Tuesday, September 20, 2016

ರಂಗ ಸಾಹಿತ್ಯದ ಹವಾ .. ನಮ್ಮ ಗೋಪಾಲ ವಾಜಪೇಯಿ ಗುರುಗಳು

ಇಂದು ನನ್ನ ರಂಗಭೂಮಿಯ ಅನುಭವಗಳ ಮಾಲಿಕೆ ಪುಸ್ತಕವಾಗಿದೆ.. ಈ ಸಮಯದಲ್ಲಿ ನನ್ನ ಕೆಲವು ಆತ್ಮೀಯರಿಗೆ ಅಭಿನಂದನೆ ಸಲ್ಲಿಸುವ ಜೊತೆಯಲ್ಲಿ ಈ ಪುಸ್ತಕದ ಒಂದು ಪ್ರತಿಯನ್ನು ಪ್ರೀತಿಪೂರ್ವಕವಾಗಿ ಕೊಡಬೇಕೆಂದು ಬಯಸಿದ್ದೇನೆ..

ಅವರ ಹತ್ತಿರದ ಮಿತ್ರರ ಹೆಸರು ಹೇಳಿ ಕರೆದು ಆತ್ಮೀಯವಾಗಿ ಪುಸ್ತಕದ ಒಂದು ಪ್ರತಿಯನ್ನು ಕೊಟ್ಟರು..
.. ನಂತರ ಮೈಸೂರಿನ ಬಾಲೂ ಅವರು..
ಬೆಂಗಳೂರಿನ ರಾಘವ ಶರ್ಮ ಅಂದರು..
ನಾ ಫೋಟೋ ಕ್ಲಿಕ್ಕಿಸುತ್ತಲೇ ಇದ್ದೆ..
ನನ್ನ ಆತ್ಮೀಯ ಮಿತ್ರರಾದ "ಶ್ರೀಕಾಂತ್ ಮಂಜುನಾಥ್"  ಅವರಿಗೆ ಪುಸ್ತಕದ ಪ್ರತಿ.. ಅಂದಾಗ.. ಮೈ ಹಾಗೆ ಬೆವರಿತು.. ನಾ ನಂಬಲಿಲ್ಲ..

ನನಗೂ ಅವರಿಗೂ ಅಜಗಜಾಂತರ ವ್ಯತ್ಯಾಸ.. ನಾ ನಂಬಲಿಲ್ಲ.. ಸುಮ್ಮನೆ ಫೋಟೋ ಕ್ಲಿಕ್ಕಿಸುತ್ತಲೇ ಇದ್ದೆ..

ಮತ್ತೊಮ್ಮೆ ಶ್ರೀಕಾಂತ್ ಮಂಜುನಾಥ್ ಬನ್ನಿ ಅಂದರು..

ನನ್ನ ಮಗಳು ಅಪ್ಪಾ ನಿಮ್ಮನ್ನೇ ಅಂದಳು.. ನನಗೆ ಒಂದು ಕಡೆ ನಾಚಿಕೆ, ಇನ್ನೊಂದು ಕಡೆ ಸ್ಟೇಜ್ ಫಿಯರ್.. ನನ್ನ ಜನುಮದಲ್ಲಿಯೇ ತುಂಬಿದ ಅಂಗಣದಲ್ಲಿ ವೇದಿಕೆ ಹೋದವನಲ್ಲ/ಕರೆಸಿಕೊಳ್ಳುವಂಥಹ ಸಾಧನೆ ಮಾಡಿದವನಲ್ಲ..

ನಡುಗುವ ಕೈಯಿಂದಲೇ ಆ ಪುಸ್ತಕದ ಪ್ರತಿಯನ್ನು ಸ್ವೀಕರಿಸಿ ಅದೇ ವೇಗದಲ್ಲಿ ಕೆಳಗೆ ಜಿಗಿದು ಓಡಿ ಬಂದೆ.. ಎದೆ ಬಡಿತ ಬಹುಶಃ ನನ್ನ ಕಿವಿಗೆ ಕೇಳಿಸುವಷ್ಟು ಜೋರಾಗಿ ಬಡಿದುಕೊಳ್ಳುತ್ತಿತ್ತು..
ಈ ಘಟನೆ ಹೇಳುವ ಕಾರಣ ಎಂದರೆ.. ಗುರುಗಳಾದ ಗೋಪಾಲ ವಾಜಪೇಯಿಯವರು ಹಿರಿಯರು ಕಿರಿಯರು ಎನ್ನದೇ ಎಲ್ಲರನ್ನು ಪ್ರೀತಿಯಿಂದ ಮಾತಾಡಿಸುತ್ತಿದ್ದ ರೀತಿಗೆ ಇದು ಒಂದು ಉದಾಹರಣೆ.

ನನ್ನ ಮತ್ತು ಅವರ ಒಡನಾಟ ಕಳೆದ ಎರಡು ವರ್ಷಗಳಿಂದ ಇತ್ತು.. ಶ್ರೀಕಾಂತ್  ಅಂತ ಅಭಿಮಾನಪೂರಿತ ಕಣ್ಣುಗಳಿಂದ ಅವರ ಮಿತ್ರ ವೃಂದದಲ್ಲಿ ನನ್ನನ್ನು ಗುರುತಿಸಿಕೊಂಡದ್ದು ನನಗೆ ಸಿಕ್ಕ ಒಂದು ದೊಡ್ಡ ಗೌರವ..

ಅವರ ಮಗನ ಮದುವೆಯ ಸಂದರ್ಭದಲ್ಲಿ ಬಿಡದೆ ನನಗೆ ಕರೆ ಮಾಡಿ.. ಫೇಸ್ಬುಕ್ ನಲ್ಲಿ ಸಂದೇಶ ಕಳಿಸಿ ಪದೇ ಪದೇ ನೆನಪಿಸುತ್ತಾ ಇದ್ದರು... ಆ ಸಮಾರಂಭಕ್ಕೆ ಹೊರಟಿದ್ದ ನಾನು ಮತ್ತು ನನ್ನ ಕುಟುಂಬ.. ನನ್ನ ಕಾರು ಅವರ ಮನೆಗೆ ತುಸು ಹತ್ತಿರದಲ್ಲಿಯೇ ಬಸವಳಿದು ನಿಂತಾಗ ಅದನ್ನು ಸರಿ ಮಾಡುವ ಭರದಲ್ಲಿ ಮೊಬೈಲ್ ಬಿದ್ದು ಒಡೆದು ಹೋಗಿ.. ಅವರ ಮನೆಗೆ ಹೋಗಲಾಗಲೇ ಇಲ್ಲ..

ಬಹಳ ಬೇಸರ ಮಾಡಿಕೊಂಡು ಕ್ಷಮೆ ಕೇಳಿದಾಗ.. ಇನ್ನೊಮ್ಮೆ ಬರುವಿರಂತೆ ಅಂದರು.. ಎರಡನೇ ಬಾರಿಯೂ ಆ ಅವಕಾಶ ನನಗೆ ಆಗದೆ ಹೋಯಿತು.

ಇವರ ಮೂರು ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹೋಗಿದ್ದೆ.. ಅವರ ಅನೇಕ ಹಿರಿಯ ಮಿತ್ರರ ಸಂಗದಲ್ಲಿ ಇದ್ದರೂ ಕೂಡ.. ನಮ್ಮ ಕುಟುಂಬವನ್ನು ಕಂಡೊಡನೇ ಪ್ರೀತಿಯಿಂದ ಮಾತಾಡಿಸುವ ಅವರ ಪ್ರೀತಿಗೆ ನಾ ಸೋತಿದ್ದೆ..

ಗುರುಗಳೇ.. ನಿಮ್ಮ ಹೆಸರು ನಿಮ್ಮ ನೆನಪು.. ನಿಮ್ಮ ಜೊತೆಯಲ್ಲಿ ಕಳೆದ ಮಧುರ ಕ್ಷಣಗಳು ಅಮೋಘ ಮತ್ತು ಅಜರಾಮರ.
ನಿಮ್ಮನಂಥಹ ಸರಸ್ವತಿ ಪುತ್ರರ ಜೊತೆಯಲ್ಲಿ ನಾವು ಹೆಜ್ಜೆ ಹಾಕಿದ್ದು, ಒಡನಾಡಿದ್ದು ನಮ್ಮ ಪೂರ್ವ ಜನ್ಮದ ಪುಣ್ಯ ಎನ್ನಬೇಕು.

ಇವರ ಪರಿಚಯವಾದ ಮೇಲೆಯೇ ನಾಗಮಂಡಲ ಚಿತ್ರಕ್ಕೆ ಅದ್ಭುತ ಹಾಡುಗಳನ್ನು ಬರೆದದ್ದು ಇವರೇ ಎಂದು ಗೊತ್ತಾಗಿದ್ದು. ಇಂತಹ ಸಜ್ಜನ, ಕಲಾವಿದ, ಸಾಹಿತಿ ಇವೆಲ್ಲಕ್ಕೂ ಮಿಗಿಲಾಗಿದ್ದು ಇವರ ಸ್ನೇಹ ಪರ ಮನಸ್ಸು. ಯುವಕರು ನಾಚಿಸುವಂತಹ ಕ್ರಿಯಾಶೀಲತೆ ಹೊಂದಿದ್ದ ನಮ್ಮ ಗುರುಗಳು ಇಂದು ನಮ್ಮೆಲ್ಲರ ಮನದಲ್ಲಿ ಪಟವಾಗಿದ್ದಾರೆ.
ರಂಗದ ಒಳಗೆ ಹೊರಗೆ ಹೇಗಿದೆ ಎಂದು ದೇವನಿಗೆ ಹೇಳಲು ಹೊರಟೆ ಬಿಟ್ಟರು ನಮ್ಮ ಗುರುಗಳು 

ಗುರುಗಳೇ ಬಹುಶಃ ಆ ದೇವರಿಗೂ ಆತನ "ಅಂತ"ರಂಗದ ಹೊರಗೂ ಒಳಗೂ ನೆಡೆಯುವ ತುಮುಲಗಳ ಅನಾವರಣ ಮಾಡಿಕೊಳ್ಳಬೇಕಿತ್ತು ಎನ್ನಿಸುತ್ತದೆ.. ನಮ್ಮೆಲ್ಲರಿಂದ ನಿಮ್ಮನ್ನು ಕಸಿದುಕೊಂಡುಬಿಟ್ಟಿದ್ದಾನೆ..

ಗುರುಗಳೇ ನಿಮ್ಮ ಆಶೀರ್ವಾದ ನಿಮ್ಮ ಈ ಸ್ನೇಹದ ಕಡಲಿನಲ್ಲಿ ಸದಾ ತಂಗಾಳಿ ಬೀಸುವಂತೆ ಬೀಸುತ್ತಲೇ ಇರಲಿ....

ಹೋಗಿ ಬನ್ನಿ ಗುರುಗಳೇ.. ನೀವು ನಮ್ಮ ಹೃದಯ ಕಮಲದಲ್ಲಿ ಸದಾ ಅರಳಿ ನಿಂತು ಕಂಪು ಸೂಸುವ ಪುಷ್ಪವಾಗಿಯೇ ಸದಾ ಇರುತ್ತೀರಾ..

ಗುರುಗಳೇ ನಿಮ್ಮ ದಿವ್ಯ ಚೈತನ್ಯವುಳ್ಳ ಚೇತನಕ್ಕೆ ಶಿರಬಾಗಿ ನಮನಗಳು..

:-(


Thursday, September 8, 2016

ದೇವರ ಇರುವನ್ನು ಅನುಭವಿಸಿದ ಸುಂದರ ಕ್ಷಣ ...!


ವಿಚಿತ್ರ ಆದರೂ ಸತ್ಯ

ಈ ಬಾರಿಯ ಗಣಪನ ಹಬ್ಬಕ್ಕೆ ಗಣಪನ ಮೂರ್ತಿ ತರಲು ಅಮ್ಮನ ಮನೆಯ ಹತ್ತಿರದ ಒಂದು ಅಂಗಡಿಗೆ ಹೋಗಿದ್ದೆವು. ನಾನು, ತಮ್ಮ , ಅಣ್ಣ ಮತ್ತು ಅಣ್ಣನ ಮಗ.

ನನಗೆ ಅರಿವು ಮೂಡಿದ ದಿನದಿಂದ ಅಂದರೆ ಸುಮಾರು ೩೫ ವರ್ಷಗಳಿಂದ ನಮ್ಮ ಮನೆಯಲ್ಲಿ ಬಣ್ಣ ಬಣ್ಣದ ಗಣಪನದೇ ದರ್ಬಾರು.

ಈ ಬಾರಿ ಯಾಕೋ ಗೊತ್ತಿಲ್ಲ.. ಅಂಗಡಿಗೆ ಹೋದೊಡನೆ.. ಬರಿ ಮಣ್ಣಿನ ಮತ್ತು ತುಸುವೇ ಬಣ್ಣ ಹಚ್ಚಿದ ಗಣಪ ನನ್ನ ಕೈ ಬೀಸಿ ಕರೆದಂತೆ ಆಯಿತು.

ಅಣ್ಣನಿಗೆ ಹೇಳಿದೆ.. ಈ ಸಾರಿ ಈ ಗಣೇಶನ ತಗೊಳೋಣ..

ಅವನು ಮತ್ತು ತಮ್ಮ ಒಪ್ಪಿ.. ಗಣಪನ ಮೂರ್ತಿಯ ದರವನ್ನು ವಿಚಾರಿಸಿದರು..
ಇನ್ನೇನು ದುಡ್ಡು ಕೊಟ್ಟು ಮೂರ್ತಿಯನ್ನು ತಗೋಬೇಕು ಅಷ್ಟೇ..

ಅಷ್ಟರಲ್ಲಿ ಅಣ್ಣನ ಮಗ.. ಅಪ್ಪ ವಿಜಯನಗರಕ್ಕೆ ಹೋಗೋಣ ಅಲ್ಲಿ ಬೇರೆ ಬೇರೆ ಗಣೇಶ ಇರುತ್ತದೆ ಅಂದ..
ಅಣ್ಣ ಎರಡನೇ ಮಾತಿಲ್ಲದೆ.. ಸರಿ ನೆಡೆಯಿರಿ ಅಲ್ಲಿಗೆ ಹೋಗೋಣ ಅಂದ..

ನಾ ಗಣಪನ ಕಡೆ ನೋಡಿದೆ.. ತುಸು ಬೇಸರಿಸಿಕೊಂಡ ಹಾಗೆ ಕಾಣಿಸಿತು

ನನ್ನ ಜೀವದ ಅಂಶವೇ ತುಸು ಹೊರಗೆ ಹೋಗುತ್ತಿದೆಯೇನೋ ಎನ್ನುವ ಅನುಭವ..

ಹಾಗೆ.. ಗಣಪನ ಮೂರ್ತಿಯ ಮೈ ತಡವಿ.. ಅಣ್ಣನ ಜೊತೆ ಭಾರವಾದ ಹೆಜ್ಜೆ ಹಾಕುತ್ತ ಹೋದೆ.. ಹಾಗೆ ಒಮ್ಮೆ ತಿರುಗಿ ನೋಡಿದೆ.. ಗಣಪ ಹಾಗೆ ಬೇಸರದಲ್ಲಿಯೇ ಇದ್ದ ಹಾಗೆ ಅನ್ನಿಸಿತು..

ವಿಜಯನಗರಕ್ಕೆ ಹೋದೆವು.. ಅಲ್ಲಿ ಒಂದು ಮೂರ್ತಿಯನ್ನು ಕೊಂಡು ಮನೆಗೆ ಬಂದೆವು..

ಬೆಳಿಗ್ಗೆ ಪುರೋಹಿತರು (ಅಮ್ಮನ ಸೋದರಮಾವನ ಮಗ) ಬಂದು.. ಎಲ್ಲವೂ ಸಿದ್ಧವೇ ಎಂದು ಕೇಳಿ.. ಪೂಜೆ ಆರಂಭಿಸಲು.. ಅಣ್ಣನಿಗೆ ಆ ಮೂರ್ತಿಯನ್ನು ಮಂಟಪದಲ್ಲಿ ಇಡು ಎಂದರು..

ಅಣ್ಣ ಎದ್ದು ಹೋಗಿ (ಪ್ರತಿ ಬಾರಿಯೂ ಗಣಪನ ಮೂರ್ತಿಯನ್ನು ಅವನೇ ಮಂಟಪದಲ್ಲಿ ಕೂರಿಸೋದು)
ಗಣಪನನ್ನು ನಿಧಾನವಾಗಿ ಜರುಗಿಸಿದ.. ಟಪಕ್ ಅಂತ ಗಣಪನ ಒಂದು ಕೈಯಲ್ಲಿದ್ದ ಪಾಶಾಂಕುಶ ಹಾಗೆ ಕೆಳಗೆ ಬಿತ್ತು..

ಎಲ್ಲರಿಗೂ ಬೇಸರ.. ಕಣ್ಣಲ್ಲಿ ನೀರು..

ತಕ್ಷಣ ಪುರೋಹಿತರು.. ಸರಿ ಸರಿ.. ಶ್ರೀಕಾಂತಾ ಬೇಗನೆ ಹೋಗಿ ಹತ್ತಿರದ ಅಂಗಡಿಯಿಂದ ಒಂದು ಮೂರ್ತಿ ತಗೊಂಡು ಬಾ.. ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳಬಾರದು.. ನೀವೇನು ಬೇಕಂತಲೇ ಮುರಿದಿಲ್ಲ .. ಅಚಾನಕ್ ಆಗಿದೆ.. ಏರ್ ಕ್ರ್ಯಾಕ್ ಇರಬೇಕು.. ಬಿಟ್ಟುಕೊಂಡಿದೆ.. ತಲೆ ಬಿಸಿ ಮಾಡಿಕೋಬೇಡಿ.. ಶ್ರೀಕಾಂತಾ ನೀ ಹೋಗು ತಗೊಂಡು ಬಾ ಅಂದ..

ನಾನು ನನ್ನ ತಮ್ಮ ಇಬ್ಬರೂ.. ದ್ವಿ ಚಕ್ರ ವಾಹನದಲ್ಲಿ ಹೋದೆವು.. ನಮಗೆ ಅರಿವಿಲ್ಲದೆ ಅದೇ ಅಂಗಡಿಗೆ ಹೋಗಿ.. ನಿಂತರೆ.. ಗಣಪ.. ಮಕ್ಕಳು ತಮ್ಮ ತಂದೆ ತಾಯಿಯರನ್ನು ಕರೆಯುವ ಹಾಗೆ... ಹೂಂ ಹೂಂ ಅಂತ ಅಳುತ್ತಾ ಇರುವ ಹಾಗೆ ಅನ್ನಿಸಿತು...

ನಾ ನನ್ನ ತಮ್ಮನಿಗೆ ಹೇಳಿದೆ.. ಹೇ ಅಲ್ಲಿ ನೋಡು ಅದೇ ಗಣೇಶ ಅಂದೇ..

ಅಲ್ಲಿದ್ದದ್ದು ಐದೇ ನಿಮಿಷ..

ಮುಂದಿನ ಆರನೇ ನಿಮಿಷ.. ಅದೇ ಗಣಪ.. ನನ್ನ ಮಡಿಲಲ್ಲಿ ದ್ವಿ ಚಕ್ರ ವಾಹನದಲ್ಲಿ.. ಮನಸಲ್ಲಿ "ಓಂ ಗಂ ಗಣಪತೆಯೇ ನಮಃ"

ಗಣಪ... ಶ್ರೀಕಾಂತಾ ನಿನ್ನ ಆಸೆ ಈಡೇರಿತು.... ನಾ ನಿಮ್ಮ ಮನೆಗೆ ಬರುತ್ತಿದ್ದೇನೆ.. ನಿನ್ನ ಎಲ್ಲಾ ಆಸೆಯೂ ಈಡೇರುತ್ತದೆ... ನನ್ನ ಆಶೀರ್ವಾದ ಈ ಅನುಗ್ರಹ ಸದನದ ಮೇಲೆ ಸದಾ ಇರುತ್ತದೆ.. ನಿಮ್ಮ ಅಪ್ಪ ನನ್ನ ಮೂರ್ತಿಯನ್ನು ಹುಡುಕಿ ಹುಡುಕಿ ತರುತ್ತಿದ್ದರು... ಅವರ ಪರಂಪರೆಯನ್ನೇ ನೀವೆಲ್ಲರೂ ಮುಂದುವರೆಸುತ್ತಿದ್ದೀರಿ.. ನಿಮಗೆಲ್ಲಾ ಶುಭವೇ ಆಗುತ್ತದೆ .. ಅಂತ ಅಂದ ಹಾಗೆ ಭಾಸವಾಯಿತು..

ಅದ್ಭುತ ಅನುಭವ.. !

ಪುರೋಹಿತರು ಹೇಳಿದರು.. "ಗಣೇಶ ಹೇಳುತ್ತಿದ್ದ ಅನ್ಸುತ್ತೆ ಅಲ್ಲಾ ಲೇ.. ನಾ ಬರುತ್ತೇನೆ ಎಂದು ಹೇಳಿದ ಮೇಲೂ ನನ್ನ ಬಿಟ್ಟು ಹೋದಿರಿ.. ನಾ ಬಿಡುತ್ತೇನೆಯೇ.. ನೋಡು ನಾನೇ ಬಂದು ಬಿಟ್ಟೆ.. ನಿಮ್ಮ ಕೈಯಲ್ಲಿ ನಾನೇ ಪೂಜೆ ಮಾಡಿಸಿಕೊಳ್ಳಬೇಕು ಅಂತ ಹಠ ತೊಟ್ಟು ಬಂದಿದ್ದೇನೆ ಅನ್ನುತ್ತಿದ್ದಾನೆ ಕಣೋ"

ನಾ ಹಾಗೆ ಗಣಪನ ಮುಖ ನೋಡಿದೆ.. ಸೊಂಡಿಲಲ್ಲಿ ಮೋದಕ ತಿನ್ನುತ್ತಲೇ.. ಹಾಗೆ ಲಬಕ್ ಅಂತ ಕಣ್ಣು ಹೊಡೆದ ಅನುಭವ..
ಆಶೀರ್ವಾದ ಮಾಡಲು ಹಠ ತೊಟ್ಟು ಬಂದ ಗಣಪ!!!

ಓಂ ಗಂ ಗಣಪತಯೇ ನಮಃ!!!!