Sunday, June 15, 2014

"ಸುಧಾ" ಪರಿಮಳ... ಗಾಳಿಯಲ್ಲಿ ಲೀನವಾಯಿತು

"ನಾನು ಎಂಬುದು ಅಜ್ಞಾನ, ನನ್ನದು ಎನ್ನುವುದು ಅವಿವೇಕ, ನನ್ನಿಂದಲೇ ಎನ್ನುವುದು ಅಹಂಕಾರ"

ಅಣ್ಣಾವ್ರ ಭಕ್ತ ಪ್ರಹ್ಲಾದ ಚಿತ್ರದ ಸಂಭಾಷಣೆ ವಿಪರೀತ ಕಾಡ ಹತ್ತಿತು..

ನಾ ಅದು ಮಾಡಿದೆ ನಾ ಇದು ಮಾಡಿದೆ ನಾ ಹಾಗೆ ಸಹಾಯ ಮಾಡಿದೆ ನಾ ಹೀಗೆ ಅವರನ್ನು ಕಷ್ಟದಿಂದ ಮೇಲೆತ್ತಿದೆ.. ನನಗೆ ಅದು ಕಷ್ಟ ನನಗೆ ಇದು ಕಷ್ಟ.. ಅದು ಹೀಗಿದ್ದರೆ ನಾ ಹೀಗಿರುತ್ತಿದೆ.. ಹೀಗೆ ರೆ ಪ್ರಪಂಚದಲ್ಲಿ ಹರಿಯಲಾರದ ವಿಷಯಗಳೇ ಇಲ್ಲ ಆಸೆಗಳೇ ಇಲ್ಲ..

ನನ್ನ ಸಹೃದಯ ಮಿತ್ರ.. ಶ್ರೀ ಪ್ರಕಾಶ್ ಹೆಗ್ಗಡೆಯವರು ಕಷ್ಟ ಎನ್ನುವ ಬಗ್ಗೆ ಒಂದು ಸೂಪರ್ ಲೇಖನ ಬರೆದಿದ್ದರು.. ಅದು ಇತ್ತೀಚಿಗಷ್ಟೇ ನಾಟಕದ ರೂಪವಾಗಿ ಓದುಗರ ಪ್ರೇಕ್ಷಕರ ಮನಸ್ಸನ್ನು ಸೆರೆ ಹಿಡಿದಿತ್ತು..

ಕಷ್ಟದ ಒಂದು ಮಗ್ಗಲಿನ ಬಗ್ಗೆ ಅರಿವಾಗಿದ್ದ ಹೊತ್ತು.... ತಲೆಗೆ ಇನ್ನೊಂದು ಸಮಸ್ಯೆ ಕಾಡ ಹತ್ತಿತು..

ಹೌದು.. ಕತ್ತಲೆಯ ನೆರಳಿಗಿಂತ ಕಾಡುವುದು ಯಾವುದು..?

ಜನನದಿಂದಲೇ ಮರಣವನ್ನು ಬೆನ್ನಿಗೆ ಅಂಟಿಸಿಕೊಂಡು ಬರುವ ನಾವೆಲ್ಲರೂ.. ಯಾವೊತ್ತೋ ಒಂದು ದಿನ ಅದರ ಭೇಟಿ ಆಗಿಯೇ ತೀರುತ್ತದೆ.. ಆದರೆ ಪ್ರತಿ ಕ್ಷಣವೂ ಸಾವಿನ ಅರಮನೆಯಲ್ಲಿ ಕಳೆಯುವುದು.. ಯಾವಾಗಾದರೂ ಕದ ದೂಡಿಕೊಂಡು ಬರಬಹುದು ಎನ್ನುವ ವಿಚಿತ್ರ ಕಾಯುವಿಕೆಯಲ್ಲಿ ಅಥವಾ ನಿರೀಕ್ಷೆಯಲ್ಲಿ ಸುಮಾರು ಐವತ್ತೆರಡು ವಸಂತಗಳನ್ನು ಕಳೆಯುವುದು ಒಂದು ಸವಾಲೇ ಸರಿ..

ಕೈ ಹಿಡಿದು ಜೀವನ ನೀಡಿದ ಪತಿರಾಯ.. ತನ್ನ ಕರುಳಿನ ಬಳ್ಳಿಯನ್ನು ಹಂಚಿಕೊಂಡು ವಂಶದ ಬೆಳಕಾದ ಮಗರಾಯ.. ಈ ಎರಡು ಬೆಳಕಲ್ಲಿ ತನ್ನ ಜೀವನದ ಕತ್ತಲೆಯ ಕಾಲನನ್ನು ದೂರದಿಂದಲೇ ನೋಡುತ್ತಾ.. ಒಮ್ಮೆ ಹತ್ತಿರ ಬರುವ ಇನ್ನೊಮ್ಮೆ ದೂರ ಹೋಗುವ ಆ ಜವರಾಯನ ಭೇಟಿ.. ಕಡೆಯಲ್ಲಿ ನಡೆದೆ ಹೋಯಿತು..

ಭಯ, ಆತಂಕ, ಸಂಕಟ ಈ ಪದಗಳಿಗೆ "ಸುಧಾ" (ನನ್ನ ಸೋದರತ್ತೆಯ ಮಗಳು) ಇವಳಿಗೆ ಇರಲಿಲ್ಲವೋ ಅಥವಾ ಇದ್ದರೂ ಪತಿರಾಯ ಮತ್ತು ಮಗರಾಯನ ಸಂಗಡ ಅದು ಬೆನ್ನಿನಿಂದ ಬಹು ದೂರದಲ್ಲಿ ನೆಡೆದು ಬರುತ್ತಿತ್ತೋ ಅರಿಯದು..

ಸರಿ ಸುಮಾರು ೩೪ ವಸಂತಗಳಿಂದ ಅವಳನ್ನು ನೋಡುತ್ತಾ ಬಂದಿದ್ದೆ.. ಎಂದೂ ಕೂಡ ಅವಳ ಮುಖದಲ್ಲಿ, ಮಾತಿನಲ್ಲಿ ಬೇರೆ ಲೋಕಕ್ಕೆ ಪಯಣಿಸಲು ರಹದಾರಿ ಕೈಯಲ್ಲಿ ಹಿಡಿದಿದ್ದರೂ ಒಮ್ಮೆಯೂ ಅದರ ಸುಳಿವು ಮುಖದಲ್ಲಿ ತೋರದಿದ್ದದು ಅವಳ ಅಚಲ ಆತ್ಮ ವಿಶ್ವಾಸ, ತನ್ನ ಮೇಲೆ ಇರುವ  ದೃಢ ನಂಬಿಕೆಗೆ ಒಂದು ಸಾಕ್ಷಿ..

ಒಂದು ವಸ್ತುವನ್ನು ಸುಟ್ಟಾಗ ಒಂದು ಬದಿಯಿಂದ ಅಗ್ನಿಯ ಜ್ವಾಲೆ ನುಂಗುತ್ತಾ ಬರುವ ಹಾಗೆ.. ತನ್ನ ದೇಹದಲ್ಲಿ ನುಗ್ಗುತ್ತಿರುವ ಕಾಲನ ಅತಿಕ್ರಮಣದ ಬಗ್ಗೆ ಅರಿವಾಗಿಯೂ ಕೂಡ ನಗುತ್ತ ನಗುತ್ತ ದೇಹ ದಂಡಿಸುತ್ತಾ ತನ್ನ ಕುಟುಂಬದ ಏಳಿಗೆಗೆ ತನ್ನ ಬದುಕನ್ನು ಮುದಿಪಾಗಿಟ್ಟದ್ದು ಸುಧಾಳ ಹೆಗ್ಗಳಿಕೆ..

ದೇಹದ ಪ್ರತಿ ಅಂಗಗಳು ನನಗೆ ಸಾಕಾಯ್ತು ಎನ್ನುವವರೆಗೂ ದುಡಿಸಿ.. ಅವುಗಳು ಸಾಕು ಎನ್ನುವ ಈ ಘಳಿಗೆಯಲ್ಲಿ ತಾನೂ ಹೊರಟೆ ಎಂದು ಹೇಳುತ್ತಾ ಬಾರದ ಲೋಕಕ್ಕೆ ತನ್ನ ಪೂರ್ವಜರನ್ನು ಸೇರಲು ಹೊರಟೆ ಬಿಟ್ಟಳು..

ಇನ್ನೂ ಆಕೆಯ ಪತಿರಾಯ ಶ್ರೀ ಲಕ್ಷ್ಮಿಕಾಂತ.. ಲಕ್ಷ್ಮಿಯ ಶ್ರೀಮನ್  ನಾರಾಯಣನನ್ನು ನೋಡಿಕೊಳ್ಳುವ ಹಾಗೆ.. ನಾರಾಯಣ ತನ್ನ ಮಡದಿಯನ್ನು ತನ್ನ ವಕ್ಷ ಸ್ಥಳದಲ್ಲಿ ಇಟ್ಟುಕೊಂಡು ಜೋಪಾನ ಮಾಡುವ ಹಾಗೆ.. ಕಣ್ಣಲ್ಲಿ ಕಣ್ಣಿಟ್ಟು ತನ್ನ ಮಡದಿಯನ್ನು ನೋಡಿಕೊಂಡರು.. ಯಾವ ಘಳಿಗೆಯಲ್ಲಿ ತನ್ನ ಮುದ್ದಿನ ಮಡದಿ ಇಹಲೋಕ ಬಿಡಬಹುದು ಎಂಬ ಅರಿವಿದ್ದರೂ ಗಂಧದ ಕೊರಡು ತೇಯುವ ಹಾಗೆ ತನ್ನ ಮಡದಿಯ ಶುಶ್ರೂಷೆಯಲ್ಲಿ ತಮ್ಮ ಜೀವನದ ಸಾರ್ಥಕ್ಯ ಪಡೆದುಕೊಂಡರು..

ದೇವನ ನಿಯಮ ವಿಚಿತ್ರ ಆದ್ರೆ ಸದಾ ಅನುಕರಣೀಯ.. ನ್ಯೂನತೆ ಇರುವ ಕಾಯವನ್ನು ಕೊಟ್ಟಿದ್ದರು ಆ ಕಾಯವನ್ನು ಕಾಪಾಡಲು ಸುಂದರ ಮನದ ಸಂಗಾತಿಯನ್ನು ಕೊಟ್ಟಿದ್ದ ಆ ಭಗವಂತ..

ಇನ್ನೂ ಆಕೆಯ ಸುತ.. ಸುಮುಖ ಎಂಬ ಹೆಸರಿನಂತೆ ಪಾರ್ವತಿ ದೇಹದಿಂದ ಬಂದ ಗಣಪನ ಹಾಗೆ ತನ್ನ ಮಾತೆಯ ಸೇವೆಯನ್ನು ಹಗಲು ಇರುಳು ಎಂದು ನೋಡದೆ ಮಾಡಿದ್ದು.... ಆಕೆಯ ಆರೋಗ್ಯವನ್ನು ಕಾಪಾಡಲು, ನೋಡಲು ಜೇನುಗೂಡಿನಲ್ಲಿ ಸೇವೆಮಾಡುವ ಜೇನುನೊಣದ ಹಾಗೆ ಸದಾ ಜಾಗ್ರತೆಯಿಂದ ಮಾತೆಯ ಸೇವೆ ಮಾಡಿ ಕೃತಜ್ಞತ ಭಾವ ಹೊಂದಿದ್ದು ನೋಡಿದವರಿಗೆ ಮಾತ್ರ ಅರಿವಾಗುತ್ತದೆ..

ನಿಜಾ ಒಂದು ಪದಾರ್ಥ ನಮ್ಮ ಜೊತೆ ಬಹಳ ಕಾಲ ಇರಲಾರದು ಎನ್ನುವ ಸತ್ಯ ಗೊತ್ತಿದ್ದರೂ ಅದರ ಬಗ್ಗೆ ಯೋಚಿಸದೇ ಅದನ್ನು ಜತನ ಮಾಡುವುದರ ಬಗ್ಗೆಯೇ ಯೋಚಿಸಿ ಅದನ್ನು ಕಾರ್ಯಗತ ಮಾಡಿಕೊಂಡ ಶ್ರೀ ಲಕ್ಷ್ಮಿಕಾಂತ ಹಾಗೂ ಶ್ರೀ ಸುಮುಖ ನಿಜಕ್ಕೂ ನಮ್ಮ ನಡುವೆ ಇರುವ ಶ್ರವಣ ಕುಮಾರನ ಪಡಿಯಚ್ಚು ಎಂದು ಹೇಳುತ್ತೇನೆ..

ಕೇವಲ ಎರಡು ದಿನಗಳ ಹಿಂದೆಯಷ್ಟೇ ವಿವಾಹ ಜೀವನದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿರಬೇಕಾದ ಮನೆಯಲ್ಲಿ ಇಂದು ಸೂತಕದ ಛಾಯೆ.. ಆದರೆ ಸುಧಾಳಿಗೆ ತನ್ನ ಮನೆಯನ್ನು ಒಂದು ದಡಕ್ಕೆ ಮುಟ್ಟಿಸಿದ ನೆಮ್ಮದಿಯಿದ್ದರೆ.. ಕುಟುಂಬದವರಿಗೆ ಕಷ್ಟಗಳು ಮಂಜಿನ ಹನಿಯಾಗಿ ಕರಗಿ ಬೆಳ್ಳಿ ಹೂವು ಅರಳುವ ಸಮಯದಲ್ಲಿ ಸುಧಾಳ ಪರಿಮಳ ಗಾಳಿಯಲ್ಲಿ ಸೇರಿದ್ದು.....

ಯಾಕೋ ಆಗುತ್ತಿಲ್ಲ.. ಇಲ್ಲಿಯೇ ನಿಲ್ಲಿಸುವೆ..

"ಸುಧಾ" ನಾ ಕಂಡ ಕಷ್ಟ ಸಹಿಷ್ಣು, ಮತ್ತು ತಾಳ್ಮೆ ಎನ್ನುವ ಪದಗಳಿಗೆ ಪರ್ಯಾಯ ಪದವೇ ನೀನು.. ನಿನ್ನ ಕುಟುಂಬ ಖಂಡಿತ ನಿನ್ನನ್ನು ಮರೆಯದು.. ಹಾಗೆಯೇ ನಾವೂ ಕೂಡ.. ಹೋಗಿಬಾ ನಿನ್ನ ಪೂರ್ವಜರು.. ನಿನ್ನ ಮಾತಾ ಪಿತೃಗಳು ನಿನಗಾಗಿ.... !!!!

6 comments:

  1. ಇಂದಿನ ಕಾಲದಲ್ಲೂ ಇಂತಹ ಶ್ರವಣಕುಮಾರತ್ವ ಹೊಂದಿರುವವರು ಅಪರೂಪ.
    ಸುಧಾರ ಆತ್ಮಕ್ಕೆ ಭಗವಂತಕ್ಕೆ ಶಾಂತಿಯನು ಕೊಡಲಿ ಎಂದೇ ನಮ್ಮ ಪ್ರಾರ್ಥನೆ.

    ReplyDelete
    Replies
    1. ಆ ಪ್ರಾರ್ಥನೆಗೆ ಧನ್ಯವಾದಗಳು ಬದರಿ ಸರ್

      Delete
  2. Hats off to you Srikanth for your nice presentation. I pray Almighty to rest the departed soul in peace...

    ReplyDelete
  3. ಅಬ್ಬಾ...!
    ಇಂತಹ ಗಂಡನನ್ನು, ಮಗನನ್ನು ಪಡೆದಿರಬೇಕಾದರೆ ಅವರು ನಿಜಕ್ಕೂ ಅದೃಷ್ಟಶಾಲಿಗಳು...

    ReplyDelete