Tuesday, November 15, 2022

ಅದೊಂದು ಸುಂದರ ಗುರುಕುಲ.. !

 ಅದೊಂದು ಸುಂದರ ಗುರುಕುಲ.. 

ಕಾಡಿನ ಮಧ್ಯೆ ಒಂದು ಸುಂದರ ಕೆರೆ.. ಅದರ ಸುತ್ತಲೂ ಪುಟ್ಟ ಪುಟ್ಟ ಕುಟೀರಗಳು.. ಪ್ರತಿ ಕುಟೀರಗಳಲ್ಲಿ ಶಿಷ್ಯರಿಗೆ ಅಧಿಕಾರ ಕೊಟ್ಟು.. ಆ ಗುಡಿಸಲನ್ನು ನೋಡಿಕೊಳ್ಳುವ ಜವಾಬ್ಧಾರಿ ಕೊಡಲಾಗಿತ್ತು.. ತಮ್ಮ ಪರ್ಣ ಕುಟೀರಗಳನ್ನು ಬೆಳೆಸುವ ಬೆಳಗಿಸುವ ಕಾಯಕ ಅವರದಾಗಿತ್ತು.. 

ಅಂತಹ ಒಂದು ಪರ್ಣಕುಟೀರದಲ್ಲಿ ಸದಾ "ಸಂತೋಷ"ವೇ ತುಂಬಿತ್ತು.. ಕಾರಣ ಅದರ ಜವಾಬ್ಧಾರಿ ಹೊತ್ತವರ ಹೆಸರೇ ಅದಾಗಿತ್ತು..  ಆ ಪರ್ಣಕುಟೀರದಲ್ಲಿದ್ದವರೆಲ್ಲಾ "ರವಿ"ಯ ಬೆಳಕಿನಲ್ಲಿ ಪ್ರತಿ ಕ್ಷಣ ಹೊಳೆಯುವ ಮಣಿಗಳಾಗಿದ್ದರು.. 

ಸುಮಾರು ಎರಡು ವರ್ಷಗಳ ಹಿಂದೆ ಆ ಕುಟೀರಕ್ಕೆ ಸೇರಿಕೊಂಡ ಶಿಷ್ಯನೊಬ್ಬ ಅಲ್ಲಿದ್ದ ಹಿರಿಯ ಶಿಷ್ಯರ ಹತ್ತಿರ ಒಂದು ಪ್ರಶ್ನೆ ಕೇಳಿದ!

"ಅಣ್ಣ .. ಈ ಕುಟೀರದಲ್ಲಿ ಎಂಥಹ ಸಂಭ್ರಮ ಕಾಣುತ್ತಿದ್ದೇನೆ ಅಣ್ಣ.. ಪ್ರತಿ ಕ್ಷಣವೂ ಒಂದು ಸಂತಸದ ಕ್ಷಣಗಳು ನಮಗೆ ಎದುರಾಗುತ್ತಲೇ ಇರುತ್ತವೆ.. ಮನಸ್ಸಿಗೆ ಏನೋ ಒಂದು ರೀತಿಯ ಉಲ್ಲಾಸ ಅನಿಸುತ್ತೆ"

" ಹೌದು ತಮ್ಮ.. ಇಲ್ಲೊಂದು ಸಂಭ್ರಮದ ವಾತಾವರಣವಿದೆ.. ಇತ್ತೀಚಿಗಷ್ಟೇ ಒಂದು ಸುಂದರ ಕಾರ್ಯಕ್ರಮ ನೆಡೆಯಿತು.. ಅದರ ಬಗ್ಗೆ ನಮ್ಮ ಗುರುಗಳು ಬಹಳ ಸುಂದರವಾಗಿ ಕಟ್ಟಿ ಕೊಟ್ಟಿದ್ದಾರೆ.. ತಗೋ ಅದನ್ನೊಮ್ಮೆ ಓದು... ನೋಡು ಖುಷಿಪಡು .. "


ಚಿತ್ರ ಕೃಪೆ : ಅವಿರತ ಪರಿಶ್ರಮದ ತಂಡ 

ಕಾಡಿನಲ್ಲೆಲ್ಲ ಸಂಭ್ರಮದ ವಾತಾವರಣ ಎಲ್ಲಿ ನೋಡಿದರಲ್ಲಿ ಕೆಂಪು ಹಳದಿ.. ಕರುನಾಡಿನ ಹೆಣ್ಣು ಮಕ್ಕಳ ಸೌಭಾಗ್ಯದ ಗುರುತು ಎಲ್ಲೆಡೆ ಹರಡಿತ್ತು.. ಅಲ್ಲಿದ್ದ ಶಿಷ್ಯ ಗಣಗಳು ಎಲ್ಲರೂ ಒಪ್ಪುವ ವೇಷ ಭೂಷಣಗಳಲ್ಲಿ ಮಿಂಚುತ್ತಿದ್ದರು.. ಪ್ರತಿಯೊಬ್ಬರ ಮೊಗದಲ್ಲಿ ಹಬ್ಬದ ಸಂಭ್ರಮ.. ಅಲ್ಲವೇ..... ತಾಯಿ ಭುವನೇಶ್ವರಿಯನ್ನು ಅರ್ಚಿಸಲು ದಿನ ಮುಹೂರ್ತ ಬೇಡ. .. ಅನುಕ್ಷಣವೂ, ಅನುದಿನವೂ ನಮ್ಮ ನರನಾಡಿಗಳಲ್ಲಿ ಭಾಷೆಯ ಅಭಿಮಾನ ಹರಿದಾಡುತ್ತಲೇ ಇರುತ್ತದೆ...ಅದೇ ಕರುನಾಡಿನ ನಿತ್ಯೋತ್ಸವ....ಆದರೂ ಎಲ್ಲರನ್ನೂ ಒಟ್ಟು ಗೂಡಿಸಿ ನಿಲ್ಲಬೇಕು ಅಂದಾಗ ತಾರೀಕು ಕೂಡ ನಮಗೆ ಜೊತೆಯಾಯಿತು.. 

ಹನ್ನೊಂದು ಹನ್ನೊಂದು ಇಪ್ಪತ್ತೆರಡು.. ಹೌದು ಎರಡು ಸಾವಿರದ ಇಪ್ಪತ್ತೆರಡನೆ ಇಸವಿ.ನವೆಂಬರ್ ಮಾಸದ ಹನ್ನೊಂದನೇ ದಿನ.. 

ಹೌದು ನವೆಂಬರ್ ಕರುನಾಡಿನ ಜನತೆಯಲ್ಲಿ ಎಂದಿಗೂ ಮಾಸದ ಮಾಸ...!

ಕಾರ್ಯಕ್ರಮ ಅಂದರೆ ಆ ಪರಿಸರದ ಮಹತ್ವನ್ನು ಎತ್ತಿ ಹಿಡಿಯುವ ಯಾವುದಾದರೂ ಒಂದು ಕಲೆ ಅಲ್ಲಿ ಬರಬೇಕು.. ಆಗ ಬಂದದ್ದೇ ಕಂಸಾಳೆ.. 

ಅಬ್ಬಾ ಶಿಷ್ಯ ಕೋಟಿಗಳೇ ನೀವು ನೋಡಬೇಕಿತ್ತು.. ಆ ಹಾವಭಾವ.. ಆ ತಾಳ ಲಯ.. ಅವರ ನೃತ್ಯ, ದೇಹವನ್ನು ದಂಡಿಸುವಂಥಹ ನೃತ್ಯ.. ಆ ಕಂಸಾಳೆಯನ್ನು ಹಿಡಿದು ತಾಳ ಹಾಕುತ್ತಾ ಅವರು ನೀಡಿದ ಸುಮಾರು ಒಂದು ಅರ್ಧ ಘಂಟೆಯ ಕಾರ್ಯಕ್ರಮ ಚಪ್ಪಾಳೆ ಗಿಟ್ಟಿಸಿತು..








ಹಾಗೆ ಆ ಕಡೆ ಈ ಕಡೆ ನೋಡಿದರೆ.. ಜ್ಞಾನ ಹೆಚ್ಚಿಸುವ ಕವಿವರೇಣ್ಯರ ರಚನೆಗಳು, ಲೇಖಕರ ಅದ್ಭುತ ಪುಸ್ತಕಗಳು, ಮನಸ್ಸನ್ನು ಉಲ್ಲಾಸದಿಂದ ಇರಿಸಿಕೊಳ್ಳಲು ಬೇಕಾದ ಪುಸ್ತಗಳು.. ಮಸ್ತಕಕ್ಕೆ ಇನ್ನಷ್ಟು ಇಂಬು ಕೊಡುವ ಪುಸ್ತಕಗಳು ಬೇಕಾದಷ್ಟು ಇದ್ದವು.. 










ಎಲ್ಲರೂ ಇದ್ದ ಮೇಲೆ ಅಣ್ಣಾವ್ರು ಇರಲೇ ಬೇಕಲ್ಲವೇ.. ಕರುನಾಡಿನ ಭಾಷೆಗೆ ಒಂದು ತೀವ್ರ ಸ್ವರೂಪದ ಮೆಚ್ಚುಗೆ, ಗಮನಿಸುವಿಕೆ ಮತ್ತು ಆರಾಧನೆ ಮಾಡುವಂತಹ ಮೊದಲೇ ಇದ್ದ ಮನಸ್ಸನ್ನು ಇನ್ನಷ್ಟು ಎತ್ತರಕ್ಕೆ ಒಯ್ದಿದ್ದು ಅವರ ವ್ಯಕ್ತಿತ್ವ, ಅವರ ಸದಭಿರುಚಿಯ ಚಿತ್ರಗಳು ಹಾಗೂ ಒಬ್ಬ ಸಂತನಂತೆ ಭಾಷೆಯ ಏಳಿಗೆಗೆ ದುಡಿದ ಅವರ ಮೇರು ವ್ಯಕ್ತಿತ್ವ.. ಹೌದು ಅಣ್ಣಾವ್ರ ಬಗ್ಗೆ ಅವರ ಪುತ್ರ ಪುನೀತ್ ಅವರ ಮೂಸೆಯಿಂದ ಅರಳಿದ ಪುಸ್ತಕವಿತ್ತು.. 


ಭಾಷೆಯ ಬಗ್ಗೆ ಅಭಿಮಾನ ಹೌದು.. ಸನ್ಮಾನ ಹೌದು.. ಸಂತೋಷ ಹೌದು.. ಎಲ್ಲವೂ ಸರಿ.. ಅದನ್ನು ಬಿತ್ತರಗೊಳಿಸುವ ಒಂದು ನೆಪ ಬೇಕಲ್ಲವೇ.. ಬೇಕಾದಷ್ಟು ವಿಭಿನ್ನ ವಿನ್ಯಾಸಗಳ ಅಂಗಿಗಳು ಅಲ್ಲಿ ಜಮಾಯಿಸಿದ್ದವು.. ಕರುನಾಡಿನ ಹೆಮ್ಮೆಯ ಲಾಂಛನ, ನಕ್ಷೆ, ಬಾವುಟ, ಕೆಲವು ನುಡಿಗಳನ್ನು ಹೊತ್ತ ಟೀ ಶರ್ಟ್ ಅನೇಕರ ಸುಂದರ ಮನಸ್ಸನ್ನು ಅಲಂಕರಿಸಿದ್ದವು. 

ಗಿಡ ನೀಡಿ.. ಮರ ಬೆಳೆಸಿ.. ಪರಿಸರ ಬೆಳಗಲಿ, ಬೆಳೆಯಲಿ.. ನಿಜ ಅದಕ್ಕೆಂದೇ ಅನೇಕಾನೇಕ ಅಲಂಕಾರಿಕ ಗಿಡಗಳು ಮೇಳೈಸಿದ್ದವು.. ತಮಗೆ ಇಷ್ಟ ಬಂದ ಸಸ್ಯಗಳನ್ನು ಪಡೆದು ಮನೆಯನ್ನು, ಅಂಗಳವನ್ನು ಸಸ್ಯಕಾಶಿ ಮಾಡುವ ಹಂಬಲ ಹಲವರದ್ದು.. 

ಸಮಾರಂಭವೆಂದರೆ ಮಸ್ತಕಕ್ಕೆ ಖುಷಿ ಕೊಡುವಂತದ್ದು ಇದ್ದೆ ಇರುತ್ತದೆ.. ಆದರೆ ನಾಲಿಗೆ ಆಹಾ ಅನ್ನುವಂತಹ ಸವಿ ಬೇಕು ಅಲ್ಲವೇ.. ಬಾಳೆಯ ಎಳೆಯಲ್ಲಿ ಅಂತಹ ಭಕ್ಷ್ಯ ಭೋಜ್ಯಗಳು ಹರಿದಾಡಿತು.. ನಂತರ ಬಂದವರ ಉದರ ಸೇರಿ ಕೃತಜ್ಞತಾ ಭಾವ ಹೊಂದಿದವು.. 

ಎಲ್ಲರ ಮನಸ್ಸಲ್ಲಿ, ಎಲ್ಲರ ಬಾಯಿಯಲ್ಲಿ ಒಂದೇ ಅಭಿಮತ.. ಬಾಳೆ ಎಲೆ ಊಟ ಟಾಪ್ ಕ್ಲಾಸ್... ಎಲ್ಲಾ ಕ್ರಾಯಕ್ರಮಗಳ ಯಶಸ್ಸು ನೆಲೆ ನಿಲ್ಲೋದು ಆಹಾರದ ಬಾಣಲೆಯಲ್ಲಿ.. ಅದರಲ್ಲಿ ಗೆದ್ದೇ ಬಿಟ್ಟಿತು ಈ ಸುಂದರ ತಂಡ...!

ಗುರುಗಳು ಬರೆದು‌ ಕೊಟ್ಟಿದ್ದ ವೀಕ್ಷಕ ವಿವರಣೆಯ ಪುಟಗಳು ಮುಗಿದಿತ್ತು...ಶಿಷ್ಯರುಗಳು ಕುತೂಹಲ ತಡೆಯಲಾಗದೆ..ಮುಂದೇನಾಯ್ತು‌ ಎಂದು ತಿಳಿಯುವ ಕಾತುರ ಕಾಂತಾರ ಸಿನಿಮಾದ ಅಂತಿಮ ದೃಶ್ಯಕ್ಕಿಂತಲೂ ಮಿಗಿಲಾಯ್ತು...

ಕುಣಿದಾಯಿತು.. ಬಟ್ಟೆ ಧರಿಸಿ ಮೆರೆದಾಯ್ತು.. ಪುಸ್ತಕಗಳನ್ನು ಕೊಂಡಾಯಿತು.. ಅಲಂಕಾರಿಕ ಜುಮುಕಿಗಳು, ಬಿಂದಿಗಳು, ಕ್ಲಿಪ್, ಬಳೆಗಳು ಹೆಣ್ಣು ಮಕ್ಕಳ ಚೀಲ ಸೇರಾಯ್ತು.. ಮುಂದೆ ಗುರುಗಳೇ.. 

"ಶಿಷ್ಯರೇ.. ಮುಂದೆ ನೆಡೆದದ್ದು ಇನ್ನಷ್ಟು ಖುಷಿಯ ಕ್ಷಣಗಳು... 

ಕರುನಾಡಿನ ನಾಡಗೀತೆಯನ್ನು ಸುಶ್ರಾವ್ಯವಾಗಿ ಹಾಡಿದ್ದು.. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಹಾಡಿದ ನಾಲ್ಕು ಮಂದಿಯಲ್ಲಿ ಇಬ್ಬರ ಮಾತೃ ಭಾಷೆ ಕನ್ನಡವಲ್ಲ.. ಕರುನಾಡ ಭಾಷೆ ಸುಲಿದ ಬಾಳೆ ಹಣ್ಣಿನಂತೆ.. ಕಬ್ಬಿನ ರಸದಂತೆ.. ಹೌದು ಅದಕ್ಕೆ ಅಲ್ಲವೇ ಅಣ್ಣಾವ್ರು ಹಾಡಿದ್ದು "ಜೇನಿನ  ಹೊಳೆಯೋ ಹಾಲಿನ ಮಳೆಯೋ ಸುಧೆಯೋ ಕನ್ನಡ ಸವಿ ನುಡಿಯೋ.. "

ಜ್ಞಾನ ವಿಜ್ಞಾನ ಕ್ಷೇತ್ರದಲ್ಲಿ ತಮ್ಮದೇ ರೀತಿಯಲ್ಲಿ ಅದ್ಭುತ ಸಾಧನೆ ಮಾಡಿರುವ ಇಬ್ಬರು ಮಹನೀಯರನ್ನು ಪರಿಚಯ ಮಾಡಿಕೊಟ್ಟರು ಈ ಕಾರ್ಯಕ್ರಮದ ರೂವಾರಿಗಳು ಮನಿಷಾ ಹಾಗೂ ಶರನ್ ..ಅದನ್ನು ವಿವರಣಾ ಪೂರ್ವಕವಾಗಿ ಬಿಡಿಸಿಟ್ಟರು ರವಿಕುಮಾರ್...






ಡಾ. ಸುಬ್ಬಣ್ಣ ಅಯ್ಯಪ್ಪನ್ ಅವರು ಪ್ರಸ್ತುತ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ತಿನ ಮುಖಸ್ಥರಾಗಿ ನೇಮಕಗೊಂಡು ಈ ಸಂಸ್ಥೆಯ ಕಾರ್ಯಗಳನ್ನು ನಿರ್ದೇಶಿಸುತ್ತಿದ್ದಾರೆ.  ಡಾ. ಅಯ್ಯಪ್ಪನ್ ಅವರು ಮೂಲತಃ ಒಬ್ಬ ಮತ್ಸ್ಯವಿಜ್ಞಾನಿ. ಭಾರತದ ನೀಲ ಕ್ರಾಂತಿಗೆ ಅವರ ಕೊಡುಗೆಯನ್ನು ಗಮನಿಸಿ ಭಾರತ ಸರಕಾರ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಅವರು ಮೀನುಗಾರಿಕೆ ಮತ್ತು ಸಾಗರ ಅಣುಜೀವಶಾಸ್ತ್ರ ಕಾರ್ಯಕ್ಷೇತ್ರಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.  ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಪಡೆದು ಹೆಚ್ಚಿನ ವಿದ್ಯಾಭಾಸವನ್ನು  ಮಂಗಳೂರಿನ ಮೀನುಗಾರಿಕೆ ಕಾಲೇಜಿನಲ್ಲಿ  ಪಡೆದು ಅನಂತರ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್. ಡಿ, ಪದವಿ ಗಳಿಸಿದ್ದಾರೆ

 ಶ್ರೀ ರಮೇಶ್ ಅವರು ಕ. ವಿ. ತಂ. ಅ  ಸಂಸ್ಥೆಯ ಮೂಲಕ ಇಡೀ ವರ್ಷ ಕರ್ನಾಟಕದ ಎಲ್ಲಾ ಭಾಗಗಳಲ್ಲೂ ಸಂಚರಿಸಿ ಅನೇಕ ಕಾರ್ಯಕ್ರಮಗಳನ್ನು ಉತ್ಸಾಹದಿಂದ ನಡೆಸುತ್ತಿದ್ದಾರೆ.  ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತು ಒಲವನ್ನು ಸೃಷ್ಟಿಸುವುದು ಮತ್ತು ಪೋಷಿಸುವುದರಲ್ಲಿ ಅವರಿಗೆ ಅತೀವ ಆಸಕ್ತಿ.. 

ಇಬ್ಬರ ಗೌರವಾನ್ವಿತರ ಪರಿಚಯವಾಗಿದ್ದು ಈ ಕಾಡಿಗೆ ಒಂದು ಹೆಮ್ಮೆ ಶಿಷ್ಯರೇ ಎಂದು ಗುರುಗಳು ಸ್ವಲ್ಪ ಹೊತ್ತು ಸುಮ್ಮನೆ ಕುಳಿತರು.. 

"ಗುರುಗಳೇ ಏನಾಯಿತು.. ಯಾಕೆ ಸುಮ್ಮನಾದಿರಿ.. ?"

"ಶಿಷ್ಯರೇ.. ಭರ್ಜರಿ ಊಟ ಮಾಡುವಾಗ.. ತರಹಾವರಿ ಖಾದ್ಯಗಳು ಬರುತ್ತಲೇ ಇರುತ್ತವೆ.. ಒಂದು ಸಣ್ಣ ವಿರಾಮ ಇನ್ನಷ್ಟು ಹೆಚ್ಚಿನ ಸವಿ ಭೋಜನವನ್ನು ಮಾಡಲು ನಮ್ಮ ದೇಹಕ್ಕೆ ಅನುವು ಮಾಡಿಕೊಡಬೇಕು ಅಲ್ಲವೇ.. ಹಾಗೆ ಮುಂದಿನ ಕಾರ್ಯಕ್ರಮ ನೋಡಿದಾಗ ನೀವೇ ಆಹಾ ಎನ್ನುತ್ತೀರಿ ಅದಕ್ಕೆ ಅಲ್ಪ ವಿರಾಮವಷ್ಟೇ.. !!!"

ಸರಿ ಮುಂದುವರೆಸಿ ಗುರುಗಳೇ.. ನಮ್ಮ ಮಸ್ತಕದಲ್ಲಿ.. ಹೃದಯದಲ್ಲಿ ಇನ್ನಷ್ಟು ಜಾಗ ಮಾಡಿಕೊಂಡೆವು ಇವಾಗ.. 

ಮತ್ತೆ ಶುರುವಾಯಿತು.. ಕಾರ್ಯಕ್ರಮದ ವಿವರಣೆ.. 


"ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ಕೊಡುವ ನಮ್ಮ ಸತ್ ಸಂಪ್ರದಾಯವನ್ನು ಮುಂದುವರೆಸುತ್ತ.. ಗಣ್ಯರು ಜ್ಯೋತಿ ಬೆಳಗಿದರು.. ಶ್ರೀ ಸುಬ್ಬಣ್ಣನವರು ಮುಂದಿನ ಸಾಲಿನಲ್ಲಿ ನೆರೆದಿದ್ದ ಕೆಲವರನ್ನು ಕರೆದು ನೀವು ಜ್ಯೋತಿ ಬೆಳಗಿಸಿ ಎಂದು ಆಹ್ವಾನ ಕೊಟ್ಟದ್ದು ಮೆಚ್ಚುವ ಅಂಶವಾಗಿತ್ತು.. ನಾನು ..ನೀನು ...ಎನ್ನದೆ ನಾವು ಎನ್ನುವ ಭಾವ ಅಲ್ಲಿತ್ತು.... !!!

ಈ ಕಾರ್ಯಕ್ರಮದ ನಾಯಕ ಶ್ರೀ ರವಿ ಕುಮಾರ್ ಅವರ ಸ್ವಾಗತ ಮಾತುಗಳನ್ನು ಹೇಳುತ್ತಾ.. ಬಂದಿದ್ದ ಗಣ್ಯರು ತಮ್ಮ ಆಪ್ತ ಮಿತ್ರರ ವಲಯದಲ್ಲಿ ಇರುವವರು ಎನ್ನುವ ಮಾತು ವಾಹ್ ಎನಿಸಿತು.. ಗಂಧದ ಮರದ ಜೊತೆ ಇದ್ದಾಗ ಬದುಕು ಘಮ ಘಮ ಅಲ್ಲವೇ ... !


ಈ ಕಾರ್ಯಕ್ರಮದ ಯಶಸ್ಸಿಗೆ ಜೇನು ಗೂಡುಕಟ್ಟುವಂತೆ ಅನೇಕಾನೇಕ ಶಕ್ತಿಗಳು ಕೆಲಸ ಮಾಡಿದ್ದವರನ್ನು ವೇದಿಕೆಗೆ ಕರೆಸಿ ಗೌರವ ನೀಡಿದರು.. ಇದು ನಾಯಕತ್ವದ ಅದ್ಭುತ ಶಕ್ತಿ.. ನಾನಲ್ಲ ...ನಾವುಗಳು ..ಎನ್ನುವ ಈ ರೀತಿಯ ಗುಣ ಎಲ್ಲರನ್ನು ಎತ್ತರೆತ್ತರಕ್ಕೆ ಕರೆದೊಯ್ಯುತ್ತದೆ.. 

ಶ್ರೀ ರಮೇಶ್ ಅವರ ಮಾತುಗಳು ಒಂದು ಜಲಪಾತದಂತೆ ಬಂದಿತು.. ಅವರ ಕಾರ್ಯಕ್ಷೇತ್ರ, ಅವರ ಸಮಾಜ ಮುಖಿ ಚಟುವಟಿಕೆಗಳು, ತಮ್ಮ ತಂಡದಿಂದ ವಿಜ್ಞಾನವನ್ನು ಪಸರಿಸುತ್ತಿರುವ ರೀತಿ ಎಲ್ಲವನ್ನು ಚುಟುಕಾಗಿ ವಿವರಿಸಿದರು.. 



ಶ್ರೀ ಸುಬ್ಬಣ್ಣ ಅವರು ಬಂದು ನಿಂತರು. ಮೈಕ್ ಕೂಡ ಒಮ್ಮೆ ನಿಶ್ಯಬ್ಧವಾಯಿತು ಅವರ ಮಾತುಗಳನ್ನು ಕೇಳಲು.. ಆದರೆ ಎಲ್ಲರಿಗೂ ಧ್ವನಿಯನ್ನು ತಲುಪಿಸುವ ಮೈಕ್ ಸುಮ್ಮನೆ ಇರಲು ಸಾಧ್ಯವೇ.. ಟಕ್ ಟಕ್ ಟಕ್ ಮೈಕ್ ಗಂಟಲು ಸರಿ ಮಾಡಿಕೊಂಡು.. ತನ್ನ ಸೇವೆಯನ್ನು ಸಲ್ಲಿಸಲು ಶುರು ಮಾಡಿತು.. 

ಒಂದು ಸಣ್ಣ ಒರತೆಯಾಗಿ ಶುರುವಾದ ಶ್ರೀ ಸುಬ್ಬಣ್ಣ ಅವರ ಮಾತು, ಝರಿಯಾಗಿ, ನದಿಯಾಗಿ, ಜಲಪಾತವಾಗಿ, ಶರಧಿಯನ್ನು ಸೇರಲು ಹರಿಯುವ ನೀರಿನಂತೆ ಆಯಿತು.. ಅಬ್ಬಬ್ಬಾ ಅವರು ಮಾತಾಡದ ವಿಷಯಗಳು ಇರಲಿಲ್ಲ .. ನಂಜನಗೂಡಿನ ಒಂದು ಸಣ್ಣ ಶಾಲೆಯಿಂದ ಡಲ್ಲಾಸ್, ಅಮೇರಿಕಾ ತನಕ ಅವರ ವಾಗ್ಝರಿ ಹರಿದಿತ್ತು... ಯುವಕರಿಗೆ ಬೇಕಾದ ಮಾತುಗಳು, ಹಿರಿಯರಿಗೆ ಬೇಕಾದ ವಿಷಯಗಳು, ತಾನು ವಿಜ್ಞಾನ ಪ್ರಭಾವಲಯದಲ್ಲಿ ಮೀಯುತ್ತಿರುವ ಬಗ್ಗೆ.. ಕ್ರಿಕೆಟ್, ಹಾಸ್ಯ, ಕಾಂತಾರಾ ಸಿನಿಮಾ ಎಲ್ಲವನ್ನು ಬೆರೆಸಿ.. ಅದ್ಭುತ ರಸಾಯನ ಮಾಡಿಕೊಟ್ಟರು.. 

ಅವರು ಮಾತಾಡುವಷ್ಟು ಸಮಯ ಅಂಗಳದಲ್ಲಿ ಸೂಜಿ ಬಿದ್ದರು ಕೇಳಿಸುವಷ್ಟು ತನ್ಮಯತೆ ಇತ್ತು... ಅದ್ಭುತ ಮಾತುಗಾರರು ಅವರು... 

ಅರೆ ಗಡಿ ಮೀರಿ ಸಾಧನೆ ಮಾಡಿ, ಸಾಧನೆ ಮಾಡುತ್ತಿರುವ ನಮ್ಮ ಭಾಷೆ ನಿತ್ಯ ನೂತನ ಅಲ್ಲವೇ.. ಅದಕ್ಕೆ ವಿಶ್ವ ವಿನೂತನ ವಿದ್ಯಾ ಚೇತನ ಹಾಡನ್ನು ಕರುನಾಡಿನ ಬಾವುಟದ ರಂಗಿನ ವೇಷಭೂಷಣ ಧರಿಸಿದ್ದ ಹೆಣ್ಣು ಮಗುವಿನ ಹಾಡಿನ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ ಶುರುವಾಯಿತು.. 


ನಾವು ಹೇಗಾದರೂ ಇರಲಿ ನಾವು ಮಾಡುವ ಕೆಲಸ ಹತ್ತಾರು ಶ್ರಮಿಕರನ್ನು ಗುರುತಿಸಬೇಕು ಎನ್ನುವ ಭಾವ ಹೊತ್ತು ಬೆಳೆದು.. ಕಳೆದ ವರ್ಷ ನಮ್ಮನ್ನು ಅಗಲಿದ ಶ್ರೀ ಪುನೀತ್ ರಾಜ್ ಕುಮಾರ್ ಅವರ ಬದುಕಿನ ಗೀತೆ ಎಂದೇ ಹೆಸರಾಗಿರುವ ಬೊಂಬೆ ಹೇಳುತೈತೆ ಹಾಡು ಶ್ರೀಧರ್ ಅವರ ಮಧುರ ಕಂಠದಲ್ಲಿ ಮೂಡಿ ಬಂತು.. 


"ಇದೆ ನಾಡು ಇದೆ ಭಾಷೆ" ಎಂದು ಪಕ್ಕದ ರಾಜ್ಯದ ಎಸ್ಪಿ ಬಾಲಸುಬ್ರಮಣ್ಯಂ ತೆರೆಯ ಮೇಲೆ ಮೊದಲ ಬಾರಿಗೆ ಕಾಣಿಸಿಕೊಂಡ ತಿರುಗು ಬಾಣ ಚಿತ್ರದ ಹಾಡನ್ನು ಹಾಡಿದರು.. 

ದೀಪ ಹಚ್ಚಲೇ ಬೇಕು.. ಕರುನಾಡಿನ ದೀಪವನ್ನು ಹಚ್ಚಿದ ಮಹನೀಯರ ಶ್ರಮ ನಮ್ಮ ಭಾಷೆ ಬೆಳೆಯಲು ಕಾರಣವಾಗಿದೆ.. "ಹಚ್ಚೇವು ಕನ್ನಡದ ದೀಪ" ಸುಂದರ ನೃತ್ಯದಿಂದ ಕೂಡಿ ಬಂತು.. 

ಸಿಕ್ಕಾಗೆಲ್ಲ ಮಾತಾಡುವುದು ಒಂದು ಕಲೆ.. ಸಿಕ್ಕಿದ್ದನ್ನು ಮಾತಾಡುವುದು ಇನ್ನೊಂದು ಕಲೆ.. ಎರಡನ್ನು ಬೆರೆಸಿ.. ನಾವು ವಿಷಯ ಕೊಡುತ್ತೇವೆ ನೀವು ಮಾತಾಡಿ ಎಂದು ಸ್ಪರ್ಧೆ ಮಾಡಿದ್ದರು.. ಅದರಲ್ಲಿ ಮಾತಾಡಿ ಗೆದ್ದವರಿಗೆ ಬಹುಮಾನಗಳನ್ನು ನೀಡಿದರು.. 












ಭಾಷೆ ಯಾವುದಾದರೇನು ಭಾವ ನವನವೀನ.. ಅಲ್ಲವೇ.. ಕನ್ನಡ ಮಾತೃಭಾಷೆಯಾಗದಿದ್ದರೆ ಏನು.. ನಮಗೆ ಕನ್ನಡದ ಬಗ್ಗೆ ಅಭಿಮಾನ ಎಂದು ಬೇರೆ ಭಾಷೆಯನ್ನು ಮಾತಾಡುವವರಾದರೂ... ಕನ್ನಡೇತರರು ಸ್ಪರ್ಧಿಸಿದ್ದ ಭಾಷಣ ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನ ನೀಡಿದರು.. 

ಕಣ್ಣಿಗೆ ಕಾಣದ್ದು ಕ್ಯಾಮೆರಾ ಕಂಡಿತು ಎನ್ನುತ್ತಾರೆ.. ಹೌದು ಕಣ್ಣು ನೋಡಿದ್ದು ಮರೆಯಬಹುದು.. ಆದರೆ ಕ್ಯಾಮೆರಾ ಕಣ್ಣಿನ ಜಾದೂ ನಿಮ್ಮ ಹತ್ತಿರ ಇದ್ದರೆ ಪ್ರದರ್ಶಿಸಿ ಎಂದು ಆಹ್ವಾನ ನೀಡಿದ್ದರಿಂದ ಹತ್ತಾರು ಅತ್ಯುತ್ತಮ ಚಿತ್ರಗಳು ಬಂದಿದ್ದವು.. ಅದರಲ್ಲಿನ ವಿಜೇತರಿಗೆ ಬಹುಮಾನ ನೀಡಿದರು.. 

ನಾವು ಹೇಗಿದ್ದೇವೆ ಮುಖ್ಯ.. ಹೇಗೆ ಸಿದ್ಧವಾಗಿದ್ದೇವೆ ಅದೂ ಮುಖ್ಯ.. ಕಾರ್ಯಕ್ರಮಕ್ಕೆ ಸಜ್ಜಾಗಿ ಬಂದಿದ್ದ ಇಬ್ಬರಿಗೆ ಅತ್ಯುತ್ತಮ ವೇಷಭೂಷಣದ ವಿಭಾಗದಲ್ಲಿ ಗುರುತಿಸಿ ಗೌರವಿಸಿದರು.. 

ಎಲ್ಲರೂ ಮಂತ್ರ ಮುಗ್ಧರಾಗಿ ಕೇಳುತ್ತಿದ್ದರು.. ಗುರುಗಳು ಸಣ್ಣಗೆ ಕೆಮ್ಮಿದರು... ಶಿಷ್ಯರಿಗೆಲ್ಲ ಮೈ ಜುಮ್ ಎಂದಿತು.. ಗುರುಗಳೇ ನಿಮ್ಮ ವಿವರಣೆ.. ನಾವೇ ಅಲ್ಲಿ ಹೋಗಿದ್ದೆವು ಎನ್ನುವಂತೆ ಮಾಡಿದೆ.... ನಾವುಗಳು ಹೋಗಬೇಕಿತ್ತು ಎನ್ನುವ ಹಂಬಲವನ್ನು ನಿಮ್ಮ ವಿವರಣೆ ತೀರಿಸಿತು.. 

"ಶಿಷ್ಯರೇ.. ಕರುನಾಡಿನ ವರನಟ ಹೇಳಿದ್ದು ಕನ್ನಡ ನಾಡಲ್ಲಿ ಇರುವವರೆಲ್ಲಾ ಕನ್ನಡ ಮಾತಾಡಬೇಕು..ಅದೇ ನನ್ನ ಆಸೆ.."

ಶತಾಯುಷಿಗಳಾಗಿ ಇಗೋ ಕನ್ನಡ ಎಂಬ ಅಭೂತಪೂರ್ವ ಮಾಲಿಕೆಯನ್ನು ತಂದಿದ್ದ ಕೀರ್ತಿ ಶೇಷ ಶ್ರೀ ಜಿ ವೆಂಕಟ ಸುಬ್ಬಯ್ಯನವರು ಹೇಳಿದ್ದು.. "ನಮ್ಮ ಭಾಷೆಗೆ ಅಳಿವಿಲ್ಲ.. ವರ್ಷಗಳು ಕಳೆದ ಹಾಗೆ ಅನೇಕಾನೇಕ ಪದಗಳು ಕನ್ನಡೀಕರಣವಾಗಿ ಪದ ಸಂಪತ್ತು ಬೆಳೆಯುತ್ತದೆ"

ಎಷ್ಟು ನಿಜ ಈ ಮಾತು.. ಕನ್ನಡ ಭಾಷೆಗೆ ಉಳಿವು ಇದೆ.. ಬೆಲೆಯೂ ಇದೆ.. ಕನ್ನಡ ಸಾರ್ವಕಾಲಿಕ.. 

ಶಿಷ್ಯರೆಲ್ಲಾ ಜೋರಾಗಿ ಚಪ್ಪಾಳೆ ತಟ್ಟುತ್ತಾ ಹೇಳಿದರು "ಗುರುಗಳೇ ಈ "ಸಂತೋಷ" ಸದಾ ಇರುತ್ತದೆ.. "ರವಿ" ಬೆಳಕಿನಂತೆ.. !


ಗುರುಗಳೇ ಒಂದಷ್ಟು ಅದ್ಭುತ ಕ್ಷಣಗಳನ್ನು ಮನ ಮುಟ್ಟುವಂತೆ ತೆರೆದಿಟ್ಟ ನಿಮಗೆ ನಮೋ ನಮಃ...ಈ ಸುಂದರ ಕಾರ್ಯಕ್ರಮವನ್ನು..ಸಂಭ್ರಮವನ್ನು ಆಯೋಜಿಸಿದ ಸಂಸ್ಥೆಗೂ..ಅವಿರತ ಪರಿಶ್ರಮದಿಂದ ಸಮಾರಂಭವನ್ನು ಹಬ್ನವನ್ನಾಗಿ ಮಾರ್ಪಡಿಸಿದ ತಂಡಕ್ಕೆ ಅಭಿನಂದನೆಗಳು...!

ಪೂರ್ಣ. ಚಿತ್ರೀಕರಣವಾಗದೇ..ಹಾಡು ಮಾತ್ರ ವಿಶ್ವ ಪ್ರಸಿದ್ಧವಾದ ಶ್ರೀ‌ ಶಿವಶಂಕರ್ ರಚಿಸಿದ "ಸಂಗಮ" ಚಿತ್ರದ ಹಾಡಿನಂತೆ ನನ್ನ ಆಸೆ..

"ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ...ಭಿಕ್ಷಕನಾದರೂ ಕನ್ನಡ ನಾಡಲ್ಲೆ........"




Saturday, September 17, 2022

ಬದುಕೇ ಹಸಿರು ಪ್ರೀತಿ ಬೆರೆತಾಗ!!!

 ಜಗತ್ತೇ ನಮದು ಅಂತ ಜಗವನ್ನೇ ಮರೆತು ಮಾತಾಡುತ್ತಿದ್ದ ಸುಂದರ ಜೋಡಿಯದು..

ಜೀವನದಲ್ಲಿ ಅನೀರಿಕ್ಷಿತ ತಿರುವುಗಳನ್ನು ಕಂಡ ಜೋಡಿಯದು..ಹಿಂದಿನ ಜನ್ಮದಲ್ಲಿ ಪ್ರಾಯಶಃ ಪ್ರಕೃತಿಯ ರುದ್ರತಾಂಡವವೋ...ದೈವ ಕುಪಿತವಾಗಿ ಶಾಪ ಕೊಟ್ಟೋ ..ಇಲ್ಲವೇ ದೇವತೆಗಳ ಶಾಪದಿಂದ ಭುವಿಗಿಳಿದಿದ್ದ ಗಂಧರ್ವ ಜೋಡಿಯೋ ಒಟ್ಡಿನಲ್ಲಿ ನಾಲ್ಕು ಮಂದಿಯ ಕಣ್ಣಲ್ಲಿ ಸಂತಸ ಉಕ್ಕಿಸುತ್ತಿದ್ದ ಜೋಡಿಯದು..

ಆ ಜೋಡಿ ಇದೆ ಎಂದರೆ ಯಾವ ಪ್ರವಾಸವೂ ಪ್ರಯಾಸವಾಗುತ್ತಿರಲಿಲ್ಲ...ಆರಾಮಾಗಿ ಖುಷಿ ಖುಷಿಯಾಗಿ ನಲಿಯುತ್ತಿದ್ದ ಜೋಡಿಯದು..ಗ್ರಹಗಳ ವ್ಯಾಪಾರವೋ..ಹಣೆ ಬರಹವೋ..ವಿಧಿವಲಾಸವೋ ಅತಿಯದು..ಜೀವನದ ಮುಖ್ಯ ಘಟ್ಟದಲ್ಲಿ ಅಪಾರವಾದ ಸಂಕಷ್ಟಗಳಿಗೆ ಹೆಗಲು ಕೊಟ್ಟ ಜೋಡಿಯದು...ಕಷ್ಡವೇನೆ ಇರಲಿ...ಮೊಗದಲ್ಲಿ ನಗು ಸದಾ ಸೂರ್ಯ ಚಂದ್ರರು ಇರುವಷ್ಡೇ ಶಾಶ್ವತವಾಗಿ‌ ಮನೆ ಮಾಡಿತ್ತು..

ಅರೇ ಬರೀ ಪೀಠಿಕೆ ಆಯ್ತು ಅಂದ್ರ ಇರ್ರಪ್ಪ ಅಸಲಿ ಇಸ್ಯಕ್ಕೆ ಬರ್ತೀನಿ...

ಸರಿ ಜಗವ ಮರೆತು ಲೋಕಾಭಿರಾಮವಾಗಿ ಮಾತಾಡುತ್ತಾ ಕುಳಿತಿದ್ದರು..ಮಾತುಗಳು ಸಾಗಿತ್ತು...ಕಾರ್ಪೊರೇಟ್ ವಲಯದಲ್ಲಿ‌ ಕೆಲಸದ ಒತ್ತಡ..ಅದನ್ನು ನಿಭಾಯಿಸುವ ಚೈತನ್ಯ.. ಅದನ್ನು ಸಂಭಾಳಿಸಬೇಕಾದರೆ ಬೇಕಾಗುವ ಮಾನಸಿಕ ದೃಢತೆ..ಹೀಗೆ ಮಾತು ಸಾಗಿತ್ತು..

"ಹೌದು ಡಿಯರ್...ಈಗಿನ‌ ಕಾಲದಲ್ಲಿ ಯಾವುದು ಶಾಶ್ವತವಲ್ಲ..ಕಾರ್ಪೊರೇಟ್ ರಾಕ್ಷಸ ಯಾರನ್ನು ಬಿಡುವುದಿಲ್ಲ...ಹಿಂಡಿ ಹಿಪ್ಪೆ ಮಾಡುತ್ತದೆ...ಯಾರನ್ನೂ ನಂಬಿಕೊಂಡಿರೋಲ್ಲಾ...ಅಷ್ಟೇ ಏಕೆ ಮನೆಯಲ್ಲೇ ಒಬ್ಬರ ಮೇಲೆ ಒಬ್ಬರು ಅವಲಂಬಿತರಾಗಿರೋಲ್ಲಾ ಅರ್ಥಾತ್ depend ಆಗಿರೋಲ್ಲ.." ಹೆಣ್ಣು ದನಿ ಉಲಿಯಿತು...

ಅಲ್ಲಿ ತನಕ ಜಗತ್ತೇ ನಮದು ಎಂದಿದ್ದ ಜೋಡಿಯ ಗಂಡು...ಅಚಾನಕ್

 T R A I N 

P U L L

C H A I N

FAN 

S W I T C H...ಅಂತ ಅಲ್ಲಿದ್ದ ಅಕ್ಷರಗಳನ್ನು ಓದಲು ಶುರು ಮಾಡಿತು..

"ಅರೇ ಯಾಕೇ ಡಿಯರ್ ಏನಾಯಿತು..ಅಂಜಿಕಿ ಆಗ್ತಾ ಇದೆ...ಯಾಕೇ ಹಿಂಗೆ ಬಡ ಬಡಿಸ್ತಾ ಇದ್ದೀರಾ..."

ಮನೆ ಮನೆ ಮನೆ .ನಮ್ಮ‌‌ ಮನೆ ..ನಮ್ಮ ಸಂಸಾರ ನಮ್ಮ ಬಳಗ ಎಂದು ಯಾವಾಗಲೂ ಪ್ರಾಣ ಬಿಡುತ್ತಿದ್ದ ಅವನಿಗೆ ಅಚಾನಕ್ ಸಂಕಷ್ಟಗಳ‌‌ ಮಾಲೆ...ಆತ್ಮ ವಿಶ್ವಾಸವೇ ಕುಗ್ಗುವಂತಹ ಘಟನಾವಳಿಗಳು.. ಅವನ‌ ಜಂಘಾ ಬಲವನ್ನೇ ಅಲುಗಾಡಿಸಿತ್ತು..ಜೊತೆಗೆ ಮಾಮೂಲಾಗಿ ಆಡಿದ್ದ "ಕುಟುಂಬದಲ್ಲೇ  ಯಾರು ಯಾರಿಗೂ ಆಗೋಲ್ಲ" ಎನ್ನುವ ಮಾತು ಹೃದಯ ಬಡಿತವನ್ನು ಹೆಚ್ಚಿಸಿದ ಸಮಯವಾಗಿತ್ತು...

ಇದನ್ನು ಅರಿತ ಅವನ ಮನೋನಾಯಕಿ...ತಬ್ಬಿ ಹಿಡಿದು ತಾನು ಇರುವುದು ಸಾರ್ವಜನಿಕ ಸ್ಥಳ‌ ಅನ್ನೋದನ್ನು ಮರೆತು ಎದೆಗಾನಿಸಿಕೊಂಡು ಸಾಂತ್ವನ ನೀಡಿದಾಗ ಮತ್ತೆ ಎದೆ ಬಡಿತ 72ಕ್ಕೆ ಬಂದಿತು..

"ಡಿಯರ್ ಈಗ ಓಕೇನಾ" ಅಂದಾಗ..ಹೌದು ಎದೆ ಬಡಿತ 72.._ಅದರ ಅರ್ಧ 36 ಅಂದಾಗ. ಇಬ್ಬರೂ ಮತ್ತೆ ಜಗತ್ತನ್ನು ಮರೆತು ನಗಲು ಶುರು ಮಾಡಿದರು...

ಪಕ್ಕದಲ್ಲಿ ಇಡ್ಲಿ ವಡೆ ಚಪಾತಿ ಬಿರ್ಯಾನಿ ಪಲಾವ್ ಮಾರುವವನ ಮೊಬೈಲಿನಲ್ಲಿ ಅಣ್ಣಾವ್ರ "ಬದುಕೇ ಹಸಿರು ಪ್ರೀತಿ ಬೆರೆತಾಗ" ಹಾಡು ತೇಲಿ ಬಂತು...!









Wednesday, August 31, 2022

ಅಮ್ಮನಿಲ್ಲದ ಗಣಪತಿ ಹಬ್ಬ ... !

 ಅಣ್ಣನಿಲ್ಲದ ಗಣಪನ ಹಬ್ಬ

ಯಾಕೆ ಮಗು....  ಅಣ್ಣನಿಲ್ಲದ ಹಬ್ಬದ ಬಗ್ಗೆ ಬರೆದಿದ್ದೆ... ನಾ ನಿಲ್ಲದ ಹಬ್ಬದ ಬಗ್ಗೆ ಬರೆಯೊಲ್ವೇ.. 

ಅಮ್ಮ ಭಕ್ತ  ಕುಂಬಾರ ಚಿತ್ರದಲ್ಲಿ ಅಹಂ ತುಂಬಿದ್ದ ನಾಮದೇವರು ಗುರುವಿನ ಹುಡುಕಾಟದಲ್ಲಿದ್ದಾಗ ಲಿಂಗದ ಮೇಲೆ ಕಾಲಿಟ್ಟು ಮಲಗಿದ್ದ ವೃದ್ಧರನ್ನು ಕಂಡು ಕುಪಿತಗೊಂಡು.. ಮಾತಾಡಿಸಿದಾಗ... ಶಿವನಿಲ್ಲದ ತಾಣದಲ್ಲಿ ನೀನೆ ಇದಪ್ಪ ಅಂದಾಗ.. ಕಾಲನ್ನು ಇಡುವೆಡೆಯೆಲ್ಲಾ ಶಿವಲಿಂಗವೇ ಕಾಣುತ್ತದೆ.. ಅಜ್ಞಾನದಿಂದ ಕಣ್ಣು ಕುರುಡಾಗಿದ್ದ ನಾಮದೇವರ ಅಹಂ ಇಳಿಯುತ್ತದೆ.. ಶಿವನಿಲ್ಲದ ತಾಣವೆಲ್ಲಿದೆ.. ಅಹಂ ಇಂದ ತುಂಬಿದ್ದ ನನ್ನ ತಲೆಯೇ ಶಿವನಿಲ್ಲದ ತಲೆ ಎಂದು ತನ್ನ ತಲೆಯ ಮೇಲೆ ಆ ಗುರುಗಳ ಕಾಲನ್ನು ಇಟ್ಟುಕೊಳ್ಳುತ್ತಾನೆ.. 

ಆಹಾ ರಾಜಕುಮಾರ್ ಸಿನಿಮಾ ಅಂದರೆ ಸಾಕು.. ಯಾವುದೋ ಒಂದು ದೃಶ್ಯವನ್ನು ಎಳೆದು ಜೋಡಿಸಿಬಿಡುತ್ತೀಯ.. ಹರಿ ಕತೆ ಬೇಡಾ.. ಯಾಕೆ ಬರೆದಿಲ್ಲ ಹೇಳು.. ನನ್ನ ನೆನಪಿಲ್ಲವೇ.. 

ಅಮ್ಮ ಆ ದೃಶ್ಯದಲ್ಲಿ ಬರುವ ಹಾಗೆ ಅಣುಕಣದಲ್ಲಿ, ಸಕಲ ಚರಾಚರ ವಸ್ತುಗಳಲ್ಲಿ ಶಿವನಿರುವ ಹಾಗೆ.. ನಿನ್ನ ನನೆಪು ಅನುದಿನವೂ, ಅನುಕ್ಷಣವೂ ಇದ್ದೆ ಇರುತ್ತದೆ.. ಮರೆತಿದ್ದರೇ ತಾನೇ ನೆನಪು ಮಾಡಿಕೊಳ್ಳುವುದು.. 

ಮಗು ಇದು ಭಾದ್ರಪದ ಮಾಸ ಶ್ರಾವಣಮಾಸವಲ್ಲ ... ಹರಿಕತೆ ಬೇಡಾ.. ಸೀದಾ ವಿಷಯಕ್ಕೆ ಬಾ.. 

ಸರಿ ಅಮ್ಮ.. 

********** 

ಜೇನಿನ ಗೂಡಿನಲ್ಲಿ ಜೇನು ನೊಣಗಳು ಅವಿರತವಾಗಿ ಕೆಲಸ ಮಾಡುತ್ತಾ ತಮ್ಮ ಗೂಡನ್ನು ಭದ್ರ ಮಾಡುತ್ತಲೇ, ಜೀವನಕ್ಕೆ ಒಂದು ಗೂಡು ಕಟ್ಟುವ ಹಾಗೆ ಅಮ್ಮನ ಅವಿರತ ಹೋರಾಟದ ಶ್ರಮ ನಮ್ಮ ಮನೆ ಮನಗಳನ್ನು ಎತ್ತಿ ಹಿಡಿದಿಟ್ಟಿದೆ.. 

ಹಿಂದಿನ ಒಂದೆರಡು ವಾರಗಳ ಮುಂಚೆ ಹತ್ತಿಯನ್ನು ನೆನೆಸಿ.. ಅದಕ್ಕೆ ಬಣ್ಣ ಹಾಕಿ.. ಅಚ್ಚುಕಟ್ಟಾದ ಹತ್ತಿಯ ಎಳೆಗಳನ್ನು  ಮಾಡಿ.. ಅದನ್ನು ಚೆನ್ನಾಗಿ ಒಣಗಿಸಿ .. ಅದಕ್ಕೆ ಒಂದು ರೂಪು ಕೊಟ್ಟಾಗ ಮನಸ್ಸಿಗೆ ಸಂತೋಷ.. 

ಅಷ್ಟೆಲ್ಲಾ ಸಿದ್ಧವಾಗಿದ್ದರೂ.. ಅದಕ್ಕೆ ವರ್ತಿ ತಗಡು ತಂದು.. ಎಲೆಯ ಆಕಾರದಲ್ಲಿ ಕತ್ತರಿಸಿ ಅದರ ಮೇಲೆ ಗೊಂದು ಹಚ್ಚಿ..ನಕ್ಕಿಯನ್ನು ಹಾಕಿ.. ಅದು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುವಂತೆ ಸ್ವಲ್ಪ ಓಡಾಡ ಸ್ಥಳದಲ್ಲಿ ಇಟ್ಟರೆ.. ಒಂದು ಹಂತ ಮುಗಿಯುತ್ತಿತ್ತು.. 

ಮಾರನೇ ದಿನ ಬೆಳಿಗ್ಗೆ ಅಪ್ಪನೇ ಅರ್ಥಾತ್ ಅಣ್ಣನೇ ಗೌರಿ ಪೂಜೆ ಮಾಡಿಸಿ.. ಅಮ್ಮ ಕಷ್ಟ ಪಟ್ಟು ಮಾಡಿದ್ದ ಹತ್ತಿಯ ಎಳೆಗಳ ಮೇಲೆ.. ಯಥೇಚ್ಛವಾಗಿ ನೀರು ಚುಮುಕಿಸಿ ಅಮ್ಮನ ಉರಿಗಣ್ಣಿಗೆ ಪಾತ್ರವಾಗುತ್ತಿದ್ದರು.. ಹ ಹ ಹ ಹ 

ಗೌರಿ ಹಬ್ಬದ ಪೂಜೆಗೆ ಬೇಕಾದ ಸಕಲ ಸಿದ್ಧತೆಗಳನ್ನು ಒಬ್ಬರೇ ಆರಾಮಾಗಿ ಮಾಡುತ್ತಾ.. ಗೌರಿ ಬಾಗಿನ ಜೊತೆ ಮಾಡಿ.. ಪೂಜೆ, ನೈವೇದ್ಯ ಎಲ್ಲದ್ದಕ್ಕೂ ಒಬ್ಬರೇ ಸಾಹಸ.. ಆಗಾಗ ಅಕ್ಕ ಅಮ್ಮನಿಗೆ ನೆರವಾಗುತ್ತಿದ್ದರೂ ಅಮ್ಮನದು ಒನ್ ವುಮನ್ ಷೋ ಯಾವಾಗಲೂ.. ಅವರ ತಲೆಯಲ್ಲಿ ಅಡಿಗೆ ಬೇಯುತಿತ್ತು.. ಅದೇ ರೀತಿ ಅಡಿಗೆ ಸಿದ್ಧವಾಗುತ್ತಿತ್ತು.. 

ಮುಂದೆ ಸೊಸೆಯಂದಿರು ಬಂದ ಮೇಲೆ.. ಅಕ್ಕನ ಜೊತೆಯಲ್ಲಿ ಸೊಸೆಯಂದಿರಿಗೂ ಕೆಲಸ ಹಚ್ಚಿದರೂ ಮೇಲ್ವಿಚಾರಣೆ ಅಮ್ಮನದೆ ಇರುತ್ತಿತ್ತು,.. 

ಗೌರಿ ಹಬ್ಬದಲ್ಲಿ ನಾವು ಅಣ್ಣ ತಮ್ಮಂದಿರ ಪಾತ್ರ ಕಡಿಮೆ.. ನಾವೇನಿದ್ದರೂ.. ಚೀರ್ ಬಾಯ್ಸ್.. ಅಣ್ಣ ಅದನ್ನು ಕೊಡು.. ಹೂವು ಕೊಡು.. ಅದು ಇದು ಎಂದಾಗ ನಾವುಗಳು ಕೈ ಹಾಕುತ್ತಿದ್ದೆವು.. ಇಲ್ಲದೆ ಹೋದರೆ.. ಆರಾಮಾಗಿ ಗೌರಿ ಪೂಜೆ ನೋಡುತ್ತಾ... ಎಷ್ಟು ಹೊತ್ತಿಗೆ ತಿಂಡಿ ಸಿಗುತ್ತದೆಯೋ ಅಂತ ಕಾಯುವ ಕಾಯಕ ನಮ್ಮದು... 

ಸಂಜೆ ಆಗುತ್ತಲೇ ನಾವುಗಳು ಅರಳಿದ ಹೂಗಳಾಗುತ್ತಿದ್ದೆವು.. ಅಪ್ಪನಿಲ್ಲದ ಗಣಪತಿ ಹಬ್ಬದ ಬಗ್ಗೆ ಆರಂಭದಲ್ಲಿ ಕೊಂಡಿಯನ್ನು ಕೊಟ್ಟಿದ್ದೇನೆ ಅಲ್ಲವೇ.. ಸಂಜೆ ಗಣಪತಿ ತಂದು... ಅದಕ್ಕೆ ಅಪ್ಪನ ಜೊತೆ ಕೂತು ಮಂಟಪ ಸಿದ್ಧ ಮಾಡಿ.. ಮನಸ್ಸಿಗೆ ತೋಚಿದ ಅಲಂಕಾರ ಮಾಡುವ ಹೊಣೆ ನಮ್ಮದಾಗಿರುತಿತ್ತು.. 

ಜೊತೆಯಲ್ಲಿ ಅಮ್ಮನ ಹತ್ತಿಯ ಎಳೆಗಳಿಗೆ ಫೈನಲ್ ಟಚ್ ಕೊಡುವ ಸಾಹಸಕ್ಕೆ ನಾವುಗಳು ಕೈ ಹಾಕಿ ಮೈ ಕೈಯೆಲ್ಲ ಗೊಂದು ಮಾಡಿಕೊಂಡು ಕೈ ತೊಳೆದುಕೊಳ್ಳೋಕೆ ಹೆಣಗಾಡುತ್ತಿದ್ದೆವು. 

ಅಮ್ಮ ಬೆಳಿಗ್ಗೆ ಪೂಜೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡು.. ಮಲಗುವ ಹೊತ್ತಿಗೆ ತಡರಾತ್ರಿಯಾಗಿರುತ್ತಿತ್ತು.. ಕಣ್ಣು ಮುಚ್ಚಿದ ತಕ್ಷಣ ಅದ್ಯಾವ ಮಾಯೆಯಲ್ಲಿ ಬೆಳಗಾಗುತಿತ್ತೋ ಆ ದೇವರಿಗೆ ಗೊತ್ತು.. ಬೆಳಿಗ್ಗೆ ಬೇಗ ಎದ್ದು... ಜಳಕ ಮಾಡಿ.. ಮತ್ತೆ ಅಡಿಗೆ ಮನೆಯ ಸಾಮ್ರಾಜ್ಯಕ್ಕೆ ಲಗ್ಗೆ ಇಡುತ್ತಿದ್ದರು.. ಮೋದಕ, ಕರಿಗಡುಬು, ನಮ್ಮ ನೆಚ್ಚಿನ ಉದ್ದಿನ ಕಡುಬು, ಕೋಸಂಬರಿ, ಪಲ್ಯ, ಅನ್ನ, ಸಾರು, ಹುಳಿ, ಸಾಮಾನ್ಯ ಮಾವಿನಕಾಯಿ ಚಿತ್ರಾನ್ನ, ಮಜ್ಜಿಗೆ, ಖಾರವಾದ ಚಟ್ನಿ.. ಆಹಾ ಈಗ ನೆನೆದರೂ ಬಾಯಲ್ಲಿ ನೀರು ಬರುತ್ತದೆ.. 

ಏಕಾಂಗಿಯಾಗಿ ಎಲ್ಲವನ್ನೂ ಸಿದ್ಧಮಾಡಿ.. ಮಹಾ ಮಂಗಳಾರತಿಯ ಹೊತ್ತಿಗೆ ಸರಿಯಾಗಿ ಕರಿಗಡುಬು ಕರಿಯಲು ಮತ್ತೆ ಉದ್ದಿನ ಕಡುಬಿಗೆ ಹಾಳೆಯನ್ನು ಒತ್ತಿ ಬೇಯಿಸಲು ಸಿದ್ಧಮಾಡುತ್ತಿದ್ದರು.. ಅಣ್ಣ ಜೋರಾಗಿ ಕೂಗೋದು.. ಮಂಗಳಾರತಿ ಬಾ.. ಅದೇನು ಅಡಿಗೆ ಮನೆಯಲ್ಲಿಯೇ ಇರುತ್ತೀಯೋ.. ಬಾ ಬೇಗ ಅಂತಾ ಕೂಗಿದಾಗ.. ಅಡಿಗೆಯನ್ನು ಯಾರು ಮಾಡುತ್ತಾರೆ ಅಂತ ಅಮ್ಮ ಗೊಣಗುತ್ತಲೇ ಬರೋದು.. ನಾವುಗಳು ಅಮ್ಮನನ್ನು ಸಮಾಧಾನ ಪಡಿಸುತ್ತಾ.. ನೈವೇದ್ಯಕ್ಕೆ ಇಟ್ಟಿದ್ದ ಪದಾರ್ಥಗಳನ್ನು ಆಸೆಗಣ್ಣಿನಿಂದ ನೋಡುತ್ತಾ.. ಎಷ್ಟು ಹೊತ್ತಿಗೆ ಹೊಟ್ಟೆಗೆ ಇಳಿಸುತ್ತೇವೆ ಅಂತ ಹೊಂಚು ಹಾಕುತ್ತಾ ಇರೋದು.. 

ಅಮ್ಮನಿಂದ ಮಹಾಮಂಗಳಾರತಿ ಅಣ್ಣನಿಗೆ ಮೊದಲು ನಂತರ ಅಣ್ಣನಿಂದ ಗಣಪನಿಗೆ ಆದ ಮೇಲೆ.. ಬಂದ ಪುರೋಹಿತರಿಗೆ ನಮಸ್ಕರಿಸಿ.. ಅವರು ಇನ್ನೂ ಬಾಗಿಲನ್ನು ದಾಟಿರುತ್ತಾ ಇರಲಿಲ್ಲ.. ಆಗಲೇ ಅಡಿಗೆ ಮನೆಗೆ ಲಗ್ಗೆ.. ಒಂದೆರಡು ಕರಿಗಡುಬು ಹೊಟ್ಟೆಗೆ ಇಳಿಸಿದ್ದೆ ತಡ.. ಜೊತೆಯಲ್ಲಿ ಖಾರವಾದ ಚಟ್ನಿಗೆ  ಬಿಸಿ ಬಿಸಿ ಸುಡುತಿದ್ದ ಉದ್ದಿನ ಕಡುಬನ್ನು ಅದ್ದಿ ತಿಂದಾಗ ಆಹಾ.. 

ಆಮೇಲೆ ಅಮ್ಮ ಎಲ್ಲರಿಗೂ ತಿಂಡಿ ಎಲೆಯಲ್ಲಿ ಹಾಕಿ ಬಿಸಿ ಬಿಸಿ ಕಡುಬು, ಒಂದೆರಡು ಮೋದಕ, ಕರಿಗಡುಬು ಕೊಡುತ್ತಿದ್ದರು.. ಕಡಿಮೆ ತಿನ್ನಿ ಊಟ ಮಾಡಬೇಕು ಎಂದರೂ ಕೇಳದೆ ಗಣಪನ ಹೊಟ್ಟೆಯಷ್ಟೇ ನಮ್ಮ ಹೊಟ್ಟೆಯೂ ಡೊಳ್ಳು ಹೊಟ್ಟೆಯಾಗಬೇಕು ಅಷ್ಟು ಒಳಗೆ ಇಳಿಸಿ.. ಹೊರಗಡೆ ಆಟವಾಡಲು ಹೋಗುತ್ತಿದ್ದೆವು.. 

ಘಮಘಮಿಸೋ ಊಟ ಮಾಡಿ.. ನೆಲಕ್ಕೆ ಹೊಟ್ಟೆ ತಾಗಿಸಿಕೊಂಡು ಮಲಗಿದರೆ ಆಹಾ ಎದ್ವಾ ತದ್ವಾ ನಿದ್ದೆ.. 

ಎಳ್ರೋ.. ಸಂಜೆಯಾಯಿತು.. ದೀಪ ಹಚ್ಚಬೇಕು.. ಅನ್ನುವಾಗಲೇ ಎಚ್ಚರ.. ಕಪ ಕಪ ಮೊಗ ತೊಳೆದು.. ಮನೆಯ ಹತ್ತಿರ ಕೂರಿಸಿದ್ದ  ಗಣಪತಿ ಪೆಂಡಾಲುಗಳಿಗೆ ಹೋಗಿ.. ಅಲ್ಲಿ ಕೊಡುವ ಚರ್ಪುತಿಂದು .. ಮತ್ತೆ ಮನೆಗೆ ಬಂದ ಮೇಲೆ.. ಶ್ಯಮಂತಕೋಪಾಖ್ಯಾನ ಕತೆ ಕೇಳಿ... ಚರ್ಪು ರೂಪದಲ್ಲಿ ಅಮ್ಮ ಮಾಡಿದ ಕಡಲೆ ಹಿಟ್ಟು.. ಇಲ್ಲವೇ ಕಡಲೆ ಕಾಳಿನ ಹುಸ್ಲಿ ಹೊಟ್ಟೆಗೆ ಇಳಿಸಿ.. ಗಣಪತಿಯನ್ನು ಮನೆಯ ಹತ್ತಿರದ ಬಾವಿಯಲ್ಲಿ ವಿಸರ್ಜನೆ ಮಾಡಿ.. ರಾತ್ರಿ ಊಟ ಮಾಡಲು ಆಗದೆ ಇದ್ದರೂ... ತಣ್ಣಗಾಗಿದ್ದರೂ ರುಚಿಸುವ ಕಡುಬು ತಿಂದು  ಮಲಗಿದರೆ ಗಣಪತಿ ಹಬ್ಬ ಸಮಾಪ್ತಿ.. 

ಮುಂದೆ ಅಮ್ಮನ ಕೆಲಸ ಶುರುವಾಗುತ್ತಿತ್ತು... ಅಡಿಗೆ ಮನೆಯ ಪಾತ್ರೆಗಳು.. ಪೂಜಾ ಸಾಮಗ್ರಿ ಎಲ್ಲವನ್ನೂ ಅಚ್ಚುಕಟ್ಟಾಗಿ ಸರಿ ಮಾಡಿ.. ಮತ್ತೆ ಅವರು ಮಲಗುವ ಹೊತ್ತಿಗೆ ತಡ ರಾತಿ  ಮಾರನೇ ದಿನಕ್ಕೆ  ಮತ್ತೆ ಕಾಯುವ ಕಾಯಕ... !

******

ಮಕ್ಕಳ ಮರೆತಿಲ್ಲ ಮರೆಯೋದಿಲ್ಲ.. ನನಗೆ ಗೊತ್ತು ಸುಮ್ಮನೆ ಕಾಲೆಳೆದು ನೋಡಿದೆ ಅಷ್ಟೇ.. ನಾ ನಿಲ್ಲದ ಮೊದಲ ಗಣಪತಿ ಹಬ್ಬಕ್ಕೆ ನೀವೆಲ್ಲರೂ ಕೂಡಿರುವುದು ನೋಡಿ ಖುಷಿಯಾಗಿದೆ.. ನಮ್ಮ ಅನುಗ್ರಹ ಸದನದ ಪುರೋಹಿತ ಶಾಮಣ್ಣ ಇನ್ನೇನು ಬರುತ್ತಿದ್ದಾನೆ.. ಪೂಜೆ ಮಾಡಿ.. ಗಣಪನ ಕೃಪೆಯಿಂದ ನಮ್ಮ ಅನುಗ್ರಹ ಸದನ ಸದಾ ಬೆಳಗುತ್ತಲಿರಲಿ.. ಶುಭವಾಗಲಿ.. !


Wednesday, August 24, 2022

ನೀ ಮುಡಿದ ಮಲ್ಲಿಗೆ.....!

ನೀ‌‌ ಮುಡಿದ ಮಲ್ಲಿಗೆ ಹೂವಿನ‌ ಮಾಲೆ

ನಿನಗೆಂದೇ ಬರೆದ ಪ್ರೇಮದ ಓಲೆ...!


ನೀ‌ ಮುಡಿದ ಮಲ್ಲಿಗೆ ಹೂವಿನ‌ ಮಾಲೆ..                          ನಿನಗೆಂದೇ ಬರೆದ ಪ್ರೇಮದ ಓಲೆ..

ರೇಡಿಯೋದಲ್ಲಿ ಗಾಂಧಿನಗರ ಚಿತ್ರದ ಅಣ್ಣಾವ್ರ ಹಾಡು ಬರುತಿತ್ತು..

ಮಲ್ಲಿಗಿ‌ ಮಾಲಿ ತನ್ನಿ...

ಯಾಕೋ...

ಮುಂಜಾನೇ ಯಾಕೋ ಅನಿಸಿತು ಇವತ್ತು ಮಾಲಿ‌ ಮುಡೀಬೇಕು ಅಂತ...!

ಅಯ್ಯೋ ರಾಣಿ ನಿನಗೋಸ್ಕರ ಚಂದ್ರನನ್ನೇ ತರುವೇ ಎನ್ನುವಾಗ ಮಲ್ಲಿಗೆ ಹೂವು ತಾನೆ..ತರ್ತೀನಿ ಬಿಡು...

ಕಿಸಿಕಿಸಿ‌ ನಗಿಸಿ ಹೊರಟೇ..

ಮಳೆ ಶುರುವಾಯ್ತು...

ನನ್ನ ಒಲವಿನ ಹುಡುಗಿ ಮೊದಲ ಬಾರಿ ಹೂವು ಬೇಕೆಂದು ಕೇಳಿದಳು...ಸೀದಾ ಅಣ್ಣಾವ್ರ ಹಾಡೇ ನೆನಪಿಗೆ ಬಂದಿತ್ತು...

ಒಳ ಉಡುಪು ನೆಂದು ಹೋಗುವಷ್ಟು ಜೋರಾದ ಮಳೆ...ಆದರೆ ಹೃದಯದಲ್ಲಿ ಪ್ರೇಮದ ಅಲೆಗಳ ಬೋರ್ಗರೆತದ ಮುಂದೇ ಈ ಮಳೆಯ ಹನಿಗಳು ಏನು ಅಲ್ಲಾ...

ಹೃದಯದ ರಾಣಿ ಕೇಳಿದ ಹೂವನ್ನು ಅರಸುತ್ತಾ ಹೋದೆ..ಅಂದು ಭಾನುವಾರ..ಮದುವೆ..ಮುಂಜಿ..ಪೂಜೆ..ಅದು ಇದು ಅಂತ ಹೂಗಳ ಅಂಗಡಿಗಳು ಬಿಕೋ‌ ಎನ್ನುತ್ತಿದ್ದವು...ಕೆಲವು ಅಂಗಡಿಗಳಲ್ಲಿ ಹೂವಿದ್ದವು...ಆದರೆ ಆಗಲೆ ಅಂತಿಮ ಘಟ್ಟ ಮುಟ್ಟಲು ಸಿದ್ಧವಾಗಿದ್ದಂತೆ ಕಾಣುತ್ತಿತ್ತು..

ಯಾಕೋ ಮನಸ್ಸು ಬರಲಿಲ್ಲ...ನನ್ನ ಹುಡುಗಿ ಮೊದಲ ಬಾರಿಗೆ ಬೇಕು ಅಂದಿದ್ದಾಳೆ ನಿರಾಸೆ ಮೂಡಿಸಲು ಮನಸ್ಸಾಗದೇ..ಆ ಮಳೆಯಲ್ಲಿಯೇ ಅಲೆದೆ...

ಬೈಕು ನೆಂದ ನಾಯಿಯಾಗಿತ್ತು..ಹೆಲ್ಮೆಟ್ ಹಾಕಿದ್ದರು ಆ ಹೊರಗಿನ‌‌ ಮಳೆಯ ಭೋರ್ಗರೆತ ತಲೆಯನ್ನು ಪೂರ್ತಿ ಒದ್ದೆ ಮಾಡಿತ್ತು...

ಅನತಿ ದೂರದಲ್ಲಿ ಒಂದು ಹಣ್ಣು ಹಣ್ಣು ಅಜ್ಜಿ ತಲೆ ಮೇಲೆ ಒಂದು ಪ್ಲಾಸ್ಟಿಕ್ ಹಾಳೆಯನ್ನು ಹಾಕಿಕೊಂಡು ತನ್ನ ಮುಂದೆ ಒಂದು ಬುಟ್ಟಿಯಲ್ಲಿ ಒಂದೆರೆಡು ಮಳ ನಳ ನಳಿಸುವ ಮಲ್ಲಿಗೆ ಹೂಗಳ ಮಾಲೆಯನ್ನು ತೆಳುವಾದ ಪ್ಲಾಸ್ಡಿಕ್ ಕವರಿನ ಹಾಳೆಯಿಂದ ಮುಚ್ಚಿದ್ದು ಕಂಡಿತು..

ನನ್ನ ಬೈಕ್ ನನ್ನ ಮಾತು ಕೇಳದೆ ಅಜ್ಜಿ ಮುಂದೆ ಬಂದು ನಿಂತಿತು...

ಏನಪ್ಪ ಪೂರಾ ನೆಂದು ಹೋಗಿದ್ದೀಯಲ್ಲ..ಸ್ವಲ್ಪ ನಿಂತು ಹೋಗಬಾರದಿತ್ತೆ...ಈ ಆಕಾಲಿಕ ಮಳೆಯಲ್ಲಿ ನೆಂದರೆ ತಲೆನೋವು..ಶೀತ..ಜ್ವರ..ಬರುತ್ತದೆ ಕಣಪ್ಪ..

ಇಲ್ಲ ಅಜ್ಜಿ ನನ್ನ ಮಡದಿ ಎಂದೂ ಕೇಳದವಳು ಇಂದು ಮಲ್ಲಿಗೆ ಹೂವು ಬೇಕು ಎಂದಳು...ಪೇಟೆಯೆಲ್ಲಾ ಸುತ್ತಿದೆ...ಯಾಕೋ ಗಮನ ಸೆಳೆಯುವ ಹೂವು ಸಿಗಲಿಲ್ಲ....ಸದಾ ನನ್ನ ಮಾತು ಕೇಳುವ ಬೈಕ್.. ಅರಿವಿಲ್ಲದೇ‌ ಸೀದಾ ನಿನ್ನ ಮುಂದೆ ಬಂದು ನಿಂತಿದೆ...ಪ್ರೀತಿಯ ಮಡದಿಯ ಆ ನಿರ್ಮಲ ಪ್ರೀತಿಯ ಜ್ಯೋತಿ ಒಳಗೆ ಬೆಳಗುತ್ತಿರುವಾಗ..ಈ ಚಳಿ..ಮಳೆ ಏನು ಮಾಡುತ್ತದೆ ಅಜ್ಜಿ...

ಹೌದಾ ಅಪ್ಪ...ಅನ್ಯೋನ್ಯ ಜೋಡಿ ಅನಿಸುತ್ತೆ..ಸದಾ ಸುಖವಾಗಿರಿ...ಅಂದ ಹಾಗೆ ಎಷ್ಟು ಮಳ ಬೇಕಪ್ಪ...?

ಅಜ್ಜಿ ಕುಕ್ಕೆಯಲ್ಲಿ ಎಷ್ಟಿದೆ...

ಒಂದೆರೆಡು ಮೂರು ಮಳ ಇದೆಯಪ್ಪ...ಏನು‌ ಮಾಡಲಿ ಇದನ್ನ ಮಾರಿ ಬಂದ ಹಣ ಕೊಟ್ಟರೆ ಮಾತ್ರ ಮನೆಯಲ್ಲಿ ಊಟ...ಇಲ್ಲದೇ ಇದ್ರೇ ಹೊಟ್ಟೆಗೆ ಲಾಟರಿ ಕಣಪ್ಪ..

ಕರುಳು ಚುರ್ ಅಂತು...ಅಜ್ಜಿಯ ಕಥೆಯನ್ನು ಕೇಳುವ ಆಸೆಯಿದ್ದರೂ‌ ಅದನ್ನು ಕೇಳಿ ಅಜ್ಜಿ ಮನಸ್ಸಿಗೆ ನೋವು ಕೊಡಬಾರದು...ಜೊತೆಯಲ್ಲಿ ಮಳೆಯ ಕಾರಣ ಅಜ್ಜಿ ನೊಂದು ಅತ್ತರೂ ಮಳೆ ಹನಿಗಳ‌ ಜೊತೆಯಲ್ಲಿ ಕಣ್ಣೀರು ಕರಗುತ್ತದೆ...ಬೇಡವೆಂದು...ಮನಸ್ಸಿಗೆ ಹೇಳಿಕೊಂಡು ಅಜ್ಜಿ ತಗೋ...ಎಂದು ಪರ್ಸನಲ್ಲಿ ಐದು ನೂರುಗಳ ಐದು ನೋಟು ಕೊಟ್ಟು.. ಜೊತೆಯಲ್ಲಿ ಮೂರು ಮಳದ ದುಡ್ಡು ಬೇರೆ ಕೊಟ್ಟಾಗ...ಬೇಡಪ್ಪ‌ ...ಇದಿಷ್ಟೇ ಹೂವಿನ‌ದ್ದು ಮಾತ್ರ ಸಾಕು...ಇದು ಬೇಡ ಅಂದಳು ಸ್ವಾಭಿಮಾನಿ ಅಜ್ಜಿ...

ಮರು ಮಾತಾಡದೆ..ದುಡ್ಡು ಪಡೆದು ಹೂವನ್ನು ಇಟ್ಟುಕೊಂಡು...ರಸ್ತೇ ಎಂದು ನೋಡದೇ ಅಜ್ಜಿಗೆ ನಮಸ್ಕರಿಸಿ ಹೊರಟೆ..

ಮನೆಗೆ ಬಂದು ಮಲ್ಲಿಗೆ ಹೂವು ಕೊಟ್ಟಾಗ ಅವಳ‌ ಮುಖ ಅರಳಿತ್ತು..ನನ್ನ ಹೃದಯ ಅಣ್ಣಾವ್ರ "ಹೃದಯದಲಿ ಇದೇನಿದು ನದಿಯೊಂದು ಓಡಿದೆ..." ಹಾಡು..

ಜೀವನ ಸುಂದರ ಅಂತ ಅನಿಸೋದು ಈ ರೀತಿಯ ಪುಟ್ಟ ಪುಟ್ಟ ಸಂತಸದ ಸಂಗತಿಗಳಿಂದ...

ಇಬ್ಬರಿಗೂ ಖುಷಿಯಾಯಿತು...ಆದರೆ ಬರುವಾಗ ಮಳೆಯ ಹನಿಗಳಲ್ಲಿ ಬೆರೆತ ಕಣ್ಣೀರಿನ ಪ್ರತಿ ಹನಿಗಳು ಅಜ್ಜಿಗೆ ಒಂದು ಕಲ್ಪವೃಕ್ಷದಂತಹ ಛಾಯೆ ನೀಡಬೇಕು‌‌ ಅನಿಸಿತು...

ಮಲ್ಲಿಗೆ ಹೂವನ್ನು ಕಂಡ ಮಡದಿ..

Thank you... Very nice..Thanks for loving me so much...Love you too... 

ಮಳೆ ನೀರಲ್ಲಿ ನೆಂದರೂ ಅದು  ಪ್ರೇಮದ ಅಲೆಯ ಮುಂದೆ ಏನು ಅನ್ನಿಸಲಿಲ್ಲ ಅಂತ ಹೇಳಿದ್ದು ತುಂಬು ಭಾವನೆಯಲ್ಲಿ ಬಂದ ಮಾತು..ನಿಮ್ಮ ಈ ಪ್ರೀತಿಯನ್ನು ಪಡೆಯುವುದು ತುಂಬಾ ಭಾಗ್ಯದ ಮಾತಾಗಿದೆ..

ನಿಜಕ್ಕೂ ನೀವು ತಂದು ಕೊಟ್ಟ ಮಲ್ಲಿಗೆ ಹೂವಲ್ಲಿ ಅಳೆಯಲು ಆಗದ ಪ್ರೀತಿ..ನಿಜಕ್ಕೂ  ಇಂಥಹ ಘಳಿಗೆಗಳು ತುಂಬಾ ಖುಷಿ ನೀಡುತ್ತವೆ..

ಭಗವಂತನ ಮನೆಯಲ್ಲಿ ನಿಮ್ಮ ನಿಸ್ವಾರ್ಥ ಸೇವೆ ನಿಜಕ್ಕೂ ಹೆಮ್ಮೆಯ  ಮಾತು..ಅದು ಅಷ್ಟು ಸರಳವಾಗಿ ಯಾರಿಗೂ ಮನದಲ್ಲಿ ಬರುವುದಿಲ್ಲ..

ಅದರ ಜೊತೆಗೆ ನನಗೆ ಇನ್ನೊಂದು ಖುಷಿ ಕೊಡುವ ಮಾತೆಂದರೆ ನಾನು ಮೆಚ್ಚಿದ  ಪ್ರೀತಿಗೆ ಸ್ವಯಂ ಪರಮಾತ್ಮನು ಮೆಚ್ಚಿಕೊಂಡು ಆರಿಸಿದನಲ್ಲಾ ಅಂತ ತುಂಬಾ ಹೆಮ್ಮೆ ಆಗುತ್ತದೆ. ಇದೊಂದು  ಚಮತ್ಕಾರದ ಮಾತು.ಜೊತೆಗೆ  ಇಡೀ ವಸುದೈವ ಕುಟುಂಬ ನಿಮ್ಮನ್ನು ಇಷ್ಟ ಪಡುತ್ತದೆ  ಅದೂ ಕೂಡಾ ತುಂಬಾ ಹೆಮ್ಮೆಯ ಮಾತು..

Love you a lot .It's really god made pair..🥰

ಅಜ್ಹಿಯ ಬದುಕಿನ ಕತೆ ಕಣ್ಣೀರು ತರಿಸಿದರೆ ಮಡದಿಯ ಪ್ರೀತಿಯ ಮಾತುಗಳು ಪನ್ನೀರು ತರಿಸಿತು...

ಕಣ್ಣೀರು.ಪನ್ನೀರಿನ ಉಗಮ ಸ್ಥಾನ ಕಣ್ಣುಗಳೇ ಆದರೂ ಅದಕ್ಕೆ ಸಿಗುವ ಸನ್ನೆಗಳು ಹೃದಯದಿಂದ...ಎರಡರ ರುಚಿಯೂ ಉಪ್ಪೇ ಆದರೂ‌ ಅದು‌ ಕೊಡುವ ಅನುಭವ ಭಿನ್ನ...

ಅಜ್ಜಿಯ ಕಥೆ ಸಂಕ್ಷಿಪ್ತವಾಗಿ ಹೇಳಿದೆ ಕೊಂಚ ಹಣ ಸಹಾಯವನ್ನೂ ಕೂಡ ನಯವಾಗಿ ಬೇಡ ಎಂದಿದ್ದರ ಬಗ್ಗೆಯೂ ಹೇಳಿದೆ..

ಯಾವಾಗಲೂ‌ ಮಿಂಚಿನಂತೆ ಯೋಚಿಸುವ...ಲಕ್ಷ್ಮಣ ರೇಖೆ..ಆ ರೇಖೆ..ಈ‌ ರೇಖೆ ಎಂಬ ನಿಯಮಗಳ ಬಗ್ಗೆ ತಲೆ ಕೆಡಿಸಿಕೊಳ್ಳದ ನನ್ನ ಹುಡುಗಿ...ಮೂರು ದಿನದಲ್ಲಿ‌ ಆ ಅಜ್ಜಿಗೆ ಒಂದು ಭಧ್ರತೆ ನೀಡಿದಳು...

ಅಜ್ಜಿ ಈಗ ನೆಮ್ಮದಿ ಕೇಂದ್ರದಲ್ಲಿ ಭಗವಂತನ ಜ್ಞಾನದ ಹಾದಿಯಲ್ಲಿ ಸಂತೃಪ್ತ ಜೀವನ ನೆಡೆಸುತ್ತಿದ್ದಾಳೆ..

ನಾವು ನೋಡಲು ಹೋದಾಗಲೆಲ್ಲಾ..ಮಲ್ಲಿಗೆ ಮಾಲಿ ನನ್ನಾಕೆಗೆ...ಆ ಪರಿಮಳ ನನ್ನ ಹೃದಯಕ್ಕೆ...!

Tuesday, July 26, 2022

ಒಂದು ಅನುಭವ....ಪದಗಳಲ್ಲಿ‌ ಮೂಡಿಸುವ ಪ್ರಯತ್ನ...!!!

"ಅಣ್ಣಾ ಈಗ ಸಮಯ ಎಷ್ಟು?"

"ಅಕ್ಕ ವಾಚ್ ನಿಂತು ಹೋಗಿದೆ!!!"

ಒಂದು ಮುಗುಳುನಗೆಯ ದೋಣಿ ಎರಡೂ ಕಡೆ ಹಾಯ್ದು ಹೋಯ್ತು.. 

"ಅಣ್ಣಾ ನಿಮಗೆ ಹೇಗೆ ಅನ್ನಿಸುತ್ತೋ ಹಾಗೆ ಅಲಂಕಾರ ಮಾಡಿ.. ನೋಡಿ ಅಲ್ಲಿ ಇದೆ.. ಇಲ್ಲಿ ಇದೆ" 

ಅಷ್ಟೇ ಹೇಳಿದ್ದು.. 

ಆನಂದ್ ಭಾಯ್ ಜೊತೆ ಇದ್ದರು.. ಅವರ ಕೈಗೆ ನನ್ನ ಕೈ ಜೋಡಿಸಿದೆ.. 

ಆನಂದ್ ಭಾಯ್  ಅಲ್ಲಿದ್ದ ಪರಿಕರಗಳನ್ನು ಒಂದೊಂದಾಗಿ ತೆಗೆದು ಕೊಡುತ್ತಿದ್ದರು.. ನನಗೆ ಅನಿಸಿದಂತೆ, ಅಲ್ಲಿದ್ದ ಉಳಿದ ಅಕ್ಕಂದಿರು ಹೇಳಿದಂತೆ ಒಂದೊಂದೇ ಜೊತೆಯಾಗಿ.. ಸುಂದರವಾದ ಅಂಗಣ ಇನ್ನಷ್ಟು ಸುಂದರವಾಗಿ ಸಜ್ಜಾಗುತಿತ್ತು.. ಶೋ ಕೇಸ್ ನೋಡಿದಾಗ ಏನೋ ಖಾಲಿ ಖಾಲಿ ಅನ್ನಿಸುತ್ತಿತ್ತು.. ಸರಿ ಇದಕ್ಕೆ ಒಂದು ರೂಪು ಕೊಡೋಣ ಅಂತ.. ನನ್ನ ಸ್ವಲ್ಪ ತರಲೆ ತಲೆಗೆ ಕೆಲಸ ಕೊಟ್ಟೆ..

ಅಣ್ಣಾ ಸ್ವರ್ಗ ಸ್ವರ್ಗ ಸುಂದರವಾಗಿದೆ ಅಂತ ಅಕ್ಕಾ ಹೇಳಿದಾಗ ಮನಸ್ಸು ನಿರಾಳ.. 

ಬೆಳಿಗ್ಗೆ ಬೇಗ ಬನ್ನಿ ಅಣ್ಣ ಅನ್ನುವ ಮಾತಿನೊಂದಿಗೆ ದಿನ ಮುಗಿದಿತ್ತು.. 

ಬೆಳಿಗ್ಗೆ ಹೋದಾಗ.. ಅಣ್ಣಾ ಶಿವಲಿಂಗಕ್ಕೆ ನಿಮಗೆ ಬೇಕು ಅನಿಸಿದ ಹಾಗೆ ಅಲಂಕಾರ ಮಾಡಿ.. ನೋಡಿ ಹೂ ಎಲ್ಲಾ ಇದೆ.. 

ಶಿವನಿಗೆ ಕೈ ಮುಗಿದೆ.. ಕಮಾನ್ ಶ್ರೀ ಅಂದ ಹಾಗೆ ಭಾಸವಾಯಿತು.. 


ಅಲ್ಲಿಂದ ಶುರುವಾಯ್ತು.. ಅಲ್ಲಿದ್ದ ಹೂವುಗಳನ್ನು ಬಿಡಿಸಿ.. ಒಂದೊಂದೇ ಜೋಡಿಸುತ್ತಾ ಹೋದೆ..  ನಮ್ಮ ಬದುಕನ್ನು ರೂಪಿಸುವ ದೇವರಿಗೆ ಒಂದು ಪುಟ್ಟ ಅಲಂಕಾರ.. ಮನಸ್ಸು ನಿರಾಳ.. 

"ಅಣ್ಣ ಬೇಗ ಬನ್ನಿ" ಮತ್ತೊಮ್ಮೆ ಹೆಡ್ ಮೇಡಂ ಉವಾಚ.. 

ಸರಿ ಬೇಗ ಬೇಗ ತಿಂಡಿ ಎಲ್ಲಾ ಸಿದ್ಧ ಮಾಡಿ ಮಗಳ ಜೊತೆ ಹೋದೆ.. ಕ್ಯಾಮೆರಾ ಕಣ್ಣಿಗೆ ಒಂದಷ್ಟು ದೃಶ್ಯಗಳನ್ನು ಸೆರೆ ಹಿಡಿವ ತವಕ.. ಶುರು ಮಾಡಿದೆ.. ಕೆಲವು ಅದ್ಭುತ ಅನಿಸುವ ಫ್ರೇಮುಗಳು ಕ್ಯಾಮೆರಾದೊಳಗೆ ನುಗ್ಗಿತು.. 








ಅಣ್ಣಾ ನೀವು ಹೋಗಿ ರಾಖಿ ಕಟ್ಟಿಸಿಕೊಳ್ಳಿ ಅಂತ ಬಂದ ದನಿಗೆ ತಿರುಗಿ... ಅಲ್ಲಿ ಸದ್ದಿಲ್ಲದೇ, ಕಣ್ಣಿನಲ್ಲಿಯೇ ತಮ್ಮ ಶಕ್ತಿ ಧಾರೆಯೆರೆಯುತ್ತಿರುವ ಮಾತೆಯನ್ನು ಕಂಡಾಗ ಮಾತೆ ಹೊರಬರುತ್ತಿರಲಿಲ್ಲ.. ಮೈಯಲ್ಲಿ ಸಣ್ಣಗೆ ಕಂಪನ.. ಈ ರೀತಿಯ ಅನುಭವ ಹಲವಾರು ಬಾರಿ ಆಗಿದ್ದರೂ, ಪ್ರತಿ ಅನುಭವ ಒಂದು ವಿಭಿನ್ನ ರೂಪ ನೀಡುವುದು ಸಹಜ.. ಸುಮ್ಮನೆ ಅವರನ್ನೇ ನೋಡುತ್ತಾ ಕೂತಿದ್ದೆ.. ಪಕ್ಕದಲ್ಲಿ ಕೂತಿದ್ದವರಿಗೆ ದೃಷ್ಟಿಸಿ.. ತಮ್ಮ ಅನುಭವ ಶಕ್ತಿಯನ್ನು ನೀಡುತ್ತಿದ್ದ ಪ್ರಸಂಗ.. ನಾ ಸುಮ್ಮನೆ ಕಣ್ಣು ಮುಚ್ಚಿ ಆ ದಿವ್ಯ ಅನುಭವದ ತರಂಗಗಳನ್ನು ಆಸ್ವಾದಿಸುತಿದ್ದೆ.. 

ನನ್ನ ಸರದಿ ಬಂತು.. ಕಣ್ಣಿನಲ್ಲಿ ಮಾತೆಯ ಮಮತೆ.. ಕಣ್ಣಿನಲ್ಲಿ ಸಾಂತ್ವನ ನೀಡುತ್ತಿರುವ ಭಾವ.. ಕಣ್ಣಿನಲ್ಲಿ ಶ್ರೀ ಬದುಕು ಸುಂದರವಾಗಿದೆ.. ಜೀವನವೂ ಸುಂದರವಾಗುತ್ತದೆ ಎನ್ನುವ ಆತ್ಮ ವಿಶ್ವಾಸ ಕೊಡುವ ನೋಟ.. ಕಣ್ಣಿನಲ್ಲಿ ಯಾವುದಕ್ಕೂ ಹೆದರಬೇಡ.. ದೇವರಿದ್ದಾನೆ.. ನಿನ್ನ ಜೊತೆ ಎನ್ನುವ ಧೈರ್ಯದ ಮೂಕ ಅಭಿನಯ.. 

ಒಂದು ರೀತಿಯಲ್ಲಿ ಸ್ಕ್ಯಾನ್ ಮಷೀನ್ ನಮ್ಮೊಳಗೇ ಹೋಗಿ.. ಎಲ್ಲಾ ಒಳ್ಳೆಯ ಯೋಚನೆಗೆಗಳನ್ನು ತೊಳೆದು, ಒಗೆದು, ಒಣಗಿಸಿ ಮತ್ತೆ ನಮ್ಮೊಳಗೇ ತುಂಬಿ ಕಳಿಸುವಂತಹ ದೃಶ್ಯವದು.. ಅಬ್ಬಬ್ಬಾ ಎಂದರೆ ನೂರಾ ಇಪ್ಪತ್ತು ಸೆಕೆಂಡುಗಳು ಅಷ್ಟೇ.. ಮನಸ್ಸು ಹಕ್ಕಿಯಾಗಿತ್ತು.. ಎಪ್ಪತೈದು ಕೆಜಿ ತೂಗುವ ದೇಹ.. ಏಳೂವರೆ ಗ್ರಾಂ ಆಗಿದೆ ಅನ್ನುವ ಸುಂದರ ಅನುಭವ.. 

ದೇವರ ಜೊತೆಗಿನ ಭೇಟಿ ಹಾಗೆ ಅಲ್ಲವೇ.. ಏನೂ ಕೇಳದೆ ಎಲ್ಲವನ್ನೂ ಕೊಡುವ ದೈತ್ಯ ಶಕ್ತಿಗೆ ಇನ್ನೊಂದು ಹೆಸರು "ದೇವರು" ಅದನ್ನು ದೇವರು ಅನ್ನುತ್ತೇವೆ, ಬಾಬಾ ಎನ್ನುತ್ತೇವೆ, ಮಹಾಮಹಿಮ ಎನ್ನುತ್ತೇವೆ.. ಆದರೆ ಕಡೆಗೆ ನಿಲ್ಲುವ ಹೆಸರು "ಪರಮಾತ್ಮ"

ಅಂತಹ ದಿವ್ಯ ಅನುಭವವನ್ನು ಮೂಡಿಸಿದ ರಾಜರಾಜೇಶ್ವರಿ ನಗರದ ರಾಜಯೋಗ ಕೇಂದ್ರ್ರ ಅಕ್ಕ ಪ್ರಮೀಳಾ ಅಕ್ಕ ಅವರಿಗೆ ಅನಂತಾನಂತ ಧನ್ಯವಾದಗಳು.. !!! 

Saturday, July 23, 2022

ನಾವಿರುವ ಕ್ಷಣವೇ ......ಒಲಿದ ಜೀವ!

ಹನ್ನಾ ಹಾಡುಗಳ‌ ಬಗ್ಗೆ ಒಂದಷ್ಟು ಮಾತು ಹೇಳಿ!

"ಮಾತುಗಳು, ಹಾಡುಗಳು ಹೃದಯದಾಳದಿಂದ ಬರಬೇಕು...ಆಗ ಅದರ ಮಹತ್ವ ಮತ್ತು ಕಾಲಾವಧಿ ಅಧಿಕ"

"ಹೌದು ಹನ್ನಾ ಇವತ್ತು ವಿಶೇಷ ದಿನ...ಮಾಮೂಲಿಗಿಂತ ಏನಾದರೂ ಬೇರೆ ಬರೆಯಿರಿ...!"

"ಹಾ ಕಣೋ...ಬೆಂಕಿಯ ಬಲೆ ಚಿತ್ರದ " ಒಲಿದ ಜೀವ ಜೊತೆಯಲಿರಲು ಬಾಳು ಸುಂದರ " ಇದರಲ್ಲಿ ಎಸ್ಪಿಬಿ "ಒಲಿದ" ಪದದ ಉಚ್ಚಾರಣೆ ಕೇಳು.."



ಬೆಸುಗೆ ಚಿತ್ರದ "ಬೆಸುಗೆ ಬೆಸುಗೆ ಹಾಡಿನ ಅಂತ್ಯದಲ್ಲಿ " ಜನಮು ಜನಮುಕೂ "ಆತ್ಮದ" ಬೆಸುಗೆ..."ಆತ್ಮ" ಪದವನ್ನ ಉಚ್ಚರಿಸುವ ರೀತಿ ಗಮನವಿಟ್ಟು ಕೇಳು"


ಐತ್_ಬಾರ್ ಚಿತ್ರದ "ಕಿಸಿ ನಝರ್ ಕೋ‌ ತೇರಾ" ಹಾಡಿನಲ್ಲಿ ಇತ್ತಿಚೀಗಷ್ಟೇ ನಮ್ಮನಗಲಿದ ಗಾಯಕ ಭೂಪಿಂದರ್ ಸಿಂಗ್ "ಏಹಸಾಅಅಆಆಆಆಆಆಆಸ್" ಎಷ್ಟು ಅರ್ಥಗರ್ಭಿತವಾಗಿ ಹಾಡಿದ್ದಾರೆ...

"ಲಾವಾರಿಸ್ ಚಿತ್ರದಲ್ಲಿ ಬಿಗ್ ಬಿ "ಕಬ್ ಕೆ ಬಿಚಡೇ" ಹಾಡಿನಲ್ಲಿ ನಾಯಕಿಯನ್ನ ನೋಡುವ ಶೈಲಿ‌ ನಿನಗೆ ಬಲು ಇಷ್ಟ...ಈ ಹಾಡು ನಮ್ಮ ಜೀವನ ಗೀತೆಯೂ ಆಗಿದೆ...ಅಲ್ವೇ""

"ಚಂದನದ ಗೊಂಬೆಯ "ಮನೆಯನು ಬೆಳಗಿದೆ ಇಂದು" ಈ ಹಾಡು ನಿನಗೆ ಅರ್ಪಿತ...."

ಥ್ಯಾಂಕ್ ಯೂ ಹನ್ನಾ...ಈ ಹಾಡುಗಳನ್ನು ಕೇಳಿದಾಗೆಲ್ಲ ಮೈ ಜುಮ್ ಎನಿಸತ್ತದೆ...ಎಷ್ಟು ಸೊಗಸಾದ ಹಾಡುಗಳು, ಸಾಹಿತ್ಯ...!ಇನ್ನೂ ಒಂದು ಹಾಡಿದೆ...ನನ್ನಷ್ಟವಾದದ್ದು...ಅದು ಹಾಕಿಲ್ಲ ಇಲ್ಲಿ...?"

"ಸಿಂಗಾರ ಸೀಲಾಅಆಆಆಆಆಆಅಆ' ಅದ್ನ ಮರೆಯೋದು ಸಾಧ್ಯವೇ....ಅದು ಸದಾ ಇರೋ ಕೇಳೋ ಹಾಡದು....!


"ಹ ಹ ಹ ಹ ಹ'

ಬದುಕು ವಿಶೇಷ ಅನಿಸೋದು ನಾವು ಮಾಡುವ ಯೋಜನೆಗಳಲ್ಲಿ‌‌ ಧುಮುಕೋದು‌..ಬದುಕಿನ ಪ್ರತಿ ಕ್ಷಣಗಳನ್ನು ನಗು ನಗುತ್ತಾ ಕಳೆವಾಗ...ಅನುದಿನವೂ...ಅನು ಕಣವೂ..ಆನಂದವೇ!"

ವಿಶೇಷ ದಿನಕ್ಕೆ ಸಮಯಕ್ಕೆ ಶುಭಾಶಯಗಳು ಸೀಮು!" 

Monday, February 7, 2022

ಸೀಮಾ +ಸವಿತಾ = ಸೀಮಿತ

ಮೆಟ್ಟಿಲು ಇಳಿಯುತ್ತಿರುವ ಸದ್ದು .. 

ಸೀಮಾ ತನ್ನ ಕ್ಲಿನಿಕ್ಕಿಗೆ ಬಂದ ಅನಾರೋಗ್ಯದ ತಪಾಸಣೆಗೆ ಬಂದಿದ್ದವರ ಹತ್ತಿರ ಮಾತನಾಡುತ್ತಿದ್ದಳು.. ಕರ್ಟನ್ ಹಾಕಿದ್ದರಿಂದ ಹೊರಗೆ ಬಂದವರ ಮುಖ ದರ್ಶನವಾಗಿರಲಿಲ್ಲ.. 

ಬಂದಿದ್ದವರ ಆರೋಗ್ಯದ ತಪಾಸಣೆ ಮಾಡಿ.. ನಿಯಮಿತವಾದ ಆಹಾರ, ಪಥ್ಯ, ಮಾತ್ರೆಗಳು, ಬೆಳಗಿನ ಹೊತ್ತಿನ ವಾಯು ವಿಹಾರ.. ಅದು ಇದು ಅಂತ ಹೇಳಿ.. ಅವರನ್ನು ಬೀಳ್ಕೊಟ್ಟಳು.. 

ಹಿಂದೆ ಉಪಚರಿಸಿದ್ದವರ ಕರೆ ಬಂತು.. ಹಾಗಾಗಿ ಫೋನಿನಲ್ಲಿ ಮಾತಾಡುತಿದ್ದಳು.. ಸುಮಾರು ಹೊತ್ತು ಆದ ಮೇಲೆ.. ಆ ಕರೆಯಲ್ಲಿದ್ದವರು ಸಮಾಧಾನವಾದಂತೆ ಕಂಡಿತು ಅನ್ನಿಸುತ್ತೆ.. ಫೋನ್ ಕೆಳಗಿಟ್ಟು.. ಬಾಯಾರಿಕೆಯಾಗಿದ್ದರಿಂದ ನೀರು ಕುಡಿಯಲು ಹೋದಳು.. 

ಅಲ್ಲಿ ಒಬ್ಬರು ಕುಳಿತಿದ್ದರು.. ಕೋಲು ಮುಖ.. ಲಕ್ಷಣವಾಗಿ ಬಾಚಿದ್ದ ತಲೆಗೂದಲು.. ಜಡೆ ಇತ್ತು.. ಪಂಜಾಬಿ ಶೈಲಿಯ ಚೂಡಿದಾರ.. ಅದರ ಮೇಲೆ ಒಂದು ದುಪ್ಪಟ್ಟ.. ಕೊಂಚ ಅಗಲವಾದ ಹಣೆ.. ಎರಡು ಹುಬ್ಬಿನ ನಡುವೆ ಇಟ್ಟಿದ್ದ ಕೆಂಪನೆ ಬಿಂದಿ.. 

ಸೀಮಾ ಒಂದು ಕ್ಷಣ ಅವಕ್ಕಾದಳು.. 

"ಅರೆ ಸವಿತಕ್ಕ.. ಬಹಳ ಖುಷಿಯಾಯಿತು.. ನಿಮ್ಮನ್ನು ನೋಡಿ.. ವರ್ಷಕ್ಕೆರಡು ಬಾರಿ ನಿಮ್ಮ ದರ್ಶನವಾಗುತ್ತೆ.. ಆದರೆ ನಿಮ್ಮ ನೆನಪು ಸದಾ ಇರುತ್ತೆ.. ಶ್ರೀ ನಿಮ್ಮ ಫೋಟೋ ನೋಡದೆ ಯಾವುದೇ ಕೆಲಸ ಮಾಡೋಲ್ಲ.. ನೀವು ನಿಮ್ಮ ಮನೆಗೆ ಶಕ್ತಿ.. ಆ ಶಕ್ತಿಯೇ ನನಗೆ ಶ್ರೀ ರಕ್ಷೆ.. "

"ಸೀಮಾ ನೀವು ಎಷ್ಟು ಚಂದ ಕಾಣಲಿಕ್ಕೆ ಹತ್ತೀರಿ.. ಗುಂಡು ಗುಂಡು ಮುಖ.. ಪುಟ್ಟ ಪುಟ್ಟ ಕಣ್ಣುಗಳು.. ಪುಟ್ಟ ಬಾಯಿ... ಕಂದು ಬಣ್ಣದ ಕಣ್ಣುಗಳು.. ಸುಂದರಿ ನೀವು.. "

"ಸವಿತಕ್ಕ ಇದೇನು ನೀವು ತಾವು ಅಂತ ಕರೀತಾ ಇದ್ದೀರಾ.. "

"ಸೀಮಾ ಸುಮ್ಮನೆ ಹಾಗೆ ಕರೆದೆ.... ಹೇಗಿದ್ದೀಯಾ.. ಹೇಗೆ ನೆಡೀತ ಇದೆ ಕ್ಲಿನಿಕ್.. ನಿನ್ನ ನಗು ಮೊಗ ನೋಡಿದರೆ ಸಾಕು ಬಂದವರ ಆರೋಗ್ಯ ೭೦% ಸುಧಾರಿಸುತ್ತದೆ.. ಇನ್ನೂ ನೀ ಕೊಡುವ ಔಷಧಿ.. ಬೇಗ ಗುಣವಾಗ್ತಾರೆ.. ನಿನ್ನ ಧೈರ್ಯ ನಮ್ಮ ಶ್ರೀಗೆ ಬಲ ಕಣೆ.. ನೀ ಧೈರ್ಯವಾಗಿದ್ದರೆ ನಮ್ಮ ಶ್ರೀ ಧೈರ್ಯವಾಗಿರುತ್ತಾರೆ.. "

"ಹೌದು ಸವಿತಕ್ಕ.. ನಿಮ್ಮ ಮಾತು ನಿಜ ಶ್ರೀಗೆ ಧೈರ್ಯ ಕೊಡ್ತಾನೆ ಇರ್ತೀನಿ.. ಸ್ಪೂರ್ತಿಯಾಗಿ ನೀವಿದ್ದೀರಾ.. ಇನ್ನೇನು ಬೇಕು.. ಸಂಕಷ್ಟಗಳು ಸೂರ್ಯನ ಮುಂದೆ ಮಂಜಿನ ಹನಿಯಾಗುತ್ತದೆ"

"ಎಷ್ಟು ಚೆನ್ನಾಗಿ ಮಾತಾಡ್ಲಿಕೆ ಹತ್ತಿ.. ಸೂಪರ್ ಸೀಮಾ.. ನಿನ್ನ ಮಾತುಗಳು ಕೇಳೋಕೆ ಬಾಳ ಚಂದ"

"ಸವಿತಕ್ಕ ಸಕತ್.. ನಮ್ಮ ಭಾಷೆ ಎಷ್ಟು ಚೆನ್ನಾಗಿ ಮಾತಾಡ್ತೀರಾ.. ಸೂಪರ್"

"ಬೆಳಗಾವಿಯಾದರೇನು ಬೆಂಗಳೂರು ಆದರೇನು ಕಲೀಬೇಕು ಮೊದಲು ಮಾತಾಡಲು.. ಅಂತ ಶ್ರೀ ಯಾವಾಗಲೂ ವಿಷುವರ್ಧನ್ ಚಿತ್ರದ ಹಾಡು ಹೇಳ್ತಾ ಇರ್ತಾರೆ ಅಲ್ಲವೇ.. "

"ಅಯ್ಯೋ ಸವಿತಕ್ಕ ಶ್ರೀ ಬಗ್ಗೆ ಮತ್ತು ಸಿನಿಮಾ ಹಾಡಿನ ಬಗ್ಗೆ ಹೇಳಬೇಡಿ.. ಯಾವ ಹಾಡು ಆದರೂ ಸರಿ ಅದಕ್ಕೆ ತಮ್ಮ ಪದಗಳನ್ನು ಹಾಕಿ ನಗಿಸ್ತಾರೆ.. "

"ನೀನೇನು ಕಮ್ಮಿ ಸೀಮಾ.. ಶ್ರೀ ಗುಡಿ ಕಟ್ಟಿದರೆ ನೀ ಕಳಸ ಇಡ್ತೀಯಾ.. ನಿಮ್ಮಿಬ್ಬರ ಜುಗಲ್ ಬಂದಿ ಬಾಳಾ ಚಲೋ ಇರ್ತಾವೆ.... "

ಇಬ್ಬರೂ ಜೋರಾಗಿ ನಕ್ಕರು.. ಪಾನಿ ಪುರಿ ಗಾಡಿಯ ಸದ್ದಿಗೆ ಇಬ್ಬರೂ ಮುಸಿ ಮುಸಿ ನಕ್ಕು.. ಪಾನಿ ಪುರಿ ಸವಿಯಲು ಇಬ್ಬರೂ ಒಮ್ಮೆ ಆಲಂಗಿಸಿಕೊಂಡು ಹೆಗಲ ಮೇಲೆ ಕೈ ಇಟ್ಟು ಮೆಟ್ಟಿಲು ಹತ್ತಿ ಹೊರಟರು.. !

ಸೀಮಾ +ಸವಿತಾ =  ಸೀಮಿತ  

                                                                          ****

ಜೀವನ ಕಾಲ್ಪನಿಕ ಕಥಾವಸ್ತುವಲ್ಲ ಅಂತಾರೆ.. ಜೀವನ ನಿಜ ಅಂತಾರೆ.. ಆದರೆ ಕಾಲ ತಂದು ಒಡ್ಡಿದ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಸಾಕ್ಷತ್ಕಾರ ಅಂತ ಅಣ್ಣಾವ್ರು ಸಾಕ್ಷತ್ಕಾರ ಚಿತ್ರದಲ್ಲಿ ಹೇಳಿದಂತೆ.. ಬದುಕು ಕೊಟ್ಟ ಪರೀಕ್ಷೆಯಲ್ಲಿ ಗೆದ್ದವರು ಯಾರೋ.. ಸೋತವರು ಯಾರೋ ಎಂದು ಯೋಚಿಸದೆ... ಬಂದ ಬದುಕನ್ನು ಕಟ್ಟಿ ನೆಡೆವ ಧೈರ್ಯ ಸಿಗುವುದು ಯಾವಾಗ.. ಮನವನ್ನು ಅರಿತ ಸಂಗಾತಿ ಜೊತೆಯಾದಾಗ.. 

ಸವಿತಾ ಸೀಮಾ ಮುಖಾ ಮುಖಿ ಭೇಟಿಯಾಗಲಿಲ್ಲ.. ಆಗಿದ್ದರೆ ಈ ಲೇಖನ ಬರುತ್ತಿರಲಿಲ್ಲ.. ಹ ಹ ಹ.. 

ಪ್ರಶ್ನೆ ಅದಲ್ಲ.. ಕೋ ಕೋ ಆಟದಲ್ಲಿ ಒಬ್ಬರು ಓಡಿ ಓಡಿ ಸುಸ್ತಾಗಿ ಇನ್ನೊಬ್ಬರಿಗೆ ಕೊಕ್ ಕೊಟ್ಟು ಪಂದ್ಯ ಮುಂದುವರೆಸುವಂತೆ.. ನನ್ನ ಬದುಕಲ್ಲಿ ಇರುವ ಇವರಿಬ್ಬರು ನನ್ನ ಬದುಕಿನ ಪಂದ್ಯವನ್ನು ಬೀಳದಂತೆ ಎತ್ತಿ ನಿಲ್ಲಿಸುತ್ತಿದ್ದಾರೆ.. ಇವರ ಜೊತೆಯಲ್ಲಿ ಒಂದು ಕಡೆ ಶೀತಲ್ ಅಪ್ಪ ನಾನಿದ್ದೇನೆ ಜೊತೆಯಲ್ಲಿ ಅಂದರೆ.. ಅತ್ತ ಕಡೆಯಿಂದ ಹಾಯ್ ಅಮ್ಮ ನಾ ನಿನ್ನ ಜೊತೆ ಎಂದು ಐಶ್ವರ್ಯ ಕಿರು ನಗೆ ಬೀರುತ್ತಾಳೆ.. 

ಬದುಕು ಒಂದು ರೈಲು ಬಂಡಿ.. ಇಂಧನ ಹಾಕುತ್ತಲೇ ಇರಬೇಕು.. ಮುಂದೆ ಸಾಗುತ್ತಲೇ ಇರಬೇಕು.. !!

ಇಂದು ಸವಿತಾಳ ಜನುಮದಿನ... ಒಂದು ಸಾರ್ಥಕ ಬದುಕನ್ನು ಕಂಡ ಆ ಮಹಾನ್ ಶಕ್ತಿಗೆ ಒಂದು ಅಭಿನಂದನೆಗಳು.. ಮತ್ತೆ ಸದಾ ನೆನಪಲ್ಲಿ ಇರುವ ಸಾರ್ಥಕತೆ ಅದೇ ಸವಿತಾರ್ಥಕತೆ.. !