Wednesday, January 2, 2013

ಕಾಲವನ್ನು ತಡೆಯೋರು ಯಾರೂ ಇಲ್ಲ

ಎಲ್ಲರೂ ಶತಪಥ ತಿರುಗುತಿದ್ದರು..ಯಾರಿಗೂ ಏನು ಮಾಡಲು ತೋಚುತ್ತಿಲ್ಲ!

ಯಾರಾದರೂ ಸಮವಸ್ತ್ರ ತೊಟ್ಟವರು ಹೊರಗೆ ಬಂದರೆ...ಏನೋ ಹೇಳುತ್ತಾರೆ!..ಏನೋ ತರಲು ಹೇಳುತ್ತಾರೆ...! ಏನೋ ಸಂತಸದ ವಿಷಯ ಹೇಳುತ್ತಾರೆ...ಹೀಗೆ ಸಾಗುತಿತ್ತು..ಯೋಚನಾ ಲಹರಿ...

ಸಮಯದ ನಡಿಗೆ ಹೃದಯ ಬಡಿತಕ್ಕಿಂತ ನಿಧಾನವಾಗಿತ್ತು..ಘಳಿಗೆ ಘಳಿಗೆಗೂ ಗಡಿಯಾರ ನೋಡಿಕೊಳ್ಳೋದೇ ಕಾಯಕವಾಗಿತ್ತು ...ಈಗ ಬರ್ತಾರೆ ಆಗ ಬರ್ತಾರೆ ಎನ್ನುವ ನಿರೀಕ್ಷೆ ಮುಗಿಲು ಮುಟ್ಟುತಿತ್ತು....ಕಣ್ಣುಗಳು ದ್ವಾರದ ಕಡೆಗೆ ಒಮ್ಮೆ..ಮೆಟ್ಟಿಲುಗಳ ಕಡೆಗೆ ಒಮ್ಮೆ ಹರಿದಾಡುತಿತ್ತು...

ಎಂಟಾಯಿತು, ಒಂಭತ್ತು ಆಯಿತು...ಕೊಳವೆ ಧರಿಸಿದ ಪುಣ್ಯಾತ್ಮರ ದರ್ಶನವಾಗಲಿಲ್ಲ..ಮತ್ತೆ ಬಾಗಿಲ ಕಡೆ, ಮೆಟ್ಟಿಲ ಕಡೆ ನೇಗಿಲಿನಂತೆ ಉಳಲು ಶುರು ಮಾಡಿದ  ಕಣ್ಣಾವೆಗಳು..!

ಮೊಬೈಲಿನಲ್ಲಿ ಯಾರಾದರೂ ಕರೆಮಾಡಬಹುದೇ ಎಂದು ನೋಡಿದರೆ ಅದು ನಿಸ್ತೇಜವಾಗಿ ಹಲ್ಲುಕಿರಿಯುತಿತ್ತು...ಮತ್ತೆ ಅದು ಅಣಕಿಸಿದಂತೆ ಭಾಸವಾಗುತಿತ್ತು...ಕರೆ ಬಂದಾಗ ಕಟ್ ಮಾಡಿ ಬಯ್ದುಕೊಳ್ಳುವೆ..ಈಗ ಮಾತ್ರ ನಾನು ಬೇಕೇ ಎಂಬ ಕುಹಕ ನೋಟ..

ಅಚಾನಕ್ಕಾಗಿ ನೀಲಿಯಾಕಾಶದ ಧಿರಿಸಿನಲ್ಲಿ ಒಂದು ಧ್ವನಿ ತೇಲಿ ಬಂತು..."ಕೆಳಗೆ ಕೂತಿರಿ...ಏನಾದರು ವಿಷಯ ಇದ್ದಾರೆ ಕರೆಯುತ್ತೇವೆ..ನಿಮ್ಮ ನಂಬರ್ ನಮ್ಮ ಹತ್ತಿರ ಇದೆ..."

"ಅಲ್ಲಾ..............ಇಲ್ಲಿ................ಹೆಂಗೆ..............ಏನೂ..................ಮತ್ತೆ....ಪರವಾಗಿಲ್ಲ..ಇಲ್ಲೇ..."

"ಬೇಡ..ಕೆಳಗೆ ಕೂತಿರಿ...ಏನೇ ಇದ್ದರೂ ವಿಷಯ ತಿಳಿಸುತ್ತೇವೆ..." ಬೆಕ್ಕಿನ ನಡಿಗೆ ನಡೆದುಕೊಂಡು ಆ ನೀಲಿ ವಸ್ತ್ರದ ಧ್ವನಿ ಮರೆಯಾಯಿತು...

ಬೇರೆ ದಾರಿ ಇರಲಿಲ್ಲ..ಶಕ್ತಿಗಳು ನಿಧಾನವಾಗಿ ಭಾರವಾದ ಹೃದಯ ಹೊತ್ತು ಮೆಟ್ಟಿಲನ್ನು ಇಳಿದು ಕೆಳಗೆ ಬಂದವು...
ಮತ್ತೆ ಒಂದು ಗುಟುಕು ಕಾಫಿ ಕುಡಿದು..ಒಮ್ಮೆ ಇದುವರೆಗೂ ನಡೆದ ಘಟನೆಗಳನ್ನು ಮೆಲುಕು ಹಾಕುತ್ತ....ಕಾಲದ ಭಾರವಾದ ಬಂಡಿಯನ್ನು ನೂಕಲು ಯತ್ನಿಸುತ್ತಿದ್ದವು!

ಅಲ್ಲಿನ ಫೋನ್ ಒಮ್ಮೆ ಕುಯ್ ಎಂದರೆ ಅದರತ್ತಲೇ ನೋಟ....ಮೊಬೈಲ್ ಸ್ವಲ್ಪ ಅಲುಗಾಡಿದರೂ ಏನೋ ಒಂದು ತವಕ...ಆತಂಕ...

ಹದಿನೈದು ದಿನಗಳಿಂದ ದಣಿದಿದ್ದ ಮೂರು ಶಕ್ತಿಗಳು ಹಾಗೆ ಕೆಲಕ್ಷಣ ಕುರ್ಚಿಗೆ ವರಗಿ ನಿದ್ದೇ ಮಾಡುವ ಆಗದ ಕೆಲಸಕ್ಕೆ ಕೈ ಹಾಕಲು ಪ್ರಯತ್ನಿಸಿದವು....

"ಹ್ಯಾಪಿ ನ್ಯೂ ಇಯರ್...ಹೊಸ ವರ್ಷದ ಶುಭಾಶಯಗಳು...ವಿಶ್ ಯು ಹ್ಯಾಪಿ ನ್ಯೂ ಇಯರ್...ಪೀ....ಹುರ್ರಾ......ಥ್ಯಾಂಕ್ ಯು...ವಿಶ್ ಯು ದಿ ಸೇಮ್....ಧನ್ಯವಾದಗಳು..ನಿಮಗೂ ಸಹ...."

ಆ ಚೀರಾಟ, ಕೇಕೆ, ಕಿರುಚು ಧ್ವನಿಗಳಿಗೆ ಎಚ್ಚರವಾಗಿ...ಅರೆ ಅರೆ ಏನು ಇಷ್ಟೊಂದು ಹೊತ್ತು ನಿದ್ದೆ ಮಾಡಿದ್ದೇವೆ ಛೆ ಛೆ...ಎಂದು ಮತ್ತೆ ಮೆಟ್ಟಿಲು ಹತ್ತಿದವು...ಏನೂ ಬದಲಾವಣೆಯಿಲ್ಲ..ಮೇಲೆ ನೇತು ಹಾಕಿದ ಟಿವಿಯಲ್ಲಿ ಲಕ್ಷದ ಒಂದು ಬಾರಿ ಪ್ರಸಾರವಾದ ಅದೇ ಜಾಹಿರಾತುಗಳು...!

ಹ್ಯಾಪಿ ನ್ಯೂ ಇಯರ್ ಸದ್ದು ಮೆಲ್ಲನೆ ತಣ್ಣಗಾಯಿತು..ಬೆಳಗಿನ ಚಳಿಗೆ ಮೈ..ಮನಸು ಮುದುಡಲು ಶುರುವಾಯಿತು...ಅಲ್ಲೇ ಇದ್ದ ರೊಟ್ಟಿನ ಬಾಕ್ಸ್ ಹರಡಿಕೊಂಡು ತಂದಿದ್ದ ಚಿಕ್ಕ ಚಿಕ್ಕ ಶಾಲುಗಳನ್ನು ಹೊದ್ದು...ಅಲ್ಲೇ ಮಲಗಲು ಪ್ರಯತ್ನ ಪಟ್ಟವು...

"ಹೇ ಎಳ್ರೋ ..ಕಾಫಿ..ತಗೋಳಿ...ಕಾಫಿ..." ಎನ್ನುತ್ತಾ ಆ ಶಕ್ತಿಗಳ ಹಿರಿಯ ಶಕ್ತಿ ಬಂದು ಎಚ್ಚರಿಸಿದಾಗಲೇ ಭುವಿಗಿಳಿದ ಅನುಭವ....

ಕಾಫೀ ಕುಡಿದು ಮತ್ತೆ ಮೆಟ್ಟಿಲು ಹತ್ತಿ ಬಂದರೆ  ಅದೇ ಜಾಹಿರಾತುಗಳು ಪರದೆಯ ಮೇಲೆ .....!

ಮತ್ತೆ ಅದೇ ನಿಧಾನಗತಿಯ ಗಡಿಯಾರ...... ಹೇಗೋ ಮತ್ತೆ ೨೪ ಘಂಟೆಗಳು ಕಳೆದವು...

ಒಂದು ಸಂದೇಶ ಕುಯ್ ಗುಟ್ಟುತ್ತ ಮೊಬೈಲ್ನಲ್ಲಿ ಸದ್ದು ಮಾಡಿತು...."ಸುಂದರವಾಗಿ ಅರಳಿದ ಮಲ್ಲಿಗೆ ಹೂವು ಬಾಡಿಗೆ ಅಲಂಕಾರದಲ್ಲಿ ಇದೆ..."

ಸಂಜೆ ಸುಮಾರು ಐದು ಮೂವತ್ತು ಸಮಯದಲ್ಲಿ ಸಮವಸ್ತ್ರದ ಹುಡುಗಿ ಕಣ್ಣಲ್ಲೇ ನೀರು ತುಂಬಿಕೊಂಡು ಸೌಮ್ಯವಾಗಿ ತಲೆ ಅಲ್ಲಾಡಿಸಿತು...


ದೂರದಲ್ಲೆಲ್ಲೋ "ನಾನೇ ಎಂಬ ಭಾವ ನಾಶವಾಯಿತು...ನೀನೆ ಎಂಬ ನೀತಿ ನಿಜವಾಯಿತು" ಉಲಿಯುತ್ತಿತ್ತು...ಆತ್ಮ ಮಿಥ್ಯ ಪರಮಾತ್ಮ ಸತ್ಯ ಎನ್ನುವ ಮಾತು ಸತ್ಯವೇ ಆದರೂ ಅದರ ಮೋಹ ಬಿಡಲು ಪಡುವ ಪಾಡು...ಹೇಳರಾರದು...


ಆ ಶಕ್ತಿಗಳು ಗೋಡೆಯ ಕಡೆ ತಿರುಗಿಕೊಂಡು ಚಾವಣಿಯನ್ನು ದಿಟ್ಟಿಸುತ್ತಾ ಕುಳಿತು ಬಿಟ್ಟವು..

ರೇಡಿಯೋದಲ್ಲಿ "ನಗಲಾರದೆ ಅಳಲಾರದೇ ತೊಳಲಾಡಿದೆ ಜೀವಾ..." ಹಾಡು ಎಲ್ಲ ಘಟನೆಗಳಿಗೆ ಮೂಕ ಸಾಕ್ಷಿಯಂತೆ
ತೇಲಿ ಬರುತಿತ್ತು!!!

(ಇಂದಿಗೆ ನನ್ನ ಅಪ್ಪ ಭೌತಿಕವಾಗಿ ಇಹಲೋಕ ತ್ಯಜಿಸಿ ಒಂದು ವರ್ಷ...ಆ ಕಡೆ ಕ್ಷಣಗಳನ್ನು ನೆನಪಿಸಿಕೊಂಡು...ನಮ್ಮೊಳಗೇ ಇರುವ ಆ ಮಹಾಚೇತನಕ್ಕೆ ನಮನ ಸಲ್ಲಿಸುವ ಒಂದು ಪುಟ್ಟ ಪ್ರಯತ್ನ ಈ ಲೇಖನ)

Saturday, December 8, 2012

ಏನು ಮಾಡಲಿ ನಾನು ಏನು ಹೇಳಲಿ....ಬ್ಲಾಗಿಗರ ಜೊತೆಯಲ್ಲಿ ಕಳೆದ ಕೆಲವು ಕ್ಷಣ

ತ್ರಿ ಮೂರ್ತಿ ಚಿತ್ರದಲ್ಲಿ ಅಣ್ಣಾವ್ರು .."ಏನು ಮಾಡಲಿ ನಾನು ಏನು ಹೇಳಲಿ...".

ಹೀಗೆ ನನ್ನ ತಲೆಯಲ್ಲೂ ಸಿನಿಮಾ  ಓಡುತ್ತಿತ್ತು...ಬರೆಯಲೇ ಬೇಡವೇ...ಬರೆಯಲೇ ಬೇಡವೆ...

ಸರಿ ರಾತ್ರಿ ಸುಮಾರು ೧೦ ಘಂಟೆಗೆ ಜ್ಞಾನೋದಯವಾಯಿತು...ಒಂದು ಅಭೂತಪೂರ್ವ ದೃಶ್ಯ ಮನಪಟಲದಲ್ಲಿ ಕೂತು ಬಿಟ್ಟಿತು....ಆ ದೃಶ್ಯವನ್ನು ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿದು ಹೊರಗೆ ಬಂದು ಕಾರಿನಲ್ಲಿ ಕೂತಾಗ...ಹಾಡು ತೇಲಿ ಬರುತಿತ್ತು...
"ಜನುಮ ಜನುಮದ ಅನುಬಂಧ..."  ವಾರೆ ವಾಹ್ ಸಿಕ್ಕೆ ಬಿಟ್ಟಿತು ಒಂದು ಎಳೆ ಬರೆಯೋಕೆ..ಸರಿ ಮನದಲ್ಲಿದುದನ್ನು ಕೀಲಿ ಮನೆಗೆ ಇಳಿಸುವ ಹೊರತು ನಿದ್ದೆ ಬರುವುದಿಲ್ಲ ಎನಗೆ..ಸರಿ...ಶುರುವಾಯಿತು ಪರದೆ ಜಾರಿತು...ಸಿನಿಮಾ ಶುರುವಾಯಿತು...

ಹಿನ್ನೋಟ...

ಕುವೈತ್ ದೇಶದಲ್ಲಿ ನೆಲೆಸಿರುವ ಕರುನಾಡಿನ ಅಜಾದ್ ಸರ್..ಬೆಂಗಳೊರಿಗೆ ಭೇಟಿ ನೀಡಲು ಬಂದಿದ್ದರು...ಬರುವಾಗ...
ಪ ಪ ಪ ಪ ಅಂತ ಒಂದು ಕಹಳೆಯನ್ನೇ ಮಿತ್ರರ ವಾಲ್ ನಲ್ಲಿ ಊದಿಬಿಟ್ಟಿದ್ದರು..ಒಬ್ಬೊಬ್ಬರಾಗಿ ಬೆಂಗಳೂರಿನ ಇತಿಹಾಸ ಪ್ರಸಿದ್ದ ಕಹಳೆ ಬಂಡೆಯ ಹತ್ತಿರ ಇರುವ ಕಾಮತ ಬುಗಲ್ ರಾಕ್ ರೆಸ್ಟೋರಂಟ್ ಬಳಿ ಜಮಾಯಿಸಲು ಶುರುಮಾಡಿದ್ದರು...
ಬ್ಲಾಗಿಗರ ಗುಂಪು! (ಚಿತ್ರ ಕೃಪೆ - ಅಜಾದ್ ಸರ್ )

ಮೊದಲಿಗೆ "ನಿಮ್ಮೊಳಗೊಬ್ಬ ಬಾಲೂ" ಬ್ಲಾಗಿನ ಬಾಲೂ ಸರ್ , ದಾಖಲೆ ಮಾರಾಟಗೊಂಡ "ಅಮ್ಮ ಹೇಳಿದ ಎಂಟು ಸುಳ್ಳುಗಳು" ಪುಸ್ತಕ ಹಾಗು "ಹಾಡು ಹುಟ್ಟಿದ ಸಮಯ" ಹಾಗೂ ಇನ್ನು ಅನೇಕ ಪುಸ್ತಕಗಳ ಕತೃ ಮಣಿಕಾಂತ್ ಸರ್, ಸುಂದರ ನಗೆಯ ಸುಲತ ಹಾಗೂ ನಾನು ಕಾಯುತ್ತ ನಿಂತಿದ್ದೆವು. ಸಮಯ ಕಳೆಯಲೆಂದು ಕಲ್ಲಂಗಡಿ ರಸ ಕುಡಿಯುವ ಎಂದು ಚೀಟಿ ತೆಗೆದುಕೊಂಡೆವು.  ಸುಮಾರು ಅರ್ಧ ಘಂಟೆಯಾದರೂ ಪತ್ತೆ ಇಲ್ಲ...ಬಾಲೂ ಸರ್ ಏನ್ ಶ್ರೀಕಾಂತ್...ಇವರೇನು ತೋಟಕ್ಕೆ ಹೋಗಿದ್ದಾರ ಕಲ್ಲಂಗಡಿ ಬೆಳೆಯಲಿಕ್ಕೆ ಅಂದರು.....ಅಲ್ಲಿದ್ದ ಸುಂದರ (?) ತರುಣಿ ನಮ್ಮಿಬ್ಬರನ್ನೇ ನೋಡುತ್ತಾ ಕಡೆಗೆ ಬೇಜಾರಾಗಿ..ಪೋಸ್ಟ್ ಮಾರ್ಟಂ ಮಾಡುವ ರೀತಿ ಕಲ್ಲಂಗಡಿಯನ್ನ ಕೊಚ್ಚಲು (ಹಃ ಹಃ ಆಕೆ ಹೆಚ್ಚುತ್ತಾ ಇದ್ದದ್ದು ಹಾಗೆ ಇತ್ತು)..ಅಷ್ಟರಲ್ಲಿ ಆಕೆಯನ್ನು ರಕ್ಷಿಸಲು ಇನ್ನೊಬ್ಬ ಮಹನೀಯ ಬಂದು ಚಕ ಚಕಾ ಅಂತ ಜ್ಯೂಸು ಸಿದ್ಧ ಮಾಡಿಕೊಟ್ಟ....ಇನ್ನೇನು ಕುಡಿಯಬೇಕು ಅಷ್ಟರಲ್ಲಿ ಕೃಷ್ಣ-ಅರ್ಜುನರಂತೆ "ಇಟ್ಟಿಗೆ ಸಿಮೆಂಟ್ "ಬ್ಲಾಗಿನ ಪ್ರಕಾಶಣ್ಣ ಮತ್ತು "ಜಲನಯನ "ಮೇಡಂ" ಖ್ಯಾತಿಯ ಅಜಾದ್ ಸರ್ ಒಳಗೆ ಬಂದರು...ಅವರ ಹಿಂದೆಯೇ "ಛಾಯ ಕನ್ನಡಿಯ" ಪ್ರತಿಭೆ ಶಿವೂ ಸರ್ ಬಂದರು...ಸರಿ ಎಲ್ಲರೂ ಹಂಚಿಕೊಂಡು ಜ್ಯೂಸು ಕುಡಿದೆವು.

ಬದರಿನಾಥ್ ನಮ್ಮ ಜೊತೆ ಸೇರಲು ಅರ್ಧ ದಾರಿಗೆ ಬಂದಿದ್ದಾಗ ಕಚೇರಿಯಿಂದ ಮತ್ತೆ ಕರೆ ಬಂದು ಅವರು ವಾಪಸ್ ತಮ್ಮ ಕೆಲಸಕ್ಕೆ ಹೊರತು ಹೋದ ವಿಷಯ ಕೇಳಿ ಮನಸಿಗೆ ಬೇಜಾರಾಯಿತು..ಹಾಗೆಯೇ ಸಂಬಂಧಿಕರ ಅಕಾಲಿಕ ಮರಣ ಶಕುಂತಲ ಅಯ್ಯರ್ ಅವರನ್ನು ಗೈರು ಹಾಜರಿ ಹಾಕಿಸಿತು...ಶಮ್ಮಿ ಸಂಜೀವ್ ಕೆಲಸದ ಒತ್ತಡದ ಕಾರಣ ಬರಲಾಗಲಿಲ್ಲ ಎಂದು ತಿಳಿಸಿದರು.

ಅಜಾದ್ ಸರ್ ನಡೀರಿ ಮೇಲೆ ಹೋಗೋಣ ಅಂದರು...ಸುಲತ ಕಿಸಕ್ಕನೆ ನಕ್ಕು ಇಷ್ಟು ಬೇಗನಾ ..ಎಷ್ಟೋ ಕನಸುಗಳು ಬಾಕಿ ಇವೆ..ಎಂದರು...ಎಲ್ಲರು ಗೊಳ್ ಎಂದು ನಕ್ಕು..ಎರಡನೇ ಮಹಡಿಗೆ ಬಂದೆವು...

ಅಲ್ಲಿಗೆ "ಬಿಳಿಮುಗಿಲು" ಬ್ಲಾಗಿನ ರೂಪ ಸತೀಶ್, "ವಿಧ್ಯಾಇಲಾಖೆಯ" ಸುಮಾ ಮೇಡಂ, ಜ್ಯೋತಿ, "ಸ್ವಂತ ಪತ್ರಿಕೆ" ನಡೆಸುತ್ತಿರುವ ಗುರುನಾಥ್ ಬೋರಗಿ, "ಪೆನ್ನು ಪೇಪರ್" ಬ್ಲಾಗಿನ ನಾಗರಾಜ್ ಮತ್ತು ಅನಿಲ್ ಸೇರಿಕೊಂಡರು. ಒಂದು ಬಳಗವೇ ಆಯಿತು. ಎಲ್ಲರೂ ಸಂತಸ ಭರಿತರಾಗಿ ಒಂದು ಎರಡು ಬಾಳೆಲೆ ಹರಡು ಪದ್ಯವನ್ನು ನೆನೆಯುತ್ತ ಹಾಕಿದ್ದನ್ನು ಸರಿಯಾಗಿ ಬಾರಿಸಿದೆವು.  ಊಟದ ಮಧ್ಯೆ...ರಾಜಕೀಯ,  ಕಾವೇರಿ, ಬ್ಲಾಗ್ಗಳ ದುಸ್ಥಿತಿ, ನಗೆ ಚಟಾಕಿಗಳು, ಇದರ ಮಧ್ಯೆ ಛಾಯಾ ಚಿತ್ರಣ ಎಲ್ಲವು ನಡೆದಿತ್ತು...

ಇಡಿ ತಂಡದ ಒಂದು ಚಿತ್ರ ತೆಗೆದುಕೊಂಡು ಹೊರಡುವ ಅನ್ನುವಷ್ಟರಲ್ಲಿ ಮೈಸೂರಿನಿಂದ ಸತೀಶ್ ಕನ್ನಡಿಗ ಅವರು ಬಂದದ್ದು ಎಲ್ಲರಿಗೂ ಸಂತಸ ತಂದಿತು..ಅವರು ಊಟ ಮಾಡಿ ಎಲ್ಲರು ತಮ್ಮ ತಮ್ಮ ಮನೆ,  ಆಫೀಸ್ ಅಥವಾ ಬೇರೆ  ಕೆಲಸಗಳಿಗಾಗಿ ಹೊರಟರು...ಶಿವೂ ಸರ್ ತಮ್ಮ ಪ್ರಶಸ್ತಿ ವಿಜೇತ ಪುಸ್ತಕ "ವೆಂಡರ್ ಕಣ್ಣು" ಕೊಟ್ಟು ಈ ದಿನದ ಗೆಳೆಯರ ಭೇಟಿಯನ್ನು ಹಸಿರಾಗಿಸಿದರು..

ನಾನು ಸೀದಾ ಮನೆಗೆ ಬಂದು ಅಣ್ಣಾವ್ರು ಹೇಳಿದ ಹಾಡನ್ನೇ ಗುನುಗುನಿಸಿ ಕಡೆಗೆ ಏನು ಮಾಡುವುದು ಬೇಡ ಎಂದು...ಸುಮ್ಮನಾದೆ..

ಸಂಜೆ ಸುಮಾರು ಏಳುವರೆ ಘಂಟೆಗೆ ಪ್ರಕಾಶಣ್ಣ ಕರೆ ಮಾಡಿ ಬನ್ನಿ ಮನೆಗೆ ಅಂದರು. ಅವರ ಆಹ್ವಾನವನ್ನು ತಿರಸ್ಕರಿಸುವ ಮನಸಾಗಲಿಲ್ಲ...ಮಡದಿ, ಹಾಗು ನನ್ನ ಮುದ್ದಿನ ಸ್ನೇಹಿತೆ (ನನ್ನ ಮಗಳು) ತಮ್ಮ ದಂತ ಪಂಕ್ತಿಗಳನ್ನ ತೋರಿಸಿದರು. ಪರಿಣಾಮ ಸುಮಾರು ಒಂದು ತಾಸಿನ ನಂತರ ನಡೆದಾಡುವ ದೇವರು ಪ್ರಕಾಶ ಹೆಗಡೆಯವರ ತಾಯಿಯ ರೂಪದಲ್ಲಿ ಕಾಣಿಸಿದರು. ಆ ಮಾತೃ ಸ್ವರೂಪವನ್ನು ನೋಡಿ ಮನಸಿಗೆ ಆಹ್ಲಾದಕರ ಅನುಭವವಾಯಿತು. ಸುಮಾರು ಒಂದು ಘಂಟೆ ಅದು ಇದು ಅಂತ ಲೋಕಾಭಿರಾಮವಾಗಿ ಮಾತಾಡುತ್ತ ಆಶಾ ಅತ್ತಿಗೆ ಕೊಟ್ಟ ಉಪ್ಪಿಟ್ಟು, ಕಾಫಿ ಕುಡಿದು, ಪ್ರಕಾಶಣ್ಣ ಆಶೀರ್ವಾದ ಮಾಡಿ ಕೊಟ್ಟ ನನ್ನ ಮೆಚ್ಚಿನ ಲೇಖನ ಪೂರ್ಣ ಚಂದ್ರ ತೇಜಸ್ವಿ ಅವರ ಪುಸ್ತಕ, ಅಮ್ಮನ ಆಶೀರ್ವಾದ, ಹಾಗೂ ಅಮ್ಮ ಕಸೂತಿ ಮಾಡಿ ನಮಗಾಗಿ ಕೊಟ್ಟ ಸುಂದರ ಹಾಸು ತೆಗೆದುಕೊಂಡು ಮನೆಗೆ ತಲುಪಿದಾಗ  ಪ್ರಪಂಚವನ್ನೇ ಗೆದ್ದ ಸಂಭ್ರಮ..

ಮನೆ ಹತ್ತಿರ ಕಾರು ನಿಂತಾರ..ರೇಡಿಯೋದಲ್ಲಿ ಯಾವ ಜನ್ಮದ ಮೈತ್ರಿ ಈ ಜನ್ಮದಲ್ಲಿ ಬಂದು ನಮ್ಮೆಲರನ್ನು ಮತ್ತೆ ಬಂಧಿಸಿಹುದೋ ಕಾಣೆ......

ಇದಲ್ಲವೇ ಭಾಗ್ಯ...ಸುಂದರ ದಿನ ಕಳೆಯಲು ಅನುವು ಮಾಡಿಕೊಟ್ಟ ಎಲ್ಲ ಬ್ಲಾಗ್ ಪ್ರಪಂಚದ ಮಿತ್ರರಿಗೆ ಈ ಲೇಖನ ಅರ್ಪಿತ..!!!

Friday, November 23, 2012

ಸಿಸ್ಕೋದಲ್ಲಿ ಸಂಭ್ರಮದ ಉತ್ಸವ ರಾಜ್ಯೋತ್ಸವ..23.11.2012

ಕನ್ನಡ ಎನೆ ಕುಣಿದಾಡುವುದೆನ್ನೆದೆ 
ಕನ್ನಡ ಎನೆ ಕಿವಿ ನಿಮಿರುವುದು ||
ಕಾಮನ ಬಿಲ್ಲನು ಕಾಣುವ ಕವಿಯೊಳು
ತೆಕ್ಕನೆ ಮನ ಮೈ ಮರೆಯುವುದು 

ಕನ್ನಡ ಕನ್ನಡ ಹ! ಸವಿಗನ್ನಡ 
ಕನ್ನಡದಲಿ ಹರಿ ಬರೆಯುವನು 
ಕನ್ನಡದಲಿ ಹರ ತಿರಿಯುವನು

ಕನ್ನಡದಲ್ಲಿಯೇ ಬಿನ್ನಹ ಗೈದೊಡೆ 
ಹರಿ ವರಗಳ ಮಳೆ ಕರೆಯುವನು 
ಹರ ಮುರಿಯದೆ ತಾ ಪೊರೆಯುವನು

ಬಾಳುಹುದೇತಕೆ ? ನುಡಿ, ಎಲೆ ಜೀವ 
ಸಿರಿಗನ್ನದದಲಿ ಕವಿತೆಯ ಹಾಡೆ
ಸಿರಿಗನ್ನಡದೇಳಿಗೆಯನು ನೋಡೆ
ಕನ್ನಡ ತಾಯಿಯ ಸೇವೆಯ ಮಾಡೆ 


ಮಿತ್ರ ಸಂದೀಪ್ ಕೆ.ಬಿ ಕೈಚಳಕ!

ಸಿಸ್ಕೋ ಸಭಾಂಗಣಕ್ಕೆ ಕಾಲಿಟ್ಟ ಕೂಡಲೇ ನನ್ನ ಆತ್ಮೀಯ ಗೆಳೆಯ ಸಂದೀಪ್ ಕೆ.ಬಿ. ಸಿದ್ಧಪಡಿಸಿದ ವೇದಿಕೆಯ ಮೇಲಿದ್ದ ಚಿತ್ರದಲ್ಲಿ  ಕನ್ನಡದ ಆದಿಕವಿ ಪಂಪನ  ಅಮರವಾಣಿ “ ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ ” ಕಿವಿಯಲ್ಲಿ ಹಾಗು ಕಣ್ಣಲ್ಲಿ ಮಾರ್ಧನಿಸಿತು..ಆ ಮತ್ತಿನಲ್ಲಿಯೇ ಒಳಗೆ ಬಂದಾಗ ರಾಷ್ಟ್ರ ಕವಿ ಕುವೆಂಪು ಬರೆದ ಮೇಲಿನ ಗೀತೆಯನ್ನು ಹೃದಯದಲ್ಲಿ ತಾನೇ ತಾನಾಗಿ ಹಾಡುತ್ತಿತ್ತು..

ಇದು ನಾ ಕಂಡ ಅತಿ ಉತ್ತಮ ಕರುನಾಡಿನ ಹುಟ್ಟು ಹಬ್ಬದ ಆಚರಣೆಗಳಲ್ಲಿ ಒಂದು.  ಗ್ರಾಮೀಣ ಕ್ರೀಡೆಯನ್ನು ಕೇಂದ್ರೀಕರಿಸಿ ಸಿದ್ಧ ಪಡಿಸಿದ  ಆ ಪಟ ನನ್ನ ಮನಸನ್ನು ಇನ್ನಷ್ಟು ಭಾವನಾತ್ಮಕವಾಗಿ ಮಾಡಿತು. ಕಂಬಳ, ಕಬಡ್ಡಿ, ಕುಂಟೆ ಬಿಲ್ಲೆ, ಜಟ್ಟಿಗಳ ಮಲ್ಲಯುದ್ಧ, ಗೋಲಿಯಾಟ, ಬುಗುರಿ, ಜೀಕಾಟ..ಆಹಾ ಗ್ರಾಮೀಣ ಬದುಕೇ ಚಂದ..

ನಾಡಗೀತೆಯೊಂದಿಗೆ ಕಾರ್ಯಕ್ರಮ ಶುರುವಾಗಿತ್ತು..ನಾ ಹೋದಾಗ ಚುಟುಕು ಕವಿ ಚಕ್ರವರ್ತಿ ಶ್ರೀ ಡುಂಡಿರಾಜರು ಮುಖ್ಯ ಅತಿಥಿಯ ಸಿಂಹಾಸನದಲ್ಲಿ ವಿರಾಜಮಾನರಾಗಿದ್ದರು. ಅವರ ಪಕ್ಕದಲ್ಲಿ ಸಿಸ್ಕೋ ಕಂಪನಿಯ ಹೃದಯ ಎನ್ನಬಹುದಾದ ಶ್ರೀ ಅರವಿಂದ ಸೀತಾರಾಮನ್ ಉಪಸ್ಥಿತರಿದ್ದರು.  

ಶ್ರೀ ಡುಂಡಿರಾಜರಿಗೆ ಇದು ಮಗಳ ಮನೆ ಅರ್ಥಾತ್ ಅವರ ಮಗಳು, ಮತ್ತು ಅಳಿಯ ಸಿಸ್ಕೋ ಸಂಸ್ಥೆಯಲ್ಲಿಯೇ ಕೆಲಸ ಮಾಡುವುದು ಎನ್ನುವ ವಿಚಾರ ಅವರಿಂದಲೇ ತಿಳಿಯಿತು. 
ಚುಟುಕುಗಳ ಧಣಿ ಶ್ರೀ ಡುಂಡಿರಾಜ್

ಹಾಗಾಗಿ ನಿರರ್ಗಳವಾಗಿ ಪುಂಕಾನುಪುಂಕವಾಗಿ ಚುಟುಕು ಕವಿತೆಗಳು ಹರಿದಾಡಿದವು, ಕೊಟ್ಟ ಸಮಯ ಬರಿ ಗಡಿಯಾರದಲ್ಲಿತ್ತು ಅಷ್ಟೇ..ಆದರೆ ಆ ಸಮಯದ ಪರಿಧಿಯನ್ನು ಧಾಟಿ ನಮ್ಮನ್ನೆಲ್ಲ ರಂಜಿಸಿದರು.  ನಗಲು ನಮಗೆ ಇನ್ನಷ್ಟು ಸಮಯ ಬೇಕಿತ್ತು ಅನ್ನಿಸಿದ್ದರೆ ಅದು ಯಾರ ತಪ್ಪು ಅಲ್ಲ...ಏಕೆಂದರೆ ಅವರ ಬಳಿ ಕಂ"ಬಳಿ"ಗಿಂತ ನವಿರಾದ, ಬೆಚ್ಚಗಿನ ಕವಿತೆಗಳ ಅಸ್ತ್ರಗಳೇ ಬೇಕಷ್ಟು ಇದ್ದವು. ಅವರು ನಮ್ಮನ್ನು ಕಂ "ಬಳಿ" ಎಂದು ಕರೆಯದಿದ್ದರೂ..ಅವರ ನವಿರಾದ   ಹಾಸ್ಯ, ಬಾರಿಸಿದ ಎಚ್ಚರಿಕೆಯ ಘಂಟೆ, ಎಲ್ಲವು ಅನಾಮತ್ತಾಗಿ ನಮ್ಮನ್ನು ಅವರ ಬಳಿಯೇ ಕರೆದೊಯ್ದಿತು...

ಅವರ ನಂತರ ಶ್ರೀ ಅರವಿಂದ ಸೀತಾರಾಮನ್ ಅವರು ಕನ್ನಡದಲ್ಲಿ ಮಾತಾನಾಡಿ ತಮ್ಮ ಅಭಿಮಾನದ ಮೆಚ್ಚುಗೆಯ  ನುಡಿಮುತ್ತುಗಳನ್ನು ಸುರಿಸಿದರು. 


ಶ್ರೀ ಅರವಿಂದ ಸೀತಾರಾಮನ್ 
ಈ  ವರ್ಷ ಅವರಿಗೆ ಸುಮಧುರ ರಾಜ್ಯೋತ್ಸವ ಕಾರಣ ಎಂದರೆ..ಅವರಿಗೆ ಸಮಾಜ ಸೇವೆಗಾಗಿ ಈ ವರುಷದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಕರ್ನಾಟಕ ಸರಕಾರ ಪ್ರಧಾನ ಮಾಡಿರುವುದು.  ಇದು ಸಿಸ್ಕೋ ಸಂಸ್ಥೆಯ ಹಾಗು ಕರುನಾಡಿನ ಎಲ್ಲರಿಗೂ ಸಂತಸದ ವಿಷಯ.


 ಪ್ರಶಸ್ತಿ ಪ್ರಧಾನ ಸಮಾರಂಭದ ದೃಶ್ಯಾವಳಿ 

ನಂತರ ಸಾಂಸ್ಕೃತಿಕ ನದಿಯ ಆಣೆಕಟ್ಟು ಒಡೆದು ಪ್ರವಾಹದಂತೆ ನೆರೆದಿದ್ದ ಅಭಿಮಾನಿಗಳ ಮೇಲೆ ಅಪ್ಪಳಿಸಿತು. ಒಂದಲ್ಲ ಎರಡಲ್ಲ ಸರಿ ಸುಮಾರು ಮೂರು ಘಂಟೆಗಳ ಕಾಲ ಒಂದಾದ ಮೇಲೆ ಒಂದರಂತೆ.ನೃತ್ಯ, ಚಿಕ್ಕ ಚಿಕ್ಕ ಪ್ರಹಸನಗಳು, ಗ್ರಾಮೀಣ ಬದುಕು ಏಕೆ ಚಂದ ಎನ್ನುವ ರೂಪಕ, ಬೇರೆ ಭಾಷೆ ಮಾತಾಡುವ ಪ್ರಾಂತ್ಯದಿಂದ ಬಂದರೂ..ನೆಲ ಜಲ ಕೊಟ್ಟ ಭೂಮಿಯನ್ನು ಅಪ್ಪಿ, ಅಲ್ಲಿನ ಭಾಷೆಯನ್ನ ಕಲಿಯುವ ಪ್ರಯತ್ನ ಮಾಡಿ ಯಶಸ್ವಿಯಾದ ಒಂದು ತಂಡದಿಂದ ಮೂಡಿಬಂದ ದೃಶ್ಯಗಳು ಎಲ್ಲವು ಮನರಂಜಿಸಿದವು ಹಾಗು ಸಂದೇಶವನ್ನು ರವಾನಿಸಿದವು.

ಸಿಸ್ಕೋ ಸಂಸ್ಥೆಯ ಕೆಲವು ಕಲಾವಿದರು ನಡೆಸಿಕೊಟ್ಟ ಸಂಗೀತ ರಸಸಂಜೆ,  ಕನ್ನಡ ಚಿತ್ರರಂಗದ ಕೆಲ ಧ್ರುವತಾರೆಗಳ ಮೆಲುಕು ಹಾಕುವ ಹಾಡುಗಳನ್ನು ಇಂಪಾಗಿ ಹಾಡಿ, ಅದಕ್ಕೆ ತಕ್ಕ ನೃತ್ಯಗಳನ್ನೂ ಮಾಡಿದರು..ಎಲ್ಲವು ಸೊಗಸಾಗಿ ಮೂಡಿಬಂದವು. ಬಾಳೆಹಣ್ಣನ್ನು ಜೀನು ತುಪ್ಪದಲ್ಲಿ ಅದ್ದಿ, ಅದಕ್ಕೆ ಸಕ್ಕರೆಯನ್ನು ಬೆರೆಸಿದಂತೆ ಎಲ್ಲ ಕಾರ್ಯಕ್ರಮಗಳು ಹುಣ್ಣಿಮೆ ಚಂದ್ರನಂತೆ ಮೂಡಿಬಂದವು.

ಅದಕ್ಕೆ ಕಳಶಪ್ರಾಯವಿಟ್ಟಂತೆ ಲಘು ಉಪಹಾರ ಹಸಿದ ದೇಹಕ್ಕೆ ಸವಿರುಚಿಯನ್ನು ತೋರಿಸಿತು.  

ಕೊರವರ ನೃತ್ಯ, ರಂಗೋಲಿ ಸ್ಪರ್ಧೆ,  ಲಗೋರಿ, ಚೌಕಭಾರಃ, ಕುಂಟೆ ಬಿಲ್ಲೆ ಮುಂತಾದ ಸುಂದರ ಕಾರ್ಯಕ್ರಮಗಳು ಬೆಳಿಗ್ಗೆ ಇಂದ ನಡೆದಿತ್ತು ಎಂದು ನಂತರ ತಿಳಿಯಿತು.

ಸಿಸ್ಕೋ ಸಂಸ್ಥೆಯನ್ನು ಬಿಟ್ಟು ಸರಿ ಸುಮಾರು ಒಂದುವರೆ ವರುಷವಾದರೂ ಅನೇಕ ಸ್ನೇಹಿತರ ಸ್ನೇಹದ ಗುಂಗಿನಿಂದ ಹೊರಗೆ ಬರಲಾಗಿರಲಿಲ್ಲ.ಅಂತಹ ಅನೇಕ ಸ್ನೇಹಿತರನ್ನು ನೋಡಿದ್ದು,  ಮಾತಾಡಿಸಿದ್ದು, ಹರಟಿದ್ದು ಎಲ್ಲವನ್ನು ಕಂಡ ನನ್ನ ಮನ ಭಲೇ ಕಾಂತಾ ಶ್ರೀಕಾಂತ ಭಲೇ..ನನ್ನ ಮನಸಿಗೆ ಇನ್ನಷ್ಟು ಹುರುಪನ್ನು ತಂದಿದ್ದೀಯ ಅಂತ ಹೇಳಿದಾಗ ನನಗೆ ನಾನೇ ಬೆನ್ನನ್ನು ತಟ್ಟಿ ಕೊಂಡೆ..ಹಹಹಹ..

ಸಂದೀಪ್ ಕೆ.ಬಿ, ರವಿ ಆರ್, ಛಾಯ, ವಿನೋದ್ ಕೃಷ್ಣ, ರಘುನಂದನ್, ಜೀವೆಂದರ್, ವಿನಯ್ ಕುಮಾರ್,  ವಸಂತ್ ಶೆಟ್ಟಿ, ಸಂತೋಷ್ ಕುಮಾರ್, ಶ್ರೀಶೈಲ, ಶ್ರೀದೇವಿ ಸುಬ್ರಮಣ್ಯಮ್,  ಜಗದೀಶ್ ಮಲ್ಪುರ , ಜಗದೀಶ್ ಪಂಚಣ್ಣ, ಮಂಜು ಶಂಕರ್, ಪೂರ್ಣಪ್ರಜ್ಞ , ಸತ್ಯನಾರಾಯಣ ಉಡುಪ, ಸುರೇಶ ಬಾಬು ಕೆ.ಪಿ, ಮಲ್ಲಿಕಾರ್ಜುನ, ಜಾರ್ಜ್, ಡಾರ್ವಿನ್, ದೂರವಾಣಿಯಲ್ಲೇ ಮಾತಾಡಿಸಲು ಸಾಧ್ಯವಾದ ಶರ್ಮಿಳ ದಾಮ್ಲೆ , ಮನೋಜ್ಞ (ಅಣ್ಣಾವ್ರು), ಒಂದೇ ಎರಡೇ ಎಲ್ಲ ಮೃದು ಸ್ನೇಹ ಜೀವಿಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.


ಇಂತಹ ಒಂದು ಸುಂದರ ಸಂಜೆಯನ್ನು ಅಚ್ಚುಕಟ್ಟಾಗಿ ನೇಯ್ದು ಸುಂದರ ಪೋಷಾಕನ್ನು ಮಾಡಿ ತಾಯಿ ಭುವನೇಶ್ವರಿಗೆ ಮುಕುಟವನ್ನು ತೊಡಿಸಿದ "ಸಂಭ್ರಮ" ತಂಡಕ್ಕೆ ಅಭಿನಂದನೆಗಳು!!!  

Wednesday, November 14, 2012

ಅನುಗ್ರಹ ಸದನದಲ್ಲಿ ಸಂತಸದ ಕ್ಷಣಗಳು

ಛಲ ಎನ್ನುವುದು ಜೀವನದಲ್ಲಿ ಸುಂದರ ಬದಲಾವಣೆ ತರುತ್ತದೆ..ಅದಕ್ಕೆ ತಾಳ್ಮೆ ಇರಬೇಕು..ಧೃಡ ಮನಸ್ಸು ಇರಬೇಕು..ನಮ್ಮ ಅಪ್ಪ ಏನು ಹೇಳಲಿಲ್ಲ..ಆ ಹಾದಿಯಲ್ಲಿ ಪಯಣಿಸಿದರು..ಅಂತಹ ಹಾದಿಯಲ್ಲಿ ಪಯಣಿಸುತ್ತಿರುವ ನಮ್ಮ ಕುಟುಂಬಕ್ಕೆ ಆಲದ ಮರದ ಹಾಗೆ ನಿಂತಿರುವ ನಮ್ಮ ಅಕ್ಕನ ಬಾಳಿನಲ್ಲಿ ಇಂದು ಇನ್ನೊಂದು ಹೊಸ ಅಧ್ಯಾಯ..

ಇಸವಿ 2008ರಲ್ಲಿ ನನ್ನ ಅಕ್ಕ ಮೊದಲ ದ್ವಿಚಕ್ರ ವಾಹನ ಕೊಂಡುಕೊಂಡಾಗ, ನನಗೆ ಅಚ್ಚರಿಯಾಗಿತ್ತು ಹೇಗೆ ಓಡಿಸುತ್ತಾಳೆ, ತುಂಬಾ ಹೆದರಿಕೆ ಸ್ವಭಾವದವಳಾದ ಅಕ್ಕ  ಬೆಂಗಳೂರು ಮಹಾನಗರದ ಜಾತ್ರೆಯಲ್ಲಿ ಹೇಗೆ ಗಾಡಿ ಓಡಿಸುತ್ತಾಳೆ ಎನ್ನುವ ಆತಂಕವಿತ್ತು.  ಧೈರ್ಯ ಮಾಡಿ ಟಿ.ವಿ.ಎಸ್ ಸ್ಕೂಟಿ..ತೆಗೆದುಗೊಂಡಳು. ಮೊದಲನೇ ತಪಾಸಣೆಗೆ ಹೋದಾಗ ಗಾಡಿ ಓದಿದ್ದು ಕೇವಲ ನೂರು ಕಿಲೋಮೀಟರು ಗಳು ಮಾತ್ರ..

ಒಮ್ಮೆ ನಾನು ಬಲವಂತ ಮಾಡಿ, ನೀನು ಮುಂದೆ ಓಡಿಸಿಕೊಂಡು ಹೋಗು..ನಾನು ನಿನ್ನ ಹಿಂಬಾಲಿಸುತ್ತೇನೆ ಎಂದು ಧೈರ್ಯ ಹೇಳಿ ಮಲ್ಲೇಶ್ವರಂಗೆ ಸಂಜೆಯ ವಾಹನ ದಟ್ಟಣೆಯಲ್ಲಿ ಓಡಿಸಲು ಹುರಿದುಂಬಿಸಿದೆ.  ಹೇಗೋ ಕಷ್ಟ ಪಟ್ಟು, ನನ್ನ ಚೆನ್ನಾಗಿ ಬಯ್ದುಕೊಂಡು ಓಡಿಸಿಕೊಂಡು ಬಂದಳು. 

ಹೀಗೆ ಕಳೆಯಿತು ದಿನಗಳು, ವಾರಗಳು, ತಿಂಗಳುಗಳು.  ಕಳೆದದ್ದು ಸುಮಾರು ಐದು ವರ್ಷಗಳು, ಒಮ್ಮೆ ನಾನು ಅಕ್ಕನ ಗಾಡಿ ತೆಗೆದುಕೊಂಡು ಓಡಿಸುತ್ತಾ ಇರುವಾಗ ಯಾಕೋ ಮೀಟರ್ ಕಡೆ ಗಮನ ಹೋಯಿತು.  ಆಶ್ಚರ್ಯ ...ಹತ್ತಿರ ಹತ್ತಿರ ಐವತ್ತು ಸಾವಿರ ಕಿ.ಮಿ.ಗಳು ಐದು ವರ್ಷದಲ್ಲಿ....ತಲೆ ತಿರುಗತೊಡಗಿತು.

ಅಕ್ಕನ, ಧೈರ್ಯ, ಜೀವನದಲ್ಲಿ ಮುಂದೆ ಸಾಗಬೇಕೆನ್ನುವ ಛಲ, ಆತ್ಮ ವಿಶ್ವಾಸ, ಎಲ್ಲ ನೆನೆದು ಮೈ ಜುಮ್ ಎಂದಿತು. ಯಾವಾಗಲೂ ಅಕ್ಕ ಹೇಳುವುದು ನಾವೆಲ್ಲಾ ಜೊತೆಯಲ್ಲೇ ಹೋಗೋಣ..ಅವಳು ತಂದ ಗಾಡಿಯ ಹೆಸರು ನೋಡಿ...ಅದನ್ನೇ ಹೇಳುತ್ತೆ...ಈ ಭಾಂದವ್ಯವೇ ನಮ್ಮ ಅನುಗ್ರಹ ಸದನದ ಬುನಾದಿ!!!   

ನಾವು ಬಂದೆವಾ !!!!

ಇಂದಿನ ಬಲಿಪಾಡ್ಯಮಿ ದಿವಸ, ಮನೆಯಲ್ಲಿ ಹಬ್ಬದ ಸಡಗರವಿರಲಿಲ್ಲ (ಅಪ್ಪ ನಮ್ಮನ್ನು ದೈಹಿಕವಾಗಿ ಅಗಲಿ ಒಂದು ವರ್ಷ ಕಳೆದಿರದ ಕಾರಣ), ಆದರೆ ಒಂದು ಹೊಸ ವಾಹನ ಮನೆಗೆ ಬಂದದ್ದು ಹಬ್ಬದ ಕಲರವ ಮೂಡಿಸಲು ಸಹಾಯ ಮಾಡಿತ್ತು.  

ಅಕ್ಕನ ಹೊಸ ವಾಹನ....ಹೊಸ ಹುಮ್ಮಸ್ಸು!
ಪಿತೃ ಸಮಾನರಾದ ಕುಮಾರ ಚಿಕ್ಕಪ್ಪ ವಾಹನ ಪೂಜೆ ಮಾಡಲು ಬಂದದ್ದು ಎಲ್ಲರಿಗು ಸಂತಸ ತಂದಿತ್ತು.  
ಪಿತೃ ಸಮಾನರಾದ ಕುಮಾರ ಚಿಕ್ಕಪ್ಪ...

ಸರಳವಾಗಿ, ಅರ್ಥಗರ್ಭಿತ ಪೂಜೆ ಮಾಡಿ, ಅದರ ಅರ್ಥ, ವಿಸ್ತಾರ ತಿಳಿಸಿ, ನಮ್ಮನ್ನೆಲ್ಲ ಹರಸಿದ್ದು ನೋಡಿ ಅಮ್ಮನ ಕಣ್ಣಲ್ಲಿ ಹೊರಬರಲಾರದೆ ಕುಳಿತಿದ್ದ ಆನಂದಭಾಷ್ಪ ಭರಿತ ಕಣ್ಣೀರನ್ನು ನೋಡಿದೆ.  ಅಣ್ಣ ಇದ್ದಿದ್ದರೆ.....ಛೆ ಎಂತಹ ಮಾತು ಇಲ್ಲೇ ನಮ್ಮ ಜೊತೆಯಲ್ಲಿ ಇದ್ದಾರೆ. ನಮ್ಮನ್ನೆಲ್ಲ ಹರಸಿದ್ದಾರೆ.

ಕುಮಾರ ಚಿಕ್ಕಪ್ಪ...ಪೂಜಾ ಧಿರಸಿನಲ್ಲಿ 
ನಮ್ಮ ಮನೆಯ ಕಲಾವಿದ ವಿಷ್ಣು, ತನ್ನ ಇಷ್ಟ ದೈವ ಗಣಪನನ್ನು ಗಾಡಿಯ ಮೇಲೆ ಬಿಡಿಸಿದ ಕ್ಷಣಗಳು ಅಮೋಘ..ಅವನಿಗೆ ಒಂದು ಕಾನ್ವಾಸ ಬೇಕು ಅಷ್ಟೇ...ಇವತ್ತು ಗಾಡಿಯ ಸಂಖ್ಯಾ ಫಲಕದ ಮೇಲೆ ತನ್ನ ಕಲೆಯನ್ನು ಅರಳಿಸಿದ..
ವಿಷ್ಣು ಕಶ್ಯಪನ ಕಲೆ ಅರಳಿತು 

.ಮಗ ಬರೆದ ಚಿತ್ರಕ್ಕೆ  ಅಪ್ಪ..  ಅಂತಿಮ ಸ್ಪರ್ಶ ನೀಡಿದ್ದು 

ಹೊಸ ಗಾಡಿ ಹೊಸ ಚಿತ್ರ...

ಅಪ್ಪ ಅಕ್ಕನಿಗೆ ಕಿವಿ ಮಾತು ಹೇಳಿದ್ದು ಪಿಸುಮಾತಿನಲ್ಲಿ ಕೇಳಿದ ಅನುಭವ  ತಂದಿತ್ತು.
ತಂದೆಯ ಭಾವಚಿತ್ರದೊಂದಿಗೆ ಪರಿವಾರ...

.."ಮಗು ಜೀವನದಲ್ಲಿ ನೀನು ಕಷ್ಟ ಬಂದರು, ಅದನ್ನು ದೂರ ಸರಿಸುವ ಧೈರ್ಯ, ಸ್ಥೈರ್ಯ ನಿನ್ನಲ್ಲಿದೆ...ವಾಹನ ಬಂತು..ಮುಂದಿನ ಕೆಲವು ವರುಷಗಳಲ್ಲಿ   "ಅನುಗ್ರಹ ಸದನ" ನಮ್ಮದಾಗಲಿ...ನನ್ನ ಆಶೀರ್ವಾದ ನನ್ನ ಕುಟುಂಬದ ಮೇಲೆ ಇದೆ.ಮುನ್ನುಗ್ಗು ಮಗು..ಮುನ್ನಡೆಸಲು ನನ್ನ ವಿಶಾಲು ಇದ್ದಾಳೆ" 

Thursday, November 1, 2012

ಬ್ಲಾಗಿಗರ ಜೊತೆ ವಿಶಿಷ್ಟ ರೀತಿಯ ಕನ್ನಡ ರಾಜ್ಯೋತ್ಸವ!

ಭಗವಂತ ಏನೇ ಕೊಟ್ಟರು ಸರಿಯಾದ ಸಮಯದಲ್ಲಿ ಕೊಡುತ್ತಾನೆ.  ಇದು ಅನೇಕರ ಜೀವನದಲ್ಲಿ ಅನೇಕ ಘಟನೆಗಳ ಮೂಲಕ ನಿರೂಪಣೆಯಾಗಿದೆ....ಹಾಗೂ  ಸಾಕ್ಷಾತ್ಕಾರವಾಗಿದೆ.   

ಸರಿಯಾದ ಸಮಯದಲ್ಲಿ...ಸರಿಯಾದ ರೀತಿಯಲ್ಲಿ ನಿಲ್ಲುವರು ಸ್ನೇಹಿತರು ಎನ್ನುತ್ತಾರೆ. ಇಂದು ಕನ್ನಡಾಂಬೆಯ ಹಬ್ಬದ  ಹರುಷ ನೂರು ಪಟ್ಟು ಹೆಚ್ಚಿಸಿತು. ಇದಕ್ಕೆ ಕಾರಣ ಒಂದೇ ಎರಡೇ... ಸಂತಸ ತುಂಬಿ ಹರಿಯುತಿತ್ತು.  

ಅಮೆರಿಕಾದಲ್ಲಿ "ಸ್ಯಾಂಡಿ" ಚಂಡಿಯ ಅವತಾರ ತಾಳಿದ್ದರೆ, "ಚಂಡಿ"ಯ ಜನುಮ ಭೂಮಿ ನಮ್ಮ ಭಾರತ ಜನನಿಯ ತನುಜಾತೆಯಾದ ಕರುನಾಡಿನಲ್ಲಿ  ನೀಲಂ (ಸೌಮ್ಯ ರೂಪದ) ಪರಿಣಾಮ, ತಾಯಿಯ ಮಮತೆ ಸದಾ ಸುರಿಯುವಂತೆ ತುಂತುರು  ಮಳೆಯ ಧಾರೆ ದೇಹಕ್ಕೆ ಚಳಿ ತಂದರೂ, ಇಂದಿನ ದಿನಚರಿ ಸಂತಸ ತಂದಿತ್ತು 

"ನಿಮ್ಮೊಳಗೊಬ್ಬ ಬಾಲು" ಬ್ಲಾಗಿನ ಬಾಲೂ ಸರ್ ಕೆಂಗೇರಿಯ ಬಳಿ ಕಾರನ್ನು ನಿಲ್ಲಿಸಿ "ಬನ್ನಿ ಗುರು"  ಅಂದರು. ಹಸ್ತ ಲಾಘವವಾಯಿತು ಹಾಗೂ  ಅವರ ಶಿಷ್ಯ "ನವೀನ" ಅವರ ಪರಿಚಯ ಆಯಿತು.  ಶರವೇಗದಲ್ಲಿ ವಾಹನ ಕನ್ನಡಾಂಬೆಯ ಹೆಮ್ಮೆಯ ಕಲಾರತ್ನ "ಬಾಲಣ್ಣ" ಅವರ ಅಭಿಮಾನ ಸ್ಟುಡಿಯೋ ಬಳಿ ಬಂತು.  ನನ್ನ                 ಕ್ರಿಯಾಶೀಲತೆಗೆ ಸ್ಫೂರ್ತಿ ನೀಡುವ ಬಾಲಣ್ಣನ ಚಿರನಿದ್ರಾ ಸ್ಥಳದ ದರ್ಶನ ಮನಸಿಗೆ ಆಹ್ಲಾದಕರ ಕಂಪನ್ನು ಕೊಟ್ಟಿತು. 

ಕರುನಾಡಿನ ಹೆಮ್ಮೆಯ ಬಾಲಣ್ಣ 

ಬಾಲಣ್ಣನಿಗೆ ಮನದಲ್ಲೇ ವಂದಿಸಿ, ಇನ್ನೊಂದು ಸ್ಪೂರ್ತಿಯ ವ್ಯಕ್ತಿತ್ವ ಮೈಸೂರಿನ ಬಾಲೂ ಸರ್ ಜೊತೆಗೆ ವಾಹನ ಓಡಿತು ಯಲಹಂಕದ ಕಡೆಗೆ.

ಬಾಗಿಲಲ್ಲೇ ನಿಂತಿದ್ದ "ಗಿರಿ ಶಿಖರ"ದ ಮಾಲೀಕ ಗಿರೀಶ್ ಸೋಮಶೇಖರ್ ನಮ್ಮನ್ನು ಬರ ಮಾಡಿಕೊಂಡರು.  "ಪದ್ಯ, ಗಧ್ಯಗಳ ಬ್ಲಾಗಿನ ಕವಿ ಬದರಿನಾಥ್ ಪಲವಲ್ಲಿ,   ಕುವೈತ್ನಲ್ಲಿ ಕನ್ನಡ ಪತಾಕೆ ಹಾರಿಸುತ್ತಿರುವ ", "ಮೃದು ಮನಸು"  ಮಹೇಶ್ ಸರ್,  "ಮನಸು" ಸುಗುಣ ಮೇಡಂ ಅವರ ಪರಿವಾರ, "ಜಲನಯನ" ಆಜಾದ್ ಸರ್ ಮತ್ತು ಅವರ ಪರಿವಾರ,  ಚಟ-ಪಟಾಕಿ ಜ್ಯೋತಿ ಅಕ್ಕಯ್ಯ ಮತ್ತು ಮಕ್ಕಳು (ಅವರು ಸಂಚರಿಸುತಿದ್ದ ಬಿ.ಎಂ,ಟಿ ಸಿ. ಬಸ್ಸಿಗೆ ಪೂಜೆ ಸಲ್ಲಿಸಿ ಬಂದಿದ್ದರು),   ಸುಂದರ ನಗುವಿನ ಚೆಲುವ ಶಿವಪ್ರಕಾಶ್ ಇವರನೆಲ್ಲ ಭೇಟಿ ಮಾಡುವ ಅವಕಾಶ ಸುಗುಣ ಮೇಡಂ ಅವರ ಕುಟುಂಬದ ಮದುವೆ ಮನೆಯಲ್ಲಿ ಸಿಕ್ಕಿತು. 

ಸುಂದರ ಅನುಭವಗಳನ್ನೂ ಮೆಲುಕು ಹಾಕುತ್ತ, ಗಿರೀಶ್  ಕೃಪಾಪೋಷಿತ ಮಸಾಲೆ ಭರಿತ "ಚಟ್ನಿ" ಮತ್ತು  ದೋಸೆಯನ್ನು ಮೆಲ್ಲುತ್ತ ಹರಟಿದೆವು.  ಅಜಾದ್ ಸರ್ ಅವರ ಹಾಸ್ಯ, ಬಾಲೂ ಸರ್ ಅವರ ಮೃದು ಮಾತುಗಳು, ಬದರಿಯವರ ಕೀಟಲೆ, ಗಿರೀಶ್  ನಗೆ ಚಟಾಕಿಗಳು, ಜ್ಯೋತಿಯ ಅಕ್ಕರೆ ಭರಿತ ಮಾತುಗಳು, ಸುಂದರ ನಗುವಿನ ಸರದಾರ ಶಿವಪ್ರಕಾಶ್ ...ಆಹಾ ಸುಮಧುರ ಘಳಿಗೆಗಳು.  ನವ ದಂಪತಿಗಳಿಗೆ  ಶುಭಾಶಯಗಳನ್ನು ಕೋರಿ ಅಲ್ಲಿಂದ ಹೊರಟೆವು.

ನವೀನ ಅವರ ರಥಕ್ಕೆ ಅಡ್ಡಿಯಾಗಿ ಇನ್ನೊಂದು ವಾಹನ ನಿಂತಿತ್ತು, ಬಾಲೂ ಸರ್ ಅವರ ಸಮಯಪ್ರಜ್ಞೆಯಿಂದ ಆ ಅಡ್ಡಿಯನ್ನು ನಿವಾರಿಸಿಕೊಂಡು,  ಜಯನಗರದ ಕಡೆಗೆ ವಾಯುವೇಗದಲ್ಲಿ ಸಾಗಿತು. ಮಾರ್ಗದಲ್ಲಿ ನವೀನ ಅವರ ವಾಹನ ಚಲಿಸುವ ಪ್ರತಿಭೆಕಂಡು ಮೂಕ ವಿಸ್ಮಿತನಾದೆ. ಬದರಿ, ಮತ್ತು ಬಾಲೂ ಸರ್ ತಮ್ಮ ಜೀವನದ ಯಶೋಗಾಥೆಗಳನ್ನು  ಹಂಚಿಕೊಂಡರು. ಬಾಲೂ ಸರ್ ಅನ್ವೇಷಣೆಯ ಗಮ್ಮತ್ತಿನ ಹಿಂದಿನ ಕಥಾನಕವನ್ನು ಅವರಿಂದ ಕೇಳಿದಾಗ ರೋಮಾಂಚನವಾಯಿತು.  ಈ ಕಡೆ ನಗೆ ಬುಗ್ಗೆ ಬದರಿ, ಆ ಕಡೆ ವಿಷಯಗಳ ಕಣಜ ಬಾಲೂ ಸರ್..ಇದಕ್ಕಿಂತ ಸಂಗಾತಿಗಳು ಬೇಕೇ ಒಂದು ಸುಂದರ ಸಮಯವನ್ನು ಕಳೆಯಲು. 

ಮದುವೆ ಮಂಟಪದ ಮುಂದೆ ಕಾರನ್ನು ನಿಲ್ಲಿಸಲು ಪ್ರಯತ್ನ ಪಡುತಿದ್ದಾಗ ದೂರದಲ್ಲಿ ಪೋಲಿಸ್ ಪೇದೆ ನೋಡ್ತಾ ಇದ್ದರು, ನವೀನ ಸರಿಯಾ ಸ್ಥಳದಲ್ಲಿ  ಕಾರನ್ನು ನಿಲ್ಲಿಸಿ ಇಳಿದಾಗ, ನಿಧಾನವಾಗಿ ಹತ್ತಿರ ಬಂದ ಪೇದೆ, ಇಲ್ಲಿ ಅಲ್ಲ, ಆ ಕಡೆ ನಿಲ್ಲಿಸಿ  ಎಂದರು. ನಾನೂ ಬಾಲೂ ಸರ್, ಇಬ್ಬರು ಮನಸಾರೆ ನಕ್ಕೆವು.  

ಮದುವೆ ಮಂಟಪದ ಒಳಗೆ ಹೊಕ್ಕಾಗ, "ಕೊಳಲು" ಬ್ಲಾಗಿನ ಡಾಕ್ಟರ್ ಕೃಷ್ಣಮೂರ್ತಿ (ಡಿ.ಟಿ.ಕೆ) ನಿಂತಿದ್ದನ್ನು ನೋಡಿ ನಮ್ಮ ಕೀಟಲೆಕುಮಾರ ಬದರಿ..ಮೆಲ್ಲಗೆ ಅವರ ಕೈಯನ್ನು ಹಿಡಿದು ಎಳೆದರು. ಸಂತಸಭರಿತ ಡಾಕ್ಟರ್ ನಮ್ಮನ್ನು ನೋಡಿ ಖುಷಿಯಿಂದ ಮಾತಾಡಿಸಿದರು. ಬಾಲೂ ಸರ್ ಮತ್ತು ಬದರಿಯವರನ್ನು ಮಾತಾಡಿಸಿದ ಅವರು, ನನ್ನ ನೋಡಿ, ತಾಯಿ ಮಗುವನ್ನು ಕರೆದು ಮಾತಾಡಿಸುವಂತೆ, ಎರಡು ಕೈಗಳಿಂದ ನನ್ನ ಕೆನ್ನೆಯನ್ನು ಸವರಿ ನೀವು ಬಂದದ್ದು ತುಂಬಾ ಸಂತೋಷವಾಯಿತು ಎಂದರು.  ನನಗೆ ಪರಮಾಶ್ಚರ್ಯ ಇದೆ ಮೊದಲ ಭೇಟಿ..ಬರಿ ಬ್ಲಾಗ್ ಲೋಕದ ಸಂಬಂಧ..ಬಲು ಸಂತಸತಂದಿತು.  ನವ ದಂಪತಿಗಳಿಗೆ ಶುಭಾಶಯಗಳನ್ನು ಸಲ್ಲಿಸಿ ಅಲ್ಲಿಂದ ಊಟದ ಮನೆಗೆ ಬಂದೆವು. ಆಹಾ ಎಂತಹ ಭೋಜನ, ಒಂದಾದಮೇಲೆ ಒಂದು ಹೊಟ್ಟೆಯೊಳಗೆ ಹೋಗಿ ಶರಣಾದವು .  ಡಾಕ್ಟರಿಂದ ಬೀಳ್ಕೊಡುಗೆ ತೆಗೆದುಕೊಂಡು ಹೊರಟೆವು.

ಮದುವೆ ಮಂಟಪದಿಂದ ಹೊರಗೆ ಬಂದಾಗ ಇನ್ನೊಂದು ಅಚ್ಚರಿ ಕಾಡಿತ್ತು.          ಶ್ರೀ ಡಿ ವಿ,ಜಿ.ಅವರ  ಕಗ್ಗದ ಸಿರಿಯನ್ನು ಫೇಸ್-ಬುಕ್ಕಿನಲ್ಲಿ ಪಸರಿಸುತ್ತಿರುವ ತಿರುಮಲೈ ರವಿ ಸರ್, ಮತ್ತು ಎಂ.ಎಸ್.ಪಿ ಪ್ರಸಾದ್ ಬದರಿಯವರಿಗೆ ಕಾಯುತ್ತ  ನಿಂತಿದ್ದರು. ಅವರೊಡನೆ ಸ್ವಲ್ಪ ಹೊತ್ತು ಮಾತುಕತೆ, ಸ್ವಲ್ಪ ಕೀಟಲೆ, ನಗು, ಎಲ್ಲವು ಸೊಗಸಾಗಿ ಕಳೆಯಿತು.  

ನಂತರ ಬಾಲೂ ಸರ್ ಅವರ ನಾದಿನಿಯ ಮನೆಗೆ ಹೋಗಿ ಅಲ್ಲಿ ಶ್ರೀ ಶ್ರೀಧರ್ ಮತ್ತು ಶ್ರೀಮತಿ ಬೃಂದಾ ಮತ್ತು ಅವರ ಪರಿವಾರದ ಪರಿಚಯವಾಯಿತು.  ಬಿಸಿ ಬಿಸಿ ಚಹಾ ಚಳಿಗೆ ರಕ್ಷಣೆ ಒದಗಿಸಿತು. ಹಿಂದಿನ ವಾರವಷ್ಟೇ  ಮುಗಿಸಿ ಬಂದಿದ್ದ ಪ್ರವಾಸದ ಚಿತ್ರಗಳನ್ನು ನೋಡಿ ಅವರ ಮನೆಯಿಂದ ಹೊರಟು ಸೀದಾ ನಮ್ಮ ಮನೆಗೆ ಬಂದೆವು.  ನನ್ನ ಪರಿವಾರದ ಕಿರು ಪರಿಚಯದ ನಂತರ ಬಾಲೂ ಸರ್ ಅವರ ಪಯಣ ಮೈಸೂರಿನ ಕಡೆಗೆ ಸಾಗಿತು. ನನ್ನ ಪಯಣ ಕಂಪ್ಯೂಟರ್ ಮುಂದೆ ಈ ಲೇಖನವನ್ನು ಬರೆಸಿತು. 
 
ಕೆಲವು ಬ್ಲಾಗಿಗರ ಭೇಟಿ ಮಾಡಿದ ಸುವರ್ಣ ಸಂದರ್ಭ-ಕನ್ನಡ ರಾಜ್ಯೋತ್ಸವ 

ಈ ಲೇಖನವನ್ನು ಬ್ಲಾಗಿಗರೊಂದಿಗೆ ಹಂಚಿಕೊಂಡು ದೂರದರ್ಶನ ಚಾಲೂ ಮಾಡಿದೆ ಅರೆ, ಜಿ ಕನ್ನಡದಲ್ಲಿ ಅಣ್ಣಾವ್ರ ಮಯೂರದ ವೀರ ಪ್ರತಿಜ್ಞೆಯ ದೃಶ್ಯ ಬರುತಿತ್ತು...ತಲೆ ಎತ್ತಿ ನೋಡಿದೆ ಮನೆಯಲ್ಲಿ ತೂಗು ಹಾಕಿದ ಅಣ್ಣಾವ್ರ ಚಿತ್ರ ನನ್ನ ನೋಡಿ ಒಂದು ಕಿರುನಗೆ ಕೊಟ್ಟಹಾಗೆ ಅನ್ನಿಸಿತು. 

ಅಣ್ಣಾವ್ರು ಮಯೂರನ ವೇಷದಲ್ಲಿ!!!

ಇದಲ್ಲವೇ ಸುಂದರ ಕರುನಾಡ ರಾಜ್ಯೋತ್ಸವದ ದಿನ ಕಳೆಯುವ ರೀತಿ ಎಂದು ನನ್ನ ಮನಸು ನನ್ನ ಬೆನ್ನನ್ನು ತಟ್ಟಿತು. 



ಕನ್ನಡಾಂಬೆಯ ಹಬ್ಬದ ದಿನವನ್ನು  ಕನ್ನಡ ಕಂಪನ್ನು ವಿಶ್ವಕ್ಕೆ ಪಸರಿಸುತ್ತಿರುವ ಹಲವು ಸುಂದರ ಪ್ರತಿಭೆಗಳ ಜೊತೆ ಕಳೆದದ್ದು ಸಾರ್ಥಕ ಎನಿಸಿತು.  ಈ ಸಂತಸದ ಘಳಿಗೆಗಳನ್ನು ಸವಿಯಲು ನನ್ನನು ಆಹ್ವಾನಿಸಿದ ಬಾಲೂ ಸರ್ ಅವರಿಗೆ ಈ ಲೇಖನದ ಮೂಲಕ ಧನ್ಯವಾದಗಳನ್ನು ಹೇಳುತ್ತಿದ್ದೇನೆ. ಧನ್ಯವಾದಗಳು ಬಾಲೂ ಸರ್.

Tuesday, October 16, 2012

ಅಣ್ಣ ಜನುಮದಿನದ ಶುಭಾಶಯಗಳು!!!

ಈ ಹಾಡು ನಮ್ಮ ಬಾಲ್ಯವನ್ನು ನೆನಪಿಸುತ್ತದೆ..ಶ್ರೀ ಅಶ್ವತ್ ಅವರಲ್ಲಿ ಹಾಗೂ  ಅವರ ಅಭಿನಯದಲ್ಲಿ ಅನೇಕ ಬಾರಿ ನನ್ನ ಅಪ್ಪನನ್ನು ಕಂಡಿದ್ದೇನೆ..ಅದರಲ್ಲೂ ಈ ಸಿನಿಮಾ ಮಕ್ಕಳಿಗೆ ಜವಾಭ್ಧಾರಿ ಹೇಗೆ ಕಲಿಸುವುದು, ಮಕ್ಕಳಿಗೆ ಸರಿಯಾದ ಮಾರ್ಗ ತೋರಿಸಿ ಪ್ರತಿಫಲದ ನಿರೀಕ್ಷೆಯಿಲ್ಲದೆ ಬೆಳೆಸಿದರೆ ಹೇಗೆ ಜೀವನ ಸಾರ್ಥಕ ಅನ್ನುವುದನ್ನು ಚೆನ್ನಾಗಿ ತೋರಿಸಿದ್ದಾರೆ ಈ ಚಿತ್ರದಲ್ಲಿ .


ಇಂತಹ ಗುಣಗಳ ನಮ್ಮ ಅಪ್ಪ ನವರಾತ್ರಿ ಪಾಡ್ಯದ ದಿನ ಸುಮಾರು ಎಂಭತ್ತು ವಸಂತಗಳ ಹಿಂದೆ ಜನಿಸಿದರು..

ಅಣ್ಣ ನಿಮಗೆ ಜನುಮದಿನದ ಶುಭಾಶಯಗಳು...ನಿಮಗಾಗಿ....ನಿಮ್ಮೊಲುಮೆ ಸದಾ ನಮ್ಮ ಮೇಲೆ ಇದ್ದೆ ಇರುತ್ತದೆ.
ನಿಮ್ಮ ಹಾರೈಕೆ ಹಾಗು ಆರೈಕೆಯಿಂದ ನಮ್ಮ ಬಾಳು ಬೆಳಕಾಗಿರಲಿ ಎಂದು ಪ್ರಾರ್ಥಿಸುತ್ತೇವೆ.

ನಿಮ್ಮೊಲುಮೆಗಾಗಿ  ಈ ಹಾಡು ನಿಮಗೆ ಸಮರ್ಪಿತ...!!!

ಅಣ್ಣ ಜನುಮದಿನದ ಶುಭಾಶಯಗಳು!!!




Saturday, October 6, 2012

ಅಣ್ಣ ಕಳಿಸಿದ ಗಣಪನ ಜೊತೆ ಅಮ್ಮ ಮತ್ತು ನಾನು...


ಕಣ್ಣು ಬಿಟ್ಟು ನೋಡಿದೆ..ಸಂಜೆ ಸುಮಾರು ಏಳು ಘಂಟೆಯಾಗಿತ್ತು..

ಸ್ವಲ್ಪ ಘಂಟೆಗಳ ಹಿಂದೆ ಬಾಲು ಸರ್ ಕರೆ ಮಾಡಿದ್ದರು ಅವರ ಹತ್ತಿರ 
ಮಾತಾಡಿದ್ದೆ... 

ನಿದ್ದೆ ಮಾಡಲು ಮನಸಿಲ್ಲದೇ ಅಣ್ಣಾವ್ರ ಮೊದಲ ಖಳ ಪಾತ್ರದ ಹಾಗು ಮೊಟ್ಟ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಅಭಿನಯಿಸಿದ  "ಸತಿ ಶಕ್ತಿ" ಚಿತ್ರವನ್ನು ಮೊದಲ ಬಾರಿಗೆ ಚಿತ್ರ ನೋಡ್ತಾ ಇದ್ದೆ..

"ಶ್ರೀಕಾಂತ...ಶ್ರೀಕಾಂತ.."  ಯಾರೋ ಕೂಗಿದಂತಾಯಿತು.. 
ಆಚೆ ಈಚೆ ನೋಡಿದೆ...ಕಾಣಲಿಲ್ಲ..ಅಣ್ಣನ ಫೋಟೋ ನಗುತಿರುವಂತೆ ಭಾಸವಾಯಿತು..ಮತ್ತೊಮ್ಮೆ ನೋಡಿದೆ..

"ಶ್ರೀಕಾಂತ...ಕಿಂಕರರ ಜೊತೆ ಪಯಣಿಸುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ಅವರ ಲ್ಯಾಪ್ ಟಾಪ್ ನಲ್ಲಿ ನಿನ್ನ ಬ್ಲಾಗ್ ಅಪ್ಪನಿಲ್ಲದ ಗಣಪನ ಹಬ್ಬ! ತೋರಿಸಿದರು....ಯಾಕೋ ಮನಸು ಭಾರವಾದಂತೆನಿಸಿತು...ಮನೆಗೆ ಹೋಗು..ಗಣಪನನ್ನು ಮನೆಗೆ ಕಳಿಸಿದ್ದೇನೆ" ಎಂದ ಹಾಗೆ ಅನಿಸಿತು..
ತಡ ಮಾಡದೆ ಕ್ಯಾಮೆರ ತೆಗೆದುಕೊಂಡು ಓಡಿದೆ..ಆಶ್ಚರ್ಯ ಕಾದಿತ್ತು..ಅಮ್ಮನ ಮನೆಯ ಬಾಗಿಲಿನಲ್ಲಿ ಆಳೆತ್ತರದ ಗಣಪ ತಣ್ಣಗೆ ಚಳಿಯಲ್ಲಿ ಚಾದರ ಹೊದ್ದುಕೊಂಡು ಕುಳಿತಿದ್ದದು ಕಣ್ಣಿಗೆ ಬಿತ್ತು.." ಕಣ್ಣು ಉಜ್ಜಿಕೊಂಡೆ..ಉಹುಂ...ಉಹುಂ..
"ಕನಸೋ ಇದು ನನಸೋ ಇದು.." ಎದುರು ಅಂಗಡಿಯಲ್ಲಿ ಹಾಡು ತೇಲಿ ಬರುತಿತ್ತು...

ಗಣಪ ಅಚ್ಚುಕಟ್ಟಾಗಿ ಮನೆಯ ಕಾಂಪೌಂಡ್ನಲ್ಲಿ ಕುಳಿತಿದ್ದಾ..ಮನಸಿಗೆ ಬಹಳ ಸಂತಸವಾಯಿತು..

ಅಮ್ಮ "ಬಾ..ಬಾ..ನೋಡು ಗಣೇಶ ಎಷ್ಟು ಚೆನ್ನಾಗಿದೆ ಗೊತ್ತ..?" ಅಂದ್ರು..ಸರಿ ಗಣಪನ ಅನಾವರಣಕ್ಕೆ ಕಾಯುತ್ತ ಕುಳಿತೆ..
ಬೀದಿಯ ಹುಡುಗರೆಲ್ಲ ಬಂದರು..."ಗಣಪತಿ ಬಪ್ಪ ಮೌರ್ಯ...ಮಂಗಳ ಮೂರ್ತಿ ಮೌರ್ಯ.."ಧ್ವನಿ ತಾರಕದಲ್ಲಿತ್ತು..ನಿಧಾನಕ್ಕೆ ಎಲ್ಲ ಹುಡುಗರು ಕೈ ಹಾಕಿ ಗಣಪನನ್ನು ಮೇಲಕ್ಕೆ ಎತ್ತಿ ನಿಧಾನಕ್ಕೆ ಅದರ ಪೀಠಕ್ಕೆ ವರ್ಗಾಯಿಸಿದರು..

ಅಮ್ಮ..ಗಣಪನ್ನು ನೋಡುತ್ತಾ ಸುಮ್ಮನೆ ನಿಂತು ಬಿಟ್ಟಿದ್ದರು..ಅವರ ತಲೆಯೊಳಗೆ ಗತ ಕಾಲದ ಚಕ್ರ ಓಡುತ್ತಿತ್ತು..ಮುಖ ಭಾವ ಹೇಳುತಿತ್ತು......ಅವರು ಇದ್ದಾಗ ಹೆಂಗೆ ಇತ್ತು..ಹೀಗೆ ಯೋಚನಾ ಲಹರಿ ಸಾಗಿತ್ತು..

ಅಲ್ಲಿದ್ದ ಒಬ್ಬ ಹುಡುಗನನ್ನ ಕರೆದು "ನವೀನ..ಗಣಪನ್ನು ಒಮ್ಮೆ ತೋರಿಸಿ ಫೋಟೋ ತಗೊಳ್ತಾನೆ" ಅಂದ್ರು 

 ನನ್ನ ಕಡೆ ನೋಡಿ.."ಹೋಗು ಫೋಟೋ ತಗೋ" ಅಂದ್ರು

ಹುಡುಗರೆಲ್ಲ.."ಬನ್ನಿ ಆಂಟಿ...ಒಳಗೆ ಬನ್ನಿ ಗಣಪನ್ನು ತೋರಿಸುತ್ತೇವೆ.." ಅಂದವು

ಗಣಪನ ಚಿತ್ರ ತೆಗೆದ ಮೇಲೆ..ಆ ಹುಡುಗರನೆಲ್ಲ..ನಿಲ್ಲಿಸಿ ಒಂದು ಫೋಟೋ ತೆಗೆದೇ..

ನಂತರ ಹುಡುಗರೆಲ್ಲ.."ಸಾರ್..ನೀವು ಅಮ್ಮನ ಜೊತೆ ನಿಲ್ಲಿ..  ನಿಮ್ಮ ಕ್ಯಾಮೆರಾದಲ್ಲಿ ಒಂದು ಫೋಟೋ ತೆಗೆಯುತ್ತೇನೆ  ಅಂದ್ರು.." 

ಒಂದು ಕ್ಷಣ..ಭಾವುಕನಾದೆ..ಅಮ್ಮ ಬರೋಲ್ಲ ಅಂದ್ರು..ನಾನು ಬಿಡಲಿಲ್ಲ...ಅದರ ಪ್ರಯತ್ನ..ಅಣ್ಣ ಕಳಿಸಿದ ಗಣಪನ ಜೊತೆ ಅಮ್ಮ ಮತ್ತು ನಾನು...

ಖುಷಿ ಪಟ್ಟು..ಕಣ್ಣೀರನ್ನು ಹಾಗೆಯೇ ಇಂಗಿಸಿಕೊಂಡು..ಮನೆಗೆ ಬಂದೆ...
ಅಣ್ಣ ಗೋಡೆಯಲ್ಲಿ ನಗುತ್ತ ನಿಂತಿದ್ದರು..

"ನೋಡಿದೆಯ..ನೀನು ಅಪ್ಪನಿಲ್ಲದ ಗಣಪ ಎಂದೇ..ನಾನು ಗಣಪನನ್ನೆ ನನ್ನ ಮನೆಗೆ ಕಳಿಸಿದೆ" ಆನಂದ ಭಾಷ್ಪ ಜಿನುಗುತ್ತಿರುವಂತೆ  ಭಾಸವಾಯಿತು...!!!