Wednesday, April 17, 2024

ಇದು ರಾಮ ಮಂದಿರ ನೀ ರಾಮಚಂದಿರ!!!!

ಒಂದು  ಸಾವಿರದ ಐನೂರು ಇಸವಿಯ ಆಸುಪಾಸು.. 

ಒಂದು ಸದ್ ಕುಟುಂಬದಲ್ಲಿ ಭೀಕರ ಚರ್ಚೆ ನೆಡೆಯುತ್ತಿತ್ತು.. ಆ ಚರ್ಚೆಗೆ ಮುಖ್ಯ ಕಾರಣ.. ಪ್ರಭು ಶ್ರೀ ರಾಮ ಚಂದ್ರನ ಹುಟ್ಟಿದ ಭೂಮಿ ಎನ್ನಲಾದ.. ಶ್ರೀ ರಾಮಚಂದ್ರ ಪುಟ್ಟ ಮಗುವಿನ ಮೂರ್ತಿ ಇತ್ತು ಎನ್ನಲಾದ ದೇವಾಲಯವನ್ನು ಕೆಡವಿ ಅಲ್ಲಿ ಬೇರೆ ಧರ್ಮದ ಕಟ್ಟಡ ಎದ್ದು ನಿಂತಿದೆ ಎನ್ನುವುದು. 

"ಅಮ್ಮ ಸದಾ ರಾಮ ರಾಮ ಎನ್ನುತ್ತಿದ್ದ ಶ್ರೀ ರಾಮ ನೋಡಿದೆಯಾ ಹೇಗೆ ಕೈ ಕೊಟ್ಟು ಬಿಟ್ಟ.. ಇದು ರಾಮ ಮಂದಿರ ನೀ ರಾಮಚಂದಿರ ಎನ್ನುತ್ತಾ ಹಾಡುತ್ತಿದ್ದ ಕೋಟ್ಯಂತರ ಮಂದಿಗೆ ಎಂಥಹ ಆಘಾತ ಕೊಟ್ಟು ಬಿಟ್ಟ ನಿನ್ನ ಶ್ರೀ ರಾಮ.. ನೋಡಿದೆಯಾ?" ಎನ್ನುತ್ತಾ ಮಮ್ಮಲ ಮರುಗುತಿದ್ದ ಆ ಮಾತುಗಳನ್ನು ಕೇಳಿದಾಗ ಯಾರಿಗೆ ಆದರೂ ಹೊಟ್ಟೆಯಲ್ಲಿ ಇಲಿ ಓಡಾಡಿದ ಅನುಭವವಾಗುತ್ತಿತ್ತು.. ಅವರ ಮಾತಿನ ಉದ್ದೇಶ.. "ಶ್ರೀ ರಾಮ ಆ ದೇವಾಲಯ ಬೀಳುವಾಗ ತನ್ನನ್ನೇ ತಾನು ರಕ್ಷಣೆ ಮಾಡಿಕೊಳ್ಳಲಿಲ್ಲ ಎನ್ನುವ ಅರ್ಥ ಕೂಡಿತ್ತು.. "

ಹಲವಾರು ಶತಮಾನಗಳ ಕಾಲ ಒಂದು ತಾತ್ಕಾಲಿಕ, ದುಸ್ತರ ಸ್ಥಿತಿಯ ಪುಟ್ಟ ಪೆಟ್ಟಿಗೆಯಂಥ ಗುಡಿಯಲ್ಲಿ ನಿಂತಿದ್ದ ಬಾಲರಾಮನಿಗೆ ಭವ್ಯವಾದ ಒಂದು ಗುಡಿಯನ್ನು ಕಟ್ಟಬೇಕೆಂದು ಆ ಊರಿನ ಭಕ್ತರ ಸಮೂಹ ನಿರ್ಧಾರ ಮಾಡಿತು.. 

ಆ ನಿರ್ಧಾರ ಸುಲಭದ್ದು ಆಗಿರಲಿಲ್ಲ.. ಅನೇಕಾನೇಕ ತೊಡಕುಗಳು, ಹಿಂಸಾಚಾರಗಳು, ಬಲಿದಾನ ಎಲ್ಲವೂ ನೆಡೆದವು.. ಆದರೂ ಮನಸ್ಸು ಕುಗ್ಗಿರಲಿಲ್ಲ, ಧೈರ್ಯ ಹೆಚ್ಚಾಗುತ್ತಲೇ ಇತ್ತು.. 

ಪ್ರಭು ಶ್ರೀರಾಮನ ದರ್ಶನಕ್ಕೆ ಕಾದಿದ್ದ ಶಬರಿಯಂತೆ, ಶ್ರೀರಾಮಚಂದ್ರನ ಪಾದ ಸ್ಪರ್ಶಕ್ಕೆ ಕಾದಿದ್ದ ಅಹಲ್ಯೆಯಂತೆ ಆ ಒಂದು ಕ್ಷಣ ಬಂದೆ ಬಿಟ್ಟಿತು.. ದೇಶದಾದ್ಯಂತ ಶ್ರೀ ರಾಮಚಂದ್ರನಿಗಾಗಿ ಗುಡಿಯನ್ನು ಕಟ್ಟಬೇಕೆಂಬ ಐನೂರು ವರ್ಷಗಳಷ್ಟು ಹಿಂದಿನ ಸಂಕಲ್ಪಕ್ಕೆ ಮತ್ತೆ ಚಾಲನೆ ಸಿಕ್ಕಿತು.. 

ದೇಶದಾದ್ಯಂತ ಅದಕ್ಕೆ ಸಹಿ ಸಂಗ್ರಹ ಅಭಿಯಾನ ಶುರು ಮಾಡಿದರು.. ನನ್ನ ಮನೆಗೂ ಆ ಸಹಿ ಸಂಗ್ರಹ ಮಾಡುವ ಸೇನೆ ಬಂದಾಗ ಸಹಿ ಮಾಡಿ ಕೇಳಿದೆ "ಸಹಿ ಹಾಕುವೆ ಆದರೆ ನಿಜಕ್ಕೂ ಈ ಕಾರ್ಯ ಸಾಧ್ಯವೇ?"  ಸಿಕ್ಕ ಉತ್ತರ "ಮಂದಿರ ಅಲ್ಲೇ‌ ಕಟ್ಟುವೆವು"

ಅದಾಗಿ ದಶಕಗಳೇ ಕಳೆದವು.. ಆ ಸುವರ್ಣ ಸಮಯ ಬಂದೆ ಬಿಟ್ಟಿತು.. ನಮ್ಮ ಕಾಲಘಟ್ಟದಲ್ಲಿ ಈ ಅಭೂತ ಪೂರ್ವ ಘಟನೆಗೆ ನಮ್ಮ ಕಣ್ಣುಗಳು ಸಾಕ್ಷಿಯಾಗಿಯೇ ಬಿಟ್ಟಿತು.. 

ಶ್ರೀ ರಾಮನ ಹೆಜ್ಜೆ ಗುರುತನ್ನು ದಾಖಲಿಸಿದ ಪುಣ್ಯ ಭೂಮಿ ಅಯೋಧ್ಯೆಯಲ್ಲಿ ಭೂಮಿ ಪೂಜೆಯನ್ನು ಆಗಸ್ಟ್ ಐದು ಎರಡು ಸಾವಿರದ ಇಪ್ಪತ್ತನೇ ಇಸವಿಯಂದು ನೆರವೇರಿತು.. 

ಈ ಪುಣ್ಯ ಕಾರ್ಯಕ್ಕಾಗಿಯೇ ಹುಟ್ಟಿದ್ದಾರೇನೋ ಅನಿಸುವಂಥಹ ಅದ್ಭುತ ವ್ಯಕ್ತಿತ್ವದ ನಮ್ಮೆಲ್ಲರ ನೆಚ್ಚಿನ ನಾಯಕ ಶ್ರೀ ನರೇಂದ್ರ ಮೋದಿ ಅವರ ಕರಸೇವೆಯಲ್ಲಿ ಈ ಶುಭ ಕಾರ್ಯ ಜರುಗಿತು. 

ನಂತರ ಇಪ್ಪತ್ತೆರಡು ಜನವರಿ ಎರಡು ಸಾವಿರದ ಇಪ್ಪತ್ತನಾಲ್ಕನೇ  ಇಸವಿ ಆ ಭವ್ಯ ಮಂದಿರದಲ್ಲಿ ನಮ್ಮ ಕರುನಾಡಿನ ಜಕ್ಕಣ್ಣಚಾರಿ ಶ್ರೀ ಅರುಣ್ ಯೋಗಿರಾಜ್ ಅವರ ಪುಣ್ಯ ಮಾಡಿದ ಕರಗಳಿಂದ ನಿರ್ಮಿತವಾದ ಬಾಲರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯ ಹಾಗೂ ದೇವಾಲಯವನ್ನು  ಲೋಕಾರ್ಪಣೆ ಮಾಡಿದ ಅಮೃತಕ್ಷಣಗಳನ್ನು ದೂರದರ್ಶನದಲ್ಲಿ ನೋಡಿ ನಮ್ಮ ಕಣ್ಣುಗಳು ಪಾವನವಾಗಿದ್ದವು.. 

ಕೃಪೆ -ಗೂಗಲೇಶ್ವರ 


ಅಂದು ದೇಶ ವಿದೇಶಗಳಲ್ಲಿ ಈ ಐತಿಹಾಸಿಕ ಕ್ಷಣಗಳನ್ನು ಸಂಭ್ರಮಿಸಿದ್ದು, ಮನೆ ಮನಗಳಲ್ಲಿ ದೀಪ ಬೆಳಗಿದ್ದು, ಇಡೀ ಭುವಿಯೇ ಅಯೋಧ್ಯೆಯ ಕಡೆ ಗಮನ ಹರಿಸಿದ್ದು ವಿಶೇಷವಾಗಿತ್ತು.. 

ಕೃಪೆ -ಗೂಗಲೇಶ್ವರ 

ಈ ಹೆಮ್ಮೆಯ ಕ್ಷಣಗಳನ್ನು ನೋಡುತ್ತಾ ನೋಡುತ್ತಾ ಆನಂದ ಪಡುತ್ತಾ "ಇದು ರಾಮಮಂದಿರ.. ನೀ ರಾಮಚಂದಿರ.. ಜೊತೆಯಾಗಿ ನೀ ಇರಲು ಬಾಳು ಸಹಜ ಸುಂದರ" ಎನ್ನುವ ಹಾಡನ್ನು ಗುನುಗುನಿಸದೆ ಇರಲು ಸಾಧ್ಯವಾಗುತ್ತಲೇ ಇರಲಿಲ್ಲ.. 

ಅಂದು ನಮ್ಮ ಮನೆಯಲ್ಲೂ ಬಾಲರಾಮನ ಪುಟ್ಟ ಸ್ವಾಗತಕ್ಕೆ ಒಂದಷ್ಟು ಸಿದ್ಧತೆಗಳು, ಆಚರಣೆ ನೆಡೆದಿತ್ತು.. ಒಂದು ಸಾರ್ಥಕ ಭಾವದಲ್ಲಿ ಮಲಗಿದ್ದೆ.. 

ಬೆಳಗಿನ ಜಾವ ಸಕ್ಕರೆ ನಿದ್ದೆಯಲ್ಲಿದ್ದೆ "ಶ್ರೀ ಶ್ರೀ" ಯಾರೋ ಕರೆದಂತೆ.. ಯಾರೋ ಬಾಣದಿಂದ ನನ್ನನ್ನು ಮುಟ್ಟಿದಂತೆ ಭಾಸವಾಯಿತು .. 

ಕೃಪೆ -ಗೂಗಲೇಶ್ವರ 

ಅರೆಗಣ್ಣು ತೆರೆದು ನೋಡಿದೆ.. ಒಂದು ಪುಟ್ಟ ಬಾಲಕ .. ಕಷಾಯ ವಸ್ತ್ರಧಾರಿ... ನಗು ನಗುತ್ತ "ಏನು ಶ್ರೀ.. ನನ್ನ ಬಗ್ಗೆ ಮಾತಾಡೋದೇ ಇಲ್ಲ.. ನನ್ನ ಬಗ್ಗೆ ಬರೆಯೋದೇ ಇಲ್ಲ.. ನನಗಿಂತ ನನ್ನ ಮುಂದಿನ ಅವತಾರ ಶ್ರೀ ಕೃಷ್ಣನೇ ನಿನಗೆ ಬಲು ಪ್ರಿಯ ಅಂತ ನೂರಾರು ಕಡೆ ಹೇಳಿದ್ದೆ.. ಇವತ್ತು ನೋಡಿದರೆ ನನ್ನನ್ನು ಸಿಂಗರಿಸಿ, ನನ್ನ ಜೀವನದ ಕೆಲವು ಚಿತ್ರಗಳನ್ನು ಪ್ರದರ್ಶಿಸಿ, ಇದು ಅದ್ಭುತ ಕ್ಷಣಗಳು ಶ್ರೀ ರಾಮಚಂದ್ರಯಾನ ಅಂತೆಲ್ಲ ಬರೆದು.. ದೊಡ್ಡದಾಗಿ ಸಂಭ್ರಮಿಸಿದ್ದೀಯಾ.. ಏನು ಸಮಾಚಾರ"

"ಪ್ರಭು ಶ್ರೀ ರಾಮಚಂದ್ರನೇ .. 
ನೀನು ನಾನು ಒಂದೇ ಏನು  
ಹೊನ್ನು ಮಣ್ಣು ಸರಿ ಸಮವೇನು 
ಎಲ್ಲಾ ಬಲ್ಲ ತಂದೆಯು ನೀನು .... ಅಲ್ಲ ಪ್ರಭುವೇ.. ನಿನ್ನ ಶಕ್ತಿ.. ನಿನ್ನ ತಾಳ್ಮೆ.. ನಿನ್ನ ಧೈರ್ಯ, ನಿನ್ನ ಮಮತೆ ಎಲ್ಲಿ ಕಾಣಲು ಸಾಧ್ಯ.. ಬದುಕಿದರೆ ಹೀಗೆ ಬದುಕುಬೇಕು ಎಂದು ರಹದಾರಿ ಹಾಕಿಕೊಟ್ಟ ಮಹಾಮಹಿಮನು ನೀನು.. ಆದರೂ ಶ್ರೀ ಕೃಷ್ಣನ ಮಾತುಗಳು.. ಆ ಕಷ್ಟಗಳನ್ನು ಎದುರಿಸಲು  ಸಲಹೆಗಳು, ಆ ಮಾಯೆ, ಆ ನಗು, ಆ ಹಿತನುಡಿಗಳು, ಸವಾಲುಗಳನ್ನು ನಗು ನಗುತ್ತಲೇ ಸೋಲಿಸುವ ಆ ಗುಣಗಳು ನನಗೆ ಮಾರ್ಗದರ್ಶಿ.. ಮತ್ತು ಸ್ಫೂರ್ತಿ ಹಾಗಾಗಿ ನನಗೆ ನಿನ್ನ ಇನ್ನೊಂದು ಅವತಾರ ಇಷ್ಟೇ.. ಆದ್ರೆ ಪ್ರತಿ ಸಂದರ್ಭದಲ್ಲೂ ರಾಮ ರಾಮ ಅಯ್ಯೋ ರಾಮ.. ಎನ್ನುವ ನನ್ನ ಮನಸ್ಸು ನಿನ್ನ ಬಗ್ಗೆಯೇ ಗುಪ್ತಗಾಮಿನಿಯ ಹಾಗೆ ಹರಿಯುತ್ತಲೇ ಇರುತ್ತದೆ.. ಅದು ನಿನಗೆ ಗೊತ್ತು.. ಕಳ್ಳ ನೀನು ನನ್ನ ಪರೀಕ್ಷೆ ಮಾಡುತ್ತಿದ್ದೆಯ ಅಷ್ಟೇ.. ಮೇಲೆ ಹಾಡಿದ ಹಾಡನ್ನೇ ಇನ್ನೊಮ್ಮೆ ವಿಭಿನ್ನವಾಗಿ ಹಾಡುತ್ತೇನೆ ನೋಡು.. 

ನೀನು ನಾನು ಒಂದೇ ಏನು  
ಹೊನ್ನು ಮಣ್ಣು ಸರಿ ಸಮವೇನು 
ಎಲ್ಲಾ ಬಲ್ಲ ಕಳ್ಳನು ನೀನು 
ನಿನಗೀ ಮಾತು ಸರಿಯೇನು" 


"ನಾನು ನೀನು ನೆಂಟರಯ್ಯ ನಮಗೆ ಭೇದ ಇಲ್ಲವಯ್ಯಾ.. "

"ಅರೆ ಶ್ರೀ ಹಾಡೋಕೆ ಶುರು ಮಾಡಿದೆ.. ನಿಜಕ್ಕೂ ನನಗೆ ಖುಷಿಯಾಗುತ್ತಿದೆ.. ನಾ ಹುಟ್ಟಿ ಬೆಳೆದ ನಾಡಿನಲ್ಲಿ ಮತ್ತೆ ನನಗೊಂದು ನೆಲೆ ಸಿಕ್ಕಿದೆ.. ಇದಕ್ಕಿಂತ ಇನ್ನೇನು ಬೇಕು.. ನೋಡು ಆ ಮೂರ್ತಿಯಲ್ಲಿ ಕಾಣುವ ಹಾಗೆ ನನ್ನ ಕಣ್ಣುಗಳು ಒದ್ದೆಯಾಗಿವೆ.. ಭರತ ಭೂಮಿ .. ಇದು ಬರಿ ಭೂಮಿಯಲ್ಲ.. ಇದು ಸ್ವರ್ಗದ ಒಂದು ತುಣುಕು.. ಭಾರತಮಾತೆಯ ವರಪುತ್ರ ನರೇಂದ್ರ ಮೋದಿ ನಾಯಕತ್ವದಲ್ಲಿ ಈ ಭವ್ಯ ಭಾರತ ಮತ್ತೆ ಸುವರ್ಣಯುಗವನ್ನು ನೋಡಿಯೇ ನೋಡುತ್ತಿದೆ.. ಎಲ್ಲರಿಗೂ ಶುಭವಾಗಲಿ.. ನನ್ನ ಜನುಮದಿನವನ್ನು ನಿಮ್ಮೆಲ್ಲರ ಜನುಮದಿನಂದಂತೆ ಆಚರಿಸುತ್ತಿರುವ ನಿಮಗೆ.. ಮತ್ತು ನಿಮ್ಮೆಲ್ಲರ ನೆಚ್ಚಿನ ನಾಯಕ ನರೇಂದ್ರ ಮೋದಿಯವರಿಗೆ ಶುಭವಾಗಲಿ.. "

"ಶ್ರೀ ಏಳಿ ಎದ್ದೇಳಿ.. ಆಫೀಸಿಗೆ ಹೋಗುವ ಸಮಯವಾಯಿತು.. ಯಾಕಿಷ್ಟು ನಿದ್ದೆ ಮಾಡುತ್ತಿದ್ದೀರಿ.. "

ಕಣ್ಣು ಬಿಟ್ಟೆ.. "ಶ್ರೀ ರಾಮಚಂದ್ರ ಬಾಲಕನಾಗಿ ಆ ಚಿತ್ರದಲ್ಲಿ ನಗುತ್ತ All the best Sri" ಅಂತ ಹೇಳಿದಂತೆ ಆಯಿತು.. 


ಮನಸ್ಸಿನಲ್ಲಿಯೇ "ಜೈ  ಶ್ರೀ ರಾಮ್" ಎಂದೇ.. ಮೊಬೈಲಿನಲ್ಲಿ ಶ್ರೀ ವಿಷ್ಣು ಸಹಸ್ರನಾಮದಲ್ಲಿನ 

"ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ | ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ" ಶ್ಲೋಕ ಬರುತ್ತಿತ್ತು.. 

ಶ್ರೀ ಕೃಷ್ಣನ ಫೋಟೋ ನೋಡಿದೆ.. ಶಭಾಷ್ ಶ್ರೀ ಎಂದಂತೆ ಆಯಿತು.. ಶ್ರೀ ರಾಮನ ಫೋಟೋ ನೋಡಿದೆ.. ಬಂಗಾರದ ಮೊಗದಲ್ಲಿ ನಸು ನಗು ಕಂಡಿತು!