Friday, March 6, 2026

ಅಪರಿಮಿತವಾದ ಮಂದ"ಸ್ಮಿತ"ದ ಉತ್ಸಾಹದ ಹತ್ತನೇ ದಿನದ ಪಯಣ

ಬಾನಿನಲ್ಲಿ ಚಂದಿರ ನಗುತ್ತಿದ್ದ.. ಸಂಕಷ್ಟ ಚೌತಿಯ ದಿನ ತನ್ನ ಸಹೋದರಿಯರು ಕಟ್ಟುಪವಾಸ ಮಾಡಿದರೂ ಸಹೋದರಿಯ ನೆನಪಲ್ಲಿ ಮಾತು ಸಾಗಿತ್ತು.. ಕುಮುದ ಹಾಗೆ ಮಾತಾಡುತ್ತಿದ್ದಳು, ಹೀಗೆ ಅನ್ನುತ್ತಿದ್ದಳು... ಆಯೀಗೆ ಹೀಗೆ ರೇಗಿಸುತ್ತಿದ್ದೆ ಅಂತ ಸೀಮಾ.. ಆಯೀ ಹೀಗೆ ಹೇಳುತ್ತಿದ್ದಳು ಅಂತ ಅಜಿತ.. 

ಹೀಗೆ ನಮ್ಮ ನಮ್ಮ ನೆನಪುಗಳ ಮೆರೆವಣಿಗೆಯಲ್ಲಿ ಸಾಗುತ್ತಿದ್ದೆವು..  ಬೆಳಗಿನ ಕಾರ್ಯದ ನೆನಪಾಯಿತು!

ಹತ್ತನೇ ದಿನದ ಪುಣ್ಯ ಕಾರ್ಯ ಸಾಗಿತ್ತು.. ಸಾಮಾನ್ಯ ಹತ್ತು ಹನ್ನೊಂದು ಒಂದು ಮುಖ್ಯವಾದ ಹಂತ.. ಸಂಖ್ಯೆ ಹತ್ತಕ್ಕೆ ಮುಟ್ಟಿದೆ ಎಂದರೆ ಒಂದಂಕಿ ದಾಟಿದೆ ಅಂತ.. ಹಾಗೆ ಮನುಷ್ಯನ ಬದುಕಿನಲ್ಲಿ ಮುಖ್ಯ ಘಟ್ಟವೂ ಹೌದು..

ಇಂತಹ ಹತ್ತು.. ಇನ್ನೊಂದು ಮುಖ್ಯ ಘಟ್ಟವನ್ನು ಹೊತ್ತು ಬಂದಿತ್ತು.. 

ಶ್ರೀ ದತ್ತಾತ್ರೇಯನ ಆವಾಸ ಸ್ಥಾನದ ಕ್ಷೇತ್ರದಲ್ಲಿ ವೇದ ಪಠಣ ಕಾರ್ಯ ನೆಡೆದಿತ್ತು.. ಬಂದಿದ್ದವರು ತಮ್ಮ ತಮ್ಮ ನಮನಗಳನ್ನು ಸಲ್ಲಿಸಿದ್ದರು.. 

 ಹತ್ತನೇ ದಿನ ಬಂದಿದ್ದವರು ತಮ್ಮ ತಮ್ಮ ಪುಣ್ಯವನ್ನು ಧಾರೆಯೆರೆದು ಆ ದೇಹವನ್ನು ತೊರೆದ ಆತ್ಮಕ್ಕೆ ವಿದಾಯ ಹೇಳುವ ಸಮಯ.. ಆ ಆತ್ಮಕ್ಕೆ ಮೊದಲೇ ಸಿದ್ಧವಾಗಿರಬಹುದಾದ ದೇಹವನ್ನು ಸೇರಲು ಈ ಹತ್ತನೇ ದಿನದ ಕಾರ್ಯ ಒಂದು ರೀತಿಯ ರಾಕೆಟ್ ಲಾಂಚ್ ಮಾಡಿ.. ಉಪಗ್ರಹ ಕಡೆಯ ಭಾಗ ಗಗನ ಪಥಕ್ಕೆ ಸೇರುವಾಗ ತನ್ನುಳಿದ ಭಾಗವನ್ನು ಬಿಟ್ಟು ಮುಂದಿನ ಪಯಣಕ್ಕೆ ನಭೋಮಂಡಲಕ್ಕೆ ಹಾರುವ ಕ್ಷಣವದು.. 

ಈ ಹತ್ತನೇ ದಿನವೂ ಕೊಂಚ ಹಾಗೆ.. ಬಂದಿದ್ದವರ ಪುಣ್ಯದ ರಾಕೆಟ್ ಆ  ಆತ್ಮವನ್ನು ಮುಂದಿನ ಪಯಣಕ್ಕೆ ಸಿದ್ಧಗೊಳಿಸಿ ಕಳಿಸುವ ಸಮಯವದು.. 

ಕಾರ್ಯ ಮುಗಿದು.. ಆ ಆತ್ಮಕ್ಕೆ ಊಟವನ್ನು ಇಟ್ಟಾಗ.. ಅಲ್ಲಿದ್ದ ಪುರೋಹಿತರು ಎಲ್ಲರೂ ನಿಮ್ಮ ನಿಮ್ಮ ಪ್ರಾರ್ಥನೆ ಸಲ್ಲಿಸಿ... ಆ ಆತ್ಮ ಶ್ರೀ ಶನೀಶ್ವರನ ವಾಹನವಾಗಿ ಬಂದು ಸ್ವೀಕರಿಸುತ್ತದೆ.. ಎಂದು ಹೇಳಿದರು.. 

ಎಲ್ಲರೂ ಪ್ರಾರ್ಥನೆ ಸಲ್ಲಿಸಿದರು.. 

ಮರು ಪ್ರಾರ್ಥನೆ ಸಲ್ಲಿಸಿದರು.. 

ಮತ್ತೊಮ್ಮೆ ಪ್ರಾರ್ಥನೆ ಸಲ್ಲಿಸಿದರು.. 

ಸುಮಾರು ಹೊತ್ತು ಕಳೆಯಿತು.. 

ಪುರ್ ಅಂತ ಹಾರಿ ಬಂದು.. ಆಹಾರವನ್ನು ಸ್ವೀಕರಿಸಿದ ಕ್ಷಣ ಎಲ್ಲರ ಮನಸ್ಸಿಗೂ ಸಂತಸ ಉಂಟು ಮಾಡಿತು.. 

ಕಾರ್ಯ ಮುಗಿದು ಮತ್ತೆ ಕೋಣೆಗೆ ಬಂದು.. ವಿಶ್ರಾಮ ತೆಗೆದುಕೊಳ್ಳುತ್ತಿದ್ದಾಗ  .. ಕುತೂಹಲ ಅಲ್ಲವೇ.. ಏನು ಪ್ರಾರ್ಥನೆ ಮಾಡಿಕೊಂಡಿರಿ.. ಅಂತ ಒಬ್ಬರಿಗೊಬ್ಬರು ಕೇಳುತ್ತಿದ್ದರು.. 

ಎಲ್ಲರೂ ಹೇಳಿದ್ದು ಒಂದೇ ಮಾತು 

"ಅಜಿತನನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ" 
"ಅಜಿತ ಮತ್ತು ಸೀಮಾ ನನ್ನ ಜವಾಬ್ಧಾರಿ"

ಈ ಉತ್ತರದಿಂದ ಸಂತುಷ್ಟವಾಗಿರಲಿಲ್ಲ... 

ಅಜಿತ "ಬಾಬಾನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ" ಅಂತ ಒಮ್ಮೆ, ಮತ್ತೊಮ್ಮೆ, ಮಗುದೊಮ್ಮೆ ಪ್ರಾರ್ಥನೆ ಮಾಡಿಕೊಂಡಾಗ.. ಇದು ಸಾರ್ಥಕತೆ ಅಂತ ಅನಿಸಿ ಆಹಾರವನ್ನು ಸ್ವೀಕರಿಸಿದ ಕ್ಷಣ ಒಮ್ಮೆ ಮೈ ಜುಮ್ ಎನಿಸಿತು.. 

ತಾಯಿ ಹೃದಯ ಎಂದರೆ ಅದೇ ಅಲ್ಲವೇ.. ನಾ ಅಷ್ಟೇ ಅಲ್ಲ.. ನನ್ನ ಪರಿವಾರವೂ ಕೂಡ ಕ್ಷೇಮವಾಗಿರಬೇಕು ಎಂದು ಬಯಸೋದು ಮಾತೃ ಹೃದಯ ದ ವಿಶೇಷತೇ.. 

ಊಟ ಮಾಡಿ ವಿಶ್ರಾಂತಿಯಾಯಿತು.. ಕಾಫೀ ಬಂತು.. 

ಚಂದಿರ ಉಗಮವಾಗಲು ಇನ್ನಷ್ಟು ಸಮಯವಿತ್ತು.. 

ಗರುಡಪುರಾಣದ ಸಂಕ್ಷಿಪ್ತ ಮಾಹಿತಿಯನ್ನು ಕೇಳಿದೆವು.. ಗರುಡಪುರಾಣದ ಮುಖ್ಯ ಸಾರದ ಬಗ್ಗೆಯೂ ಮಾತುಗಳು ಬಂದವು.. 

ಮುಂದೆ ಅಮ್ಮನ ಮಾತು ಕೇಳಿ


ಚಿತ್ರಕೃಪೆ - ಗೂಗಲ್ ಬಾಬಾ 
"ನನ್ನ ಪ್ರೀತಿಯ ಪರಿವಾರದವರೇ.. ನನ್ನನ್ನು ಬೀಳ್ಗೊಡಲು ನೀವೆಲ್ಲ ಬಂದಿದ್ದೀರಿ.. ಹೌದು ನಿಮ್ಮನ್ನು ಬಿಟ್ಟು ಹೋಗಲು ನನಗೆ ಕಷ್ಟ.. ಆದರೇನು ಮಾಡುವುದು ನಾ ನಂಬಿರುವ ಬ್ರಹ್ಮ ಬಾಬಾ, ಶಿವಬಾಬಾ.. ಸ್ಮಿತಾ ಅಲಿಯಾಸ್ ಕುಮುದ  ಅಲಿಯಾಸ್ ಕುಮುದಿನಿ ನಿನ್ನ ಆತ್ಮಕ್ಕೆ ಆಗಲೇ ಬೇರೆ ಮನೆ ಸಿದ್ಧ ಮಾಡಿಟ್ಟಿರುವೆ.. ನೀ ಬರೋದಷ್ಟೇ ಇರೋದು.. ಬೇಗ ಬಂದು ಬಿಡು.. ಈ ಜನ್ಮದಲ್ಲಿ ನೀ ಅಪಾರ .. ಅಪಾರ ಜನ ಮನ್ನಣೆ, ಜನ ಪ್ರೀತಿ ಗಳಿಸಿದ್ದೀಯಾ.. ಇದಕ್ಕೆಲ್ಲ ಮುಖ್ಯವಾಗಿ ನಿನ್ನ ಕುಟುಂಬಕ್ಕೆ ಒಂದು ಉತ್ತಮ ಸಂಸ್ಕಾರ ನೀಡಿದ್ದೀಯ.. ಕೊಂಚ ಕಲೆ ಉಳಿದಿತ್ತು.. ಹಾಗಾಗಿ ನಿನ್ನ ಅಂತಿಮ ಘಟ್ಟದಲ್ಲಿ ಸ್ವಲ್ಪ ಇಂಜೆಕ್ಷನ್, ಮಾತ್ರೆಗಳು, ಟಾನಿಕ್ಕು, ವೈದ್ಯಕೀಯ ಉಪಚಾರ ಅಂತ ಒಂದು ತಿಂಗಳು ಕಳೆದಿದ್ದೀಯ.. ಹಾಗಾಗಿ ಆ ಕಲೆಗಳು ಈಗ ಮಾಯಾ.. ಮುಂದಿನ ಜನ್ಮದಲ್ಲಿ ಉತ್ತಮ ದೇಹದಲ್ಲಿ ಸೇರಿಕೊಂಡು ಇನ್ನಷ್ಟು ಉತ್ತಮೋತ್ತಮ ಸೇವೆ ಮಾಡಲು ನಿನ್ನನ್ನು ಸಿದ್ಧ ಮಾಡಿದ್ದೇನೆ.. ಆಗೋ ಅಲ್ಲಿದೆ ನೋಡು ನಿನ್ನ ಹೊಸ ಗೂಡು ಅಂತ ತೋರಿಸಿದರು.. ಇನ್ನೇನು ಮಾಡುವುದು.. ನಾ ನಂಬಿದ ಬಾಬಾನೇ ಕರೆದಾಗ ಇಲ್ಲ ಅನ್ನೋಕೆ ಸಾಧ್ಯವೇ.. ನನ್ನ ಕುಟುಂಬ ಕಾರು ತೆಗೆದು ಹೋಗೋಕೆ ಸಿದ್ಧವಾದರೆಂದರೆ ನಾ ಬಿಡುತ್ತಲೇ ಇರಲಿಲ್ಲ.. ಆರೋಗ್ಯವೋ ಅನಾರೋಗ್ಯವೋ ನಾ ಹೋಗಿಯೇ ಹೋಗುತ್ತಿದ್ದೆ. ಪಾಪ ನನ್ನ ಮಕ್ಕಳೂ ಕೂಡ ಬೇಸರಿಸದೆ ಅವರು ಹೋದ ಕಡೆಯೆಲ್ಲ ನನ್ನನ್ನು ಕರೆದು ಕೊಂಡು ಹೋಗುತ್ತಿದ್ದರು.. ಇನ್ನೂ ಬಾಬಾ ಕರೆದರೆ ಸುಮ್ಮನೆ ಇರಲು ಸಾಧ್ಯವೇ.. ಅದಕ್ಕೆ ಹೊರಟಿದ್ದೇನೆ.. ನನ್ನನ್ನು ಕಳಿಸಿ ಕೊಡಿ.. ಪ್ಲೀಸ್"


ಯಾವಾಗಲೂ ಒಂದಕ್ಕೆ ಹತ್ತು ಮಾತಾಡುವ ಅಮ್ಮ ತಮ್ಮ ಅದೇ ಶೈಲಿಯಲ್ಲಿ ಮಾತಾಡಿದರು.. 

ಎಲ್ಲರ ಕಣ್ಣಲ್ಲಿ ಕೊಂಚ ನೀರು.. ಆದರೆ ಇದು ಆನಂದಭಾಷ್ಪ.. 

ಸದಾ ನಗುಮೊಗದ ಅಮ್ಮ.. ಮೆಲ್ಲನೆ ತನ್ನ ಇಷ್ಟದ ಬ್ರಹ್ಮ ಬಾಬಾ ಮತ್ತು ಶಿವ ಬಾಬಾ ಕಳಿಸಿದ ಪುಷ್ಪಕವಿಮಾನವನ್ನು ಏರಿಯೇ ಬಿಟ್ಟರು.. ಮೆಲ್ಲನೆ ಅದು ರೆಕ್ಕೆ ಬಡಿಯುತ್ತ ಬಡಿಯುತ್ತ ದಿಗಂತದೆಡೆ ಹಾರುತಿತ್ತು.. 


ಚಿತ್ರಕೃಪೆ - ಗೂಗಲ್ ಬಾಬಾ 

ಗಗನದಲ್ಲಿ ಮೇಲೆ ಏರುತ್ತಾ ಏರುತ್ತಾ ಹೋದಾ ಹಾಗೆ ಅವರ ಮುಗುಳುನಗೆ ಇಡೀ ಆಗಸವನ್ನೆಲ್ಲ ತುಂಬಿಕೊಂಡು ಬಿಳಿ ಬಿಳಿಯಾಗುತ್ತಾ ಹೋಯಿತು... ಇಡೀ ಆಗಸ ಸ್ವಚ್ಛ ಬಿಳುಪು.. ಒಂದು ಚೂರು ಕಲೆಯಿಲ್ಲ ಅಮ್ಮನ ಮುಂದಿನ ಜನ್ಮದ ಹಾಗೆ ಕಲೆಯೇ ಇಲ್ಲದ ಸ್ವಚ್ಛ ಜನ್ಮದ ಹಾಗೆ...

ಪುಷ್ಪಕ ವಿಮಾನ ದೂರ ಎತ್ತರಕ್ಕೆ ಹಾರಿದಂತೆಲ್ಲ.. ಆ ಬಿಳುಪಾದ ಆಗಸ ಮತ್ತೆ ನೀಲಿಯಾಗುತ್ತಾ ನೀಲಿಯಾಗುತ್ತ .. ಆ ಬಿಳುಪು ಸಣ್ಣಗೆ ಆಗುತ್ತಾ ಬಂದು.. ಕಡೆಯಲ್ಲಿ ಗೋಳಾಕಾರವಾಯಿತು.. ಗೋಳಾಕಾರವಾಗಿ ಮತ್ತೆ ಪ್ರಕಾಶಮಾನವಾಯಿತು.. ಆ ಗೋಳಾಕಾರವೇ ಚಂದಿರನಾಯಿತು.. 

ಚಿತ್ರಕೃಪೆ - ಗೂಗಲ್ ಬಾಬಾ 

ಬಾನಿನಲ್ಲಿ ಚಂದಿರ ನಗುತ್ತಿದ್ದ.. ಜೊತೆಯಲ್ಲಿ ಸಂಕಷ್ಟ ಚೌತಿಯ ದಿನ.. 


ಚಿತ್ರಕೃಪೆ - ಗೂಗಲ್ ಬಾಬಾ 

ಎಲ್ಲರೂ ಚಂದಿರನ ದರ್ಶನ ಮಾಡಿ.. ಗುಡಿಯಲ್ಲಿ ಗಣಪನ ದರ್ಶನ ಮಾಡಿ.. ಆಹಾರ ಸೇವಿಸಬೇಕು ಇದು ಸಾಮಾನ್ಯವಾಗಿ ಪಾಲಿಸುವ ನಿಯಮ.. 

ತನ್ನ ಸಹೋದರಿಯರು.. ಒರಗಿತ್ತಿಯ ಮಗಳು ಸಂಕಷ್ಟ ಚೌತಿಯ ವ್ರತವನ್ನು ಮಾಡಿ.. ಚಂದಿರನನ್ನು ನೋಡಲು ಬಾನಿನ ಕಡೆ ನೋಡಿದಾಗ.. ಅಲ್ಲಿ ಕಂಡದ್ದು..  ಕುಮುದಿನಿ ಅರ್ಥಾತ್ ತಾವರೆ ಹೂವು.. ಬೆಳದಿಂಗಳ ನಗೆ.. ಅಂದರೆ ಮಂದ"ಸ್ಮಿತ"

ನಾ ಆಗಸವನ್ನೇ ನೋಡುತ್ತಿದ್ದೆ. ಅಮ್ಮನ ಮುಗ್ಧ ನಗು ಕಂಡಿತು. ಜೋರಾಗಿ ನಗುತ್ತಿದ್ದರು.. ನಾನು ಯಾಕೆ ಅಮ್ಮ ಹಾಗೆ ನಗುತ್ತಿದ್ದೀರಿ ಅಂದೇ 

"೧. ನೀವು ಹೇಳಿದ ಒಂದು ಸಂಭಾಷಣೆ ಕೇಳಿ ನಗು ಬಂತು.. ಹುಣ್ಣಿಮೆದಿನ ಮರದಿಂದ ಯಾವುದಾದರೂ ಭೂತ ಜಿಗಿದು ನಿಮ್ಮ ಮುಂದೆ ಬಂದು ಹೀ ಹೀ ಅಂತ ಹೆದರಿಸೋಕೆ ಪ್ರಯತ್ನ ಪಟ್ಟರೂ ನೀವು ಹೆದರದೆ.. ಒಂದು ಬೆಲ್ಲದ ತುಂಡನ್ನು ಕಂಡರೆ ಭಯಭೀತರಾಗುತ್ತೀರಿ ಎಂಬ ಮಾತು ನಗು ತರಿಸಿತು.. 

೨. ಒಂಭತ್ತು ಹದಿನೈದಕ್ಕೆ ಚಂದ್ರೋದಯ.. ಆಮೇಲೆ ಹೋಗೋಣ ಅಂತ ನನ್ನ ಸಹೋದರಿ ಹೇಳಿದಾಗ.. ಅಯ್ಯೋ ಆಕಾಶ ನೋಡೋಕೆ ಯಾಕೆ ನೂಕು ನುಗ್ಗಲು.. ಬೆಲ್ಲ ತಿನ್ನೋಕೆ ಎಂಟು ಮುಕ್ಕಾಲಾದರೇನು.. ಒಂಭತ್ತು ಕಾಲು ಆದರೇನು.. ಬೆಲ್ಲ ಬೆಲ್ಲ ಬೆಲ್ಲಾ ಎಲ್ಲೆಲ್ಲಿ ನೋಡಲಿ ಬೆಲ್ಲವನ್ನೇ ಕಾಣುವೆ.. ಅಂತ ನಿಮ್ಮಿಷ್ಟದ ರಾಜಕುಮಾರನ ಹಾಡು ನೆನಪಿಗೆ ಬಂತು" 

ಅದಕ್ಕೆ ನಗು ಬಂತು ಅಂತ ಅಮ್ಮ ಹೇಳಿದರು.. 

ಅವರ ಬದುಕಿನುದ್ದಕ್ಕೂ ಅನುಸರಿಸಿಕೊಂಡು ಬಂದದ್ದು ಅವರ ನಗು.. ನಮ್ಮ ಬದುಕಿಗೂ ಬೆಳಕಾಗಿ ಮಾರ್ಗದರ್ಶನ ನೀಡುವುದು ಅದೇ ನಗು.. ಆ ನಗು ನಮ್ಮ ಜೊತೆಯಿರುವಾಗ "ನಗು ನಗುತಾ ನಲಿ ನಲಿ ಏನೇ ಆಗಲಿ"  ಅಲ್ಲವೇ


1 comment:

  1. ಸುಂದರವಾದ ಸಾಲುಗಳಿಗೆ ಹೃತ್ಪೂರ್ವಕ ವಂದನೆಗಳು.
    ಅಮ್ಮ ಯಾವಾಗಲೂ ತನ್ನ ಮುಗುಳುನಗೆಯಿಂದ ಎಲ್ಲರ ಬದುಕಿಗೂ ಸಿಹಿತನವನ್ನು ಹಂಚುತ್ತಿದ್ದಳು. ತನ್ನ ಪರಿವಾರದವರ ಜೀವನದಲ್ಲೂ ಸದಾ ಸಂತೋಷದ ಸಿಹಿ ತುಂಬಿರಲಿ ಎಂಬ ಆಶಯವೇ ಅವರ ಮನದಲ್ಲಿತ್ತು ಎಂದು ಅನಿಸುತ್ತದೆ. ಅದಕ್ಕಾಗಿಯೇ ಆ ದಿನದ ಊಟದಲ್ಲಿಯೂ ಸಿಹಿಯ ಅಂಶವಿತ್ತು ಎಂಬ ಭಾವನೆ ಮನದಲ್ಲಿ ಮೂಡುತ್ತದೆ.

    ReplyDelete