Wednesday, December 19, 2018

ಆಹ್ಲಾದ ಕೊಟ್ಟ ಒಂದು ದಿನ 16-Dec-2018!!!

"ಶ್ರೀಕಾಂತಾ ಭಾನುವಾರ ಹೀಗಿದೆ ಒಂದು ಕಾರ್ಯಕ್ರಮ.. ಬಾ ನೀನು ನಿನಗೆ ಇಷ್ಟವಾಗುತ್ತದೆ.. " ನನ್ನ ಸಹೋದರ ರಜನೀಶನ ಕರೆಗೆ ಒಪ್ಪಿಕೊಂಡಿದ್ದೆ..

ಕೆಲವು ಬಾರಿ ಹೀಗಾಗುತ್ತದೆ.. ಯಾವ ಕಾರ್ಯಕ್ರಮ, ಏನು ಅದರ ವಿಶೇಷ, ಯಾರ್ಯಾರು ಬರ್ತಾರೆ ಏನೂ ಗೊತ್ತಿರೋಲ್ಲ / ಗೊತ್ತುಮಾಡಿಕೊಳ್ಳುವ ಪ್ರಯತ್ನ ನಾ ಮಾಡೋಲ್ಲ..ಸುಮ್ಮನೆ ಆ ಕ್ಷಣವನ್ನು ಸುಖಿಸುವ ಮನಸ್ಥಿತಿ ಹೊತ್ತು ಹೋಗುತ್ತೇನೆ.. ಭಾನುವಾರ ಕಿಕ್ಕಿರಿದು ಸೇರಿಕೊಂಡಿದ್ದ ಎರಡು ಕಾರ್ಯಕ್ರಮಗಳು ಒಂದು ರಜನೀಶ ಹೇಳಿದ ಕಾರ್ಯಕ್ರಮ (ಇನ್ನೂ ಹೇಳಿಲ್ಲ ಆಲ್ವಾ ನಾನು :-) ) ಇನ್ನೊಂದು ನನ್ನ ನೆಚ್ಚಿನ ೩ಕೆ ತಂಡದಿಂದ ಆಚರಿಸುವ ರಾಜ್ಯೋತ್ಸವ.. ೩ಕೆ ಕಾರ್ಯಕ್ರಮದ ಬಗ್ಗೆ ನಿಮಗೆಲ್ಲಾ ಕಿವಿ ತೂತಾಗುವಷ್ಟು ಹೇಳಿದ್ದೇನೆ.. ಹಾಗಾಗಿ ಮತ್ತೆ ನಿಮಗೆಲ್ಲ ಬೋರ್ ಹೊಡೆಸೋಲ್ಲ

ಅಕ್ಕ ಬರ್ತೀನಿ ಅಂದ್ಲು, ಅಣ್ಣ ಬರ್ತೀನಿ ಅಂದ.. ನಮ್ಮ ಚಿಕ್ಕಪ್ಪ ಬರ್ತಾ ಇದ್ದೀನಿ ಅಂದ್ರು, ನನ್ನ ಸಹೋದರ ಮಡದಿ ಸುಮಾ ಮಾತೆ ಬರ್ತೀನಿ ಅಂದಿದ್ರು.. ಆ ಕಾರ್ಯಕ್ರಮದ ಸ್ಥಳಕ್ಕೆ ಅಕ್ಕನ ಜೊತೆಯಲ್ಲಿ ಹೋದಾಗ , ಅಣ್ಣ, ಚಿಕ್ಕಪ್ಪ, ಸುಮಾ ಮಾತೆ, ಮತ್ತು ರಜನೀಶ ಸಿಕ್ಕಿದರು..

ಭಾನುವಾರದ ಚಳಿ ಚಳಿ... ಬಿಸಿಬಿಸಿ ರುಚಿ ರುಚಿ ಉಪ್ಪಿಟ್ಟು.. ಕೇಸರಿಬಾತ್ ವಾಹ್.. ರುಚಿಯಾಗಿತ್ತು.. ಮಾತಾಡುತ್ತಾ ಕೆಲವು ಆತ್ಮೀಯರ ಪರಿಚಯ ಮಾಡಿಕೊಂಡು.. ಒಂದು ಕೋಣೆಯೊಳಗೆ ಸೇರಿಕೊಂಡಾಗ ಕಾರ್ಯಕ್ರಮದ ಪೂರ್ಣ ವಿವರ ಸಿಕ್ಕಿತು..

ಶಾಲಾ ಮಕ್ಕಳಿಗೆ ನಮ್ಮ ಭವ್ಯ ಗ್ರಂಥಗಳಾದ ಶ್ರೀ ಮಹಾಭಾರತ ಮತ್ತು ಶ್ರೀ ರಾಮಾಯಣದ ಬಗ್ಗೆ ಅರಿವು ಮೂಡಿಸುವ ಸಲುವಾಗಿ  ಪರೀಕ್ಷೆಗಳನ್ನು ಏರ್ಪಡಿಸುತ್ತಾರೆ.. ಆ ಮಕ್ಕಳು ಉತ್ಸಾಹದಿಂದ ಬರೆದ ಉತ್ತರ ಪತ್ರಿಕೆಯ ಮೌಲ್ಯಮಾಪನ ಮಾಡುವ ಕಾಯಕಕ್ಕೆ ಅಳಿಲು ಸೇವೆ ಮಾಡೋದು ನಮ್ಮ ಕೆಲಸವಾಗಿತ್ತು.. ಕರ್ನಾಟಕದಿಂದ ಸುಮಾರು ೬೦-೬೫ ಸಾವಿರ ವಿದ್ಯಾರ್ಥಿಗಳು ಬರೆದ ಉತ್ತರಪತ್ರಿಕೆಯನ್ನು ಅಂಕ ಎನ್ನುವ ಕಲ್ಲಿಗೆ ಒರೆ ಹಚ್ಚುವ ಕೆಲಸ..

ಶಾಲಾದಿನಗಳಲ್ಲಿ ನಾವು ಓದಿರಲಿ ಓದದೇ ಪರೀಕ್ಷೆ ಬರೆದಿರಲಿ.. ಅಂಕಗಳು ಕಡಿಮೆ ಬಂದಾಗ.. ಮೇಷ್ಟ್ರು ಯಾವುದೋ ಕೆಟ್ಟ ಮನಸ್ಥಿತಿಯಲ್ಲಿ ಅಂಕ ಕೊಟ್ಟಿದ್ದಾರೆ ಇನ್ನೊಂದು ಹತ್ತು ಅಂಕ ಕೊಟ್ಟಿದ್ದಾರೆ ಅವರ ಆಸ್ತಿಯೇನು ಕರಗುತ್ತಿತ್ತೇ. .ಹೀಗೆ ಅನೇಕ ರೀತಿಯ ಯೋಚನೆಗಳು ಮಾತಾಗಿ ಹೊರಬರುವುದು ಸರ್ವೇಸಾಮಾನ್ಯ.. ಅಂದು ನಾವು ಆ ಚಾಲಕನ ಕುರ್ಚಿಯಲ್ಲಿ ಕೂತಾಗ ಅರಿವಾಗಿತ್ತು.. ಆ ಕಷ್ಟದ ಪರಿ.. :-)

ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಬರೆದ ಉತ್ತರ ಪತ್ರಿಕೆಗಳು.. ಅದಕ್ಕೆ ಮಾದರಿ ಉತ್ತರ ಹೊಂದಿದ್ದ ಪ್ರಶ್ನೆ ಪತ್ರಿಕೆ.. ಅಂಕ ಪಟ್ಟಿ.. ಪ್ರಶ್ನೆ ಪತ್ರಿಕೆ ಇವೆಲ್ಲವನ್ನೂ ಕೊಟ್ಟು ಜೊತೆಗೆ ಕೆಂಪು ಬಣ್ಣದ ಲೇಖನಿಯನ್ನು ಕೊಟ್ಟು ಶ್ರೀ ಸತೀಶ್ ಅವರು ಹೇಗೆ ಮೌಲ್ಯಮಾಪನ ಮಾಡಬೇಕು ಎನ್ನುವ ಒಂದು ಪುಟ್ಟ ತಿಳುವಳಿಕೆ ಕೊಟ್ಟರು..

ಆಯ್ಕೆ ನಮ್ಮದಾಗಿತ್ತು ಭಾರ ಹೊರಬಹುದಾದ ಮಹಾಭಾರತವೋ ಅಥವಾ ನಮ್ಮ ಬದುಕಿನ ರಾಮಾಯಣದ ಜೊತೆಗೆ ಶ್ರೀ ರಾಮಾಯಣವೋ..

ನನಗೂ ಒಂದು ಪುಟ್ಟ ಕವರ್ ಕೊಟ್ಟರು.. ನಾ ಶುರು ಮಾಡಿದೆ.. ಕೊನೆಯಲ್ಲಿ ಲಘುವಾಗಿ ನಗು, ಹಾಸ್ಯದ ಜೊತೆಗೆ ಮೌಲ್ಯ ಮಾಪನ ಶುರುವಾಯಿತು.. ವಿದ್ಯಾರ್ಥಿಗಳು ಉತ್ತರಿಸಿದ ರೀತಿ ಕೆಲವೊಮ್ಮೆ ನಗು ತಂದರೂ ಅವರ ಕ್ರಿಯಾಶೀಲತೆಗೆ ಉದಾಹರಣೆಯಾಗಿತ್ತು.. ಜೊತೆಯಲ್ಲಿ ನಮ್ಮ ಧರ್ಮಗ್ರಂಥಗಳು ಎಂದು ಪ್ರಪಂಚವೇ ಒಪ್ಪುವ ಈ ಪೌರಾಣಿಕ ಕಥೆಗಳನ್ನು ಸಮಾಜದ ಮೂಲೆ ಮೂಲೆಗೂ ತಲುಪಿಸಿ ಇನ್ನಷ್ಟು ಹೆಚ್ಚಿನ ಅರಿವು ಮೂಡಿಸಬೇಕು ಎನ್ನುವ ಅಂಶವೂ ಹೊಳೆಯಿತು..

ನನಗೆ ತುಂಬಾ ಇಷ್ಟವಾದ ಉತ್ತರ :
ಗಾಂಧಾರಿಗೆ ಆ ಹೆಸರು ಬರಲು ಕಾರಣವೇನು?
ಆಕೆ ಗಂಧ ಹಚ್ಚಿಕೊಳ್ಳುತ್ತಿದ್ದರಿಂದ ಗಾಂಧಾರಿ ಎಂದು ಹೆಸರು ಬಂತು.. !

ಇನ್ನೊಬ್ಬರು ಮೇಡಂ ಹೇಳುತ್ತಿದ್ದರು.. : ರಾಮಾಯಣದ ಒಂದು ಪ್ರಶ್ನೆಗೆ ಹುಡುಗ ಬರೆದ ಉತ್ತರ
(ಆ ಹುಡುಗನಿಗೆ ಏನು ಬರೆಯಬೇಕು ಎಂಬ ಗೊಂದಲವಿತ್ತು ಅನ್ನಿಸುತ್ತೆ) ಇದು ಯಾರು ಬರೆದ ಕಥೆಯೋ ನನಗಾಗಿ ಬಂಡ ವ್ಯಥೆಯೋ :-)

ಸುಂದರ ಸಮಾಗಮದ ದಿನ.. ಒಂದು ವಿಭಿನ್ನ ಅನುಭವ ಕೊಟ್ಟ ದಿನವಾಗಿತ್ತು.. ಜೊತೆಯಲ್ಲಿ ಫೇಸ್ಬುಕ್ ಪರಿಚಯದ ಸ್ವರ್ಣ ಪುಟ್ಟಿ ಅಲ್ಲಿ ಸಿಕ್ಕಿದ್ದು ಮಾತಾಡಿದ್ದೂ ವಿಶೇಷ..

ಊಟ ಸೊಗಸಾಗಿತ್ತು.. ಬಿಸಿಬೇಳೆ ಬಾತ್, ಮೊಸರನ್ನ, ಉದ್ದಿನ ವಡೆ, ಖಾರವಾದ ಚಟ್ನಿ, ಪಾಯಸ .. ಆಹಾ ಏನೋ ಹೇಳೋದು.. ಸೊಗಸು ಸೊಗಸು.. ಭಾನುವಾರದ ಅರ್ಧ ದಿನವನ್ನು ಸಾರ್ಥಕವಾಗಿ ವಿಭಿನ್ನ ಅನುಭವದೊಂದಿಗೆ ಕಳೆದ ಖುಷಿ ನನ್ನದಾಗಿತ್ತು..

ಅಲ್ಲಿಂದ ನೆಡೆದದ್ದು ೩ಕೆ ರಾಜ್ಯೋತ್ಸವಕ್ಕೆ (ಬೆಚ್ಚಿ ಬೀಳದಿರಿ.. ಮತ್ತೆ ಅದನ್ನೇ ಹೇಳಿ ಕೊರೆಯೋಲ್ಲ)

ಬಹುರಾಷ್ಟ್ರೀಯ ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿರುವ ಶ್ರೀಕಾಂತ್ ಮಂಜುನಾಥ್ ಈ ಚಿತ್ರದ ಬಗ್ಗೆ ಹೇಳುವ ಕವನವನ್ನು ಅವರ ಬಾಯಲ್ಲಿಯೇ ಕೇಳೋಣ ಎಂದು ನನ್ನ ಗೆಳೆಯ ನೂತನ್ ಹೇಳಿದಾಗ ಕೈಲಿದ್ದ ಕ್ಯಾಮೆರಾ ನನ್ನ ಮಗಳಿಗೆ ಕೊಟ್ಟು ಆರಾಮಾಗಿ ವೇದಿಕೆ ಹತ್ತಿದೆ..

"ಎಲ್ಲರಿಗೂ ನಮಸ್ಕಾರ" (ಗಂಟಲು ಕೆಳಗೆ ಕೂತಿತ್ತು,  ಸರಿ ಮಾಡಿಕೊಂಡು)
ನಮ್ಮ ಮನ ಮನೆಯಲ್ಲಿ ಸದಾ ನೆಲೆಸಿರುವ ಹರಿಣಿ ಮೇಡಂ ಯಾವಾಗಲೂ ಹೇಳುತ್ತಿದ್ದರು .. ಶ್ರೀಕಾಂತ ಪೀಠಿಕೆ ಇಲ್ಲದೆ ನೀನು ಏನೂ ಹೇಳೊಲ್ಲ.. ಅದೇ ಅಪವಾಧ, ಆಪಾದನೆ,  ಪ್ರಶಂಸೆ ಹೊತ್ತು ಶುರು ಮಾಡುತ್ತೇನೆ .. ನನಗೆ ಬಂದ ಭಾವಕ್ಕೆ ಒಂದಷ್ಟು ವಿಚಿತ್ರ ಪದಗಳನ್ನು ಸೇರಿಸಿ ಇದನ್ನು ಮಾಡಿದ್ದೇ, ನೀವು ಅದನ್ನೇ ಮಾಡಿ, ಕೇಳಿ, ನೋಡಿ....


ಮೊದಲಿಗೆ ಶಶಿಕಿರಣ್ ಮುಲ್ಲೂರು ಸೆರೆ ಹಿಡಿದ ಈ ಚಿತ್ರ ತುಂಬಾ ಮನಸ್ಸಿಗೆ ತಾಕೀತು.. ಈ ಚಿತ್ರದಲ್ಲಿ ಏನೋ ಇದೆ ಎನ್ನುವ ವಿಚಾರಗಳು ಮನದಲ್ಲಿ ಮೂಡಿದವು.. ರವಿ ಕಾಣದ್ದನ್ನು ಕವಿ ಕಂಡ.. ಕವಿ ಕಾಣದನ್ನು ಈ ಕಪಿ ಕಂಡ .. ಕಪಿ ಅಂದರೆ ಕನ್ಯಾ ಪಿತೃ ನನ್ನ ಮಗಳಿಗೆ ತಂದೆ..

(ಕಿಸಿಕಿಸಿ ನಕ್ಕರು ಅಲ್ಲಿದ್ದವರು)

ಕಾನೂನು ಬಲ್ಲವರು..
ಕಾನೂನಿನ ಸಲಹೆಗಾರರು
ಸುಮ್ಮನೆ ಕುಳಿತಿಹರೆ?
ಇಲ್ಲಾ ಇಲ್ಲಾ .. !

(ಖಂಡಿತ ಇಲ್ಲ.. ಸುಮ್ಮನೆ ಕೂತಿಲ್ಲ)

ಗೋಡೆ ಶಿಥಿಲವಾಗಿದೆ,
ಬಾಗಿಲು ಹಳೆಯದಾಗಿದೆ,
ಅದಕ್ಕೆ ತಗಲಾಕಿದ ಬೀಗ ಪುಟ್ಟದಾಗಿದೆ!

(ಗೋಡೆ ಶಿಥಿಲವಾಗಿದೆ, ಬಾಗಿಲು ಹಳೆಯದು ಆದರೂ ಅಲ್ಲೊಂದು ಆಶಾ ಭಾವವಿದೆ.. ಬಾಗಿಲಿಗೆ ಹಾಕಿದ ಬೀಗ ಪುಟ್ಟದಾಗಿದೆ ಅಂದರೆ.. ಸಮಸ್ಯೆಗಳು ದೊಡ್ಡದಾಗಿರಬಹುದು ಆದರೆ ಅದಕ್ಕೆ ಪರಿಹಾರ ಪುಟ್ಟದಾಗಿರುತ್ತದೆ ಎನ್ನುವ ಭಾವನೆ ನನಗೆ ಕಾಣಿಸಿತು)

ಬಾಗಿಲುಗಳು ಅಳಕವಾಗಿದೆ,
ಹಾಕಿದ ಬೀಗದ ಹಂಗಿಲ್ಲ,
ಚಿಲಕ ನಿಲ್ಲೋಲ್ಲ !

(ಬಾಗಿಲುಗಳು ಸಡಿಲವಾಗಿದೆ, ಬೀಗದ ಹಂಗಿಲ್ಲ.. ಚಿಲಕವಿಲ್ಲದಿದ್ದರೆ ಬೀಗಕ್ಕೆ ಬೆಲೆಯಿಲ್ಲ)

ಕಾನೂನು ಬಲ್ಲವರು..
ಕಾನೂನಿನ ಸಲಹೆಗಾರರು
ಸುಮ್ಮನೆ ಕುಳಿತಿಹರೆ?
ಇಲ್ಲಾ ಇಲ್ಲಾ .. !

(ಖಂಡಿತ ಇಲ್ಲ ಎಂದು ಹೇಳುತ್ತೇನೆ)

ಅಲ್ಲೊಂದು ಆಶಾಭಾವವಿದೆ
ಅಲ್ಲೊಂದು ಉತ್ಸಾಹವಿದೆ
ಅಲ್ಲೊಂದು ಚೈತನ್ಯವಿದೆ!

ಬಾಗಿಲಿಗೆ ಸಿಕ್ಕಿಸಿದ ಅಂಚೆ ಪೆಟ್ಟಿಗೆ,
ಬಾಗಿಲ ಕೊನೆಯಲ್ಲಿ ಅರಳುತ್ತಿರುವ ಗಿಡ,
ಗೋಡೆ, ಬಾಗಿಲುಗಳನ್ನ ಕಾಯುತ್ತಿರುವ ಕಂಡೂ ಕಾಣದಂತಿರುವ ಚಾವಣಿ!

(ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲೊಂದು ಪುಟ್ಟ ಗಿಡ ಅರಳುತ್ತಿದೆ.. )

ಕಾನೂನು ಬಲ್ಲವರು..
ಕಾನೂನಿನ ಸಲಹೆಗಾರರು
ಸುಮ್ಮನೆ ಕುಳಿತಿಹರೆ?
ಇಲ್ಲಾ ಇಲ್ಲಾ .. !

(ಖಂಡಿತ ಇಲ್ಲ ಇಲ್ಲ ಎಂದು ಹೇಳುತ್ತೇನೆ)

ಅಂಚೆ ಡಬ್ಬದ ಕೇಸರಿ ಬಣ್ಣ,
ಬಾಗಿಲ ಕೊನೆಯಲ್ಲಿ ಹಸಿರು ವರ್ಣ,
ಗೋಡೆಗೆ ಬಳಿದಿರುವ ಬಿಳಿ ರಂಗು,
ಮಾಸಲಾಗಿದ್ದರೂ ಕಾಣುವ ನೀಲಿ,
ನಮ್ಮ ಧ್ವಜವನ್ನೇ ಹೋಲುತ್ತದೆ ಅಲ್ಲವೇ!

(ಇಷ್ಟಾದ ಮೇಲೆ.. ಅಂಚೆ ಡಬ್ಬದ ಬಣ್ಣ ಕೇಸರಿ, ಗಿಡ ಬಣ್ಣ ಹಸಿರು, ಗೋಡೆಯ ಬಣ್ಣ ಬಿಳಿ, ನೀಲಿ ಬಣ್ಣವಿದೆ.. ಇದೆಲ್ಲ ನೋಡಿದಾಗ ೧೯೪೭ ಇಂದ ನಮಗೆ ಗೊತ್ತಿರೋದು ಈ ಬಣ್ಣಗಳು ನಮ್ಮ ಧ್ವಜದ ಸಂಕೇತ.. )

ಕಾನೂನು ಬಲ್ಲವರು..
ಕಾನೂನಿನ ಸಲಹೆಗಾರರು
ಸುಮ್ಮನೆ ಕುಳಿತಿಹರೆ?
ಇಲ್ಲಾ ಇಲ್ಲಾ .. !

(ಖಂಡಿತ ಇಲ್ಲ ಇಲ್ಲ)

ಶಿಥಿಲವಾದದನ್ನು ಬಿಗಿ  ಮಾಡುತ್ತಿದ್ದಾರೆ
ನಮ್ಮ ಧ್ವಜದ ಮತ್ತೆ ಹಾರಾಡಲು ಸಿದ್ಧವಾಗುತ್ತಿದೆ
ನಮ್ಮ ದೇಶದ ಪ್ರಗತಿಯ ಪಥದಿ ಸಾಗುತ್ತಿದೆ
ಎಂಬ ಭಾವವನ್ನು ಬಿತ್ತರ ಮಾಡುತ್ತಿದ್ದಾರೆ
(Present condition ಗಮನಿಸಿದಾಗ ಬೆಳವಣಿಗೆಯ ಹಾದಿಯಲ್ಲಿದೆ.. ಇದು political agenda ಅಲ್ಲ.. ನಮ್ಮ ದೇಶ ಸಾಗುತ್ತಿರುವ ಹಾದಿ ಎಂದು ಹೇಳುತ್ತೇನೆ)

ಕಾನೂನು ಬಲ್ಲವರು..
ಕಾನೂನಿನ ಸಲಹೆಗಾರರು
ಸುಮ್ಮನೆ ಕುಳಿತಿಲ್ಲ
ಸುಭದ್ರ ಭಾರತಕ್ಕೆ ಅಡಿಪಾಯ ಹಾಕುತ್ತಿದ್ದಾರೆ!!!

(ಖಂಡಿತ ಸುಮ್ಮನೆ ಕುಳಿತಿಲ್ಲ ಬದಲಿಗೆ ಇನ್ನಷ್ಟು ಭದ್ರ ಪಡಿಸುತ್ತಿದ್ದಾರೆ.. ಇದು ನನ್ನ ಕವಿತೆಯ ಆಶಯ..)

(ಪುಟ್ಟ ಚಪ್ಪಾಳೆಗಳು ಬಂದವು)

೩ಕೆ ತಂಡಕ್ಕೆ ಒಂದು ಸಲಾಂ !!!

ಕೊನೆಯ ಮಾತು.. ಈ ಚಿತ್ರವನ್ನು ನೋಡಿದಾಗ Law Associates board ನೋಡಿದಾಗ ಮನಸ್ಸಿಗೆ ಬಂದದ್ದು ..

೧) ಕಳೆದ ವರ್ಷ (೨೦೧೭) ನನಗೆ ಕಾನೂನಿನ ಮಾರ್ಗದರ್ಶನ ಬೇಕಿದ್ದಾಗ ಸಹಾಯ ಮಾಡಿದ ನನ್ನ ಹೈಸ್ಕೂಲ್ ಗೆಳೆಯ
     ​ಕೃಷ್ಣೋಜಿ‌ ರಾವ್, ವೃತ್ತಿಯಲ್ಲಿ ವಕೀಲ.
೨) ನನ್ನ ಅದ್ಭುತ ಗೆಳತಿ ನಿವೇದಿತಾ ಚಿರಂತನ್,  ಕಾನೂನು ಪದವೀಧರರು.
೩) ೩ಕೆ ತಂಡದ ಜೆವಿಎಂ ನಾಯ್ಡು, ಇವರು ನನ್ನ ಸ್ನೇಹಿತರು ಹಾಗೂ ವೃತ್ತಿಯಲ್ಲಿ ವಕೀಲರು..

ಈ ಮೂವರು ಅದ್ಭುತ ಗೆಳೆಯರಿಗೆ ನನ್ನ ಕವನವನ್ನು ಅರ್ಪಿಸುತ್ತಿದ್ದೇನೆ.. ಮತ್ತು ಈ ಅವಕಾಶ ನೀಡಿದ ೩ಕೆ ತಂಡಕ್ಕೆ ಒಂದು ಸಲಾಂ ಎಂದು ಹೇಳಿ ಮಾತು ಮುಗಿಸಿದೆ..!


ಮನದೊಳಗೆ ಇದ್ದ ಭಯ ಎಂಬ ಭೂತವನ್ನು ಅಟ್ಟಿ ಹೊರಹಾಕಿದ ಖುಷಿ ಮನದಲ್ಲಿ ಮೂಡಿತ್ತು.. !!!

ರಾತ್ರಿ ಮನೆಗೆ ಹೋದಾಗ.. ಒಂದು ಸುಂದರ ಭಾನುವಾರವನ್ನು ಭಾವನೆಗಳ ಕಣಜದಲ್ಲಿ ಹೊತ್ತು ಓಡಾಡಿದ ಸಾರ್ಥಕ ಭಾವ ಮೂಡಿತ್ತು.. !!!

Wednesday, October 24, 2018

Happie Bdday - ನಿವ್ಸೀ ಅಂದ್ರೆ CB!!!

ಒಂದು ಪುಸ್ತಕ ಬಾರಿ ಸದ್ದು ಮಾಡುತ್ತಿತ್ತು.. ನನಗೆ ಯಾಕೋ ಆ ನಿಶ್ಯಬ್ಧದ ಹೊತ್ತಿನಲ್ಲಿ ಈ ಸದ್ದು ಹಿಂಸೆ ಮಾಡುತ್ತಿದೆ ಅನ್ನಿಸಿತು.. ಕಪಾಟಿನ ಹತ್ತಿರ ಹೋದೆ.. ಕಿವಿಯಾನಿಸಿ ಕೇಳಿದೆ.. ಯಾವ ಕಡೆಯಿಂದ ಸದ್ದು ಬರುತ್ತಿದೆ ಎಂದು ಸೂಕ್ಷ್ಮವಾಗಿ ಗಮನಿಸಿದಾಗ ಗೊತ್ತಾಯಿತು..

ಮೆಲ್ಲಗೆ ಆ ಪುಸ್ತಕವನ್ನು ಕೈಗೆತ್ತಿಕೊಂಡೆ.. ಒಂದೊಂದೇ ಪುಟ ತೆಗೆಯುತ್ತಾ ಹೋದೆ.. ೨೦೧೮ನೇ ಪುಟದ ೧೦ನೇ ಸಾಲಿನ ೨೪ನೇ ಪದದಲ್ಲಿ ಒಂದು ಆಕೃತಿ ಹೊರ ಬರಲು ಸಾಹಸ ಮಾಡುತ್ತಿತ್ತು.. ಏನಪ್ಪಾ ಇದು ಎಂದು ಅಚ್ಚರಿಯಾಗಿ ಮೆಲ್ಲನೆ ಆ ೨೪ ನೇ ಪದವನ್ನು ಬಿಡಿಸಿ.. ಆ ಪದಗಳಿಗೆ ಸಿಕ್ಕಿಹಾಕಿಕೊಂಡ ಆ ಆಕೃತಿಯನ್ನು ಬಿಡಿಸಿ ಮೆಲ್ಲನೆ ಕೈಕೊಟ್ಟು ಪುಸ್ತಕದಿಂದ ಹೊರ ಬರಲು ಸಹಾಯ ಮಾಡಿದೆ..

ನೀಳ ಕಪ್ಪುಕೂದಲು.. ಸುಮಾರು ಐದುವರೆ ಅಡಿ ಎತ್ತರ.. ತುಸು ಶ್ವೇತ ವರ್ಣ ತುಸು ಶ್ಯಾಮಲಾ ವರ್ಣದ ತ್ವಚ್ಛೆ.. ನೋಡಿದೊಡನೆ ಆಹಾ ಎನಿಸುವ ದಟ್ಟ ಕಾಡಿಗೆಯ ಕಣ್ಣುಗಳು.. ತಿದ್ದಿ ತೀಡಿದಂಥಹ ನಾಸಿಕ.. ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕು ಎನಿಸುವ ಚೆಲುವೆ ಪುಸ್ತಕದಿಂದ ಒಂದೊಂದೇ ಹೆಜ್ಜೆ ಇಡುತ್ತಾ ಹೊರಬಂದಳು..

"ಶ್ರೀ.. ಹೇಗಿದ್ದೀಯಾ . "

"ನಮಸ್ಕಾರ.. ನಾ ಆರಾಮು ನೀವು"

"ಏನ್ ಶ್ರೀ ಇದು ನೀವು ತಾವು ಅಂತೆಲ್ಲ.. ನೀನು ನನ್ನ ಸೃಷ್ಟಿ ಮಾಡಿದವ.. ನಾ ನಿನ್ನ ಅಭಿಮಾನಿ.. ಗೌರವ ಮನದಲ್ಲಿ ಇದೆ ಅಷ್ಟು ಸಾಕು.. "

"ಸರಿ.. ಈಗ ನೀ ಬಂದ ಕಾರಣ ಹೇಳು?"

"ಒಂದು ಕೇಸ್ ಸಿಕ್ಕಿದೆ.. ಅದನ್ನು ಪತ್ತೆ ಮಾಡಬೇಕಿತ್ತು.. ಅದಕ್ಕೆ ಪುಸ್ತಕದಿಂದ ಹೊರಬರಲು ಒದ್ದಾಡುತ್ತಿದ್ದೆ.. ನೀ ಬಂದೆ.. ನನ್ನ ಹೊರಬಿಟ್ಟೆ.. ಈಗ ಆ ಕೇಸು ಬಹಳ ಮುಖ್ಯ.. ಅದಕ್ಕೆ ನಾ ಹೊರಟೆ.. ನೀ ಇಲ್ಲೇ ಇರು.. ಆದಷ್ಟು ಬೇಗ ಬರುವೆ.. ಎಲ್ಲಿಗೂ ಹೋಗಬೇಡ"

"ಸರಿ ಕಣೋ  .. ಹೋಗಿ ಬಾ" ನಾ ಇಲ್ಲೇ ಕಾಯುತ್ತಿರುವೆ.. ಕಪಾಟಿನ ಹತ್ತಿರ..

                                                                    *****
ಕೇಸಿನ ಜಾಡು ಹಿಡಿದು ಹೊರಟಳು ಪುಸ್ತಕದಿಂದ ಹೊರಬಂದ ನಾಯಕಿ.. ದಾರಿಯುದ್ದಕ್ಕೂ ಅಮೋಘ ಪೇಂಟಿಂಗ್ ಗಳು ಸಾಲಾಗಿ ಜೋಡಿಸಿದ್ದವು.. ಒಂದು ಗಹನವಾದ ಕೇಸಿನ ಯೋಚನೆಯಲ್ಲಿ ಹೆಜ್ಜೆ ಇಟ್ಟವಳಿಗೆ ದಾರಿಯಲ್ಲಿ ಕಾಣುತಿದ್ದ ದೃಶ್ಯಗಳು ಅವಳ ಯೋಚನಾ ಲಹರಿಯನ್ನು ತಪ್ಪಿಸಲು ಸೋಲುತ್ತಿದ್ದವು..


ತನ್ನ ಮೊಬೈಲಿನಲ್ಲಿ ಇದ್ದ ನಕ್ಷೆ ನೋಡುತ್ತಾ ಸರಿಯಾದ ಜಾಡಿನಲ್ಲಿ ಹೋಗುತ್ತಿದ್ದೇನೆ ಎಂದು ಖಚಿತ ಪಡಿಸಿಕೊಂಡಳು.. ಅದ್ಭುತವಾದ ಚಿತ್ರಗಳು.. ಮರಗಳಿಗೆ.. ಮನೆಗಳಿಗೆ ನೇತು ಹಾಕಿದ್ದರು .. ಒಂದಕ್ಕಿಂತ  ಒಂದು ಅದ್ಭುತ ಚಿತ್ರಗಳು..





ಹಾರುತಿದ್ದ ಕೂದಲನ್ನು ಕಿವಿಯ ಹಿಂದೆ ಸರಿಸಿಕೊಂಡು.. ಕಣ್ಣಿಗೆ ಏರಿಸಿದ್ದ ಕೂಲಿಂಗ್ ಕನ್ನಡಕ ಮತ್ತೆ ಸರಿ ಪಡಿಸಿಕೊಂಡು ಮುಂದಕ್ಕೆ ಹೆಜ್ಜೆ ಇಟ್ಟಳು..

ಮಕ್ಕಳ ಚಿತ್ರಗಳು, ನೃತ್ಯಗಾರ್ತಿಯ ಚಿತ್ರಗಳು..ಮುದ್ದು ಮುದ್ದು ತಾಯಂದಿರ ಫೋಟೋಗಳು.. ಒಂದೇ ಎರಡೇ.. ಎಲ್ಲವೂ ಸೊಗಸು..

ಹಾಕಿಕೊಂಡಿದ್ದ ಜಾಕೆಟ್ ತೆಗೆದು ತನ್ನ ಹೆಗಲ ಮೇಲೇರಿಸಿಕೊಂಡು.. ಜೇಬಿನಲ್ಲಿದ್ದ ಬಬಲ್ ಗಮ್ ರಜನಿ ಸ್ಟೈಲ್ ನಲ್ಲಿ ಬಾಯಿಗೆ ಹಾಕಿಕೊಂಡು ಜಗಿಯುತ್ತಾ ಹೋದಳು..

ಇಲ್ಲಿ ಆತ್ಮದ ಗೆಳೆಯರು ಸಿಗುತ್ತಾರೆ.. ಎಂಬ ಫಲಕ ಓದಿ ಕುತೂಹಲದಿಂದ ಹೆಜ್ಜೆ ಹಾಕಿದಳು..

ಟ್ರಿಂಗ್ ಟ್ರಿಂಗ್ .. ಕರೆ ಘಂಟೆ ಸದ್ದು ಮಾಡಿತು.. ಮೆಲ್ಲಗೆ ಬಾಗಿಲು ತೆಗೆಯಿತು.. ಒಳಗೆ ನೋಡಿದರೆ ಜನವೋ ಜನ ಅಂದು ಕೊಂಡರೆ ಊಹುಂ soul friends ಅಂದರೆ ಸಾವಿರಾರು ಇರುತ್ತಾರೆಯೇ.. ಇಲ್ಲವೇ ಇಲ್ಲ.. ಇದ್ದವರು ಕೆಲವೇ ಕೆಲವರು.. ಎಲ್ಲರ ಮೊಗವನ್ನು ನೋಡುತ್ತಾ.. ಹಾಕಿದ್ದ ಹೈ ಹೀಲ್ಡ್ಸ್ ಸ್ಲಿಪ್ಪರ್ ತೆಗೆದು ಒಳಗೆ ಹೆಜ್ಜೆ ಇಟ್ಟಳು..

ಏನಪ್ಪಾ ಈ ಸಂಭ್ರಮ ಎಂದು ಹಾಗೆ ಕಣ್ಣರಳಿಸಿ ನೋಡಿದಳು.. ಅಲ್ಲೊಂದು ಸ್ವಾಗತ ಫಲಕ ಕಾಣಿಸಿತು.. 


ನಿವ್ಸೀ ಅಂದ್ರೆ.... hmmm

ನೇರಳೆ ಬಣ್ಣದ 
ರೈನ್ ಕೋಟ್ ಹುಡುಗಿ....

ಅವಳದೇ ಲೋಕ
ಬಣ್ಣಗಳ ಪಾಕ....

ಬೆರಗು ಮೂಡಿಸಿ
ಕಂಗೊಳಿಸುವ ಕಲೆ....

ಮಾತು ಮೀರಿಸುವ
ಪ್ರೀತಿಯ ಸಂಕೋಲೆ....

ಜೀವ ತುಂಬಿಸೆ 
ಒಳಗಣ್ಣಿನ ಕ್ಯಾಮೆರಾ....

ಆಗಾಗ ಶಾಯರೀ 
ಘಜಲ್ಗಳ ಸಾಹಸ....

ರಂಗುರಂಗು ಇವಳ ಲೋಕ
ನಿವ್ಸೀ ಮುದ್ದ್ಮುದ್ದು ಆಗಾಗ....

Happie Bdday Nivsy
Stay Blessed N Colorful 
May your world of Colors
Brighten every moment of your Life
Lovs n hugs,

                                          Roopa..............! 

ಅದನ್ನು ನೋಡಿದವಳೇ.. ಕನ್ನಡಕ ತೆಗೆದು ಜಾಕೆಟ್ ತುದಿಗೆ ಸಿಕ್ಕಿಸಿಕೊಂಡು .."ಇಲ್ಲಿ ನಿವೇದಿತಾ ಅಂದ್ರೆ ಯಾರು ಮುಂದೆ ಬನ್ನಿ" ಬೇಗ ಬನ್ನಿ.. ನಾ ಕೇಸನ್ನು ಬೇಗ ಮುಗಿಸಬೇಕು"

ಯಾರೂ ತುಟಿ ಪಿಟಿಕ್ ಅನ್ನಲಿಲ್ಲ.. .. 
"ನೋಡ್ರಿ ಸಿಬಿ.. ಬೇಗ ಬನ್ನಿ.. ನನಗೆ ಹೆಚ್ಚುಹೊತ್ತಿಲ್ಲ .. ಶ್ರೀ ಅಲ್ಲಿ ಕಾಯ್ತಾ ಇದ್ದಾನೆ .ನಾ ಬೇಗ ಹೋಗಬೇಕು.. ಬೇಗ ಬನ್ನಿ.. "

ಸದ್ದಿಲ್ಲ .. ಎಲ್ಲರೂ ಎಲ್ಲರನ್ನು ನೋಡುತ್ತಿದ್ದರು ..

"nivsi" ಬೇಗ ಬಾರಮ್ಮ.ಪುರುಸೊತ್ತಿಲ್ಲ .. ನನ್ನ ಗಡಿಯಾರ ಆಗಲೇ ಮುಂದಕ್ಕೆ ಓಡುತ್ತಿದೆ.. ತುಂಬಾ ಕೆಲ್ಸಗಳು ಇವೆ.. "

ಇಲ್ಲ.. ಎಲ್ಲರೂ ಸುಮ್ಮನಿದ್ದರೆ ಹೊರತು ಯಾರು ನಿವೇದಿತಾ, ಯಾರು ಸಿಬಿ.. ಯಾರು nivsi ಅಂತ ಯಾರಿಗೂ ಗೊತ್ತಾಗಲಿಲ್ಲ .

ನೋಡ್ರಿ.. ನನಗೆ ಇವತ್ತು ನಾಮಕರಣ ಮಾಡ್ತೀನಿ ಅಂತ ಹೇಳಿದ್ರು .. .ಅದಕ್ಕೆ ನಿಮ್ಮನ್ನು ಹುಡುಕಿಕೊಂಡು ಬಂದಿರೋದು ..ಬನ್ನಿಪಾ ದಯವಿಟ್ಟು.. ಹೆಸರಿಲ್ಲದೆ ಈ ಜಗತ್ತಿನಲ್ಲಿ ಇರೋಕೆ ಆಗೋಲ್ಲ ..

ಹಿಂದಿನಿಂದ ಬೌ ಎನ್ನುತ್ತಾ ಸದ್ದು ಮಾಡಿ.. ಹೊರಬಂದರು.. ನಗುವಿನ ಒಡತಿ.. ಅವಳ ಕೈಯನ್ನು ಹಿಡಿದು.. ಅವಳ ಕೈಯಿಂದಲೇ ಒಂದು ದಾರವನ್ನು ಎಳೆಸಿದರು... ಫಲಕ ನೋಡಿ ಖುಷಿಯಾಯಿತು ..

ಜೇನು ದನಿಯೊಂದು ಮಾತಾಡಿತು . "ಇಂದಿನಿಂದ ನಿಮ್ಮ ಹೆಸರು ಮೃಣಾಲಿನಿ.. ಶ್ರೀ ಬರೆಯುವ ಸಾಹಸ/ಪತ್ತೇದಾರಿ/ಕುತೂಹಲಕಾರಿ ಕತೆಗಳನ್ನು ಭೇದಿಸಿ ನುಗ್ಗುವ ನಾಯಕಿ ನೀವೇ.. ಇವತ್ತಿಂದ ನಿಮ್ಮ ನಾಮಕರಣವಾಗಿದೆ.. ಶುಭವಾಗಲಿ ಎಂದು .. ಅವಳ ಕಿವಿಯಲ್ಲಿ "ಮೃಣಾಲಿನಿ.. ಮೃಣಾಲಿನಿ.. ಮೃಣಾಲಿನಿ" ಎಂದು ಮೂರು ಬಾರಿ ಹೇಳಿದರು ..

ನಿವೇದಿತಾ ಅಕ್ಕ.. ನಿಮಗೆ ಧನ್ಯವಾದಗಳು ಅದ್ಭುತ ಹೆಸರು ಕೊಟ್ಟಿದ್ದೀರಾ... ಅದಕ್ಕೆ ಧನ್ಯವಾದಗಳು.. ನಿಮ್ಮ ಇಬ್ಬರು ಅದ್ಭುತ ಸ್ನೇಹಿತರು.. ನಾ ಬರುವ ದಾರಿಯುದ್ದಕ್ಕೂ ನಿಮ್ಮ ಕೈಗಳಿಂದ, ಕಣ್ಣುಗಳಿಂದ ಅರಳಿದ ಕಲಾಕೃತಿಗಳನ್ನು ನಿಲ್ಲಿಸಿದ್ದರು.. ಆದರೆ ನಿಮಗೆ ಜನುಮದಿನದ ಶುಭಾಶಯ ಕೋರುವುದಕ್ಕಾಗಿ ಅಲ್ಲಿ ನಿಲ್ಲದೆ ಬೇಗ ಬೇಗ ಬಂದೆ.. ನನಗೆ ಹೆಸರು ಬೇಕಿತ್ತು.. ನಿಮಗೆ ಶುಭ ಹಾರೈಸಬೇಕಿತ್ತು.. ಜನುಮದಿನದ ಶುಭಾಶಯಗಳು ನಿವೇದಿತಾ ಚಿರಂತನ್ ... ಅಲಿಯಾಸ್ ನಿವಿ.. ಅಲಿಯಾಸ್ ನಿವ್ಸ್ ಅಲಿಯಾಸ್ ಸಿಬಿ..

"ಮೃಣಾಲಿನಿ  .. ನನಗೆ ಇಷ್ಟವಾದ ಹೆಸರಿದು.. ಹಾಯ್  ಸೋಲ್ ಫ್ರೆಂಡ್ಸ್ .. ನಿಮಗೆ ಹೇಗೆ ಧನ್ಯವಾದಗಳು ಹೇಳಿದರೂ ಕಡಿಮೆ.. ಧನ್ಯವಾದಗಳು ರೂಪಕ್ಕ.. ಧನ್ಯವಾದಗಳು ಶ್ರೀ.. ಧನ್ಯವಾದಗಳು ಮೃಣಾಲಿನಿ.. !!!

                                                                             *****
ಶ್ರೀ ಕಾಯುತಿದ್ದ .. ಸಂತಸದಿಂದ ನಲಿಯುತ್ತಾ ಬಂದ ಮೃಣಾಲಿನಿ ಪುಸ್ತಕದೊಳಗೆ ನಗುತ್ತಾ ಹೋಗಿ ಪುಸ್ತಕದೊಳಗೆ ಪದವಾದಳು ಮುಂದಿನ ಕೇಸಿನ ಬಗ್ಗೆ ಯೋಚಿಸುತ್ತಾ ಆಹಾ ಎಂಥಹ ದಿನ ನನಗೆ ನಾಮಕರಣವಾಗಿದೆ.. ಧನ್ಯವಾದಗಳು ನಿವೇದಿತಾ ಅಕ್ಕಾ.. ಎನ್ನುತ್ತಾ ಪುಸ್ತಕದಲ್ಲಿ ಕಥೆಯಾದಳು.. ಮುಂದೆ ಬರಲಿದೆ "ಮೃಣಾಲಿನಿ ಕಥಾಲೋಕ"   .    

(ಮೇಲೆ ಕಾಣಿಸಿದ ಚಿತ್ರಗಳು ನಿವೇದಿತಾ ಚಿರಂತನ್ ಅವರ ಅದ್ಭುತ ಕಲಾಕೃತಿಗಳಲ್ಲಿ ಕೆಲವು ಮಾತ್ರ.. ಕಲಾವಿದೆ, ಚಿತ್ರಗಾರ್ತಿ, ಅದ್ಭುತ ಛಾಯಾಗ್ರಾಹಕಿ, ಕತೆಗಾರ್ತಿ, ಅದ್ಭುತ ಮಾತುಗಾರ್ತಿ.. ಎಲ್ಲಕ್ಕಿಂತ ಮಿಗಿಲಾಗಿ ನಮ್ಮಯ ಅದ್ಭುತ ಆತ್ಮದ ಗೆಳತೀ.. )

"DFR ಮತ್ತು ನನ್ನ ಕಡೆಯಿಂದ ಜನುಮದಿನದ ಶುಭಾಶಯಗಳು ಸಿಬಿ" 

Wednesday, September 12, 2018

ನಾನು ನನ್ನ ಪರ್ಪಲ್ ರೈನ್ ಕೋಟ್... !

​"ಆ ಕಣಿವೆಯ ತುದಿಯಲ್ಲಿದ್ದಾನಂತೆ ಜಾದೂಗಾರ
ನೊಂದ ಹೃದಯಕೆ ಮುಲಾಮು ಹಚ್ಚುವ ಕನಸುಗಾರ
ಕನಸಿನಾ ಮೊಗ್ಗಲು ಮಗಚುವಾಗ ನೆನಪಾದ ಅವನಂದು
ಹೆಜ್ಜೆ ಮೇಲೆ ಹೆಜ್ಜೆಯಿಟ್ಟು ಹುಡುಕಿ ಹೊರಟೆವು ನಾವಿಂದು
ನಾನು ನನ್ನ ಪರ್ಪಲ್ ರೈನ್ ಕೋಟ್"

ಕೈಯಲ್ಲಿದ್ದ ಆ ಚೀಟಿಯನ್ನು ಮತ್ತೊಮೆ ಓದಿಕೊಂಡಳು ಅರ್ಪಿತಾ.. ಕುಳಿರ್ಗಾಳಿ.. ಕತ್ತಿಗೆ ಸುತ್ತಿದ್ದ ಮಫ್ಲರ್ ಚಳಿಯನ್ನು ಸ್ವಲ್ಪ ಮಟ್ಟಿಗೆ ಕಮ್ಮಿ ಮಾಡಿತ್ತಾದರೂ ಆ ಪರ್ವತದ ತಪ್ಪಲಿನ ನಿತ್ಯ ಹರಿದ್ವರ್ಣ ಕಾಡಿನ ಆ ಪುಟ್ಟ ಹಳ್ಳಿಯಲ್ಲಿ ಚಳಿ ಅಂದರೆ ಮೈಮೂಳೆಯನ್ನು ಕೊರೆಯುವಷ್ಟು ..

ಬೆಳಿಗ್ಗೆ ಹತ್ತು ಘಂಟೆಯಾಗಿದ್ದರೂ ದಿನಕರ ಇವತ್ತು ರಜಾ ಎನ್ನುವಂತೆ ಇಣುಕಿಯೇ ಇರಲಿಲ್ಲ.. ಇಡೀ ರಾತ್ರಿ ಸುರಿದ ಮಳೆಯಿಂದ ಮಣ್ಣಿನ ವಾಸನೆ ಘಮ್ ಎನ್ನುತ್ತಿತ್ತು... ಮರಗಿಡಗಳ ಎಲೆಗಳ ತುದಿಯಿಂದ ಬೀಳುತ್ತಿದ್ದ ಹನಿಗಳು ಸುಂದರವಾಗಿ ಕಾಣುತ್ತಿದ್ದವು ಜೊತೆಯಲ್ಲಿ ಒದ್ದೆಯಾದ ಎಲೆಗಳ ಭಾರವಾಗಿ ಬೀಳುವಾಗ ಮೂಡಿಸುತ್ತಿದ್ದ ಸದ್ದು ಕಿವಿಗೆ ಆಪ್ತವಾಗಿರುತ್ತಿತ್ತು..
ಚಿತ್ರ ಕೃಪೆ : ಗೂಗಲೇಶ್ವರ 

ಅರ್ಪಿತಾ ಕೈಯಲ್ಲಿದ್ದ ವಾಚ್ ನೋಡಿಕೊಂಡಳು ಹತ್ತೂವರೆಯಾಗಿತ್ತು.. ಸಮಯ ಕಳೆಯಲು ಕೈಯಲ್ಲಿದ್ದ ಕ್ಯಾಮೆರಾ ಹಿಡಿದು ಆ ನೀರಿನ ಬಿಂದುಗಳನ್ನು ಸೆರೆಹಿಡಿಯತೊಡಗಿದಳು ..ಫೋಟೋಗ್ರಫಿ ಅಂದರೆ ಹುಚ್ಚು.. ಎಂಥಹ ಪರಿಸ್ಥಿತಿಯಲ್ಲಿಯೂ ಕೈಗೆ ಕ್ಯಾಮೆರಾ ಕೊಟ್ಟರೆ ಸಾಕು.. ಜಾದೂ ಮಾಡಿಸುತ್ತಿದ್ದಳು ಅವಳು.. ಸುತ್ತಮುತ್ತಲಿನ ಪರಿಸರ ಅವಳಿಗೆ ಹುಚ್ಚೇ ಹಿಡಿಸುತ್ತಿತ್ತು.. ತನ್ನ ಮನು ಬರುವುದು ಇನ್ನೂ ಸ್ವಲ್ಪ ತಡವಾಗುತ್ತೆ ಎನ್ನುವ ವಾಟ್ಸಾಪ್ ಸಂದೇಶ ಕೊಂಚ ಬೇಸರ  ತಂದಿದ್ದರೂ.. ಕೈಯಲ್ಲಿದ್ದ ಕ್ಯಾಮೆರಾ ಅವಳಿಗೆ ಬೋರ್ ಆಗುವುದನ್ನು ತಡೆದಿತ್ತು.. ಮ್ಯಾಕ್ರೋ, ಮೈಕ್ರೋ ಎಲ್ಲವೂ ಮುಗಿದಿತ್ತು ..ಆಗಲೇ ೮ ಜಿಬಿ ಕಾರ್ಡ್ ತಿಂದಾಗಿತ್ತು ಆ ಫೋಟೋಗಳು..
ಚಿತ್ರಕೃಪೆ : ಗೂಗಲೇಶ್ವರ 
ಊರಿನಲ್ಲಿ ಚಿರಪರಿಚಿತರಾಗಿದ್ದರಿಂದ ಮತ್ತು ಎಲ್ಲರ ಕಣ್ಣಿನ ಬೊಂಬೆಯಾಗಿದ್ದರಿಂದ ಅರ್ಪಿತಾಳಿಗೆ ಪರಿಚಿತರು ನಕ್ಕು ನಮಸ್ಕಾರ ಹೊಡೆಯುವುದು. .ಹಾಯ್ ಎನ್ನುವುದು ನೆಡೆದಿತ್ತು.. ಇವಳ ಬುದ್ದಿಮತ್ತೆ ಮತ್ತು ಕಲಾವಿದ ಹೃದಯಕ್ಕೆ ಮಾರು ಹೋಗಿದ್ದ ಅವಳ ಊರಿನ ಜನ.. ಅವಳಿಗೆ ಕಲಾ ಸರಸ್ವತಿ ಎಂದು ಬಿರುದನ್ನೂ ಅನಧಿಕೃತವಾಗಿ ಕೊಟ್ಟಿದ್ದರು.

ಫೇಮ್ ಫೇಮ್.. ಬುಲೆಟ್ ಬೈಕಿನ ವಿಚಿತ್ರ ಹಾರ್ನ್ ಮತ್ತು ಆ ಸದ್ದಿಗೆ ಮತ್ತೆ ರಸ್ತೆಗೆ ಬಂದು ನಿಂತಿದ್ದಳು ಅರ್ಪಿತಾ.. ಮನು ಇವಳಿಗೆ ಇಷ್ಟವಾದ  ಬಿಸ್ಕತ್ ಬಣ್ಣದ ಟೀ ಶರ್ಟ್ ಮತ್ತು ಕಡು ನೀಲಿ ಬಣ್ಣದ ಜೀನ್ಸ್ ತೊಟ್ಟಿದ್ದ .. ಮತ್ತೆ ಕಂದು ಬಣ್ಣದ ಕನ್ನಡಕದಲ್ಲಿ ಸೊಗಸಾಗಿ ಕಾಣುತ್ತಿದ್ದ.. ಬಂದವನೇ ಒಂದು ಹಗ್ ಕೊಟ್ಟು.. ಕಮಾನ್ ಅಂದ.. ಹುಸಿಮುನಿಸು ತೋರುತ್ತ ಅವನ ಹೆಲ್ಮೆಟ್ ಹಾಕಿದ ತಲೆಗೆ ಒಂದು ಪಟ್ ಅಂತ ಏಟು ಕೊಟ್ಟು.. ಬೈಕ್ ಏರಿದಳು..

"ಸರಿಯಾಗಿ ಗೊತ್ತು ತಾನೇ.. ಸುಮ್ಮನೆ ಅಲೆಸಬೇಡ"

"ಗೊತ್ತು ಕಣೋ... ನಾ ಸ್ಕೆಚ್ ಹಾಕಿದ್ದೀನಿ ಅಂದರೆ ಅದು ಪಕ್ಕಾ ಇರುತ್ತೆ.. ತಲೆ ಕೆಡಿಸಿಕೊಳ್ಳಬೇಡ.. ಹೊಡಿ ಗಾಡಿ"

ಮನು ಮತ್ತು ಅರ್ಪಿತಾ ಬಾಲ್ಯದ ದಿನಗಳಿಂದ ಒಡನಾಟವಿದ್ದವರು.. ಇಬ್ಬರಿಗೂ ಸಮಾನ ಅಭಿರುಚಿ ಇತ್ತು... ಊಟ ತಿಂಡಿ... ಉಡುಗೆ ತೊಡುಗೆ.. ಛಾಯಾಗ್ರಹಣ.. ಟ್ರೆಕಿಂಗ್. ಪ್ರವಾಸ ಯಾವುದು ಹೆಚ್ಚಿರಲಿಲ್ಲ ಕಡಿಮೆ ಇರಲಿಲ್ಲ.. ಅಕ್ಕಸಾಲಿಗನ ತಕ್ಕಡಿಯಲ್ಲಿ ಏರುಪೇರಾಗುತ್ತಿತ್ತೇನೋ ಆದರೆ ಇವರ ಅಭಿರುಚಿಗಳಲ್ಲಿ ಒಂದಷ್ಟು ವ್ಯತ್ಯಾಸವಿರಲಿಲ್ಲ..

ಮನೆಯವರಿಗೂ ಇವರಿಬ್ಬರ ಬಗ್ಗೆ ಗೊತ್ತಿದ್ದರಿಂದ.. ಇವರ ಸ್ವಾತಂತ್ರ್ಯಕ್ಕೆ ಅಡ್ಡಿ ಇರಲಿಲ್ಲ.. ಇಬ್ಬರೂ ತಮ್ಮ ತಮ್ಮ ಇತಿಮಿತಿಗಳಲ್ಲಿ ಜೊತೆಯಾಗಿದ್ದರು..

ಒಮ್ಮೆ ಹೀಗೆ ಮಳೆಯಲ್ಲಿ ಫೋಟೋ ತೆಗೆಯಲು ಇಬ್ಬರೂ ಹೋಗಿದ್ದರು.. ಬರುವಾಗ ಒಂದು ತಿರುವಿನ ಬಳಿ ಮಳೆ ನಿಲ್ಲಲು ಕಾಯುತ್ತಾ ನಿಂತಿದ್ದರು.. ಹೊಟ್ಟೆ ಹಸಿಯುತ್ತಿತ್ತು.. ಬೋಂಡಾದ ಪರಿಮಳ ಕೈಬೀಸಿ ಕರೆದು.. ಇನ್ನಷ್ಟು ಹಸಿವನ್ನು ಹೆಚ್ಚು ಮಾಡಿತ್ತು.. ಅಂಗಡಿಯವ ಮಾಡಿದ್ದ ಬಿಸಿ ಬಿಸಿ ಆಲೂ ಬೋಂಡಾ. ಮೆಣಸಿನಕಾಯಿ ಬೋಂಡಾ.. ಆಂಬೊಡೆ ಎಲ್ಲವನ್ನು ಇಬ್ಬರೂ ಸರಿಯಾಗಿ ಮೇಯುತ್ತಿದ್ದರು.. ಅಲ್ಲಿಂದ ಇನ್ನೂ ೨೦ ಕಿಮಿ ಸಾಗಿ ಗುಡ್ಡದ ಮೇಲಿಂದ ಫೋಟೋ ತೆಗೆಯುವ ಕಾರ್ಯಕ್ರಮ ಇದ್ದದರಿಂದ ಮತ್ತು ಮತ್ತೆ ಹೊಟ್ಟೆಗೆ ಕಾಡಬಾರದು ಎಂದು.. ಒಂದಷ್ಟು ಬೋಂಡಗಳನ್ನು ಕಟ್ಟಿಸಿಕೊಂಡು ಹೊರಟರು..

ಗುಡ್ಡ ತಲುಪಿ.. ಚಿತ್ರಗಳನ್ನು ತೆಗೆದು.. ಇಬ್ಬರೂ ತಮ್ಮ ತಮ್ಮ ಕ್ಯಾಮೆರಾಗಳಲ್ಲಿ ಒಮ್ಮೆ ನೋಡಿ.. "ಅರ್ಪಿ ಅದು ಹೀಗೆ ಇರಬೇಕಿತ್ತು ಕಣೆ.. ಮನು ಇಲ್ಲ ಕಣೋ.. ಈ ಆಂಗಲ್ ತುಂಬಾ ಚೆನ್ನಾಗಿದೆ.. ನಿನ್ನ ಕೈಚಳಕ ಸೂಪರ್ ಕಣೋ .. ಅರ್ಪಿ ವಾಹ್ ಎಷ್ಟು ಚೆನ್ನಾಗಿದೆಯೇ ಈ ಚಿತ್ರ .. ಸೂಪರ್ ಕಣೆ.. ನಿನ್ನ ಕಣ್ಣುಗಳು ಮಾತ್ರವಲ್ಲ ನೀ ಕಣ್ಣಿನ ಮೂಲಕ ನೋಡುವ ದೃಶ್ಯವೂ ಸೂಪರ್ ಆಗಿ ಕಾಣುತ್ತೆ..ಬೊಂಬಾಟ್ ಕಣೆ.. " ಹೀಗೆ ಒಬ್ಬರಿಗೊಬ್ಬರು ಶಭಾಷ್ ಗಿರಿ ಕೊಡುತ್ತಾ.. ಫೋಟೋಗಳನ್ನು ಆನಂದಿಸುತ್ತಿದ್ದರು.. ಆಗಲೇ ಸಂಜೆ ೪ ಆಗಿತ್ತು.. ಸೂರ್ಯ ಮುಳುಗುವ ಲಕ್ಷಣ ತೋರುತ್ತಿದ್ದ.. ಕಾರಣ ಚಳಿಗಾಲದ ಹೊತ್ತು. ಭಾಸ್ಕರ ಕೂಡ ಮನೆಗೆ ಬೇಗನೆ ಹೋಗಬೇಕಲ್ಲವೇ.. :-)..

"ಅರ್ಪಿ ಬೋಂಡಾ ತೆಗೆ.. ತಿನ್ನೋಣ.. ತಿಂದು ನೀರು ಕುಡಿದು ಹೊರಡೋಣ ಕಣೆ.. "

ಅಂಗಡಿಯವ ಕೊಟ್ಟಿದ್ದ ಬೋಂಡಾದ ಪೊಟ್ಟಣ ತೆಗೆದು ತಿನ್ನತೊಡಗಿದರು.. ಆ ಚಳಿಗೆ.. ಈ ಸ್ವಲ್ಪ ಬೆಚ್ಚಗಿನ ಖಾರವಾಗಿದ್ದ ಬೋಂಡಗಳು.. . ಚಳಿಯನ್ನು ದೂರವಿಟ್ಟಿತ್ತು.. ತಿನ್ನುತ್ತಾ ತಿನ್ನುತ್ತಾ ಅರ್ಪಿತಾ ಯಾಕೋ ಆ ಪೊಟ್ಟಣದ ಕಾಗದ ನೋಡಿದಳು ಅವಳ ಕಣ್ಣುಗಳು ಅರಳಿದವು..  ..ಓದುತ್ತಾ ಓದುತ್ತಾ ಹೋದ ಹಾಗೆ ಅವಳ ಪುಟ್ಟ ತಲೆಯೊಳಗೆ ರೈಲು  ಓಡತೊಡಗಿತು.. ಅವಳಿಗೆ ಸಂತಸ ತಡೆಯಲಾಗದೆ ಪಕ್ಕದಲ್ಲೇ ಇದ್ದ ಮನುವನ್ನು ಒಂದು ಮೈಲಿ ಕೇಳುವ ಹಾಗೆ..

"ಮನು .. ಇಲ್ಲಿ ಬಾರೋ  ... ನೋಡು ಇದು.. ಸೂಪರ್ ಆಗಿದೆ ಆಲ್ವಾ"
"ಒಯೆ ನಾ ಇಲ್ಲಿಯೇ ಇದ್ದೀನಿ ಅದ್ಯಾಕೆ ಹಂಗೆ ಕಿರುಚಿದೆ.. ಏನಿದೆ.. ?"
"ನೋಡು ನೋಡು.. " ಫುಲ್ ಖುಷಿಯಿಂದ ಆ ಬೋಂಡಾದ ಪೊಟ್ಟಣದ ಹಾಳೆಯನ್ನು ಕೊಟ್ಟಳು..

​"ಆ ಕಣಿವೆಯ ತುದಿಯಲ್ಲಿದ್ದಾನಂತೆ ಜಾದೂಗಾರ
ನೊಂದ ಹೃದಯಕೆ ಮುಲಾಮು ಹಚ್ಚುವ ಕನಸುಗಾರ
ಕನಸಿನಾ ಮೊಗ್ಗಲು ಮಗಚುವಾಗ ನೆನಪಾದ ಅವನಂದು
ಹೆಜ್ಜೆ ಮೇಲೆ ಹೆಜ್ಜೆಯಿಟ್ಟು ಹುಡುಕಿ ಹೊರಟೆವು ನಾವಿಂದು
ನಾನು ನನ್ನ ಪರ್ಪಲ್ ರೈನ್ ಕೋಟ್"

ತುಸು ಜೋರಾಗಿಯೇ ಆ ಕಾಗದದಲ್ಲಿದ್ದ ಬರಹವನ್ನು ಓದಿದ.. ಅವನಿಗೆ ಸಾಮಾನ್ಯ ಅನಿಸಿತು.. ಯಾವನೋ ಅಥವಾ ಯಾವಳೋ ಕಾಲೇಜು ಹುಡುಗ/ಹುಡುಗಿಗೆ ಗೀಚಿದ ಒಂದು ಪುಟ್ಟ ಕವಿತೆ ಅನ್ನಿಸುವ ಹಾಗಿತ್ತು .. ಇದರಲ್ಲಿ ಅಂತಹ ವಿಶೇಷತೆ ಅಥವಾ ಅರ್ಪಿತಾ ಕಿರುಚಿದ ಹಾಗೆ ಏನೋ ಇದೆ ಅನ್ನಿಸಲಿಲ್ಲ..

"ಅರ್ಪಿ ಇದು ಕವಿತೆ ಕಣೆ ಚೆನ್ನಾಗಿದೆ.. "

"ಮನು.. ಈ ಕವಿತೆಯನ್ನು ಬರೆದವನ ಹೆಸರು ನೋಡು.. ಬರೆದ ದಿನಾಂಕ ನೋಡು.. ಜೊತೆಯಲ್ಲಿ ಇವುಗಳನ್ನು ಸೇರಿಸಿಕೊಂಡು ಮತ್ತೆ ಓದು ಇನ್ನೊಮ್ಮೆ ಪ್ಲೀಸ್.. "

ಇವಳ ಕಾಟ ತಡೆಯಲಾಗದೆ ಮತ್ತೆ ಅವಳು ಹೇಳಿದ ಹಾಗೆ ಓಡತೊಡಗಿದ.. ಮತ್ತೆ ಮತ್ತೆ ಓದಿದ.. ಕಣ್ಣುಗಳು ಅರಳಲು ಶುರುವಾಯಿತು.. "ಅರ್ಪಿ.. ಹೌದು ಕಣೆ.. ಏನೋ ಇದೆ ಇದರಲ್ಲಿ.. "

ಮತ್ತೆ ಮತ್ತೆ ಆ ಕವಿತೆಯನ್ನು ಜೋರಾಗಿ ಓದಿದ.. ಸುತ್ತಲೂ ಯಾರೂ ಇಲ್ಲದ್ದರಿಂದ.. ಏನೂ ತೊಂದರೆ ಇರಲಿಲ್ಲ.. ತುಸು ಜೋರಾಗಿಯೇ..

​"ಆ ಕಣಿವೆಯ ತುದಿಯಲ್ಲಿದ್ದಾನಂತೆ ಜಾದೂಗಾರ
ನೊಂದ ಹೃದಯಕೆ ಮುಲಾಮು ಹಚ್ಚುವ ಕನಸುಗಾರ
ಕನಸಿನಾ ಮೊಗ್ಗಲು ಮಗಚುವಾಗ ನೆನಪಾದ ಅವನಂದು
ಹೆಜ್ಜೆ ಮೇಲೆ ಹೆಜ್ಜೆಯಿಟ್ಟು ಹುಡುಕಿ ಹೊರಟೆವು ನಾವಿಂದು
ನಾನು ನನ್ನ ಪರ್ಪಲ್ ರೈನ್ ಕೋಟ್"

ಅರ್ಪಿತಾಳನ್ನು ಒಮ್ಮೆ ಆಲಂಗಿಸಿ.. "ಸರಿ ನೆಡೆ ಹೋಗೋಣ.. ಆಗಲೇ ಹೊತ್ತಾಗುತ್ತಿದೆ.. "

ಆ ಕಾಗದವನ್ನು ಮಾಡಿಸಿ ತನ್ನ ಪ್ಯಾಂಟ್ ಜೀಬಿಗೆ ತುರುಕಲು ಹೊರಟವನನ್ನು ತಡೆದು.. "ಮನು.. ನಿನ್ನ ಜೇಬಿಗೆ ಹೋದರೆ ಅದರ ಪೋಸ್ಟ್ ಮಾರ್ಟಮ್ ಮಾಡೋಕೆ ಏನೂ ಇರಲ್ಲ.. ಕೊಡು ಇಲ್ಲಿ" ಎಂದು ಕೊಂಚ ಬಲವಂತವಾಗಿಯೇ ಕಸಿದುಕೊಂಡು.. ಜೋಪಾನವಾಗಿ ಮಡಚಿ ತನ್ನ ಪರ್ಸ್ ನಲ್ಲಿಟ್ಟು.. "ಮನು ಮುಂದಿನ ವಾರ ಇದೆ ಕೆಲಸ" ಅಂದವಳೇ ಕಣ್ಣು ಹೊಡೆದಳು.. 

ಮನುಗೆ ತಲೆ ಗಿರ್ ಅಂದಿತು.. "ಅರ್ಪಿ ಏನಾಯಿತು.. ಎಲ್ಲಿಗೆ ಹೋಗೋದು.. ಅದು ಬರಿ ಕವಿತೆ ಕಣೆ"

"ಮನು ನೀನೂ ಹೇಳಿದೆ ಏನೋ ಇದೆ ಇದರಲ್ಲಿ ಅಂತ.. ಹುಡುಕಿಯೇ ಬಿಡೋಣ.. ಒಂದು ವಾರದಲ್ಲಿ ಒಂದಷ್ಟು ಮಾಹಿತಿ ಸಂಗ್ರಹಿಸುತ್ತೇನೆ.. ಹೊರಟೆ ಬಿಡೋಣ.. ಓಕೆ .. ಥ್ಯಾಂಕ್ ಯು ಮನು ಮೈ ಲವ್" ಎನ್ನುತ್ತಾ ಹಗ್ ಕೊಟ್ಟಳು... 

ಮನುಗೆ ಮುಂದಿನ ವಾರದ ಬಗ್ಗೆ ಕೊಂಚವೂ ಕುತೂಹಲವಿರಲಿಲ್ಲ.. ಕವಿತೆ ಓದಿದ ಮೇಲೆ ಏನೋ ಇದೆ ಇದರಲ್ಲಿ ಅನ್ನೋದು ಗೊತ್ತಾಗಿತ್ತು.. ಆದ್ರೆ ಅದಕ್ಕಾಗಿ ದಿನವೆಲ್ಲ ವ್ಯಯ ಮಾಡೋದು ಇಷ್ಟವಿರಲಿಲ್ಲ.. ಆದರೆ ವಿಧಿಯಿಲ್ಲ ಅರ್ಪಿತಾ ಬಿಡೋಲ್ಲ ಅಂತ ಗೊತ್ತಿತ್ತು.. 

ಅರ್ಪಿತಾಳ ಬೊಗಸೆ ಕಂಗಳಲ್ಲಿ ಮುಂದಿನ ವಾರದ ಸಾಹಸ ಪರದೆಯ ಮೇಲಿನ ಸಿನೆಮಾದಂತೆ ಕಾಣ ತೊಡಗಿತ್ತು.. !!!

ಮುಂದುವರೆಯುತ್ತದೆ..... 


(ಬ್ಲಾಗ್ ಗೆಳತೀ ನಿವೇದಿತಾ ಚಿರಂತನ್  ಅವರ ಒಂದು ಪುಟ್ಟ ಕವಿತೆ  ಈ ಲೇಖನಕ್ಕೆ ಸ್ಫೂರ್ತಿ ನೀಡಿತು..  ಆರಂಭದಲ್ಲಿ ಕಾಣಿಸಿಕೊಳ್ಳುವ ಕವಿತೆಯ ಕತೃ ಇವರೇ.. ಈ ಲೇಖನ ಕೌತುಕತೆ ಹುಟ್ಟಿಸುವ ಅವರ ಕವಿತೆಗೆ ಮತ್ತು ಅವರ ಪ್ರತಿಭೆಗೆ "ಅರ್ಪಿತ"ವಾಗುತ್ತಿದೆ)



Sunday, July 8, 2018

ಮುಂಬೈ ದರ್ಶನ - ೨೦೧೫

ಶಾಲೆಯಲ್ಲಿ ರಾಸಾಯನಿಕ ಶಾಸ್ತ್ರದಲ್ಲಿ ಓದಿದ್ದು.. ಕೆಲವು ದ್ರವಗಳಿಗೆ ರುಚಿ, ಬಣ್ಣ, ವಾಸನೆ ಇರೋಲ್ಲ ಅಂತ..
ಅದೇ ಗುಂಗಿನಲ್ಲಿದ್ದ ನನಗೆ ಒಂದು ಪ್ರಶ್ನೆ ಹೊಳೆಯಿತು...

ನೆನಪುಗಳಿಗೆ ರುಚಿ, ಬಣ್ಣ, ವಾಸನೆ ಇರುತ್ತದೆಯೇ ಅಥವಾ ಇಲ್ಲವೇ..
ಅಶರೀರವಾಣಿ ಉಲಿಯಿತು..
ನೆನಪುಗಳಿಗೆ ರುಚಿ, ಬಣ್ಣ, ವಾಸನೆ ಇರುತ್ತದೆ.. ಆದರೆ ಅದು ಅರಿವಾಗೋದು ಅದರ ಪರಿಣಾಮದ ಮೇಲೆ..

**************************

ಆಫೀಸಿನಲ್ಲಿ ಸುಮ್ಮನೆ ಏನೂ ಮಾತಾಡುತ್ತಾ ಕೂತಿದ್ದಾಗ.. ಅರಿವಿಲ್ಲದೆ ಬಂದ ಪ್ಲಾನ್ ಮುಂಬೈ ದರ್ಶನ.. ನನ್ನ ಆಸೆ ಕಾರಿನಲ್ಲಿ ಹೋಗೋದು.. ಪುಣೆ ಮುಂಬೈ ಹೆದ್ದಾರಿಯಲ್ಲಿ ಕಾರು ಚಲಾಯಿಸಬೇಕೆಂಬ ಆಸೆ.. ಆದರೆ ಮಡದಿ ಮತ್ತು ಮಗಳಿಗೆ ವಿಮಾನಯಾನದ ಅನುಭವ ಕೊಡಿಸುವ ಯೋಗ ಸಿಕ್ಕಿತು.

ಬೆಳಿಗ್ಗೆ ಹಿತವಾದ ವಾತಾವರಣದಲ್ಲಿ ನನ್ನ ಪ್ರೀತಿಯ ರಿಟ್ಜ್ ಕಾರು ಹತ್ತಿ ಹೊರಟಾಗ ಎರಡು ದಿನಗಳ ಸುಂದರ ಅನುಭವ ಅಲ್ಲಿ ಕಾಯುತ್ತಿದೆ ಎನ್ನುವ ಒಂದು ಸುಳಿವು ಸಿಕ್ಕಿರಲಿಲ್ಲ..

ಮೊದಲ ಬಾರಿಗೆ ವಿಮಾನಯಾನ ಮಡದಿ ಮತ್ತು ಮಗಳು ಖುಷಿಯಾಗಿದ್ದರು.. ಒಂದೆರಡು ತಿಂಗಳ ಹಿಂದೆ ದೆಹಲಿಗೆ ನಾ ವಿಮಾನದಲ್ಲಿ ಹೋಗಿದ್ದರಿಂದ ನನ್ನ ಅನುಭವ ಅವರಿಗೆ ಹೇಳುತ್ತಾ ಅವರ ಖುಷಿಯನ್ನು ಹೆಚ್ಚಿಸಿದ್ದೆ..

ವಿಮಾನದ ತಿಂಡಿ ತಿನಿಸುಗಳು.. ಮೋಡದ ಮೇಲೆ ತೇಲುತ್ತಾ ಹೋಗುವ ಸಂತಸ.. ಸೊಗಸಾಗಿತ್ತು ಇಬ್ಬರಿಗೂ.. ಮುಂಬೈಯಲ್ಲಿ ಇಳಿದಾಗ ನನ್ನ ದೋಸ್ತ್ ಅಶೋಕ್ ಶೆಟ್ಟಿ ಕಾರನ್ನು ಕಳಿಸಿದ್ದರು... ಮುಂಬೈ ದರ್ಶನ ನನಗೆ ಇದು ಎರಡನೇ ಬಾರಿ. ಹಿಂದಿನ ಅನುಭವ ಹೇಳುತ್ತಾ.. ಅಂದಿನ ದಿನಕ್ಕೂ ಇಂದಿನ ದಿನಕ್ಕೂ ಬದಲಾದ ಬಗೆಯನ್ನು ಯೋಚಿಸುತ್ತಾ ಸಾಗಿದೆ..

ಕಾರಿನ ಚಾಲಕರು ಅಶೋಕ್ ಶೆಟ್ಟಿಯವರಿಗೆ ಸ್ನೇಹಿತರಾಗಿದ್ದರಿಂದ ಅವರು ಮುಂಬೈ ಕತೆಯನ್ನು ಹೇಳುತ್ತಿದ್ದರು.. ಸಿನಿಮಾ ನಟರು.. ಉದ್ಯೋಗ.. ಇಪ್ಪತ್ತು ಮೂವತ್ತು ವರ್ಷಗಳಲ್ಲಿ ಮುಂಬೈ ಬದಲಾದ ರೀತಿ.. ಸುಪ್ರಸಿದ್ಧ ಡಬ್ಬಾವಾಲಗಳು, ಲೋಕಲ್ ಟ್ರೈನುಗಳು.. ಹೀಗೆ ಸಾಗಿತ್ತು..
ಮುಂಬೈ ದರ್ಶನ ಮಾಡಿಸಿದ ಅಶೋಕ್ ಮತ್ತು ಅವರ ಗೆಳೆಯರು 

ನಿಗದಿ ಪಡಿಸಿದ್ದ ಹೋಟೆಲಿನ ಕೋಣೆಯಲ್ಲಿ ವಿಶ್ರಾಂತಿ ಪಡೆದು ಮುಂಬೈ ಪ್ರವಾಸಕ್ಕೆ ಹೊರಟೆವು..
ರಾಜ್ ಕಪೂರ್ ಅವರ ಅನೇಕ ಕನಸಿನ ತಾಣ 

ರಾಜ್ ಕಪೂರ್ ಅನೇಕ ಸಾಹಸಗಳಿಗೆ ಸಾಕ್ಷಿ ಈ ಸ್ಟುಡಿಯೋ 

ಸ್ನೇಹಲೋಕದ ಮುಕುಟ ಅಶೋಕ್ ಶೆಟ್ಟಿ 

ಶಿವಾಜಿ ಮಹಾರಾಜ್ 

ಅದ್ಭುತ ಚಿತ್ರಗಳನ್ನು ಸಿನಿ ಜಗತ್ತಿಗೆ ನೀಡಿದ ರಾಜಕಪೂರ್ ಅವರ ಸ್ಟುಡಿಯೋ, ಮಹಾಭಾರತವನ್ನು ದೂರದರ್ಶನಕ್ಕೆ ತಂಡ ಬಿ. ಆರ್. ಚೋಪ್ರಾ ಅವರ ಮನೆ.. ಬಿಗ್ ಬಿ, ರಾಜೇಶ್ ಖನ್ನಾ. ತೇಜಾಬ್ ಚಿತ್ರದಲ್ಲಿ ಪ್ರಮುಖವಾಗಿ ಕಾಣಿಸಿದ್ದ ಮನೆ... ಸಮುದ್ರ ತೀರಾ.. ಎಲ್ಲವೂ ಕಣ್ಣಿಗೆ ಕಟ್ಟುವಂತೆ ಕಂಡಿದ್ದರ ಕಾರಣ ಮೋಡತುಂಬಿದ ಆಗಸ, ತುಂತುರು ಮಳೆ.. ಹಿತವಾದ ತಿಂಡಿ ತಿನಿಸುಗಳು, ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನ, ಮಹಾಲಕ್ಷ್ಮಿ ದೇವಸ್ಥಾನ.. ಎಲ್ಲವೂ ಮನದೊಳಗೆ ಮತ್ತು ಕ್ಯಾಮರದೊಳಗೆ ಇಳಿಯಿತು.

ಮುಂಬೈಯಲ್ಲಿ ನನಗೆ ತುಂಬಾ ಇಷ್ಟವಾಗೋದು ಗೇಟ್ ವೆ ಆಫ್ ಇಂಡಿಯ.. ಉತ್ತಮ ವಿನ್ಯಾಸ.. ಕಡಲಿನ ಹಿನ್ನೋಟ.. ಬೀಸುವ ಗಾಳಿ.. .ಆ ಕಟ್ಟೆಯ ಮೇಲೆ ಕುಳಿತು ಆಗಸವನ್ನು ಮತ್ತು ಕಡಲನ್ನು ಕಾಣುವುದೇ ಒಂದು ಸೊಗಸು.

ಅಂದು ಸ್ವಾತಂತ್ರ ದಿನಾಚರಣೆ ಆಗಿತ್ತು.. ಹೋಟೆಲಿನವರು ಭಾರತದ ಬಾವುಟವನ್ನು ಹಾರಿಸಿ. ಸಿಹಿ ಹಂಚಿ ಆಚರಿಸಿದರು..

ಮಾರನೇ ದಿನ ಬೆಳಿಗ್ಗೆ ಅಶೋಕ್ ಅವರು ಒಂದು ಪಾರ್ಕಿಗೆ ಕರೆದುಕೊಂಡು ಹೋದರು..
ಸಂಗೀತ ವಾದ್ಯಗಳ ಮರುಸೃಷ್ಟಿ 

ಸಂಗೀತ ವಾದ್ಯಗಳ ಮರುಸೃಷ್ಟಿ 
 ಅದ್ಭುತವಾದ ಉದ್ಯಾನವನ ಇನ್ನೂ ಪೂರ್ಣವಾಗಿಲ್ಲವಾದರೂ ಅದರ ವಿನ್ಯಾಸ ಮತ್ತು ಸಂಗೀತದ ವಾದ್ಯಗಳನ್ನು ಮತ್ತು ಅದರ ಬಗ್ಗೆ ಮಾಹಿತಿಗಳು ಸೂಪರ್.. ಮಂಜಿನ ಹನಿ.. ಮಳೆಯಿಂದ ಮೈತೊಳೆದುಕೊಂಡು ಸಿದ್ಧವಾಗಿದ್ದ ಗಿಡಮರಗಳು.. ಮಡದಿ ಮಗಳು ಖುಷಿ ಪಟ್ಟರು.. ಅವರ ಖುಷಿ ನನಗೆ ಖುಷಿ..





ಮುಂಬೈಯಲ್ಲಿ ಕಾರು ಓಡಿಸಬೇಕು ಎನ್ನುವ ಅಸೆಯನ್ನು ನನಗರಿವಿಲ್ಲದಂತೆ ಅಶೋಕ್ ನೆರವೇರಿಸಿದರು.. ಅವರು ಹೊಸದಾಗಿ ಕೊಂಡಿದ್ದ ಕಾರನ್ನು ನನಗೆ ಕೊಟ್ಟು ಮುಂದಿನ ತಾಣಕ್ಕೆ ನಾನೇ ಡ್ರೈವಿಂಗ್ ಮಾಡುವಂತೆ ಮಾಡಿದರು.. ಮುಂಬೈ ಹೊರಭಾಗ.. ಟ್ರಾಫಿಕ್ ದಟ್ಟಣೆ ಅಷ್ಟೊಂದು ಇರಲಿಲ್ಲ..

ಅಲ್ಲಿಂದ ಹೊರಟಿದ್ದು ಇನ್ನೊಂದು ಸುಂದರ ತಾಣಕ್ಕೆ.. ಮುಂಬೈ ಪ್ರದೇಶದ ಹೊರಭಾಗದಲ್ಲಿರುವ ಒಂದು ಜಲಪಾತ.. ಜಲಪಾತದ ಬುಡದ ತನಕ ಹೋಗುವ ಸೌಕರ್ಯವಿದ್ದರೂ ಸುರಕ್ಷತೆಯ ನಿಯಮದಿಂದ ದೂರದಿಂದಲೇ ಅದರ ಸೌಂದರ್ಯವನ್ನು ಕ್ಯಾಮೆರಾದೊಳಗೆ ಇಳಿಸಿದೆ..

ಹೋಟೆಲ್ ಕೋಣೆ ಖಾಲಿ ಮಾಡಿ.. ಅಶೋಕ್ ಶೆಟ್ಟಿಯವರ ಮನೆಗೆ ಬಂದಾಗ ಬಿಸಿ ಬಿಸಿಯಾದ ರುಚಿ ರುಚಿಯಾದ ಊಟ ತಯಾರಾಗಿತ್ತು.. ಮಾತುಗಳು.. ಅಶೋಕ್ ಅವರ ಕುಟುಂಬದ ಜೊತೆ ಕಳೆದ ಕ್ಷಣಗಳು.. ಆ ಮಕ್ಕಳ ತುಂಟಾಟ ಹಾಸ್ಯ ಎಲ್ಲವೂ ಈ ಮುಂಬೈ ದರ್ಶನಕ್ಕೆ ಚೌಕಟ್ಟು ಒದಗಿಸಿತ್ತು.  ಮಳೆ ಜೋರಾಗಿಯೇ ಶುರುವಾಗಿತ್ತು.. ನಿಗದಿ ಪಡಿಸಿದ ಸಮಯಕ್ಕೆ ವಿಮಾನ ನಿಲ್ದಾಣಕ್ಕೆ ಬಂದು ನಿಂತಾಗ  ಮನಸ್ಸು ಹಕ್ಕಿಯಾಗಿತ್ತು..

ಸುಂದರ ಕುಟುಂಬದ ಜೊತೆಯಲ್ಲಿ 
ಕಂಡಿದ್ದು ಹಲವಾರು ಕನಸುಗಳು.. ಮೂಡಿಸಿದ್ದು ಹತ್ತಾರು ಯೋಜನೆಗಳು.. ಅದರಲ್ಲೊಂದು ವಿಮಾನಯಾನ...

ಈ ತೃಪ್ತಿ ಅನುಭವಿಸಿ ಮೆಲ್ಲನೆ ಜಗತ್ತಿನಿಂದ ಹೊರನೆಡೆದ ಸವಿತ ಭೌತಿಕವಾಗಿ ಆಗಲಿ ಇಂದಿಗೆ ಒಂದು ವರ್ಷ.. ನೆನಪು ಮಾಸದು.. ನೆನಪು ಅಳಿಯದು.. ನೆನಪು ಸದಾ ಸದಾ ಅನವರತ ಹೃದಯದಲ್ಲಿ.. ಅವಳ ನೆನಪಲ್ಲಿ ಈ ಮುಂಬೈ ದರ್ಶನ

ಜಗದ ಸಹವಾಸ ಸಾಕು ಶ್ರೀ ... ನಾ ಹೊರಟೆ 

Sunday, June 10, 2018

ಮೆಚ್ಚುವ or Matured!!! - ಮುಂದೇ

ಹೀಗೆ ಸಾಗಿತ್ತು. ಇಬ್ಬರ ಬಾಳಿನ ಬಂಡಿಯ ಹಿಂದಿನ ಚಕ್ರದ ಮಾತುಗಳು..

ಹೊಟ್ಟೆ ಹಸಿದಿತ್ತು.. ಹತ್ತಿರದಲ್ಲಿಯೇ ಇದ್ದ ಒಂದು ಈಟಿಂಗ್ ಪಾಯಿಂಟಿನಲ್ಲಿ ಮಸಾಲೆ ದೋಸೆ.. ಮತ್ತು ಸೆಟ್ ದೋಸೆ ತಿಂದು.. ಕಾಫಿ ಕುಡಿದು.. ಇಬ್ಬರೂ ಕೈ ಕುಲುಕಿ ಹೊರಟಾಗ ರಾತ್ರಿ ಒಂಭತ್ತಾಗಿತ್ತು..

ಮೂರು ಘಂಟೆಗಳ ಮಾತುಕತೆ ಇಬ್ಬರ ಮನದಲ್ಲಿಯೂ ಹಕ್ಕಿಯನ್ನು ಹಾರಿಸುತ್ತಿತ್ತು.... ಮುಂದೇ .... :-)


"ಮನೆಗೆ ಸೇರಿದ ಕೂಡಲೇ ಮೆಸೇಜ್ ಮಾಡಿ ಉಮೇಶ್.. " ಕೋಗಿಲೆಯ ದನಿ ವಾಟ್ಸಾಪಿನಲ್ಲಿ ವಾಯ್ಸ್ ಮೆಸೇಜ್ ಉಲಿಯಿತು.. "ಖಂಡಿತ ಸಿರಿ".. ಮೆಸೇಜ್ ಮಾಡಿದ ಉಮೇಶ್..

ಸರಿ ಸುಮಾರು ೧೧.೩೦ರ ರಾತ್ರಿ ಮನೆಗೆ ತಲುಪಿ.. "ಮನೆಗೆ ಬಂದೆ" ಎನ್ನುವ ಸಂದೇಶ ಕಳಿಸಿದ..ಆ  ಕಡೆಯಿಂದ "ಹುಷಾರು buddy" ಎನ್ನುವ ಭಾವದ ಸಂದೇಶ ಬಂದಿತ್ತು..

ಅದೇ ಗುಂಗಿನಲ್ಲಿ ಇಬ್ಬರೂ ಶುಭರಾತ್ರಿ ಹೇಳಿ ಬೆಳಿಗ್ಗೆ  ಎದ್ದು ಮಾತಾಡುವ ಎನ್ನುವ ಒಪ್ಪಂದಕ್ಕೆ ಸಹಿ ಮಾಡಿ.. ನಿದ್ರಾದೇವಿಗೆ ಶರಣಾದರು..

ಅಂದಿನಿಂದ ಪ್ರತ್ರಿದಿನವೂ ಶುಭಾಷಯ.. ಊಟ ತಿಂಡಿ.. ಉಭಯ ಕುಶೋಲೋಪರಿ ಸಾಂಪ್ರತ ಮಾತುಗಳು.. ಕೆಲವೊಂದು ತೀರಾ ಆತ್ಮೀಯತೆಯಿಂದ ಕೂಡಿದ ಮಾತುಗಳು.. ಪ್ರೀತಿ ವಿಶ್ವಾಸ ತೋರುವ ಮಾತುಗಳು ಹೀಗೆ ಸಾಗಿತ್ತು..

ಹತ್ತಿರ ಹತ್ತಿರ ಒಂದು ತಿಂಗಳಾಗಿತ್ತು.. "ಸಿರಿ ಒಂದು ತಿಂಗಳಾಯಿತು ನಮ್ಮ ಮೊದಲ ಭೇಟಿಯಾಗಿ.. ಮತ್ತೊಮ್ಮೆ ಭೇಟಿಯಾಗುವ?" ಎಂಬ ಸಂದೇಶಕ್ಕೆ ಪಟಕ್ ಅಂತ ಆ ಕಡೆಯಿಂದ "ನಾನೂ ಅದನ್ನೇ ಯೋಚಿಸುತ್ತಿದ್ದೆ.. ಖಂಡಿತ ಭೇಟಿಯಾಗೋಣ.. " ಎಂದು ಹೇಳಿ.. .ದಿನ ಸಮಯ ನಿಗದಿ ಪಡಿಸಿಕೊಂಡರು..

ಹೇಳಿದ ವಿಳಾಸ ಎಡ ಬಲ ಗೊಂದಲವಾಗಿ ಒಂದಷ್ಟು ಸುತ್ತು ಹೊಡೆದ ಮೇಲೆ.. ಆ ಜಾಗಕ್ಕೆ ಬಂದಾಗ ಹೋಟೆಲಿನಲ್ಲಿ ಹಾಕಿದ್ದ ಹಾಡು ಕೇಳಿ ನಗುತ್ತಾ ತನ್ನ ರೇಷ್ಮೆಯಂತಹ ತಲೆಗೂದಲನ್ನು ಕೈಯಿಂದ ಸರಿ ಮಾಡಿಕೊಂಡು.. "ಸಿರಿ ನಮಗೋಸ್ಕರ ಈ ಹಾಡು ಬರುತ್ತಿದೆಯಾ" ಎಂದು ಹಿಂದಿನಿಂದ ಬಂದು ಹೇಳಿದಾಗ.. ಒಮ್ಮೆ ಗಾಬರಿಯಾಗಿ "ಎಲ್ರಿ ಹೋಗಿದ್ದ್ರಿ?".. "ಹಾ.. ಹಾಡಾ.. ಯಾವ ಹಾಡು" ಎಂದು ಗಮನವಿಟ್ಟು ಕೇಳಿದಾಗ..

ಅಣ್ಣಾವ್ರ  ಆಪರೇಷನ್ ಡೈಮಂಡ್ ರಾಕೆಟ್ ಚಿತ್ರದ
            "If you come today...its too early..
             If you come tomorrow..its too late
             You pick the time..tick tick tick.. "

ಇಬ್ಬರೂ ಹೈ ಫೈ ಮಾಡಿ ನಕ್ಕರು..

 ಕೃಪೆ : ಗೂಗಲೇಶ್ವರ 
ಮೆಲ್ಲನೆ ಕಾಫೀ ಹೀರುತ್ತಾ.. ಮೊದಲ ಭೇಟಿಯಲ್ಲಿ ನಿಲ್ಲಿಸಿದ್ದ ಮಾತುಗಳಿಂದ  ಶುರುವಾದವು... ಹಾಗೆ  ಮುಂದುವರಿದ ಭಾಗವಾಗಿತ್ತು....      ಕೊಂಚ ಇಬ್ಬರೂ ರಿಲ್ಯಾಕ್ಸ್ ಆಗಿದ್ದರಿಂದ.. ಇಬ್ಬರಿಗೂ ಗೊಂದಲವಿರಲಿಲ್ಲ... ಆರಾಮಾಗಿ ಮಾತಾಡತೊಡಗಿದರು.. ಮನೆ, ಆಫೀಸ್.. ಕಾರ್ಪೊರೇಟ್ ರಾಜಕೀಯ.. ಸಂಬಳ ಹೆಚ್ಚಳ... ರಾಜಕೀಯ.. ಮತದಾನ.. ಕ್ರೀಡೆ.. ಸಿನಿಮಾ.. ಹೀಗೆ ಆಗಸದಿಂದ ಬೀಳುವ ಎಲ್ಲದರ ಬಗ್ಗೆ ಮಾತು ಮುಂದುವರೆಯಿತು..

ಇಬ್ಬರೂ ಮನಸ್ಸಿಗೆ ಹತ್ತಿರವಾಗತೊಡಗಿದರು ..ಅಥವಾ ಇಬ್ಬರಿಗೂ ಆ ರೀತಿಯ ಒಂದು ಭಾವ ಹೊಕ್ಕಿತ್ತು ಮನಸ್ಸಿಗೆ..

ಎರಡನೇ ಭೇಟಿ ಹೆಚ್ಚು ಹೊತ್ತು ಆಗಲಿಲ್ಲ.. ಇಬ್ಬರಿಗೂ ಬೇರೆ ಕೆಲಸವಿದ್ದದರಿಂದ ತುಸು ಬೇಗನೆ ಭೇಟಿ ಮುಗಿಸಿ ಮನೆಗೆ ಹೊರಟರು.. ಮತ್ತೆ ಭೇಟಿಯಾಗುವ ವಿಶ್ವಾಸದಿಂದ..

ಒಂದೆರಡು ದಿನ ಆದ ಮೇಲೆ ಉಮೇಶನ ಸಂದೇಶ ನೋಡಿ ಸಿರಿಗೆ ನೆಗೆದಾಡುವಷ್ಟು ಖುಷಿಯಾಯಿತು..

ತಮ್ಮ ಎರಡು ಭೇಟಿಯ ಬಗ್ಗೆ ತನಗನ್ನಿಸಿದ ಕೆಲವು ಮಾತುಗಳಲ್ಲಿ ತನ್ನ ಹೃದಯವನ್ನು ಬಿಚ್ಚಿಟ್ಟಿದ್ದ..

*****
​ಪ್ರೀತಿಯ ಸಿರಿ

ನನ್ನ ಒಂದಷ್ಟು ಮಾತುಗಳು

ಮೊದಲ ಭೇಟಿ:

ನೀವು ನನ್ನ ಹುಡುಕುತ್ತಾ ಕರೆ ಮಾಡಿದಾಗ.. ನಾ ಇದ್ದ ಜಾಗ ನಿಮಗೆ ಗೊತ್ತಾಯಿತು.. ಆದರೆ ನಾ ನಿಮ್ಮನ್ನು ಹುಡುಕುವ ಪ್ರಯತ್ನ ಮಾಡದೆ.. ನಿಮ್ಮ ಬರುವಿಕೆಗೆ ಎದುರುನೋಡುತ್ತಿದ್ದೆ..

ನೀವು ಹೇಳಿದ್ದು.. "ಒಬ್ಬರನ್ನು ಅವರಿಗೆ ಕಾಣದೆ ಗಮನಿಸುವುದು ಚೆನ್ನಾಗಿರುತ್ತದೆ.. " ಎಂದು ಹೇಳಿದಿರಿ.. ನನ್ನ ಹಿಂದಿನಿಂದ ಬಂದು.. ಪವ್ ಎಂದು ಸದ್ದು ಮಾಡಿದಿರಿ..

ಮೊದಲ ಭೇಟಿಗೆ ಐಸ್ ಬ್ರೇಕರ್ ಸೆಶನ್ ಅಂತಾರಲ್ಲ ಹಾಗೆ .. ಇಬ್ಬರ ಮಾತಿಗೆ ಪರ್ಫೆಕ್ಟ್ ವೇದಿಕೆ ಸಿದ್ಧವಾಗಿತ್ತು..

ನಿರರ್ಗಳ ಮಾತು.. ಹೃದಯ ಬಿಚ್ಚಿ ಆಡಿದ ಮಾತುಗಳು ಇಷ್ಟವಾಯಿತು..

ಎರಡನೇ ಭೇಟಿ..
ಕಾಯುತ್ತಾ ಕಾಯುತ್ತಾ ಒಂದು ಕಪ್ ಕಾಫಿ ಮುಗಿಸುವ ಹಂತಬಂದಿದ್ದರೂ ..ಕಾಯುವ ತಾಳ್ಮೆ ಇಷ್ಟವಾಯಿತು.. ಬಂದನಂತರ ಆಗಿದ್ದ ಗೊಂದಲದ ಬಗ್ಗೆ ತುಸು ಮಾತಾಡಿ.. ಇಬ್ಬರಿಗೂ ಬೇಜಾರು ತರದೇ ನೆಡೆದುಕೊಂಡ ನಮ್ಮಿಬ್ಬರ ರೀತಿ ಇಷ್ಟವಾಯಿತು..

ಮೊದಲ ಭೇಟಿಯ ಮುಂದುವರೆದ ಭಾಗದಂತಿದ್ದ ಈ ಮಾತುಕತೆ ತುಸು ಕಡಿಮೆ ಸಮಯವಾದರೂ ನೆನಪಲ್ಲಿ ಉಳಿಯುವಂತಾಯಿತು.. ಮತ್ತು ಮುಂದಿನ ಭೇಟಿಯ ಬಗ್ಗೆ ಕುತೂಹಲ ಮೂಡಿಸುವಂತಿದೆ..

ನಮ್ಮಿಬ್ಬರ ಬಗ್ಗೆ ಇಬ್ಬರಿಗೂ ಪೂರ್ಣ ತಿಳಿದಿಲ್ಲವಾದರೂ.. ಈಗ ಹೇಗಿದ್ದೀವಿ ಎನ್ನುವುದು ಮುಖ್ಯವಾಗುತ್ತದೆ.. ಮತ್ತೆ ಒಬ್ಬರನ್ನು ಒಬ್ಬರು ಅರ್ಥಮಾಡಿಕೊಂಡು ಪಿ ಎಚ್ ಡಿ ಮಾಡುವ ಅವಶ್ಯಕತೆ ಇಬ್ಬರಿಗೂ ಎಲ್ಲಾ ಎಂದುಕೊಳ್ಳುತ್ತೇನೆ..

ಮುಂದುವರೆಯಲಿ ಈ ಸ್ನೇಹದ ಪಯಣ.

*****

ಈ ಸಂದೇಶವನ್ನು ಓದಿ.. ಸಿರಿಗೆ ತಾಳಲಾರದಷ್ಟು ಸಂತೋಷ.. ಅದಕ್ಕೆ ಪ್ರತಿಕ್ರಿಯೆ ಕೊಡುತ್ತಾ
"ಎಷ್ಟು ಸುಂದರವಾಗಿ ಆ ನಮ್ಮ ಎರಡು  ಭೇಟಿಯನ್ನು ಅಕ್ಷರಗಳಲ್ಲಿ ಸೆರೆ ಹಿಡಿದಿದ್ದೀರಾ.. ನನಗೆ ಒಬ್ಬ ಅದ್ಭುತ ಸ್ನೇಹಿತ ಸಿಕ್ಕ ಎನ್ನುವ ಸಂತೋಷ.. ಜೊತೆಯಲ್ಲಿ ನಿಮ್ಮೊಳಗೆ ಒಬ್ಬ ಸುಂದರ ಜೀವಿ ಇದ್ದಾನೆ ಎನ್ನುವ ಅಂಶ ನನಗೆ ಇಷ್ಟವಾಯಿತು.. "

ನೋಡಿ ಈ ಹಾಡು ನನಗೆ ತುಂಬಾ ಇಷ್ಟ.. "ಇಸ್ ಪ್ಯಾರುಕೋ ಮೇ ಕ್ಯಾ ನಾಮು ದೂ.. " 

ಹಾಗೆ ಈ ಬಂಧಕ್ಕೆ ಹೆಸರಿಡೋದೆ ಬೇಡ.. ಹೀಗೆ  ಸಾಗಲಿ ನಮ್ಮ ಪಯಣ ಉಮೇಶ್"

ಇಬ್ಬರೂ ಖುಷಿ ಪಟ್ಟರು.. ಹೀಗೆ ಹಲವಾರು ಭೇಟಿಗಳಾಯಿತು.. ಒಂದೆರಡು ಬಾರಿ ಊಟದ ಸಮಯಕ್ಕೆ ಭೇಟಿ ಮಾಡಿ.. ಇಬ್ಬರೂ ಹೊಟ್ಟೆ ತುಂಬಾ ಊಟ ಮಾಡಿ.. ಮಾತಾಡಿ ತಮ್ಮ ಹೃದಯದ ಮಾತುಗಳನ್ನು ಹೇಳಿಕೊಂಡಿದ್ದರು..

"ರೀ ಉಮೇಶ್.. ಮುಂದಿನ ವಾರ ಭೇಟಿ ಮಾಡೋಣ ಕಣ್ರೀ.. ಸ್ವಲ್ಪ ಶಾಪಿಂಗ್ ಇದೆ.. ಹಾಗೆ ಒಂದು ಮೂವಿಗೆ ಹೋಗಿ ಬರೋಣ.. ಏನಂತೀರಾ"

"ಅಪ್ಪಣೆ ಮೇಡಂ" ಉತ್ತರ ಬಂದಿತ್ತು ವಾಟ್ಸಾಪ್ಪಿನಲ್ಲಿ

ಮಳೆ ಧೋ ಎಂದು ಸುರಿಯುತ್ತಿತ್ತು.. ಆದರೆ ಇವರಿಬ್ಬರ ಹೃದಯದಲ್ಲಿ ಸಣ್ಣ ಝರಿಯಾಗಿದ್ದ ಪ್ರೀತಿ ಎತ್ತ ಕಡೆ ಹರಿಯುತ್ತದೆಯೋ ಇಬ್ಬರಿಗೂ ಗೊತ್ತಾಗದೆ ಮಳೆಯ ನೀರು ರಸ್ತೆಯಲ್ಲಿ ನಿಂತ ಹಾಗಿತ್ತು ... ಆದರೆ ಕೆಲವೊಮ್ಮೆ ಇವರಿಬ್ಬರ ಮಾತುಗಳಲ್ಲಿ ಹಲವಾರು ಬಾರಿ ಇಣುಕುತಿತ್ತು.. ಸಿಂಗಲ್ ಫ್ಯೂಸ್ ನಲ್ಲಿ ಬಲ್ಬ್ ಉರಿಯುವ ಹಾಗೆ..

ಕೃಪೆ : ಗೂಗಲೇಶ್ವರ 
ಶಾಪಿಂಗ್ ಮುಗಿಯಿತು.. ಸಂಜೆ ಬಿಸಿ ಬಿಸಿ ಪಾನಿ ಪುರಿ ಸೇವನೆ ಆಯಿತು... ದಾವಣಗೆರೆ ಬೆಣ್ಣೆ ದೋಸೆ ಆಯಿತು..
"ಸಿರಿ ಯಾಕೋ ಸಿನಿಮಾ ಬೇಡ ಅನ್ನಿಸುತ್ತಿದೆ ಕಣ್ರೀ.. ಆರಾಮಾಗಿ ಒಂದು ಕಡೆ ಕೂತು ಮಾತಾಡೋಣ ಅನ್ಸುತ್ತೆ.... "

"ಓಕೇ ಸಾಹೇಬ್ರೆ.. ನಿಮ್ಮ ಆಸೆಗೆ ನಾ ಯಾಕೆ ಬೇಡ ಅನ್ಲಿ.. ಬನ್ನಿ ಎಂ ಜಿ ರಸ್ತೆಯ ಮೆಟ್ರೋ ಸ್ಟೇಷನ್ ಕೆಳಗೆ ರಂಗೋಲಿ ಅಂಗಳ ಇದೆಯಲ್ಲ.. ಇವತ್ತು ಯಾವುದೇ exhibition ಇಲ್ಲ .. ಅಲ್ಲಿ ಕೂತು ಮಾತಾಡಬಹುದು.. ತಣ್ಣನೆ ಮಳೆ.. ತಣ್ಣನೆ ಗಾಳಿ.. ಜನಗಳ ಓಡಾಟ.. ಹೆಚ್ಚಿಲ್ಲದ ವಾಹನ ಸಾಂಧ್ರತೆ.. ನೆಡೆಯಿರಿ ಹೋಗೋಣ.. "

ಬ್ರಿಗೇಡ್  ರೋಡಿಂದ ಮೆಲ್ಲನೆ ಮಳೆಯಲ್ಲಿ ಛತ್ರಿ ಹಿಡಿದು ಒಬ್ಬರಿಗೊಬ್ಬರು ತಾಕುವ ಹಾಗೆ ಅಂಟಿಕೊಂಡು ನೆಡೆಯತೊಡಗಿದರು.. ಉಮೇಶನಿಗೆ ಸಂಕೋಚ.. ಅವನ ಅರ್ಧ ದೇಹ ಛತ್ರಿಯಿಂದ ಹೊರಗೆ ಇದ್ದು.. ಅರ್ಧ ಭಾಗ ಮಳೆಯಿಂದ ನೆನೆಯಲು ಶುರು ಮಾಡಿತ್ತು.. ಸಿರಿ ಗಮನಿಸಿದಳು.. ಒಂದೆರಡು ಬಾರಿ ಹೇಳಿದರು ಕೇಳದೆ ಇದ್ದಾಗ.. ತನ್ನ್ನ ಕೈಯನ್ನು ಅವನ ಭುಜದ ಮೇಲೆ ಹಾಕಿ.. "ಕಮಾನ್ buddy" ಎಂದು ಹೇಳಿ ತನ್ನತ್ತ ಎಳೆದುಕೊಂಡಳು..

ಮುಜುಗರ ಪಡುತ್ತಾ ಮೆಲ್ಲನೆ ಹೆಜ್ಜೆ ಹಾಕಿದ.

ರಂಗೋಲಿ ಅಂಗಳ ಬಂತು

ಆಗಲೇ ಒಂದೆರಡು ಜೋಡಿಗಳು ಅಲ್ಲಿ ಕೂತಿದ್ದವು.. ಪಿಸಿ ಪಿಸಿ ಮಾತಾಡುತ್ತಿದ್ದವು.. ಕಡಲೇಕಾಯಿ ಮಾರುವವ ತನ್ನ ಮೊಬೈಲಿನಲ್ಲಿ ಹಾಡು ನೂರು ಮೀಟರ್ ಕೇಳುವ ಹಾಗೆ ಜೋರಾಗಿ ಹಾಕಿಕೊಂಡಿದ್ದ.. "ಕಂಗಳು ವಂದನೆ ಹೇಳಿದೆ ಹೃದಯವು ತುಂಬಿ ಹಾಡಿದೆ.. ಆಡದೆ ಉಳಿದಿಹ ಮಾತು ನೂರಿದೆ" ಮುಗಿಯದ ಕಥೆ ಚಿತ್ರದ ಹಾಡು ಬರುತ್ತಿತ್ತು

"ಸಿರಿ ಒಂದು ಮಾತು ಹೇಳಬೇಕಿತ್ತು ನಿನಗೆ"

"ಹೇಳು ಉಮೇಶ್"

ವಚನ ಬದಲಾಗಿದ್ದು ಇಬ್ಬರಿಗೂ ಅರಿವಿಗೆ ಬರಲಿಲ್ಲ..

"ನಮ್ಮಿಬ್ಬರ ಪರಿಚಯವಾಗಿ ಆರು ತಿಂಗಳಾಯಿತು..ಜೀವನದಲ್ಲಿ ಮತ್ತೆ ವಸಂತವನ್ನು ಕಾಣಬೇಕೆಂಬ ಬಯಕೆ ನಮ್ಮಿಬ್ಬರನ್ನು ಹತ್ತಿರ ತಂದಿದೆ.. ಇನ್ನು ಮುಂದಕ್ಕೆ ಹೇಗೆ ಎನ್ನುವ ವಿಚಾರ ಬಂದಾಗ.. ನನಗೆ ಈ ಮಾತನ್ನು ಹೇಳಬೇಕೆನಿಸಿತು.. "

"ಹೂಂ"

"ಸಿರಿ ಐ ಲವ್ ಯು ಕಣೆ.. "

ಒಂದು ಕ್ಷಣ ಮಾತಿಲ್ಲದೆ ಸಿರಿ ಉಮೇಶನ ಮೊಗವನ್ನೇ ನೋಡುತ್ತಿದ್ದಳು.. !

"ಸಿರಿ ಐ ಲವ್ ಯು ಕಣೆ.. "ನನ್ನ ಜೊತೆ ಜೀವನದಲ್ಲಿ ಹೆಜ್ಜೆ ಹಾಕುತ್ತೀಯ.. ನಿನಗೆ ಇಷ್ಟ ಅನಿಸಿದರೆ.. ನಿನ್ನ ಒಪ್ಪಿಗೆ ಹೇಳು.. ಇದರಲ್ಲಿ ಬಲವಂತವಿಲ್ಲ.. ಆದರೆ ನಮ್ಮಿಬ್ಬರ ನಿರ್ಧಾರ ಏನೇ ಆಗಲಿ.. ನಮ್ಮ ಗೆಳೆತನ ಎಂದಿಗೂ ಕಳೆದುಕೊಳ್ಳಬಾರದು.. ಸ್ನೇಹಿತರಾಗಿ ಇರೋಣ.. ಇದು ನನ್ನ ಮನದ ಭಾವ.. ನಿನಗೆ ಏನು ಅನಿಸುತ್ತದೆ ಹೇಳು.. "

ಇಬ್ಬರ ಮಧ್ಯೆ ಮೌನ.. ತಲೆಯ ಮೇಲೆ ಮೆಟ್ರೋ ಟ್ರೈನ್ ಸದ್ದು ಮಾಡುತ್ತಾ ಓಡುತ್ತಿತ್ತು.. ವಾಹನಗಳ ದಟ್ಟಣೆ ಹೆಚ್ಚುತ್ತಿತ್ತು.. ಮಳೆ ನಿಂತ ಆಗಸ ಶುಭ್ರವಾಗಿತ್ತು.. ಹಾಗೆಯೇ ಉಮೇಶನ ಹೃದಯವೂ ಕೂಡ.. ಹೇಳಬೇಕಾದ್ದು ಹೇಳಿದ್ದರಿಂದ ಮನಸ್ಸು ಹಗುರಾಗಿ ಹತ್ತಿಯ ಹಾಗೆ ಹಿಂಜಿಕೊಂಡು ಆಗಸದ ಮೋಡಗಳ ತರಹ ಹಾರುತಿತ್ತು..

ಸುಮಾರು ಹದಿನೈದು ನಿಮಿಷ.. ಇಬ್ಬರ ಮಧ್ಯೆ ಮೌನ ಬಿಟ್ಟು ಬೇರೆ ಇಲ್ಲ..

ಕಡಲೆಕಾಯಿ ಹುಡುಗನ ಮೊಬೈಲು ಅಣ್ಣಾವ್ರ ಭಾಗ್ಯದ ಲಕ್ಷ್ಮಿ ಬಾರಮ್ಮ ಚಿತ್ರದ "ಯಾವ ಕವಿಯೂ ಬರೆಯಲಾರ ಒಲವಿನಿಂದ ಕಣ್ಣೋಟದಿಂದ ಹೃದಯದಲ್ಲಿ ನೀ ಬರೆದ  ಈ ಪ್ರೇಮ ಗೀತೆಯಾ..ಯಾವ ಕವಿಯೂ ಬರೆಯಲಾರ" ಹಾಡು..

ಇಬ್ಬರ ಕಣ್ಣುಗಳು ಸಂಧಿಸಿದವು..

ಸಿರಿ ತಲೆ ಬಗ್ಗಿಸಿಕೊಂಡು ಮತ್ತೆ ಸ್ವಲ್ಪ ಹೊತ್ತು ಕೂತಳು..

"ಈ ಮೌನವ ತಾಳೆನು.. ಮಾತಾಡೇ ದಾರಿಯ ಕಾಣೆನು.. ಓ ರಾಜ" ಮಯೂರ ಚಿತ್ರದ ಹಾಡು ನೆನಪಿಗೆ ಬಂತು ಸಿರಿಗೆ..

ನಿಧಾನವಾಗಿ ತನ್ನ ವ್ಯಾನಿಟಿ ಬ್ಯಾಗಿಗೆ ಕೈ ಹಾಕಿ.. "ಉಮೇಶ್ ಹೀಗೆ ಮಾಡೋಣ.. ನಾಣ್ಯ ಚಿಮ್ಮುತ್ತೇನೆ .. ಹೆಡ್ಸ್ ಬಿದ್ದರೆ ಜೊತೆಯಾಗಿರೋಣ ...  ಓಕೆ  .. ಟೈಲ್ಸ್ ಬಿದ್ದರೆ ಫ್ರೆಂಡ್ಸ್ .. ಆಗಬಹುದಾ"

ಸುಮ್ಮನೆ ನಕ್ಕ

ನಾಣ್ಯ ಚಿಮ್ಮಿ ಕೈಯಲ್ಲಿ ಹಿಡಿದಳು.. "ಹೇಳಿ ಉಮೇಶ್"

ಅವಳ ಎರಡು ಕೈಯನ್ನು ತನ್ನ ಕೈಯಲ್ಲಿ ಹಿಡಿದುಕೊಂಡು.. "ಅದು ಹಾಗೆ ಇರಲಿ.. ಸಿರಿ. .ತೆಗೆಯೋದೆ ಬೇಡ.. ನೀ ನನ್ನ ಜೊತೆಯಾಗು ಸಾಕು.. "

ಸಿರಿ ಸುಮ್ಮನೆ ಒಂದು ಮುಗುಳು ನಗೆ ಬೀರಿ.. ಅವನ ತಣ್ಣನೆ ಕೈಗಳ ಮೇಲೆ ತನ್ನ ಬಿಸಿ ಕೈಗಳನ್ನು ಇಟ್ಟು.. ಮೆಲ್ಲನೆ ಕಣ್ಣು ಹೊಡೆದು ತಲೆ ತೂಗಿದಳು..

ಗೋಲ್ಗಪ್ಪಾ ಮಾರುವವನ ಬಳಿಯಿದ್ದ ಒಬ್ಬ ಹುಡುಗನ ಮೊಬೈಲಿನಲ್ಲಿ "ಜೊತೆಯಾಗಿ ಹಿತವಾಗಿ ಸೇರಿ ನೆಡೆವ ಸೇರಿ ನುಡಿವ.. ನನ್ನ  ಉಸಿರಲ್ಲಿ ನೀ ಎಂದು ಉಸಿರಾಗಿರು.. ನಿನ್ನ ಬಿಡಲಾರೆ ನಾನೆಂದಿಗೂ"  ರಥಸಪ್ತಮಿ ಚಿತ್ರದ ಹಾಡು ಇಬ್ಬರಿಗೂ ಕೇಳಿಸಿತು..

ಜೋರಾಗಿ ನಗುತ್ತಾ.. ಇಬ್ಬರು ಕೈಹಿಡಿದುಕೊಂಡು .. "ಇವತ್ತಿಂದ ಹೊಸ ಪಥದಲ್ಲಿ ನೆಡೆಯೋಣ.. "

ಇಬ್ಬರೂ ಕೈ ಕೈ ಹಿಡಿದು ಮೆಲ್ಲನೆ ಮೆಟ್ರೋ ಸ್ಟೇಷನ್ ಹತ್ತಿರ ನೆಡೆಯ ತೊಡಗಿದರು..

ಮೆಟ್ರೋ ಟ್ರೈನಿಗೆ ಟೋಕನ್ ತೆಗೆದುಕೊಳ್ಳುವಾಗ ಎಫ್ ಎಂ ನಲ್ಲಿ ಹಾಡು ಬರುತ್ತಿತ್ತು..

"ಹಸೆಮಣೆಯೂ ನಮಗೆ ಇಂದು ನಾವು ನಿಂತ ತಾಣವು
ತೂಗಾಡುವ ಹಸಿರೆಲೆಯೇ ಶುಭ ಕೋರುವ ತೋರಣವು
ಹಕ್ಕಿಗಳ ಚಿಲಿಪಿಲಿ ಗಾನ ಮಂಗಳಕರ ನಾದವು
ಈ ನದಿಯ ಕಲರವವೇ ಮಂತ್ರಗಳಾ ಘೋಷವು
ಸಪ್ತಪದಿ ಈ ನಡೆಯಾಯ್ತು ಸಂಜೆ ರಂಗು ಆರತಿಯಾಯ್ತು
ಇಂದೀಗ ಎರಡು ಜೀವ ಬೆರೆತು ಸ್ವರ್ಗವಾಯ್ತು"

ಇಬ್ಬರೂ ಮಂದಹಾಸ ಬೀರಿದರು..

ಸಿರಿ ತನ್ನ ಕೈಯಲ್ಲಿಯೇ ಇದ್ದ ನಾಣ್ಯವನ್ನು ಮತ್ತೊಮ್ಮೆ ನೋಡಿಕೊಂಡಳು.. ಎರಡು ಕಡೆ ಹೆಡ್ಸ್ ಇತ್ತು :-)

ಕೃಪೆ : ಗೂಗಲೇಶ್ವರ 

Friday, June 1, 2018

ಮೆಚ್ಚುವ or Matured!!!

ಗಿಜಿ ಗಿಜಿ ಎನ್ನುವ ಮೆಟ್ರೋ ರೈಲು... ಟೋಕನ್ ಪಡೆದು ಉಮೇಶ ಓಡುತ್ತಿದ್ದ.. ಎಸ್ಕಲೇಟರ್ ಇದ್ದರೂ.. ಹೊಸದಾಗಿ ಖರೀದಿಸಿದ್ದ ಸ್ಯಾಮಸಂಗ್ ಮೊಬೈಲ್ನಲ್ಲಿ ಹೆಲ್ತ್ ಆಪ್ ಹೆಜ್ಜೆಗಳನ್ನು ಎಣಿಸುತ್ತಿದ್ದರಿಂದ.. ದಿನವೂ ಹತ್ತು ಸಾವಿರ ಹೆಜ್ಜೆ ಹಾಕಲೇ ಬೇಕೆಂಬ ಕಟುವಾದ ನಿಯಮ ಹಾಕಿಕೊಂಡಿದ್ದ. ಮೆಟ್ಟಿಲುಗಳನ್ನು ಏರುತ್ತಾ ಓಡಿದ.. ಹೆಜ್ಜೆಗಳ ಸಂಖ್ಯೆ ಹೆಚ್ಚಾದಂತೆ ಅವನ ಹೃದಯಬಡಿತವೂ ಏರುತ್ತಿತ್ತು..
ಕೃಪೆ - ಗೂಗಲೇಶ್ವರ 
ಸೆಕ್ಯೂರಿಟಿ "ಸರ್ ಟ್ರೈನ್ ಬರುತ್ತೆ ಬೇಗ ಬನ್ನಿ" ಎಂದು ಕೂಗಿದ.. ಓಡುತ್ತಾ ಅಂತೂ ಇಂತೂ ಮೆಟ್ರೋ ಒಳಗೆ ನುಗ್ಗಿಯೇ ಬಿಟ್ಟಾ.. ಮೊಗದಲ್ಲಿ ಹರಿಯುತ್ತಿದ್ದ ಬೆವರು.. ಅವನ ಹಣೆಯ ಕುಂಕುಮವನ್ನು ಕರಗಿಸುತ್ತಿತ್ತು.. ಕಿವಿಗೆ ಹಾಕಿಕೊಂಡಿದ್ದ ಇಯರ್ ಫೋನಿನಲ್ಲಿ "ನನ್ನ ಕುಂಕುಮ ಬೆವರಲಿ ಕರಗಿ ಹರಿಯುತಿದೆ" ನಾ ನಿನ್ನ ಬಿಡಲಾರೆ ಚಿತ್ರದ ಜಾನಕಿಯಮ್ಮನ ಕಂಠದಲ್ಲಿ ಹಾಡು ಬಿತ್ತರವಾಗುತಿತ್ತು.. ಹಾಗೆ ಮೊಗದ ಮೇಲೆ ಕಿರುನಗೆ ..ಬೆವರು ಒರೆಸಿಕೊಳ್ಳೋದಾ ಅಥವಾ ಮೆಟ್ರೋ ಹವಾ ನಿಯಂತ್ರಿತವಾಗಿದ್ದರಿಂದ ಹಾಗೆ ತಣ್ಣಗಾಗಲೂ ಬಿಡೋದ ಎನ್ನುವ ಗೊಂದಲಕ್ಕಿಂತ ಜೇಬಿನಿಂದ ಕರವಸ್ತ್ರ ತೆಗೆದು ಒರೆಸಿಕೊಳ್ಳಲು ಜಾಗವಿರಲಿಲ್ಲ.. ಜೇಬಿಗೆ ಕೈಹಾಕಿದರೆ ಪಕ್ಕದವರ ಪ್ಯಾಂಟಿಗೆ ಕೈ ಹೋಗುವ ಸಾಧ್ಯತೆ ಹೆಚ್ಚಿತ್ತು.. ಹಾಗೆ ಪೇಲವ ನಗೆ ನಗುತ್ತಾ.. ಹಾಡು ಕೇಳುತ್ತಾ ಮೈ ಮರೆತು ನಿಂತಿದ್ದ..

ಮುಂದಿನ ನಿಲ್ದಾಣ ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಎಂದು ಕೂಗಿತು.. ತನ್ನ ಸ್ಥಳ ಬಂತು ಎಂದು ಅರಿವಾಗಿ.. ಇಯರ್ ಫೋನು ತೆಗೆದು.. ಪ್ಯಾಂಟಿನ ಜೇಬಿನಲ್ಲಿಟ್ಟುಕೊಂಡು .. ಮತ್ತೆ ಮೆಟ್ಟಿಲು ಇಳಿಯತೊಡಗಿದ .. ಒರಾಯನ್ ಮಾಲಿಗೆ ಇದೆ ಮೊದಲ ಬಾರಿ ಅಲ್ಲವಾದರೂ.. ಏನೋ ಹೊಸದು ಎನ್ನಿಸುತ್ತಿತ್ತು.. ಸುಂದರವಾದ ಕಾರಂಜಿ.. ಮಕ್ಕಳು ಗಿಜಿ ಗಿಜಿ ಎನ್ನುತ್ತಿದ್ದ ವಾತಾವರಣ.. ಯುವ ಜೋಡಿಗಳ ಸೆಲ್ಫಿ ಸಂಭ್ರಮ.. ವಯಸ್ಸಾದವರು ಈ ಯುವಜೋಡಿಗಳೇ ಹೀಗೆ .. ನಮ್ಮ ಕಾಲದಲ್ಲಿ ಹೀಗಿರಲಿಲ್ಲ ಎಂದು ಹೇಳಿಕೊಂಡು ಆ ದಿನಗಳನ್ನು ನೆನೆಯುತ್ತಿದ್ದರು..
ಕೃಪೆ - ಗೂಗಲೇಶ್ವರ 
ಸುಮ್ಮನೆ ಒಂದು ಕಲ್ಲು ಬೆಂಚಿನ ಮೇಲೆ ಕೂತು.. ಸುತ್ತ ಮುತ್ತಲ ಪರಿಸರವನ್ನು ಗಮನಿಸುತ್ತಾ.. ಮೊಬೈಲಲ್ಲಿ ಆಫೀಸ್ ಇಮೇಲ್ ಚೆಕ್ ಮಾಡಿ.. ಹಾಗೆ ಅದಕ್ಕೆ ಉತ್ತರಿಸಿ.. ವಾಟ್ಸಾಪ್ ಸಂದೇಶಗಳನ್ನು ನೋಡಿ.. ಕೆಲವೊಂದಕ್ಕೆ ನಕ್ಕು.. ಕೆಲವೊಂದು ವಿಚಾರಗಳಿಗೆ ಸ್ಪಂದಿಸಿ.. ಸಂಜೆ ಶುಭಾಶಯ ತಿಳಿಸಿ.. ಸುಮ್ಮನೆ ಆಕಾಶ ನೋಡುತ್ತಾ ಕೂತ..

ಎರಡು ವಾರದ ಹಿಂದೆ  ನೆಡೆದ ಘಟನೆಗಳು ಹಾಗೆ ಸ್ಮೃತಿ ಪಟಲದ ಮೇಲೆ ಮೂಡಿ ಬಂತು..

ತನ್ನ ಜೀವದ ಗೆಳೆಯ ಭರತ್ ಆಫೀಸಿಗೆ ಹೋಗಿದ್ದ ಉಮೇಶ.. ಕಾಫಿ ಕುಡಿಯುತ್ತಾ ಮಾತಾಡುತ್ತಿದ್ದಾಗ.. ಅವನ ಗೆಳೆಯನನ್ನು ಮಾತಾಡಿಸಿಕೊಂಡು ಒಬ್ಬಳು ಬಂದಳು.. ಉಭಯಕುಶಲೋಪರಿ ಸಾಂಪ್ರತ ಮಾತಾಡುತ್ತಾ.. "ಓಯ್ ಸಿರಿ ನೋಡು ಇವನು ನನ್ನ ಬೆಸ್ಟ್ ಫ್ರೆಂಡ್ ಉಮೇಶ" ಎಂದು ತನ್ನನ್ನು ಪರಿಚಯ ಮಾಡಿಕೊಂಡಿದ್ದ.. "ಉಮೇಶ ಇವಳು ನನ್ನ ಬೆಸ್ಟ್ ಗೆಳತೀ ಸಿರಿ" ಎಂದ.. ಅವಳು "ಹಲೋ"  ಎಂದಾಗ ಅವಳ ದನಿಗೆ ಮಾರು ಹೋದ ಉಮೇಶ.. ಆ ಕ್ಷಣಕ್ಕೆ..

ಅಷ್ಟರಲ್ಲಿ ಅವಳಿಗೆ ಮೊಬೈಲ್ ಕರೆ ಬಂತು.. ಹಿಡಿದ ಕಪ್ಪಿನಿಂದ ಕಾಫಿ   ಕುಡಿಯುತ್ತಾ.. ಮೊಬೈಲ್ನಲ್ಲಿ ಮಾತಾಡುತ್ತಾ ಬೈ ಎಂದು ಕಣ್ಣಿನಲ್ಲಿ ಹೇಳಿ ಮರೆಯಾದಳು..

ಭರತ್ ಹತ್ತಿರ ಅವಳ ನಂಬರ್ ಪಡೆದು.. ವಾಟ್ಸಾಪ್ಪಿನಲ್ಲಿ ಸಂದೇಶ ಕಳಿಸಿದ.. "ನಿಮ್ಮ ಜೊತೆ ಮಾತಾಡುವ ಬಯಕೆ ಇದೆ.. ನಾಳೆ ಬೆಳಿಗ್ಗೆ ೧೧.೩೦ಕ್ಕೆ ಕರೆ ಮಾಡಬಹುದಾ?"

ತನ್ನ ಕೆಲಸದಲ್ಲಿ ಮುಳುಗಿಹೋಗಿದ್ದ ಉಮೇಶನಿಗೆ ಟಂಗ್ ಅಂತ ಮೊಬೈಲ್ ಸದ್ದು ಮಾಡಿದ್ದು ಅರಿವಾಗಿರಲಿಲ್ಲ.. ಆವ ಮೊಬೈಲ್ ನೋಡಿದಾಗ ರಾತ್ರಿ ಹನ್ನೊಂದಾಗಿತ್ತು.. ಸಿರಿಯ ಉತ್ತರ.. "ಖಂಡಿತ ಮಾಡಿ.. ಮಾತಾಡೋಣ"... ಸವಿಯಾದ ನಿದ್ದೆಯಲ್ಲಿ ಮುಳುಗೆದ್ದಾಗ ಬೆಳಗಾಗಿತ್ತು... .

ಕಂಪನಿಯ ಹೆಡ್ ಆಫೀಸ್ ಅಮೆರಿಕಾದಲ್ಲಿತ್ತು.. ಅಲ್ಲಿಂದ ಕೆಲವು ಮುಖ್ಯಸ್ಥರು ಬಂದಿದ್ದರು. ಅವರ ಜೊತೆ ಮೀಟಿಂಗ್, ಮಾತು ಕತೆ. ಊಟ ಸಂಜೆ ಉಪಹಾರ.. ಕಾರ್ಪೊರೇಟ್ ಸಂಜೆಯಲ್ಲಿ ಸ್ವಲ್ಪ ಗುಂಡಿನ ಪಾರ್ಟಿ ಇತ್ತು.. .ಉಮೇಶನಿಗೆ ಕುಡಿಯುವ ಹವ್ಯಾಸವೂ ಇರಲಿಲ್ಲ.. ಅಭ್ಯಾಸವೂ ಇರಲಿಲ್ಲ.. ಆದರೆ ಅವನು ಹೋಗಲೇ ಬೇಕಿತ್ತು.. ಹಾಗಾಗಿ ಮನೆಗೆ ಬಂದಾಗ ಕ್ಯಾಲೆಂಡರ್ ನನ್ನ ದಿನ ಮುಗಿದಿದೆ.. ನನ್ನನ್ನು ಬದಲಿಸೋ ಎಂದು ಕಿರುಚುತಿತ್ತು.. ಸುಸ್ತಾಗಿ ಮಲಗಿಬಿಟ್ಟಿದ್ದ..

ಬೆಳಿಗ್ಗೆ ಗೋಲ್ಡನ್ ಹವರ್ ಎನ್ನುವ ಮೂರು ಘಂಟೆಯಿಂದ ಐದು ಘಂಟೆಯ ನಡುವೆ "ಛೆ ಸಿರಿಗೆ ಕರೆ ಮಾಡಬೇಕಿತ್ತು.. ಛೆ ಮಾಡೋಕೆ ಆಗಲೇ ಇಲ್ಲವಲ್ಲ ಎಂದು ಬೇಸರಿಸಿಕೊಂಡು.. ಆಫೀಸಿಗೆ ಬಂದು ತಿಂಡಿ ಆದ ಮೇಲೆ ಸಂದೇಶ ಕಳಿಸಿದ.. "ಈಗ ಕರೆ ಮಾಡಬಹುದೇ... "

"ಓ ಎಸ್" ಉತ್ತರ ಬಂದಿತ್ತು..

"ಹಲೋ" ಸಿರಿಯ ಮಧುರವಾಣಿ..

ಇಬ್ಬರೂ ಒಟ್ಟಿಗೆ ಹೇಳಿದರು.. "ಸಾರಿ.. ನಿನ್ನೆ ಬ್ಯುಸಿ ಇದ್ದೆ.. ನೀವು ನನಗೆ ಕರೆ ಮಾಡಿದ್ದಿರೋ ಏನೋ.. ಸಾರಿ ಬ್ಯುಸಿ ಇದ್ದೆ"

"ಸಿರಿ ತೊಂದರೆ ಇಲ್ಲ.. ನಾನೂ ಬ್ಯುಸಿ ಇದ್ದೆ.. ಇನ್ಫ್ಯಾಕ್ಟ್ ನಾ ನಿಮಗೆ ಕರೆ ಮಾಡೋಕೆ ಆಗಲೇ ಇಲ್ಲ.. ಕೆಲಸ ಕೆಲಸ ಮತ್ತು ಕೆಲಸ.. "

ಇಬ್ಬರೂ ಮತ್ತೊಮ್ಮೆ ಒಟ್ಟಿಗೆ ಸಾರಿ ಅಂದಾಗ ಇಬ್ಬರ ಮನಸ್ಸು ಹಗುರಾಗಿತ್ತು..

"ಹೇಳಿ ಸಿರಿ.. ಏನ್ ಸಮಾಚಾರ.. ಓಹ್ ನೋ.. ನಾನೇ ನಿಮ್ಮ ಹತ್ತಿರ ಮಾತಾಡಬೇಕು ಎಂದು ಹೇಳಿದ್ದೆ ಅಲ್ವ.. "

ಕಿಲ ಕಿಲ ನಗು ಆ ಕಡೆಯಿಂದ

"ನೋಡಿ ಸಿರಿ.. ಸುತ್ತಿ ಬಳಸಿ ಮಾತಾಡೋ ಅವಶ್ಯಕತೆ ನನಗೂ ಇಲ್ಲ.. ನಿಮಗೂ ಇಲ್ಲ ಅಂದ್ಕೋತೀನಿ.. ನೋಡಿ ನಿಮ್ಮ ಬಗ್ಗೆ ಭರತ್ ಹತ್ತಿರ ವಿಷ್ಯ ತಿಳಿದುಕೊಂಡೆ.. ನಿಮ್ಮ ಜೀವನದಲ್ಲಿ ನೆಡೆದ ಘಟನೆ ತಿಳಿಯಿತು.. ಜೀವನದಲ್ಲಿ ಇದೆಲ್ಲ ಕಾಮನ್.. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬಾರದು.. ನಿಮ್ಮ ಬಗ್ಗೆ ತಿಳಿದುಕೊಳ್ಳಬೇಕೆಂಬ ಕುತೂಹಲಕ್ಕಿಂತ ಆಸಕ್ತಿ ಹೆಚ್ಚಾಗಿತ್ತು.. ಅದಕ್ಕೆ ನಿಮ್ಮ ಜೊತೆ ಮಾತಾಡೋಣ ಅನ್ನಿಸಿತು.. "

"ಉಮೇಶ್ ನಿಮ್ಮ ಸರಳತೆ ಮತ್ತು ನೇರ ನುಡಿ ಇಷ್ಟವಾಯಿತು.. ಹೌದು ಭರತ್ ನಿಮ್ಮ ಬಗ್ಗೆ ಹೇಳಿದ್ದ.. ನನಗೆ ನಿಮ್ಮ ಸರಳತೆ ಮತ್ತು ಸ್ನೇಹ ಪರತೆ ಭರತ್ ಮಾತುಗಳಿಂದ ತಿಳಿದಿತ್ತು ..ನಿಮ್ಮನ್ನು ಒಮ್ಮೆ ಭೇಟಿ ಮಾಡಬೇಕೆನ್ನುವ ಆಸೆಗೆ ನಿಮ್ಮ ಸಂದೇಶ ನೀರೆರೆಯಿತು.. ಅದಕ್ಕೆ ನೀವು ಕೇಳಿದ ತಕ್ಷಣ ಆಗಲಿ ಎಂದು ಹೇಳಿದ್ದು.. "

"ಓಕೇ ಸರಿ.. ಇವತ್ತು ನಾ ಸ್ವಲ್ಪ ಬ್ಯುಸಿ ಇದ್ದೀನಿ.. ನಾಳೆ ಸಂಜೆ ಆರು ಘಂಟೆಗೆ ಒರಾಯನ್ ಮಾಲಿನಲ್ಲಿ ಸಿಗಬಹುದೇ.. ಒಂದಷ್ಟು ಮಾತಾಡೋಣ.. "

 "ಖಂಡಿತ ಉಮೇಶ್.. ನಾಳೆ ಸಂಜೆ ಸಿಗೋಣ ಹಾಗಾದರೆ.. ಬೈ" ಎಂದು ಹೇಳಿ ಫೋನ್ ಕರೆ ನಿಂತಿತ್ತು..

ಏನು ಮಾತಾಡೋದು. .ಹೇಗೆ ಮಾತಾಡೋದು.. ಹೀಗೆ ನೂರಾರು ಗೊಂದಲಗಳು ಮನದಲ್ಲಿ ಜೇಡರಬಲೆಯನ್ನು  ನೇಯುತ್ತಿತ್ತು.. ನಿಗದಿಯಾಗಿದ್ದ ಒರಾಯನ್ ಮಾಲೊಳಗೆ ಬಂದು ಕೂತಿದ್ದ .. ಸುಮ್ಮನೆ ಆಕಾಶ ನೋಡುತ್ತಾ ಕೂತಿದ್ದವನಿಗೆ ಭುವಿಗೆ ಕರೆತಂದದ್ದು.. ಒಂದು ಕರೆ

"ಉಮೇಶ್ ಎಲ್ಲಿದ್ದೀರಾ.. ನಾ ಆಗಲೇ ಬಂದಿದ್ದೀನಿ.. "

"ಸಿರಿ..ಕಾರಂಜಿ ಇರುವ ಜಾಗದಲ್ಲಿ ಒಂದು ದೊಡ್ಡನೆಯ ಕಾರಂಜಿ ಇದೆಯಲ್ಲ.. ಅದರಿಂದ ಮೂರನೇ ಬೆಂಚಿನಲ್ಲಿ ಕುಳಿತಿದ್ದೇನೆ..  ನೀವೆಲ್ಲಿ ಇದ್ದೀರಾ"

"ಮೂರನೇ ಬೆಂಚು.. ದೊಡ್ಡ ಕಾರಂಜಿ.. ಹಾ.. ಹಾ.. ಗೊತ್ತಾಯಿತು.. ನಾ ನಿಮ್ಮನ್ನು ನೋಡಿದೆ.. ಅರಿವಿಲ್ಲದೆ ಇನ್ನೊಬ್ಬರನ್ನು ಗಮನಿಸುವುದು ಚಂದ ಇರುತ್ತೆ ಆಲ್ವಾ.. "

"ಹೌದು ಸಿರಿ. ಇನ್ನೊಬ್ಬರು ನಮ್ಮನ್ನು ನೋಡುತ್ತಿದ್ದಾರೆ ಎನ್ನುವಾಗ ಮಂಗನ ಆಟ ಆಡುವುದು.. ನಾ ಸುಂದರ ಎನ್ನುವ ಧಿಮಾಕು ತೋರಿಸುವುದು.. ಇವೆಲ್ಲ ಸಹಜ.. ಸೊಗಸಾಗಿರುತ್ತೆ.. ಗೋ ಆನ್.. ನಾ ಇಲ್ಲಿಯೇ ಕುಳಿತಿರುತ್ತೇನೆ.. ನೀವೇ ಬನ್ನಿ.. ನಿಮ್ಮನ್ನು ಹುಡುಕಿಕೊಂಡು ನಾ ಓಡಾಡೋದು.. ನನ್ನನ್ನು ಹುಡುಕಿ ನೀವು ಒದ್ದಾಡೋದು ಬೇಡ.. "

"ಸರಿಯಾದ ಯೋಚನೆ.. ಅಲ್ಲೇ ಇರಿ ಬರ್ತೀನಿ"

ಕರೆ ಕಟ್ಟಾಯಿತು..

ಉಮೇಶ ಮೊಬೈಲಿನ ಸಂದೇಶ ನೋಡುತ್ತಾ ಮೈಮರೆತು ಕೂತಿದ್ದ. ಹಿಂದಿನಿಂದ "ಬೌ" ಎನ್ನುವ ಸದ್ದು ಬಂದಾಗ.. ಕೊಂಚ ಹೆದರಿ.. ಹಿಂದೆ ತಿರುಗಿ ನೋಡಿದ.. ಚಾಂದಿನಿ ಹಾಗೆ ಬಿಳಿ ಬಣ್ಣದ ಉಡುಪು ತೊಟ್ಟ ಸಿರಿ ಸುಂದರವಾಗಿ ಕಾಣುತ್ತಿದ್ದರು.. ಹಿಂದೆ ಬಾಚಿ ಕಟ್ಟಿದ್ದ ಕೂದಲು.. ರೇಷ್ಮೇಯಂತೆ ಹಾರಾಡುತ್ತಾ ಅವರ ಭುಜದ ಎರಡು ಬದಿಯಲ್ಲಿ ಹರಡಿಕೊಂಡಿತ್ತು.. ಪುಟ್ಟದಾದ ಬಿಂದಿ.. ಆಕರ್ಷಕವಾದ ಕಣ್ಣುಗಳು.. ತುಸು ಕುಳ್ಳಗಿದ್ದರೂ ಆಕರ್ಷಣೆಯಿರುವಂತಹ ಹುಡುಗಿಯಾಗಿದ್ದರು ಸಿರಿ.. ಒಂದೇ ನೋಟದಲ್ಲಿ ಗಮನಿಸಿದ್ದ ಉಮೇಶ..

"ಹಲೋ ಉಮೇಶ್ ಅವರೇ.. ಎಲ್ಲಿ ಕೂರೋಣ.. "

"ಇಲ್ಲಿಯೇ ಕೂರೋಣ ಸಿರಿ.. "

ತಣ್ಣನೆ ಗಾಳಿ.. ಕಾರಂಜಿಯಿಂದ ಹಾರಿ ಬರುವ ಕಿರು ಹನಿಗಳು.. ಸಣ್ಣದಾಗಿ ಬರುತ್ತಿರುವ ಸಂಗೀತ.. ಇಡೀ ವಾತಾವರಣಕ್ಕೆ ಮಾಂತ್ರಿಕ ಸ್ಪರ್ಶ ನೀಡಿತ್ತು.. ಬಣ್ಣ ಬಣ್ಣದ ದೀಪಗಳು.. ಮಳೆ ಬಂದು ನಿಂತು ಹೋಗಿದ್ದರಿಂದ ಆಗಸದಲ್ಲಿ ಬಣ್ಣ ಬಣ್ಣದ ಮೋಡಗಳು ಹತ್ತಿಯ ಹಾಗೆ ಹಿಂಜಿಕೊಂಡು ಸಾಗುತ್ತಿತ್ತು..

ಇಬ್ಬರಿಗೂ ಹೇಗೆ ಮಾತು ಶುರು ಮಾಡಬೇಕೆಂಬ ಗೊಂದಲ ಕಾಡುತ್ತಿತ್ತು.. "ಲೇಡೀಸ್ ಫಸ್ಟ್"ಎಂದಾಗ ಕಿಲ ಕಿಲ ಎಂದು ನಕ್ಕು.. ನೀವೇ ಶುರು ಮಾಡಿ ಎಂದರು ಸಿರಿ..

"ಸಿರಿ.. ನಾ ಒಬ್ಬನೇ ಮಗ.. ನಾನು ಕಳೆದ ವರ್ಷ ಮದುವೆಯಾದೆ.. ಸುಖದಲ್ಲಿದ್ದ ಸಂಸಾರ ನನ್ನದು.. ನಾ ಮೆಚ್ಚಿ ಮದುವೆಯಾಗಿದ್ದೆ. ನನ್ನ ಸಹೋದ್ಯೋಗಿ ಅವಳು.. ಇಬ್ಬರೂ ಹನಿಮೂನಿಗೆ ಕೊಡೈಕೆನಾಲಿಗೆ ಹೋಗಿದ್ದೆವು.. ಈ ಅಮೃತವರ್ಷಿಣಿ ಸಿನೆಮಾ ತೆಗೆದಿದ್ದಾರಲ್ಲ ಆ ಜಾಗದಲ್ಲಿ ನಿಂತು ಫೋಟೋ ತೆಗೆದುಕೊಳ್ಳುತ್ತಿದ್ದೆವು.. ಸೆಲ್ಫಿ ಹುಚ್ಚು ಇರಲಿಲ್ಲ.. ಚಂದದ ಪ್ರಕೃತಿ.. ಕ್ಯಾಮೆರಾದಲ್ಲಿ ಸೆರೆ ಹಿಡಿಯುತಿದ್ದೆ.. ಅವಳು ನನ್ನ ಜೊತೆ ನಿಂತು.. ಅದನ್ನು ತೆಗೀರಿ.. ಇಲ್ಲಿ ನೋಡಿ ಚೆನ್ನಾಗಿದೆ.. ಎನ್ನುತ್ತಿದ್ದಳು.. ಹೀಗೆ ಸ್ವಲ್ಪ ಹೊತ್ತಾದ ಮೇಲೆ ಇಬ್ಬರೂ ಒಂದು ಕಲ್ಲು ಬಂಡೆಯ ಮೇಲೆ ಕುಳಿತು ಮಾತಾಡುತ್ತಿದ್ದೆವು... ಮೋಡಗಳು ಮುತ್ತಲು ಶುರುಮಾಡಿದವು.. ನನಗೆ ಮೋಡಗಳ ಮಧ್ಯೆ ಸೂರ್ಯನನ್ನು ಸೆರೆಹಿಡಿಯುವ ಅಸೆ.. ಮಿಂಚು.. ಗುಡುಗು ಸದ್ದು ಮಾಡುತ್ತಿದ್ದವು.. ನಾ ಕ್ಯಾಮೆರಾ ಚಾಲೂ ಮಾಡಿ.. ಒಂದಷ್ಟು ಫೋಟೋ ತೆಗೆಯುತ್ತಿದ್ದೆ.. ಅಷ್ಟರಲ್ಲಿ.. ಅವಳು ಮನೆಗೆ ಕರೆ ಮಾಡುತ್ತೀನಿ ಎಂದು.. ನಾ ನಿಂತ ಜಾಗದಿಂದ ತುಸು ಮೇಲೆ ಏರಿ .ಮಾತಾಡುತ್ತಿದ್ದಳು.. ಅಚಾನಕ್ ದೊಡ್ಡ ಶಬ್ದ.. ಮಿಂಚು.. ಸಿಡಿಲು.. ಗುಡುಗು.. ಸಿಡಿಲು ಅವಳ ಬಳಿಯೇ ಇದ್ದ ಮರಕ್ಕೆ ಬಡಿಯಿತು.. ಆ ಮರ ಹಾಗೆ ಸುಟ್ಟು ಕರಕಲಾಗಿ ಅವಳ ಮೇಲೆ ಅನಾಮತ್ ಬಿದ್ದೆ ಬಿಟ್ಟಿತು.. "ರೀ" ಅಂತ ಕೂಗಿದ್ದಷ್ಟೇ ಕೇಳಿದ್ದು ನನಗೆ.. ನಾ ಎಡವಿ ಬಿದ್ದೆ.. ಅವಳಿಗೆ ಏನಾಯಿತು ಎಂದು ನನಗೆ ತಿಳಿದದ್ದು ಹದಿನೈದು ದಿನಗಳಾದ ಮೇಲೆ.. ನಮ್ಮನ್ನೆಲ್ಲ ಬಿಟ್ಟು ಹೊರಟೆ ಹೋಗಿದ್ದಳು.. ಆ ಮರ ಅವಳ ಮೇಲೆ ಬಿದ್ದು.. ಅವಳ ಎದೆಗೆ ಬಲವಾದ ಪೆಟ್ಟು ನೀಡಿತ್ತು.. ಆ ನೋವಿಗೆ ಅವಳು ಎರಡು ದಿನ ಒದ್ದಾಡಿ ಕಡೆಗೆ ಇಹಲೋಕದಿಂದ ಹೊರಟು ಬಿಟ್ಟಳಂತೆ... ನಾ ಎಡವಿ ಬಿದ್ದಾಗ.. ನನ್ನ ತಲೆಗೆ ಕಲ್ಲು ಬಡಿದು.. ನಾ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದನಂತೆ.. ಅಲ್ಲಿದ್ದ ಪ್ರವಾಸಿಗರು ನಮ್ಮಿಬ್ಬರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿದರು.. ಮಿಂಚಾಗಿ ವಿಧಿ ಬಂದು ನನ್ನ ಬಾಳಿನ ಬೆಳಕನ್ನೇ ಹೊತ್ತೊಯ್ದಿತ್ತು... ಇದೆ ನನ್ನ ಕಥೆ.. "
ಕೃಪೆ - ಗೂಗಲೇಶ್ವರ 

"ಸಾರಿ ಉಮೇಶ.. ನಿಮ್ಮ ಕತೆಯನ್ನು ಕೇಳಿ.. ನಿಮ್ಮ ಹಳೆಯ ನೆನಪನ್ನು ಮತ್ತೆ ಕೆದಕಿದೆ.. ಸಾರಿ"

ಸಿರಿಯಾ ಕೈಯನ್ನು ಮುಟ್ಟಿ.. "ಛೆ ಹಾಗೇನು ಇಲ್ಲ.. ಜೀವನದಲ್ಲಿ ಇವೆಲ್ಲ ಇದ್ದದ್ದೇ.. ಹುಟ್ಟು ಸಾವು ಬಾಳಿನಲ್ಲಿ  ಎರಡು ಕೊನೆಗಳು ಅಂತ ಅಣ್ಣಾವ್ರು ಹೇಳಿಲ್ಲವೇ.. " ಉಮೇಶ ಪೇಲವವಾಗಿ ನಕ್ಕು ... ವಾತಾವರಣವನ್ನು ತಿಳಿ ಮಾಡಿದ..

"ಉಮೇಶ್ ನನ್ನದು ನಿಮ್ಮಷ್ಟು ದುಃಖಭರಿತ ಅಂತ್ಯವಲ್ಲ.. ನಾ ಮದುವೆಯಾಗಿ ಆರು ವರ್ಷಗಳಾಗಿತ್ತು.. ಸ್ವಲ್ಪ ಬೇಗನೆ
ಮದುವೆಯಾಗಿದ್ದೆ.   ಸುಖಿ ಜೀವನ ನನ್ನದಾಗಿತ್ತು.. ಅವರಿಗೆ ಬೇರೆ ದೇಶದಲ್ಲಿ ಕೆಲಸ ಸಿಕ್ಕಿತ್ತು.. ಅಲ್ಲಿಗೆ ಹೋಗಿ ನೆಲೆಸೋಣ ಅಂದರು.. ನಾ ಬೇಡ...  ನನ್ನ ದೇಶ.. ನನ್ನ ಭಾಷೆ.. ನನ್ನ ನೆಲ. . ನನ್ನ ನಿನ್ನ ತಂದೆ ತಾಯಿ ಎಲ್ಲರನ್ನೂ ಬಿಟ್ಟು.. ಪರದೇಶಕ್ಕೆ ಹೋಗಿ ಅಲ್ಲಿ ಪರದೇಶಿಯಾಗಿ ಬಾಳೋಕ್ಕಿಂತ ಹೀಗೆ ಇಲ್ಲಿಯೇ ಇದ್ದು ಬದುಕೋಣ ಎಂದಾಗ.. ನೀ ಹೇಳೋದು ಸರಿ ಎಂದು ಹೇಳಿದರೂ.. ಅವರ ತಲೆಯೊಳಗೆ ಅದೇ ಓಡುತ್ತಿತ್ತು.. ಒಂದು ದಿನ ಮತ್ತೆ ಇದನ್ನೇ ಹೇಳಿ ಮತ್ತೆ ನಿರ್ಧಾರ ನನ್ನದು ಎನ್ನುವ ಹಂತಕ್ಕೆ ಬಂದರು.. ನಾ ಬೇಡವೆಂದರೂ.. ಕೇಳಲಿಲ್ಲ.. ಒಳ್ಳೆಯ ಸಂಪಾದನೆ ಆಗುತ್ತೆ.. ಜೀವನವನ್ನು ನೆಮ್ಮದಿಯಾಗಿ.. ಜಾಲಿಯಾಗಿ ಕಳೆಯಬಹುದು ಎನ್ನುವ ಉತ್ತರ.. ಇದೆ ವಿಷಯವಾಗಿ ಹಲವಾರು ಬಾರಿ  ಮಾತಾಡಿದರೂ ಬಗೆ ಹರಿಸಲಾಗುತ್ತಿರಲಿಲ್ಲ.. ಕಡೆಗೆ ಒಂದು ದಿನ.. ಅರುಣರಾಗ ಚಿತ್ರದ "ನಾನೊಂದು ತೀರಾ.. ನೀನೊಂದು ತೀರಾ" ಎನ್ನುತ್ತಾ ಹೊರಟೆ ಬಿಟ್ಟರು.. ಆ ಹಾಡು ಹೇಗಿತ್ತು ಅಂದರೆ.. ನಾ ನೊಂದು ತೀರಾ.. ನೀ ನೊಂದು ತೀರಾ.. ಮನಸು ಮನಸು ದೂರ ಎನ್ನುತ್ತಾ ದೂರವಾದೆವು.. ಈಗ ನನ್ನ ಬದುಕು ನನ್ನದು.. ನನ್ನ ಬಾಳು ನನ್ನದು ಎನ್ನುವ ಹಂತಕ್ಕೆ ಬಂದಿದ್ದೇನೆ.. "
ಕೃಪೆ - ಗೂಗಲೇಶ್ವರ 
ಹೀಗೆ ಸಾಗಿತ್ತು. ಇಬ್ಬರ ಬಾಳಿನ ಬಂಡಿಯ ಹಿಂದಿನ ಚಕ್ರದ ಮಾತುಗಳು..

ಹೊಟ್ಟೆ ಹಸಿದಿತ್ತು.. ಹತ್ತಿರದಲ್ಲಿಯೇ ಇದ್ದ ಒಂದು ಈಟಿಂಗ್ ಪಾಯಿಂಟ್ ನಲ್ಲಿ ಮಸಾಲೆ ದೋಸೆ.. ಮತ್ತು ಸೆಟ್ ದೋಸೆ ತಿಂದು.. ಕಾಫಿ ಕುಡಿದು.. ಇಬ್ಬರೂ ಕೈ ಕುಲುಕಿ ಹೊರಟಾಗ ರಾತ್ರಿ ಒಂಭತ್ತಾಗಿತ್ತು..

ಮೂರು ಘಂಟೆಗಳ ಮಾತುಕತೆ ಇಬ್ಬರ ಮನದಲ್ಲಿಯೂ ಹಕ್ಕಿಯನ್ನು ಹಾರಿಸುತ್ತಿತ್ತು.... ಮುಂದೇ .... :-)

Monday, May 21, 2018

ಕಾಡುವ ಹುಬ್ಬಿನ ಹುಡುಗಿ - ಬಲಗಣ್ಣಿನ ಹುಬ್ಬು!

ಸರಿ ಇವತ್ತು ಆಗಿದ್ದಾಗಲಿ.. ಮಾತಾಡಿಸುವ.. ಅಂತ ಬೈಕನ್ನು ಸರಿಯಾಗಿ ನಿಲ್ಲಿಸಿ.. ಕೈಲಿದ್ದ ಬ್ಯಾಗು.. ಹೆಲ್ಮೆಟ್ಟು.. ಎಲ್ಲವನ್ನು ಬೈಕಿಗೆ ಸಿಗಿಸಿ.. ಮೊಬೈಲ್ ಜೋಬಿನಲ್ಲಿಟ್ಟುಕೊಂಡು... ಹಾರಾಡುತ್ತಿದ್ದ ತಲೆಗೂದಲನ್ನು   ಸರಿಪಡಿಸಿಕೊಂಡು... ಕನ್ನಡಕವನ್ನು ಸರಿ ಮಾಡಿಕೊಂಡು ರಸ್ತೆ ದಾಟಲು ಹೆಜ್ಜೆಹಾಕಿದೆ ..

ಆಕೆಯೂ ತನ್ನ ಸ್ಥಳದಿಂದ ರಸ್ತೆ ದಾಟಿ  ಬರಲು ಹೆಜ್ಜೆ ಹಾಕಲು ಶುರು ಮಾಡಿದಳು..

ಢಮಾರ್.. ದಬಕ್.. .. ಜನರೆಲ್ಲಾ ಕೂಗುತ್ತಾ ಓಡಿ ಬರುವ ಸದ್ದು ಕೇಳಿಸಿತು ..

ಮೊದಲ ಭಾಗ ಇಲ್ಲಿದೆ  ಎಡಗಣ್ಣಿನ ಹುಬ್ಬು 

ಬೆಳಗಿನ ಹೊತ್ತು ಪುಟ್ಟ ಜನಗಳ ಜಾತ್ರೆ ಆಗಿತ್ತು.. ನನ್ನ ಕಣ್ಣುಗಳು ಆ ಪುಟ್ಟಿಯನ್ನು ಹುಡುಕುತ್ತಿತ್ತು.. ಆಕೆ ತನ್ನ ಹಾರುತ್ತಿದ್ದ ತಲೆಗೂದಲನ್ನು ಸರಿ ಪಡಿಸಿಕೊಂಡು.. ತನ್ನ ಪುಸ್ತಕಗಳನ್ನ ಹೆಕ್ಕಿಕೊಳ್ಳುತ್ತಿದ್ದಳು.. ಸಮಾಧಾನವಾಯಿತು.. ಜನರ ಮಧ್ಯೆ ನುಗ್ಗಿದವನೇ.. ಏನಾಯಿತು ಎಂದು ನೋಡಿದೆ..

ಒಂದು ಬೈಕಿನಲ್ಲಿ ಮೂವರು ಹೋಗುತ್ತಿದ್ದದ್ದು.. ಮತ್ತು ಅಚಾನಕ್ ಬಲಗಡೆಯಿಂದ ತಮ್ಮ ಮುಂದಿದ್ದ ಆಟೋವನ್ನು ಹಿಂದಿಕ್ಕಲು ಹೋದಾಗ ಅಚಾನಕ್ ಅವರ ಎದುರಿಗೆ ಒಂದು ಟೆಂಪೋ ಟ್ರಾವೆಲ್ಲರ್ ತಿರುವಿನಲ್ಲಿ ತುಸು ಜೋರಾಗಿಯೇ ಬಂದಿತ್ತು.. ಅದನ್ನು ನಿವಾರಿಸಿಕೊಳ್ಳಲು ಬ್ರೇಕ್ ಹಾಕಿದಾಗ.. ಮಳೆಯ ನೀರು.. ಜಾರುತ್ತಿದ್ದ ನೆಲ.. ತಹಬದಿಗೆ ಸಿಗದೇ.. ಟೆಂಪೋ ಟ್ರಾವೆಲ್ಲರಿಗೆ ಡಿಕ್ಕಿ ಡಿಕ್ಕಿ ಹೊಡೆದೇಬಿಟ್ಟರು.. ಮುಂದೆ ಕೂತಿದ್ದವನ ಹೆಲ್ಮೆಟ್ ಹಾರಿ ವಾಹನದ ಗಾಜಿಗೆ ಬಡಿದು.. ಅವನಿಗೆ ಸ್ವಲ್ಪ ತರಚು ಗಾಯವಾಗಿತ್ತು.. ವಾಹನದ ಗಾಜು ಪುಡಿ ಪುಡಿಯಾಗಿತ್ತು..ಇನ್ನಿಬ್ಬರು .. ಒಬ್ಬರ ಮೇಲೆ ಒಬ್ಬರು ಬಿದ್ದು.. ಸ್ವಲ್ಪ ದೂರ ಉಜ್ಜಿಕೊಂಡು ಹೋಗಿದ್ದರು.. ಹತ್ತು ಹದಿನೈದು ಮಂದಿ ಅಲ್ಲಿ ನಿಂತಿದ್ದರೂ. ಮೊಬೈಲಿನಲ್ಲಿ ಫೋಟೋ ತೆಗೆಯುತ್ತಿದರೇ ವಿನಃ. ಸಹಾಯಕ್ಕೆ ಯಾರೂ ಧಾವಿಸಿರಲಿಲ್ಲ..

ನಾ ಬಿದ್ದಿದ್ದ ಬೈಕ್ ಎತ್ತಿ ಪಕ್ಕಕ್ಕೆ ಇಟ್ಟು . ಅಲ್ಲಿ ಬಿದ್ದಿದ್ದ ಬ್ಯಾಗು ಹೆಲ್ಮೆಟ್ಟು ಪಕ್ಕಕ್ಕೆ ಇಟ್ಟೆ .. ಅಷ್ಟರಲ್ಲಿ ಆ ಹುಡುಗಿ ತನ್ನ ಬ್ಯಾಗಿನಿಂದ ನೀರಿನ ಬಾಟಲು ತೆಗೆದು ಒಬ್ಬನಿಗೆ ಕೊಟ್ಟಳು.. ನಾ ಇಬ್ಬರೂ ಉಜ್ಜಿಕೊಂಡು ಹೋಗಿದ್ದರಲ್ಲ ಅವರನ್ನು ಇನ್ನಿಬ್ಬರ ಸಹಾಯದಿಂದ ಫುಟ್ಪಾತ್ ಪಕ್ಕಕ್ಕೆ ಕೂರಿಸಿದೆ..

ಒಬ್ಬನಿಗೆ ತೀವ್ರವಾಗಿ ಗಾಯವಾಗಿತ್ತು.. ಅವನ ಕೈಯಿಂದ ರಕ್ತ ಸುರಿಯುತ್ತಿತ್ತು.. ನೀರು ನೀರು ಎನ್ನುತ್ತಿದ್ದ.. ನಾ ಪುಟ್ಟಿ ಸ್ವಲ್ಪ ನೀರು ಕೊಡಿ ಪ್ಲೀಸ್ ಅಂದೇ.. ಅವಳು ಒಂದು ಕ್ಷಣ ಆಶ್ಚರ್ಯದಿಂದ ನೋಡಿ.. ಬಾಟಲ್ ಕೊಟ್ಟಳು.. ಅವನಿಗೆ ಕುಡಿಸಿ.. ಇನ್ನೊಬ್ಬನನ್ನು ಮಾತಾಡಿಸಿದೆ.. ಯಾರಿಗೂ ಪ್ರಾಣಹಾನಿಯಾಗುವ ಮಟ್ಟಿಗೆ ಪೆಟ್ಟಾಗಿರಲಿಲ್ಲ.. ಮಿಕ್ಕವರ ಸಹಾಯ ಹಸ್ತದಿಂದ ಮೂವರನ್ನು ಒಂದು ಆಟೋದಲ್ಲಿ ಹತ್ತಿರದಲ್ಲಿಯೇ ಇದ್ದ ಆಸ್ಪತ್ರೆಗೆ ಕರೆದುಕೊಂಡು ಹೋದೆವು..

ಲಗುಬಗೆಯಿಂದ.. ಆಸ್ಪತ್ರೆಯ ಒಳಗೆ ಓಡಿಹೋಗಿ.. ಸ್ಟ್ರೆಚರ್ ಜೊತೆ ಆಸ್ಪತ್ರೆಯ ಸಿಬ್ಬಂದಿಯನ್ನು ಕರೆದು ತಂದಳು.. ಮೂವರು ಒಳಗೆ ಹೋದ ಮೇಲೆ.. ಅಲ್ಲಿದ್ದ ಸ್ವಾಗತ ಕಾರಿಣಿಗೆ ನೆಡೆದ ವಿಷಯ ಹೇಳಿ.. ಆ ಮೂವರು ಮಾತಾಡುವ ಸ್ಥಿತಿಯಲ್ಲಿ ಇದ್ದುದರಿಂದ.. ಅವರ ಮೊಬೈಲಿನಲ್ಲಿ ಮನೆಗೆ ಕರೆ ಮಾಡಿ ಹೇಳಿದ್ದರು..

ಟೆಂಪೋ ಟ್ರಾವೆಲಿನ ಚಾಲಕ.. "ಸರ್ ನನ್ನದೇನೂ ತಪ್ಪಿಲ್ಲ ಸರ್.. ಅವರ ಬೈಕ್ ಅಚಾನಕ್ ಬಲಗಡೆಯಿಂದ ನುಗ್ಗಿಬಂದರು.. ನಾ ತಕ್ಷಣ ಬ್ರೇಕ್ ಹಾಕಿಲ್ಲ ಅಂದಿದ್ದರೇ.. ಇನ್ನೂ ದೊಡ್ಡ ಮಟ್ಟದ ಅಪಘಾತವಾಗುತ್ತಿತ್ತು.. ಸರ್ ."

"ಇರಲಿ ಬಿಡಪ್ಪ ದೇವರು ದೊಡ್ಡವನು.. ಗಾಜಿನ ಪುಡಿ ನಿನಗೆ ಹಾರಿಲ್ಲ ತಾನೇ.. ಏನೂ ತೊಂದರೆ ಆಗಿಲ್ಲ ತಾನೇ?"

"ಇಲ್ಲ ಸರ್.. ಚಳಿ ಅಂತ ಮಫ್ಲರ್ ಕಟ್ಟಿಕೊಂಡಿದ್ದೆ. ಕನ್ನಡಕ ಹಾಕಿದ್ದೆ.. ನನ್ನ ಗಾಡಿಯಲ್ಲಿ ಯಾರೂ ಇರಲಿಲ್ಲ.. ದೇವರು ದೊಡ್ಡವನು ಸರ್.. ಇಷ್ಟರಲ್ಲಿ ಎಲ್ಲಾ ಮುಗಿಯಿತು. ಗಾಜೊಂದು ಹಾಕಿಸಬೇಕು.. ಮೊದಲು ಅವರು ಗುಣವಾಗಲಿ.. ಆಮೇಲೆ ಇನ್ಶೂರೆನ್ಸ್ ಜೊತೆ ಮಾತಾಡಿ ಹಾಕಿಸಬಹುದು.. ನನ್ನ ಯಜಮಾನರು ಅದೇ ಹೇಳಿದರು.. ಅವರ ಹತ್ತಿರ ಇನ್ಶೂರೆನ್ಸ್ ಡೀಟೇಲ್ಸ್ ತಗೊಂಡು.. ಹೊರಡು.. ಅಂತ.."

"ಸರೀ.. ಹೋಗಿ ಬನ್ನಿ ದೇವರು ಒಳ್ಳೆಯದನ್ನೇ ಮಾಡ್ತಾನೆ".

ನಮಸ್ಕಾರ ಹೊಡೆದು.. ಚಾಲಕ ಹೊರಟ.. ಸ್ವಾಗತ ಕಾರಿಣಿಗೆ ವಂದನೆ ಹೇಳಿ. . ನಾ ಹೊರಗೆ ಬಂದೆ..

"ಅಣ್ಣ ಅಣ್ಣ"  ಎಂದು ಕೂಗಿತು ಒಂದು ಕೋಗಿಲೆ ಧ್ವನಿ..

ಅಷ್ಟೊತ್ತು.. ಮರೆತೇ ಬಿಟ್ಟಿದ್ದೆ.. ಮತ್ತೆ ಮನದಲ್ಲಿ ಹಾಡತೊಡಗಿತು.. "ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ" 

"ಅಣ್ಣ.. ತುಂಬಾ ಥ್ಯಾಂಕ್ಸ್ ಅಣ್ಣ.... ಯಾರದು ತಪ್ಪು ಯಾರದು ಸರಿ ಅಂತ ಹೊಡೆದಾಡದೆ.. ಒಂದು ಪುಟ್ಟ ಅಪಘಾತ.. ಆದರೆ ಎಲ್ಲವೂ ತಿಳಿಯಾಗಿ ಬಗೆ ಹರಿಯಿತು.. ಆ ಮೂವರನ್ನು ಮಾತಾಡಿಸಿಬಂದೆ.. ಆರಾಮಾಗಿದ್ದಾರೆ.. ತೊಂದರೆ ಏನೂ ಇಲ್ಲ ಅಂತ ಡಾಕ್ಟರ್ ಹೇಳಿದರು.. ನೀವು ಮಾತಾಡಿಸುತ್ತಿದ್ದ ಆ ಚಾಲಕ ಕೂಡ ನನಗೆ ಗೊತ್ತಿದ್ದವನೇ.. ಆವ ಹೋಗುವಾಗ.. ಎಷ್ಟು ಚೆನ್ನಾಗಿ ಮಾತಾಡ್ತಾರೆ ಅಂತ ನಿಮ್ಮನ್ನು ಹೊಗಳಿ ಹೋದ.. ಅದು ಸರಿ.. ಒಂದು ಪ್ರಶ್ನೆ.. ಅಣ್ಣ"

"ಕೇಳಿ ಪುಟ್ಟಿ"

"ಅದೇನು ಅಚಾನಕ್ ಪುಟ್ಟಿ ಅಂತ ನನ್ನ ಕರೆದಿರಲ್ಲ... ಒಮ್ಮೆಲೇ ಆಶ್ಚರ್ಯ ಆಯಿತು.. ನನ್ನನ್ನು ಇದುವರೆಗೂ ಯಾರೂ ಪುಟ್ಟಿ ಅಂತ ಕರೆದಿಲ್ಲ.. ನೀವೇ ಫಸ್ಟ್ ಹಾಗೆ ಕರೆದದ್ದು.. "

"ಫ್ರೀ ಇದ್ದೀರಾ?.. ಫ್ರೀ ಇದ್ರೆ!.. ಹೋಟೆಲಿನಲ್ಲಿ ಕಾಫಿ ಕುಡಿದು.. ಮಾತಾಡಬಹುದು.. "

"ಕಾಲೇಜಿಗೆ ಹೋಗಬೇಕಿತ್ತು.. ಆದರೆ ಆ ಆಕ್ಸಿಡೆಂಟ್.. ಹೋಗಲಿ ಬಿಡಿ.. ಇವತ್ತು ನನಗೆ ಅಣ್ಣ ಸಿಕ್ಕಿದ ಖುಷಿಯಲ್ಲಿ ಕಾಲೇಜಿಗೆ ಚಕ್ಕರ್.. ನೆಡೆಯಿರಿ ಹೋಗೋಣ.. "

ಹತ್ತಿರದಲ್ಲಿಯೇ ಇದ್ದ ಹೋಟೆಲಿಗೆ ಹೋಗಿ ಇಬ್ಬರೂ ಕಾಫಿ ಕುಡಿಯುತ್ತಾ ನಾ ರಾಜಕುಮಾರ ಕಥೆ ಹೇಳಿದೆ.. ಮತ್ತು ಪುಟ್ಟಿ ಎನ್ನುವ ಪದ ಹುಟ್ಟಿದ ಘಟನೆ ಹೇಳಿದೆ..

ಫುಲ್ ಖುಷಿ ಆಗಿಬಿಟ್ಟಳು.. "ಬ್ರೋ ನನ್ನ ಹೆಸರು ಸುನೀತಾ.. ನಿಮ್ಮ ಹೆಸರು ಕೇಳಬಹುದೇ?"

"ನಾ ಶ್ರೀಕಾಂತ್ ಮಂಜುನಾಥ್"

"ಓಹ್ ಶ್ರೀ ಅಣ್ಣ.. ಇನ್ಮೇಲೆ ಶ್ರೀ ಬ್ರೋ ಅಂತೀನಿ" 

ನಾ ಜೋರಾಗಿ ನಗಲು ಶುರು ಮಾಡಿದೆ..

"ಯಾಕೆ ಬ್ರೋ.. ಚೆನ್ನಾಗಿಲ್ವ?"

"ಸೂಪರ್ ಇದೆ.. ನಿನ್ನನ್ನು ನೋಡಲು ಶುರು ಮಾಡಿದ್ದೆ ರಾಜಕುಮಾರ ಚಿತ್ರದ ನಾಯಕಿ ಇದ್ದ ಹಾಗೆ ಇದ್ದೀಯ ಮತ್ತೆ.. ನಿನ್ನ ಐ ಬ್ರೋ ಚೆನ್ನಾಗಿದೆ ಅಂತ.. ನೀನು ಬ್ರೋ ಅಂದಾಗ ಅದು ನೆನಪಿಗೆ ಬಂದು. .ಮನದಲ್ಲಿ ಹೇಳಿತು. ಸರಿಯಾಗಿದ್ದೀರಾ ಇಬ್ಬರೂ ಅಂತ ಅದಕ್ಕೆ ನಗು ಬಂತು.. "

ಕ್ಯಾಶ್ ಕೌಂಟರಿನಲ್ಲಿ ಹಾಕಿದ್ದ ರೇಡಿಯೋ "ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ" ಹಾಡು ಶುರುವಾಯಿತು.. ಇಬ್ಬರೂ ನಗುತ್ತಾ ಕೈಬೀಸಿ ಹೊರಟೆವು..