Thursday, May 5, 2016

ಪಾಸಿಟೀವ್ ಫೋಟೋ.....!

ಒಂಭತ್ತನೇ ತರಗತಿ ಮೊದಲ ಹಂತದ ಪರೀಕ್ಷೆ 

ಮೊದಲಿಂದಲೂ ಓದು ಆ ಪಾಟಿ  ಹತ್ತುತ್ತಲೇ ಇರಲೇ ಇಲ್ಲ  ನನ್ನ ತಲೆಗೆ ಹೋದಷ್ಟು ಓದಿ,.. ಪರೀಕ್ಷೆ ಕೊಠಡಿಗೆ ಬಂದೆ..

ಇಬ್ಬರು ಒಂಭತ್ತನೇ ತರಗತಿ ಪರೀಕ್ಷೆ ಬರೆಯುವವರ ಮಧ್ಯೆ ಒಬ್ಬ ಎಂಟನೆ ಅಥವಾ ಹತ್ತನೇ ತರಗತಿ ವಿಧ್ಯಾರ್ಥಿಯನ್ನು  ಕೂರಿಸುತ್ತಿದ್ದರು. 

ನನ್ನ ಗೆಳೆಯ ಬಂದು, "ಆಲ್ ದಿ ಬೆಸ್ಟ್ ಕಣೋ ಶ್ರೀಕಾಂತಾ" ಅಂದ.. 

" ಅಯ್ಯೋ ಬಿಡು..ಏನೇ ಆದರೂ ಓದು ಹತ್ತಿಲ್ಲ ಬರೆಯೋದು ಕಷ್ಟ.. ಹಣೆ ಬರಹ" ಅಂತ ನಕರಾತ್ಮಕವಾಗಿ ಉತ್ತರಿಸಿದೆ 

ನನ್ನ ಹಿಂದೆ ಬೆಂಚಲ್ಲಿ ಕೂತಿದ್ದ ನನ್ನ ಸಹಪಾಟಿ ನಗುಮೊಗದ "ಕೆ. ಸುಕುಮಾರ್" .." ಒಬ್ಬರು ವಿಶ್ ಮಾಡಿದಾಗ ಹಾಗೆ ತಗೋ..ಒಳ್ಳೆಯದಾಗುತ್ತೆ" ಅಂದ.. 

(ನನ್ನ ಇಡಿ ಪ್ರೌಢ ಶಾಲಾ ದಿನಗಳಲ್ಲಿ ಅದೇ ಮೊದಲು ಮತ್ತು ಅದೇ ಕಡೆ ಅನ್ನಿಸುತ್ತೆ ಸುಕುಮಾರ್ ಜೊತೆ ನಾನು ಮಾತಾಡಿದ್ದು. ಅವನು ತುಂಬಾ ಕಡಿಮೆ ಮಾತಾಡುತ್ತಿದ್ದ. ನನ್ನ ಕೀಳರಿಮೆ ಜಗತ್ತಿಗೆ ಹಂಚುವಷ್ಟು ಇತ್ತು ಆ ದಿನಗಳಲ್ಲಿ.. ಹಾಗಾಗಿ ನಾ ಮೂಕ ಪ್ರೇಕ್ಷಕ ಶಾಲೆಯಲ್ಲಿ)

ಸುಕುಮಾರ್ ನಗು ನಗುತ್ತಾ ಹೇಳಿದ ಮಾತು ತುಂಬಾ ತುಂಬಾ ಪರಿಣಾಮ ಬೀರಿತು.. ಯಾಕೇ  ಕಾರಣ ಗೊತ್ತಿಲ್ಲ?. 

"ಸರಿ ಕಣೋ" ಅಂತ ಅಷ್ಟೇ ನಾ ಹೇಳಿದ್ದು. 

ವಿಜ್ಞಾನ ವಿಷಯ, ಸರಿಯಾಗಿ ಓದಿರಲಿಲ್ಲ (ಅಥವಾ ತಲೆಗೆ ಹತ್ತಿರಲಿಲ್ಲ).. ಅವನು ಹೇಳಿದ ಮಾತನ್ನೇ ಮೆಲುಕು ಹಾಕುತ್ತಾ.. ಹಾಗೇ ಪರೀಕ್ಷೆ ಬರೆದೆ. 

ಎಲ್ಲಾ ಪರೀಕ್ಷೆ  ಮುಗಿದು ನಮ್ಮ ಅಧ್ಯಾಪಕರು ಮೌಲ್ಯಮಾಪನ ಮಾಡಿದ ಉತ್ತರ ಪತ್ರಿಕೆಗಳನ್ನು ಎಲ್ಲರಿಗೂ ಕೊಟ್ಟಾಗ, ನನಗೆ ಆಶ್ಚರ್ಯ.. ಲಾಗ ಹೊಡೆದರೂ ಪಾಸಾಗುವಷ್ಟು ಅಂಕ ಪಡೆದುಕೊಳ್ಳಲು ಒದ್ದಾಡುತ್ತಿದ್ದ ನಾನು, ಆ ತರಗತಿ ಪರೀಕ್ಷೆಯಲ್ಲಿ ಪಾಸು ಮಾಡುವ ಅಂಕಕ್ಕಿಂಥ ೫ ಅಂಕಗಳು ಹೆಚ್ಚಾಗಿಯೇ ಬಂದಿದ್ದವು. 


ಪ್ರಾಯಶಃ ನನ್ನ Positive Atttitude ಶುರು ಆಗಿದ್ದು ಅಲ್ಲಿಂದ ಇರಬಹುದು. 

ನಂತರದ ಕಾಲೇಜು, ವೃತ್ತಿಜೀವನದಲ್ಲಿ ಏಳು ಬೀಳುಗಳು ಇದ್ದರೂ, ಹಲವಾರು ಬಾರಿ ನನ್ನ ಕೀಳರಿಮೆ ಕೋಟೆಯೊಳಗೆ ನಾನೇ ಬಂಧಿಯಾಗಿದ್ದರೂ, ಇದರಿಂದ ಹೊರಗೆ ಬರುವ ಪ್ರಯತ್ನ .. ಪ್ರಾಯಶಃ ಆ ನನ್ನ ಗೆಳೆಯ ಸುಕುಮಾರ್ ಹೇಳಿದ ಒಂದು ಮಾತಿಂದ ಶುರುವಾಗಿತ್ತೋ ಏನೋ. 

ಈಗ ನನ್ನ ಪರಿಸ್ಥಿತಿ ಹೇಗಿದೆ ಅಂದರೆ, ನಾನು ಋಣಾತ್ಮಕವಾಗಿ ಅಥವಾ ನೆಗೆಟಿವ್  ಆಗಿ ಯೋಚಿಸಬೇಕು ಎಂದರೂ, ನನಗೆ ಆಗುತ್ತಿಲ್ಲ.. ಅಥವಾ ನನಗೆ ಆಗೋದೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಕೀಳರಿಮೆ, ನೆಗೆಟಿವ್ ಯೋಚನೆಗಳಿಂದ ಮುಕ್ತನಾಗಿದ್ದೇನೆ. 

ಕೆಲವೊಮ್ಮೆ ಮತ್ತೆ ಅದೇ ಆಳಕ್ಕೆ ಬಿದ್ದರೂ, ಮೇಲೆ ಏಳಲಾಗದಷ್ಟು ಆಳಕ್ಕೆ ಬೀಳದೆ ಇರುವಂತೆ ನನ್ನ ಧನಾತ್ಮಕ ಶಕ್ತಿ  ನನ್ನನ್ನು ಮೇಲಕ್ಕೆ ಎತ್ತುತ್ತದೆ. 

ಕೆಲವೊಮ್ಮೆ ಒಂದು ಮಾತು ಹೇಗೆ ಬದಲಾವಣೆಯ ದಾರಿಗೆ ಕೊಂಡೊಯ್ಯುತ್ತದೆ ಎನ್ನುವುದಕ್ಕೆ ಸುಕುಮಾರ್ ಹೇಳಿದ ಒಂದು ಮಾತು ಸಾಕ್ಷಿ ಎನ್ನಿಸುತ್ತದೆ. 

ನಾಗರಹೊಳೆ ಚಿತ್ರದಲ್ಲಿ ಬರುವ ಹಾಡಿನಂತೆ "ಬೆಟ್ಟ ಕೊರೆದು ದಾರಿ ಮಾಡಿ ನೀರು ನುಗ್ಗೋ ಹಾಗೆ.. ಮುಂದೆ ನುಗ್ಗಿ ಹೋದ್ರೆ ತಾನೇ ದಾರಿ ಕಾಣೋದ್ ನಮಗೆ.. . " ಮುನ್ನುಗ್ಗು ಶ್ರೀ ಎಂದು ನನ್ನ ಅಂತರಾತ್ಮ ಸದಾ ಎಚ್ಚರಿಸುತ್ತಿರುತ್ತದೆ. 

ನನಗೆ ಯಾವಾಗಲೂ ಸ್ಫೂರ್ತಿ ಕೊಡುವ ದೃಶ್ಯ ಅಂದರೆ.. ತನಗೆ ಅರಿಯದೆ ತಾನೇ ತೊಳಲಾಡುವ ಪಾತ್ರದಲ್ಲಿ  ಅಣ್ಣಾವ್ರು        "ಕಾಮನ ಬಿಲ್ಲು" ಚಿತ್ರದಲ್ಲಿ  ಸ್ನೇಹಿತನ ಒಂದು ಸಾಂತ್ವನದ ಮತ್ತು ಪ್ರೋತ್ಸಾಹಕರ ಮಾತಿಗೆ ಮಣಿದು ಸ್ಪೂರ್ತಿಗೊಂಡು ತನ್ನ ಮನೆಯಲ್ಲಿನ ಬಡತನವನ್ನು, ದಾರಿದ್ರ್ಯವನ್ನು ತೊಡೆದಾಕಲು ಮುನ್ನುಗ್ಗುವುದು.  ಒಂದು ಕ್ಷಣ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತದೆ.. ಈ ದೃಶ್ಯ ಮುಗಿದ ನಂತರ ಅರೆ.. ಅಸಾಧ್ಯ ಎನ್ನುವ ಮಾತೆ ಇಲ್ಲ.. ನುಗ್ಗೋಣ.. ನುಗ್ತೀನಿ ಎನುತ್ತ ಮನಸ್ಸು ಸಿದ್ಧವಾಗಿಬಿಡುತ್ತದೆ. 

ಯಾರೋ ಒಬ್ಬರು ಯಾಕೆ ಮತ್ತು ಹೆಂಗೆ ಶ್ರೀ ಇಷ್ಟೊಂದು ಪಾಸಿಟೀವ್ ಯೋಚನೆಗಳು ಸಾಧ್ಯ ಎಂದಾಗ ತಲೆಗೆ ಬಂದ್ದದ್ದು ಮೂವತ್ತು ವರ್ಷಗಳ ಹಿಂದೆ ನಡೆದಿದ್ದ ಒಂದು ಚಿಕ್ಕ ಘಟನೆ...