Sunday, March 24, 2024

ಕಗ್ಗಂಟಿನ ಕರದಂಟು - ಡಿವಿಜಿ ಅಜ್ಜ - ೨

ಜೀವ ಜಡರೂಪ ಪ್ರಪಂಚವನದಾವುದೋ|
ಆವರಿಸಿಕೊಂಡುಮೊಳನೆರೆದುಮಿಹುದಂತೆ||
ಭಾವಕೊಳಪಡದಂತೆ ಅಳತೆಗಳವಡದಂತೆ|
ಆ ವಿಶೇಷಕ್ಕೆ ಮಣಿಯೊ - ಮಂಕುತಿಮ್ಮ|| ೨||

-ಚಿತ್ರಕೃಪೆ  ಗೂಗಲೇಶ್ವರ 

ಬಭೃವಾಹನ ಚಿತ್ರ.. ಅರ್ಜುನ ತೀರ್ಥಯಾತ್ರೆಗೆ ಹೋಗಿರುತ್ತಾನೆ.. ಅರ್ಜುನ ನದಿಯಲ್ಲಿ ಜಳಕ ಮಾಡುತ್ತಿದ್ದಾಗ ಮೋಹಿತಳಾದ ನಾಗಲೋಕದ ಕೌರವ್ಯನ  ಮಗಳು ಉಲೂಚಿ ಹಾವಿನ ರೂಪದಲ್ಲಿ ಬಂದು ಅವನನ್ನು ನಾಗಲೋಕಕ್ಕೆ ಕರೆದೊಯ್ಯುತ್ತಾಳೆ. ಅಲ್ಲಿ ಅರ್ಜುನನ ಮೈಮರೆತಿರುವಾಗ ಆತನಿಗಿಗಾಗಿ ಇನ್ನೆರೆಡು ಜೀವಗಳು ಕಾಯುತ್ತಿವೆ ಎಂದು ಶ್ರೀ ಕೃಷ್ಣ ಅರ್ಜುನನನ್ನು ಮಣಿಪುರಕ್ಕೆ ತನ್ನ ಮಾಯೆಯಿಂದ ಕರೆಸುತ್ತಾನೆ.  

ಮಣಿಪುರದ ರಾಜಕುಮಾರಿ ಚಿತ್ರಾಂಗದೆಯನ್ನು ಕಂಡು ಮೋಹಿತನಾಗಿ ಗಾಂಧರ್ವ ವಿವಾಹವಾಗುತ್ತಾನೆ. ಅಲ್ಲಿಯೂ ಅರ್ಜುನನನ್ನು ಉಳಿಯಲು ಬಿಡದೆ,  ಶ್ರೀಕೃಷ್ಣ ಲೋಕಕಲ್ಯಾಣ ಕಾರ್ಯದ ಹಾದಿಯಲ್ಲಿ ಅರ್ಜುನ ಶ್ರೀ ಕೃಷ್ಣನ ತಂಗಿ ಸುಭದ್ರೆಯನ್ನು ಮದುವೆಯಾಗಬೇಕಾಗಿರುತ್ತದೆ. ಆದ್ದರಿಂದ ಭೀಮ ಪುತ್ರ ಘಟೋತ್ಕಚನ ಮೂಲಕ ಅರ್ಜುನನನ್ನು ದ್ವಾರಕೆಗೆ ಕರೆಸಿಕೊಳ್ಳುತ್ತಾನೆ.. 

ಆದರೆ ಇತ್ತ ಅರ್ಜುನನಿಂದ ಗರ್ಭಿಣಿಯಾಗಿರುವ ಚಿತ್ರಾಂಗದೆ, ಮತ್ತು ಗಾಂಧರ್ವ ವಿವಾಹಿತೆ ಉಲೂಚಿ ಅರ್ಜುನನನ್ನು ಕಾಣದೆ ಪರಿತಪಿಸುವಾಗ ಮತ್ತು ಪ್ರಜೆಗಳು ಚಿತ್ರಾಂಗದೆ ಮತ್ತು ಉಲೂಚಿಯನ್ನು ಸಾಮಾಜಿಕ ದೃಷ್ಟಿಯಲ್ಲಿ ಕಳಂಕಿತಳು ಎಂದು ನೋಡಬಹುದು ಎಂದು ನಾಗಲೋಕದ ಅರಸು ಕೌರವ್ಯ ಮಣಿಪುರಕ್ಕೆ ಬಂದು ಎಲ್ಲಾ ರಾಜ ಮಹಾರಾಜರು,ಮಂತ್ರಿಗಳು, ಸಾಮಂತರನ್ನು,  ಪ್ರಜೆಗಳನ್ನು ಉದ್ದೇಶಿಸಿ "ಮಹಾರಾಜಾ, ಮಂತ್ರಿಗಳೇ, ಸಾಮಂತರೆ  ನಮ್ಮೆಲ್ಲರ ಜೀವನ ಸೂತ್ರವನ್ನ ಒಂದು ಮಹಾಶಕ್ತಿಯು ಹಿಡಿದು ಆಡಿಸುತ್ತಿದೆ, ಆ ಮಹಾಶಕ್ತಿಯೇ ಪಾರ್ಥನನ್ನು ಈ ಸ್ಥಳದಿಂದ ಬೇರೊಂದು ಸ್ಥಳಕ್ಕೆ ಕರೆದುಕೊಂಡು ಹೋಗಿದೆ.. ಕಾಲ ಬರುವ ತನಕ ಚಿತ್ರಾಂಗದೆ ಮತ್ತು ಉಲೂಚಿಯನ್ನುಆದರಿಸಬೇಕು ಎಂದು ಹೇಳುತ್ತಾನೆ .. 

ನಮ್ಮ ಜಗತ್ತಿನಲ್ಲೂ ನಮ್ಮ ಬದುಕಿನಲ್ಲೂ ಹಾಗೆ ಅಂದುಕೊಂಡದ್ದು ನೆಡೆಯದೆ, ಅಥವ ಫಲಿತಾಂಶ ನಿಧಾನವಾಗುತ್ತದೆ. ಊಹಿಸದ ಚಮತ್ಕಾರಗಳು ನೆಡೆಯುತ್ತವೆ.. ಆಗ ನಮಗೆ ಅಚ್ಚರಿಯಾಗುವುದು ಉಂಟು. ಆ ಮಹಾಮಹಿಮನ ಮುಂದಿನ ನೆಡೆ, ಆತ ನಮ್ಮ ಬದುಕಲ್ಲಿ ಮಾಡುವ ಚಮತ್ಕಾರಗಳು ಎಣಿಸಲಸಾಧ್ಯ, ಊಹಿಸಲಸಾಧ್ಯ.. 

ಸಕಲ ಚರಾಚರವಸ್ತುಗಳಲ್ಲಿ ಅಣುರೇಣು ತೃಣಕಾಷ್ಠಗಳಲ್ಲಿ ಆತನ ವಿಶೇಷ ಶಕ್ತಿ, ವಿಶಿಷ್ಟ ಮಾಯೆ, ಪ್ರಪಂಚದಲ್ಲಿ ನಮ್ಮ ಎಣಿಕೆಗೆ ಸಿಗದೇ ಆದರೆ ಅದು ನಮ್ಮ ಬದುಕನ್ನು ಮುನ್ನೆಡೆಸುವ ದಾರಿದೀಪವಾಗುತ್ತದೆ.. ಆ ವಿಶೇಷ ಶಕ್ತಿಗೆ ಒಂದು ನಮಸ್ಕಾರ ಹಾಕಿ  ಎಂದು ಹೇಳುವ , ಈ ವಿಷಯವನ್ನು ನಾಲ್ಕು ಸಾಲುಗಳಲ್ಲಿ ಹಿಡಿದಿಟ್ಟ ಕಗ್ಗದ ಅಜ್ಜನಿಗೆ ಒಂದು  ನಮಸ್ಕಾರ ಎನ್ನೋಣವೇ !!!

Sunday, March 17, 2024

ಕಗ್ಗಂಟಿನ ಕರದಂಟು - ಡಿವಿಜಿ ಅಜ್ಜ - ೧

ಜಗತ್ತೇ ಒಂದು ಕಗ್ಗಂಟಾಗಿರುವಾಗ ಅದರೊಳಗೆ ಮಂಕುತಿಮ್ಮ ಎಂಬ ಪಾತ್ರದ ಮೂಲಕ, ಜಗತ್ತಿನ ವಿಶೇಷಗಳನ್ನು, ವಿಶಿಷ್ಟತೆಗಳನ್ನು, ತಾವು ಓದಿದ ಪುರಾಣ, ಪುಣ್ಯಕತೆಗಳು, ಐತಿಹಾಸಿಕ ಕ್ಷಣಗಳು, ತಾವು ಕೇಳಿದ ಜನಜನಿತ ಕತೆಗಳು, ಹಾಡುಗಳು, ಸಂಗತಿಗಳು, ತಮ್ಮ ಬದುಕಿನ ಕಥೆಗಳು.. ಜಗತ್ತಿನಲ್ಲಿ ನೆಡೆಯುವ ಅನೇಕಾನೇಕ ಪವಾಡಸದೃಶ್ಯಗಳನ್ನು ನಾಲ್ಕು ಸಾಲುಗಳಲ್ಲಿ ಹಿಡಿದಿಡುತ್ತಾ, ಸಾರ್ವಕಾಲಿಕ ಸತ್ಯವಾದ ಕಗ್ಗಗಳನ್ನು ಸೃಷ್ಟಿಸಿರುವ ಕಗ್ಗದ ಅಜ್ಜನಿಗೆ ನಮಿಸುತ್ತಾ.. ಈ ಜೈತ್ರಯಾತ್ರೆಯನ್ನು ಆರಂಭಿಸುತ್ತಿದ್ದೇನೆ.. 


ಚಿತ್ರಕೃಪೆ - ಗೂಗಲೇಶ್ವರ 

ನನ್ನ ಬದುಕಿನ ಹಾದಿಗೆ ದಾರಿ ದೀಪವಾಗಿದ್ದು ಅನೇಕ ವಿಷಯಗಳು.. ಮಹಾಭಾರತ, ಇತರ ಮಹಾಭಾರತದ ಕೊಂಡಿಯಿರುವ ಪುರಾಣ ಕಥೆಗಳು, ಭಗವದ್ಗೀತೆ, ಚಾಣಕ್ಯ, ದೇವಾನುದೇವತೆಗಳ ಕಥೆಗಳು ಇವುಗಳ ಜೊತೆಯಲ್ಲಿ ಸಿನಿಮಾಗಳು ಬಹಳ ಪ್ರಭಾವ ಬೀರಿದ್ದವು.. ಹಾಗಾಗಿ ಆ ಅನುಭವಗಳ ಮೂಟೆಯನ್ನು ಹೊತ್ತು ಸಿನೆಮಾಗಳ ಅನೇಕ ಪ್ರೇರಣಾತ್ಮಕ ಸನ್ನಿವೇಶಗಳನ್ನು, ಹಾಡುಗಳನ್ನು, ಸಾಹಸ ದೃಶ್ಯಗಳನ್ನು ಕಗ್ಗದ ಕಡಲಿಗೆ ಸಮೀಕರಿಸುವ ಒಂದು ದುಸ್ಸಾಹಸಕ್ಕೆ ಕೈ ಹಾಕೋಣ ಎನಿಸಿತು.. ಬಂಧು ಮಿತ್ರರು ಪ್ರೇರೇಪಿಸಿದರು, ಹಾಗಾಗಿ ಈ ಹೆಜ್ಜೆಗಳು..  

ಇಂದು ಅವರ ಜನುಮದಿನ, ಶುಭಾರಂಭವಾಗಲಿ, ಅಜ್ಜನ ಆಶೀರ್ವಾದ ಈ ಸರಣಿಗೆ ಉಸಿರು ತುಂಬಲಿ ಎಂದು ಆಶಿಸುತ್ತಾ, .. ಈ ಪುಟ್ಟ ಪುಟ್ಟ ಹೆಜ್ಜೆಯನ್ನು ಇಡಲು ಶುರು ಮಾಡುತ್ತೇನೆ!!!

                                                                            ******

ಶ್ರೀ ವಿಷ್ಣು ವಿಶ್ವಾದಿಮೂಲ ಮಾಯಲೋಲ,                                                                                          ದೇವ ಸರ್ವೇಶ ಪರಬ್ಬೊಮ್ಮನೆಂದು ಜನಂ||                                                                                            ಆವುದನು ಕಾಣದೊಡಮಳ್ತಿಯಿಂ ನಂಬಿಹುದೊ|                                                                                ಆ ವಿಚಿತ್ರಕೆ ನಮಿಸೊ - ಮಂಕುತಿಮ್ಮ|| ೧||


ದಶಾವತಾರಗಳನ್ನು ತಾಳಿದ ವಿಷ್ಣು.. ಸೃಷ್ಟಿಕರ್ತ ಬ್ರಹ್ಮನ ಪಿತಾ.. ಜಗತ್ತನ್ನು ಸ್ಥಿತಿಯಲ್ಲಿಡುವ ದೈವ, ದುಷ್ಟ ಶಿಕ್ಷಕ ಶಿಷ್ಟ ರಕ್ಷಕ ಹೀಗೆ ಹತ್ತಾರು ಗುಣವಿಶೇಷಣಗಳನ್ನು ಹೊಂದಿರುವ ವಿಷ್ಣು.. ಮತ್ತು ಅವನ ಶಕ್ತಿಗೆ, ಅವನ ಯುಕ್ತಿಗೆ, ಯಾವುದೇ ಸಂದರ್ಭದಲ್ಲಿಯೂ ಕೂಡ ತಾಳ್ಮೆಯನ್ನು ಕಳೆದುಕೊಳ್ಳದೆ, ಸಮಸ್ಯೆಗಳನ್ನು ಉಪಯುಕ್ತವಾದ ರೀತಿಯಲ್ಲಿ ಬಗೆಹರಿಸುವ ಆ ವಿಶೇಷ ಶಕ್ತಿಗೆ, ವಿಚಿತ್ರ ಶಕ್ತಿಗೆ ನಮಿಸೋಣ ಎನ್ನುವ ಮಾತನ್ನು ಅಜ್ಜ ನಮಗೆ ಹೇಳುತ್ತಾರೆ. 

 ತನ್ನ ದ್ವಾರ ಪಾಲಕರಾದ ಜಯವಿಜಯರು ಶಾಪಗ್ರಸ್ತರಾಗಿ, ಮೂರು ಜನ್ಮಗಳಲ್ಲಿ ದುಷ್ಟರಾಗಿ ಜನಿಸಿ ಹರಿಯಿಂದ ಹತರಾಗಿ ಮರಳಿ ವೈಕುಂಠಕ್ಕೆ ಮರಳುವ ಹಂತಗಳಲ್ಲಿ ಮೊದಲನೆಯ ಅವತಾರ ಹಿರಣ್ಯಾಕ್ಷ-ಹಿರಣ್ಯಕಶಿಪು. 

ಹಿರಣ್ಯಾಕ್ಷ ವಿಷ್ಣುವನ್ನು ವರಾಹ ರೂಪದಲ್ಲಿ ಧರೆಗಿಳಿಸಿ ಹತನಾಗಿ ವೈಕುಂಠ ಸೇರುತ್ತಾನೆ.. ಆದರೆ ಇನ್ನಷ್ಟು ಬಲಾಢ್ಯನಾದ ಹಿರಣ್ಯಕಶಿಪು ತನ್ನ ಸುತ  ಪ್ರಹ್ಲಾದ ಹರಿಭಕ್ತನಾಗಿದ್ದರಿಂದ ಆತನನ್ನು ಅನೇಕ ಶಿಕ್ಷೆಗಳಿಗೆ ಗುರಿಪಡಿಸಿದರೂ ಅಳಿಯದ ಪ್ರಹ್ಲಾದನ ಜೊತೆ ನೆಡೆಯುವ ಅಂತಿಮ ಸಂಭಾಷಣೆ ಈ ಕಗ್ಗಕ್ಕೆ ಸಮೀಕರಿಸಬಹುದು.. 

ಹರಿಯು ಸರ್ವಾಂತರಯಾಮಿ ಎನ್ನುತ್ತಾ, ಸೃಷ್ಟಿಗೆ ಆತನೇ ಶಕ್ತಿ ಎನ್ನುತ್ತಾ.. ವಿಷ್ಣುವು ಹತ್ತು ಹಲವಾರು ಹೆಸರುಗಳಿಂದ ಕಂಗೊಳಿಸುತ್ತಿದ್ದಾನೆ ಎನ್ನುವಾಗ ಕುಪಿತಗೊಂಡ ಹಿರಣ್ಯಕಶಿಪು .. ಈ ಜಗತ್ತಿಗೆಲ್ಲ ನಾನೇ ಸರ್ವೇಶ್ವರ.. ಎಂದಾಗ ಪ್ರಹ್ಲಾದ ನೀನು ನನಗೆ ಜನ್ಮಕೊಟ್ಟವನು.. ನಿನಗೆ ಜನ್ಮಕೊಟ್ಟವರು ಯಾರು ಎಂದಾಗ.. ಕಶ್ಯಪ ಬ್ರಹ್ಮ.. ಎನ್ನುತ್ತಾನೆ.. ಅವರ ತಂದೆ ಎಂದಾಗ ಚತುರ್ಮುಖ ಬ್ರಹ್ಮ ಎನ್ನುತ್ತಾನೆ.. ಅವರ ತಂದೆ ಎಂದಾಗ ನಿರುತ್ತರನಾಗುತ್ತಾನೆ.. 

ಚತುರ್ಮುಖ ಬ್ರಹ್ಮನ ತಂದೆ ಯಾರು.. ಯಾರಾದರೂ ಇರಲೇಬೇಕಲ್ಲ ಎಂದಾಗ.. ಯಾರು ಅವರು ಎನ್ನುತ್ತಾನೆ ಹಿರಣ್ಯಕಶಿಪು.. ಆಗ ಅವನೇ ಶ್ರೀಮನ್ನಾರಾಯಣ ಎನ್ನುತ್ತಾನೆ.. 

ಹೀಗೆ ಒಂದು ಕಲ್ಲಿನ ಮೇಲೆ ಇನ್ನೊಂದು ಕಲ್ಲು.. ಅದರ ಮೇಲೆ ಇನ್ನೊಂದು.. ಹೀಗೆ ಜೋಡಿಸುತ್ತಾ ಹೋದಾಗ ಕಡೆಯಲ್ಲಿ ನಿಲ್ಲುವುದು ವಿಷ್ಣುವಿನ ಉಪಸ್ಥಿತಿ ಎನ್ನುವ ತತ್ವನ್ನು ಈ ಸಂಭಾಷಣೆ ಹೇಳುತ್ತದೆ.. 



ಮತ್ತೆ ಇನ್ನೊಂದು ಕಗ್ಗದ ಸುತ್ತಾ ಓಡಾಡೋಣ!!!