Sunday, February 8, 2026

ಯಾತ್ರೆ ....ಅಂತಿಮವೋ...ಆರಂಭವೋ

ಚಿತಾಗಾರದ ಒಳಗೆ ಕಾಲಿಟ್ಟೆ...

ಅಲ್ಲಿನ ಸಿಬ್ಬಂದಿ ಚಿತಾಗಾರದ ಬಾಗಿಲು ತೆರೆದರು..

ಛಾವಣಿಯ ಸಣ್ಣ ಕಿಂಡಿಯಿಂದ ಬೆಳಕಿನ ಕೋಲು ಕಾಣಿಸಿತು..ಆ ಬೆಳಕಿನ ಕೋಲಿನಲ್ಲಿ ಕೆಲವು ಕಣಗಳು ಮೇಲಕ್ಕೇರುತ್ತಿದ್ದರೆ..ಕೆಲವು ಕೆಳಕ್ಕೆ ಇಳಿಯುತ್ತಿದ್ದವು..


ಅಚ್ಚರಿಯಿಂದ ಅದನ್ನೇ ನೋಡುತ್ತಿದ್ದೆ...

ಕಿರಣಗಳು ಮೆಲ್ಲನೆ ಮಾಯವಾಗುತ್ತಿತ್ತು..ಅಂದೇ ಸಂದೇಶ ವಾಹಕರ ಕೆಲಸ ಮುಗಿಯುತ್ತಿತ್ತು...

ಸಂಪೂರ್ಣ ಸಾರ್ಥಕತೆ ಅನುಭವಿಸಿದ ಕಣಗಳು ಪರಂಧಾಮ ಸೇರುತ್ತಿದ್ದರೆ..ಪರಂಧಾಮದಿಂದ ಸಾರ್ಥಕತೆ ಅನುಭವಿಸೋಕೆ ಕಣಗಳು ಅವಿರ್ಭವಿಸುತ್ತಿದ್ದವು..

ಅಬ್ಬಬ್ಬ ಬದುಕಿನ ಆರಂಭವೋ..ಅಂತ್ಯವೋ ಅನ್ನುವುದಕ್ಕೆ ಉತ್ತರ ಸಿಕ್ಕಿದ ಕ್ಷಣವದು..

ಬದುಕೇ ಹೀಗೆ ಕಣದಿಂದ ಕಣದ ತನಕ...ಕಿರಣಗಳೇ ಇದಕ್ಕೆ ವಾಹಕಗಳು..

ನನ್ನ ಶಾಲಾದಿನದ ಗೆಳತಿ ..ಜೊತೆಯಲ್ಲಿ ಓದಿದ್ದು ಅಂತ ಅವಳು ಹೇಳಿದರೂ ಆ ದಿನಗಳ ನೆನಪು ಕರಗುವ ಮೊಂಬತ್ತಿಯ ಮೇಣದ ಹಾಗೆ ಸ್ಷಪ್ಟ ಇರಲಿಲ್ಲ..ಆದರೆ ಅವಳು ಬೇರೆ ಸೆಕ್ಷನ್ ಅಂತ ಗೊತ್ತಾದ ಮೇಲೆ ನಾನು ಗಜನಿಯಲ್ಲ ಅಂತ ಸಂತಸವಾಗಿತ್ತು..

ಹೀಗೆ ಒಂಭತ್ತು ವರ್ಷಗಳ ಒಂದು ಸುಂದರ ಮುಂಜಾವಿನಲ್ಲಿ ಶಾಲಾದಿನಗಳ ಸಹಪಾಠಿಗಳು ಲಾಲ್ ಬಾಗಿನಲ್ಲಿ ಭೇಟಿಯಾದೆವು..ಅಲ್ಲಿಂದ ಶುರುವಾಯಿತು ನಮ್ಮ ಗೆಳೆತನ..

ಇವಳು ಗೆಳತಿಯಲ್ಲ ನನ್ನ ಸಹೋದರಿಯಾದಳು..ಒಂದೇ ನಕ್ಷತ್ರ ..ಒಂದೇ ರಾಶಿ..ನಮ್ಮನ್ನು ಇನ್ನಷ್ಟು ಹತ್ತಿರ ತಂದಿತು..ದೇವಾಲಯದಲ್ಲಿ ಸಂಕಲ್ಪ ಮಾಡಿಸುವಾಗ ನನ್ನ ಹೆಸರು ತರುತ್ತಿದ್ದಳು..ಅಷ್ಟು ಮಮತೆ ಈ ಅಣ್ಣನ ಮೇಲೆ..

ಯೋಚಿಸುತ್ತಿದ್ದೆ ಇದೆಲ್ಲಾ ಕನಸೋ..ನನಸೋ ಹೇಗೆ ಸಾಧ್ಯ ಅಂತ..

ಒಮ್ಮೆ ಅವಳ‌ ಮನೆಯ ಕಾರ್ಯಕ್ರಮಕ್ಕೆ ನನ್ನ ಆಹ್ವಾನಿಸಿದ್ದಳು..ಆಗ ಅವಳ ಅಮ್ಮನನ್ನು ಕಂಡಿದ್ದೆ..ಆಗ ಅರಿವಾಯಿತು ಇವಳ ಸ್ವಭಾವ ಹೀಗೆ ಅಂತ..ಅವಳ ಅಪ್ಪನ ಬಗ್ಗೆ ಹತ್ತಾರು ಮಾತುಗಳಲ್ಲಿ ಹೇಳಿದಾಗ ಇವಳ ವ್ಯಕ್ತಿವಕ್ಕೆ ಬುನಾದಿ ಇವಳ ಮಾತಾ ಪಿತೃಗಳು ಅಂತ.

ಇವಳ‌‌ ಮಕ್ಕಳ ವಾಟ್ಸಾಪ್ ಸ್ಟೇಟಸ್ ನೋಡುತ್ತಲೇ ಇರುತ್ತೇನೆ..ತಾತಾ ಅಜ್ಜಿಯರನ್ನು ಎಷ್ಟು ಆಳವಾಗಿ ಪ್ರೀತಿಸುತ್ತಾರೆ ಅಂತ ಅರಿವಾಯಿತು..

ಅಂತಹ ಅದ್ಭುತ ವ್ಕಕ್ತಿತ್ವವುಳ್ಳ ಆ ಹಿರಿಯರ ಸಾನಿಧ್ಯ ಭಗವಂತನಿಗೆ ಬೇಕಾಗಿತ್ತು ಅಂತ‌‌‌ ಶನಿವಾರ ರಾತ್ರಿ ಸುಮಾರು ಹತ್ತು ಘಂಟೆಗೆ ತನ್ನ ಚೈತನ್ಯ ರಥವನ್ನು ಭುವಿಗೆ ಕಳಿಸಿಯೇ ಬಿಟ್ಟ.

ಸುಂದರ ಸಂಸಾರದ ಯಜಮಾನರಾಗಿ..ಪ್ರೀತಿಯ ಮಡದಿಗೆ ರಕ್ಷಕರಾಗಿ..ಮುದ್ದಾದ ಮಕ್ಕಳಿಗೆ ಪಿತರಾಗಿ..ಅತೀವವಾಗಿ ಪೂಜಿಸುವ ಅಳಿಯನಿಗೆ ಮಾವನಾಗಿ..ಕನಸ್ಸಲ್ಲೂ ತಾತಾ ಅಂತ ಕನವರಿಸುವ ಮೊಮ್ಮಕ್ಕಳಿಗೆ ತಾತಾನಾಗಿ..ಅನೇಕ ಬಂಧು ಮಿತ್ರರಿಗೆ ಪ್ರೀತಿಸುವ ಜೀವವಾಗಿ ಬದುಕಲ್ಲಿ ಸಂಸ್ಕಾರ..ಶಿಸ್ತು..ಸಂಪ್ತದಾಯ..ಗುರು ಹಿರಿಯರಲ್ಲಿ ಭಕ್ತಿ ಗೌರವ.. ಎಂದೂ ಬಿಡದ ದೇಶ ಭಾಷೆಗಳ ಮೇಲಿನ ಪ್ರೀತಿ.. ಇವುಗಳನ್ನು ಆಸ್ತಿ ಮಾಡಿ ಭುವಿಯಲ್ಲಿನ ತನ್ನ ಬಳಗಕ್ಕೆ ಧಾರೆಯೆರೆದು ಶೇಷ ಭಾಗವನ್ನು ಭಗವಂತನಿಗೆ ಅರ್ಘ್ಯದ ಮೂಲಕ ಕೊಡಲು ಭಗವಂತ ಕಳಿಸಿದ ಚೈತನ್ಯ ರಥವನ್ನು ಹತ್ತಿ ಹೊರಟೇ ಬಿಟ್ಟರು..





ನೋಡಿದವರ..ಭೇಟಿ ಮಾಡಿದವರ..ಮಾತಾಡಿಸಿದವರ ಬಗ್ಗೆ ಒಂದೆರೆಡು ಮಾತುಗಳು ಹೇಳೋದು..ಬರೆಯೋದು ಸುಲಭ..

ಆದರೆ ಇನ್ನೊಬ್ಬರ ಕಣ್ಣಿನಿಂದ ನೋಡಿದ ವ್ಯಕ್ತಿತ್ವದ ಬಗ್ಗೆ ಬರೆಯೋದು ಕಷ್ಟ..ಆದರೆ ಅದನ್ನು ಸಾಧ್ಯ ಮಾಡಿಸಿದ್ದು ಈ‌ ಕೀರ್ತಿಶೇಷರು..

ನಿಮ್ಮ ಸುಂದರ ಬದುಕಿಗೊಂದು ಸಾಷ್ಟ್ರಾಂಗ ಪ್ರಣಾಮಗಳು...!

ಪುನರಪಿ ಜನನಂ
ಪುನರಪಿ‌ ಮರಣಂ




2 comments:

  1. ಅದ್ಬುತವಾದ ಮಾತುಗಳು, ನಮ್ಮ ಪಿತೃ ಸಮಾನರಾದ ಮಾವನವರು ತಮ್ಮ ಜೀವನದ ಯಾತ್ರೆ ಮುಗಿಸಿ ಭಗವಂತನ ಪಾದ ಸೇರಿದರು. ನಿಮ್ಮ ಉತ್ತಮ ನುಡಿಗಳು ನಮ್ಮೆಲರಿಗೂ ಪ್ರೇರಣೆ. ಧನ್ಯೋಸ್ಮಿ ಶ್ರೀಕಾಂತ್ ರವರಿಗೆ 🙏🙏🙏

    ReplyDelete
    Replies
    1. ​ಧನ್ಯವಾದಗಳು ಸರ್
      ಮುಗ್ಧ ಮಾನವೀಯತೆ ತುಂಬಿದ ಅವರ ಜೊತೆ ನೀವು ಕಳೆದ ಸಮಯ ಅತ್ಯಮೂಲ್ಯ.
      ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

      Delete