Saturday, December 31, 2016

ಅಕ್ಕ(ಅ)ಣ್ಣ ... ಜನುಮದಿನಗಳ ಶುಭಾಶಯಗಳು

ಹೀಗೊಂದು ಸಂಭ್ರಮದ ನೆನಪು.. 

೧೯೭೯ಇಸವಿ .. ಕರುನಾಡಿನಲ್ಲಿ ಅನಂತ್ ನಾಗ್ ಮತ್ತು ಲಕ್ಷ್ಮಿ ಅದ್ಭುತ ಜೋಡಿಯಾಗುವತ್ತ ಹೆಜ್ಜೆ ಹಾಕಿದ್ದ ಕಾಲ. ಕನ್ನಡ ಚಿತ್ರದ ಇತಿಹಾಸದಲ್ಲಿಯೇ ಒಂದು ವಿಭಿನ್ನ ಚಿತ್ರ ಬಿಡುಗಡೆಯಾಗಿತ್ತು. ಅದುವೇ ನಾ ನಿನ್ನ ಬಿಡಲಾರೆ. ಯಶ್ವಸಿಯಾಗಿತ್ತು. ಶಿವಮೊಗ್ಗದ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿತ್ತು. ಆರಂಭಿಕ ದೃಶ್ಯಗಳು ಪ್ರೇಮಮಯವಾಗಿದ್ದವು ,ಹಾಸ್ಯಮಯವಾಗಿದ್ದವು. ಬರು ಬರುತ್ತಾ ದೆವ್ವ ಭೂತಗಳ ಚೇಷ್ಟೆ ಜಾಸ್ತಿಯಾಗಿ ಹೆದರಿಕೆಯಿಂದ ಅನೇಕ ಮಹಿಳೆಯರು ಮಕ್ಕಳು ಚಿತ್ರಮಂದಿರದಿಂದ ಓಡಿಹೋಗಿದ್ದ  ಉದಾಹರಣೆಗಳು ಇದ್ದವು. ಒಂದೆರಡು ಪ್ರದರ್ಶನಗಳಲ್ಲಿ ತುಂಬು ಗರ್ಭಿಣಿಯರಿಗೆ ಹೆದರಿಕೆಯಾಗಿ ಹೆತ್ತ ಘಟನೆಗಳು ನೆಡೆದಿದ್ದವು. ಹೀಗೆ ಒಂದು ರೀತಿಯಲ್ಲಿ ಹಾಡುಗಳಿಂದ, ಅಭಿನಯದಿಂದ ದಕ್ಷ ನಿರ್ದೇಶನದಿಂದ ಚಿತ್ರ ದುಡ್ಡನ್ನು ಬಾಚುತ್ತಿತ್ತು. ಇನ್ನೊಂದು ಕಡೆ ವೀಕ್ಷಕರನ್ನು ಭಯಪೀಡಿತರನ್ನಾಗಿ ಮಾಡುತ್ತಿತ್ತು. 

"ಎಂದೆಂದಿಗೂ ನಾ ನಿನ್ನ ಬಿಡಲಾರೆ ಬಾ ಚಿನ್ನ" ಹಾಡಿನಲ್ಲಿ ಉಪಯೋಗಿಸುವ ಟಿಕ್ ಟಿಕ್ ಚಿಟಿಕೆಯ ವಸ್ತು ಬಹಳ ಪ್ರಸಿದ್ಧವಾಗಿತ್ತು. 

ಅಕ್ಕ ನನ್ನನ್ನು ಮತ್ತು ನನ್ನ ತಮ್ಮನನ್ನು ನಮ್ಮ ಮನೆಯ ಅಕ್ಕ ಪಕ್ಕದವರ ಜೊತೆಯಲ್ಲಿ ಆ ಚಿತ್ರಕ್ಕೆ ಕರೆದೊಯ್ದಳು. ನಮಗೂ ಖುಷಿ ಚಿತ್ರ ನೋಡುವುದೆಂದರೆ. ಆಗ ನನಗೆ ಆರು ವರ್ಷ.. ತಮ್ಮನಿಗೆ ೪ ವರ್ಷ.  ಜೋಶ್ ನಲ್ಲಿ ಚಿತ್ರ ನೋಡಲು ಶುರುಮಾಡಿದೆವು. ಆ ಕಾಲಕ್ಕೆ ಎಷ್ಟು ಅರ್ಥವಾಗಿತ್ತೋ ಬಿಟ್ಟಿತೋ ದೇವರಿಗೆ ಗೊತ್ತು. ಆದರೆ ಎಲ್ಲವೂ ಚೆನ್ನಾಗಿ ಇತ್ತು. ಅನಂತ್ ನಾಗ್ ಆಸ್ಪತ್ರೆಯಿಂದ ಅರ್ಧ ರಾತ್ರಿಯಲ್ಲಿ ಎದ್ದು ಹೊರಗೆ ಹೋಗುತ್ತಾರೆ.. ಅವರನ್ನೇ ಅನುಸರಿಸಿಕೊಂಡು ಲಕ್ಷ್ಮಿ ಹೋಗುತ್ತಾರೆ. ಒಂದು ಸ್ಮಶಾನವನ್ನು ಹೊಕ್ಕ ಅನಂತ್.. ಹಾಗೆ ನಿಲ್ಲುತ್ತಾರೆ .. ಲಕ್ಷ್ಮಿ ಹಿಂದಿನಿಂದ ಬಂದು ರೀ ಎನ್ನುತ್ತಾ ಬೆನ್ನು ಮುಟ್ಟುತ್ತಾರೆ.. ಸರ್ರನೆ ತಿರುಗುವ ಅನಂತ್... 

ಚಿತ್ರಮಂದಿರಲ್ಲಿ ಹೋ ಎಂದು ಕೂಗಾಟ.. ಚೀರಾಟ.. ದೆವ್ವ ಅನಂತ್ ಮೈಮೇಲೆ ಬಂದಿರುತ್ತೆ.. 

ಆಗ ನನ್ನ ಅಕ್ಕ ತೊಡೆಯ ಮೇಲೆ ಕೂರಿಸಿಕೊಂಡಿದ್ದ ನನ್ನನ್ನು ಮತ್ತು ನನ್ನ ತಮ್ಮನನ್ನು ಸೀಟ್ ಕೆಳಗೆ ಕೂರಿಸಿ ಕಿವಿ ಮುಚ್ಚುತ್ತಾಳೆ.. ಹೆದರಿಕೆಯಾಗಬಾರದು ಎಂದು.. ದೆವ್ವದ ದೃಶ್ಯ ಮುಗಿದ ನಂತರ ಮತ್ತೆ ಸೀಟ್ ಮೇಲೆ ಕೂರಿಸುತ್ತಾಳೆ (ಆಗ.. ಚಿಕ್ಕವರಿದ್ದ ಕಾರಣ ಟಿಕೆಟ್ ಇರುತ್ತಿರಲಿಲ್ಲ) ಹೀಗೆ ಚಿತ್ರ ಮುಗಿಯುವವರೆಗೂ ನೆಡೆಯುತ್ತದೆ. ಚಿತ್ರ ಮುಗಿದಮೇಲೆ, ಬೆವರನ್ನು ಒರೆಸಿ ಮನೆಗೆ ಕರೆತರುತ್ತಾಳೆ. ಇದು ಅಕ್ಕನ ಪ್ರೀತಿ ಮಮತೆ. 

ಈ ಘಟನೆ ಏತಕ್ಕೆ ಉಲ್ಲೇಖ ಮಾಡಿದೆ ಎಂದರೆ.. ಪುಟ್ಟ ಘಟನೆ ಆದರೆ ತನ್ನ ತಮ್ಮಂದಿರ ಮೇಲಿನ ಕಾಳಜಿ ವ್ಯಕ್ತವಾಗುತ್ತದೆ. ಇದೆ ಅಕ್ಕ ತಾನು ಬೆಳೆದು ನಮ್ಮನ್ನು ಬೆಳೆಸಿದಳು.. ಹಬ್ಬ ಹರಿದಿನ ಎಂದರೆ... ನಾನು ಮತ್ತು ನನ್ನ ತಮ್ಮ ವಠಾರದ ತುದಿಯಲ್ಲಿ ಅಕ್ಕ ಕೆಲಸ ಮುಗಿಸಿಕೊಂಡು ಬರುವುದನ್ನೇ ಕಾಯುತ್ತಿದ್ದೆವು. ಅದೆಷ್ಟೇ ಹೊತ್ತು ಆಗಲಿ ಅಕ್ಕ ನಮ್ಮನ್ನು ನಿರಾಶೆಗೊಳಿಸುತ್ತಿರಲಿಲ್ಲ.. ಹಾಗೆಯೇ ನಾವು ಕೂಡ ಅಕ್ಕನನ್ನು ಬಾಗಿಲ ಬಳಿಯೇ ಕಾಯುವುದು ಬಿಡುತ್ತಿರಲಿಲ್ಲ.. 

ಇಂತಹ ಅಕ್ಕನ ಜನುಮದಿನವಿಂದು.. ಇಡೀ ವಿಶ್ವವೇ ಈ ದಿನವನ್ನು ಆಚರಿಸುತ್ತದೆ ಕಾರಣ.. ಕ್ಯಾಲೆಂಡರ್ ವರ್ಷ ಇಂದಿಗೆ ಮುಗಿಯುತ್ತದೆ .. ನಾವೂ ಹಾಗೆ ಶುಭ ಕೋರೋಣ ಅಲ್ಲವೇ.. :-)

ಅಕ್ಕ ಜನುಮದಿನದ ಶುಭಾಶಯಗಳು... 

*****

ಅಣ್ಣ ಶಾಲಾ ಕಾಲೇಜುದಿನಗಳಲ್ಲಿ ಓದಿನಲ್ಲಿ ಮುಂದು.. ತಾನು ಓದಿದ್ದನ್ನು ಸರಿಯಾಗಿ ಗ್ರಹಿಸುವುದರಲ್ಲಿ ಎತ್ತಿದ ಕೈ .. ಚಿಕ್ಕ ವಯಸ್ಸಿನಿಂದಲೂ ಓದುವ ಅಭ್ಯಾಸವಿದ್ದ ಇವನಿಗೆ.. ದೊಡ್ಡ ಕಾದಂಬರಿಗಳು ನೀರು ಕುಡಿದಷ್ಟು ಸುಲಭವಾಗಿ ಇವನ ಪಕ್ಕಕ್ಕೆ ಕೂತುಬಿಡುತ್ತಿದ್ದವು. ಇವನು ಕೂಡ ಒಮ್ಮೆ ಅದರ ಮೈ ತಡವಿ ಓದಲು ಕುಳಿತನೆಂದರೆ ಊಟ ತಿಂಡಿ ಯಾವುದು ಬೇಕಿಲ್ಲ.. ಒಮ್ಮೆ ಒಂದು ಪುಸ್ತಕ ಹಿಡಿದನೆಂದರೆ ಮುಗಿಯಿತು.. ಅದು ಓದಿ ಮುಗಿಸಿಯೇ ಏಳುತ್ತಿದ್ದ.. ಆ ಪಾಟಿ ಓದುವ ಹಸಿವು ..  

ಅಕ್ಕ ಕಾಲೇಜಿನ ಪಠ್ಯ ಪುಸ್ತಕವಾಗಿದ್ದ ವಿಷಯಗಳನ್ನು ಅಕ್ಕನ ಸಹಪಾಠಿಗಳು ಇವನ ಹತ್ತಿರ ಬಂದು ಪಾಠ ಹೇಳಿಸಿಕೊಳ್ಳುತ್ತಿದ್ದರು. ಪಾಠ ಅಂದರೆ.. ಆ ದಿನಗಳ ನೋಟ್ಸ್ ನಲ್ಲಿನ ಸಂದೇಹಗಳನ್ನು ನಿವಾರಿಸಿಕೊಳ್ಳುತ್ತಿದ್ದರು. 
ಕಾಲೇಜು ದಿನಗಳಲ್ಲಿ ಅಕ್ಕನ ಸಹಪಾಠಿಗಳಿಗೆ "ಲಾಜಿಕ್" ವಿಷಯ ಕಬ್ಬಿಣದ ಕಡಲೆಯಾಗಿತ್ತು. ನನ್ನ ಅಣ್ಣ ಅಕ್ಕನಿಗಿಂತ ಕೆಳತರಗತಿಯಲ್ಲಿ ಓದುತ್ತಿದ್ದರೂ, ಇವನಿಗೆ "ಲಾಜಿಕ್" ವಿಷಯ ಇವನಿಗೆ ಕರತಲಾಮಲಕ.. ಈ ವಿಷಯವನ್ನು ಅಕ್ಕ ತನ್ನ ಸಹಪಾಠಿಗಳಿಗೆ ಹೇಳಿದ್ದರಿಂದ, ಇವನು ಕಿರಿಯನಾಗಿದ್ದರೂ ಅವರಿಗೆ ಗುರುವಾಗಿ ಬಿಟ್ಟಿದ್ದ. 

ಬಾಲ್ಯದಲ್ಲಿ ಪಟ್ಟ ಅವಮಾನಗಳು, "ಅಪ್ಪನ ಕೆಲಸವೂ ಸಿಗೋಲ್ಲ" ಎಂದು ಮೂದಲಿಕೆ ಕೇಳಿದ್ದ ಈ ಹುಡುಗ ಇಂದು ತನ್ನ ಕಾಲಮೇಲೆ ತಾನು ನಿಂತಿದ್ದು ಅಷ್ಟೇ ಅಲ್ಲದೆ, ತನ್ನದೇ ಒಂದು ಆಫೀಸ್ ಶುರುಮಾಡಿ, ಅನೇಕರಿಗೆ ಕೆಲಸ ಕೊಟ್ಟಿರುವುದು ಸಾಧನೆಯೇ ಹೌದು. 

ನಮ್ಮ ಮನೆಯಲ್ಲಿ ಇವನ ಮಾತು ವೇದವಾಕ್ಯ . ಇವನು ಆಯೋಜಿಸುವ ಕಾರ್ಯಕ್ರಮಗಳಿಗೆ ನಾನು ಮತ್ತು ನನ್ನ ತಮ್ಮ ಓಕೆ ಎಂದು ಹೇಳುವುದಷ್ಟೇ ಕೆಲಸ.,. ಅವನಿಗೆ ಹೆಗಲಿಗೆ ಹೆಗಲು ಕೊಟ್ಟು ಅವನ ಜೊತೆಯಲ್ಲಿ ನಿಂತರೆ ಸಾಕು.. ಹೂವಿನ ಸರ ಎತ್ತಿದಷ್ಟು ಸಲೀಸು ಎಲ್ಲಾ ಕಾರ್ಯಕ್ರಮಗಳು. 

ಡಿಸೆಂಬರ್ ೨೬ ರಂದು ಜನುಮದಿನ ಆಚರಿಸಿಕೊಂಡ ಇವನಿಗೆ ಆ ತಿಮ್ಮಪ್ಪನ ಆಶೀರ್ವಾದವೇ ಸಿಕ್ಕಿದೆ. ಕಾರಣ ಅಂದು ನಮ್ಮ ಇಡೀ ಪರಿವಾರ ಇವನ ಜನುಮದಿನವನ್ನು ಆಚರಿಸಲು ನಿರ್ಧರಿಸಿದ್ದು ತಿಮ್ಮಪ್ಪನ ಆವಾಸ ಸ್ಥಾನ ತಿರುಪತಿಯಲ್ಲಿ.. 

ವಿಜಯ ನಿನ್ನ ಹೆಸರಿನಂತೆ ನಿನ್ನ ಪ್ರತಿ ಕೆಲಸ, ಕನಸು, ಪರಿಶ್ರಮ ನಿನ್ನ ಹೆಸರಿನಂತೆಯೇ ಆಗಲಿ.. 

ಜನುಮದಿನದ ಶುಭಾಶಯಗಳು ವಿಜಯ... !!!!
*****

ಇದು ಡಬಲ್ ಧಮಾಕ.. ಡಿಸೆಂಬರ್ ನಲ್ಲಿ ಎರಡು ಎರಡು ಸಂಭ್ರಮಗಳು.. ಅಕ್ಕನದು ಡಿಸೆಂಬರ್ ೩೧, ಅಣ್ಣನದು ಡಿಸೆಂಬರ್ ೨೬.. ಇಬ್ಬರಿಗೂ ಒಂದೇ ಶುಭಾಷಯ ಒಟ್ಟಿಗೆ ಹೇಳುವ ಸಂಭ್ರಮ ನನ್ನದು ಮತ್ತು ನಮ್ಮೆಲ್ಲರದು. 

Sunday, December 11, 2016

ಸ್ಮಶಾನ.. ಪಾಠ ಕಲಿಸುವ "ಪಾಕ"ಶಾಲೆ

ಒಂದು ವಿಚಿತ್ರ ಮನಸ್ಸು.. ವಿಚಿತ್ರ ಆಸೆ.. ವಿಚಿತ್ರವಾಗಿ ಯೋಚಿಸುವ ಹೃದಯ..

ಅರಿವಿಲ್ಲ..

ಗೊತ್ತಾಗೊಲ್ಲ

ಕಾರಣ ಹೀಗೆ ಅಂತ ಹೇಳೋಕೆ ಆಗೋಲ್ಲ.. ನಾ ಯಾವಾಗಲೂ ತಮಾಷೆಯಾಗಿ ಹೇಳುತ್ತಿದ್ದೆ..

ಹೋಟೆಲಿನಲ್ಲಿ ಯಾರಾದರೂ ಸಿಕ್ಕರೆ.. ತಮ್ಮ ಕುರ್ಚಿಯ ಪಕ್ಕದಲ್ಲಿಯೇ ಇನ್ನೊಂದು ಕುರ್ಚಿ ಹಾಕಿ.. ಅಥವಾ ಬೆಂಚಾದರೆ ಸ್ವಲ್ಪ ಜರುಗಿಕೊಂಡು ಜಾಗ ಕೊಡುತ್ತಾರೆ..

ಬಸ್ ನಿಲ್ದಾಣದಲ್ಲಿ ಸಿಕ್ಕರೆ.. ಕೂರಲು ಪಕ್ಕಕ್ಕೆ ಒತ್ತಿ ಜಾಗ ಕೊಡುತ್ತಾರೆ..

ಮದುವೆ ಮುಂಜಿ ಮಾಡುವ ಛತ್ರದಲ್ಲಿ ಸಿಕ್ಕರೆ.. ಪಕ್ಕದಲ್ಲಿ ಅಥವಾ ಯಾವುದೋ ಮೂಲೆಯಲ್ಲಿ ಖಾಲಿ ಇರುವ ಚೇರ್ ಹುಡುಕಿ ಅದನ್ನು ತಂದು ತಮಗೆ ಇಷ್ಟವಾದವರ ಜೊತೆ ಹರಟುತ್ತಾರೆ..

ಆಸ್ಪತ್ರೆ, ದೇವಸ್ಥಾನ ಇಲ್ಲಿಯೂ ಕೂಡ ಇದೆ ಪುನರ್ವಾರ್ತನೆ ಆಗುತ್ತದೆ..

ಆದರೆ ನನ್ನ ಕುತೂಹಲ ಒಂದು ವಿಚಿತ್ರ ಹಂತ ಮುಟ್ಟಿತ್ತು.. ಸ್ಮಶಾನದಲ್ಲಿ ಬೇರೆಯವರ ಶವ ಸಂಸ್ಕಾರಕ್ಕೆ ಹೋದಾಗ ಅಲ್ಲಿ ನಮ್ಮ ಪರಿಚಯಸ್ತರು ಸಿಕ್ಕಾಗ ಹೇಗೆ ಇರುತ್ತದೆ.. ?

ಶವಸಂಸ್ಕಾರದ ಪದ್ಧತಿ ಮಣ್ಣು ಮಾಡುವುದು ಆದರೆ.. ಗೋರಿಗಳನ್ನು ಅಥವಾ ಸ್ಮಾರಕಗಳನ್ನು ಕಟ್ಟಿರುತ್ತಾರೆ.. ಆಗ ಯಾವುದಾದರೂ ಒಂದು ಸಮಾಧಿಯ ಮೇಲೆ ಕೂತು.. ಇನ್ನೊಂದು ಸಮಾಧಿಯ ಧೂಳನ್ನು ಕೈಯಲ್ಲಿ ಒರೆಸಿ ಕೂರಲು ಹೇಳುತ್ತಾರೆ.. ಆದರೆ ಶವಸಂಸ್ಕಾರದ ಪದ್ಧತಿ ಅಗ್ನಿಗೆ ಆಹುತಿ ಮಾಡುವುದು ಎಂದರೆ.. ಕೊಂಚ ಕಷ್ಟ.. ಆದರೂ ಬೆಂಗಳೂರಿನಂತಹ ಮಹಾನಗರಗಳಲ್ಲಿ... ವಾಸಿಸಲು ಕಡಿಮೆ ಆಗುತ್ತಿರುವ ಸನ್ನಿವೇಶದಲ್ಲಿ ಈ ರೀತಿಯ ಕಟ್ಟಿಗೆಯಲ್ಲಿ ಸುಡುವ ಪದ್ದತಿ ಕಡಿಮೆ.. ವಿದ್ಯುತ್ ಚಿತಾಗಾರ ಬಹಳವಾಗಿದೆ  .. ಆದರೂ ಕಟ್ಟಿಗೆಯಲ್ಲಿ ಸುಡುವ ಶಾಸ್ತ್ರ ಬದ್ಧ ಸಂಸ್ಕಾರ ನೋಡಲು ಚೆನ್ನ (ಕ್ಷಮೆ ಇರಲಿ) ಅಥವಾ ಆ ಶಾಸ್ತ್ರ ಸಂಪ್ರದಾಯದ ಪರಿ ಮನೆಯವರಿಗೆ ಕೊಂಚ ತೃಪ್ತಿ ತರುವುದು ಸಹಜ.. (ಇದು ನನ್ನ ವೈಯುಕ್ತಿಕ ಅಭಿಪ್ರಾಯ.. ಕಾರಣ ಅಪ್ಪನ ಸಂಸ್ಕಾರ.. ಕಣ್ಣು ಮುಚ್ಚಿ ಕಣ್ಣು ತೆರೆಯುದರ ಒಳಗೆ ವಿದ್ಯುತ್ ಚಿತಾಗಾರದಲ್ಲಿ ಮುಗಿದು ಹೋಗಿತ್ತು)..

ಇಂದು ನನ್ನ ಅಣ್ಣನ ಮನೆಯ ನೆರೆಹೊರೆಯವರ ಮನೆಯಲ್ಲಿ ಹಿರಿಯರು ಕಾಲನ ಕರೆಗೆ ಓಗೊಟ್ಟು ತಮ್ಮನ್ನು ಪ್ರೀತಿಸುವ ಪರಿವಾರವನ್ನು ತ್ಯಜಿಸಿ ಹೊರನೆಡೆದಿದ್ದರು.. ತುಂಬು ಸಂಸಾರದಿಂದ ಬಂದಿದ್ದ ಅವರು.. ಸುಮಾರು ೬೦ ವಸಂತಗಳ ಸುವರ್ಣ ವೈವಾಹಿಕ ಜೀವನವನ್ನು ಪೂರೈಸಿ ತಮ್ಮ ಕುಟುಂಬದ ಏಳು ಬೀಳುಗಳನ್ನು ಸಮನಾಗಿ ಕಂಡು ಅದರ ಏಳಿಗೆಗೆ ಶ್ರಮಿಸಿದ ಜೀವ ಇಂದು ಎಲ್ಲರ ಹೃದಯಕಮಲದಲ್ಲಿ  ನೆನಪುಗಳನ್ನು ಬಿಟ್ಟು ಹೊರಟಿದ್ದರು.

ಅವರ ದುಃಖ ಅವರಿಗೆ..ಮಡದಿ, ಅಮ್ಮ, ತಂಗಿ, ಚಿಕ್ಕಮ್ಮ, ದೊಡ್ಡಮ್ಮ, ಅಜ್ಜಿ,  ಆಂಟಿ ಹೀಗೆ ಹಲವಾರು ಬಂಧಗಳ ಹ್ಯಾಟ್ ಧರಿಸಿದ್ಧ ಆ ಹಿರಿಯ ಜೀವ ಇಂದು ಬರಿ ನೆನಪಾಗಿ ಉಳಿದದ್ದು ಎಲ್ಲರಲ್ಲೂ ದುಃಖವನ್ನು ಒತ್ತರಿಸಿ ತರುತ್ತಿತ್ತು..

ಚಿತಾಗಾರಕ್ಕೆ ಹೋದಾಗ.. ಸಹಜವಾಗಿಯೇ ನನ್ನ ಮನಸ್ಸು ಕದಡಿದ ಸರೋವರವಾಗಿತ್ತು.. ಸಾವು ಮನುಷ್ಯನನ್ನು ಹೇಗೆ ಬದಲಿಸುತ್ತೆ (ಕ್ಷಣ ಮಾತ್ರ.. ಆದರೂ ಸರಿ) ಸ್ಮಶಾನ ವೈರಾಗ್ಯ.. ಅಯ್ಯೋ ಬದುಕು ಇಷ್ಟೇ.. ಇಂದು ಅವರು ನಾಳೆ ನಾವು.. ಈ ರೀತಿಯ ಮಾತುಗಳು ಸಹಜವಾಗಿಯೇ ಕೇಳಿಬರುತ್ತಿದ್ದವು.. ಇಲ್ಲಿಯೂ ಅದಕ್ಕೆ ಹೊರತೇನೂ ಆಗಿರಲಿಲ್ಲ.. ಆದರೆ ನನ್ನ ವಿಚಿತ್ರ ಕಣ್ಣುಗಳಿಗೆ ಕಂಡ ಕೆಲವು ದೃಶ್ಯಗಳು ಅಕ್ಷರ ರೂಪದಲ್ಲಿ ಬರಲು ಶ್ರಮಿಸಿದವು.. ಹಾಗಾಗಿ ಈ ಲೇಖನ ನಿಮ್ಮ ಮುಂದೆ..

ಒಳಗೆ ಹೋಗುತ್ತಲೇ.. ಒಂದು ಮಾರುತಿ ವ್ಯಾನ್.. ಅದರೊಳಗೆ ಕೂರಲು ಆಗದಷ್ಟು ಮಡಿಕೆ ಕುಡಿಕೆಗಳು ಮತ್ತು ಸಂಸ್ಕಾರಕ್ಕೆ ಬೇಕಾಗುವ ಪದಾರ್ಥಗಳು.. ಅಚ್ಚರಿ ಎನಿಸಿತು.. ಆದರೂ ಈ ಮಹಾನಗರದಲ್ಲಿ ಈ ರೀತಿಯ ದುಃಖತಪ್ತ ಸಂದರ್ಭದಲ್ಲಿ ಬೇಕಾಗುವ ಪರಿಕರಗಳನ್ನು ಹುಡುಕಿಕೊಂಡು  ಅಲೆಯುವುದನ್ನು ಕಡಿಮೆ ಮಾಡಲು ಸಿದ್ಧತೆಕಂಡು ಮನಸ್ಸಿಗೆ ಆಹ್ ಎಲ್ಲವೂ ಪೂರ್ವಸಿದ್ಧತಾಮಯ ಎನ್ನಿಸಿತು..
ಎಲ್ಲವೂ ಸಿದ್ಧ.. ಈ ಕ್ಷಣಿಕ ಜಗತ್ತಿನಲ್ಲಿ ಓಡಾಡಲು ಸಮಯವಿಲ್ಲ.. ಹಾಗಾಗಿ ನಾ ಸಿದ್ಧ !!!

ಅಲ್ಲಿನ ಸಿಬ್ಬಂಧಿಗಳಿಗೆ ಸಾವು, ಕಳೇಬರ, ಡೆಡ್ ಬಾಡಿ, ಸಂಸ್ಕಾರ ಇವೆಲ್ಲವೂ ನಾವು ದಿನನಿತ್ಯ ಕಚೇರಿಗೆ ಹೋಗಿ ಫೈಲ್, ಲ್ಯಾಪ್ಟಾಪ್, ಪ್ರಾಜೆಕ್ಟ್ ಅನ್ನುವಂತೆ ಅದು ಅವರ ಕೆಲಸ ಅಲ್ಲವೇ.. ನಾವುಗಳು ಅಲ್ಲಿಗೆ ಹೋಗಿ ಬಂದ ಮೇಲೆ ಸ್ನಾನ ಮಾಡುತ್ತೇವೆ .. ಅವರು ಸ್ನಾನ ಮಾಡಿಕೊಂಡು ಅಲ್ಲಿಗೆ ಬರುತ್ತಾರೆ.. ಅಷ್ಟೇ ವ್ಯತ್ಯಾಸ..

ಒಬ್ಬೊಬ್ಬರದು ಒಂದೊಂದು ರೀತಿಯ ಸಂಪ್ರದಾಯ.. ಕೆಲವರು ಮಂತ್ರಘೋಷಗಳ ನಡುವೆ ಕಾರ್ಯ ನೆಡೆಸಿದರೆ.. ಕೆಲವರದು ತಮಟೆ ಸದ್ದಿನ ಜೊತೆಯಲ್ಲಿ.. ಇನ್ನೂ ಕೆಲವರದು ಆಗಲೇ ಮೈಯಲ್ಲಿ ತುಂಬಿಕೊಂಡ ಪರಮಾತ್ಮನ ವರಪ್ರಸಾದದಿಂದ ತೂರಾಡುತ್ತಾ ತಮಗೆ ಬಂದ ರೀತಿಯಲ್ಲಿ ಶವಸಂಸ್ಕಾರ ಮಾಡುವ ಪದ್ಧತಿ.. ಏನೇ ಆದರೂ ಅವರವರ ಭಾವಕ್ಕೆ ಅವರವರ ಭಕುತಿಗೆ ... !
ತಾವು ಬದಕಲು... ಬದುಕಿ ಬಾಳಿದ ಜೀವಿಗೆಕಾಯುತ್ತಿರುವ ಕ್ಷಣ 

ಆ ರುದ್ರಭೂಮಿಯ ಒಬ್ಬ ಕೆಲಸಗಾರ ಅಕ್ಷರಶಃ  ತೂರಾಡುತ್ತಾ ಬಂದ.. ಎಲ್ಲವೂ ಸಿದ್ಧವಾಗಿದೆಯೇ.. ಏನಾದರೂ ಬೇಕಿತ್ತೆ.. ಹೇಳಿ.. ಅಂದಾಗ.. ಯಾರೂ ಮಾತಾಡದೆ ಇದ್ದದ್ದು ನೋಡಿ.. ಆಗಲಿ.. ಬಾಡಿ ಬರಲಿ, ಪೂಜಾರಪ್ಪ ಬರಲಿ, ಸೌದೆ ಬರಲಿ.. ಬರಲಿ ಬರಲಿ ಬರಲಿ ಬರಲಿ.. ಹೀಗೆ ಏನೇನೂ ಬಡಬಡಿಸುತ್ತಾ ಹೋದ..

ಹಿರಿಯ ಚೇತನವನ್ನು ಕಳೆದುಕೊಂಡ ನೋವು ಒಬ್ಬರಿಗೆ.. ಆ ಸಮಯದಲ್ಲಿಯೂ ತಮ್ಮ ವೃತ್ತಿಪರತೆ, ತಮ್ಮ ಹೊಟ್ಟೆ ಪಾಡು ನೋಡಿಕೊಳ್ಳುವ ತವಕ ಇನ್ನೊಬ್ಬರಿಗೆ.. ನಗು ಬರುತ್ತೆ ಆದರೂ ಇದು ಸಹಜಧರ್ಮ.. ನಮ್ಮ ನೋವು ನಮಗೆ.. ಅವರ ಹೊಟ್ಟೆ ಪಾಡು ಅವರಿಗೆ.. ತಪ್ಪಿಲ್ಲ..

ಚಿತೆ ಸಿದ್ಧಮಾಡುವ ಸಿಬ್ಬಂದಿ ಕೂಡ.. "ಅಯ್ಯೋ ಬಿಡಿ ಅಣ್ಣ.. ದಿನಕ್ಕೆ ಎಷ್ಟು ನೋಡ್ತೀವಿ.. ನಮಗೇನೂ ಹೊಸದೇ.. ನಮಗೆ ಇಷ್ಟು ಕೊಡಿ.. ಸರಿಯಾಗಿ ಚಿತೆ ಉರಿದು ಬೂದಿಯಾಗುವವರೆಗೂ ನಾವು ನೋಡಿಕೊಳ್ಳುತ್ತೇವೆ.. ಆಫೀಸ್ ಕಟ್ಟುವ ಹಣಕ್ಕೂ ನಮಗೂ ಸಂಬಂಧ ಇಲ್ಲ.. ನಾವು ತಾನೇ ಇದನ್ನು ಮೆಂಟೇನ್ ಮಾಡೋದು .. ಇಲ್ಲಿ ಚೌಕಾಸಿ ಮಾಡಬಾರದ್ ಅಲ್ಲವೇ ಅಣ್ಣ .. " ಮಾತಿರಲಿಲ್ಲ ನನ್ನ ಬಳಿ..

ಎಲ್ಲವೂ ಸರಿ.. ಎಲ್ಲವೂ ತಪ್ಪು.. ಯಾವುದು ಸರಿ ಯಾವುದು ತಪ್ಪು.. ಅರಿವಿಲ್ಲ.. ಆ ಕ್ಷಣಕ್ಕೆ ಎಲ್ಲವೂ ಸರಿ ಎನ್ನಿಸತೊಡಗಿತು ಅವರವರ ದೃಷ್ಟಿಕೋನದಲ್ಲಿ.. :-)

ಕೇಶಮುಂಡನ ಮಾಡುವ ವ್ಯಕ್ತಿ.. ಅಲ್ಲಿಯೇ ಬಿದ್ದಿದ್ದ ಇದ್ದಲಿನಲ್ಲಿ ತನ್ನ ಮೊಬೈಲ್ ಸಂಖ್ಯೆ ಬರೆದದ್ದು ನನಗೆ ಮೊದಲು ನಗು ತಂದರೂ.. ನಂತರ ಅಬ್ಬಾ ಇಂತಹ ಅಡ್ವಟೈಸ್ಮೆಂಟ್ / ಮಾರ್ಕೆಟಿಂಗ್ ಅನ್ನಿಸಿತು..  ಆತನಿಗೂ ಇದು ತನ್ನ ಕೆಲಸ.. ಸರಿ ಎನ್ನಿಸಿತು.. ಹೌದು ಕೆಲವು ದೊಡ್ಡ / ಪುಟ್ಟ ವಿಷಯಗಳು ಭೂತಾಕಾರವಾಗಿ ಕಾಡುವುದೇ ಇಂತಹ ಸನ್ನಿವೇಶದಲ್ಲಿ.. ಎಲ್ಲವೂ ಇದ್ದರೂ.. ಕೇಶ ಮುಂಡನ ಮಾಡುವವ ಇಲ್ಲದೆ ಹೋದರೇ.. ರೇ ರೇ ರೇ ರೇ... !
ಕಾಗುಣಿತ ಹೇಗೆ ಇರಲಿ.. ಆದರೆ ವೃತ್ತಿಪರತೆ ಮೆಚ್ಚುವ ಅಂಶ.. 
ಹೀಗೆ ನನ್ನ ಮಾನಸ ಸರೋವರದಲ್ಲಿ ಅಲೆಅಲೆಯಾಗಿ ಏಳುತ್ತಿದ್ದ ಅನೇಕ ಪ್ರಶ್ನೆ ಉತ್ತರಗಳ ನಡುವೆ.. ಆ ಬಿರುಬಿಸಿಲಿಗೆ ತಲೆ ನೋವು ಶುರುವಾಗಿ.. ಹಾಗೆ ಕಂಬಕ್ಕೆ ಒರಗಿ ಕೂತಿದ್ದೆ.. ಆ ಕಡೆ ಕೇಶ ಮುಂಡನ ಕಾರ್ಯ ತುಸು ತಡವಾಗಿತ್ತು.. ಕಾರಣ ಕೇಶ ಮುಂಡನ ಮಾಡುವವ ಇನ್ನೊಂದು ಕಡೆ ಬ್ಯುಸಿ.. ಕಾಯುತ್ತಿದ್ದ ಕೂತಿದ್ದವರು ಹಲವರು ಇಲ್ಲಿ.. ಕಾಯುತ್ತಾ ಕಾಯುತ್ತಾ ಹಾಗೆ ಕಂಬಕ್ಕೆ ಒರಗಿ ಕೂತಿದ್ದ ನನಗೆ, ಯೋಚನಾ ಲಹರಿಯ ಅಲೆಗಳು ಮನದ ಕಡಲಿಗೆ ಬಡಿದು ಬಡಿದು ಹಾಗೆ ಕಣ್ಣುಗಳು ತಮ್ಮ ಕೋಣೆಯ ಕದವನ್ನ ಮುಚ್ಚಿಕೊಂಡ ಹೊತ್ತು..

ಏನಿಲ್ಲಾ ಎಂದರೂ ಸುಮಾರು ಇಪ್ಪತ್ತು ಇಪ್ಪತೈದು ನಿಮಿಷ ಮನಸ್ಸು ಆ ಸ್ಥಳದಿಂದ ಆಗಸ ಮಾರ್ಗದಲ್ಲಿ ದೇವಲೋಕದಲ್ಲೆಲ್ಲಾ ಓಡಾಡುತ್ತಿತ್ತು.. ಭುವಿಯಲ್ಲಿ ನೆಡೆಯುತ್ತಿದ್ದ ಕಾರ್ಯಕ್ರಮಗಳು ನನ್ನನ್ನು ಅಲ್ಲಿಂದ ಕರೆತರಲು ಸೋತಿದ್ದವು..

ಟಪಕ್ .. ಧಪ್.. ಮಡಿಕೆ ಒಡೆದ ಸದ್ದಿಗೆ.. ಅಚಾನಕ್ ನನ್ನ ಮನಸ್ಸು ಭುವಿಗೆ ಇಳಿಯಿತು.. ಅರೆ ಇದೇನಿದು.. ಸ್ಮಶಾನದಲ್ಲಿ ನಿದ್ದೆಯೇ.. ಅಯ್ಯೋ ದೇವರೇ.. ಅನ್ನಿಸಿತು.. ಯಾರು ಗಮನಿಸಿದ್ದರೋ ಇಲ್ಲವೋ ತಿಳಿಯದು.. ಆದರೆ ನಾ ಇಪ್ಪತ್ತು ಇಪ್ಪತ್ತೈದು ನಿಮಿಷ ನಿದ್ರಿಸಿದ್ದು ಮಾತ್ರ ಸುಳ್ಳಲ್ಲ.. {ನನಗೆ ಅರಿವಿಲ್ಲದೆ ಒಂದು ಆಸೆ ಕಾಡುತ್ತಿತ್ತು... ಸ್ಮಶಾನದಲ್ಲಿ ನಿದ್ದೆ ಮಾಡಬಹುದೇ.. ಮಾಡಿದರೆ ಅದರ ಸವಿ ಹೇಗೆ ಇರುತ್ತದೆ.. ಅದು ನೆರೆವೇರಿತು.. ವಿಚಿತ್ರ ಆಸೆ.. ಆದರೆ ನಿಜ :-)}

ಕಣ್ಣು ಬಿಟ್ಟು ನೋಡಿದೆ.. ಆಗಲೇ ಮುಂದಿನ ಕಾರ್ಯಗಳು ನೆರೆವೇರುತ್ತಿದ್ದವು... ಇನ್ನೇನು ಸಂಸ್ಕಾರದ ಅಂತಿಮ ಹಂತ ತಲುಪಿತ್ತು.. ಬಂದವರೆಲ್ಲ ತಮ್ಮ ಅಂತ್ಯ ನಮನಗಳನ್ನು ಆ ಹಿರಿಯ ಜೀವಕ್ಕೆ ಸಲ್ಲಿಸಿದ್ದು ಆಗಿತ್ತು.. ಕೆಲವೇ ಕ್ಷಣಗಳು ದೇವರು ಮಾಡಿದ ಈ ಜೀವವೆಂಬ ಮಡಿಕೆ ಅಗ್ನಿಯ ಜೊತೆಯಲ್ಲಿ ಆಲಿಂಗನಕ್ಕೇ ಸಿದ್ಧವಾಗಿತ್ತು.. ಧಗ ಧಗ ಉರಿಯುತ್ತಿದ್ದ ಅಗ್ನಿ ತನ್ನ ಕೆನ್ನಾಲಿಗೆಯನ್ನು ಚಾಚಿಕೊಂಡು ಆ ಹಿರಿಯ ಜೀವವನ್ನು ತನ್ನ ಮಡಿಲಿಗೆ ಸೇರಿಸಿಕೊಂಡ.. ಇನ್ನೊಂದು ಐದಾರು ತಾಸುಗಳು.. ಹಲವಾರು ವಸಂತಗಳನ್ನು ಕಂಡ ಆ ಬ್ರಹ್ಮನ ಕೃತಿ ಒಂದು ಮಡಿಕೆಯೊಳಗೆ ಬೂದಿಯಾಗಿ.. ಕಾವೇರಿ ಮಡಿಲನ್ನು ಸೇರುವ ಕ್ಷಣಗಳು ದೂರವಿರಲಿಲ್ಲ..

ಸುಮಾರು ಹೊತ್ತು ಆ ಚಿತೆಯನ್ನೇ ನೋಡುತ್ತಾ ನಿಂತಿದ್ದೆ.. ಕಾಲುಗಳು ನೋಯುತ್ತಿದ್ದವು.. ತಲೆ ಸಿಕ್ಕಾ ಪಟ್ಟೆ ಸಿಡಿಯುತ್ತಿತ್ತು.. ತಲೆಯ ಮೇಲೆ ಯಾರೋ ಗದಾಪ್ರಹಾರ ಮಾಡುತ್ತಿರುವಂತೆ.. . ಮನಸ್ಸು ಭಾರವಾಗಿತ್ತು.. ಪಕ್ಕದಲ್ಲಿ ನೋಡಿದೆ.. ಇನ್ನೊಂದು ದೇಹದ ಅಂತ್ಯಸಂಸ್ಕಾರಕ್ಕೆ ಕಾಯುತ್ತಿದ್ದ ಚಿತೆಯ ಮೇಲೆ ಬಾಳಿ ಬದುಕಬೇಕಾದ ಪಾರಿವಾಳ ಕೂತಿತ್ತು..

ತನ್ನ ನಿತ್ಯ ಬದುಕಿಗೆ ಆಹಾರ ಹುಡುಕುತ್ತಿರುವ ಪಾರಿವಾಳ!!!

ಒಂದರ ಸಾಹಸಿ ಬದುಕಿನ ಅಂತ್ಯ.. ಇನ್ನೊಂದರದ್ದು ಬದುಕಲು ಪಡುತ್ತಿದ್ದ ಸಾಹಸ  :-(

Tuesday, December 6, 2016

ಕಣ್ಣಂಚಿನ ನೋಟ - 360° ಕೋನದಲ್ಲಿ

ಕಣ್ಣಂಚಿನ ನೋಟ - 90° ಕೋನದಲ್ಲಿ
ಕಣ್ಣಂಚಿನ ನೋಟ - 180° ಕೋನದಲ್ಲಿ
ಕಣ್ಣಂಚಿನ ನೋಟ - 270° ಕೋನದಲ್ಲಿ

ತನ್ನ ಮನಗೆದ್ದ ಹುಡುಗಿ ವೀಣಾ.. ಬಂದಳು.. ನೋಡಿದಳು.. ಮಾತಾಡಿದಳು.. ಒಮ್ಮೆ ಜೋರಾಗಿ ಚಿಗುಟಿಕೊಂಡ.. ಹೌದು ಕನಸಲ್ಲ ಇದು.. ಉದಯ ಮ್ಯೂಸಿಕ್ ನಲ್ಲಿ ಕಿಲಾಡಿಜೋಡಿ ಚಿತ್ರದ "ಕನಸಿನಲಿ ನೋಡಿದೆನು ಕನವರಿಸಿ ಕೂಗಿದೆನು" ಹಾಡು ಬಂದಾಗಲಂತೂ.. ಅರೆ ಕನಸಲ್ಲ ಇದು ನನಸು.. ಎಂದಿತು ಕೃಷ್ಣಕಾಂತನ ಮನಸ್ಸು..

ಹೋದವಾರವಷ್ಟೇ ತಂದಿದ್ದ ನೀಲಿ ಜೀನ್ಸ್ ಪ್ಯಾಂಟನ್ನು ಮನೆಯ ಹತ್ತಿರವಿದ್ದ ಟೇಲರ್ ಬಳಿಕೊಂಡೊಯ್ದು ಉದ್ದ ಸರಿಮಾಡಿಸಿಕೊಂಡು ಬರಲು ಹೊರಟ.. ಮನಸ್ಸು ಹಗುರಾಗಿತ್ತು.. "ನಾಳಿನ ಭಾಗ್ಯಕೆ ಕಾದಿದೆ ಮಡಿಲು" ಬಭೃವಾಹನ ಚಿತ್ರದ ಹಾಡಿನ ಒಂದು ಎಳೆ ಮನದಲ್ಲಿ ಹರಿದಾಡಿತು..  ಬೆಳಿಗ್ಗೆ ಪಾರ್ಕಿನ ಬಳಿ ಮಾತಾಡಿದಾಗಿನಿಂದ .. ಊಟ ತಿಂಡಿ ಏನೂ ಬೇಕಿರಲಿಲ್ಲ.. ಆದರೆ ಎಷ್ಟು ಹೊತ್ತು ಆ ನಶೆಯಲ್ಲಿ ಇರೋಕಾಗುತ್ತೆ ಅಲ್ವೇ.. ಹೊಟ್ಟೆಯಲ್ಲಿದ್ದ ಹುಳಗಳು.. ಬೇಕೇ ಬೇಕು ಊಟ ಬೇಕು ಅಂತ ಕೂಗಲು ಶುರುಮಾಡಿತು..

ಟೇಲರ್ ಅಂಗಡಿಗೆ ಪ್ಯಾಂಟ್ ಕೊಟ್ಟು.. ಹತ್ತು ನಿಮಿಷ ಬರುತ್ತೇನೆ ಎಂದು ಹೇಳಿ. ಹತ್ತಿರದಲ್ಲಿಯೇ ಇದ್ದ ಪಾನಿಪುರಿ ಗಾಡಿಯ ಬಳಿ ಹೆಜ್ಜೆ ಹಾಕಿದ.. ಪಾನಿಪುರಿ ಗಾಡಿಯವನಿಗೆ ಒಂದು ಸಲ್ಯೂಟ್ ಹೊಡೆದ.. "ಸರ್ ನಮಸ್ಕಾರ.. ಒಂದೈದು ನಿಮಿಷ ನಿಮ್ಮ ಬ್ರಾಂಡ್ ರೆಡಿ ಆಗುತ್ತೆ"

ವಾರದಲ್ಲಿ ಕನಿಷ್ಠ ಎರಡು ಮೂರು ಬಾರಿಯಾದರೂ ಅಲ್ಲಿ ಪಾನಿ ಪುರಿ ತಿನ್ನುತ್ತಿದ್ದರಿಂದ ಚಿರಪರಿಚಿತನಾಗಿದ್ದ .. ಮತ್ತೆ ಅದೇ ಗುಂಗಿಗೆ ಶರಣಾದ..ಏನೋ ಒಂದು ರೀತಿಯ ಸುಖ ಸಿಗುತ್ತಿತ್ತು..

"ಸರ್ .. ಗುರುಗಳೇ.. ಯಜಮಾನರೇ.." ಎಂದು ಹೇಳಿ.. ಗಾಡಿಯವ ಅವನ ಕೈ ಮುಟ್ಟಿದಾಗಲೇ.. ಮತ್ತೆ ಭುವಿಗೆ ಬಂದದ್ದು..
ಒಂದು ರಾಶಿ ಮಾತಾಡುವ ಇವರು ಯಾಕೆ ಸೈಲೆಂಟ್.. ಈ ಪ್ರಶ್ನೆ ಗಾಡಿಯವನ ಮನದಲ್ಲಿ ಮೂಡಿದ್ದರೂ, ಸವಿಯಾದ ಪಾನಿಪುರಿ ಕಾಲೇಜು ಯುವತಿಯರ ಬಾಯಲ್ಲಿ ಮಾಯವಾಗುವಂತೆ, ಗಾಡಿಯವನ ಮನದಲ್ಲಿ ಹಾಗೆ ಮರೆಯಾಯಿತು.. ಕಾರಣ ಸಂಜೆ.. ಅವನ ಗಾಡಿಗೆ ಗ್ರಾಹಕರು ಹೆಚ್ಚು.. :-)

ತನ್ನ ಯಥಾಪ್ರಕಾರದ ಖೋಟಾ ಮುಗಿಸಿ.. ಟೇಲರ್ ಅಂಗಡಿಯಿಂದ ಪ್ಯಾಂಟ್ ಪಡೆದು ಮನೆಗೆ ಬಂದ.. ಗಡಿಯಾರ ನೋಡಿದಾಗ ಒಂಭತ್ತು ಮೂವತ್ತಾಗಿತ್ತು.. ತನ್ನ ಇಷ್ಟದ ಕಾರ್ಯಕ್ರಮ "ಥಟ್ ಅಂತ ಹೇಳಿ" ಕಾರ್ಯಕ್ರಮ ನೋಡುತ್ತಾ ಹಾಗೆ ಮಂಚದ ಮೇಲೆ ಉರುಳಿಕೊಂಡ.. ನಿದ್ರಾದೇವಿ ಯಾವಾಗ ಅವರಿಸಿಕೊಂಡಿದ್ದಳೋ ಅರಿವಿಲ್ಲ..

ಬೆಳಿಗ್ಗೆ ಎದ್ದಾಗ ಹತ್ತು ಘಂಟೆ.. ಅಲ್ಲಿಯ ತನಕ ರಾತ್ರಿ ಹಾಕಿದ್ದ ಟಿವಿ ಓಡುತ್ತಲೇ ಇತ್ತು.. ಯಥಾ ಪ್ರಕಾರ .. ತನ್ನ ಕಾರ್ಯಕ್ರಮ ಮುಗಿಸಿ..  ಆಂಜನೇಯ ದೇವಸ್ಥಾನಕ್ಕೆ ಹೋದ.. ಕೆಲ ಹೊತ್ತು ಅಲ್ಲಿಯೇ ಕೂತು ಜಪ ಮಾಡಿಕೊಂಡು ಕಣ್ಣು ತೆಗೆದಾಗ ಮನಸ್ಸು ತಹಬದಿಗೆ ಬಂದಿತ್ತು.. ಚಪ್ಪಲಿ ಮೆಟ್ಟಿಕೊಂಡು ತನ್ನ ಬೈಕ್ ಹತ್ತಿರ ಬಂದಾಗ.. ಒಂದು ಚೀಟಿ ಕನ್ನಡಿಗೆ ಮೆತ್ತಿಕೊಂಡದ್ದು ಕಾಣಿಸಿತು..ಯಾವುದೋ ಜಾಹಿರಾತಿನ ಚೀಟಿ ಎಂದು ಬಿಸಾಕಲು ಹೋದವನಿಗೆ ಕಂಡದ್ದು.. "ಸರ್ .. ಕ್ಷಮಿಸಿ.. ಸಮಯ ಹೇಳೋದು ಮರೆತಿದ್ದೆ.. ಸಂಜೆ ಏಳು ಘಂಟೆಗೆ ನ್ಯೂ ಶಾಂತಿ ಸಾಗರ್ ಹತ್ತಿರ ಬನ್ನಿ.. ಒಂದು ಟೇಬಲ್ ಕಾದಿರಿಸುತ್ತೇನೆ.. "

ಏನಪ್ಪಾ ಇದು... ಏನು ನೆಡೆಯುತ್ತಿದೆ.. ಈಕೆ ಹುಡುಗಿಯೇ.. ಪತ್ತೇದಾರಳೆ.. ಏನೂ ಅರಿವಾಗುತ್ತಿಲ್ಲ.. ಗೊಂದಲದ ಗೂಡಾಗಿದ್ದ ಕೃಷ್ಣಕಾಂತ ಒಮ್ಮೆ ಜೋರಾಗಿ ಉಸಿರು ಒಳಗೆ ತೆಗೆದುಕೊಂಡು ಹೊರಕ್ಕೆ ಹಾಕಿದ.. ತಾಳ್ಮೆ, ಪ್ರಶಾಂತತೆ.. ಯಾವುದೇ ವಿಷಮ ಪರಿಸ್ಥಿತಿಯಲ್ಲೂ ವಿವೇಕದಿಂದ ವರ್ತಿಸುತ್ತಿದ್ದ ಅವನಿಗೆ.. ತನ್ನ ಮನಸ್ಸು ಕೊಂಚ ಗಲಿಬಿಲಿಗೊಂಡಿದ್ದರೂ, ಬೆಳಗಿನ ದೇವಸ್ಥಾನದ ಭೇಟಿ ಅವನಿಗೆ ಹಿತ ನೀಡಿ ಮನಸ್ಸನ್ನು ಶಾಂತಗೊಳಿಸಿತ್ತು

"ನೀರಲ್ಲಿ ಮುಳುಗಿದವನಿಗೆ ಮಳೆಯೇನು ಚಳಿಯೇನು"  ಎಂಬ ಗಾದೆಯಂತೆ, ಅದೇನಾಗುತ್ತೋ ನೋಡಿಯೇ ಬಿಡೋಣ.. ಎಂದು ಯೋಚಿಸುತ್ತಾ ಮನೆಗೆ ಬಂದ..

ಕಚೇರಿಯ ಕೆಲಸ ಒಂದು ಖಂಡುಗ ಇತ್ತು.. ನಿಧಾನಕ್ಕೆ ತನ್ನ ಕೆಲಸದ ಮತ್ತಿನ ಲೋಕಕ್ಕೆ ಜಾರಿದ.. ಮಧ್ಯಾನ್ಹದ ಊಟದ ಅರಿವಿಲ್ಲ... ತನ್ನ ಕೋಣೆಯಲ್ಲಿ ಬೆಳಕು ಕಡಿಮೆಯಾದಾಗಲೇ ಅವನಿಗೆ ಅರಿವಾದದ್ದು.. ಸಂಜೆಯಾಗಿದೆ ಎಂದು!

ಸಮಯನೋಡಿಕೊಂಡ ಸಂಜೆ ೬. ೨೫ ಆಗಿದೆ.. ಅರೆ ಅರೆ ಏನಾಯ್ತು ಇದು.. ಎಂದು ಗಡಿಬಿಡಿಯಿಂದ ಎದ್ದು.. ಮೋರೆ ತೊಳೆದುಕೊಂಡು.. ಆ ಹುಡುಗಿ ಹೇಳಿದ್ದ ಬಿಳಿ ಶರ್ಟ್ ಮತ್ತು ನೀಲಿ ಜೀನ್ಸ್ ತೊಟ್ಟು.. ಉರಿಯುತ್ತಿದ್ದ ದೇವರ ದೀಪಕ್ಕೆ ಇನ್ನಷ್ಟು ಎಣ್ಣೆ ಹಾಕಿ... ದೇವರಿಗೆ ಕೈಮುಗಿದು ಹೊರಟ..

ನ್ಯೂ ಶಾಂತಿಸಾಗರ್ ಹತ್ತಿರ ಬಂದಾಗ ೬.೫೫ ಆಗಿತ್ತು.. ಅಬ್ಬಾ ಇನ್ನೂ ಐದು ನಿಮಿಷ ಇದೆ.. ಸದ್ಯ ಸಮಯಕ್ಕಿಂತ ಮುಂಚೆಯೇ ಬಂದೆ.. ಎಂದು ನಿಡಿದಾದ ಉಸಿರು ಬಿಟ್ಟು ಬೈಕನ್ನು ಪಕ್ಕದಲ್ಲಿಯೇ ನಿಲ್ಲಿಸಿ, ಹೆಲ್ಮೆಟ್ ಸಿಕ್ಕಿಸಿ ಬೀಗ ಹಾಕಿಕೊಂಡು ಹೋಟೆಲ್ ಬಾಗಿಲ ಬಳಿ ನೆಡೆದ..

"ನಮಸ್ಕಾರ್ ಕೃಷ್ಣಕಾಂತ್.. ಹೇಗಿದ್ದೀರಾ.. " ಅಪರಿಚಿತ ಧ್ವನಿಗೆ ಚಕ್ ಅಂತ ಹಿಂದೆ ತಿರುಗಿ ನೋಡಿದ..

ಏಕ್ ದಂ ಅಪರಚತ ವ್ಯಕ್ತಿ.. ಅಪರಿಚಿತ ಧ್ವನಿ..

"ಸರ್ ನೀವು?"

"ಅದೆಲ್ಲಾ ಆಮೇಲೆ .. ಮೊದಲು ಬನ್ನಿ ಒಳಗೆ ಹೋಗೋಣ.. ನಿಮಗಾಗಿ ಒಬ್ಬರು ಕಾಯುತ್ತಿದ್ದಾರೆ.. "

ಹೃದಯ ಬಾಯಿಗೆ ಬಂದಿತ್ತು.. ಯಾರಪ್ಪ ಇದು.. ನೋಡಲು ಚೆಲುವಾಂತ ಚೆನ್ನಿಗನೇ ಆಗಿದ್ದರೂ.. ಇವ ಯಾರೂ ಅನ್ನುವ ಪ್ರಶ್ನೆ.. ಬಸ್ ನಿಲ್ದಾಣಕ್ಕೆ ಬಂದು.. ಯಾವ ಆಟೋ ನಾ ಹೋಗುವ ಜಾಗಕ್ಕೆ ಬರುತ್ತಾನೆ ಎನ್ನುವ ಗೊಂದಲದ ತರಹವೇ ಕೃಷ್ಣಕಾಂತನಿಗೂ ಕಾಡುತ್ತಿತ್ತು..

ಹೃದಯದ ಬಡಿತ ಜೋರಾಗಿಯೇ ನಗಾರಿ ಬಾರಿಸಲು ಶುರುಮಾಡಿತ್ತು..

"ಸರ್ ನೀವು ಯಾರೂ ಅಂತ ಹೇಳಲಿಲ್ಲ.. ಬೇರೇ ಯಾರನ್ನೋ ತಪ್ಪಾಗಿ ತಿಳಿದುಕೊಂಡಿದ್ದೀರಿ ಅನ್ನಿಸುತ್ತದೆ" ಕೃಷ್ಣಕಾಂತ್ ಬಡಬಡಿಸುತ್ತಲೇ ಇದ್ದಾ..

".... .. ನೀವೇ ಕೃಷ್ಣಕಾಂತ್ ತಾನೇ.. ನಾ ಸರಿಯಾಗಿಯೇ ಗುರುತಿಸಿದ್ದೇನೆ.. ಮೊದಲು ಬನ್ನಿ.. "

"ಸರ್.. .ನಾ ಇಲ್ಲಿ ಒಬ್ಬರಿಗೆ ಕಾಯುತ್ತಿದ್ದೇನೆ.. ಅವರು ಬಂದ ಮೇಲೆ ಒಳಗೆ ಹೋಗಬೇಕು.. ನೀವು ಕನ್ಫ್ಯೂಸ್ ಮಾಡಿಕೊಂಡಿದ್ದೀರಾ ಅನ್ಸುತ್ತೆ"

ತುಸು ಗಡಸು ದನಿಯಲ್ಲಿ ಆತ "ಕೃಷ್ಣಕಾಂತ್.. ನೀವು ಬರದೇ ಹೋದರೇ.. ನಾನು ನಿಮ್ಮನ್ನು ಎತ್ತಿಕೊಂಡು ಒಳಗೆ ಹೋಗುತ್ತೇನೆ.. ಕೂಸುಮರಿ ಮಾಡಿಕೊಂಡು.. ನಡೀರಿ ಸರ್ ಒಳಗೆ"

ಬೇರೆ ದಾರಿಯಿಲ್ಲದೆ "ಸರ್.. ಅದು.. ನೋಡಿ.. ದಯವಿ.. ಸರ್.. ಪ್ಲೀಸ್... ಛೆ... ನೋಡಿ ಸರ್.. "

"ಕೃಷ್ಣಕಾಂತ್ ಮಾತು ಆಮೇಲೆ.. ಮೊದಲು ಒಳಗೆ ನೆಡೆಯಿರಿ" ತುಸು ಗದರಿದ ದನಿಯಲ್ಲಿ ಹಾಗೆ ಕೃಷ್ಣಕಾಂತನನ್ನು ತಳ್ಳಿಕೊಂಡೇ ಒಳಗೆ ಹೊರಟ...

ಬೇರೆ ದಾರಿ ಕಾಣದೆ.. ಕೃಷ್ಣಕಾಂತ್ ದೇವರ ಮೇಲೆ ಭಾರ ಹಾಕಿ... ಹೋಟೆಲ್ ಒಳಗೆ ಕಾಲಿಟ್ಟ..

ಟೇಬಲ್ ನಂಬರ್ ೮ ಖಾಲಿ ಇತ್ತು.... . ಮಂದ ಬೆಳಕು ಸ್ಪಷ್ಟವಾಗಿ ಕಾಣುತ್ತಿರಲಿಲ್ಲ.. ನಿಧಾನಕ್ಕೆ ಆ ಟೇಬಲ್ ಕಡೆ ಇಬ್ಬರೂ ಹೆಜ್ಜೆ ಇಟ್ಟರು..

ಕೃಷ್ಣಕಾಂತನಿಗೆ.. ಪಾಪ ಆ ಹುಡುಗಿ ಹೊರಗೆ ಕಾಯುತ್ತಿರುತ್ತಾಳೆ.. ಈ ಮಂಗಮನುಷ್ಯ ನೋಡಿದರೆ ನನ್ನನ್ನು ಯಾರೋ ಅಂದುಕೊಂಡು ಬಲವಂತವಾಗಿ ಕರೆದೊಯ್ಯುತ್ತಿದ್ದಾನೆ..  ಆಕೆಯ ಮೊಬೈಲ್ ನಂಬರ್ ಇದ್ದಿದ್ದ್ರೆ.. ಒಂದು ಸಂದೇಶ ಆದರೂ ಕಳಿಸಬಹುದಿತ್ತು ಛೆ.. ಕೋಪ ಉಕ್ಕುತ್ತಿತ್ತು.. ಆದರೆ ಏನೂ ಮಾಡುವಂತೆ ಇರಲಿಲ್ಲ..

ಟೇಬಲ್ ಎಂಟರಲ್ಲಿ ಒಂದು ಫಲಕ ಇತ್ತು "R E S E R V E D"

"ಕೃಷ್ಣಕಾಂತ್.. ಇಲ್ಲಿಯೇ ಕೂತಿರೀ.. ಎರಡು ನಿಮಿಷ ಬಂದೆ.. "

ಮಾಯಾಬಜಾರ್ ಚಿತ್ರ ನೋಡಿದ ಅನುಭವ.. ಏನಾಗುತ್ತಿದೆ ಅರಿವಾಗುತ್ತಿಲ್ಲ.. ಏನಾಗಬೇಕಿತ್ತೋ ಆಗುತ್ತಿಲ್ಲ  .. ಪಾಪ ಆ ಹುಡುಗಿ ಹೊರಗೆ ಕಾಯುತ್ತಿರುತ್ತಾಳೆ.. ಓಕೆ ಓಕೆ ಈ ವ್ಯಕ್ತಿ ಬಂದ ಕೂಡಲೇ ಸ್ವಲ್ಪ ದಬಾಯಿಸಿ.. ಹೊರಟು ಬಿಡಬೇಕು.. ಪಾಪ ಆ ಹುಡುಗಿಯನ್ನು ಕಾಯಿಸುವುದು ಸರಿಯಲ್ಲ.. ಮನಸ್ಸನ್ನು ಸಿದ್ಧಮಾಡಿಕೊಂಡು ಒಂದು ಲೋಟ ನೀರು ಕುಡಿದು.. ಸುಮ್ಮನೆ ಕುಳಿತಿದ್ದ..

ಒಂದೆರಡು  ಕ್ಷಣಗಳು ಯುಗಗಳ ತರಹ ಉರುಳಿತು ..

".. ನಮಸ್ಕಾರ ಕೃಷ್ಣಕಾಂತ್ ಹೇಗಿದ್ದೀರಾ"

ಕೋಗಿಲೆ ಧ್ವನಿ.. ನಾ ಕೇಳಿದ ಧ್ವನಿ.. ತಾನಿಷ್ಟ ಪಟ್ಟ ಧ್ವನಿ ..

ಕುತ್ತಿಗೆ ನೋವಾಗುತ್ತೆ ಎಂದು ಗೊತ್ತಿದ್ದರೂ.. ೨೭೦ ಡಿಗ್ರಿ ತಿರುಗಿದ...

ಕಣ್ಣು ಊರಗಲವಾಯಿತು.. ಮೈ ಮೆಲ್ಲನೆ ಬೆವರಲು ಶುರುಮಾಡಿತು.. ಅಯ್ಯೋ ಈ ಹುಡುಗಿ ಯಾರನ್ನೋ ಕರೆತಂದಿದ್ದಾಳೆ.. ಏನೂ ಗ್ರಹಚಾರವೋ ನಾನೇಕೆ ಒಪ್ಪಿಕೊಂಡೆ ಇಲ್ಲಿಗೆ ಬರಲು.. ಅರೆ ನಾನೆಲ್ಲಿ ಒಪ್ಪಿಕೊಂಡೆ.. ಅವಳು ಹೇಳಿದಳು.. ನಾ ಕುರಿಯಂತೆ ಇಲ್ಲಿಗೆ ಬಂದಿದ್ದೇನೆ.. ಛೆ ಯೋಚಿಸಬೇಕಿತ್ತು.. ದುಡುಕಿಬಿಟ್ಟೆ..ಸುತ್ತಮುತ್ತಲು ಒಳ್ಳೆ ಘನತೆ ಗೌರವ ಕಾಪಾಡಿಕೊಂಡಿದ್ದೇನೆ... ಈಗ ಏನಾಗುತ್ತೋ.. ಗಣಪ.. ನನ್ನ ಮಾನ ಮರ್ಯಾದೆ ಎಲ್ಲವೂ ನಿನ್ನ ಕೈಯಲ್ಲಿ.. ಒಂದೆರಡು ಅರೆ ಘಳಿಗೆಗಳಲ್ಲಿ ಕಣ್ಣು  ಮುಚ್ಚಿ ಹಾಗೆ ಧ್ಯಾನಿಸಿದ...

"ವೀಣಾ.. ಇವರೇ ನಿನ್ನನ್ನು ಕಾಡುತ್ತಿದ್ದ ಕೃಷ್ಣಕಾಂತ್.. .. ಏನ್ರಿ.. ನಮ್ಮ ಹುಡುಗೀನೇ ಬೇಕಿತ್ತಾ ನಿಮಗೆ.. ನಿಮಗೆ ಸ್ವಲ್ಪವೂ ಬೇಸರವಾಗುವುದಿಲ್ಲವೇ.. ಏನ್ರಿ ಆಗಿಂದ ನೋಡುತ್ತಿದ್ದೇನೆ.. ಏನೂ ಮಾತಾಡುತ್ತಿಲ್ಲ.. ದಿನಾ ಕಣ್ಣರಳಿಸಿಕೊಂಡು ನೋಡೋಕೆ ಆಗುತ್ತೆ.. ಮಾತಾಡೋಕೆ ಆಗೋಲ್ವಾ.. ಸುಮ್ಮನೆ ಯಾಕ್ರೀ ಕೂತಿದ್ದೀರಾ ಮಾತಾಡ್ರಿ ಕೃಷ್ಣಕಾಂತ್.. " ತೀಕ್ಷ್ಣ ನುಡಿಗಳು ಮೊದಲೇ ಗಾಬರಿಯಾಗಿ ಜೇನುಗೂಡಾಗಿದ್ದ ಮನಸ್ಸು..  ಕಲ್ಲು ಬಿದ್ದ ಜೇನು ಗೂಡಾಗಿತ್ತು..

ಬಾಯಲ್ಲಿ ನೀರಿನ ಪಸೆ .. ಕೆ ಆರ್ ಎಸ್ ಅಣೆಕಟ್ಟಿನ ರೀತಿಯಲ್ಲಿ ಒಣಗಿದ ವಾಟೆಗರಿಯಾಗಿತ್ತು.. ನಾಲಿಗೆಯಿಂದ ತುಟಿಯನ್ನು ಒಮ್ಮೆ ಸವರಿಕೊಂಡು .. ಸುತ್ತಲೂ ನೋಡಿದ.. ಯಾರೂ ಗಮನಿಸುತ್ತಿಲ್ಲ ಎಂದು ಅರಿತ ಮೇಲೆ.. ಟೇಬಲ್ ಮೇಲಿದ್ದ ನೀರಿನ ಲೋಟವನ್ನ ಎತ್ತಿಕೊಳ್ಳಲು ಹೋದ..

"ಸರ್ ಕ್ಷಮಿಸಿ.. ನೀವು  ಗಾಬರಿಯಾಗಿದ್ದೀರಾ.. ದಯಮಾಡಿ ಕ್ಷಮಿಸಿ.. ಇವರು ಸುಮ್ಮನೆ ನಿಮ್ಮನ್ನು ಗೋಳು ಹುಯ್ದುಕೊಳ್ಳುತ್ತಿದ್ದಾರೆ.. ತಗೋಳಿ ನೀರು ಕುಡಿಯಿರಿ.. " ಜೇನುದನಿ ಬಂದ ಕಡೆ ಮತ್ತೆ ಕಣ್ಣು ಅರಳಿಸಿದ..

ಇಬ್ಬರೂ ಜೋರಾಗಿ ನಗಲು ಶುರುಮಾಡಿದರು.. ಇಬ್ಬರೂ "ಕೃಷ್ಣಕಾಂತ್ ದಯಮಾಡಿ  ಕ್ಷಮಿಸಿ.. ಇದು ಇವಳದೆ ಪ್ಲಾನ್.. ನಮ್ಮನ್ನು ಕ್ಷಮಿಸಿ.. ಪ್ಲೀಸ್ ರಿಲ್ಯಾಕ್ಸ್ ಆಗಿ.. ಕಾಫಿ ಹೇಳಲೇ.. ನಿಮಗೆ"

ಪೇಲವ ನಗೆ ಬಿಸಾಕಿ "ಹೂ ಸರ್" ಎಂದ ಕೃಷ್ಣಕಾಂತ್..

"ಓಕೆ.. ವಿಷಯಕ್ಕೆ ಬರುತ್ತೇನೆ.. ನೋಡಿ ಕೃಷ್ಣಕಾಂತ್.. ನಾನು ರೇವ್.. ಸಾರಿ ರೇವಂತ್ ಅಂತ.. ಇವಳಿದ್ದಾಳಲ್ಲ ಇವಳ ತರಲೆ ಸಹಿಸಿಕೊಳ್ಳಲು ಈಕೆಯನ್ನು ಕೈ ಹಿಡಿಯುತ್ತಿರುವವನು.. ಇನ್ನೂ ಎಷ್ಟು ಕೀಟಲೆ ಸಹಿಸಿಕೊಳ್ಳಬೇಕು ಗೊತ್ತಿಲ್ಲ.. ನೀವು ಒಡವೆ ಅಂಗಡಿಯಿಂದ ಇವಳು ಹೊರಬಂದಿದ್ದನ್ನು ನೋಡಿದ್ದಿರಲ್ಲ.... ನೋಡಿ ಈ ಉಂಗುರ ತರಲು ಹೋಗಿದ್ದಳು.. ಇದು ನಮ್ಮಿಬ್ಬರ ನಿಶ್ಚಿತಾರ್ಥದ ಸಂಕೇತ.. ಇನ್ನೊಮ್ಮೆ ತರಕಾರಿ ಅಂಗಡಿಯ ಬಳಿ ಸಿಕ್ಕಾಗ.. ಮಿಂಚಿನಂತೆ ಬಂದು ಮಾಯವಾಗಿದ್ದಳಲ್ವ.. ಅಂದು ನಮ್ಮಿಬ್ಬರ ನಿಶ್ಚಿತಾರ್ಥದ ಹಿಂದಿನ ದಿನವಾಗಿತ್ತು.. ಇವಳ ಮನೆಯಲ್ಲಿಯೇ ಆ ಕಾರ್ಯಕ್ರಮ ನೆಡೆದಿತ್ತು  ಆದ್ದರಿಂದ..ಕಡೆ ಘಳಿಗೆಯಲ್ಲಿ ಅಡಿಗೆ ಭಟ್ಟರು ಹೇಳಿದ ಕೆಲವು ತರಕಾರಿಗಳನ್ನು ತರಲು ಇವಳು ಬಂದಿದ್ದಳು.. ಮತ್ತು ಸೀರೆಗೆ ಜಿಗ್ ಜಾಗ್, ಕುಚ್ಚು ಕಟ್ಟಲು ಕೊಟ್ಟಿದ್ದು, ಬ್ಲೌಸ್ ಅದಕ್ಕೆ ಹೊಂದುವಂತಹ ಬಳೆಗಳು ಇದನ್ನೆಲ್ಲಾ ತರಲು ಹೋಗಿದ್ದಳು.. ಅವಾಗ ನೀವು ಅಚಾನಕ್ ಇವಳ ಎದುರಿಗೆ ಬಂದಿರಿ.. ಆದರೆ ಇಬ್ಬರಿಗೂ ಆ ಮಂದಬೆಳಕಲ್ಲಿ ಏನು ಮಾಡಬೇಕು ಎಂದು ತೋಚದೆ.. ನಿಮ್ಮ ಪಾಡಿಗೆ ನೀವು ಹೋದಿರಿ.. ಅವಳ ಪಾಡಿಗೆ ಅವಳು ಹೋದಳು.."

ಮಂತ್ರ  ಮುಗ್ಧನಾಗಿ ಕೇಳುತ್ತಲೇ ಇದ್ದಾ ಕೃಷ್ಣಕಾಂತ್..

"ಆಮೇಲೆ.. ಸುಮಾರು  ದಿನಗಳು ನಿಮಗೆ ಇವಳು ಕಾಣಲಿಲ್ಲ .. ಇವಳಿಗೆ ನೀವು ಕಾಣಲಿಲ್ಲ.. ಕಾರಣ.. ಇವಳ ಆಫೀಸ್ ವಿಳಾಸ ಬದಲಾಗಿದ್ದು. .. ಕೆಲಸ ಒತ್ತಡ ಹೆಚ್ಚಿದ್ದು.. ಜೊತೆಯಲ್ಲಿ ನಮ್ಮಿಬ್ಬರ ಓಡಾಟ.. ಇವೆಲ್ಲವೂ ನಿಮ್ಮ ಕಣ್ಣಿಂದ  ಈ ಸುಂದರಿಯನ್ನು ಕೊಂಚ ದೂರ ಇರಿಸಿತ್ತು.. ಹಾಗೆಯೇ ಈ ಸುಂದರಿಯೂ ಕೂಡ ನಿಮ್ಮನ್ನು ಮಿಸ್ ಮಾಡಿಕೊಂಡದ್ದು ಇದೆ ಕಾರಣಕ್ಕೆ.. ಇಂದು ನಾವು ಮೂವರು ಒಂದೇ ಸೂರಿನಡಿ ಕೂತಿದ್ದೇವೆ.. ಈಗ ನನ್ನ ಮಾತು ಮುಗಿಯಿತು.. ನಿಮ್ಮ ಸರದಿ.. "

ರೇವಂತ್ ಉಫ್ ಇಂದು ಉಸಿರು ಬಿಟ್ಟು.. ಒಂದು ಲೋಟ ತಣ್ಣಗಿನ ನೀರನ್ನು ಗಟಗಟ ಕುಡಿದು.. ವೀಣಾಳ ಕಡೆ ನಗೆ ಬೀರಿ ಕಣ್ಣು ಹೊಡೆದ..

"ಸರ್.. ನಾ.. ಏನೂ.... ಹೇಗೆ.. ಛೆ.. ಉಫ್.. ಏನೂ ಗೊತ್ತಾಗು.. ಛೆ.. "

"ಕೃಷ್ಣಕಾಂತ್.. ದಯಮಾಡಿ ಗಾಬರಿ ಮಾಡಿಕೊಳ್ಳಬೇಡಿ.. ನಿಮ್ಮ ಗೊಂದಲ ನನಗೆ ಅರ್ಥವಾಗುತ್ತೆ.. ಇದೆಲ್ಲ ನಾ ಇವರಿಗೆ ಹೇಳಿದ್ದೆ.. ಗಾಬರಿ ಮಾಡಿಕೊಳ್ಳಬೇಡಿ.. ನಿಮ್ಮ ಬಗ್ಗೆ ಎಲ್ಲವನ್ನು ಹೇಳಿದ್ದೇನೆ.. ನಿಮ್ಮ ನಡೆನುಡಿ ನನಗೆ ಇಷ್ಟವಾಗಿದೆ.. ನಿಮ್ಮಂತಹ ಅದ್ಭುತ ವ್ಯಕ್ತಿಯ ಸ್ನೇಹದ ವಲಯದಲ್ಲಿ ನಾನಿರಬೇಕು ಎಂದು ಬಯಸುತ್ತೇನೆ.... ಛೆ.. ನಾವಿಬ್ಬರೂ ಬಯಸುತ್ತೇವೆ.. ನಿಮ್ಮ ಸ್ನೇಹದ ಬಂಧನ ನಮಗೆ ಸಿಗಬಹುದೇ.. "

ಕೃಷ್ಣಕಾಂತನಿಗೆ ಏನೂ ಹೇಳಬೇಕೋ ತೋಚದೆ.. ಸುಮ್ಮನೆ ಕೂತುಕೊಂಡ.. ಇನ್ನೊಂದು ಲೋಟ ನೀರು ಒಳಗೆ ಹೋಯಿತು..

ಅಷ್ಟರಲ್ಲಿ ಕಾಫಿ ಬಂತು.. ಗಾಬರಿಗೊಂಡಿದ್ದ ದೇಹ.. ಹೋಟೆಲಿನ ಎಸಿ.. ಕೊಂಚ ತಲೆನೋವು ತಂದಿತ್ತು.. ಕಾಫಿ ಕುಡಿದು ಮತ್ತೊಮ್ಮೆ ನೀರನ್ನು ಕುಡಿದು.. ಜೋರಾಗಿ ನಿಟ್ಟುಸಿರು ಬಿಟ್ಟ..

ವೀಣಾ ಮತ್ತು ರೇವಂತ್ ಮುಸಿ ಮುಸಿ ನಗುತ್ತಲೇ ಇದ್ದರು..

"ಕೃಷ್ಣಕಾಂತ್.. ನಿಮ್ಮ ಗೊಂದಲ ನಮಗೆ ಅರ್ಥವಾಗುತ್ತೆ.. ನೋಡಿ.. ನಾವಿಬ್ಬರೂ ಯಾಕೆ ಇಷ್ಟು ಓಪನ್ ಮೈಂಡೆಡ್ ಅಂದ್ರೆ..ನಮ್ಮಿಬ್ಬರ ಮಧ್ಯೆ ನಮಗೆ ನಂಬಿಕೆ ಇದೆ.. ಅಪಾರ ನಂಬಿಕೆ ಇದೆ.. ನಮಗಿಬ್ಬರಿಗೂ ನಮ್ಮ ಮೇಲೆ ನಂಬಿಕೆ ಇದೆ.. ತಪ್ಪು, ಅನುಮಾನ, ಸಂಶಯ, ದುರಾಸೆ, ಶಂಕೆ ಇದು ಯಾವುದೂ ನಮಗೆ ಗೊತ್ತಿಲ್ಲ.. ಪ್ರೀತಿಯೇ ನಮ್ಮುಸಿರು ಇದು ನಮ್ಮ ಬಾಳಿನ ಧ್ಯೇಯ.. ಒಂದು ವರ್ಷದಿಂದ ನೀವು ಇವಳನ್ನು ನೋಡುತ್ತಿದ್ದರೂ, ಒಮ್ಮೆಯೂ ಕೆಟ್ಟ ನೋಟದಿಂದ ನೀವು ನೋಡಿಲ್ಲ ಎಂದು ಇವಳೇ ಹಲವಾರು ಬಾರಿ ಹೇಳಿದ್ದಾಳೆ .. ಜೊತೆಯಲ್ಲಿ ಇವಳು ಕೂಡ ನಿಮ್ಮ ಬಗ್ಗೆ ಆಗಾಗ ಏನು ಬಂತು.. ನಾವು ಭೇಟಿಯಾದಾಗೆಲ್ಲ ನನಗೆ ಹೇಳುತ್ತಲೇ ಇದ್ದಳು.. ಹಾಗಾಗಿ ನಿಮಗೆ ಅರಿವಿಲ್ಲದೆ .. ಎಷ್ಟೋ ದಿನ ನಾ ಕೂಡ ನಿಮ್ಮನ್ನು ಗಮನಿಸಿದ್ದೇನೆ.. ಸಂಜೆ ನೀವು ಆಫೀಸಿನಿಂದ ಮನೆಗೆ ಬರುವಾಗ.. .. ನೀವು ಎಲ್ಲರನ್ನು ಹಾಗೆ ಗಮನಿಸುವುದಿಲ್ಲ ಎಂದು ತಿಳಿಯಿತು..  ನಿಮ್ಮ ಸುತ್ತಲ ಮುತ್ತಲ ಪ್ರದೇಶದಲ್ಲಿ ನಿಮ್ಮ ಬಗ್ಗೆ ಒಳ್ಳೆಯ ಬಹಳ ಒಳ್ಳೆಯ ಅಭಿಪ್ರಾಯವಿದೆ ಎಂದು ಈ ಬಡಾವಣೆಯ ಜನರಿಂದ ತಿಳಿಯಿತು.. .. ಇದೆಲ್ಲ ತಿಳಿದ ಮೇಲೆ, ವೀಣಾ ಕೂಡ ನಿಮ್ಮಂತಹ ಸ್ನೇಹಿತ ನಮ್ಮ ಬಾಳಿನಲ್ಲಿ ಇದ್ದರೇ  ಚೆನ್ನಾ ಅಂದಳು.. ನನಗೆ ನಾವು ಮೂವರು ಒಂದು ಅದ್ಭುತ ಸ್ನೇಹಿತರಾಗಬಹುದು ಎನ್ನಿಸಿತು.. ಹಾಗಾಗಿ ನೀವು ಇಲ್ಲಿದ್ದೀರಿ.. " ಎಂದು ತಮ್ಮ ಹೃದಯವನ್ನು ಮುಟ್ಟಿ ತೋರಿಸಿದಾಗ... ಕೃಷ್ಣಕಾಂತ್ ಮೂಕವಿಸ್ಮಿತನಾಗಿದ್ದ..

ವೀಣಾ ತನ್ನ ಕುರ್ಚಿಯಿಂದ ಎದ್ದು .ಕೈ ಚಾಚಿ . "ಕೃಷ್ಣಕಾಂತ್ ನಮ್ಮ ಸ್ನೇಹದ ಬಂಧನಕ್ಕೆ ಸ್ವಾಗತ ಶುಭ ಸ್ವಾಗತ.."  ಎಂದಾಗ ಅರಿವಿಲ್ಲದೆ ತನ್ನ ಕೈಯನ್ನು ಚಾಚಿದ.. ಪುಸಕ್ ಅಂತ ರೇವಂತ್ ಕೃಷ್ಣಕಾಂತನ ಕೈ ಎಳೆದುಕೊಂಡು "ಒಯೆ ಇವನು ನನ್ನ ಸ್ನೇಹಿತ.. ಅಲ್ವೇನೋ ಕಾಂತಾ"

ಸೋಲೊಪ್ಪಿಕೊಳ್ಳದ ವೀಣಾ "ಕಾಂತಾ ನಾ ತಾನೇ ನಿನ್ನ ಮೊದಲು  ನೋಡಿದ್ದು.. ಹಾಗಾಗಿ ನಾನೇ ತಾನೇ ನಿನ್ನ ಮೊದಲ ಸ್ನೇಹಿತೆ.. "

ಮಕ್ಕಳ ಜಗಳ ಕೃಷ್ಣಕಾಂತನಿಗೆ ಮಜಾ ಕೊಡುತ್ತಿತ್ತು..

ಇಷ್ಟು ಹೊತ್ತಾದರೂ.. ಪೂರ್ಣವಾಗಿ ಮಾತಾಡಲು ಅವಕಾಶ ಸಿಕ್ಕದ ಕೃಷ್ಣಕಾಂತ್ ಧೈರ್ಯ ಮಾಡಿ.. ವೀಣಾಳ ಕೈಯನ್ನು ಹಿಡಿದುಕೊಂಡು.. ಅದರ ಮೇಲೆ ರೇವಂತ್ ಕೈ ಇಟ್ಟು. "ವೀಣಾ- ರೇವಂತ್ ಇಂದಿನಿಂದ ನಾವು ಒಂದೇ ಪ್ರಾಣ.. ಮೂರು ದೇಹ .. ನಿಮಗಿಬ್ಬರಿಗೂ ಶುಭವಾಗಲಿ.. ಮದುವೆಗೆ ಈ ನಿಮ್ಮ ಸ್ನೇಹಿತನ ಕರೆಯೋದು ಮರೆಯಬೇಡಿ.. "

ಅಚಾನಕ್ ಕೃಷ್ಣಕಾಂತ್ ಅಷ್ಟೊಂದು ಸಲುಗೆಯಿಂದ ಮಾತಾಡಿದ್ದು ವೀಣಾ ಮತ್ತು ರೇವಂತ್ ಇಬ್ಬರಿಗೂ ಆಶ್ಚರ್ಯವಾಯಿತು.. ಆದರೂ ಕೃಷ್ಣಕಾಂತನ ಸ್ನೇಹಪರ ಮನಸ್ಸು ಅರಿತಿದ್ದ ಇಬ್ಬರಿಗೂ ಅವನ ಮಾತು ಮತ್ತು ಕೃತಿ ಮೆಚ್ಚುಗೆಗೆ ಪಾತ್ರವಾಯಿತು..

"ಹೌದು ರೇವಂತ್.. ಒಂದು ಮಾತು ನಿನ್ನಲ್ಲಿ.. ಮುಚ್ಚು ಮರೆಯಿಲ್ಲದೆ ಹೇಳುತ್ತೀಯಾ"

"ಹಾ ಕೃಷ್ಣಕಾಂತ್.. ನಿನ್ನ ಪ್ರಶ್ನೆ ನನಗೆ ಗೊತ್ತು .. ವೀಣಾಳನ್ನು ಮದುವೆಯಾಗುವ ಗಂಡು ನಾನು.. ನನಗೆ ಏಕೆ ನಿನ್ನ ಮೇಲೆ ಅನುಮಾನ, ಅಸೂಯೆ ಬರದೆ.. ನಿನ್ನನ್ನು ಸ್ನೇಹಿತನಂತೆ ಕಾಣುತ್ತಿದ್ದೇನೆ ಎನ್ನುವ ಸಂದೇಹ ತಾನೇ.. ನೋಡು.. ನನಗೆ ವೀಣಾಳ ಬಗ್ಗೆ ನನ್ನ ಪರಿಚಯಿಸ್ಥರಿಂದ ತಿಳಿದಿತ್ತು.. ಅವಳು ಹೇಗೆ.. ಅವಳ ಮಾತುಕತೆ ಹೇಗೆ.. ಎಲ್ಲವೂ ತಿಳಿದಿತ್ತು.. ಅವಳ ರೂಪಕ್ಕೆ ಅಷ್ಟೇ ಅಲ್ಲಾ ನಾ ಮರುಳಾಗಿದ್ದು.. ಅವಳ ಗುಣಕ್ಕೂ ಮಾರುಹೋಗಿದ್ದೆ.. ಮದುವೆ ಆದರೆ ಇವಳನ್ನೇ ಎಂದು ನಿರ್ಧರಿಸಿದೆ..ನಾನು ಈ ನಿರ್ಧಾರಕ್ಕೆ ಬಂದ ಮೇಲೆ ಅಲ್ಲಿ ಸಂಶಯಕ್ಕೆ ಅವಕಾಶವೇ ಇಲ್ಲ ಅಲ್ಲವೇ.. ನಿನ್ನ ಬಗ್ಗೆ ತಿಳಿಯಬೇಕಾದರೆ ನಾ ಬಹಳ ಶ್ರಮ ಪಡಬೇಕಾಯಿತು ಕಾರಣ.. ನೀ ಯಾರು ಎಂದು ತಿಳಿಯುದಕ್ಕಿಂತ ನೀ ಹೇಗೆ ಎಂದು ತಿಳಿಯಬೇಕಿತ್ತು. ಬಡಾವಣೆಯ ಸಮಿತಿಯ ಕಾರ್ಯಕ್ರಮದ ಬಗ್ಗೆ ಭಾಗವಹಿಸಲು ವೀಣಾ ಹೋಗಿದ್ದಳು.. ಆಗ ನಾ ಅವಳ ಮನೆಗೆ ಬಂದಿದ್ದೆ.. ಅವಳನ್ನು ಹುಡುಕಿಕೊಂಡು ಬಡಾವಣೆಯ ಸಮಿತಿಯ ಸದನಕ್ಕೆ ಬಂದಾಗ.. ನೀ ನೆಡೆದುಹೋಗುತ್ತಿರುವುದು ಕಂಡು ಬಂತು.. ಅಲ್ಲಿದ್ದ ಅಧ್ಯಕ್ಷರು ನಿನ್ನ ಬಗ್ಗೆ, ನಿನ್ನ ವ್ಯಕ್ತಿತ್ವದ ಬಗ್ಗೆ ಕೆಲವು ಮಾತನ್ನು ಹೇಳಿದರು. ನನಗೆ ಬಲು ಇಷ್ಟವಾಯಿತ್ತು.. ನನಗೆ ಅಲ್ಲಾ ವೀಣಾಳಿಗೂ ಕೂಡ.. ಅಲ್ಲಿಂದ ನಿನ್ನ ಬಗ್ಗೆ ತಿಳಿಯುವ ಕುತೂಹಲ ಶುರುವಾಗಿತ್ತು.. ಜೊತೆಯಲ್ಲಿ ನಿನ್ನ ಬಗ್ಗೆ ಕಿವಿ ತೂತಾಗುವಷ್ಟು ಇವಳು ಹೇಳಿದ್ದರಿಂದ ನನಗೂ ನಿನ್ನ ಮೇಲೆ ಒಂದು ರೀತಿಯ ಕ್ರಶ್ ಆಗಿತ್ತು!.. ಹಾಗಾಗಿ ನಾವು ಇಲ್ಲಿ"

"ಸೂಪರ್ ಕಣೋ.. .. ರೇವಂತ್" ಒಂದು ಹೈ ಫೈವ್ ಹೊಡೆದು.. ಗಟ್ಟಿಯಾಗಿ ತಬ್ಬಿಕೊಂಡ... ವೀಣಾಳನ್ನೇ ನೋಡುತ್ತಾ ಕಣ್ಣು ಮಿಟುಕಿಸಿದ..

"ಹಹಹಹಃ.. ಕಾಂತಾ.. ನಿನ್ನ ಇನ್ನೊಂದು ಪ್ರಶ್ನೆ ಏನು ಗೊತ್ತಾ.. ನಾ ಯಾಕೆ ನಿನ್ನ ಸತಾಯಿಸಿದೆ ಅಂತ ಅಲ್ವೇ.. ನಾಳೆ ಸಂಜೆ ಸಿಗೋಣ ಅನ್ನೋ ಮಾತನ್ನು.. ನಿನ್ನೆ ಬೆಳಿಗ್ಗೆ ನೀನು ಪಾರ್ಕ್ ಹತ್ತಿರ ಸಿಕ್ಕಾಗಲೇ ಹೇಳಬಹುದಿತ್ತು ಅಂತ ತಾನೇ.. ಇದೆಲ್ಲಾ ಈ ರೇವಂತನಾದೆ ಕಿತಾಪತಿ.. ಸುಮ್ಮನೆ ಒಂದು ಸ್ವಲ್ಪ ನಿನ್ನ ಗೋಳು ಹುಯ್ದುಕೊಳ್ಳೋಣ ಅಂತ ಪ್ಲಾನ್ ಮಾಡಿದ... ಪ್ಲೀಸ್ ನನ್ನ ಕ್ಷಮಿಸು.. ಮತ್ತೆ ನಾ ರೇವಂತನ ಮಾತನ್ನೇ ಹೇಳುತ್ತೇನೆ.. ಈ ಬಡಾವಣೆಯಲ್ಲಿ ನೆಡೆಯುವ ಕಾರ್ಯಕ್ರಮಕ್ಕೆ ನೀ ಬರುವುದು, ಗೌರವದಿಂದ ನೆಡೆದುಕೊಳ್ಳುವುದು, ನಿನ್ನನ್ನು ಹಿರಿಯರು ಕಿರಿಯರು ಎನ್ನದೆ ಅಭಿಮಾನದಿಂದ ನೋಡುವುದು.. ಇದೆಲ್ಲವೂ ನನಗೆ ತುಂಬಾ ಇಷ್ಟವಾಗಿತ್ತು.. ರೇವಂತ್ ಪರಿಚಯವಾದ ಮೇಲೆ ನಿನ್ನ ಬಗ್ಗೆ ಎಲ್ಲವನ್ನು ಹೇಳಿದ್ದೆ.. ಹಾಗಾಗಿ ನಮ್ಮಿಬ್ಬರ ಮಧ್ಯೆ ಯಾವುದೇ ರೀತಿಯ ಅಡ್ಡಿ ಆತಂಕಗಳೂ ಇರಲಿಲ್ಲ.. ನಿನ್ನಂತಹ ಸ್ನೇಹಿತ ನಮಗೆ ಬೇಕಿತ್ತು ಅನ್ನಿಸಿತು. .ಹಾಗೆ ಇವತ್ತು ನಾವು ಮೂವರು ಇಲ್ಲಿದ್ದೇವೆ.. ನೀ ದೇವಸ್ಥಾನಕ್ಕೆ ಹೋಗೋದನ್ನು ಇವನು ನೋಡಿದ.. ಇವನೇ ನಿನ್ನ  ಬೈಕಿಗೆ ಆ ಚೀಟಿ ಸಿಕ್ಕಿಸಿದ್ದು.. "


"ನಾ ಏನು ಹೇಳಲಿ ನಿಮ್ಮ ಪ್ರೀತಿಗೆ. ನನಗೆ ಅರಿವಿಲ್ಲದೆ ನಾ ವೀಣಾಳ ಬಗ್ಗೆ ಆಕರ್ಷಿತನಾಗಿದ್ದೆ.. ಆದರೆ ನೀವಿಬ್ಬರೂ ಜಾಸೂಸಿ ಕೆಲಸ ಮಾಡಿ.. ನನ್ನ ಬಗ್ಗೆ ವಿವರ ಕಲೆಹಾಕಿದ್ದು ಮಾತ್ರವಲ್ಲದೆ.. ನನ್ನನ್ನು ನಿಮ್ಮ ಸ್ನೇಹಿತ ಎಂದು ಗುರುತಿಸಿದಿರಿ.. ಅದು ಖುಷಿಯಾಯಿತು.. ಗೆಳೆತನ ಎಂದರೆ ಇದೆ ಅಲ್ಲವೇ.. " ಕೃಷ್ಣಕಾಂತ್ ಕಣ್ಣಲ್ಲಿ ನೀರು.

"ನೋಡು ಕಾಂತ.. ಗೆಳೆತನಕ್ಕೆ ಹೆಣ್ಣು ಗಂಡು ಭೇದವಿಲ್ಲ.. ಒಳ್ಳೆಯ ಮನಸ್ಸುಗಳು ಒಳ್ಳೆಯದನ್ನೇ ನೋಡುತ್ತವೆ ಎನ್ನುವುದಕ್ಕೆ ನಾವು ಮೂವರು ಉದಾಹರಣೆ.. ಹೌದು ನಿನ್ನ ಮನದಲ್ಲಿ ಒಂದು ಸಂದೇಹ ಇನ್ನೂ ಇದೆ ಎನ್ನಿಸುತ್ತದೆ.. ನಿಜ  ತಾನೇ"

"ಹೌದು ರೇವಂತ.. ನೀ ಅಸೂಯೆ ಪಡಬೇಕಾದ ಸಂದರ್ಭ.. ಅನುಮಾನ ಪಡುವ ಎಲ್ಲಾ ಸಾಧ್ಯತೆಗಳು ಇದ್ದರೂ ಕೂಡ.. ನೀ ಇಷ್ಟು ಕೂಲ್ ಆಗಿ ವರ್ತಿಸಿದ್ದು... ವೀಣಾಳ ಮನದಲ್ಲಿ ಇದ್ದ ಗೊಂದಲ ತುಂಬಿದ ಸ್ನೇಹದ ಮಾಲೆಯ ನೂಲಿಗೆ ನೀ ಇನ್ನಷ್ಟು ಬಲ ಕೊಟ್ಟಿದ್ದು ಆಶ್ಚರ್ಯ ಎನ್ನಿಸುತ್ತದೆ.. ನಾವೆಲ್ಲರೂ ಮನುಷ್ಯರೇ ಅಲ್ಲವೇ.. ಅನುಮಾನ, ಅಸೂಯೆ, ನಾನು ನನ್ನದು ಎನ್ನುವ ಮೋಹ ಯಾರನ್ನೂ ಬಿಡುವುದಿಲ್ಲ.. ಹಾಗಾಗಿ ಈ ಪ್ರಶ್ನೆ ಅಷ್ಟೇ.. "

"ಕಾಂತಾ.. ನಮ್ಮ ಕುಟುಂಬದಲ್ಲಿ ನೆಡೆದ ಒಂದು ಘಟನೆ.. ನನ್ನ ಮನಸ್ಸನ್ನು ಈ ರೀತಿ ಕೂಲ್ ಆಗಿ ಇರಲು, ಮತ್ತು ಜಗತ್ತನ್ನು ಪ್ರೀತಿಸಲು ಅವಕಾಶ ಮಾಡಿಕೊಟ್ಟಿತು.. ನಮ್ಮ ಚಿಕ್ಕಪ್ಪನ ಮಗನ ಜೀವನದಲ್ಲಿ ಸರಿ ಸುಮಾರು ಹೀಗೆ ಒಂದು ಘಟನೆ.. ಸುಂದರ ಹೆಂಡತಿ, ಗೌರವಯುಕ್ತ  ಕೆಲಸ, ಕೈತುಂಬಾ ಸಂಬಳ, ಮುದ್ದಾದ ಮಕ್ಕಳು.. ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದರೂ ಕೂಡ.. ವಾರದ ಕೊನೆಯಲ್ಲಿ ಊರು ಸುತ್ತೋದು, ಪ್ರವಾಸ, ಎಲ್ಲವೂ ಇತ್ತು.. ಹೆಂಡತಿ ತುಂಬಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಳು. ಸಹಜವಾಗಿಯೇ ಅಂತರ್ಜಾಲ ತಾಣದಲ್ಲಿ ತುಂಬಾ ಹೆಸರುವಾಸಿಯಾಗಿದ್ದಳು.. ಮೊದಲು ಮೊದಲು ಗಂಡ ಇದನ್ನೆಲ್ಲಾ ಇಷ್ಟಪಡುತ್ತಿದ್ದ.. ಆದರೆ ಬರುಬರುತ್ತಾ.. ಅವನಿಗೆ ಸಂದೇಹ ಮೂಡಲು ಶುರುವಾಯಿತು.. ತನ್ನ ಹೆಂಡತಿ ತನಗೆ ಮೋಸ ಮಾಡುತ್ತಿರಬಹುದೇ ಎಂಬ ಅನುಮಾನ.. ಅದಕ್ಕೆ ತಕ್ಕಂತೆ.. ಹೆಂಡತಿಯ ಫೋನ್ ಸದಾ ಬ್ಯುಸಿ.. ಫೇಸ್ಬುಕ್, ವಾಟ್ಸಾಪ್ ಗಳಲ್ಲಿ ಸಂದೇಶಗಳ ಸುರಿಮಳೆ.. ಹೀಗಿದ್ದರೂ ಹೆಂಡತಿ ಎಂದೂ ತನ್ನ ಮನೆಯನ್ನು, ಮನದಾತನನ್ನು, ಮಕ್ಕಳನ್ನು ಪಕ್ಕಕ್ಕೆ ಸರಿಸಿರಲಿಲ್ಲ.. ಆದರೆ ಗಂಡನಿಗೆ ಶುರುವಾದ ಅನುಮಾನ ಪಿಶಾಚಿ.. ಅವಳ ಸಂಸಾರವನ್ನೇ ಬಲಿ ತೆಗೆದುಕೊಂಡಿತು.. ಒಂದು ಕೆಟ್ಟ ಘಳಿಗೆಯಲ್ಲಿ ಹೆಂಡತಿ ಮಾಡಿದ ಅಡಿಗೆಗೆ ವಿಷ ಬೆರೆಸಿದ.. ಎಲ್ಲರೂ ತಿಂದು  ಸಾಯಬೇಕೆಂಬುದು ಅವನ ಪ್ಲಾನ್ ಆಗಿತ್ತು.. ಆದರೆ ಅದೇನಾಯಿತೋ ಏನೋ.. ದುರದುಷ್ಟಕರ.. ಆಫೀಸಿನಿಂದ ಕರೆಬಂತು  ಎಂದು.. ವಾರಾಂತ್ಯದಲ್ಲಿ ಆಫೀಸಿಗೆ ಹೋದ.. ಬರುವಷ್ಟರಲ್ಲಿ ಊಟ ಮಾಡಿ,ಮಲಗಿಕೊಂಡ ಮಕ್ಕಳು, ಹೆಂಡತಿ ಮರಳಿ ಬಾರದ ಲೋಕಕ್ಕೆ ಹೋಗಿಯೇ ಬಿಟ್ಟಿದ್ದರು.. ಅವನಿಗೆ ಹುಚ್ಚು ಹಿಡಿಯಿತು.. ಈಗಲೂ ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.. " ರೇವಂತ್ ಕಣ್ಣೀರು ಒರೆಸಿಕೊಂಡ.. ವೀಣಾ ಅವನ ಭುಜದ ಮೇಲೆ ಕೈಯಿಟ್ಟು.. ಒಮ್ಮೆ ತಟ್ಟಿದಳು..

"ಸಾರೀ ಕಾಂತ ಸ್ವಲ್ಪ ಭಾವುಕನಾಗಿ ಬಿಟ್ಟೆ.. .. ವೀಣಾ ನಿನ್ನ ಬಗ್ಗೆ ಎಲ್ಲಾ ಹೇಳಿದಾಗ.. ನನಗೆ ಮೊದಲು ಅಸೂಯೆ ಬಂದರೂ ಕೂಡ.. ಮೇಲಿನ ಘಟನೆ ನನ್ನ ಮನಸ್ಸನ್ನು ತಿಳಿಮಾಡಿತು.. ಹಾಗಾಗಿ ನಾ ವೀಣಾಳಿಗೆ ಸಪೋರ್ಟ್ ಮಾಡಿದೆ.. ಹಾಗಾಗಿ ಇಂದು ನಾವು ಇಲ್ಲಿ :-)

ಇಷ್ಟು ಕೇಳಿ.. ಕೃಷ್ಣಕಾಂತ್ ಕಣ್ಣಲ್ಲಿ ನೀರು..

"ಯಾಕೋ ಏನಾಯಿತು".. ವೀಣಾ-ರೇವಂತ್ ಇಬ್ಬರೂ ಗಾಬರಿಯಾಗಿ ಕೇಳಿದರು,,

"ಇದು ಕಣ್ಣೀರಲ್ಲ ಪನ್ನೀರು ಪನ್ನೀರು.. ಚಿನ್ನದಂಥ ಸ್ನೇಹಿತರಿರುವಾಗ ಕಣ್ಣೀರೇತಕೆ ಮನಸನು ಅರಿತು ನಗುತಾ ಇರಲು ಚಿಂತೆಯ ಮಾತೇಕೆ.. ನೀವ್ ಜೊತೆಯಿರಲು ನಮ್ಮಿ ಜಗಕೆ ಆ ಸ್ವರ್ಗವೇ ಜಾರಿದಂತೆ"

"ವಾಹ್.. ಅಣ್ಣಾವ್ರ ಭಕ್ತ.. ಕಣೋ ನೀನು.. " ರೇವಂತ್ ಆಲಂಗಿಸಿಕೊಂಡ..

ಕೃಷ್ಣಕಾಂತ್ ಎರಡು ಕೈಯನ್ನು ಚಾಚಿದ.. ವೀಣಾ ಮತ್ತು ರೇವಂತ್ ಇಬ್ಬರೂ ಕೃಷ್ಣಕಾಂತನಿಗೆ ಒಂದು ಹಗ್ ಕೊಟ್ಟರು..
ಸ್ನೇಹದ ಕಂಗಳು - ಅಂತರ್ಜಾಲದಲ್ಲಿ ಕಂಡದ್ದು 

ಹೋಟೆಲಿನಲ್ಲಿ ಮೆಲ್ಲಗೆ ಹಾಡು ಬರುತ್ತಿತ್ತು .. "ಕಣ್ಣಂಚಿನ ಈ ಮಾತಲಿ ಏನೇನೂ ತುಂಬಿದೆ"