Tuesday, January 5, 2016

ಹರಿಣಿ ಅಮ್ಮ ಎನ್ನುವ ಅಕ್ಷರಶಃ ಜಿಂಕೆಯಂಥಹ ಉತ್ಸಾಹದ ಚಿಲುಮೆ

ವಸಿಷ್ಠ ವಿಶ್ವಾಮಿತ್ರ ಯಥಾ ಪ್ರಕಾರ ವಾದ ವಾಗ್ವಾದದಲ್ಲಿ ತೊಡಗಿದ್ದರು.. ಇಬ್ಬರೂ ಸಾಧಕರೆ. ಒಬ್ಬ ಶಾಂತ ಸ್ವಭಾವ, ಇನ್ನೊಬ್ಬರದು ಹಠ ಸ್ವಭಾವ. ತಮ್ಮ ತಪಶಕ್ತಿಯಿಂದ ಬ್ರಹ್ಮರ್ಷಿಗಳಾದವರು.

ವಿಶ್ವಾಮಿತ್ರರದು ಒಂದೇ ವಾದ "ಭೂಲೋಕದಲ್ಲಿ ಯಾಕೆ ಹೀಗೆ.  ಯಾಕೆ ಒಬ್ಬರನ್ನು ಒಬ್ಬರು ಇಷ್ಟು ಹಚ್ಚಿಕೊಳ್ಳುತ್ತಾರೆ. ನಮ್ಮ ತರಹ ಕಾರ್ಯೇಷು ತಸ್ಮೈ ನಮಃ ಎಂದು ಯಾಕೆ ಇರೋಲ್ಲ. ಒಬ್ಬರನ್ನು ಒಬ್ಬರು ಇಷ್ಟಪಡುತ್ತಾರೆ, ಗೌರವಿಸುತ್ತಾರೆ, ಮಾತಾಡದೆ ಇರಲಾರೆ, ನೋಡದೆ ಬದುಕಲಾರೆ ಎನ್ನುವಷ್ಟು ಪ್ರೀತಿ ವಿಶ್ವಾಸ ತೋಡಿಕೊಳ್ಳುತ್ತಾರೆ., ಒಮ್ಮೆಲೆ ಮರೆಯಾದ ಮೇಲೆ ಬಳಲುತ್ತಾರೆ, ತೊಳಲಾಡುತ್ತಾರೆ, ಒದ್ದಾಡುತ್ತಾರೆ, ಮರುಗುತ್ತಾರೆ, ಜೀವನದ ಅಂತ್ಯಕ್ಕೆ ಬಂದು ಬಿಟ್ಟಿದ್ದೇವೆ ಎನ್ನುತ್ತಾರೆ, ಯಾಕೆ ಹೀಗೆ"

ವಸಿಷ್ಠ ಮಹರ್ಷಿ "ವಿಶ್ವಾಮಿತ್ರರೆ.. ನಿಮ್ಮ ಸಂದೇಹಕ್ಕೆ ನಾ ಉತ್ತರ ಕೊಡುವೆ.. ಆದರೆ ಅದಕ್ಕೆ ಮುಂಚೆ ನೀವು ಈ ಕಥೆಯನ್ನೊಮ್ಮೆ ಕೇಳಿ, ನಂತರ ನಾ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ, ಆಮೇಲೆ ನಿಮಗೆ ಬೇಕಾದ ವಿವರ ಕೊಡುವೆ"

"ಆಗಲಿ, ಹಾಗೆ ಆಗಲಿ" ತಮ್ಮ ಕಮಂಡಲ, ಬ್ರಹ್ಮ  ದಂಡವನ್ನು ಪಕ್ಕಕ್ಕೆ ಇತ್ತು, ವಸಿಷ್ಠರ ಮುಖವನ್ನೇ ನೋಡುತ್ತಾ ಕಥೆಗಾಗಿ ತೀವ್ರತೆಯಿಂದ ಮಾತುಗಳನ್ನು ಕೇಳಲು ಅಣಿಯಾಗುತ್ತಾರೆ. 

"ಒಂದೂರಿನಲ್ಲಿ ಒಬ್ಬ ರಾಜ ಇದ್ದ.. ಅವನಿಗೆ ತನ್ನ ಪ್ರಜೆಗಳ ಮೇಲೆ ಅಪಾರ ಮೋಹ, ಬೇರೆ ಊರಿನಿಂದ ಯಾವುದೇ ಪ್ರಜೆ ತನ್ನ ಊರಿಗೆ ಬಂದರೂ.. ರಾಜ ಸಹಿಸುತ್ತಿರಲಿಲ್ಲ, ಆದರೆ ಶಿಕ್ಷಿಸುತ್ತಿರಲಿಲ್ಲ, ಬದಲಿಗೆ ತನ್ನ ಊರಿನ ರೀತಿ ರಿವಾಜು, ಉಡುಗೆ ತೊಡುಗೆ ಆಹಾರ ವಿಚಾರಗಳನ್ನು ವಿವರವಾಗಿ ತಾನೇ ಖುದ್ದಾಗಿ ತಿಳಿಸಿ ಅವರನ್ನು ತನ್ನ ಊರಿನ ನೀತಿ ನಿಯಮಗಳಿಗೆ ಬದಲಾಯಿಸಿಕೊಳ್ಳಲು ಸಹಾಯ ಮಾಡುತ್ತಿದ್ದ, ಹೀಗೆ ಬೇರೆ ಊರಿನಿಂದ ಯಾರೇ ಬಂದರೂ ಕೆಲವೇ ವಾರಗಳಲ್ಲಿ ಅವರು ಈ ಊರಿನಲ್ಲಿಯೇ ಹುಟ್ಟಿದ್ದಾರೆನೋ ಅನ್ನುವಷ್ಟು ಬದಲಾಗಿಬಿಡುತ್ತಿದ್ದರು. 

"ಅಲ್ಲಿನ ಪ್ರಜೆಗಳು ಅಷ್ಟೇ, ಆ ರಾಜನನ್ನು ತಮ್ಮ ಮನೆಯ ಹಿರಿಯ ಎಂಬ ಭಾವನೆಯಲ್ಲಿಯೇ ಆದರಿಸುತ್ತಿದ್ದರು.  ಆ ಊರಿನಲ್ಲಿ ಭಯ ಎಂಬ ಪದಕ್ಕೆ ಅರ್ಥವೇ ಇರಲಿಲ್ಲ, ಬದಲಿಗೆ ಪ್ರೀತಿ,  ಮಮತೆ,  ವಿಶ್ವಾಸ, ಕರುಣೆ ತುಂಬಿತುಳುಕಾಡುತ್ತಿತ್ತು. ಕಾರಣ ರಾಜನೇ ಅದಕ್ಕೆ ಆ ಎಲ್ಲಾ ಗುಣಗಳಿಗೆ ಯಜಮಾನನಾಗಿದ್ದ.  ಯಥಾ ರಾಜ ತಥಾ ಪ್ರಜಾ ಎನ್ನುವಂತೆ ಆ ಓರೆ ಒಂದು ಕರುಣೆಯ ಬೀಡಾಗಿತ್ತು"

"ಹೀಗಿರುವಾಗ ಒಮ್ಮೆ ರಾಜನ ಆಸ್ಥಾನಕ್ಕೆ ದೂರದ ದೇಶದಿಂದ ವಿದ್ವಾಂಸ ಬಂದು, ರಾಜನನ್ನು ಮತ್ತು ಅಲ್ಲಿನ ಸಭಿಕರನ್ನು ಪರೀಕ್ಷಿಸಲು ಅನುವಾದ. ಆಗ ರಾಜನು ಎದ್ದು ನಿಂತು, ಪಂಡಿತರೆ, ನೀವು ಎಲ್ಲರನ್ನು ಪರೀಕ್ಷಿಸುವ ಬದಲು, ಒಂದು ತಪ್ಪಲೆಯಲ್ಲಿ ಅನ್ನದ ಅಗುಳು ಬೆಂದಿದೆಯೇ ಎಂದು ನೋಡಲು, ಒಂದು ಅಗುಳನ್ನು ಪರೀಕ್ಷಿಸುವಂತೆ, ಒಬ್ಬರನ್ನು  ಪರೀಕ್ಷಿಸಿ ಸಾಕು, ನಂತರವೂ ನಿಮಗೆ ಇತರರನ್ನು ಪರೀಕ್ಷಿಸಬೇಕು ಎನ್ನಿಸಿದರೆ ನನಗೆ ಅಡ್ಡಿಯಿಲ್ಲ"

"ನನಗೆ ನಿಮ್ಮ ಸವಾಲು ಒಪ್ಪಿಗೆ ಇದೆ ಮಹಾ ಪ್ರಭು, ಆ ಆಯ್ಕೆಯನ್ನು ನಿಮಗೆ ಬಿಟ್ಟಿದ್ದೇನೆ, ನೀವೇ ಆರಿಸಿ"

ರಾಜ, ತನ್ನ ಹಿರಿದಾದ ಕಣ್ಣುಗಳನ್ನು ಒಮ್ಮೆಲೇ ಎಲ್ಲಾ ಕಡೆ ಬೀರಿದ.. ನಿಧಾನಕ್ಕೆ ನೆಡೆದು ಬಂದು.. ಒಂದು ದೊಡ್ಡ ನಿಲುವುಗನ್ನಡಿಯ ಮುಂದೆ ನಿಂತು, ಪಂಡಿತರೆ, ಈ ಪ್ರತಿಬಿಂಬವೇ ನೀವು ಪರೀಕ್ಷಿಸಬೇಕಾದ ಅನ್ನದ ಅಗುಳು, ಬನ್ನಿ ದಯಮಾಡಿ ಬನ್ನಿ"

ಪಂಡಿತನಿಗೆ ಆಶ್ಚರ್ಯವಾದರೂ, ಅದನ್ನು ತೋರಗೊಡದೆ, ಹಲವಾರು ಪ್ರಶ್ನೆಗಳನ್ನು ಹಾಕಿದ!

"ವಿಶ್ವಾಮಿತ್ರರೆ, ಆ ಪ್ರಶ್ನೆಗಳು ಉತ್ತರಗಳು ಇಲ್ಲಿ ಅನವಶ್ಯಕ ಅನ್ನಿಸಿದ್ದರಿಂದ ಅದನ್ನು ಕಥೆಯಲ್ಲಿ ಹೇಳುತ್ತಿಲ್ಲ.. ಮುಂದುವರೆಸಲೇ"

"ಓಹೋ ಆಗಬಹುದು ಆಗಬಹುದು... ಮುಂದುವರೆಸಿರಿ ವಸಿಷ್ಠರೆ"

ಸರಿ.. ಸುಮಾರು ಘಂಟೆಗಳ ಕಾಲ ಪ್ರಶ್ನೋತ್ತರ ನಡೆದಮೇಲೆ, ಪಂಡಿತ ಮಂಡಿಯೂರಿ ರಾಜನ ಪ್ರತಿಬಿಂಬಕ್ಕೆ ನಮಸ್ಕರಿಸಿ, ರಾಜನ್, ನನ್ನದು ಮಹಾಪರಾಧವಾಯಿತು, ನಿಮ್ಮ ಪ್ರತಿಬಿಂಬವೇ ಇಷ್ಟು ಪ್ರಚಂಡ ಅಂದ ಮೇಲೆ, ನೀವು, ನಿಮ್ಮ ಸಭಿಕರು, ರಾಜ್ಯದ ಪ್ರಜೆಗಳು ಆಹಾ... ನಾ ಹೋಗಿಬರುವೆ.. ಎಂದು ಅಪ್ಪಣೆಗೂ ಕಾಯದೆ ಹೊರತು ಹೋಗುತ್ತಾನೆ. 

"ವಿಶ್ವಾಮಿತ್ರರೆ ನಾ ಕಥೆಯನ್ನು ಇಲ್ಲಿಗೆ ನಿಲ್ಲಿಸುತ್ತೇನೆ.. ಈಗ ನನಗೆ ಉತ್ತರ ಕೊಡಿ.. "

ಇನ್ನೂ ವಸಿಷ್ಠರು ಪ್ರಶ್ನೆಗಳನ್ನು ಕೇಳಿರಲೇ ಇಲ್ಲ.. ಸಾಮಾನ್ಯವಾಗಿ ಹಠಾತ್ ಸೋಲು ಒಪ್ಪಿಕೊಳ್ಳದ ವಿಶ್ವಾಮಿತ್ರರು "ವಸಿಷ್ಠರೆ.. ನಿಮ್ಮ ಕಥೆ ನನಗೆ ಅರ್ಥವಾಯಿತು... ಹಾಗೆಯೇ ನಾ ಕೇಳಿದ ಪ್ರಶ್ನೆಗೆ ಉತ್ತರವೂ ತಿಳಿಯಿತು.. ಅಲ್ಲಿ ನೋಡಿ.. ಒಂದು ಬಟ್ಟೆಯ ಚೀಲ ಹಿಡಿದು ಕೈಯಲ್ಲಿ ಒಂದು ಟ್ಯಾಬ್ ಹಿಡಿದು ನಿಧಾನವಾಗಿ ನಡೆದುಬರುತ್ತಿರುವ ಹರಿಣಿ ಅಮ್ಮನನ್ನು ನೋಡಿ.. ಅವರು ಇಲ್ಲಿಗೆ ಬರುತ್ತಿದ್ದರೆ ಎಂದ ಮೇಲೆ, ಅನುಮಾನಕ್ಕೆ ಎಡೆಯೇ ಇಲ್ಲಾ.. "

ಎಲ್ಲಾ ಗೊತ್ತಿದ್ದರೂ ವಸಿಷ್ಠರು ಏನೂ ಅರಿಯದಂತೆ "ವಿಶ್ವಾಮಿತ್ರರೆ.. ಸ್ವಲ್ಪ ಬಿಡಿಸಿ ಹೇಳಬಾರದೆ"

ನಸುನಗುತ್ತಾ ವಿಶ್ವಾಮಿತ್ರರು "ಬ್ರಹ್ಮರ್ಷಿಗಳೇ.. ಹರಿಣಿ ಅಮ್ಮನೆ ಆ ಊರಿನ ರಾಜ, ಆ ಊರು ಕರುನಾಡು, ಬೇರೆ ಊರಿನಿಂದ ಬಂದ ಪಂಡಿತನೆ  ಆಂಗ್ಲ ಭಾಷೆ. ಹರಿಣಿ ಅಮ್ಮನ ಪ್ರತಿಬಿಂಬ ಪದಾರ್ಥ ಚಿಂತಾಮಣಿಯ ಸದಸ್ಯರು, ಪದ ಕಮ್ಮಟ ಎಂಬ ಅದ್ಭುತ ಕಾರ್ಯಕ್ರಮಕ್ಕೆ ಹರಿಣಿ ಅಮ್ಮನ ಕೊಡುಗೆ ಅಪಾರ, ಆ ಇಳಿ ವಯಸ್ಸಿನಲ್ಲಿ ತಾರುಣ್ಯವೇ ನಾಚುವಂಥಹ ಚಟುವಟಿಕೆ, ಅವರ ಬಳಿ ಉತ್ತರ ಸಿಗದ ಪ್ರಶ್ನೆಗಳೇ ಇಲ್ಲಾ.. ಹಾಗೆ ಭುವಿಯಲ್ಲಿ ಯಾಕೆ ಅಷ್ಟು ಪ್ರೀತಿ ವಿಶ್ವಾಸ ಇದೆ ಎಂದು ನನ್ನ ಪ್ರಶ್ನೆಗೆ ಉತ್ತರ, ಹರಿಣಿ ಅಮ್ಮನವರ ಮುಖ ಪುಸ್ತಕದ ಖಾತೆಯ ಸಮಯದ ಗೆರೆಯಲ್ಲಿ ಅವರನ್ನು ಅಪಾರವಾಗಿ ಪ್ರೀತಿಸುವ, ಅಮ್ಮ ಅಕ್ಕ, ಅಜ್ಜಿ, ಮೇಡಂ, ಮಾ ಎಂದೇ ಖ್ಯಾತರಾಗಿರುವ ಅವರ ಅಗಲುವಿಕೆಯ ಶೋಕವನ್ನು ತಡೆಯಲಾರದೆ ಹರಿದು ಬರುತ್ತಿರುವ ಸಂದೇಶಗಳ ಮಹಾಪೂರವೇ ಇದಕ್ಕೆ ಸಾಕ್ಷಿ.. ನನಗೆ ಇನ್ನೇನು ಅನುಮಾನವಿಲ್ಲ"

ವಸಿಷ್ಠರು "ಹರಿಣಿ ಅಮ್ಮ ನೀವು  ಇಲ್ಲಿಗೆ ಬಂದದ್ದು ನಮಗೆ ಸಂತಸವಾದರೂ, ನೀವು ಭುವಿಯಲ್ಲಿ ನಿಮ್ಮ ಅಪಾರ ಅಭಿಮಾನಿಗಳ ಬಳಗವನ್ನು, ನಿಮ್ಮ ಬಂಧು ವರ್ಗದವರನ್ನು ಬಿಟ್ಟು ಬಂದದ್ದು ನಮಗೆ ಬೇಸರ ತಂದಿದೆ, ಆದರೆ ಏನು ಮಾಡುವುದು, ಈ ನಾಕದಲ್ಲಿ ಕನ್ನಡ ಬಳಸುವುದು ಹೇಗೆ, ಪ್ರವಾಸ ಮಾಡುವುದು ಹೇಗೆ, ಅದನ್ನು ಎಲ್ಲರಿಗೂ ತಿಳಿಸುವುದು ಹೇಗೆ ಈ ವಿಚಾರಗಳನ್ನು ಹೇಳಿಕೊಡಲಿಕ್ಕೆ ನಮಗೆ ನೀವು ಬೇಕಿತ್ತು, ಹಾಗಾಗಿ ನಿಮ್ಮನ್ನು ಹಠಾತ್ ಕರೆಸಿಕೊಳ್ಳಬೇಕಾಯಿತು..ಅಲ್ಲಿ  ನೋಡಿ ನಿಮ್ಮ ಯಜಮಾನರು ಮತ್ತೊಮ್ಮೆ ಬಾಗ್ದಾದ್ ಕಥೆಯನ್ನು ನಿಮ್ಮ ಬಾಯಿಂದ ಕೇಳಲು ಇತ್ತಲೇ ಬರುತ್ತಿದ್ದಾರೆ"


ನಿಧಾನವಾಗಿ ವಸಿಷ್ಠರು, ವಿಶ್ವಾಮಿತ್ರರು, ಹಾಗೂ ಹರಿಣಿ ಅಮ್ಮ ನಡೆಯುತ್ತಾ ಸಾಗಿದರು, ಅವರು ನಡೆಯುತ್ತಾ ನಡೆಯುತ್ತಾ ಹೋದಂತೆ ಚಿಕ್ಕ ಚಿಕ್ಕದಾಗಿ ಕಡೆಯಲ್ಲಿ ತಾರೆಗಳಾಗಿ ಹೊಳೆಯಲು ಶುರುಮಾಡಿದರು. 


*****************

ಬೆಳಿಗ್ಗೆ ಎದ್ದ ಕೂಡಲೇ, ವಾತ್ಸಾಪ್ ಸಂದೇಶ ನೋಡಿದಾಗ ಗಾಬರಿ ಆಯಿತು, ಫೇಸ್ಬುಕ್ ಖಾತೆಯನ್ನು ಜಾಲಾಡಿದೆ, ಅಜಾದ್ ಅವರ ಪೋಸ್ಟ್ ನೋಡಿದೆ, ಎದೆ ಹೊಡೆದುಕೊಳ್ಳಲು ಶುರುಮಾಡಿತು. ಅಯ್ಯೋ ದೇವರೇ ನೀ ಯಾಕೆ ಇಷ್ಟು ಕ್ರೂರಿ ಆದೆ ಎಂದು. ಕೆಲಸಕ್ಕೆ ಹೋಗಲು ಮನಸ್ಸಿಲ್ಲ, ಆದರೆ ಹರಿಣಿ ಅಮ್ಮ ಯಾವಾಗಲೂ ತಮ್ಮ ಕೆಲಸದಲ್ಲಿ ಕ್ರೀಯಾಶೀಲರಾಗಿದ್ದು ನೆನಪಾಗಿ, ಆಅ ನೆನಪು ನನ್ನನ್ನೇ ಅಣುಕಿಸಿತು. ಕೆಲಸದ ಒತ್ತಡ, ಒಲ್ಲದ ಮನಸ್ಸಿಂದ ಕಚೇರಿಗೆ ಹೋದೆ. 

ಕಣ್ಣು ಕೆಂಪಾಗಿಯೇ ಇತ್ತು, ಸಾಮಾನ್ಯ ಎಂದೂ ಅಳದ ನಾನು, ಒಳಗೊಳಗೇ ಅತ್ತು ಅತ್ತು, ಕಣ್ಣೀರು ಆವಿಯಾಗಿ ಕಣ್ಣಿಂದ ಹೊರಗೆ ಬರುತ್ತಿತ್ತು  ಅನ್ನಿಸುತ್ತದೆ. ಭಾರವಾದ ಮನಸ್ಸಿಂದ ಕೆಲಸ ಶುರುಮಾಡಿದೆ, ಯಾಕೋ ತಡೆಯಲಾಗಲಿಲ್ಲ, ಕಚೇರಿಯಲ್ಲಿ ನಾನು ಮಗೂ ಎಂದೇ ಕರೆಯುವ ಶೈಲಜಾ ಸುಬ್ರಮಣಿಯನ್ನು ಕರೆದೆ, ಮಗೂ ನಿನ್ನ ಮಾತುಗಳು ನಿನ್ನ ಒಂದು ಅಪ್ಪುಗೆ ಬೇಕು ಕಣೋ ಅಂದೇ.. ಶ್ರೀ ನಾನಿದ್ದೇನೆ ನಿಮ್ಮ ಜೊತೆ, ಬೇಜಾರಾಗಬೇಡಿ ಎಂದು ಒಂದಷ್ಟು ಹೊತ್ತು ಮಾತಾಡಿದಳು ಮತ್ತು ಸಮಾಧಾನ ಮಾಡಿದಳು. ಮನಸ್ಸು ಎಷ್ಟೋ ಹಗುರವಾಯಿತು. 

ಸ್ವಲ್ಪ ಹೊತ್ತಿನ ನಂತರ ಪ್ರಕಾಶಣ್ಣ (ಪ್ರಕಾಶ್ ಹೆಗ್ಡೆ) ಕರೆ ಮಾಡಿದರು, ತಮ್ಮಯ್ಯ, ನೀನು ಅಂದು ಅವರ ಮನೆಗೆ ಹೋದೆ, ನಾ ಕೂಡ ಬಂದೆ, ಅಂದಿನಿಂದ ಹರಿಣಿ ಅಮ್ಮ ನಮ್ಮ ಕುಟುಂಬಕ್ಕೆ ಇನ್ನಷ್ಟು ಹತ್ತಿರವಾದರು. ಇಂಥಹ ಅಗಲಿಕೆ ನಿಜವಾಗಿಯೂ ಆಘಾತವೇ ಸರಿ, ನನಗೆ ಇನ್ನು ನಡುಕ ನಿಂತಿಲ್ಲ ಎಂದರು. ಅವರ ಹತ್ತಿರ ಇನ್ನಷ್ಟು ಹೊತ್ತು ಮಾತಾಡಿದೆ, ಸ್ವಲ್ಪ ಸಮಾಧಾನವಾಯಿತು. ಪ್ರಕಾಶಣ್ಣ ಮತ್ತು ಆಶಾ ಅತ್ತಿಗೆ ಪರಿವಾರ ಈ ಸುದ್ದಿ ಸುಳ್ಳು ಆಗಿರಲಿ ಎಂದು ದೇವರಲ್ಲಿ ಬೇಡಿಕೊಳ್ಳುವಂತಾಗಿತ್ತು. 

ನನ್ನ ಬೆಸ್ಟ್ ಗೆಳತಿ ನಿವಿ (ನಿವೇದಿತ ಚಿರಂತನ್), ಅದ್ಭುತ ಮಾತುಗಳನ್ನು ಹೇಳಿದರು, ಸುಮಾರು ಹೊತ್ತು ಚಾಟ್ ಮಾಡಿದೆವು, ನನ್ನ ನೋವು, ನಲಿವುಗಳನ್ನು ಕರಾರುವಾಕ್ ಆಗಿ ಪತ್ತೆ ಹಚ್ಚುವ ನಿವಿ, ನನ್ನ ನೋವುಗಳಿಗೆ, ಮನಸ್ಸಿನ   ಭಾವಗಳಿಗೆ  ಉತ್ತರ ಮತ್ತು  ಸಾಂತ್ವನ ಹೇಳಿದರು. ಅವರ ಮಾತುಗಳು ನಾ ಮರಳಿ ಬರಲು ಸಹಾಯ ಮಾಡಿದವು. 

ಗುರು ಸಮಾನರಾದ ಗೆಳೆಯ ಅಜಾದ್ ಸರ್ ಹೇಳಿದ್ದು ಬತ್ತಿದ ಕಣ್ಣೀರು ಮತ್ತೆ ಹೊರ ಚಿಮ್ಮಿತು.. ಕೆಲವಷ್ಟು ದಿನ ಫೇಸ್ ಬುಕ್ ಖಾತೆಯಿಂದ ಹೊರಬಿದ್ದಿದ್ದೆ. ಹರಿಣಿ ಅಮ್ಮ ಸುಮಾರು ಮಂದಿಯ ಹತ್ತಿರ ಕೇಳಿದ್ದರಂತೆ ಶ್ರೀಕಾಂತ್ ನನ್ನನ್ನು ಬ್ಲಾಕ್ ಮಾಡಿದ್ದರೆ ಯಾಕೆ ಏನಾಯಿತು ಅಂತ. ಅವರು ತಮ್ಮ ಮಿತ್ರರನ್ನು ನೋಡಿಕೊಳ್ಳುತ್ತಿದ್ದ ಬಗೆ ಹಾಗಿತ್ತು. ಯಾರಿಗಾದರೂ ನೋವಾಯಿತೇ, ಆರೋಗ್ಯವಾಗಿದ್ದಾರ, ಹೇಗಿದ್ದಾರೆ ಹೀಗೆ ಎಲ್ಲರ ಬಗೆಯೂ ಕಳಕಳಿಯಿದ್ದ ಅವರನ್ನು ದೇವರು ಕೂಡ ಬಿಟ್ಟಿರಲಾರದೇ ಕರೆಸಿಕೊಂಡನೇನೋ ಎನ್ನಿಸಿತು. ಅಜಾದ್ ಸರ್ ಅಕ್ಕ ಎಂದೇ ಕರೆಯುತ್ತಿದ್ದ ಹರಿಣಿ ಅಮ್ಮನನ್ನು ಕಳೆದುಕೊಂಡು ಎಷ್ಟು ವ್ಯಥೆ ಪಡುತ್ತಿದರು ಎಂದು ಅವರು ದೂರದ ಕುವೈತ್ ನಲ್ಲಿದ್ದರು ಅವರ ಬರಹಗಳಿಂದ ಅರ್ಥವಾಗುತ್ತಿತ್ತು. ಎಲ್ಲರ ಜೊತೆಯಲ್ಲಿ ನಗುನಗುತ್ತಾ ಮಾತಾಡುವ ಅಜಾದ್ ಸರ್ ಅವರ ಇನ್ನೊಂದು ಮುಖವನ್ನು ಇಂದು ನೋಡಿದೆ. 

ಕಡೆಯಲ್ಲಿ ನನ್ನ ಹಾಸನದಲ್ಲಿರುವ ಪ್ರಕಾಶ್ ಚಿಕ್ಕಪ್ಪ "ಶ್ರೀಕಾಂತ.. ನಿಜವಾಗಿಯೂ ಅವರು ಜೀವನವನ್ನು ಸಾಧಿಸಿ ಬದುಕಿದರು, ನೀವೆಲ್ಲ ಅವರ ಬಗ್ಗೆ ಇಷ್ಟು ಹಚ್ಚಿಕೊಂಡಿದ್ದೀರಾ ಮತ್ತು ಅವರು ನಿಮ್ಮೆನ್ನೆಲ್ಲ ಅಷ್ಟು ಪ್ರೀತಿ ವಿಶ್ವಾಸಗಳಿಂದ ನೋಡುತ್ತಿದ್ದರು ಎಂದರೆ ಅವರ ಬದುಕಿನ ಸಾಧನೆ ಮತ್ತು ಸಾರ್ಥಕತೆ ನೋಡು. ಅಂಥಹ ಅದ್ಭುತ ಜೀವಿಯ ಜೊತೆಯಲ್ಲಿ ನೀವೆಲ್ಲ ಇದ್ದೀರಿ ಎಂದರೆ, ಅದು ನಿಮ್ಮ ಪೂರ್ವ ಜನ್ಮದ ಪುಣ್ಯ ಎನ್ನದೆ ಬೇರೆ ನನಗೆ ಕಾಣುತ್ತಿಲ್ಲ. ಅವರ ಜೀವನಕ್ಕೆ ಮತ್ತು ಬಾಳಿದ ಜೀವನದ ಪಥಕ್ಕೆ ನನ್ನ ನಮನಗಳು" ಎಂದರು. ಎಂಥಹ ಅದ್ಭುತ ಮಾತುಗಳು. 
ಹರಿಣಿ ಅಮ್ಮನ ಪ್ರೀತಿಯ ಸೆಳೆತಕ್ಕೆ ಸಿಕ್ಕದವರೇ ಇರಲಿಲ್ಲ. ಅವರ ಜೊತೆ ಒಂದಷ್ಟು ವರ್ಷಗಳು, ಮಾಸಗಳು ಮಾತಾಡಿದ್ದು, ಒಡನಾಡಿದ್ದು, ನಕ್ಕಿದ್ದು, ಹರಟಿದ್ದು, ಅವರ ಕೈ ರುಚಿ ಕಂಡದ್ದು ಇವೆ ನಮಗೆ ಉಳಿದಿರುವ ನೆನಪುಗಳು. 

ಹರಿಣಿ ಅಮ್ಮ ನಿಮ್ಮ ಬಗ್ಗೆ ಬರೆದಷ್ಟು ಬರೆಸುತ್ತಲೇ ಇದ್ದಾಳೆ ಆ ತಾಯಿ ಶಾರದೆ. ಅವಳಿಗೂ ಕೂಡ ನಿಮ್ಮ ಪ್ರವಾಸಿ ಕಥನ, ದೇವಾಲಯಗಳ ಬಗ್ಗೆ ಮಾಹಿತಿ, ಶ್ಲೋಕಗಳು, ಮಂತ್ರಗಳು ಇವೆಲ್ಲಾ ಬೇಕಾಗಿದ್ದವು ಅನ್ನಿಸುತ್ತದೆ. 

ಆ ಶಾರದ ಮಾತೆಯ ಸನ್ನಿಧಾನದಲ್ಲಿ ಅಮರ ಜೀವಿಯಾಗಿರಿ ಹರಿಣಿ ಅಮ್ಮಾ!!!  

Wednesday, December 23, 2015

ಬೇತಾಳನ ಕಥೆಗಳು - ವಿಚಿತ್ರ ವಿಚಿತ್ರ

ಕಪ್ಪು ಅಂದರೆ ಕಾಡುಗಪ್ಪು... ಹುಲುಮಾನವರ ಸುಳಿವಿಲ್ಲಾ..

ಲಕ್ಷ್ಮಿನಾಥ  ಒಬ್ಬನೇ  ನೆಡೆದು ಹೋಗುತ್ತಿದ್ದ... ಬಾಯಲ್ಲಿ ಗಾಯಿತ್ರಿ ಮಂತ್ರ ಸಾಗುತ್ತಿತ್ತು. ಹೆದರಿಕೆ ಎಂದರೆ ಹೆದರಿಕೆ.. ಹೆದರಿಕೆ ಇಲ್ಲ ಅಂದರೆ ಹೆದರಿಕೆ ಇಲ್ಲ. ಒಂದು ರೀತಿಯ ಧೈರ್ಯಶಾಲಿ ಅವನು.. ಯಾವುದೇ ಪರಿಸ್ಥಿತಿ ಬಂದರೂ ಹೆದರಿಕೆ ಇಲ್ಲದೆ ಎದುರಿಸುತ್ತಿದ್ದ. ಆದರೆ ಧೈರ್ಯ ಮತ್ತು ಆತ್ಮ ವಿಶ್ವಾಸ ಹೆಚ್ಚಾಗಲಿ ಎಂದು ತನ್ನ ಇಷ್ಟವಾದ ಮಂತ್ರ ಜಪಿಸುತ್ತಿದ್ದ.

ಊ ಊ ಎಂದು ಗೂಬೆ ಕೂಗುತ್ತಿತ್ತು. ಸ್ಮಶಾನ ಮೌನ.. ಮರಗಳೋ ದೈತ್ಯಕಾರವಾಗಿತ್ತು.. ಆ ಕತ್ತಲಲ್ಲಿ ಅವೇ ಭೂತವಾಗಿ ಕಾಣುತ್ತಿತ್ತು. ವಿಚಿತ್ರ ವಿಚಿತ್ರ ಆಕಾರ ತಳೆದಿದ್ದ ಆ ಮರಗಳು ಎಂಥಹ ಗಟ್ಟಿ ಗುಂಡಿಗೆ ಇರುವವರ ಎದೆಯನ್ನು ಒಮ್ಮೆ ಝಲ್ ಎನ್ನಿಸುತ್ತಿದ್ದುದು ಸುಳ್ಳಲ್ಲ.

ಬಾಯಾರಿಕೆ ಆಗಿತ್ತು.. ಸುತ್ತಲೂ ನೋಡಿದರೆ ಬರಿ ಕತ್ತಲೆ ಬಿಟ್ಟರೆ ಬೇರೆ ಏನು ಇಲ್ಲ.

ಲಕ್ಷ್ಮಿ ಮನೆಗೆ ಹೋಗಬೇಕಾದರೆ.. ಈ ಸ್ಮಶಾನದ ಹಾದಿಯೇ ಕಾಲು ದಾರಿ.. ಇಲ್ಲವಾದರೆ ಅನೇಕ ಕಿಮೀ ಗಳಷ್ಟು ಹೆಚ್ಚು ನಡೆಯಬೇಕಿತ್ತು. ಅವನಿಗೆ ಹೇಗಿದ್ದರೂ ಗಾಯಿತ್ರಿ ಮಂತ್ರ ಇದೆ ನನ್ನ ಜೊತೆಯಲ್ಲಿ ಎಂದು ಹೊರಟೆ ಬಿಟ್ಟಿದ್ದ. ಇದೇನು ಮೊದಲಲ್ಲ, ಅನೇಕ ಬಾರಿ ಅಮಾವಾಸ್ಯೆ, ಸಂಕ್ರಮಣ, ಹುಣ್ಣಿಮೆ ಎನ್ನದೆ ನೆಡೆದು ಸಾಗಿದ್ದ ಚಿರಪರಿಚಿತ ಹಾದಿ.

ಇಂದೂ ಮನೆಗೆ ಬೇಗ ಹೋಗಬೇಕೆಂದು ಹೊರಟಿದ್ದರೂ, ಅರಿವಿಗೆ ಬಾರದ ಕೆಲಸಗಳು ಅವನನ್ನು ತಡೆಹಿಡಿದಿದ್ದವು. ಸರಿ ಕಚೇರಿಯಿಂದ ಹೊರಟಿದ್ದೆ ಸುಮಾರು ಮಧ್ಯ ರಾತ್ರಿ ಒಂದು ದಾಟಿತ್ತು. ತನ್ನ ಬೈಕ್ ಪಂಚರ್ ಆದ ಕಾರಣ ನಡೆದೆ ಹೊರಟಿದ್ದ.

ಆ ಸ್ಮಶಾನ ಎಷ್ಟು ಚಿರಪರಿಚಿತ ಅಂದರೆ, ಎಷ್ಟೋ ಘೋರಿಗಳ ಮೇಲೆ ಬರೆದಿದ್ದ ಹೆಸರು, ಜನನ, ಮರಣದ ದಿನಾಂಕ ಬಾಯಿಪಾಠ ಆಗಿ ಹೋಗಿತ್ತು. ಎಷ್ಟೋ ದಿನ ಬೇಕಂತಲೇ ಅವನು ತನ್ನ ಬೈಕ್ ಬಿಟ್ಟು ಈ ಕಾಲು ಹಾದಿಯಲ್ಲಿ ನಡೆದದ್ದು ಇತ್ತು.

ಅವನು ತನ್ನ ಯೋಚನೆಯಲ್ಲಿಯೇ ಮುಳುಗಿದ್ದ, ಬರಬರನೆ ಹೆಜ್ಜೆ ಹಾಕುತ್ತಿದ್ದ, ಗಾಯಿತ್ರಿ ಮಂತ್ರ ಸಾಗುತ್ತಿತ್ತು. ಅಚಾನಕ್ ಆ ಸ್ಮಶಾನದ ಮೂಲೆಯಲ್ಲಿ ಒಂದು ಬೆಳಕು ಕಂಡಿತು. ಅಲ್ಲಿ ಒಬ್ಬ ಕಾವಲುಗಾರ ವಾಸವಾಗಿದ್ದ ಮನೆ. ಆದರೆ ತೀರ ಒಂದು ವಾರದ ಕೆಳಗೆ, ಜೀವನದಲ್ಲಿ ಬೇಸತ್ತು, ಅದೇ ಮನೆಯ ಹೊರಗಿನ ಒಂದು ಹುಣಿಸೇಮರಕ್ಕೆ ನೇಣು ಬಿಗಿದು ಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದ. ಈ ವಿಷಯ ಲಕ್ಷ್ಮಿಗೂ ಗೊತ್ತಿತ್ತು. ಆ ಮನೆಯಿಂದ ಬೆಳಕು ಬಂದದ್ದು ಇವನಿಗೆ ಆಶ್ಚರ್ಯ ಜೊತೆಗೆ ಸ್ವಲ್ಪವೇ ಸ್ವಲ್ಪ ಹಣೆಯಲ್ಲಿ ಬೆವರು ಮೂಡಿತ್ತು.

ಒಮ್ಮೆ ಹಾಗೆ ಆ ಕಾವಲುಗಾರನನ್ನು ನೆನೆಸಿಕೊಂಡಿತು ಮನ. ದಣಿವಾಗಿದ್ದಾಗ ಅಥವಾ ಮಾತಾಡಲು ವಿಷಯ ಬೇಕಿದ್ದಾಗ, ಲಕ್ಷ್ಮಿ ಅನೇಕ ಬಾರಿ ಇದೆ ಕಾವಲುಗಾರನ ಜೊತೆ ಮಾತಾಡಲು ಕೂರುತಿದ್ದದು ಇತ್ತು. ಕಾವಲುಗಾರ ಇವನನ್ನು ನೋಡಿದ ತಕ್ಷಣ, ಅಲ್ಲಿಯ ಯಾವುದೋ ಸಮಾಧಿಯನ್ನು ಕೈಯಿಂದ ಗುಡಿಸಿ, ಬನ್ನಿ ಸರ್ ಇಲ್ಲೇ ಕುಳಿತುಕೊಳ್ಳಿ ಎಂದು ಹೇಳಿ, ಇಬ್ಬರೂ ಲೋಕಾಭಿರಾಮವಾಗಿ ಮಾತಾಡುತ್ತ ಗಣೇಶ್ ಬೀಡಿಯನ್ನು ಎಳೆಯುತಿದ್ದ ನೆನಪು ಹಾಗೆ ಮನದಲ್ಲಿ ಹಾದು ಹೋಯಿತು.

ಅದೇ ಗುಂಗಿನಲ್ಲಿ, ಲಕ್ಷ್ಮಿ ಆ ಬೆಳಕಿನ ಕಿರಣದತ್ತ ಹೆಜ್ಜೆ ಹಾಕಿದ.

ಬಾಗಿಲು ಅರ್ಧವೆ ತೆಗೆದಿತ್ತು, ಚಿಮಣಿ ಬುಡ್ಡಿ ಅಲ್ಪ ಸ್ವಲ್ಪ ಶಕ್ತಿ ಉಳಿಸಿಕೊಂಡು ಬೆಳಕನ್ನು ಬೀರುತ್ತಿತ್ತು. ಬಾಗಿಲನ್ನು ತಳ್ಳಿದ ಲಕ್ಷ್ಮಿ, ಕರ್ ಎಂದು ತುಸು ತುಸುವೇ ತೆರೆದುಕೊಂಡಿತು. ಯಾಕೋ ಮೊದಲ ಬಾರಿಗೆ ಗಾಬರಿ ಆಯಿತು ಲಕ್ಷ್ಮಿಗೆ.

"ಅರೆ ಲಕ್ಷ್ಮಿ ಬಂದೆಯಾ ಬಾ.. ಅಲ್ಲಿ ನೀರಿದೆ.. ಕುಡಿದು ದಣಿವಾರಿಸಿಕೋ"

ಹೃದಯದ ಬಡಿದ ಲಕ್ಷ್ಮಿಗೆ ಕೇಳುವಷ್ಟು ಜೋರಾಗಿ ಹೊಡೆದುಕೊಳ್ಳಲು ಶುರುವಾಯಿತು. ಆ ಮಂದ ಬೆಳಕಲ್ಲಿ ಸುತ್ತಲೂ  ಕಣ್ಣಾಡಿಸಿದ .. ಅರೆ ಬರೆ ಕತ್ತಲು ಬೆಳಕಲ್ಲಿ ಅಸ್ಪಷ್ಟ ದೃಶ್ಯ... ಒಂದಷ್ಟು ಪುಸ್ತಕಗಳ ರಾಶಿಯೇ ಇತ್ತು.. ಕಾವಲುಗಾರ ಅನಕ್ಷರಸ್ತ ಎಂದು ಗೊತ್ತಿದ್ದ ಲಕ್ಷ್ಮಿಗೆ ಸ್ವಲ್ಪ ಸ್ವಲ್ಪವೇ ಹೆದರಿಕೆ ಶುರುವಾಯಿತು. ನಾಲಿಗೆ ಒಣಗುತ್ತಿತ್ತು, ಗಾಯಿತ್ರಿ ಮಂತ್ರದ ಅಕ್ಷರಗಳು  ಲಯ ತಪ್ಪಲು ಶುರುಮಾಡಿದವು. ಯಾರೋ ಮೂಲೆಯಲ್ಲಿ ಕುಳಿತು ಮೆಲು ದನಿಯಲ್ಲಿ ಪುಸ್ತಕ ,ಓದುತ್ತಿದ್ದಂತೆ ಭಾಸವಾಯಿತು. ಹಣೆಯಲ್ಲಿ ಬೆವರಿನ ಹನಿಗಳು ಅಲಂಕಾರಗೊಂಡವು.. ಬೆರಳುಗಳು ನಡುಗಲು ಶುರುಮಾಡಿದವು, ಕಾಲುಗಳು ಸ್ವಾಧೀನ ಕಳೆದುಕೊಂಡೆವು ಎಂದು ಸಾರುತ್ತಿತ್ತು. ಯಾಕಾದರೂ ಈ ದಾರಿಯಲ್ಲಿ ಬಂದೆನೋ ಎಂದು ಮೊದಲ ಬಾರಿಗೆ ಅನಿಸಲು ಶುರುಮಾಡಿದವು.

ಕಿಟಕಿಗಳು ಕರ್ ಕರ್ ಎಂದು ಸದ್ದು ಮಾಡುತ್ತಾ ಮುಚ್ಚಿಕೊಂಡವು. ಗಾಬರಿ ಇನ್ನಷ್ಟು ಹೆಚ್ಹಾಗಿ ಹೆದರಿಕೆ ಶುರು ಆಯಿತು. ಕಿಟಕಿಗಳು ಮುಚ್ಚಿದ ರಭಸಕ್ಕೆ ದೀಪ ಜೋರಾಗಿ ನೃತ್ಯ ಮಾಡುತ್ತಾ ತನ್ನ ಕೆಲಸ ಆಯಿತು ಎಂದು ಸಾರಲು ಶುರುಮಾಡಿದವು.
ರಫ್ ಪಟ್..... ತಿರುಗಿ ನೋಡಿದ.. ಬಾಗಿಲು ರಪಾರನೆ ಮುಚ್ಚಿಕೊಂಡಿತು.

ಮೂಲೆಯಲ್ಲಿದ್ದ ಒಂದು ಆಕೃತಿ.. ಗಹಗಹಿಸಿ ನಗುವಂತೆ ಭಾಸವಾಯಿತು.. ಸದ್ದು ಜೋರಾಗಿಯೇ ಕೇಳುತ್ತಿತ್ತು..ಲಕ್ಷ್ಮಿಗೆ ಇಂದು ಭ್ರಮೆಯೋ ಅಥವಾ ನಿಜವೋ ಅರಿಯದೆ ಹೋಯಿತು. ಹೆದರಿಕೆಯಿಂದ ಬಟ್ಟೆ ಪೂರ ಒದ್ದೆಯಾಯಿತು. ಗಂಟಲು ಪೂರ್ಣ ಹೂತು ಹೋಗಿತ್ತು.. ಕಿರುಚಿಕೊಂಡರೂ ಯಾರಿಗೂ ಕೇಳದ ಹಾದಿ ಅದು.

ತಗೋ.. ಇದನ್ನು ತಗೋ.. ಇದು ಬಾಗಿಲಿನ ಬೀಗದ ಕೈ.. ಇದನ್ನು ನಿನ್ನ ಜೇಬಿನಲ್ಲಿ ಇಟ್ಟುಕೋ...
ಇಲ್ಲಿ ಕುಳಿತು.. ಈ ಪುಸ್ತಕಗಳನ್ನು ಓದಿಯೇ ನೀನು ಹೊರಗೆ ಹೋಗಬೇಕು.   ನಾನೇ ನಿನ್ನ ಜೇಬಿನಿಂದ ಈ ಕೀ ಯನ್ನು ತೆಗೆದು ನಿನಗೆ ಹೊರ ಹೋಗಲು ಅನುಮತಿ ಕೊಡುತ್ತೇನೆ.. ಅಲ್ಲಿಯ ತನಕ ನಿನಗೆ ಹೊರಗೆ ಹೋಗಲು ಅನುಮತಿಯಿಲ್ಲ..

ಕಣ್ಣುಗಳು ತೇಲಾಡ ತೊಡಗಿದವು.. ಹೃದಯ ಒಡೆದೇ ಹೋಗುತ್ತೇನೋ ಅನ್ನುವಷ್ಟು ಜೋರಾಗಿ ಬಡಿದುಕೊಳ್ಳುತ್ತಿತ್ತು.. ಬೇರೆ ದಾರಿಯಿರಲಿಲ್ಲ.. ಮೈಯಲ್ಲಿ ಇದ್ದ ನೀರೆಲ್ಲಾ ಬೆವರಾಗಿ ಹರಿದು ಹೋಗುತ್ತಿತ್ತು. ದೇಹ ಕಂಪಿಸುತ್ತಿತ್ತು..

ಒಂದು ಕಡೆ ದೆವ್ವಾ ಅಂದು ಕೊಳ್ಳಬಹುದಾದ ಆಕೃತಿ ... ಇನ್ನೊಂದು ಕಡೆ ಓದಬೇಕಾದ ಪುಸ್ತಕ... ಅದರ ಗಂಭೀರ ದ್ವನಿಯಿಂದ ಅನ್ನಿಸಿದ್ದು ಇದು ಕಲ್ಲು ಮನಸ್ಸಿನ ದೆವ್ವವಲ್ಲ.. ಸರಿ ಧೈರ್ಯ ಮಾಡಿ ಮಾತಾಡೋಣ ಅನ್ನಿಸಿ..

"ನೀ ಯಾರಪ್ಪ... .. ನನ್ನ ಹೋಗಲು ಬಿಡು.... ಎಂದು ಹೇಳುತ್ತಾ ನಿಧಾನವಾಗಿ ಬಾಗಿಲನ್ನು ಕಾಣದೆ ಅಸ್ಪಷ್ಟ ರೀತಿಯಲ್ಲಿ ಹೆಜ್ಜೆ ಹಾಕಿ ಬಾಗಿಲಿನ ಹತ್ತಿರ ಬಂದಾಗ... ಒಂದು ದೊಡ್ಡ ಪುಸ್ತಕದ ಗಂಟಿಂದ ಯಾರೋ ತಲೆಗೆ ಬಡಿದ ಹಾಗೆ ಆಯಿತು.. ಎಚ್ಚರ ತಪ್ಪಿ ಬಿದ್ದ.. ಬಾಯಿಂದ ರಕ್ತ ಜಿನುಗಿತ್ತು..

ಕಣ್ಣು ಬಿಟ್ಟಾಗ.. ಆಸ್ಪತ್ರೆಯ ಒಂದು ಹಾಸಿಗೆಯಲ್ಲಿ.. ಗ್ಲುಕೋಸ್ ಚುಚ್ಚಿಸಿಕೊಂಡು ಮಲಗಿದ್ದ.. ಹಾಗೆ ಕಣ್ಣು ಹಾಯಿಸಿದ.. ಎಲ್ಲಿದ್ದೇನೆ ಎಂದು ತಿಳಿದುಕೊಳ್ಳಲು..

ಕಣ್ಣುಗಳು ಪಕ್ಕಕ್ಕೆ ವಾಲಿದವು.. ಅಲ್ಲಿನ ದೃಶ್ಯ ಕಂಡು ಹೃದಯ ಹೊಡೆದುಕೊಳ್ಳಲು ಶುರುಮಾಡಿದವು...

ಆಸ್ಪತ್ರೆಯ ತನ್ನ ಮಂಚದ ಮೂಲೆಯಲ್ಲಿ ಒಂದು ಭಯಾನಕ ಆಕೃತಿ ದೊಡ್ಡ ಪುಸ್ತಕದ ಗಂಟನ್ನು ಇಟ್ಟುಕೊಂಡು ಓದುತ್ತಾ ಕೂತಿತ್ತು..






Tuesday, December 15, 2015

"ಅರಳಿ"ದ ಹೃದಯಗೀತೆ

ಅಮ್ಮನನ್ನು ಅಮ್ಮ, ತಾಯಿ, ಅಬ್ಬೆ, ಹೀಗೆ ನಾನಾ ರೀತಿಯಲ್ಲಿ ಕರೆಯುತ್ತಾರೆ.. ಹೇಗೆ ಕರೆದರೂ ಆ ಕರುಳಿನ ಕರೆಗೆ ಓಗೊಡುವ ಸುಂದರ ಹೃದಯ ತಾಯಿಯದು. ಕನ್ನಡಾಂಬೆಗೆ ಅರ್ಚಿಸಲು ಹೂವು, ಅಕ್ಷತೆ, ಶ್ರೀ ಗಂಧ, ಏನೇ ಇದ್ದರೂ ಇಲ್ಲದಿದ್ದರೂ ಅಕ್ಷರಗಳ ಜಾತ್ರೆಯೇ ಸಾಕು.

3K ಎನ್ನುವ ಸಮಾನ ಮನಸ್ಕರ ತಂಡವೂ ಇಂಥಹ ಅಕ್ಷರಗಳ ಅರ್ಚನೆಯನ್ನು ಹಲವಾರು ವರ್ಷಗಳಿಂದ ಮಾಡುತ್ತಲೇ ಇದ್ದಾರೆ. ಇಂಥಹ ಪರಿಶ್ರಮದ ಹೃದಯಾಳದಿಂದ ಹೊರಹೊಮ್ಮಿದ ಎರಡು ಕೃತಿಗಳು ಭಾವ ಸಿಂಚನ ಹಾಗೂ ಶತಮಾನಂಭಾವತಿ.  ಈ ವಸಂತದಲ್ಲಿ ಮೂಡಿ ಬಂದದ್ದು "ಹೊಂಗೆಮರದಡಿ ನಮ್ಮ ನಿಮ್ಮ ಕಥೆಗಳು". 



ಹರಿದು ಬಂದ ಅನೇಕ ಕಥೆಗಳಲ್ಲಿ ನಾ  ಬರೆಯಲು ಪ್ರಯತ್ನ ಪಟ್ಟ ಒಂದು ಬರಹವನ್ನು ಪ್ರಕಟಿಸಿ ಹೊಂಗೆ ಮರದಡಿ ನನಗೂ ಒಂದು ಜಾಗ ಕೊಟ್ಟ 3K ತಂಡಕ್ಕೆ ನನ್ನ ಶಿರಸ ನಮನಗಳು. 

*****


ಗಿಜಿ ಗಿಜಿಗುಡುತ್ತಲಿದ್ದರೂ,  ಕೋಟೆ ಕೊತ್ತಲು ಹೊಂದಿದ್ದ ಪುರಾತನ ಅನ್ನಿಸಿದರೂ, ಆಧುನಿಕತೆಯ ಸೋಗು ತೊಟ್ಟ ಮಲೆನಾಡಿನ ಹೆಬ್ಬಾಗಿಲಿನ ಒಂದು ಊರು. ಅಲ್ಲೊಂದು ಪುಟ್ಟ ಮನೆ. ಮನೆಯೊಳಗೆ ಮನದೊಳಗೆ ಸದಾ ನೆಲೆ ನಿಂತ ಪ್ರೀತಿ ತುಂಬಿದ ಉಸಿರು.  ಪುಟ್ಟ ಮಗುವಾಗಿದ್ದಾಗಿಂದ ಒಂದು ರೀತಿಯಲ್ಲಿ ಕೀಳರಿಮೆಯಲ್ಲಿಯೇ ಬೆಳೆಯುತ್ತಿದ್ದ ಮಗು.

ಶ್ಯಾಮಲ ವರ್ಣ.. ಸುಂದರ ಅನ್ನಿಸುವುದಕ್ಕೆ ಅಪವಾದವಾಗಿದ್ದ ರೂಪು, ರೇಷ್ಮೆಯಂತೆ ಗಾಳಿ ಬಂದರೆ ಹುಲ್ಲುಗಾವಲಾಗುತ್ತಿದ್ದ ತಲೆಗೂದಲು, ಯಾರೇ ಬಂದರೂ ಎರಡನೇ ಬಾರಿಗೆ ನೋಡದ ಮಗು ಅದು.

ಅದಕ್ಕಿದ್ದ ಒಂದೇ ಒಂದು ವರ ಅಂದರೆ.. ಅಸಾಧ್ಯ ತಲೆನೋವು. ಹೊಟ್ಟೆ ಹಸಿದರೆ ಮುಗಿಯಿತು ತಲೆಶೂಲೆ ಅಭ್ಯಾಗತ ಅತಿಥಿಯಂತೆ ಒಕ್ಕರಿಸಿಬಿಡುತಿತ್ತು. ಎಷ್ಟೋ ದಿನಗಳು ತಲೆನೋವು ತಾಳಲಾರದೆ ತನ್ನ ತಲೆಯನ್ನು ಗೋಡೆಗೆ ಡಿಕ್ಕಿ ಹೊಡೆದುಕೊಂಡು ಸಮಾಧಾನ ಮಾಡಿಕೊಳ್ಳುತ್ತಿತ್ತು ಆ ಮಗು. ಅದರಲ್ಲೂ ಹೊಟ್ಟೆ ಹಸಿದರೆ ಮುಗಿಯಿತು, ಮೊದಲೇ ಅಕ್ಕಿಯ ಡಬ್ಬಾ ಯಾವಾಗಲೂ ಕಸ್ತೂರಿ  ನಿವಾಸದ ವಂಶದ ಹಾಗೆ ತಳವನ್ನೇ ತೋರಿಸುತ್ತಿತ್ತು ☺☺☺!

ಹೊಟ್ಟೆಯನ್ನು ಭೂಮಿಗೆ ಒತ್ತುಕೊಂಡು ಆ ಭೂಮಿಯ ಕಾವನ್ನೇ ತನ್ನ ಹೊಟ್ಟೆಗೆ ಆಧಾರ ಮಾಡಿಕೊಂಡು ಮಲಗುತ್ತಿದ್ದ ಅ ಮಗುವಿಗೆ ಆಧಾರವಾಗುತ್ತಿದ್ದದು ಕೋಟೆ ಕೊತ್ತಲಿನ ಆಂಜನೇಯ ದೇವಸ್ಥಾನದ ಪ್ರಸಾದ ಇಲ್ಲವೇ ಮನೆಯ ಮಾಲೀಕರು ನೀಡುತ್ತಿದ್ದ ಉಳಿದ ಅನ್ನ.

ಹೀಗಿದ್ದರೂ ಆ ಮಗುವಲ್ಲಿ ಒಂದು ಅದ್ಭುತ ಭಾವ ಬೆಳೆಯುತ್ತಲಿತ್ತು. ಸದಾ ಆಂಜನೇಯನ ದೇವಸ್ಥಾನದಲ್ಲಿ ಕೇಳುತ್ತಿದ್ದ ಭಗವದ್ಗೀತೆ ಪಠಣ, ತನಗೆ ಅರಿವಿಲ್ಲದೆ ಶ್ರೀ ಕೃಷ್ಣನ ಮೇಲೆ ಮತ್ತು ಗೀತ ಎನ್ನುವ ಹೆಸರಿನ ಮೇಲೆ ಅಪರಿಮಿತ ಪ್ರೀತಿ ಅರಳಿಬಿಟ್ಟಿತು.

ಅರೆ ಆ ಪ್ರೀತಿ ಅರಳಲು ಅರಳಿ ಮರವೂ ಕೂಡ ಜೊತೆಯಾಗಿತ್ತು. ಹೌದು ಅರಳಿಮರ ಎಲೆಯನ್ನು ನೀವೆಲ್ಲರೂ ನೋಡೇ ನೋಡಿರುತ್ತೀರಿ. ಎಲೆಯ ತೊಟ್ಟು ಸಣ್ಣದಾಗಿರುತ್ತದೆ.. ಆಮೇಲೆ ಅಗಲವಾಗುತ್ತದೆ, ನಂತರ ಪ್ರೀತಿಯ ಹೃದಯದ ಆಕೃತಿ ಮೂಡುತ್ತದೆ.. ನಂತರ ಅದರ ಆಕೃತಿ ತೀವ್ರವಾಗುತ್ತಾ ಹೋಗುತ್ತದೆ.
ಚಿತ್ರಕೃಪೆ - ಗೂಗಲ್ 

ಈ ಅರಳಿ ಎಲೆಯ ಆಕಾರ ಅವನ ಮನಸ್ಸನ್ನು ಬಹಳ ಸೆಳೆದಿತ್ತು. ಆ ಅರಳಿಮರವನ್ನು ಪ್ರದಕ್ಷಿಣೆ ಹಾಕಲು ಅಲ್ಲೊಂದು ಹುಡುಗಿ ದಿನವೂ ಬರುತ್ತಲಿತ್ತು. ಅವಳನ್ನು ನೋಡುತ್ತಲೇ ಬೆಳೆದ ಆ ಮಗು, ಸುಂದರ ಅಯ್ಯೋ ಅಯ್ಯೋ ತಪ್ಪು ತಪ್ಪು ಸುಂದರವಲ್ಲ.....ಆದರೆ ಪ್ರಾಯಕ್ಕೆ ಬಂದಿತು. ಆ ಹುಡುಗಿಯೂ ಪ್ರಾಯಕ್ಕೆ ಬಂದಿದ್ದಳು. ಬಾಲ್ಯದಿಂದಲೂ ಕಿರುಗಣ್ಣಲ್ಲೇ ನಿಂತಿದ್ದ ನೋಟ, ಯೌವನಕ್ಕೆ ಬಂದಾಗ ಅದು ಮೆಲ್ಲಗೆ ಪ್ರೀತಿಯ ಹಾದಿಯಲ್ಲಿ ಸಾಗುತ್ತಿತ್ತು.

ಅರಳಿ ಎಲೆಯ ಹಾಗೆಯೇ ಅವನ ಕಣ್ಣುಗಳಲ್ಲಿ ಮತ್ತು ಹೃದಯದಲ್ಲಿ ಆರಂಭವಾದ ಒಂದು ಸಣ್ಣ ನೋಟ, ಮೆಲ್ಲಗೆ ವಿಸ್ತರಿಸುತ್ತಾ ಹೋಗಿ, ಹಾಗೆಯೇ ಮುಂದುವರೆದು ಅರಿವಿಲ್ಲದ ಪ್ರೀತಿಯ ಆಕೃತಿ ಪಡೆಯುತ್ತಾ ಅದು ಪ್ರೇಮದ ತೀವ್ರತೆಯನ್ನು ಪಡೆಯುತ್ತಲಿತ್ತು.

ಆ ಹುಡುಗಿಯ ಹೆಸರು... ಇನ್ನೇನು ನಿಮಗೆ ಗೊತ್ತೇ ಇದೆಯಲ್ಲ ಅವನ ಪ್ರೀತಿಯ ಹೆಸರು "ಗೀತ". ಆ ಹುಡುಗಿ ಸುಂದರವಾಗಿದ್ದಳು. ಅವನು ಇಷ್ಟಪಡುವ ಉದ್ದನೆ ಜಡೆ, ಹೊಳಪು ಕಣ್ಣುಗಳು, ನೀಳ ನಾಸಿಕ, ಅದಕ್ಕೆ ಹೇಳಿ ಮಾಡಿಸಿದ ಹಾಗೆ ಹೊಳೆಯುವ ಮೂಗುಬೊಟ್ಟು, ಎರಡು ಹುಬ್ಬುಗಳ ನಡುವೆ ಇಡುವ ಹಣೆ ಬೊಟ್ಟಿನ ಕೆಳಗೆ ಒಂದು ಚಿಕ್ಕ ದೇವರ ಕುಂಕುಮ ಇಡುವ ಅವಳ ಮೊಗವನ್ನು ನೋಡುವುದರಲ್ಲಿಯೇ ಅವನಿಗೆ ಆನಂದ. ಅವಳ ಬಣ್ಣ, ಅರೆ ಬಣ್ಣ ಬಿಡಿ ಅವನಿಗೆ ಯಾವಾತ್ತಿಗೂ ಬಣ್ಣದ ಬಗ್ಗೆ ಮೋಹ ಇರಲೇ ಇಲ್ಲ. ಇಬ್ಬರೂ ಶ್ಯಾಮಲಾ ವರ್ಣದ ಕುಸುಮಗಳು.

ಕಣ್ಣಲ್ಲೇ ಗೋಪುರ ಕಟ್ಟಿಕೊಂಡರು. ಅವನು ಒಮ್ಮೆ ಧೈರ್ಯ ಮಾಡಿ ಕೇಳಿಯೇ ಬಿಟ್ಟಾ.

"ಏನ್ರಿ! ನಾ ನಿಮಗೆ ಇಷ್ಟವಾದರೆ ನೀವು ಒಂದು ಎಳೆಯ, ಹಸಿರಾದ ಅರಳಿ ಎಲೆಯನ್ನು ಕೊಡಿ.. ಇಷ್ಟವಿಲ್ಲದೆ ಹೋದರೆ ನನ್ನ ಹಲ್ಲುಗಳ ಹಾಗೆ ಹಣ್ಣಾದ ಹಳದಿಯಾಗಿರುವ ಅರಳಿ ಎಲೆಯನ್ನು ಕೊಡಿ"

ಆ ಹುಡುಗಿಗೂ ಇವನ ಹೆಸರು ಮತ್ತು ಈತನ ಮನಸ್ಸು ಇಷ್ಟವಾಗಿತ್ತು. ಅವನು ತನ್ನ ಗೆಳೆಯರ ಜೊತೆಯಲ್ಲಿ ಆಡುತ್ತಿದ್ದ ಹಿತ ಮಿತ ಮಾತುಗಳು ಇಷ್ಟವಾಗುತ್ತಿದವು. ಎಂದೂ ನೇರವಾಗಿ ತನ್ನ ಜೊತೆಯಲ್ಲಿ ಮಾತಾಡದ ಆ ಹುಡುಗನಲ್ಲಿ ಇಷ್ಟವಾಗುತ್ತಿದ್ದ ಗುಣ ಎಂದರೆ  ಸದಾ ಹಸನ್ಮುಖ ಮುಖಭಾವ. ನಗು ಎಂಬುದು ಅವನಿಗೆ ಭಗವಂತ ಕೊಟ್ಟ ದೊಡ್ಡ ಬಳುವಳಿ. ಎಂಥಹ ವಿಷಮ ಪರಿಸ್ಥಿತಿಯಲ್ಲೂ ಅವನ ನಗುವೇ ಅವನನ್ನು ಸಮಸ್ಯೆಗಳಿಂದ ಹೊರ ಬರಲು ಸಹಾಯ ಮಾಡುತ್ತಿತ್ತು. ಅದು ಅವಳಿಗೆ ಬಹು ಪ್ರಿಯವಾಗಿದ್ದ ವಿಷಯ.

ಯಾವುದೇ ಸಮಸ್ಯೆ ಬಂದರೂ ಸಮಾಧಾನ ಅವನ ಬಳಿಯಿದ್ದ ಬಹು ದೊಡ್ಡ ಅಸ್ತ್ರವಾಗಿತ್ತು ಎಂದು ಅವನ ಬಗ್ಗೆ ಇತರರು ಆಡುತ್ತಿದ್ದ ಮಾತಿನಿಂದ ಅರಿತ್ತಿದ್ದಳು.   ಅವನ ರೂಪ ಬಣ್ಣ ಯಾವುದು ಅವಳ ಕಣ್ಣ ಮುಂದಕ್ಕೆ ಕಾಣುತ್ತಲೇ ಇರಲಿಲ್ಲ, ಬದಲಿಗೆ ಸೂಜಿಗಲ್ಲಿನಂತೆ ಸೆಳೆಯುತ್ತಿದ್ದ ಅವನ ವ್ಯಕ್ತಿತ್ವ ಮತ್ತು ತನ್ನ ಕಡೆ ಅವಾಗವಾಗ ಕಿರುಗಣ್ಣಲ್ಲೇ ನೋಡುತ್ತಿದ್ದ ನೋಟ ಅವಳಿಗೆ ಅವನ ಹೃದಯದಲ್ಲಿ ಸದಾ "ಗೀತ ಗೀತ ಗೀತ ಗೀತ" ಎನ್ನುವ ಬಡಿತ ಇದ್ದೀತು ಎಂದು ಅನ್ನಿಸಿತ್ತು. 

ಹೊಳಪು ಕಣ್ಣುಗಳನ್ನು ಅತ್ತಿತ್ತ ತನ್ನೂರಿನಲ್ಲಿ ಅಡ್ಡಾದಿಡ್ಡಿ ಓಡಾಡುವ ಆಟೋಗಳ ಹಾಗೆ ಹರಿದಾಡಿಸಿದಳು. ಮಲಯಮಾರುತ ಹೊತ್ತು ತರುತ್ತಿದ್ದ ತಂಗಾಳಿ ಬರಿ ಹಳದಿ ಎಲೆಗಳನ್ನೇ ತೂರಾಡಿಸುತ್ತಿತ್ತು. ಅವಳ ಹೃದಯದ ಬಡಿತ ತೀವ್ರವಾಯಿತು.

ಹುಡುಗ ಆಸೆಗಣ್ಣುಗಳಿಂದ ನೋಡುತ್ತಲೇ ಇದ್ದಾ.. ಆದರೆ ಅವನ ಕಣ್ಣಿಗೆ ಅವನ ಹಲ್ಲಿನ ಬಣ್ಣದ ಎಲೆಗಳೇ ಕಾಣುತ್ತಿದ್ದವು. ಒಂದು ಕ್ಷಣ ಕಣ್ಣು ಮುಚ್ಚಿದ, ಆಂಜನೇಯನನ್ನು ನೆನೆದ, "ದೇವ ನನಗೆ ಯೋಗ್ಯತೆ ಇದ್ಡರೆ, ಗೀತಳನ್ನು ಸಾಕುವ ತಾಕತ್ತು ಇದ್ದರೆ, ನಿಜವಾಗಿಯೂ ಅವಳು ನನ್ನೊಡನೆ ಸುಖವಾಗಿ ಇರಬಲ್ಲಳು ಎನ್ನುವ ವಿಶ್ವಾಸ ನೀ ನನ್ನ ಮನದೊಳಗೆ ತುಂಬುವುದಾದರೆ..... ಇನ್ನು ನಿನ್ನ ಇಷ್ಟ" ಎಂದು ಕಣ್ಣು ತೆರೆದ.

ಹುಡುಗಿ ಇನ್ನೂ ಹಸಿರು ನವಿರು ಎಲೆಯನ್ನು ಹುಡುಕುತ್ತಲೇ ಇದ್ದಳು.. ಹಸಿರು ಸಿಕ್ಕಿದರೆ ಹುಡುಗನ ಉಸಿರಲ್ಲಿ ಹಸಿರಾಗುತ್ತೇನೆ ಎನ್ನುವ ಆಸೆ ಅವಳಿಗೆ. ಆದರೆ ಸುತ್ತ ಮುತ್ತಲೂ ಬರಿ ಹಳದಿ ಹಳದಿ ಹಳದಿ... !

ಅವಳು ಒಂದು ಕ್ಷಣ ತನ್ನ ಇಷ್ಟದೇವನಾದ ಶ್ರೀ ಕೃಷ್ಣನನ್ನು ನೆನೆಯುತ್ತಾ "ಕೃಷ್ಣ ನಿನ್ನ ಕಂಡರೆ ನನಗೆ ಇಷ್ಟ.. ನೀ ಭೋದಿಸಿದ ಹೆಸರನ್ನೇ ನಾ ಇಟ್ಟುಕೊಂಡಿದ್ದೇನೆ... ಅವನ ಬಾಳಿನಲ್ಲಿ ಹುಣ್ಣಿಮೆಯನ್ನು ತರಬೇಕೆಂಬುದು ನನ್ನ ಆಸೆ. ನಾ ಒಲಿದರೆ ಅವನ ಬಾಳು ಇನ್ನೂ ಹಸನು. ನಾ ನನಗಾಗಿ ಏನೂ ಬೇಡುವುದಿಲ್ಲ.. ಆದರೆ ಅವನಿಗಾಗಿ ನಾ ಮಿಡಿಯುತ್ತಿರುವೆ.. ಇನ್ನು ನಿನಗೆ ನಾ... !

ಶ್ರೀ ಕೃಷ್ಣ ಮತ್ತು ಆಂಜನೇಯ ಇಬ್ಬರೂ ಒಮ್ಮೆ ಕಣ್ಣು ಮುಚ್ಚಿ ಕುಳಿತರು.. ಇಬ್ಬರ ಬಳಿಯೂ ತಮ್ಮ ತಮ್ಮ ಭಕ್ತರ ಅರ್ಜಿಯ ಕಡತ ಬಂದು ನಿಂತಿದೆ. ಇಬ್ಬರಿಗೂ ತಮ್ಮ ಭಕ್ತರಿಗೆ ಒಳ್ಳೆಯದನ್ನೇ ಮಾಡುವ ಬಯಕೆ. ಜೊತೆಯಲ್ಲಿ ಅರಳಿ ಮರದ ಬುಡದಲ್ಲಿ ಅರಳಿದ ಅವರ ಹೃದಯದ ಪ್ರೀತಿಯನ್ನು ಹಣ್ಣು ಮಾಡುವ ತವಕ. ಆದರೆ ಅವರಿಬ್ಬರ ಆಸೆ ಇಬ್ಬರೂ ನಿಂತಲ್ಲಿಯೇ ನಿಲ್ಲದೆ,  ಪ್ರೇಮವನ್ನು ತಮ್ಮ ಪರಿಶ್ರಮದಿಂದ  ಗುರಿ ತಲುಪಿಸಲಿ ಎನ್ನುವ ಬಯಕೆ.

ಶ್ರೀ ಕೃಷ್ಣ ಆಂಜನೇಯನಿಗೆ ಹೇಳಿದ "ಹನುಮ ನೀ ಹಸಿರು ಎಲೆಯನ್ನು ಅವನಿಗೆ ತೋರಿಸು.. ನಾ ಅವಳನ್ನು ಅಲ್ಲಿಗೆ ಕರೆತರುವೆ"

ಮರದ ತುದಿಯಲ್ಲಿದ್ದ ಗೊಂಚಲು ಗೊಂಚಲು ಹಸಿರೆಲೆಗಳನ್ನು ಹನುಮ ತನ್ನ ಬಾಲದಿಂದ ಆ ಹುಡುಗ ಕೂತ ಕಡೆಗೆ ಬಗ್ಗಿಸಿದ, ಶ್ರೀ ಕೃಷ್ಣ ಆ ಹುಡುಗನ ಹಿಂದೆ ನಿಂತು ತನ್ನ ಕೊಳಲಿನ ನಾದದಿಂದ ಆ ಹುಡುಗಿಯ ಗಮನವನ್ನು ಹುಡುಗನ ಕಡೆಗೆ ಸೆಳೆದ.

ಅಲ್ಲಿಯ ತನಕ ಮೌನಗೌರಿಯಾಗಿದ್ದ ಹುಡುಗಿ.. ಮೊತ್ತ ಮೊದಲ ಬಾರಿಗೆ ತಾನೂ ಧೈರ್ಯ ಮಾಡಿ ಹುಡುಗನನ್ನು ಮಾತಾಡಿಸಿದಳು ಅದೂ ಏಕವಚನದಲ್ಲಿ (ಪ್ರೀತಿ ಹೃದಯದಲ್ಲಿದ್ದಾಗ ಗೌರವವಾಚಕ ಪರಿ ಪದ ಎಂದು ತಿಳಿದ ಹುಡುಗಿ ಅವಳು) " ಹೇ ಹುಡುಗ ನೀ ಅಂದರೆ ನನಗೂ ಇಷ್ಟ ಕಣೋ.. ನನ್ನನು ಒಮ್ಮೆ ಎತ್ತಿಕೊಳ್ಳೋ.. ಆ ಹಸಿರು ಎಲೆಯನ್ನು ತೆಗೆದು ಕೊಡುವೆ.. ಅಲ್ಲಿ ಇಲ್ಲಿ ಬಿದ್ದ ಎಲೆ ತರಹ ಅಲ್ಲಾ ಕಣೋ ನಿನ್ನ ಪ್ರೀತಿ.. ಅದು ಸದಾ ಹಸಿರಾದ ಉಸಿರಾಗಿಯೇ ಇರುವ ಪ್ರೀತಿ.. "

ಹುಡುಗನ ಕಣ್ಣಲ್ಲಿ ಜೋಗದ ಜಲಪಾತ.. ತಾ ಇಷ್ಟ ಪಟ್ಟ ಹುಡುಗಿ ನದಿಯಾಗಿ ತನ್ನನ್ನು ಸೇರುತ್ತಿದ್ದಾಳೆ ಎಂದು... ಹುಡುಗಿಗೆ ತಾನು ಪ್ರೀತಿಯ ಕಡಲು ಸೇರುತ್ತಿದ್ದೇನೆ ಎನ್ನುವ ಸಂತಸ.. ಅವಳ ಹೊಳಪು ಕಣ್ಣುಗಳು ಇನ್ನಷ್ಟು ಪ್ರಖರಗೊಂಡವು.. ಅವನ ಕಣ್ಣಲ್ಲಿ ಅವಳು ಇನ್ನಷ್ಟು ರೂಪಸಿಯಾಗಿ ಕಂಡರೆ.. ಅವಳಿಗೆ ಅವನ ಹೃದಯ ಹಾಡುತ್ತಿದ್ದ ಹಾಡು ಹೇಳಿಸಿತು "ಈ ಹೃದಯ ಹಾಡಿದೆ ಆಸೆಗಳ ತಾಳದೆ ಹುಡುಕುತ ನಿನ್ನ ಕೂಗಿದೆ ಸುಮವೆ ನಿನಗಿನ್ನೂ ಕೇಳದೆ"

Tuesday, December 8, 2015

ಗೌರಮ್ಮಜ್ಜಿ ಒಂದು ಹಿರಿಯ ತಲೆಮಾರಿನ ಕೊಂಡಿ - ಸಡಿಲವಾಯಿತು

ಕ್ರಿಕೆಟ್ ಆಟದಲ್ಲಿ ಹೀಗಾಗುವುದು ಸಹಜ

ಇಬ್ಬರೂ ಬ್ಯಾಟ್ಸಮನ್ ಅಥವಾ ಇಬ್ಬರು ಬೌಲರ್ ಗಳು ಒಟ್ಟಿಗೆ ಒಟ್ಟಿಗೆ ಜೊತೆಯಾಗಿದ್ದಾಗ ನಡುವಿನ ನಂಟು ಯಾವುದೇ ಗೋಂದು ಕೂಡ ಅಷ್ಟು ಗಟ್ಟಿಯಾಗಿರುವುದಿಲ್ಲ..

ಹಾಸನ ಬಳಿಯ ಕೌಶಿಕದ ಗ್ರಾಮದ ನಮ್ಮ ಅಮ್ಮನ ಸೋದರತ್ತೆ ಅರ್ಥಾತ್ ನಮ್ಮ ಅಜ್ಜ ಅಜ್ಜಿ ಈ ರೀತಿಯ ನಂಟಿಗೆ ಹೆಸರಾಗಿದ್ದರು.

ಸಾಮಾನ್ಯ ಮಾನವನ ಜೀವನದ ಅವಧಿ ಸುಮಾರು ಎಪ್ಪತ್ತು ವರ್ಷಗಳು.. ಆದರೆ ನಮ್ಮ ಅಜ್ಜ ಅಜ್ಜಿ ಸುಮಾರು ಎಪ್ಪತ್ತಕ್ಕು ಹೆಚ್ಚು ವರ್ಷಗಳ ಸುಧೀರ್ಘ ವೈವಾಹಿಕ ಜೀವನ ನಡೆಸಿ, ಮೂರು ವರ್ಷಗಳ ಹಿಂದೆ ಅಜ್ಜ ನಮ್ಮನ್ನು ಈ ಭುವಿಯಲ್ಲಿ ಬಿಟ್ಟು ಹೊರಟರು.

ಸುಧೀರ್ಘ ಬಾಳಿನ ಸಂಗಾತಿ ತಮ್ಮನ್ನು ಅಗಲಿದ ದುಃಖವನ್ನು ನುಂಗಿಕೊಂಡು ತಮ್ಮ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳ ತುಂಬು ಕುಟುಂಬವನ್ನು ನೋಡುತ್ತಾ ಅವರ ಏಳಿಗೆಯನ್ನು ನೋಡುತ್ತಾ ಕಳೆದಿದ್ದ ನಮ್ಮ ಅಜ್ಜಿ ಇಂದು ತಮ್ಮ ಬಾಳ ಬಂಧುವನ್ನು ಸೇರಲು ಸ್ವರ್ಗಾರೋಹಣ ಮಾಡಿದ್ದಾರೆ.

ಶಂಖದ ದೇವರ ಭಟ್ಟರ ಕುಟುಂಬದ ಎರಡನೇ ತಲೆಮಾರಿನ ಒಂದು ಕೊಂಡಿ ಇಂದು ಕಳಚಿಕೊಂಡಿತು.

ಪುಟ್ಟ ವಯಸ್ಸಿನಲ್ಲಿಯೇ ಪಡಬಾರದಷ್ಟು ಕಷ್ಟ ಪಟ್ಟು, ಒಂದು ತಲೆಮಾರಿನ ಇತಿಹಾಸದ ಜೊತೆಯಲ್ಲಿಯೇ ಬದುಕಿದ ಅಜ್ಜಿ, ಅಕ್ಷರಶಃ ಇಂದಿನ ಕಾಲಕ್ಕೆ ಅದ್ಭುತ ಮಾಹಿತಿ ಕೇಂದ್ರವಾಗಿದ್ದರು. ಎಲ್ಲರನ್ನೂ ಆತ್ಮೀಯವಾಗಿ ಹೆಸರಿಡಿದು ಮಾತಾಡಿಸುತ್ತಿದ್ದ ಅಜ್ಜಿ, ಅವರ ಅರಿವಿಗೆ ಬರದ ವಿಷಯ ಇಲ್ಲ ಎಂದರೆ ತಪ್ಪಿಲ್ಲ. ಅಷ್ಟು ನಿಖರವಾದ ಮಾಹಿತಿ ಅವರಲ್ಲಿ ಇರುತ್ತಿತ್ತು.

ಅವರ ಅಗಲಿಕೆ ಸಹಿಲಾರದಷ್ಟು ನೋವು ತರುತ್ತದೆ, ಅವರಿಲ್ಲ ಅನ್ನುವ ನೋವು ಇಂದು ನಾಳೆಗೆ ಮುಗಿಯುವುದಲ್ಲ. ಅದು ನಿರಂತರ.

ಅಜ್ಜಿ ನಿಮ್ಮಂತಹ ತಾಳ್ಮೆ, ಕಷ್ಟ ಸಹಿಷ್ಣುವನ್ನು ಆ ಭಗವಂತ ನಮ್ಮೆಲ್ಲರ ಬದುಕನ್ನು ಹರಸಲು ಈ ಭುವಿಗೆ ಕಳಿಸಿದ್ದ. ನಿಮ್ಮ ಹಾರೈಕೆ, ಆಶೀರ್ವಾದ ಎಂಬತ್ತೆಂಟು ವಸಂತಗಳನ್ನು ಬೆಳಗಿದೆ ಎಂದಾಗ ನಮಗೆಲ್ಲಾ ಒಂದು ಅದ್ಭುತವಾದ ಅನುಭವ ಹೃದಯಕ್ಕೆ ತಾಗುತ್ತದೆ.

ಕಷ್ಟಗಳನ್ನು ಬಂದ ಹಾಗೆ ಸ್ವೀಕರಿಸಿ, ಮನೆ ಮನವನ್ನು ಬೆಳಗುತ್ತಾ, ಆಚಾರ ವಿಚಾರಗಳು ಹೀಗೆ ಇರಬೇಕು ಎಂದು ನಿಮ್ಮ ಪರಿಧಿಯಲ್ಲಿ ಬಂದ ಎಲ್ಲರಿಗೂ ತಿಳಿಸುತ್ತಾ ಬದುಕು ಸಾಗಿಸಿದ ಬಗೆ ನಮಗೆಲ್ಲ ಅತ್ಯಂತ ಗೌರವ ಇದೆ. ಸಂಪ್ರದಾಯ, ಹಬ್ಬ ಹರಿದಿನಗಳ ಆಚರಣೆಯ ಬಗ್ಗೆ ಏನೇ ಅನುಮಾನ ನನ್ನ ಅಮ್ಮನಿಗೆ ಬಂದರೂ, ಇರು ಗೌರಮ್ಮನನ್ನು ಒಮ್ಮೆ ಕೇಳುತ್ತೇನೆ ಎಂದು ಧೈರ್ಯವಾಗಿ ತನ್ನ ಸೋದರತ್ತೆಯ ಬಳಿ ತಮ್ಮ ಅನುಮಾನ ಬಗೆ ಹರಿಯುತ್ತದೆ ಎನ್ನುವಷ್ಟು ಆತ್ಮ ವಿಶ್ವಾಸ ತುಂಬಿ ಕೊಂಡಿದ್ದರ ಹಿಂದೆ, ಈ ಹಿರಿಯ ಅಜ್ಜಿಯ ಬಳಿ ಇದ್ದ ಜ್ಞಾನದ ಅರಿವಾಗುತ್ತದೆ.

ಅಜ್ಜಿ ನಿಮ್ಮ ಕಾಲದಲ್ಲಿ ನಾವು ಇದ್ದೆವು, ನಿಮ್ಮನ್ನು ನೋಡಿದ್ದೆವು, ನಿಮ್ಮ ಆಶೀರ್ವಾದ ಪಡೆದಿದ್ದೆವು, ನಿಮ್ಮ ಆಶೀರ್ವಚನದ ಕವಚ ತೊಟ್ಟಿದ್ದೆವು ಎನ್ನುವ ಭಾವವೇ ನಮಗೆ ಶಕ್ತಿಯನ್ನು ಕೊಡುತ್ತದೆ. ಬಹುಶಃ ಆ ಸೃಷ್ಟಿ ಕರ್ತನಿಗೂ ಈ ರೀತಿಯ  ಶಕ್ತಿ ಬೇಕು ಎನ್ನಿಸುತ್ತದೆ, ಅದಕ್ಕಾಗಿ ತನ್ನ ಬಳಿಗೆ ನಿಮ್ಮನ್ನು ಬರಮಾಡಿಕೊಂಡಿದ್ದಾನೆ.

ತುಂಬಿದ ಬದುಕನ್ನು ನಿರ್ವಹಿಸಿದ ಪರಿಗೆ ನಾವೆಲ್ಲರೂ ಶಿರಸ ನಮಿಸುತ್ತೇವೆ...

ಹೋಗಿ ಬನ್ನಿ ಅಜ್ಜಿ.. ನಿಮ್ಮ ಆಶೀರ್ವಾದ.. ನೀವು ಶ್ರೀಕಾಂತಾ ಎಂದು ಕರೆಯುವ ಆ ದನಿ ನನ್ನ ಕಿವಿಯಲ್ಲಿ ಸದಾ ಗುನುಗುತ್ತಲಿರುತ್ತದೆ..
                                      

ಅಜ್ಜಿ ನಿಮ್ಮ ಬದುಕಿಗೆ ಅಕ್ಷರಗಳಿಂದ ಒಂದು ನಮನ.

Sunday, November 15, 2015

ದಿವ್ಯ ಚೈತನ್ಯ - ತಾಂತ್ರಿಕವಾಗಿಯೇ ನಿಂತಿರುವ ಅದ್ಭುತ ಜ್ಞಾನ @ Malnad College of Engineering Hassan

ಭಕ್ತ ಕುಂಬಾರ ಚಿತ್ರದ ಒಂದು ದೃಶ್ಯ..

ಒಂದು ಮುದುಕಿ ಸಂತೆಯಲ್ಲಿರುವ ಬಾಲಕೃಷ್ಣ ಅವರ ಅಂಗಡಿಗೆ ಬರುತ್ತಾಳೆ... ಮಣ್ಣಿನ ಪಾತ್ರೆಗಳ ಬೆಲೆಯನ್ನು ವಿಚಾರಿಸಿ, ತನ್ನ ಹತ್ತಿರ ಅಷ್ಟೊಂದು ದುಡ್ಡು ಇಲ್ಲ ಎಂದು ಹೇಳಿ ಅಡಿಗೆ ಮಾಡಿಕೊಳ್ಳಲು ಕೆಲವು ಮಣ್ಣಿನ ಪಾತ್ರೆಗಳು ಬೇಕು ಎಂದಾಗ.. ಬಾಲಕೃಷ್ಣ ಆ ಮುದುಕಿಯನ್ನು ಹೀಯಾಳಿಸಿ ದಬ್ಬುತ್ತಾರೆ. ಆಗ ಅಣ್ಣಾವ್ರ ಅಂಗಡಿಯ ಮುಂದೆ ಬೀಳುವ ಆ ಮುದುಕಿಯನ್ನು ಹಿಡಿದು ನಿಲ್ಲಿಸಿ.. ಏನು ಬೇಕವ್ವ ಎಂದು ಕೇಳುತ್ತಾರೆ.

ಪರಿಸ್ಥಿತಿಯನ್ನು ತಿಳಿದ ಅಣ್ಣಾವ್ರು ಕೆಲವು ಪಾತ್ರೆಗಳನ್ನು ನೀಡಿ, ಇದರಲ್ಲಿ ಅನ್ನ ಮಾಡಿಕೋ, ಇದರಲ್ಲಿ ಸಾರು ಮಾಡಿಕೋ ಅಂತೆಲ್ಲಾ ಹೇಳಿ, ಇನ್ನೂ ಬೇಕಾ ಪಾತ್ರೆಗಳು ಎನ್ನುತ್ತಾರೆ. ಆಗ ಆ ಮುದುಕಿ, ಅಷ್ಟೆಲ್ಲಾ ಪಾತ್ರೆ ಕೊಳ್ಳಲು ನನ್ನ ಬಳಿ ಹಣವಿಲ್ಲ ಎಂದಾಗ, ಬೇಡಮ್ಮ, ಸಂತೋಷವಾಗಿ ಇದನ್ನು ತೆಗೆದುಕೊಂಡು ಹೋಗು, ಹಣ ಬೇಡ ಎನ್ನುತ್ತಾರೆ.

ಆ ಮುದುಕಿ, ಅಲ್ಲಪ್ಪಾ ಕಷ್ಟ ಪಟ್ಟು ಇಷ್ಟೆಲ್ಲಾ ಪಾತ್ರೆಗಳನ್ನು ಮಾಡಿದ್ದೀಯ, ಹಾಗೆ ಕೊಟ್ಟರೆ, ನಿನಗೆ ನಷ್ಟ ಆಗುತ್ತದೆ ಎಂದು ಹೇಳಿದ್ದಾಗ, ಅಣ್ಣಾವ್ರ ಮಾತು

"ನಾನೇನು ಮಾಡಿದೆ ಮಣ್ಣು ಕೊಟ್ಟವಳು ಭೂತಾಯಿ, ನೀರು ಕೊಟ್ಟವಳು ಗಂಗಮ್ಮ, ಬೆಂಕಿ ನೀಡಿದವನು ಅಗ್ನಿ, ನನ್ನದೇನಿದೆ ಇಲ್ಲಿ"

ಒಂದು ಭಾನುವಾರ ಹಾಸನದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿಗೆ ನನ್ನ ಚಿಕ್ಕಪ್ಪನ ಜೊತೆಯಲ್ಲಿ ಹೋದಾಗ, ನನ್ನ ಚಿಕ್ಕಪ್ಪ ಅಲ್ಲಿನ ದಿವ್ಯ ಚೈತನ್ಯ ಮಂದಿರದ ಬಗ್ಗೆ ವಿವರವನ್ನು ಕೊಟ್ಟರು.

ಅದನ್ನು ಕೇಳಿದಾಗ ಅಣ್ಣಾವ್ರ ಭಕ್ತ ಕುಂಬಾರ ಚಿತ್ರದ ದೃಶ್ಯ ಹಾಗೆ ಕಣ್ಣ ಮುಂದೆ ಬಂದಿತು.

ತನ್ನ ವಿಸ್ತಾರವನ್ನು ಅರಳಿಸುತ್ತಲೇ ಹೋಗುವ ಆಲದಮರ ಜ್ಞಾನದ ಸಂಕೇತ.. ಅಂಥಹ ಒಂದು ಮಹಾನ್ ವೃಕ್ಷ ಇಂಥಹ ಒಂದು ಸುಂದರ ಆಲೋಚನೆಗೆ ದಾರಿ ಮಾಡಿಕೊಟ್ಟದ್ದು ಮಹತ್ವದ ವಿಷಯ. ಆದರೆ ಎಲ್ಲಾ ಸ್ಪೂರ್ತಿಗಳು ಹಾಗೆ ಅಲ್ಲವೇ ನೀರಿನ ಒರತೆಯ ಹಾಗೆ ಶುರುವಾಗೋದು ಒಂದು ಸಣ್ಣ ಸಣ್ಣ ಕಿಡಿಯಿಂದ.



ಈ ಮಂದಿರದ ಬಗ್ಗೆ ನಾನು ಕೇಳಿದ ವಿವರವನ್ನು ಆದಷ್ಟು ನನ್ನ ನೆನಪಿನ ಶಕ್ತಿಯನ್ನು ಒರೆಗೆ ಹಚ್ಚಿ ಹಂಚಿಕೊಳ್ಳಲು ಪ್ರಯತ್ನ ಪಟ್ಟಿದ್ದೇನೆ.

ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನ ಒಂದು ದೊಡ್ಡ ಆವರಣದ ಒಂದು ಭಾಗದಲ್ಲಿ ಬೃಹದಾಕರಾದ ಅರಳಿ ಮರ ಹಲವಾರು ವರ್ಷಗಳಿಂದ ನೆಲೆ ನಿಂತಿತ್ತು. ಅದನ್ನು ಅನುದಿನವೂ ನೋಡುತ್ತಿದ್ದ ಈ ಕಾಲೇಜಿನಲ್ಲಿ ಸುಮಾರು ಮೂವತ್ತು ವರ್ಷಗಳಿಗಿಂತಲೂ ಹೆಚ್ಚು ಒಡನಾಟ ಹೊಂದಿರುವ ನನ್ನ ಚಿಕ್ಕಪ್ಪನಿಗೆ ಈ ಮರದ ಪರಿವಾರದ ಸಮೀಪದಲ್ಲಿ ಮತ್ತು ಈ ಮರವನ್ನು ಕೇಂದ್ರವಾಗಿಟ್ಟುಕೊಂಡು ಏನಾದರೂ ಮಾಡಬೇಕೆಂಬ ಹಂಬಲಕ್ಕೆ ಬೆನ್ನು ತಟ್ಟಿ ಜೊತೆಯಾಗಿ ನಿಂತವರು ಕಾಲೇಜಿನ ಮುಖ್ಯಾಧಿಕಾರಿಗಳು. ಅಲ್ಲಿಂದ ಶುರುವಾಯಿತು ಜೈತ್ರಯಾತ್ರೆ.

ಈ ಪ್ರದೇಶದಲ್ಲಿ ಆಗಬೇಕಾದ ಧ್ಯಾನ ಮಂದಿರ ಮುಂತಾದ ದೈವಿಕ ಪ್ರೇರಣೆಯ ಜವಾಬ್ಧಾರಿ ಇವರ ಹೆಗಲಿಗೆ ಬಿಟ್ಟು, ತಮ್ಮ ಸಹೋದ್ಯೋಗಿಗಳ ಜೊತೆ ಜೊತೆಯಲ್ಲಿ ಇಡಿ ಕಟ್ಟಡ ನೀಲಿ ನಕಾಶೆಯನ್ನು ಹಾಗು ಹೀಗೆಯೇ ಇರಬೇಕೆಂಬ ಸಿದ್ಧತ ಪಟ್ಟಿಯನ್ನು ತಯಾರಿಮಾಡಿದರು.


ವಿಶೇಷಗಳು ಅಂದರೆ, ಈ ಜಾಗದಲ್ಲಿ ಉಪಯೋಗವಾದ ಪ್ರತಿ ವಸ್ತುವು ನೈಸರ್ಗಿಕವಾಗಿ ಬಂದ ಪ್ರಕೃತಿದತ್ತವಾದದ್ದು. ಭೂ ಮಾಲಿನ್ಯ, ಜಲಮಾಲಿನ್ಯ, ವಾತವಾರಣಕ್ಕೆ ಯಾವುದೇ ಹಾನಿಯಾಗುವಂತಹ ವಸ್ತುಗಳನ್ನು ಬಳಸದೆ ಇರುವುದು. ಕಟ್ಟಡಕ್ಕೆ ಅಡಿಪಾಯ ತೆಗೆದಾಗ ಸಿಕ್ಕ ಮಣ್ಣನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿ, ಆ ಮಣ್ಣಿನಿಂದಲೇ ಇಟ್ಟಿಗೆಗಳನ್ನು ತಯಾರಿಸಿ ಕಟ್ಟಿರುವುದು ವಿಶೇಷ.


ಇಲ್ಲಿನ ಬಾಗಿಲುಗಳು, ಕಿಟಕಿಗಳು, ಕಂಬಗಳು ಹಿಂದೊಮ್ಮೆ ಅನೇಕ ಮನೆ ಮನಗಳನ್ನು ಬೆಳಗಿದ ಪುರಾತನ ಆದರೆ ಶಿಥಿಲಾ ಅವಸ್ಥೆಯಲ್ಲಿರುವ ಮನೆಗಳಿಂದ ಸಂಗ್ರಹ ಮಾಡಿದ ಕಡೆಯಿಂದ ಹುಡುಕಿ ಹುಡುಕಿ ತಂದು ಜೋಡಿಸಿದ್ದಾರೆ.

ಆ ಜಾಗದಲ್ಲಿ ಸಿಕ್ಕ ವಸ್ತುಗಳಿಂದ, ಅದೇ ಜಾಗದಲ್ಲಿ ಒಂದು ಭವ್ಯ ಮಂದಿರವನ್ನು ಧ್ಯಾನ ಮಂದಿರವನ್ನು ನಿರ್ಮಾಣ ಮಾಡಿ, ಅನೇಕ ಅನೇಕ ಸಮಾನ ಮನಸ್ಕರಿಗೆ ಒಂದು ನೆಮ್ಮದಿ ತಾಣವನ್ನು ಮಾಡಿದ್ದಾರೆ.

ಮಂದಿರದ ಸುತ್ತಲೂ ಕಣ್ಣಾಡಿಸಿದರೆ ಕಾಣುವುದು, ಅದ್ಭುತ ಬರಹಗಳ ಫಲಕಗಳು ಕಣ್ಣಿಗೆ ಮನಸ್ಸಿಗೆ ತಂಪು ನೀಡುತ್ತದೆ. ನಡೆಯುತ್ತಾ ಹೋದ ಹಾಗೆ ನೆಲ ಹಾಸಿನ ಕಲ್ಲುಗಳ ಮೇಲೆ ಸುಂದರ ಚಿತ್ರಗಳನ್ನು ಮೂಡಿಸಿದ್ದಾರೆ. ನೋಡುತ್ತಾ ಹೋದ ಹಾಗೆ  ಮನಸ್ಸಿಗೆ ಆಹ್ಲಾದ ನೀಡುವ ಸುಂದರ ವಾತಾವರಣ ಇದು.


ಒಂದು ಸುತ್ತು ಬಂದು ಬಂದು ಧ್ಯಾನ ಮಂದಿರದ ಒಳಗೆ ಕಾಲಿಟ್ಟರೆ ಒಂದು ಅದ್ಭುತ ವಿನ್ಯಾಸ ಕಣ್ಣಿಗೆ ಕಂಡಿತು.

ಯಾವುದೇ ವಿಷಯವನ್ನು ಅರಿಯಬೇಕಾದರೆ ಆಳಕ್ಕೆ ಇಳಿಯಬೇಕು ಎನ್ನುತ್ತದೆ ಮಾತು, ಅದಕ್ಕೆ ಬಲವಾದ ಅಡೆ ತಡೆ ಬಂದರೂ ಲೆಕ್ಕಿಸದೆ ದಾಟಿ ಹೋಗಿ ಆಳಕ್ಕೆ ಇಳಿಯಬೇಕು ಎನ್ನುತ್ತದೆ ಇನ್ನೊಂದು ಮಾತು. ಅದೇ ಮಾತುಗಳನ್ನು ನೆನಪಿಸುವಂತೆ, ಧ್ಯಾನ ಮಂದಿರದ ದ್ವಾರ ಗಟ್ಟಿ ಮುಟ್ಟಾಗಿದೆ, ದಪ್ಪನಾಗಿ ಕಿರ್ರೆಂದು ಸದ್ದು ಮಾಡುವ ತಲೆಮಾರುಗಳನ್ನು ಕಂಡ ಮನೆ ಬಾಗಿಲು ನಮ್ಮನ್ನು ಸ್ವಾಗತಿಸುತ್ತದೆ.

ಒಂದಷ್ಟು ಮೆಟ್ಟಿಲುಗಳು ಇಳಿದಮೇಲೆ ಮತ್ತೆ, ಇನ್ನೊಂದಷ್ಟು ಮೆಟ್ಟಿಲು ಏರಿದ ಮೇಲೆ ಸಿಗುವುದೇ ಧ್ಯಾನ ಮಂದಿರ. ಆಳಕ್ಕೆ ಇಳಿಯಬೇಕು, ಇಳಿದಮೇಲೆ ವಿಷಯಗಳ ಮೇಲೆ ಮನನ ಮಾಡುತ್ತಾ ಜ್ಞಾನದ ಮಟ್ಟಕ್ಕೆ ಮೇಲಕ್ಕೆ ಇರಬೇಕು ಎನ್ನುವ ತತ್ವ ಹೊಂದಿರುವಂತೆ ಭಾಸವಾಯಿತು ನನಗೆ.


ಈ ಧ್ಯಾನ ಮಂದಿರ ತ್ರಿಭುಜಾಕೃತಿಯಲ್ಲಿ ರಚನೆಯಾಗಿದೆ. ಇಂಥಹ ಆಕೃತಿಯಲ್ಲಿ ಧ್ಯಾನ ಮಾಡುವಾಗ ಯಾವುದೇ ರೀತಿಯ ಭಂಗ ಅಥವಾ ಧ್ಯಾನವನ್ನು ಮಾಡುವಾಗ ಮನಸ್ಸು ಧನಾತ್ಮಕ ವಸ್ತುಗಳ ಬಗ್ಗೆ ಮಾತ್ರ ಗಮನ ಮೂಡುವಂತೆ ವಿನ್ಯಾಸಗೊಳಿಸಲಾಗಿದೆ. ಇಲ್ಲಿ ಒಂದೈದು ನಿಮಿಷ ಕೂತು ಮನಸ್ಸನ್ನು ಕೇಂದ್ರಿಕರಿಸಿದರೆ ಸಿಗುವ ಅನುಭವ ಅನನ್ಯ.

ಹಿಂದೆ ಅರಮನೆಗಳಲ್ಲಿ ಗುಪ್ತ ಮಾರ್ಗ ಅಥವಾ ತುರ್ತು ಪರಿಸ್ಥಿತಿ ಮಾರ್ಗ ಇರುವ ಹಾಗೆ, ಈ ಧ್ಯಾನ ಮಂದಿರದಲ್ಲಿ ಅದೇ ರೀತಿಯ ಮಾರ್ಗವನ್ನು ವಿನ್ಯಾಸ ಮಾಡಿದ್ದರೆ. ಒಂದು ರೀತಿಯಲ್ಲಿ ವಿನೂತನ ಅನ್ನಿಸುತ್ತದೆ ನನಗೆ.

ಮಾಡಿಗೆ ಹೊದ್ದಿಸಿರುವ ಹೆಂಚನ್ನು, ಸುಲಭವಾಗಿ ಒಂದಕ್ಕೊಂದು ಹೊಂದಿಕೊಳ್ಳುವ ಹಾಗೆ ರಚಿಸಿ, ಹೊದಿಸುವ ಕೆಲಸವನ್ನು ಸುಲಭಮಾಡಿಕೊಂಡಿದ್ದಾರೆ. ಆಧುನಿಕ ತಂತ್ರಜ್ಞಾನಕ್ಕಿಂತಲೂ, ನಮ್ಮಲೇ ಹುಟ್ಟಿ ಬೆಳೆದ ತಂತ್ರಜ್ಞಾನವನ್ನು ವಿಶಿಷ್ಟವಾಗಿ ಉಪಯೋಗಕ್ಕೆ ಅಳವಡಿಸಿಕೊಂಡಿರುವ ವಿನೂತನ ಪ್ರಯತ್ನ ಇದು.

ಧ್ಯಾನ ಮಂದಿರದಿಂದ ಹೊರಗೆ ಬಂದೆ ಪಕ್ಕದಲ್ಲಿಯೇ ಕಾಣಸಿಗುವುದು, ಪ್ರವಚನ ಮಂದಿರ. ಇಲ್ಲಿ ಗಮನ ಸೆಳೆಯುವುದು ಹಳ್ಳಿಗಳಲ್ಲಿ ಸಿಗುವ ತೊಟ್ಟಿ ಮನೆ ವಿನ್ಯಾಸ. ಮನೆ ಹೊಕ್ಕ ಒಡನೆ ಒಂದು ಸುಂದರ ಕಂಬಗಳ ಸಾಲುಗಳು, ಅದರಲ್ಲೂ ವಿಶಿಷ್ಟ, ಜೊತೆ ಜೊತೆ ಕಂಬಗಳು ಒಂದೇ ರೀತಿಯಲ್ಲಿ ಇರುವಂತೆ ನೋಡಿಕೊಳ್ಳಲಾಗಿದೆ. ಕಿಟಕಿಗಳು ಜಾಲಂದ್ರಗಳನ್ನು ಹೊಂದಿದ್ದು, ಕಿಟಕಿಯನ್ನು ತೆಗೆಯಬೇಕಾದರೆ ಪಕ್ಕಕೆ ಜರುಗಿಸುವಂಥಹ ಸುಂದರ ಜೋಡಣೆ ಇದು.

ಸುತ್ತಲೂ, ಗೋಡೆಗಳ ಮೇಲೆ, ಈ ಧ್ಯಾನ ಮಂದಿರ ಮೂಡಿದ ರೀತಿಯನ್ನು ಹಂತಹಂತವಾಗಿ ವಿವರಗಳನ್ನು ಚಿತ್ರಗಳ ಸಮೇತ ಹಂಚಿಕೊಂಡಿದ್ದಾರೆ.

ಒಂದು ಪುಟ್ಟ ಕೊಳ, ಅದರ ಮಧ್ಯೆ ಅರಳಿರುವ ಹೂವು, ಇದನ್ನು ನೋಡಿದಾಗ ಸಿಗುವ ಆನಂದ ಆಹಾ.... !


ಪ್ರವಚನ ಮಂದಿರ ದೊಡ್ಡದಾಗಿಯೇ ಇದೆ, ಇದಕ್ಕೆ ಅಳವಡಿಸಿರುವ ಧ್ವನಿವರ್ಧಕಗಳು, ಸೂರ್ಯ ರಶ್ಮಿಯನ್ನು ಸಮರ್ಪಕವಾಗಿ ಬಳಗಿಸಿಕೊಂಡು, ಹಗಲು ಹೊತ್ತಿನಲ್ಲಿ ವಿದ್ಯುತ್ ಬಳಕೆಗೆ ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ವಿನ್ಯಾಸ ಮಾಡಿರುವ ಉತ್ತಮ ಯೋಜನೆ ಇದು.

ಎದುರಲ್ಲಿಯೇ ಒಂದು ದೊಡ್ಡದಾದ ಕೊಳ, ಮೆಟ್ಟಿಲು ಮೆಟ್ಟಿಲು ಕಟ್ಟಿ, ಅದರಲ್ಲಿ ನೀರು ತುಂಬಿದಾಗ ಆ ಕೊಳವನ್ನು ನೋಡುವುದೇ ಒಂದು ಆನಂದ.

ಸಮಯದ ಅಭಾವದಿಂದ ಹೆಚ್ಚು ಸಮಯ ಕಳೆಯಲಾಗಲಿಲ್ಲ, ಆದರೆ ಕಳೆದ ಸಮಯವನ್ನು ಹಾಗೆ ಸುಮ್ಮನೆ ಕೇಳಿದಾಗ ಸಮಯ ಹೇಳಿದ ಮಾತು,

ಎಲ್ಲಿ ನನ್ನನ್ನು ಉತ್ತಮವಾಗಿ ಉಪಯೋಗಿಸುತ್ತಾರೋ,
ಎಲ್ಲಿ ಇರುವ ಸೌಕರ್ಯವನ್ನು ಉತ್ತಮವಾಗಿ ಉಪಯೋಗಿಸಿಕೊಳ್ಳುತ್ತಾರೋ
ಎಲ್ಲಿ ಪ್ರಕೃತಿದತ್ತವಾದ ಸಂಪತ್ತನ್ನು ಹಾಳು ಮಾಡದೆ ಸಮರ್ಪಕವಾಗಿ ಉಪಯೋಗಿಸಿಕೊಳ್ಳುತ್ತಾರೆಯೋ
ಎಲ್ಲಿ ಭೂತಾಯಿಗೆ ನೋವಾಗದಂತೆ, ಅವಳ ಒಡಲಲ್ಲಿರುವ ಸಂಪತ್ತನ್ನು ಅಷ್ಟೇ ಪ್ರೀತಿಯಿಂದ ಉಪಯೋಗ ಮಾಡಿದ್ದಾರೆಯೋ

ಅಂಥಹ ಸುಂದರ ಪರಿಸರದಲ್ಲಿ ಸಮಯವೇ ಸಮಯವನ್ನು ಕಳೆಯಲು ಇಷ್ಟಪಡುತ್ತದೆ ಎಂದು ಹೇಳಿತು..
**********
ಚಿಕ್ಕಪ್ಪ ಇಂಥಹ ಒಂದು ಸುಂದರ ಪರಿಸರವನ್ನು ನಿಮ್ಮ ಅನುಭವ ಪಾಕದಲ್ಲಿ ಅದ್ದಿ ತೆಗೆದು, ಹಲವಾರು ಸಮಾನ ಮನಸ್ಕರ ಜೊತೆಗೂಡಿ  ಹತ್ತಾರು ಮಂದಿಗೆ ಉಪಯೋಗವಾಗುವಂಥಹ ದಿವ್ಯ ಚೈತನ್ಯಕ್ಕೆ ಚೈತನ್ಯ ತುಂಬುವ ಈ ಮಂದಿರವನ್ನು ನಿರ್ಮಿಸಿದ ಎಲ್ಲಾ ಸಹೃದಯ ಚೇತನದ ಮಾಲೀಕರಿಗೆ ನನ್ನ ಶಿರಸಾ ನಮಸ್ಕಾರಗಳು.ಹಾಗೆಯೇ ಈ ದಿವ್ಯ ಚೈತ್ಯನ್ಯ  ಬೆಳೆಯಲಿ ಬೆಳಗಲಿ ಎಂದು ಎಲ್ಲರ ಜೊತೆಯಲ್ಲಿ ನಾನು ಆ ದಿವ್ಯ ಚೈತನ್ಯಕ್ಕೆ ನಮಸ್ಕಾರಗಳನ್ನು ಸಲ್ಲಿಸುತ್ತೇನೆ.


Tuesday, October 6, 2015

ದೇವರನ್ನು ಹತ್ತಿರದಿಂದ ಕಂಡ ಕ್ಷಣ.....!

ಅಣ್ಣಾವ್ರ ಚಲಿಸುವ ಮೋಡಗಳು ಚಿತ್ರದಲ್ಲಿ ಅಂಬಿಕ ನೂರೆಂಟು ಪಾಡು ಪಟ್ಟು ಅದರಿಂದ ಬಿಡುಗಡೆಗೊಂಡು ಮನೆಗೆ ಹೋಗುವಾಗ ಅಣ್ಣಾವ್ರು ಹೇಳುತ್ತಾರೆ, "ಜೀವನದಲ್ಲಿ ಕಷ್ಟಗಳು ಚಲಿಸುವ ಮೋಡಗಳ ಹಾಗೆ ಬರುತ್ತವೆ ಹೋಗುತ್ತವೆ.. ".

ಇನ್ನೊಂದು ಚಿತ್ರ ... ಈ ಕಂಬದಲ್ಲಿರುವನೆ, ಈ ಕಂಬದಲ್ಲಿರುವನೆ ಎಂದು ಅಣ್ಣಾವ್ರು ಭಕ್ತ ಪ್ರಹ್ಲಾದದಲ್ಲಿ ಕೇಳಿದಾಗ ಸಿಗುವ ಉತ್ತರ "ಎಲ್ಲೆಲ್ಲಿಯೂ ಇರುವನು". 

ಹೌದು ಇಂದು ನಾ ಆ ಕರುಣಾಮಯಿಯನ್ನು ಹತ್ತಿರದಿಂದ ಬಲು ಹತ್ತಿರದಿಂದ ಕಂಡು ಆಲಂಗಿಸಿಕೊಂಡ ಭಾವ ಸಿಕ್ಕಿತು,  ನಾ ಬರೆಯೋಣ ಅಂದ್ರೆ, ಇಲ್ಲ ನಾನೆ ಹೇಳ್ತೀನಿ ಅಂತ ನನ್ನ ಕಾರು ಹಠ ಮಾಡ್ತಿದೆ. ಹಾಗಾಗಿ ಮೊದಲಬಾರಿಗೆ ನಾ ಹೇಳೋದು ಬಿಟ್ಟು ನನ್ನ ಕಾರು ಹೇಳುವ ಕಥೆ ಕೇಳಿ. 

ಇಬ್ಬರಿಗೂ ಆ ಕಾಣದ ಶಕ್ತಿಯನ್ನು ಅಗೋಚರವಾದ ಕಣ್ಣುಗಳಿಂದ ನೋಡಿದ ಸಾರ್ಥಕ ಭಾವ. ಆ ಭಾವವೂ ಕೆಲವು ಕಡೆ ಗಂಭೀರತೆ ಇಂದ ಕೂಡಿದ್ದರೆ, ಇನ್ನು ಕೆಲವು ಕಡೆ ತರಲೆಗಳಿಂದ ಕೂಡಿದೆ. 

ಮೋಡಗಳಲ್ಲಿ, ಮೋಡಗಳ ಮಧ್ಯದಲ್ಲಿ, ಗಿರಿಶೃಂಗಗಳಲ್ಲಿ, ದೇವಾಲಯಗಳಲ್ಲಿ, ಪರ್ವತದ ತಪ್ಪಲಿನಲ್ಲಿ ಕಾಣುವ ಆ ಶಕ್ತಿ, ಇಂದು ನಮ್ಮಿಬ್ಬರನ್ನು ಹಾಗೂ ಜೊತೆಯಲ್ಲಿ ಇದ್ದ ಕೆಲವು ಗಾಡಿಗಳನ್ನು ಆಲಂಗಿಸಿಕೊಂಡು ರಕ್ಷಣೆ ನೀಡಿದ ಪರಿಗೆ ಆ ದೇವನಿಗೆ ಒಂದು ದೊಡ್ಡ ನಮಸ್ಕಾರ ಮತ್ತು ಧನ್ಯವಾದಗಳು. 

ಆ ಕಾಣದ ದೈವಕ್ಕೆ ಈ ಲೇಖನ ಅರ್ಪಿತ. 

ಇನ್ನು ಮುಂದೆ ಯಾರಾದರೂ ದೇವರನ್ನು ನೋಡಿದ್ದೀಯ ಎಂದರೆ.. ನನ್ನ ಉತ್ತರ ಇಲ್ಲ... ನೋಡಿಲ್ಲ ಆದರೆ ಆ ದೇವನ ಪ್ರೀತಿಯ ಅಪ್ಪುಗೆಯ ಸುಖವನ್ನು ಅನುಭವಿಸಿದ್ದೇನೆ ಎಂದು ಎದೆ ತಟ್ಟಿಕೊಂಡು ಹೇಳುತ್ತೇನೆ.. !!!

ಶಿರಬಾಗಿ ನಮಿಪೆ!!!!

************
ನಮಸ್ಕಾರ ಗೆಳೆಯರೇ.. ನನ್ನನ್ನು ಎರಡನೇ ಮಗಳು ಎಂದು ಕರೆದ ನನ್ನ ಮಾಲೀಕನ ಮೇಲೆ ನನಗೆ ಅಸಾಧಾರಣ ಪ್ರೀತಿ, ವಿಶ್ವಾಸ. ನನ್ನನ್ನು ಅವನು (ಕ್ಷಮೆ ಇರಲಿ,  ನಮ್ಮಿಬ್ಬರ ಮಧ್ಯೆ ಗೆಳೆಯರ ಭಾವ ಇರೋದರಿಂದ ಏಕವಚನ ಉಪಯೋಗಿಸುವೆ) ಪ್ರೀತಿಯಿಂದ ಸವರಿದಾಗ, ಮುದ್ದಾಡಿದಾಗ, ಎಲ್ಲಿ ನನಗೆ ನೋವಾಗುತ್ತೋ ಎನ್ನುವ ಆತಂಕ ವ್ಯಕ್ತ ಪಡಿಸುವಾಗ, ನನಗೆ ಅವನ ಮೇಲೆ ಇನ್ನಷ್ಟು ಅಭಿಮಾನ ಹೆಚ್ಚಾಗುತ್ತದೆ. 

ಇದುವರೆಗೂ ಅವನು ನನ್ನನ್ನು ಕರೆದೊಯ್ಯದ ಸ್ಥಳವಿಲ್ಲ, ಪ್ರತಿ ಸ್ಥಳದಲ್ಲೂ ನನ್ನ ಜೊತೆಗೊಂದು ಚಿತ್ರ, ಅದಕ್ಕೊಂದು ಉಪಶೀರ್ಷಿಕೆ, ಮತ್ತೆ ಎಲ್ಲರೆದುರಿಗೆ ನನ್ನ ಹೊಗಳುವುದು ಇದು ಆವ ಮಾಡುವ ಪ್ರೀತಿಯ ಕಾಯಕ. ಮನೆಯೊಳಗೆ ನಿಲ್ಲಿಸಲು ಜಾಗವಿಲ್ಲದ್ದರಿಂದ ನನಗೆ ಮನೆಯ ಹೊರಗೆ ಜಾಗ, ಆದರೆ ಅವನ ಮನದಲ್ಲಿ ಮತ್ತು ಅವನ ಮನೆಯವರ ಮನದಲ್ಲಿ ಸದಾ ವಿರಾಜಿತ ನಾನು. 

ಸರಿ ಇದಿಷ್ಟು ಟಿಪ್ಪಣಿ ಆಯಿತು. ಮುಖ್ಯ ವಿಷಯ ಅಂದರೆ.. ಇವತ್ತು ಕಚೇರಿಗೆ ಕೆಲವು ಸಾಮಗ್ರಿಗಳನ್ನು ಒಯ್ಯಬೇಕಾದ್ದರಿಂದ, ನನ್ನನ್ನು ಕರೆದ. ನಾ ಯಾವಾಗಲೂ ಸಿದ್ಧವಾಗಿಯೇ ಇರುತ್ತೇನೆ. ಮನೆಯ ಬಳಿಯ ಬಂಕಿನಲ್ಲಿ ನನ್ನ ಹೊಟ್ಟೆಗೆ ಲಘು ಉಪಹಾರ ಹಾಕಿಸಿದ, ಸಂತೃಪ್ತಿಯಿಂದ ಒಮ್ಮೆ ಡರ್ ಅಂತ ತೇಗಿದೆ, ನಿಧಾನವಾಗಿ ತಲೆ ಸವರಿದ. ನಾ ಪೀಂ ಪೀಂ ಎಂದೇ. ಅವ ಹಲ್ಲು ಬಿಟ್ಟ, ಆರಾಮಾಗಿ ಅವನ ಆಫೀಸ್ ಕಡೆ ಇಬ್ಬರೂ ಹೊರಟೆವು. ಅವನ ಇಷ್ಟವಾದ ಅಣ್ಣಾವ್ರ ಹಾಡುಗಳನ್ನು ನಾ ಬಿತ್ತರಿಸುತ್ತಿದ್ದೆ, ಅವನ ಮುಖದಲ್ಲಿ ಅದೇನು ಖುಷಿ ಅಣ್ಣಾವ್ರ ಹಾಡು ಮತ್ತು ಹಳೆ ಹಾಡುಗಳು ಬಂದಾಗ. ಬಿಡಿ ಅದರ ಬಗ್ಗೆ ಒಂದು ಪುಸ್ತಕವನ್ನೇ ಬರೆಯಬಹುದು. 

ಆರಾಮಾಗಿ ಇಬ್ಬರೂ ಸಾಗುತ್ತಿದ್ದೆವು, ಇನ್ನೇನು ಹತ್ತು ನಿಮಿಷ, ಕಚೇರಿಗೆ ತಲುಪಿಯೇ ಬಿಡುತ್ತಿದ್ದೆವು, ಇವತ್ತು ಯಾಕೋ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಅತಿಯಾಗಿತ್ತು , ಇವನು ಎಂದಿಗೂ ಅತಿ ವೇಗ, ಅಥವಾ ಪೇಂ ಪೇಂ ಅಂತ ಶಬ್ದ ಮಾಡುವ ಜಾಯಮಾನದವನಲ್ಲ, ಹತ್ತು ನಿಮಿಷ ಅಲ್ಲದೆ ಹೋದರೆ ಹದಿನೈದು ನಿಮಿಷ ಆಗಲಿ ಎನ್ನುವವನು. 

ಅಣ್ಣಾವ್ರ ಶಂಕರ್ ಗುರು ಚಿತ್ರದ "ಏನೇನೂ ಆಸೆ" ಹಾಡು ತನ್ನ ಪೆನ್ ಡ್ರೈವ್ ಇಂದ ಬರುತ್ತಿತ್ತು. ಅವನ ಇಷ್ಟವಾದ ಹಾಡು ಅದು. ಅದರಲ್ಲಿನ ಕೆಲವು ವಾದ್ಯದ ತುಣುಕುಗಳು ಬಲು ಇಷ್ಟ ಅವನಿಗೂ ಮತ್ತು ನನಗೂ. 

ಅಚಾನಕ್ ನನ್ನ ಮುಂದೆ ಹೋಗುತ್ತಿದ್ದ ಒಂದು ದೊಡ್ಡ ಗಾಡಿ ಕಿರ್ ಅಂತ ಶಬ್ದ ಮಾಡಿ ನಿಲ್ಲುವ ಸೂಚನೆ ಕೊಟ್ಟಿತು. ಸುಮಾರು ಹತ್ತು ಅಡಿ ದೂರ ಇತ್ತು ಮುಂದಿನ ಗಾಡಿ, ಶ್ರೀ ಸರಿಯಾದ ಸಮಯಕ್ಕೆ ಬ್ರೇಕ್ ಒತ್ತಿದ, ಸುಮಾರು ಏಳೆಂಟು ಕಿಮಿ ವೇಗದಲ್ಲಿ ನಾನು ಸಾಗುತ್ತಿದ್ದೆ, ಅಚಾನಕ್ ಹಿಂದಿನಿಂದ ಒಂದು ದೊಡ್ಡ ಸಪ್ಪಳವಾಯಿತು, ಅರೆ ಇದೇನಪ್ಪ ಎಂದು ನನಗೆ ಅರಿವಾಗುವಷ್ಟರಲ್ಲಿ ಹುಂಡೈ ಐ ೧೦ ಕಾರು ನನ್ನ ಬೆನ್ನಿಗೆ ಬಡಿದೆ ಬಿಟ್ಟಿತ್ತು, ಜೊತೆಯಲ್ಲಿ ಅದರ ವೇಗದಿಂದ ನನ್ನ ಮುಖ ಸುಮಾರು ಹತ್ತು ಅಡಿ ದೂರವಿದ್ದ ಇನ್ನೊಂದು ದೊಡ್ಡ ಗಾಡಿಗೆ ಬಡಿದು, ನನ್ನ ಮುಖ ಜಜ್ಜಿ ಹೋಯ್ತು. ನನಗೆ ನೋವಾಗಿದೆ ಎಂದು ನನಗೆ ಅರಿವಾಗುತ್ತಲೇ ಇಲ್ಲ, ಯಾಕೆಂದರೆ ಅಣ್ಣಾವ್ರ ಶಂಕರ್ ಗುರು ಹಾಡು ಬರುತ್ತಿತ್ತು. 

ಶ್ರೀ ಸುಮಾರು ಹತ್ತು ಸೆಕೆಂಡ್ ಹಾಡನ್ನೇ ಕೇಳುತ್ತಾ ಕೂತಿದ್ದ, ಅವನಿಗೂ ಏನಾಯಿತು ಎಂದು ಅರಿವಾಗಲಿಲ್ಲ, ನನಗೆ ನೋವಾಗಿತ್ತು, ಆದರೆ ಹಾಡು ನನ್ನ ನೋವನ್ನು ಮರೆಸಿತ್ತು. ಶ್ರೀ ಬಾಗಿಲು ತೆರೆಯ ಹೋದ, ತೆಗೆಯಲಾಗುತ್ತಿಲ್ಲ, ಅವಾಗ ಅರಿವಾಯಿತು ಅರೆ ಏನೋ ತೊಂದರೆ ಆಗಿದೆ. ನಿಧಾನವಾಗಿ ಹೊರಗಿಳಿದ ಶ್ರೀ, ಆ ಕಡೆ ನೋಡಿದರೆ, ಅರೆ ಅರೆ ಇದೇನಿದು ಸಾಲಾಗಿ ನನ್ನ ಬಂಧು ಬಾಂಧವರು ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸಿದ್ದಾರೆ. 

 ಕೊಂಚ ಹೊತ್ತಿನ ನಂತರ ಅರಿವಾಗಿದ್ದು, ನಮ್ಮ ಮುಂದೆ ಒಂದೆರಡು ವಾಹನಗಳ ಮುಂದೆ, ಒಂದು ನಾಯಿ ಅಡ್ಡ ಹೋಗಿತ್ತಂತೆ, ಅದನ್ನು ತಪ್ಪಿಸಲು, ಮುಂದಿದ್ದ ಚಾಲಕ ವಾಹನವನ್ನು ಅತ್ತಿತ್ತಾ ಎಳೆದಾಡಿದ್ದಾನೆ, ಆ ವಾಹನ ದಟ್ಟಣೆಯಲ್ಲಿ ಹಿಂದಿದ್ದ ವಾಹನ ಚಾಲಕರಿಗೆ ಗಲಿಬಿಲಿಯಾಗಿ ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನಗಳನ್ನು ಚಲಿಸಿದ್ದಾರೆ. ನನ್ನ ಮುಂದಿದ್ದ ಗಾಡಿ ಮುಂದೆ ಆಗುವ ತೊಂದರೆಯನ್ನು ಅರಿತು, ನಿಧಾನ ಮಾಡಿದ್ದಾನೆ, ಅದನ್ನು ಕಂಡ ನಾನು ನಿಧಾನಿಸಿದೆ, ಹಾಗೆಯೇ ನನ್ನ ಹಿಂದಿದ್ದ ಚಾಲಕನು ನಿಧಾನಿಸಿದ, ಆದರೆ ಅದರ ಹಿಂದೆ ಇದ್ದ ಲಾರಿ ಚಾಲಕ ಅದು ಯಾವ ಗುಂಗಿನಲ್ಲಿದ್ದನೋ, ಡಿಕ್ಕಿ ಹೊಡೆದೇ ಬಿಟ್ಟಿದ್ದ, ಅದರ ರಭಸಕ್ಕೆ ನನ್ನ ಹಿಂದಿದ್ದ ಗಾಡಿ ನನಗೆ ಬಡಿಯಿತು, ನಾನು ಮುಂದೆ ನಿಂತ ಗಾಡಿಗೆ ಗುದ್ದಿದೆ. 

ಸರಿ, ಎಲ್ಲಾ ಕಡೆ ನಡೆಯುವಂತೆ, ಜನರು ತಮ್ಮ ತಮ್ಮ ಮೊಬೈಲ್ ಗಳಿಂದ ಫೋಟೋ ತೆಗೆದದ್ದು ಆಯಿತು, ಅಷ್ಟರಲ್ಲಿ ಅರಕ್ಷಕ ಠಾಣೆಯಿಂದ ಸಿಬ್ಬಂಧಿ ಬಂದು ಮಹಜರ್ ಮಾಡಿ, ತಮ್ಮ ಠಾಣೆಗೆ ಬನ್ನಿ ಅಲ್ಲಿ ಪ್ರಥಮ ತನಿಖಾ ವರದಿಯನ್ನು ಪಡೆದುಕೊಂಡು ಹೋಗಿ ಎಂದರು. 

ಶ್ರೀ ತನ್ನ ಆಫೀಸ್ ಚಾಲಕನಿಗೆ ಕೇಳಿದ, ಅವರು ಹೇಳಿದ್ದು, ಸರ್ ಹೋಗಬಹುದು ನಿಧಾನವಾಗಿ ಹೋಗಿ ಎಂದರು. ಸರಿ ಶ್ರೀ ನಿಧಾನವಾಗಿ ಹೊರಟ ಠಾಣೆಗೆ.  ಅಲ್ಲಿ ಅವನಿಗೆ ಅನಿಸಿದ್ದು ಅವನ ಮಾತಲ್ಲೇ ಕೇಳಿ. 

"ಲೋ ಗುರು, ಸಾರಿ ಕಣೋ, ಹೀಗಾಯಿತು, ಏನು ಮಾಡೋದು. ಇದು ಯಾರ ತಪ್ಪು ಅಲ್ಲ ಆದರೆ ಎಲ್ಲರೂ ಅನುಭವಿಸುವಂತೆ ಆಯಿತು"

"ನೋಡು ಶ್ರೀ, ನೀ ಯಾವಾಗಲೂ ಭಗವಂತನನ್ನು ನಂಬಿದ್ದೀಯ, ನೀ ನಂಬಿದ ದೈವ ನಿನ್ನ ರಕ್ಷಿಸದೇ ಬಿಡುವುದಿಲ್ಲ,  ನೋಡು ಲಾರಿ ಬದಲು ಇನ್ನೂ ದೊಡ್ಡ ಗಾಡಿ ಇದ್ದಿದ್ದರೆ, ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಗುತ್ತಿತ್ತು ಆಲ್ವಾ." 

"ಅದು ಸರಿ ನನಗೆ ಇನ್ನೂ ನಂಬಲಿಕ್ಕೆ ಆಗದ ವಿಷಯ ಅಂದರೆ"

೧) ನಾ ಮುಂದೆ ಇದ್ದ ಗಾಡಿಗೆ ಡಿಕ್ಕಿ ಹೊಡೆದಾಗಾ ನೀ ಗಾಬರಿಗೊಳ್ಳಲಿಲ್ಲ 
೨) ಅಣ್ಣಾವ್ರ ಹಾಡನ್ನು ಕೆಲ ಕ್ಷಣಗಳು ಕೇಳುತ್ತಾ ಕುಳಿತೆ 
೩) ನಾ ನಿನ್ನಿಂದ ಹೊರ ಬಂದ ಮೇಲೇ ಕೆಲವು ಚಿತ್ರಗಳನ್ನು ತೆಗೆದೇ, ಆದರೆ ನಿನ್ನ ಮೊಗದಲ್ಲಿ ಆತಂಕವಿರಲಿಲ್ಲ 
೪) ನನ್ನ ಜೊತೆ ಬಂದ ಎಷ್ಟೋ ಪ್ರವಾಸಗಳ ರೀತಿಯಲ್ಲಿ ನಾನು ರಸ್ತೆಯಲ್ಲಿ ಓಡಾಡುತ್ತಾ ಇದ್ದೆ , ನೀ ಸುಮ್ಮನೆ ಒಂದು ಕಡೆ ನಿಂತಿದ್ದೆ 
೫) ನಿನ್ನೆಲ್ಲಾ ಶಕ್ತಿ ಉಪಯೋಗಿಸಿ ನಿಯಂತ್ರಿಸಿಕೊಂಡಿದ್ದೆ ನಿನ್ನ ದೇಹಕ್ಕೆ ಕೊಂಚ ಗಾಯವಾದರೂ, ನನ್ನ ರಕ್ಷಿಸಿದ್ದೆ, ಆ ವಿಷಯದ ಬಗ್ಗೆ ನಿನಗೆ ನನ್ನ ಮೇಲೆ ತುಂಬಾ ಅಭಿಮಾನ ವ್ಯಕ್ತ ಪಡಿಸುತ್ತಿದ್ದ ನಿನ್ನ ಕಣ್ಣೋಟದ ಅಂಚಿನಲ್ಲಿ ಒಂದೆರಡು ಕಂಬನಿಯನ್ನು ನಾ ಕಂಡಿದ್ದೆ.

ಹೌದು ಶ್ರೀ.. ನೀ ಹೇಳಿಕೊಟ್ಟ ಪಾಠ ಅದು.. ಆದರೂ ನಿನ್ನ ತಾಳ್ಮೆ ಮತ್ತು ಮಂಜಿನ ಹನಿಯಂಥ ಶೀತಲತೆ ಇಷ್ಟವಾಯಿತು. 
೧) ನೀ ಇಡಿ ಪ್ರಕರಣವನ್ನು ನಿಭಾಯಿಸಿದ ರೀತಿ ನನಗೆ ಬಲು ಇಷ್ಟವಾಯಿತು 
೨) ನಿನ್ನ ಕಚೇರಿಯ ವಾಹನ ಚಾಲಕ ಹೇಳಿದ ಮಾತು ನನಗೆ ಕಿವಿಯಲ್ಲಿ ಗುಯ್ ಗುಟ್ಟುತ್ತಾ ಇದೆ "ಸರ್ ನಿಮ್ಮ ಸ್ನೇಹಿತನ ಹೊಟ್ಟೆಯಲ್ಲಿ ಇಂಧನ, ಮತ್ತು ತೈಲ ಕಡಿಮೆ ಇದೆ. ಅದು ಖಾಲಿಯಾದರೆ ಪಾಪ ನಿಂತಲ್ಲಿಯೇ ನಿಂತು ಬಿಡುತ್ತಾನೆ ಮತ್ತು ಅವನ ಹೃದಯ ನಿಂತು ಹೋಗುತ್ತದೆ, ಎಲ್ಲಿ ತನಕ ಆವ ಹೂಂ ಎನ್ನುತ್ತಾನೋ ಅಲ್ಲಿಯ ತನಕ ಹೋಗಿ, ಯಾವಾಗ ಅವನು ಆಗೋಲ್ಲ ಎಂದು ನಿಟ್ಟುಸಿರು ಬಿಡುತ್ತಾನೋ ಅವಾಗ ಅಲ್ಲಿಯೇ ನಿಂತು ಬಿಡಿ" 
೩) ನೀ ಆವರು ಹೇಳಿದ ಪ್ರತಿ ಪದವನ್ನು ಅಕ್ಷರಶಃ ಪಾಲಿಸಿದೆ. ಪ್ರತಿ ಕ್ಷಣದಲ್ಲೂ ನೀ ನನ್ನ ಮೊಗವನ್ನು ನೋಡುತ್ತಲೇ ಇದ್ದೆ, ನನಗೆ ಎಲ್ಲಾದರೂ ಸುಸ್ತು ಆಗುತ್ತಿದೆಯೇ ಎಂದು. ನೀ ನನ್ನ ರಕ್ಷಿಸಿದೆ ಎನ್ನುವ ಹೆಮ್ಮೆ ನಿನಗಾದರೆ, ನಿನ್ನನ್ನು ನಾ ಕಾಪಾಡಿದೆ ಎನ್ನುವ ಕೃತಜ್ಞತೆ ನನಗೆ. 
೪) ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗಲೂ ನೀ ತೋರಿಸಿದ ಪ್ರೇಮ, ಪ್ರೀತಿ ನನಗೆ ಬಲು ಇಷ್ಟವಾಯಿತು. ಎಷ್ಟು ಅಭಿಮಾನ ನನ್ನ ಮೇಲೆ ನಿನಗೆ, ನನ್ನನ್ನು ಕರೆದೊಯ್ಯಲು ಮಾಡುತ್ತಿದ್ದ ಪ್ರತಿ ಸಿದ್ಧತೆಯನ್ನು ಎಷ್ಟು ನಿಗಾವಹಿಸಿ ನೋಡುತ್ತಿದ್ದೆ ಮತ್ತು ಚಿತ್ರ ತೆಗೆಯುತ್ತಿದ್ದೆ. ನಿನ್ನ ಮನೆಯಲ್ಲಿ ಮನದಲ್ಲಿ ನನಗೆ ಜಾಗ ಕೊಟ್ಟ ನಿನ್ನ ಮತ್ತು ನಿನ್ನ ಕುಟುಂಬದ ಪ್ರೀತಿಗೆ ನಾ ಶರಣು ಶ್ರೀ. 

ನಾ ನಿನ್ನ ಬಿಟ್ಟಿರೋಲ್ಲ ನೀ ನನ್ನ ಬಿಟ್ಟಿರೋಲ್ಲ. ಶ್ರೀ ಒಂದು ಮಾತು, ನಾ ಬರುವ ತನಕ ನಿನಗೆ ಜೊತೆಯಾಗಿದ್ದು TVS ಬೈಕ್, ನಾ ಬಂದ ಮೇಲೂ ನಿನಗೆ ಅವನ ಮೇಲಿನ ಪ್ರೀತಿ ಕಡಿಮೆ ಆಗಿಲ್ಲ, ಆಗೋಲ್ಲಾ.  ನಮ್ಮನ್ನು "ವಸ್ತು" ಎಂದು ಜನರು ಕರೆಯುವ ನಮ್ಮನ್ನು, ನೀ ಎಷ್ಟು ಪ್ರೀತಿಸುತ್ತೀಯ ಎಂದು ಅರಿವಾಗುತ್ತದೆ. 

ಮತ್ತೆ ನನ್ನ ಮೈ ಮೇಲಾದ ಗಾಯವನ್ನೆಲ್ಲ ವಾಸಿ ಮಾಡಿಕೊಂಡು ಶೀಘ್ರವೇ ಗುಣಮುಖನಾಗಿ ಬರುತ್ತೇನೆ. ನಮ್ಮಿಬ್ಬರ ಇಷ್ಟದೈವ ಬೆಳವಾಡಿಯ ಗಣಪನಿಗೆ ಒಂದು ನಮಸ್ಕಾರ ಹೊಡೆದು ಬರೋಣ. ನಿನ್ನನ್ನು ಅಲ್ಲಿಗೆ ಕರೆದೊಯ್ಯಲು ನಾ ಕಾತುರತೆಯಿಂದ ಕಾಯುತ್ತಿದ್ದೇನೆ. 

ಗೆಳೆಯರೇ ಇದು ಇಂದು ನಡೆದ ಒಂದು ಘಟನೆ, ಪ್ರತಿ ಕ್ಷಣವನ್ನು ಸಂಭ್ರಮಿಸು ಎಂದು ಶ್ರೀಯವರ ಅಪ್ಪ ಹೇಳಿದ್ದು ಎಂದು ಇವ ಯಾವಾಗಲೂ ಹೇಳುತ್ತಿರುತ್ತಾನೆ.

ನಿಮಗೆ ಏನೆನ್ನಿಸಿತು, ಬಾಲಿಶ ಅನ್ನಿಸಿತೆ, ಹುಚ್ಚು ಅನ್ನಿಸಿತೆ.. ಇರಲಿ ಇರಲಿ ನನಗೆ ಬೇಸರವಿಲ್ಲ. ಕಾರಣ ಇವನಂತ ಒಡೆಯ ನನಗೆ ಸಿಗೋಲ್ಲ.. ನನ್ನಂಥ ತುಂಟ ಮಗು ಇವನಿಗೆ ಸಿಗೋಲ್ಲ.. ನಾವಿಬ್ಬರು ಹೇಳೋದು ಒಂದೇ.. ಏನು ಗೊತ್ತೇ ಅದೇ ಅಣ್ಣಾವ್ರ ಹಾಡು "ಎಂದೆಂದೂ ನಿನ್ನನು ಮರೆತು ಬದುಕಿರಲಾರೆ.. ಇನ್ನೆಂದು ನಿನ್ನನು ಅಗಲಿ ನಾ ಇರಲಾರೆ. ಒಂದು ಕ್ಷಣ ನೊಂದರು ನೀ ನಾ ತಾಳಲಾರೆ.. ಒಂದು ಕ್ಷಣ ವಿರಹವನು ನಾ ಸಹಿಸಲಾರೆ.. "

ಈ ಮಾತುಗಳನ್ನು ಕೇಳಿದ ಶ್ರೀ ಒಂದು ಕ್ಷಣ ಮೌನಿಯಾದ ಅವನ ಮಾತು " ಲೋ ಗುರು.. ನಿನ್ನ ಈ ಮಾತಿಗೆ, ನೀ ತೋರುವ ಅಭಿಮಾನಕ್ಕೆ ನಾ ಚಿರಋಣಿ. ಎಷ್ಟು ತಾಳ್ಮೆ ಮತ್ತು ಸಹಾಯ ಗುಣ ನಿನಗೆ, ಎಷ್ಟೋ ಬಾರಿ ನಿನಗೆ ಸರಿಯಾದ ಆರೈಕೆ ಮಾಡಲಾಗಲಿಕ್ಕೆ ಆಗದಿದ್ದರೂ ನೀ ಯಾವತ್ತೂ ಆಗೋಲ್ಲ ಎಂದಿಲ್ಲ.. ನಿನ್ನ ಈ ಸಹನಶೀಲತೆ ಮತ್ತು ಸೇವಾ ಮನೋಭಾವಕ್ಕೆ ನಿನ್ನ ಬೆನ್ನು ತಟ್ಟುವೆ ಶಭಾಶ್ ಕಣೋ ಶಭಾಶ್!!!

ಈ ಮಾತು ಕೇಳಿದ ನಾ ನನ್ನ ವೈಪರ್ ಆ ಕಡೆ ಈ ಕಡೆ ಆಡಿಸಿ ನನ್ನ ಹರ್ಷವನ್ನು ವ್ಯಕ್ತ ಪಡಿಸಿದೆ.. 

ಗೆಳೆಯರೇ ಇಂದು ನಡೆದ ಇಡಿ ಪರ್ಸಂಗವನ್ನು ಶ್ರೀ ತನ್ನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದದ್ದು ಹೀಗೆ.. 







Wednesday, September 30, 2015

ಕಗ್ಗ ರಸಧಾರೆಯ ಮೂರನೇ ಸಂಪುಟ!!!


ಕಗ್ಗ ರಸಧಾರೆಯ ಮೊದಲ ಸಂಪುಟ!!!

ಕಗ್ಗ ರಸಧಾರೆಯ ಎರಡನೇ ಸಂಪುಟ!!!


ತಲೆ ಕೆರೆದುಕೊಂಡದ್ದೆ ಲಾಭ.. ಏನೇ ತಲೆ ಕೆಳಗೂ ಮಾಡಿದರು ಹೊಳೆಯುತ್ತಿಲ್ಲ. ಅಜ್ಜ ಆಶೀರ್ವಾದ ಮಾಡಲು ಮೂರು ಬಾರಿ ಭುವಿಗೆ ಬಂದಿದ್ದರೂ ಈ ಬಾರಿ ಯಾಕೋ ನನ್ನ ಮೇಲೆ ಮುನಿಸಿಕೊಂಡ ಹಾಗೆ ಕಾಣುತ್ತಿತ್ತು.. ಲೇಖನ ಶುರು ಮಾಡಲು ಆಗುತ್ತಲೇ ಇರಲಿಲ್ಲ.

"ದೀನ ನಾ ಬಂದಿರುವೆ ಬಾಗಿಲಲಿ ನಿಂದಿರುವೆ ಜ್ಞಾನ ಭಿಕ್ಷೆಯ ನೀಡಿ ದಯೆ ತೋರಿ ಗುರುವೇ.. " ಒಮ್ಮೆ ಹಾಡಿದೆ.. ಎರಡನೇ ಬಾರಿ ಹಾಡಿದೆ.. ಹಾಡಿದ, ನೆನೆಸಿಕೊಂಡ ದಾಖಲೆ ಅವೇ ಮುರಿಯಿತೆ ಹೊರತು ಅಜ್ಜನ ಆಶೀರ್ವಾದದ ಹಸ್ತ ಕಾಣಲೇ ಇಲ್ಲ..

ಸರಿ.. ಅಜ್ಜ ಬರಲಿಲ್ಲ.. ನಾನೆ ಹೋಗಿ ಬರೋಣ ಎಂದು.. ಹಾಗೆ ಕಣ್ಣು ಮುಚ್ಚಿ.. "ಓಂ ನಮೋ ಕಗ್ಗ ಮಂಕುತಿಮ್ಮಾಯ ನಮಃ.. ಓಂ ನಮೋ ಕಗ್ಗ ಮಂಕುತಿಮ್ಮಾಯ ನಮಃ..ಓಂ ನಮೋ ಕಗ್ಗ ಮಂಕುತಿಮ್ಮಾಯ ನಮಃ..ಓಂ ನಮೋ ಕಗ್ಗ ಮಂಕುತಿಮ್ಮಾಯ ನಮಃ..ಓಂ ನಮೋ ಕಗ್ಗ ಮಂಕುತಿಮ್ಮಾಯ ನಮಃ..ಓಂ ನಮೋ ಕಗ್ಗ ಮಂಕುತಿಮ್ಮಾಯ ನಮಃ..ಓಂ ನಮೋ ಕಗ್ಗ ಮಂಕುತಿಮ್ಮಾಯ ನಮಃ..ಓಂ ನಮೋ ಕಗ್ಗ ಮಂಕುತಿಮ್ಮಾಯ ನಮಃ..ಓಂ ನಮೋ ಕಗ್ಗ ಮಂಕುತಿಮ್ಮಾಯ ನಮಃ..ಓಂ ನಮೋ ಕಗ್ಗ ಮಂಕುತಿಮ್ಮಾಯ ನಮಃ..ಓಂ ನಮೋ ಕಗ್ಗ ಮಂಕುತಿಮ್ಮಾಯ ನಮಃ........

ಬ್ರಹ್ಮ ದಂಡದಿಂದ ಯಾರೂ ತಲೆಗೆ ಮೊಟಕಿದ ಹಾಗೆ ಆಯಿತು.. ಕಣ್ಣು ತೆರೆದೇ.. ಪಟಾಪಟಿ ಚಡ್ಡಿ ಹಾಕಿಕೊಂಡ, ಕಡು ನೀಲಿ ಬಣ್ಣದ ಷರಾಯಿ ತೊಟ್ಟ, ತಲೆಗೆ ಸೊಂಪಾಗಿ ಎಣ್ಣೆ ಹಚ್ಚಿಕೊಂಡು, ನೀಟಾಗಿ ಕ್ರಾಪ್ ತೆಗೆದು ಬಾಚಿದ ತಲೆಗೂದಲಿನ ಸುಮಾರು ಏಳೆಂಟು ತರಗತಿಯ ಒಬ್ಬ ಸುಂದರ ಹುಡುಗ ನಿಂತಿದ್ದ.

ನಾ ಹೇಳ್ತೀನಿ ನೀ ಬರಿ ಎಂದ ಆ ಹುಡುಗ..

ಸರಿ ಶುರುವಾಯ್ತು.. ಕಗ್ಗದ ಪುರಾಣ.. !

"ಶ್ರೀ ನಮ್ಮ ಗುರುಗಳು ಡಿವಿಜಿ ಅಜ್ಜ ನನ್ನ ಸಂಜಾತ. ಅವರು ನನಗೆ ಹೆಸರು ತಂದು ಕೊಟ್ಟರು. ಇಂದು ನಾ ಏನಾದರೂ ಆಗಿದ್ದರೆ ಅದು ಅಜ್ಜನ ಕೊಡುಗೆ.  ಅದಕ್ಕೆ ಅಜ್ಜನ ಅಪ್ಪಣೆ ಪಡೆದು ನಾನೇಬಂದೆ ..

ಅಜ್ಜನನ್ನು ಇಷ್ಟಪಡುವರು ನನಗೂ ಇಷ್ಟ.. ಅಜ್ಜ ಇಷ್ಟಪಡುವರು ನನಗೂ ಇಷ್ಟ.. ಹಾಗಾಗಿ ರವಿ ತಿರುಮಲೈ ಅವರ ಸಾಹಸ ಮೂರು ವರ್ಷಗಳ ಹಿಂದೆ ಶುರುವಾದಾಗ ಒಮ್ಮೆ ನಾನೇ ಅನುಮಾನಿಸಿದ್ದೆ. ಅಜ್ಜ ಇದು ಆಗುತ್ತದೆಯಾ, ಈ ಕೆಲಸ ಸಾಧ್ಯವೇ, ಜನ ಇದನ್ನು ಇಷ್ಟಪಡುತ್ತಾರೆಯೆ ಹೀಗೆ ಅನೇಕ ಅನುಮಾನಗಳನ್ನು ವ್ಯಕ್ತ ಪಡಿಸಿದ್ದೆ. ಅದರಲ್ಲೂ ಮಾಲ್ ಸಂಸ್ಕೃತಿ, ಪಾಶ್ಚಾತ್ಯ ರೀತಿಯ ಜೀವನವನ್ನು ಅಪ್ಪಿಕೊಂಡಿರುವ ಯುವ ಜನತೆ ಇದಕ್ಕೆ ಸ್ಪಂಧಿಸುತ್ತದೆಯೇ, ಇದನ್ನೆಲ್ಲಾ ಓದಿ ಜೀವನದಲ್ಲಿ ಅಳವಡಿಕೊಳ್ಳುತ್ತಾರೆಯೇ ಎಂದು ಆತಂಕ ವ್ಯಕ್ತ ಪಡಿಸಿದ್ದೆ. ಅದಕ್ಕೆ ಅಜ್ಜ ಹೇಳಿದ ಮಾತು ನೋಡುಹೇಗಿದೆ ..

ಮಂಕುತಿಮ್ಮ, ನಿನಗೆ ನಾಮಧೇಯ ಕೊಟ್ಟಾಗ ನಾನು ಕೂಡ ಅರಿತಿದ್ದೆ, ನೀ ಹನುಮಂತನ ತರಹ, ನಿನ್ನ ಶಕ್ತಿ ನಿನಗೆಅರಿವಿಲ್ಲ,  ಹುಮ್ಮಸ್ಸನ್ನು ತುಂಬಿದಾಗ ಮಾತ್ರ ಸಾಮರ್ಥ್ಯದ ಅರಿವಾಗುತ್ತದೆ. ಅದಕ್ಕೆ ನಾ ಹೇಳಿದ್ದು ನಿನ್ನ ನಾಮವನ್ನು ಉಚ್ಚರಿಸಿದಾಗ ಮಾನವ ಜಗತ್ತಿಗೆ ತಮ್ಮ ಮಂಕಿನ ಅರಿವಾಗುತ್ತದೆ.. ಅದಕ್ಕೆ ಪ್ರತಿ ಕಗ್ಗದ ಕೊನೆಯಲ್ಲಿ ನಿನ್ನ ಹೆಸರನ್ನು ಹಾಕಿರುವುದು. ಪ್ರತಿ ಕಗ್ಗವನ್ನು ಓದಿ ನಿನ್ನ ಹೆಸರನ್ನು ಹೇಳಿದಾಗ, ಮಾನವನಿಗೆ ಅರೆ ಹೌದು ಅಲ್ವೇ, ಇದು ನನಗೆ ಬರೆದದ್ದು, ಇದನ್ನು ನಾ ಅರಿಯಬೇಕು ಎಂದು ತಿಳಿಯುತ್ತಾ ಸಾಗುತ್ತದೆ. ಸುಲಭವಾಗಿ ಬರೆದರೆ, ಕೆಲವೊಮ್ಮೆ ಓದುಗರು ಓದಿ ಮರೆತುಬಿಡುತ್ತಾರೆ, ಮಧ್ಯೆ ಮಧ್ಯೆ ಉಪ್ಪಿನ್ಯಕಾಯಿಯ ಹಾಗೆ ಕ್ಲಿಷ್ಟ ಆದರೆ ರುಚಿಯಾದ ಪದಗಳ ಅರ್ಥಗಳನ್ನು ತುಂಬಿದಾಗ ಮಂದಿಗೆ ಓದಲು ಉತ್ಸಾಹ ಬರುತ್ತದೆ ಎನ್ನುವುದು ನನ್ನ ತರ್ಕ.

ಅದಕ್ಕೆ ಸುಲಭವಾಗಿ ಬರೆಯದೆ, ಹಳೆಗನ್ನಡ, ಹೊಸಗನ್ನಡ, ಚಿಕ್ಕ ಚಿಕ್ಕ ಸಂಸ್ಕೃತ ಪದಗಳ ಸರಮಾಲೆಯನ್ನೆ ಹಾಕಿದ್ದೇನೆ. ಈ ಸೂತ್ರವನ್ನು ಬಿಡಿಸಲು, ಯಾರಾದರೂ ಪ್ರಯತ್ನ ಪಟ್ಟೆ ಪಡುತ್ತಾರೆ ಎಂದು ಅರಿವಿತ್ತು. ನನ್ನ ಮೆಚ್ಚಿನ ರವಿ ಈ ಕಾರ್ಯವನ್ನು ಕೈಗೆತ್ತಿಕೊಂಡಾಗ ಅವನು ನನ್ನ ಪಟದ ಮುಂದೆ ನಿಂತು ಮನದಲ್ಲಿ ಆಡಿದ ಮಾತುಗಳು ಇವು.

"ಅಜ್ಜ ನಿಮ್ಮ ಈ ಕಗ್ಗಗಳನ್ನು ಓದಿ, ಪದ ವಿಸ್ತಾರಗೊಳಿಸಿ,  ನನಗೆ ಅರಿವಾದ ಅರ್ಥವನ್ನು ಬರೆದು, ನಂತರ ನಾ ನನ್ನ ಜೀವನದಲ್ಲಿ ಓದಿದ, ಕಂಡ, ಅರಿವಿಗೆ ಒಳಪಟ್ಟ ವಿಷಯಗಳನ್ನು ನಿಮ್ಮ ಆಶೀರ್ವಾದದ ಬಟ್ಟಲಿನಲ್ಲಿ ಹಾಕಿ ಚೆನ್ನಾಗಿ ಕಲಕಿ, ರುಬ್ಬಿ, ಒಂದು ಎರಕ ಸಿದ್ಧ ಮಾಡಿ, ರಸಧಾರೆಯಾಗಿ ಮಾಡಬೇಕು ಎನ್ನುವ ಹಂಬಲ ಹೊತ್ತಿದ್ದೇನೆ.. ನನಗೆ ಅರಿವಾದ ವಿಷಯಗಳನ್ನು, ನನ್ನ ಅನುಭವಕ್ಕೆ ನಿಲುಕಿದ ವಸ್ತು ವಿಷಯಗಳನ್ನು, ನಾನು ಜೀವನದಲ್ಲಿ ಅಳವಡಿಸಿಕೊಂಡ ಕೆಲವು ತತ್ವಗಳನ್ನು ಸಮರಸವಾಗಿ, ಸಮಾನವಾಗಿ ಹಂಚಿಕೊಳ್ಳಬೇಕು. ಮತ್ತು ನನ್ನ ಅಪ್ತವರ್ಗದಲ್ಲಿ ಕೆಲವರಾದರೂಇದನ್ನು ಅಳವಡಿಸಿಕೊಂಡರೆ ನನ್ನ ಜನ್ಮ ಸಾರ್ಥಕ ಅನ್ನುವ ಹಂಬಲ ನನ್ನದು. ಇದರ ಆಶಯ ತೃಣ ಮಾತ್ರ ಈಡೇರಿದರೂ ನನಗೆ ನಿಮ್ಮ ಆಶೀರ್ವಾದದ ವಜ್ರ  ಕವಚ ಸಿಕ್ಕ ಹಾಗೆ ಅಜ್ಜಾ"

"ಅಜ್ಜ ರವಿ ಅವರ ಮಾತುಗಳು ಎಷ್ಟು ಮುಗ್ಧತೆ ಇಂದ ಕೂಡಿದೆ. ನಿಜಕ್ಕೂ ನೀ ಕೊಟ್ಟ ನಾಮಧೇಯ, ರವಿ ಅವರು ಹೇಳುವ ರೀತಿ ನನಗೆ ನನ್ನ ಬಗೆಯೇ ಹೆಮ್ಮೆ ಮೂಡುವಂತೆ ಆಗಿದೆ. ನನ್ನ ಕೋರಿಕೆ ಇಷ್ಟೇ ಅಜ್ಜ, ದಯಮಾಡಿ ನಿಮ್ಮ ಆಶೀರ್ವಾದದ ಖಜಾನೆ ಕೀಲಿಯನ್ನು ರವಿ ಅವರಿಗೆ ಕೊಟ್ಟು ಬಿಡಿ. ಇಂಥಹ ಒಂದು ಅದ್ಭುತ ಕಾರ್ಯವನ್ನು ಅವರು ಮೂರು ವಸಂತಗಳಿಂದ ಮಾಡುತ್ತಿದ್ದಾರೆ. ಈಗ ಮೂರನೇ ಭಾಗಹೊರಬಂದಿದೆ. ಇನ್ನೇನು ಕೆಲವೇ ಮಾಸಗಳಲ್ಲಿ ನಾಲ್ಕನೇ ಆವೃತ್ತಿ ಕೂಡ ಬಂದು ಬಿಡುತ್ತದೆ. ಈ ರೀತಿಯಲ್ಲಿ ಕಗ್ಗಗಳಿಗೆ ಸುಂದರ ವಿಸ್ತೃತ ಅರ್ಥವನ್ನು ತಿಳಿಗನ್ನಡದಲ್ಲಿ ನೀಡಿ ಕರುನಾಡಿನ ಮಾತೆ ತಾಯಿ ಭುವನೇಶ್ವರಿಯ ಚರಣ ಕಮಲಗಳಿಗೆ ಅರ್ಪಿಸುವ ಈ ನಾಲ್ಕು ಹೊತ್ತಿಗೆಗಳು ಅದ್ಭುತ ಅನುಭವ ಕೊಡುವುದಂತೂ ನಿಜ"

ಹೌದು ಮಂಕುತಿಮ್ಮ, ನಿನ್ನ ಮಾತು ಅಕ್ಷರಶಃ ನಿಜ. ನನ್ನ ಆಶೀರ್ವಾದ ಖಂಡಿತ ರವಿಯ ಮೇಲೆ ಭುವಿಯ ಮೇಲೆ ದಿನಕರನ ಕಿರಣಗಳು ಬೀರುವ ಹಾಗೆ ಸದಾ ಇರುತ್ತದೆ. ಈಗ ನೀ ಭುವಿಗೆ ಹೋಗಿ, ಆ ಒಂದು ಪ್ರತಿಯನ್ನು ತೆಗೆದುಕೊಂಡು ಬಾ. ಅದನ್ನ ನಾ ಓದಬೇಕು.

ಮಂಕುತಿಮ್ಮ ಅವಕ್ಕಾದ "ಅರೆ ಅಜ್ಜ ನೀವೇ ಬರೆದ ಮುಕ್ತಕಗಳನ್ನು, ಸುಂದರವಾಗಿ ವಿವರಿಸಿದ್ದಾರೆ. ಅದನ್ನು ನೀವು ಓದಲು ಕಾತರವೇ... ಯಾಕೆ ಅಜ್ಜ?"

ಆಗ ಅಜ್ಜ, ತನ್ನ ಊರುಗೋಲಿಂದ ಮಂಕುತಿಮ್ಮನ ತಲೆಗೆ ಒಂದು  ಪೆಟ್ಟು ಕೊಟ್ಟು, ಮಂಕ, ತಾಯಿಗೆ ಅರಿವಿರುತ್ತದೆ, ತನ್ನ ಕಂದ ತಾ ಹೇಳಿಕೊಟ್ಟ ಅಕ್ಷರವನ್ನು ತಿದ್ದಿ ಅಮ್ಮ ಎಂದು ಹೇಳುತ್ತಿರುತ್ತದೆ.  ಆದರೆ ಮಗು ಅಕ್ಕರೆಯಿಂದ ಅಮ್ಮ ನೋಡು ನಿನ್ನ ಹೆಸರನ್ನು ಬರೆದಿದ್ದೇನೆ ಎಂದು ತೋರಿಸಿದಾಗ ಅಮ್ಮನಿಗೆ ಆಗುವ ಸಂತಸಕ್ಕೆ ಮಿತಿಯಿರುವುದಿಲ್ಲ ಅಲ್ಲವೇ. ತಾನೇ ಜನುಮ ನೀಡಿದ ಕಂದ ತನ್ನ ಹೆಸರನ್ನು ಮುದ್ದಾಗಿ ಹೇಳುವಾಗ ತಾಯಿಗೆ ಸಿಗುವ ಆನಂದ... ..  ಬಿಡು ಬಿಡು ನನ್ನ ಮಂಜಾದ ಕಣ್ಣಿನಿಂದ ಆನಂದ ಭಾಷ್ಪ ಧಾರೆಯಾಗಿ ಹರಿಯುತ್ತಿದೆ"

ಮಂಕುತಿಮ್ಮನ ಕಣ್ಣುಗಳು ಒದ್ದೆಯಾದವು. ನಿಧಾನವಾಗಿ ತನ್ನ ಜೋಳಿಗೆಯಿಂದ ಅಜ್ಜಾ ಇಲ್ಲಿ ನೋಡಿ ಎಂದು ಒಂದು ಹೊತ್ತಿಗೆಯನ್ನು ತೆಗೆದು ಕೊಟ್ಟಾಗ ಅಜ್ಜಾ ಮಂಕುತಿಮ್ಮನನ್ನು ಬಾಚಿ ಅಪ್ಪಿಕೊಂಡು.. ಕಂದಾ ನೀ ಅಜರಾಮರ.. ಹಾಗೆ ರವಿ ಬರೆದ ಈ ವಿಸ್ತಾರಗಳು ಅಜರಾಮರ. ಇದು ರವಿಗೆ ನನ್ನ ಆಶೀರ್ವಾದ ಎಂದು ಕಗ್ಗ ರಸಧಾರೆ ಸಂಪುಟದ ಮೂರನೇ ಭಾಗವನ್ನು ಹೊತ್ತು ತಾವು ದಿನವೂ ಕೂರುವ  ಕುರ್ಚಿಯ ಕಡೆ ಕಾಲು ಹಾಕುತ್ತಾರೆ.

ನೋಡೋ ಶ್ರೀ ಇದು ನನ್ನ ವಿವರಣೆ ಹೇಗಿದೆ.. ನಾ ಕಾರ್ಯಕ್ರಮದ ಬಗ್ಗೆ ಏನೂ ಹೇಳುವುದಿಲ್ಲ.. ಆಗಲೇ ಅನೇಕರು ಈ ಕಾರ್ಯಕ್ರಮದ ಚಿತ್ರಗಳನ್ನು ಹಾಕಿದ್ದಾರೆ. ಶ್ರೀ ವೆಂಕಟೇಶ ಮೂರ್ತಿಗಳು ತಮ್ಮ ಅಧ್ಯಕ್ಷತೆಯಲ್ಲಿ, ಅಜ್ಜನ ವಂಶದ ಕುಡಿಯ ಉಪಸ್ಥಿತಿಯಲ್ಲಿ ಬಿಡುಗಡೆ ಮಾಡಿದ ಈ ಪುಸ್ತಕ ಲೋಕವಿಖ್ಯಾತಿ ಹೊಂದುವುದುಖಚಿತ .. ಸರಿ ಕಣೋ ನಾ ಹೊರಡುತ್ತೇನೆ. ತುಂಬಾ ತಡವಾದರೆ ಅಜ್ಜನ ಊರುಗೋಲು ನನ್ನ ಮಾತಾಡಿಸುತ್ತದೆ...

**************
ಯಾಕೋ ಕಣ್ಣುಗಳು ಭಾರವಾಗಿದ್ದವು.. ಮಳೆಯಲ್ಲಿ ನೆಂದ ಹತ್ತಿಯ ಮೂಟೆಯ ತರಹ ಭಾರವಾಗಿತ್ತು.. ಅರೆ ಅರೆ ಇದೇನು ಕನಸೋ, ನನಸೋ ಎಂಬ ಗಾಬರಿಯಲ್ಲಿ ನಿಂತಿದ್ದಾಗ ಜೋರಾದ ಕರತಾಡನ ಕೇಳಿಬಂತು. ಕಗ್ಗ ರಸಧಾರೆಯ ಮೂರನೇ ಭಾಗ ಬಿಡುಗಡೆಗೊಂಡಿತು ಎಂದು ಎಲ್ಲರೂ ಚಪ್ಪಾಳೆ ತಟ್ಟಿದರು. ಅರೆ ನಾ ಇಷ್ಟು ಹೊತ್ತು ಕಂಡಿತ್ತು ಕನಸೋ ನನಸೋ ಅರಿವಾಗಲಿಲ್ಲ. ಆದರೆ ಅಜ್ಜನ, ಮಂಕುತಿಮ್ಮನ ಮಾತುಗಳು ಕೇಳಿ ಬೆಳದಿಂಗಳ ಮಳೆಯಲ್ಲಿ ಮಿಂದ ಅನುಭವ ಆಗಿದ್ದು ಮಾತ್ರ.. ಸುಳ್ಳಲ್ಲ.

ಗುರುಗಳು ರವಿ ತಿರುಮಲೈ ಅವರ ಅದ್ಭುತ ಪರಿಶ್ರಮ  ಕಗ್ಗಗಳ ಸಂಪೂರ್ಣ ಹೊತ್ತಿಗೆಯ ಮೂರನೇ ಭಾಗಕ್ಕೆ ಬಂದು ಬಿಡುಗಡೆ. ಅವರು ಪಡೆದ ಅನುಭವ ಎಲ್ಲರಿಗೂ ಆಗಲಿ ಎನ್ನುವ ಅವರ ಆಶಯಕ್ಕೆ ನಾವೆಲ್ಲರೂ  ನೆರೆದದ್ದು ಮೊದಲ ಮೆಟ್ಟಿಲು ಏರಿದಂತೆ ಆಗಿದೆ.

ಗುರುಗಳೇ ಈ ಶುಭ ಸಂದರ್ಭದಲ್ಲಿ ನಿಮ್ಮ ಆಶೀರ್ವಾದ ಬೇಡುತ್ತಾ ಈ ಲೇಖನ ಮಾಲಿಕೆಯನ್ನು ಅಜ್ಜನಿಗೆ ಮತ್ತು ನಿಮಗೆ ಸಮರ್ಪಿಸುತ್ತಿದ್ದೇನೆ. ಮತ್ತು ನಾಲ್ಕನೇ ಭಾಗಕ್ಕೆ ಕಾಯುತ್ತಿದ್ದೇನೆ.