Friday, December 31, 2021

ಅಕ್ಕ ಜನುಮದಿನದ ಶುಭಾಶಯಗಳು... !

ಮಂಕುತಿಮ್ಮ ಸಿನಿಮಾ... ದ್ವಾರಕೀಶ್ ನಾಯಕನಾಗಲು ನಿರ್ಮಿಸಿದ ಚಿತ್ರವಿದು.. 
ಅಕ್ಕ ನನ್ನನ್ನು ಶಿವಮೊಗ್ಗದ ಚಿತ್ರಮಂದಿರಕ್ಕೆ ಆಕೆಯ ಗೆಳತಿಯರ ಜೊತೆ ಕರೆದೊಯ್ದಳು.. ನಾನು ಪಕ್ಕ ಮಂಕುತಿಮ್ಮನಾಗಿದ್ದ ಪ್ರಸಂಗವದು.. ಚಿತ್ರಮಂದಿರದೊಳಗೆ ಚಿತ್ರದ ತುಣುಕುಗಳ ಸ್ಥಿರ ಚಿತ್ರಗಳನ್ನು ನೋಡುತ್ತಾ ನಿಂತಿದ್ದೆ.. ಯಾವುದೋ ಮಾಯದಲ್ಲಿ ತಪ್ಪಿಸಿಕೊಂಡಿದ್ದೆ.. ಇವರೆಲ್ಲಾ ಚಿತ್ರಮಂದಿರದೊಳಗೆ ಹೋದರು .. ನಾನು ಎಲ್ಲಿಗೆ ಹೋಗಬೇಕೆಂದು ಗೊತ್ತಾಗದೆ.. ಟಾಕೀಸಿನ ಹೊರಗೆ ಬಂದೆ.. ಇನ್ನೂ ಚಿಕ್ಕ ವಯಸ್ಸಾದ್ದರಿಂದ ಟಿಕೀಟಿನ ಜಂಜಾಟ ಇರಲಿಲ್ಲ.. ಗೇಟ್ ಕೀಪರ್ ಏನು ಎಂದಾ.. ಹೊರಗೆ ಹೋಗಬೇಕು ಅಂದೇ.. ಬಾಗಿಲು ತೆಗೆದು ಕಳಿಸಿದ.. 

ನಾ ಸೀದಾ ಮನೆಗೆ ಬಂದೆ., ಅಮ್ಮ ಬಿಸಿ ಬಿಸಿ ಕೋಡುಬಳೆ ಮಾಡ್ತಾ ಇದ್ದರು.. ಸರಿಯಾಗಿ ಮುಕ್ಕಿದೆ.. ಸಿನೆಮಾಗೆ ಹೋಗ್ತೀನಿ ಅಂದ್ಯಲ್ಲೋ ಅಂದ್ರು ಅಮ್ಮ.. ಹೋಗಿದ್ದೆ ಅಕ್ಕ ಕಾಣಲಿಲ್ಲ ಮನೆಗೆ ಬಂದೆ .. ಅಂದೇ.. 

ಮನೆಗೆ ಬಂದ ಮೇಲೆ ನನಗೆ ಅಕ್ಕ ಸರಿಯಾಗಿ ಪೂಜೆ ಮಾಡಿದಳು... 

****** 

ನಾ ನಿನ್ನ ಬಿಡಲಾರೆ ಚಿತ್ರ.. ಆ ಕಾಲದಲ್ಲಿ ಸುಮಧುರ ಹಾಡಿಗಷ್ಟೇ ಅಲ್ಲದೆ.. ದೆವ್ವ ಭೂತ ದೇವರು ಇವುಗಳ ಮೇಲೆ ಆಧಾರಿತ ಚಿತ್ರ ಪ್ರೇಕ್ಷಕರ ಮನವನ್ನು ಸೆಳೆದಿತ್ತು.. ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿದ ಚಿತ್ರವಿದು.. ಅನಂತ್ ನಾಗ್ ಮೈ ಮೇಲೆ ದೆವ್ವ ಬರುವ ದೃಶ್ಯ ಬಂದಾಗಲೆಲ್ಲ.. ಅಕ್ಕ ನನ್ನನ್ನು ಮತ್ತು ನನ್ನ ತಮ್ಮ ಮುರುಳಿಯನ್ನು ಸೀಟಿನ ಕೆಳಗೆ ಮುಖ ಮಾಡಿ ಅಂತ ಹೇಳುತ್ತಿದ್ದಳು.. ಇಡೀ ಚಿತ್ರದಲ್ಲಿ ದೆವ್ವದ ದೃಶ್ಯ ಬಂದಾಗಲೆಲ್ಲ ಇದೆ ಕಾಯಕ ಮುಂದುವರೆಯುತ್ತಿತ್ತು .. 

****** 

ಆಗ ನಾ ಇನ್ನೂ ಚಿಕ್ಕ ಮಗು.. ಅಕ್ಕನಿಗೆ ಆಡುವ ವಯಸ್ಸು... ನನ್ನ ಅಮ್ಮ ನನ್ನನ್ನು ಅಕ್ಕನಿಗೆ ಕೊಟ್ಟು ನೋಡಿಕೋ ಎಂದು ಹೇಳಿ ತಮ್ಮ ಕಾಯಕ ಮಾಡುತ್ತಿದ್ದರು.. ಆಡುವ ವಯಸ್ಸು ಅಕ್ಕನಿಗೆ.. ಅವಳ ಗೆಳತಿಯರ ಜೊತೆ ಕುಂಟೆ ಬಿಲ್ಲೆ, ಕೊಕ್ಕೋ ಆಟದಲ್ಲಿ ನನ್ನನ್ನು ಮರೆಯುತ್ತಿದ್ದಳು.. ಕಲ್ಲು ಬೆಂಚಿನ ಮೇಲೆ ಕೂರಿಸಿ ಆಟವಾಡುತ್ತಿದ್ದಳು.. ನಾನು ಅಲ್ಲಿಂದ ದಬ್ ಅಂತ ಕೆಳಗೆ ಬಿದ್ದು ಬಡ್ಕೋತಾ ಇದ್ದಾಗ ಅಕ್ಕ ಪಕ್ಕದ ಮನೆಯವರು ರೀ ವಿಶಾಲಮ್ಮ ನಿಮ್ಮ ಮಗ ಅಳ್ತಾ ಇದ್ದಾನೆ ನೋಡಿ ಅಂದಾಗ ಅಮ್ಮ ಬಂದು ಅಕ್ಕನಿಗೆ ಪೂಜೆ ಮಾಡುತ್ತಿದ್ದರು.. 

******
ಬಡತನಕ್ಕೆ ಹಸಿವು ಜಾಸ್ತಿ ಅನ್ನುತ್ತಾರೆ.. ಮಗು ಅಂತ ನನಗೆ ಒಂದು ಇಡ್ಲಿ ತರಿಸಿ ತಿನ್ನಿಸಲು ಅಕ್ಕನಿಗೆ ಕೊಟ್ಟರೆ.. ಅಕ್ಕ ನನಗೆ ಒಂದೆರಡು ತುತ್ತು ತಿನ್ನಿಸಿ ಒಂದು ಚೂರು ತನ್ನ ಬಾಯಿಗೆ ಹಾಕಿಕೊಂಡರೆ ಮುಗಿಯಿತು.. ನನ್ನ ಬಾಯಿ ಬೊಂಬಾಯಿ ಆಗುತಿತ್ತು.. ತಗೋ ಅಕ್ಕನಿಗೆ ಪೂಜೆ... 

******
ಬೆಂಗಳೂರಿಗೆ ಬಂದ ಮೇಲೆ.. ಹಬ್ಬ ಹರಿದಿನಗಳು ಅಂದರೆ.. ಕೆಲಸಕ್ಕೆ ಸೇರಿದ್ದ ಅಕ್ಕ ನನಗೆ ಮತ್ತು ನನ್ನ ತಮ್ಮ ಮುರುಳಿಗೆ ಬಟ್ಟೆ ತರುವುದು ಖಾಯಂ ಆಗಿತ್ತು.. ನಾನು ಮುರಳಿ ಇಬ್ಬರೂ ವಠಾರದ ಮನೆಯ ಬಾಗಿಲಲ್ಲೇ ಕಾಯುತ್ತಾ... "ಮುರುಳಿ ಅಕ್ಕ ಈಗ ಬರುತ್ತಾಳೆ.. ಇನ್ನೇನೂ ಬರುತ್ತಾಳೆ" ಅಂತ ಸಮಾಧಾನ ಮಾಡಿಕೊಳ್ಳುತ್ತಿದ್ದೆವು.. ಅಕ್ಕ ದೂರದಿಂದ ಬರುವುದು ಕಂಡೊಡನೆ ಇಬ್ಬರೂ ರೇಸಿಗೆ ಬಿದ್ದಂತೆ ಅಕ್ಕನ ಬಳಿ ಓಡುತ್ತಾ ಹೋಗಿ.. ಅವಳ ಕೈಲಿದ್ದ ಕವರ್ ತೆಗೆದುಕೊಂಡರೆ ರಾಜ್ಯ ಗೆದ್ದಂತೆ.. 

ಒಮ್ಮೆ ಒಂದು ಹಬ್ಬದಲ್ಲಿ ಹಣಕಾಸಿನ ಕೊರತೆಯೋ ಅಥವ ಆಗಲಿಲ್ಲವೋ... ಹೊಸ ಬಟ್ಟೆ ಬರಲಿಲ್ಲ.. ಆಗಲೇ ಸಂಜೆ ಎಂಟು ಘಂಟೆ ದಾಟಿತ್ತು... ಅಕ್ಕ ಬರುವುದನ್ನೇ ನಾನು ಮುರುಳಿ ಕಾಯುತ್ತಿದ್ದೆವು.. ಕಂಡ ಕೂಡಲೇ ಓಡಿದ್ದೆ ಕೆಲಸ.. ಆದರೆ ನಿರಾಸೆ.. ಅಕ್ಕನ ಕೈ ಬರಿದಾಗಿತ್ತು.. 

ಮನಸ್ಸು, ಮುಖ ಎರಡೂ ಬಾಡಿತ್ತು.. ಇಬ್ಬರೂ ಅಕ್ಕನ ಕೈ ಹಿಡಿದುಕೊಂಡು ಮನೆಗೆ ಬಂದೆವು.. ಬಾಡಿದ ಮುಖ ಕಂಡು ಅಮ್ಮನಿಗೆ ಅರ್ಥವಾಯಿತು.. ಅಕ್ಕ ಅಮ್ಮನ ಕಣ್ಣುಗಳು ಏನೋ ಮಾತಾಡಿದವು.. ಅಕ್ಕ ನಮ್ಮಿಬ್ಬರ ತಲೆಯನ್ನು ನೇವರಿಸಿ.. ಬೆಳಿಗ್ಗೆ ತಂದು ಕೊಡ್ತೀನಿ ಆಯ್ತಾ.. ಎಂದಳು.. 

ನಮ್ಮಿಬ್ಬರದು ಒಂದೇ ಹಠ ಹಬ್ಬಕ್ಕೆ ಬಟ್ಟೆ ಬೇಕು ಅಂತ.. ಪರಿಸ್ಥಿತಿ ಅರ್ಥ ಮಾಡಿಕೊಳ್ಳುವಂತಹ ವಯಸ್ಸಲ್ಲ.. ಏನಾಗಿತ್ತೋ ಇಬ್ಬರೂ ಅವತ್ತು ಹಠ ಮಾಡಿದೆವು.. ನನಗೆ ಮುರುಳಿಗೆ ಅಮ್ಮನಿಂದ ಕವತಾಗಳು ಬಿದ್ದವು.. ಅಳುತ್ತಲೇ ಇಬ್ಬರೂ ಮಲಗಿದೆವು.. 

ಬೆಳಿಗ್ಗೆ ಅಕ್ಕ ಬಟ್ಟೆ ತಂದು ಕೊಟ್ಟ ಮೇಲೆಯೇ ಮುದುಡಿದ ತಾವರೆ ಅರಳಿದ್ದು.. 

******
ಅಮ್ಮ ಶ್ರೀಕಾಂತ ಕಾಲೇಜಿಗೆ ಹೋಗುತ್ತಾನೆ ಪಾಪ ಒಳ್ಳೆಯ ಬಟ್ಟೆಗಳೇ ಇಲ್ಲ.. ಮುಂದಿನ ತಿಂಗಳು ಸಂಬಳ ಬಂದ ಮೇಲೆ ಬಟ್ಟೆ ತೆಗೆದು ಕೊಡುತ್ತೇನೆ.. ಹೇಳಿದಂತೆಯೇ.. ಮುಂದಿನ ತಿಂಗಳು ಎರಡು ಜೊತೆ ಪ್ಯಾಂಟ್ ಶರ್ಟ್ ಬಟ್ಟೆ ಬಂತು.. ಟೇಲರ್ ಹತ್ತಿರ ಹೊಲಿಸಿಕೊಂಡು ಬಂದ ಮೇಲೆ ಹಾಕಿಕೊಂಡು ನಲಿಯುವ ಮೊದಲು ಅಪ್ಪ ಅಮ್ಮನಿಗೆ ಮತ್ತು ಅಕ್ಕನಿಗೆ ನಮಸ್ಕರಿಸಿದ್ದು ಇನ್ನೂ ಹಸಿರು.. 

******
ಕಾಲೇಜು ಮುಗಿಯಿತು.. ಏನು ಮಾಡ್ತೀಯ.. ಶ್ರೀಕಾಂತ?
ಗೊತ್ತಿಲ್ಲ ಅಕ್ಕ.. 
ಸರಿ ನಮ್ಮ ಆಫೀಸಿನಲ್ಲಿ ಬಾ ಕೆಲಸ ಕೊಡಿಸ್ತೀನಿ.. 
ಹೇಳಿದಂತೆಯೇ ನನ್ನ ಮೊದಲ ಕೆಲಸ ಶುರು ಆಗಿದ್ದು ಅಕ್ಕನ ಆಫೀಸ್ನಲ್ಲಿಯೇ..... 

ಆಗ ಕಂಪ್ಯೂಟರ್ ಯುಗ ಆಗ ತಾನೇ ಕಣ್ಣು ಬಿಡುತ್ತಿತ್ತು.. ಕಂಪ್ಯೂಟರ್ ಕಲಿ ಒಳ್ಳೆ ಕೆಲಸ ಸಿಗುತ್ತೆ ಅಂತ ಹೇಳಿ.. ಆ ಕಾಲದಲ್ಲಿ ಸುಮಾರು ಹದಿನೈದು ಸಾವಿರ ರೂಪಾಯಿಗಳನ್ನು ಸಿದ್ಧ ಮಾಡಿ ಕಂಪ್ಯೂಟರ್ ಕ್ಲಾಸಿಗೆ ಸೇರಿಸಿದಳು.. ಅಲ್ಲಿನ ನನ್ನ ಬದುಕು ವಿಭಿನ್ನ ಹಾದಿ ತುಳಿಯಿತು. ಇಂದು ನಾ ಏನಾದರೂ ಆಗಿದ್ದೇನೆ ಎಂದರೆ ಅದಕ್ಕೆ ಅಡಿಗಲ್ಲು ಹಾಕಿದವಳು ಅಕ್ಕ.. 

******
ಮನೆ ಕ್ಲೀನ್ ಮಾಡುವ ಹುಚ್ಚು ಯಾವಾಗಲೂ ಇತ್ತು, ಇದೆ, ಇರುತ್ತೆ.. ಹಲವಾರು ಬಾರಿ ಎಲ್ಲಾ ರಂಪ ಹಾಕಿಕೊಂಡು ಒಂದೊಂದೇ ಜೋಡಿಸುತ್ತಾ.. ಕೆಲವೊಮ್ಮೆ ಸುಸ್ತಾಗಿ ಆ ಕಸದ ಮಧ್ಯೆ ಮಲಗಿ ಬಿಡುತ್ತಿದ್ದೆ.. ಸರಿಯಾದ ಸಮಯದಲ್ಲಿ ಅಕ್ಕ ಬರುತ್ತಿದ್ದಳು.. ಮುಂದೆ ಹೇಳಬೇಕೇ..  ಶಂಖ ವಾದ್ಯ... 

ಮನೇಲಿ ಇರ್ತೀಯ ಮನೆ ಕ್ಲೀನ್ ಮಾಡೋಕೆ ಆಗೋಲ್ವಾ.. ಸುಮ್ಮನೆ ಮನೇಲಿ ನಿದ್ದ ಮಾಡ್ತೀಯ ಅನ್ನೋಳು.. ಸಿಟ್ಟು ಬರೋದು.. ಆದರೆ ಕೆಲಸವಿಲ್ಲದೇ ವಿದ್ಯಾಭ್ಯಾಸ ಮುಗಿಸಿ ಮನೇಲಿ ಇರುತ್ತಿದ್ದ ನನಗೆ ಬೇರೆ ಮಾತುಗಳು ಹೇಳೋಕೆ ಸಾಧ್ಯವಾಗುತ್ತಿರಲಿಲ್ಲ.. 

ಸರಿ ಅಕ್ಕನ ಮಾತುಗಳು ಮತ್ತೆ ಬರಬಾರದು ಅಂತ.. ಮನೆಯನ್ನು ಸ್ವಚ್ಛ ಮಾಡಿ.. ಅಕ್ಕ ಬರುವ ಹೊತ್ತಿಗೆ ಮನೆ ಲಕ ಲಕ ಹೊಳೆಯುತ್ತ ಇರೋದು.. ನನ್ನ ಹಣೆ ಬರಹ ಅವತ್ತು ಅಕ್ಕ ತಡವಾಗಿ ಬರುತ್ತಿದ್ದಳು.. ಅಷ್ಟೊತ್ತಿಗೆ ಅಮ್ಮ ಬಂದು ಮನೆಯ ಸ್ವಚ್ಛತಾ ಕೆಲಸ ಅಡುಗೆ ಮನೆಯಿಂದ ಶುರು ಮಾಡುತ್ತಿದ್ದರು.. ಅಕ್ಕ ನೋಡೇ ಮನೆ ಎಷ್ಟು ಕ್ಲೀನ್ ಆಗಿದೆ ಎಂದಾಗ.. ನೀನಲಿ ಮಾಡಿದ್ದೀಯಾ.. ಕಸದ ಮಧ್ಯೆ ನಿದ್ದೆ ಹೊಡೆದಿರ್ತೀಯ... ಇದು ಅಮ್ಮನ ಕೆಲಸ. ಅಮ್ಮನೇ ಮಾಡಿರೋದು... ನೀ ನಿದ್ದೆ ಹೊಡೆದಿದ್ದೀಯ ಅಷ್ಟೇ.. ಎಂದಾಗ ಅಮ್ಮನ ಕಡೆ ನೋಡುತಿದ್ದೆ.. ಅಮ್ಮ ನಗುತಿದ್ದರು.. ಸರಿ ಮತ್ತೆ ಅಕ್ಕನಿಂದ ವಿಷ್ಣು ಸಹಸ್ರನಾಮ.. 

*******
ಒಂದು ಮನೆಯಲ್ಲಿ ಈ ರೀತಿಯ ಅಕ್ಕ ಇದ್ದಾಗ ಮನೆ ಕೆಲಸಗಳು ಆರಾಮ್ ಅನಿಸುತ್ತದೆ.. ಆ ಕಾಲದಲ್ಲಿ ಕೋಪ ಬರುತ್ತಿತ್ತು.. ಬಟ್ಟೆ ತರದೇ ಹೋದರೆ ಅಕ್ಕನ ಮೇಲೆ ಮುನಿಸು ಬರುತ್ತಿತ್ತು.. ಆದರೆ ಇಂದು ಅದೆಲ್ಲದರ ಹಿಂದಿನ ನೋವು, ಕಷ್ಟಗಳು, ಅವಳ ಸಾಹಸಗಳು ನೆನಪಿಗೆ ಬರುತ್ತವೆ.. ಹೌದು ಇವತ್ತು ನೂರಾರು ರೂಪಾಯಿಗಳನ್ನು ಸಂಪಾದನೆ ಮಾಡುವ ಯೋಗ್ಯತೆ ಇದೆ, ಯೋಗವೂ ಇದೆ.. ಆದರೆ ಅದಕ್ಕೆಲ್ಲ ಅಡಿಪಾಯ ಹಾಕಿದ್ದು ನನ್ನ ಪ್ರೀತಿಯ ಅಕ್ಕ.. 

ಸ್ಫೂರ್ತಿ ಬೇಕು.. ಹೋರಾಟದ ಜೀವನಕ್ಕೆ ಇಂಧನ ಬೇಕು ಎಂದಾಗ.. ದೇವರಲ್ಲಿ, ಅಪ್ಪ ಅಮ್ಮನಲ್ಲಿ ಪ್ರಾರ್ಥನೆ ಖಂಡಿತ ಮಾಡುತ್ತೇನೆ.. ಆಗೆಲ್ಲ ಫೋಟೋದಲ್ಲಿರುವ ದೇವರು  ಶ್ರೀ ನಿನ್ನ ಅಕ್ಕ ಒಬ್ಬಳು ಸಾಕು ಕಣೋ.. ಅವಳನ್ನು ನೋಡು ಸಾಕು ಎಂದು ಹೇಳುತ್ತಾರೆ.. 

ನಿಜ ಸ್ಫೂರ್ತಿ ಬೇಕು ಎಂದಾಗ.. ನಾ ಪುಸ್ತಕ, ಸಿನಿಮಾ, ಭಾಷಣ ಇದ್ಯಾವುದು ನನ್ನ ಗಮನಕ್ಕೆ ಬರದೇ ಅಕ್ಕನ ಹೋರಾಟದ ಸಾರ್ಥಕ ಜೀವನ ನೆನಪಿಗೆ ಬರುತ್ತದೆ.. ತಕ್ಷಣ ಒಂದು ರೀತಿಯ ಚೈತನ್ಯ ಮನದ ಮೂಲೆಯಲ್ಲಿ ಬೆಳೆಯುತ್ತಾ ಹೋಗುತ್ತದೆ.. 

ಇಂತಹ ಪ್ರೀತಿಯ ಮಮತಾ ಮಯಿ ಅಕ್ಕನಿಗೆ ಇಂದು ಜನುಮದಿನ.. ಕೊಡಲು ನನ್ನ ಹತ್ತಿರ ಏನಿದೆ.. ಆದರೆ ಅವಳು ನೀಡಿದ ಅದ್ಭುತ ಬದುಕಿನ ಸಾರ್ಥಕ ಕ್ಷಣಗಳನ್ನು,  ಘಟನೆಗಳನ್ನು ಹೆಕ್ಕಿ ತೆಗೆದು.. ಲೇಖನ ಮಾಲೆ ಮಾಡಿದ್ದೇನೆ.. 

ಅಕ್ಕ ಜನುಮದಿನದ ಶುಭಾಶಯಗಳು... !

 

Sunday, December 26, 2021

ಮನೋ ನಿರ್ಧಾರ - ಅಪ್ಪನ ಸ್ಥಾನದಲ್ಲಿ ನಿಂತಿರುವ ಅಣ್ಣ ನಿನಗೆ ಹುಟ್ಟು ಹಬ್ಬದ ಶುಭಾಶಯಗಳು

 ಮನೋ ನಿರ್ಧಾರಕ್ಕೆ, ಧೃಡತೆಗೆ ದೈವ ಸಹಾಯ ಹೇಗಿರುತ್ತದೆ ಎನ್ನುವುದಕ್ಕೆ ಈ ಕೆಳಕಂಡ ಘಟನೆ ಸಾಕ್ಷಿ 

ಮತ್ತೊಮ್ಮೆ ಕೆಲವು ದಶಕಗಳ ಹಿಂದಕ್ಕೆ ನಿಮ್ಮನ್ನೆಲ್ಲ ಕರೆದೊಯ್ಯುತ್ತಿದ್ದೇನೆ. ನನ್ನ ಕುಟುಂಬದಲ್ಲಿ ನಡೆದ ಘಟನೆಗಳೇ ಹಾಗೆ.. 

ಸುಮಾರು ೧೯೭೬-೭೭... ಮೊದಲ ಮಗನಿಗೆ ಹನ್ನೊಂದು ವರ್ಷ ತುಂಬಿದ ಸಂಭ್ರಮ.. ಹನ್ನೊಂದಕ್ಕೆ ಮುಂಜಿ ಅಂದರೆ ಉಪನಯನ ಮಾಡಬೇಕು ಎನ್ನುವುದು ನಮ್ಮ ಅಪ್ಪನ ಆಸೆ. ಪರಿಚಯದವರು ಕೊಟ್ಟ ಮಾಹಿತಿ ಪ್ರಕಾರ, ಸಾಮೂಹಿಕ ಉಪನಯನ ನಡೆಯುತ್ತಿದೆ ಎಂದು ಗೊತ್ತಾಯಿತು. 

ಯೋಚನೆಯೇ ಇಲ್ಲ.. ತಕ್ಷಣ ಯೋಚನೆ ಮಾಡದೆ ಪರಿವಾರ ಸಮೇತ ಹೊರಟಿದ್ದು ದಾವಣಗೆರೆ ಚನ್ನಗಿರಿಯ ಬಳಿಯ ಬಸವಾಪಟ್ಟಣಕ್ಕೆ. 

ಆ ಸಮಯದಲ್ಲಿ ಅದ್ಭುತ ಎನ್ನಿಸುವಂಥ ಯಾಗ ನಡೆಯುತ್ತಿತ್ತು.  ಬಂದ ಭಕ್ತಾದಿಗಳಿಗೆ ಊಟ ಉಪಚಾರ ವ್ಯವಸ್ಥೆ ಬಗ್ಗೆ ನನ್ನ ಅಪ್ಪ ಅಮ್ಮ ಹೇಳಿದ್ದು ಇನ್ನೂ ಕಿವಿಯಲ್ಲಿ ಗುಯ್ ಅನ್ನುತ್ತಿದೆ. ಆಪಾಟಿ ದೊಡ್ಡ ದೊಡ್ಡ ಕಡಾಯಿಗಳಲ್ಲಿ ಅನ್ನ, ಸಾರು,ಹುಳಿ, ಮಜ್ಜಿಗೆ ಇರುತ್ತಿದ್ದವು ಎಂದು. 

ಮಹಾ ಯಜ್ಞಕ್ಕೆ ತಯಾರಾದ ಶಿಬಿರಗಳು - ಕೃಪೆ ಗೂಗಲೇಶ್ವರ 


ಅಡಿಗೆ ತಯಾರು  ಮಾಡಿದ ಸಾಹಸಿ ಬಾಣಸಿಗರು
 - ಕೃಪೆ ಗೂಗಲೇಶ್ವರ 


ಅಡಿಗೆ ತಯಾರು  ಮಾಡಿದ ಸಾಹಸಿ ಬಾಣಸಿಗರು
 - ಕೃಪೆ ಗೂಗಲೇಶ್ವರ 



 ಸಾಹಸಿ ಬಾಣಸಿಗರ ಪರಿಶ್ರಮ ಅನ್ನದ ಪರ್ವತ 
 - ಕೃಪೆ ಗೂಗಲೇಶ್ವರ 

ಇರಲಿ, ವಿಷಯ ಏನಂದರೆ, ಉಪನಯನ ಕಾರ್ಯಕ್ರಮ ಶುರುವಾಗಬೇಕಿತ್ತು.. ಉಪಯನಯನದ ಹುಡುಗ ಅರ್ಥಾತ್ ನನ್ನ ಅಣ್ಣ ವಿಜಯನಿಗೆ ಜ್ವರ ಅಂದರೆ ಜ್ವರ. ಸುಡುವ ಕಾವಲಿಯಾಗಿತ್ತು ಮೈ. ಅಪ್ಪ ಅಮ್ಮ ಒಂದು ಮರದ ಕೆಳಗೆ, ಈ ಮಗುವನ್ನು ತೊಡೆಯ ಮೇಲೆ ಹಾಕಿಕೊಂಡು, ಕೂತಿದ್ದ ಸ್ಥಿತಿ ನೋಡಿ, ಅಲ್ಲಿ ಓಡಾಡುವ ಜನರೆಲ್ಲಾ, ಮತ್ತು ಜೊತೆಯಲ್ಲಿದ್ದ ಬಂಧುಗಳು, ಅಯ್ಯೋ ಈ ಮಗುವಿಗೆ ಈ ಯಾಕೆ ಉಪಯನಯನ, ಮೊದಲು ಜ್ವರ ಬಿಡಲಿ ಎಂದು ಹೇಳಿದರು ಅಪ್ಪನದು ಒಂದೇ ಮಾತು. 

"ಗಾಯಿತ್ರಿ ಉಪದೇಶ ಮಾಡಿಸಲು ಕರೆದುಕೊಂಡು ಬಂದಿದ್ದೀನಿ. ಆ ದೇವಿ ಮತ್ತು ಇಲ್ಲಿನ ಗುರುಗಳು ಅವನನ್ನು ಉಳಿಸಿಕೊಳ್ಳುತ್ತಾರೆ.. ಆ ನಂಬಿಕೆ ನನದು ಇಷ್ಟರ ಮೇಲೆ ಆ ದೇವರ ಇಚ್ಛೆ. ... "  

ಇವತ್ತಿಗೂ ಅಣ್ಣ ಹೇಳುತ್ತಾನೆ, "ಅಂದು ಇಡಿ ಉಪಯನಯನ ಕಾರ್ಯಕ್ರಮದಲ್ಲಿ ಅವನಿಗೆ ನೆನಪಲ್ಲಿ ಉಳಿದದ್ದು ತನ್ನ ತಂದೆಯಿಂದ ಉಪದೇಶಿಸಿದ ಗಾಯಿತ್ರಿ ಮಂತ್ರ ಮಾತ್ರ.. ಇನ್ನೇನೂ ನೆನಪಿಲ್ಲ" 

ವಟುವಿಗೆ ಈ ಉಪನಯನ ಎರಡನೇ ಜನ್ಮ ಇದ್ದಂತೆ ಅಂದರೆ ಇನ್ನೊಂದು ಕಣ್ಣು ಬಂದಂತೆ. ಆಧ್ಯಾತ್ಮ ಪ್ರಪಂಚಕ್ಕೆ ಕಾಲಿಡಲು ಬೇಕಾದ ಇನ್ನೊಂದು ನಯನ ಉಡುಗೆಯಾಗಿ ಸಿಗುವ ಕ್ಷಣವೇ ಈ ಉಪನಯನ.

ಆ ಜಾಗವನ್ನು ನೋಡಬೇಕು, ಅಲ್ಲಿ  ಓಡಾಡಬೇಕು ಎನ್ನುವ ಹಂಬಲವಿದೆ  .. ಖಂಡಿತ ಆ ಹಂಬಲದ ಗುರಿಯನ್ನು ತಲುಪುತ್ತೇನೆ .. ಆದರೆ ಮನುಷ್ಯನಿಗೆ  ಆತುರ ಅಲ್ಲವೇ .. ಅಂತರ್ಜಾಲ ತಾಣವನ್ನು ಪಾತಾಳ ಗರಡಿ ಹಾಕಿ ಶೋಧಿಸುತ್ತಿದ್ದೆ.. ಆಗ ಸಿಕ್ಕಿದ ಅನರ್ಘ್ಯ ಚಿತ್ರಗಳು ಇವು ,. ಮನಸ್ಸಿಗೆ ಖುಷಿಯಾಯಿತು.. ಕೆಲವು ಚಿತ್ರಗಳು ಆ ಸ್ಥಳದ, ಆ ಸಮಯದ್ದು ಅಲ್ಲದೆ ಇರಬಹುದು.. ಆ ಗೂಗಲೇಶ್ವರನ ಮಡಿಲಲ್ಲಿ ಹೆಕ್ಕುವಾಗ ಅನರ್ಘ್ಯ ಮುತ್ತುಗಳ ಜೊತೆಯಲ್ಲಿ ವೈಡೂರ್ಯಗಳು ಸೇರಿಬಿಡುತ್ತದೆ.. 







ಕೃಪೆ ಗೂಗಲೇಶ್ವರ 

ಕೃಪೆ ಗೂಗಲೇಶ್ವರ 

 ನಾವು ಸಿದ್ಧ - ಕೃಪೆ ಗೂಗಲೇಶ್ವರ 

ಮಹಾಭಕ್ತರ ಕಡಲು - ಕೃಪೆ ಗೂಗಲೇಶ್ವರ 

ಅಣ್ಣಾವ್ರು ಇಲ್ಲ ಅಂದರೆ ನನ್ನ ಲೇಖನ
ಪೂರ್ಣ ಅನಿಸೋಲ್ಲ - ಕೃಪೆ ಗೂಗಲೇಶ್ವರ 


ವೆಬ್ಸೈಟ್ - ಕೃಪೆ ಗೂಗಲೇಶ್ವರ 


ಇಂದು ಆ ಮಗು ಇನ್ನೊಂದು ವರ್ಷಕ್ಕೆ ಕಾಲಿಟ್ಟು ಸಂಭ್ರಮಿಸುತ್ತಿದೆ.   

ನಮ್ಮೆಲ್ಲರ ಹಾರೈಕೆ ವಿಜಯನಿಗೆ.. 

ಅಪ್ಪನ ಸ್ಥಾನದಲ್ಲಿ ನಿಂತಿರುವ ಅಣ್ಣ ನಿನಗೆ ಹುಟ್ಟು ಹಬ್ಬದ ಶುಭಾಶಯಗಳು

ಅಪ್ಪನ ಛಲ, ತಾಳ್ಮೆ ಎರಡನ್ನು ವರವಾಗಿ ಪಡೆದಿದಿರುವ ನಿನಗೆ ಜೀವನದ ಪಥ ಯಶಸ್ವಿ ಹೂವಿನ ಪಥವಾಗಲಿ. 

ಹುಟ್ಟು ಹಬ್ಬದ ಶುಭಾಶಯಗಳು...!

Saturday, December 4, 2021

ಶಿವರಾಂ ಸ್ಪೆಷಾಲಿಟಿ.. .ಹೆಗಲು ಕೊಡುತ್ತಿದ್ದ ಭುಜಗಳನ್ನು ಹೊರುವ ಸಮಯ.. ಹೊರಟೆ ಬಿಟ್ಟರು

 




ನಾಗರಹಾವು 

"ಮೇರೇ ಸಪನೋಂಕಿ ರಾಣಿ ಕಬ್ ಆಯೆಗೀತು.. ಈಗಿನ ಕಾಲದ ಹುಡುಗರಿಗೆ ಹಿಂದಿ ಹಾಡು ಹೇಳೋದು ಹುಡುಗಿಯರನ್ನು ರೇಗಿಸೋದು.. ಯಾಕೆ ಕನ್ನಡ ಹಾಡು ಬರೋಲ್ವಾ.. ಅದೇ ಅವರ ಸ್ಪೆಷಾಲಿಟಿ.. "

"ಸಾರ್ ನಮ್ಮ ಕಾಲೇಜಿನಲ್ಲಿ ಎರಡು ತರಹ ಗೊರಿಲ್ಲಾಗಳನ್ನು ಕಂಡು ಹಿಡಿದ ಮಾರ್ಗರೇಟ್ ಅವರಿಗೆ ಅಂತಿಥಹ ಪ್ರಶಸ್ತಿ ಅಲ್ಲಾ.. ಒಳ್ಳೆಯ ಪ್ರಶಸ್ತಿಯನ್ನೇ ಕೊಡಬೇಕು"

"ತುಕಾ.. ಡೆಸ್ಕ್ ಮೇಲೆ ಬೀಳುತ್ತಿರುವ ಟಸ್ಸೆ ನಿನ್ನ ಮುಖದ ಮೇಲೆ ಬಿದ್ದಾತು ಕಣೋ.. ನಿನ್ನ ಪ್ಲೇಸ್ ಲಾಸ್ಟ್ ಬೆಂಚ್ ಕಣೋ"

ಈ ರಾಮಾಚಾರಿಗೆ ಇರೋ ಧೈರ್ಯ ನನಗೆ ಯಾಕೆ ಇಲ್ಲ.. ಅದು ನನ್ನ ಸ್ಪೆಷಾಲಿಟಿ

ಉಪಾಸನೆ                                                                                                                          ಸಂಗೀತದಲ್ಲಿರುವ ಉತ್ತರಾದಿ, ದಕ್ಷಿಣಾದಿ, ಪೂರ್ವಾದಿ, ಪಶ್ಚಿಮಾದಿ, ಪಾಶ್ಚಾತ್ಯಾದಿ ಸಂಗೀತ ಪ್ರಕಾರಗಳನ್ನು ಕಲಸಿ, ಬೆರೆಸಿ, ಪ್ರೇಕ್ಷಕರನ್ನು ನಲಿಸಿ, ಕುಣಿಸಿ, ತಣಿಸಿ,ಬೆದರಿಸಿ ಸ್ಟನ್ ಮಾಡಬೇಕೆಂಬುದೇ ಈ ಶಂಕರಾಭರಣನ ಲೈಫ್ ಆಂಬಿಶನ್

ಪಿಟೀಲಿಗೆ ಕಮಾನ್ ಹಾಕೋದು ಕಾಮನ್.. ತಂಬೂರಿಗೆ ಕಮಾನ್ ಹಾಕಿ ಕಮಾಲ್ ಮಾಡಬೇಕು 

ಎಡಕಲ್ಲು ಗುಡ್ಡದ ಮೇಲೆ                                                                                                                          ನಾ ಹೇಳಿದ ಹಾಗೆ ಕೇಳು.. ಆದರೆ ನಾ ಮಾಡಿದಂತೆ ಮಾಡಬೇಡ..                                                                ಲಿಮಿಟ್, ಗಮ್ಮತ್ತು.. ಈ ಎರಡು ಪದಗಳ ಜೊತೆಯಲ್ಲಿ ಆಟವಾಡುವ ಶೈಲಿ ಸೂಪರ್

ಶುಭಮಂಗಳ                                                                                                                                              ಸೂರ್ಯಂಗೂ ಚಂದ್ರಂಗೂ ಹಾಡಿನಲ್ಲಿ ಹೇಮಾ ಮತ್ತು ಪ್ರಭಾಕರನನ್ನು ಸೇರಿಸಲು ಪಡುವ ಪಾಡು ಇಷ್ಟವಾಗುತ್ತದೆ. 

"ಸಮುದ್ರದಲ್ಲಿ ಈ ಪಾಟಿ ನೀರೈತೆ.. ಕುಡಿಯೋಕೆ ಒಂದು ನೀರು ಸಿಗುತ್ತಾ ಹೇಳಿ"

ಕರ್ಣ                                                                                                                                                          ನಾ ಅಲ್ಲ ದೊಡ್ಡವರು.. ನೋಡಿ ಈ ಮನೆ ಇವರದ್ದು, ಹೊರಗೆ ನಿಂತಿರುವ ಕಾರು ಇವರದ್ದು, ಎಲ್ಲಾ ಇವರದ್ದು. .ಆದರೆ ಅವರು ಹಾಕಿಕೊಂಡಿರುವ ಜುಬ್ಬಾ ಮಾತ್ರ ನನ್ನದು 

ಚಲಿಸುವ ಮೋಡಗಳು                                                                                                                            ಹೇಳಿದ್ದನ್ನು ನೋಡಿದರೆ ಸಾಕು.. ಐ ಮೀನ್ ನೋಡಿದ್ದನ್ನು ಹೇಳಿದರೇ ಸಾಕು 

ಹೊಸ ಬೆಳಕು                                                                                                                                              ನೋಡಿ ರಾಜಾ ಕಿ ರಾವ್.. ನನಗೆ ನನ್ನ ಹೆಣ ಕೊಡಿ..  ನೋಡ್ರಪ್ಪಾ ಇಷ್ಟು ದಿನ ಸುಮ್ಮನಿದ್ದಿರಿ.. ಇನ್ನು ಸ್ವಲ್ಪ ದಿನ ಸುಮ್ಮನಿರಿ.. ಇವರಿಗೆ ಹಣ.. ನಿಮಗೆ ಹೆಣ ಕೊಡ್ತೀನಿ.. 

ಮಾಂಗಲ್ಯ ಭಾಗ್ಯ                                                                                                                                      ನೋಡು.. ಜೀವನದಲ್ಲಿ ಆಸೆ ಪಡಬಾರದು.. ಪಟ್ಟರೆ ಅದನ್ನು ದಕ್ಕಿಸಿಕೊಳ್ಳಬೇಕು.. you must aim it and get it

ಸರ್ವರ್ ಸೋಮಣ್ಣ 

ಏನ್ ಸರ್ ಟೆನ್ಶನ್ ನಲ್ಲಿ ಕಾಯ್ತಾ ಇದ್ದೀರಾ?                                                                                                ಇಲ್ಲಪ್ಪ ಕಾದು ಕಾದು ಟೆನ್ಶನ್ ಗೆ ಬಂದಿದ್ದೀನಿ!

ಆಪ್ತ ಮಿತ್ರ 

ನಾನು ಹೊರಗೆ ಹೋಗೋದರ ಬಗ್ಗೆ ಯೋಚಿಸುತ್ತಿಲ್ಲ... ನೀವು ಒಳಗೆ ಹೋಗೋದರ ಬಗ್ಗೆ ಯೋಚಿಸುತ್ತಿದ್ದೀನಿ 

ಹೀಗೆ ಹಾಸ್ಯ, ವೇದಾಂತ, ಉಡಾಫೆ, ಸಿಟ್ಟು, ಯಾವುದೇ ರೀತಿಯ ಮಾತುಗಳಿಗೆ ತಮ್ಮ ಛಾಪು ಕೊಟ್ಟು ಅದನ್ನು ಚಿರಸ್ಥಾಯಿಯಾಗಿ ನಿಲ್ಲಿಸುವ ತಾಕತ್ತು ಶಿವರಾಂ ಅವರಲ್ಲಿ ಅಪಾರವಾಗಿತ್ತು ಎಂಬುದು ಅವರ ಅವಿಸ್ಮರಣೀಯ ಚಿತ್ರಗಳಲ್ಲಿ ಕಾಣುತ್ತದೆ.. 

ಕನ್ನಡ ಚಿತ್ರಗಳ ಅಭಿಮಾನಿಯಾಗಿ ಸುಮಾರು ಐವತ್ತರ ದಶಕದ ಸಿನಿಮಾಗಳಿಂದ ಇತ್ತೀಚಿನ ಚಿತ್ರಗಳವರೆಗೆ ನೂರಾರು ಚಿತ್ರಗಳನ್ನು ನೋಡಿದ್ದೀನಿ.. ಶಿವರಾಂ ಅವರ ಪ್ರತಿ ಪಾತ್ರವು ವಿಭಿನ್ನ.. ಮತ್ತು ಪ್ರತಿ ಚಿತ್ರಗಳಲ್ಲಿಯೂ ಒಂದಲ್ಲ ಒಂದು ರೀತಿಯಲ್ಲಿ ವಿಭಿನ್ನವಾಗಿ ತೆರೆಯ ಮೇಲೆ ತರಲು ಪ್ರಯತ್ನ ಮಾಡುತ್ತಿದ್ದರು.. ಹಾಗಾಗಿ ಅವರ ಪ್ರತಿ ಪಾತ್ರವೂ ವಿಭಿನ್ನ ಛಾಪು ಮೂಡಿಸಿತ್ತು.. ಅವರ ಎಲ್ಲಾ ಚಿತ್ರಗಳ ಪಾತ್ರಗಳನ್ನೂ ಅಕ್ಕ ಪಕ್ಕದಲ್ಲಿ ಇಟ್ಟು ಜೋಡಿಸಿದರೆ ಪ್ರತಿ ಪಾತ್ರವೂ ಸೋಮವಾರ ಮಂಗಳವಾರ ಬುಧವಾರದ ಹಾಗೆ ಪ್ರತಿ ಪಾತ್ರವೂ ವಿಭಿನ್ನವಾಗಿ ಕಾಣುತ್ತದೆ.. 

ನೀವು ನನಗೆ ಬಯ್ತಾ ಇದ್ದೀರಾ ಅಂತ ಗೊತ್ತು.. ಶಿವರಾಂ ಅವರನ್ನು ಶರಪಂಜರ ಶಿವರಾಂ ಅಂತ ಮೊದಲು ಮೊದಲು ಗುರುತಿಸುತ್ತಿದ್ದ ಶರಪಂಜರದ ಭಟ್ಟನ ಪಾತ್ರದ ಬಗ್ಗೆ ಬರೆದಿಲ್ಲ ಅಂತ.. ಹೌದು ಹೌದು.. ನನಗೆ ಶಿವರಾಂ ಅಂತ ಮೊದಲು ಪರಿಚಯವಾಗಿದ್ದು ಇದೆ ಚಿತ್ರದಿಂದ.. 

"ಪ್ರತಿ ಪಂಗಡಕ್ಕೂ ಒಂದೊಂದು ಬಾವುಟ.. ಒಂದು ಬಾವುಟ ಕೇಳುತ್ತದೆ ಹಣ,, ಇನ್ನೊಂದು ಬಾವುಟ ಕೇಳುತ್ತದೆ ಕೆಲಸ.. ಆದರೆ ಈ ನಮ್ಮ ಬಾವುಟ ಹಿಡಿದರೆ ರುಚಿ ರುಚಿಯಾದ ಊಟವೋ ಊಟ.. "

"ಕಿಟಕಿ ಕಾಮಾಕ್ಷಮ್ಮ ಅಂತ ಹೆಸರಿಟ್ಟಿದ್ದೀನಿ.. ನೋಡಿ ನೋಡಿ ಕೊಂಕಳಲ್ಲಿ ಇಟ್ಟಿರುವ ಆ ಬಟ್ಟಲನ್ನು ಕೊಡಿ.. ಅದೇನು ಬೇಕೋ ಕೇಳಿ.. ನೋಡಿ ಮುಂಡೇದು ಸಾಲ ಕೇಳೋಕೆ ಅಂತಾನೆ ಹುಟ್ಟಿರುವ ಈ ಬಟ್ಟಲು.. "

"ನೋಡಿ ತೆಗೆದುಕೊಂಡಿರುವ ಸಾಲವನ್ನು ಕೊಡೊ ಅಭ್ಯಾಸ ಅವರಿಗೆ ಇಲ್ಲ . ನಿಮಗೆ ಕೇಳೋ ಅಭ್ಯಾಸವಿಲ್ಲ.. ನೋಡಿ.. ಅವರ ಮನೇಲಿ ಎಷ್ಟು ಜನರಿದ್ದಾರೋ ಕೇಳಿ.. ಇಲ್ಲೇ ಅಡಿಗೆ ಮಾಡಿ ಇದೆ ಹಾದಿಯಲ್ಲಿ ಸಾಗಿಸೋಣ"

ನುಣ್ಣನೆ ತಲೆ.. ಹಣೆಯ ಉದ್ದಕ್ಕೂ ನಾಮ.. ಸದಾ ಎಲೆ ಅಡಿಕೆ ಮೆಲ್ಲುವ ಬಾಯಿ.. ಸದಾ ಪಟ ಪಟ ಅಂತ ಮಾತಾಡುವ ಪಾತ್ರ.. ಶಿವರಾಂ ಸದಾ ಜೀವಂತ.. 

ಹಾಸ್ಯ ಪಾತ್ರ, ಮೆಲ್ಲನೆ ಸಮಯ ಸಾಧಿಸುವ ಬುದ್ದಿವಂತ ಪಾತ್ರ.. ಅವರ ಜೀವನದ ಉತ್ತರಾರ್ಧದಲ್ಲಿ ತೂಕದ ಪಾತ್ರ ಮಾಡುತ್ತಾ.. ಸಂದೇಶ ಕೊಡುವ ಸಂಭಾಷಣೆ ಹೇಳುವ ಶೈಲಿ ಸೊಗಸು.. 

ಅವರ ಭಾಷಾ ಸ್ಪಷ್ಟತೆ..ಚಿತ್ರರಂಗದ ಇತಿಹಾಸವನ್ನು ಜತನದಿಂದ ನೆನಪಲ್ಲಿ ಇಟ್ಟುಕೊಂಡು.. ಕೇಳಿದಾಗ ಸ್ಪಷ್ಟತೆ ಇಂದ ಹೇಳುವ ಚಂದ.. ಎಲ್ಲವೂ ಯು ಟ್ಯೂಬ್ ಗಳಲ್ಲಿ ಜೀವಂತವಾಗಿದೆ.. 

ನಟರಾಗಿ, ನಿರ್ಮಾಪಕರಾಗಿ, ನಿರ್ದೇಶಕರಾಗಿ, ಅನೇಕ ಚಿತ್ರಗಳಿಗೆ ದುಡಿದ ಹೆಚ್ಚುಗಾರಿಕೆ ಅವರದ್ದು.. 

ರಾಶಿ ಸಹೋದರರು ಎಂದು ಹೆಸರಾಗಿ.. ತಮ್ಮ ಸಹೋದರ ರಾಮನಾಥ್ ಜೊತೆಗೂಡಿ ಕನ್ನಡ ಚಿತ್ರಗಳನ್ನು ನಿರ್ಮಿಸಿದ್ದೇ ಅಲ್ಲದೆ, ಹಿಂದಿಯಲ್ಲಿ ಕೂಡ ಅಮಿತಾಬ್ ನಾಯಕತ್ವದಲ್ಲಿ ಚಿತ್ರಮಾಡಿ ಹೆಸರಾಗಿದ್ದರು.. 

ಆರಂಭಿಕ ಪುಟ್ಟಣ್ಣ ಅವರ ಚಿತ್ರಗಳಲ್ಲಿ ಜೀವ ತುಂಬಿ ಎಲ್ಲಾ ಘಟಕಗಲ್ಲಿಯೂ ಕೆಲಸ ಮಾಡಿ, ಪುಟ್ಟಣ್ಣ ಅವರಿಗೆ ಅಕ್ಷರಶಃ ಬಲಗೈ ಆಗಿದ್ದರು.. ಶರಪಂಜರ, ಗೆಜ್ಜೆಪೂಜೆ, ನಾಗರಹಾವು, ಎಡಕಲ್ಲು ಗುಡ್ಡದ ಮೇಲೆ, ಉಪಾಸನೆ, ಶುಭಮಂಗಳ ಚಿತ್ರಗಳಲ್ಲಿ ಅವರ ತೆರೆಯ ಮೇಲಿನ ಪಾತ್ರದಷ್ಟೇ ಅವರ ತೆರೆಯ ಹಿಂದಿನ ಪರಿಶ್ರಮವೂ ಅಷ್ಟೇ ವಿಶಿಷ್ಟ. 

ಅಣ್ಣಾವ್ರ ಹಲವಾರು ಚಿತ್ರಗಳಲ್ಲಿ ವಿಶಿಷ್ಟ ಅಭಿನಯ, ಸಂಭಾಷಣೆ, ಹಾಡುಗಳು ಎಲ್ಲದರಲ್ಲಿಯೂ ಮೆರೆದವರು ಶಿವರಾಂ.. 

ಅವರ ಜೀವನವನ್ನು ಪ್ರಣಯ ರಾಜ ಶ್ರೀನಾಥ್ ಅವರು ಒಂದು ಮಾತಿನಲ್ಲಿ ಒಂದು ಸಂದರ್ಶನದಲ್ಲಿ ಹೇಳಿದರು.. 

"ಕನ್ನಡ ಚಿತ್ರರಂಗದಲ್ಲಿ ಯಾರೇ ಇಹಲೋಕ ತ್ಯಜಿಸಿದರು ಒಂದು ಜೊತೆ ಭುಜ ಸದಾ ಸಿದ್ಧವಾಗಿರುತ್ತೆ.. ಅದು ಶಿವರಾಮಣ್ಣ ಅವರದ್ದು" 

ಇದು ಅಲ್ಲವೇ ಬದುಕಿನ ಸಾರ್ಥಕತೆ.. ಅನೇಕಾನೇಕ ಜೀವಗಳನ್ನು ಹೊತ್ತು ಅಂತಿಮ ಯಾತ್ರೆಗೆ ಸಹಕರಿಸಿದ ಅವರ ಭುಜಗಳು ಇಂದು ನಾಲ್ಕು ಭುಜಗಳ ಮೇಲೆ ಹೋರಾಡಲು ಸಿದ್ಧವಾಗಿದೆ.. 

ಬದುಕೇ ಹಸಿರು ಪ್ರೀತಿ ಬೆರೆತಾಗ.. .ಇದು ಅಣ್ಣಾವ್ರ ಒಂದು ಹಾಡಿನ ಸಾಲು.. ಶಿವರಾಂ ಅವರು ಇದೆ ರೀತಿ ಬದುಕಿ ಬಾಳಿದ್ದರು.. ಇಂದು ಅವರು ಬೆಳ್ಳಿ ತೆರೆಯಲ್ಲಿ ಅಜರಾಮರ.. !!!

Friday, October 29, 2021

ಬದುಕನ್ನು "ಅಪ್ಪು"ವ ರೀತಿ

ನಾವು ಚಿಕ್ಕವರಾಗಿದ್ದಾಗ.. ದೊಡ್ಡವರ ಚಪ್ಪಲಿಗಳನ್ನು ಹಾಕಿಕೊಂಡು ನೆಡೆಯುವ ಅಭ್ಯಾಸ ಇರುತ್ತದೆ.. ಅದೇನೋ ಅರಿಯದು.. ದೊಡ್ಡವರ ಚಪ್ಪಲಿಗಳು ಅಥವ ಷೂಗಳನ್ನೂ ಹಾಕಿಕೊಂಡು ಅಸಡ ಬಿಸಡ ನೆಡೆಯುವುದರಲ್ಲಿ ಏನೋ ಒಂದು ಖುಷಿ.. !

ಅಪ್ಪ ಮೇರುವ್ಯಕ್ತಿತ್ವದ ದಂತ ಕತೆ.. ಚಿಕ್ಕವರಾಗಿದ್ದಾಗಿನಿಂದ ಅವರ ಬಣ್ಣ ಹಚ್ಚಿದ ಅನುಭವ.. ತಾನು ಅಪ್ಪನಂತೆ ಆಗಬೇಕೆಂದು.. ಅವರು ತುಳಿದ ಹಾದಿಯಲ್ಲಿಯೇ ಆದರ್ಶ ಬದುಕನ್ನು ಕಟ್ಟಿಕೊಂಡವರು ಲೋಹಿತ್ ಅನ್ನುವ ಹೆಸರಿನಿಂದ ಮೊದಲುಗೊಂಡು.. ಅಪ್ಪನ ಹಾದಿಯಲ್ಲಿಯೇ ನೆಡೆದು ಪುನೀತ್ ರಾಜಕುಮಾರ್ ಹೆಸರಿನಿಂದ ಲೋಕಪ್ರಿಯರಾದವರು.. 

ಆ ಸ್ಟಾರ್ ಈ ಸ್ಟಾರ್ ಅಂತ ನೂರೆಂಟು ಹೆಸರು.. .. ಸ್ಟಾರುಗಳು ಬರುತ್ತಾರೆ... ಆದರೆ ಯಾಕೋ ಪುನೀತ್ ಇವರೆಲ್ಲರಿಗಿಂತ ಭಿನ್ನ ಹಾದಿ ತುಳಿದು ತಮ್ಮನ್ನೇ ಪುನೀತರನ್ನಾಗಿ ಮಾಡಿಕೊಂಡರು.. 

ವಸಂತಗೀತ ಚಿತ್ರದಲ್ಲಿ ಪುಟ್ಟ ಮಗುವಾಗಿ ಕುಣಿದು ನಲಿದು "ಏನು ಸಂತೋಷವೋ ಏನು ಉಲ್ಲಾಸವೋ"  ಎಂದು ಹಾಡುತ್ತಾ ಕುಣಿದು.. ತನ್ನನು "ಭಾಗ್ಯವಂತ" ಎಂದು ತಿಳಿದು ಭಕ್ತಿ ಪ್ರಹ್ಲಾದನಾದ.. ಅಣ್ಣಾವ್ರು ಆರ್ಭಟಿಸಿದ ಪಾತ್ರದ ಮುಂದೆ ಗಡ ಗಡ ನಡುಗುತ್ತಲೇ, ಅಣ್ಣಾವ್ರ ಎದುರು ಪಾತ್ರ ಮಾಡಿದ ಲೋಹಿತ್.. ಮತ್ತೆ ಮತ್ತೆ ಪುಟ್ಟ ಪುಟ್ಟ ಪಾತ್ರಗಳಲ್ಲಿ ಮಿಂಚಿದರು.. 

ನನ್ನ ಹೆಸರು.. ರಾಮ್ ದೊಡ್ಡವನಾದ ಮೇಲೆ ರಾಮ್ ಪ್ರಸಾದ್ ಅಂತ ಇಟ್ಕೋತೀನಿ ಅಂತ ವಿಭಿನ್ನವಾದ ಶೈಲಿಯಲ್ಲಿ ಹೇಳುತ್ತಾ.. ಚಲಿಸುವ ಮೋಡಗಳಲ್ಲಿ ತಾನು ಕರಗಿ ಹೋದ ಪುನೀತ್ ನಮ್ಮೆಲ್ಲರ ಹೃದಯದಲ್ಲಿ ವಿಭಿನ್ನವಾಗಿ ನಿಲ್ಲುತ್ತಾರೆ.. 

ಕಸ್ತೂರಿ ನಿವಾಸದಲ್ಲಿ ಅಣ್ಣಾವ್ರ ಪಾತ್ರ ಹೇಳುತ್ತದೆ.. :"ಕೊಟ್ಟಿದ್ದನ್ನ ಹೇಳಬಾರದು.. ಕೊಡೋದನ್ನ ಮರೆಯಬಾರದು" .. ತನ್ನ ಪುರುಸೊತ್ತು ಇಲ್ಲದ ಸಿನಿಪಯಣದಲ್ಲಿ ಹತ್ತಾರು ಚಟುವಟಿಕೆಗಳನ್ನು ಮಾಡುತ್ತಾ, ಅನೇಕಾನೇಕ ಸಮಾಜಮುಖಿ ಕೆಲಸ ಮಾಡುತ್ತಾ.. ಬಲಗೈಯಲ್ಲಿ ಕೊಟ್ಟದ್ದು ಎಡಗೈಗೆ ತಿಳಿಯಬಾರದು ಎಂದು ಬದುಕಿ ತೋರಿಸಿದರು.. 

ಬದುಕಿದ್ದಾಗ ಅವರ ಸಮಾಜಮುಖಿ ಚಟುವಟಿಕೆಯನ್ನು ಎಲೆ ಮರೆಯ ಕಾಯಿಗಳ ಹಾಗೆ ನೋಡಿಕೊಂಡಿದ್ದ ಪುನೀತ್.. ತಮ್ಮ ಇಹಲೋಕದ ಜೀವನ ಮುಗಿಸುತ್ತಿದ್ದಂತೆ, ಅವರ ಸಮಾಜಮುಖಿ ಕಾರ್ಯಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವರ ಕೆಲಸಗಳ ವಿವರ ಓಡಾಡುತ್ತಿದೆ.. 

ಬದುಕಿದ್ದಾಗ ಬದುಕಿ, ಹೋದಮೇಲೂ ಬದುಕಿ ಎನ್ನುವ ಉದಾತ್ತ ಜೀವನದ ಪರಿ ಇದು.. 

ಕಾಂತಾ ಆಕಾಶ್ ನೋಡಿದೆಯ ಅಂತ ನನ್ನ ಆಪ್ತ ಗೆಳೆಯ ಶ್ರೀಕಾಂತ್ ಕೇಳಿದಾಗ.. ಹೋಗಲೇ ಯಾಕೋ ನೋಡಬೇಕು ಅನ್ನಿಸಿಲ್ಲ ಅಂತ ಪ್ರಾಮಾಣಿಕವಾಗಿ ಹೇಳಿದ್ದೆ.. ನಮ್ಮ ಕನ್ನಡ ಚಿತ್ರಗಳಲ್ಲಿ ಆ ರೀತಿಯ ನೃತ್ಯ, ಹೊಡೆದಾಟ ಮಾಡುವರು ಕಡಿಮೆ ಕಣೋ.. ತೆಲುಗು ನಟರು ಮಾಡುವಂತೆ ನೃತ್ಯ, ಹೊಡೆದಾಟದ ದೃಶ್ಯಗಳಲ್ಲಿ ಅದ್ಭುತವಾಗಿ ನಟಿಸುತ್ತಾರೆ ನಮ್ಮ ಪುನೀತ್ ರಾಜ್ ಕುಮಾರ್ ಎಂದಾಗ ಮನಸ್ಸಿಗೆ ಅಷ್ಟು ನಾಟಿಸಿಕೊಳ್ಳದ ನಾನು.. ಅವರ ಅರಸು ಚಿತ್ರ ನೋಡಿ ಮಂತ್ರ ಮುಗ್ಧನಾದೆ.. 

"ಅಜ್ಜಿ ನನಗೆ ತುಂಬಾ ಹೊಟ್ಟೆ ಹಸೀತಾ ಇದೆ.. ಒಂದು ಬಾಳೆ ಹಣ್ಣು ಕೊಡ್ತೀಯ... ಒಂದು ತಿಂಗಳಾದ ಮೇಲೆ,, ನಿನಗೆ ಒಂದು ಲಕ್ಷ ಕೊಡ್ತೀನಿ" ಅಂತಹ ಹೇಳುವ ದೃಶ್ಯ.. ಹೊಟ್ಟೆ ಹಸಿದ ಕಾರಣ.. ಬಾಳೆ ಹಣ್ಣನ್ನು ತಿಂದದ್ದೇ ಅಷ್ಟೇ ಅಲ್ಲದೆ, ಬಾಳೆ ಹಣ್ಣಿನ ಸಿಪ್ಪೆಯಲ್ಲಿ ಅಂಟಿಕೊಂಡಿದ್ದ ಬಾಳೆ ಹಣ್ಣಿನ ಅಂಶವನ್ನು ನೆಕ್ಕಿ ನೆಕ್ಕಿ ತಿನ್ನುವ ದೃಶ್ಯದಲ್ಲಿ ಅಕ್ಷರಶಃ ಅದ್ಭುತ ಕಲಾವಿದ ನೋಡಲು ಸಿಕ್ಕಿದರು..

ಅಲ್ಲಿಂದ ಮುಂದೆ ಅವರ ಅನೇಕ ಉತ್ತಮ ಚಿತ್ರಗಳನ್ನು ನೋಡಿದೆ... ವಂಶಿ ಚಿತ್ರದಲ್ಲಿ ಮಳೆಯಲ್ಲಿ ಮಾರುಕಟ್ಟೆಯಲ್ಲಿ ಲಾಂಗನ್ನು ಉಲ್ಟಾ ಹಿಡಿದು ಹೊಡೆದಾಡುತ್ತಿದ್ದಾಗ, ಅವರ ಅಮ್ಮನಿಗೆ ದುಷ್ಟನೊಬ್ಬ ಒದ್ದಾಗ.. ಲಾಂಗನ್ನು ಮತ್ತೆ ಉಲ್ಟಾ ತಿರುಗಿಸಿಕೊಂಡು, ಹೊಡೆದಾಡುವ ದೃಶ್ಯ ನನ್ನ ಅಚ್ಚು ಮೆಚ್ಚಿನದು.. 

ಅದೇ ಅರಸು ಚಿತ್ರದಲ್ಲಿ.. "ಒಬ್ಬಳು ಬದುಕು ಏನೆಂದು ಹೇಳಿದಳು.. ಇನ್ನೊಬ್ಬಳು ಬದುಕು ಹೀಗೆ ಎಂದು ತೋರಿಸಿದಳು.. ಇಬ್ಬರು ನನಗೆ ಎರಡು ಕಣ್ಣುಗಳಿದ್ದ ಹಾಗೆ.. " ಎನ್ನುವ ದೃಶ್ಯದ ಅಭಿನಯ ಇಷ್ಟವಾಗುತ್ತದೆ.. ಸಮಯದ ಗೊಂಬೆಯ ಅಂತಿಮ ದೃಶ್ಯದಲ್ಲಿ ಅಣ್ಣಾವ್ರು "ಯೋಗಿ ಪಡೆದದ್ದು ಯೋಗಿಗೆ ಜೋಗಿ ಪಡೆದದ್ದು ಜೋಗಿಗೆ" ಎಂದು ಹೇಳುವ ದೃಶ್ಯ ನೆನಪಿಗೆ ಬರುತ್ತದೆ.. 

ಮಿಲನ ಚಿತ್ರದಲ್ಲಿ ಜೀವನದಲ್ಲಿ ಸೋತು ಹೋಗಿದ್ದ ನಾಯಕಿಗೆ ಮತ್ತೆ ಬದುಕುವುದಕ್ಕೆ, ಜೀವನವನ್ನು ಗೆಲ್ಲುವುದಕ್ಕೆ ಸಹಾಯ ಮಾಡುತ್ತಾ ತಿಳಿ ಹೇಳುವ ಮಾತುಗಳ ಅಭಿನಯ ಇಷ್ಟವಾಗುತ್ತದೆ.. 

ಹುಡುಗರು ಚಿತ್ರದಲ್ಲಿ ತಮ್ಮ ಬದುಕನ್ನೇ ಹಾಳುಮಾಡಿಕೊಂಡರೂ ಸ್ನೇಹಿತನಿಗೆ ಅವನ ಒಲವಿನ ಹುಡುಗಿಯನ್ನು ಮದುವೆ ಮಾಡಿಸಿ ನಂತರ, ಅವರಿಬ್ಬರೂ ಬೇಡದ ಕಾರಣಕ್ಕೆ ದೂರವಾಗಲು ನಿರ್ಧರಿಸಿದಾಗ "ತಂದೆ ತಾಯಿಗಳು ಲವ್ ಲವ್ ಎಂದರೆ ಯಾಕೆ ಹೆದರು ಸಾಯ್ತಾರೆ ಗೊತ್ತಾ.. ನಿಮ್ಮಂತವರಿಂದಾಗಿ.. ಅವರು ಅಂದುಕೊಂಡಿದ್ದಕ್ಕಿಂತ ಒಂದು ಕೈ ಹೆಚ್ಚಾಗಿ ಬದುಕಿ ತೋರಿಸಿ.. ನಿಮಗೆ ಸಲಾಂ ಹೊಡೆಯುತ್ತಾರೆ.... ಈ ದೃಶ್ಯವನ್ನು ಹತ್ತು ಹಲವಾರು ಬಾರಿ ನೋಡಿದ್ದೇನೆ. 

ಪೃಥ್ವಿ ಚಿತ್ರದ ಜಿಲ್ಲಾಧಿಕಾರಿಯ ಗತ್ತು, ಅಷ್ಟೇ ಸರಳ ಸ್ವಭಾವದ ಪತಿಯಾಗಿ, ತನ್ನ ಮಡದಿಗೆ ಸಾಂತ್ವನ ಹೇಳುವ ರೀತಿ..  "ನಮ್ಮ ಜಿಲ್ಲೆಯನ್ನು ಕಾಪಾಡಬೇಕು.. ನನ್ನ ನಂಬಿದ ಜನಕ್ಕೆ ಮೋಸ ಮಾಡಬಾರದು ಎನ್ನುವಂತಹ ಮಾತುಗಳನ್ನು ಹೇಳುವಾಗ ಅವರ ಅಭಿನಯ ಇಷ್ಟವಾಗುತ್ತದೆ.. 

ಹತ್ತು ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದರೂ, ನನಗೆ ಲೋಹಿತ್/ಪುನೀತ್/ ಅಪ್ಪು ಎಂದ ಕೂಡಲೇ ಕಣ್ಣಿಗೆ ಕಾಡುವುದು, ಕಾಣುವುದು ಬೆಟ್ಟದ ಹೂವು ಚಿತ್ರದ ಅಂತಿಮ ದೃಶ್ಯ.. ಇಡೀ ಚಿತ್ರದಲ್ಲಿ ಮನೆಯ ಜವಾಬ್ಧಾರಿಯನ್ನು ಹೊತ್ತು.. ನೆಡೆಯುತ್ತಿದ್ದರೂ ತನ್ನ ಕನಸಿನ ರಾಮಾಯಣ ದರ್ಶನಂ ಪುಸ್ತಕವನ್ನು ಕೊಂಡು ಕೊಳ್ಳಲು ಹತ್ತು ಹತ್ತು ಪೈಸೆ ಕೂಡಿಸುತ್ತಾ. .. ಹತ್ತು ರೂಪಾಯಿಗಳಾದ ಮೇಲೆ ಪುಸ್ತಕ ತೆಗೆದುಕೊಳ್ಳಬೇಕು ಎಂದುಕೊಂಡರೂ, ಮನೆಯಲ್ಲಿ ತನ್ನ ತಂಗಿ, ತಮ್ಮ, ಅಮ್ಮನಿಗಾಗಿ ಕಂಬಳಿ ತೆಗೆದುಕೊಂಡು.. ಅವರಿಗೆ ಹೊದ್ದಿಸಿ, ಮನೆಯ ಹೊರಗೆ ಕೂತು ಕಣ್ಣೀರಿಡುವ ದೃಶ್ಯ.. ನಿಜಕ್ಕೂ ಕಲಾವಿದ ಬೆಳೆಯುವ ಹಾದಿಯಲ್ಲಿದ್ದಾನೆ ಎಂದು ತೋರಿಸಿದ ಅಭಿನಯವದು.. 

ಸಾಮಾನ್ಯ ಚಿತ್ರರಂಗದಲ್ಲಿ, ಬಾಲಕಲಾವಿದರು, ನಾಯಕನಾಗಿ ಮತ್ತೆ ಮಿಂಚುವ ಸಾಧ್ಯತೆ ಕಡಿಮೆ.. ಅವರ ಮುಗ್ಧತೆಯೋ, ಮಾತಾಡುವ ದನಿಯೋ, ಸರಳವಾಗಿ ಅಭಿನಯಿಸುವ ನೈಜತೆಯೋ ಇವೆಲ್ಲಾ ದೊಡ್ಡವರಾಗಿ ನಾಯಕ ಪಟ್ಟಕ್ಕೆ ಏರಿದ ಮೇಲೂ ಜನರು ಅದೇ ರೀತಿಯ ಬಾಲಕಲಾವಿದನ ಮುಖವನ್ನೇ ನೆನಪಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುವುದರಿಂದ.. ಬಾಲಕಲಾವಿದರು ನಾಯಕರಾಗಿ ಗೆದ್ದ ಉದಾಹರಣೆಗಳು ಕಡಿಮೆ.. ಆದರೆ ಅದಕ್ಕೆ ಸವಾಲಾಗಿ ಗೆದ್ದು ನಿಂತವರು ಪುನೀತ್.. 

ಕತ್ತಲಲ್ಲಿ ನ್ಯಾಯವಿಟ್ಟನೋ ನಮ್ಮ ಶಿವ ಕಣ್ಣುಗಳ ಕಟ್ಟಿ ಬಿಟ್ಟನೋ.. ಚಲಿಸುವ ಮೋಡಗಳ ಹಾಡಿನಂತೆ.. ಬೆಳಕಿನ ಜಗತ್ತಿನಿಂದ ಜಗಮಗ ಬೆಳಗುವ ತಾರಾ ಮಂಡಲಕ್ಕೆ ಜಾರಿಯೇ ಹೋದರು.. 

ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ ಎಂದು ಹಾಡುತ್ತಾ.. ಬೆಳ್ಳಿ ಪರದೆಯ ಮೇಲೆ ಜಾರಿ ಹೋದರು.. ಸಿನಿರಸಿಕರ ಮನದಲ್ಲಿ ಸದಾ ಹಸಿರಾಗುತ್ತಾರೆ.. 


ಮಾಡಿದ್ದು ಕೆಲವು ಚಿತ್ರಗಳಾದರೂ.. ಜೀವ ತುಂಬಿಸಿ ಅಭಿನಯಿಸಿ.. ಅಣ್ಣಾವ್ರ ಹಾದಿಯಲ್ಲಿ ಸಾಗಬಹುದು ಎಂದು ತೋರಿಸಿದರು.. ಆದರೆ ವಿಧಿಯ ಆಟ ಬೇರೆಯೇ ಇತ್ತು ಅನಿಸುತ್ತದೆ.. 

ಭಾಗ್ಯವಂತನಾಗಿ ಬಂದು ವಸಂತ ಮಾಸದಲ್ಲಿ ಗೀತೆ ಹಾಡುತ್ತಾ ಜೀವನ ಎಂದರೆ ಚಲಿಸುವ ಮೋಡಗಳು .. ಅದಕ್ಕೆ ಹೊಸಬೆಳಕು ಮೂಡುತ್ತಲೇ ಇರುತ್ತದೆ.... ನಾನು ಅಪ್ಪಾಜಿಯ ಜೊತೆ ಸೇರಿಕೊಂಡು ಎರಡು ನಕ್ಷತ್ರಗಳಾಗಿದ್ದೇವೆ.. ಜೀವನವನ್ನು ಅಪ್ಪಬೇಕು..ಎಂದು ತೋರಿಸಿಕೊಟ್ಟ ನಾಯಕ ಪುನೀತ್ ರಾಜ್ ಕುಮಾರ್.. 

ತಮ್ಮ ಬಾಲ್ಯ ಜೀವನದ ಅಭಿನಯಗಳಿಗೆ ಗುರು ಎಂದು ಹಿರಿಯ ಕಲಾವಿದ ಹೊನ್ನವಳ್ಳಿ ಕೃಷ್ಣ ಅವರನ್ನು ನೆನಪಿಸಿಕೊಳ್ಳುತಿದ್ದರು.. ಕೃಷ್ಣ ನೀನು ಮಾಡು ನಾನು ಮಾಡುತ್ತೇನೆ ಅಂತ ಹಲವಾರು ಸಂದರ್ಶನಗಳಲ್ಲಿ ಹೇಳುತ್ತಿದ್ದದ್ದು ಅವರ ಸರಳ ಮುಗ್ಧತೆಗೆ ಸಾಕ್ಷಿ..  

ಆಡಿಸಿ ನೋಡು ಬೀಳಿಸಿ ನೋಡು.. ಉರುಳಿ ಹೋಗದು.. 

ಹೌದು.. 

ಬೆಳ್ಳಿ ಪರದೆಯ ಮೇಲೆ ಪುನೀತ್ ರಾಜ್ ಕುಮಾರ್ ಇಂದಿಗೂ .. ಎಂದಿಗೂ ಪವರ್ ಸ್ಟಾರ್..!!!

Saturday, September 11, 2021

ಸಗ್ಗದ ಗಣಪತಿಗೆ ತಿಲಕರಾಧನೆ.. !

ಶ್ರೀ ರಾಮ ಸೇತು ಕಟ್ಟುವಾಗ ಒಂದು ಪುಟ್ಟ ಅಳಿಲು  ಮೈಯನ್ನು ಒದ್ದೆ ಮಾಡಿಕೊಳ್ಳೋದು..  ಮರಳಿನ ಮೇಲೆ ಹೊರಳಾಡೋದು... ...  ಸೇತುವೆ ಮೇಲೆ ಓಡಾಡೋದು.. 

ಇದನ್ನೇ ಅಳಿಲು ಸೇವೆ ಎಂದು ಕರೆಯೋದು ಎಂದು ಶ್ರೀ ರಾಮಚಂದ್ರ ಅಳಿಲಿನ ಮೈ ಮೇಲೆ  ಬೆರಳಾಡಿಸಿ ಅದರ ಬೆನ್ನಿನ ಮೇಲೆ ಬಿಳಿಯ ಗೆರೆಗಳು ಮೂಡಿದವು ಎಂದು ಬಾಲಕನಾಗಿದ್ದಾಗ ಬೊಂಬೆಮನೆ ಪುಸ್ತಕದಲ್ಲಿ ಓದಿದ ನೆನಪು.. 

ಸ್ವಾತಂತ್ರದ ಕಿಡಿಯನ್ನು ಹೊತ್ತಿಸಿದ  ಮಂಗಲ್ ಪಾಂಡೆ, ಝಾನ್ಸಿ ರಾಣಿ, ಭಗತ್ ಸಿಂಗ್, ರಾಜಗುರು, ಸುಖದೇವ್, ಸಾವರ್ಕರ್ ಹೀಗೆ ಅನೇಕಾನೇಕ ಸ್ವಾತಂತ್ರ ಸಮರದ ಸೇನಾನಿಗಳ ಶ್ರಮವನ್ನು ಸಾರ್ಥಕತೆ ಮಾಡುವಂತೆ ಲೋಕಮಾನ್ಯರು ಬಾಲ ಗಂಗಾಧರ ತಿಲಕ್ ಜನತೆಯನ್ನು ಒಟ್ಟುಗೂಡಲು ಶುರು ಮಾಡಿದ ಗಣೇಶೋತ್ಸವ ಇಂದು ಅನೇಕಾನೇಕ ಧರ್ಮವನ್ನು ಒಟ್ಟುಗೂಡಿಸಿದ್ದೆ ಅಲ್ಲದೆ, ಎಲ್ಲರೂ ಒಂದು ಎಂಬ ಭಾವವನ್ನು ಬೆಸೆಯಲು ಸಹಾಯ ಮಾಡಿದೆ .. 

ನಾವಿರುವ ತಾಣವೇ ಸ್ವರ್ಗ ಎಂಬ ಭಾವವನ್ನು ಮೂಡಿಸಲು ಒಂದೊಂದೇ ಹೆಜ್ಜೆ ಇಡುತ್ತಿರುವ ಪಂಚಮುಖಿ ಪ್ಯಾರಡೈಸ್ ಪರಿವಾರದ  ಇನ್ನೊಂದು ಪುಟ್ಟ ಹೆಜ್ಜೆ ಗಣೇಶೋತ್ಸವ.. 

ಹೌದು...  ಕೋವಿಡ್ ಮಹಾಮಾರಿ ಆಚರಣೆಯನ್ನು ದೊಡ್ಡ ಮಟ್ಟದಲ್ಲಿ ಅಥವ ಎಲ್ಲರೂ ಸೇರುವಂತಹ ಸಮಾರಂಭ ಮಾಡಲು ಅಡ್ಡಿ ಮಾಡಿದ್ದರೂ, ನೆರೆಹೊರೆಯವರ ಉತ್ಸಾಹಕ್ಕೇನೂ ಕಮ್ಮಿ ಮಾಡಿಲ್ಲ.. ಭಯವೋ, ಎಲ್ಲರೂ ಬದುಕಬೇಕೆಂಬ ಹಂಬಲವೋ .. ಇಂತಹ ಒಂದು ಪುಟ್ಟ ಪುಟ್ಟ ಉತ್ಸಾಹದ ಚಿಲುಮೆಯನ್ನು ಚಿಮ್ಮಿಸುತ್ತಲೇ ಇರುತ್ತದೆ.. 

ಗಣೇಶ ಹಬ್ಬ ಇಂದಿಗೂ, ಎಂದಿಗೂ ನನ್ನ ಮನಸ್ಸಿಗೆ ಹತ್ತಿರವಾದ ಹಬ್ಬ.. ಮಂಟಪದ ಸಿಂಗಾರ ಮಾಡುತ್ತಾ, ಗಣಪತಿ ಮೂರ್ತಿಯ ಮುದ್ದಾದ ಪ್ರತಿರೂಪವನ್ನು ಪ್ರತಿಷ್ಠಾಪಿಸಿ ಅದನ್ನು ಪೂಜಿಸಿ, ರುಚಿ ರುಚಿಯಾದ ತಿಂಡಿ, ತಿನಿಸುಗಳನ್ನು ಮಾಡಿ.. ಗಣಪತಿಯ ಹೆಸರಲ್ಲಿ ನಾವೆಲ್ಲರೂ ಹೊಟ್ಟೆಗೆ ಸೇವಿಸುವ ಈ ಸಂಭ್ರಮ ಸದಾ ಸಂತಸ ತರುತ್ತದೆ.. 

ಅನೇಕಾನೇಕ ಕುಟುಂಬಗಳು ಕೊಟ್ಟಿದ್ದ ಆಹ್ವಾನಕ್ಕೆ ಮನ್ನಣೆ ಕೊಟ್ಟು, ಕೆಲವು ಮನೆಗಳನ್ನು, ಮನಗಳನ್ನು ಸಂದರ್ಶಿಸಿ ಬಂದಾಗ ಮನಸ್ಸಿಗೆ ಆಹ್ಲಾದಕರ ಅನುಭವ ನನಗಾಯಿತು...  

ಗಣಪತಿ ಮೆಲ್ಲಗೆ ಕಿವಿಯಲ್ಲಿ ಬಂದು.. ಶ್ರೀ ಮುಂದಿನ ವರ್ಷ ನಿನ್ನ ಮನೆಗೆ ಬರುತ್ತಿದ್ದೇನೆ.. ಆವಾಗ ನೀನು ಸಂಭ್ರಮ ಪಡುವೆಯಂತೆ.. ಈ ವರ್ಷ ನಿನ್ನ ನೆರೆ ಹೊರೆಯವರ ಸಂತಸದಲ್ಲಿ ನೀನು ಮುಳುಗೆದ್ದು ಸಂಭ್ರಮಿಸು.. ನಿನ್ನ ಮನೆಗೆ ಬಂದಾಗ ನಿನ್ನ ಸಂಭ್ರಮವನ್ನು ನಾನು ಕಣ್ಣಾರೆ ನೋಡಿ ಸ್ವರ್ಗದಲ್ಲಿರುವ ನಿನ್ನ ಅಮ್ಮ ಅಪ್ಪ, ನಿನ್ನ ತಲೆಮಾರಿನ ಹಿರಿ ಕಿರಿಯರಿಗೆ ಹೇಳುತ್ತೇನೆ..

ಗಣಪ ತುಂಬಾ ಧನ್ಯವಾದಗಳು.. ಹೌದು ನಿನ್ನ ಪೂಜೆ ಮಾಡಿಲ್ಲವಲ್ಲ ಎಂಬ ಕೊರಗು ಇತ್ತು.. ಆದರೆ ನನ್ನ ಪಂಚಮುಖಿ ಸಗ್ಗದಲ್ಲಿ ನೆಡೆದ ಪುಟ್ಟ ಉತ್ಸವ.. ನನ್ನ ಉತ್ಸಾಹವನ್ನು ಹೆಚ್ಹಿಸಿತು.... ನಿನ್ನ ಮತ್ತು ತಿಲಕರ ಸಂಭಾಷಣೆ ಕೇಳುವ ತವಕವಿದೆ.. ಹೇಳುವೆಯ.. 

ಓವರ್ ಟು ಗಣಪತಿ.. 

****
ತಿಲಕ್: ಗಣಪ.. ನಿನ್ನ ಪೂಜೆಯನ್ನು ಮಾಡುತ್ತಾ.. ನಮ್ಮ ಭಾರತೀಯರನ್ನು ಸ್ವತಂತ್ರ ಸಮರಕ್ಕೆ ಸಜ್ಜುಗೊಳಿಸಬೇಕಿದೆ.. ನನಗೆ ನಿನ್ನ ಆಶೀರ್ವಾದ ಇರಲಿ. 

ಗಣಪತಿ : ತಿಲಕ್ ನೀವೆಲ್ಲರೂ ಮಾಡುತ್ತಿರುವ ಈ ಉತ್ಸವ ದೊಡ್ಡ ಮಟ್ಟದಲ್ಲಿ ಬೆಳೆಯಲಿ. ... ಮಂದಿಯನ್ನು ಒಗ್ಗೂಡಿಸಲಿ .. .ಭರತ ದೇಶ ಬಹುಬೇಗ ಭಾರತವಾಗಲಿ.. ಸ್ವತಂತ್ರ ಭಾರತವಾಗಲಿ.. 

ತಿಲಕ್ : ನಮ್ಮ ಭರತಭೂಮಿಗೆ ಬೇಕಾಗಿರುವುದೇನು.. ?

ಗಣಪತಿ: ನಾ ಮುಂದು ತಾ ಮುಂದು ಎಂದು ಮುಂದೆ ಬರುವ ಉತ್ಸಾಹ ಮೂಡಿಸಬೇಕು.. ನಾವೆಲ್ಲರೂ ನಾವೆಲ್ಲರೂ ಎನ್ನುವ ತವಕ ಮೂಡಿಸಬೇಕು.. ನೋಡಲ್ಲಿ ಬಿಬಿಎಂಪಿ ನನ್ನನ್ನು ಮೆರವಣಿಗೆ ಮಾಡುವ ಅವಕಾಶವಿಲ್ಲ.. ಈ ಕೋವಿಡ್ ಮಹಾಮಾರಿಯ ಹಂತದಲ್ಲಿ ಈ ರೀತಿಯ ಉತ್ಸವ ಮಾಡುವ ಹಾಗಿಲ್ಲ ಅಂದಾಗ.. ಪಂಚಮುಖಿಯಲ್ಲಿ ಕೆಲ ಮಂದಿ ನನ್ನನ್ನು ಪೂಜಿಸಿ, ನನ್ನ ಮೂರ್ತಿಯನ್ನು ವಿಸರ್ಜಿಸುವ ಸಮಯದಲ್ಲಿ ಒಟ್ಟಾದ ಪರಿ ನೋಡು.. ಹಿರಿಕಿರಿಯರೆನ್ನದೆ, ಗಂಡು ಹೆಣ್ಣು ಎನ್ನದೆ ಎಲ್ಲರೂ ತಮ್ಮ ಕಟ್ಟಡವನ್ನು ಮೂರು ಬಾರಿ ಪ್ರದಕ್ಷಿಣೆ ಬಂದದ್ದು.. ಹಾಡಿಕೊಂಡು ನಲಿದಿದ್ದು..  ಇವೆಲ್ಲಾ ನೋಡೋದೇ ಸಂಭ್ರಮ.. ನಮ್ಮ ಭರತ ಭೂಮಿಗೆ ಬೇಕಾಗಿರೋದೇ ಈ ರೀತಿಯ ಸಂತಸದ ಒಗ್ಗಟ್ಟು.. ಈ ರೀತಿಯ ಒಗ್ಗಟ್ಟು .. ಪ್ರತಿ ಮನೆ ಮನೆಗೂ, ಮನ ಮನಗಳಿಗೂ ಸಂತಸದ ಒಬ್ಬಟ್ಟನ್ನೇ ಬಡಿಸುತ್ತದೆ.. 

ತಿಲಕ್: ಗಣಪತಿ ಮಹಾರಾಜ್.. ಜೈ ಜೈ.. ಅತ್ಯಂತ ಸುಂದರ ಮಾತುಗಳು.. ಹೌದು ನನಗೂ ಖುಷಿಯಾಯಿತು.. ಪ್ರತಿಯೊಬ್ಬರೂ ಈ ರೀತಿಯ ಉತ್ಸಾಹದಲ್ಲಿ ಪಾಲ್ಗೊಂಡಿದ್ದು ಈ ಕೋವಿಡ್ ಮಹಾಮಾರಿ ತೊಲಗಿದ ಮೇಲೆ ಈ ಪಂಚಮುಖಿ ಸದಸ್ಯರು ಒಟ್ಟುಗೂಡಿ ನೆಡೆಸುವ ಮಹೋತ್ಸವಗಳನ್ನು ನೋಡುವ ಆಸೆ ಹೆಚ್ಚಾಗುತ್ತಿದೆ.. 

ಗಣಪತಿ: ಖಂಡಿತ ಆಗುತ್ತದೆ.. ಹೀಗೆ ಅನೇಕಾನೇಕ ಲೇಖನಗಳಲ್ಲಿ ಬರುತ್ತಲೇ ಇರುತ್ತೇನೆ.. !

ತಿಲಕ್ : ಜೈ ಜೈ ಗಣಪತಿ.. ಗಣಪತಿ ಮಹಾರಾಜ್ ಕಿ ಜೈ.. ಗಣಪತಿ ಕಿ ಜೈ.. !

****
ನಿಜ..ಒಂದಾಗಿ ಬಾಳಿದಾಗ ನಾವಿರುವುದೇ ಸಗ್ಗದಲ್ಲಿ.. ನಾವಿರುವ ತಾಣವೇ ಸಗ್ಗವು ಎನ್ನುವ ಭಾವ ಮನೆಮಾಡುತ್ತಲೇ ಇರುತ್ತದೆ.. 

ಗಣಪತಿ ಮತ್ತೊಮ್ಮೆ.. !!!








Sunday, August 15, 2021

ಪ್ಯಾರಡೈಸ್ ನಲ್ಲಿ ಸ್ವಾತಂತ್ರ್ಯ

 ಕಾಲಚಕ್ರ ಉರುಳಿದ ಹಾಗೆ ಬದಲಾವಣೆ ಅರಿವಿಲ್ಲದೆ ನಮ್ಮೊಳಗೇ ಇಳಿಯುತ್ತದೆ.. 

ಕಳೆದ ವರ್ಷ ಈ ಸ್ವರ್ಗಕ್ಕೆ ಆಗ ತಾನೇ ಕಾಲಿಟ್ಟಿದ್ದೆ.. ಗೃಹಪ್ರವೇಶವಾದ ಸಂಭ್ರಮ ಇನ್ನೂ ಮನದಲ್ಲಿ ಸ್ಟ್ರಾಂಗ್ ಕಾಫೀ ನಾಲಿಗೆಯ ಮೇಲೆ ರುಚಿಯಿದ್ದಂತೆ ಸ್ಟ್ರಾಂಗ್ ಆಗಿತ್ತು.. 

ಕೆಲವರ ಪರಿಚಯ ಮಾತ್ರವಿತ್ತು.. ಹಾಗಾಗಿ ಸುಮ್ಮನೆ ನನ್ನ ಮೂರನೇ ಕಣ್ಣು ಹಿಡಿದು ಮನಸ್ಸಿಗೆ ಇಷ್ಟ ಬಂದಂತ ಚೌಕಟ್ಟುಗಳನ್ನು ಜೋಡಿಸುತ್ತಿದ್ದೆ.. 

ಒಂದು ವರ್ಷ ಕಳೆಯಿತು.. ಗೃಹಪ್ರವೇಶ ಸಂಭ್ರಮಕ್ಕೆ ಒಂದು ವರ್ಷದ ಸಂತಸ.. ಆಗ ನನ್ನ ಮನೆ ಸವಿತಾರ್ಥಕತೆ ನನ್ನ ಜೊತೆ ಮಾತಾಡಿತು.. 

"ಶ್ರೀ ಈ ಪಂಚಮುಖಿ ಸ್ವರ್ಗಕ್ಕೆ ಬಂದು ಒಂದು ವರ್ಷವಾಯಿತು... ನಿನಗನ್ನಿಸಿದ ಎರಡು ಮಾತು ಹೇಳು.. "

"ಒಂದು ಪುಟ್ಟ ಕತೆ ಹೇಳುವೆ.. ಕೇಳು"

"ಹಾ"

******

ಅದೊಂದು ಸುಂದರವಾದ ಊರು.. ಅಲ್ಲಿ ಒಂದು ಅಚ್ಚುಕಟ್ಟಾದ ಪುಟ್ಟ ಪುಟ್ಟ ಮನೆಗಳು.. ಎಲ್ಲರಲ್ಲೂ ಒಗ್ಗಟ್ಟಿತ್ತು.. ಹರಿಯುವ ಝರಿ.. ಹಸಿರು ಹುಲ್ಲಿನ ಹಾಸು.. ಹೂವುಗಳು ಬಿಡುವ ಗಿಡಗಳು.. ಮರಗಳು.. ಚಿಲಿಪಿಲಿಗುಟ್ಟುವ ಪಾರಿವಾಳಗಳು, ಹಕ್ಕಿಗಳು.. ಒಂದು ಸುಂದರ ಕೊಳ.. ಸ್ವರ್ಗ ಎನ್ನುವ ಮಾತಿಗೆ ಅನ್ವರ್ಥವಾಗಿತ್ತು.. 

ಶ್ರೀನಿವಾಸನ ಕೃಪೆಯಿಂದ.. ಸೂರ್ಯನ ಕಿರಣಗಳು.. ಮಯೂರ ನರ್ತನ ಮಾಡುತ್ತಾ.. ಸಮೀರವಾಗಿ.. ರಾಗ ತಾಳ ಪಲ್ಲವಿಗಳ ಮಮತೆಯಲ್ಲಿ ಈ ಸ್ವರ್ಗದ ಪಂಚಮುಖಿ ವಂಶಿಗಳನ್ನು.. ಎಲ್ಲದಕ್ಕೂ ಸೈಯದ್ ಎನ್ನುವ ನಿಮ್ಮೆಲ್ಲರಲ್ಲಿ ನನ್ನ ರಾ"ಜೀವ" ಎನ್ನುತ್ತಾ  ಕೋಮಲ ಲತೆಗಳ ಜೊತೆಯಲ್ಲಿ ಐಸಿರಿ ಶ್ರೀಕಾರವಾಗಿತ್ತು..

ಇಂತಹ ಸ್ವರ್ಗಕ್ಕೆ ಜಗತ್ತನ್ನು ಕಾಡಿಸುತ್ತಿದ್ದ ಕಣ್ಣಿಗೆ ಕಾಣದ ಒಂದು ಪುಟ್ಟ ಜೀವಿ  ತೊಂದರೆ ಕೊಡಲು ಬಂದಾಗ.. ಆ ಜೀವಿಗೆ ಅಂತಿಮ ಹಾದಿ ತೋರಿಸುವ ಪದಕಿ ಜೋಡಿ ಬಂದು..ದೇವೆಂದ್ರ ಇಳೆಗೆ ವರ್ಷಧಾರೆ ಸುರಿಸಿ ಭುವಿಯನ್ನು ಕಾಪಾಡುವಂತೆ.. ಕಾಲ ಕಾಲಕ್ಕೆ ಸುರಕ್ಷತಾ ಕೋಟೆಯನ್ನು ಕಟ್ಟಿದರು.. 

ಇಂತಹ ಒಂದು ಸುಂದರ ನಾಕದಲ್ಲಿ ಇಂದು ಎಪ್ಪತ್ತೈದನೇ ವರ್ಷದ ಸಂತಸವನ್ನು ಬಿತ್ತರಿಸಿಕೊಂಡಿದ್ದು ಹೀಗೆ.. 

ಹೆಣ್ಣು ಮಕ್ಕಳು ಆರಂಭ ಕೊಟ್ಟರೆ ಸಾಕು ಎಲ್ಲಾ ಕಾರ್ಯಕ್ರಮಗಳು ಸುಗಮವೇ.. ರಂಗೋಲಿ ನೆಲವನ್ನು ಅಲಂಕರಿಸಿತ್ತು.. ನಮ್ಮ ದೇಶದ ಹೆಮ್ಮೆ ಹೂಗಳ ಪಕಳೆಗಳನ್ನು ಉಡಿಯಲ್ಲಿ ಇಟ್ಟುಕೊಂಡು ಹರಸಲು ಸಿದ್ಧವಾಗಿತ್ತು... ಅಧ್ಯಕ್ಷರಾದ ಶ್ರೀನಿವಾಸ್ ಧ್ವಜರೋಹಣ ಮಾಡಿದ ತಕ್ಷಣ.. ಹೂವಿನ ಮಂದಹಾಸ ಎಲ್ಲೆಡೆಯೂ ಪಸರಿಸಿತು.. 

ಸಮೀರ್ ಅವರಿಂದ ಶುರುವಾದ ರಾಷ್ಟ್ರಗೀತೆ ಎಲ್ಲರ ಕಂಠದಲ್ಲಿ ಇನ್ನಷ್ಟು ಜೋರಾಗಿ, ರಾಷ್ಟ್ರ ಭಕ್ತಿದ್ಯೋತಕವಾಗಿ ಮೊಳಗಿತು.. ವಂದೇಮಾತರಂ, ಜೈ ಹಿಂದ್, ಭಾರತ್ ಮಾತಾ ಕಿ ಜೈ.. ಈ ನುಡಿಗಳು, ಘೋಷಗಳು ಎಲ್ಲೆಡೆಯೂ ಪ್ರತಿಧ್ವನಿಸಿತು.. 

ಸಮೀರ್ ಅವರ ಚುಟುಕಾದ ದೇಶಭಕ್ತಿ ಗೀತೆ  ಸೊಗಸಾಗಿತ್ತು.. ಪುಟಾಣಿಗಳು ಕರತಾಡನ ಮಾಡಿದವು.. ಹಿರಿಯರು ನಲಿದರು.. ಹೆಂಗಳೆಯರು ಈ ಸಂಭ್ರಮದಲ್ಲಿ ಭಾಗಿಯಾಗಿ ತಮ್ಮ ನೆರೆಹೊರೆಯವರ ಜೊತೆಯಲ್ಲಿ ಸಂತಸ ಹಂಚಿಕೊಂಡರು.. 

ವೈದ್ಯರಾದ ದೇವೇಂದ್ರ ನಾಯಕ್ ಅವರ ಪುಟ್ಟ ಸ್ವಗತ ಮಾತುಗಳು.. ಶ್ರೀಮತಿ  ಪದಕಿ ಅವರ ಹಿತನುಡಿಗಳು.. ಈ ಕಾಣದ ಪುಟ್ಟ ಜೀವಿಗಳಿಂದ ಸುರಕ್ಷಿತವಾಗಿ ಇರಬೇಕು ಎನ್ನುವ ಸುರಕ್ಷತಾ ಮಾತುಗಳು ಇಷ್ಟವಾದವು.. 

ಅನೀರೀಕ್ಷಿತ ಎನ್ನುವಂತೆ ಹೌದು ಮೇಡಂ ನೀವೇ ನೀವೇ ಎನ್ನುತ್ತಾ ಸ್ವಾಗತಿಸಿಕೊಂಡು ವೈದ್ಯಕೀಯ ವೃತ್ತಿಯಲ್ಲಿರುವ ಸೀಮಾ ಅವರ ಕೃತಜ್ಞತಾ ಪೂರ್ವಕ ಮಾತುಗಳು ಈ ಕಾರ್ಯಕ್ರಮಕ್ಕೆ ನಾಂದಿ ಹಾಡಿದವು.. 

ಈ ಸ್ವರ್ಗದ ಅದ್ಭುತ ಗೆಳತಿಯರು ಪಲ್ಲವಿ ಮತ್ತು ಮಮತಾ ಅಲ್ಲಿ ನೆರೆದಿದ್ದವರಿಗೆಲ್ಲಾ ಸಿಹಿ ತಿನಿಸಾದ ಬೇಸನ್ ಲಾಡು ಹಂಚಿ ಸಂತಸ ಪಟ್ಟರು.. 

ಇದೊಂದು ಚುಟುಕು ಕಾರ್ಯಕ್ರಮವಾದರೂ..  ಪ್ರಮಾಣ ಕಡಿಮೆಯಿದ್ದರೂ ಈ ಕೊರೊನ ಮಹಾಮಾರಿಯಿಂದ ರಕ್ಷಿಸುವ  ಲಸಿಕೆಯಂತೆ.. ಪುಟ್ಟದಾದರೂ ಈ ಸ್ವರ್ಗದ ಜನತೆಯನ್ನು ಒಟ್ಟಾಗಿ ಸೇರಿಸುವ ಕಾರ್ಯಕ್ರಮವಾಗಿತ್ತು.. 

ಸ್ವಾತಂತ್ರ ಈ ಪದದ ಅರ್ಥ ಹಸಿದವರಿಗೆ ಊಟದ ಮಹತ್ವ ಗೊತ್ತಿರುವ ಹಾಗೆ.. ಅದನ್ನು ಕಳೆದುಕೊಂಡವರಿಗೆ ಮಾತ್ರ ಅರ್ಥವಾಗುತ್ತೆ ಎನ್ನುವಂತಹ ಮಾತುಗಳಿಂದ ಅಧ್ಯಕ್ಷ ಭಾಷಣದಲ್ಲಿ ಹೇಳಿದ ಶ್ರೀನಿವಾಸ್ ಅವರ ಮಾತುಗಳನ್ನು ಇನ್ನೊಮ್ಮೆ ಮೆಲುಕು ಹಾಕಬೇಕಾಗುತ್ತದೆ.. 

ಭಾರತ ಸಂಪದ್ಭರಿತ ನಾಡು.. ಇಲ್ಲಿಯ ವೈವಿಧ್ಯತೆಯೇ ವಿಶೇಷತೆ.. ಕನಕದಾಸರು ಹೇಳಿದ ಹಾಗೆ "ನಾ" ಹೋದರೆ ಹೋದೆನು .. ಇದ್ದರೇ ಇದ್ದೇನು.. ಅರ್ಥಾತ್ ನಾನು ಎನ್ನುವ ಪದವೇ ಈ ಸ್ವರ್ಗದಲ್ಲಿ ಕಾಣ ಬರುತ್ತಿಲ್ಲ ಬದಲಾಗಿ ನಾವು ನಾವು ನಾವು ಎನ್ನುವ ಪದವೇ ಪ್ರತಿಧ್ವನಿಸುತ್ತದೆ ಪ್ರತಿ ಮಾತಿನಲ್ಲಿ.. ಪ್ರತಿ ಕಾರ್ಯದಲ್ಲಿ.. 

ಜೈ ಭಾರತಾಂಭೆ ಎನ್ನುತ್ತಾ ಸ್ವತಂತ್ರ ದಿನಾಚರಣೆಗೆ ಒಂದು ಪುಟ್ಟ ಘಟನೆ ಹೇಳಿದೆ

*****

ಸವಿತಾರ್ಥಕತೆ:ನಿಜಕ್ಕೂ ಇದೊಂದು ಅದ್ಭುತ ತಾಣ.. ಈ ತಾಣ ಸದಾ ಹಸಿರಾಗಿರಲಿ.. ಹೆಸರಾಗಿರಲಿ.. ಎಲ್ಲರಿಗೂ ಮತ್ತೊಮ್ಮೆ ನನ್ನ ಕಡೆಯಿಂದ ಶುಭಾಶಯಗಳು ಶ್ರೀ.. 

ಶ್ರೀ: ಖಂಡಿತ ನಿನ್ನ ಶುಭಾಶಯಗಳನ್ನು ಎಲ್ಲರಿಗೂ ತಿಳಿಸುತ್ತೇನೆ ಮತ್ತು ಈ ಸುಂದರ ಕ್ಷಣಗಳು ಸೆರೆಯಾದದ್ದು ಹೀಗೆ..