Tuesday, August 19, 2014

ಬಂದ ಬಂಧ .. ಬಂದ ಬಂಧ.. ತನುಬಂಧ!!!

ಬೃಹದಾಕಾರದ ಮರಕ್ಕೆ ಜೋತು ಬಿದ್ದಿದ್ದ ಬೇತಾಳ ವಿಕ್ರಮನ ಬರುವಿಕೆಗೆ ಕಾಯುತ್ತಿತ್ತು.. .. ಬೇತಾಳ ವಿಕ್ರಮನಿಗೆ ಎಷ್ಟು ಅಂಟಿಕೊಂಡಿತ್ತು ಅಂದರೆ..  ಒಂದು ದಿನ ವಿಕ್ರಮನನ್ನು ನೋಡದೆ ಹೋದರೆ.. ಅವನ ಹೆಗಲ ಮೇಲೆ ಹೋಗದೆ ಇದ್ರೆ ಏನೋ ಕಳೆದುಕೊಂಡ ಭಾವನೆ.. ಏನೋ ಆ ದಿನದಲ್ಲಿ ಒಂದೆರಡು ಘಳಿಗೆ ಉಸಿರು ನಿಂತ ಅನುಭವ..

ಎರಡು ಮಿಡಿವ ಮನಗಳ ಮಿಲನ (ಚಿತ್ರ ಕೃಪೆ ಅಂತರ್ಜಾಲ)

ವಿಕ್ರಮನಿಗೆ ತನ್ನ ರಾಜ್ಯಭಾರ, ಪ್ರಜೆಗಳ ಕಷ್ಟ ಸುಖಃ, ಪರಿವಾರದ ಯೋಗ ಕ್ಷೇಮ ಜೊತೆಯಲ್ಲಿ ಆಗಾಗ ಬಂದು ಒದಗುವ ಪರೀಕ್ಷಾ ಸಮಯಗಳು.. ರಾಜ ಮನೆತನದ ಮಕ್ಕಳಿಗೆ ಹಿತವಚನ, ಪಾಠಗಳು... ಹೀಗೆ ಒಂದಲ್ಲ ಒಂದು ರೀತಿ ಕೈ ತುಂಬಾ ಕೆಲಸ.. ಆದರೂ ಸಂಜೆ ಆಯಿತು ಎಂದರೆ ಬೇತಾಳನ ಕಥೆ ಕೇಳುವ ತವಕ.. ಆ ಕೆಲ ಘಳಿಗೆಗಳಲ್ಲಿ ಬೇತಾಳ ಹೇಳುವ ಸುಧೀರ್ಘ ಕಥೆ ಕೇಳಿ ಅದಕ್ಕೆ ಒದಗುವ ಕೆಲವು ಪ್ರಶ್ನೆಗಳಿಗೆ ಸಮಂಜಸ ಉತ್ತರ ಸಿಕ್ಕರೆ ವಿಕ್ರಮನ ಆ ದಿನ ಸಾರ್ಥಕ ಅನ್ನಿಸುವ ಭಾವ..

ಆದರೆ ಇಬ್ಬರಿಗೂ ಗೊತ್ತಿತ್ತು.. ನಂಟು  ಒಂದೇ ಆದರೂ ಜೀವನದ ಕವಲು ದಾರಿಯಲ್ಲಿ ಕೆಲವೊಮ್ಮೆ ತುಳಿಯುವ ಹಾದಿ ಎತ್ತಲೋ ಎಳೆದು ಕೊಂಡು ಹೋಗುತ್ತದೆ.. ವಿಶೇಷವಾದ ಈ ಬಂಧ ಕೆಲವೊಮ್ಮೆ ಉಸಿರುಕಟ್ಟಿಸಬಹುದು ಎಂಬ ಅರಿವಿದ್ದರೂ.. ಆ ಬೆಸದ ಭಾವ ಇಬ್ಬರನ್ನೂ ಒಂದು ಮಾಡಿತ್ತು..

ಸಂಬಂಧವೇ ಇಲ್ಲದ ದಾರಿ ಹೋಕರಾಗಬಹುದಿದ್ದ ಎರಡು ಭಾವ ಜೀವಿಗಳು ಒಂದೇ ಎನ್ನುವಂತೆ ಜೀವಿಸುತ್ತಿದ್ದವು..

ಹೀಗೆ ಒಂದು ದಿನ ಕಾಯುತ್ತ ಮರದಲ್ಲಿ ಜೋತು ಬಿದ್ದು ಕಾಯುತ್ತಾ ನೇತಾಡುವಾಗ.. ಅಚಾನಕ್ ಕೊಳಲಿನ ಗಾನ ಮಾಧುರ್ಯ ಕೇಳಿ ಬಂತು.. ಅರೆ ಏನಿದು.. ಯಾರಿದು ಎಂದು ಉಲ್ಟಾ ನೋಡುತ್ತಾ ಇದ್ದಾಗ ನವಿಲು ಗರಿ ಕಾಣಿಸಿತು.. ಮೇಘ ಶ್ಯಾಮನ ಮುರುಳಿ ಲೋಲ ನಿಧಾನವಾಗಿ ವೇಣು ನಾದ ಮಾಡುತ್ತಾ ಅಲ್ಲಿಗೆ ಬಂದಾ..

ಕೊಳಲು ಮತ್ತು ಕೃಷ್ಣ ಎರಡು ಮಿಡಿವ ಮನಗಳ ಮಿಲನ  (ಚಿತ್ರ ಕೃಪೆ ಅಂತರ್ಜಾಲ)

ಬೇತಾಳಕ್ಕೆ ಆಶ್ಚರ್ಯ.. ಶ್ರೀ ಕೃಷ್ಣನಿಗೆ ವಂದಿಸುತ್ತಾ... "ಶ್ಯಾಮ.. ಏನಿದು ಇಂದು ಈ ದಿನ.. ಇವತ್ತು.. ಹೀಗೆ.. "

"ಅರೆ ಬೇತಾಳ ಯಾಕೆ ಉದ್ವೇಗ.. ಆತಂಕ.. .. ಗಾಬರಿ ಬೇಡ.. ನಿನ್ನೆ ನೋಡಲು ಬಂದೆ... "

ತಿದ್ದಿ ತೀಡಿಸಿಕೊಂಡು ಹುಬ್ಬನ್ನು ಮತ್ತಷ್ಟು ಮೇಲಕ್ಕೆ ಏರಿಸಿ.. "ಏನಿದು ಭಗವಾನ್ ನನ್ನ ನೋಡಲು ಬರುವುದೇ.. ಏನು ಸಮಾಚಾರ?"

"ಹೌದು.. ನಿನ್ನ ವಿಕ್ರಮನ ಪರಿಚಯ ಚೆನ್ನಾಗಿ ಇದೆ.. ಜೊತೆಯಲ್ಲಿ ನೀನು ವಿಕ್ರಮನನ್ನು ಸ್ವಂತ ಮಗನು ಎಂಬ ಭಾವನೆ ನಿನ್ನದು.. ಹಾಗೆಯೇ ವಿಕ್ರಮನು ಕೂಡ ನಿನ್ನನ್ನು ಜನಕ ರೂಪದಲ್ಲಿಯೇ ನೋಡುತ್ತಾನೆ.. ಆದರೆ ಏನು ಮಾಡುವುದು ವಿಕ್ರಮನಿಗೆ ತನ್ನ ರಾಜ್ಯವನ್ನು ಸಂರಕ್ಷಿಸಬೇಕು, ಉತ್ತಮ ಆಡಳಿತ ಕೊಡಬೇಕು.. ಹೀಗೆ ನೂರೆಂಟು ತಾಪ ತ್ರಯಗಳು.. ಅದರಲ್ಲೂ ಕೊಂಚ ಬಿಡುವು ಮಾಡಿಕೊಂಡು ಭೇಟಿ ಮಾಡಲು ಬರುತ್ತಿದ್ದಾನೆ.. "

"ಹೂಂ ಹೂಂ "

"ನಿನ್ನ ಕಷ್ಟವು ನನಗೆ ಅರ್ಥವಾಗುತ್ತದೆ.. ದಿನವೂ ಅದೇ ಮರದ ಮೇಲೆ ವಾಸ.. ನಿನ್ನ ಸುತ್ತಾ  ಮುತ್ತಾ ಇರುವ ಬೇತಾಳಗಳು ತಮ್ಮ ಕತೆಗಳನ್ನು ಹೇಳಿ ಹೇಳಿ ನಿನಗೂ ಸ್ವಲ್ಪ ಬದಲಾವಣೆ ಬೇಕು ಎನ್ನಿಸುತ್ತದೆ. .. ಜೊತೆಯಲ್ಲಿ ಈ ನಡುವೆ ನಿನ್ನ ಅನೇಕ ದೈನಂದಿನ ಚಟುವಟಿಕೆಗಳಿಗೆ ಸಮಯ ಕೊಡಲು ಆಗುತ್ತಿಲ್ಲ.. ಆದ್ದರಿಂದ ನಿನಗೆ ಕೊಂಚ ಬದಲಾವಣೆ ಎಂದರೆ ವಿಕ್ರಮನ ಸಾಂಗತ್ಯ.. ಮಾತು.. ಕಥೆ.. ಸಂದೇಶ ಕೊಡುವ ಮಾತುಗಳು.. "

"ಹೂಂ ಹೂಂ ಹೂಂ"

"ತಮಾಷೆ ಗೊತ್ತಾ.. ಎಲ್ಲೋ ಹುಟ್ಟುವ ಝರಿ.. ನದಿಯಾಗಿ.. ಶರಧಿ ಸೇರುವಾಗ ಧನ್ಯತಾ ಭಾವ ಇರುತ್ತೆ ಅಲ್ಲವಾ ಹಾಗೆಯೇ ನಿಮ್ಮಿಬ್ಬರ ಬಂಧವೂ ಕೂಡ.. ನದಿಯಿಲ್ಲದೆ ಸಾಗರವಿಲ್ಲ.. ಸಾಗರವಿಲ್ಲದೆ ನದಿಯಿಲ್ಲ.. "

"ಕೃಷ್ಣ... ನನಗೆ ಅರ್ಥವಾಗುತ್ತಿದೆ.. ನಿನ್ನ ಮಾತುಗಳು ಎಲ್ಲಿ ಹೋಗುತ್ತಿದೆ ಎಂದು.. ನನಗಿರುವ ಒಂದೇ ಸಂದೇಹ ಅಂದರೆ.. ನಾನೂ ವಿಕ್ರಮನ್ನು ಇಷ್ಟೊಂದು ಹಚ್ಚಿಕೊಳ್ಳುವುದು.. ವಿಕ್ರಮನಿಗೆ ಕಷ್ಟವಾಗುತ್ತದೆಯಾ ಅಥವಾ ನಾ ಅವನ ಹೆಗೆಲೇರಿ ಕೂತು.. ಕೆಲವೊಮ್ಮೆ ಅವನ ತಲೆ ಸವರುತ್ತಾ ಅವನಿಗೆ ಕಥೆ ಹೇಳುವುದು ತಪ್ಪು ಅನ್ನಿಸುತ್ತದೆಯ.. ಇವರೆದು ಪ್ರಶ್ನೆಗಳಿಗೆ ಬೇಗ ಉತ್ತರ ಕೊಟ್ಟು ಬಿಡು ನನ್ನ ಆತ್ಮ ವಿಕ್ರಮ ಬರುವ ಸಮಯವಾಯಿತು"

"ಇಲ್ಲಾ ಮಹರಾಯ.. ತಪ್ಪು ಇಲ್ಲವೇ ಇಲ್ಲಾ.. ನಿನ್ನ ಮನಸು ಹಾಲಿನಷ್ಟೇ ಬಿಳುಪು.. ಹುಡುಕಿದರೂ ಕೆಟ್ಟ ಭಾವ ಸಿಗಲಾರದು.. ಆದರೂ ಲೋಕದ ದೃಷ್ಟಿಯಲ್ಲಿ ತಪ್ಪು ಇರಬಹುದೇ.. ಜೋತಾಡುವ ಬೇತಾಳ ಮನುಜನೊಡನೆ ಈ ಬಂಧ ಸರಿಯೇ ಎನ್ನುವ ದುಗುಡ ನಿನ್ನದು ಅಲ್ಲವೇ.. ಯೋಚನೆಯೇ ಬೇಡ.. .. ಮುಗಿಲಲ್ಲಿ ಹನಿ ಸೇರಿರುತ್ತದೆ.. ಅದೇ ಹನಿ ಆವಿಯಾಗಿ ಆಗಸ ಸೇರುತ್ತದೆ.. ಮತ್ತೆ ಭುವಿಗೆ ಪಯಣ.. ನೀವಿಬ್ಬರು ಹೃದಯದ ಬಡಿತ ಇದ್ದ ಹಾಗೆ.. ಒಮ್ಮೆ ಲಬ್ ಎಂದರೆ ಇನ್ನೊಮ್ಮೆ ಡಬ್ ಎನ್ನುತ್ತದೆ.. ಹಾಗೆ ಆದಾಗ ಮಾತ್ರ ಹೃದಯದ ಜೀವಂತವಾಗಿರುತ್ತದೆ .. "

ಒಂದು ನಗು ಹಾಗೆ ಮಿಂಚಿ ಮಾಯವಾಯಿತು ಬೇತಾಳನ ಮುಖದಲ್ಲಿ

"ಮತ್ತೆ....  ಆದ್ರೆ...  ನೀನು ಅದನ್ನು ವಿಕ್ರಮನ ಬಳಿ ಹೇಳಿಕೊಂಡದ್ದು ಸರಿ.. ಯಾಕೆ ಅಂದರೆ.. ನಿನ್ನ ಮನ ಹೇಳಿಕೊಂಡ ಮೇಲೆ ಹತ್ತಿಯಷ್ಟೇ ಹಗುರವಾಯಿತು.. ಹಾಗೆಯೇ ವಿಕ್ರಮನಿಗೂ ಕೂಡ.. ನಿನ್ನ ಕಥೆ, ಮಾತುಗಳು, ನಗು, ನಿನ್ನ ಮನದಲ್ಲಿರುವವರನ್ನು ಜತನ ಮಾಡುವ ರೀತಿ,  ಎಲ್ಲವೂ ಅವನಿಗೆ ಬಲು ಇಷ್ಟಾ.. ನೀನು ಅರಿಕೆ ಮಾಡಿಕೊಂಡ ನಿನ್ನ ಆತಂಕ ಅವನಿಗೂ ಅರ್ಥವಾಗಿದೆ.. ಹಾಗಾಗಿ ಇಬ್ಬರ ಮನಸ್ಸು ಬಿಲ್ಲು ಬಾಣದ ರೀತಿಯ ಹಾಗೆ ಆಗಿದೆ.. ಬತ್ತಳಿಕೆಯಲ್ಲಿದ್ದ ಬಾಣ ತನ್ನ ಗುರಿ ಸೇರಿದೆ.. ಆ ನೆಮ್ಮದಿ ಬಾಣಕ್ಕೆ ಸಿಕ್ಕರೆ.. ಬಿಲ್ಲಿಗೆ ಬಾಣವನ್ನು ಗುರಿ ಸೇರಿಸಿದ ತೃಪ್ತಿ.. "

ಕಪ್ಪಗಿದ್ದ ಬೇತಾಳ.. ಬೆಳ್ಳಗೆ ಕಾಣಲು ಬೂದಿಯನ್ನು ಸಿಕ್ಕಾ ಪಟ್ಟೆ ಬಳಿದು ಕೊಂಡಿತ್ತು.. ಕೃಷ್ಣ ಮಾತನ್ನು ಕೇಳಿ ಕಣ್ಣಲ್ಲಿ ಹನಿಯಾಗಿದ್ದ ಮುತ್ತುಗಳು ನಿಧಾನವಾಗಿ ಜಾರತೊಡಗಿದವು..

ವಿಕ್ರಮ ಬರುವುದನ್ನು ನೋಡಿ.. ಶ್ರೀ ಕೃಷ್ಣ ಮುಗುಳುನಗುತ್ತಾ.. "ನೋಡು ನಿನ್ನ ತನುಜಾ ಬಂದಾ ನಾ ಹೊರಟೆ.. ಎಂದು ಹೇಳಿ ಅಂತರ್ಧಾನನಾದ.. "

ಬೇತಾಳ.. ವಿಕ್ರಮನನ್ನು ಭೇಟಿ ಮಾಡಲು ಮರದ ಕೊಂಬೆಯಿಂದ ಜೋರಾಗಿ ಜೀಕತೊಡಗಿತು.... !!!

ಬೇತಾಳನ ಮುಖದಲ್ಲಿ ಪ್ರಶಾಂತತೆಯನ್ನು ಕಂಡು ವಿಕ್ರಮನ ಹೃದಯ ಮಿಡಿಯುತ್ತ..  ತನ್ನಷ್ಟಕ್ಕೆ ತಾನೇ ಹೇಳಿಕೊಂಡಿತು "ಬಂಧಗಳು ಅನುಬಂಧಗಳು ದೇವರು ಕೊಟ್ಟ ವರ.. ಕೆಲವೊಮ್ಮೆ ಅನುಮಾನ ಕಾಡಿದಾಗ ಮನದಲ್ಲೇ ಬಾವಿ ತೋಡಿಕೊಳ್ಳುವ ಬದಲು ಬೇತಾಳ ಮಾಡಿದ ಹಾಗೆ ಹೊರಗೆ ಹಾಕುವುದು ಒಳ್ಳೆಯದು.. ಹಾಗೆಯೇ ಅದನ್ನು ಅರ್ಥಮಾಡಿಕೊಂಡು ಬೇತಾಳನ ಮನಸ್ಸನ್ನು ಇನ್ನಷ್ಟು ಪ್ರೀತಿಸುವ ನಿನ್ನ ಹೃದಯವೂ ಸುಂದರ.. ಕೃಷ್ಣನ ಮಾತಿನಲ್ಲಿಯೇ ನೀ ಹೇಳಬೇಕಾದ್ದನ್ನು ಹೇಳಿಸಿಬಿಟ್ಟೆ.. ನೀನು ನಿಜವಾಗಿಯೂ ವಿಕ್ರಮನೇ.. "


12 comments:

  1. ಸಂಬಂಧಗಳು ಗಟ್ಟಿಗೊಳ್ಳಲು ಹಲವು ಋತುಗಳೇ ಬೇಕಿದ್ದರೂ ಅವು ನೆಲಸಮಗೊಳ್ಳಲು ಒಂದು ಅನುಮಾನದ ಜೇಸೀಬಿಯ ತಾಕು ಸಾಕು.

    ಬೇತಾಳ - ಕೃಷ್ಣ - ವಿಕ್ರಮರ ಮೂಲಕ ಮನಬಿಚ್ಚಿ ಮಾತನಾಡುವ ಮೂಲಕ ಬಗೆಹರಿಸಿಕೊಳಬಹುದು ಅಸಮಧಾನಗಳು ಎಂದು ತಾವು ಮನದಟ್ಟು ಮಾಡಿದ ರೀತಿಗೇ ಉಘೇ.. ಉಘೇ...

    ReplyDelete
    Replies
    1. ನಿಜವಾದ ಮಾತು ಬದರಿ ಸರ್. ನನಗೆ ಅನ್ನಿಸಿದ ಮಾತು.. ಮಾತುಗಳಿಂದ ಪರಿಹಾರವಾಗದ ಸಮಸ್ಯೆ ಈ ಪ್ರಪಂಚದಲ್ಲಿ ಇಲ್ಲ ಎಂದು..

      ಸುಂದರ ಮಾತುಗಳು ಧನ್ಯವಾದಗಳು

      Delete
  2. ಶ್ರೀಕಾಂತ್ ಜಿ ನಿಮ್ಮ ಜ್ಞಾನದ ಆಳ ಉದ್ದಾ ಅದ್ಭುತಾ ಸ್ವಾಮೀ , ನಿಮ್ಮ ಜ್ಞಾನ ನೋಡಿದ್ರೆ ನನಗೆ ಹೊಟ್ಟೆ ಕಿಚ್ಚು ಬರುತ್ತೆ , ಈ ಲೇಖನದಲ್ಲಿ ಹೇಳಬೇಕಾದ ವಿಚಾರವನ್ನು ಎಲ್ಲರ ಮನ ಮುಟ್ಟುವಂತೆ ಬರೆದು ಆ ವಿಚಾರಗಳು ನಮ್ಮನ್ನು ಕಾಡುವಂತೆ ಮಾಡಿದ್ದೀರಾ . ಅಕ್ಷರ ಗಾರುಡಿಗ ಎಂಬ ಮಾತು ಖಂಡಿತಾ ನಿಮಗೆ ಸರಸ್ವತಿ ನೀಡಿದ ವರವೇ ಸರಿ . ಶುಭವಾಗಲಿ

    ReplyDelete
    Replies
    1. ಹಾಗೇನು ಇಲ್ಲ ಬಾಲೂ ಸರ್.. ಹುಚ್ಚು ಮನಸ್ಸು ಕುದುರೆಯ ಹಾಗೆ ಓಡುತ್ತಿರುತ್ತದೆ.. ಹಾಗೆಯ ಆ ಓಟದಲ್ಲಿ ಮೂಡಿಬಂದ ಲೇಖನ. ಮೆಚ್ಚಿದ್ದಕ್ಕೆ ಒಪ್ಪಿದ್ದಕ್ಕೆ ಧನ್ಯವಾದಗಳು

      Delete
  3. ಮನದಲ್ಲಿನ ಮಾತುಗಳಿಗೆ ಮಾತೊಂದೆ ಪರಿಹಾರ,
    ಮಾತು ಹೊರಬರುವಾಗ ಮನಸೂ ಹಗುರ ... ಚೆನ್ನಾಗಿದೆ...

    ReplyDelete
    Replies
    1. ಧನ್ಯವಾದಗಳು ಹರಿಣಿ ಮೇಡಂ

      Delete