಿನ ಅವರ ವಿಚಾರಧಾರೆಗಳು ಸಹಜ ಸ್ಥಿತಿಗೆ ಮರಳುವುದರಿಂದ ಅವರಿಗೆ ಯಥಾವತ್ ಕಾಣುತ್ತದೆ.. 

ಮಿಕ್ಕವರಿಗೆ ನಾನೇನೂ ತಂಟೆ ಮಾಡುವುದಿಲ್ಲ.. ಆದರೆ ಜೇಡ ತಾನು ಹೆಣೆದ ತನ್ನ ಬಲೆಯಲ್ಲಿ ತಾನೇ ಸಿಕ್ಕಿಕೊಳ್ಳುವಂತೆ ತಮ್ಮ ಯೋಚನೆಗಳಿಂದ ತಾವೇ ತೊಂದರೆಗೀಡಾಗುತ್ತಾರೆ.. 

ಈ ಕಾಯಕ ಮುಂದುವರೆಯುತ್ತದೆ.. "

"ಏನಪ್ಪಾ ಇದೆಲ್ಲ"

"ಪಾದ್ರಿ ತನ್ನ ಜೀವನದಲ್ಲಿ ಯಾರಿಗೂ ಉಪಕಾರ ಮಾಡದೆ.. ಈ ಚರ್ಚ್ ಸುತ್ತ ಮುತ್ತಲಿನ ಪ್ರದೇಶ ನೀರಿನಿಂದ ಆವೃತವಾಗಿದ್ದಾಗ..  ಹೋಗಿ ಬಿಟ್ಟ.. ಜೀವನದಲ್ಲಿ ಸಹಾಯ ಮಾಡಬೇಕಾದ ಸಂದರ್ಭದಲ್ಲಿ ಸ್ವಾರ್ಥ, ದ್ವೇಷ ಎಂದು ಒದ್ದಾಡಿ.. ಸತ್ತು ಹೋಗಿ.. ಈಗ ಪ್ರೇತಾತ್ಮನಾಗಿದ್ದಾನೆ.. ಆದರೆ ಅಂದು ಮಾಡಲಾಗದ ಸೇವೆಯನ್ನು ಇಂದು ಮಾಡುತ್ತಿರುವುದು.. ವಿಶೇಷ.. ನೀವು ಪುಣ್ಯ ಮಾಡಿದ್ದೀರಿ.. ನಿನ್ನೆ ನಿಮ್ಮನ್ನು ಆ ಕಗ್ಗತ್ತಲಿನ ಕಾಡಿನಿಂದ ಹೊರಗೆ ತರದಿದ್ದರೆ.. ಇಷ್ಟು ಹೊತ್ತಿಗೆ ಯಾವುದೋ ಕಾಡು ಪ್ರಾಣಿಗೆ ಆಹಾರವಾಗಿ ಬಿಡುತ್ತಿದ್ದಿರಿ.. "

"ಹೌದಾ . ಆದರೂ ನನಗ್ಯಾಕೋ ನಂಬಿಕೆ ಬರುತ್ತಿಲ್ಲ.. ನಿನ್ನೇ  ಬರುವಾಗ ಪೆಟ್ರೋಲ್ ಖಾಲಿಯಾಗಿತ್ತು.. ಆ ಪಾದ್ರಿ ಕೊಟ್ಟಿದ್ದು.. ಪುಟ್ಟ ಬಾಟಲಿಯಲ್ಲಿ ಪೆಟ್ರೋಲ್.. ನೋಡೋಣ ಬನ್ನಿ..ಈಗ ಖಾಲಿ ಆಗಿರಬೇಕು.. ಯಾಕೆ ಅಂದರೆ ಸುಮಾರು ಒಂದು ಘಂಟೆ ಪ್ರಯಾಣ ಮಾಡಿದ್ವಿ"

"ಯೋಚನೆ ಮಾಡಬೇಡಿ ಸ್ವಾಮಿ.. ಮಧ್ಯಾನ್ಹದ ಹೊತ್ತಿಗೆ ಮತ್ತೆ ನಿಮ್ಮನ್ನು ಅಲ್ಲಿಗೆ ಕರೆದೊಯ್ಯುತ್ತೇನೆ... ನಿಮ್ಮದೇನಿದೆಯೋ ಅದನ್ನೆಲ್ಲ ತೆಗೆದುಕೊಳ್ಳಿ.. ನಿಮಗೆ ಅಚ್ಚರಿ ಕಾದಿರುತ್ತದೆ.. ನೀವೇ ನಂಬುತ್ತೀರಿ"

"ಸರಿ ನೆಡೆಯಪ್ಪ "  

ಮಧ್ಯಾನ್ಹದ ನಂತರ ಮತ್ತೆ ಅಲ್ಲಿಗೆ ಬಂದಾಗ ಆತ ಹೇಳಿದಂತೆ ಅಚ್ಚರಿ ಕಾದಿತ್ತು!

ಜಾಕೆಟ್, ಹೆಲ್ಮೆಟ್ ಎಲ್ಲವೂ ಸ್ವಚ್ಛವಾಗಿದ್ದವು.. ಬೈಕ್ ನಿನ್ನೆ ಧೂಳುಮಯವಾಗಿತ್ತು.. ಆದರೆ ಇಂದು ಥಳ ಥಳ ಹೊಳೆಯುತ್ತಿತ್ತು.. ಯಾಕೋ ಅನುಮಾನ ಬಂದು ಪೆಟ್ರೋಲ್ ಟ್ಯಾಂಕ್ ಮುಚ್ಚಳ ತೆಗೆದರೆ.. ತುತ್ತ ತುದಿಯ ತನಕ ಪೆಟ್ರೋಲ್ ನಾನಿದ್ದೀನಿ ಎಂದು ನಗುತ್ತಿತ್ತು.. 


ತನ್ನ ಜಾಕೆಟ್ ಜೇಬಿನಿಂದ ಒಂದು ಪುಟ್ಟ ಕಾರ್ಡ್ ಕಾಣುತ್ತಿತ್ತು.. ತೆಗೆದ.. ಓದಿದ.. ಕೈ ಮೇಲೆತ್ತಿ ಒಂದು ಸಲ್ಯೂಟ್ ಹೊಡೆದ.. ಅಲ್ಲಿಂದ ಹೊರಟ 

ಆ ಬರಹದ ಸಾಲು ಅವನ ಮನದಲ್ಲಿ ಗುಯ್ ಗುಡಲು ಶುರುಮಾಡಿತು.. 

"ಪ್ರಪಂಚವು  ಆ ಸೂತ್ರಧಾರ ರಚಿಸಿದ ಒಂದು ರಂಗ ಮಂಟಪ.. ಇಲ್ಲಿ ಪ್ರತಿನಿತ್ಯವೂ ಸುಂದರ ಅನುಭವ ಸಿಕ್ಕೇ ಸಿಗುತ್ತದೆ"

Sunday, November 17, 2019

Hurdled ಪ್ರೀತಿ....!

ಸರಿತಾ.. ಅಥ್ಲೆಟಿಕ್ಸ್ ಮೈದಾನದಲ್ಲಿ ಅಭ್ಯಾಸ ಮಾಡುತ್ತಿದ್ದಳು.. ಅವಳ ತರಬೇತುದಾರ ಒಂದು ವಿಚಿತ್ರ ಫೀಲ್ಡ್ ಸೆಟ್ ಮಾಡಿದ್ದ.. ಅವಳಿಗಿಂತ ಒಂದು ಹನ್ನೊಂದು ಅಡಿ ಮುಂದೆ ಇದ್ದು.. ಒಂದೊಂದೇ ಹರ್ಡಲ್ಸ್ ಸಿದ್ಧ ಮಾಡುತ್ತಿದ್ದ.. ಕೆಲವೊಮ್ಮೆ ಚಿಕ್ಕದು.. ಕೆಲವೊಮ್ಮೆ ದೊಡ್ಡದು.. ಕೆಲವೊಮ್ಮೆ ಹಾವಿನ ರೀತಿಯ ಹಗ್ಗ.. ಕೋಲು.. ಕೆಲವೊಮ್ಮೆ ಒಂದು ದೊಡ್ಡ ತೊಟ್ಟಿಯಾಕಾರದ ಆಯತದಲ್ಲಿ ತುಂಬಿದ ನೀರಿಗೆ ಧುಮುಕಿ ಹೋಗಬೇಕಿತ್ತು..

ಚಿತ್ರ ಕೃಪೆ : ಗೂಗಲೇಶ್ವರ 

ಛಲ ಬಿಡದ ಸರಿತಾ.. ತರಬೇತುದಾರ ಒಡ್ಡುವ ಸವಾಲುಗಳನ್ನು ಯಶಸ್ವಿಯಾಗಿ ದಾಟುತ್ತಾ  ಹೋಗುತ್ತಿದ್ದಳು.. ಸುಮಾರು ಒಂದೂವರೆ ಘಂಟೆ ಪ್ರತಿದಿನವೂ ಈ ಪರೀಕ್ಷೆ ನೆಡೆಯುತ್ತಲೇ ಇತ್ತು..
ಅಂತಾರಾಷ್ಟ್ರೀಯ, ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಹೆಸರಾಗಿದ್ದಳು.. ೨೦ ಸಾವಿರಕ್ಕೂ   ಹೆಚ್ಚು ಅಂತರರಾಷ್ಟ್ರೀಯ ಆಟಗಾರರು ಅವಳ ಅಭ್ಯಾಸದ ವಿಚಿತ್ರ ರೀತಿಗೆ ಮರುಳಾಗಿದ್ದರು.. ಒಂದು ರೀತಿಯಲ್ಲಿ ಮಾದರಿ ವ್ಯಕ್ತಿಯಾಗಿದ್ದಳು..


ಚಿತ್ರ ಕೃಪೆ : ಗೂಗಲೇಶ್ವರ 

ಚಿತ್ರ ಕೃಪೆ : ಗೂಗಲೇಶ್ವರ 

ಕೋಚ್ ಈ ರೀತಿಯ ಅಭ್ಯಾಸದ ವಿಧಾನದ ಗುಟ್ಟನ್ನು ಯಾರಿಗೂ ಹೇಳಿರಲಿಲ್ಲ.. !
ಪೀ ಪೀ.. ಅಂತ ತರುಬೇತುದಾರ ಊದಿದ ಶೀಟಿಯ ಸದ್ದಿಗೆ ಏನೋ ಯೋಚನೆ ಮಾಡುತ್ತಲೇ ಓಡುತ್ತಿದ್ದ ಸರಿತಾಳ ಗಮನ ಅತ್ತ ಕಡೆ ತಿರುಗಿತು.. ಇಂದಿನ ಅಭ್ಯಾಸ ಮುಗಿಯಿತು ಎನ್ನುವ ಸೂಚನೆಯದು..


ಹಾಗೆ ಓಡುತ್ತಲೇ.. ಓಡುತ್ತಲೇ ತನ್ನ ಬ್ಯಾಗ್ ಇಟ್ಟಿದ್ದ ಜಾಗಕ್ಕೆ ಬಂದು ಕುಳಿತಳು.. ತರಬೇತುದಾರ ಹತ್ತು ನಿಮಿಷ ಬರುವೆ ಎಂದು ಸನ್ನೆ ಮಾಡಿ ಹೋಗಿದ್ದು ಕಂಡು.. ತನಗೆ ಹತ್ತು ನಿಮಿಷ ಸುಧಾರಿಸಿಕೊಳ್ಳಲು ಸಮಯವಿದೆ ಎಂದು ಗೊತ್ತಾಯಿತು..

ರೆಸ್ಟ್ ರೂಮಿಗೆ ಹೋಗಿ ಫ್ರೆಶ್ ಆಗಲು ಹೋದಳು.. ಮೊಗ ತೊಳೆದುಕೊಂಡು.. ಪೆರ್ಸನಲ್ಲಿದ್ದ ಪುಟ್ಟ ಕಪ್ಪು ಬಿಂದಿಯನ್ನು ಹಣೆಗೆ ಇಟ್ಟುಕೊಂಡಳು.. ತನ್ನನ್ನೊಮ್ಮೆ ನೋಡಿಕೊಂಡಳು.. ನೀಳವಾಗಿಲ್ಲದ್ದಿದ್ದರೂ ಲಕ್ಷಣವಾಗಿದ್ದ ತುಸು ಕಂದು ಬಣ್ಣದ ತಲೆಗೂದಲನ್ನೂಮ್ಮೆ ಬಿಚ್ಚಿಕೊಂಡಳು.... ಟವಲಿನಿಂದ ಚೆನ್ನಾಗಿ ತಲೆಗೂದಲನ್ನೊಮ್ಮೆ ಒರೆಸಿಕೊಂಡು .ಅಲ್ಲಿಯೇ ಇದ್ದ ಫ್ಯಾನಿಗೆ ತಲೆಗೂದಲನ್ನು ಒಡ್ಡಿ ಒಣಗಿಸಿಕೊಂಡು.. ಬಾಚಣಿಗೆಯಿಂದ ನೀಟಾಗಿ ತಲೆಗೂದಲನ್ನು ಬಾಚಿ ಬಲಬದಿಗೆ ತುಸು ಬೈತಲೆ ತೆಗೆದುಕೊಂಡು..  ಕ್ಲಿಪ್ ಹಾಕಿ ಮತ್ತೊಮ್ಮೆ ತಲೆಗೂದಲನ್ನು ಸರಿಮಾಡಿಕೊಂಡಳು.

ಹಣೆಯಲ್ಲಿದ್ದ ಬಿಂದಿ ಕಿಸಕ್ ಅಂತ ನಕ್ಕ ಅನುಭವ..

ತನ್ನನ್ನು ಮತ್ತೊಮ್ಮೆ ನೋಡಿಕೊಂಡಳು.. ಶ್ವೇತ ವರ್ಣವಲ್ಲದಿದ್ದರೂ ಶಾಮಲಾ ವರ್ಣವಲ್ಲ.. ಕಾಡಿಗೆ ಹಚ್ಚಿದ್ದ ದಟ್ಟವಾದ ಆಳವಾದ ಕಣ್ಣುಗಳು ಅವಳ ಸೊಬಗಿಗೆ ಕಾಂತಿ ನೀಡಿದ್ದವು.. ಪುಟ್ಟದಾಗಿದ್ದರೂ ಸಂಪಿಗೆ ಮೂಗು.. ಅದಕ್ಕೆ ತಿಲಕವಿಟ್ಟಂತೆ ಹೊಳೆಯುವ ಮೂಗುತಿ.. ನಕ್ಕಾಗ. ತುಸು ದೊಡ್ಡದು ಅನಿಸುವ ಮುಂದಿನ ಎರಡು ಹಲ್ಲುಗಳು.. ಅವಳ ನಗುವಿಗೆ ಸಾವಿರ ವ್ಯಾಟ್ ಬೆಳಕು ನೀಡುತ್ತಿತ್ತು.. ತುಸುವೇ ದಪ್ಪ ಎನಿಸಬಹುದಾದ ಶರೀರ ತನ್ನದು ಎನಿಸಿದರೂ.. ಅವಳ ತರುಬೇತುದಾರ ಯಾವಾಗಲೂ ಹೇಳುತ್ತಿದ್ದ .."ಮನೆಗೆ ಮನಕ್ಕೆ ಆಧಾರ ನೀಡುವುದು ದಪ್ಪವಾದ ಕಂಬಗಳು .. ಅದಕ್ಕೆ ತಲೆ ಕೆಡಿಸಿಕೊಳ್ಳಬೇಡ.. ನಿನ್ನ ಅಭ್ಯಾಸ ನೀನು ಮಾಡು"

ಆ ಮಾತುಗಳನ್ನೇ ಮತ್ತೊಮ್ಮೆ ಹೇಳಿಕೊಂಡು ತುಸು ನಕ್ಕಳು.. ಕನ್ನಡಿಯೊಳಗಿನ ಅವಳ ಪ್ರತಿಬಿಂಬ "ಸರಿತಾ ಸಲಾಂ ಕಣೆ ನಿನಗೆ.. ನಿನ್ನ ಮನೋಧೈರ್ಯವೇ ನಿನ್ನ ಕಾಪಾಡೋದು.. ನಿನಗೆ ಸಿಕ್ಕಿರುವ ಹೊಸ ಕೋಚ್ ನಿನ್ನ ಬದುಕನ್ನು ಬದಲಿಸುತ್ತಾನೆ.. ಹಸನಾಗಿಸುತ್ತಾನೆ.. ನೀ ತೆಗೆದುಕೊಂಡಿರುವ ನಿರ್ಧಾರ ಸರಿ ಇದೆ ಕಣೆ" ಎಂದ ಅನುಭವ..

ಇಷ್ಟೆಲ್ಲಾ ಸ್ವಗತ ಮಾತುಗಳು ಮುಗಿಯುವ ಹೊತ್ತಿಗೆ ಕೋಚ್ ಬಂದು.. "ಸರಿತಾ.. ಆಯ್ತಾ ನಿನ್ನ ಮಾಮೂಲಿ ಮಾತುಕತೆಗಳು .. ಹೋಗೋಣ್ವಾ.. "

"ಹಾ" ಎನ್ನುವ ಸೂಚನೆಯನ್ನು ತನ್ನ ಅದ್ಭುತ ಕಣ್ಣುಗಳಿಂದ ತಲುಪಿಸಿದಳು..

ಇಬ್ಬರೂ ನೆಡೆಯುತ್ತಾ ಸ್ಟೇಡಿಯಂ ಹತ್ತಿರದಲ್ಲಿದ್ದ ಹೋಟೆಲಿಗೆ ಹೋದಳು.. ನಿನ್ನೆ ಕೋಚ್ ಕಳಿಸಿದ್ದ ಸಂದೇಶ ಅವಳ ಮನದಲ್ಲಿ ಕೊರೆಯುತ್ತಲೇ ಇತ್ತು.. ಆದರೂ ಅದನ್ನು ತೋರಿಸಿಕೊಳ್ಳದೆ ಹೆಜ್ಜೆ ಹಾಕುತ್ತಿದ್ದಳು..

ಹೋಟೆಲಿಗೆ ಬಂದ ಮೇಲೆ.. "ಸರಿತಾ ಇವತ್ತು ಸ್ವೀಟ್ ತಿನ್ನೋಣ.. " ಎಂದು ಹಳದಿ ಬಣ್ಣದ ಬಾಸುಂದಿಗೆ ಆರ್ಡರ್ ಮಾಡಿದ..

ಸ್ವೀಟ್ ಬರುವ ತನಕ.. ಸರಿತಾ ಹಾಗೆ ತನ್ನ ತರಬೇತುದಾರನನ್ನ ನೋಡಿದಳು.... ರೇಷ್ಮೆಯಂತಹ ತಲೆಗೂದಲು.. ನೀಟಾಗಿ ಎಡಬದಿಗೆ ಕ್ರಾಪ್.. ಕುರುಚಲು ಫ್ರೆಂಚ್ ಗಡ್ಡ.. ಅದಕ್ಕೆ ಒಪ್ಪುವ ಕನ್ನಡಕ.. .. ಅವರ ಅಪರಿಮಿತ ಕನ್ನಡಾಭಿಮಾನಕ್ಕೆ ಸೋತಿದ್ದಳು.. ಆದರೂ ಮನದಲ್ಲಿ ಏನೋ ದುಗುಡ.. ಅದನ್ನೆಲ್ಲ ಪರಿಹರಿಸಿಕೊಳ್ಳೋಕೆ ಇಂದು ಮಾತಾಡಬೇಕು ಎಂದು ನಿರ್ಧರಿಸಿಕೊಂಡೆ ಬಂದಿದ್ದಳು..

"ನೀವು ಕಳಿಸಿದ ಸಂದೇಶ ನೋಡಿದೆ.. ಅದರ ಬಗ್ಗೆ ಮಾತಾಡಬೇಕಿತ್ತು... "

"ಓಕೇ... ಕೇಳಿ"

ಅಷ್ಟರಲ್ಲಿ ಬಾಸುಂದಿ ಬಂತು..

ಇಬ್ಬರೂ ಒಂದೊಂದು ಕಪ್ ತೆಗೆದುಕೊಂಡು.. ಅದನ್ನು ಮಿಕ್ಸ್ ಮಾಡುತ್ತಿದ್ದರು.. ಕೋಚ್ ಮೆಲ್ಲಗೆ ಒಂದು ಚಮಚದಲ್ಲಿ ಬಾಸುಂದಿ ತೆಗೆದುಕೊಂಡು "ಇದು ನಮ್ಮಿಬ್ಬರ ಗೆಳೆತನಕ್ಕೆ"  ಎನ್ನುತ್ತಾ  ಅವಳ ಬಾಯಿಗೆ ಹಿಡಿದ.. ಅದನ್ನು ನಿರೀಕ್ಷಿಸದೆ ಇದ್ದ ಸರಿತಾ.. ಅರಿವಿಲ್ಲದೆ ಬಾಯಿ ತೆಗೆದಳು..

ನಂತರ ಆಗಲೇ ಒಂದೆರಡು ಚಮಚ ತಿಂದಿದ್ದರೂ  ಅದನ್ನು  ತೋರಗೊಡದೆ  ಒಂದು ಚಮಚ.. ಅವನಿಗೆ ತಿನ್ನಿಸಿದಳು ..ಬಾಸುಂದಿ ಬಾಯಲ್ಲಿಯೇ  ಇಟ್ಟುಕೊಂಡು  ಥ್ಯಾಂಕ್ಸ್ ಹೇಳಿದ್ದು ಅವಳಿಗೆ ಕೇಳಿಸಿತು..

ಚಿತ್ರ ಕೃಪೆ : ಗೂಗಲೇಶ್ವರ 
"Thank you for accepting me". ಅರಿವಿಲ್ಲದೆ ಅವಳಿಂದ ಬಂದ ಮಾತು ಇವನಿಗೆ ಸಂತಸ ತಂದು... ಅವಳ ತಲೆಯನ್ನೊಮ್ಮೆ ತನ್ನ ಬಲಗೈಯಿಂದ ಒತ್ತಿ..  ಥ್ಯಾಂಕ್ ಯು ಎಂದ..

ಅವಳು ಹಲ್ಲು ಬಿಟ್ಟಳು.. ಮುದ್ದು ಕಣೋ ನೀನು ಎನ್ನುತ್ತಾ ಅವಳ ಗಲ್ಲವನ್ನೊಮ್ಮೆ ಸವರಿದ.. ನಾಚಿ ನೀರಾದಳು..

ತಾವಿಬ್ಬರೇ ಈ ಜಗತ್ತಿನಲ್ಲಿರುವುದು ಎನ್ನುವ ಭಾವ ಇಬ್ಬರದ್ದು... ಆದರೆ ಎಲ್ಲೇ ಮೀರಿರಲಿಲ್ಲ .. ತುಸು ದೂರವೇ ನಿಂತು ಮಾತಾಡುತ್ತಿದ್ದರು .. .

ಅವಳ ಮನದಲ್ಲಿದ್ದ ದುಃಖ,ಸಂಕಟ , ಸಂತೋಷದ ಎಲ್ಲಾ ವಿಚಾರಗಳನ್ನುಹೇಳಿಕೊಂಡಳು .. ಇವನು ತನ್ನ ಭಾವ ಲಹರಿಯನ್ನು ತೋಡಿಕೊಂಡ.... ಇಬ್ಬರ ಮನಸ್ಸು ಹಗುರಾಗಿತ್ತು..
ನಾನು ಇನ್ನೂ ಸ್ವಲ್ಪ ಹೇಳಬೇಕು ಎಂದಳು..

ಸರಿ ಮುಂದುವರೆಸು ಎಂದ ಇವ..

ಮಾತಾಡುತ್ತಾ ಮಾತಾಡುತ್ತ.. ಅವಳ ಕಣ್ಣಲ್ಲಿ ಮುತ್ತಿನ ಹನಿಗಳು  ಉರುಳಿದವು.. ತಕ್ಷಣ ತನ್ನ ಕರವಸ್ತ್ರ ಕೊಟ್ಟ.. ಅವಳು ಕರವಸ್ತ್ರದಿಂದ ಕಣ್ಣುಗಳನ್ನುಒತ್ತಿಕೊಂಡಳು .. ಇಬ್ಬರ ಮಧ್ಯೆ ಇಪ್ಪತ್ತೈದು ಸೆಕೆಂಡುಗಳು ನೀರವ ಮೌನ..

ಆ ಕ್ಷಣವನ್ನು ತುಸು ತಿಳಿಗೊಳಿಸಲು .. "ಸರಿತಾ .. ಸರಿಯಾಗಿ ಕಣ್ಣುಗಳನ್ನು ಒರೆಸಿಕೋ.. ಕಣ್ಣಿಗೆ ಹಚ್ಚಿರುವ ಕಾಡಿಗೆ ಅತ್ತಿತ್ತ ಹೋಗಿ ಡ್ರಾಕುಲ ತರಹ ಆಗಿ ಬಿಟ್ಟೀಯೇ"

"ಹೋಯ್ತಾ.. ಸರಿಯಾಗಿದೆಯಾ"

"ಇಲ್ಲ ಕಣೋ ಆರಾಮಾಗಿದೆ.. ನಿನ್ನ ಮೊಗದಲ್ಲಿ ನಗು ತರಿಸಲು ಹೇಳಿದೆ ಅಷ್ಟೇ.. ಸರಿಯಾಗಿದೆ"

"ತಗೊಳ್ಳಿ" ಎಂದು ಕರವಸ್ತ್ರ ಕೊಟ್ಟಳು.

"ಇದನ್ನು ಆಸ್ತಿಯಾಗಿ ಕಾಪಾಡಿಕೊಳ್ಳುತ್ತೇನೆ..ಇದನ್ನು ವಾಷ್ ಮಾಡೋಲ್ಲ.. ಜೀವನದ ಆಸ್ತಿಯಾಗಿ ಕಾಪಾಡಿಕೊಳ್ಳುತ್ತೇನೆ..  ಮುತ್ತಿನ ಹನಿಗಳು ಇದರಲ್ಲಿವೆ.. ಇನ್ನೆಂದು ಮತ್ತೆ ನಿನ್ನ ಕಣ್ಣಿನಿಂದ ಮುತ್ತಿನ ಹನಿಗಳು ಜಾರಿ ಬೀಳದ ಹಾಗೆ ನೋಡಿಕೊಳ್ಳುತ್ತೇನೆ" ಎಂದು ಅವಳ ಕೈಯನ್ನೊಮ್ಮೆ ಹಿಡಿದು ಒತ್ತಿದ..
ಅವಳು ಕೂಡ ಮೆಲ್ಲಗೆ ಕೈಯನ್ನು ಒತ್ತಿಕೊಂಡಳು..

"ಸರ್.. ಹೆಚ್ಹು ಹೊತ್ತು ಕೂರುವ ಹಾಗಿಲ್ಲ ಇಲ್ಲಿ.. ಜನ ಕಾಯ್ಥ ಇದ್ದಾರೆ.. " ಹೋಟೆಲಿನವ ತುಸು ಗಟ್ಟಿ ದನಿಯಲ್ಲಿ ಹೇಳಿದ್ದು ಕೇಳಿಸಿತು..

"ಹಾ ಹೊರಡ್ತೀವಿ.. ಬಿಲ್ ಕೊಡಿ.. "

ಬಿಲ್ ಪಾವತಿ ಮಾಡಿ.. ಹೊರಬಂದು.. ಇಬ್ಬರೂ ಒಮ್ಮೆ ಮುಗುಳು ನಕ್ಕರು..

"ಸರಿ ಮತ್ತೆ ಸಿಗೋಣ" ಅಂತ ಇಬ್ಬರೂ ತಮ್ಮ ತಮ್ಮ ಹಾದಿ ಹಿಡಿದರು ..

ಇಬ್ಬರ ಮನದಲ್ಲಿ ಜಗತ್ತು ಹೊಸದಾಗಿದೆ ಎನ್ನುವ ಅನುಭವ.. ಯಾವುದೋ ಒಂದು ದೊಡ್ಡ ಭಾರ
ಮನದಿಂದ ಜಾರಿ ಹೋದ ಅನುಭವ..

ನೆಡೆಯುತ್ತಾ ಒಮ್ಮೆ ಅವಳು ಇವನತ್ತ ತಿರುಗಿ ನೋಡಿದಳು.. ಅವನು ತಿರುಗಿದ ..

ಎಳೆ ಬಿಸಿಲು.. ಅವಳ ಮೊಗದ ಮೇಲಿತ್ತು.. ಅವಳ ಪುಟ್ಟ ನಾಸಿಕದಲ್ಲಿದ್ದ ಮೂಗುತಿಯ ಮೇಲೆ ಬಿಸಿಲು ಬಿದ್ದು ಫಳ್ ಅಂತ ಹೊಳೆಯಿತು . ಅದರ ಜೊತೆಯಲ್ಲಿ ಒಂದು ಹಾರ್ಟ್ ಸ್ಟಾಪಿಂಗ್ ಸ್ಮೈಲ್..

ಅದನ್ನು ಕಂಡ ಕೋಚ್ ಗಾಳಿಯಲ್ಲಿಯೇ ಒಂದು ಮುತ್ತನ್ನು ತೇಲಿಬಿಟ್ಟು ಕೈಯಾಡಿಸಿ ವಿಕ್ಟರಿ ಚಿನ್ಹೆ ತೋರಿಸಿದ.. !!!!

Thursday, November 7, 2019

ಮಿಂಚಿನ ಪ್ರೀತಿ ...!

ಬಣ್ಣ ಬಣ್ಣದ ಕನಸುಗಳು.. ತಾನು ಎಲ್ಲರಂತೆ ಇರಬೇಕು.. ಓಡಾಡಬೇಕು ಎನ್ನುವ ಹಂಬಲ.. ತಾನು ಸುಂದರನಲ್ಲದಿದ್ದರೂ, ಸುಂದರಿಯೇ ತನಗೆ ಸಿಗುತ್ತಾಳೆ ಎನ್ನುವ  ನಂಬಿಕೆ.. ಪ್ರತಿದಿನ ಕನ್ನಡಿಯಲ್ಲಿ ತನ್ನನ್ನೇ ನೋಡಿಕೊಂಡಾಗ ಅನಿಸುತ್ತಿದ್ದ ಮಾತುಗಳು..
ಇಪ್ಪತೆಂಟು ವರ್ಷ. ಮದುವೆ ಆಗುವ ವಯಸ್ಸು ಅಂತಲೂ ಅಲ್ಲ.. ಲೈಫಲ್ಲಿ ಸೆಟಲ್ ಆಗಿರಬೇಕು ಎನ್ನುವ ತುರ್ತು ಪರಿಸ್ಥಿತಿಯೂ ಅಲ್ಲದ ನಟ್ಟ ನಡುವಿನ ಕಾಲಘಟ್ಟ..
ವಿಶ್ವಾಸ್ ಮನದಲ್ಲಿ ದಿನಂಪ್ರತಿ ಹಾದು ಹೋಗುತ್ತಿದ್ದ ಮಾತುಗಳಿಗೆ ಅಷ್ಟೊಂದು ತೂಕ ಕೊಡುತ್ತಿಲ್ಲದ ಕಾರಣ.. ಆ ಭಾವಗಳು ಬರುತ್ತಿದ್ದವು, ಒಂದಷ್ಟು ಗಲಿಬಿಲಿ ಮಾಡಿ.. ಹೋಗುತ್ತಿದ್ದವು..

ತನ್ನ ಆಫೀಸಿನ ಕ್ಯಾಬ್ ಬೆಳಿಗ್ಗೆ ೫..೩೦ಕ್ಕೆ ಬರುತ್ತಿದ್ದರಿಂದ.. ಬೆಳಿಗ್ಗೆ ತುಸು ಬೇಗನೆ ತನ್ನೆಲ್ಲ ಕೆಲಸ ಮುಗಿಸಿ ತರಾತುರಿಯಲ್ಲಿ ಹೊರಡುತ್ತಿದ್ದ... ತನ್ನ ಸ್ಟಾಪಿನ ಬಳಿ ನಿತ್ಯವೂ ಒಂದು ಹುಡುಗಿ ತನ್ನನ್ನೇ ಗಮನಿಸುತ್ತಿದ್ದನ್ನು ಕಂಡು ಕಾಣದಂತೆ ಇವನು ಗಮನಿಸ ತೊಡಗಿದ.. ವಿಶ್ವಾಸ್ ಇವತ್ತು ಹಾಕಿದ್ದ ಬಟ್ಟೆಯ ಬಣ್ಣವನ್ನು ಅವಳು ಮಾರನೇ ದಿನ ಮ್ಯಾಚ್ ಮಾಡುತ್ತಿದ್ದಳು.. ಮೊದಲಿಗೆ ಇದು ಕಾಕತಾಳೀಯ ಅನಿಸಿದರೂ.. ಬರು ಬರುತ್ತಾ ಇದು ನಿಜವಾಗಿಯೂ ನೆಡೆಯತೊಡಗಿತು...
ಒಂದಷ್ಟು ದಿನ.. ತನ್ನ ಅಪ್ಪ ಅಮ್ಮನನ್ನು ನೋಡಲು ಚಿಕ್ಕಮಗಳೂರಿಗೆ ಹೊರಟಿದ್ದ.. ಅವನಿಗೆ ಗೊತ್ತಿತ್ತು ಇನ್ನು ಒಂದು ವಾರ ಅವಳನ್ನು ನೋಡಲು ಆಗದು ಎಂದು.. ಅದಕ್ಕೆ ಅವಳನ್ನು ಸದಾ ಮನತುಂಬುವಷ್ಟು ನೋಡೇ ಬಿಡುವ ಎಂದು.. ಮೊಬೈಲ್ ತೆಗೆದು ಏನೋ ಪರೀಕ್ಷಿಸುವಂತೆ ನಟಿಸುತ್ತಾ.. ಅವಳು ನಿಂತಿದ್ದ ತಾಣವನ್ನು ಸೆರೆಹಿಡಿದೆ ಬಿಟ್ಟಾ.. ಹೊಚ್ಚ ಹೊಸದಾದ ಮೊಬೈಲ್.. ೨೪ಎಂಪಿ ಕ್ಯಾಮೆರಾ.. ಒಳ್ಳೆಯ ಜೂಮ್ ಇದ್ದ ಕ್ಯಾಮೆರಾ... ಮೊದಲೇ ಸುಂದರಿಯಾಗಿದ್ದ ಅವಳನ್ನು ಯಥಾವತ್ತಾಗಿ ಚಿತ್ರಿಸಿತ್ತು..

ಊರಿಗೆ ಹೋಗುವ ಬಸ್ಸಿನಲ್ಲಿ, ಅವಳ ಚಿತ್ರವನ್ನು ಒಂದಷ್ಟು ಕ್ರಾಪ್ ಮಾಡಿ.. ಫ್ರೇಮಿನಲ್ಲಿದ್ದ ಬೇಡದ ಭಾಗವನ್ನು ತೆಗೆದು ಅವಳು ಸ್ಪಷ್ಟವಾಗಿ ಕಾಣುವಂತೆ ಮಾಡಿಕೊಂಡ.. ಅವಳ ಸೌಂದರ್ಯವನ್ನು ವರ್ಣಿಸಬೇಕು ಎನ್ನುವ ಕಾತುರತೆ ಇದ್ದರೂ.. ಮನಸ್ಸಿಗೆ ಬಂತು.. ಅವಳ ಜೊತೆ ಮಾತಾಡಿ, ಅವಳನ್ನು ಒಪ್ಪಿಸಿದ ಮೇಲೆ.. ಅವಳ ಎದುರಿಗೆ ಅವಳ ಸೌಂದರ್ಯವನ್ನು ಬಣ್ಣಿಸೋಣ ಎಂದು ಮನದಲ್ಲಿಯೇ ಅಂದುಕೊಂಡು.ಅವಳ ಚಿತ್ರ ನೋಡುತ್ತಲೇ ಊರು ಸೇರಿದ್ದ..

ಬೆಟ್ಟ ಗುಡ್ಡಗಳು, ಹಳ್ಳಿಯ ತಿಳಿಯಾದ ಕಲ್ಮಶ ರಹಿತ ವಾತಾವರಣ.. ತಿಳಿ ನೀರು, ಸಿಹಿ ಗಾಳಿ, ಪ್ರಿಯ ತನ್ನ ಪ್ರಿಯತಮೆಯ ಕೆನ್ನೆಗೆ ಮುತ್ತಿಡುವಂತೆ ಕಾಣುತ್ತಿದ್ದ ಮೋಡಗಳು ಗಿರಿಯನ್ನು ಚುಂಬಿಸುವ ದೃಶ್ಯಗಳು.. ಕೆಲಸದ ಜಂಜಾಟವನ್ನು ಮರೆಯುವಂತೆ ಮಾಡಿತ್ತು.. ಹಾಗೆಯೇ ಮೊಬೈಲಿನಲ್ಲಿದ್ದ ದೇವತೆಯೂ ಕೂಡ :-)

ಒಂದು ವಾರ ಕಳೆದದ್ದು ಗೊತ್ತಾಗಲೇ ಇಲ್ಲದಷ್ಟು ಮನಸ್ಸು ಹಗುರಾಗಿತ್ತು.. ಮಾರನೇ ದಿನ ರಾತ್ರಿ ಊರಿಗೆ ಹೊರಡಬೇಕು.. ಸಿದ್ಧತೆ ಮಾಡಿಕೊಳ್ಳುತಿದ್ದ.. ಅವನ ಅಮ್ಮ ಬಟ್ಟೆಬರೆಗಳನ್ನು ಒಪ್ಪವಾಗಿ ಒಗೆದು ಇಸ್ತ್ರಿ ಮಾಡಿ.. ಅವನ ಬ್ಯಾಗಿಗೆ ಇಡುತ್ತಿದ್ದಳು.. ರಾಗಿ ಮುದ್ದೆ, ಸೊಪ್ಪಿನ ಸಾರು, ಕೆಂಪು ಅಕ್ಕಿಯ ಅನ್ನ, ನೆಂಚಿಕೊಳ್ಳೋಕೆ ಈರುಳ್ಳಿ, ಉಪ್ಪಿನಕಾಯಿ. ಹಪ್ಪಳ, ಸಂಡಿಗೆ, ಬಾಳ್ಕ ಮೆಣಸಿನ ಕಾಯಿ.. ಎಲ್ಲವೂ ಅನುದಿನವೂ ಅವನ ಹೊಟ್ಟೆಯ ಸೇರಿ.. ಬದುಕು ಹೀಗೆ ಇದ್ದರೇ ಚೆನ್ನ ಅನ್ನಿಸುವಷ್ಟು ಸೊಗಸು ಕಾಣುತ್ತಿತ್ತು...

ಬೆಳಿಗ್ಗೆ ಎದ್ದು "ಅಮ್ಮ ರತ್ನಗಿರಿ ಬೋರೆಯ ತನಕ ಹೋಗಿ ಬರುತ್ತೇನೆ.. ಬಂದ ಮೇಲೆ ಕಾಫಿ ಕುಡಿಯುತ್ತೇನೆ.. ರಾತ್ರಿ ಬಸ್ಸಿಗೆ ಹೋಗೋದು"  ದಿನ ನಿತ್ಯದ ಮಾತಿನ ಧಾಟಿಯಲ್ಲಿಯೇ ಹೇಳಿ ಹೊರಟ.. ಕಪ್ಪು ಬಣ್ಣದ ಟ್ರ್ಯಾಕ್ ಪ್ಯಾಂಟ್, "ಆಪ್ನ ಟೈಮ್ ಆಯೇಗಾ.. ನಹಿ.. ಜರೂರ್ ಆಯೆಗೆ" ಅಂತ ಪದಗಳಿದ್ದ ಬಿಳಿ ಬಣ್ಣದ ಟೀ ಶರ್ಟ್, ಕಾಲಿಗೆ ಹವಾಯ್ ಚಪ್ಪಲಿ ಮೆಟ್ಟಿಕೊಂಡು.. ಮನೆಯಿಂದ ಸುಮಾರು ಹತ್ತು ಕಿಮಿ ದೂರವಿದ್ದ ರತ್ನಗಿರಿ ಬೋರೆಗೆ ತನ್ನ ಇಷ್ಟವಾದ ರಾಯಲ್ ಎಂಫಿಎಲ್ಡ್ ಬುಲೆಟ್ ತೆಗೆದುಕೊಂಡು ಹೊರಟ..

ಬೆಟ್ಟದ ತುದಿಯಲ್ಲಿ ಕೂತು.. ಬಾನಿನ ರಂಗನ್ನು ನೋಡುತ್ತಾ ಕುಳಿತಿದ್ದ.. ಮೈಮರೆತಿದ್ದ.. ಹಕ್ಕಿಗಳ ಕಲರವ.. ತಣ್ಣನೆ ಗಾಳಿ.. ಅವನ ಜೋಂಪು ಕೂದಲು ಹಾರಾಡುತ್ತಲೇ ಇತ್ತು.. ಚಳಿ ಎನಿಸಿದರೂ, ಬಿಡು ಪರವಾಗಿಲ್ಲ ಎನ್ನುವ ಹಾಗೆ ಹಿತಕರವಾಗಿತ್ತು.. ಆದ್ದರಿಂದ ಸುಮ್ಮನೆ ಅಗಸ ನೋಡುತ್ತಾ ಹಾಗೆ ಕಲ್ಲು ಬೆಂಚಿನ ಮೇಲೆ ಮಲಗಿದ..

ಸುಮಾರು ಹೊತ್ತು ಕಣ್ಣಾಲಿಗಳು ಹಾಗೆ ಮುಚ್ಚಿಕೊಂಡಿದ್ದವು.. ಕಣ್ಣಿನ ಪರದೆಯ ಮೇಲೆ... ಬಿಳಿ ಬಣ್ಣದ ಟೀ ಶರ್ಟ್ ತೊಟ್ಟು.. ಕಪ್ಪನೆಯ ಪ್ಯಾಂಟ್ ತೊಟ್ಟು, ನೀಳಗೂದಲನ್ನು ಗಾಳಿಗೆ ಹರಿಯ ಬಿಟ್ಟು.. ಗಾಳಿಯಿಂದ ಪದೇ ಪದೇ ಮುಖದ ಮೇಲೆ ಕೂದಲುಗಳು ಹರಡಿಕೊಳ್ಳುತ್ತಿದ್ದರೂ ನವಿರಾಗಿ ಕಿವಿಯ ಹಿಂದಕ್ಕೆ ಸಿಕ್ಕಿಸಿಕೊಳ್ಳುತ್ತಲೇ ಇದ್ದ ಹುಡುಗಿ.. ಟೀ ಶರ್ಟ್ ಮೇಲೆ.. "ಅಬೆ.. ಹಮಾರಾ ಟೈಮ್ ಆಗಯಾ ಹೈ" ಎನ್ನುವ ಪದಗಳ ಗುಚ್ಛ.. ಇದೆ ಗುಂಗಿನಲ್ಲಿ ಮಲಗಿದ್ದ.. ಅಕ್ಷರಶಃ ನಿದ್ದೆಯೇ ಮಾಡಿ ಬಿಟ್ಟಿದ್ದ..!

"ರೀ ಮಿಸ್ಟರ್.. ನಿದ್ದೆ ಮಾಡೋಕೆ ಬೇರೆ ಜಾಗವಿಲ್ಲವೇನ್ರಿ.. ಓಡಾಡೋ ತಾಣವಿದು.. ಸುಸ್ತಾಗಿದ್ದರೇ ಮನೆಗೆ ಹೋಗಿ ಮಲಗಿಕೊಳ್ಳಿ.. " ಕೋಲಿನ ತುದಿ ತನ್ನ ಮೈಸೋಕಿದಾಗ ಎಚ್ಚರವಾಯ್ತು..
ಕಣ್ಣು ಬಿಟ್ಟು ನೋಡಿದಾಗ.. ಆ ಗಿರಿ ಉದ್ಯಾನವನದ ಮಾಲಿ ... ಎಬ್ಬಿಸುತ್ತಿದ್ದ.. "ಒಹ್ ಗಿರಿಯಪ್ಪ.. ಈ ಗಾಳಿಗೆ ನಿದ್ದೆಯೇ ಬಂದಿತ್ತು.. "..

"ಒಹೋ ವಿಶ್ವಾಸಪ್ಪ ನೀವಾ.. ಮುಖದ ಮೇಲೆ ಕರ್ಚಿಫ್ ಹಾಕಿಕೊಂಡ್ರಿ ಗೊತ್ತಾಗಲೇ ಇಲ್ಲ.. ಊಒ ಸರಿ ವಿಶ್ರಾಂತಿ ತಗಳ್ಳಿ.."ಎಂದು ಮುಂದೆ ಹೋದ ಗಿರಿಯಪ್ಪ!
ಎಚ್ಚರವಾದ ಮೇಲೆ.. ಮತ್ತೆ ನಿದ್ದೆ ಬರುತ್ತದೆಯೇ.. ಸರಿ ಎದ್ದು ನಿಂತ.. ಜೋರಾಗಿ ಮೈಮುರಿದು.. ಕತ್ತಿನ ನೆಟಿಗೆಯನ್ನು ಮುರಿದು.. ಕೈಕಾಲುಗಳನ್ನು ಜೋರಾಗಿ ಜಾಡಿಸಿ.. ಮೆಲ್ಲನೆ ತನ್ನ ಬೈಕ್ ಕಡೆಗೆ ಹೊರಟ..

ತೆಳ್ಳಗಾಗಬೇಕೇ, ದಪ್ಪಗಾಗಬೇಕೆ.. ಅಜೀರ್ಣವೇ.. ಎಂಬಿಎ ಮಾಡಬೇಕೆ.. ಹೀಗೆ ಹತ್ತಾರು ಜಾಹಿರಾತುಗಳ ಫ್ಲೈಯರ್ ಬೈಕುಗಳಿಗೆ ಸಿಕ್ಕಿಸುವುದು ಮಾಮೂಲು.. ಒಂದು ಪೋಸ್ಟಿಟ್.. ಪೆಟ್ರೋಲ್ ಟ್ಯಾಂಕಿಗೆ ಅಂಟಿಕೊಂಡಿತ್ತು.. ತುದಿಯಲ್ಲಿ ಮಾತ್ರ ಗಮ್ ಇದ್ದದ್ದರಿಂದ.. ಮಿಕ್ಕ ಭಾಗ ಗಾಳಿಗೆ ಹಾರುತ್ತಿತ್ತು.. ಲೇ ನನ್ನ ನೋಡು ಎಂದು ಕೂಗಿ ಕೂಗಿ ಹೇಳುವಂತೆ ಭಾಸವಾಗುತಿತ್ತು..
ಅದರಲ್ಲಿ ಬರೆದ ಸಾಲುಗಳು "ವಿಶ್ವಾಸ್.. ಹಮಾರಾ ಟೈಮ್ ಆಗಾಯ ಹೈ.... ಯಕೀನ್ ನಹಿ ಆತಾ?.. ಟೌನ್ ಕ್ಯಾಂಟೀನ್ ಮೇ ಆಜಾವ್..  ಟೇಬಲ್ ೮.. ಪೇ "

ಏನಪ್ಪಾ ಇದು ವಿಚಿತ್ರ.. ಎಂದುಕೊಂಡು.. ದಿನವೂ ಅಲ್ಲಿಗೆ ಹೋಗಿ ಬರುತ್ತಿದ್ದ.. ಬೆಣ್ಣೆ ಮಸಾಲೆ ದೋಸೆ ಬಹಳ ಪ್ರಸಿದ್ಧಿ... ಅದು ತಿಂದುಕೊಂಡೆ ಮನೆಗೆ ಹೋಗುತ್ತಿದ್ದದ್ದು.. ಹಾಗಾಗಿ ಯಥಾ ಪ್ರಕಾರ ಅಲ್ಲಿಗೆ ಹೊರಟ.. ಮತ್ತೆ ಟೇಬಲ್ ೮ ರಲ್ಲಿಯೇ ದಿನವೂ ಕೂರುತ್ತಿದ್ದದ್ದು..

ನೀಳಗೂದಲಿನ ಬಿಳಿ ಬಣ್ಣದ  ಟೀ ಶರ್ಟ್ ತೊಟ್ಟಿದ್ದ ಲಲನಾಮಣಿ ಕೂತಿದ್ದಳು.. ಅಯ್ಯೋ ಇವತ್ತು ನನ್ನ ಟೇಬಲ್ ನನಗಿಲ್ಲವೇ ಎಂದು.. ಅದರ ಪಕ್ಕದ ಟೇಬಲಿನಲ್ಲಿ ಕೂತು..ಮಾಣಿಗೆ ಮಾಮೂಲಿ ಎನ್ನುವಂತೆ ಸನ್ನೆ ಮಾಡಿ.. ಮೊಬೈಲ್ ತೆಗೆದು ವಾಟ್ಸಾಪ್ ಸಂದೇಶಗಳಿಗೆ ಉತ್ತರ ಕೊಡುತ್ತ ಇದ್ದಾಗ ಟನ್ ಅಂತ ಒಂದು ಸಂದೇಶ "ಅಲ್ರಿ ನಾ ಕೂತಿರುವ ಟೇಬಲಿಗೆ ಬಂದರೆ. ಮಸಾಲೆ ದೋಸೆ ಜೊತೆಯಲ್ಲಿ ನಿಮ್ಮನ್ನು ತಿಂದು ಬಿಡ್ತೀನಾ..?.. ಜೊತೆಯಲ್ಲಿ ನಾಲಿಗೆ ಹೊರಚಾಚಿದ ಎಮೋಜಿ..
ಪಕ್ಕನೆ ತಿರುಗಿ ನೋಡಿದ.. ಅರೆ ನನ್ನ ಕನಸಿನ ಕನ್ಯೆ ಇವಳೇ.. ಕಣ್ಣುಜ್ಜಿಕೊಂಡ.. "ಕನಸೇನು ಇಲ್ಲಾರಿ.. ಇಲ್ಲಿಗೆ ಬನ್ನಿ.. ಆಗಲೇ ನಿಮ್ಮ ಪ್ರೀತಿಯ ಮಾಣಿಗೆ ನಿಮ್ಮ ಆರ್ಡರ್ ಸೇರಿಸಿ ನನ್ನದು ಹೇಳಿದ್ದೀನಿ.. ಬನ್ನಿ ಬನ್ನಿ"  ಆ ಹುಡುಗಿ ಇವನನ್ನು ಪೂರ್ತಿಅರ್ಥ ಮಾಡಿಕೊಂಡಿದ್ದಳು.. ಹುಡುಗನ ಮನೆ, ಮನೆತನ, ಅವನ ಹವ್ಯಾಸಗಳು ಎಲ್ಲವನ್ನು ಅರ್ಥೈಸ್ಕೊಂಡು ಅವನನ್ನು ತನ್ನ ಬಾಳಸಂಗಾತಿಯಾಗಿ ಆಯ್ಕೆ ಮಾಡಿಕೊಂಡಿದ್ದಳು.. ತುಸು ಹೆಚ್ಚೇ ಧೈರ್ಯವಿದ್ದ ಹುಡುಗಿ. ಅನಾಥೆಯಾಗಿ ಪಿಜಿಯಲ್ಲಿದ್ದ ಹುಡುಗಿ.. ತನ್ನವರು ಅಂತ ಯಾರೂ ಇರಲಿಲ್ಲ.. ತನ್ನ ಬದುಕನ್ನು ಕಟ್ಟಿಕೊಂಡಿದ್ದಳು.. ಇವನು ತನ್ನ ಊರಿಗೆ ಬಸ್ ಬುಕ್ ಮಾಡಿದ್ದು ತನ್ನ ಪಿಜಿಯ ಕೆಳಗಿದ್ದ ಆಫೀಸಿನಲ್ಲಿ.. ಹಾಗಾಗಿ ವಿಚಾರ ತಿಳಿದಿತ್ತು.. ತಾನೂ ವಾರದ ಕಡೆಯಲ್ಲಿ ಚಿಕಮಗಳೂರಿಗೆ ಕಾಲಿಟ್ಟಿದ್ದಳು..

ಬೋಲ್ಡ್ ಆಗಿ ಮಾತಾಡಿದ ಆ ಹುಡುಗಿಯ ಧೈರ್ಯಕ್ಕೆ ಮೆಚ್ಚದೆ ಇರಲಾಗಲಿಲ್ಲ.. .. ಅವಳ ಟೇಬಲ್ಲಿಗೆ ಬಂದು ಕೂತಾಗ.. ಕಂಡಿದ್ದು.. ಅವಳ ಟೀ ಶರ್ಟ್ ಮೇಲಿನ ಬರಹ.. "ಅಬೆ.. ಹಮಾರಾ ಟೈಮ್ ಆಗಯಾ ಹೈ" 

ಆ ಬರಹ ಓದಿ.. ನಗು ಬಂತು.. ಅವಳು ತನ್ನ ಮುಂಗುರುಳನ್ನು ಕಿವಿಯ ಹಿಂದಕ್ಕೆ ಸಿಕ್ಕಿಸಿಕೊಂಡು ಕಣ್ಣು ಮಿಟುಕಿಸಿ ತಾನು ನಕ್ಕಳು.. !!!

ಕ್ಯಾಂಟೀನ್ ಗೋಡೆಯ ಮೇಲೆ ತೂಗು ಹಾಕಿದ್ದ ಫೋಟೋದಲ್ಲಿ "ನನ್ನನ್ನು ನೋಡು ಯೋಗ ಬರುತೈತೆ" ಯೋಗರಾಣಿಗಳು ಸಾಲು ನೋಡಿದ.. ಹುಡುಗಿಯ ಮುಖ ನೋಡಿದ.. ಮತ್ತೊಮ್ಮೆ ಕಣ್ಣು ಮಿಟುಕಿಸಿ.. ಓಕೇ ಎಂದು ಹೆಬ್ಬೆರಳನ್ನು ಎತ್ತಿ ತೋರಿಸಿದಳು.. !

Sunday, October 13, 2019

ಪ್ರೀತಿಯ ಸಾಕ್ಷಾತ್ಕಾರ...!

ದಟ್ಟಡವಿ.. ಸೂರ್ಯನೇ ಒಳಗೆ ಬರಲು ಬೆವರು ಸುರಿಸಬೇಕಾದ ಪರಿಸ್ಥಿತಿ.. ಎತ್ತರೆತ್ತರ ಮರಗಳು.. ತಬ್ಬಿ ಹಿಡಿಯಲಾಗದಷ್ಟು ಅಗಾಧವಾದ ಕಾಂಡ.. ಮರದ ಎಲೆಗಳು.. ಹೇ ನಾ ನಿಮ್ಮನ್ನು ಬಿಟ್ಟಿರಲಾರೆ ಕಣೋ ಎನ್ನುತ್ತಾ ಒಂದಕ್ಕೊಂದು ಹೆಣೆದುಕೊಂಡಂತೆ ಎಲೆಗಳ ಅಂಬರವನ್ನೇ ಸೃಷ್ಟಿಸಿದ್ದವು.. ಚೀವ್ ಚೀವ್.. ಜಿಯ್ ಜಿಯ್.. ಕೂ ಕೊ.. ಗ್ರ್ ಗ್ರ್ ಹೀಗೆ ಕೇಳಿರದೆ ಇದ್ದ ಅನೇಕ ಸದ್ದ್ದುಗಳು ಬರುತ್ತಲೇ ಇದ್ದವು.. ಆ ಕಡೆ ನೋಡಿದರೆ.. ಈ ಕಡೆಯಿಂದ ಬಂದಂತೆ.. ಈ ಕಡೆ ನೋಡಿದರೆ ಆ ಕಡೆ ಕೇಳಿದಂತೆ.. ಭ್ರಮೆ ಸೃಷ್ಟಿಸುತ್ತಿತ್ತು..

ಅಭಿಜಿತ್ ಒಬ್ಬನೇ ಹೆಜ್ಜೆ ಹಾಕುತ್ತಿದ್ದ.. ಎಲ್ಲಿಗೆ ಹೋಗಬೇಕು ಗೊತ್ತಿಲ್ಲ.. ದಾರಿ ಯಾವುದು ಗೊತ್ತಿಲ್ಲ.. ಬೆನ್ನಿನ ಮೇಲೆ ಹೊರೆ.. ಕಾಲುಗಳು ಪದ ಹೇಳುತ್ತಿದ್ದವು.. ಆದರೂ ವಿಧಿಯಿಲ್ಲದೇ ನೆಡೆಯುತ್ತಲೇ ಇರಬೇಕಿತ್ತು.. ಬ್ಯಾಕ್ ಪಾಕ್ನಲ್ಲಿದ್ದ ಯಾವುದೇ ಪದಾರ್ಥಗಳು ಖಾಲಿಯಾಗಿರಲಿಲ್ಲ.. ಇದು ಅವನ ಮೊದಲ ಚಾರಣ.. ಅರಿವಿಲ್ಲದೆ ಬೇಕಾದಷ್ಟು ತಿಂಡಿ ತಿನಿಸುಗಳು ಹೊತ್ತು ತಂದಿದ್ದ.. ಸುಮಾರು ಹೊತ್ತು ನೆಡೆದು ನೆಡೆದು ಸುಸ್ತಾಗಿತ್ತು.. ಒಂದು ಮರದ ಕೆಳಗೆ ಕೂತು ಸುತ್ತಲೂ ಮತ್ತೊಮ್ಮೆ ನೋಡಿದ..ಇಂದು ಬೆಳಿಗ್ಗೆಯಿಂದ ನೋಡುತ್ತಿದ್ದ ಅದೇ ಕಾಡು.. ಅದೇ ಮರಗಳು.. ಅದೇ ಪರಿಸರ.. ಇದೇನು ಅದೇ ದೃಶ್ಯಗಳೇ ಪುನರಾವರ್ತನೆ ಆಗುತ್ತಿದಿಯೇನೋ ಅನ್ನುವ ಹಾಗೆ.. ಗುರುತು ಇಟ್ಟುಕೊಳ್ಳಲು ಸಾಧ್ಯವೇ ಇಲ್ಲದಂತಹ ದೃಶ್ಯಗಳು.. ಬ್ಯಾಗಿನಲ್ಲಿದ್ದ ಅವನಿಷ್ಟದ  ಖಾರವಿದ್ದ ಕೋಡುಬಳೆ ತೆಗೆದುಕೊಂಡು ಒಂದೆರಡು ತಿಂದು.. ಹಾಗೆ ಮರಕ್ಕೆ ಒರಗಿ ಕೂತಿದ್ದ..

ಕೂತವನಿಗೆ.. ಹಾಗೆ ನಿದ್ದೆ ಬಂದಿತ್ತು.. ಮತ್ತೆ ಎಚ್ಚರವಾದಾಗ.. ನಿಧಾನಕ್ಕೆ ಕತ್ತಲು ಶುರುವಾಗುವ ಸಂಭ್ರಮದಲ್ಲಿತ್ತು.. ಹತ್ತು ನಿಮಿಷ ಅಂತ ಮಲಗಿದವನಿಗೆ ಅರಿವಿಲ್ಲದೆ ಸುಮಾರು ಘಂಟೆಗಳೇ ನಿದ್ದೆ ಮಾಡಿದ್ದ.. ಕಣ್ಣು ಬಿಟ್ಟು.. ಸುತ್ತಲೂ ನೋಡಲು ಪ್ರಯತ್ನ ಮಾಡಿದ. ಕತ್ತಲು ಆವರಿಸುತ್ತಿತ್ತು.. ಮೊದಲೇ ಸೂರ್ಯ ರಶ್ಮಿ ಒಳಗೆ ಬರಲಾದಷ್ಟು ದಟ್ಟವಾಗಿದ್ದ ಕಾಡು.. ಹಗಲೋ ರಾತ್ರಿಯೋ ಒಂದೇ ರೀತಿಯಲ್ಲಿ ಕಾಣ ಹತ್ತಿತ್ತು..

ಸರಿ.. ಪೂರ್ಣ ಕತ್ತಲಾಗುವ ತನಕ ಒಂದಷ್ಟು ದೂರ ನೆಡೆದು ಆಮೇಲೆ ಒಂದು ಕಡೆ ಕೂರುವ ಎಂದು ಬಿರ ಬಿರನೇ ಹೆಜ್ಜೆ ಹಾಕತೊಡಗಿದ ..ದೂರದಲ್ಲಿ ಒಂದು ದೊಡ್ಡ ಮರ.. ಅದಕ್ಕೆ ಒರಗಿಕೊಂಡಂತೆ ಒಂದು ದೊಡ್ಡ ಹೆಬ್ಬಂಡೆ ತರಹ ಕಾಣುತಿತ್ತು. ಹತ್ತಿರದಲ್ಲಿಯೇ ಒಂದು ನೀರಿನ ಒರತೆ ಹರಿಯುವ ಸದ್ದು.. ಕತ್ತಲಲ್ಲಿ ನೆಡೆದು ದಾರಿ ತಪ್ಪಿಸಿಕೊಳ್ಳುವುದಕ್ಕಿಂತ (ದಾರಿ ತಪ್ಪಿಸಿಕೊಳ್ಳುವುದೇನೋ... ದಾರಿ ತಪ್ಪಿಸಿಕೊಂಡದ್ದಕ್ಕೆ ಹೀಗಾಗಿರುವುದು ಅಲ್ಲವೇ.. ತನಗೆ ತಾನೇ ನಕ್ಕ) ಇಲ್ಲಿಯೇ ಉಳಿಯುವುದು ಉತ್ತಮ ಎಂದು.. ನಿರ್ಧರಿಸಿ.. ತನ್ನ ಬಳಿ ಇದ್ದ ಟೆಂಟ್.. ತೆಗೆದ.. ಜೋಡಿಸಲು ಬರುತ್ತಿರಲಿಲ್ಲ.. ಅದರಲ್ಲಿ ಕೊಟ್ಟಿದ್ದ ವಿವರಗಳ ಮೂಲಕ ಮೆಲ್ಲಗೆ ಒಂದೊಂದಾಗಿ ಜೋಡಿಸ ಹತ್ತಿದ.. ಮೊದಲ ಬಾರಿಗೆ ಮಾಡುತ್ತಿದ್ದರಿಂದ.. ತ್ರಾಸದಾಯಕವಾಯಿತು.. ಸುಮಾರು ಹೊತ್ತುಗಳು ಕಳೆದ ಮೇಲೆ.. ಟೆಂಟ್ ಸಿದ್ಧವಾಯಿತು.. ತನ್ನ ಬ್ಯಾಗ್ ಒಳಗೆ ಹಾಕಿ.. ಹಾಕಿಕೊಂಡಿದ್ದ ಜಾಕೆಟ್, ಹ್ಯಾಂಡ್ ಗ್ಲೋವ್ಸ್.. ಟೋಪಿ, ಶೂಗಳು ಎಲ್ಲವನ್ನು ಕಳಚಿ.. ನಿರಾಳವಾಗಿ ಸುಮ್ಮನೆ ಕೂತ.. ಹೊಟ್ಟೆಗೆ ಸಮಸ್ಯೆ ಇರಲಿಲ್ಲ.. ಬಟ್ಟೆಗಳು ಇದ್ದವು.. ಆದರೆ ಕಾಡಿನಲ್ಲಿ ಒಬ್ಬನೇ ಇರಬೇಕು ಎನ್ನುವ ಭಾವ ಆಗಾಗ ಹೆದರಿಕೆ ತರಿಸುತ್ತಿತ್ತು..

ಚಳಿಗಾಲವಾದ್ದರಿಂದ ಮಳೆಯ ಸಮಸ್ಯೆ ಇರಲಿಲ್ಲ.. ಅಲ್ಲಿಯೇ ಇದ್ದ ಸಣ್ಣ ಪುಟ್ಟ, ಕಟ್ಟಿಗೆ, ಒಣಗಿದ ಎಲೆಗಳು ಇವುಗಳನ್ನು ಒಟ್ಟುಮಾಡಿ.. ಬೆಂಕಿ ಹಚ್ಚಿದ.. ಇತ್ತ ಚಳಿಕಾಯಿಸಿಕೊಳ್ಳಲು ಆಗುತ್ತಿತ್ತು.. ಅತ್ತ ಪ್ರಾಣಿಗಳಿಂದ ರಕ್ಷಣೆಯೂ ಕೂಡ.. ಮೈ ಬೆಚ್ಚಗಾಯಿತು.. ಹಾಗೆ ತರಗೆಲೆಗಳ ಮೇಲೆ ಮೈಯೊಡ್ಡಿ ಮಲಗಿದ.. ಮತ್ತೆ ಗಾಢವಾದ ನಿದ್ದೆ ಆವರಿಸಿತು.. ಬೆಂಕಿ ಉರಿಯುತ್ತಲೇ ಇತ್ತು..



ತಲೆ ಮೇಲೆ ಏನೋ ಆಡಿಸಿದಂತ ಆಯಿತು.. ಭುಜವನ್ನು ಮತ್ತೆ ಯಾರೋ ಮುಟ್ಟಿದಂತೆ.. ರೀ ರೀ ಎಂದು ಕೂಗಿದಂತೆ.. ಚಾರಣಕ್ಕೆ ಬರುವ ಮುನ್ನ ಅನೇಕ ಕಾಡಿನ ಕತೆಗಳ ಬ್ಲಾಗ್ ಓದಿದ್ದರಿಂದ.. ದೆವ್ವ.. ಅತೀಂದ್ರಿಯ ಶಕ್ತಿಗಳ ಕೋಟಲೆಗಳು ಇರಬಹುದು ಎನ್ನುವ ಬರಹಗಳು ದಿಗ್ಗನೆ ನೆನಪಿಗೆ ಬಂದವು.. ರಪ್ ಅಂತ ಎದ್ದು ಕೂತ.. ಎದುರಿಗೆ ಒಂದು ಹುಡುಗಿ.. ಆ ಬೆಂಕಿಯ ಬೆಳಕಿನಲ್ಲಿ ಆಕೆಯ ಮುಖ ಸ್ಪಷ್ಟವಾಗಿ ಕಾಣುತ್ತಿತ್ತು.. ಗಾಬರಿಯಿಂದ ತಲೆಯಿಂದ ಕಾಲಿನ ತನಕ ಸುಯ್ ಎಂದು ಭಯದ ಬೆವರು ಹರಿಯಿತು..

"ಯಾರ್ರೀ ನೀವು.. ಇಲ್ಲಿ ಯಾಕೆ.. " ನಾಲಿಗೆಯ ಪಸೆ  ಆರಿತು.. ಸುಮ್ಮನೆ ಅವಳನ್ನೇ ನೋಡುತ್ತಾ ಮತ್ತೆ ಅದೇ ಪ್ರಶ್ನೆ ಕೇಳಲು ಬಾಯಿ ತೆರೆದ. ಭಯದಿಂದ ಮಾತುಗಳು ಹೊರ ಬರಲಿಲ್ಲ..

"ನಾನು ನಂದಿನಿ.. ಚಾರಣಕ್ಕೆ ಬಂದಿದ್ದೆ.. ನನ್ನ ಸ್ನೇಹಿತರ ಗುಂಪಿನಿಂದ ಬೇರೆಯಾಗಿ ಬಿಟ್ಟೆ.. ದೊಡ್ಡ ಗುಂಪು.. ಅವರ ಜೊತೆ ಇದ್ದೀನಿ.. ಇವರ ಜೊತೆ ಇದ್ದೀನಿ ಅಂತ ನನ್ನ ಬಿಟ್ಟು ಹೋಗಿದ್ದಾರೆ.. ದಾರಿ ಗೊತ್ತಿಲ್ಲ... ನಾ ದೆವ್ವ ಅಲ್ಲ ಕಣ್ರೀ.. ಕಷ್ಟ ಪಟ್ಟು ಸಾಗುತ್ತಿದ್ದ ಹಾದಿಯಲ್ಲಿ ನೆಡೆದು ಬರುತ್ತಿದ್ದೆ.. ಸುಟ್ಟ ವಾಸನೆ.. ಬೆಂಕಿಯ ಬೆಳಕು ನನ್ನನ್ನು ಇಲ್ಲಿ ಕರೆ ತಂದಿತು.. ನೀವೇನು ಒಬ್ಬರೇ ಚಾರಣಕ್ಕೆ ಬಂದಿದ್ದೀರಾ.. ಸಕತ್ ಧೈರ್ಯ ಕಣ್ರೀ ನಿಮಗೆ"

ಪೀಠಿಕೆ ಇಲ್ಲದೆ ಸರಳವಾಗಿ ತನ್ನ ಕತೆ ಹೇಳಿಕೊಂಡ ನಂದಿನಿಯ ಬಗ್ಗೆ ನಂಬಿಕೆ ಮೂಡಿತು.. "ಇಲ್ಲ ನಂದಿನಿ.. ನಂದು ಹೆಚ್ಚು ಕಡಿಮೆ ನಿಮ್ಮದೇ ಕತೆ.. ಒಂದು ಸಣ್ಣ ದಾರಿ.. ಮೊದಲು ನಾ ನುಗ್ಗಿದೆ.. ಮಿಕ್ಕವರು.. ಅಭಿ ನೀ ಆ ಕಡೆ ಹೋಗು.. ಮುಂದೆ ಇದೆ ದಾರಿಯಲ್ಲಿ ನಾವು ಸಿಗುತ್ತೇವೆ ಎಂದರು.. ಕಡೆಗೆ ಅವರು ಸಿಗಲೇ ಇಲ್ಲ.. ನಾ ಬೇರೆ ಹಾದಿ ತುಳಿದಿದ್ದೆ.. ಧೈರ್ಯನೂ ಇಲ್ಲ.. ಏನೂ ಅಲ್ಲ.. ತಪ್ಪಿಸ್ಕೊಂಡು ಅಲೆಯುತಿದ್ದೇನೆ ಅಷ್ಟೇ.. "

ಅಲ್ಲಿಯೇ ಇದ್ದ ಎಲೆಗಳನ್ನು ಸರಿಸಿ.. ಕೂರಲು ಬೆಂಕಿಯ ಹತ್ತಿರವೇ ಜಾಗ ಮಾಡಿಕೊಟ್ಟು.. ಇಲ್ಲಿಯೇ ಕೂತುಕೊಳ್ಳಿ ಎಂದು ಕೈ ತೋರಿಸಿದ..


ನಂದಿನಿ ತನ್ನ ಬ್ಯಾಗು.. ಸರಂಜಾಮು ಎಲ್ಲವನ್ನು ಇಳಿಸಿ.. ಸ್ವಲ್ಪ ಹಗುರಾದಳು.. " ಅಭಿ. ತಿನ್ನೋಕೆ ಏನಾದರೂ ಸಿಗುತ್ತಾ.. ಹೊಟ್ಟೆ ತುಂಬಾ ಹಸಿಯುತ್ತ ಇದೆ.. "

ಕೇಳಿದ ತಕ್ಷಣ.. ಟೆಂಟಿನೊಳಗೆ ನುಗ್ಗಿ.. ಒಂದಷ್ಟು ತಿಂಡಿ ತಿನಿಸುಗಳು. ತಂದು.. "ಇಲ್ಲಿಯೇ ಕೂತಿರಿ.. ಇಲ್ಲಿಯೇ ಪಕ್ಕದಲ್ಲಿ ನೀರಿನ ಒರತೆ ಇದೆ.. ನೀರು ತರುವೆ.. ನಿಮ್ಮ ಹತ್ತಿರ ಬಾಟಲ್ ಇದ್ದರೆ ಕೊಡಿ.. ಅದಕ್ಕೂ ತುಂಬಿಸಿಕೊಂಡು ಬರುವೆ.. "

"ಅಭಿ ನಾ ಒಬ್ಬಳೇ ಇಲ್ಲಿ ಇರೋದಾ.. ನಾನು ಬರುತ್ತೇನೆ ಇರಿ" ಎಂದಿದ್ದೆ.. ಅವನು ಕೊಟ್ಟ ಕೋಡುಬಳೆಯನ್ನು ಮುರಿದು.. ಕರಮ್ ಕುರಂ ಎಂದು ತಿನ್ನುತ್ತಾ.. ಅವನ ಹಿಂದೆಯೇ ಹೊರಟಳು..

ಒಂದು ನೂರು ಮೀಟರ್ ದೂರವಷ್ಟೇ.. .. ನೀರು ಕುಡಿದು.. ಬಾಟಲುಗಳಲ್ಲಿ ತುಂಬಿಸಿಕೊಂಡು.. ಇಬ್ಬರೂ ಮತ್ತೆ ಟೆಂಟಿನತ್ತ ಹೆಜ್ಜೆ ಹಾಕಿದರು.. ದಾರಿಯಲ್ಲಿ ತಮ್ಮ ತಮ್ಮ  ಚಾರಣದಲ್ಲಿ ತಪ್ಪಿಸಿಕೊಂಡ ಕತೆಗಳನ್ನು ಹೇಳಿಕೊಂಡು ದಾರಿ ಸಾಗಿಸಿದರು... ಅವರ ಕತೆ ಇಷ್ಟೇ.. ಸ್ನೇಹಿತರ ಜೊತೆಯಲ್ಲಿ ಬಂದಿದ್ದ ದೊಡ್ಡ ಚಾರಣದ ಗುಂಪಿನಲ್ಲಿ .. ಬರು ಬರುತ್ತಾ ಯಾವುದೋ ಒಂದು ಘಟ್ಟದಲ್ಲಿ ಗುಂಪಿನಿಂದ ಬೇರೆಯಾಗಿದ್ದರು..

ನಂದಿನಿ ತಪಕ್ ಅಂತ ಅಭಿಯ ಮೇಲೆ ಬೀಳುವ ಹಾಗೆ ಆಯ್ತು.. ಒಂದು ಪುಟ್ಟ ಹಳ್ಳದಲ್ಲಿ ಕಾಲಿಟ್ಟರಿಂದ ಕಾಲು ಉಳುಕಿ ಬೀಳುವ ಹಾಗೆ ಆಯ್ತು.. ಕಾಲು ವಿಪರೀತ ನೋಯುತ್ತಿತ್ತು.. ಅಭಿ ಅವಳ ಭುಜ ಹಿಡಿದು.. ಮೆಲ್ಲನೆ ನೆಡೆಸಿಕೊಂಡು ಬಂದ.. "ನಿಧಾನವಾಗಿ ಹೆಜ್ಜೆ ಹಾಕಿ.. ಟೆಂಟಿನಲ್ಲಿ ಮೂವ್ ಇದೆ.. ಸ್ಪ್ರೇ ಮಾಡುವೆ.. "

ಮೆಲ್ಲನೆ ಬಂದು.. ಮೂವ್ ಸ್ಪ್ರೆ ಮಾಡಿ.. ಅವಳಿಗೆ ಸ್ವಲ್ಪ ಸಮಾಧಾನ ಆಗಿದೆ ಎಂದು ಅರಿವಾದ ಮೇಲೆ.. ತಾನು ಆ ಕಡೆ ಕೂತು.. "ಏನ್ರಿ ನಂದಿನಿ.. ನಿಮಗೂ ಧೈರ್ಯ.. ಇಡೀ ದಿನ ಕಾಡಿನಲ್ಲಿ ಒಬ್ಬರೇ ಅಡ್ಡಾಡಿದಿರಲ್ಲ.. ನಿಮ್ಮ ಕತೆ ಏನು.. ಏನು ಮಾಡುತ್ತಿದ್ದೀರಾ.. "

"ಅಭಿ.. ನಾ ಬಹುರಾಷ್ಟ್ರೀಯ ಕಂಪನಿಯಲ್ಲಿ ಅಕೌಂಟ್ಸ್  ಮ್ಯಾನೇಜರ್ ಆಗಿದ್ದೀನಿ.. ಅಪ್ಪ ಅಮ್ಮ ಯಾರೂ ಇಲ್ಲ.. ನಾಲ್ಕು ವರ್ಷಗಳ ಹಿಂದೆ ಆಕ್ಸಿಡೆಂಟಿನಲ್ಲಿ ಹೋಗಿಬಿಟ್ಟರು.. ನಾ ಒಬ್ಬಳೇ ಮಗಳು.. ಮದುವೆಯಾಗಿತ್ತು .. ಎರಡು ವರ್ಷಗಳ ಹಿಂದೆ. ವಿಮಾನ ಅಪಘಾತದಲ್ಲಿ ನನ್ನನ್ನು ಒಂಟಿ ಮಾಡಿಬಿಟ್ಟು ಹೋದರು.. ಈಗ ನಾ ಪಿಜಿಯಲ್ಲಿ ಇದ್ದೀನಿ.. ಕೈತುಂಬಾ ಕೆಲಸ.. ತಲೆ ತುಂಬಾ ಯೋಚನೆಗಳು.. ಅದಕ್ಕೆ ಸ್ವಲ್ಪ ರಿಲಾಕ್ಸ್ ಆಗೋಣ ಅಂತ ನಮ್ಮ ಕಂಪನಿಯ ಚಾರಣದ ಗುಂಪಿನಲ್ಲಿ ನಾ ಸೇರಿಕೊಂಡೆ.. ನಮ್ಮ ಬಂಧುಗಳು ಸಂಪರ್ಕವಿಲ್ಲ.. ಯಾವುದೋ ಕಾರ್ಯಕ್ರಮದಲ್ಲಿ ಹೋದಾಗ ಮಾತಾಡುತ್ತಾರೆ.. ಮಾತಾಡಿಸುತ್ತಾರೆ ಅಷ್ಟೇ.. ಅದು ಬಿಟ್ಟು.. ನಾ ಒಂದು ತರಹ ಒಂಟಿ ಜೀವಿ.. ಸಹೋದ್ಯೋಗಿಗಳು, ಸ್ನೇಹಿತರು ಅಷ್ಟೇ ನನ್ನ ಪ್ರಪಂಚ.. " ಮಂಜಾದ ಕಣ್ಣುಗಳನ್ನು ಒಮ್ಮೆ ಒತ್ತಿಕೊಂಡು.. ಸುಮ್ಮನೆ ಕೂತಳು..

"ಸಾರಿ ನಂದಿನಿ.. ಹಳೆಯದೆಲ್ಲ ನೆನಪು ಮಾಡಿಕೊಳ್ಳುವ ಹಾಗೆ ಮಾಡಿದೆ.. "

"ಇಲ್ಲ ಅಭಿ.. ಮರೆತಿದ್ದರೆ ತಾನೇ ನೆನಪು, ನೋವು ಎಲ್ಲ.. ನನಗೆ ಪ್ರತಿ ಕ್ಷಣವೂ, ಪ್ರತಿ ಘಟನೆಗಳು ಮನದಲ್ಲಿ ಅಚ್ಚು ಹೊತ್ತು ಕೂತಿವೆ.. ಹಾಗಾಗಿ ಅದರ ಬಗ್ಗೆ ಮಾತಾಡಿದಷ್ಟು ಹಗುರಾಗುತ್ತೇನೆ.. "

"ಅದು ಕಣ್ರೀ.. ಸ್ಪೂರ್ತಿಯ ಜೀವನ ಅಂದ್ರೆ.. "

"ನಿಮ್ಮ ಕತೆ ಏನು ಅಭಿ.. "

"ನಿಮ್ಮದಕ್ಕಿಂತ ಭಿನ್ನವೇನಿಲ್ಲ ನಂದು" (ಅರಿವಿಲ್ಲದೆ ನಂದು ಅಂದರೆ ನನ್ನದು, ತನ್ನದು ಎನ್ನುವ ಅರ್ಥದಲ್ಲಿ ಅಭಿ ಹೇಳಿದ)

"ವಾಹ್. ಅಭಿ.. ನನಗೆ ತುಂಬಾ ಹತ್ತಿರದವರು ಮಾತ್ರ ನನ್ನ ಹೆಸರನ್ನು "ನಂದು" ಅಂತ ಕರೆಯೋದು . ತುಂಬಾ ಖುಷಿ ಆಯ್ತು.. ಅಭಿ ಮುಂದೆ ಹೇಳು.."..

ಶುಗರ್ ಕೋಟೆಡ್ ಅನಿಸಿದರೂ.. ನಂದಿನಿಯ ಮಾತುಗಳು.. ಏಕವಚನದ ಸಂಬೋಧನೆ ಅಭಿಯ ಬರಗಾಲದಂತಹ ಬದುಕಲ್ಲಿ ಮಳೆಯ ಸಿಂಚನ ಮೂಡಿದಂತೆ ಆಯ್ತು..

"ಹಾ ನಂದು.. ನನ್ನದು ಕೂಡ ಇದೆ ಕತೆ.. ಆದರೆ ಅಪ್ಪ ಅಮ್ಮ ಅಣ್ಣ ತಮ್ಮ ಎಲ್ಲರೂ ಇದ್ದಾರೆ ತುಂಬು ಕುಟುಂಬ ನನ್ನದು.. ಎಲ್ಲರೂ ಬದುಕಲ್ಲಿ ಸೆಟಲ್ ಆಗಿದ್ದಾರೆ.. ನಾ ಕೂಡ ಬಹುರಾಷ್ಟ್ರೀಯ ಕಂಪನಿಯಲ್ಲಿ ಮ್ಯಾನೇಜರ್ ಆಗಿದ್ದೀನಿ.. ಚಾರಣ ನನಗೆ ಬಲು ಇಷ್ಟ.. ಕಾಲ ಕೂಡಿರಲಿಲ್ಲ.. ನನಗೂ ಮದುವೆಯಾಗಿತ್ತು.. ಆದರೆ ಆ ಹುಡುಗಿ ತಾನು ಮೊದಲು ಪ್ರೀತಿಸುತ್ತಿದ್ದ ಹುಡುಗನ ಜೊತೆಯಲ್ಲಿಯೇ ಹೋಗುತ್ತೇನೆ ಎಂದು ಮದುವೆಯ ಮೊದಲ ರಾತ್ರಿಯೇ ಹೇಳಿದ್ದರಿಂದ.. ಮರು ಮಾತಾಡದೆ ಅವಳ ಮನೆಯವರ ಜೊತೆಯಲ್ಲಿ ಮಾತಾಡಿ ಸುಮಾರು ಒಂದು ವರ್ಷವಾದ ಮೇಲೆ ಡೈವೋರ್ಸ್ ತೆಗೆದುಕೊಂಡು ಅವಳನ್ನು ಕಳಿಸಿದೆ.. ಈಗ ಅವಳ ಪ್ರಿಯಕರನ ಜೊತೆಯಲ್ಲಿ ಮದುವೆಯಾಗಿ.. ಒಂದು ಮಗುವಾಗಿ ಆರಾಮಾಗಿದ್ದಾಳೆ.. ತಿಂಗಳಿಗೊಮ್ಮೆ ಸಿಗುತ್ತೇವೆ.. ಅವಳ ಮನೆಗೆ ನಾ ಹೋಗಿ ಬರುತ್ತೇನೆ.. ಅವಳ ಗಂಡನ ಕಂಪನಿಯ ಚಾರಣದ ಗುಂಪಿಗೆ ನಾ ಸೇರಿಕೊಂಡದ್ದು.. ಅವಳು ಬಂದಿದ್ದಾಳೆ.. ಯಾವುದೇ ಕಲ್ಮಶವಿಲ್ಲದೆ ನಾವು ಸ್ನೇಹಿತರಾಗಿದ್ದೇವೆ.. ಸಿನಿಮಾ ಕತೆ ಇದ್ದ ಹಾಗೆ ಇದೆ ಅಲ್ವ.. Live and let live ಪಾಲಿಸಿ ನನ್ನದು.. ಅವಳು ಖುಷಿಯಾಗಿದ್ದಾಳೆ ."


ನಂದಿನಿ ಅಭಿಯ ಮುಖವನ್ನೊಮ್ಮೆ ನೋಡಿದಳು.. ಆ ಬೆಂಕಿಯ ಬೆಳಕಿನಲ್ಲಿ ಅಭಿ ಯೋಗಿಯ ಹಾಗೆ ಕಂಡ.. ಇಷ್ಟು ನಿರ್ಲಿಪ್ತತೆ.. ಸಾಧ್ಯವೇ.. !

ಹೀಗೆ ಸುಮಾರು ಹೊತ್ತು ಮಾತಾಡುತ್ತಲೇ ಕೂತಿದ್ದರು.. ಬ್ಯಾಗಿನಲ್ಲಿದ್ದ ಒಂದೊಂದೇ ತಿಂಡಿ ತಿನಿಸುಗಳು ಹೊಟ್ಟೆಯೊಳಗೆ ಸೇರುತ್ತಿದ್ದವು.. ಯಥೇಚ್ಛವಾಗಿ ನೀರು ಕುಡಿದರು.. ನಂದಿನಿಯೂ ಕೂಡ ಸಿಹಿ, ಖಾರ ಅಂತ ನಾನಾ ಪದಾರ್ಥಗಳನ್ನು ತಂದಿದ್ದಳು, ಆದರೆ ತಿಂಡಿ ಇದೆ ಅನ್ನೋದೇ ಮರೆತು ಹೋಗಿದ್ದಳು.. .. ಇಬ್ಬರ ಬ್ಯಾಗು ಹಗುರಾಗುತ್ತಿದ್ದವು.. ಹೊಟ್ಟೆ ಭಾರವಾಗುತ್ತಿದ್ದವು..ಮಾತಾಡುತ್ತಲೇ ಇದ್ದರಿಂದ ಅವರಿಬ್ಬರ ಮನಗಳು ಹತ್ತಿರವಾಗಿ ಹಗುರಾಗುತ್ತಿದ್ದವು.. 

"ನಂದು.. ನೀ ಟೆಂಟಿನೊಳಗೆ ಮಲಗು.. ನಾ ಇಲ್ಲಿಯೇ ಬೆಂಕಿಯ ಬಳಿ ಸ್ಲೀಪಿಂಗ್ ಬ್ಯಾಗಿನಲ್ಲಿ ಮಲಗುವೆ.. ಬೆಂಕಿ ಉರಿಯುತ್ತಲೇ ಇದ್ದರೇ ಒಳ್ಳೆಯದು.. ಪ್ರಾಣಿಗಳಿಂದ ಮತ್ತು ಚಳಿಯಿಂದ ರಕ್ಷಣೆ ಸಿಗುತ್ತದೆ.. "

ಆ ಟೆಂಟ್ ಇಬ್ಬರಿಗೆ ಸಾಕಾಗುವಷ್ಟಿತ್ತು.. ಆದರೆ ಇಬ್ಬರ ಬ್ಯಾಗು, ಶೂ, ಜಾಕೆಟ್ ಅದು ಇದು ಅಂತ ತುಂಬಿ ಹೋಗಿತ್ತು.. ಜೊತೆಯಲ್ಲಿ ಹುಡುಗಿ ಇದ್ದಾಗ ಸಭ್ಯತೆ ದೃಷ್ಟಿಯಿಂದ ಹೊರಗೆ ಮಲಗುವುದು ಉತ್ತಮ ಜೊತೆಯಲ್ಲಿ ಬೆಂಕಿಯನ್ನು ಆರದೆ ಇರುವಂತೆ ನೋಡಿಕೊಳ್ಳಬೇಕಿತ್ತು. ಹಾಗಾಗಿ ಚರ್ಚೆಗೆ ಅವಕಾಶವಿಲ್ಲದಂತೆ.. ಅಭಿ ಹೊರಗೆ ಮಲಗಿದ.. ಬೇರೆ ದಾರಿಯಿಲ್ಲದೆ ನಂದಿನಿ ಟೆಂಟ್ ಒಳಗೆ ಮಲಗಿದಳು..

ಬೆಳಿಗ್ಗೆ ಚೀವ್ ಚೀವ್ ಎನ್ನುವ ಸದ್ದು.. ಸೂರ್ಯ ನಾ ಬಂದೆ ಎನ್ನುವ ಸೂಚನೆ.. ಅಭಿ.. ನೀರಿನ ಬಳಿ  ಹೋಗಿ ಮತ್ತಷ್ಟು ನೀರು ತುಂಬಿಕೊಂಡು ಬಂದು.. "ನಂದು.. ನಂದು.. ಏಳಪ್ಪ.. ಬೆಳಗಾಯಿತು.. ಗುಡ್ ಮಾರ್ನಿಂಗ್ ನಂದು"

ಅವನ ಸಿಹಿ ದನಿಯನ್ನ ಕೇಳಿ ಕಣ್ಣು ಬಿಟ್ಟು .. "ಗುಡ್ ಮಾರ್ನಿಂಗ್ ಅಭಿ".. ಎಂದು ಕಣ್ಣುಜ್ಜಿಕೊಂಡು ಟೆಂಟಿನಿಂದ ಹೊರಗೆ ಬಂದಳು..

ಕಾಡಿನ ಸೌಂದರ್ಯ.. ಮನೆಸೆಳೆಯುತ್ತಿತ್ತು.. "ನಂದು ನೀರನ್ನು ಹಿಡಿದು ತಂದಿದ್ದೇನೆ.. ಇಲ್ಲಿಯೇ ಮುಖ ತೊಳೆಯುತ್ತೀಯಾ.. ಅಥವಾ ನೀರಿನತ್ತರ ಹೋಗಬೇಕಾ.. "

"ಅಭಿ.. ನೀರಿನತ್ತರ ಹೋಗೋಣ.. ಒಂದು ವಾಕ್ ಆಗುತ್ತೆ. ಫ್ರೆಶ್ ಆಗುತ್ತೆ.. "

ಇಬ್ಬರೂ ಬರಿಗಾಲಿನಲ್ಲಿ ನೀರಿನತ್ತ ಹೆಜ್ಜೆ ಹಾಕಿದರು.. ನೀರಿನ ಹತ್ತಿರ ಕೂತು ಕೈಕಾಲು ಮುಖ ತೊಳೆದು ಸುಮಾರು ಹೊತ್ತು ಮಾತಾಡುತ್ತಾ ಕೂತರು.. ಅವರ ಬದುಕಿನ ಎಲ್ಲಾ ಮಗ್ಗಲುಗಳು ಮಾತಿನಲ್ಲಿ ಹೊರಬಂದವು.. ಒಬ್ಬರ ಮನೆಯ ಕತೆ ಇನ್ನೊಬ್ಬರಿಗೆ ಅರಿವಾಯಿತು.. ಇಬ್ಬರ ಬದುಕಿನಲ್ಲಿ ವಿಧಿಯು ಆಟವಾಡಿದ್ದರಿಂದ .. ಕಷ್ಟ ನಷ್ಟಗಳ ಪದರ ದಾಟಿ ತಮ್ಮ ಬದುಕನ್ನು ಕಟ್ಟಿಕೊಳ್ಳುವ ಹಾದಿಯಲ್ಲಿ ಇದ್ದರು.. ಏನೋ ಒಂದು ರೀತಿಯ ಆಹ್ಲಾದಕರ ಬಂಧ ಅವರಿಬ್ಬರನ್ನು ಬೆಸೆಯಲು ಶುರು ಮಾಡಿತ್ತು.. ಅವರಿಬ್ಬರ ನಡುವೆ ಮುಚ್ಚಿಡಬಹುದಾದ ಯಾವ ವಿಷಯಗಳು ಇರಲೇ ಇಲ್ಲ.. ಅಷ್ಟು ಹೊತ್ತು ಮಾತಾಡುತ್ತಲೇ ಇದ್ದರು.. .. ವಾಚ್ ನೋಡಿಕೊಂಡಾಗ ಆಗಲೇ ಹನ್ನೆರಡು ಘಂಟೆಯಾಗಿತ್ತು.. ಆರುಘಂಟೆಗಳು ಮಿಗಿಲಾಗಿ ಮಾತಾಡುತ್ತ ತಮ್ಮ ಬದುಕಿನ ಪ್ರತಿ ಪುಟಗಳನ್ನೂ ತೆಗೆದಿಟ್ಟುಕೊಂಡಿದ್ದರು.. 

"ಹೋಗೋಣ ನಂದು"

"ಸರಿ ಅಭಿ"

ಟೆಂಟಿನ ಕಡೆಗೆ ಹೆಜ್ಜೆ ಹಾಕಿದರು.. ಬರುವಾಗ.. ಹಳ್ಳದಲ್ಲಿ ಕಾಲಿಟ್ಟು ಎಡವಿ ಬೀಳುವ ಹಾಗಾಯಿತು..  ನಂದಿನಿಯ ಕೈಯನ್ನು ಬಲವಾಗಿ ಹಿಡಿದು ಅವಳು ಬೀಳದಂತೆ ತಡೆ ಹಿಡಿದ..

"ಅಭಿ ನನ್ನ ಕೈಯನ್ನು ಹೀಗೆ ಹಿಡಿದುಕೊಳ್ಳಲು ಸಾಧ್ಯವೇ.. "

ಅವಳ ಕಣ್ಣಿನಲ್ಲಿದ್ದ ಹೊಳಪು ಕಂಡು ಅಭಿ ಮಾತಾಡಲಿಲ್ಲ... "ನಂದು ನಿನ್ನ ಇಷ್ಟ ನನ್ನ ಇಷ್ಟ... ಆದರೆ..... "

"ಏನು ಅಭಿ .. ಆದರೆ.. "

"ಮೊದಲು ಈ ಕಾಡಿನಿಂದ ಹೊರಗೆ ಹೋಗಲು ದಾರಿ ಸಿಕ್ಕಿದರೆ.. ನಮ್ಮಿಬ್ಬರ ಬಾಳಿಗೆ .ದಾರಿ ಸಿಕ್ಕೇ
ಸಿಗುತ್ತದೆ.. "

ಇಬ್ಬರೂ ಜೋರಾಗಿ ನಕ್ಕರು.. ನಂದಿನಿ ಅಭಿಯ ಹೆಗಲಿಗೆ ಒರಗಿದಳು.. ಅವಳ ಹೆಗಲ ಸುತ್ತಾ ಕೈ ಬಳಸಿ.. ಅವಳ ತಲೆಗೂದಲನ್ನು ನೇವರಿಸುತ್ತಾ

"ವೆಲ್ಕಮ್ ಟು ಮೈ ವರ್ಲ್ಡ್ ನಂದು"

Saturday, August 31, 2019

ಅಕ್ಕನ ವಿದೇಶದ ಪ್ರವಾಸ

ನಮ್ಮ ಮನದಲ್ಲಿದ್ದದ್ದು ಹೊರಗೆ ಹಾಕಬಹುದು.. ಇನ್ನೊಬ್ಬರ ಪಾದರಕ್ಷೆಯಲ್ಲಿ  ನಿಂತು ನೆಡೆಯುವುದು ಹಗ್ಗದ ಮೇಲಿನ ನಡಿಗೆಯ ಹಾಗೆ..

ಇಂದೇಕೋ ಬೆಳಿಗ್ಗೆ ಆದಿಗುರು ಶಂಕರಾಚಾರ್ಯರ ನೆನಪು ಬಂತು.. ಅವರ ಪರಕಾಯ ಪ್ರವೇಶದ ಘಟನೆ ಯಾಕೋ ಬೇಡ ಬೇಡವೆಂದರೂ ಹೆಜ್ಜೆ ಹಾಕುತ್ತ ನನ್ನ ಮನದಲ್ಲಿ ಕೂತಿತು.. ಆ ಗುಂಗಿನಲ್ಲಿ ಬರೆದ ಛೆ ಛೆ ಛೆ ಬರೆಸಿದ ಲೇಖನವಿದು..

*****
"ಶ್ರೀಕಾಂತಾ.. ಎರಡು ವಾರಗಳ ಕಾಲ ಸಿಂಗಪೂರ್, ಮಲೇಷಿಯಾ, ಥೈಲ್ಯಾಂಡ್, ಬ್ಯಾಂಗಾಕ್ ಹೋಗುತ್ತಿದ್ದೇನೆ.. ಅರ್ಚನಾಳ ಜೊತೆ"

ನನ್ನ ಹೃದಯ ಬಡಿತದ ಅಂಕೆಗಳು ನಾಲ್ಕೈದು ಹೆಚ್ಚಾದವು.. ನನ್ನ ಹೋಂ ಥಿಯೇಟರಿನಲ್ಲಿ ಅಣ್ಣಾವ್ರ.. 
"ಹಾದಿಯ ಹಳ್ಳವೆ ದಾಟಲಸಾಧ್ಯ ಹೀಗಿರುವಾಗ ಹನುಮ
ಸಾಗರ ದಾಟುವ ಹಂಬಲ ಸಾಧ್ಯವೆ ಅಯ್ಯೋ ರಾಮರಾಮ
ಅಯ್ಯೋ ರಾಮರಾಮ..."

"ನಿಜವೇನೇ ಅಕ್ಕ"

"ಹೂ ಕಣೋ... ಪಾಸ್ ಪೋರ್ಟ್ ಬಂತು.. ಟ್ರಾವೆಲ್ ವೀಸಾ ಸಿಕ್ಕಿದೆ.. ವಿಮಾನದ ಸೀಟು ಬುಕ್ ಆಗಿದೆ"

ಒಂದು ನಿಮಿಷ.. ಅನೇಕ ವರ್ಷಗಳ ಅಕ್ಕನ ಸ್ವಭಾವ ಹಾಗೆ ಟ್ರೈಲರ್ ತರಹ ಕಣ್ಣ ಮುಂದೆ ಬಂತು.. ಎಲ್ಲಾದರೂ ಹೋಗೋಣ.. ಅಂದರೆ.. ಕಡೆ ಘಳಿಗೆಯಲ್ಲಿ ೨ X ೨ ಕಲ್ಲು ಹಾಕುವ ಪ್ರವೃತ್ತಿಯ ಅಕ್ಕ ಸಾಗರ ದಾಟಿ ಹೋಗುವ ಸಾಹಸ ಮಾಡಿದ್ದಾಳೆ ಅಂದಾಗ ಖುಷಿಯಾಯಿತು..

ಅರ್ಚನಾ ಅವರಿಗೆ ಕರೆ ಮಾಡಿ.. "ಅರ್ಚನಾ.. ನೀವು ವಿಮಾನದೊಳಗೆ ಹೋದ ಮೇಲೆ ಪೈಲಟ್ ಮೊಬೈಲ್ ನಂಬರ್ ಕೊಡಿ.. ಅವರಿಗೆ ಕರೆ ಮಾಡಿ.. ತಕ್ಷಣ..  ವಿಮಾನದ ಬಾಗಿಲು ಹಾಕೋಕೆ ಹೇಳ್ತೀನಿ.. ಇಲ್ಲ ಅಂದರೆ ಸುಯ್ ಅಂತ ವಾಪಸ್ ಬಂದರೂ ಬಂದಾಳು" ಅಂದಾಗ ಅರ್ಚನಾ ಅರಣ್ಯ ಭವನವೇ ನಡುಗುವ ಹಾಗೆ ಜೋರಾಗಿ ನಕ್ಕಿದ್ದರು..

*****
"ಮಂಜಣ್ಣ.. ಮಂಜಣ್ಣ.. " ಕೂಗಿದ ಕಡೆ ತಿರುಗಿದಾಗ.. ತನ್ನ ತಾಯಿ ..

ಮಂಜಣ್ಣ ಅಂದರೆ ನನ್ನ ಅಪ್ಪ "ಏನಮ್ಮ"

"ಕೃಷ್ಣವೇಣಿ ವಿದೇಶ ಪ್ರವಾಸಕ್ಕೆ ಹೋಗಿದ್ದಾಳಂತೆ ಕಣೋ.. ಅದಕ್ಕೆ ನಿನಗೆ ಹೇಳೋಣ ಅಂತ ಬಂದೆ"

"ಹೌದು ಅಮ್ಮ.. ಗೊತ್ತಾಯಿತು.. ಅಣ್ಣನಿಗೆ (ನನ್ನ ತಾತ) ಹೇಳೋಣ ಅಂತ ಆ ಕಡೆನೇ ಬರ್ತಾ ಇದ್ದೆ.. "

"ಅವರು ಆಗಲೇ ಅರಳಿ ಕಟ್ಟೆಯಲ್ಲಿ ಕೂತು ಬಂದು ಹೋದವರಿಗೆಲ್ಲ ಹೇಳುತ್ತಾ ಇದ್ದಾರೆ ತಮ ಮೊದಲ ಮೊಮ್ಮಗಳ ಸಾಧನೆಯ ಬಗ್ಗೆ.. ಗೋಪಾಲ ಅಂತೂ ತುಂಬಾ ಸಂತೋಷ ಪಡುತ್ತಿದ್ದಾನೆ.. ಅವನಿಗೆ ಮಕ್ಕಳು ಅಂದರೆ ಬಲು ಇಷ್ಟ.. ಕೃಷ್ಣವೇಣಿಗೆ ಮುಂಚೆ ಒಂದು ಹೋದಾಗ.. ಬಲು ಬೇಸರ ಪಟ್ಟಿದ್ದ.. ಇವಳ ಸಾಧನೆಯ ಬಗ್ಗೆ ಬ್ಲಾಗ್ ಓದುತ್ತಾಇರ್ತಾನೆ .. ಖುಷಿಯಾಗುತ್ತೆ ಮಂಜಣ್ಣ.. ನಿನ್ನ ಮಗಳ ಈ ಸಾಧನೆ.. ಎಲ್ಲರಿಗೂ ದಾರಿ ದೀಪ.. "

"ಮಂಜಣ್ಣ.. ಕೃಷ್ಣವೇಣಿ ವಾಪಸ್ ಬಂದ್ಲು ಅಂತ ನಮ್ಮ ವಾಟ್ಸಾಪ್ ಗ್ರೂಪಿನಿಂದ ಗೊತ್ತಾಯಿತು.. ಪ್ರವಾಸದ ಬಗ್ಗೆ ಪುಟ್ಟ ಮಾಹಿತಿ ಕೊಡೋಕೆ ಹೇಳ್ತೀನಿ.. "

ಅಪ್ಪನ ದನಿಗೆ ಇತ್ತ ತಿರುಗಿ

"ಅಣ್ಣ ಸ್ವಲ್ಪ ಹೊತ್ತು ಕಾಯ್ತಾ ಇರಿ.. ನನ್ನ ಜಿಮೈಲ್ ಚೆಕ್ ಮಾಡಿ ಹೇಳ್ತೀನಿ"

ಇಲ್ಲಿಂದ ಶುರು ಪರಕಾಯ ಪ್ರವೇಶ..

****
ಅಕ್ಕನ ದನಿಯಲ್ಲಿ/ಪದಗಳಲ್ಲಿ ಪ್ರವಾಸದ ಪುಟ್ಟ ವಿವರ

ಬರಿ ಆಗಸದಲ್ಲಿ, ಚಿತ್ರಗಳಲ್ಲಿ ಕಂಡಿದ್ದ ವಿಮಾನವನ್ನು ಹತ್ತಿರದಿಂದ ನೋಡಿದಾಗ.. ಅರೆ ನಾನೇನಾ ಹೋಗುತ್ತಿರುವುದು ಅನ್ನಿಸಿತು.. ದೊಡ್ಡ ದೊಡ್ಡ ರೆಕ್ಕೆಗಳು.. ವಿಮಾನದ ಸಿಬ್ಬಂಧಿಯ ತಪಾಸಣೆಗಳು.. ಬೋರ್ಡಿಂಗ್ ವಿವರ.. ಚೆಕ್-ಇನ್ ವಿಧಾನಗಳು ಎಲ್ಲವೂ ಹೊಸತು.. ಭವ್ಯವಾದ ಕಟ್ಟಡ.. ವೈಫೈ .. ಹೋಟೆಲುಗಳು, ಬಟ್ಟೆಗಳು ಬೇಕಾದ ಬೇಡವಾದ ಎಲ್ಲವೂ ಅಲ್ಲಿ ಸಿಗುತ್ತಿದ್ದವು.. ಏನೋ ಒಂದು ರೀತಿಯ ಪುಳಕ.. ತಣ್ಣನೆ ಗಾಳಿ.. ಮನದೊಳಗೆ ಕುತೂಹಲ ಮುಂದಿನ ಎರಡು ವಾರಗಳ ಸುಂದರ ಕ್ಷಣಗಳಿಗೆ ಮುನ್ನುಡಿಯಂತಿತ್ತು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..









ಮೃದುವಾದ ಸೀಟು.. ಸೀಟಿಗೆ ಅಂಟಿಕೊಂಡ ಟಿವಿ ಪರದೆ.. ಸಿನೆಮಾಗಳು, ಹಾಡುಗಳನ್ನು ನೋಡುವ ಅವಕಾಶ.. ಗಗನ ಸಖಿ ಹೇಳಿದ ತಕ್ಷಣ ಮೊಬೈಲನ್ನು ಆಫ್ ಅಥವಾ ಏರೋಪ್ಲೇನ್ ಮೋಡ್ ತಲುಪಿಸಿ, ಬೆಲ್ಟ್ ಬಿಗಿದುಕೊಂಡು.. ಉಸಿರು ಬಿಗಿ ಹಿಡಿದು ವಿಮಾನದ ಜೊತೆ ಜೊತೆಯಲ್ಲಿಯೇ ಮನಸ್ಸು ಹಾರಲು ಶುರು ಮಾಡಿತು.. ವಿಮಾನದ ಟೇಕ್ ಆಫ್ ಒಂದು ರೀತಿಯಲ್ಲಿ ಎದೆ ಝಲ್ ಎನಿಸಿದರೂ.. ವಿಭಿನ್ನ ಅನುಭವ ಕೊಟ್ಟಿತು..

ಮೋಡಗಳ ಮೇಲೆ ನಾನು.. ಅರ್ಚನಾಳ ಜೊತೆ ಮಾತು ಕತೆ.. ಪ್ರತಿಯೊಂದು ಕ್ಷಣವನ್ನು ನಗುತ್ತ ಅನುಭವಿಸುವ ಅರ್ಚನಾಳ ಜೊತೆ ಪ್ರವಾಸ ಅವಳ ನಗುವಿನಷ್ಟೇ ಸುಂದರವಾಗಿತ್ತು..

ಗಗನ ಸಖಿ ಇಲ್ಲವೇ ಗಗನ ಸಖ ಕೊಡುವ ತಿಂಡಿ ತಿನಿಸುಗಳು.. ಸೊಗಸು..

ವಿದೇಶದ ನೆಲದಲ್ಲಿ ಮೊದಲ ಹೆಜ್ಜೆ.. ಸಿಂಗಪೂರ್ ನಲ್ಲಿ ರಾಜಾಕುಳ್ಳ ಸಿನೆಮಾದಲ್ಲಿ ನೋಡಿದ ಸಿಂಗಪೂರ್.. ಇಂದು ನೋಡುವ ಸಿಂಗಪೂರ್  ಬದಲಾಗಿದ್ದರೂ ಕ್ಷಣಕ್ಕೂ ಕ್ಷಣಕ್ಕೂ ಸೊಗಸಾದ ಅನುಭವ ಕೊಡುತಿತ್ತು.. ಗಗನಚುಂಬಿ ಕಟ್ಟಡಗಳು.. ಸ್ವಚ್ಛವಾದ ಅಗಲವಾದ ರಸ್ತೆಗಳು.. ಉದ್ಯಾನವನಗಳು, ಕಾರಂಜಿಗಳು.. ಯಾವುದು ನೋಡಬೇಕು ಯಾವುದನ್ನು ಬಿಡಬೇಕು ಎಲ್ಲವೂ ಸುಂದರಮಯ.. ಬಬ್ರುವಾಹನ ಚಿತ್ರದ "ಈ ಸಮಯ ಆನಂದಮಯ" ಎನ್ನುವ ಹಾಡು ನೆನಪಿಸಿಕೊಂಡೆನು..






ಅಲ್ಲಿಂದ ಮುಂದೆ ಹತ್ತು ದಿನಗಳು ಕಣ್ಣು ಮುಚ್ಚಿ ಕಣ್ಣು ಬಿಡುವ ಮುಂಚೆ ಕಳೆದು ಹೋಯಿತೇನೋ ಅನ್ನುವ ಅನುಭವ.. ಆದರೆ ಆ ದಿನಗಳಲ್ಲಿ ಕಳೆದ ಕ್ಷಣಗಳು ಅವರ್ಣನೀಯ..

ಸಾಗರದಲ್ಲಿ ಸ್ಕೂಬಾ ಡೈವಿಂಗ್, ಪ್ಯಾರಾ ಗ್ಲೈಡಿಂಗ್ ಅದ್ಭುತ ಎನಿಸಿತು.. ಸಾಹಸ ಮಾಡಲು ಹಿಂದೇಟು ಹಾಕುತ್ತಿದ್ದ ಮನಸ್ಸು.. ಅಲ್ಲಿಗೆ ಹೋದ ತಕ್ಷಣ.. ನಿರಾಳವಾಗಿ ಇದ್ದ ಬದ್ದ ಸಾಹಸ ಕ್ರೀಡೆಗಳಲ್ಲಿ ನುಗ್ಗಿ ಎಂಜಾಯ್ ಮಾಡಿದೆ.. ಟೋರಾ ಟೋರಾ, ಜಾಯಿಂಟ್ ವೀಲ್ ಮುಂದಾದ ಅಮ್ಯೂಸ್ಮೆಂಟ್ ಪಾರ್ಕಿನಲ್ಲಿ ಪಡೆದ ಅನುಭವಗಳನ್ನು ವರ್ಣಿಸಲು ನನ್ನಲ್ಲಿ ಪದಗಳಿಲ್ಲ.




ಅದು ಏನಾಗಿತ್ತು ನನಗೆ ಗೊತ್ತಿಲ್ಲ. ನನ್ನ ಜೀವನದಲ್ಲಿ ಹಾಕದೆ ಇದ್ದ ರೀತಿಯ ಬಟ್ಟೆಗಳೆಲ್ಲ ತಗೊಂಡಿದ್ದೆ... ಜೀನ್ಸ್ ಪ್ಯಾಂಟ್, ಟ್ರೀ ಫೋರ್ಥ್, ಟೀ ಶರ್ಟ್, ಗಾಗಲ್ಸ್.. ಪಾದರಕ್ಷೆಗಳು, ಜಾಕೆಟ್ ಎಲ್ಲವೂ ಹೊಸತನದಿಂದ ಕೂಡಿತ್ತು..



ಇಡೀ ಪ್ರವಾಸದ ಸೂತ್ರಧಾರಿ
ಅರ್ಚನಾ 

ಒಂದು ಅಚ್ಚರಿ ಕಾಯುತಿತ್ತು.. ನಮ್ಮ ಬೊಬ್ಬ ರಾಮಯ್ಯನ ಕುಟುಂಬ ಭರತ್ ಮಲೇಷಿಯಾದಲ್ಲಿ ಇತ್ತೀಚಿಗಷ್ಟೇ ಕೆಲಸದ ಮೇಲೆ ಬಂದದ್ದು ಗೊತ್ತಿತ್ತು.. ಅವನಿಗೆ ಸಂದೇಶ ಕಳಿಸಿದೆ.. ಅಕ್ಕ ಹೋಟೆಲಿನ ವಿಳಾಸ ಕೊಡಿ ಬರುತ್ತೇನೆ ಅಂದಿದ್ದ.. ಹೇಳಿದ ಹಾಗೆ ಸಿಕ್ಕಿದ.. ಒಂದಷ್ಟು ಮಾತು.. ಒಂದಷ್ಟು ಉಪಹಾರ.. ಒಂದೆರಡು ಫೋಟೋಗಳು.. ಖುಷಿ ಕೊಟ್ಟವು.. ನಮ್ಮ ನೆಲದಲ್ಲಿ ಸಿಗುವುದು ಮಾತಾಡುವುದು ಇದ್ದೆ ಇರುತ್ತದೆ.. ವಿದೇಶದಲ್ಲಿಯೂ ಈ ರೀತಿಯ ಒಂದು ಭೇಟಿ ಸಂತಸ ತಂದಿತು..


ನಾ ಹಾಕುತ್ತಿದ್ದ ಫೋಟೋಗಳಿಗೆ ನನ್ನ ಕೋರವಂಗಲ ಕುಟುಂಬದ ಸದಸ್ಯರು ಹಾಕುತ್ತಿದ್ದ ಪ್ರತಿಕ್ರಿಯೆಗಳು ಪ್ರವಾಸದ ಸುಖಾನುಭವಗಳನ್ನು ಇನ್ನಷ್ಟು ಹೆಚ್ಚಿಸುತ್ತಿತ್ತು..

ಇದನ್ನು ಹೇಳುತ್ತಾ ಹೋದರೆ ಅದೊಂದು ದೊಡ್ಡ ಲೇಖನವಾಗುತ್ತದೇ.. ಪರಕಾಯ ಪ್ರವೇಶದ ಕಾಲಾವಧಿ ಕಡಿಮೆ ಇರುವುದರಿಂದ.. ಕೆಲವು ಚಿತ್ರಗಳನ್ನು ಹಾಕಿ ಈ ಲೇಖನ ಮುಗಿಸುತ್ತೇನೆ.. ಇಲ್ಲಿ ನನ್ನ ಚಿತ್ರಗಳನ್ನೇ ಹಾಕಿದ್ದೀನಿ.. ವಿದೇಶದ ನೆಲದ ಸೌಂದರ್ಯವನ್ನು ವರ್ಣಿಸುವ ಚಿತ್ರಗಳಿಲ್ಲ ಎನ್ನಬೇಡಿ.. ನನ್ನ ಕಣ್ಣುಗಳಲ್ಲಿ ಧುಮುಕುತ್ತಿದ್ದ ಖುಷಿಯನ್ನು ನಿಮ್ಮ ಜೊತೆ ಹಂಚಿಕೊಳ್ಳಬೇಕು ಎನ್ನುವ ಆಶಯದಿಂದ ಬರಿ ಸೆಲ್ಫಿ ಅಥವಾ ನಾನಿರುವ ಚಿತ್ರಗಳನ್ನು ಹಾಕಿದ್ದೀನಿ.. ಎಂಜಾಯ್..









ನೋಡಿ ಆನಂದಿಸಿ.. ನಿಮ್ಮ ಶುಭ ಹಾರೈಕೆಗಳು ಸದಾ ಇರಲಿ..

ಅಸಾಧ್ಯದ ಮಾತನ್ನು ಸಾಧ್ಯವಾಗಿಸಿದ ಅರ್ಚನಳಿಗೆ ಧನ್ಯವಾದಗಳು.. !!!


****
"ಮಂಜಣ್ಣ ಏನೇ ಆಗಲಿ ಸವಾಲಿಗೆ ಅಂಜದ ಕೃಷ್ಣವೇಣಿಗೆ ಒಳ್ಳೆಯ ಧೈರ್ಯ ತುಂಬಿಸಿ ಬೆಳೆಸಿದ್ದೀಯಾ.. ನಮ್ಮ ಕಂದ ಈ ಮಟ್ಟಿಗೆ ಸಾಧಿಸಿರೋದು ಬಹಳ ಹೆಮ್ಮೆ ಎನ್ನಿಸುತ್ತೆ.. ಕಷ್ಟಗಳಿಗೆ ಕಣ್ಣೀರಾಕದೆ.. ಆ ನೀರನ್ನೇ ಆಶಾವಾದದ ಗಿಡಕ್ಕೆ ಹಾಕಿದಾಗ ಬೆಳೆಯುವ ಹೆಮ್ಮರವೇ ಈ ಸಾಧನೆ ಆಲ್ವಾ ಮಂಜಣ್ಣ.. "

"ಹೌದು ಅಮ್ಮ.. ಮನೆ ಕಟ್ಟಿದಳು, ಕಾರು ಕೊಂಡಳು, ಈಗ ವಿದೇಶ ಪ್ರವಾಸ.. ಇವೆಲ್ಲವೂ ಸಾಧನೆಯೇ ಹೌದು.. ಅನುಗ್ರಹ ಸದನದ ತಾಕತ್ತು ಅದು ಅಮ್ಮ.. ಇದಕ್ಕೆ ಸ್ಪೂರ್ತಿಯ ಸೆಲೆ ನನ್ನ ವಿಶಾಲೂ.. ಅವಳ ಮಾರ್ಗದರ್ಶನ ಸದಾ ನೆರಳಾಗಿ ಹರಸುತ್ತೆ... "

"ಹೌದು ಕಣೋ ಮಂಜಣ್ಣ.. ಈ ಬರಹದ ಪ್ರಿಂಟ್ ಕೊಡು.. ನನ್ನ ಅರಳಿ ಕಟ್ಟೆ ಬಳಗಕ್ಕೆ ಈ ಸಾಹಸದ, ಸ್ಪೂರ್ತಿಯ ಕತೆಯನ್ನು ಎಲ್ಲರಿಗೂ ಹೇಳುತ್ತೇನೆ.. "

"ಸರಿ ಅಣ್ಣ.. ನೀವು ಕಟ್ಟೆಯ ಕಡೆಗೆ ಹೋಗುತ್ತೀರಿ.. ಪ್ರಿಂಟ್ ತರ್ತೀನಿ.. "

"ನನ್ನ ಕುಟುಂಬಕ್ಕೆ ಶುಭವಾಗಲಿ.. ಸದಾ ಸಾಧಿಸುತ್ತೀರಿ.. ಬೆಳೆಯುತ್ತಿರಿ"

ಅಜ್ಜಯ್ಯ ಹೆಜ್ಜೆ ಹಾಕುತ್ತಾ ಅರಳಿಕಟ್ಟೆಯ ಕಡೆಗೆ ಹೆಜ್ಜೆ ಹಾಕಿದರು.."