Sunday, March 17, 2024

ಕಗ್ಗಂಟಿನ ಕರದಂಟು - ಡಿವಿಜಿ ಅಜ್ಜ - ೧

ಜಗತ್ತೇ ಒಂದು ಕಗ್ಗಂಟಾಗಿರುವಾಗ ಅದರೊಳಗೆ ಮಂಕುತಿಮ್ಮ ಎಂಬ ಪಾತ್ರದ ಮೂಲಕ, ಜಗತ್ತಿನ ವಿಶೇಷಗಳನ್ನು, ವಿಶಿಷ್ಟತೆಗಳನ್ನು, ತಾವು ಓದಿದ ಪುರಾಣ, ಪುಣ್ಯಕತೆಗಳು, ಐತಿಹಾಸಿಕ ಕ್ಷಣಗಳು, ತಾವು ಕೇಳಿದ ಜನಜನಿತ ಕತೆಗಳು, ಹಾಡುಗಳು, ಸಂಗತಿಗಳು, ತಮ್ಮ ಬದುಕಿನ ಕಥೆಗಳು.. ಜಗತ್ತಿನಲ್ಲಿ ನೆಡೆಯುವ ಅನೇಕಾನೇಕ ಪವಾಡಸದೃಶ್ಯಗಳನ್ನು ನಾಲ್ಕು ಸಾಲುಗಳಲ್ಲಿ ಹಿಡಿದಿಡುತ್ತಾ, ಸಾರ್ವಕಾಲಿಕ ಸತ್ಯವಾದ ಕಗ್ಗಗಳನ್ನು ಸೃಷ್ಟಿಸಿರುವ ಕಗ್ಗದ ಅಜ್ಜನಿಗೆ ನಮಿಸುತ್ತಾ.. ಈ ಜೈತ್ರಯಾತ್ರೆಯನ್ನು ಆರಂಭಿಸುತ್ತಿದ್ದೇನೆ.. 


ಚಿತ್ರಕೃಪೆ - ಗೂಗಲೇಶ್ವರ 

ನನ್ನ ಬದುಕಿನ ಹಾದಿಗೆ ದಾರಿ ದೀಪವಾಗಿದ್ದು ಅನೇಕ ವಿಷಯಗಳು.. ಮಹಾಭಾರತ, ಇತರ ಮಹಾಭಾರತದ ಕೊಂಡಿಯಿರುವ ಪುರಾಣ ಕಥೆಗಳು, ಭಗವದ್ಗೀತೆ, ಚಾಣಕ್ಯ, ದೇವಾನುದೇವತೆಗಳ ಕಥೆಗಳು ಇವುಗಳ ಜೊತೆಯಲ್ಲಿ ಸಿನಿಮಾಗಳು ಬಹಳ ಪ್ರಭಾವ ಬೀರಿದ್ದವು.. ಹಾಗಾಗಿ ಆ ಅನುಭವಗಳ ಮೂಟೆಯನ್ನು ಹೊತ್ತು ಸಿನೆಮಾಗಳ ಅನೇಕ ಪ್ರೇರಣಾತ್ಮಕ ಸನ್ನಿವೇಶಗಳನ್ನು, ಹಾಡುಗಳನ್ನು, ಸಾಹಸ ದೃಶ್ಯಗಳನ್ನು ಕಗ್ಗದ ಕಡಲಿಗೆ ಸಮೀಕರಿಸುವ ಒಂದು ದುಸ್ಸಾಹಸಕ್ಕೆ ಕೈ ಹಾಕೋಣ ಎನಿಸಿತು.. ಬಂಧು ಮಿತ್ರರು ಪ್ರೇರೇಪಿಸಿದರು, ಹಾಗಾಗಿ ಈ ಹೆಜ್ಜೆಗಳು..  

ಇಂದು ಅವರ ಜನುಮದಿನ, ಶುಭಾರಂಭವಾಗಲಿ, ಅಜ್ಜನ ಆಶೀರ್ವಾದ ಈ ಸರಣಿಗೆ ಉಸಿರು ತುಂಬಲಿ ಎಂದು ಆಶಿಸುತ್ತಾ, .. ಈ ಪುಟ್ಟ ಪುಟ್ಟ ಹೆಜ್ಜೆಯನ್ನು ಇಡಲು ಶುರು ಮಾಡುತ್ತೇನೆ!!!

                                                                            ******

ಶ್ರೀ ವಿಷ್ಣು ವಿಶ್ವಾದಿಮೂಲ ಮಾಯಲೋಲ,                                                                                          ದೇವ ಸರ್ವೇಶ ಪರಬ್ಬೊಮ್ಮನೆಂದು ಜನಂ||                                                                                            ಆವುದನು ಕಾಣದೊಡಮಳ್ತಿಯಿಂ ನಂಬಿಹುದೊ|                                                                                ಆ ವಿಚಿತ್ರಕೆ ನಮಿಸೊ - ಮಂಕುತಿಮ್ಮ|| ೧||


ದಶಾವತಾರಗಳನ್ನು ತಾಳಿದ ವಿಷ್ಣು.. ಸೃಷ್ಟಿಕರ್ತ ಬ್ರಹ್ಮನ ಪಿತಾ.. ಜಗತ್ತನ್ನು ಸ್ಥಿತಿಯಲ್ಲಿಡುವ ದೈವ, ದುಷ್ಟ ಶಿಕ್ಷಕ ಶಿಷ್ಟ ರಕ್ಷಕ ಹೀಗೆ ಹತ್ತಾರು ಗುಣವಿಶೇಷಣಗಳನ್ನು ಹೊಂದಿರುವ ವಿಷ್ಣು.. ಮತ್ತು ಅವನ ಶಕ್ತಿಗೆ, ಅವನ ಯುಕ್ತಿಗೆ, ಯಾವುದೇ ಸಂದರ್ಭದಲ್ಲಿಯೂ ಕೂಡ ತಾಳ್ಮೆಯನ್ನು ಕಳೆದುಕೊಳ್ಳದೆ, ಸಮಸ್ಯೆಗಳನ್ನು ಉಪಯುಕ್ತವಾದ ರೀತಿಯಲ್ಲಿ ಬಗೆಹರಿಸುವ ಆ ವಿಶೇಷ ಶಕ್ತಿಗೆ, ವಿಚಿತ್ರ ಶಕ್ತಿಗೆ ನಮಿಸೋಣ ಎನ್ನುವ ಮಾತನ್ನು ಅಜ್ಜ ನಮಗೆ ಹೇಳುತ್ತಾರೆ. 

 ತನ್ನ ದ್ವಾರ ಪಾಲಕರಾದ ಜಯವಿಜಯರು ಶಾಪಗ್ರಸ್ತರಾಗಿ, ಮೂರು ಜನ್ಮಗಳಲ್ಲಿ ದುಷ್ಟರಾಗಿ ಜನಿಸಿ ಹರಿಯಿಂದ ಹತರಾಗಿ ಮರಳಿ ವೈಕುಂಠಕ್ಕೆ ಮರಳುವ ಹಂತಗಳಲ್ಲಿ ಮೊದಲನೆಯ ಅವತಾರ ಹಿರಣ್ಯಾಕ್ಷ-ಹಿರಣ್ಯಕಶಿಪು. 

ಹಿರಣ್ಯಾಕ್ಷ ವಿಷ್ಣುವನ್ನು ವರಾಹ ರೂಪದಲ್ಲಿ ಧರೆಗಿಳಿಸಿ ಹತನಾಗಿ ವೈಕುಂಠ ಸೇರುತ್ತಾನೆ.. ಆದರೆ ಇನ್ನಷ್ಟು ಬಲಾಢ್ಯನಾದ ಹಿರಣ್ಯಕಶಿಪು ತನ್ನ ಸುತ  ಪ್ರಹ್ಲಾದ ಹರಿಭಕ್ತನಾಗಿದ್ದರಿಂದ ಆತನನ್ನು ಅನೇಕ ಶಿಕ್ಷೆಗಳಿಗೆ ಗುರಿಪಡಿಸಿದರೂ ಅಳಿಯದ ಪ್ರಹ್ಲಾದನ ಜೊತೆ ನೆಡೆಯುವ ಅಂತಿಮ ಸಂಭಾಷಣೆ ಈ ಕಗ್ಗಕ್ಕೆ ಸಮೀಕರಿಸಬಹುದು.. 

ಹರಿಯು ಸರ್ವಾಂತರಯಾಮಿ ಎನ್ನುತ್ತಾ, ಸೃಷ್ಟಿಗೆ ಆತನೇ ಶಕ್ತಿ ಎನ್ನುತ್ತಾ.. ವಿಷ್ಣುವು ಹತ್ತು ಹಲವಾರು ಹೆಸರುಗಳಿಂದ ಕಂಗೊಳಿಸುತ್ತಿದ್ದಾನೆ ಎನ್ನುವಾಗ ಕುಪಿತಗೊಂಡ ಹಿರಣ್ಯಕಶಿಪು .. ಈ ಜಗತ್ತಿಗೆಲ್ಲ ನಾನೇ ಸರ್ವೇಶ್ವರ.. ಎಂದಾಗ ಪ್ರಹ್ಲಾದ ನೀನು ನನಗೆ ಜನ್ಮಕೊಟ್ಟವನು.. ನಿನಗೆ ಜನ್ಮಕೊಟ್ಟವರು ಯಾರು ಎಂದಾಗ.. ಕಶ್ಯಪ ಬ್ರಹ್ಮ.. ಎನ್ನುತ್ತಾನೆ.. ಅವರ ತಂದೆ ಎಂದಾಗ ಚತುರ್ಮುಖ ಬ್ರಹ್ಮ ಎನ್ನುತ್ತಾನೆ.. ಅವರ ತಂದೆ ಎಂದಾಗ ನಿರುತ್ತರನಾಗುತ್ತಾನೆ.. 

ಚತುರ್ಮುಖ ಬ್ರಹ್ಮನ ತಂದೆ ಯಾರು.. ಯಾರಾದರೂ ಇರಲೇಬೇಕಲ್ಲ ಎಂದಾಗ.. ಯಾರು ಅವರು ಎನ್ನುತ್ತಾನೆ ಹಿರಣ್ಯಕಶಿಪು.. ಆಗ ಅವನೇ ಶ್ರೀಮನ್ನಾರಾಯಣ ಎನ್ನುತ್ತಾನೆ.. 

ಹೀಗೆ ಒಂದು ಕಲ್ಲಿನ ಮೇಲೆ ಇನ್ನೊಂದು ಕಲ್ಲು.. ಅದರ ಮೇಲೆ ಇನ್ನೊಂದು.. ಹೀಗೆ ಜೋಡಿಸುತ್ತಾ ಹೋದಾಗ ಕಡೆಯಲ್ಲಿ ನಿಲ್ಲುವುದು ವಿಷ್ಣುವಿನ ಉಪಸ್ಥಿತಿ ಎನ್ನುವ ತತ್ವನ್ನು ಈ ಸಂಭಾಷಣೆ ಹೇಳುತ್ತದೆ.. 



ಮತ್ತೆ ಇನ್ನೊಂದು ಕಗ್ಗದ ಸುತ್ತಾ ಓಡಾಡೋಣ!!!

Saturday, February 3, 2024

ಅಹಲ್ಯಾಶಬರಿ ಉಪಾಖ್ಯಾನದ ಅನುಭವ.. !

ಅಣ್ಣಾವ್ರ "ನಾನೂ ನೀನೂ ನೆಂಟರಯ್ಯ .. ನಮಗೆ ಭೇದ ಇಲ್ಲವಯ್ಯಾ ವಿಠ್ಠಲ .. " ಭಕ್ತ ಕುಂಬಾರದ ಅದ್ಭುತ ಹಾಡು ಬರುತಿತ್ತು.. ಮನೆಯ ಕರೆಘಂಟೆ ಸದ್ದು ಮಾಡಿತು.. 

ಬಾಗಿಲು ತೆಗೆದರೆ ಅಹಲ್ಯೆ ಮತ್ತು ಶಬರಿ .. ಬಿಳಿ ಉಡುಪಿನಲ್ಲಿ ಆಕರ್ಷಕವಾಗಿ ಕಾಣುತ್ತಿದ್ದರು.. 

ಅರೆ ನೀವು ನನ್ನ ಮನೆಯ ಬಾಗಿಲಲ್ಲಿ.. "ವೆಲ್ಕಮ್ ವೆಲ್ಕಮ್.. "

ನಗುತ್ತಾ ಅಹಲ್ಯೆ ಮತ್ತು ಶಬರಿ ಒಳಗೆ ಬಂದರು.. ಸಾಂಪ್ರದಾಯಿಕವಾದ ಸ್ವಾಗತ ನೆಡೆಯಿತು.. ಹಣೆಯಲ್ಲಿ ಕುಂಕುಮ.. ನಿಗಿ ನಿಗಿ ಹೊಳೆಯುತ್ತಿತ್ತು.. ಒಬ್ಬರ ಪ್ರತಿರೂಪ ಒಬ್ಬರು.. ಅಚಾನಕ್ ನೋಡಿದರೆ ಅಹಲ್ಯೆ ಶಬರಿ ಇಬ್ಬರೂ ಅಕ್ಕ ತಂಗಿ ಎನ್ನಬಹುದಿತ್ತು.. ಹಾಗಿದ್ದರೂ.. ಅದೇ ರೂಪ, ಅದೇ ಮುಖ.. ಅದೇ ನಗು.. ಆದರೆ ಅಹಲ್ಯೆ ಕಣ್ಣುಗಳು ಹೊಳೆಯುತ್ತಿದ್ದವು.. ಶಬರಿ ಕಣ್ಣುಗಳು ಮಿನುಗುತ್ತಿದ್ದವು.. 

ಶಬರಿ ನಸು ನಗುತ್ತಾ ಒಳಗೆ ಕಾಲಿಟ್ಟಳು.. ಅಹಲ್ಯೆ ಹಾಯ್ ಎನ್ನುತ್ತಾ ನಗುವ ಕಂಗಳ ಜೊತೆ ಒಳಗೆ ಬಂದಳು.. ಸುಮ್ಮನೆ ಇರದ ಕ್ಯಾಮೇರಾ ಕಚ ಕಚ ಅಂತ ಫೋಟೋ ತೆಗೆಯುತಿತ್ತು.. 

ಸುಂದರ ದೃಶ್ಯ.. ಕಂಗಳು ಮಂಜಾಗಿದ್ದವು.. ಆದರೆ ಕ್ಯಾಮೆರಾ ಕಣ್ಣುಗಳು ಅಲ್ಲ.. ಆ ಕ್ಷಣಗಳನ್ನು ಆಸ್ವಾಧಿಸುವುದೇ ಒಂದು ಅದ್ಭುತ ಅನುಭವ.. 

ಉಭಯಕುಶಲೋಪರಿ ಮಾತುಗಳು ಆದವು.. ಅಹಲ್ಯೆ ಕಲ್ಲಾಗಿದ್ದವಳು ಶ್ರೀ ರಾಮನ ಪಾದ ಸ್ಪರ್ಶದಿಂದ ಮತ್ತೆ ಮರಳಿದ್ದಳು.. ಅಹಲ್ಯೆ ಶ್ರೀ ರಾಮನ ಅಂಶವಾಗಿದ್ದಳು..ಶ್ರೀ ರಾಮನನ್ನು ಅನುಕ್ಷಣವೂ ಜಪಿಸುವಂಥಹ, ನೆನಪಿಸುವಂತಹ ದಿವ್ಯ ಬದುಕಾಗಿತ್ತು.. ನೋಡುತ್ತಾ ನೋಡುತ್ತಾ ಬದುಕು ಅಹಲ್ಯೆಯ ಬದುಕು ಸುಂದರವಾಗಿತ್ತು.. ಶ್ರೀ ರಾಮನ ಸಾನಿಧ್ಯವೇ ಆಕೆಯ  ಬದುಕಿನ ಮಂತ್ರವಾಗಿತ್ತು..

ಶಬರಿ ಶ್ರೀ ರಾಮನ ಬರುವಿಕೆಗಾಗಿ ಅತ್ಯುತ್ತಮ ಹಣ್ಣುಗಳನ್ನು ಆರಿಸಿ ಆರಿಸಿ ಶ್ರೀ ರಾಮನಿಗೆ ಕೊಡಲು ಇಟ್ಟಿದ್ದು.. ಅದನ್ನು ಶ್ರೀ ರಾಮನಿಗೆ ಕೊಟ್ಟ ಮೇಲೆ ತನ್ನ ಬದುಕಿನ ಸಾರ್ಥಕ್ಯ ಕಂಡಿದ್ದು ಇದು ನಿಮಗೆಲ್ಲ ತಿಳಿದ ವಿಚಾರವೇ.. ಇಲ್ಲಿ ಸ್ವಲ್ಪ ಬದಲಾವಣೆಯಿತ್ತು.. 

ಶಬರಿ ಶ್ರೀ ರಾಮನಿಗೆ ಹಣ್ಣುಗಳನ್ನು ಕೊಡುವ ಬದಲು ಸಿಹಿ ತಂದಿದ್ದಳು.. ಶ್ರೀ ರಾಮನಿಗೆ ಅಚ್ಚರಿ, ಖುಷಿ ಎಲ್ಲವೂ ಕಣ್ಣುಗಳಲ್ಲಿ ತುಂಬಿತ್ತು.. ಮಾತುಗಳು ಆಡಲಾರದಷ್ಟು ಖುಷಿ.. ಯಾಕೆಂದರೆ.. ಶ್ರೀ ರಾಮನನ್ನು ಕಂಡು ಶಬರಿಗೆ ಖುಷಿ ಮನದಲ್ಲಿಯೇ ಮೂಡಿದ್ದರೆ.. ಶಬರಿಯ ಕಂಡು ಶ್ರೀ ರಾಮನಿಗೆ ಈ ಬಾರಿ ಧನ್ಯತಾ ಭಾವ .. ತನ್ನ ಮನೆಗೆ ಮಗಳು ಬಂದಷ್ಟು ಖುಷಿ. ... 

ಶಬರಿ ಹಣ್ಣುಗಳನ್ನು ಕಚ್ಚಿ ಒಳ್ಳೆಯ ಹಣ್ಣುಗಳನ್ನೇ ಕೊಟ್ಟ ಹಾಗೆ.. ಇಲ್ಲಿ ಶಬರಿ ತಂದಿದ್ದ ಸಿಹಿಯನ್ನು ಅವಳಿಗೆ ಒಂದು ತುಂಡು ತಿನ್ನಿಸಿ..Hope  you don't mind ಎಂದಾಗ.. ಶಬರಿಯ ಕಣ್ಣುಗಳ ಹೊಳಪನ್ನು ಕಂಡಾಗ ಅರೆ ಇದನ್ನು ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿಯಬಾರದಿತ್ತೇ ಅನಿಸಿದ್ದು ಸುಳ್ಳಲ್ಲ.. 

ಕೆಲವು ಅನುಭವಗಳನ್ನು ಅನುಭವಿಸೋದು ..  ಆ ಅನುಭವವನ್ನು ಅಕ್ಷರ ರೂಪದಲ್ಲಿ ಹಿಡಿದಡೋದು ಎಲ್ಲವೂ ಒಂದು ಅದ್ಭುತ ಪಯಣದ ಮೈಲಿಗಲ್ಲುಗಳು.. 

ಮಗಳು ತಾಯಿಯ ಸಮಾನ ಅಂತಾರೆ.. ತಾಯಿಯನ್ನು ಇನ್ನೊಂದು ರೂಪದಲ್ಲಿ ಕಂಡು.. ಅದರ ಸಾಕ್ಷಾತ್ಕಾರವಾಗಿ ತಣ್ಣಗೆ ಇದನ್ನೆಲ್ಲಾ ಗಮನಿಸುತ್ತಿದ್ದ ತುಷಾರ ಹಾರದವಳ ನಸು ನಕ್ಕು ಖುಷಿಪಡುತ್ತಿದ್ದಳು .. 


"ಶ್ರೀ ರಾಮ ಬಂದವ್ನೆ ಸೀತೆಯ ಕಾಣಲಿಕ್ಕೆ" ಹಾಡು ಪಡುವಾರಹಳ್ಳಿ ಪಾಂಡವರು ಚಿತ್ರದಲ್ಲಿ ಬಂದಿದ್ದಾರೆ.. "ಕಾದಿರುವಳು ಶಬರಿ ಶ್ರೀ ರಾಮ ಬರುವನೆಂದು" ಶಾಲೆಯಲ್ಲಿ ಓದಿದ ಪದ್ಯ ನೆನಪಿಗೆ ಬಂತು.. 

ಇದೊಂದು ಅದ್ಭುತ ಅನುಭವ.. ಅಹಲ್ಯೆ, ಶಬರಿ, ತುಷಾರ, ಶ್ರೀ ರಾಮ ಎಲ್ಲರೂ ಧನ್ಯತಾ ಭಾವ ಅನುಭವಿಸುತ್ತಿದ್ದರು..!!!

ಶ್ರೀ ರಾಮನಂತೂ ಈ ಖುಷಿಯ ಸಂಗತಿಗಳಿಂದ ಪುಟ್ಟ ಹುಡುಗನಾಗಿ ಬಾಲರಾಮನೇ ಆಗಿ ನಲಿಯುತಿದ್ದ!


ಇರುವ ಮನೆಯೇ ಮಂದಿರವಾಗಿ.. ಅದೇ ಭವ್ಯ ಮಹಲಾಗಿ ಪರಿವರ್ತನೆಯಾದಂತೆ ಅನುಭವ.. ಮಹಲಿನ ಪ್ರತಿ ಕಣವೂ ಬೆಳಕಿನ ಪುಂಜದಿಂದ ಹೊಳೆಯಲು ಶುರು ಮಾಡಿತು.. !

Saturday, January 13, 2024

ಗಂಗೆ - ಭೀಷ್ಮ ಮಹಾಭಾರತ ..

ನಾಲ್ಕನೇ ತರಗತಿಯಲ್ಲಿ ರನ್ನನ ಗಧಾಯುದ್ಧದ ಒಂದು ಭಾಗ "ಊರುಭಂಗ" ಪಾಠವಿತ್ತು.. ವಿದ್ಯೆ ಕಲಿಯಬೇಕೆಂಬ ಆಸೆ ಹೊತ್ತು ಗುರುಗಳ ಬಳಿಗೆ ಬಂದಾಗ 

ರನ್ನನ ಪೂರ್ವಾಪರ ವಿಚಾರ ತಿಳಿದು " ಕೊಂಡು ತಂದು ಹೊತ್ತು ಮಾರಲು ವಿದ್ಯೆಯೇನು ಬಳೆಯ ಮಲಾರವೇ!" ಎಂದು ಹೇಳುತ್ತಾರೆ.. 

ಆದರೂ ಛಲ ಬಿಡದ ರನ್ನ ವಿದ್ಯೆ ಕಲಿತು.. ಮಹಾನ್ ಕವಿಯಾಗುತ್ತಾರೆ. 

ಆ ಪಾಠ ಓದಿ, ದುರ್ಯೋಧನ ಅಲಿಯಾಸ್ ರನ್ನ ಹೆಸರಿಸುವ ಸುಯೋಧನನ ಊರುಭಂಗ ಪಾಠ ನನ್ನ ಮಹಾಭಾರತದ ಹುಚ್ಚಿಗೆ ನಾಂದಿಯಾಯಿತು.. ನಂತರ ಏಳನೇ ತರಗತಿಯಲ್ಲಿ ಸೌಗಂಧಿಕಾ ಪುಷ್ಪ ಹರಣ ಪಾಠ ಮಹಾಭಾರತದ ಹುಚ್ಚಿಗೆ ಇನ್ನಷ್ಟು ನೀರೆರೆಯಿತು.. 

ಎಂಭತ್ತರ ದಶಕದ ಅಂತ್ಯದಲ್ಲಿ ದೂರದರ್ಶನದಲ್ಲಿ ಪ್ರಸಾರವಾದ ಬಿ ಆರ್ ಚೋಪ್ರಾ ಅವರ ಮಹಾಭಾರತ ಖುಷಿಕೊಟ್ಟಿತು. ಅಂದಿನಿಂದ ಇಂದಿನ ತನಕ ಮರುಪ್ರಸಾರವಾದಾಗೆಲ್ಲ ಬಹುಶಃ ಎಲ್ಲಾ ಕಂತುಗಳನ್ನು ನೋಡಿದ್ದೇನೆ ಮತ್ತು ಮುಂದೂ ನೋಡುತ್ತೇನೆ. 

ಪ್ರತಿಯೊಂದು ದೃಶ್ಯವೂ ಒಂದು ಅದ್ಭುತ ಸಂಯೋಜನೆ.. ಅಭಿನಯ, ಸೆಟ್ಟುಗಳು, ಸಂಭಾಷಣೆ, ಪಾತ್ರಧಾರಿಗಳ ಆಯ್ಕೆ (ಹ ಕೆಲವೊಂದು ಪಾತ್ರಗಳು ಬೇರೆ ಕಲಾವಿದರ ಆಯ್ಕೆ ಬೇಕು ಅನಿಸಬಹುದೇನೋ, ಆದರೆ ನನಗೆ ಓಕೆ), ಸಂಗೀತ, ಹಾಡುಗಳು ಎಲ್ಲವೂ ಅದ್ಭುತ. 

ನನಗೆ ಬಲು ಇಷ್ಟವಾದ ಅನೇಕ ದೃಶ್ಯಗಳಲ್ಲಿ ಎರಡನ್ನು ಇಲ್ಲಿ ಉಲ್ಲೇಖಿಸುತ್ತೇನೆ. 

ಒಂದನೇ ದೃಶ್ಯ 

ಭೀಷಣ ಪ್ರತಿಜ್ಞೆ ಮಾಡಿದ ದೇವವ್ರತ ತನಗೆ ಗೊಂದಲವಾದಾಗೆಲ್ಲ ತನ್ನ ತಾಯಿ ಗಂಗೆಯ ತೀರಕ್ಕೆ ಬಂದು ತಾಯಿಯನ್ನು ಕಂಡು ಮಾತಾಡಿ ಗೊಂದಲ ಪರಿಹರಿಸಿಕೊಳ್ಳುವುದು ರೂಢಿಯಾಗಿರುತ್ತದೆ. ಇದರಿಂದ ಬೇಸತ್ತ ಗಂಗೆ ಒಮ್ಮೆ ಭೀಷ್ಮನಿಗೆ ಹೇಳುತ್ತಾಳೆ "ನೀನು ಸಣ್ಣ ಮಗುವಿನ ತರಹ ಪ್ರತಿಬಾರಿಯೂ ದೂರುಗಳನ್ನು ತಂದು ನನಗೆ ಒಪ್ಪಿಸುತ್ತೀಯಾ.. ನಿನ್ನ ತಂದೆಗೆ ನೀನು ಮದುವೆಯಾಗೋಲ್ಲ ಅಂತ ಶಪಥ ಮಾಡಿದಾಗ ನನಗೆ ಹೇಳಲಿಲ್ಲ ನನ್ನ ಒಪ್ಪಿಗೆ ಪಡೆಯಲಿಲ್ಲ..  ನೀನು ಜೀವನದಲ್ಲಿ ಗಟ್ಟಿ ನಿರ್ಧಾರ ತೆಗೆದುಕೊಂಡಾಗ ನನ್ನ ಕೇಳಲಿಲ್ಲ ಆದರೆ ನಿನಗೆ ಸಮಸ್ಯೆ ಬಂದಾಗ ನನ್ನ ಬಳಿ ಓಡಿ ಬರುತ್ತೀಯ" ಎಂದಾಗ ಭೀಷ್ಮ ಕಣ್ಣಲ್ಲಿ ನೀರು ತುಂಬಿಕೊಂಡು "ಸರಿ ಮಾತೆ ಇನ್ನು ನೀನಾಗೆ ಬರುವ ತನಕ ನಾ ನಿನ್ನ ಬಳಿ ಬರುವುದಿಲ್ಲ" ಎಂದು ಹೇಳುತ್ತಾನೆ ಗಂಗೆ ಮಾಯವಾಗುತ್ತಾಳೆ. 

ಇಲ್ಲಿ ಗಂಗೆ ಪಾತ್ರಧಾರಿ ಕಿರಣ್ ಜುನೇಜಾ ಅದ್ಭುತಾವಾಗಿ ಮಾತಾಡುತ್ತಾಳೆ.. ಕಣ್ಣಿನ ಹೊಳಪು ಆ ಬಿಳಿ ಪೋಷಾಕು ಅದ್ಭುತವಾಗಿ ಕಾಣುತ್ತಾಳೆ. ಹಾಗೆಯೇ ತಾಯಿಯ ಮಮತೆಪೂರ್ಣ ಮಾತುಗಳು, ಅಭಿನಯ ಗಮನಸೆಳೆಯುತ್ತದೆ. 

ಭೀಷ್ಮನ ಪಾತ್ರಧಾರಿ ಮುಖೇಶ್ ಖನ್ನಾ ಬಗ್ಗೆ ಏನು ಹೇಳುವುದು, ಭೀಷ್ಮರೇ ಧರೆಗೆ ಬಂದರೂ ಮುಖೇಶ್ ಅವರಿಗೆ ಶಭಾಷ್ ಹೇಳದೆ ಹೋಗುವುದಿಲ್ಲ. ಅಷ್ಟು ಅದ್ಭುತ ಅಭಿನಯ. ಭೀಷ್ಮನಾಗಿಯೇ ಜೀವಿಸಿದ್ದಾರೆ. 

ಅವರ ಪ್ರತಿ ಮಾತುಗಳು, ಸಂಭಾಷಣೆಯ ಏರಿಳಿತ ಅದ್ಭುತ. 

ನಾವು ತೆಗೆದುಕೊಳ್ಳುವ ನಿರ್ಧಾರ ಪರಿಣಾಮ ಎದುರಿಸುವ ಶಕ್ತಿಯೂ ನಮಗೆ ಬರಬೇಕು.. ನಮಗೆ ಇರಬೇಕು.. ನಿರ್ಧಾರ ನಮ್ಮದು ಪರಿಹಾರ ಇನ್ನೊಬ್ಬರು ಕೊಡುವುದು ಎಂದು ಕುಳಿತಾಗ ಸಮಸ್ಯೆ ಇನ್ನಷ್ಟು ಜಟಿಲವಾಗುತ್ತದೆ. ಭೀಷ್ಮ ತನ್ನ ತಂದೆಗೂ ಹೇಳದೆ ತಾಯಿಯ ಸ್ಥಾನಕ್ಕೆ ಬರಬಹುದಾದ ಸತ್ಯವತಿಯ ತಂದೆಗೆ ಕೊಡುವ ಮಾತು.. ಆದರೆ ಆ ಸಮಯದಲ್ಲಿ ಗಂಗೆಯೂ ಇರುವುದಿಲ್ಲ, ಶಾಂತನೂ ಕೂಡ ಇರುವುದಿಲ್ಲ. ಆ ಸಮಯದಲ್ಲಿ ಸರಿ ಅನಿಸುವ ನಿರ್ಧಾರ ಭೀಷ್ಮ ತಳೆಯುತ್ತಾನೆ ಆದರೆ ಅದರ ಪರಿಣಾಮ ಶರಶಯ್ಯೆಗೆ ತಂದು ನಿಲ್ಲಿಸುತ್ತದೆ. 

ಎರಡನೆಯ ದೃಶ್ಯ 

ಭೀಷ್ಮ ಇಚ್ಚಾಮರಣಿ, ಅವ ಇರುವ ತನಕ ಪಾಂಡವರು ಕುರುಕ್ಷೇತ್ರದ ಯುದ್ಧದಲ್ಲಿ ಏನೂ ಸಾಧಿಸಲಾಗದೆ ಚಿಂತಾಕ್ರಾಂತರಾಗಿರುತ್ತಾರೆ. ಆಗ ಕೃಷ್ಣನ ಮಾತಿನಂತೆ ಭೀಷ್ಮರ ಹತ್ತಿರ ಬಂದಾಗ ತಾನು ನಾರಿಯ ಮುಂದೆ ಯುದ್ಧ ಮಾಡುವುದಿಲ್ಲ  ಎಂದು ತನ್ನನ್ನು ರಣರಂಗದಿಂದ ದೂರಮಾಡುವ ಉಪಾಯ ಹೇಳಿಕೊಡುತ್ತಾನೆ. ಆಗ ರಾತ್ರಿ ಭೀಷ್ಮ ಕುರುಕ್ಷೇತ್ರಕ್ಕೆ ಬರುತ್ತಾನೆ.. ಒಂದು ಹೆಂಗಸು ಭೂಮಿಯಲ್ಲಿನ ಸಣ್ಣ ಸಣ್ಣ ಕಲ್ಲುಗಳನ್ನು ಆರಿಸುತ್ತಿರುವುದನ್ನು ಕಂಡು.. ಹತ್ತಿರ ಬಂದಾಗ ಗೊತ್ತಾಗುತ್ತದೆ ಇದು ತನ್ನ ತಾಯಿ ಗಂಗೆ ಎಂದು. 

ಅತೀವವಾದ ಖುಷಿಯಿಂದ ಹತ್ತಿರ ಬಂದು ಮಾತಾಡಿಸಿದಾಗ.. ಗಂಗೆ ಹೇಳುತ್ತಾಳೆ ನೆಲವನ್ನು ಸ್ವಚ್ಛಗೊಳಿಸುತ್ತಿದ್ದೆ.. ನೀನು ಇಲ್ಲಿ ಮಲಗಿಕೊ, ತುಂಬಾ ದಣಿದಿದ್ದೀಯ.. ನಿನಗೆ ವಿಶ್ರಾಂತಿ ಬೇಕು" ಎಂದಾಗ ಭೀಷ್ಮ ಎಲ್ಲಾ ಋಣವನ್ನು ಕೊಟ್ಟು ಮುಗಿಸಿದೆ.. ಆದರೆ ಅಂಬಾಳ ಋಣವೊಂದಿದೆ.. ನಾಳೆ ಅದನ್ನು ತೀರಿಸುತ್ತೇನೆ.."

ಬಂದು ಬಿಡು ಸ್ವರ್ಗಕ್ಕೆ ಎಂದು ಗಂಗೆ ಹೇಳಿದಾಗ.. ಹಸ್ತಿನಾಪುರ ನಾಲ್ಕು ದಿಕ್ಕುಗಳಿಂದ ಸುರಕ್ಷಾ ಸ್ಥಿತಿಯಲ್ಲಿದೆ ಎಂದು ಅರಿವಾದಾಗ ಖಂಡಿತ ಬರುತ್ತೇನೆ ಎಂದು ಹೇಳಿ ಗಂಗೆಯನ್ನು ಕಳಿಸುತ್ತಾನೆ. 


ನಿಜ ನಾವು ತೆಗೆದುಕೊಳ್ಳುವ ನಿರ್ಧಾರದ ಫಲಿತಾಂಶ ನಮಗೆ ಗೊತ್ತಾಗಿ ಬಿಟ್ಟರೆ, ನಿರ್ಧಾರ ತೆಗೆದುಕೊಳ್ಳುವ ಗಟ್ಟಿ ಮನಸ್ಸು ಪೊಳ್ಳಾಗಿಬಿಡುತ್ತದೆ. ತನ್ನ ಒಂದು ನಿರ್ಧಾರ ಕುರುಕ್ಷೇತ್ರದ ಶರಶಯ್ಯೆಯಲ್ಲಿ ಕೊನೆಗೊಳ್ಳುತ್ತದೆ ಎಂದು ತಿಳಿದಿದ್ದಿದರೆ ಭೀಷ್ಮ ಅವರ ನಿರ್ಧಾರ ಖಂಡಿತ ಅಷ್ಟೊಂದು ಭೀಷಣವಾಗಿ ಇರುತ್ತಿರಲಿಲ್ಲ ಅಲ್ಲವೇ. 

ಆ ಸಮಯಕ್ಕೆ ಸರಿ ಅನ್ನೊದು ನಾವು ನಮ್ಮ ಮನಸ್ಸಿನ ಸ್ಥಿತಿಯ ಮೇಲೆ ಅವಲಂಬಿತ. 

ಅದ್ಭುತ ಸನ್ನಿವೇಶಗಳು.. 

ಭೀಷ್ಮ ಉತ್ತರಾಯಣ ಪುಣ್ಯ ಕಾಲದಲ್ಲಿ ಈ ಭುವಿಯನ್ನು ಬಿಡುವ ನಿರ್ಧಾರ ಮಾಡಿದ ಸಮಯವಿದು.. ಸಂಕ್ರಾಂತಿ ನಮ್ಮ ಬದುಕಲ್ಲಿ ಒಂದು ಸಣ್ಣ ಕ್ರಾಂತಿಯನ್ನು ತರುವ ಒಂದು ನಿರ್ಧಾರ ನಮ್ಮದಾಗಿದೆ ಎಂದರೆ ಅದೇ ಅಲ್ಲವೇ Someಕ್ರಾಂತಿ. 

ಎಲ್ಲರಿಗೂ   ಮಕರ ಸಂಕ್ರಾಂತಿಯ ಶುಭಾಶಯಗಳು!

Friday, January 12, 2024

ಹೃದಯದಲಿ ಇದೇನಿದು ನದಿಯೊಂದು ಓಡಿದೆ!!!

 ಪುಟ್ಟ ವಯಸ್ಸಿನಲ್ಲಿಯೇ ಪಾರು ಮತ್ತೆ ಪರಮು ಅರ್ತಾತ್ ಪಾರ್ವತೀ ಮತ್ತು ಪರಮೇಶ  ತಂದೆತಾಯಿಯನ್ನು ಕಳೆದುಕೊಂಡಿದ್ದರು.. ಬಂಧು ಬಳಗ ಎಲ್ಲರೂ ಇವರನ್ನು ದೂರವಿಟ್ಟಿದ್ದರು.. ಇವರಿಬ್ಬರೂ ಒಂದೇ ಬೀದಿಯಲ್ಲಿ ಆಡಿ ಬೆಳೆದವರು.. ಪ್ರೀತಿ ಪ್ರೇಮ ಎಂಬ ಹಂಗಿಗೆ ಹೋಗಿರಲಿಲ್ಲ ಆದರೆ ಪರಿಚಯ ಚೆನ್ನಾಗಿದ್ದರಿಂದ, ಜೊತೆಯಲ್ಲಿಯೇ ಹೆಗಲಿಗೆ ಹೆಗಲು ಕೊಟ್ಟು ಬೆಳೆದರು. 

ತುಂಡು ಭೂಮಿ ಇಬ್ಬರಿಗೂ ಇತ್ತು.. ಬದುಕಲು ಆಶ್ರಯ ಕೊಡುವ ಸಣ್ಣದಾದ ಮನೆಯೊಂದಿತ್ತು.. ಹೇಗೋ ಬಂಧು ಮಿತ್ರರು ಇವರನ್ನು ದೂರವಿಟ್ಟಿದ್ದರಿಂದ, ಅಸ್ತಿ ಅದು ಇದು ಅನ್ನುವ ತಗಾದೆ ಇರಲಿಲ್ಲ.. ಎತ್ಲಾಗಾದರೂ ಹೋಗಿ ಸಾಯಲಿ ಎಂದು ಎಲ್ಲರೂ ದೂರ ಇಟ್ಟಿದ್ದು ಒಂದು ರೀತಿಯಲ್ಲಿ ಒಳ್ಳೆಯದೆ ಆಗಿತ್ತು.. 

ಚಿತ್ರಕೃಪೆ - ಗೂಗಲೇಶ್ವರ 

ಹೊಲದಲ್ಲಿ ಕಷ್ಟಪಟ್ಟು ಏನು ಸಾಧ್ಯವೋ ಅದನ್ನು ಬೆಳೆಯುತ್ತಿದ್ದರು, ಸೊಪ್ಪು, ತರಕಾರಿ, ಬೆಳೆ, ಶುಂಠಿ, ಭತ್ತ, ರಾಗಿ ಹೀಗೆ ಆ ಕಾಲಕ್ಕೆ ಏನು ಫಸಲು ಬರಲು ಸಾಧ್ಯವೋ ಅದನ್ನೇ ಆ ತುಂಡು ಭೂಮಿಯಲ್ಲಿ ಬೆಳೆಯುತ್ತಿದ್ದರು.. ಊಟಕ್ಕೆ ಮೋಸವಿರಲಿಲ್ಲ.. ಜೊತೆಗೆ ಬೆಳೆದ ಸಂಪನ್ನದಿಂದ ಅದನ್ನು ಮಾರಿ ಒಂದಷ್ಟು ದುಡ್ಡು ಕೂಡಿಡುತ್ತಿದ್ದರು.. 

ಚಿತ್ರಕೃಪೆ - ಗೂಗಲೇಶ್ವರ 

ಶಾಲೆಯಲ್ಲಿ ಓದು ಸಾಗಿತ್ತು.. ಬೆಳೆದ ನಂತರ ಮುಂದಕ್ಕೆ ಓದಬೇಕು ಎಂಬ ಇಚ್ಛೆಯಿದ್ದರೂ, ಸರಸ್ವತಿ ಕೊಂಚ ನಾಚಿಕೊಂಡು ಲಕ್ಷ್ಮಿಗೆ ದಾರಿ ಮಾಡಿ ಕೊಟ್ಟಿದ್ದಳು, ಅಂದರೆ ಜೀವನೋಪಾಯಕ್ಕೆ ದುಡಿಯಬೇಕಿದ್ದರಿಂದ, ಹೊಲದಲ್ಲಿ ದುಡಿಯುವುದೇ  ಮುಖ್ಯವಾಗಿತ್ತು.. 

ಹೀಗೆ ಬೆಳೆದಂಗೆ.. ಇವರಿಬ್ಬರ ಮಧ್ಯೆ ವಯೋಸಹಜವಾದ ಆಕರ್ಷಣೆ ಬೆಳೆಯಿತು.. ಒಂದಾಗೋಕೆ ಏನೂ ಅಡ್ಡಿಯಿರಲಿಲ್ಲ.. ಒಂದು ದಿನ ಪರಮು ಹೊಲದಲ್ಲಿ ಕೆಲಸ ಮಾಡುತಿದ್ದಾಗ "ಪಾರು ಬಾರೆ ಇಲ್ಲಿ ಒಂದು ಚೂರು ಮಾತಾಡಬೇಕು" ಎಂದ 

"ಪರಮು ಹೊಲಕ್ಕೆ  ಬಿಡ್ತಾ ಇದ್ದೀನಿ.  ಊಟದ ಸಮಾಯವಾಗ್ತಾ ಇದೆ.. ಅಲ್ಲಿ ಮಾವಿನ ಮರದ ನೆರಳಿಗೆ ಹೋಗಿ ಕೂತ್ಕೊಂಡಿರು. .ನೀರು ಬಿಟ್ಟು ಬರ್ತೀನಿ.. ಊಟ ಮಾಡ್ತಾ ಮಾತಾಡೋಣ"

ಚಿತ್ರಕೃಪೆ - ಗೂಗಲೇಶ್ವರ 
'ಸರಿ ಕಣೆ" 

ಊಟದ ಸಮಯವಾಯಿತು.. ಪಾರು ನೆಡೆದುಕೊಂಡು ಬರುತ್ತಿದ್ದನ್ನು ಕಂಡು ಅವಳನ್ನೇ ದೃಷ್ಟಿಸಿ ನೋಡಿದ.. ಎಂದೂ ಆ ರೀತಿಯಲ್ಲಿ ನೋಡಿರಲಿಲ್ಲ .. ಇಂದೇಕೋ ವಿಶೇಷ ಅನಿಸಿತು.. 

ಹತ್ತಿರ ಬಂದ ಪಾರು ತನ್ನನ್ನೇ ನೋಡುತ್ತಿದ್ದ ಪರಮುವನ್ನು "ಏನು ಸಾಹೇಬರು ನೋಡ್ತಾನೆ ಇದ್ದೀರಾ ಏನು ಸಮಾಚಾರ"

ಅಷ್ಟೊತ್ತಿಗೆ ಪರಮು ಡಬ್ಬಿಯಲ್ಲಿ ತಾನು ಮಾಡಿದ್ದ ರಾಗಿ ಮುದ್ದೆಯನ್ನು ತೆಗೆದು ಇಬ್ಬರಿಗೂ ತಟ್ಟೆಯಲ್ಲಿ ಹಾಕಿ, ಅದಕ್ಕೆ ಪಾರು ಮಾಡಿದ್ದ ಅವರೆಕಾಳಿನ ಹುಳಿ ಹಾಕಿ, ಪಕ್ಕದಲ್ಲಿ ಒಂದು ಪುಟ್ಟ ಈರುಳ್ಳಿ, ಹಸಿರು ಮೆಣಸಿನ ಕಾಯಿ ಇಟ್ಟಿದ್ದ" 

ಚಿತ್ರಕೃಪೆ - ಗೂಗಲೇಶ್ವರ 

ದಿನವೂ ಹೀಗೆ ಮಾಡ್ತಾ ಇದ್ದರು, ಒಬ್ಬರು ಒಂದು ಅಡಿಗೆ ಮಾಡಿದರೆ ಅದಕ್ಕೆ ಪೂರಕವಾಗಿ ಇನ್ನೊಬ್ಬರು ಅಡಿಗೆ ಮಾಡಿಕೊಂಡು ಬರುತ್ತಿದ್ದರು.. ಉಳಿದದ್ದು ಅನ್ನುವ ಪ್ರಶ್ನೆಯೇ ಬರುತ್ತಿರಲಿಲ್ಲ.. ಯಾಕೆ ಅಂದರೆ ಎಷ್ಟು ಬೇಕೋ ಅಷ್ಟೇ ಮಾಡಿಕೊಂಡು ಬರುತ್ತಿದ್ದರು.. ರಾತ್ರಿಗೆ ಹೊಸ ಅಡಿಗೆ.. ಹೀಗೆ ಸಾಗುತಿತ್ತು ಅವರ ಬದುಕು.. 

ಮತ್ತೆ ಕತೆಗೆ ಮರಳಿದರೆ .. ಪಾರು ಕೇಳಿದ ಪ್ರಶ್ನೆ ಕೇಳಿ ಒಮ್ಮೆ ಮೈಜಾಡಿಸಿಕೊಂಡು.. "ಪಾರು.. ಪಾರು" 

"ಪರಮು ನನ್ನ ಹೆಸರು ಪಾರು ಅಂತ ಗೊತ್ತು ..ವಿಷಯ ಹೇಳು"

"ಪಾರು ಪಾರು ಪಾರು.. ನನ್ನ ಮದುವೆ ಆಗ್ತೀಯೇನೇ"

ಕೈಯಲ್ಲಿದ್ದ ತಟ್ಟೆಯನ್ನು ಮೆಲ್ಲಗೆ ಕೆಳಗೆ ಇಟ್ಟಳು.. ಪಾರು.. ಆಕಾಶ ನೋಡುತ್ತಾ ಕೆಲವು ಕಾಲ ಹಾಗೆ ಕೂತಳು!!!

ಪರಮು ಮನಸ್ಸಲ್ಲಿ "ಹೃದಯದಲಿ ಇದೇನಿದು ನದಿಯೊಂದು ಓಡಿದೆ" ಹಾಡು ಸಾಗುತಿತ್ತು!!!

ಮುಂದೆ....... 

Tuesday, November 21, 2023

PSLV-C57/Aditya-L1 - ಆದಿತ್ಯ ಕಶ್ಯಪ್

 ಪೇಪರ್ ಅಂತ ಕೂಗುತ್ತಾ ಟಪ್ ಅಂತ ಮನೆ ಮುಂದೆ ಸದ್ದಾಯಿತು.. 

ಮನೆ ಮುಂದೆ ರಂಗೋಲಿ ಹಾಕಲು ಮನೆ ಬಾಗಿಲು ತೆಗೆದು ಹೊರಗೆ ಬಂದರು.. ಬಗ್ಗಿ ಪೇಪರ್ ತೆಗೆದುಕೊಂಡು ಒಮ್ಮೆಲೇ ಹೆಡ್ ಲೈನ್ ನೋಡಿ.. ಹರುಷದಿಂದ ರೀ ಅಂತ ಕೂಗುತ್ತಾ ಒಳಗೆ ಬಂದರು.. 

ಆಗ ತಾನೇ ಸಂಧ್ಯಾವಂದನೆ ಮುಗಿಸಿದ್ದರು.. ಮಡದಿಯ ಕೂಗಿಗೆ ಏನು ಅಂತ ಕಣ್ಣಲ್ಲೇ ಪ್ರಶ್ನೆ ಕೇಳಿದರು.. 

PSLV-C57/Aditya-L1 Mission launched and it is safe in the orbit...am so happy....  

Bharath is really doing great...under Modi ji!

ಒಂದು ಕ್ಶಣ ಅವಕ್ಕಾದರು ಮಡದಿಯ ಇಂಗ್ಲಿಷ್ ಭಾಷೆ ಕೇಳಿ.. ಕೊಂಚ ಕ್ಷಣದಲ್ಲಿಯೇ ಅರಿವಾಯಿತು.. ಅಕ್ಟೋಬರ್ ೨೦೨೦ ರಲ್ಲಿ ಇಲ್ಲಿಗೆ ಬಂದ ಮೇಲೆ ಓದುವ ಹಂಬಲ ಜಾಸ್ತಿಯಾಗಿ ಸರಸ್ವತಿ ವಿದ್ಯಾಲಯದಲ್ಲಿ ಪದವಿ ಓದುತ್ತಿದ್ದಳು.. ಇದೆ ಅಕ್ಟೋಬರ್  ೨೦೨೩ ರಲ್ಲಿ ಅಂತಿಮ ಪರೀಕ್ಷೆ ಇದ್ದು.. ಯಾವುದೇ ವಿಷಯ ಬಾಕಿ ಉಳಿಸಿಕೊಳ್ಳದೆ ವಿಶಾಲಾಕ್ಷಿ ಬಿ ಎ  ಅಂತ ಬೋರ್ಡ್ ಕೂಡ ಬರೆಸಿಕೊಂಡು ಇಟ್ಟುಕೊಂಡಿದ್ದು ನೆನಪಾಯಿತು.. . ಇಂಗ್ಲೀಷಿನಲ್ಲಿ ನಿರರ್ಗಳವಾಗಿ ಮಾತಾಡುತ್ತಿದ್ದಳು . ದೇಶ, ಭಾಷೆ, ರಾಜಕೀಯ, ಕ್ರೀಡೆ, ಸಿನಿಮಾ ಎಲ್ಲವೂ ಕರತಲಾಮಲಕವಾಗಿತ್ತು..ಯಾವುದೇ ವಿಷಯ ಅವಳಿಗೆ ಎಟುಕುತ್ತಿತ್ತು..  ಪರೀಕ್ಷಾ ಕಾಲ.. ಪದವಿ ಪರೀಕ್ಷೆಗೆ ಬಿಟ್ಟು ಬೇರೆ ಯಾವುದೇ ವಿಷಯವನ್ನು ಗಮನಿಸುತ್ತಿರಲಿಲ್ಲ.. ಅಷ್ಟು ಉತ್ಸಾಹ ಓದಿನಲ್ಲಿ..  ಪರೀಕ್ಷೆ ಮುಗಿದಿತ್ತು.. ಹಾಗಾಗಿ ಹಿಂದಿನ ಮಾಸದ ದಿನಪತ್ರಿಕೆಗಳನ್ನು ಒಂದೊದಾಗಿ ಓದುತ್ತಿದ್ದಳು.. 

ಹೌದು ಕಣೆ.. ನಿಜಕ್ಕೂ ನಮ್ಮ ಭಾರತ ಪುಣ್ಯ ಮಾಡಿದೆ.. ಆದರೆ ನನ್ನ ದುರಾದೃಷ್ಟ ನಾನು ಮೋದಿಗೆ ಮತದಾನ ಮಾಡಲು ಆಗಲಿಲ್ಲ ನೀನೆ ಪುಣ್ಯವಂತೆ ೨೦೧೪ ಮತ್ತು ೨೦೧೯ ರ ಲೋಕಸಭೆ ಚುನಾವಣೆಯಲ್ಲಿ ಮುರುಳಿ ಕರೆದುಕೊಂಡು ಹೋಗಿ ಮತದಾನ ಮಾಡಿಸಿದ್ದ.. ಮೋದಿ ಗೆಲುವಲ್ಲಿ ನಿನ್ನ ಮತದ ಪಾತ್ರವೂ ಇದೆ ಎಂದು ಖುಷಿಯಾಗಿದೆ... 

ಹೌದು ಕಣ್ರೀ ನೀವು ಹೇಳೋದು ಸರಿ.. ಭಾರತ ನಿಜಕ್ಕೂ ಪುಣ್ಯ ಮಾಡಿದೆ.. ಮೋದಿಯಂತಹ ನಾಯಕತ್ವ ದೊರಕಿರುವುದು.. ನಿಮಗೆ ಇನ್ನೊಂದು ವಿಷಯ ಗೊತ್ತೇ.. ?

ಅಪ್ಪ ಮಾತಾಡುತ್ತಿದ್ದದ್ದು ಕಡಿಮೆ ಆದರೆ ಕಿವಿ ಮಂದವಾಗಿದ್ದರೂ ಎಲ್ಲವನ್ನೂ ಅರಿಯುತ್ತಿದ್ದರು.. ಎಲ್ಲಾ ವಿಚಾರಗಳೂ ಗೊತ್ತಾಗುತಿತ್ತು.. 

ಏನು ವಿಚಾರ.. 

ನೀವು ಕಳ್ಳರು ಎಲ್ಲವೂ ಗೊತ್ತಿದೆ ಸುಮ್ಮನೆ ಕತೆ ಬಿಡ್ತಾ ಇದ್ದೀರಾ.. ಕೃಷ್ಣವೇಣಿ ದಿನವೂ ದೇವರ ದೀಪ ಹಚ್ಚಿ ಪೂಜೆ ಮಾಡುವಾಗ ಅವಳ ಪ್ರಾರ್ಥನೆ ಕೇಳಿಸಿಕೊಂಡು ಆಶೀರ್ವಾದ ನೀಡಿದ್ದೀರಾ ಸುಮ್ಮನೆ ಕತೆ ಬಿಡ್ತೀರಾ.. ನೀವೇ ಹೇಳಿ.. 

ಇಲ್ಲ ಕಣೆ ನೀನು ಹೇಳು.. ಆ ಖುಷಿ ನಿನ್ನಿಂದಲೇ ಅರಿವಾಗಲಿ.. ನಿನ್ನ ನಗು ಮೊಗ ನೋಡುವುದು ಒಂದು ಖುಷಿ.. 

ರೀ ನಮ್ಮ ಮೊಮ್ಮಗ ಆದಿತ್ಯ ಹೆಚ್ಚಿನ ಓದಿಗಾಗಿ ಇಂಗ್ಲೆಂಡಿನ ಕಾರ್ಡಿಫ್ ಪ್ರದೇಶದ ಕಾಲೇಜಿಗೆ ಹೋಗಿದ್ದಾನೆ . ನನಗೊಂತು ಬಹಳ ಖುಷಿ.. ಇಂಗ್ಲೆಂಡಿನ ಲಂಡನ್ ಸಮೀಪ ಇರುವ ಊರಿನಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಅವನ ಬದುಕಿಗೆ ಉತ್ತಮ ಅಡಿಪಾಯ ಹಾಕಿಕೊಡುವುದು.. ಕೃಷ್ಣವೇಣಿ ತನ್ನ ಬದುಕನ್ನೇ  ಮಗನಿಗೆ ಮುಡಿಪಾಗಿಟ್ಟಿದ್ದಾಳೆ... ಅದು ನಿಜಕ್ಕೂ ಸಾರ್ಥಕ ಕ್ಷಣ.. 

ಹೌದು ಕಣೆ.. ಪಾಪ ಆ ಮಗು ನಮ್ಮ ಮನೆಗೆ ತನ್ನ ಬದುಕನ್ನೇ ಮೀಸಲಿಟ್ಟಿದೆ.. ವಿಜಯ, ಶ್ರೀಕಾಂತ, ಮುರುಳಿ ಎಲ್ಲರ ವೃತ್ತಿ ಬದುಕಿನ ಆರಂಭಕ್ಕೆ ಅವಳೇ ಕಾರಣಕರ್ತೆ.. ಇಂದು ಎಲ್ಲರೂ ಬದುಕಿನಲ್ಲಿ ಒಂದು ಹಂತ ತಲುಪಿ ಗುರಿ ಸಾಧಿಸಿದ್ದಾರೆ ಎಂದರೆ ಅವಳ ಶ್ರಮ ಬಹಳ ಇದೆ.. 

ಹೌದು ಕಣ್ರೀ.. ಆದಿತ್ಯ ಕೂಡ ತುಂಟ ಹುಡುಗ. ಆದರೆ ವಿಮಾನ ನಿಲ್ದಾಣದಲ್ಲಿ ಬಹಳ ಜವಾಬ್ಧಾರಿಯಿಂದ ನೆಡೆದುಕೊಂಡ.. ತನ್ನ ಅಮ್ಮನನ್ನ ತಬ್ಬಿ ಹಿಡಿದು.. ಅಳಬಾರದು.. ಓದುತ್ತೇನೆ, ಬರುತ್ತೇನೆ... ಒಂದು ಕರೆ ಮಾಡು ಸಾಕು ಏನೇ ಸಮಸ್ಯೆ ಇದ್ದರೂ ನಾನಿದ್ದೇನೆ.. ಎಂದು ಹೇಳಿದಾಗ ನಿಜಕ್ಕೂ ಇಲ್ಲಿಂದ ನನಗೆ ಕಣ್ಣು ತುಂಬಿ ಬಂದಿತ್ತು.. ಕೃಷ್ಣವೇಣಿ ಅಳಲಿಲ್ಲ.. ಆದರೆ ಅವಳ ಕಣ್ಣಲ್ಲಿ ನೀರಿತ್ತು.. ಆದರೆ ಅದು ದುಃಖದ ಕಣ್ಣೀರಲ್ಲ ಬದಲಿಗೆ ಅವಳ ಜೀವನ ಪರಿಶ್ರಮದ ಬೆವರು ಕಣ್ಣುಗಳಲ್ಲಿ ಕಂಡಿತ್ತು. ಸಾಧಿಸಿದ ಮುಖಭಾವ.. ಸಾಧಿಸಿದ ಸಂತೃಪ್ತಿ ....!

ನಿಜಕ್ಕೂ ಅನುಗ್ರಹ ಸದನದ ಅನುಗ್ರಹಿತ ಕ್ಷಣಗಳು ಅಂದ್ರೆ ಇವೆ ಕಣೆ. 

ಪುಟ್ಟ ಮಗುವಾಗಿದ್ದಾಗ ಯಾರಾದರೂ ಎತ್ತಿಕೊಂಡರೆ ಅಮ್ಮನ ಹತ್ತಿರ ಹೋಗಬೇಕು ಎನ್ನುವುದನ್ನು ಮುದ್ದು ಮುದ್ದಾಗಿ ಅಮ್ಮತ್ತಾ ಅಮ್ಮತ್ತಾ ಎಂದು ತೊದಲು ಭಾಷೆಯಲ್ಲಿ ಹೇಳುತ್ತಿದ್ದ ಇಂದು ಅಮ್ಮನಿಂದ ಸಾವಿರಾರು ಮೈಲಿಗಳು ದೂರಕ್ಕೆ ಹೋಗಿ ಅಲ್ಲಿ ಓದಲು ಹೋಗಿದ್ದಾನೆ.. ಅವನೇ ಬಟ್ಟೆ ಒಗೆದುಕೊಂಡು, ಅಡಿಗೆ ಮಾಡಿಕೊಂಡು ಜವಾಬ್ಧಾರಿಯಿಂದ ನೆಡೆದುಕೊಳ್ಳುತ್ತಿದ್ದಾನೆ.. 

ಆದಿತ್ಯ ಮಗು.. ನಮ್ಮ ಮನೆಯಿಂದ ಓದಲು ವಿದೇಶಕ್ಕೆ ಹಾರಿದ್ದೀಯಾ.. ನಿನ್ನ ಗುರಿ ಮುಟ್ಟುವ ಹಾದಿಯಲ್ಲಿ ಯಾವುದೇ ಅಡೆತಡೆಗಳು ಬರಬಾರದು.. ಯಾವುದೇ ಅಡಚಣೆಗಳು ನಿನಗೆ ಅಡ್ಡಿಯಾಗಬಾರದು.. ನಿನ್ನ ಗಮನ ನಿನ್ನ ಅಮ್ಮನ ಗುರಿ ತಲುಪುವುದಷ್ಟೇ ಮುಖ್ಯವಾಗಿರಬೇಕು.. ಇನ್ಯಾವುದೇ ಅಡ್ಡಿ ಆತಂಕಗಳು ಬರಬಾರದು.. ಅದೇನೇ ಬಂದರೂ ನಿನ್ನ ಅಜ್ಜಿ ತಾತನನ್ನು ನೆನೆಸಿಕೋ.. ಆ ಕ್ಷಣದಲ್ಲಿ ಅದನ್ನು ದೂರ ಮಾಡುತ್ತೇವೆ.. 

ಹೌದು ಕಣ್ರೀ ಒಳ್ಳೆಯ ಮಾತು.. ಸೆಪ್ಟೆಂಬರ್ ಮಾಸದಲ್ಲಿ ಆದಿತ್ಯನ ಕಡೆ ಪ್ರಪಂಚವೇ ನೋಡುತ್ತಿತ್ತು.. 

ಒಂದು PSLV-C57/Aditya-L1 

ಇನ್ನೊಂದು ಆದಿತ್ಯ ಕಶ್ಯಪ್ 




ಆದಿತ್ಯ ಎಲ್ ೧ ಉಡಾವಣೆ .. ಪ್ರಪಂಚವೇ ನಮ್ಮ ಭಾರತದ ಕಡೆ ನೋಡುವಂತೆ ಮಾಡಿದೆ.. ಸೂರ್ಯನ ಹತ್ತಿರ ನಿಂತು ಸೂರ್ಯನ ವಲಯದಲ್ಲಿ ಆಗುವ ಬದಲಾವಣೆಗಳನ್ನು ನೋಡುವುದಕ್ಕೆ ಈ ಉಡಾವಣೆ ಉಪಯೋಗಕ್ಕೆ ಬರುತ್ತದೆ.. 

ಆದಿತ್ಯ ಕಶ್ಯಪ್ ಸಾಗರಗಳನ್ನು ದಾಟಿ ಲಂಡನ್ನಿಗೆ ಹೋಗಿದ್ದಾನೆ ..  ತಲುಪಿದ್ದಾನೆ.. ಬೆಳೆಯುತ್ತಿದ್ದಾನೆ. ಅವನ ಬೆಳೆವಣಿಗೆಯನ್ನು ಕೋರವಂಗಲ ಕುಟುಂಬ ಎದುರು ನೋಡುತ್ತಿದೆ.. 

ಎರಡೂ ಯೋಜನೆಗಳಿಗೆ ಯಶಸ್ಸಾಗಲಿ ಎಂದು ನಮ್ಮ ಶುಭಹಾರೈಕೆಗಳು.. 

ಶುಭವಾಗಲಿ ಮಗು ಹೋಗಿ ಬಾ.. ಜಯಶಾಲಿಯಾಗಿ ಹಿಂದಿರುಗು... ಅಮ್ಮನ ಆಶೀರ್ವಾದ ಸದಾ ಇದೆ. !!!

ಜೊತೆಗೆ ಜನುಮದಿನದ ಶುಭ ಹಾರೈಕೆಗಳು ನಿನಗೆ.. !

ಇಂತಿ ನಿನ್ನ ಅಜ್ಜಿ ತಾತಾ!!!

Tuesday, November 14, 2023

ಕುಮಾರ ಸಂಭವ.. !!! ಎಪ್ಪತೈದರ ಸಂಭ್ರಮ!!!

ಅದೊಂದು ಸಣ್ಣ ಹಳ್ಳಿ ...  ಹೊಯ್ಸಳರ ಆಳ್ವಿಕೆಗೆ ಒಳಗಾಗಿದ್ದ ಪ್ರದೇಶ.ನೂರಾರು ಕುಟುಂಬಗಳು ಬಾಳಿ ಬದುಕಿದ್ದ ಹಳ್ಳಿಯದು.. ಹತ್ತಾರು ವಕ್ಕಲುಗಳು ವ್ಯವಸಾಯವನ್ನೇ ದುಡಿಮೆ ಮಾಡಿಕೊಂಡಿತ್ತು.. ಕೆಲವಾರು ಕುಟುಂಬಗಳು ಶಾನುಭೋಗಿಕೆ ಮಾಡಿಕೊಂಡಿದ್ದವು.. 

ಹಾಸನದ ಬಳಿಯ ಕೋರವಂಗಲ 

ಅಂತಹ ಒಂದು ಕುಟುಂಬ ರಂಗಸ್ವಾಮಿ ಅವರದ್ದು.. ಶಾನುಭೋಗರಾಗಿ ಬಹಳ ಹೆಸರುವಾಸಿ .. ಅವರಿಂದ ಲಿಖಿತವಾದ ಅನೇಕ ದಾಖಲೆ ಪತ್ರಗಳು, ಒಕ್ಕಣೆಗಳು, ಅನೇಕಾನೇಕ ಮಾರ್ಗಸೂಚಿಗಳು, ಅಹವಾಲು ಪತ್ರಗಳು ಮರು ತಿದ್ದುಪಡಿ ಕಂಡಿದ್ದ ಉದಾಹರಣೆಗಳೇ ಇರಲಿಲ್ಲ.. ಶಾನುಭೋಗರು ರಂಗಸ್ವಾಮಿಗಳ ಪತ್ರ ಎಂದರೆ ಮರು ಮಾತಿಲ್ಲದೆ ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಬೇಕು ಎನ್ನುವ ಅಲಿಖಿತ ಸಂಪ್ರದಾಯದವಿದ್ದ ಕಾಲವದು ಅಂದರೆ ಅವರ ಬರವಣಿಗೆ, ಅದರ ಸಾರ, ಅದರಲ್ಲಿ ಅಡಕವಾಗಿದ್ದ ಕಾನೂನು ರೀತಿಯ ಪದಗಳು, ಅದರ ತಿರುಳು ಎಲ್ಲವೂ ಅರ್ಥಗರ್ಭಿತವಾಗಿದ್ದು ಸಂದರ್ಭವನ್ನು ವಿವರಿಸುವಂತಾಗಿದ್ದದ್ದು ಅವರ ಶಕ್ತಿಶಾಲಿ ಬರವಣಿಗೆಗೆ ಸಿಕ್ಕಿದ್ದ ಗೌರವ. . 

ಕೋರವಂಗಲದ ಅದ್ಭುತ ಕಲೆ -
ಬುಚೇಶ್ವರಾ ದೇವಾಲಯ 

ಅವರ ಶ್ರೀಮತಿ ಸುಬ್ಬನರಸಮ್ಮನವರು ಬಹಳ ಹೆಸರುವಾಸಿ  ನರಸಮ್ಮ ಅಂತಾನೆ ಅವರು ಎಲ್ಲರಲ್ಲೂ ಜನಜನಿತವಾಗಿದ್ದು.. ಅವರ ಮನೆ ಎಂದರೆ ಹೊಟ್ಟೆ ಹಸಿವಿಗೆ ಜಾಗವಿಲ್ಲ ಆದರೆ ಕರುಣೆಗೆ, ಮಮತೆಗೆ ದೇವಾಲಯವಾಗಿತ್ತು.. ಒಮ್ಮೆ ಆ ಊರಿನ ಒಂದು ಹೆಬ್ಬಾಗಿಲಿನ ಬಳಿಯಲ್ಲಿರುವ ಅರಳಿ ಕಟ್ಟೆಯಲ್ಲಿ ಒಂದು ಮಗುವನ್ನು ಕೂರಿಸಿಕೊಂಡು, ಅರಳಿಯ ಎಲೆಯಲ್ಲಿ ತಟ್ಟಿದ ರೊಟ್ಟಿಯನ್ನು ಒಂದು ಪುಟ್ಟ ಮಗುವಿಗೆ ತಿನಿಸುತ್ತಿದ್ದರು.. ಆ ಊರಿನ ತಿಳುವಳಿಕಸ್ಥರಾಗಿದ್ದವರೊಬ್ಬರು ಲಿಂಗಾಚಾರಿಗಳು.. ಅವರ ಮಾತಿನಂತೆ ಸುಬ್ಬನರಸಮ್ಮನವರು ಆ ಮಗುವಿಗೆ ರೊಟ್ಟಿಯನ್ನು ತಿನಿಸುತ್ತಿದ್ದರು..  

ಆಗ ಅಲ್ಲಿಗೆ ಬಂದ ಜೋಗಿ ಸಿದ್ಧರೊಬ್ಬರು.. ಏನಮ್ಮ ಈ ಮಗು.. ಏನಮ್ಮ ಈ ಮಗುವಿನ ಕತೆ... ಶಾಲೆಗೆ ಹೋಗುತ್ತಿಲ್ಲ.. ಆಡುತ್ತಿಲ್ಲ.. ಮಾತಿಲ್ಲ ಕತೆಯಿಲ್ಲ ಬರಿ ರೋಮಾಂಚನ ಅನಿಸುವಂತೆ ಸುಮ್ಮನೆ ಇರುವ ಈ ಮಗುವಿನ ಭವಿಷ್ಯ ನಿಮಗೆ ಕಾಣಿಸುತ್ತಿದೆಯೇ ಅಂದರು.. 

ಸುಬ್ಬನರಸಮ್ಮನವರು ಪಕ್ಕದಲ್ಲಿಯೇ ಇದ್ದ ಒಂದು ಮಡಕೆಯಲ್ಲಿ ಇದ್ದ ನೀರನ್ನು ಕುಡಿದು.. ಒಮ್ಮೆ ಆಗಸ ನೋಡಿ ಕುಮಾರ ಸಂಭವ ಅಂದರು..

ಏನಮ್ಮ ಕುಮಾರ ಸಂಭವವೇ ಇದು ಕಾಳಿದಾಸ ಬರೆದ ಮಹಾಕಾವ್ಯದ ಹೆಸರು . ಅದನ್ನು ಈಗ ಏತಕ್ಕೆ ಹೇಳುತ್ತಿದ್ದೀರಾ..? 

ಕಾಳಿದಾಸ ಬರೆದದ್ದು ಕುಮಾರ ಸಂಭವ.. ಈಗ ನಾನು ಹೇಳೋದು ಕುಮಾರನಲ್ಲಿ ಸಂಭವಿಸೋದು..ಕುಮಾರನಿಗೆ ಸಂಭವಾಗೋದು ..  ಅಂದರೆ ಕುಮಾರನಿಗೆ ಅಸಂಭವ ಅನ್ನೋದು ಇಲ್ಲ .. ಮಗುವಿಗೆ ಮಾತೆ ಪ್ರಬಲ ಅಸ್ತ್ರವಾಗುತ್ತದೆ.. ಈತನನ್ನು ಕಾಯುವುದೇ ಮಾತು., ಇದು ಅವನ ಮಾತೆಯಾದ ನಾನು ಹೇಳುವ ಮಾತೆ ಇದು .. ! 

ಈ ಮಗು. ಶಾಲೆಗೇ ತಡವಾಗಿ ಸೇರುತ್ತೆ.. ಮಗುವಿಗೆ ಕಣ್ಣಿನ ತೊಂದರೆ..  ಕಿವಿಯ ತೊಂದರೆ.. ಒಂದು ಮಗುವಿಗೆ ಏನು ತೊಂದರೆ ಇರಬಾರದೋ ಅದೆಲ್ಲವೂ ಇತ್ತು.. ಹಳ್ಳಿಯ ಹುಡುಗರ ಹಾಗೆ ಮೂಲೆಗುಂಪಾಗುವ ಎಲ್ಲಾ ಸಾಧ್ಯತೆಗಳಿದ್ದರೂ, ಕುಮಾರನ  ಅಕ್ಕ ನಾಗಲಕ್ಷ್ಮಿಯ ಮಾರ್ಗದರ್ಶನದಲ್ಲಿ ವಿದ್ಯಾವಂತನಾಗುತ್ತಾನೆ.. ನಾಗಲಕ್ಷ್ಮಿ ಒಂದನೇ ಪಾಠ ಹೇಳುತ್ತಿದ್ದರೆ ಈ ಮಗು ಅದರ  ಮುಂದಿನ ಪಾಠಗಳನ್ನು  ಓದಿ ಒಪ್ಪಿಸುವ  ಪರಿಯನ್ನು ಕಂಡು ನನ್ನ  ಮಗಳು ನಾಗಲಕ್ಷಿ ಬೆರಗಾಗುತ್ತಿದ್ದಳು..  ಈ ಮನೆ ಪರಿಸ್ಥಿತಿ ಏನೇ ಇದ್ದರೂ ಈತನ ಓದಿಗೆ ಏನೂ ಧಕ್ಕೆ ಬರುವುದಿಲ್ಲ.. ಇವನ ಒಬ್ಬ ಅನುಜಾಗ್ರ ಓದಿನ ಮುಖ್ಯ ಹಂತಕ್ಗೆ ಸಹಾಯ ಮಾಡುತ್ತಾನೆ..ಬರೆಯಲು ಕಾಗದದ ಕೊರತೆ ಕಂಡಾಗ.. ಶಾಲೆ ಮೈದಾನದಲ್ಲಿ ಸಿಕ್ಕುವ ಸಿಗರೇಟ್ ಬಾಕ್ಸ್ ಉಲ್ಟಾ ಮಾಡಿಕೊಂಡು ಖಾಲಿ ಜಾಗದಲ್ಲಿ  ಬರೆದು ಬರೆದು ಅಭ್ಯಾಸ ಮಾಡುತ್ತಾನೆ.. ಶಾಲಾ ಕಾಲೇಜುಗಳಲ್ಲಿ ಬಿಡುವಿನ ತರಗತಿಗಳಿಗೆ ಹೋಗಿ ಅಲ್ಲಿನ ಕಪ್ಪು ಹಲಗೆಯ ಮೇಲೆ ಸೀಮೆ ಸುಣ್ಣದಿಂದ ಬರೆದು ಲೆಕ್ಕಗಳನ್ನು, ವಿಜ್ಞಾನದ ವಿಷಯಗಳನ್ನು ಸಮೀಕರಣಗಳನ್ನು ಬಿಡಿಸುತ್ತಾ  ಅಭ್ಯಾಸ ಮಾಡುತ್ತಾ   ವಿದ್ಯಾಭ್ಯಾಸದಲ್ಲಿ ಹಂತ ಹಂತವಾಗಿ ಏರುತ್ತಾನೆ.. ವಿದ್ಯಾಭ್ಯಾಸದ ಜೊತೆಯಲ್ಲಿಯೇ ಬಳುವಳಿಯಾಗಿ ಬಂದ ಚಿತ್ರಕಲೆ ಕೈ ಹಿಡಿಯುತ್ತದೆ.. ನೋಡಿದ್ದನ್ನು, ಕಲ್ಪಿಸಿದ್ದನ್ನು, ಹಾಗೆ ಕಾಗದದ ಮೇಲೆ ಮೂಡಿಸುವ ಕಲೆ ಕರಗತವಾಗುತ್ತದೆ.. ಶ್ರೇಷ್ಠ ಕಲಾಕಾರನಾಗುವ ಎಲ್ಲಾ ಅರ್ಹತೆಗಳು ಇದ್ದರೂ, ಕಾರಣಾಂತಗಳಿಂದ.. ಬದುಕಲ್ಲಿ ಗೆಲ್ಲುವ ಛಲದಲ್ಲಿ, ಕಲೆಯನ್ನು ಮುಂದುವರೆಸಲಾಗದಿದ್ದರೂ, ಅವಕಾಶ ಸಿಕ್ಕಿದಾಗೆಲ್ಲ, ಕೋರವಂಗಲದ ಕುಟುಂಬ ಕಾರ್ಯಕ್ರಮದಲ್ಲಿಯೇ ಆಗಲಿ, ಬಂಧು ಮಿತ್ರರ ಮನೆಯ ಸಂಭ್ರಮದಲ್ಲಿಯೇ ಆಗಲಿ ತಮ್ಮ ಚಿತ್ರಕಲೆಯ ಹಸಿವನ್ನು ಬಿಂಬಿಸಿ, ಆ ಸಂಭ್ರಮಕ್ಕೆ ಇನ್ನಷ್ಟು ಹೊಳಪು ನೀಡುತ್ತಾನೆ.. ಹಾಗೆಯೇ ಚಿತ್ರಕಲೆಯಲ್ಲಿ ಬೆಳಕಿಗೆ ಬರುತ್ತಿರುವವರಿಗೆ ಉತ್ಸಾಹ ಹುಮ್ಮಸ್ಸು ಸ್ಪೂರ್ತಿಯ ಸೆಲೆಯಾಗಿದ್ದಾನೆ.. 
ಇದಕ್ಕೆ ನಾ ಮೊದಲೇ ಹೇಳಿದ್ದು ಕುಮಾರ ಸಂಭವ ಅಂತ :-)

ಇದು ಒಂದು ಹಂತದ ಕುಮಾರ ಸಂಭವ..ಇದು ಕುಮಾರನಲ್ಲಿ ಸಂಭವಿಸೋದು.. 

ಮುಂದೆ ಮಾಯಾನಗರಿ ಬೆಂಗಳೂರಿನಲ್ಲಿ ಕೆಲಸ ಸಿಕ್ಕಾಗ ಕೂಡ, ಬರುವ ಅಲ್ಪ ಆದಾಯದಲ್ಲಿ ಹೊಟ್ಟೆ ಬಟ್ಟೆ ಮಾಡಿಕೊಂಡು ತನ್ನ ಬದುಕಿಗೂ ಒಂದು ಗುರಿ ಇಟ್ಟುಕೊಂಡು.. ಮುಂದೆ ಒಂದು ಅತ್ಯುತ್ತಮ ಸಾರ್ವಜನಿಕ ಸಂಸ್ಥೆಯಲ್ಲಿ ಸೇರಿಕೊಂಡು ಉತ್ತಮ ಅವಕಾಶಗಳನ್ನು ಮೇಳೈಸಿಕೊಂಡು ಬೆಳೆದ.. ಇವನ ಮ್ಯಾನೇಜರ್ ಏನಪ್ಪಾ ಕುಮಾರ್ ಆ ಮಾಹಿತಿ ಬೇಕಿತ್ತು ನಾಳೆ ಕೊಡಬೇಕು ಎಂದರೆ.. ಆಗಲೇ ಬರೆದಿಟ್ಟುಕೊಂಡಿದ್ದ ಮಾಹಿತಿಯನ್ನು ರಪ್ಪನೆ ಕೊಟ್ಟು ಶಭಾಷ್ ಗಿರಿ ಗಳಿಸುತ್ತಿದ್ದನು..ಇದೆ ಇವನ ಜಾಣ್ಮೆ.. ಆಫೀಸಿನ ಎಲ್ಲಾ ಟೆಲೆಫೋನಿನ ಸಂಖ್ಯೆಗಳು, ಫ್ಯಾಕ್ಟರಿಯಲ್ಲಿ ಉತ್ಪಾದಿಸಲು ಉಪಯೋಗಿಸುತ್ತಿದ್ದ ವಸ್ತುಗಳ ಪಾರ್ಟ್ ನಂಬರ್ ಎಲ್ಲವೂ ಅಂಗೈ ರೇಖೆಯಷ್ಟೇ ಚಿರಪರಿಚಿತ.. ಹಾಗಾಗಿ ಇವರ ತಂಟೆಗೆ ಮ್ಯಾನೇಜ್ಮೆಂಟ್ ಹೋಗುತ್ತಲೇ ಇರಲಿಲ್ಲ.. 

ತನಗೆ ಬರುವ ಚೂರು ಪಾರು ಸಂಪಾದನೆಯಲ್ಲಿ ಅಲ್ಪ ಸ್ವಲ್ಪ ಉಳಿಸುತ್ತಾ ತನ್ನ ಅಕ್ಕ ಗೌರಿಯ ಮನೆಗೆ ಆಗಾಗಿ ಹೋಗಿ ಬರುತ್ತಾ ತನ್ನ ಕೈಲಾದಷ್ಟು ಸಹಾಯ ಮಾಡುತ್ತಲೇ ಇರುತ್ತಾನೆ.. 

ಇನ್ನು ಮುಂದಿನ ಹಂತ ಸಂಭವ ಆಗಲೇ ಬೇಕು ಎಂದು ಹಠ ತೊಟ್ಟು ಒಂದು ರೀತಿಯಲ್ಲಿ ವಿಧಿಗೆ ಸವಾಲೆಸೆದು ಸಂಭವಿಸಿಕೊಂಡ ಕುಮಾರನ ಸಾಹಸಗಾಥೆಯಿದು .. ಎಲ್ಲವನ್ನೂ ತಿಳಿದವರಿಗೂ ಸವಾಲಸೆದು ಗೆಲ್ಲುವ ಛಲಗಾರ.. 

ಮುಂದೆ ಇನ್ನು ಒಂದು ಹಂತದ ಸಂಭವ ನೆಡೆಯುತ್ತದೆ.. ಇವನ ಬಾಳಿನಲ್ಲಿ ಉಷೋದಯವಾಗುತ್ತದೆ..  ಸರ್ಕಾರಿ ಸ್ವಾಮ್ಯ ಸಂಸ್ಥೆಯಲ್ಲಿ ಲೆಕ್ಕಾಚಾರ ವಿಭಾಗದಲ್ಲಿ ಕೆಲಸ ಮಾಡುವ .. ಚೆಲುವೆ.. ದಕ್ಷಿಣ ಭಾರತದ ಚಿತ್ರ ಪ್ರಪಂಚದ ತಾರೆ ಸರಿತಾ .. ಈ ನಮ್ಮ ಉಷಾಳನ್ನು ಹೋಲುತಿದ್ದದ್ದು ವಿಶೇಷ... ಅವಳ ಅಪ್ಪನ ಮನೆಯಲ್ಲಿ ಅನೇಕ ಮಂದಿ ಇವಳನ್ನು ಸರಿತಾ ಅಂತ ಗುರುತಿಸುತ್ತಿದ್ದದ್ದು ಉಂಟು.. ಆದರೆ ಈ ಮಗಳು ನನ್ನ ಕುಟುಂಬದವಳು.. ಇವಳು ಸರಿತಾಳನ್ನು ಹೋಲುತ್ತಿದ್ದಳು ಎಂದರೆ ನನ್ನ ಮನಸ್ಸಿಗೆ ಕಷ್ಟ.. ಸರಿತಾ ಇವಳನ್ನು ಹೋಲುತಿದ್ದಳು ಎನ್ನುವುದು ನನಗೆ ಸರಿ ಕಾಣುತ್ತೆ.... 

ಅರಳಿ ಕಟ್ಟೆಯ ಸುತ್ತಲೂ ನೆರೆದಿದ್ದ ಹಳ್ಳಿಯ ಮಂದಿ ಒಮ್ಮೆ ನಕ್ಕರೂ .. ಅದ್ಭುತವಾದ ನಾಳಿನ ಬದುಕನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಿದ್ದ ನರಸಮ್ಮನವರ ಮುಂದಿನ ಮಾತುಗಳು ಮಿಸ್ ಆಗಬಾರದೆಂದು ಮತ್ತೆ ಗಮನವಿಟ್ಟು ಕೇಳತೊಡಗಿದರು.. ಜೋಗಿ ಸಿದ್ದರು ಯಾವುದೋ ಮಾಯಾಜಾಲದಲ್ಲಿ ಇರುವವರಂತೆ ಅರಳಿ ಕಟ್ಟೆಯಲ್ಲಿ ಮೈ ಮರೆತು ಕೂತುಬಿಟ್ಟಿದ್ದರು. 

ಕಿರಿಯರ ಜೊತೆ ಕಿರಿಯರಾಗಿ.. ಹಿರಿಯರ ಜೊತೆ ಹಿರಿಯರಾಗಿ.. ಮಕ್ಕಳ ಜೊತೆ ಮಕ್ಕಳಾಗಿ ಜಗತ್ತಿನ ಎಲ್ಲಾ ವಿಷಯಗಳ ಬಗ್ಗೆ ನಿರರ್ಗಳವಾಗಿ ಮಾತಾಡುವ. .ತನ್ನ ಜೊತೆ ಬೆಳೆದ ತಮ್ಮಂದಿರನ್ನು, ತಂಗಿಯರನ್ನು  ತನ್ನ ಮಕ್ಕಳಂತೆ ಪೋಷಿಸಿದ ತಾಯಿ ನನ್ನ ಸೊಸೆ ಉಷಾ. ನೋಡಲು ಸುಂದರಿ.. ನಗುವಾಗ ಅವಳ ಮೊಗವನ್ನು ನೋಡಲು ಚೆನ್ನ.. ಕುಮಾರ ಈ ಚಲುವೆಗೆ ಮನಸೋತಿದ್ದರಲ್ಲಿ ಯಾವುದೇ ಅನುಮಾನವಿಲ್ಲ. ಕೆಲಸ ಮಾಡುತ್ತಿದ್ದರೂ ಓದುವ ಹಸಿವು ಇಂಗಿರಲಿಲ್ಲ.. ಸ್ಪರ್ಧಾತ್ಮಕ ಪರೀಕ್ಷೆಗಳು, ಮತ್ತಿತರ ಪರೀಕ್ಷೆಗಳು ಹೀಗೆ ಯಾವುದೇ ರೀತಿಯಲ್ಲಿ ಓದುವುದು ಪ್ರಶ್ನೆಗಳನ್ನು ಮನೆಯಲ್ಲಿಯೇ ಕೂತು  ಉತ್ತರಿಸುವುದು, .  ಅಂಚೆ ಮೂಲಕ ಕಳಿಸುವುದು.. ಹೀಗೆ ಓದುವುದರ ಹಸಿವು ಸಾಗಿತ್ತು.. ಪದರಂಗ, ಪದಬಂಧ  ನೆಚ್ಚಿನ ಹವ್ಯಾಸ.. ಸಂಗೀತದಲ್ಲಿ ಅಪಾರ ಆಸಕ್ತಿ, ಕಾನಡ, ಹಂಸ, ಶಿವರಂಜಿನಿ, ದರ್ಬಾರಿ ಹೀಗೆ ಅನೇಕಾನೇಕ ರಾಗಗಳನ್ನು ಗುರುತಿಸುವುದು ಈಕೆಯ ವಿಶೇಷತೆ.. 

ಈ ಮುದ್ದು ಕುಟುಂಬ ಮಾಯಾನಗರಿಯಲ್ಲಿ ಇಬ್ಬರೂ ತಮ್ಮತಮ್ಮ ಬದುಕನ್ನು ರೂಪಿಸಿಕೊಳ್ಳಲು ಹೊರಟಾಗ ಸಂಭವಿಸಿದ್ದು ಎರಡು ನಕ್ಷತ್ರಗಳು. ಒಂದು ಮನೋಜವಂ ಮಾರುತ ತುಲ್ಯ ವೇಗಂ ಎನ್ನುವಂತೆ ಹುಟ್ಟಿದ  ಮಗು ಮನೋಜ ಅರ್ಥಾತ್ ದೀಪಕ್.. ಇನ್ನೊಂದು ಮಗು ಹಿಂದೂಗಳ ಹಬ್ಬಗಳಿಗೆ ಬೆಳಕು ನೀಡುವ..ತಮಸ್ಸು ಕಳೆಯುವ ಕಾರ್ತಿಕ ಮಾಸದ ಹೆಸರು ಹೊತ್ತ ಕಾರ್ತಿಕ್.. 

ಎರಡು ಮುದ್ದಾದ ಗೊಂಬೆಗಳ ಜೊತೆಯಲ್ಲಿ ಸಂಸಾರವೂ ಬೆಳೆಯಿತು. .ಹಾಗೆಯೇ ಕಂಡ ಕನಸ್ಸುಗಳು ನನಸಾಯಿತು... ಮಕ್ಕಳ ಜೊತೆಯಲ್ಲಿ ಸಣ್ಣ ಪುಟ್ಟ ಪಿಕ್ಣಿಕ್. ಹೋಗುವುದು .. ಫೋಟೋಗಳನ್ನು ತೆಗೆಯುವುದು.. ಅದನ್ನು ಮುದ್ರಿಸಿ ಖುಷಿ ಪಡುವುದು.. ಊರೂರು ಪ್ರವಾಸ.. ಮನಸ್ಸಿಗೆ ಬಂದಾಗ ತಿಂಡಿಗಳನ್ನು.. ಪಾನೀಯಗಳನ್ನು ಚೀಲಕ್ಕೆ ಹಾಕಿಕೊಂಡು ಹೊರಟರೆ ಮುಗೀತು ವಾಪಸ್ ಬರುವಾಗ ಅದ್ಭುತ ನೆನಪುಗಳನ್ನು ಹೊತ್ತು ತರುತ್ತಿದ್ದರು.. ಇದೆ ಈ ಮುದ್ದು ಕುಟುಂಬದ ಮಂತ್ರವಾಗಿತ್ತು..  ಕುಮಾರನಂತೂ ಹಿಮಾಲಯ ಶ್ರೇಣಿಗಳ ಕಡೆಗೆ ಅನೇಕ ಚಾರಣಗಳನ್ನು ಮಾಡಿ ಅಲ್ಲಿನ ಅನುಭವಗಳನ್ನು ಅವಕಾಶ ಸಿಕ್ಕಿದ ಕಡೆಯೆಲ್ಲಾ ಹೇಳುತ್ತಾನೆ.. 

ಬೆಂದಕಾಳೂರಿನಲ್ಲಿ ಒಂದು ಸೂರು ನಿಲ್ಲಿಸುವುದು ಎಲ್ಲರ ಕನಸ್ಸು ಹೌದು.. ಅದನ್ನು ನನಸ್ಸು ಮಾಡೋದಕ್ಕೆ ಎಲ್ಲರೂ ಪ್ರಯತ್ನಿಸುವುದು ಹೌದು.. ಉಳಿದುಕೊಂಡದ್ದು, ಉಳಿಸಿಕೊಂಡದ್ದು. . ಜೊತೆ ಮಾಡಿದ್ದು ಎಲ್ಲವನ್ನು ಸೇರಿಸಿ ಒಂದು ಸೂರು ಮಾಡಿಕೊಂಡರು ನಮ್ಮ ಕುಮಾರ-ಉಷಾ..ಕುಮಾರ-ಉಷಾರ ಮಕ್ಕಳು ಬೆಳೆದವು ವಿದ್ಯಾವಂತರಾದವು.. 

ಒಬ್ಬ ವೃತ್ತಿಪರತೆಯಿಂದ ಕ್ರೀಡಾಕ್ಷೇತ್ರದಲ್ಲಿ ಬೆಳಗುತ್ತಿದ್ದಾನೆ.. ಅವನೇ ದೀಪಕ್.. ಅವನ ಮುದ್ದಿನ ಮನೋರಮೆ ರಮ್ಯಾ.. ಅವಳು ಬಂದಳು ರಮ್ಯಾ ಚೈತ್ರ ಕಾಲ ಶುರುವಾಯಿತು.. ಆ ಚೈತ್ರಕಾಲದಲ್ಲಿ ಮಾವಿನ ಹೂವು ಹಣ್ಣಾಗಿ ಸಂಭವವಾಗಿದ್ದು ಶಾರ್ವರಿ.. ನನ್ನ ಮಗನ ಸೊಸೆ ತನ್ನ ಎತ್ತರದಷ್ಟೇ ಎತ್ತರ ನಿಂತು  ಹೆಗಲಿಗೆ ಹೆಗಲು ಕೊಟ್ಟು ಜೊತೆ ನಿಂತು ಗಟ್ಟಿಯಾಗಿಸಿದ್ದು ಈ ಜೋಡಿಯ ಮುದ್ದಾದ ಸಂಸಾರ.. 

ಸೈಬರ್ ಯುಗದೊಳ್ ಒಂದು  ಮಧುರ  ಪ್ರೇಮ ಕಾವ್ಯ….ಮಾಹಿತಿ ತಂತ್ರಜ್ಞಾನದಲ್ಲಿ ಬೆಳೆದ ಕಾರ್ತಿಕ್ ಬದುಕನ್ನು ಪ್ರೇಮಮಯಗೊಳಿಸಿದವಳು ಮಧುರ.. ಬ್ಯೂಟಿ ವಿಥ್ ಬ್ರೈನ್ ಎನ್ನುವ ಮಾತು  ಇವಳಿಗೆ ಅನ್ವಯಿಸುತ್ತದೆ ...  ಮಧುರ ತನ್ನ ಮುದ್ದಾದ ಪತಿರಾಯನ ಜೊತೆ ಬದುಕಿನ ಸಮೀಕರಣ ಬಿಡಿಸುತ್ತಾ ಮುದ್ದಾದ ಮಕ್ಕಳು ಪ್ರೀತಿಯ ಸಿಂಚನ.. ಮಧುರ ಮಾತಿನ ಇಂಪನಳಲ್ಲಿ ಬದುಕಿನ ಸಾರ್ಥಕತೆಯನ್ನು ಅನುಭವಿಸುತ್ತಿದ್ದಾರೆ.. .. 





ಇಂತಹ ಅಮರ ಮಧುರ ಪ್ರೇಮ ತುಂಬಿದ ಕುಟುಂಬ ಬೆಂದಕಾಳೂರಿನಲ್ಲಿ ಕಾಲೂರಿ ನಿಂತಿದ್ದು.. ಬೆಳೆದದ್ದು.. ಬೆಳೆಯುವುದು.. ಹರಡುವುದು ನೋಡುವುದೇ ಒಂದು ಭಾಗ್ಯ.. 

ಇದೆಲ್ಲ ಒಂದು ಟ್ರಾಕಿನಲ್ಲಿ ಓಡುತ್ತಿದ್ದರೆ ... ಚಟುವಟಿಕೆಯ ಕುಮಾರ ಇದರ ಜೊತೆಯಲ್ಲಿ ಗ್ರಹಗತಿಗಳ ಬಗ್ಗೆ ಮಾಹಿತಿ ಕಲಿತು.. ಅದರಲ್ಲಿ ಉನ್ನತ ಮಟ್ಟದಲ್ಲಿ ವಿದ್ಯಾರ್ಹತೆ ಸಂಪಾದಿಸಿ. ಅನೇಕ ಕಿರಿ ಹಿರಿಯರಿಗೆ ಮಾರ್ಗದರ್ಶನ ಮಾಡುತ್ತಾ.. ಅನೇಕಾನೇಕ ಬದುಕಿಗೆ ಬೆಳಕಾಗಿದ್ದಾನೆ .. ನನ್ನ ಮಗಳು ನಾಗಲಕ್ಷ್ಮಿಯ  ಮಗ ನಾಗಭೂಷಣ ಮುಂದೆ ಜ್ಯೋತಿಶ್ಯಾಸ್ತ್ರದಲ್ಲಿ ಅದ್ಭುತ ಸಾಧನೆ ಮಾಡುತ್ತಾ ಹಾಗೂ  ಆಧ್ಯಾತ್ಮಿಕ ಜಗತ್ತಿನಲ್ಲಿ ತನ್ನದೇ ಒಂದು ಸ್ಥಾನ ಕಂಡುಕೊಳ್ಳುತ್ತಾ ಇರುವ.. ಅವನ ಜೊತೆಯಲ್ಲಿ ಕುಮಾರನು ನೆಡೆಯುತ್ತಾ ತನಗೆ ತಿಳಿದ ವಿಷಯಗಳನ್ನು ಹರಡುತ್ತ್ತಾ ಬೆಳೆಯುತ್ತಿದ್ದಾನೆ .. ಬೆಳೆಸುತಿದ್ದಾನೆ… 

ಸುಬ್ಬನರಸಮ್ಮನವರು ಆಗಸ ನೋಡುತ್ತಾ "ನೋಡಿ ಚಾರಿಗಳೇ ಮೇರಾ ನಾಮ್ ಜೋಕರ್ ಚಿತ್ರದ ಹಾಡಿನಂತೆ.. ಕಲ್ ಖೇಲ್ ಮೇ ಹಮ್ ಹೊ ನಹೋ  ಗರ್ಧಿಶ್ ಮೇ ತಾರೆ ರಹಂಗೆ ಸದಾ ಎನ್ನುವಂತೆ.. ಕುಮಾರ ಸಂಭವಂ ಲೇಖನದಿ ಹೇಳಿರುವಂತೆ ಕುಮಾರನ ಕುಟುಂಬದ ಅತ್ಯುತ್ತಮ ಮಜಲನ್ನು ನಾವು ಭುವಿಯಿಂದ ನೋಡದೆ ಇರಬಹದು ಆದರೆ ಧ್ರುವ ನಕ್ಷತ್ರದ ಹಾಗೆ ಆಗಸದಿಂದ ಖಂಡಿತ ನೋಡುತ್ತಿರುತ್ತೇವೆ ... ಹರಸುತ್ತಿರುತ್ತೇವೆ.. ಅವನ ಹಠ ಸಾಧನೆಯಂತೆ ಸದಾ ಶುಭವೇ ಆಗುತ್ತದೆ.. ಆಗುತ್ತಿರುತ್ತದೆ.. "

ಕುಮಾರ ಸಂಭವಂ 
ಉಷಾ ಮಾರ್ಗದರ್ಶನಂ 
ರಮ್ಯಾ ಚೈತ್ರ ಕಾಲದಿ ದೀಪಕ ರಾಗ ಹಾಡಿತಂ  
ಸೈಬರ್ ಯುಗದೊಳ್ ಅಮರ ಮಧುರ ಕಾರ್ತಿಕ ಪ್ರೇಮಂ 
ಇವರುಗಳೆಲ್ಲ ಕೈಜೋಡಿಸಿರುವಾಗ ಎಲ್ಲವೂ ಸಂಭವಂ ಸಂಭವಂ ಸಂಭ್ರಮಂ !!!!
ಕುಮಾರನಿಗೆ ಎಪ್ಪತ್ತೈದರ ಸಂಭ್ರಮಂ!!!



ಅಂದು ಕಾಳಿದಾಸ ಬರೆದದ್ದು ಕುಮಾರ ಸಂಭವಂ ,, ನನ್ನ ಕಿರಿಮಗನಿಗೆ ನಾ ಭವಿಷ್ಯ ರೂಪಿಸಿ ಅವನಿಗೆ ಹೇಳಿದ್ದು ಕುಮಾರನಿಗೆ ಎಲ್ಲವೂ ಸಂಭವಂ!!!

ಅಂದದ ಬದುಕಿಗೆ ಚಂದದ ಚೌಕಟ್ಟು  
ಎಪ್ಪತೈದರ ಸಂಭ್ರಮ !!!

(ಮಾತೃ ದೇವೋಭವ ಶ್ರೀಮತಿ ಸುಬ್ಬನರಸಮ್ಮನವರ ನಿರೂಪಣೆಯಾಗಿರುವುದರಿಂದ ಏಕವಚನದ ಉಪಯೋಗವಾಗಿದೆ.. ಮತ್ತೆ ಭೂತ ಭವಿಷ್ಯತ್ ವರ್ತಮಾನದಲ್ಲಿ ಓಡಾಡುತ್ತಾ ನಿರೂಪಣೆ ಮಾಡಿರುವುದರಿಂದ ಎರಡು ಆಯಾಮದಲ್ಲಿ ಈ ಲೇಖನ ಮೂಡಿ ಬಂದಿದೆ.. )

Saturday, October 28, 2023

ಕೆರೆಯ ಹತ್ತಿರ ಕುದುರೆಯೋ .. ಕುದುರೆಯ ಹತ್ತಿರ ಕೆರೆಯೋ

ಮಧುರ ಮಕ್ಕಳೇ.. 

ಇನ್ನೂ ಮುರಳಿ ಓದಲು ಶುರು ಮಾಡಿರಲಿಲ್ಲ.. 

ಒಬ್ಬ ಬಿಳಿವಸ್ತ್ರ ಧಾರಿ ಎದ್ದು ನಿಂತ.. ಕುರುಚಲು ಫ್ರೆಂಚ್ ಗಡ್ಡ .. ಹಣೆಯಲ್ಲಿ ಚಂದನದ ಜೊತೆ ಕುಂಕುಮ.. ನೀಟಾಗಿ ಕ್ರಾಪ್ ತೆಗೆದು ಬಾಚಿದ್ದ ತಲೆಗೂದಲು.. ಎಡಗೈಗೆ ಒಂದು ಬೆಳ್ಳಿಯ ಬಳೆ .. ಬಲಗೈಯಲ್ಲಿ ವಾಚ್.. ಜೊತೆಗೆ ಆತನ ತಂಗಿ ಕಟ್ಟಿದ್ದ ರಕ್ಷಾ ಬಂಧನದ ರಾಖಿ.. 

"ಅಜ್ಜ ಇವತ್ತು ಒಂದು ಪುಟ್ಟ ಕಥೆ ಹೇಳ್ತೀಯ.. ನಿನ್ನ ಬಾಯಲ್ಲಿ ಚಂದದ ಕತೆ ಚೆನ್ನಾಗಿರುತ್ತೆ.. ಮತ್ತು ನೀತಿಯುಳ್ಳ ಕಥೆಯಾಗಿರುತ್ತೆ.. ಹೇಳು ಅಜ್ಜ"

"ಮಧುರ ಮಕ್ಕಳೇ.. ..ನಿಮ್ಮ ನಡುವಿನಿಂದ ಎದ್ದು ಬಂದ ಈ ಹುಡುಗ ಹೇಳಿದಂತೆ ಇಂದು ಜ್ಞಾನ ಕೊಡುವ ಒಂದು ಪುಟ್ಟ ಘಟನೆ ಹೇಳುತ್ತೇನೆ ಕೇಳಿ.. "

ಪ್ರಶ್ನೆ: ಕುದುರೆಯ ಹತ್ತಿರವೇ ಯಾವಾಗ ಕೆರೆ ಬರುತ್ತದೆ?.. ಬರಲು ಸಾಧ್ಯವೇ?

ಉತ್ತರ: ಭಗವಂತನಿಗೆ ಸಂಪೂರ್ಣ ಶರಣಾದಾಗ ಕುದುರೆಯ ಹತ್ತಿರವೇ ಕೆರೆ ಬರುತ್ತದೆ!!!

ಗೀತೆ : ನಾನೂ ನೀನು ನೆಂಟರಯ್ಯ ನಮಗೆ ಭೇದ ಇಲ್ಲವಯ್ಯಾ.. ವಿಠಲ ರಂಗಾ.. 


ಓಂ ಶಾಂತಿ.... ಮಕ್ಕಳೇ ಮಹಾರಾಷ್ಟ್ರದಲ್ಲಿರುವ ಪಂಡರಾಪುರದ ವಿಠಲನ ಪರಮ ಭಕ್ತ ..ಗೋರಾ ಎನ್ನುವ ಕುಂಬಾರ ಅರ್ಥಾತ್ ಮಣ್ಣಿನಿಂದ ಮಡಕೆ ಕುಡಿಕೆ ಮಣ್ಣಿನ ಸಾಮಾನುಗಳನ್ನು ಮಾಡುತ್ತಾ ಸಂತೆಯಲ್ಲಿ ಮಾರಿ ಕುಟುಂಬವನ್ನು ನೆಡೆಸುತ್ತಿದ್ದ ಪರಮ ಭಕ್ತ.. ಸದಾ ಭಾವಂತನ ನಾಮಸ್ಮರಣೆಯಲ್ಲಿಯೇ ಪ್ರತಿ ಕ್ಷಣವನ್ನು ಕಳೆಯುತ್ತಿದ್ದ ಮಹಾನ್ ಭಕ್ತ.. 

ಕತೆಯನ್ನು ಪುಟ್ಟದಾಗ ಮೊಟಕು ಮಾಡಿ ಹೇಳುತ್ತೇನೆ.. ಗೋರನನ್ನು ಪುಟಕ್ಕೆ ಇಟ್ಟ ಚಿನ್ನ ಮಾಡಬೇಕು ಎಂಬ ಸಂಕಲ್ಪದಿಂದ ಭಗವಂತ ಗೋರನಿಗೆ ನಾನಾ ಪರೀಕ್ಷೆ ಒಡ್ಡಿ ಆತನ ಎರಡು ಕೈಗಳನ್ನೂ ಕಳೆದುಕೊಳ್ಳುವ ಹಾಗೆ ಮಾಡುತ್ತಾನೆ.. ನಂತರ ಆತನ ಸೇವೆಗಾಗಿ ಸಾಕ್ಷತ್ ವಿಠಲನೇ ಆತನ ಮನೆಗೆ ರಂಗ ಎಂಬ ಹೆಸರಿನಿಂದ ಸೇವಕನಾಗಿ ಬರುತ್ತಾನೆ.. 

ಸ್ವಲ್ಪ ಸಮಯದ ನಂತರ.. ಗುಡಿಯಲ್ಲಿ ವಿಠಲನನ್ನು ಕಾಣದೆ ಪರಿತಪಿಸುವ ಸಂತ ನಾಮದೇವರು ಅಲ್ಲಿದ್ದ ವಿಠಲನ ಮೂರ್ತಿಯ ಮುಂದೆ ನನ್ನ ವಿಠಲ ಎಲ್ಲಿ ಎಂದು ಪ್ರಶ್ನಿಸಿದಾಗ.. ಮೂರ್ತಿಯಿಂದ ವಿಠಲನ ರಾಣಿ "ನಾಮದೇವ ಭಕ್ತ ವತ್ಸಲ ತನ್ನ ಭಕ್ತರ ಮನೆಯಲ್ಲಿ ಸೇವೆ ಮಾಡಿಕೊಂಡಿದ್ದಾರೆ ಎಂದು ಉತ್ತರ ಬರುತ್ತದೆ.. " ಅಚ್ಚರಿಗೊಂಡ ನಾಮದೇವರು ಎಲ್ಲಿ ಮನೆ ಎಂದು ವಿಚಾರಿಸಿದಾಗ ಗೋರನ ಮನೆ ಎಂದು ಉತ್ತರ ಬರುತ್ತದೆ.. 

ಅಲ್ಲಿಂದ ಕಟ್ ಮಾಡಿ ಗೋರನ ಮನೆಗೆ ಬರುವ ನಾಮದೇವರು.. ಗೋರಣ್ಣ ನನ್ನ ವಿಠಲನನ್ನು ತೋರಿಸು ಎಂದಾಗ... "ಇಲ್ಲೆಲ್ಲಿ ವಿಠಲ ಸ್ವಾಮೀ.. ಪಂಡರಾಪುರದಲ್ಲಿ.. ಎಷ್ಟೋ ವರ್ಷಗಳ ಅಸೆ  .. ಪಂಡರಾಪುರದಲ್ಲಿ ವಿಠಲನ ದರ್ಶನ ಮಾಡಬೇಕು.. "

ನೀನೇಕೆ ಅಲ್ಲಿಗೆ ಹೋಗಬೇಕು ಗೋರಣ್ಣ ವಿಠಲನೇ ನಿನ್ನ ಮನೆಗೆ ಬಂದಿದ್ದಾನೆ.. ಎಲ್ಲಿ ತೋರಿಸು.. ಎಲ್ಲಿ ತೋರಿಸು.. 

"ನನ್ನ ಮನೆಯಲ್ಲಿ ನಾನು, ನನ್ನ ಮಡದಿಯರು ರಂಗಣ್ಣ ಇಷ್ಟೇ" ಅಂತ ಇನ್ನೂ ಪೂರ್ಣ ಮಾಡಿರಲಿಲ್ಲ ಅಷ್ಟಕ್ಕೇ ಸಂತ ನಾಮದೇವರು. ರಂಗಣ್ಣನೇ ನನ್ನ ವಿಠಲ.. ತೋರಿಸು ತೋರಿಸು.. ಎಂಥ ಅಂದಾಗ ಅಚ್ಚರಿ, ಗಾಬರಿ, ಸಂತಸ. .ದುಃಖ ಹತಾಶೆ ಎಲ್ಲವೂ ಒಮ್ಮೆಲೇ ಗೋರನಿಗೆ

ಮಕ್ಕಳೇ.. ನಾನು ಪ್ರಶ್ನೆ ಕೇಳಿದ್ದೆ ಕುದುರೆ ಕೆರೆಯ ಹತ್ತಿರಕ್ಕೆ ಹೋಗಬೇಕು ಇಲ್ಲವೇ ಕೆರೆಯೇ ಕುದುರೆ ಹತ್ತಿರ ಬರಬೇಕು.. ಇಂದು ಕುದುರೆಯೇ ಕೆರೆಯ ಹತ್ತಿರಕ್ಕೆ ಬಂದಿದೆ.. ಇದೆ ಭಕ್ತರ ಪುಣ್ಯ.. 

ಎಲ್ಲರಿಗೂ ಸಂತಸ.. ಮತ್ತೆ ಆ ಹುಡುಗ ಎದ್ದು ನಿಂತು.. "ಅಜ್ಜ ಭಕ್ತರ ಪುಣ್ಯವೇ ಭಗವಂತ ನೀಡುವ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಹಾಗೆಮಾಡುತ್ತದೆ .. ಹಾಗೆಯೇ ಗೋರನ ಅಪರಿಮಿತ ಭಕ್ತಿ. .ಭಗವಂತನನ್ನೇ ಅವನ ಮನೆಗೆ ಕರೆಸಿತು.. ಅಲ್ಲವೇ ಅಜ್ಜ"

"ಹೌದು ಮಗು.. ಇಂದು ಕೂಡ ಹಾಗೆಯೇ ಆಯಿತು ನೋಡು.. ಒಬ್ಬರು ನನ್ನ ಕ್ಷೇತ್ರದಲ್ಲಿ ಸೇವೆ ಮಾಡುತ್ತಾ ಮೂವತ್ತು ವರ್ಷಗಳು ಕಳೆದಿದ್ದಾರೆ.. ಅವರ ಸಂಪರ್ಕಕ್ಕೆ ಬಂದ ಯಾರನ್ನೂ ಸುಮ್ಮನೆ ಕೂರಲು ಬಿಡದೆ ಒಂದಲ್ಲ ಒಂದು ಸೇವೆಯಲ್ಲಿ ಎಲ್ಲರನ್ನೂ ತೊಡಗಿಸುವ ಮುಗ್ಧ ಹೆಣ್ಣು ಮಗು ... ಅವರ ಪತಿರಾಯ ತನ್ನದೇ ಆದ ರೀತಿಯಲ್ಲಿ ತಾನು ನಂಬಿದ ಸರಿ ದಾರಿಯಲ್ಲಿ ನೆಡೆಯುತ್ತಾ ತನ್ನ ಬರವಣಿಗೆಯಿಂದ ಎಲ್ಲರಿಗೂ ಇಷ್ಟವಾಗುವ ಹುಡುಗ.. ಅವರ ಮಗಳು ಗರ್ಭದಲ್ಲಿದ್ದಾಗಲೇ ಈ ಶಕ್ತಿಯನ್ನು ಬಳುವಳಿಯಾಗಿ ಪಡೆದವಳು. ಇನ್ನೊಬ್ಬ ಮಗಳು ತಾವರೆ ಎಲೆಯ ಮೇಲಿನ ನೀರಿನ ಬಿಂದುವಿನ ಹಾಗೆ ಅಂಟಿಕೊಂಡು ಇರದೇ.. ಬಿಟ್ಟು ನಿಲ್ಲದೆ.. ತನ್ನದೇ ರೀತಿಯಲ್ಲಿ ಜ್ಞಾನ ಮಾರ್ಗದಲ್ಲಿ ನೆಡೆಯುವಳು.. ಇಂತಹ ಸುಂದರ ಪರಿವಾರಕ್ಕೆ ನನ್ನ ಮುದ್ದು ಮಕ್ಕಳು ಸೌಭಾಗ್ಯಾ ದೀದಿ, ಇಂದ್ರಾಣಿ ದೀದಿ, ರಾಜ್ ಭಾಯ್, ಆನಂದ್ ಭಾಯ್ ಇವರೆಲ್ಲ ನನ್ನ ನಿಮ್ಮೆಲ್ಲರ ನೆಚ್ಚಿನ ಮಧುವನಕ್ಕೆ ಬಂದು ತಮ್ಮದೇ ರೀತಿಯಲ್ಲಿ ಸೇವೆ ಮಾಡುವ ಮಕ್ಕಳು.. ಇವರೆಲ್ಲ ತಮ್ಮ ಕೆಲಸದ ನಡುವೆ ಕೂಡ ರಾಜರಾಜೇಶ್ವರಿ ನಗರದ ರಾಜ ಯೋಗ ಕೇಂದ್ರದಲ್ಲಿ ಅಪಾರ ಶ್ರಮ ವಹಿಸಿ, ಇಂದು ಈ ಕೇಂದ್ರ ಹೆಸರು ಮಾಡಿದೆ ಎಂದರೆ ಇದಕ್ಕೆ ಇವರು ಕಾರಣ.. ಇವರುಗಳು  ಸಂಪಾದಿಸಿದ ಪುಣ್ಯದ ಒಂದು ದೃಷ್ಟಿಯನ್ನು ಈ ದಂಪತಿಗಳ ಮನೆಗೂ, ಮನೆಯವರಿಗೂ ಕೊಟ್ಟು ಸಕಲವೂ ಅನುಗ್ರಹವಾಗಲಿ ಎಂದು ಆಶೀರ್ವಾದ ಮಾಡಿ ಬಂದ ಸುಂದರ ಕ್ಷಣವದು.. ಈ ಮುದ್ದು ಮಕ್ಕಳಿಗೆ ಆ ಭಗವಂತ ಸದಾ ಒಳ್ಳೆಯದನ್ನೇ ಮಾಡುತ್ತಾನೆ.. ಇವರಿಂದ ರಾಜರಾಜೇಶ್ವರಿ ನಗರದ ರಾಜಯೋಗ ಕೇಂದ್ರ ಇನ್ನಷ್ಟು ಬೆಳೆಯುತ್ತದೆ.. ಇನ್ನಷ್ಟು ಬೆಳಗುತ್ತದೆ.. ಇಡೀ ಪ್ರದೇಶಕ್ಕೆ ಇದು ಒಂದು ಮಾದರಿ ರಾಜಯೋಗ ಕೇಂದ್ರವಾಗುತ್ತದೆ.. ಸೌಭಾಗ್ಯ ಅಕ್ಕನವರ ನೇತೃತ್ವದಲ್ಲಿ ಈ ಕೇಂದ್ರ ಅತ್ಯುತ್ತಮ ಸೇವೆ ಮಾಡುವ ಕೇಂದ್ರವಾಗಿ ಹೆಸರು ಮಾಡುತ್ತದೆ.. ಈ ಕೇಂದ್ರದ ಯಶಸ್ಸಿಗೆ ಇದು ನನ್ನ ಆಶೀರ್ವಾದ .. 

ಆ ಹುಡುಗನಿಗೆ ಮಧುವನ ನೋಡಬೇಕು ಎನ್ನುವ ಆಸೆ ಇದೆ.. ಅದಕ್ಕಿಂತಲೂ ಹೆಚ್ಚು ತನ್ನ ಕ್ಯಾಮೆರಾದಲ್ಲಿ ಅಲ್ಲಿನ ಪ್ರತಿ ದೃಶ್ಯವನ್ನು ಸೆರೆಹಿಡಿಯಬೇಕು ಎನ್ನುವ ಕಾತುರ.. ಜೊತೆಗೆ ಅವನ ಇಷ್ಟದ ನಿರ್ದೇಶಕರ ಒಂದು ಚಿತ್ರ ನಮ್ಮ ತಾಣದಲ್ಲಿಯೇ ಚಿತ್ರೀಕರಣ ವಾಗಿರೋದು.. ಮತ್ತೆ ಅದೇ ಜಾಗದಲ್ಲಿ ತಾನೂ ಕೂತು ಫೋಟೋ ತೆಗೆಯಬೇಕು ಎನ್ನುವ ಆಸೆ.. ಇದೆ ಇವ ಕುದುರೆಯಾದರೆ.. ಮಧುವನದ ಮಂದಿ ಕೆರೆ.. ಇಂದು ಕೆರೆಯೇ ಕುದುರೆಯ ಹತ್ತಿರ ಬಂದಿದೆ.. ಅದೇ ಅಲ್ಲವೇ ಈ ಮನೆಯ ಪುಣ್ಯ.. 

ಸಕಲವೂ ಸಕಾಲಕ್ಕೂ ಒಳೆಯದಾಗಲಿ ಎಂದು ಹಾರೈಸುತ್ತೇನೆ.. ಆಶೀರ್ವದಿಸುತ್ತೇನೆ.. 

ಮಧುರಾತಿ ಮಧುರ ... ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ... ಪ್ರೀತಿಯ ಮಾತಾ-ಪಿತಾ ಅಜ್ಜನ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ಅಜ್ಜನ ನಮಸ್ತೇ!!!

ಧಾರಣೆಗಾಗಿ ಮುಖ್ಯಸಾರ:

೧. ಭಗವಂತನ ಸ್ಮರಣೆ ಸದಾ ಇರಲಿ.. ಭಗವಂತನಿಂದ ಪರೀಕ್ಷೆ ಖಂಡಿತ ಇರುತ್ತದೆ.. ಆದರೆ ಆ ಪರೀಕ್ಷೆಗೆ ಉತ್ತರವನ್ನು, ಪರಿಹಾರವನ್ನು ಆತನೇ ಕೊಡುತ್ತಾನೆ.. 

೨. ನಂಬಿದವರಿಗೆ ಭಗವಂತ ಎಂದಿಗೂ ಕೈ ಬಿಡುವುದಿಲ್ಲ..

ವರದಾನ:
ಭಕ್ತಿ ಎಂಬುದು ಭಗವಂತ ಜನರಿಗೆ ಕೊಟ್ಟಿರುವ ವರದಾನ.. ಅದನ್ನು ನಂಬಿದಾಗ. ಅದನ್ನು ಕೈ ಹಿಡಿದಾಗ ಎಲ್ಲವೂ ಸರಳ.. ಎಲ್ಲವೂ ಸುಂದರ 

ಸ್ಲೋಗನ್:
ನಂಬಿದ ದಾರಿಯನ್ನು ಎಂದಿಗೂ ಮರೆಯಬಾರದು.. ಎಂದಿಗೂ ಬದಲಿಸಬಾರದು.. ಕುದುರೆಯ ಹತ್ತಿರವೇ ಕೆರೆ ಬರಲು ಆಗ ಮಾತ್ರ ಸಾಧ್ಯ.. 

ಆ ಮರೆತಿದ್ದೆ ಕೆರೆಯೇ ಕುದುರೆಯ ಹತ್ತಿರ ಬಂದದ್ದಕ್ಕೆ ಒಂದಷ್ಟು ಚಿತ್ರಗಳಿವೆ ನೋಡಿ "ಆನಂದ" ಪಡಿ.. ನೀವೇ "ರಾಜ" ಎಂದು ಕೊಳ್ಳಿ.. ಸ್ವರ್ಗದ "ಇಂದ್ರ" ನೀವೇ ಅಂದುಕೊಳ್ಳಿ.. ಜೊತೆಗೆ ಇದು ನಿಮಗೆ ನಾನು ಆಶೀರ್ವದಿಸಿದ "ಸೌಭಾಗ್ಯ" 


ಕುದುರೆಗಳು 


ಕುದುರೆಗಳು ಕೆರೆಗಳ ಸಂಗಮ