Sunday, September 28, 2014

ದನಿ.. ಧ್ವನಿ... ಮಾರ್ಧನಿ.. "ಜನದನಿ"

ಒಂದೂರಿನಲ್ಲಿ   ಬಹಳ ವರ್ಷಗಳ ಕಾಲ ಮಳೆ ಬಂದಿರಲಿಲ್ಲ.. ಊರಿನ ಮುಖಂಡರೆಲ್ಲ ಸೇರಿ ಸಭೆ ನಡೆಸಿ.. ಊರಿನ ಕೆಲ ಹಿರಿಯ ಧಾರ್ಮಿಕ ಅನುಯಾಯಿಗಳ ಸಲಹೆಯಂತೆ.. ಬೃಹದಾಕಾರದ ಗ್ರಾಮ ದೇವರಿಗೆ ಕ್ಷೀರಾಭಿಷೇಕ ನೆರೆವೆರಿಸಲು ತೀರ್ಮಾನಿಸಿದರು.

ಅಪಾರವಾದ ಕ್ಷೀರ ಬೇಕಾಗಿದ್ದರಿಂದ.. ಆಗಲೇ ನೀರಿಲ್ಲದೆ ಬಸವಳಿದಿದ್ದ ಗ್ರಾಮಸ್ಥರಿಗೆ ಆ ಮಟ್ಟದ ಹಾಲನ್ನು ಹೊಂದಿಸಲು ಕಷ್ಟ ಎಂದು ಅರಿತ ಮುಖಂಡರು.. ಪ್ರತಿ ಮನೆಯಿಂದ ಒಂದು ಲೋಟ ಹಾಲು ಕೊಡಬೇಕು ಮತ್ತು ಅದನ್ನು ಗ್ರಾಮದ ಮಧ್ಯೆದಲ್ಲಿ ಇಟ್ಟಿರುವ ಒಂದು ದೊಡ್ಡ ಕೊಳಗಕ್ಕೆ ಹಾಕಬೇಕು ಎಂದು ಆದೇಶಿಸಿದರು... 

ಮರುದಿನ ಬೆಳಿಗ್ಗೆಯಿಂದ ಶುರುವಾಯಿತು.. ಸರತಿಯಲ್ಲಿ ಬಂದು ಪ್ರತಿ ಮನೆಯವರು ಆ ಕೊಳಗಕ್ಕೆ ತಂದು ಹಾಕುತ್ತಾ ಬಂದರು.  ಸಂಜೆಯ ಹೊತ್ತಿಗೆ ಆ ಊರಿನ ಕಡೆಯ ಮನೆಯವನು.. ತುಂಬಾ ಹೊತ್ತು ಯೋಚಿಸಿ.. ಇಷ್ಟು ಹೊತ್ತಿಗೆ ಗ್ರಾಮದ ಎಲ್ಲರೂ ಹಾಕಿ ಕೊಳಗವನ್ನು ತುಂಬಿದ್ದಾರೆ.. ನಾನೊಬ್ಬ ಹಾಲು ಹಾಕದಿದ್ದರೆ ಏನು ಆಗುವುದಿಲ್ಲ.. ಆದರೆ ಹಾಕದೆ ಹೋದರೆ ಮುಖಂಡರ ಆಗ್ರಹಕ್ಕೆ  ತುತ್ತಾಗಬೇಕಾಗುತ್ತದೆ ಎಂದು ಹೆದರಿ.. ಒಂದು ಲೋಟ ಹಾಲಿನ ಬದಲಾಗಿ ನೀರನ್ನು ಹಾಕಿ ಹೋದನು.. 

ಪೂಜೆ ಶುರುವಾಯಿತು.. ಅಭಿಷೇಕದ ಸಮಯವಾಯಿತು.. ಆ ಕೊಳಗವನ್ನು ಕಷ್ಟಪಟ್ಟು ದೇವಾಲಯದ ಬಳಿ ತಂದು.. ಅಭಿಷೇಕಕ್ಕೆ ಸಿದ್ಧತೆ ಮಾಡಿಕೊಂಡರು.. ನೋಡಿದರೆ ಇಡಿ ಕೊಳಗದಲ್ಲಿ ಬರಿ ನೀರೆ ನೀರು.. 

ಗಾಬರಿಯಾದ ಮುಖಂಡರು ಎಲ್ಲರಿಗೂ ಜೋರಾದ ದನಿಯಲ್ಲಿ ಕೇಳಿದಾಗ.. ಒಬ್ಬೊಬ್ಬರು ನಾನೊಬ್ಬ ನೀರು ಹಾಕಿದರೆ ಯಾರಿಗೂ ತಿಳಿಯುವುದಿಲ್ಲ ಎಂದು ಯೋಚಿಸಿ ಎಲ್ಲರೂ ನೀರೆ ಹಾಕಿರುತ್ತಾರೆ,.. 

ಹೀಗೆ ನಾನೊಬ್ಬ ಏನು ಮಾಡಲು ಸಾಧ್ಯ ಎಂದು ಸುಮ್ಮನೆ ಕೂತರೆ ಯಾವ ಸಮಸ್ಯೆಯೂ ಬಗೆ ಹರಿಯುವುದಿಲ್ಲ.. ನಾ ಎಂಟನೆ ತರಗತಿಯಲ್ಲಿ ಓದಿದ ಪಾಠ "A Spark Negelected Burnt The House" ನೆನಪಿಗೆ ಬಂತು. 

ಒಂದು ಚಿಕ್ಕ ಆಂಧೋಲನ ಸಣ್ಣ ಕಿಡಿಯಂತೆ ಮಿನುಗಿ ಬೃಹತ್ ಜ್ಯೋತಿಯಾಗಿ ಬೆಳೆಯಬೇಕು.. ಬೆಳೆಯುತ್ತದೆ.. 

ಸಮಾಜದಲ್ಲಿ ನಡೆಯುತ್ತಿರುವ ಶೋಷಣೆ, ಲೈಂಗಿಕ ದೌರ್ಜನ್ಯ.. ತಾತ್ಸಾರದ ಪ್ರತಿಕ್ರಿಯೆ.. ಅಯ್ಯೋ ಹೌದಾ.. ನಮ್ಮ ಮನೆಯಲ್ಲಿ ಹಾಗಾಗುವುದು ಬೇಡಪ್ಪ ಎಂದು ಸುಮ್ಮನೆ ಬೇಡಿಕೊಳ್ಳದೆ.. ಅದನ್ನು ತೊಡೆದು ಹಾಕಲು ಸಾಧ್ಯವಾಗದಿದ್ದರೂ ಆ ವಿಚಾರಗಳ ಬಗ್ಗೆ ಜನಗಳಲ್ಲಿ ಪ್ರಜ್ಞೆ ಮೂಡಿಸಿ.. ಹೌದು ಇದರ ಬಗ್ಗೆ ತಂದೆ ತಾಯಿಗಳು ಗಮನ ಹರಿಸಬೇಕು ಎನ್ನುವ ಮಟ್ಟಕ್ಕೆ ಕರೆತರುವುದು ನಿಜಕ್ಕೂ ಶ್ಲಾಘನೀಯ ಕ್ರಮ. 

ನಮ್ಮ ಸಮಾಜ ಆಮೆಯಂತೆ ನಿಧಾನವಾಗಿ ಪ್ರಗತಿ ಪರ ಹೆಜ್ಜೆ ಹಾಕುತ್ತಿದೆ ನಿಜಾ .. ಚಂದ್ರ ಮಂಡಲಕ್ಕೆ ಕೈ ಚಾಚಿಯಾಯಿತು, ಮಂಗಳ ಗ್ರಹದಲ್ಲೂ ಹೆಜ್ಜೆ ಇಡಲು ಅನುವಾಗುತ್ತಿರುವ ಸಮಯ ಇದು.. 

ವೇಗ ಮುಖ್ಯವಲ್ಲ ಧೃಡತೆ.. ಆಮೆಯ ಚಿಪ್ಪಿನಂತೆ 

ಆದರೂ ಈ ದೌರ್ಜನ್ಯ, ಶೋಷಣೆ,  ಹಿಂಡಿ ಹಿಪ್ಪೆ ಮಾಡಲು ನಿಂತ ಪೆಡಂಭೂತದಂತ ಸಮಸ್ಯೆಗಳು ಅಷ್ಟಪದಿಯ ಹಾಗೆ ಈ ಸಮಾಜವನ್ನು ತನ್ನ ಕಬಂಧ ಬಾಹುಗಳಿಂದ ಹಿಡಿದಿಟ್ಟುಕೊಳ್ಳುತ್ತಿದೆ. 

ಅಷ್ಟಪದಿ ನಗುತ್ತಿದ್ದರೂ ಅದರ ಬಾಹುಗಳ ಒಳಗೆ ಸಿಕ್ಕಾಗ ನರಳುವುದೇ ದಾರಿ 


ಮನೆಯಲ್ಲಿ ಸೊಳ್ಳೆ ಹೆಚ್ಚಾದರೆ.. ಸೊಳ್ಳೆ ಓಡಿಸುವ ಯಂತ್ರವನ್ನು ಹಾಕಿಕೊಳ್ಳುತ್ತೇವೆ.. 

ಸ್ವಚ್ಛ ಸಮಾಜಕ್ಕಾಗಿ ಬೇಕೇ ಬೇಕು ಸೊಳ್ಳೆಗಳನ್ನು ಓಡಿಸುವ ಯಂತ್ರ 

ಹಾಗೆಯೇ ಈ ಸಮಾಜಕ್ಕೆ ಸೊಳ್ಳೆ ಓಡಿಸುವ ಯಂತ್ರ ಬೇಕು.. ಮತ್ತು ಬೇಕೇ ಬೇಕು.. ಇಂಥಹ ಸಮಯದಲ್ಲಿ ಮೂಡಿ ಬಂದಿರುವ ದನಿಯೇ ಈ "ಜನದನಿ"

ಜನದನಿ.. ದನಿಯ ಜೊತೆಯಲ್ಲಿ ಜನಗಳು !!!


ಆಗಲೇ ಚಿಕ್ಕ ಚಿಕ್ಕ ಹೆಜ್ಜೆ ಇಡುತ್ತಾ ಅನೇಕ ತಮ್ಮ ಸೀಮಿತ ಚೌಕಟ್ಟಿನಲ್ಲಿ ಈ ವಿಷಯಗಳ ಬಗ್ಗೆ ನಾಗರೀಕರಲ್ಲಿ ಪ್ರಜ್ಞೆ ಮೂಡಿಸುವ ಕಾರ್ಯ ನಡೆಸುತ್ತಾ ಬಂದಿರುವ ಶ್ರೀಮತಿ ಜಯಲಕ್ಷ್ಮಿ ಪಾಟೀಲ್ ಮೇಡಂ ಅವರು ಇದೆ ಮನಸ್ಸು ಹೃದಯ ಹೊಂದಿರುವ ತಮ್ಮ ಗೆಳೆಯ ಗೆಳತಿಯರ ಜೊತೆಗೂಡಿ ನಿಲ್ಲಿಸಿರುವ ಒಂದು ತಾಣ "ಜನದನಿ"  

ಹೀಗೆ ಅನುಸರಿಸಿದರೆ ಚನ್ನಾ 


ಈ ವಿಚಾರವನ್ನು ನಾಗರೀಕರ ಗಮನಕ್ಕೆ ತರುವ ಒಂದು ಸುಂದರ ಯತ್ನವಾಗಿ ಮೂಡಿ ಬರಲು ಇನ್ನೊಂದು ದಿಟ್ಟ ಹೆಜ್ಜೆ ಇಟ್ಟದ್ದು ಶನಿವಾರ ೨೭ನೆ ತಾರೀಕು ೨೦೧೪ ರಂದು.. ತಮ್ಮ ಅನೇಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಮಾಜಮುಖಿಯಾಗಿ ಸಕ್ರಿಯರಾಗಿರುವ ಶ್ರೀಮತಿ ರೂಪ ಸತೀಶ್ ಅವರ "ಬ್ಲಾಸಂ" ಎಂಬ ನಾಗರಭಾವಿಯ ಶಾಲೆಯಲ್ಲಿ ಏರ್ಪಡಿಸಿದ್ದ ಒಂದು ಸಂವಾದಕ್ಕೆ ನಾನು ಹೋಗಿದ್ದೆ. 

ರೂಪು ರೇಷೆಗಳು ಸಿದ್ಧವಾಗುತ್ತಿದ್ದವು 

ದಿನ ಪತ್ರಿಕೆಗಳು, ದೃಶ್ಯ ಮಾಧ್ಯಮಗಳಲ್ಲಿ ಬರುವ ವೈಭವಿಕೃತ ಸಮೀಕ್ಷೆ, ಸಂವಾದ ಇವಕ್ಕಿಂತ ಈ ಸಂವಾದ ಹೆಚ್ಚು ವಿಚಾರವನ್ನು, ಗಮನಿಸಬೇಕಾದ ಅಂಶಗಳನ್ನು ಹೊರತಂದಿತು. ಸಂಕಟ ಬಂದಾಗ ವೆಂಕರಮಣ ಎನ್ನುವುದಕ್ಕಿಂತ ಸಂಕಟ ಬರಮಾಡಿಕೊಳ್ಳದೆ ವೆಂಕಟರಮಣ ನಮ್ಮ ರಕ್ಷಣೆಗೆ ನಿಲ್ಲಲಿ ಎನ್ನುವ ಆಶಯ ಹೊತ್ತ ಸಂವಾದ ಕಾರ್ಯಕ್ರಮ ಇದಾಗಿತ್ತು ಎಂದು ಹೇಳಲು ಇಷ್ಟ ಪಡುತ್ತೇನೆ. 

ಜೀವನ ಚಕ್ರ ಚಿತ್ರದಲ್ಲಿ ವಿಷ್ಣು ಹೇಳುತ್ತಾರೆ.. ಹುಡುಗಿ ಬೆಂಕಿನ ಕಡ್ಡಿ ಇದ್ದ ಹಾಗೆ.. ಹುಡುಗ ಬೆಂಕಿ ಪೊಟ್ಟಣ ಇದ್ದ ಹಾಗೆ.. ಬೆಂಕಿ ಹತ್ತಿಕೊಂಡಾಗ ಕಡ್ಡಿ ಉರಿಯುತ್ತದೆ.. ಹಾಳಾಗುತ್ತದೆ ಹೊರತು ಬೆಂಕಿ ಪೊಟ್ಟಣ  ಅಲ್ಲಾ.. ಪರುಷ ಪ್ರಧಾನ ಸಮಾಜವಾದರೂ 
ಸ್ತ್ರಿ, ಮಹಿಳೆ, ಬಾಲಿಕೆ, ಹುಡುಗಿ, ಹೆಂಗಸು ಹೀಗೆ ನಾನಾ ಪದಗಳಲ್ಲಿ ಹೊರಹೊಮ್ಮುವ ಸ್ತ್ರೀಲಿಂಗ ಪ್ರಭೇದವನ್ನು ರಕ್ಷಿಸುವ, ಕಾಪಾಡುವ, ಜತನ ಮಾಡುವ ಹೊಣೆಗಾರಿಕೆ ಪ್ರತಿಯೊಬ್ಬರದು, 

"ನ ಸ್ತ್ರೀ ಸ್ವಾತಂತ್ರಂ ಅರ್ಹತಿ" ಎನ್ನುವ ಮನು ಶಾಸ್ತ್ರದಲ್ಲಿ ಹೇಳಿದ್ದರೂ ಅದೇ ಶಾಸ್ತ್ರದಲ್ಲಿ "ಯತ್ರ ನಾರ್ಯಾಸ್ತು ಪೂಜ್ಯತೇ ರಮಂತೇ ತತ್ರ ದೇವತಾಃ " ಎಂದೂ ಇದೆ. 

ಜನ್ಮ ಕೊಡುವ ತಾಯಿ, ಮಮತೆ ತೋರುವ ಅಕ್ಕ ತಂಗಿ, ಪ್ರೀತಿ ತೋರುವ ವಂಶ ಬೆಳೆಸುವ ಮಡದಿ, ಮನೆ ಬೆಳಗುವ ಸೊಸೆ, ಮಗಳು ಎಲ್ಲವೂ ಸ್ತ್ರೀ ರೂಪದ ಅನೇಕ ವಿಧಗಳು.  

ಗಂಡು ಸಂತಾನವನ್ನು ನಾವು ಹೇಗೆ ಜತನ ಮಾಡುತ್ತೇವೆಯೋ ಹಾಗೆಯೇ ಜನುಮ ಕೊಡುವ, ಸಂತಾನ ಮುಂದೆ ಬೆಳೆಸುವ ಹೆಣ್ಣು ಮಗುವಿಗೂ ಅಷ್ಟೇ ರಕ್ಷಣೆ ಬೇಕು.  ಎರಡು ಪ್ರಭೇದಗಳು ನಮ್ಮ ಎರಡು ಕಣ್ಣುಗಳು ಇದ್ದಾ ಹಾಗೆ ಯಾವುದು ಹೆಚ್ಚಲ್ಲ ಯಾವುದು ಕಡಿಮೆಯಲ್ಲ.. ಒಂದು ಕಣ್ಣು ಇಲ್ಲದೆ ಹೋದರೆ ೯೦ ಡಿಗ್ರಿ ನೋಟ ಕಳೆದು ಕೊಳ್ಳುತ್ತೇವೆ.

ಇಬ್ಬರನ್ನೂ ಸಮಾನಾಗಿ ಜತನ ಮಾಡಬೇಕು. ಎರಡೂ ನಮ್ಮ ಜೀವಗಳೇ ಅಲ್ಲವೇ? ಒಂದು ಸರಿಯಿಲ್ಲದಿದ್ದರೆ ಇನ್ನೊಂದಕ್ಕೆ ಪೆಟ್ಟು ಅಥವಾ ಮೂಗು ಒಂದೇ ಆದರೂ ಅದರಲ್ಲಿನ ಒಂದು ಕಡೆ ಕಟ್ಟಿಕೊಂಡು ಬ್ಲಾಕ್ ಆದರೂ ಇನ್ನೊಂದಕ್ಕೆ ಉಸಿರು ಭಾರ, ತೊಂದರೆ...(ಈ ಮಾತುಗಳನ್ನು  ಹೇಳಿ ಲೇಖನಕ್ಕೆ ಒಂದು ಸುಂದರ ರೂಪ ಕೊಟ್ಟ ಜಯಲಕ್ಷ್ಮಿ ಪಾಟೀಲ್ ಮೇಡಂ ಅವರಿಗೆ ಧನ್ಯವಾದಗಳು)  .  

ಕಟ್ಟುಪಾಡುಗಳನ್ನು ಎರಡು ವರ್ಗಕ್ಕೂ ಸಮಾನವಾಗಿ ಹಾಕಬೇಕು. ಅದೇ ಸ್ವಾಸ್ಥ್ಯ ಸಮಾಜಕ್ಕೆ ನಾವೆಲ್ಲರೂ ಕೊಡುವ ಕೊಡುಗೆ

ಒಂದು  ಸುಂದರ ಜನಪರ ಸಂವಾದ 


ಹೌದು ಇಂಥಹ ಒಂದು ಅಪೂರ್ವ ವಿಷಯವನ್ನು ಮನತಾಕುವಂತೆ ವಿವರಿಸಿದ ಶ್ರೀಮತಿ ಜಯಲಕ್ಷ್ಮಿ ಪಾಟೇಲ್, ಅವರಿಗೆ ಸಂವಾದದಲ್ಲಿ ಸಹಕರಿಸಿದ "ಜನದನಿ" (ದನಿ ಇದ್ದವರೆಲ್ಲರೂ ಜನದನಿಯ ತಂಡದವರೇ) ತಂಡದ ಆತ್ರಾಡಿ ಸುರೇಶ ಹೆಗಡೆ, ಸುಪ್ರೀತ್, ಸುಧೀರ್, ನಾಗಾರ್ಜುನ್, ಸಂಯುಕ್ತ , ಮೇಘ, ವಿನಯ್ ಇವರೆಲ್ಲರಿಗೂ ಮನಸಾರೆ ವಂದಿಸುತ್ತೇನೆ ಈ ಬರಹದ ಮೂಲಕ.  ಇದರ ಜೊತೆಯಲ್ಲಿ ಇಡಿ ಕಾರ್ಯಕ್ರಮವನ್ನು ಆಯೋಜಿಸಿ ಸಹಕರಿಸಿದ ರೂಪ ಸತೀಶ್ ಮತ್ತು ಅವರ ತಂಡಕ್ಕೆ ಧನ್ಯವಾದಗಳು. 
ಮೊಳಗಲಿ, ಬೆಳಗಲಿ ಜನದನಿಯ ಧ್ವನಿಯು ಮಾರ್ಧನಿಯಾಗಲಿ.. !!!

ಮೊಳಗಲಿ, ಬೆಳಗಲಿ ಜನದನಿಯ ಧ್ವನಿಯು ಮಾರ್ಧನಿಯಾಗಲಿ.. !!!

Thursday, September 25, 2014

ಚಲಾವಣೆಗಾಗಿ ಬದಲಾವಣೆ V/s ಬದಲಾವಣೆಯಲ್ಲಿ ಚಲಾವಣೆ !!!

ಇಬ್ಬರೂ ಕೂತು ಹಿಂದಿ ಭಾಷೆಯ ಹಳೆಯ ಚಿತ್ರ ಗೋಲ್ ಮಾಲ್ ನೋಡುತ್ತಿದ್ದರು.. 

ಲಕ್ಕಿ ಪಾತ್ರಧಾರಿ,  ನೌಕರಿ ಕೊಡುತ್ತೇನೆ ಎಂದು ಕರೆದ ಯಜಮಾನನ ಬಳಿ ಬಂದಾಗ, ಮಾತಿಗೆ ಮಾತು ಬಂದು ಹೇಳುತ್ತಾನೆ.. ನೀವೆಲ್ಲ ಹಿರಿಯರು ಭವಿಷ್ಯ ನೋಡುವ ಬದಲು ಭೂತ ಕಾಲದಲ್ಲಿ ಇರುತ್ತೀರ ಅಷ್ಟೊತ್ತಿಗೆ ನಿಮ್ಮ ಹಿಂದೆ ಸೂರ್ಯ ಹುಟ್ಟಿ ಆಗಿರುತ್ತದೆ... ಹೆಚ್ಚು ಕಮ್ಮಿ ಇದೆ ಅರ್ಥ ಬರುವ ರೀತಿಯಲ್ಲಿ ಸಂಭಾಷಣೆ ಇದೆ.. ಒಟ್ಟಾರೆ ಅರ್ಥ.. ಜಗತ್ತಿನ ಜೊತೆಯಲ್ಲಿ ಹೆಜ್ಜೆ ಹಾಕುತ್ತಿಲ್ಲ ಎಂದು.. !

ಆ ದೃಶ್ಯವನ್ನು ನೋಡುತ್ತಾ.. "ಈಗಲಾದರೂ ಬದಲಾಗೋ... ಈ ಜಗತ್ತು ವ್ಯಾಪಾರಿ ಪ್ರಪಂಚ ಆಗಿ ಬಿಟ್ಟಿದೆ.. ಅಂತಃಕರಣ, ಪ್ರೀತಿ, ವಿಶ್ವಾಸ, ಕರುಣೆ, ಮಮಕಾರ ಬರಿ ಪುಸ್ತಕದ ಹಾಳೆಗಳಲ್ಲಿ ಭದ್ರವಾಗಿದೆ.. ನೀ ಬದಲಾಗಲೇ ಬೇಕು.. ನಿನ್ನ ಈ ಹಳೆಜಮಾನದ ಗುಣವನ್ನು ಯಾರೂ ಮೆಚ್ಚುವುದಿಲ್ಲ.. ಕೆಲವು ದಿನಗಳಷ್ಟೇ ಚೆನ್ನಾ.. ನಂತರ.. ಅಯ್ಯೋ ಬಿಡು ಇದ್ದಿದ್ದೆ ಇದು ಎನ್ನುತ್ತಾರೆ..ಇದು ವ್ಯಾಪಾರಿ ಜಗತ್ತು ಚೆನ್ನಾಗಿರುವುದನ್ನು ಮಾತ್ರ ಖರೀದಿ ಮಾಡುತ್ತಾರೆ.. " ಹೀಗೆ ಸಾಗಿತ್ತು ಬದಲಾವಣೆಯ ಕೆಲವು ನಿಯಮಗಳ ಪಾಠ!!!

ಯಾಕೋ ಮನಸ್ಸಿಗೆ ಗಲಿಬಿಲಿಗೊಂಡು..  ದೂರದರ್ಶನ ಬಂದ್ ಮಾಡಿ.. ರೇಡಿಯೋ ಹಾಕಿದರು.. "ಏನು ಮಾಡಲಿ ನಾನು ಹೇಗೆ ಹೇಳಲಿ ಕಣ್ಣುಗಳಿದ್ದು ಕುರುಡರ ಹಾಗೆ ಹಲವರು ನಡೆಯುವರು.. ಎಲ್ಲಾ ಬಲ್ಲೆನು ಎನ್ನುತ ಹೋಗಿ ಹಳ್ಳಕೆ ಬೀಳುವರು"

ಮುಸಿ ನಗುವ ಸರದಿ ಇನ್ನೊಬ್ಬನದಾಗಿತ್ತು.. ಯಾಕೋ ಮನಸ್ಸು ಮೂವತ್ತಾರು-ಮೂವತ್ತೆಂಟು ವರ್ಷಗಳ ಹಿಂದೆ ಓಡಿತು.. 


* * * * * * * * * * * * * * * * * * * * * * * * * * * * 
ವಿಶಾಲವಾದ ಕಾಂಪೌಂಡ್.. ಅನೇಕ ತೆಂಗಿನಮರಗಳ ಸಾಲುಗಳು.. ಚಪ್ಪಡಿ ಕಲ್ಲು ಬೆಂಚು.. ದೊಡ್ಡ ಚಿಕ್ಕ ಮಕ್ಕಳೆಲ್ಲ ಆಟಾಡುತ್ತಿದ್ದಾರೆ.. 

ದಬಾರ್.. ದುಡುಂ ದುಡುಂ.. ಹಾ ಹಾಂ ಹಾಂ.... ಮಗು ಜೋರಾಗಿ ಅಳುತ್ತಿದೆ.. ತಕ್ಷಣ.. ಆ ಮಗುವಿನ ಸಹೋದರಿ.. ಅಯ್ಯೋ ಬಿದ್ದೆಯ ಕಂದಾ.. ಸಮಾಧಾನ ಮಾಡಿ ಮತ್ತೆ ಕಲ್ಲು ಬೆಂಚು.. ತೆಂಗಿನ ಮರ ಮಕ್ಕಳ ಆಟ.. ಹೀಗೆ ಸಾಗಿತ್ತು.. 


ನನಗಾಗಿ ಕಾದಿದ್ದ ಬೆಂಚು (ಮೂಲ ಸ್ಥಾನದಿಂದ ಪಲ್ಲಟವಾಗಿದ್ದರೂ ನೆನಪಿಂದ ಅಲ್ಲ)

ಆ ಕಲ್ಲು ಬೆಂಚು.. ಕಲ್ಲು ಬೆಂಚಿನ ಮೇಲೆ ಮತ್ತೆ ಕೂರುವ ನೆನಪು.. ಇಲ್ಲವೇ ಕೂತಿದ್ದ ನೆನಪು ಅಚ್ಚಳಿಯದೆ ಹಾಗೆಯೇ ನಿಂತಿತ್ತು.. ಕಾರಣ ಬೇಸಿಗೆಯಲ್ಲಿ ಆ ಕಲ್ಲು ಎಷ್ಟು ಕಾಯುತ್ತಿತ್ತೋ ಅದಕ್ಕಿಂತ ಹೆಚ್ಚೇ ಬಿಸಿಯಾಗಿ ಹೊಟ್ಟೆಯು ಕಾದಿರುತ್ತಿತ್ತು!!!


ಅದೇ ಕಲ್ಲು ಬೆಂಚಿನ ಕೂತಾಗ ಮೈ ಮನ ಹಾಯ್ ಎಂದಿತು !!!

* * * * * * * * * * * * * * * * * * * * * * * * * * * * *
ಕೆಲವು ನಿವಾಸಗಳು ಅಭೂತಪೂರ್ವ ಘಟನೆಗಳಿಂದ ಮನಕ್ಕೆ ಮುದ ನೀಡಿದರೆ.. ಕೆಲವು ನಿವಾಸಗಳು ಮರೆಯಲಾರದ ಪಾಠಗಳನ್ನೂ, ಮರೆಯಬಾರದ ನೆನಪನ್ನು ಒತ್ತಿ ಬಿಟ್ಟಿರುತ್ತವೆ.. 


ಬದುಕಿಗೆ ಅರ್ಥವತ್ತಾದ ಪಾಠ ಕಳಿಸಿದ ಶಿವಮೊಗ್ಗೆಯ ಬೀದಿ!

ಅಂಥಹ ಒಂದು ನಿವಾಸ.. ಶಿವಮೊಗ್ಗೆಯ ತುಮಕೂರು ಶಾಮರಾವ್ ರಸ್ತೆಯ ಒಂದು ದೊಡ್ಡ ವಠಾರ.. ಎದುರು ಬದಿರು ನಾಲ್ಕು ನಾಲ್ಕು ಮನೆಗಳ ಕಾಂಪೌಂಡ್ ಅದು.. 


ಬದಲಾಗಿದೆ.. ಹೌದು ಆದರೆ ಅದು ತೋರಿದ್ದ ನೀತಿ ನಿಯಮ ನಿಜಾಯಿತಿ... ಹಾಗೆಯೇ ಇದೆ !!!

ಊಟ ಬಟ್ಟೆಗೆ ಅಲ್ಪ ಸ್ವಲ್ಪ ತೊಂದರೆ.. ಅದಕ್ಕಿಂತ ಹೆಚ್ಚಾಗಿ ಆ ಮೆನಯಲ್ಲಿ ನಲಿದ ಕಳೆದ ಸುಮಾರು ಒಂದೂವರೆ ಅಥವಾ ಎರಡು ವರ್ಷಗಳು ಅಬ್ಬಾ ಎನ್ನುವಂಥಹ ಪಾಠ ಕಲಿಸಿವೆ.. 


ಬಾಲ್ಯದ  ನೆನಪನ್ನು ಅರಳಿಸಿದ ರಸ್ತೆ ಮತ್ತೊಮ್ಮೆ ಕಣ್ಣ ಮುಂದೆ 

"ತುತ್ತು ಅನ್ನಾ ತಿನ್ನೋಕೆ ಬೊಗಸೆ ನೀರು ಕುಡಿಯೋಕೆ ತುಂಡು ಬಟ್ಟೆ ಸಾಕು" ಎನ್ನುವ ಜಿಮ್ಮಿಗಲ್ಲಿನ ಹಾಡಿನಂತೆ ಸಾಗಿತ್ತು ಜೀವನ.. 

ಆ ಕಾಂಪೌಂಡ್ ಮಾಲೀಕನ ಮಡದಿ.. ಅಯ್ಯೋ ನೆಲದ ಮೇಲೆ ಮಲಗಿ ಬಿಟ್ಟಿದೆಯಲ್ಲಾ ಪಾಪ ತಲೆನೋವು ಬಂದು ಬಿಡುತ್ತೆ ಕಣ್ರೀ ಮೊದಲು ಊಟ ಮಾಡಿಸಿ ಎಂದು  ಮನೆಯಲ್ಲಿ ಉಳಿದ ಆಹಾರ ಕೊಡುವುದು!!!

ಅಮ್ಮನ ಬರುವಿಕೆಗಾಗಿ ಮನೆಯ ರಸ್ತೆಯ ಅಂಚಿನಲ್ಲಿದ್ದ ಅರಳಿಕಟ್ಟೆಯಲ್ಲಿ ಕಾದ ಹೊಟ್ಟೆಯನ್ನು ಮುಂದಿಟ್ಟುಕೊಂಡು ತಮ್ಮನ ಜೊತೆಯಲ್ಲಿ ಕಾಯುವುದು.. ಅದೇ ಬಣ್ಣದ ಸೀರೆ ಕಂಡರೆ ಸಾಕು ಅಮ್ಮ ಬಂದರು ತಿಂಡಿ ತಂದರು ಎನ್ನುವ ಮನದಾಳದ ತಳಮಳ ಹೊರಬರಲು ತುದಿಗಾಲಲ್ಲಿ ಕೂರುತ್ತಿತ್ತು.. !

ಇಂಥಹ ವಿಷಮ ಪರಿಸ್ಥಿತಿಯಲ್ಲೂ ಬೆಂಗಳೂರಲ್ಲಿ ಸ್ಥಿರವಾಗಿ ನೆಲೆಕಾಣಲು ಕಷ್ಟ ಪಡುತ್ತಿದ್ದ ಅಪ್ಪ ತಿಂಗಳ ಮೊದಲಲ್ಲಿ ಕಳಿಸುವ ಹಣಕ್ಕೆ ಕಾಯುತ್ತಾ ... ಅದು  ಬಂದೊಡನೆ ಕಾಫಿ ಪುಡಿ, ಸಕ್ಕರೆ, ಒಂದು ಕನ್ನಡಿ, ಒಂದು ಪೌಂಡ್ ಬ್ರೆಡ್.. ಕಾಯಂ ಆಗಿ ಬರುತ್ತಿದ್ದವು.. 

ಬ್ರೆಡ್ ಸಕ್ಕರೆ ಆ ಕಾಲದಲ್ಲಿ ಒಂದು ಹೆಮ್ಮೆಯ ಸಂಕೇತವಾಗಿದ್ದರೆ.. ಕನ್ನಡಿ ಮನೆಯ ಸುತ್ತಾ ಹಾವಳಿ ಮಾಡುತ್ತಿದ್ದ ಕಪಿರಾಯಗಳ ಚೇಷ್ಟೆಗಳಿಂದ ಪ್ರತಿ ತಿಂಗಳು ಹೊಸದನ್ನು ತರಲೆಬೇಕಿತ್ತು!!!


ಅರಳಿ ಕಟ್ಟೆ  ತನ್ನ ಮೂಲ ಸ್ವರೂಪ ಕಳೆದು ಕೊಂಡಿದೆ.. ಅದರ ಕೆಳಗೆ ಕಲಿತ ಅನುಭವ..ಹಸಿರು!



* * * * * * * * * * * * * * * * * * * * * * * * * * * * *

"ಸರಿ ಈಗ ಹೇಳು ನೀ ಮುಸಿ ಮುಸಿ ನಕ್ಕಿದ್ದು ಏಕೆ.. ?"

"ನೀವು ಹೇಳಿದ್ದು ಸರಿ.. ಚಲಾವಣೆಗಾಗಿ ಬದಲಾವಣೆ.. ಹೌದು ಆದರೆ ಬದಲಾವಣೆಯಾದರೆ ಚಲಾವಣೆ ಆಗುತ್ತೆ ಎನ್ನುವ ನಂಬಿಕೆ ಏನು.. ಮತ್ತೆ ಏತಕ್ಕೆ ಬದಲಾವಣೆಯಾಗಬೇಕು ಇದು ನನ್ನ ಗೊಂದಲ"

"ಜಗತ್ತು ಒಂದು ತಿರುಗುವ ಚಕ್ರ ಇದ್ದ ಹಾಗೆ ಅದರ ಮೇಲೆ ನಿಂತರೆ ಬೀಳುವ ಸಂಭವ ಹೆಚ್ಚು.. ಅದರ ಮೇಲೆ ಅದರ ಜೊತೆಯಲ್ಲಿ ನಡೆಯುತ್ತಾ ಇಲ್ಲವೇ ಓಡುತ್ತಾ ಸಾಗಿದರೆ ಬೀಳುವ ಸಂಭವ ಹ ಹ ಹಃ ಹ ಹ... ಅಲ್ಲವೇ ಕಂದಾ!!!"

"ಹೌದು ಸರಿ.. ಆದರೆ ನಿಮಗೂ ಬದಲಾವಣೆ ಬೇಕು ಎಂದು ಅರಿತಾಗ "ನೀನು ಬೆಂಗಳೂರಿಗೆ ಹೋಗು.. ನಿನಗೂ ನಿನ್ನ ಮಕ್ಕಳಿಗೂ ಒಳ್ಳೆಯದಾಗುತ್ತೆ" ಎನ್ನುವ ಮಾತಿನ ಬೆನ್ನೇರಿ ನೀವು ಬಂದದ್ದು ಇಲ್ಲಿಗೆ.. ಆದರೆ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾದರೂ ನೀವು ನಂಬಿದ್ದ ಶ್ರದ್ಧೆ, ಭಕ್ತಿ, ಪ್ರೀತಿ ವಿಶ್ವಾಸ, ಆಚಾರ, ವಿಚಾರ, ಆಹಾರ ಪದ್ಧತಿ, ಉಡುಗೆ ತೊಡುಗೆ ಯಾವುದರಲ್ಲೂ ಬದಲಾಗಲಿಲ್ಲ.. ಅಲ್ಲವೇ ನಾವು ಕಂಡಂತೆ ನಿಮ್ಮ ವ್ಯಕ್ತಿತ್ವ ಪ್ರೀತಿ ವಿಶ್ವಾಸ.. ಒಂದು ವಿಚಾರದಲ್ಲೂ ನೀವು ಬದಲಾಗಲೇ ಇಲ್ಲ.. ಆದರೂ ನಿಮ್ಮ ಹೆಸರು ನಿಮ್ಮ ಮಾತುಗಳು ಚಲಾವಣೆಯಲ್ಲಿ ಇದೆಯಲ್ಲಾ.. ಇದಕ್ಕೆ ಏನು ಹೇಳುತ್ತೀರಿ.. ಬದಲಾದವರೂ ಕಾಲಕ್ಕೆ ಹೊಂದಿಕೊಳ್ಳುತ್ತೇನೆ ಎಂದು ನಿಮ್ಮನ್ನು ಮೂದಲಿಸಿ ಮಾತಾಡಿದವರು ಇಂದು ವಿಚಿತ್ರ ಪರಿಸ್ಥಿತಿಯಲ್ಲಿ ನಿಂತಿದ್ದಾರೆ.. ಆದರೆ ನಿಮ್ಮ ಬದಲಾಗದ ಬದಲಾವಣೆ ನಿಮ್ಮನ್ನು ಇನ್ನಷ್ಟು ಗಟ್ಟಿ ಮಾಡಿದ್ದವು ಅಲ್ಲವೇ.. ಅದೇ ಮಾರ್ಗದಲ್ಲಿ ನಾನು ಇರುವುದು ಈ ವ್ಯಾಪಾರಿ ಮನೋಭಾವ.. ಅದು ಚೆನ್ನಾಗಿಲ್ಲ ಬೇಡ ಇದು ಚೆನ್ನಾಗಿದೆ ಬೇಕು ಎನ್ನುವ ಮನೋಸ್ಥಿತಿಯಿಂದ ಹೊರಗೆ ಬಂದಿದ್ದೇನೆ.. ನಿಮ್ಮ ಹಾದಿಯಲ್ಲೇ ನಡೆಯುತ್ತಿದ್ದೇನೆ ತಪ್ಪು ಎನ್ನುತ್ತೀರಾ" ಹುಸಿ ನಗುತ್ತಾ 

"ತಪ್ಪು ಖಂಡಿತ ಇಲ್ಲ.. ಆಗಲೇ ಹೇಳಿದ ಹಾಗೆ ತಿರುಗುವ ತಟ್ಟೆಯ ಮೇಲೆ ಕೆಲವು ಕಾಲ ನಿಲ್ಲಬೇಕು. ಕೆಲವು ಕಾಲ ಓಡಲು ಬೇಕು ಕೆಲವು ಕಾಲ ಆ ತಟ್ಟೆಯಿಂದ ಇಳಿದು ಒಂದಷ್ಟು ದೂರ ಹೆಜ್ಜೆ ಹಾಕಲು ಬೇಕು.. ಅದೇ ನಿಜವಾದ ಮಾರ್ಗ.. ನೀ ನನ್ನ ಹಿಂಬಾಲಿಸುತ್ತಿರುವುದು ನಿಜಾ.. ಕೆಲವೊಮ್ಮೆ ಈ ಸಂಕುಲಗಳಿಂದ ಹೊರಗೆ ಬಾ.. ಇನ್ನಷ್ಟು ಪ್ರಜ್ವಲಿಸುತ್ತೀಯ.. "

ಕಣ್ಣು ಬಿಟ್ಟೆ.. ಬೆಳಗಿನ ಜಾವ ಆರು ಘಂಟೆಯಾಗುತ್ತಿತ್ತು.. ಗೋಡೆಯ ಮೇಲಿನ ಚಿತ್ರ ನೋಡಿ ಕೈ ಮುಗಿದೆ.. ಅದರೊಳಗಿನ ಮೂರ್ತಿ ಆಶೀರ್ವಾದ ಮಾಡಿದಂತೆ ಭಾಸವಾಯಿತು.. ಸ್ಮೃತಿ ಪಟಲದಲ್ಲಿ ದಾಖಲಾದ ಘಟನೆಗಳು ಇವರ ಜೊತೆಯಲ್ಲಿ ಬಂದು ನಿಂತು ನೀತಿ ಪಾಠವನ್ನು ಅರುಹಿ ಕೆಲ ಗೊಂದಲಗಳನ್ನು ದೂರ ಮಾಡಿತು.. !!!

ಇಂದು ಅವರ ಜನುಮದಿನ.. ತಾವು ಪಾಠ ಹೇಳದೆ ತಾವು ನಡೆದ ದಾರಿಯಲ್ಲಿ ನಮಗೆ ನಡೆಯಿರಿ ಎಂದು ಒತ್ತಡ ಹೇರದೆ ನಮಗಾಗಿ ಒಂದು ಸುಂದರ ಪಥವನ್ನು ನಿರ್ಮಿಸಿದರು ನನ್ನ ಅಪ್ಪಾ.. ತಾವು ನಂಬಿದ್ದ ಯಾವುದೇ ಸಿದ್ಧಾಂತವನ್ನು ಕೆಳಗೆ ಇರಿಸದೆ ಅದರ ಜೊತೆಯಲ್ಲಿ ಹೆಜ್ಜೆ ಹಾಕಿ ತಮ್ಮ ಬಾಳನ್ನು ಬಂಗಾರ ಮಾಡಿದ್ದೆ ಅಲ್ಲದೆ.. ನಮ್ಮ ಜೀವನದ ಕಳಶಕ್ಕು ಸುವರ್ಣ ಲೇಪನ ಮಾಡಿದ್ದು ಅವರ ಹೆಗ್ಗಳಿಕೆ.. 

ಮನಸ್ಸು ಈ ಭಾವಗಳನ್ನೆಲ್ಲ ಹೊತ್ತು ನಿಂತಿತ್ತು ಕಳೆದ ಭಾನುವಾರ ಶಿವಮೊಗ್ಗೆಯ ತುಮಕೂರು ಶಾಮರಾವ್ ರಸ್ತೆಯ ಆ ಪಾಠ ಕಳಿಸಿದ ರಸ್ತೆಗೆ ಹೋಗಿ ನಿಂತಾಗ ಅದು ಬರೋಬ್ಬರಿ ಮೂವತ್ತೈದು-ಮೂವತ್ತಾರು ವಸಂತಗಳ ನಂತರ.... !!! 


ಬದಲಾದ ಪಥ.. ಆದರೆ ಬದಲಾಗದ ಭಾವ.. !

ಅಣ್ಣಾ ಹೊಸ ಬದುಕಿನತ್ತ ಹೊರಳಲು ನಿರ್ಧಾರ ಮಾಡಿದ್ದೇನೆ.. ನಿಮ್ಮ ಆಶೀರ್ವಾದ ನಮ್ಮ ಕುಟುಂಬದ ರಕ್ಷಾ ಕವಚ.. ಆಗದು ಎಂದು ಕೈ ಕಟ್ಟಿ ಕೂರದೆ.. ನಡೆ ಮುಂದೆ ನಡೆ ಮುಂದೆ ಆರಾಮಾಗಿ ಮುಂದೆ ಎನ್ನುವ ನೀತಿ ಪಾಠ ಕಲಿತಿದ್ದು ನಿಮ್ಮ ಬದುಕನ್ನು ನೋಡಿ.. 

ಹುಟ್ಟು ಹಬ್ಬದ ಶುಭಾಶಯಗಳು.. ಅಣ್ಣಾ!!!