Thursday, July 26, 2012

ಪುಸ್ತಕದ ಮನೆ ಪರಿಚಯ...ದೂರದರ್ಶನ ಚಂದನದಲ್ಲಿ ಬಿತ್ತರವಾಯಿತು.


ಇಂದು ಮುಂಜಾನೆ ಕಛೇರಿಗೆ ಹೋಗುವ ತರಾತುರಿಯಲ್ಲಿದ್ದೆ.....(೨೬.೦೭.೨೦೧೨ ಬೆಳಿಗ್ಗೆ ೭.೦೦ - ೭.೩೦)

ಅವಸರ ಅವಸರವಾಗಿ ಹೊರಡುವ ತಯಾರಿ ನಡೆದಿತ್ತು...

ಹಿಂದಿನ ರಾತ್ರಿ ಒಂದು ಸಮಾರಂಭಕ್ಕೆ ಹೋಗಿ ಬಂದಿದ್ದು ರಾತ್ರಿ ಹನ್ನೆರಡಾಗಿತ್ತು..ಹಾಗಾಗಿ ಬೆಳಿಗ್ಗೆ ಎದ್ದದ್ದು ತಡವಾಗಿ ಕಛೇರಿಯ
ವಾಹನ ತಪ್ಪಿಸಿಕೊಂಡಿದ್ದರಿಂದ..ಹೊರಡುವ ಆತುರ ಇನ್ನು ಹೆಚ್ಚಿತ್ತು..

ಅಷ್ಟರಲ್ಲಿ..."ಅಪ್ಪಾಆಆಆ...ಅಪ್ಪಾಆಆಆಆಆಆ" ಮಗಳು ಕೂಗಿದಳು (ಕಿರುಚಿದಳು ಅಂದ್ರು ಪರವಾಗಿಲ್ಲ)
"ಏನು ಪಾಪ?"..ಅಂತ ಸಿದ್ದವಾಗುತ್ತ ಆ ಎಳೇ ಸ್ವರಕ್ಕೆ ಪೈಪೋಟಿಯಾಗಿ  ಕರ್ಕಶವಾಗಿಯೇ ನಾನು ಕಿರುಚಿದೆ..ಹೊರಡುವ

ಆತುರ... ಸಮಯ ಕಳೆದಂತೆ.... ಬಂಗಾರದ ದರದಂತೆ ಏರುತಿತ್ತು...

"ಅಪ್ಪ..ನಾವು ಬಸ್ಸಿನಲ್ಲಿ ಪುಸ್ತಕ ನೋಡೋಕೆ ಹೋಗಿದ್ದೆವಲ್ಲ ಅದು ಬರ್ತಾ ಇದೆ..."

ನನಗೆ ಅರ್ಥ ಆಗ್ಲಿಲ್ಲ..ಯಾವುದೋ  ಅರ್ಥವಾಗದ ಭಾಷೆಯ ಚಿತ್ರಗೀತೆ ಕೇಳಿದಂತೆ ಭಾಸವಾಯಿತು..

"ಯಾವುದು ಪಾಪ...?"

ಅಷ್ಟರಲ್ಲಿ..ನನ್ನ ಮುದ್ದಿನ (?) ಮಡದಿ.."ರೀ..ಬಾಲು ಸರ್, ಪ್ರಕಾಶ ಹೆಗ್ಗಡೆ ಅವರ ಜೊತೆ ಹೋಗಿದ್ದೆವಲ್ಲ.....ಅಂಕೆ ಗೌಡರ ಬಗ್ಗೆ ಟಿ.ವಿ. ಲಿ ಬರ್ತಾ ಇದೆ..."

ಭರದಿಂದ ಟಿ.ವಿ. ಮುಂದೆ ನಿಂತೇ...
ದೂರದರ್ಶನ ಚಂದನ ವಾಹಿನಿಯಲ್ಲಿ ಶ್ರೀ.ಅಂಕೆ ಗೌಡರ ಸಂದರ್ಶನ  ಬಿತ್ತರ ಆಗ್ತಾ ಇತ್ತು...
ನನ್ನ ವ್ಯಾವಹಾರಿಕ ಪ್ರಪಂಚದಿಂದ ಹೊರಗೆ ಬಂದು..ಅದರಲ್ಲೇ ಲೀನವಾದೆ..ಸುಮಾರು ಅರ್ಧ ಘಂಟೆ ಕಾರ್ಯಕ್ರಮ..ಸಮಯವಿರಲಿಲ್ಲ..ಆದ್ರೆ ಮನಸು ಬಿಡಲಿಲ್ಲ..

ಅರೆ..ನಾವು ನೋಡಿದ, ಓಡಾಡಿದ ಸ್ಥಳದ ಬಗ್ಗೆ ಎಲ್ಲಿಯಾದರೂ ನೋಡಿದರೆ..ಒಂದು ಹಿರಿಮೆ, ಗರಿಮೆ ಮನದಲ್ಲಿ ಮೂಡುತ್ತದೆ..ಆ ಭಾವ..ಬೇರೆ ಪರಿವೆಯನ್ನು ಬರಗೊಡದೆ...ತಡೆಯುತ್ತದೆ..

ಸಂದರ್ಶನ ಮುಗಿದಾಗ ಮನಸಿಗೆ ಸಂತೋಷ ವಾಯಿತು..ಮಕ್ಕಳಿಗೆ ಈ ಮಹಾನುಭಾವರ ಸಾಧನೆ, ಶ್ರಮ ತಲುಪುತ್ತಿದೆ ಅಂದ್ರೆ..ಅದು ಒಂದು ಮೆಟ್ಟಿಲಿನ ಗೆಲುವು ಅನ್ನಿಸಿತು....

ಬಹಳ ಉಪಯುಕ್ತ ಸಂದರ್ಶನ...ಅವರ ಪುಸ್ತಕದ ಮನೆ ಬೆಳಕಿಗೆ ಬರುತಿದೆ ಅನ್ನುವದಕಿಂತ..ಅದು ಅವಾಗಿನಿಂದಲೂ ಇತ್ತು...ನಮಗೆ ಅವರ ಬಗ್ಗೆ ಇತ್ತೀಚಿಗೆ ತಿಳಿದುದರಿಂದ..ನಮ್ಮ ಆಸಕ್ತಿ ಅಲ್ಲಿಗೆ ಸೆಳೆಯುತ್ತದ ಎನ್ನುವುದು ಸತ್ಯ...ಮಾಮೂಲಿ ದಿನದಲ್ಲಿ ಅಯ್ಯೋ ಬಿಡು ಅದೊಂದು ತಲೆನೋವಿನ ಸಂದರ್ಶನ ಎಂದು ಬೇರೆ ಚಾನೆಲ್ ಹಾಕುವ ಪ್ರವೃತ್ತಿಯಿಂದ..ಅರೆ..ನಾವು ಇದನ್ನ ನೋಡಿದ್ದೇವೆ..ಪೂರ ಸಂದರ್ಶನ ನೋಡಿಯೇ ಬಿಡೋಣ ಅನ್ನುವ ಮನಸ್ಥಿತಿ ತಲುಪಿದ್ದಕ್ಕೆ ಕಾರಣ..ಅಲ್ಲಿಗೆ ಭೇಟಿ ನೀಡಿದ್ದರಿಂದ ಅಲ್ಲವೇ...

ಸಂದರ್ಶನದಲ್ಲಿ ಬಹಳ ಅಚ್ಚುಕಟ್ಟಾಗಿ ಮಾತಾಡಿದರು ಶ್ರೀಮಾನ್ ಅಂಕೆ ಗೌಡರು..ಸಮಯದ ಪರಿಮಿತಿ ಅವರ ಉತ್ಸಾಹಕ್ಕೆ ತಡೆಯೊಡ್ದುತಿತ್ತು  ...ಅವರ ಅಗಾಧ ಹುಮ್ಮಸ್ಸು, ಮತ್ತು ತನ್ನ ಪುಸ್ತಕದ ಮನೆ ನಾಡಿನ ಮೂಲೆ ಮೂಲೆಗೂ ತಲುಪಬೇಕು..ಎಲ್ಲರಿಗೂ ಸಹಾಯವಾಗಬೇಕು ಅನ್ನುವ ಕಳಕಳಿ, ತವಕ ಅವರ ಮಾತಿನಲ್ಲಿ ಗೋಚರವಾಗುತಿತ್ತು..

ಇಂತಹ ಅಮೋಘ ಸ್ಥಳಕ್ಕೆ  ನನ್ನನ್ನು ಪರಿಚಯಿಸಿದ ಬಾಲು ಸರ್, ಪ್ರಕಾಶ್ ಹೆಗ್ಗಡೆ ಮತ್ತು ಬ್ಲಾಗಿಗರ ಗುಂಪು..ಎಲ್ಲರಿಗೂ ನನ್ನ ಅನಂತಾನಂತ ವಂದನೆಗಳು...

Sunday, July 15, 2012

ನನ್ನ ಸೋದರತ್ತೆ ಗೌರಿ ಅತ್ತೆಯಾ ಒಂದು ವರ್ಷದ ನೆನಪು


ಶ್ರೀಕಾಂತ...ಈಗ ನೀನು ನೋಡಬಹುದು...!!!!

ಯಾರದು ಈ ಧ್ವನಿ ಎಂದು ತಿರುಗಿ ನೋಡಿದಾಗ..ನಾಗರಾಜ ಚಿಕ್ಕಪ್ಪ..ಹೇಳಿದ ಮಾತಿದು...

ಹಾಗೆ ತಲೆ ಎತ್ತಿ ಗೌರಿ ಅತ್ತೆ ಫೋಟೋ ನೋಡಿದೆ...ಚಿಕ್ಕಪ್ಪ ಹೇಳಿದ್ದು ನಿಜ ಎನ್ನಿಸಿತು..

ಗೌರಿ ಅತ್ತೆ ಅವರ ಭಾವ ಚಿತ್ರದ ಮುಖೇನ ಹೇಳಿದ ಮಾತು ಹಾಗೆ ತೇಲಿ ಬಂತು...

ಕೋರವಂಗಲದ ಎಲ್ಲ ಸದಸ್ಯರಿಗೂ ನನ್ನ ಆಶೀರ್ವಾದಗಳು...
ನಾನು ಇಂದು ನಿಮ್ಮನ್ನು ಅಗಲಿ ಸರಿ ಸುಮಾರು ಒಂದು ವರುಷ ಆಯಿತು...
ನನ್ನನ್ನು ಪ್ರೀತಿಸುವ ಕೆಲ ಹೃದಯಗಳಿಂದ..ನನ್ನ ಕಾರ್ಯಗಳು ನಿರ್ವಿಘ್ನವಾಗಿ ನೆರವೇರಿತು...
ನನ್ನ ಅಪ್ಪ, ಅಮ್ಮ, ನನ್ನ ಯಜಮಾನರು, ನನ್ನ ಮಗಳು, ಅಳಿಯ, ತಂಗಿಯ ಗಂಡ, ಇಬ್ಬರು ತಮ್ಮಂದಿರು ಇವರೆನಲ್ಲ ಸೇರುತಿದ್ದೇನೆ ಎಂದು ಒಂದು ಕಡೆ ಸಂತೋಷ..

ಇನ್ನೊಂದು ಕಡೆ ನಿಮ್ಮನೆಲ್ಲ ಬಿಟ್ಟು ಬಂದೆನಲ್ಲ ಇನ್ನು ಭಾರವಾದ ಮನಸು..ಏನು ಮಾಡುವುದು..
ಜಾತಸ್ಯ ಮರಣ ಧ್ರುವಂ...
ಹುಟ್ಟಿದವರು ಒಂದು ದಿನ ಹೋಗಲೇಬೇಕು..ಹೋದವರು ತಿರುಗಿ ಬರಲೇ ಬೇಕು...

ಕಾರ್ಯಕರಮವು ಅಚ್ಚುಕಟ್ಟಾಗಿ ನೆರವೇರಿತು...
ನನ್ನ ತಮ್ಮಂದಿರು, ಅವರ ಪತ್ನಿಯರು, ಅವರ ಮಕ್ಕಳು ಬಂದಿದ್ದು ಬಹಳ ಖುಷಿಯಾಯಿತು...
ನಿಮ್ಮೆಲ್ಲರ ಅಭಿಮಾನಕ್ಕೆ ನನ್ನ ಆಶೀರ್ವಾದಗಳು...
ಇನ್ನೇನು ಕೆಲ ತಿಂಗಳಲ್ಲಿ ಮಂಜಣ್ಣ ಬರುತ್ತಿದ್ದಾನೆ ಎನ್ನುವ ವಿಷಯ ತಿಳಿದು ದುಃಖವಾಯಿತು..

ನಿಮ್ಮೆಲ್ಲರಿಗೂ ನನ್ನ ಆಶೀರ್ವಾದಗಳು..ಜೀವನದಲ್ಲಿ ನೀವು ಕಾಣುವ ಕನಸುಗಳು, ಇಟ್ಟುಕೊಂಡಿರುವ ಗುರಿ ಎಲ್ಲವು ನೆರವೇರಲಿ ಎಂದು ಆಶಿಸುತ್ತೇನೆ..ಹಾಗು ಹಾರೈಸುತ್ತೇನೆ...ಮತ್ತೆ ಬರುತ್ತೇನೆ...

ಇಂತಿ ನಿಮ್ಮ ಗೌರಿ ಅಕ್ಕ (ಅತ್ತೆ, ಅಜ್ಜಿ, ಅತ್ತಿಗೆ, ಹೀಗೆ ನೂರಾರು ಭಾವನೆ ಬೆಸೆಯುವ ಬಾಂಧವ್ಯಗಳು)

Wednesday, July 4, 2012

"ಅರಳಿ"ದ ಎಲೆ ಪಾಠ

ಧಾರ್ಮಿಕ ದೃಷ್ಟಿಯಿಂದ ತ್ರಿಮೂರ್ತಿಗಳ ವಾಸಸ್ಥಾನ ಈ ಅರಳಿ ಮರ..

"ಮೂಲತೋ ಬ್ರಹ್ಮ ರೂಪಾಯ, ಮಧ್ಯತೋ ವಿಷ್ಣು ರುಪಿಣೆ, ಅಗ್ರತಃ 
ಶಿವರೂಪಾಯ ವೃಕ್ಷರಾಜಾಯತೇ ನಮಃ" 

ಅದರ ಎಲೆಗಳು  ಒಂದಕ್ಕೊಂದು ಅಂಟಿಕೊಂಡಿರುವುದಿಲ್ಲ..ಪ್ರತಿ ಎಲೆಯಲ್ಲೂ ಕೂಡ ಅದರ ಸರಕು ಸಾಗಣೆಯ ದಾರಿಯನ್ನು ನೋಡಬಹುದು...ಎಲ್ಲ ಸಸ್ಯದ ಎಲೆಗಳಲ್ಲು ಇದು ಇರುತ್ತದಾದರೂ ಅರಳಿ ಎಲೆ ತನ್ನದೇ ಒಂದು ವಿಶಿಷ್ಟ ಪಾಠವನ್ನು ಸಾರುತ್ತದೆ..
ಎಲೆಯು  ಆರಂಭದಲ್ಲಿ  ಹಾಗೂ ಅಂತ್ಯದಲ್ಲಿ  ಸಣ್ಣದಾಗಿರುತ್ತದೆ...ಮಧ್ಯೆ ನೇರವಾದ ಸಣ್ಣ ಹಾದಿ ...ಅದರ ಎಡ ಬಲದಲ್ಲಿ ನೂರಾರು ಕವಲುಗಳು..ಆ ಕವಲುಗಳು ಮತ್ತೆ ಮತ್ತೆ ಒಡೆದು ಅನೇಕ ಕವಲುಗಳು..ಹೀಗೆಯೇ ಸಾಗುತ್ತದೆ..ಅಂಚಿಗೆ ಬರುತ್ತಾ ಬರುತ್ತಾ...ಅದರ ಹಾದಿ ಇನ್ನೂ ಕಡಿದಾಗುತ್ತ ಸಾಗುತ್ತದೆ...ಕಡೆಗೆ ಬಿಂದುವಾಗಿ ನಿಲ್ಲುತದೆ..ಅದು ಅದರ ಗುರಿ..

ನಾವು ಕೂಡ ಪ್ರತಿ ದಿನ ಪ್ರತಿ ಕ್ಷಣ ನೂರಾರು ಮಂದಿಯನ್ನು ಭೇಟಿ ಮಾಡುತ್ತೇವೆ, ಪ್ರತಿ ಒಬ್ಬರದು ವಿಭಿನ್ನ ಹಾದಿ, ವಿಭಿನ್ನ ಜೀವನ, ವಿಭಿನ್ನ ಗುರಿ..ಅಡೆತಡೆಗಳನ್ನು ದಾಟಿ ಬಂದ ಮೇಲೆ ಮಾತ್ರ ಗುರಿ ನಮ್ಮನ್ನ ಅಲಂಗಿಸಿಕೊಳ್ಳುತ್ತೆ

ನಾವು ಹಾಗೆಯೇ..ಒಂದು ಸಣ್ಣ ಎಳೆ ಹಿಡಿದು ನಮ್ಮ ಕೆಲಸ ಶುರು ಮಾಡುತ್ತೇವೆ..ನಮ್ಮ ಗುರಿ ಕೂಡ ದೊಡ್ಡದೇ  ಇದ್ದರೂ  ಕೂಡ  ಅದು ದೂರದಿಂದ ಒಂದು ಸಣ್ಣ ಬಿಂದುವಾಗಿರುತ್ತದೆ..ಹಾದಿ ಕಠಿಣ, ದುರ್ಗಮ, ಕಡಿದು ಇರುತ್ತದೆ. ಅದರ ಉದ್ದಕ್ಕೂ..ನೂರಾರು ಅಡ-ತಡೆಗಳು, ಕವಲೊಡೆದ ಭಾವನೆಗಳು, ಸಾಗುವ ಆಸೆ ಆಕಾಂಕ್ಷೆಗಳು..

ಆದರೆ ಇವುಗಳು ನಮ್ಮನ್ನು  ಧೃತಿಗೆಡಿಸಬಾರದು..ನಾವು ನಂಬಿರುವ ಮೌಲ್ಯ, ನಂಬಿಕೆ ಹಾಗೂ ಛಲ ಇವನ್ನು ಹಿಡಿದು ಸಾಗಿದಾಗ ಮಾತ್ರ ಗುರಿ ನಮ್ಮ ಕಣ್ಣ ಮುಂದೆಯೇ ಇರುತ್ತದೆ...ಹಾಗು ಕಣ್ಣು ಮಿಟುಕಿಸಿ ಸಂತಸ ಪಡುತ್ತದೆ..

Saturday, June 30, 2012

ನಮ್ಮ ಅಜ್ಜಯ್ಯ - ಸ್ಮರಣೆ - ೨೫ ವಸಂತಗಳು


ಬೆಳ್ಳಿ, ರಜತ ಇವೆಲ್ಲ ಕೆಲವು ಸುಂದರ ಪದಗಳು...

ಬಿಳಿ ಲೋಹದ ಹೆಸರನ್ನು, ೨೫ ವಸಂತಗಳನ್ನು ಸೂಚಿಸುತ್ತದೆ...

ಹಾಗೆಯೇ ನಾಳೆಗೆ  (೦೧.೦೭.೨೦೧೨) ನಮ್ಮ ಪ್ರೀತಿಯ ಅಜ್ಜಯ್ಯ ಅವರ ಪತ್ನಿ, ಪಿತ, ಪಿತಾಮಹರನ್ನು ಭೇಟಿ ಮಾಡಲು ನಮ್ಮನ್ನಗಲಿ.....ಇಹಲೋಕವನ್ನು ಬಿಟ್ಟು ೨೫ ವಸಂತಗಳೇ  ಕಳೆದವು .

ಇದು ಸಂಭ್ರಮ ಪಡುವ ದಿನವಲ್ಲ...ಆದರೆ ಅಂತಹ ಹಿರಿಯರು, ಮಾರ್ಗದರ್ಶಿಗಳು ಹಾಕಿ ಕೊಟ್ಟ ಮೇಲ್ಪಂಕ್ತಿಯಲ್ಲಿ ನಡೆಯಲು ನಾವು ಮಾಡುವ ಒಂದು ಸಣ್ಣ ಪ್ರಯತ್ನ ಅವರ ಶ್ರಮವನ್ನು ಸಾರ್ಥಕಪಡಿಸುತ್ತೆ....ಅಂತಹ ಒಂದು ಪ್ರಯತ್ನವನ್ನು ನೆನಪು ಮಾಡಿಕೊಳ್ಳುವ ಒಂದು ಚಿಕ್ಕ ಯತ್ನ ಈ ಬರಹ..!!!

ನಮ್ಮ ಅಜ್ಜಯ್ಯ "ಕೋರವಂಗಲದ  ವೆಂಕಟಕೃಷ್ಣಯ್ಯ ರಂಗಸ್ವಾಮಿ"ಯವರು (ಕೆ.ವಿ. ರಂಗಸ್ವಾಮಿ)  ವೃತ್ತಿಯಲ್ಲಿ ಶಾನುಭೋಗರು.  

ಒಂದೇ ಮಾತಲ್ಲಿ ಅವರ ಪ್ರತಿಭೆಯ ಬಗ್ಗೆ ಹೇಳುವುದಾದರೆ 
ಆ ದಿನಗಳಲ್ಲಿ ತಾಲೂಕು ಕಛೇರಿಗಳಲ್ಲಿ ಹೇಳುತಿದ್ದ ಮಾತು  
"ಓಹ್ ರಂಗಸ್ವಾಮಿಗಳು ತಯಾರು ಮಾಡಿದ ಪತ್ರವೇ...ಅದನ್ನ ಮತ್ತೆ ನೋಡುವ ಪ್ರಶ್ನೆಯೇ ಇಲ್ಲ...ಎಲ್ಲ ಸರಿಯಾಗುತ್ತದೆ..ಅಧಿಕಾರಿಗಳಿಗೆ ಕಳಿಸಿ" 

ಅಷ್ಟು ಕರಾರುವಾಕ್ ಭಾಷೆ, ತಪ್ಪಿಲ್ಲದ ಸುಂದರ ಬರವಣಿಗೆ, ನಿಖರ ಮಾಹಿತಿ...ನಮ್ಮ ಅಜ್ಜಯ್ಯನದು..

ಅವರ ಜೀವನದಲ್ಲಿ ಬಲಗಾಲಿಟ್ಟು ಬಂದ ನಮ್ಮ ಅಜ್ಜಿ ಸುಬ್ಬನರಸಮ್ಮ  ಪತಿಗೆ ತಕ್ಕ ಪತ್ನಿಯಾಗಿ ಮನೆ ಮನ ತುಂಬಿದವರು.
ಅಜ್ಜಿ-ಅಜ್ಜ್ಯನವರ ಚಿತ್ರ
ಎಂಟು ಮಕ್ಕಳ ತುಂಬು ಸಂಸಾರವನ್ನು ಹಾಸನ ಜಿಲ್ಲೆಯ ಬಳಿ ಇರುವ ಕೋರವಂಗಲದ ಗ್ರಾಮದಲ್ಲಿ ಜೀವನ ಶುರುಮಾಡಿದರು...

ಕೋರವಂಗಲ ಗ್ರಾಮದ ಹೆಬ್ಬಾಗಿಲು

ಕೋರವಂಗಲ ಗ್ರಾಮದ ಪ್ರಮುಖರು

ಅಜ್ಜಯ್ಯನ ಮನೆ ಇದ್ದ ಸ್ಥಳ 

ಸುಂದರ ಬುಚೇಶ್ವರ  ದೇವಸ್ಥಾನ...ಒಂದು ಅದ್ಬುತ ಹೊಯ್ಸಳ ಕಲಾಕೃತಿ 

ಸುಂದರ ಬುಚೇಶ್ವರ  ದೇವಸ್ಥಾನ...ಒಂದು ಅದ್ಬುತ ಹೊಯ್ಸಳ ಕಲಾಕೃತಿ 

ಗ್ರಾಮಕ್ಕೆ ಹತ್ತಿರ ಹಾ ದು  ಹೋಗಿರುವ ರೈಲ್ವೆ ರಸ್ತೆ 
ಕಾಲ ಕ್ರಮೇಣ ಕಾರಣಾಂತರಗಳಿಂದ ಹಾಸನಕ್ಕೆ ವಲಸೆ ಬಂದು ಜೀವನ ಶುರು ಮಾಡಿದರು..

ಅವರ ಹಾರೈಕೆ, ಆಶಿರ್ವಾದಗಳಿಂದ ಮಕ್ಕಳು, ಮೊಮ್ಮಕ್ಕಳು ಎಲ್ಲರೂ ಸುಖ ಸಂತೋಷದಿಂದ ಜೀವನ ನಡೆಸುತ್ತಿದ್ದಾರೆ!!!
ಸುಂದರ ಬುಚೇಶ್ವರ
ಒಳ್ಳೆಯತನ, ಪ್ರಾಮಾಣಿಕತೆ, ಸತ್ಯ-ಸಂಧತೆ, ಶ್ರಮಜೀವಿ, ಅನುಕಂಪ, ಸ್ನೇಹ ಜೀವಿ ಈ ಗುಣಗಳೆಲ್ಲ ಮೇಳೈಸಿದ ಅಪರೂಪದ ವ್ಯಕ್ತಿ..ನಮ್ಮ ಅಜ್ಜಯ್ಯ 

ಸಾಮಾನ್ಯವಾಗಿ ಹೇಳುವ ಮಾತು "ಕಳೆದ ಮೇಲೆ ಅಥವಾ ಕಳಕೊಂಡ ಮೇಲೆ  ಬೆಲೆ" 

ನಮ್ಮ ಅಜ್ಜಯ್ಯ ನಮ್ಮೆನ್ನೆಲ್ಲ ಭೌತಿಕವಾಗಿ ಬಿಟ್ಟು ಹೋದಾಗ ನಾವು ಮೊಮ್ಮಕ್ಕಳು ಸರಿ ಯಾವುದು  ತಪ್ಪು ಯಾವುದು ಎನ್ನುವದನ್ನು ತಿಳಿಯಲು ಗೊಂದಲ ಪಡುತಿದ್ದ ಹದಿ ಹರೆಯ...ಹಾಗಾಗಿ ನಮ್ಮ ಅಜ್ಜಯ್ಯನ ಬಗ್ಗೆ ಅಪ್ಪ, ಅಮ್ಮ, ಚಿಕ್ಕಪ್ಪಂದಿರು, ದೊಡ್ಡಪ್ಪ ಹೇಳಿದ ಮಾತುಗಳಿಂದ ತಿಳಿದ ವಿಷಯಗಳು...

ಅವರ ಕೈ ಬರಹ, ನೆನಪಿನ ಶಕ್ತಿ, ವಿಷಯಗಳ ಆಳ,  ಮಾತಾಡುವ ಶೈಲಿ, ಸದಾ ಕಾಲ ದೇವರ ಸ್ತೋತ್ರ  ಪಠಣ, ಮಕ್ಕಳ ಹಾಗು ಮೊಮ್ಮಕ್ಕಳ ಮೇಲಿನ ಮಮಕಾರ ಒಂದೇ ಎರಡೇ..ಅವರ ಬಗ್ಗೆ ಹೇಳುತ್ತಾ ಹೋದರೆ ಒಂದು ಪ್ರಬಂಧವನ್ನೇ ಮಂಡಿಸಬಹುದು..

ಕೊನೆಯ ಕ್ಷಣಗಳಲ್ಲೂ  ಕೂಡ ಇತಿಹಾಸದ ಪುಟಗಳಲ್ಲಿನ ಘಟನೆಗಳನ್ನು ಹೇಳುತಿದ್ದುದು ಅವರ ಆತ್ಮ ಶಕ್ತಿಗೆ ಒಂದು ಚಿಕ್ಕ ಉದಾಹರಣೆ.

ನಮ್ಮ ಅಜ್ಜಯ್ಯನ ಸುಂದರ ಜೀವನಕ್ಕೆ ನುಡಿ ಬರಹ ಬರೆಯಬೇಕು ಎನ್ನುವುದು, ಅವರ ಜೀವನದ ಯಶೋಗಾಥೆ ನಮ್ಮ ಮುಂದಿನ ಪೀಳಿಗೆಗೂ ಸಿಗಬೇಕು ಎನ್ನುವುದು ನನ್ನ ಹಂಬಲ..ನಮ್ಮ ವ್ಯಾಪ್ತಿ ಬರಿ ಅಪ್ಪ, ಅಮ್ಮ, ಅಕ್ಕ, ತಂಗಿ, ಚಿಕ್ಕಪ್ಪ, ಚಿಕ್ಕಮ್ಮ, ದೊಡ್ಡಪ್ಪ, ದೊಡ್ಡಮ್ಮ, ಅಜ್ಜ, ಅಜ್ಜಿ ಇಷ್ಟಕ್ಕೆ ನಿಲ್ಲಬಾರದು ಇನೊಂದು ಹೆಜ್ಜೆ ಸಾಗಿ ಮುತ್ತಾತ, ಮುತ್ತಜ್ಜಿ ಹೀಗೆ ಕವಲೊಡೆದು ಸಾಗಬೇಕು ಎನ್ನುವುದು ಆಸೆ..!!!!

Friday, June 22, 2012

Putty's World... A Boy Baby

Putty: Hi Bro

Me: Hi Putty

Putty : Bro...A news want to share with you, I am blessed vid a boy baby ...2day 9.50am...!!!

Me : Wow putty!! Congratulations.. Please check mail box after 10 minutes Putty

Putty : :-) hmmmmm

All the cute things in this world had an emergency meeting on 20.06.2012.

the agenda for the meeting..
who is the emperor of the cute things...?

The discussion went on went till 22.06.2012 morning 9.50AM.!!!

One of the cute thing came running gasping for breath, and screamed "please cancel the meeting!!"

"Why what happened?"

"All ready a cutest of cutest born..so meeting is not required!!"

"Putty delivered boy baby today morning..Putty herself is so cute..and her boy baby is even more cute..."

"Ok people....This meeting stands cancelled...and we announce Putty's baby is the cutest of the cutest"
Congratulations Putty on being promoted to Motherhood..wish you wonderful life ahead, and wish your son a great life ahead..!!!!!!!!!!!!!!!!!

Wednesday, June 20, 2012

ನಾಗರಾಜ ಚಿಕ್ಕಪ್ಪ ನಿಮಗೆ ಹುಟ್ಟುಹಬ್ಬದ ಶುಭಾಶಯಗಳು!!!


ಸುರಾಸುರರು ಅಮೃತಕ್ಕಾಗಿ ಕ್ಷೀರಸಾಗರ ಕಡೆಯಲು ಅನುವಾದಾಗ ಮಂಧರ ಪರ್ವತ,  ಹಾಗು ವಾಸುಕಿಗೆ ಅಹಂ ಶುರುವಾಗುತ್ತೆ...!!!


"ನಾವಿಬ್ಬರು ಇಲ್ಲದಿದ್ದರೆ ಮಂಥನ ಆಗೋಲ್ಲ...ನಾವೇ ಪರಮಶ್ರೇಷ್ಟರು"..ಈ ಹುಮ್ಮಿನಲ್ಲಿ ಮಂಥನ ಕಾರ್ಯ ಶುರುವಾಗುತ್ತದೆ..


ಪರ್ವತ ಹಾಗು ವಾಸುಕಿಯಾ  ಹುಮ್ಮಿನಿಂದಾಗಿ ಮಂಥನ ಕಾರ್ಯ ಅಂದುಕೊಂಡಂತೆ ಕ್ಷಿಪ್ರಗತಿಯಲ್ಲಿ ಸಾಗುತ್ತಿರಲಿಲ್ಲ..


ದೇವತೆಗಳಿಗೆಲ್ಲ ಚಿಂತೆಶುರುವಾಗುತ್ತದೆ..ವಿಷ್ಣುವಿನ ಮೊರೆ ಹೋಗುತ್ತಾರೆ...


"ಮಹಾ ವಿಷ್ಣು..ನಿನಗೆ ತಿಳಿಯದ್ದು ಏನಿದೆ...ಕಾರ್ಯ ಆಗುತ್ತಿಲ್ಲ..ಪರ್ವತ, ಹಾಗು ವಾಸುಕಿಯ ಗರ್ವ ಭಂಗವಾಗಬೇಕು ಏನು ಮಾಡೋದು"


"ದೇವತೆಗಳೇ ಯೋಚಿಸಬೇಡಿ..ಕಲಿಯುಗದಲ್ಲಿ, ಹಾಸನದ ಕೋರವಂಗಲದಲ್ಲಿ ರಂಗಸ್ವಾಮಿ ಹಾಗು ಸುಬ್ಬನರಸಮ್ಮನವರಿಗೆ  ಜನಿಸುವ ಪುತ್ರರತ್ನನ ಬಗ್ಗೆ ಹೇಳುತ್ತೇನೆ ಆಗ ಇವರ ಹಮ್ಮು ಬಿಮ್ಮು ಕಡಲಲ್ಲಿ ಕರಗಿಹೋಗುತ್ತದೆ..."


"ಅದು ಹೇಗೆ?"


"ಆ ಪುತ್ರ ರತ್ನ..ಯಾವುದೇ ವಿಷಯವಾಗಲಿ, ಚರ್ಚೆಯಾಗಲಿ, ಅದರ ಆಳಕ್ಕೆ ಹೋಗಿ ವಿಷಯದ ಭಾವಾರ್ಥ, ಗೂಡಾರ್ಥ, ತಿರುಳನ್ನು ಹೊರಗೆ ತೆಗೆಯುವ ಪರಿ..ಅದನ್ನು ಕೇಳಿಯೇ ತಿಳಿಯಬೇಕು....ಅಂತಹ ಪ್ರತಿಭಾಶಾಲಿ ಆ ಪುತ್ರರತ್ನ..."


ಮಹಾವಿಷ್ಣು ಪರ್ವತ, ಹಾಗು ವಾಸುಕಿಗೆ ಈ ಪುತ್ರರತ್ನ ಬಗ್ಗೆ ಹೇಳುತ್ತಾ ಹೋದಂತೆ..ಅವರಿಬ್ಬರು 


"ಮಹಾವಿಷ್ಣು ನಮ್ಮದು ಮಹಾಪರಾಧವಾಯಿತು..ನಾವೇ ಮಥಿಸುವುದರಲ್ಲಿ ಶ್ರೇಷ್ಟರು ಎಂದುಕೊಂಡಿದ್ದೆವು..ಆದ್ರೆ ಈ ಪುತ್ರರತ್ನನಿಂದ ಕಲಿಯಬೇಕಾದು ಬಹಳ ಇದೆ...ಕ್ಷಮೆ ಇರಲಿ..ನೀನು ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತೇವೆ.."


ಇಂತಹ ಮಹಾನುಭಾವರು ನಮ್ಮ ಕುಟುಂಬದಲ್ಲಿ ಇರುವುದು ನಮ್ಮ ಪುಣ್ಯವೇ ಸರಿ..


ನಾಗರಾಜ ಚಿಕ್ಕಪ್ಪ ನಿಮ್ಮ ಮಾತುಗಳು, ನೀವು ವಿಶ್ಲೇಷಿಸುವ ಪರಿ, ನಗುನಗುತ ಜೀವನ ಮಾಡುವ ವೈಕರಿ...ನಮಗೆಲ್ಲ ದಾರಿ ದೀಪ..ನಿಮ್ಮ ಹುಟ್ಟು ಹಬ್ಬಕ್ಕೆ ಶುಭಾಶಯಕೋರುವ ಯೋಗ ನಮಗೆ ಬಂದಿರುವುದು ನಮ್ಮ ಪುಣ್ಯವೇ ಸರಿ..


ನಾಗರಾಜ ಚಿಕ್ಕಪ್ಪ ನಿಮಗೆ ಹುಟ್ಟುಹಬ್ಬದ ಶುಭಾಶಯಗಳು!!! 

Thursday, June 14, 2012

ಮಹಾಭಾರತ-ಕುರುಕ್ಷೇತ್ರ-ಭೀಷ್ಮ-ಅರ್ಜುನ-ಕೃಷ್ಣ

ಮಹಾಭಾರತ ನನಗೆ ಯುಕ್ತಿ, ಶಕ್ತಿ ಬೇಕಾದಾಗೆಲ್ಲ ಮೊಗೆ ಮೊಗೆದು ಕೊಡುವ ಅದ್ಭುತ ಕಾವ್ಯ..

ಬಾಲ್ಯದಲ್ಲಿ ಓದಿದ ಮಹಾಭಾರತದ ಚಿಕ್ಕ, ಪುಟ್ಟ ಕತೆಗಳು, ವೀರೋಚಿತ ಪಾತ್ರಗಳು, ಸಂಭಾಷಣೆ, ವ್ಯಕ್ತಿತ್ವ,  ಇವೆಲ್ಲವೂ ಮನದಾಳದಲ್ಲಿ ಸುಂದರ ಛಾಪನ್ನು ನನಗರಿವಿಲ್ಲದೆ ಒತ್ತಿ ಬಿಟ್ಟಿದ್ದವು.

ಬಿ.ಆರ್. ಚೋಪ್ರರವರ ಮಹಾಭಾರತ ದೂರದರ್ಶನದಲ್ಲಿ ಶುರುವಾದಾಗ ಮನಸಿಗೆ ಆದ ಸಂತೋಷ ಅಷ್ಟಿಷ್ಟಲ್ಲ. ಅದ್ಭುತ ಸಂಭಾಷಣೆ, ಅಭಿನಯ, ಕೃಷ್ಣನ ಮುಗ್ಧ ನಗು, ಭೀಷ್ಮನ ಪಾತ್ರದಾರಿ, ಅರ್ಜುನ ಬಾಣ ಬಿಡುವ ಶೈಲಿ.. ಒಂದೇ ಎರಡೇ ಎಲ್ಲವು ಸೊಗಸು..

ಈ ಲೇಖನ ಆ ಅದ್ಭುತ ಕಾವ್ಯಕ್ಕೆ ಒಂದು ಸಣ್ಣ ನುಡಿ ನಮನ.  ಅ ಅಮೋಘ ಕಾವ್ಯದ ಬಗ್ಗೆ ಏನೇ ಬರೆದರೂ ಅದು ಸಮುದ್ರದಿಂದ ಒಂದು ನೀರಿನ ಬಿಂದುವನ್ನು ಹೆಕ್ಕಿ ತೆಗೆದಂತೆ..

ಕುರುಕ್ಷೇತ್ರ ರಣಾಂಗಣದಲ್ಲಿ ಭೀಷ್ಮ ಅಜೇಯನಾಗಿರುತ್ತಾನೆ...ಅರ್ಜುನನ ಕದನ ಸಾಮರ್ಥ್ಯದ ಬಗ್ಗೆ ಕೃಷ್ಣನಿಗೆ ಅಸಹನೆ ಮೂಡುತ್ತದೆ..ತನ್ನ ಪ್ರತಿಜ್ಞೆಯನ್ನು ಮರೆತು ಕೃಷ್ಣ ತನ್ನ ಸುದರ್ಶನ ಚಕ್ರವನ್ನು ಹಿಡಿದು ರಥದಿಂದ ಧುಮುಕಿ ಭೀಷ್ಮನೆಡೆ ಸಾಗುತ್ತಾನೆ..ಆಗ ಅರ್ಜುನ ಕೃಷ್ಣ ಕಾಲು ಹಿಡಿದು ಕ್ಷಮೆ ಬೇಡುತ್ತಾನೆ, ಭೀಷ್ಮ ಆನಂದದಿಂದ ಫುಳಕಿತನಾಗುತ್ತಾನೆ.

ಇದನ್ನೇ ಈ ಕೆಳಗಿನ ಚಿತ್ರ ಪರಿಣಾಮಕಾರಿಯಾಗಿ ವಿವರಿಸುತ್ತದೆ ..

ಭೀಷ್ಮನಿಗೆ ಅರ್ಜುನ ತುಂಬಾ ಪ್ರೀತಿ ಪಾತ್ರನು.. ಅರ್ಜುನನಿಗೆ ಭೀಷ್ಮನ ಬಗ್ಗೆ ಅತೀವ ಗೌರವ..ಇಬ್ಬರು ಒಬ್ಬರಿಗೊಬ್ಬರು ಯುದ್ದದಲ್ಲಿ ಎದುರಾದಾಗ ಈ ಮಮಕಾರಗಳು ಡಿಕ್ಕಿ ಹೊಡೆದು ಇಬ್ಬರನ್ನು ಘಾಸಿಗೊಳಿಸುತ್ತದೆ ..ಆಗ ಕೃಷ್ಣ ಹೀಗೆ ಮುಂದುವರಿದರೆ ಯುದ್ಧ ಮುಗಿಯಲಾರದು ಎನಿಸಿ ತಾನೇ ಮಾಡಿದ ಪ್ರತಿಜ್ಞೆಯನ್ನು  (ಯುದ್ಧದಲ್ಲಿ ತಾನು ಆಯುಧ ಹಿಡಿಯುವುದಿಲ್ಲ)  ಮುರಿದು ಭೀಷ್ಮನೆಡೆಗೆ ಸುದರ್ಶನಧಾರಿಯಾಗಿ ಮುನ್ನುಗ್ಗುತಾನೆ..ಆಗ ಅರ್ಜುನ ಕೃಷ್ಣನನ್ನು ಸಮಾಧಾನಗೊಳಿಸಿ ಶಾಂತಗೊಳಿಸುತ್ತಾನೆ ...ಭೀಷ್ಮ ತನ್ನ ಅಭಿಲಾಷೆ ಈಡೇರಿದಕ್ಕಾಗಿ ಸಂತುಷ್ಟನಾಗಿ ಕೃಷ್ಣನನ್ನು ಸ್ತುತಿಸುತ್ತಾನೆ..(ಕೃಷ್ಣನನ್ನು ಆಯುಧಧಾರಿಯಾಗಿ ನೋಡಬೇಕೆನ್ನುವ  ಆಶಯ) 


ಈ ಪ್ರಸಂಗ ನನ್ನ ಮನಸಿಗೆ ಅನ್ನಿಸಿದ್ದು ಹೀಗೆ...

ನಮ್ಮ ಲಕ್ಷ್ಯ, ಗುರಿ, ಸಾಧನೆ  ಭೀಷ್ಮನನ್ನು, ನಮ್ಮನ್ನು ಅರ್ಜುನ , ಹಾಗು ನಮ್ಮ ಮನಸಾಕ್ಷಿ ಕೃಷ್ಣನನ್ನು ಪ್ರತಿನಿಧಿಸುತ್ತದೆ. ನಮ್ಮ ಶ್ರಮ, ಪರಿಶ್ರಮ ನಮ್ಮ ಗುರಿ ಕಡೆಗೆ ಇರಬೇಕು..ಅದು ವಿಚಲಿತವಾದಾಗ ನಮ್ಮ ಗುರಿ ನಮ್ಮನ್ನೇ ಸುಡಲು, ಪೀಡಿಸಲು ಶುರು ಮಾಡುತ್ತೆ..ಆಗ ನಮ್ಮ  ಮನಸಾಕ್ಷಿ ನಮ್ಮನ್ನು ಬಿಟ್ಟು ತಾನೇ ಗುರಿ ಮುಟ್ಟಲು ಸಿದ್ದವಾಗುತ್ತದೆ..ಮನಸಾಕ್ಷಿ ಇಲ್ಲದೆಯೇ ನಾವು ಗುರಿ ಸಾಧಿಸಲು ಸಾಧ್ಯವಿಲ್ಲ, ಅದರ ಸಹಾಯ, ಸಲಹೆ, ಮಾರ್ಗದರ್ಶನವಿಲ್ಲದೆ ನಾವು ಏನು ಮಾಡಲು ಆಗದು, ಅದೇ ನಮ್ಮನ್ನು ಬಿಟ್ಟು ಹೋಗಲು ಸಿದ್ಧವಾದರೆ ನಮ್ಮ ಅಧೋಗತಿಯೇ ಸರಿ..ಆಗ ಗುರಿ, ಸಾಧನೆ ನಮ್ಮನ್ನು ಕಂಡು ಕನಿಕರದ ನಗೆ ನಗುತ್ತದೆ...

ನಮ್ಮ ಮನಸಾಕ್ಷಿಯ ಜೊತೆ ನಾವು ನಮ್ಮ ಗುರಿಯೆಡೆಗೆ ತೆರೆಳಲು ಸಿದ್ದವಾದರೆ ಎಂತಹ ಅಡ್ಡಿ ಆತಂಕಗಳು ದೂರವಾಗಿ ಓಡುತ್ತವೆ..ಶಂಖನಾದ ನಮ್ಮ ಹುಮ್ಮಸ್ಸು, ಕೃಷ್ಣ ನಮ್ಮ ಮಾರ್ಗದರ್ಶಿ, ಇವೆರಡು ಜೊತೆ ಇದ್ದಾಗ ಅಸಾಧಾರಣ ಗುರಿ ಕೂಡ ಸಾಮಾನ್ಯವಾಗುತ್ತದೆ ಅಲ್ಲವೇ...