Monday, April 13, 2026

ಸೀಮಾವಲೋಕನ ಜೊತೆಗೆ ಶೀತಲೈಶ್ವರ್ಯ... !

"ಶ್ರೀ ನೀನು ಮನುಷ್ಯನ.. ಏ ಇಲ್ಲ ಬಿಡು ಮನುಷ್ಯರು ಹೀಗೆ ಇರೋಕೆ ಸಾಧ್ಯವೇ ಇಲ್ಲ.. "

"ಇದ್ಯಾಕೆ ಅಣ್ಣಾವ್ರೇ ಹೀಗೆ ಎಡ ಬಲ ಸೇರಿಸಿ ಉಗೀತಾ ಇದ್ದೀರಾ ಯಾಕೆ ಅಂತಹ ತಪ್ಪು ಏನು ಮಾಡಿದೆ.." 

"ಅಲ್ಲ ಕಣೋ ಶ್ರೀ ನಿನ್ನ ಮಡದಿಯ ಜನುಮದಿನ ನನ್ನ ಪುಣ್ಯದಿನದ ಮಾರನೇ ದಿನ .. ಆಕೆಗೆ ಖುಷಿಯಾಗಿ ಇಟ್ಟುಕೊಳ್ಳೋದು ಬಿಟ್ಟು ಆಫೀಸ್ ಕೆಲಸ ಅದು ಇದು ಮೀಟಿಂಗ್ ಪಾಟಿಂಗು ಅಂತ ಆಕೆಗೆ ಬೇಸರ ಮಾಡೋದೇ.. ಅಲ್ಲಿ ನೋಡಿ ನಿನ್ನ ಮಕ್ಕಳು ಪಾಪು, ಪಾಪ ಎಷ್ಟು ಸೊಗಸಾಗಿ ಸಿಂಗಾರ ಮಾಡಿಕೊಂಡಿದ್ದಾರೆ. ನಿನ್ನ ಮನದನ್ನೆ ನೋಡು. ಅಲ್ಲಿ ನೋಡು.. ಎಷ್ಟು ಮುದ್ದಾಗಿ ಪುಟ್ಟ ಮಗು ತರಹ ಕಾಣುತ್ತಿದ್ದಾಳೆ.. ಅಂತಹ ಸಮಯ ಬಿಟ್ಟು.. ಈ ಸಮಯ ಕೆಲಸದ ಸಮಯ ಅಂತ ಲ್ಯಾಪ್ಟಾಪ್ ಇಟ್ಕೊಂಡು ಕೂತಿದ್ದೀಯಾ ಅಲ್ಲ. ನೀನು ಮನುಷ್ಯನೋ.. ಇಲ್ಲ.. "

ಕ್ಷಮಿಸಿ ಅಣ್ಣೋರೆ.. ಹಾಗೇನು ಇಲ್ಲ.. ಮನಸ್ಸು ಯಾಕೋ ಪಕಪಕ ಅಂತಾ ಇದೆ.. ಅಷ್ಟೇ.. ಅದು ಬಿಟ್ರೆ ಇನ್ನೇನೂ ಇಲ್ಲ.. 

"ಕ್ಷಮೆ. ನಿನಗೆ ಕ್ಷಮೆ.. "(ಭಕ್ತ ಪ್ರಹ್ಲಾದದಲ್ಲಿ ಹಿರಣ್ಯ ಕಷಿಪು, ಮಹೇಂದ್ರನಿಗೆ  ಹೇಳಿದ ಧ್ವನಿಯಲ್ಲಿ ಅಣ್ಣಾವ್ರು ಅಬ್ಬರಿಸಿದರು)

"ಅಯ್ಯೋ ಅಣ್ಣಾವ್ರೇ ಇಷ್ಟು ಆಗ್ರಹವೇಕೆ ಅಣ್ಣಾವ್ರೇ (ನಾನೂ ಕಡಿಮೆ ಏನಲ್ಲ... ಮಹೇಂದ್ರನಂತೆ ನಾನೂ ನಾಟಕೀಯವಾಗಿ ಒಂದು ಡೈಲಾಗು ಬಿಟ್ಟೆ)

"ನೋಡು ಈಗ ನೀನು ಅವರ ಜೊತೆ ಹೊರಗೆ ಹೋದಾಗ ಯಾವ ಹಾಡು ಬರುತ್ತದೆಯೋ ಅದೇ ಹಾಡಿನ ಪದಗಳ ಮೇಲೆ ನೀನು ನಿನ್ನ ಮಡದಿಯನ್ನು, ನಿನ್ನ ಮಕ್ಕಳನ್ನು ಹೊಗಳಿ... ಅವರ ಹಿಂದಿನ, ಮತ್ತು ಮುಂದೆ ಬರುವ ಜನುಮದಿನಕ್ಕೆ ಸೇರಿಸಿ ಬರೆಯಬೇಕು.. ಅದೇ ನಿನಗೆ ನಾ ಕೊಡುವ ಶಿಕ್ಷೆ ಕಂ ಕ್ಷಮೆ.. ..ಆ ಮುದ್ದು ನಿನ್ನ ಸಂಗಾತಿಗೆ ಕೇಕ್ ತರಿಸಿದ್ಧೇನೆ..ಹೋಗಿ ಖುಷಿ ಪಡಿ..ಶುಭವಾಗಲಿ...



ಅಣ್ಣಾವ್ರ ಸುಗ್ರೀವಾಜ್ಞೆ ಆಗಿತ್ತು...

"ಆಗಲಿ ಅಣ್ಣಾವ್ರೇ ನೀವು ಹೇಳಿದಂತೆ ಆಗಲಿ"

ಕಾಲಿಟ್ಟ ಕೂಡಲೇ.. 

ಕವಿರತ್ನ ಕಾಳಿದಾಸ ಚಿತ್ರದ 

ಸದಾ ಕಣ್ಣಲಿ ಪ್ರಣಯದಾ ಕವಿತೆ ಹಾಡುವೆ
ಸದಾ ನನ್ನಲಿ ಒಲವಿನ ಬಯಕೆ ತುಂಬುವೆ

ಹಾಡು ಬರಬೇಕೆ .. ಮನಸ್ಸು ಮತ್ತೆ ಗೊಂದಲದ ಗೂಡು.. ಈ ಹಾಡನ್ನು ಹೇಗಪ್ಪಾ ಶುಭಾಶಯದ ಮಟ್ಟಕ್ಕೆ ತರೋದು.. 

ಗಟ್ಟಿಯಾಗಿ ಹೋಟೆಲಿನ ಬಾಗಿಲಲ್ಲಿಯೇ ನಿಂತೇ.. ಚಿ ಉದಯಶಂಕರ್ ಸರ್.. ರಾಜಕುಮಾರ್ ಸರ್. ನೀವೇ ನನಗೆ ಸ್ಫೂರ್ತಿ ಕೊಡಬೇಕು.. ಬೇರೆ ದಾರಿ ಇಲ್ಲ ಅಂತ.. ಒಂದು ಹತ್ತು ಸೆಕೆಂಡುಗಳು ಕಣ್ಣು ಮುಚ್ಚಿ ನಿಂತೇ.. ಆಗಸದಿಂದ ಎರಡು ಕಿರಣಗಳು ಮನದೊಳಗೆ ಇಳಿದಂತೆ ಭಾಸವಾಯಿತು.. 
ಬಂದೆ ಬಿಡ್ತು.. 

(ಚಿ ಉದಯಶಂಕರ್ ಅವರ ಕ್ಷಮೆ ಕೋರಿ.. ಒಂದು ಪಲ್ಲವಿಯನ್ನು ಸೇರಿಸಿಬಿಟ್ಟಿದ್ದೀನಿ)

ನನ್ನ ಗೆಳತೀ ಜನವರಿ ತಿಂಗಳಲ್ಲಿ ಜನುಮದಿನವನ್ನು ಸಂಭ್ರಮಿಸಿದ್ದಳು.... ನನ್ನ ಪರಿಸ್ಥಿತಿಯನ್ನು ಕನ್ನಡಿಗಿಂತ ಚೆನ್ನಾಗಿ ಅರಿಯುವ ನನ್ನ ಗೆಳತೀ ಅಂದು ನಗು ನಗುತ್ತಾ ಗೊತ್ತು ಬಿಡಿ ಅಪ್ಪ ಅಂತ ನನ್ನ ಸಮಾಧಾನ ಮಾಡಿದ್ದಾಳು.. ಆ ಕ್ಷಣವನ್ನು ನೆನೆಯುತ್ತಾ

ಮಗುವಿನಲ್ಲಿ ಶಾಂತಾವಾಗಿ..  
ಬೆಳದಂತೆ ಬುದ್ದಿವಂತಳಾಗಿ 
ಸಿಎ ಕನಸೆಲ್ಲ 
ನನಸು ನನಸು ಮಾಡಿ 
ಅಮ್ಮನ ಮೊಗದಲ್ಲಿ ಮಗುವಾಗಿ 
ನಗು ತಂದಂತೆ 
ಈ ನಗುವಿಗೆ ಸೋತೆನು 
ಸೋತೆ ನಾನು!!!
 

ನಾ ಗುಡಿ ಕಟ್ಟಿದರೆ ನೀವು ಕಳಸ ಇಡುತ್ತೀರಾ ಅಂತ ಯಾವಾಗಲೂ ರೇಗಿಸುವ ನನ್ನ ಮನದನ್ನೆಗೆ ಅವಳ ಅಂದವನ್ನು ಹೊಗಳುತ್ತಾ.. ಜನುಮದಿನಕ್ಕೆ ಉಡುಗೊರೆಯ ರೂಪದಲ್ಲಿ ಪಲ್ಲವಿ ಸಿದ್ಧವಾಯಿತು.. 

ಕಣ್ಣೆರಡು ಕಮಲಗಳಂತೆ, 
ಮುಂಗುರುಳು ದುಂಬಿಗಳಂತೆ ।೨।
ನಾಸಿಕವು ಸಂಪಿಗೆಯಂತೆ, 
ನೀ ನಗಲು ಹೂ ಬಿರಿದಂತೆ ।೨।
ನಡೆಯುತಿರೆ (ತಾನೇ ಸಂಯೋಜಿಸಿದ) ನಾಟ್ಯದಂತೆ ।೨।
ರತಿಯೆ ಧರೆಗಿಳಿದಂತೆ
ಈ ಅಂದಕೆ ಸೋತೆನು, 
ಸೋತೆ ನಾನು

ನನಗೆ ಇಲ್ಲವಾ ಹಾಡು ಅಪ್ಪ ಅಂತ ಕೋಪದಿಂದ ನನ್ನ ಇನ್ನೊಬ್ಬ ಮಗಳು ..ಕೂಗಿದಳು .. ಅವಳ ಸುಂದರ ಕಣ್ಣುಗಳು ಕೆಂಪಾಗಿದ್ದವು... ಮೆಲ್ಲನೆ ಸಮಾಧಾನ ಮಾಡುತ್ತಾ.. ಮಗಳೇ.. ಮಗಳೇ ಎಂದು ಹೇಳುತ್ತಾ.. 

ಗುಡುಗುಗಳು ತಾಳದಂತೆ 
ಮಿಂಚುಗಳು ಮೇಳದಂತೆ
ಸುರಿವಾ ಮಳೆ ನೀರೆಲ್ಲಾ, 
ಪನ್ನೀರ ಹನಿ ಹನಿಯಂತೆ ।೨।
ಜೊತೆಯಾಗಿ ರಿಷಬ್ ಇರೆ ಸಾಕು, 
ಭೂಲೋಕ ಸ್ವರ್ಗದಂತೆ
ನಿನ್ನ ಪ್ರೇಮಕೆ ಅವನು ಸೋತನು 
ಸೋತು ಗೆಲುವಾದನು.... 

*****
ಮೆಲ್ಲನೆ ನಿಟ್ಟುಸಿರು ಬಿಟ್ಟೆ.. ನನ್ನ ಮುದ್ದು ಮಕ್ಕಳು.. ಮಡದಿಯನ್ನು ಸಮಾಧಾನ ಪಡಿಸಿದೆ ಅಂದು ಅನಿಸಿತು.. ಇದರ ಜೊತೆ ಅಣ್ಣಾವ್ರು ಕೂಡ ಜೋರಾಗಿ ಚಪ್ಪಾಳೆ ತಟ್ಟಿದರು.. ಅರೆ ಅಣ್ಣಾವ್ರಿಗೆ ಸಂತೋಷ ಆಯಿತು ಅಂದರೆ ಎಲ್ಲವೂ ಅರಾಮ್.. ಎಲ್ಲವೂ ಸುಖಾಂತ್ಯ ಅನ್ನಿಸಿತು.. 

ಅಣ್ಣಾವ್ರ ಮುಖ ನೋಡಿದೆ.. .. ಜೋರಾಗಿ ನಗುತ್ತಾ.. 

ಶ್ರೀ ನಿನ್ನ ಮುದ್ದು ಮಕ್ಕಳಿಗೆ. .. ಮತ್ತು ನಿನ್ನ ಮನದನ್ನೆಗೆ ಈ ಹಾಡು ಸಮರ್ಪಿತ.. ಇದನ್ನು ನನ್ನ ಆಪ್ತಗೆಳೆಯ ಚಿ ಉದಯಶಂಕರ್ ಬರೆದದ್ದು.. ನಿಮಗೆ ಶುಭವಾಗಲಿ.. ಎಂದು ಹಾಡುತ್ತಾ.. ಗಗನದಲ್ಲಿ ತಾರೆಯಾದರು.. 

ನಗುತ ನಗುತ ಬಾಳೂ ನೀನು
ನೂರು ವರುಷಾ
ಎಂದು ಹೀಗೆ ಇರಲೀ ಇರಲಿ
ಹರುಷ ಹರುಷಾ
ಬಾಳಿನ ದೀಪಾ ನಿನ್ನ ನಗು.
ದೇವರ ರೂಪ ನೀನೆ ಮಗು
ನಗುತ ನಗುತ ಬಾಳೂ ನೀನು
ನೂರು ವರುಷಾ
ಎಂದು ಹೀಗೆ ಇರಲೀ ಇರಲಿ
ಹರುಷ ಹರುಷಾ
ಉಲ್ಲಾಸದ ಶುಭ ದಿನಕೆ
ಸಂತೋಷವೇ ಉಡುಗೊರೆಯು
\
ಹೂವು ನಕ್ಕಾಗ ತಾನೇ…
ಅಂದ ಇರುವುದು
ದುಂಬಿ ಬರುವುದು
ಚಂದ್ರ ನಕ್ಕಾಗ ತಾನೇ
ಬೆಳಕು ಬರುವುದೂ
ಕಡಲು ಕುಣಿವುದೂ
ಸೂರ್ಯನಾಡೊ ಜಾರೊ ಆಟ
ಬಾನು ನಗಲೆಂದೆ
ಬೀಸೊ ಗಾಳಿ ತೂಗೊ ಪೈರು
ಭೂಮಿ ನಗಲೆಂದೆ
ದೇವರು ತಂದ ಸೃಷ್ಟಿಯ ಅಂದ
ಎಲ್ಲರು ನಗಲೆಂದೆ

ನಗುತ ನಗುತ ಬಾಳೂ ನೀನು
ನೂರು ವರುಷಾ
ಎಂದು ಹೀಗೆ ಇರಲೀ ಇರಲಿ
ಹರುಷ ಹರುಷಾ

ಆಕಾಶದಾಚೆ ಎಲ್ಲೋ…
ದೇವರಿಲ್ಲವೋ…..
ಹುಡುಕಬೇಡವೋ
ಆ ಮಾಯಗಾರ ತಾನೂ….
ಗಿರಿಯಲಿಲ್ಲವೋ…..
ಗುಡಿಯಲಿಲ್ಲವೋ
ಪ್ರೀತಿಯಲ್ಲಿ ಸ್ನೇಹದಲ್ಲಿ
ಇರುವನು ಒಂದಾಗಿ
ತಂಪಿನಲ್ಲು ಕಂಪಿನಲ್ಲು
ಬರುವನು ಹಿತವಾಗಿ
ಸಂತಸದಲ್ಲಿ ಸಂಭ್ರಮದಲ್ಲಿ
ಮಕ್ಕಳ ನಗುವಾಗೀ…

ನಗುತ ನಗುತ ಬಾಳೂ ನೀನು
ನೂರು ವರುಷಾ
ಎಂದು ಹೀಗೆ ಇರಲೀ ಇರಲಿ
ಹರುಷ ಹರುಷಾ
ಬಾಳಿನ ದೀಪಾ ನಿನ್ನ ನಗು
ದೇವರ ರೂಪ ನೀನೆ ಮಗು
ನಗುತ ನಗುತ ಬಾಳೂ ನೀನು
ನೂರು ವರುಷಾ
ಎಂದು ಹೀಗೆ ಇರಲೀ ಇರಲಿ
ಹರುಷ ಹರುಷಾ
ಉಲ್ಲಾಸದ ಶುಭ ದಿನಕೆ
ಸಂತೋಷವೇ ಉಡುಗೊರೆಯು
ಉಲ್ಲಾಸದ ಶುಭ ದಿನಕೆ
ಸಂತೋಷವೇ ಉಡುಗೊರೆಯು!!!!




Friday, March 6, 2026

ಅಪರಿಮಿತವಾದ ಮಂದ"ಸ್ಮಿತ"ದ ಉತ್ಸಾಹದ ಹತ್ತನೇ ದಿನದ ಪಯಣ

ಬಾನಿನಲ್ಲಿ ಚಂದಿರ ನಗುತ್ತಿದ್ದ.. ಸಂಕಷ್ಟ ಚೌತಿಯ ದಿನ ತನ್ನ ಸಹೋದರಿಯರು ಕಟ್ಟುಪವಾಸ ಮಾಡಿದರೂ ಸಹೋದರಿಯ ನೆನಪಲ್ಲಿ ಮಾತು ಸಾಗಿತ್ತು.. ಕುಮುದ ಹಾಗೆ ಮಾತಾಡುತ್ತಿದ್ದಳು, ಹೀಗೆ ಅನ್ನುತ್ತಿದ್ದಳು... ಆಯೀಗೆ ಹೀಗೆ ರೇಗಿಸುತ್ತಿದ್ದೆ ಅಂತ ಸೀಮಾ.. ಆಯೀ ಹೀಗೆ ಹೇಳುತ್ತಿದ್ದಳು ಅಂತ ಅಜಿತ.. 

ಹೀಗೆ ನಮ್ಮ ನಮ್ಮ ನೆನಪುಗಳ ಮೆರೆವಣಿಗೆಯಲ್ಲಿ ಸಾಗುತ್ತಿದ್ದೆವು..  ಬೆಳಗಿನ ಕಾರ್ಯದ ನೆನಪಾಯಿತು!

ಹತ್ತನೇ ದಿನದ ಪುಣ್ಯ ಕಾರ್ಯ ಸಾಗಿತ್ತು.. ಸಾಮಾನ್ಯ ಹತ್ತು ಹನ್ನೊಂದು ಒಂದು ಮುಖ್ಯವಾದ ಹಂತ.. ಸಂಖ್ಯೆ ಹತ್ತಕ್ಕೆ ಮುಟ್ಟಿದೆ ಎಂದರೆ ಒಂದಂಕಿ ದಾಟಿದೆ ಅಂತ.. ಹಾಗೆ ಮನುಷ್ಯನ ಬದುಕಿನಲ್ಲಿ ಮುಖ್ಯ ಘಟ್ಟವೂ ಹೌದು..

ಇಂತಹ ಹತ್ತು.. ಇನ್ನೊಂದು ಮುಖ್ಯ ಘಟ್ಟವನ್ನು ಹೊತ್ತು ಬಂದಿತ್ತು.. 

ಶ್ರೀ ದತ್ತಾತ್ರೇಯನ ಆವಾಸ ಸ್ಥಾನದ ಕ್ಷೇತ್ರದಲ್ಲಿ ವೇದ ಪಠಣ ಕಾರ್ಯ ನೆಡೆದಿತ್ತು.. ಬಂದಿದ್ದವರು ತಮ್ಮ ತಮ್ಮ ನಮನಗಳನ್ನು ಸಲ್ಲಿಸಿದ್ದರು.. 

 ಹತ್ತನೇ ದಿನ ಬಂದಿದ್ದವರು ತಮ್ಮ ತಮ್ಮ ಪುಣ್ಯವನ್ನು ಧಾರೆಯೆರೆದು ಆ ದೇಹವನ್ನು ತೊರೆದ ಆತ್ಮಕ್ಕೆ ವಿದಾಯ ಹೇಳುವ ಸಮಯ.. ಆ ಆತ್ಮಕ್ಕೆ ಮೊದಲೇ ಸಿದ್ಧವಾಗಿರಬಹುದಾದ ದೇಹವನ್ನು ಸೇರಲು ಈ ಹತ್ತನೇ ದಿನದ ಕಾರ್ಯ ಒಂದು ರೀತಿಯ ರಾಕೆಟ್ ಲಾಂಚ್ ಮಾಡಿ.. ಉಪಗ್ರಹ ಕಡೆಯ ಭಾಗ ಗಗನ ಪಥಕ್ಕೆ ಸೇರುವಾಗ ತನ್ನುಳಿದ ಭಾಗವನ್ನು ಬಿಟ್ಟು ಮುಂದಿನ ಪಯಣಕ್ಕೆ ನಭೋಮಂಡಲಕ್ಕೆ ಹಾರುವ ಕ್ಷಣವದು.. 

ಈ ಹತ್ತನೇ ದಿನವೂ ಕೊಂಚ ಹಾಗೆ.. ಬಂದಿದ್ದವರ ಪುಣ್ಯದ ರಾಕೆಟ್ ಆ  ಆತ್ಮವನ್ನು ಮುಂದಿನ ಪಯಣಕ್ಕೆ ಸಿದ್ಧಗೊಳಿಸಿ ಕಳಿಸುವ ಸಮಯವದು.. 

ಕಾರ್ಯ ಮುಗಿದು.. ಆ ಆತ್ಮಕ್ಕೆ ಊಟವನ್ನು ಇಟ್ಟಾಗ.. ಅಲ್ಲಿದ್ದ ಪುರೋಹಿತರು ಎಲ್ಲರೂ ನಿಮ್ಮ ನಿಮ್ಮ ಪ್ರಾರ್ಥನೆ ಸಲ್ಲಿಸಿ... ಆ ಆತ್ಮ ಶ್ರೀ ಶನೀಶ್ವರನ ವಾಹನವಾಗಿ ಬಂದು ಸ್ವೀಕರಿಸುತ್ತದೆ.. ಎಂದು ಹೇಳಿದರು.. 

ಎಲ್ಲರೂ ಪ್ರಾರ್ಥನೆ ಸಲ್ಲಿಸಿದರು.. 

ಮರು ಪ್ರಾರ್ಥನೆ ಸಲ್ಲಿಸಿದರು.. 

ಮತ್ತೊಮ್ಮೆ ಪ್ರಾರ್ಥನೆ ಸಲ್ಲಿಸಿದರು.. 

ಸುಮಾರು ಹೊತ್ತು ಕಳೆಯಿತು.. 

ಪುರ್ ಅಂತ ಹಾರಿ ಬಂದು.. ಆಹಾರವನ್ನು ಸ್ವೀಕರಿಸಿದ ಕ್ಷಣ ಎಲ್ಲರ ಮನಸ್ಸಿಗೂ ಸಂತಸ ಉಂಟು ಮಾಡಿತು.. 

ಕಾರ್ಯ ಮುಗಿದು ಮತ್ತೆ ಕೋಣೆಗೆ ಬಂದು.. ವಿಶ್ರಾಮ ತೆಗೆದುಕೊಳ್ಳುತ್ತಿದ್ದಾಗ  .. ಕುತೂಹಲ ಅಲ್ಲವೇ.. ಏನು ಪ್ರಾರ್ಥನೆ ಮಾಡಿಕೊಂಡಿರಿ.. ಅಂತ ಒಬ್ಬರಿಗೊಬ್ಬರು ಕೇಳುತ್ತಿದ್ದರು.. 

ಎಲ್ಲರೂ ಹೇಳಿದ್ದು ಒಂದೇ ಮಾತು 

"ಅಜಿತನನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ" 
"ಅಜಿತ ಮತ್ತು ಸೀಮಾ ನನ್ನ ಜವಾಬ್ಧಾರಿ"

ಈ ಉತ್ತರದಿಂದ ಸಂತುಷ್ಟವಾಗಿರಲಿಲ್ಲ... 

ಅಜಿತ "ಬಾಬಾನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ" ಅಂತ ಒಮ್ಮೆ, ಮತ್ತೊಮ್ಮೆ, ಮಗುದೊಮ್ಮೆ ಪ್ರಾರ್ಥನೆ ಮಾಡಿಕೊಂಡಾಗ.. ಇದು ಸಾರ್ಥಕತೆ ಅಂತ ಅನಿಸಿ ಆಹಾರವನ್ನು ಸ್ವೀಕರಿಸಿದ ಕ್ಷಣ ಒಮ್ಮೆ ಮೈ ಜುಮ್ ಎನಿಸಿತು.. 

ತಾಯಿ ಹೃದಯ ಎಂದರೆ ಅದೇ ಅಲ್ಲವೇ.. ನಾ ಅಷ್ಟೇ ಅಲ್ಲ.. ನನ್ನ ಪರಿವಾರವೂ ಕೂಡ ಕ್ಷೇಮವಾಗಿರಬೇಕು ಎಂದು ಬಯಸೋದು ಮಾತೃ ಹೃದಯ ದ ವಿಶೇಷತೇ.. 

ಊಟ ಮಾಡಿ ವಿಶ್ರಾಂತಿಯಾಯಿತು.. ಕಾಫೀ ಬಂತು.. 

ಚಂದಿರ ಉಗಮವಾಗಲು ಇನ್ನಷ್ಟು ಸಮಯವಿತ್ತು.. 

ಗರುಡಪುರಾಣದ ಸಂಕ್ಷಿಪ್ತ ಮಾಹಿತಿಯನ್ನು ಕೇಳಿದೆವು.. ಗರುಡಪುರಾಣದ ಮುಖ್ಯ ಸಾರದ ಬಗ್ಗೆಯೂ ಮಾತುಗಳು ಬಂದವು.. 

ಮುಂದೆ ಅಮ್ಮನ ಮಾತು ಕೇಳಿ


ಚಿತ್ರಕೃಪೆ - ಗೂಗಲ್ ಬಾಬಾ 
"ನನ್ನ ಪ್ರೀತಿಯ ಪರಿವಾರದವರೇ.. ನನ್ನನ್ನು ಬೀಳ್ಗೊಡಲು ನೀವೆಲ್ಲ ಬಂದಿದ್ದೀರಿ.. ಹೌದು ನಿಮ್ಮನ್ನು ಬಿಟ್ಟು ಹೋಗಲು ನನಗೆ ಕಷ್ಟ.. ಆದರೇನು ಮಾಡುವುದು ನಾ ನಂಬಿರುವ ಬ್ರಹ್ಮ ಬಾಬಾ, ಶಿವಬಾಬಾ.. ಸ್ಮಿತಾ ಅಲಿಯಾಸ್ ಕುಮುದ  ಅಲಿಯಾಸ್ ಕುಮುದಿನಿ ನಿನ್ನ ಆತ್ಮಕ್ಕೆ ಆಗಲೇ ಬೇರೆ ಮನೆ ಸಿದ್ಧ ಮಾಡಿಟ್ಟಿರುವೆ.. ನೀ ಬರೋದಷ್ಟೇ ಇರೋದು.. ಬೇಗ ಬಂದು ಬಿಡು.. ಈ ಜನ್ಮದಲ್ಲಿ ನೀ ಅಪಾರ .. ಅಪಾರ ಜನ ಮನ್ನಣೆ, ಜನ ಪ್ರೀತಿ ಗಳಿಸಿದ್ದೀಯಾ.. ಇದಕ್ಕೆಲ್ಲ ಮುಖ್ಯವಾಗಿ ನಿನ್ನ ಕುಟುಂಬಕ್ಕೆ ಒಂದು ಉತ್ತಮ ಸಂಸ್ಕಾರ ನೀಡಿದ್ದೀಯ.. ಕೊಂಚ ಕಲೆ ಉಳಿದಿತ್ತು.. ಹಾಗಾಗಿ ನಿನ್ನ ಅಂತಿಮ ಘಟ್ಟದಲ್ಲಿ ಸ್ವಲ್ಪ ಇಂಜೆಕ್ಷನ್, ಮಾತ್ರೆಗಳು, ಟಾನಿಕ್ಕು, ವೈದ್ಯಕೀಯ ಉಪಚಾರ ಅಂತ ಒಂದು ತಿಂಗಳು ಕಳೆದಿದ್ದೀಯ.. ಹಾಗಾಗಿ ಆ ಕಲೆಗಳು ಈಗ ಮಾಯಾ.. ಮುಂದಿನ ಜನ್ಮದಲ್ಲಿ ಉತ್ತಮ ದೇಹದಲ್ಲಿ ಸೇರಿಕೊಂಡು ಇನ್ನಷ್ಟು ಉತ್ತಮೋತ್ತಮ ಸೇವೆ ಮಾಡಲು ನಿನ್ನನ್ನು ಸಿದ್ಧ ಮಾಡಿದ್ದೇನೆ.. ಆಗೋ ಅಲ್ಲಿದೆ ನೋಡು ನಿನ್ನ ಹೊಸ ಗೂಡು ಅಂತ ತೋರಿಸಿದರು.. ಇನ್ನೇನು ಮಾಡುವುದು.. ನಾ ನಂಬಿದ ಬಾಬಾನೇ ಕರೆದಾಗ ಇಲ್ಲ ಅನ್ನೋಕೆ ಸಾಧ್ಯವೇ.. ನನ್ನ ಕುಟುಂಬ ಕಾರು ತೆಗೆದು ಹೋಗೋಕೆ ಸಿದ್ಧವಾದರೆಂದರೆ ನಾ ಬಿಡುತ್ತಲೇ ಇರಲಿಲ್ಲ.. ಆರೋಗ್ಯವೋ ಅನಾರೋಗ್ಯವೋ ನಾ ಹೋಗಿಯೇ ಹೋಗುತ್ತಿದ್ದೆ. ಪಾಪ ನನ್ನ ಮಕ್ಕಳೂ ಕೂಡ ಬೇಸರಿಸದೆ ಅವರು ಹೋದ ಕಡೆಯೆಲ್ಲ ನನ್ನನ್ನು ಕರೆದು ಕೊಂಡು ಹೋಗುತ್ತಿದ್ದರು.. ಇನ್ನೂ ಬಾಬಾ ಕರೆದರೆ ಸುಮ್ಮನೆ ಇರಲು ಸಾಧ್ಯವೇ.. ಅದಕ್ಕೆ ಹೊರಟಿದ್ದೇನೆ.. ನನ್ನನ್ನು ಕಳಿಸಿ ಕೊಡಿ.. ಪ್ಲೀಸ್"


ಯಾವಾಗಲೂ ಒಂದಕ್ಕೆ ಹತ್ತು ಮಾತಾಡುವ ಅಮ್ಮ ತಮ್ಮ ಅದೇ ಶೈಲಿಯಲ್ಲಿ ಮಾತಾಡಿದರು.. 

ಎಲ್ಲರ ಕಣ್ಣಲ್ಲಿ ಕೊಂಚ ನೀರು.. ಆದರೆ ಇದು ಆನಂದಭಾಷ್ಪ.. 

ಸದಾ ನಗುಮೊಗದ ಅಮ್ಮ.. ಮೆಲ್ಲನೆ ತನ್ನ ಇಷ್ಟದ ಬ್ರಹ್ಮ ಬಾಬಾ ಮತ್ತು ಶಿವ ಬಾಬಾ ಕಳಿಸಿದ ಪುಷ್ಪಕವಿಮಾನವನ್ನು ಏರಿಯೇ ಬಿಟ್ಟರು.. ಮೆಲ್ಲನೆ ಅದು ರೆಕ್ಕೆ ಬಡಿಯುತ್ತ ಬಡಿಯುತ್ತ ದಿಗಂತದೆಡೆ ಹಾರುತಿತ್ತು.. 


ಚಿತ್ರಕೃಪೆ - ಗೂಗಲ್ ಬಾಬಾ 

ಗಗನದಲ್ಲಿ ಮೇಲೆ ಏರುತ್ತಾ ಏರುತ್ತಾ ಹೋದಾ ಹಾಗೆ ಅವರ ಮುಗುಳುನಗೆ ಇಡೀ ಆಗಸವನ್ನೆಲ್ಲ ತುಂಬಿಕೊಂಡು ಬಿಳಿ ಬಿಳಿಯಾಗುತ್ತಾ ಹೋಯಿತು... ಇಡೀ ಆಗಸ ಸ್ವಚ್ಛ ಬಿಳುಪು.. ಒಂದು ಚೂರು ಕಲೆಯಿಲ್ಲ ಅಮ್ಮನ ಮುಂದಿನ ಜನ್ಮದ ಹಾಗೆ ಕಲೆಯೇ ಇಲ್ಲದ ಸ್ವಚ್ಛ ಜನ್ಮದ ಹಾಗೆ...

ಪುಷ್ಪಕ ವಿಮಾನ ದೂರ ಎತ್ತರಕ್ಕೆ ಹಾರಿದಂತೆಲ್ಲ.. ಆ ಬಿಳುಪಾದ ಆಗಸ ಮತ್ತೆ ನೀಲಿಯಾಗುತ್ತಾ ನೀಲಿಯಾಗುತ್ತ .. ಆ ಬಿಳುಪು ಸಣ್ಣಗೆ ಆಗುತ್ತಾ ಬಂದು.. ಕಡೆಯಲ್ಲಿ ಗೋಳಾಕಾರವಾಯಿತು.. ಗೋಳಾಕಾರವಾಗಿ ಮತ್ತೆ ಪ್ರಕಾಶಮಾನವಾಯಿತು.. ಆ ಗೋಳಾಕಾರವೇ ಚಂದಿರನಾಯಿತು.. 

ಚಿತ್ರಕೃಪೆ - ಗೂಗಲ್ ಬಾಬಾ 

ಬಾನಿನಲ್ಲಿ ಚಂದಿರ ನಗುತ್ತಿದ್ದ.. ಜೊತೆಯಲ್ಲಿ ಸಂಕಷ್ಟ ಚೌತಿಯ ದಿನ.. 


ಚಿತ್ರಕೃಪೆ - ಗೂಗಲ್ ಬಾಬಾ 

ಎಲ್ಲರೂ ಚಂದಿರನ ದರ್ಶನ ಮಾಡಿ.. ಗುಡಿಯಲ್ಲಿ ಗಣಪನ ದರ್ಶನ ಮಾಡಿ.. ಆಹಾರ ಸೇವಿಸಬೇಕು ಇದು ಸಾಮಾನ್ಯವಾಗಿ ಪಾಲಿಸುವ ನಿಯಮ.. 

ತನ್ನ ಸಹೋದರಿಯರು.. ಒರಗಿತ್ತಿಯ ಮಗಳು ಸಂಕಷ್ಟ ಚೌತಿಯ ವ್ರತವನ್ನು ಮಾಡಿ.. ಚಂದಿರನನ್ನು ನೋಡಲು ಬಾನಿನ ಕಡೆ ನೋಡಿದಾಗ.. ಅಲ್ಲಿ ಕಂಡದ್ದು..  ಕುಮುದಿನಿ ಅರ್ಥಾತ್ ತಾವರೆ ಹೂವು.. ಬೆಳದಿಂಗಳ ನಗೆ.. ಅಂದರೆ ಮಂದ"ಸ್ಮಿತ"

ನಾ ಆಗಸವನ್ನೇ ನೋಡುತ್ತಿದ್ದೆ. ಅಮ್ಮನ ಮುಗ್ಧ ನಗು ಕಂಡಿತು. ಜೋರಾಗಿ ನಗುತ್ತಿದ್ದರು.. ನಾನು ಯಾಕೆ ಅಮ್ಮ ಹಾಗೆ ನಗುತ್ತಿದ್ದೀರಿ ಅಂದೇ 

"೧. ನೀವು ಹೇಳಿದ ಒಂದು ಸಂಭಾಷಣೆ ಕೇಳಿ ನಗು ಬಂತು.. ಹುಣ್ಣಿಮೆದಿನ ಮರದಿಂದ ಯಾವುದಾದರೂ ಭೂತ ಜಿಗಿದು ನಿಮ್ಮ ಮುಂದೆ ಬಂದು ಹೀ ಹೀ ಅಂತ ಹೆದರಿಸೋಕೆ ಪ್ರಯತ್ನ ಪಟ್ಟರೂ ನೀವು ಹೆದರದೆ.. ಒಂದು ಬೆಲ್ಲದ ತುಂಡನ್ನು ಕಂಡರೆ ಭಯಭೀತರಾಗುತ್ತೀರಿ ಎಂಬ ಮಾತು ನಗು ತರಿಸಿತು.. 

೨. ಒಂಭತ್ತು ಹದಿನೈದಕ್ಕೆ ಚಂದ್ರೋದಯ.. ಆಮೇಲೆ ಹೋಗೋಣ ಅಂತ ನನ್ನ ಸಹೋದರಿ ಹೇಳಿದಾಗ.. ಅಯ್ಯೋ ಆಕಾಶ ನೋಡೋಕೆ ಯಾಕೆ ನೂಕು ನುಗ್ಗಲು.. ಬೆಲ್ಲ ತಿನ್ನೋಕೆ ಎಂಟು ಮುಕ್ಕಾಲಾದರೇನು.. ಒಂಭತ್ತು ಕಾಲು ಆದರೇನು.. ಬೆಲ್ಲ ಬೆಲ್ಲ ಬೆಲ್ಲಾ ಎಲ್ಲೆಲ್ಲಿ ನೋಡಲಿ ಬೆಲ್ಲವನ್ನೇ ಕಾಣುವೆ.. ಅಂತ ನಿಮ್ಮಿಷ್ಟದ ರಾಜಕುಮಾರನ ಹಾಡು ನೆನಪಿಗೆ ಬಂತು" 

ಅದಕ್ಕೆ ನಗು ಬಂತು ಅಂತ ಅಮ್ಮ ಹೇಳಿದರು.. 

ಅವರ ಬದುಕಿನುದ್ದಕ್ಕೂ ಅನುಸರಿಸಿಕೊಂಡು ಬಂದದ್ದು ಅವರ ನಗು.. ನಮ್ಮ ಬದುಕಿಗೂ ಬೆಳಕಾಗಿ ಮಾರ್ಗದರ್ಶನ ನೀಡುವುದು ಅದೇ ನಗು.. ಆ ನಗು ನಮ್ಮ ಜೊತೆಯಿರುವಾಗ "ನಗು ನಗುತಾ ನಲಿ ನಲಿ ಏನೇ ಆಗಲಿ"  ಅಲ್ಲವೇ


Thursday, February 26, 2026

ಅಪರಿಮಿತವಾದ ಮಂದ"ಸ್ಮಿತ"ದ ಉತ್ಸಾಹದ ಮೊದಲ ದಿನದ ಪಯಣ

ವಿಷಯ ಗೊತ್ತಾಯಿತು ...ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಂಡು ಮನೆ ಬಿಡುವಾಗ ನಾ ನಂಬಿದ ಇಷ್ಟದೈವಗಳಿಗೆ ನಮಸ್ಕಾರ ಸಲ್ಲಿಸಿ.. ಇವಳು ಅನುಸರಿಸುತ್ತಿರುವ ಅಜ್ಜನ ಚಿತ್ರಕ್ಕೆ ನಮಿಸಿ 

"ಅಜ್ಜ ನಮಗೆಲ್ಲ ನಿನ್ನ ಲೋಕವನ್ನು ಅವರ ಕುಟುಂಬಕ್ಕೆ ಪರಿಚಯಿಸಿದ ಆ ಶಕ್ತಿ ಇಂದು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದೆ.. ನಿನ್ನ ಶಕ್ತಿಯ ಬಗ್ಗೆ ಅಪಾರ ನಂಬಿಕೆ ಇರುವ ಅವರ ಕುಟುಂಬ ಹಗಲಿರುಳು ತಮ್ಮ ಪರಿಶ್ರಮದ ಜೊತೆ, ವೈದ್ಯಕೀಯ ನೆರವಿನ ಜೊತೆಗೆ .. ನಿನ್ನ ಧ್ಯಾನದಲ್ಲಿ ಯೋಗ ಮಾಡುತ್ತಿದ್ದಾರೆ. ಆ ನಿನ್ನ  ಮಗಳ ಆರೋಗ್ಯ ಸುಧಾರಿಸುವುದು ನಿನ್ನ ಕೈಯಲ್ಲಿ ಇದೆ.. ನಿನಗೆ ಇಂದು ಬಹಳ ಖುಷಿಯಾಗ್ತಿದೆ ಅನ್ನಿಸುತ್ತಿದೆ ಅಲ್ವೇ..  ಅವರ ಬದುಕಿನ ಪ್ರತಿಕ್ಷಣದಲ್ಲೂ ನಿನ್ನ ಹೆಸರನ್ನೇ, ನಿನ್ನ ಧ್ಯಾನದಲ್ಲಿಯೇ ಕಳೆದ ಅವರ ಬದುಕಿನ ಅಂತಿಮ ಘಟ್ಟದಲ್ಲಿ ನಿನ್ನ ಆ ಶಕ್ತಿಯ ಒಂದು ಕಿರಣಕ್ಕೆ ಕಾಯುತ್ತಿದೆ.. ನಿನ್ನ ಶಕ್ತಿಯಲ್ಲಿ ಅಪಾರ ನಂಬಿಕೆ ಇರುವ ಅವರ ಕುಟುಂಬ ನೀನು ಆಕೆಯನ್ನು ಉಳಿಸಬೇಕು.. ಇಲ್ಲವೇ ನೋವಿನಿಂದ ಮುಕ್ತರನ್ನಾಗಿಸಿ ನಿನ್ನ ಲೋಕಕ್ಕೆ ಕರೆದೊಯ್ಯಬೇಕು.. "

ಅಮಿತಾಭ್ ದೀವಾರ್ ಸಿನಿಮಾದಲ್ಲಿ ಶಂಕರನ ಮುಂದೆ ನಿಂತು ಹೇಳಿದಂತೆ ನಾನೂ ಹೇಳಿಬಿಟ್ಟೆ.. 

ಅಜ್ಜನ ಫೋಟೋ ನೋಡುತ್ತಿದ್ದೆ.. ಅಜ್ಜ ನಸು ನಕ್ಕ ಹಾಗೆ ಭಾಸವಾಯಿತು.. 


"ಯಾಕೆ ಅಜ್ಜ ಈ ನಗು" ಅಂದೇ 

"ನೀ ಹೊರಟಿದ್ದೀಯ ಅಲ್ವೇ.. ಆಮೇಲೆ ನಿನಗೆ ಗೊತ್ತಾಗುತ್ತದೆ.. ಪ್ರಯಾಣಿಕ ಶುಭಕರವಾಗಿರಲಿ" ಇಷ್ಟು ಹೇಳಿ ಫೋಟೋದೊಳಗೆ ಅಜ್ಜ ಹೋಗಿ ಬಿಟ್ಟರು.. 

ಹತ್ತುಘಂಟೆಗಳ ಪಯಣ.. ಬಳಲಿಕೆ ಇದ್ದರೂ ಛಲ ಆ ಬಳಲಿಕೆಯನ್ನು ಮೆಟ್ಟಿ ನಿಂತಿತ್ತು.. 

ವಿವಶವಾಯಿತು ಪ್ರಾಣ – ಹಾ!!
ವಿವಶವಾಯಿತು ಪ್ರಾಣ  ಹಾ
ಪರವಶವು ನಿನ್ನೀ ಚೇತನ
ವಿವಶವಾಯಿತು ಪ್ರಾಣ - ಹಾ!!
ಪರವಶವು ನಿನ್ನೀ ಚೇತನ
ಇರುವುದೆಲ್ಲವ ಬಿಟ್ಟು
ಇರದುದರೆಡೆಗೆ ತುಡಿವುದೇ ಜೀವನ 

ಶ್ರೀ ಗೋಪಾಲಕೃಷ್ಣ ಅಡಿಗರ ಯಾವ ಮೋಹನ ಮುರಳಿ ಕವನ ಕಾರಿನಲ್ಲಿ ಬರುತ್ತಿತ್ತು.. 

ಹೌದು ಜೀವನೋತ್ಸಾಹ ಎಂದರೆ ನಾ ಅನೇಕ ಕಡೆ ನೋಡಿದ್ದೇ, ಕೇಳಿದ್ದೆ, ಓದಿದ್ದೆ.. ಆದರೆ ಅದನ್ನೆಲ್ಲ ಮೆಟ್ಟಿ ನಿಂತವರು ನನ್ನ ಮಾತೃ ಸ್ವರೂಪಿ ಅತ್ತೆಯವರು.. ಹೆಣ್ಣು ಕೊಟ್ಟೆಯೋ ಕಣ್ಣು ಕೊಟ್ಟೆಯೋ ಅನ್ನುವ ಗಾದೆಯಂತೆ, ತಿರುವಿನಲ್ಲಿದ್ದ ಬದುಕಿಗೆ ದಾರಿದೀಪವಾದವಳನ್ನು ಹೆತ್ತ ಮಾತೆ.. 

ನಾವು ಬೆಳಗಾವಿಗೆ ಬರುತ್ತಿದ್ದೇವೆ ಎಂದರೆ ಅವರು ತರುಣಿಯಾಗಿಬಿಡುತ್ತಿದ್ದರು.. ಅವರಿಗೆ ನನ್ನ ಪ್ರವಾಸದ ಹುಚ್ಚು ತಿಳಿದಿತ್ತು.. ಎಲ್ಲರಿಗಿಂತ ಮೊದಲೇ ಸಿದ್ಧವಾಗಿಬಿಡುತ್ತಿದ್ದರು.. 

ಎಲ್ಲೇ ಹೋಗಲಿ, ಎಲ್ಲೇ ನಿಲ್ಲಲಿ, ಎಲ್ಲೇ ಊಟ ತಿಂಡಿಗೆ ನಿಲ್ಲಲಿ ಅವರು ಸದಾ ಮುಂದು.. ಕಾರಣ ಜೀವನವನ್ನು ತುಂಬು ಹೃದಯದಿಂದ ಅನುಭವಿಸುತ್ತಿದ್ದರು.. ಅಸಾಧ್ಯ ಮಾತು, ಅಸಾಧ್ಯವಾದ ಸುತ್ತಮುತ್ತಲ್ಲ ಮಂದಿಯ ಬಗ್ಗೆ ಅರಿವು.. ಒಂದು ಕ್ಷಣ ಪರಿಚಯವಾದರೆ ಮುಗಿಯಿತು.. ಇವರ ಪೂರ್ವಾಪರ ಅವರ ಪೂರ್ವಾಪರ ಎಲ್ಲವೂ ಹತ್ತು ನಿಮಿಷದ ಸಿನಿಮಾದಲ್ಲಿ ಮೂಡಿಬಂದಷ್ಟು ಕರಾರುವಾಕ್ ಆಗಿರುತ್ತಿತ್ತು.. 

ಸುಮ್ಮನೆ ಹಾಗೆ ಹೀಗೆ ಬಂದದ್ದು ನೋಡೇ ಇಲ್ಲ.. ಯಾವಾಗಲೂ ಶಿಸ್ತಾಗಿ ಅಲಂಕಾರ ಮಾಡಿಕೊಳ್ಳುತ್ತಿದ್ದರು.. "ಏನ್ ಆಯೀ ಹುಡುಗಿ ಆಗಿಬಿಟ್ಟಿದ್ದೀಯ" ಅಂತ ಇವಳು ರೇಗಿಸೋಳು.. 

ಆ ಕಡೆ ಈ ಕಡೆ ಕಬ್ಬಿಣದ ಗೋಡೆಗಳು.. ಕೆಳಗೆ ಕಬ್ಬಿಣದ ಹಾಸಿಗೆ.. ಅದರ ಮೇಲೊಂದಷ್ಟು ಸೌದೆಗಳು.. ಅದರ ಮೇಲೆ ತವರು ಮನೆಯ ಅಂತಿಮ ಉಡುಗೊರೆಯಾಗಿದ್ದ ಏಳೆಂಟು ಸೀರೆಗಳು, ಕಾಲುಂಗುರು, ಸಾಂಕೇತಿಕ ತಾಳಿ, ಹೂವು, ಕಾಲುಂಗುರು ಮುತ್ತೈದೆಯಾಗಿ ಪರಲೋಕಕ್ಕೆ ಕಳಿಸಿಕೊಡುವ ಸಿದ್ಧತೆ ಪೂರ್ಣಗೊಂಡಿತ್ತು.. 

ಅವರ ಒಳಗಿನ ಜೀವನೋತ್ಸಾಹದ ಅಗ್ನಿ.. ಹೊರಗಿನ ಅಗ್ನಿಗಿಂತ ಜೋರಾಗಿಯೇ ಇತ್ತು.. 
ಆದರೆ ಆ ಜೀವನೋತ್ಸಾಹದ ಅಗ್ನಿಗಿಂತ ಇನ್ನೂ ಹೆಚ್ಚಾಗಿದ್ದದ್ದು ಶರೀರದ ತಾಪಮಾನ.. ಅದು ನೂರರ ಗಡಿ ದಾಟಿ.. ನೂರಾ ಆರು ತನಕ ಬಂದಿತ್ತು.. 

ಆ ಶಾಖ ಅವರ ಜೀವನೋತ್ಸಾಹದ ಅಗ್ನಿಯನ್ನು ಕಡಿಮೆ ಮಾಡತೊಡಗಿತು.. ಅವರ ಶರೀರಕ್ಕೆ ಲಗತ್ತಿಸಿದ್ದ ಉಪಕರಣಗಳು ಏರು ಪೇರಿನ  ರೇಖೆಯನ್ನು ತೋರಿಸುತ್ತಿದ್ದವು.. ಅಲ್ಲಿ ಸುತ್ತಲಿದ್ದ ಮಂದಿಗೆ ಏನೋ ಒಂದು ಆಶಾಕಿರಣ.. ಮತ್ತೆ ಮೊದಲಿನ ಹಾಗೆ ಆಗುತ್ತಾರೆ ಅಂತ..

ಸೀಮಾ ನಾ ಮಲಗಿರುವ ಆಸ್ಪತ್ರೆಯ ಹಾಸಿಗೆ ಮೇಲಕ್ಕೆ ಏರುತ್ತಿದ್ದೆ ಕೆಳಕ್ಕೆ ಇಳಿಯುತ್ತಿದೆ.. ಜೋಕಾಲಿಯಲ್ಲಿ ತೂಗಾಡಿಸಿದ ಅನುಭವವಾಗುತ್ತಿದೆ.. ಅಂತ ಒಂದೆರಡು ದಿನಗಳ ಹಿಂದೆ ಸೀಮಾಳಿಗೆ ಹೇಳಿದ್ದರಂತೆ.. 

ಒಂದು ಕಡೆ ಬದುಕಬೇಕು ಎಂಬ ಆಶಯ.. ಇನ್ನೊಂದು ಕಡೆ ಕಾಲನ ಕರೆ.. ತಾವು ನಂಬಿದ ಅಜ್ಜ/ಬಾಬಾ/ ಶಿವಬಾಬಾ ತನ್ನನ್ನು ಪರಂಧಾಮಕ್ಕೆ ಕರೆದೊಯ್ಯಲು ಬಂದಿದ್ದಾನೆ ಅನ್ನುವ ಅನುಭವ.. 

ಇವೆಲ್ಲ ಒಂದರ ಮೇಲೆ ಒಂದು ಪೈಪೋಟಿ ನೆಡೆಸಿದಂತೆ ಕಂಡರೂ ಕಡೆಗೆ ಗೆದ್ದದ್ದು ಕಾಲನ ಕರೆ.. 

ಸುಮಾರು ಹತ್ತು ಘಂಟೆಗಳ ಪಯಣ ಮುಗಿಸಿ ಬಂದು ಮನೆ ಬಾಗಿಲಿಗೆ ಬಂದಾಗ ಕಾಣದಿದ್ದದ್ದು ಎಂದಿನಂತೆ "ಶ್ರೀಕಾಂತ್ ಬನ್ನಿ ಬನ್ನಿ.. ಎಷ್ಟು ಹೊತ್ತಿಗೆ ಹೊರಟಿರಿ.. ಸೀಮಾ ಊಟ ಬಡಿಸು.. ಕಾಫೀ ಕುಡಿತೀರಿ, ನೀರು ಕೊಡಲಿ.. ಶೀತಲ್ ಚೆನ್ನಾಗಿದ್ದೀಯಾ.. ನೀ ಬಂದದ್ದು ಬಾಳ ಚಲೋ ಆಯ್ತು" ಹೀಗೆ ಹತ್ತಾರು ರೀತಿಯಲ್ಲಿ ಕಾಳಜಿಯಿಂದ ವಿಚಾರಿಸಿಕೊಳ್ಳುತ್ತಿದ್ದ ಧ್ವನಿ ಕೇಳಿಬರಲಿಲ್ಲ.. ಆದರೆ ಅವರ ದಿವ್ಯ ಉಪಸ್ಥಿತಿಯ ಅನುಭವ ನನಗೆ ಸಿಕ್ಕಿತು.. 

ಯಾವಾಗಲೂ ಅವರಿಗೆ ಕುತೂಹಲ ಹೆಚ್ಚಿತ್ತು.. ಒಂದು ದಿನ ನಮ್ಮ ಮನೆಗೆ ಬಂದಾಗ.. ರಾತ್ರಿ ಪ್ರೇಮದ ಕಾಣಿಕೆ ಚಿತ್ರ ನೋಡುತ್ತಿದ್ದೆವು.. ಬೇರೆ ರೂಮಿನಲ್ಲಿ ಮಲಗಿದ್ದ ಇವರು.. ಮೆಲ್ಲನೆ ಬಾಗಿಲ ಸಂಧಿಯಿಂದ ನೋಡುತ್ತಿದ್ದನ್ನು ನೋಡಿ "ಯಾಕೆ ಆಯೀ ಅಲ್ಲಿ ಇದ್ದೀಯ .. ಬಾ ಇಲ್ಲಿಯೇ ಬಾ" ಅಂದಾಗ "ಈ ಚಿತ್ರ ಚೆನ್ನಾಗಿತ್ತು ಅದಕ್ಕೆ ನೋಡೋಕೆ ಬಂದೆ" .. ಎಂದಿದ್ದರು.. 

ಸಿನೆಮಾ, ಹಾಡುಗಳು, ಪ್ರವಾಸ, ಊಟೋಪಚಾರ, ಬಂಧುವರ್ಗದವರನ್ನು ಉಪಚರಿಸುವುದು, ತನ್ನ ಮಕ್ಕಳ, ಮೊಮ್ಮಕ್ಕಳ ಸ್ನೇಹಿತರನ್ನು ಆತ್ಮೀಯವಾಗಿ ಮಾತಾಡಿಸುವುದು, ಉಪಚರಿಸುವುದು, ತನ್ನ ಸುತ್ತಲ ನೆರೆಹೊರೆಯವರನ್ನು ಪ್ರೀತಿಯಿಂದ ಮಾತಾಡುಸಿದ್ದರು.. 

ಇದಕ್ಕೆ ಸಾಕ್ಷಿ ಅವರು ಭೌತಿಕವಾಗಿ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾರೆ ಎನ್ನುವ ವಿಷಯ ತಿಳಿದ ಮೇಲೆ, ಹತ್ತಾರು ಮಂದಿ ಸಂತಾಪ ವ್ಯಕ್ತಪಡಿಸಿದ್ದು, ಅವರ ಅದ್ಭುತ ಇಚ್ಚಾಶಕ್ತಿಯ ಬಗ್ಗೆ ಹೇಳಿದ್ದು.. ಎಲ್ಲವೂ ಅವರ ತುಂಬು ಜೀವನದ ವ್ಯಕ್ತಿತ್ವವನ್ನು ಸಾರುತಿತ್ತು.. 

ಬದುಕಿನ ಪ್ರತಿಕ್ಷಣವನ್ನೂ ಅವರು ಅನುಭವಿಸಿ ಜೀವಿಸಿದ್ದರು.. 

ಪ್ರವಾಸಕ್ಕೆ ಹೋದಾಗ ಅದು ಜಲಪಾತವಾಗಿರಲಿ, ದೇವಾಲಯವಿರಲಿ, ಉದ್ಯಾನವಿರಲಿ, ಹೋಟೆಲ್ ಇರಲಿ.. ಮನೆಯ ಸಮಾರಂಭವಿರಲಿ ಇವರ ಉತ್ಸಾಹ ನೂರು ಪಟ್ಟು ಜಾಸ್ತಿಯಾಗಿತ್ತು.. 

ಅವರ ಅಂತಿಮ ಘಟ್ಟದ ಕೆಲವು ವರ್ಷಗಳು ಅವರ ಜೊತೆಯಲ್ಲಿ ಕಳೆಯುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯವೇ ಹೌದು.. ಅಪಾರ ಮಾತುಗಳು ಕೆಲವೊಮ್ಮೆ ಓಹ್ ಆಹ್ ಅನ್ನಿಸುತ್ತಿದ್ದರೂ ಅವರ ನಿರರ್ಗಳ ಮಾತುಗಳು.. ಕಲ್ಮಶವಿಲ್ಲದ ಮನಸ್ಸು, ಕಪಟವಿಲ್ಲದ ನೆಡೆನುಡಿಗಳು.. ಅವರ ಬದುಕಿನ ಕಡೆಯ ಹಂತದಲ್ಲಿ ಸೂಜಿ, ಮಾತ್ರೆಗಳು, ಟಾನಿಕ್ಕುಗಳು ಕೊಡುತ್ತಿದ್ದ ನೋವುಗಳು ... ಅವರ ಶುಭ್ರಮನಸ್ಸು ಗಟ್ಟಿಯಾಗಿ ನಿಂತಿದ್ದರಿಂದ.. ಆ ನೋವುಗಳನ್ನು ಈ ಭಗವಂತನ  ಆಶೀರ್ವಾದದಿಂದ  ಮೆಟ್ಟಿ ನಿಂತಿತ್ತು.. ವೈದ್ಯರು ತಮ್ಮಿಂದ ಆಗಬಹುದಾದ ಪ್ರಯತ್ನಗಳನ್ನೆಲ್ಲ ಮಾಡಿದ್ದರು.. ಇಂತಹ ಜೀವವನ್ನು ಉಳಿಸಿಕೊಳ್ಳಲು ಆಗಲಿಲ್ಲವಲ್ಲ ಎಂಬ ನೋವು.. ಅವರ ಕಣ್ಣಿನ ಅಂಚಿನಲ್ಲಿ ಕಣ್ಣೀರಾಗಿ ಬಂದದ್ದು ಮಾನವೀಯತೆ ಇದೆ ಎನ್ನುವುದಕ್ಕೆ ಸಾಕ್ಷಿಯಾಗಿತ್ತು.. 

ಈ ಹತ್ತು ಹದಿನೈದು ವರ್ಷಗಳಲ್ಲಿ ವೈದ್ಯಲೋಕವನ್ನು ತೀರಾ ಹತ್ತಿರದಿಂದ ನೋಡಿದ್ದ ನನಗೆ ವೈದ್ಯೋನಾರಾಯಣೋ ಹರಿಃ ಎಂಬ ಸಾಲಿನಲ್ಲಿ ಇರುವ ದಿವ್ಯಶಕ್ತಿಯ ಅನುಭವವಾಗಿತ್ತು.  

ಹಾಗಾಗಿ ಅವರ ಅಂತಿಮ ದರ್ಶನ ಮಾಡಿದ ಅನೇಕ ಬಂಧು ಮಿತ್ರರು, ಆಸ್ಪತ್ರೆಯ ಸಿಬ್ಬಂಧಿಗಳು ದೇವಿ ಕಳೆಯಿದೆ ಮುಖದಲ್ಲಿ ಅನ್ನುತ್ತಿದ್ದರು.. ಆ ಮಟ್ಟಿನ ದೈವಿಕ ಕಳೆ ಇತ್ತು ಅಂತ ಹೇಳ್ತಾರೆ ನೋಡಿದವರೆಲ್ಲ.. 

ಅವರನ್ನು ಅಂತಿಮ ಹಂತದಲ್ಲಿ ನೋಡಲಾಗಲಿಲ್ಲವೆಂಬ ನೋವಿದ್ದರೂ, ಅರೆ ಅವರೊಡನೆ ಸುತ್ತಾಡಿದ ಮಧುರನೆನಪುಗಳಲ್ಲಿ ಹಸಿರಾಗಿದ್ದರೆ ಅನಿಸುವ ಆ ಭಾವ ಸದಾ ನಿಂತಿರುತ್ತದೆ. 

ಭೌತಿಕವಾಗಿ ಇಲ್ಲದ ಅವರ ಅಸ್ತಿತ್ವವನ್ನು ಸಂಸ್ಕಾರದ ರೀತಿ ರಿವಾಜುಗಳಿಗಾಗಿ ಉರಿದು ಹೋದ ನಶ್ವರ ದೇಹ ಉಳಿಸಿದ ಕುರುಹುಗಳಲ್ಲಿ ಹುಡುಕುವ ಅವರನ್ನು ಹುಡುಕುವ ಕೆಲಸದಲ್ಲಿ ನಾನು ಭಾಗಿಯಾಗಿದ್ದು.. ಪುಣ್ಯವೇ ಹೌದು.. ಅವರ ಆ ಎಲುಬು, ಭಸ್ಮಗಳ ಸ್ಪರ್ಶ, ಆ ಶಕ್ತಿಗೆ  ಅಂತಿಮ ಸಂಸ್ಕಾರದ ಅಗ್ನಿ ಸ್ಪರ್ಶ ಮಾಡಿದ ಜಾಗದಲ್ಲಿ ನಮಸ್ಕರಿಸಿದಾಗ ಆ ಕಡೆಯಿಂದ ಆ ಸ್ಮಶಾನದ ಸಿಬ್ಬಂಧಿ ಆ ಭಸ್ಮವನ್ನು ಒಂದು ಕಡೆ ಮಾಡುತ್ತಿದ್ದ ಆ ಭಸ್ಮ ನನ್ನ ತಲೆಗೆ ಹಾರಿತು.. ಅಮ್ಮ ನನ್ನನ್ನು ಸ್ಪರ್ಶ ಮಾಡಿದ್ದಾರೆ ಅಂತ ಅನುಭವ ಸಿಕ್ಕಿತು.. ಹಾಗೆ ಆ ಚಿತಾಭಸ್ಮದಲ್ಲಿ ಸಂಸ್ಕಾರಕ್ಕೆ ಎಲುಬಿನ ಅವಶೇಷಗಳನ್ನು ಹುಡುಕುತ್ತಿದ್ದಾಗ ಸಿಕ್ಕಿದ್ದು ಅವರ ಅಗ್ನಿಯಲ್ಲಿ ಬೆಂದ ಕಾಲುಂಗುರ.. 

ಹೋಗಿ ಬನ್ನಿ ಅಮ್ಮ.. ಬದುಕಿನ ಸಾರ್ಥಕತೆಯನ್ನು ಕಂಡು ಜೀವನೋತ್ಸಾಹದ ಪಾಠವನ್ನು ನಮಗೆಲ್ಲ ಕಲಿಸಿದ ನೀವು.. ಆ ಮಹಾಮಹಿಮನಿಗೂ ಉತ್ಸಾಹ ತುಂಬ ಬೇಕಾದ ಅವಶ್ಯಕತೆ ಇದೆ ಅನಿಸುತ್ತದೆ.


ಈ ಬದುಕಿನಲ್ಲಿ ಕಂಡ ಕನಸ್ಸುಗಳು.. ಮಾಡಬೇಕಾದ ಸಾಧನೆಗಳು, ಸೇವೆಗಳು ಎಲ್ಲವೂ ನಿಮ್ಮ ಬಾಳಿನಲ್ಲಿ ಸಿಕ್ಕಿದೆ.. ಅದನ್ನು ನಿಮ್ಮದೇ ಶೈಲಿಯಲ್ಲಿ ವಜ್ರಸಮಾನ ಮಾಡಿದ್ದೀರಾ.. ನಿಮಗೆ ಅರಿವಿಲ್ಲದೆ ನಿಮ್ಮ ಪೀಳಿಗೆ ಮತ್ತು ಮುಂದಿನ ಪೀಳಿಗೆಯನ್ನು ಈ ಅದ್ಭುತ ಲೋಕಕ್ಕೆ ಪರಿಚಯಿಸಿ ಅವರೂ ಕೂಡ ಸಾರ್ಥಕತೆ ಪಡೆಯುವಂತೆ ಮಾಡಿದ್ದೀರಾ.. ಇದಕ್ಕಿಂತ ಇನ್ನೇನೂ ಸಾರ್ಥಕತೆ ಇದೆ ....!

ಒಂದು ದೀಪ ಹಚ್ಚಿದರೆ ಸಾಕು ಅದು ಅನೇಕಾನೇಕ ದೀಪಗಳನ್ನು ಹಚ್ಚಲು ಸಹಾಯ ಮಾಡುತ್ತದೆ.. ಅಂಧಕಾರವನ್ನು ಮರೆ ಮಾಡುತ್ತದೆ.. 

ಇದೆ ಅಲ್ಲವೇ ನೀವು ಕೂಡ ಮಾಡಿದ್ದು.. 

************
ಅಜ್ಜ ನಾನು ಹೊರಡುವಾಗ ನೀನು ನಕ್ಕಿದ್ದು ಏಕೆ ಅಂತ ಗೊತ್ತಾಯಿತು.. ಹೌದು ಅವರು ಹೋದರು ಅನ್ನುವ ಶಾಕ್ ಗಿಂತ ಅವರಿಲ್ಲ ಎನ್ನುವ ಶಾಕ್ ದೊಡ್ಡದು ಎನ್ನುವ ಆ ಕ್ಷಣದ ಮಾತು ನಿಜವಾಯಿತು.. 

ನಿನ್ನ ತಾಳಕ್ಕೆ ಕುಣಿಯಾದವರಾರು ಇದ್ದಾರೆ ಅಜ್ಜ!


***********

Sunday, February 8, 2026

ಯಾತ್ರೆ ....ಅಂತಿಮವೋ...ಆರಂಭವೋ

ಚಿತಾಗಾರದ ಒಳಗೆ ಕಾಲಿಟ್ಟೆ...

ಅಲ್ಲಿನ ಸಿಬ್ಬಂದಿ ಚಿತಾಗಾರದ ಬಾಗಿಲು ತೆರೆದರು..

ಛಾವಣಿಯ ಸಣ್ಣ ಕಿಂಡಿಯಿಂದ ಬೆಳಕಿನ ಕೋಲು ಕಾಣಿಸಿತು..ಆ ಬೆಳಕಿನ ಕೋಲಿನಲ್ಲಿ ಕೆಲವು ಕಣಗಳು ಮೇಲಕ್ಕೇರುತ್ತಿದ್ದರೆ..ಕೆಲವು ಕೆಳಕ್ಕೆ ಇಳಿಯುತ್ತಿದ್ದವು..


ಅಚ್ಚರಿಯಿಂದ ಅದನ್ನೇ ನೋಡುತ್ತಿದ್ದೆ...

ಕಿರಣಗಳು ಮೆಲ್ಲನೆ ಮಾಯವಾಗುತ್ತಿತ್ತು..ಅಂದೇ ಸಂದೇಶ ವಾಹಕರ ಕೆಲಸ ಮುಗಿಯುತ್ತಿತ್ತು...

ಸಂಪೂರ್ಣ ಸಾರ್ಥಕತೆ ಅನುಭವಿಸಿದ ಕಣಗಳು ಪರಂಧಾಮ ಸೇರುತ್ತಿದ್ದರೆ..ಪರಂಧಾಮದಿಂದ ಸಾರ್ಥಕತೆ ಅನುಭವಿಸೋಕೆ ಕಣಗಳು ಅವಿರ್ಭವಿಸುತ್ತಿದ್ದವು..

ಅಬ್ಬಬ್ಬ ಬದುಕಿನ ಆರಂಭವೋ..ಅಂತ್ಯವೋ ಅನ್ನುವುದಕ್ಕೆ ಉತ್ತರ ಸಿಕ್ಕಿದ ಕ್ಷಣವದು..

ಬದುಕೇ ಹೀಗೆ ಕಣದಿಂದ ಕಣದ ತನಕ...ಕಿರಣಗಳೇ ಇದಕ್ಕೆ ವಾಹಕಗಳು..

ನನ್ನ ಶಾಲಾದಿನದ ಗೆಳತಿ ..ಜೊತೆಯಲ್ಲಿ ಓದಿದ್ದು ಅಂತ ಅವಳು ಹೇಳಿದರೂ ಆ ದಿನಗಳ ನೆನಪು ಕರಗುವ ಮೊಂಬತ್ತಿಯ ಮೇಣದ ಹಾಗೆ ಸ್ಷಪ್ಟ ಇರಲಿಲ್ಲ..ಆದರೆ ಅವಳು ಬೇರೆ ಸೆಕ್ಷನ್ ಅಂತ ಗೊತ್ತಾದ ಮೇಲೆ ನಾನು ಗಜನಿಯಲ್ಲ ಅಂತ ಸಂತಸವಾಗಿತ್ತು..

ಹೀಗೆ ಒಂಭತ್ತು ವರ್ಷಗಳ ಒಂದು ಸುಂದರ ಮುಂಜಾವಿನಲ್ಲಿ ಶಾಲಾದಿನಗಳ ಸಹಪಾಠಿಗಳು ಲಾಲ್ ಬಾಗಿನಲ್ಲಿ ಭೇಟಿಯಾದೆವು..ಅಲ್ಲಿಂದ ಶುರುವಾಯಿತು ನಮ್ಮ ಗೆಳೆತನ..

ಇವಳು ಗೆಳತಿಯಲ್ಲ ನನ್ನ ಸಹೋದರಿಯಾದಳು..ಒಂದೇ ನಕ್ಷತ್ರ ..ಒಂದೇ ರಾಶಿ..ನಮ್ಮನ್ನು ಇನ್ನಷ್ಟು ಹತ್ತಿರ ತಂದಿತು..ದೇವಾಲಯದಲ್ಲಿ ಸಂಕಲ್ಪ ಮಾಡಿಸುವಾಗ ನನ್ನ ಹೆಸರು ತರುತ್ತಿದ್ದಳು..ಅಷ್ಟು ಮಮತೆ ಈ ಅಣ್ಣನ ಮೇಲೆ..

ಯೋಚಿಸುತ್ತಿದ್ದೆ ಇದೆಲ್ಲಾ ಕನಸೋ..ನನಸೋ ಹೇಗೆ ಸಾಧ್ಯ ಅಂತ..

ಒಮ್ಮೆ ಅವಳ‌ ಮನೆಯ ಕಾರ್ಯಕ್ರಮಕ್ಕೆ ನನ್ನ ಆಹ್ವಾನಿಸಿದ್ದಳು..ಆಗ ಅವಳ ಅಮ್ಮನನ್ನು ಕಂಡಿದ್ದೆ..ಆಗ ಅರಿವಾಯಿತು ಇವಳ ಸ್ವಭಾವ ಹೀಗೆ ಅಂತ..ಅವಳ ಅಪ್ಪನ ಬಗ್ಗೆ ಹತ್ತಾರು ಮಾತುಗಳಲ್ಲಿ ಹೇಳಿದಾಗ ಇವಳ ವ್ಯಕ್ತಿವಕ್ಕೆ ಬುನಾದಿ ಇವಳ ಮಾತಾ ಪಿತೃಗಳು ಅಂತ.

ಇವಳ‌‌ ಮಕ್ಕಳ ವಾಟ್ಸಾಪ್ ಸ್ಟೇಟಸ್ ನೋಡುತ್ತಲೇ ಇರುತ್ತೇನೆ..ತಾತಾ ಅಜ್ಜಿಯರನ್ನು ಎಷ್ಟು ಆಳವಾಗಿ ಪ್ರೀತಿಸುತ್ತಾರೆ ಅಂತ ಅರಿವಾಯಿತು..

ಅಂತಹ ಅದ್ಭುತ ವ್ಕಕ್ತಿತ್ವವುಳ್ಳ ಆ ಹಿರಿಯರ ಸಾನಿಧ್ಯ ಭಗವಂತನಿಗೆ ಬೇಕಾಗಿತ್ತು ಅಂತ‌‌‌ ಶನಿವಾರ ರಾತ್ರಿ ಸುಮಾರು ಹತ್ತು ಘಂಟೆಗೆ ತನ್ನ ಚೈತನ್ಯ ರಥವನ್ನು ಭುವಿಗೆ ಕಳಿಸಿಯೇ ಬಿಟ್ಟ.

ಸುಂದರ ಸಂಸಾರದ ಯಜಮಾನರಾಗಿ..ಪ್ರೀತಿಯ ಮಡದಿಗೆ ರಕ್ಷಕರಾಗಿ..ಮುದ್ದಾದ ಮಕ್ಕಳಿಗೆ ಪಿತರಾಗಿ..ಅತೀವವಾಗಿ ಪೂಜಿಸುವ ಅಳಿಯನಿಗೆ ಮಾವನಾಗಿ..ಕನಸ್ಸಲ್ಲೂ ತಾತಾ ಅಂತ ಕನವರಿಸುವ ಮೊಮ್ಮಕ್ಕಳಿಗೆ ತಾತಾನಾಗಿ..ಅನೇಕ ಬಂಧು ಮಿತ್ರರಿಗೆ ಪ್ರೀತಿಸುವ ಜೀವವಾಗಿ ಬದುಕಲ್ಲಿ ಸಂಸ್ಕಾರ..ಶಿಸ್ತು..ಸಂಪ್ತದಾಯ..ಗುರು ಹಿರಿಯರಲ್ಲಿ ಭಕ್ತಿ ಗೌರವ.. ಎಂದೂ ಬಿಡದ ದೇಶ ಭಾಷೆಗಳ ಮೇಲಿನ ಪ್ರೀತಿ.. ಇವುಗಳನ್ನು ಆಸ್ತಿ ಮಾಡಿ ಭುವಿಯಲ್ಲಿನ ತನ್ನ ಬಳಗಕ್ಕೆ ಧಾರೆಯೆರೆದು ಶೇಷ ಭಾಗವನ್ನು ಭಗವಂತನಿಗೆ ಅರ್ಘ್ಯದ ಮೂಲಕ ಕೊಡಲು ಭಗವಂತ ಕಳಿಸಿದ ಚೈತನ್ಯ ರಥವನ್ನು ಹತ್ತಿ ಹೊರಟೇ ಬಿಟ್ಟರು..





ನೋಡಿದವರ..ಭೇಟಿ ಮಾಡಿದವರ..ಮಾತಾಡಿಸಿದವರ ಬಗ್ಗೆ ಒಂದೆರೆಡು ಮಾತುಗಳು ಹೇಳೋದು..ಬರೆಯೋದು ಸುಲಭ..

ಆದರೆ ಇನ್ನೊಬ್ಬರ ಕಣ್ಣಿನಿಂದ ನೋಡಿದ ವ್ಯಕ್ತಿತ್ವದ ಬಗ್ಗೆ ಬರೆಯೋದು ಕಷ್ಟ..ಆದರೆ ಅದನ್ನು ಸಾಧ್ಯ ಮಾಡಿಸಿದ್ದು ಈ‌ ಕೀರ್ತಿಶೇಷರು..

ನಿಮ್ಮ ಸುಂದರ ಬದುಕಿಗೊಂದು ಸಾಷ್ಟ್ರಾಂಗ ಪ್ರಣಾಮಗಳು...!

ಪುನರಪಿ ಜನನಂ
ಪುನರಪಿ‌ ಮರಣಂ




Thursday, October 30, 2025

ವಿವಾಆ... .. Beautiful moments Spent!!!

 ಶ್ರೀ ನಾನು ಬರೋಕೆ ಆಗೋಲ್ಲ.. ಫೋಟೋಗಳನ್ನು ಕಳಿಸಿ  ಈ ಅದ್ಭುತ ಕ್ಷಣಗಳನ್ನು ಮಿಸ್ ಖಂಡಿತ ಮಿಸ್ ಮಾಡ್ಕೋತಾ ಇದ್ದೀನಿ ಅಂತ ನನ್ನ ಮುದ್ದು ತಂಗಿ ಪಾಪೆ ಕಳಿಸಿದ ವಾಟ್ಸಾಪ್ ಸಂದೇಶ ಬಂದಾಗ..ಅರೆ ಹೌದಲ್ವಾ ಇವತ್ತು ಹೋಗಬೇಕು ಅಂತ ನೆನಪಾಯಿತು.. 

ಪಾಪ ಧನ್ಯವಾದಗಳು ನಿಮಗೆ 

ಹೌದು ಜೀವನದ ಜಂಜಾಟಗಳಲ್ಲಿ ಅನೇಕ ಸಮಯ ಸುಂದರ ಕ್ಷಣಗಳ, ಸುಂದರ ಕಾರ್ಯಕ್ರಮಗಳ ದಿನಾಂಕವನ್ನೇ ಮರೆತು ಬಿಟ್ಟಿರುತ್ತೇವೆ.. 

ಒಂದು ವೇಳೆ ಇವತ್ತು ಬೆಳಿಗಿನ ಸಂದೇಶ ನೋಡದೆ ಇದ್ದಿದ್ದರೆ.. ಅವರಿಗೂ ಮರೆತು ಹೋಗಿದ್ದರೇ ... ಈ ರೇ ರೇ ಪ್ರಪಂಚ ತಂದು ಒಡ್ಡುವ ಕ್ಷಣಗಳ ಸೊಗಸೇ ಸೊಗಸೇ.. 

ಹೌದು ಇಪ್ಪತ್ತಾರು ವರ್ಷಗಳ ಹಿಂದೆ ಒಂದೇ ದಿನದ ವ್ಯತ್ಯಾಸದಲ್ಲಿ ಒಂದು ಕಂಪನಿ.. ಅದನ್ನು ಕಂಪನಿ ಅನ್ನೋದಕ್ಕಿಂತ ನಾವು ಬೆಳೆದ, ನಮ್ಮನ್ನು ಬೆಳೆಸಿದ ಶಾಲೆ ಎನ್ನಬಹುದು.. ಹೌದು ಬೋಥೋರ್ಪ್ ಥೆರ್ಮೋಮೆಟ್ರಿಕ್ಸ್, ನಂತರ ಜಿ ಇ ಥೆರ್ಮೋಮೆಟ್ರಿಕ್ಸ್ ಆಗಿ ಅನೇಕ ಸುಂದರ ಅನಗಳ  ಏಳಿಗೆಗೆ ಕಾರಣವಾದಕಂಪೆನಿಯದು . ನನ್ನ ವೃತ್ತಿ ಬದುಕಿನ ಅದ್ಭುತ ಕ್ಷಣಗಳನ್ನು ಕಳೆದ, ಪಾಠಗಳನ್ನು ಕಲಿತ ಶಾಲೆಯದು.. 


ಇರಲಿ ವಿಷಯಕ್ಕೆ ಬರೋಣ ಅಲ್ಲವೇ.. ವಾಸುಕಿ ಎಂಬ ಚಿರ ಯುವಕ ಪರಿಚಯವಾದ ಕಂಪೆನಿಯದು.. ನಮಸ್ಕಾರ ವಾಸುಕಿ ಅಂತ ಶುಭಾಶಯ ಕೋರಿದಾಗೆಲ್ಲ.. ಸಾರೀ ಯಾರ್ ಐ ಮಿಸ್ಸೇಡ್ ಯುವರ್ ನೇಮ್ ಅಂತ ಹೇಳಿ.. ಮತ್ತೆ ಹೊಸದಾಗಿ ಪರಿಚಯ ಮಾಡಿಕೊಂಡು ಶುರುಮಾಡಿದ ವೃತ್ತಿಬದುಕಿನಲ್ಲಿ ಅದೇಗೋ ಸುಮಧುರ ಮನಗಳನ್ನು ಒಂದು ಮಾಡುವ ಕ್ಷಣಗಳಿಂದ ದಿನ ನಿತ್ಯ ಒಂದೇ ಒಂದೇ ವಾಹನದಲ್ಲಿ ಪ್ರಯಾಣ ಮಾಡುತ್ತಿದ್ದರಿಂದ, ಇನ್ನಷ್ಟು ಹತ್ತಿರವಾದೆವು.. 

ಆಚಾರ ವಿಚಾರಗಳು ಊಟೋಪಚಾರ ಮಾತು ಕತೆ ಎಲ್ಲವೂ ಹೊಂದಾಣಿಕೆ ಆಗಿದ್ದರಿಂದ ಅವರ ಮನೆಗೆ ಹೋಗೋದು, ಅವರು ಅವಕಾಶವಿದ್ದಾಗ ನಮ್ಮ ಮನೆಗೆ ಬರೋದು ನೆಡೆಯುತಿತ್ತು.. 

ನನ್ನ ಮಗಳನ್ನು ಕಂಡು ಅರೆ ಪುಟ್ಟಿ ನಿನ್ನ ಕೆನ್ನೆಯನ್ನು ನನಗೆ ಕೊಡುತ್ತೀಯ ಅಂತ ಕೆನ್ನೆಯನ್ನುಹಿಂಡಿ ಮುದ್ದು ಮಾಡುವ ವಾಸುಕಿ, ಅವರ ಮನದನ್ನೆ ವಿಜಯಲಕ್ಷ್ಮಿ ನಮಗೆ ಕೊಡುತ್ತಿದ್ದ ಆತಿಥ್ಯ ಅದ್ಭುತ. ಅವರ ಮಗಳು ಅಖಿಲ ಅರೆ ಪುಟ್ಟಿ ಬಾ ಅಂತ ಎತ್ತಿಕೊಂಡು ನನ್ನ ಮಗಳನ್ನು ಮುದ್ದು ಮಾಡುತ್ತಿದ್ದರು.. 

ಇಂದು ಅದೇ ಅಖಿಲ ಮದುವಣಗಿತ್ತಿಯಾಗಿ ನಿಂತಿದ್ದು ನಮ್ಮನ್ನು ಆತ್ಮೀಯವಾಗಿ ಮಾತಾಡಿಸಿದ್ದು.. ನೆನಪಿದೆಯಾ ಅಂದಾಗ "ಹೌ ಕ್ಯಾನ್ ಐ ಫರ್ಗೆಟ್" ಅಂತ ನಕ್ಕು ತಮ್ಮ ಮನದರಸನನ್ನು ಪರಿಚಯ ಮಾಡಿಕೊಟ್ಟಾಗ ಇದೆ ಅಲ್ಲವೇ ಬೆಳೆದ ಸಂಸ್ಕಾರ ಅನಿಸಿತು.. 

ಚಿರಯುವಕ ವಾಸುಕಿ ಸೂಟು ಬೂಟಿನಲ್ಲಿ ಕಂಗೊಳಿಸುತ್ತಿದ್ದರು.. ನಮಗೆ ವಯಸ್ಸಾಗಿದೆ ಈತನಿಗೆ ವಯಸ್ಸೇ ಆಗೋದಿಲ್ಲವೇ ಅಂತ ಹೊಟ್ಟೆ ಕಿಚ್ಚಾಗುವಷ್ಟು ಯೌವನದಿಂದಹುರುಪಿನಿಂದ ಓಡಾಡುತ್ತಿದ್ದರು.. ನನ್ನನ್ನು ನೋಡಿ ತುಂಬಾ ಸಂತೋಷವಾಯಿತು ಎಂದಾಗ ಅದೇ ಆತ್ಮೀಯತೆ ಅದೇ ಪ್ರೀತಿ 

ಈ ಸಮಾರಂಭ ಒಂದು ರೀತಿಯ ಮಧುರ ಸಂಗಮ.. ಅನೇಕ ಅನೇಕ ಸುಮಧುರ ಮನಗಳು ಜೊತೆ ಜೊತೆಯಾಗಿ ಕೆಲಸ ಮಾಡಿದ್ದು ಅನೇಕಾನೇಕ ಸವಾಲಿನ ಕ್ಷಣಗಳನ್ನು ಜೊತೆಯಾಗಿ ನಿಂತು ಕಂಪನಿಯನ್ನು ಗೆಲ್ಲಿಸಿ ನಾವು ಗೆದ್ದಿದ್ದು ನೆನಪಾಯಿತು.. 

ಈಶ್ವರ್ ಸರ್, ಹೆಗಡೆ ಪರಿವಾರ, ಶಿವಣ್ಣ ಮಹೇಂದ್ರ ಫಕಿರೇಶ್ , ಭಾರತಿ ಮೇಡಂ, ಮಾರಪ್ಪ, ಹೆಸರು ನೆನಪಿದ್ದರೂ ಮುಖಗಳು ಹೊಂದಿಕೆಯಾಗದೆ ಮುಖ ಪರಿಚಯದಿಂದ ಹುಡುಗರೇ ಬಂದು ಮಾತಾಡಿಸಿದ್ದು ಖುಷಿಯಾಯಿತು.. 

ಶೃಂಗೇರಿ.. ಜಗದ್ಗುರುಗಳು.. ಶಾರದೆ.. ಹೀಗೆ ಶೃಂಗೇರಿ ಈ ಕುಟುಂಬಕ್ಕೆ ಬಲು ಆತ್ಮೀಯ ಹಾಗೂ ಹತ್ತಿರ.. ಈ ಸಮಾರಂಭಕ್ಕೆ ಆಯ್ದುಕೊಂಡ ಸಭಾಂಗಣದ ಹೆಸರು ಚಂದ್ರಶೇಖರ ಭಾರತಿ ಕಲ್ಯಾಣ ಮಂಟಪ.. ಇದು ಸಾಕಲ್ಲವೇ ಎಲ್ಲವೂ ಸುಸೂತ್ರವಾಗಿ ಮೂಡಿಬರೋಕೆ.. !



ವಿವಾಆ ... ಏನಿದು ಕಾಗುಣಿತ ತಪಾಯಿತು ಅಂತೀರಾ.. ಇಲ್ಲ ಇದು ಅದ್ಭುತ ಮನಸ್ಸುಗಳ ಪರಿವಾರದ ಅಕ್ಷರಗಳು .. 

ಪ್ರೀತಿಯ ಮಮತೆಯಿಂದ ಹಾವಿನ ಹಾಗೆ ಬಂಧನ ಬೆಸೆಯುವ "ವಾಸುಕಿ"

ಮನೆಯನ್ನು ಮನಸ್ಸನ್ನು ಯಶಸ್ಸಿನ ಹಾದಿಗೆ ನೆಡೆಸುತ್ತ ಇರುವ "ವಿಜಯಲಕ್ಷ್ಮಿ"

ನಾನು ಅಖೇಲ ಅಲ್ಲ .. ಆದರೆ ನಾನಿಲ್ಲದೇ ಯಾವುದೂ ಸಂಪೂರ್ಣ ಅಲ್ಲ ಅನ್ನುವ "ಅಖಿಲ"

ಈ ಸಾಗರ ಮಧುರ ಸಂಗಮದಲ್ಲಿ ನಮ್ಮನ್ನೂ ಮೀಯುವಂತೆ ಮಾಡಿದ                                                                                ಹೊರಂಟೋರು ರಾಮಸ್ವಾಮಿ ವಾಸುಕಿ                                                                                                       ಕುಟುಂಬಕ್ಕೆ ಕೋಟಿ ಕೋಟಿ ಶುಭಾಶಯಗಳು.. ಧನ್ಯವಾದಗಳು.. 

ಮದುವೆ ಅಂದರೆ ಇಷ್ಟೇನಾ.. ಅಂದರೆ ಇಲ್ಲ ಇಲ್ಲ.. ಊಟೋಪಚಾರ ಶಿಷ್ಟಾಚಾರ ಇಲ್ಲಿ ಮನೆ ಮಾಡಿತ್ತು.. ಪಾನಿ ಪುರಿ ಮಸಾಲೆ ಪುರಿಗಳು ಹೊಟ್ಟೆ ಹಸಿವನ್ನು ಹೆಚ್ಚಿಸಿದರೆ.. ಮುಂದೆ ತಿಂಡಿ ತಿನಿಸುಗಳ ಸರಮಾಲೆಯೇ ಇತ್ತು.. ಪ್ರತಿಯೊಂದು ಅಚ್ಚುಕಟ್ಟು.. ಪ್ರತಿಯೊಂದು ಶುಚಿ ರುಚಿ.. ಜೊತೆಗೆ ಬಂದವರನ್ನು ಊಟ ಮಾಡಿ.. ಕುಂಕುಮ ಇಟ್ಟುಕೊಂಡು ಹೋಗಿ.. ತಾಂಬೂಲ ಅಂತ ಬೆನ್ನು ಬೆನ್ನಿಗೆ ತಾಗುತ್ತಾ ಗಮನಿಸುವ ಮೇಲ್ವಿಚಾರಕರ ತಂಡ.. ಆಹಾ ಒಂದು ಸಮಾರಂಭವನ್ನು ತನ್ನಂತೆ ಅಚ್ಚುಕಟ್ಟಾಗಿ ಏರ್ಪಾಡು ಮಾಡಿದ್ದ ವಾಸುಕಿ.. ನಿಜಕ್ಕೂ ಚಿರಯುವಕನೆ ಹೌದು.. 

ಇಲ್ಲಿ ಗಮನಿಸಬೇಕಾದ್ದು.. ಈ ಸಮಾರಂಭಕ್ಕೆ ಮುನ್ನ ಕೈಯನ್ನು ಪೆಟ್ಟು ಮಾಡಿಕೊಂಡಿದ್ದರೂ ಉತ್ಸಾಹದ ಚಿಲುಮೆಯಾಗಿ ಮದುವೆ ಮನೆಯಲ್ಲಿ ಎಲ್ಲರನ್ನೂ ಮಾತಾಡಿಸುತ್ತಾ ಓಡಾಡುತ್ತಿದ್ದ ವಿಜಯಲಕ್ಷ್ಮಿ ಅವರಿಗೆ ಧನ್ಯವಾದಗಳು.. 

ನನಗೆ ವೈಯುಕ್ತಿಕವಾಗಿ ಇಷ್ಟವಾಗಿತ್ತು ಕಾರಣ ಅನೇಕ ಹುಡುಗರ ಭೇಟಿ.. ಅಂದು ಹುಡುಗರಾಗಿದ್ದವರು.. ಇಂದು ಬೆಳೆದು. ಸಂಸಾರಸ್ಥರಾಗಿ ಜವಾಬ್ಧಾರಿಯುತರಾಗಿ ಮಕ್ಕಳೊಂದಿಗೆ ಬಂದು ಖುಷಿ ಪಟ್ಟು ಮಾತಾಡಿಸಿದ್ದು.. ಖುಷಿಯಾಯಿತು.. ಹದಿನೇಳು ವರ್ಷಗಳು ಕಳೆದೆ ಇಲ್ಲವೇನೋ ಈಗಲೋ ನಾನು ಅಲ್ಲಿಯೇ ಇದ್ದೇನೆ ಎನ್ನುವಂತೆ ಭಾವಿಸಲು ಸಹಕರಿಸಿದ್ದು ವಾಸುಕಿ ಕುಟುಂಬ ಮತ್ತು ಅವರ ಸಹೋದ್ಯೋಗಿಗಳು.. 

ಇಷ್ಟೇನಾ ಅಂದರೆ   ಇಲ್ಲಾರೀರೀಈಈಈ .. ಇನ್ನೂ ಇದೆ.. 

ಈ ರೀತಿಯ ಸಮಾರಂಭಕ್ಕೆ ಇನ್ನಷ್ಟು ಮೆರುಗು ನೀಡುವುದು ಸ್ವಾಗತಕಾರಿಣಿಗಳು.. ಪಾನೀಯ, ಕುಂಕುಮ, ಹೂವು, ಆತ್ಮೀಯವಾದ ಮುಗುಳುನಗೆ.. ಅರೆ ಇದೆ ಅಲ್ಲವೇ ಹೃದಯದಲ್ಲಿ ಕೂರುವುದು.. 

ಆರತಕ್ಷತೆಯ ಅಚ್ಚುಕಟ್ಟುತನ.. ಪ್ರತಿಯೊಬ್ಬರನ್ನು ಆತ್ಮೀಯವಾಗಿ ಮಾತಾಡಿಸುತ್ತಾ ವಧು ವರರಿಗೆ ಪರಿಚಯ ಮಾಡಿಕೊಡುತ್ತಾ ಫೋಟೋ ಆದ ಮೇಲೆ ಊಟಕ್ಕೆ ಕಳಿಸುವ ವ್ಯವಸ್ಥೆ.. ಇದಕ್ಕೆ ಕಳಶವಿಟ್ಟಂತೆ ಅಬ್ಬರವಿಲ್ಲದ ಸಂಗೀತ ಮೇಳ.. ಇಂಪಾದ ಮಧುರವಾದ ಹಾಡುಗಳ ತುಣುಕುಗಳನ್ನು ವಾದ್ಯದಲ್ಲಿ ನುಡಿಸುತ್ತ ಬಂದವರ ಕಿವಿಗೆ ಇಂಪನ್ನು ಉಂಟು ಮಾಡುತ್ತಿದರು..ಅಬ್ಬರದ ಸಂಗೀತ, ನೃತ್ಯ ಯಾವುದೂ ಇಲ್ಲದೆ ಕರ್ಣಾನಂದಕರ ವಾತಾವರಣ ಸೃಷ್ಟಿ ಮಾಡೋದು ಸಂಗೀತ ವಾಹಿನಿಯಲ್ಲಿ ಮೀಯುತ್ತಿರುವ ವಾಸುಕಿ ಕುಟುಂಬಕ್ಕೆ ಹತ್ತಿಯನ್ನು ಎತ್ತಿದಷ್ಟೇ ಹಗುರ ಕಾರಣ ವಿಜಯಲಕ್ಷಿ ಸಂಗೀತ ಶಾರದೆ.. ಅಖಿಲ ಸಂಗೀತ ಸರಸ್ವತಿ.. ಇವರಿಬ್ಬರನ್ನೂ ಸಲಹುತ್ತಿರುವ ವಾಸುಕಿ .. ಈ ಸುಂದರ ಕ್ಷಣಗಳ ಸೃಷ್ಟಿಕರ್ತ ಅರ್ಥಾತ್ ಬ್ರಹ್ಮ.!!!. 

ಸಭಾಂಗಣದಿಂದ ಹೊರಗೆ ಬಂದಾಗ ಮನಸ್ಸು ಹಕ್ಕಿಯಷ್ಟೇ ಹಗುರಾಗಿತ್ತು.. !!!

ಕೆಲವು ಚಿತ್ರಗಳು ನಿಮಗಾಗಿ!














  

Saturday, August 23, 2025

ಬೆಂದರೆ ಬೇಂದ್ರೆ ... ಅನುಭವ

ಜಿ ಕೆ ವೆಂಕಟೇಶ್ ಕರುನಾಡಿನ ದೊಡ್ಡ ಸಂಗೀತ ನಿರ್ದೇಶಕರು.. ಅವರೊಂದು ಕಾರ್ಯಕ್ರಮದಲ್ಲಿ ಹೇಳುತ್ತಿದ್ದರು ಕರುನಾಡು ನನ್ನನ್ನು ಯಾವತ್ತೂ ಮರೆಯೋದಿಲ್ಲ.. ಯಾಕೆ ಅಂದರೆ "ಯುಗಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ" ಕುಲವಧು ಚಿತ್ರದ ಈ ಹಾಡು ಪ್ರತಿ ಯುಗಾದಿಗೂ ಈ ಹಾಡು ಹಾಡದೆ ಹಬ್ಬ ಶುರುವಾಗದು... ಹಾಗೆಯೇ ಕಣ್ತೆರೆದು ನೋಡು ಚಿತ್ರದ "ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ" ಕರುನಾಡ ರಾಜ್ಯೋತ್ಸವಕ್ಕೆ ಚಾಲನೆ ನೀಡುವ ಹಾಡು.. ಅಂತ ಹೇಳಿದ್ದರು.. 

ನಿಜ ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಕವಿತೆಯಂತೆ ಅನೇಕ ಬಾರಿ ಧಾರವಾಡದ ಮೂಲಕ ಹಾದು ಹೋಗಿದ್ದರೂ ಸಾಧನೇಕೇರಿಯ ಬಗ್ಗೆ ಕೇಳಿದ್ದರೂ, ನೋಡಬೇಕೆಂಬ ಆಸೆಯಿದ್ದರೂ ಅನೇಕ ಕಾರಣಗಳಿಂದ ಹೋಗಲಾಗಿರಲಿಲ್ಲ.. 

ಭಗವಂತ ಹೇಳುವಂತೆ ಎಲ್ಲದ್ದಕ್ಕೂ ಒಂದು ಸಮಯ ಅಂತ ಇರುತ್ತದೆ.. ಅದು ಒದಗಿ ಬಂದಾಗ ಯಾವುದೇ ಅಡತಡೆಗಳು ಇರಲಾರದು.. 

ಮಾರ್ಚ್ ತಿಂಗಳಲ್ಲಿ ಒಂದು ಮಾತು ಕತೆ 

"ಬನ್ನಿ ಶ್ರೀಕಾಂತ್ ಧಾರವಾಡಕ್ಕೆ" 

ಅಂತ ಆತ್ಮೀಯವಾಗಿ ಆಹ್ವಾನ ಕೊಟ್ಟಾಗ 

"ಹೌದು ಸರ್ ಬರುತ್ತೇನೆ.. ಬೇಂದ್ರೆ ಅಜ್ಜನ ಮನೆ ನೋಡಬೇಕು.. ಸಾಧನೇಕೇರಿಯಲ್ಲಿ ಹೆಜ್ಜೆ ಇಡಬೇಕು" ಅಂದಾಗ ..

"ಬನ್ನಿ ಬನ್ನಿ ಬೇಂದ್ರೆ ಅಜ್ಜನನ್ನು ಕಣ್ಣಾರೆ ನೋಡಿದ್ದೇನೆ.. ಅಲ್ಲಿಗೆ ಕರೆದುಕೊಂಡು ಹೋಗುವ ಜವಾಬ್ದಾರಿ ನನ್ನದು" 

ಸಾಹಸ ಪ್ರವೃತ್ತಿ ಜೀವನದ ಜಂಜಾಟದಲ್ಲಿ ಕಡಿಮೆಯಾಗಿತ್ತು.. ಇವರ ಆತ್ಮೀಯ ಮಾತುಗಳು ಆ ದೀಪಕ್ಕೆ ಎಣ್ಣೆ ಹಾಕಿದಂತೆ ಮತ್ತೆ ಪ್ರಜ್ವಲಿಸತೊಡಗಿತು.. 

ದಾರಿಯುದ್ದಕ್ಕೂ ಮಳೆ.. ಮಳೆ.. ರಸ್ತೆಯೆಲ್ಲ ಒದ್ದೆಮಯ ... ಆಗಸ ಬೇಂದ್ರೆ ಅಜ್ಜನನ್ನು ನೋಡುತ್ತೇನೆ ಎನ್ನುವ ಸಾಹಸಕ್ಕೆ ಆನಂದಭಾಷ್ಪ ಸುರಿಸುತಿತ್ತು ಅನಿಸುತ್ತದೆ.. ಎಡಬಿಡದೆ ಮಳೆ.. 

ನನ್ನ ಮಡದಿಯ ಅಕ್ಕ ಮತ್ತು ಭಾವ ಅವರ ಮನೆಗೆ ಕಾಲಿಟ್ಟಾಗ ಒಂದು ಆತ್ಮೀಯವಾದ ಹಸ್ತಲಾಘವ.. ಬನ್ನಿ ಬನ್ನಿ ಅಂತ ಪ್ರೀತಿಯ ಮಾತುಗಳು.. ಆಗಸ ನೋಡಿದೆ.. ಬೇಂದ್ರೆ ಅಜ್ಜ ಶಭಾಷ್ ಕಾಲ ಕೂಡಿ ಬಂದಿದೆ ಎನ್ನುವಂತೆ ಹೆಬ್ಬೆರಳು ತೋರಿದರು.. 

ಭರ್ಜರಿ ಊಟ.. ತರಕಾರಿ ತುಂಬಿದ ಹುಳಿ, ಅನ್ನ, ಪೂರಿ, ಉಪ್ಪಿನಕಾಯಿ, ಮಜ್ಜಿಗೆ, ಬಾದಾಮ್ ಪುರಿ, ಕುಂಬಳಕಾಯಿಯ ಸಿಹಿ ತಿಂಡಿ... ಹೆಬ್ಬಾವಾಗಿದ್ದೆ.. ಕಾರಣ ಹೊಟ್ಟೆ ತುಂಬಿ ಹೋಗಿತ್ತು.. ಇದಕ್ಕೆ ಮುಂಚೆ ಕುಡಿದಿದ್ದ ಚಹಾ ಈ ಭೂರಿ ಭೋಜನದ ಬಿರುಗಾಳಿಗೆ ಎದರಿಕೊಂಡು ಉದರದೊಳಗೆ ಬಚ್ಚಿಟ್ಟುಕೊಂಡಿತ್ತು.




"ನೋಡಿ ಶ್ರೀಕಾಂತ್ ನಿಮ್ಮ ದೇವರು ಓಡಾಡಿದ ಸಾಧನಕೇರಿ.. ಇದೋ ನೋಡಿ ಅವರ ಮನೆ.. ಇಲ್ಲಿ ಬೇಂದ್ರೆ ದರ್ಶನದ ಭವನ.. "



ನನಗೆ ಅರಿವಿಲ್ಲದಂತೆ ಮೆಟ್ಟಿಲಿಗೆ ನಮಸ್ಕರಿಸಿ ಒಳಗೆ ಕಾಲಿಟ್ಟೆ.. ಒಂದು ಅದ್ಭುತ ಅನುಭವ ಮೈಯೊಳಗೆ ಹೊಕ್ಕಂತೆ ಭಾಸವಾಯಿತು.. 

"ನಿಮ್ಮ ದೇವರ ಜೊತೆ ನಿಂತುಕೊಳ್ಳಿ.. ಫೋಟೋ ತೆಗೆಯುತ್ತೇನೆ" ಎನ್ನುತ್ತಾ ಹುಮ್ಮಸ್ಸು ತುಂಬಿ ಫೋಟೋ ತೆಗೆದರು.. 

ಬಾಗಿಲಿನ ಬಳಿ ಕಂಚಿನ ಬೇಂದ್ರೆ ಅಜ್ಜನ ಮೂರ್ತಿ ಮೆಲ್ಲನೆ ಕರೆದಂತೆ "ಬಾರೋ ಶ್ರೀಕಾಂತ ಅಂತೂ ಇಂತೂ ಇಲ್ಲಿಗೆ  ಬರುವ ಸಂಕಲ್ಪ ನಿಜವಾಯಿತು.. "

"ಅಜ್ಜ ಇದು ನನ್ನ ಗುರುಗಳು ಕಂ ಭಾವನವರ ಮಾರ್ಗದರ್ಶನ.. ಅವರೇ ಈ ಸಾಹಸದ ರೂವಾರಿ.. ಈ ಶ್ರೇಯಸ್ಸು ಅವರಿಗೆ ಸಲ್ಲಬೇಕು.. "

"ಹೌದು ಹೌದು ಈ ಮಗು ಬಾಲ್ಯದ ದಿನಗಳನ್ನು ನಮ್ಮ ಮನೆಯ ಮುಂದೆ ಅಡ್ಡಾಡಿದ್ದನ್ನು ನಾನು ಕಂಡಿದ್ದೇನೆ.. ಮುಗ್ಧ ಮುಖ .. ಸೌಮ್ಯ ನಗು.. ಅಪಾರ ಬುದ್ದಿಮತ್ತೆ.. ತುಂಬಿಕೊಂಡಿರುವ ಈ ಮಗು ಇಂದು ಬೆಳೆದು ಅನೇಕರಿಗೆ ಮಾರ್ಗದರ್ಶನ ನೀಡುತ್ತಿರುವುದು ಹೆಮ್ಮೆಯ ಸಂಗತಿ.. ಈ ಧಾರವಾಡ ಮಣ್ಣಿನ ಗುಣವೇ ಹಂಗೆ.. ಹೋಗು ಮಹಡಿ ಹತ್ತಿ ನೋಡು ನನ್ನ ಜೀವನದ ಅನೇಕ ಮಗ್ಗುಲುಗಳನ್ನು ಚಿತ್ರಗಳಲ್ಲಿ ಸೆರೆಹಿಡಿದ್ದಿದ್ದಾರೆ.. ನೋಡಿ ಬಾ ಶುಭವಾಗಲಿ" ಎಂದು ಹರಸಿದರು.. 

ಮಹಡಿಯಲ್ಲಿ ನನ್ನ ಬೆನ್ನ ಹಿಂದೆಯೇ ಗುರುಗಳು "ನೋಡಿ ಶ್ರೀಕಾಂತ್ ಬೇಂದ್ರೆಯವರ ಕವಿತೆಗಳು, ಸಂಕಲನಗಳು.. ಅವರನ್ನು ಬಣ್ಣದಲ್ಲಿ ಚಿತ್ರಿಸಿರುವ ಚಿತ್ರಗಳು, ಅವರ ಜೀವನದ ಅತ್ತ್ಯುತ್ತಮ ಕ್ಷಣಗಳ ಚಿತ್ರಗಳು.. ಸ್ನಾತಕೋತ್ತರ ಪದವಿಯ ಪತ್ರಗಳು.. .. ನೋಡುತ್ತಾ ಬನ್ನಿ"  ಅಂತ ಹೇಳುತ್ತಾ ಒಂದೊಂದೇ ವಿಶೇಷಣಗಳನ್ನು ನನಗೆ ಪರಿಚಯ ಮಾಡಿಕೊಡುತ್ತಾ ಬಂದರು.. 

ಅದೊಂದು ಅದ್ಭುತ ಕ್ಷಣ.. 

ಮತ್ತೆ ಕೆಳಗೆ ಇಳಿದ ಮೇಲೆ ಬೇಂದ್ರೆ ಅಜ್ಜನ ಕಂಚಿನ ಮೂರ್ತಿ ನೋಡಿದೆ.. 

"ಶ್ರೀಕಾಂತ ಬದುಕು ಒಂದು ಹೂವಿನ ಹಾಸಿಗೆಯಲ್ಲ.. ಬದಲಿಗೆ ಅದೊಂದು ಸಾಧನೆ ಮಾಡುವ ಹಾದಿ.. ಅದೊಂದು ಸಾಧನ ಕೇರಿ... ಇಲ್ಲಿ ಸಾಧಿಸುವುದಕ್ಕೆ ಕೊನೆಯೇ ಇಲ್ಲ.. ನೋಡಿದಷ್ಟು ಇನ್ನಷ್ಟು ಕಾಣುವ ಸಾಗರದಂತೆ.. "ಸಾವಿರ"ದ ಸಾವಿರಾರು ಸಾಧನೆಗಳ ಲೋಕವಿದು.. ಜೀವನದಲ್ಲಿ ಬೆಂದವರೆಲ್ಲ ಬೇಂದ್ರೆಯಾಗಬಹುದು... ನಾನು ಹಾಗೆ ಬೆಂದು ಬೆಂದು ಬೇಂದ್ರೆಯಾದೆ.. ನಾ ಏನೂ ವಿಶೇಷ ವ್ಯಕ್ತಿಯಲ್ಲ .. ಅಂಬಿಕೆಯಮಗನಾಗಿ ಆಕೆ ಹೇಳಿಕೊಟ್ಟ ಒಂದಷ್ಟು ಪದಗಳು ಸರಿಸಿ ನಾಕುತಂತಿ ಅಂತ ಮೀಟಿದೆ.. ಅಷ್ಟೇ.. .. " 

ಅದ್ಭುತ ಮಾತುಗಳನ್ನು ಕೇಳಿಸಿಕೊಂಡ ನಂತರ ಹೊರಗೆ ಬಂದೆ.. ಶ್ರೀಕಾಂತ್ ಜೊತೆಯಲ್ಲಿ ಒಂದು ಫೋಟೋ ತೆಗೆದುಕೊಳ್ಳೋಣ ಅಂದರು ಗುರುಗಳು.. 

ಅಷ್ಟರಲ್ಲಿಯೇ ಅವರು ಬೇಂದ್ರೆ ಅಜ್ಜನ ಮನೆಯ ಹತ್ತಿರ ಒಂದು ಸುತ್ತು ಹೋಗಿಬಂದರು.. ಬೇಂದ್ರೆ ಅಜ್ಜನ ಮೊಗವನ್ನು ನೋಡಿದೆ.. 

"ಮಗು ನೀನು ನನ್ನನ್ನು ನೋಡಿದ್ದೇ.. ಆದರೆ ನಿನ್ನನ್ನು ಮುಖತಃ ಭೇಟಿ ಮಾಡಲು ಆಗಿರಲಿಲ್ಲ.. ಇಂದು ಪುಣ್ಯ ಅನಿಸುತ್ತದೆ.. ನಿನ್ನನ್ನು ನೋಡುವ ಅವಕಾಶ ಸಿಕ್ಕಿತು.. ನಿನ್ನ ಪರಿವಾರದವರನ್ನು ಇಲ್ಲಿಗೆ ಕರೆದು ತಂದಿದ್ದೀಯ.. ಬಹಳ ಒಳ್ಳೆಯ ಕೆಲಸ ಮಾಡಿದೆ.. ನೀನು ಅನೇಕರಿಗೆ ಮಾರ್ಗದರ್ಶನ ನೀಡುತ್ತಿದ್ದೆಯ.. ಮುಂದುವರೆಸು.. ನಿನ್ನ ಮುಗ್ಧ ನಗುವಿನಂತೆ ನಿನ್ನ ಬದುಕು ಸುಂದರವಾಗಿರುತ್ತದೆ. ಮುಂದಿನಬಾರಿ ಇಲ್ಲಿ ಅನ್ನೂ ಅನೇಕರ ಮಹಾನ್ ಆತ್ಮಗಳು ಓಡಾಡಿದ ಜಾಗಗಳಿವೆ.. ಅದನ್ನು ಎಲ್ಲರಿಗೂ ಪರಿಚಯಿಸು.. ನಿನಗೆ ಶುಭವಾಗಲಿ.. ನಿನ್ನ ಕುಟುಂಬಕ್ಕೆ ನಿತ್ಯ ಯುಗಾದಿಯ ಸಂತಸ ತುಂಬಿರಲಿ.. .. ಶ್ರಾವಣ ಬಂತು ನಾಡಿಗೆ ಎನ್ನುವ ಹಾಡಿನಂತೆ ಶ್ರಾವಣ ಮಾಸ ಶುರುವಾಗುತ್ತಿದೆ.. ಶುಭವಾಗಲಿ"

ನನ್ನ ಗುರುಗಳು ಅಜ್ಜನ ಈ ಮಾತುಗಳನ್ನು ಕೇಳಿಕೊಂಡು ಸಂತಸದಿಂದ "ಶ್ರೀಕಾಂತ್ ನಿಮ್ಮಿಂದ ನಮಗೂ ಈ ಅವಕಾಶ ಸಿಕ್ಕಿತು.. ನೆಡೆಯಿರಿ ಇನ್ನೊಂದು ಅದ್ಭುತ ಜಾಗವನ್ನುತೋರಿಸುತ್ತೇನೆ .. ಇದು ಸರ್ ಎಂ ವಿಶ್ವೇಶ್ವರಯ್ಯ ಅವರು ನಿರ್ಮಿಸಿದ ಕೆರೆಯನ್ನು ತೋರಿಸುತ್ತೇನೆ"




ವಾಹ್ ಮತ್ತೊಂದು ಸುಂದರ ಪ್ರೇಕ್ಷಣೀಯ ಸ್ಥಳಕ್ಕೆ ಹೋದೆವು.. ವಿಶಾಲವಾದ ಜಲರಾಶಿ.. ಸಸ್ಯಕಾಶಿ.. ತಂಪಾದ ವಾತಾವರಣ.. ತಣ್ಣನೆ ಗಾಳಿ.. ಇಲ್ಲೇ ವಿಶ್ರಮಿಸಿಕೊಳ್ಳೋಣ ಅಂತ ಒಂದಷ್ಟು ಹೊತ್ತು ಮಾತಾಡುತ್ತಾ ಮನೆಯ ಕಡೆ ಹೊರಟೆವು.. 

ದಾರಿಯಲ್ಲಿ LEA ಹೋಟೆಲಿಗೆ ಹೋಗಿ ಬೆಲ್ಲದ ಚಹ.. ಆ ಚಳಿಗೆ ಮೆಣಸಿನ ಕಾಯಿ ಬಜ್ಜಿಯನ್ನು ಹೊಟ್ಟೆಗೆ ಇಳಿಸಿದೆವು.. 


ನಮ್ಮ ಗುರುಗಳು LEA ಹೋಟೆಲಿನ ಇತಿಹಾಸವನ್ನು ಪುಟ್ಟದಾಗಿ ಹೇಳಿದರು.. ಪ್ರತಿಯೊಂದು ತಾಣದಲ್ಲೂ ವಿಶೇಷಣಗಳು ಇರುತ್ತವೆ.. ಅದನ್ನು ತಿಳಿದುಕೊಂಡು ಸರಳಮಾತುಗಳಲ್ಲಿ ಹೇಳುವ ಗುರುಗಳ ಜ್ಞಾನ ಭಂಡಾರಕ್ಕೆ ಒಂದು ನಮಸ್ಕಾರ ಸಲ್ಲಿಸಿದೆ.. 


ಗುರುಗಳು ಹೇಳಿದರು "ಶ್ರೀಕಾಂತ್  ಇಲ್ಲಿ ನೋಡಿ ಈ ಆಲದ ಮರ.. ಅದು ತನ್ನ ಬಿಳುಲುಗಳನ್ನು ಎಷ್ಟು ಭೂಮಿಗೆ ಸೇರಿಸುತ್ತದೆಯೋ ಅದು ಇನ್ನಷ್ಟು ಹರಡಿಕೊಂಡು ವಿಶಾಲವಾಗುತ್ತದೆ.. ನಮ್ಮಲ್ಲಿರುವ ಜ್ಞಾನ ಭಂಡಾರವನ್ನು ಹಂಚಿದಷ್ಟು ಬೆಳೆಯುತ್ತದೆ.. "

ಅಮೃತವಾಣಿ ನಮ್ಮ ಗುರುಗಳದ್ದು.. ಆ ಮಾತುಗಳನ್ನು ಮೆಲುಕು ಹಾಕುತ್ತ ಮನೆಗೆ ಬಂದು ಅವರನ್ನು ಬೀಳ್ಕೊಟ್ಟು ಹೊರಡುವಾಗ ವಂದನಕ್ಕ ಹೇಳಿದ್ದು "ಬೆಸ್ಟ್ supporting actors ನಾವೆಲ್ಲ" ಅಂತ.. 

ಆ ದಿನದ ಕಾರ್ಯಕರ್ಮಕ್ಕೆ ಒಂದು ಉತ್ತಮ ಶೀರ್ಷಿಕೆ ಸಿಕ್ಕಿತು.. 

ಮನ ತುಂಬಿ ಮಾತಾಡುವ ಗುರುಗಳ ಕುಟುಂಬಕ್ಕೆ ಧನ್ಯವಾದಗಳನ್ನು ಹೇಳುತ್ತಾ ವನಜಕ್ಕ ಅವರ ಮನೆಗೆ ಕಾಲಿಟ್ಟೆವು.. 

ವಂದನಕ್ಕ ವಾರ ಮನೆಯಲ್ಲಿ ಜ್ಞಾನ ಭಂಡಾರವನ್ನು ತುಂಬಿಕೊಂಡು ಬಂದರೆ.. ಇಲ್ಲಿ ಪ್ರಾಪಂಚಿಕ ಜ್ಞಾನವನ್ನು ತುಂಬಿಕೊಂಡೆವು..  ದೇಹವನ್ನು ಕಾಡುವ ಆರೋಗ್ಯದ ಸಮಸ್ಯೆಯನ್ನು ಮೆಟ್ಟಿ ನಿಲ್ಲುವುದು ಹೇಗೆ.. ಹೇಗಿರಬೇಕು. ಹೇಗಿದ್ದರೆ ಚನ್ನ.. ಇದರ ಬಗ್ಗೆ ಸುಮಾರು ಅರ್ಧಗಂಟೆಗೂ ಮಿಗಿಲಾಗಿ ನಿರರ್ಗಳವಾಗಿ ಮಾತಾಡಿದ ಬಾವನವರಿಗೆ ಅನಂತ ಧನ್ಯವಾದಗಳು.. 




ಹಿರಿಯ ಜೀವಿಗಳು ಓಡಾಡಿದ ಮನೆಯನ್ನು ಒಮ್ಮೆ ನೋಡಿ ಬಂದು.. ಆ ಮಹಾನ್ ಚೇತನಗಳು ಉಸಿರಾಡಿದ ತಾಣದಲ್ಲಿ ನಾವೂ ಸ್ವಲ್ಪ ಹೊತ್ತು ನಿಂತಾಗ.. ಆ ಉಸಿರಿನ ಅನುಭವ ಆಗಿದ್ದು ಸುಳ್ಳಲ್ಲ.. 

ಪ್ರೋತ್ಸಾಹ ಉತ್ಸಾಹ ಹುಮ್ಮಸ್ಸು ಸ್ಫೂರ್ತಿ ಇವೆಲ್ಲ ಬಜಾರಿನಲ್ಲಿ ಸಿಗುವ ವಸ್ತುಗಳಲ್ಲ.. ಬದಲಿಗೆ ಈ ರೀತಿಯ ಸುಂದರ ಮನೋಭಾವದ ವ್ಯಕ್ತಿಗಳ ಜೊತೆಯಲ್ಲಿ ಕಳೆಯುವ ಒಂದೆರಡು ಕ್ಷಣಗಳು ಬದುಕಿಗೆ ಸಾರ್ಥಕತೆ ಮೂಡಿಸುತ್ತೆ. 

ಒಂದು ಸುಂದರ ದಿನವನ್ನು ಅಷ್ಟೇ ಸುಂದರವಾಗಿ ಕಳೆದ ತೃಪ್ತಿ ನನ್ನದಾಗಿತ್ತು. ಅದಕ್ಕೆ ಅಲ್ಲವೇ ಅಜ್ಜ ಹೇಳಿದ್ದು "ಬೆಂದರೆ ಬೇಂದ್ರೆಯಾಗಬಹುದು"

Thursday, July 31, 2025

ಕೊರವಂಗಲದ ಡಿಂಡಿಮ ಕವಿ

 ಭೋಜರಾಜನ ಆಸ್ಥಾನ 

ಕಾಳಿದಾಸ ಕವಿ 

ಡಿಂಡಿಮ ಕವಿ 

ಕಮಲೆ ಕಮಲೋತ್ಪತ್ತಿಹಿ 

ಡಿಂಡಿಮ 

ಇದೆಲ್ಲ ಎಲ್ಲರಿಗೂ ತಿಳಿದ ವಿಷಯ ಅದರಲ್ಲೂ ಅಣ್ಣಾವ್ರ ಕವಿರತ್ನ ಕಾಳಿದಾಸ ಚಿತ್ರ ನೋಡದವರಿಲ್ಲ ಅಂತ ಧೈರ್ಯವಾಗಿ ಹೇಳಬಹುದು.. 

ನಮ್ಮ ಅದ್ಭುತ ಕೊರವಂಗಲದ ಬೇರು ಇಷ್ಟೊಂದು ಗಟ್ಟಿಯಾಗಿ ನಿಂತಿರೋದಕ್ಕೆ ಕಾರಣ ಅಜ್ಜಯ್ಯ ಅಜ್ಜಿ ನೆಟ್ಟ ಸಂಸ್ಕಾರ ಎಂಬ ಬೃಹತ್ ವೃಕ್ಷ .. ನಾವುಗಳು ಆ ಬೃಹತ್ ವೃಕ್ಷದ ರೆಂಬೆ ಕೊಂಬೆಗಳು.. 

ಸಾಕಪ್ಪ ಕೊರೆತ ಅಂದ್ರಾ.. ಸರಿ ವಿಷಯಕ್ಕೆ ಬರ್ತೀನಿ 

ಅಲ್ಲಿ ಡಿಂಡಿಮ ಕವಿ ಸರಸ್ವತಿಯನ್ನು ತನ್ನ ಡಮರುಗದಲ್ಲಿ ಸಾಕ್ಷತ್ಕರಿಸಿಕೊಂಡು ಆತ ಪ್ರಶ್ನೆ ಕೇಳಿದಾಗ ಪ್ರತಿದ್ವಂದಿಗಳು  ಉತ್ತರಕ್ಕೆ ತಡಕಾಡುವಂತೆ ಆ ಡಮರುಗದ ಶಬ್ದದಿಂದ ಎಲ್ಲರ ಬುದ್ದಿಯನ್ನು ಮಂಕು ಮಾಡಿ ಬಿಡುತ್ತಾನೆ.. 

ಗೊತ್ತೋ ಗುರು ಮುಂದಕ್ಕೆ ಹೇಳು 

ಹೌದು ನಮ್ಮ ರಜನೀಶನೂ ಹಾಗೆ.. ಅನೇಕಾನೇಕ ವಿಷಯಗಳನ್ನು ತಿಳಿದುಕೊಂಡು, ಅದನ್ನು ಸರಿಯಾದ ಸಮಯದಲ್ಲಿ ಸರಿಯಾದ ಪ್ರಮಾಣದಲ್ಲಿ ಬಳಸುವ ಅವನ ಜಾಣ್ಮೆಗೆ ತಲೆದೂಗದವರಿಲ್ಲ.. 

ಭೋಜರಾಜನ ಆಸ್ಥಾನದಲ್ಲಿದ್ದ ಏಕಸಂಧಿಗ್ರಾಹಿ ತರಹ ಇವನು ಕೂಡ. ಒಮ್ಮೆ ಇವನಿಗೆ ವಿಷಯ ತಾಕಿತೆಂದರೆ ಮುಗಿಯಿತು.. ಬ್ರಹ್ಮ ಮತ್ತು ವಿಷ್ಣು ಶಿವನ ಆದಿ ಅಂತ್ಯವನ್ನು ಹುಡುಕುತ್ತಾ ಹೋಗಿ ಕಡೆಯಲ್ಲಿ ಇದು ಚಿದಂಬರ ರಹಸ್ಯ ಎನ್ನುವ ಹಾಗೆ.. ಇವನು ವಿಷಯದ ಆಳಕ್ಕೆ ಇಳಿದು, ಅದರ ಹೂರಣವನ್ನು ಅರಿತು, ಅದನ್ನು ತಕ್ಕ ಹಾಗೆ ಬಳಸುವ ಜಾಣ್ಮೆಕಾರ (ಜಾಣ್ಮೆಕಾರ ಹೊಸ ಶಬ್ದ.. ನನಗೆ ಅನಿಸಿದ್ದು)

ರಜನೀಶನಿಗೆ ಗುಡಿ ಕೊಟ್ಟು ಇದನ್ನು ಸಿಂಗರಿಸು ಎಂದರೆ ಸಾಕು ಅದಕ್ಕೆ ಅದ್ಭುತವಾದ ಕಳಸ ಇಡುವ ಚತುರ.. ನಮಗೆ ಅನಿಸೋದಕ್ಕೆ ಸಾಧ್ಯವೇ ಇಲ್ಲ ಅನ್ನಿಸುವಂತೆ ಆ ಕಾರ್ಯಕ್ಕೆ ಸುವರ್ಣ ಚೌಕಟ್ಟು ಹಾಕಿಕೊಟ್ಟು ಮನಸ್ಸಿಗೆ ಸಂತಸ ನೀಡುವ ಸಂತ ಇವನು.. 

ನನಗೆ ಅನೇಕ ಬಾರಿ ಅನುಭವಕ್ಕೆ ಬಂದಿದೆ.. ಗುರು ಇದಕ್ಕೆ ಒಂದು ದಾರಿ ತೋರಿಸು ಎಂದರೆ, ಆತ ಆ ಹಾದಿಯನ್ನು ರಹದಾರಿ ಮಾಡಿ, ಅದಕ್ಕೆ ಬೆಳಕು ಕೊಟ್ಟು... ಎಲ್ಲರೂ ತಲೆದೂಗುವಂತೆ ಮಾಡುವಷ್ಟು ಶಕ್ತ ಇವನು.. ಅಕ್ಷರಗಳನ್ನು ಈತನೆಡೆಗೆ ಇಟ್ಟರೆ ಸಾಕು ಅದನ್ನು ಸುಂದರವಾದ ಪದಗಳ ಮಾಲಿಕೆ ಮಾಡುವ ಚಾಣಾಕ್ಷ.. 

ಏಕಲವ್ಯ ಶಬ್ದವೇದಿ ವಿದ್ಯೆಯನ್ನು ದ್ರೋಣಾಚಾರ್ಯರ ಮೂರ್ತಿ ನೋಡುತ್ತಾ ಕಲಿತ.. ನಮ್ಮ ರಜನೀಶ ಛಲದಂಕ ಮಲ್ಲ.. ಒಮ್ಮೆ ಅದರ ಕಡೆಗೆ ಗಮನ ಮತ್ತು ಮನ ಹರಿದರೆ ಸಾಕು.. ಅದರ ತಳ ಬುಡ ಜಾಲಾಡಿಸಿ ಅದನ್ನು ಕಲಿತು, ಕಲೆತು ಒಪ್ಪವಾಗಿಸುವವನು ನಮ್ಮ ರಜನೀಶ.. 

ಭೋಜರಾಜ ಕಂಬದ ಮರೆಯಲ್ಲಿ ನಿಂತು ಕಾಳಿದಾಸನ ಅಮರವಾಣಿಗಳನ್ನು ಕೇಳಿದಂತೆ, ಎಲ್ಲರ ಮಾತುಗಳನ್ನು ವಿಷಯಗಳನ್ನು ಕೇಳಿಸಿಕೊಂಡು ತನ್ನದೇ ದಾಟಿಯಲ್ಲಿ ಅದಕ್ಕೆ ಉತ್ತರ ನೀಡುವ ನಿಷ್ಣಾತ.. 

ಇದಕ್ಕೊಂದು ಉದಾಹರಣೆ : ಒಂದು ಸುಂದರ ಸಮಾರಂಭಕ್ಕೆ ಬ್ಯಾನರ್ ಮತ್ತು ಕಾರ್ಡ್ ಬೇಕಿತ್ತು.. ಏನು ಮಾಡೋದು.. ಅರಿವಿಗೆ ಬಂದಿರಲಿಲ್ಲ.. ಸುಮ್ಮನೆ ಗಾಳಿಯಲ್ಲಿ ಗುದ್ದಿದಂತೆ ಗುರು ಹೀಗೆ ಬೇಕು ಅಂದೇ... ವಿಷಯ ಕೊಡು ಏನಾದರೂ ಮಾಡೋಣ ಅಂದ.. ಮುಂದಿನ ಹತ್ತು ಹದಿನೈದು ನಿಮಿಷಗಳಲ್ಲಿ ಸಿಕ್ಕಿದ್ದು ಅನರ್ಘ್ಯ ರತ್ನದಂತಹ ಬ್ಯಾನರ್ ಮತ್ತು ಕಾರ್ಡು.. ಈ ರೀತಿಯ ಅನುಭವಗಳು ಎಲ್ಲರಿಗೂ ರಜನೀಶನಿಂದ ಸಿಕ್ಕಿದೆ.. ನನ್ನ ಅನುಭವ ರಜನೀಶ ಎಂಬ ಸಾಗರದಂತಹ ವ್ಯಕ್ತಿತ್ವದಲ್ಲಿ ಒಂದೆರಡು ಆಣಿಮುತ್ತುಗಳು... ಅವನ ಬಳಿ ಆಣಿಮುತ್ತುಗಳ ಖಜಾನೆಯೇ ಇದೆ.. 

ಇಂದು ಸುವರ್ಣ ಸಂಭ್ರಮದಲ್ಲಿ ತೇಲುತ್ತಿರುವ ರಜನೀಶನಿಗೆ.. ತಮಸ್ಸನ್ನು ಓಡಿಸುವ ಕಲೆಗಾರಿಕೆ ಹೊಂದಿರುವ ನಮ್ಮೆಲ್ಲರ ಪ್ರೀತಿಯ ರಜನೀಶನಿಗೆ ಸುವರ್ಣ ಸಂಭ್ರಮದ ಶುಭಾಶಯಗಳು.. 

ಪ್ರತಿ ಯಶಸ್ಸಿನ ಹಿಂದೆ ಮಾತೃ ಹೃದಯಿಯ ಉಪಸ್ಥಿತಿ ಇದ್ದೆ ಇರುತ್ತದೆ.. ಕೌಶಿಕ ಅಜ್ಜಿಯ ಬದುಕಿನ ಅನುಭವ, ತಮ್ಮ ಮೌನವೇ ಸಾಧನೆಯ ಶಿಖರ ಎಂದು ಸುಂದರ ಬದುಕು ಕಟ್ಟಿಕೊಂಡ ಕೌಶಿಕದ  ಅಜ್ಜಯ್ಯ,  ಬದುಕಿನ ಸಾರಾಮೃತ್ಯವನ್ನು ಧಾರೆಯೆರೆದ ರಜನೀಶನ ಸೋದರ ಮಾವಂದಿರು, ಅತ್ತೆಯರು ಹಾಗೂ ಚಿಕ್ಕಮ್ಮಂದಿರು, ತುಂಬು ಕುಟುಂಬದ ಕೊರವಂಗಲದ ಅಜ್ಜಯ್ಯ, ಅಜ್ಜಿ, ಚಿಕ್ಕಪ್ಪ,ಚಿಕ್ಕಮಂದಿರು, ಅತ್ತೆ ಮಾವಂದಿರು.. ಅಷ್ಟೇನಾ ಅಂದರೆ ಇರ್ರಪ್ಪ ಮುಖ್ಯವಾಗಿ ತಂದೆ ನಾಗರಾಜ .. ಅವರ ಜ್ಞಾನಾಮೃತ್ಯವನ್ನು ಹಾಗೆ ಧಾರೆಯೆರೆದು ಅವರ ವಿಶ್ಲೇಷಣೆ, ಅವರ ಜ್ಞಾನದ ಆಳ, ಅದರ ಪರಿಭಾಷೆ ಎಲ್ಲವನ್ನೂ ಧಾರೆಯೆರೆದು ಜ್ಞಾನದ ಬೆಳಕಿನಿಂದ ರಜನಿಯನ್ನು ದೂರ ಮಾಡಿ ಅದಕ್ಕೆ ಈಶನಾಗಲು ಸಹಕರಿಸಿದ ಅಪ್ಪ.. ತಾಳ್ಮೆಗೆ ಇನ್ನೊಂದು ಹೆಸರು ತನ್ನ ತಾಯಿ ಪದ್ಮ ಎಂದು ಸದಾ ಹೇಳುವ.. ರಜನೀಶನಿಗೆ ಬೆಂಗಾವಲಾಗಿ ನಿಂತಿದ್ದು ಮನದನ್ನೆ ರೂಪ.. ಜೊತೆಯಲ್ಲಿ ಸಹೋದರರ ಕುಟುಂಬ ನರೇಂದ್ರ, ಸುಮಾ. ಮತ್ತು ಜ್ಞಾನೇಶ ಮತ್ತು ಆಶಾ.. ಇಷ್ಟೇನೆ ಅಂದರೆ ಇಲ್ಲ ಮುಂದಿನ ತಲೆಮಾರುಗಳ ಸರದಾರರು ವೈಷ್ಣವಿ, ಭರತ, ಸುರಭಿ, ಸರಯೂ, ಸೌರವಿ.. ಇವರುಗಳ ಜೊತೆಯಲ್ಲಿ ತನ್ನ ಮಡದಿ, ಮತ್ತು ಸಹೋದರರ ಪತ್ನಿಯರ ಮಾತಾ ಪಿತೃಗಳ ಕುಟುಂಬ.. ಎಲ್ಲರೂ ಇವನ ಯಶಸ್ಸಿನ ಹಾದಿಯಲ್ಲಿ ಬೆಳಕು ತುಂಬಿದವರೇ ಹೌದು.. 

ನಮ್ಮೆಲ್ಲರ ಪ್ರೀತಿಯ ರಜನೀಶನಿಗೆ ಬಹುಪರಾಕ್ ಬಹುಪರಾಕ್..