Sunday, October 8, 2017

ಕಗ್ಗ ರಸಧಾರೆಯ ನಾಲ್ಕನೇ (ಹಾಗೂ ಕೊನೆಯ) ಸಂಪುಟ!!!

"ಅಲ್ಲಿಯೇ ನಿಂತಿದ್ದ ಅಜ್ಜ, ತಮ್ಮ ವಾಕಿಂಗ್ ಸ್ಟಿಕ್ಕಿನ ತುದಿಯಿಂದ ನನ್ನ ತಲೆಗೆ ಮೆಲ್ಲಗೆ ಕುಟ್ಟಿ.. ಸರಿ ಮಗೂ.. ನನ್ನ್ನ ಶುಭಾಶೀರ್ವಾದವನ್ನು ರವಿಗೆ ನಿನ್ನ ಬರಹದ ಮೂಲಕ ತಲುಪಿಸು.. ನನ್ನ ಜನುಮದಿನಕ್ಕೂ ಅವನ ಜನುಮದಿನಕ್ಕೂ ನಾಲ್ಕು ದಿನಗಳ ಅಂತರ.. ಹಾಗೆ ನಾಲ್ಕನೇ ಪುಸ್ತಕ ಕಗ್ಗ ರಸಧಾರೆ ಕೂಡ ಬೇಗ ಬರಲಿ ಎಂದು ಹೇಳಿ ಬಿಡು. ನಾ ಹೋಗಿ ಬರುತ್ತೇನೆ.. ಮತ್ತೆ ನಾಲ್ಕನೇ ಪುಸ್ತಕದ ಬಿಡುಗಡೆ ಸಮಾರಂಭಕ್ಕೆ ಬರುತ್ತೇನೆ.. ಜೊತೆಯಲ್ಲಿ ಈ ಬಾರಿ ಆ ಸಮಾರಂಭದ ವಿವರಗಳನ್ನು ನಾನೇ ನೀಡುತ್ತೇನೆ ಎಂದು ರವಿಗೆ ಹೇಳಿಬಿಡು.. "

ಕಗ್ಗ ರಸಧಾರೆಯ ಮೊದಲ ಸಂಪುಟ!!!

ಕಗ್ಗ ರಸಧಾರೆಯ ಎರಡನೇ ಸಂಪುಟ!!!

ಕಗ್ಗ ರಸಧಾರೆಯ ಮೂರನೇ ಸಂಪುಟ!!!

ಗುರುಗಳು  ಶ್ರೀ ರವಿ ಅವರ ಜನುಮದಿನಕ್ಕೆ  ಶುಭಾಷಯ ಸಲ್ಲಿಸುವಾಗ ಅಜ್ಜ ಹೇಳಿದ್ದು ನೆನಪಾಯಿತು.. ಅಜ್ಜನನ್ನು ಕರೆಯುವುದು ಹೇಗೆ.. ಈ ಪಾಟಿ ದಿನಗಳೂ ಆದ ಮೇಲೆ ಅಜ್ಜನನ್ನ ಕರೆಯುವುದು ಹೇಗೆ.. ಕರೆದರೆ ಬರುವರೇ...  ಏನಪ್ಪಾ ಮಾಡೋದು.. ಮಕ್ಕಳು ಕಾಗದವನ್ನು ಮುದುರಿದರೆ ಉಂಟಾಗುವ ನೆರಿಗೆಯಂತೆ..  ನನ್ನ ಹಣೆಯ ಮೇಲೆ ರಸ್ತೆಗಳಾದವು.. "ಸಕಲ ಗ್ರಹಗಳ ಬಲ ನೀನೆ ಸರಸಿಜಾಕ್ಷ" ಎಂದು ನೆನೆದು ಸುಮ್ಮನೆ ಕೂತೆ ಬ್ಯುಗಲ್ ರಾಕಿನ ಒಂದು ಬಂಡೆಯ ಮೇಲೆ ಕೂತೆ..

"ಇಹ ಲೋಕಕ್ಕೆ ಬಂದ  ಮೇಲೆ ಪರಲೋಕಕ್ಕೆ ಹೋಗಬೇಕು
ಪರಲೋಕಕ್ಕೆ ಹೋದಮೇಲೆ ಕರ್ಮದ ಅನುಸಾರ ಜಗಕೆ ಬರಲೇಬೇಕು
ಸಾವಿಲ್ಲದ ಮನೆಯ ಸಾಸಿವೆ ಎಲ್ಲಿದೆ
ಹೊಗೆಯಿಲ್ಲದ ಬೆಂಕಿಯೆಲ್ಲಿದೆ.. ಪುನರಪಿ ಜನನಂ ಮಂಕುತಿಮ್ಮ।

ಸುತ್ತಾ ತಿರುಗಿದೆ.. ಬ್ಯುಗಲ್ ರಾಕಿನಲ್ಲಿ ಅಜ್ಜ ಕೂತಲ್ಲಿಯೇ ಕೂತಿದ್ದರು.. ಧ್ವನಿ ಮಾತ್ರ ಅಲ್ಲಿಂದ ಬರುತ್ತಿತ್ತು.. ನಾ ಲ್ಯಾಪ್ಟಾಪ್ ತೆಗೆದು ಅವರ ಹತ್ತಿರ ಓಡಿದೆ ..

"ಅಜ್ಜ ನಿಮಗೆ ನಮಸ್ಕಾರ.. ದಯಮಾಡಿ ಕ್ಷಮಿಸಿ.. ಬರಲು ಆಗಲೇ ಇಲ್ಲ.. ಕಾರ... "

ನನ್ನ ಮಾತು ಪೂರ್ತಿ ಮುಗಿದಿರಲಿಲ್ಲ.. "ಮಗು ನನಗೆ ಗೊತ್ತು.. ಅದಕ್ಕೆ ಆ ಮೇಲಿನ ಕಗ್ಗ ಹೇಳಿದ್ದು.. ಮಗು ರವಿ ನಾಲ್ಕನೇ ಸಂಪುಟ ಬಿಡುಗಡೆ ಮಾಡಿದ್ದು ಆಯ್ತು ಅಂತ ನನಗೆ ಗೊತ್ತು.. ನಾನೇ ಇದಕ್ಕೆ ವೀಕ್ಷಕ ವಿವರಣೆ ಕೊಡುತ್ತೇನೆ ಎಂದು ಹೇಳಿದ್ದೆ.. (ನಿನಗೆ ನೆನಪಿಲ್ಲವೇ.. ರವಿಯ ಜನುಮದಿನದ ವೇಳೆ ಮೂರು ಸಂಪುಟ ಬಿಡುಗಡೆ ಆಗಿತ್ತು.. ನಾಲ್ಕನೇ ಸಂಪುಟದ ವಿವರಗಳನ್ನು ನಾನೇ ನೀಡುತ್ತೇನೆ ಎಂದು ಹೇಳಿದ್ದೆ.. ಸರಿ ಶುರಮಾಡು ..  ನಾವಿಬ್ಬರೂ ಆಮೇಲೆ ಮಾತಾಡೋಣ"
ಚಂದದ ಆಹ್ವಾನ ಪತ್ರಿಕೆ 

"ಸರಿ ಅಜ್ಜ"

ಶುರುವಾಯಿತು ಅಜ್ಜನ ಲಹರಿ.. ನಾ ಅವರು ಹೇಳಿದ್ದ ವೇಗಕ್ಕೆ ಸಾಟಿಯಾಗಿ  ಬರೆಯಲು ಶುರುಮಾಡಿದ್ದೆ.. ಅಜ್ಜನ ಆಶೀರ್ವಾದ ಇದ್ದ ಮೇಲೆ ಇದು ಅಸಾಧ್ಯವೇ.. ಖಂಡಿತ ಸಾಧ್ಯ ಅಲ್ಲವೇ

                                                                         *****

ಪುಟ ಪುಟಗಳು ಪಟವಾಗಿರಲು
ಪಟವು ಬಾನಲ್ಲಿ ಹಾರಾಡುತ್ತಿರಲು
ಮನವು ಆಗಸದಿ ಆ ಪಟವನ್ನು ಹಿಡಿದಿಡಲು
ಬದುಕಿಗೆ ಸಾರ್ಥಕಥೆ ಉಂಟು ಮಂಕುತಿಮ್ಮ।

ಅಜ್ಜ ಶುರುಮಾಡಿದರು..

"ಮೆಲ್ಲನೆ ಅರಿವಿಲ್ಲದೆ ಶುರುಮಾಡಿದ ಕಾಯಕವೊಂದು ಝರಿ ತೊರೆಯಾಗಿ ನದಿಯಾಗಿ ಕಣಿವೆಯಿಂದ ಕಡಲಿಗೆ ಹರಿಯುವಂತೆ ಮೊದಲನೇ ಮುಕ್ತಕ ಶುರುಮಾಡಿದ್ದ ರವಿ.. ೯೪೫ ನೇ ಮುಕ್ತಕಕ್ಕೆ ವ್ಯಾಖ್ಯಾನ ಬರೆಯಲು ಬಂದಾಗ ಗೌರಿಶಂಕರ ಹತ್ತಿದಷ್ಟೇ ಸಂತಸ ಸಂಭ್ರಮ .. "

"ಹೌದು ಅಜ್ಜಯ್ಯ"

"ಸರಿ ಬರೆದದ್ದು ಆಯಿತು. ಮುಖಪುಸ್ತಕದಲ್ಲಿ ದಾಖಲಾಯಿತು.. ಅದನ್ನು ಮುಂದಿನ ಪೀಳಿಗೆಗೆ ದಾಟಿಸಬೇಕು ಎನ್ನುವ ಅವರ ತವಕಕ್ಕೆ ಬೆನ್ನು ತಟ್ಟಿತ್ತು ಹತ್ತಾರು ಕೈಗಳು.. .. ಆ ಹತ್ತಾರು ಕೈಗಳು ನೂರಾರು ಕರಗಳನ್ನು ಕರೆತಂದಿದ್ದು ಫೇಸ್ಬುಕ್ ಮಾಯೆ ಮತ್ತು ಸಹೃದಯರ ಮಿಡಿಯುವ ಮನಸ್ಸು.. "

"ಹೂಂ" (ಅಜ್ಜಯ್ಯ ವಿವರಣೆ ಕೊಡುವಾಗ.. ಹೂಗುಟ್ಟುತ್ತಾ ಇರಬೇಕು ಇಲ್ಲವೇ ವಾಕಿಂಗ್ ಸ್ಟಿಕ್ ಇಂದ ಬೀಳುತ್ತಿತ್ತು ಒಂದು ಏಟು... :-)

ಒಂದು ಕರ ಬರೆಯುತ್ತೆ
ಇನ್ನೊಂದು ಕರ ಹಾಳೆಯನ್ನು ತಿರುಗಿಸುತ್ತೆ
ಈ ಕರಗಳು ಮಾಡಿದ ಕಾರ್ಯವನು ಮೊಬೈಲ್ ಮೂಲಕ ಸಾಗಿಸುವ
ಬೆರಳುಗಳ ಮಾಯೆ ಅರಿಯದಾಗಿದೆ ಮಂಕುತಿಮ್ಮ।

"ಸರಿಯಾಗಿದೆ ಅಜ್ಜಯ್ಯ ನೀವು ಹೇಳಿದ್ದು"

"ಆನಂದ ಎಲ್ಲಿದೇ ಎಂದು ತಿಳಿದೇ
ಓದುವುದರಲ್ಲಿಯೇ
ಬರೆಯುವುದರಲ್ಲಿಯೇ
ಓದಿ ಬರೆದು ಜಪ ಮಾಡುವುದರಲ್ಲಿ ಮಕುತಿಮ್ಮ ।"

"ಎನ್ನುವ ಶ್ರೀ ಜಪಾನಂದಾಸ್ವಾಮಿಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಶುರುವಾಗಿತ್ತು.. ರವಿಯವರ ಮಾನಸ ಸಹೋದರಿ ಶಕುಂತಲ ಅಯ್ಯರ್ ಅವರ ಉತ್ತಮ ನಿರೂಪಣೆಯಲ್ಲಿ ಸಾಗಿದ ಕಾರ್ಯಕ್ರಮಕ್ಕೆ ಇನ್ನಷ್ಟು ಚೈತನ್ಯ ತುಂಬಿದ್ದು ಡಾ. ಲತಾ ದಾಮ್ಲೆಯವರ ಗಾಯನ..  "

"ವನದ ಸೌಂದರ್ಯ  ಸುಮದೊಳಗೆ ನಲಿಯುವಾಗ
ಸುಮದ  ಕಂಪು ವನದಲ್ಲಿ ಹರಡಿದಾಗ
ಸಿಗುವ ಅನುಭವ ಪದಗಳಲ್ಲಿ ಹಿಡಿದಿಡಲಾಗದು
ಅದಕ್ಕೆ ಅಲ್ಲವೇ ವನಸುಮದೊಳೆನ್ನ  ವಿಕಸಿಸು ಎಂದಿದ್ದು ಮಂಕುತಿಮ್ಮ।"

"ದೀಪವ ಬೆಳಗುತ್ತಾ ಮನದೊಳಗಿರುವ ಕತ್ತಲೆಯನ್ನು ದೂರ ಮಾಡುವ ಕಗ್ಗದ ಕಾರ್ಯಕ್ರಮದಲ್ಲಿ ನಾಲ್ಕನೇ ಸಂಪುಟವನ್ನು ಲೋಕಾರ್ಪಣೆ ಮಾಡಿದರು.. "

"ಮನದಲ್ಲಿದ್ದ ಭಾವಗಳಿಗೆ ಪದಗಳು ಸಾತ್ ನೀಡಿತು
ಕನ್ನಡ, ಹಳಗನ್ನಡ, ಹೊಸಗನ್ನಡ, ಸಂಸ್ಕೃತ ಭಾಷೆಯೆನ್ನದೆ
ಅಲ್ಲಿ ಇಲ್ಲಿ ಸಿಕ್ಕ ಪದಗಳು ಕಗ್ಗಗಳಾದವು
ಒಂದರಿಂದ ಬೆಳೆದದ್ದು ಒಂಬತ್ತುನೂರ ನಲವತ್ತೈದಕ್ಕೆ ಮುಟ್ಟಿತು ಮಂಕುತಿಮ್ಮ।"

"ಕಗ್ಗದ ಕಾರ್ಯಕ್ರಮದ ಆರಂಭಕ್ಕೆ ನಾ ಮಾತಾಡಿದ್ದು ಶ್ರೀ ಜಿಪಿ ರಾಜರತ್ನಂ ಅವರು.. ಅಥವಾ ಜಿಪಿ ರಾಜರತ್ನಂ ಮಾತಾಡಿದ್ದು ನನ್ನ ಹತ್ತಿರ.. ಅಥವಾ ನಾವಿಬ್ಬರೂ ಒಬ್ಬರಿಗೊಬ್ಬರು ಮಾತಾಡಿಕೊಂಡೆವು.. "

"ಶ್ರೀ ಜಪಾನಂದಸ್ವಾಮಿಗಳ ಮಾತು ಹೃದಯಕ್ಕೆ ತಾಕುವಂತಿತ್ತು .. ಮಾತಾಡುವಾಗ ಅವರು ಕಣ್ಣು ಮುಚ್ಚಿ ಹೇಳುತ್ತಿದ್ದ ಕೆಲವು ವಾಕ್ಯಗಳು ಎಲ್ಲರ ಮನದಲ್ಲಿ ಇಳಿಯುತ್ತಿದ್ದದ್ದು ಕಾಣುತ್ತಿತ್ತು.. ಇದು ಉಪನ್ಯಾಸವೂ ಅಲ್ಲ.. ಭಾಷಣವೂ ಅಲ್ಲ.. ಗುರುಕುಲ ಪರಂಪರೆಯನ್ನು ನೆನಪಿಸುವ ಒಂದಷ್ಟು ಘಳಿಗೆಗಳಾಗಿತ್ತು.. "

"ಕಗ್ಗದ ಭಟ್ಟರೆಂದೇ ಹೆಸರಾದ ಶ್ರೀ ಲಕ್ಷ್ಮೀನಾರಾಯಣ ಭಟ್ಟರ ಕೆಲವು ಕಗ್ಗದ ವ್ಯಾಖ್ಯಾನಗಳು ಮತ್ತೆ ನನ್ನನ್ನು ಆ ದಿನಗಳಿಗೆ  ಕರೆದೊಯ್ದವು.. "

"ನಗುಮೊಗದ ಶ್ರೀ ಹಂ. ಪಾ. ನಾಗರಾಜಯ್ಯ ತಮ್ಮ ಹಾಸ್ಯಮಿಶ್ರಿತ ಮಾತುಗಳಿಂದ ಎಲ್ಲರ ಮನಸ್ಸನ್ನು ಸೆಳೆದರು.. ಕಗ್ಗದ ಬಗ್ಗೆ ಅವರಾಡಿದ ಮಾತುಗಳು ನನ್ನ ಹೃದಯಕ್ಕೆ ತಾಕಿದವು.. ತಾಯಿ ಶಾರದೆಯ ಅನುಗ್ರಹದಿಂದ ನಾ ಸೃಷ್ಠಿ ಮಾಡಿದ ಕೆಲವು ಸಾಲಿನ ಪದಗಳು ಈ ಪಾಟಿ ಜನಮಾನಸದಲ್ಲಿ ಅರಳಿದ್ದು ಹೆಮ್ಮೆ ಮೂಡಿಸುತ್ತಿತ್ತು.. ಆ ತಾಯಿ ಶಾರದೆಗೆ ನಾ ನಮಿಸಿದೆ ... "

"ಸರಕಾರೀ ಅಧಿಕಾರಿಯಾಗಿರುವ ಶ್ರೀ ಕೆ ವಿ ದಯಾನಂದ್ ಅವರು ಈ ಮುಕ್ತಕಗಳನ್ನು ಅಂತರ್ಜಾಲದಲ್ಲಿ ಹೆಚ್ಚಾಗಿ ಬಳಕೆಯಾಗುವಂತೆ ಸರಕಾರಿ ವೆಬ್ಸೈಟ್ ನಲ್ಲಿ ಸೇರಿಸಲು ಅನು ಮಾಡಿಕೊಡುವೆ ಎಂದರು.. ಈ ಮೊಬೈಲ್ ಯುಗದಲ್ಲಿ ಒಂದು ಕಡೆ ಶುರುವಾದರೆ ಅದು ಹರಡುವ ಪ್ರಮಾಣ ಅಗಾಧ.. ಈ ಪ್ರಯತ್ನ ಯಶಸ್ವಿಯಾಗುವಂತೆ ನಾ ಆ ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ.. "ಲೋ.. ಬರಿ ನಾ ಹೇಳಿದ್ದು ಕೇಳುತ್ತಿದ್ದೆಯೋ, ಬರೆಯುತ್ತಿದ್ದೀಯೋ ಅಥವಾ  ನಿದ್ದೆ ಗಿದ್ದೆ ಮಾಡಿಬಿಟ್ಟೆಯ.. "

ಅವಿರತವಾಗಿ ಮಾತಾಡುತ್ತಿದ್ದ ಅಜ್ಜಯ್ಯನ ಕೊನೆ ಮಾತು ಚುರುಕು ಮುಟ್ಟಿಸಿತು.. ಅವರ ಮಾತುಗಳನ್ನು ಕೇಳುತ್ತಾ ನಾ ಒಂದು ರೀತಿಯಲ್ಲಿ ಬೇರೆ ಲೋಕಕ್ಕೆ ಹೋಗಿಬಿಟ್ಟಿದ್ದೆ.. ಆದರೆ ಅವು ಹೇಳಿದ್ದನ್ನು ಕೈಗಳು ಲ್ಯಾಪ್ಟಾಪಿನ ಕೀಲಿ ಮಣೆಯ ಸಹಾಯದಿಂದ ದಾಖಲಿಸುತ್ತಿದ್ದೆ..

"ಅಜ್ಜಯ್ಯ ನೋಡಿ.. ನೀವು ಹೇಳಿದ್ದನ್ನು ಒಂದು ಪದ ಬಿಡದೆ ಬರೆಯುತ್ತಿದ್ದೇನೆ.. "

ಅಜ್ಜಯ್ಯ ತನ್ನ ಕೋಲಿನಿಂದ ನನ್ನ ತಲೆಗೆ ಒಂದು ಪೆಟ್ಟು ಕೊಟ್ಟರು.. "ಲೋ ಮಂಕುತಿಮ್ಮ ಕಡೆ ವಾಕ್ಯ ನೋಡು"

ನಾ ನೋಡಿದೆ.. ಗಹಗಹಿಸಿ ನಕ್ಕೆ.. "ಅಜ್ಜಯ್ಯ ಅಜ್ಜಯ್ಯ ಅಜ್ಜಯ್ಯ"

"ಹೇಳಿದ್ದನ್ನು ಬರೆಯುವೆಯಾ
ಬರೆದದ್ದನ್ನು ಓದುವೆಯಾ
ಕಗ್ಗದ ಕಾರ್ಯಕ್ರಮದ ವಿವರ ಮಾತ್ರ ಬರಿ
ಅದು ಬಿಟ್ಟು ಹೇಳಿದ್ದನ್ನೆಲ್ಲ ಬರಿಯಬೇಡವೋ ಮಂಕುತಿಮ್ಮ।"

"ಸರಿ ಅಜ್ಜ.. ಕಡೆಯ ಸಾಲನ್ನು ಅಳಿಸಿ ಹಾಕುವೆ"

"ಗಾಯಕಿಯ ಮತ್ತು ವಿದುಷಿಯಾಗಿರುವ ಶ್ರೀಮತಿ ಆಶಾ ಜಗದೀಶ್ ಅವರ ಕೆಲವು ಮುಕ್ತಕಗಳ ಗಾಯನ.. ಮಾತುಗಳು ಈ ಕಾರ್ಯಕ್ರಮಕ್ಕೆ ಇನ್ನಷ್ಟು ಹೊಳಪನ್ನು ತಂದವು.. "

"ಬಂದಿದ್ದ ಜನಸಾಗರ ಒಂದಷ್ಟು ಅಲುಗಾಡದೇ ಇಡೀ ಕಾರ್ಯಕ್ರಮವನ್ನು ಆನಂದಿಸಿದ್ದು ಇಷ್ಟವಾಯಿತು.. ಮೂರು ತಾಸುಗಳು ಮೂರು ನಿಮಿಷಗಳಂತೆ ಸಾಗಿತ್ತು.. "
ಮಾತುಗಳಿಲ್ಲ ಇವರನ್ನು ಬಣ್ಣಿಸಲು 

"ಇದು ಬರಿ ಒಂದು ಪುಸ್ತಕ ಬಿಡುಗಡೆ ಕಾರ್ಯಕ್ರಮ ಮಾತ್ರ ಆಗಿರಲಿಲ್ಲ.. ಈ ಬಿಡುವಿಲ್ಲದ ಈ ತಾಂತ್ರಿಕ ಜಗತ್ತಿನಲ್ಲಿ ಭಾನುವಾರ ಬೆಳಿಗ್ಗೆ ಉಪಹಾರದಿಂದ ಊಟದ ಸಮಯದ ತನಕ ಎಲ್ಲರೂ ಭಾಗಿಯಾಗಿದ್ದು.. ತಮ್ಮ ಅನೇಕ ಮಿತ್ರರನ್ನು, ಸಹೋದರಿ, ಸಹೋದರರು, ಗುರುಗಳನ್ನು ಕಂಡು ನಲಿದ ದಿನವಾಗಿತ್ತು.. "

"ನೋಡಪ್ಪ ಈ ಕಾರ್ಯಕ್ರಮಕ್ಕೆ ಬಂದವರನ್ನು ಮಾತಾಡಿಸಿ, ಅವರನ್ನು ಸ್ಮರಿಸಿ, ನೆನಪಿನ ಪುಸ್ತಕರೂಪದಲ್ಲಿ ತಮ್ಮ ಹಸ್ತಾಕ್ಷರ ನೀಡುವ ಮೂಲಕ ಎಲ್ಲರಿಗೂ ಗೌರವ ಸೂಚಿಸಿದ ನನ್ನ ಶಿಶು ರವಿ ತಿರುಮಲೈಗೆ ನನ್ನ ಶುಭ ಆಶೀರ್ವಾದಗಳು.. ಇವರ ಈ ಸಾಹಸದಿಂದ ನನಗೆ ಆದ ಅನುಕೂಲ ಏನು ಗೊತ್ತೇ.. ನನ್ನ ಜೀವನದ ಕೆಲವು ದಿನಗಳ ಮೆಲುಕು ಹಾಕುತ್ತ. ಆ ದಿನಗಳನ್ನು ನನ್ನ ಕಣ್ಣ ಮುಂದೆ ತಂದ ನನ್ನ ಮುಂದಿನ  ಪೀಳಿಗೆಯ ಕುಡಿಯ ಮಾತುಗಳು ಇಷ್ಟವಾದವು ಎಂದು ಹೇಳಲೇಬೇಕಿಲ್ಲ"

"ನನಗೆ ಒಂದು ಪುಸ್ತಕ ತಂದು ಕೊಡು.. ನಾ ಹೋರಡುತ್ತೇನೆ.. "

"ಅಜ್ಜಯ್ಯ ನಿಮಗಾಗಿ ಆಗಲೇ ಒಂದು ಪುಸ್ತಕ ರವಿ ತಿರುಮಲೈ ಅವರು ಮೀಸಲಾಗಿಟ್ಟಿದ್ದಾರೆ.. ತೆಗೆದುಕೊಳ್ಳಿ.. "

"ಈ ಕಾರ್ಯಕ್ರಮದ ಯಶಸ್ಸಿಗೆ ಹಗಲು ಇರಲು ಎನ್ನದೆ ರವಿಯ ಜೊತೆಯಲ್ಲಿ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸಿದ ಎಲ್ಲರಿಗೂ ನನ್ನ ಆಶೀರ್ವಾದಗಳು"

"ಸರಿ ಮಗು ನಾ ಹೋಗಿ ಬರುತ್ತೇನೆ.. ಮತ್ತೆ ಮತ್ತೆ ಈ ರೀತಿಯ ಕಾರ್ಯಕ್ರಮಗಳು ಆಗುತ್ತಿರಲಿ.. ಕಗ್ಗದ ಪರಿಮಳ ಹರಡುತ್ತಲಿರಲಿ.. "

ಅಜ್ಜಯ್ಯ ಕೋಲೂರಿಕೊಂಡು ನಿಧಾನವಾಗಿ ಬ್ಯುಗಲ್ ರಾಕಿನ ಒಳಗೆ ನೀರಿನ ಟ್ಯಾಂಕ್ ಬಳಿಯ ಅವರ ಮೂರ್ತಿಯ ಒಳಗೆ ಹೋದರು.. ನಾ ಕಣ್ಣೊರೆಸಿಕೊಂಡು ಅಜ್ಜಯ್ಯನ ಪಾದದ ಧೂಳನ್ನು ಕಣ್ಣಿಗೆ ಒತ್ತಿಕೊಂಡೆ..

*****

ತಾವು ಹೇಳಿದಂತೆ ಈ ನಾಲ್ಕನೇ ಸಂಪುಟದ ಕಾರ್ಯಕ್ರಮವನ್ನು ಅವರ ಮಾತಿನಲ್ಲಿ ಹೇಳಲು ಪ್ರಯತ್ನ ಪಟ್ಟಿದ್ದೇನೆ!! !

ಅಂದಿನ ಸಮಾರಂಭದ ಒಂದೆರಡು ತುಣುಕುಗಳು ನಿಮಗಾಗಿ..




*******
ಗುರುಗಳೇ.. ನಾನಾ ಕಾರಣಗಳಿಂದ ಆ ಕಾರ್ಯಕ್ರಮದ ವಿವರಗಳನ್ನು ಬರೆಯಲಿಕ್ಕೆ ಆಗಲಿಲ್ಲ.. ಆದರೆ ಅಜ್ಜಯ್ಯ ಮನದಲ್ಲಿ ಹೇಳಿದ್ದನ್ನು ಅಕ್ಷರ ರೂಪದಲ್ಲಿ ತಂದು ನಿಮ್ಮ ಮುಂದೆ ಇಟ್ಟಿದ್ದೇನೆ..

ಬಡವನಗೀತೆಯಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ಒಂದು ಅದ್ಭುತ ಕೃತಿಯಾಗಿರುವ ಮಂಕುತಿಮ್ಮನ ಕಗ್ಗಗಳಿಗೆ ಜನರು ಸ್ಪಂದಿಸಿರುವ ರೀತಿಯೇ ದೊಡ್ಡ ಪ್ರಶಂಸೆ.. ಮತ್ತು ಬಹುಮಾನ..

ಆ ಪೀಠ ಈ ಪೀಠ ಎಂದೇಕೆ ಮಾತಾಡುವೆ
ಜ್ಞಾನಕ್ಕೆ ಸಿಗದ ಪೀಠವುಂಟೆ
ಅಜ್ಞಾನದ ಕತ್ತಲೆಯನ್ನು ಅಟ್ಟುವ
ಆ ಪೀಠವೇ ಜ್ಞಾನ ಪೀಠವಾಗಿದೆ ಮಂಕುತಿಮ್ಮ।


ಓಂ ನಮೋ ಕಗ್ಗ ಮಂಕುತಿಮ್ಮಾಯ ನಮಃ!

Thursday, October 5, 2017

ಸ್ವಾರ್ಥಕತೆಯೇ...or ಸಾರ್ಥಕತೆಯೋ

ಅನೇಕ  ಬಾರಿ  ಸುತ್ತಿ ಸುತ್ತಿ ಚಪ್ಪಲಿ ಸವೆದು ಹೋಗಿದ್ದರೂ ಛಲ ಬಿಡದ ವಿಕ್ರಮನಂತೆ ಮತ್ತೆ ಅದೇ ಕಚೇರಿಗೆ ಹೋದಳು ವೀಣಾ... 

ಸರ್ ತುಂಬಾ ದಿನಗಳಿಂದ ನಿಮ್ಮ ಆಫೀಸಿಗೆ ಅಲೆಯುತ್ತಿದ್ದೇನೆ.. ದಯಮಾಡಿ ನಾ ಕೇಳಿದ ಮಾಹಿತಿ ಕೊಡಿ.. ?

ಆ ಸರಕಾರೀ ಆಫೀಸಿನ ಜವಾನ.. "ನೆಡಿಯಮ್ಮ ಎಷ್ಟು ಸಾರಿ ಹೇಳೋದು..  ಆಗೋಲ್ಲ.. ನಿಮ್ಮನ್ನು ಒಳಗೆ ಬಿಡಲು ಆಗೋಲ್ಲ... ಮಾಹಿತೀನೂ ಇಲ್ಲ..ಏನೂ ಇಲ್ಲ...  ಹೋಗಮ್ಮ.. 

ನಿರಾಶೆ ಮೊಗ ಹೊತ್ತ ವೀಣಾ... ಮತ್ತೆ ಆಫೀಸಿನ ಎದುರು ಇದ್ದ ಅರಳಿ ಮರದ ಕಟ್ಟೆಯಲ್ಲಿ ಕೂತಳು.. ಸೂರ್ಯ ಬಿಸಿಲಿನ ಝಳವನ್ನು ಹಂಡೆಯಲ್ಲಿ ಸುರಿಯುತ್ತಿದ್ದ ಅನ್ನಿಸುತ್ತೆ .. ಬೆವರಿನ ಸ್ನಾನವೇ ಆಗಿತ್ತು.. ಹೊದ್ದುಕೊಂಡಿದ್ದ ದುಪ್ಪಟದಿಂದ ಮೊಗವನ್ನು ಒರೆಸಿಕೊಂಡು  ತನ್ನ ಹ್ಯಾಂಡ್ ಬ್ಯಾಗಿಂದ ಕನ್ನಡಿ ತೆಗೆದು.. ಹಣೆಯಲ್ಲಿದ್ದ ಕುಂಕುಮ ಇರುವುದನ್ನು ಖಚಿತ ಪಡಿಸಿಕೊಂಡಳು.. 

ಆ ಅರಳಿ ಮರದ ತಂಪು ನೆರಳಿನಲ್ಲಿ.. ಸುಯ್ ಎಂದು ಬೀಸುತ್ತಿದ್ದ ಆ ಗಾಳಿಗೆ ಹಾಗೆ ನಿದ್ದೆ ಹತ್ತಲು ಶುರುಮಾಡಿತ್ತು.. ಬೆಳಗಿಂದ ಗಾಡಿಯಲ್ಲಿ ಬಿರು ಬಿಸಿಲಿನಲ್ಲಿ ತಿರುಗಿದ್ದು.. ಊಟವಿಲ್ಲದೆ ಬಸವಳಿದಿದ್ದ ದೇಹ.. ತುಸು ತಂಪುಗಾಳಿಗೆ ಮೈಯೊಡ್ಡಿದಾಗ ಸ್ವಲ್ಪ ಹಾಯ್ ಎನಿಸಿದ್ದು ಸುಳ್ಳಲ್ಲ... ಹಾಗೆ ಮರಕ್ಕೆ ಒರಗಿ ಕುಳಿತ ವೀಣಾಳ ಮನಸ್ಸು ನೆನಪುಗಳು ರೈಲುಬಂಡಿಯನ್ನು ಹತ್ತಿ ಹಿಂದಕ್ಕೆ ಓಡಲು ಶುರುಮಾಡಿತು... 

ಕನ್ನಡಿಯಲ್ಲೊಮ್ಮೆ ಮೊಗವನ್ನು ನೋಡಿಕೊಂಡ ವೀಣಾ ತನ್ನ ಬಗ್ಗೆ ಒಮ್ಮೆ ಹೆಮ್ಮೆ ಪಟ್ಟು ಕೊಂಡಳು.. ಅಪರೂಪದ ಸುಂದರಿ..  ಕಡು ಕಪ್ಪಾದ ನೀಳಗೂದಲು, ಹಾಲಿನ ಬಟ್ಟಲಲ್ಲಿ ಕರೀ ದ್ರಾಕ್ಷಿ ಹಾಕಿದಂತಹ ಕಣ್ಣುಗಳು.. ಯಾರನ್ನೇ ಆದರೂ ಒಮ್ಮೆಗೆ  ಸೆಳೆಯಬಲ್ಲ ಕಣ್ಣುಗಳು.. ನೀಳವಾದ ಸಂಪಿಗೆಯಂತಹ ನಾಸಿಕ... ಅದಕ್ಕೆ ಒಪ್ಪುವ ಮೂಗು ಬೊಟ್ಟು.. ಕೆನೆ ಹಾಲಿನ ಬಣ್ಣ.. ಎತ್ತರದ ಮೈಮಾಟ.. ಅನುಪಮಾ ಸುಂದರಿಯಾಗಿದ್ದಳು ವೀಣಾ.. ಸೌಂದರ್ಯದ ಜೊತೆಯಲ್ಲಿ ಅಹಂಕಾರ ಇರುತ್ತದೆ ಎನ್ನುವ ನಾಣ್ಣುಡಿಯನ್ನು ಸುಳ್ಳು ಮಾಡುವಂತಹ ವ್ಯಕ್ತಿತ್ವ ವೀಣಾಳದು.. !

ಎಂತಹ ಸ್ನೇಹ ನನ್ನದು.. ಸ್ನೇಹಕ್ಕೆ ಹಾತೊರೆಯುವ ಮನಸ್ಸು.. ತನಗೆ ಅಪಾರ ಸ್ನೇಹ ಬಳಗವನ್ನು ತಂದು ಕೊಟ್ಟಿತ್ತು.. ಸ್ನೇಹ ಬಳಗದಲ್ಲಿ ವೀಣಾ ಎಂದರೆ.. ಉತ್ಸಾಹದ ಚಿಲುಮೆ ಎಂದೇ ಹೆಸರಾಗಿದ್ದಳು.. ಯಾವುದೇ  ಇರಲಿ, ಪ್ರವಾಸವಿರಲಿ, ಸಿನಿಮಾ, ಶಾಪಿಂಗ್ ಏನೇ ಇದ್ದರೂ ಆ ಗುಂಪಿನಲ್ಲಿ ವೀಣಾ ಇರಲೇಬೇಕಿತ್ತು.. ಹಾಗಾಗಿ  ಕೇಂದ್ರ ಬಿಂದುವಾಗಿದ್ದಳು ವೀಣಾ.. 

ಮತ್ತೊಮ್ಮೆ ತನ್ನ ಮೊಗವನ್ನು ನೋಡಿಕೊಂಡಳು... 

ಈ ಸೌಂದರ್ಯಕ್ಕೆ ಅಲ್ಲವೇ ಕಾಲೇಜಿನಲ್ಲಿ ಹುಡುಗರ ಹಿಂದೆ ಬೀಳುತ್ತಿದ್ದದು... ಆದರೆ ಪ್ರೀತಿ ಪ್ರೇಮ ಇದರ ಬಗ್ಗೆ ಯಾವುದೇ ಅಭಿಪ್ರಾಯ ಇಲ್ಲದ ಇವಳಿಗೆ.. ಹುಡುಗರ ಹಿಂಡು ಇದ್ದರೂ.. ಇವಳು ಮಾತ್ರ ತಾವರೆ ಎಲೆಯ ಮೇಲಿನ ನೀರಿನ ಹನಿಯಂತೆ ಇದ್ದಳು.. ಆದರೆ ಯಾರನ್ನೂ ಅವಮಾನ ಮಾಡುವುದಾಗಲಿ ಅಥವಾ ಬಯ್ಯುವುದಾಗಲಿ ಮಾಡುತ್ತಿರಲಿಲ್ಲ.. ಬದಲಿಗೆ.. ಗೆಳೆಯ.. ನನಗೆ ಪ್ರೀತಿ ಪ್ರೇಮ ಇವೆಲ್ಲಾ ಇಷ್ಟವಿಲ್ಲ.. ನಿನ್ನ ಗೆಳತಿಯಾಗಿರುತ್ತೇನೆ.. ಆದರೆ ಪ್ರೀತಿ ಪ್ರೇಮ ಎಲ್ಲಾ ಇಲ್ಲದೆ ಪರಿಶುದ್ಧ ಸ್ನೇಹದ ಹಸ್ತ ಕೊಡುವುದಾದರೆ ಸರಿ .. ಇಲ್ಲದೆ ಹೋದರೆ.. ನನ್ನ  ದಾರಿ ನನಗೆ ನಿನ್ನ ದಾರಿ ನಿನಗೆ ಎಂದು ನಯವಾಗಿಯೇ ಹೇಳುತಿದ್ದಳು.. 

ಹೀಗಾಗಿ ಅವಳು ಯಾರಿಗೂ ಸಿಗದ ಸುಂದರಿಯಾಗಿದ್ದಳು ಆದರೂ ಎಲ್ಲರಿಗೂ ಬೇಕಾದ ಪ್ರಾಣ ಸ್ನೇಹಿತಯಾಗಿದ್ದಳು... ಅವಳ ಪರಮಾಪ್ತ ಗೆಳತೀ ಗೀತಾ.... ಇಬ್ಬರೂ ಒಂದು ಪ್ರಾಣ ಎರಡು ದೇಹ ಎಂಬಂತೆ ಇದ್ದರು.. 

ಕಾಲೇಜು ವ್ಯಾಸಂಗದಲ್ಲಿ ಗೀತಾ-ವೀಣಾ ಒಂದೇ ಮುಖದ ಎರಡು ನಾಣ್ಯಗಳಾಗಿದ್ದರು.. ಅಂತಹ ಅದ್ಭುತ ದೋಸ್ತಿ ಅವರಿಬ್ಬರದು... 

ಇಬ್ಬರಿಗೂ ಪ್ರೀತಿ ಪ್ರೇಮ ಇವೆಲ್ಲಾ ಬರಿ ಪುಸ್ತಕದ ಬದನೇಕಾಯಿ ಎಂಬ ತಿಳುವಳಿಕೆ ಇತ್ತು.. ಹಾಗಾಗಿ ಎಲ್ಲರಲ್ಲೂ ಬೆರೆಯುವ ಅವರಿಬ್ಬರನ್ನು ಬಿಟ್ಟು ಸಹಪಾಠಿಗಳು ಇಂದಿಗೂ ದೂರವಿರುತ್ತಿರಲಿಲ್ಲ... 

ಕಾಲೇಜು ವಿದ್ಯಾಭ್ಯಾಸ ಮುಗಿಯುವ ಸಮಯ.. ಮನೆಯಲ್ಲಿ ಆಗಲೇ ಹುಡುಗನನ್ನು ನೋಡಲು ಶುರುಮಾಡಿದ್ದರು.. ವೀಣಾ ಮತ್ತು ಗೀತಾಳ ಕುಟುಂಬ ಹತ್ತಿರವಾಗಿತ್ತು.. ಹಾಗಾಗಿ ಇಬ್ಬರಿಗೂ ಒಮ್ಮೆಲೇ ನೋಡಿದರೆ ಒಟ್ಟಿಗೆ ಮದುವೆ ಮಾಡುವ ಯೋಚನೆಯು ಇತ್ತು :-)

ಸಾಧಾರಣ ಕುಟುಂಬದ ಹೆಣ್ಣು ಮಕ್ಕಳಾಗಿದ್ದ ಇವರಿಬ್ಬರಿಗೂ ಇದ್ದ ಆಸ್ತಿ ಎಂದರೆ ಸೌಂದರ್ಯ.. ಒಬ್ಬರನ್ನು  ಒಬ್ಬರು ಮೀರಿಸುವ ಸೌಂದರ್ಯ... 

ವೀಣಾಳ ಹಾಲಿನ ಬಿಳುಪು.. ಗೀತಾ ಸ್ವಲ್ಪ ಕೃಷ್ಣ ವರ್ಣದವಳಾಗಿದ್ದರೂ ಆಕರ್ಷಕ ಸೌಂದರ್ಯತೆಯಿಂದ ಕೂಡಿದ್ದಳು.. ಅವರಿಬ್ಬರೂ ಹಲವಾರು ಬಾರಿ ಹೇಳಿಕೊಂಡಿದ್ದರು.. "ನಾ ಗಂಡಾಗಿದ್ದರೆ ನಿನ್ನೆ ಮದುವೆಯಾಗುತ್ತಿದ್ದೆ ಕಣೆ'

ವೀಣಾಳ ಮದುವೆ ಮೊದಲು ನಿಶ್ಚಯವಾಯಿತು.. ಗಂಡು ರಾಕೇಶ್ ಬೆಂಗಳೂರಿನ HAL ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿ ಇಂಜಿನೀಯರ್ ಆಗಿದ್ದ... ಹೇಳಿಮಾಡಿಸಿದಂತಹ ಜೋಡಿಯಾಗಿತ್ತು.. ಮದುವೆಯಲ್ಲಿ ಗೀತಾ ಜಿಂಕೆಯಂತೆ ಒದ್ದಾಡಿ ಎಲ್ಲರ ಮನಸ್ಸೆಳೆದಿದ್ದಳು.. ಮತ್ತು ಮದುವೆಗೆ ವೀಣಾಳ ಕುಟುಂಬಕ್ಕೆ ಬಲಗೈಯಾಗಿದ್ದಳು.. ಹೂವಿನ ಸರದಂತೆ ಹಗುರವಾಗಿ ಮದುವೆ ವೀಣಾ ಮತ್ತು ಗೀತಾಳ ಪರೀಕ್ಷೆ ಮುಗಿದ ಒಂದೇ ವಾರಕ್ಕೆ ಮುಗಿದಿತ್ತು.. 

ರಾಕೇಶ್ ಮತ್ತು ವೀಣಾ ನಗು ನಗುತ್ತಾ ಮಧು ಚಂದ್ರಕ್ಕೆ ತೆರಳಿದ್ದರು.. ಮೊದಲ ಬಾರಿಗೆ ಗೀತಾಳಿಗೆ ಒಂಟಿತನ ಕಾಡಲು ಹತ್ತಿತು... ತನ್ನ ಪ್ರೀತಿಯ ಗೆಳತಿ ಮದುವೆಯ ನಂತರ ತನ್ನಿಂದ ದೂರವಾಗುತ್ತಾಳೆ ಎನ್ನುವ ಒಂದು ಆತಂಕ ಅವಳನ್ನು ಕಾಡತೊಡಗಿತು... 

ಗೀತಾಳ ಮನೆಯಲ್ಲಿಯೂ ಯೋಗ್ಯ ವರನಿಗೆ ಹುಡುಕಾಟ ಇನ್ನೂ ಕ್ಷಿಪ್ರಗತಿಯಲ್ಲಿ ಸಾಗತೊಡಗಿತ್ತು.. ಜೊತೆಯಲ್ಲಿ ಗೀತಾಳ ಸದ್ದಿಲ್ಲದ ಚಲನವಲನ ಅವಳನ್ನು ಬೇಗ ಮದುವೆ ಮಾಡಲೇಬೇಕು ಎನ್ನುವ ತೀರ್ಮಾನಕ್ಕೆ ಇಂಬುಕೊಟ್ಟಿತ್ತು... 

ಗೀತಾ ಒಂಟಿತನಕ್ಕೆ ಮತ್ತಷ್ಟು ಪೆಟ್ಟು ಬಿದ್ದದ್ದು ಕಾಲೇಜು ಮುಗಿದಿತ್ತು.. ಇನ್ನೂ ಫಲಿತಾಂಶ ಬರುವ ತನಕ ಏನೂ ಕೆಲಸವಿಲ್ಲ... ಕರಕುಶಲ ಕೆಲಸಗಳನ್ನ ಕಲಿತಿದ್ದ ಗೀತಾಳಿಗೆ ಅದೇ ಒಂದು ರೀತಿಯ ಸಂಗಾತಿಯಾಗಿತ್ತು.  ಕಾಗದದಲ್ಲಿ ಮಾಡುವ ಆಕೃತಿ, ರಂಗೋಲಿಗಳು, ಪೇಂಟಿಂಗ್, ಮಡಿಕೆ ಕುಡಿಕೆಗಳ ಮೇಲೆ ಚಿತ್ರಗಳನ್ನು ಮೂಡಿಸುವುದು, ಅಲ್ಯೂಮಿನಿಯಂ ಹಾಳೆಗಳ ಮೇಲೆ.. ಹೀಗೆ ಒಂದಷ್ಟು ಕಸವನ್ನು ಕೊಟ್ಟರೂ ರಸವನ್ನಾಗಿ ಅದನ್ನೇ ಒಂದು ಕಲಾಕೃತಿಯಾಗಿ ಮಾಡುವ ತಾಕತ್ತು ಅವಳಿಗಿತ್ತು.. 

ಅದೇ ಅವಳಿಗೆ ಜೊತೆಗಾರನಾಗಿ ಬಂದಿತ್ತು ಅಂದರೆ ಸುಳ್ಳಲ್ಲ..

ವೀಣಾ ಮಧುಚಂದ್ರದಿಂದ ಬಂದ ಮೇಲೆ.. ತನ್ನ ಕುಟುಂಬದ  ಗಮನ ಹರಿಸಲು ಶುರುಮಾಡಿದ್ದಳು .. ರಾಕೇಶನದು ತುಂಬು ಕುಟುಂಬ.. ಇವರಿಬ್ಬರೂ ಸೇರಿ ಹದಿನೈದು ಮಂದಿ ಇದ್ದ ಅವಿಭಕ್ತ ಕುಟುಂಬ ಆಗಿತ್ತು.. ರಾಕೇಶ ಅಪ್ಪ ಅಮ್ಮ.. ಅವರ ಅಪ್ಪ ಅಮ್ಮ ಅಂದರೆ ಅಜ್ಜ ಅಜ್ಜಿ.. ರಾಕೇಶನ ಇಬ್ಬರು ತಂಗಿಯರು ಇಬ್ಬರು ತಮ್ಮಂದಿರು, ತಂದೆಯ ತಮ್ಮ ಹೆಂಡತಿ ಮತ್ತು ಇಬ್ಬರು ಮಕ್ಕಳು ಮತ್ತು ಹುಟ್ಟಿದಾಗಿಂದ ಇಲ್ಲೇ ಇದ್ದು ಬೆಳೆದು ಮನೆಗೆಲಸಗಳಲ್ಲಿ ಸಹಾಯ ಮಾಡಿಕೊಂಡಿರುವ ಆಳು ಮಗ..

ತುಂಬು ಮನೆಯ ಈ ಕುಟುಂಬದ ಸಡಗರದಲ್ಲಿ  ವೀಣಾಳಿಗೆ ಗೀತಾಳನ್ನು ಸಂಪರ್ಕ ಮಾಡಲು ಕಷ್ಟವಾಗುತ್ತಿತ್ತು.. ಗೀತಾಳೆ ಸಂದೇಶ ಕಲಿಸಿದ್ದರೂ ಅದನ್ನು ನೋಡುತ್ತಿದ್ದದು ರಾತ್ರಿ ಮಲಗುವ ಮುನ್ನವೇ.. ಓದಿ ಅದಕ್ಕೆ ನಾಳೆ ಪ್ರತಿಕ್ರಿಯೆ ಮಾಡೋಣ.. ಬೇಡ ಬೇಡ ಮಾತಾಡಿಯೇ ಬಿಡೋಣ ನಾಳೆ ದಿನ.. ಎನ್ನುತ್ತಾ ಮಲಗಿದವಳಿಗೆ ಮತ್ತೆ ಮರುದಿನ ರಾತ್ರಿಯೇ ಗೀತಾಳ ನೆನಪಾಗುತ್ತಿದ್ದದು... ಹೀಗೆ ಸ್ಮೃತಿ ಪಟಲದಲ್ಲಿದ್ದರೂ ಸಂಪರ್ಕ ಮಾಡದೆ ಅಂತರ ಹೆಚ್ಚುತ್ತಿತ್ತು.. 

ಗೀತಾಳಿಗೆ ವೀಣಾಳ ಪುರುಸೊತ್ತಿಲ್ಲದ ಚಟುವಟಿಕೆ ಗೊತ್ತಿತ್ತು.. ಯಾಕೆಂದರೆ ಒಮ್ಮೆ ವೀಣಾಳ ಮನೆಗೆ ಹೋಗಬೇಕೆಂದಾಗ ವೀಣಾಳ ಅಪ್ಪ ಅಮ್ಮ ಅವಳ ಕಥೆಯನ್ನು ಹೇಳಿದ್ದರು.. ತವರಿಗೆ ಬರೋದೇ ಕಷ್ಟ  ಬಂದರೂ ನೆಂಟರ  ತರಹ ಬರುತ್ತಾಳೆ ಎಂದು  ಹೇಳಿದ್ದರು.. ಹಾಗಾಗಿ ಕಥೆ ಗೊತ್ತಿದ್ದರಿಂದ ತನ್ನ ಜೀವದ ಗೆಳೆತಿಯನ್ನು ಬಯ್ದುಕೊಳ್ಳದೆ ಅವಳ ಸ್ಥಿತಿಯನ್ನು ನೆನೆದು ಸುಮ್ಮನಾಗಿದ್ದಳು... 

"ಮೋ.. ಮೋ.. ಅಮ್ಮ.. ಮೇಡಂ.. ರೀ.. ಈ ವಮ್ಮ ಏನೂ ಮರದ ಕೆಳಗೆ ಕೂತು ಗೊರಕೆ ಹೊಡಿತಾ ಇದೆ.. ಮೊ ಏಳಮ್ಮ ... "

ಈ ಮಾತುಗಳು ಯಾರೋ ತನ್ನನ್ನು ಕರೆಯುತ್ತಿದ್ದಾರೆ ಎನ್ನಿಸಿತು.. ನಿಧಾನವಾಗಿ ಹಿಂದಿನ ಕಾಲದ ಸಿನಿಮಾ ಪರದೆ ಮೇಲಕ್ಕೆ ಹೋಗುವ ರೀತಿಯಲ್ಲಿ ಕಣ್ಣು ತೆರೆದುಕೊಂಡಿತು.. 

"ಸಾಹೇಬ್ರು ಕರೀತಿದ್ದಾರೆ ಬನ್ರೀ"

ಸಾಹೇಬರ ಕಚೇರಿಗೆ... ದಡ ದಡ ಎಂದು ಓಡಿದಳು... 

"ನಿಧಾನ ಕಣಮ್ಮ... ಅಲ್ಲಿ ಕಲ್ಲು ಚಪ್ಪಡಿ ಸಡಿಲವಾಗಿದೆ"  ಆ ಎಚ್ಚರಿಕೆಯ ದನಿ ಕಿವಿಗೆ ಬಿತ್ತೋ ಇಲ್ಲವೋ ದೇವರಿಗೆ ಗೊತ್ತು.. ಆದರೆ ವೀಣಾಳಿಗೆ ಮಾತ್ರ ಕೇಳಲಿಲ್ಲ ... 

"ಸರ್ ಒಳಗೆ ಬರಬಹುದಾ?" ದನಿಯತ್ತ ತಿರುಗಿದ ಸಾಹೇಬರು... "ಬನ್ರೀ.. ನೀವೇ ಆಲ್ವಾ ವೀಣಾ ಅಂದರೆ.. ಹಾ ಹೇಳಿ ಏನು ಸಮಾಚಾರ .. ನೋಡಿ ನನ್ನ ಸಾಹೇಬರು ಮೀಟಿಂಗ್ ಕರೆದಿದ್ದಾರೆ.. ನಿಮಗೆ ಹತ್ತು ನಿಮಿಷ ಕೊಡ್ತೀನಿ.. ಅದೇನು ಮಾಹಿತಿ ಬೇಕು ಪಟಕ್ ಅಂತ ಚಿಕ್ಕದಾಗಿ ಹೇಳಿ"

"ಸರ್.. ನಾನು ಗುರುಪ್ರಸಾದ್ ನಿರ್ದೇಶನದ ಎದ್ದೇಳು ಮಂಜುನಾಥ ಚಿತ್ರ ನೋಡುತ್ತಿದ್ದೆ.. "

"ರೀ ಮೇಡಂ .. ಕಥೆ ಬೇಡ.. ಸೀದಾ ವಿಷಯಕ್ಕೆ ಬನ್ನಿ"

"ಸರ್.. ಇದನ್ನ ಹೇಳಿದರೆ ಮಾತ್ರ ನಿಮಗೆ ವಿಷಯ ಅರ್ಥವಾಗೋದು.. ನೀವು ನನಗೆ ೬೦೦ ಸೆಕೆಂಡ್ಸ್ ಕೊಟ್ಟಿದ್ದೀರಾ.. ಈಗಾಗಲೇ ೫೦ ಸೆಕೆಂಡ್ಸ್ ಆಗಿ ಹೋಗಿದೆ.. ನಾ ಅಷ್ಟು ಬೇಗ ಮುಗಿಸ್ತೀನಿ"

"ಸರಿ.. ಏನಾದರೂ ಮಾಡಿಕೊಳ್ಳಿ.. ಹಾ ಬೇಗ ಹೇಳಿ .. ಹೆಚ್ಚು  ಸಮಯವಿಲ್ಲ"

"ಸರ್ ಆ ಚಿತ್ರದಲ್ಲಿ ಕಣ್ಣಿಲ್ಲದ ನಿರ್ದೇಶಕ.. ಕಥೆ ಹೇಳುತ್ತಿರುತ್ತಾನೆ.. ಅಣ್ಣಾವ್ರು  ೨೦೦೫ರಲ್ಲಿ ನಮ್ಮನ್ನೆಲ್ಲ ಬಿಟ್ಟು ಹೋದಮೇಲೆ .. ಅವರ ಕಣ್ಣನ್ನು ಇಬ್ಬರಿಗೆ ಹಾಕಿದರಂತೆ.. ಅವರ ವಿಳಾಸವನ್ನು ಹುಡುಕಿಕೊಂಡು ಹೋಗಿ ಆ ಅಭಿಮಾನಿ ದೇವರುಗಳ ಅಭಿಮಾನಿಯನ್ನು  ಕಂಡು ಬರುವ ಕಥೆ" 

"ಹೌದು ಅದನ್ನು ನಾನು ಕೇಳಿದ್ದೀನಿ .. ಅಂದರೆ ಆ ಚಿತ್ರವನ್ನು ನೋಡಿದ್ದೀನಿ.. ಅದಕ್ಕೂ ನಿಮಗೂ ಏನು ಸಂಬಂಧ ..  ?.. ಬೇಗ ಹೇಳಿ ಮೇಡಂ ಸಮಯವಿಲ್ಲ"

"ಸರ್ ಮುನ್ನೂರು ಸೆಕೆಂಡ್ಸ್ ಆಗಿದೆ.. ಇನ್ನೂ ಮುನ್ನೂರು ಸೆಕೆಂಡ್ಸ್ ಇದೆ.. "

"ಹಾ ಸರಿ ಸರಿ"

"ಸರ್ ಇದೆ ರೀತಿಯಲ್ಲಿ ನನ್ನ ಜೀವದ ಗೆಳತಿಯೊಬ್ಬಳ ದೇಹದ ಮುಖ್ಯ ಅಂಗಗಳನ್ನು ದಾನ ಮಾಡಿದ್ದಾರೆ. ಅದನ್ನು ಯಾರ ದೇಹಕ್ಕೆ ಅಳವಡಿಸಿದ್ದಾರೋ ಅವರ ವಿಳಾಸ ಬೇಕಿತ್ತು ಸರ್.. ವಿದೇಶದಲ್ಲಿ ಈ ರೀತಿಯ ಅಂಗಗಳನ್ನು ದಾನ ಕೊಟ್ಟ ಹಾಗೂ ಪಡೆದ   ವೆಬ್ ಸೈಟ್ ನಲ್ಲಿ ಹಾಕುತ್ತಾರೆ ಎಂದು ಓದಿದ್ದೆ.. ದಯಮಾಡಿ ನನಗೆ ಆ ವಿವರ ಬೇಕು.. ಸರ್ ಇಷ್ಟೇ ನನ್ನ ಕೋರಿಕೆ.. ನೋಡಿ ಸರ್ ನನ್ನ ಕೋರಿಕೆಯ ಬಗ್ಗೆ ಪೂರ್ಣ ವಿವರ ಈ ಅರ್ಜಿಯಲ್ಲಿದೆ.. ಅಷ್ಟು ಮಾಹಿತಿ ಒದಗಿಸಿದರೆ ಸಾಕು.. ನೋಡಿ ಸರ್ ಸರಿಯಾಗಿ ನೀವು ಕೊಟ್ಟ ೬೦೦ ಸೆಕೆಂಡ್ಸ್ ಒಳಗಡೆಯೇ ಮುಗಿಸಿದ್ದೇನೆ.... "

"ರೀ ರಾಜಪ್ಪ.. ನೋಡ್ರಿ.. ಈ ಮೇಡಂ ಅರ್ಜಿಯನ್ನು.. ಒಮ್ಮೆ ಓದಿ ಎಲ್ಲಾ ವಿವರಗಳು ಇವೆಯೇ ಎಂದು ಹೇಳಿ.. ಮೇಡಂ ನಾನು ಒಂದು ಮೀಟಿಂಗಿಗೆ ಹೋಗಲೇ ಬೇಕು.. ನಿಮಗೆ ಆಗಲೇ ಹೇಳಿದ್ದೇನೆ.. ಇವರು ರಾಜಪ್ಪ ನಿಮ್ಮ ಅರ್ಜಿಯನ್ನು ಪರಿಶೀಲಿಸಿ ನನಗೆ ಹೇಳುತ್ತಾರೆ.. "

"ಸರ್ ನಾ ಎಷ್ಟು ಹೊತ್ತು ಕಾಯಬೇಕು.. ಇಲ್ಲಿಯೇ ಇರುತ್ತೇನೆ.. ನೀವು ಹೋಗಿ ಬನ್ನಿ.. ನಾ ರಾಜಪ್ಪ ಸರ್ ಜೊತೆಯಲ್ಲಿಯೇ ಇರುತ್ತೇನೆ"

"ರೀ ಮೇಡಂ ನಿಮಗೇನು ತಲೆ ಕೆಟ್ಟಿದೆಯಾ... ನೀವು ಬರೆದು ಕೊಟ್ಟ ಅರ್ಜಿಯನ್ನು ಓದಿ ಎಲ್ಲಾ ವಿವರಗಳು ಸರಿ ಇದೆಯೇ ಎಂದು ನೋಡುವುದಷ್ಟೇ ರಾಜಪ್ಪ ಅವರ ಕೆಲಸ.. ನನ್ನ ಮೇಲಾಧಿಕಾರಿಗಳ ಹತ್ತಿರ ಇದರ ಬಗ್ಗೆ ಚರ್ಚೆ ಮಾಡಬೇಕು.. ಅವರು ಒಪ್ಪಿದ ಮೇಲೆ ಮುಂದಿನ ಮಾತುಕತೆ.. "

ಸರ್.. ನನಗೆ.. ಸರ್ .. ಬೇಕಾಗಿತ್ತು... ಸರ್.. ನೋಡಿ ಇಲ್ಲಿ ಒಮ್ಮೆ"

ವೀಣಾಳ ಮಾತುಗಳು ಸಾಹೇಬರ ಕಿವಿಯ ಮೇಲೆ ಬಿತ್ತೋ ಇಲ್ಲವೋ.... ಅವರು ತನ್ನ ಮೇಲಾಧಿಕಾರಿಗಳ ಕಚೇರಿಯತ್ತ ಹೆಜ್ಜೆ ಹಾಕುತ್ತಾ ಹೋದರು.. 

ಇತ್ತ ರಾಜಪ್ಪ ಬೀಡೀ ಹಚ್ಚಿಕೊಂಡು ಕಾಫಿಗೆ ಅಂತ ಹೊರಟ.. 

ಮತ್ತೆ ಅರಳೀಮರವೇ ನೆರಳಾಯಿತು ವೀಣಾಳಿಗೆ...