Tuesday, February 28, 2017

ಹಳ್ಳಿಯಾತನ ಅಮರವಾಣಿ...

ಬದುಕು ತೋರುವ  ಮಾರ್ಗ...  ಅಚಾನಕ್ ಕೊಡುವ ತಿರುವುಗಳು .. ಮನುಜನನ್ನು ಅಂತರ್ಮುಖಿಯನ್ನಾಗಿ ಮಾಡುವುದು ಸಹಜ.

ಪರಿಸ್ಥಿತಿಗೆ ಹೇಗೆ ಉತ್ತರಿಸುವುದು, ಹೇಗೆ ನಿಭಾಯಿಸುವುದು....  ಒಂದು ಚಿದಂಬರ ರಹಸ್ಯವಾಗೇ ಉಳಿದುಬಿಡುತ್ತದೆ..

ಸುಮಾರು ಮೂರುವರೆ ಘಂಟೆಯಾಗಿತ್ತು..ಬೆಳಗಿನ ಜಾವ..

ಶ್ರೀ ಶ್ರೀ.. ಯಾರೋ ಕರೆದ ಹಾಗೆ..

ದ ರಾ ಬೇಂದ್ರೆಯವರ ಯುಗ ಯುಗಾದಿ ಕಳೆದರೂ.. ಹಾಡಿನಲ್ಲಿ ಬರುವಂತೆ.. "ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ" ತರಹ ಗಾಢವಾದ ನಿದ್ದೆ ಮಾಡುವ ಆಸಾಮಿ ನಾ.. ನಮ್ಮ ಮನೆಯಲ್ಲಿ ಹೇಳುವಂತೆ ಮೈಮೇಲೆ ಆನೆ ಹೋದರೂ ಎಚ್ಚರವಾಗದಂತಹ ವರವನ್ನು ಆ ಭಗವಂತ ನೀಡಿದ್ದಾನೆ..

ನಾ ಪೂರ್ತಿ ಗಾಢವಾದ ನಿದ್ದೆಯಲ್ಲಿದ್ದೆ.. ಶ್ರೀ ಶ್ರೀ ಮತ್ತೊಮ್ಮೆ ಕರೆದ ಹಾಗೆ.. ಕಣ್ಣು ಬಿಟ್ಟೆ ಗವ್ ಗತ್ತಲೆ.. ಏನೂ ಕಾಣುತ್ತಿರಲಿಲ್ಲ..

"ಶ್ರೀ ಶ್ರೀ.. "
ಐದಾರು ಬಾರಿ ಮೈಯನ್ನು ಅಲುಗಾಡಿಸಿದಾಗ ಎಚ್ಚರವಾಯಿತು ಮತ್ತೆ  ಗೊತ್ತಾಯಿತು.. ನನ್ನ ಮಡದಿ..

"ಏನಪ್ಪಾ"

"ಶ್ರೀ ... ಅಪ್ಪ ಕನಸಲ್ಲಿ ಬಂದಿದ್ರು.. ನೋಡು ಸವಿ ನಿನ್ನ ಬಾಳಿನಲ್ಲಿ ಶ್ರೀಕಾಂತ ಬಂದದ್ದು ಫೆಬ್ರುವರಿ ೨೪ .. ನಾ ಇವಳನ್ನು ಬಿಟ್ಟು ಪರಲೋಕಕ್ಕೆ ಹೋಗಿದ್ದು ಜುಲೈ ೨೪.. ನನ್ನ ಬಾಳಸಂಗಾತಿ ನನ್ನ ಕೂಡಿಕೊಳ್ಳಲು ಹೊರಟಿದ್ದು ಫೆಬ್ರುವರಿ ೨೪..
ಈ ಇಪ್ಪತ್ತನಾಲ್ಕು ದಿನಾಂಕ ನಮ್ಮ ಬಾಳಿನಲ್ಲಿ ವಿಶೇಷವಾಗಿದೆ.. ಹೀಗೆ ಹೇಳಿದರು ಶ್ರೀ.. "

ನಾ ನನ್ನ ಮಡದಿಯ ತಲೆ ಸವರಿ "ನೋಡು ಟಿ.. ಜೀವನದಲ್ಲಿ ಹೀಗೆ ಆಗುವುದು ಸಹಜ.. ಕಳೆದುಕೊಂಡ ನೋವಿನ ಅರಿವು ನನಗಿದೆ.. ನಾವು ಸುಖವಾಗಿ ನೆಮ್ಮದಿಯಿಂದ ಇದ್ದದರಲ್ಲಿ ತೃಪ್ತಿ ಪಡುತ್ತಾ ನಲಿವಿನಿಂದ ಬಾಳ್ವೆ ಮಾಡಿದರೆ ಅದೇ ನಾವು ಅಗಲಿದ ಜೀವಕ್ಕೆ ತೋರುವ ಗೌರವ.. "

ಕಣ್ಣಲ್ಲಿ ನೀರಿತ್ತು.. "ಹೌದು ಶ್ರೀ.. ನಿಮ್ಮ ಮಾತು ಸರಿ" ಎಂದಳು..

ಇವಳು ಭಾವುಕಳಾಗುವುದು ತುಂಬಾ ವಿರಳ.. ನಾ ಆಗೊಮ್ಮೆ ಈಗೊಮ್ಮೆ ಈ ಹದಿನೈದು ವರ್ಷಗಳಲ್ಲಿ ಕಂಡಿದ್ದೇನೆ... ಇವಳ ಈ ಮಾತು ಮತ್ತು ಕನಸಿನಲ್ಲಿ ಮೂಡಿಬಂದ ಮಾತುಕತೆ ನನ್ನನ್ನು ಹಿಂದಿನ ದಿನಕ್ಕೆ ಕರೆದೊಯ್ದಿತು.

ಬೆಳಿಗ್ಗೆ ಎದ್ದು ನನ್ನ ನಿತ್ಯ ಕರ್ಮಗಳನ್ನು ಮುಗಿಸಿ ಆಫೀಸಿಗೆ ಹೊರಟಾಗ ಸುಮಾರು ಏಳು ಘಂಟೆ.. ಅಂದು ಜಗತ್ತೇ ಮೃತ್ಯುಂಜಯ ಭಕ್ತರ ಭಕ್ತ ಪರಶಿವನ ದಿನ ಅಂದರೆ ಮಹಾಶಿವರಾತ್ರಿ... ಎಲ್ಲೆಡೆಯೂ ಸಂಭ್ರಮ. ಫೇಸ್ಬುಕ್ ವಾಟ್ಸಾಪ್              ಇ -ಮೇಲ್ ಎಲ್ಲಾ ಕಡೆಯೂ ಶಿವಮಯ...  ಸರ್ವಂ ಶಿವಮಯಂ.. !

ಆ ಕಡೆಯಿಂದ ಕರೆಬಂತು.. "ಶ್ರೀಕಾಂತ್ ಬೇಗ ಬನ್ನಿ .. ಅಮ್ಮನನ್ನು (ನನ್ನ ಅತ್ತೆಯನ್ನು) ತುರ್ತು ನಿಗಾ ಘಟಕಕ್ಕೆ ಕರೆದುಕೊಂಡು ಹೋಗಿದ್ದಾರೆ.. ರಕ್ತದ ಒತ್ತಡ ಬಹಳ ಕಡಿಮೆಯಾಗಿದ್ದ ಕಾರಣ, ಹೀಮೋಗ್ಲೋಬಿನ್ ನಿರಂತರವಾಗಿ ಕಡಿಮೆಯಾಗುತ್ತಿರುವ ಕಾರಣ.. ವೈದ್ಯರು ಉಳಿಯುವುದು ಕಷ್ಟ ಎಂದಿದ್ದಾರೆ.. " ಮಡದಿಯನ್ನು ನೋಡಿದೆ. ಕಣ್ಣಲ್ಲಿ ಪ್ರವಾಹ ಉಕ್ಕುತ್ತಿತ್ತು.. ಹಾಗೆ ಸಮಾಧಾನ ಮಾಡಿ.. ಕಾರಿನಲ್ಲಿ ಕೂತೆವು..

ಆಸ್ಪತ್ರೆಗೆ ಬರುವತನಕ ಇವಳಿಗೆ ನೆಮ್ಮದಿಯಿಲ್ಲ... ದಡ ದಡನೆ ಮೂರನೇ ಮಹಡಿಗೆ ಬಂದೆವು.. ಅಲ್ಲಿ ನನ್ನ ಮಡದಿಯ ಅಣ್ಣ.. ಅಮ್ಮ ಉಳಿಯುವುದು ಕಷ್ಟ ಅಂತ ಹೇಳಿ ಬಿಕ್ಕಳಿಸಲು ಶುರುಮಾಡಿದರು.. ಇವಳು ಹೃದಯ ಒಡೆಯುವಂತೆ ಅಳಲು ಶುರುಮಾಡಿದಳು.. ಇಬ್ಬರನ್ನು ಸಮಾಧಾನ ಪಡಿಸಿ.. ನಾ ನನ್ನ ಮನೆಗೆ ವಿಷಯ ಮುಟ್ಟಿಸಲು ಕೆಳಗೆ ಬಂದೆ.. ಅನಂತರ ಸುಮಾರು ಹತ್ತು ನಿಮಿಷದಲ್ಲಿ ಎಲ್ಲವೂ ಮುಗಿದಿತ್ತು..

ನಂತರದ ಕಾರ್ಯಕ್ರಮದ ಬಗ್ಗೆ ರೂಪುರೇಷೆಗಳು ಸಿದ್ಧವಾಗಿತ್ತು..

ಹಿರಿಯ ಸಂಬಂಧಿಗಳ ಅಭಿಪ್ರಾಯದಂತೆ.. ಅರಸೀಕೆರೆಯ ಬಳಿಯ ಕಲ್ಯಾಡಿ ಗ್ರಾಮಕ್ಕೆ ಹೋದೆವು.. ಅಂತ್ಯ ಸಂಸ್ಕಾರದ ಪದ್ಧತಿಗಳು ಆರಂಭವಾದವು..

ನನ್ನ ಕಣ್ಣುಗಳು ಮಂಜಾಗಿರಲಿಲ್ಲ.. ಆದರೆ ಹೃದಯದಲ್ಲಿ ಉಕ್ಕುತ್ತಿದ್ದ ನೀರವತೆಯ ಪ್ರವಾಹದ ಆಣೆಕಟ್ಟು ಯಾವಾಗ ಬೇಕಾದರೂ ಒಡೆದು ಹೋಗಲು ಸಿದ್ಧವಾಗಿತ್ತು.. ತದೇಕ ಚಿತ್ತದಿಂದ ಆ ಅಂತಿಮ ನಮನದ  ಸಂಸ್ಕಾರವನ್ನು ನೋಡುತ್ತಾ ಕೂತಿದ್ದೆ.

ಕೆಲವು ಘಂಟೆಗಳ ಹಿಂದೆ ನಮ್ಮ ಜೊತೆಯಲ್ಲಿ ಮಾತಾಡಿದ್ದ ಜೀವ.. ಇಂದು ನಾ ಮಾತಾಡಲಾರೆ ಎಂದು ಬಾಯಿಗೆ ಬಟ್ಟೆ ಬಿಗಿದುಕೊಂಡು ಮಲಗಿದ್ದರು.. ಕಣ್ಣುಗಳು ಶಾಶ್ವತವಾಗಿ ಮುಚ್ಚಿಕೊಂಡಿದ್ದವು.. ಜೀವದ ವಾಯು ತೆಗೆದುಕೊಂಡು ಉಸಿರಾಡುವ ಶ್ವಾಸಕೋಶ ಬರ ಪ್ರದೇಶದಲ್ಲಿ ಮುಚ್ಚಿದ ಅಂಗಡಿಯಂತೆ ಇತ್ತು.. ಸುಮಾರು ಒಂದು ವರ್ಷದಿಂದ ಮಾತ್ರೆಗಳು ಟಾನಿಕ್, ವೈದ್ಯಕೀಯ ಚಿಕಿತ್ಸೆಗಳಿಂದ ಬಳಲಿ ಕೃಷವಾಗಿದ್ದ ದೇಹದಲ್ಲಿ ಸತ್ವದ ಅಂಶವೇ ಇರಲಿಲ್ಲ.. ಆರೋಗ್ಯ ಭಾಗ್ಯ.. ಅದಿಲ್ಲದೆ ಹೋದರೆ ಏನೇ ಇದ್ದರೂ ನಿಷ್ಪ್ರಯೋಜಕ ಅನ್ನಿಸುವ ಉದಾಹರಣೆ ಕಣ್ಣ ಮುಂದಿತ್ತು..

ನನ್ನ ಗಮನ ಸುತ್ತಮುತ್ತಲ ಮಾತುಗಳು, ಅದರ ಹಿಂದಿನ ತಕರಾರುಗಳು, ಬೇಕಾಗಿದ್ದ, ಬೇಡವಾಗಿದ್ದ ಯಾವ ಮಾತುಗಳ ಕಡೆಯೂ ಲಕ್ಷ್ಯವಿರಲಿಲ್ಲ..ಒಂದು ರೀತಿಯ ವೇದಾಂತ ಜೀವಿಯ ಉತ್ತುಂಗದ ತುದಿಯಲ್ಲಿ ನಿಂತ ಅನುಭವ.. ಮನುಜನ ಜನ್ಮ ಇಷ್ಟೆಯೇ.. ಹುಟ್ಟುವುದು ಒಂದು ಕಡೆ.. ಬೆಳೆಯುವುದು ಒಂದು ಕಡೆ.. "ಕಡೆ" ಒಂದು ಕಡೆ.. ಅಯ್ಯೋ ಇಷ್ಟರ ನಡುವೆ ಲೆಕ್ಕವಿಲ್ಲದಷ್ಟು ಸುಂದರ ಕ್ಷಣಗಳನ್ನು ಅನುಭವಿಸಿದ ಹಿರಿಯ ಜೀವದ ಜೀವ,  ಒಂದು ಕ್ಷಣದಲ್ಲಿ ಪರಮಾತ್ಮನ ಪಾದದಡಿಗೆ ತೆರಳಿದ್ದು.. ಏಕೆ ಹೀಗೆ.. ಹೀಗಾದರೆ ಹೇಗೆ.. ಈ ರೀತಿಯ  ನೂರಾರು ಪ್ರಶ್ನೆಗಳು ಕಲ್ಲು ಒಗೆದ ಜೇನುಗೂಡಿನಿಂದ ಹಾರಿಬರುವ ಜೇನು ನೊಣಗಳಂತೆ ನನ್ನನ್ನು ಕಾಡಲು ಶುರು ಮಾಡಿದವು..

ಗೋವಿಂದ ಗೋವಿಂದ ಎನ್ನುತ್ತಾ ಎಲ್ಲರೂ ಆ ಹಿರಿಯಜೀವದ ಕಳೇಬರವನ್ನು ಹೆಗಲು ಕೊಟ್ಟು ನೆಡೆಯಲು ಶುರುಮಾಡಿದೆವು.. ಎಲ್ಲರಿಗೂ ಹೆಗಲು ಕೊಡಲು ಅವಕಾಶ ಮಾಡಿಕೊಡಿ.. ಇದು ಎಲ್ಲರ ಮಾತಾಗಿತ್ತು... ಒಂದು ೩೦೦ ಮೀಟರ್ ನೆಡೆದು ಹೊರಟೆವು.. ಕಣ್ಣಲ್ಲಿ ನೀರು... ಮನದಲ್ಲಿ ಪ್ರವಾಹ.. ಮೌನದಿಂದಾಚೆಗಿನ ಲೋಕದಲ್ಲಿ ಎಲ್ಲರೂ ವಿಹರಿಸುತ್ತಿದ್ದರು.. ಯಾರಿಗೂ ಮಾತಾಡಲು ಅವಕಾಶವಿರದ ಪರಿಸ್ಥಿತಿ ಅದು... ಮೌನವೇ ಒಳ್ಳೆಯ ಆಭರಣ ಎನ್ನಿಸಿದ ಹೊತ್ತು.

ಅಲ್ಲಿದ್ದ ಕಟ್ಟಿಗೆಯ ರಾಶಿಯನ್ನು ನೋಡಿದೆ... ಬಣ್ಣ ಕಳೆದುಕೊಂಡು ಅದು ತನ್ನ ಅಂತಿಮ ಪಯಣಕ್ಕೆ ಸಿದ್ಧವಾಗಿದೆ ಅನ್ನಿಸಿತು. ತೆಂಗಿನ ಕಾಯಿ ಸಿಪ್ಪೆ.. ತನ್ನ ಒಡಲಲ್ಲಿದ್ದ ಅಮೃತಧಾರೆಯನ್ನು ಧಾರೆಯೆರೆದು, ತನ್ನ ಪುಣ್ಯದ ಫಲ ಆಗಲೇ ಯಾವುದೇ ಅಡಿಗೆಯಲ್ಲಿ ಲೀನವಾಗಿದ್ದು.. ಈಗ ಬರಿ ತನ್ನ ದೇಹದ ಸಿಪ್ಪೆ ಮಾತ್ರ ನಿಮ್ಮ ಅನುಕೂಲಕ್ಕೆ ನಿಂತಿದ್ದೇನೆ ಎನ್ನುವಂತೆ ತೋರಿತು.. ತಾನು ಹಸಿರಾಗಿದ್ದಾಗ ಸುತ್ತ ಮುತ್ತಲ ಪ್ರದೇಶಕ್ಕೆ ನೆರಳು ನೀಡುತ್ತಿದ್ದೆ.. ಆದರೆ ನನ್ನ ಬಣ್ಣ ಹೋದ ಮೇಲೆ.. ಅಗ್ನಿದೇವನಿಗೆ ರಂಗು ತರಲು ನಾ ಆಹುತಿಯಾಗುತ್ತೇನೆ ಎಂದಿತ್ತು ತೆಂಗಿನ ಗರಿ...... !

ಇಷ್ಟೆಲ್ಲಾ ನೆಡಯುತ್ತಾ ಇದ್ದರೂ ನನಗೆ ಸಂಬಂಧವಿಲ್ಲ ಎನ್ನುವಂತೆ ಹಿರಿಯ ಜೀವ ಮಲಗಿತ್ತು.. ಸಂಸ್ಕಾರದ ಅಂತಿಮ ಹಂತ ತಲುಪಿತ್ತು.. ಕಡೆಯ ಬಾರಿ ಮುಖ ದರ್ಶನ ಮಾಡಿದರು.. ನಂತರ ಆ ದೇಹದ ಮೇಲೆ ಭವ ಬಂಧನದ ಯಾವುದೇ ಬಂಧವಿರಬಾರದು ಎಂದು.. ಕಟ್ಟಿದ್ದ ಹಗ್ಗ, ಬೆಸೆದಿದ್ದ ಅಂತಿಮ ಯಾತ್ರೆಯ ಚಟ್ಟ ಎಲ್ಲವನ್ನು ತನ್ನ ಮೊದಲಿನ ಸ್ಥಿತಿಯಿಂದ ಭಿನ್ನತೆ ಕಾಣುವಂತೆ ಮಾಡಲಾಯಿತು.. ಅಲ್ಲಿದ್ದ ಪುರೋಹಿತರು... ಆ ದೇಹ ತೊಟ್ಟಿದ್ದ ಬಟ್ಟೆಯನ್ನು ಸ್ವಲ್ಪವೇ ಹರಿಯಿರಿ ಎಂದಾಗ... ಪೂರ್ತಿ ಹರಿಯಬೇಕೆ.. ಅಥವಾ ತುಸುವೇ ಹರಿಯಬೇಕೆ ಎನ್ನುವ ಜಿಜ್ಞಾಸೆ ಹುಟ್ಟಿತು.. ಆಗ ಅಲ್ಲಿದ್ದ ಹಿರಿಯರು ಮತ್ತು ಪುರೋಹಿತರು. .. ಬೇಡ ಬೇಡ ಸ್ವಲ್ಪವೇ ಶಾಸ್ತ್ರಕ್ಕೆ ಹರಿಯಿರಿ ಸಾಕು "ಬೆತ್ತಲೆ ಮಾಡಬಾರದು" ಎಂದರು..

ನನ್ನ ಯೋಚನಾ ಲಹರಿ ಮತ್ತೆ ಕಡಲಿನ ಅಲೆಗಳಂತೆ ಅಪ್ಪಳಿಸಲು ಶುರುಮಾಡಿದವು.. ಭಕ್ತ ಕುಂಬಾರ ಚಿತ್ರದಲ್ಲಿ ಅಣ್ಣಾವ್ರು ಹಾಡು "ಬರುವಾಗ ಬೆತ್ತಲೆ.. ಹೋಗುವಾಗ ಬೆತ್ತಲೆ.. ಬಂದು ಹೋಗುವ ನಡುವೆ ಕತ್ತಲೆ"   ಕಾಡುತ್ತಿತ್ತು.. ಮೌನವಾಗಿ ಅಂತರಂಗದಲ್ಲಿಯೇ ಹನಿಹನಿಯಾಗಿ ಕಣ್ಣೀರು ಇಂಗತೊಡಗಿತ್ತು..

ದೇಹದಲ್ಲಿ ಜಿಡ್ಡಿನ ಅಂಶ ಇಲ್ಲ ಅಂತ ಒಬ್ಬರು ಹೇಳಿದರು.. ಅದಕ್ಕೆ ಸಮವಾಗಿ.. ನನ್ನ ದೇಹವೂ ಒಣಗಿದ ವಾಟೆಗರಿಯಂತಾಗಿದೆ ಎಂದು ಕಟ್ಟಿಗೆ ಹಲ್ಲು ತೋರಿಸಿತು..  ಬ್ರಹ್ಮ ಸೃಷ್ಟಿಸಿದ ಕಟ್ಟಿಗೆ.. ಬ್ರಹ್ಮ ಸೃಷ್ಟಿಸಿದ ಈ ದೇಹವೆಂಬ ಕಟ್ಟಿಗೆ .. ಪೈಪೋಟಿ ಬಿದ್ದಂತೆ ಅಗ್ನಿದೇವನನ್ನು ಆಲಂಗಿಸಿಕೊಂಡು ಅಗ್ನಿಯ ಜಳಕ ಮಾಡಲು ಶುರುಮಾಡಿದವು... ಹಾಕಿದ್ದು ಕೆಲವೇ ಗ್ರಾಂ ತುಪ್ಪಾ.. ಕಾರಣ ತುಪ್ಪವೇ ಬೇಕಿರಲಿಲ್ಲ.. ಸಂಸಾರ ಸಾಗರದಲ್ಲಿ ಮುಳುಗೆದ್ದಿದ್ದ ಕಾಯ, ಸೂರ್ಯನ ತಾಪಕ್ಕೆ ಒಳಗಿನ ಜಲವನ್ನು ಸಂಪೂರ್ಣ ಆವಿಯಾಗಿಸಿಕೊಂಡಿದ್ದ ಕಟ್ಟಿಗೆ.. ಹೆಚ್ಚು ಹೊತ್ತು ಕಾಯಿಸದೆ ಅಗ್ನಿದೇವ ತನ್ನ ಕೆನ್ನಾಲಿಗೆಯನ್ನು ಎಲ್ಲಾ ದಿಕ್ಕುಗಳಲ್ಲಿಯೂ ಹಬ್ಬಿಸಿಕೊಂಡು ಭಕ್ಷಿಸಲು ಶುರುಮಾಡಿದ್ದ..

ಚಿತ್ರ ಕೃಪೆ - ಅಂತರ್ಜಾಲ 

ಸುಮಾರು ೪೫ ನಿಮಿಷಕ್ಕೂ ಹೆಚ್ಚು ನಾ ಅಲ್ಲಿಯೇ ಕುಳಿತ ಶಿವನ ಧ್ಯಾನ ಮಾಡಿದೆ..

ಸ್ಮಶಾನವಾಸಿ ಪರಮಶಿವ.. ಅವನ ಧ್ಯಾನ ರುಧ್ರಭೂಮಿಯಲ್ಲಿ.. ದಿನ ಶಿವರಾತ್ರಿಯ ಸುಮೂಹೂರ್ತ.. ಎಲ್ಲವೂ ಕನಸಲ್ಲಿ ನೆಡೆಯಿತ್ತಿದೆಯೇನೋ ಎನ್ನುವಂಥ ಭಾಸವಾಗುತ್ತಿತ್ತು..

ಇನ್ನೇನೂ ಹೊರಗೆ ಹೊರಡಬೇಕು . ಆ ಊರಿನ ಒಬ್ಬ ಹಿರಿಯ ವ್ಯಕ್ತಿ.. "ಬೆತ್ತಲೆ ಮಾಡದೆ ಸಂಸ್ಕಾರ ಮಾಡಬಾರದು.. "

ಆ ಕಡೆಯಿಂದ ಬಂದ ಉತ್ತರ.. "ಬೆತ್ತಲೆ ದಹನ ಮಾಡಬಾರದು..."

ಹಳ್ಳಿಯಾವ ನೋಡಿದರೆ ಅಕ್ಷರಸ್ಥ ಅನ್ನಿಸುವ ಹಾಗಿರಲಿಲ್ಲ ಆತ  "ಹೆಣಕ್ಕೇನೂ ಗೊತ್ತು ಬೆತ್ತಲೆ"

ನಾ ಸರ್ರನೆ ತಿರುಗಿ ನೋಡಿದೆ.. ನಿರ್ಮಲ ಮುಖ ಆತನದು.. ಆದರೆ ಆತ ಹೇಳಿದ ಆ ಮೂರು ಪದಗಳು.. ಅಬ್ಬಾ

ಆ ಮನುಷ್ಯ ಹೇಳಿದ್ದು ಮೂರೇ ಮೂರು ಪದಗಳು.. ಅರ್ಥ ಇಡೀ ಸಂಸಾರದ ಸಾರವೇ ಈ ಮೂರು ಪದಗಳಲ್ಲಿ ಮೂಡಿಬಂದದ್ದು.. ಮೊದಲೇ ಮೊಸರು ಗಡಿಗೆಯಾಗಿದ್ದ ನನ್ನ ತಲೆ ಇನ್ನಷ್ಟು ಕದಡಿ ಹೋಗಲು ಶುರುಮಾಡಿತು..

ಬೆಂಗಳೂರಿಗೆ ಬಂದ ಮೇಲೂ ನನಗೆ ಆ ಸಾಲುಗಳೇ ಕಾಡತೊಡಗಿತು..!!!

Monday, February 13, 2017

ಕಾಣದಂತೆ ಮಾಯವಾದನೋ .... ಭಾಗ - ೧

ಹಚ್ಚಿದ್ದ ಕಿಂಗ್ ಇನ್ನೂ ಮುಗಿದಿರಲಿಲ್ಲ.. ಆಗಲೇ ಆಶ್ ಟ್ರೇ ತುಂಬಾ ಕಿಂಗ್ ತುಂಡುಗಳು ತುಂಬಿತ್ತು. ಕೂತಿದ್ದ ಆಫೀಸಿನ ಕೊಠಡಿ ದಟ್ಟವಾದ ಧೂಮದಿಂದ ತುಂಬಿತ್ತು.. ಗಡಿಯಾರ ಬೆಳಗಿನ ಜಾವ  ಮೂರು ಎಂದು ಸಾರಿ ಸಾರಿ ಹೇಳುತ್ತಿತ್ತು. ಕುಡಿದು ಕಸದ ಬುಟ್ಟಿಯಲ್ಲಿ ಹಾಕಿದ್ದ ಟೀ, ಕಾಫಿ ಕಪ್ಪುಗಳು ನಿದ್ದೆಯನ್ನು ದೂರ ದೂರ ತಳ್ಳಿದ್ದು ನಾವೇ ಎಂದು ಸಾಕ್ಷ್ಯ ತೋರಿಸುತ್ತಿತ್ತು.

ಕೆದರಿದ ತಲೆಕೂದಲು, ಕೆಂಪಾದ ಕಣ್ಣುಗಳು.. ಅಸ್ತವ್ಯಸ್ಥವಾಗಿದ್ದ ಸಮವಸ್ತ್ರ.. ಟೇಬಲ್ ಮೇಲೆ ಹರಡಿದ್ದ ಫೈಲಿನ ಕಾಗದಗಳು, ಫೋಟೋಗಳು.. ಬೇರೆ ಏನನ್ನೋ ಹೇಳೋಕೆ ಕಾಯುತ್ತಿದ್ದವು. ಹೊರಗೆ ಜಿಟಿ ಜಿಟಿ ಮಳೆ... ತಾ ಹಿಡಿದಿದ್ದ ಕೇಸಿನ ತನಿಖೆ ಹೇಗೆ ಮುಂದುವರೆಸೋದು ಅನ್ನೋದು ಗೋಜಲಾಗಿತ್ತು.

"ಸಾರ್. .. ಇನ್ನೊಂದು ಕಾಫಿ ತರಲೆ.. "

ಯೋಚನಾ ಲಹರಿಯಲ್ಲಿದ್ದ  ರಾಜೇಶನನ್ನ ಮತ್ತೆ ಧರೆಗೆ ತಂದಿತು ಆ ಧ್ವನಿ..

"ಬೇಡ್ರಿ ಸೀನಪ್ಪ.. ಆಗಲೇ ಎಷ್ಟೊಂದು ಕಾಫಿ ಆಗಿದೆ..  ಬೆಳಿಗ್ಗೆ ಆಗಲಿ ಮನೆಗೆ ಹೋಗಿ ಸ್ನಾನ ಮಾಡಿ ಫ್ರೆಶ್ ಆಗಿ ಬರ್ತೀನಿ.. "

"ಸರಿ ಸಾಹೇಬ್ರೆ ಹಾಗೆ ಮಾಡಿ.. ಹಾಳಾದ್ದು ಸುಮ್ನೆ ನಮ್ಮ ತಲೆ ತಿನ್ನೋಕೆ ಹೀಗೆಲ್ಲಾ ಮಾಡ್ತಾರೆ.. " ಗೊಣಗಾಡುತ್ತಾ ಸೀನಪ್ಪ ತಮ್ಮ ಕುರ್ಚಿಯಲ್ಲಿ ಸೇರಿಕೊಂಡರು..

ಮಳೆ ತರುತ್ತಿದ್ದ ಗಾಳಿ, ಗಾಳಿ ತರುತ್ತಿದ್ದ ಮಳೆ.. ಮೈಯನ್ನು ನಡುಗಿಸುತ್ತಿತ್ತು.. ಥರ್ಮಾಸ್ ಫ್ಲಾಸ್ಕ್ ಗಳಲ್ಲಿ  ಕಾಫೀ, ಟೀ ತಳ ಕಂಡಿತ್ತು.. ಸ್ಟೇಷನ್ ಎದುರು ಇದ್ದ ಟೀ ಅಂಗಡಿಯವ ಕೊಟ್ಟಿದ್ದ ಮಿರ್ಚಿ ಮೆಣಸಿನಕಾಯಿ, ಮಿರ್ಚಿ ಬೋಂಡಾ ಆಗಲೇ ಹೊಟ್ಟೆಯೊಳಗೆ ಅಸ್ತಂಗತವಾಗಿದ್ದವು.. ಮಳೆಯಿಂದಾಗಿ ಅವನಿಗೂ ತಲೆ ಕೆಟ್ಟು ಮಧ್ಯರಾತ್ರೀ ಸುಮಾರು ಎರಡಕ್ಕೆ ಬಾಗಿಲು ಎಳೆದುಹೋಗಿದ್ದ.

ಅದು ಕಾಡಿನಂಚಿನಲ್ಲಿರುವ ಸ್ಟೇಷನ್.. ಜೊತೆಯಲ್ಲಿ ಎರಡು ರಾಜ್ಯಗಳ ಗಡಿಯಲ್ಲಿದ್ದದ್ದು..ತಪಾಸಣೆ, ಆರಕ್ಷಕ ಸಿಬ್ಬಂದಿ .. ಇದೆಲ್ಲದರ ಜೊತೆಯಲ್ಲಿ ಬಸ್ ಮತ್ತು ರೈಲ್ವೆ ನಿಲ್ದಾಣಗಳು ಆ ಸುತ್ತಮುತ್ತಲ ಪ್ರದೇಶವನ್ನು ಗಿಜಿ ಗಿಜಿ ಎನ್ನುವಂತೆ ಮಾಡಿತ್ತು.

ಪ್ರಯಾಣಿಕರು, ಊರಿಂದ ಊರಿಗೆ ಓಡಾಡುವವರು, ಕಾಡಿನ ಮೂಲಕ ಹೋಗುವವರು ಎಲ್ಲಾರೂ ಒಂದು ಬಾರಿ ಅಲ್ಲಿ ವಿಶ್ರಮಿಸಿ ಹೋಗುತ್ತಿದ್ದ ತಾಣವಾದದ್ದರಿಂದ ಬೋಂಡದ ಅಂಗಡಿಗೆ ಒಳ್ಳೆಯ ವ್ಯಾಪಾರವಾಗುತ್ತಿತು.. ಆದರೆ ಯಾಕೋ ಆ ಘಟನೆ ನೆಡೆದ ಒಂದು ವಾರದಿಂದ ಯಾರೂ ಅಲ್ಲಿ ಹೆಚ್ಚು ನಿಲ್ಲುತ್ತಿರಲಿಲ್ಲ. ಆದರೆ ವ್ಯಾಪಾರಿಗಳು ಓಡಾಡಲೇ ಬೇಕಿದ್ದ ಅನಿರ್ವಾರ್ಯತೆ ಇದ್ದದ್ದರಿಂದಲೋ ಏನೋ.. ಇಪ್ಪತ್ತನಾಲ್ಕು ಘಂಟೆ ತೆರೆದೇ ಇರುತ್ತಿದ್ದ ಆ ಬೋಂಡದ ಅಂಗಡಿಗೆ ಗಿರಾಕಿಗಳು ಮೊದಲಿನಷ್ಟು ಇಲ್ಲದೆ ಇದ್ದರೂ, ತಡರಾತ್ರಿ ತನಕ ಹಾಗೂ ಹೀಗೂ ತನ್ನ ಸರಕನ್ನು ಮಾರುತ್ತಿದ್ದ ಆ ಅಂಗಡಿ ಮಾಲೀಕ ಗಣೇಶ.

ಒಂದು ರೀತಿಯಲ್ಲಿ ಗವ್ವ್ ಎನ್ನುವ ಕತ್ತಲೆ, ಈ ಮಳೆಯ ಕಾಟ.. ಚಳಿ.. ರಾಜೇಶನಿಗೆ ಬೆಳಿಗ್ಗೆ ಆದರೆ ಸಾಕು ಎನ್ನಿಸುತ್ತಿತ್ತು..

"ರೀ ಸೀನಪ್ಪ.. ಹಾಗೆ ಮಲಗಿರ್ತೀನಿ ಕಣ್ರೀ.. ಫೋನ್ ಏನಾದರೂ ಬಂದರೆ ನೀವೇ ಅಟೆಂಡ್ ಮಾಡಿ.. "

"ಸರಿ ಸಾಹೇಬ್ರೆ.. ನೀವು ತುಂಬಾ ಸುಸ್ತಾಗಿದ್ದೀರಾ.. ನಡೀರಿ ಸಾಹೇಬ್ರೆ ನಾನೇ ಮನೆಗೆ ಬಿಟ್ಟುಬರುತ್ತೇನೆ"

"ಬೇಡ ಸೀನಪ್ಪ.. ನೀವು ನನ್ನ ಜೊತೆ ತಿರುಗಿ ತಿರುಗಿ ಸುಸ್ತಾಗಿದ್ದೀರಾ.. ಸ್ವಲ್ಪ ಹೊತ್ತು ಇನ್ನೇನೂ ಬೆಳಗಾಗುತ್ತೆ.. ನಾ ಮನೆಗೆ ಹೋಗಿ ಸ್ವಲ್ಪ ಹೊತ್ತು ನಿದ್ದೆ ಮಾಡಿ ಬರುತ್ತೇನೆ.. ಬೆಳಿಗ್ಗೆ ರಂಗ ಬಂದ ಮೇಲೆ ನೀವು ಮನೆಗೆ ಹೋಗಿ ಆಮೇಲೆ ಬನ್ನಿ"

"ಸರಿ ಸಾಹೇಬ್ರೆ.. ಮಾತಾಡಿ ಆಯಾಸವು ಹೆಚ್ಚಾಗುತ್ತದೆ.. ನೀವು ಹಾಗೆ ನಿದ್ದೆ ಮಾಡಿ ನಾ ನೋಡಿಕೊಳ್ಳುತ್ತೇನೆ"

"ಥ್ಯಾಂಕ್ಸ್ ಕಣ್ರೀ.. ಸೀನ...... " ಇನ್ನೂ ವಾಕ್ಯವನ್ನು ಪೂರ್ತಿ ಮಾಡಿರಲಿಲ್ಲ.. ಆಗಲೇ ಕಣ್ಣು ಭಾರವಾಗಿತ್ತು.. ಹಾಗೆ ಕುರ್ಚಿಗೆ ಒರಗಿಕೊಂಡು ಕಣ್ಣು ಮುಚ್ಚಿದ್ದ..

"ಪಾಪ ಸಾಹೇಬ್ರು.. ಹಗಲು ರಾತ್ರಿ ಅನ್ನದೆ ಡ್ಯೂಟಿ ಮಾಡ್ತಾರೆ.. ಪಾಪ ಚೆನ್ನಾಗಿ ನಿದ್ದೆ ಮಾಡಲಿ" ಎಂದು ಹೇಳಿಕೊಳ್ಳುತ್ತಾ.. ಸ್ಟೇಷನ್ ಕಿಟಕಿ ಬಾಗಿಲು ಎಲ್ಲಾ ಮುಚ್ಚಿ.. ಹೊರಗಿನ ಒಂದೇ ದೀಪ ಬಿಟ್ಟು ಮಿಕ್ಕ ದೀಪಗಳನ್ನು ಆಫ್ ಮಾಡಿದ..

ಸೀನಪ್ಪನ ಮನಸ್ಸು ಒಮ್ಮೆ ಹಿಂದಕ್ಕೆ ಜಾರಿತು.. ಕಾಡಿನ ಅಂಚಿನಲ್ಲಿದ್ದ ಪೊಲೀಸ್ ಸ್ಟೇಷನ್ ಹತ್ತಿರದ ಒಂದು ಮರದ ಹತ್ತಿರ ಬೆಳಿಗ್ಗೆಯಿಂದ ಒಬ್ಬ ವ್ಯಕ್ತಿ ಕೂತಿದ್ದಾನೆ ಎಂದು ಫಾರೆಸ್ಟ್ ಚೆಕ್ ಪೋಸ್ಟ್ ನವರು ಹೇಳಿದ್ದರು. ಕಾಡಲ್ಲವೇ ಸುಮ್ಮನೆ ವಿಶ್ರಾಂತಿಗೆಂದು ಕೂರುವವರು ಇರುತ್ತಾರೆ ಎಂದು ಅಷ್ಟೊಂದು ತಲೆ ಕೆಡಿಸಿಕೊಂಡಿರಲಿಲ್ಲ.. ಜೊತೆಯಲ್ಲಿ ಗಿಜಿ ಗಿಜಿ ಜನಜಂಗುಳಿ, ಕಡತಗಳು ಆ ವ್ಯಕ್ತಿಯ ಮೇಲೆ ಗಮನ ಹರಿಸಲು ಆಗಿರಲಿಲ್ಲ.. ಆದರೆ ಸಂಜೆಯಾದರೂ ಆ ವ್ಯಕ್ತಿ ಏಳದೆ ಇದ್ದದ್ದು ನೋಡಿ.. ಯಾಕೋ ಅನುಮಾನ ಬಂದು.. ಜನ ಸೇರಿದರು.. ಆಗ ಗೊತ್ತಾಗಿದ್ದು.. ಆ ವ್ಯಕ್ತಿಯ ಹೃದಯ ಬಡಿತ ನಿಂತು ಹೋಗಿತ್ತು.. ಎಂದು..

ಶವ ತಪಾಸಣೆ ಎಂದು..ವ್ಯಕ್ತಿಯ ಜೇಬನ್ನೆಲ್ಲ ಹುಡುಕಿದಾಗ.. ಸಿಕ್ಕ ಒಂದು ಪತ್ರವನ್ನು ನೋಡಿ ರಾಜೇಶ ಅಕ್ಷರಶಃ ಒಮ್ಮೆ ಬೆವತಿದ್ದ..

"ಏನ್ರಿ ಸೀನಪ್ಪ ಇದು? ಹೀಗೆಲ್ಲಾ.... ?"

"ಸೀನಪ್ಪ .. ಸೀನಪ್ಪ.. ನೀನು ಸರಿ ಇದ್ದೀಯ.. ನೀನು ನಿದ್ದೆ ಮಾಡಿದ್ದೀಯಾ.. " ರಂಗ ಬಂದು ಅಲುಗಾಡಿಸಿದಾಗ.. ಎಚ್ಚರ.. ಸೀನಪ್ಪನಿಗೆ.. ಯೋಚನೆ ಮಾಡುತ್ತಾ ಅದು ಯಾವಾಗ ನಿದ್ದೆಗೆ ಜಾರಿದ್ದನೋ ಅರಿವಿಲ್ಲ..

"ಸರಿ ಸರಿ ಸೀನಪ್ಪ.. ನೀ ಹೊರಡು.. ಹಾಗೆ ಸಾಹೇಬ್ರ ಜೀಪನ್ನು ನೀನೆ ಡ್ರೈವ್ ಮಾಡಿಕೊಂಡು ಹೋಗು.. "

"ಆಅಹ್!.. ಸಾಹೇಬ್ರ ಜೀಪಾ?.. ಅವರೆಲ್ಲಿ ಹೋದ್ರು..? "

"ನೀ ಮಲಗಿದ್ದನ್ನು ನೋಡಿ ನಿನಗೆ ಒಂದು ಹೊದ್ದಿಕೆ ಹೊದ್ದಿಸಿ.. ಗಣೇಶನ ಅಂಗಡಿಯಲ್ಲಿ ಟೀ ಕುಡಿದು.. ರಂಗ ನಾ ಹೀಗೆ ನೆಡೆದು ಹೋಗುತ್ತೇನೆ.. ಸೀನಪ್ಪನಿಗೆ ಜೀಪು ತಗೊಂಡು ಹೋಗೋಕೆ ಹೇಳು.. ಬರುವಾಗ ನನ್ನ ಮನೆಯ ಹತ್ತಿರ ಬರಲಿ.. ನಾ ಜೊತೆಯಲ್ಲಿ ಬರುತ್ತೇನೆ ಎಂದು ಹೇಳಿ ಹೋಗಿದ್ದಾರೆ"

"ಅಯ್ಯೋ ಎಂಥಹ ಕೆಲಸ ಆಯಿತು.. ಪಾಪ ಸಾಹೇಬ್ರು.. .. ಸರಿ ನಾ ಹೋಗಿ ಬರುತ್ತೇನೆ.. "

ಮನೆಗೆ ಹೊರಟ ಸೀನಪ್ಪನ ತಲೆ ಮೊಸರು ಗಡಿಗೆಯಾಗಿತ್ತು..

ಇತ್ತ ರಾಜೇಶ ಕಿಂಗ್ ಹಚ್ಚಿಸಿಕೊಂಡು ಆರಾಮಾಗಿ ಆ ಬೆಳಗಿನ ಮಂಜಿನ ಹನಿಯಲ್ಲಿ ಕಾಡಿನ ಕಾಲುದಾರಿಯಲ್ಲಿ ಅಂಚಿನಲ್ಲಿದ್ದ ತನ್ನ ಮನೆಗೆ ನೆಡೆಯುತ್ತಾ ಸಾಗಿದ..

ಬೆಳಿಗ್ಗೆ ದಿನಪತ್ರಿಕೆ ಹಂಚುವವ, ಹಾಲು ಮಾರುವವ ಸಲಾಮು ಹೊಡೆಯುತ್ತಾ ಸಾಗುತಿದ್ದರು.. ಮನೆ ತಲುಪಿ.. ಸುಸ್ತಾಗಿದ್ದ .. ಮನೆಯ ಹಾಲಿನಲ್ಲಿದ್ದ ದೀವಾನ್ ಮೇಲೆ ಹಾಗೆ ವಿರಮಿಸಿದ.. ಕಣ್ಣುಗಳು ಎಳೆದುಕೊಂಡು ನಿದ್ರಾದೇವಿಯನ್ನು ಆಲಂಗಿಸಿಕೊಂಡಿತ್ತು..

ಗಡಿಯಾರ ಹನ್ನೊಂದು ಘಂಟೆ ಎಂದು ಹೊಡೆದಾಗಲೇ ರಾಜೇಶನಿಗೆ ಎಚ್ಚರ..   ಟ್ರಾನ್ಸ್ಫರ್ ಕೆಲಸವಾದ್ದರಿಂದ ಮಡದಿ ಮತ್ತು ಮಗ ಊರಿನಲ್ಲಿಯೇ ಇದ್ದರು.. ಇವನು ಮಾತ್ರ ವಾರಕ್ಕೊಮ್ಮೆ ಹೋಗಿ ಬರುತ್ತಿದ್ದ.. ಆದರೆ ಈ ಕೇಸು ಹಿಡಿದಾಗಿಂದ.. ಮನೆಗೆ ಹೋಗಿರಲೇ ಇಲ್ಲ..

ಕೆಲಸದವ ಮಾಡಿಟ್ಟಿದ್ದ ಕಾಫಿ ಬಗ್ಗಿಸಿಕೊಂಡು, ಪೇಪರ್ ಓದುತ್ತಾ.. ಟಿವಿ ಆನ್ ಮಾಡಿದ..

"ಏನೋ ಕಪ್ಪಗಿದ್ದಾಳೆ ಅಂದಿದ್ದೆ.. ಒಳ್ಳೆ ಆಪಲ್ ಇದ್ದಾಗೆ ಇದ್ದಾಳಲ್ಲೋ.. "
ಅಯ್ಯೋ ಫೂಲ್ ನೀ ಯಾರನ್ನೂ ನೋಡಿದೆಯೋ" ಹೀಗೆ ತನ್ನ ನೆಚ್ಚಿನ ಅಣ್ಣಾವ್ರ ಚಿತ್ರ "ಚಲಿಸುವ ಮೋಡಗಳು" ಚಿತ್ರ ಉದಯ ಮೂವೀಸ್ ನಲ್ಲಿ ಬರುತ್ತಿತ್ತು.. ಹಾಗೆ ಮೈ ಮರೆತು ನೋಡುತ್ತಿದ್ದ..

ಸ್ವಲ್ಪ ಹೊತ್ತಾದ ಮೇಲೆ "ಕಾಣದಂತೆ ಮಾಯವಾದನೋ ನಮ್ಮ ಶಿವ ಕೈಲಾಸ ಸೇರಿಕೊಂಡನೋ.. ಕೊಡುವುದನ್ನು ಕೊಟ್ಟು.. ಬಿಡುವುದನ್ನು ಬಿಟ್ಟು ಕೈಯ ಕೊಟ್ಟು ಓಡಿ ಹೋದನೋ" ಲೋಹಿತ್ ಹಾಡಿ ಅಣ್ಣಾವ್ರು-ಅಂಬಿಕಾ ಕುಣಿದಿದ್ದ ಹಾಡು ಬರುತ್ತಿತ್ತು..

ಅರೆ.. ಆ ಸತ್ತ ವ್ಯಕ್ತಿಯ ಹೆಸರು ಶಿವ.. ಅವನು ಕೂಡ ಕೈಲಾಸವಾಸಿಯಾಗಿದ್ದಾನೆ....

"ಕತ್ತಲ್ಲಲ್ಲಿ ನ್ಯಾಯವಿಟ್ಟನೋ ನಮ್ಮ ಶಿವ"

ಹುರ್ರೆ.. ಹುರ್ರೇ..

ತಕ್ಷಣ ತನ್ನ ಮೊಬೈಲ್ ತೆಗೆದುಕೊಂಡು ಸೀನಪ್ಪನಿಗೆ "ರೀ ಸೀನಪ್ಪ.. ನೀವು ಸೀದಾ ಸ್ಟೇಷನ್ನಿಗೆ ಹೋಗಿ.. ಎದುರು ಬೋಂಡಾ ಅಂಗಡಿಯ ಗಣಪನನ್ನು ಕರೆದುಕೊಂಡು ನಮ್ಮ ಮನೆಗೆ ಬನ್ನಿ"

ಕತ್ತಲಲ್ಲಿ ಬೆಳಕು ಮೂಡಿದ ಅನುಭವ.. ತಕ್ಷಣ ಇನ್ನೊಂದು  ಫೋನ್ ರಂಗನಿಗೆ "ರೀ ರಂಗ.. ಅಣ್ಣಾವ್ರ ಚಲಿಸುವ ಮೋಡಗಳು ಚಿತ್ರದಲ್ಲಿ ಕಾಣದಂತೆ ಮಾಯವಾದನೋ ಹಾಡಿನ ಸಾಹಿತ್ಯ ನನಗೆ ಬೇಕು.. ನಿಮ್ಮ ಮೊಬೈಲ್ ನಲ್ಲಿ ಆ ಹಾಡಿದೆ ಅಲ್ಲವೇ.. ನಿಧಾನಕ್ಕೆ ಕೇಳಿ ಕೇಳಿ ಇಡೀ ಹಾಡನ್ನು ಬರೆದುಕೊಂಡು ಬನ್ನಿ.. "

ರಂಗ ತಲೆ ಕೆರೆದುಕೊಂಡ.. ಸೀನಪ್ಪನ ಜೀಪು ಪೊಲೀಸ್ ಸ್ಟೇಷನ್ ಬಾಗಿಲಲ್ಲಿ ಕಿರ್ರ್ ಸದ್ದು ಮಾಡುತ್ತಾ ಬ್ರೇಕ್ ಹಾಕಿ ನಿಂತಿತು.. !!! 

Wednesday, February 1, 2017

To be, or not to be - A Experience!!!

"To be, or not to be" a famous punching line from William Shakespeare's Hamlet.. 

My situation was also on the same lamp post, neither here nor there. As a practice from so many years, morning as soon I woke up, I closed my eyes, and sat for a while.  A strange decision I took, and decided to walk-in to the invitation!!!

A decision sounded a like a london's big ben clock alarm. Without blinking for the second time, I was in the campus of the school!

The next two hours was a mesmerizing experience.  I had experience this kind of scene on the tracks of Dudsagar railway tracks in one of my adventurous trips/treks.  The goods carriage train was zooming past in-front of us with more than 50 plus bogies making rhythmic symphony.  

In the same way, students performance was one after another it was an awesome experience.  The students performed batch after batch. What was appreciable point was there was no lack of co-ordination. Two kids used to walk up to the stage, applauds the previous performance, and few words on the environment, mother earth..by the time they finish two or three lines, the other kids would take their position to ignite a stellar performance.  

I found some of the kids doing a small jig on the stage itself... waah!

Teachers, encouraging each and every minute of the program, students were on high with energy, jumping with joy, there was no limit for their enthusiasm.. such was the energy in the auditorium.  I honestly felt, there was no single second of boredom.  If there was any equipment to measure the enthusiasm level in the auditorium, probably, the equipment would have failed to show the maximum score, coz, sky was only the limit.  

Honestly this is not an exaggerated words, but it is just shot from the heart unfiltered.  

It all started with a back to school experience.  The rhythmic bands, the inspiring guard of honor, wow...and as soon as entered the auditorium, thunderous welcome by clapping students and parents..words fail to express :-)

The guests from various phases in the society, The Commander, The Doctor, The Political activist, The IT engineer, The Journalist, The Teacher and The Automotive Industry representative..a rare and wonderful combination.  

Every kid out there was a special one.  Their performance on the stage was wonderful, so their performance in the academics, cultural programs and sports.  The talent evenly distributed across all the segments of student carrier.  Play while Playing, Learn while Learning the mantra for success.  

I could not blink my eyes twice in the whole event, coz, if i blinked, i would have missed a step or two of these energy filled kids.  

When the prize was distributed to the talented kids, I felt, I was stuck by their enthusiasm.  While coming back home, My soul was fully energised, when i looked at the mirror, my soul said....Sri...thats it..If you had missed this, you would have missed something from your life...How true it turned out to be!!!!

Pics may not tell the complete story, but few pictures really do a difference in people life.  



One such picture would be the great entrance of the school, and of course the seven samurai who were part of this gala event!!!



My few words to the school channel was ",The doctor describes there are many blood groups..A+, B+, O+, A-, B- and so on....but irrespective of any blood group.. the B+ (Be positive) attitude .. keep that attitude, the attitude takes care of everything!!!



I should thank Mr. Prakash Jingade, who helped me to rewind my years, and travel back to three decades!  

When I walked out of the auditorium, I had a formatted soul as seen in the picture below :-)

I should thank and applaud the wonderful team efforts of the  kids, the parents, the teachers, the volunteers and the management of Ryan International School!

A Royal salute from my side to Ryan Ryan and Ryan!!!

Monday, January 30, 2017

ಹಿಂದಕ್ಕೆ ಓಡಿದ ಗಡಿಯಾರ ಸರಿ ಹೋಯಿತು!!!

ಬೆಳಿಗ್ಗೆ ಎದ್ದೆ..ಗೋಡೆಗೆ ನೇತು ಹಾಕಿದ್ದ ಗಡಿಯಾರ ಹಿಂದಕ್ಕೆ ಓಡಲು ಶುರುಮಾಡಿತ್ತು.. ಬ್ಯಾಟರಿ ಶಕ್ತಿ ಹೀನವಾಗಿದೆ ಎನ್ನಿಸಿ ಬದಲಿಸಿದೆ.. ಊಹುಂ.. ಸ್ವಲ್ಪ ಹೊತ್ತು ಅಷ್ಟೇ ಸರಿಯಾಗಿತ್ತು.. ಮತ್ತೆ ಹಿಂದಕ್ಕೆ ಓಡಲು ಶುರುಮಾಡಿತ್ತು.. ಸರಿ ಆಫೀಸಿಗೆ ಹೋಗುವ ಹೊತ್ತಾಗಿತ್ತು... ಸಂಜೆ ನೋಡೋಣ ಅಂತ.. ಆಫೀಸಿಗೆ ಹೊರಟೆ..

ಆದರೆ ತಲೆಯಲ್ಲಿ ಒಂದು ಹುಳ ಹೊಕ್ಕಿಯೇ ಬಿಟ್ಟಿತ್ತು.. ಇಂದು ಗಡಿಯಾರ ಏತಕ್ಕೆ ಹಿಂದಕ್ಕೆ ಓಡುತ್ತಿದೆ... ? ಕೆಲವು ಪ್ರಶ್ನೆಗಳಿಗೆ ಉತ್ತರ ಹುಡುಕಬಾರದು.. ಉತ್ತರ ತಾನಾಗೇ ಬರಬೇಕು ಎನ್ನುವುದು ನನ್ನ ಸಿದ್ಧಾಂತ.. ಅಪ್ಪನಿಂದ ಕಲಿತದ್ದು.. ಸುಮ್ಮನಾದೆ.. ಆಫೀಸಿನ ಕೆಲಸಗಳಲ್ಲಿ ತಲ್ಲೀನನಾದೆ.. !

ಕೈಗಡಿಯಾರ.. ೧೧.೩೦ ಎಂದು ತೋರಿಸಿತು.. ಸರಿ ಆಫೀಸ್ ಬಾಸ್ ಗೆ ಹೇಳಿ.. ಹೊರಟೆ.. ಮಾರ್ಗ ಗೊತ್ತಿದ್ದರಿಂದ ಗೊಂದಲವಿರಲಿಲ್ಲ.. .. !

"ಸರ್.. ಮೇನ್ ಗೇಟ್ ಹೈ.. ಉದರ್ ಪಾರ್ಕ್ ಕೀಜಿಯೇ" ಸೆಕ್ಯೂರಿಟಿ ಸಿಬ್ಬಂದಿ  ಹೇಳಿದ ಹಾಗೆ ಆ ಕಡೆ ಹೋಗಿ ಇನ್ನೂ ಕಾರನ್ನು ನಿಲ್ಲಿಸಿರಲಿಲ್ಲ.. "ಶ್ರೀಕಾಂತ್ ಸರ್ ನಮಸ್ಕಾರ.. ಬನ್ನಿ ಬನ್ನಿ".. ಚಿರಪರಿಚಿತ ಎನ್ನಿಸುವಂಥ ಧ್ವನಿ.. ! ತಿರುಗಿ ನೋಡಿದೆ.. ಪ್ರಕಾಶ್ ಸರ್ ನಗುತ್ತ ನಿಂತಿದ್ದರು ಸ್ವಾಗತಿಸಲು.. !

"ಸರ್ ವಿಳಾಸ ಹುಡುಕೋಕೆ ಏನೂ ಕಷ್ಟವಾಗಲಿಲ್ಲ ಅಲ್ಲವೇ.. ಬನ್ನಿ ಹೀಗೆ ಬನ್ನಿ.. "

ಒಂದು ಹದಿನೈದು ಹೆಜ್ಜೆ ನೆಡೆದೆವು...

ಶಿಸ್ತಾಗಿ ಸಮವಸ್ತ್ರ ಧರಿಸಿದ್ದ ಶಾಲೆಯ ಬ್ಯಾಂಡ್ ಪಡೆ ನಿಂತಿತ್ತು.. ನಾ ಸುಮ್ಮನೆ ಒಂದು ನಗೆ ಕೊಟ್ಟು ಪ್ರಕಾಶ್ ಸರ್ ಜೊತೆಗೆ ಹೆಜ್ಜೆ ಇಟ್ಟೆ.. !

"ಸರ್ ಹೀಗೆ ಬನ್ನಿ ನಮ್ಮ "ಗಾರ್ಡ್ ಆಫ್ ಹಾನರ್" ಸ್ವೀಕರಿಸಿ.. " ಧ್ವನಿ ಬಂದತ್ತ ತಿರುಗಿದೆ.. ದೈಹಿಕ ಶಿಕ್ಷಣ ಅಧ್ಯಾಪಕರು ನಿಂತಿದ್ದರು ಹಸ್ತ ಲಾಘವ ನೀಡಿದರು.. ಟಿವಿಯಲ್ಲಿ ನೋಡಿದ್ದು ಗಾರ್ಡ್ ಆಫ್ ಹಾನರ್ ಹೇಗಿರುತ್ತೆ ಅಂತ..:-)

ಬ್ಯಾಂಡ್ ಪಡೆ ಲೀಲಾಜಾಲವಾಗಿ ಲಯಬದ್ಧವಾಗಿ ನುಡಿಸಿದರು.. ಸಲ್ಯೂಟ್ ಹೊಡೆದರು.. ಒಮ್ಮೆ ಮೈ ಜುಮ್ ಎಂದಿತು.. ಶಾಲಾದಿನಗಳಲ್ಲಿ ನೋಡಿದ್ದು.. !.. ಖುಷಿಯಾಯಿತು.. ಗೌರವ ರಕ್ಷೆ ಸ್ವೀಕರಿಸಿ.. ಮುಂದೆ ನೆಡೆದೆ.. ಇನ್ನೊಂದು ಗುಂಪು ವಿದ್ಯಾರ್ಥಿಗಳು ನನ್ನ ಮಧ್ಯೆ ನಿಲ್ಲಿಸಿ ಲಯಬದ್ಧವಾಗಿ ಹೆಜ್ಜೆ ಹಾಕುತ್ತ .. ನನ್ನ ಸುತ್ತಮುತ್ತಲು ರಕ್ಷಾಕವಚ ರಕ್ಷೆ ನೀಡಿದರು.. ಅಯ್ಯೋ ಮನಸ್ಸು ಹಾರುತ್ತಿತ್ತು.. ಎದೆ ಢವ ಢವ ಎನ್ನುತ್ತಿತ್ತು.. ಆದರೆ ಖುಷಿಯಾಗುತ್ತಿತ್ತು.. ಮನಸ್ಸಲ್ಲಿ ನನ್ನ ಶಾಲಾದಿನಗಳ ಗುರುಗಳಿಗೆ ನಮಿಸುತ್ತಾ.. ಗುರುಗಳೇ ಈ ಗೌರವ ನಿಮ್ಮ ಚರಣಕಮಲಗಳಿಗೆ ಅರ್ಪಿತಾ ಎಂದು ಹೇಳುತ್ತಾ ಶಾಲೆಯ ಆವರಣದೊಳಗೆ ಬಂದೆ..

"ಗುಡ್ ಆಫ್ಟರ್ ನೂನ್ ಸರ್.. ವೆಲ್ಕಮ್ ಟು ಅವರ್ ಸ್ಕೂಲ್.. ಕ್ಯಾನ್ ಐ ಟ್ಯಾಗ್ ದಿ ಬ್ಯಾಡ್ಜ್"
"ಥ್ಯಾಂಕ್ ಯು.. " ಅಂತ ಹೇಳಿ ಬ್ಯಾಡ್ಜ್ ಲಗತ್ತಿಸಿಕೊಂಡು ಹೊರಟೆ..

ಒಂದು ಸಂದರ್ಶಕರ ಕೋಣೆಗೆ ಕರೆದೊಯ್ದ ಕೂರಿಸಿದರು.. ಕುಡಿಯಲು ನೀರು ಮತ್ತು ನನ್ನ ಇಷ್ಟವಾದ ಕಾಫಿ ಬಂತು..
ಅಷ್ಟರಲ್ಲಿ ಇನ್ನಿಬ್ಬರು ಅತಿಥಿಗಳು ಬಂದರು.. ಶ್ರೀ ಅರುಣ್ ಮತ್ತು ಡಾ. ವೀಣಾ ಬಂದರು ಮತ್ತು ಅವರ ಇನ್ನೊಬ್ಬ ಗೆಳತೀ ಬಂದರು .. ಪರಿಚಯ ಮಾಡಿಕೊಂಡು ಮಾತಾಡುತ್ತಿದ್ದೆವು. ಒಬ್ಬರು ಹಿರಿಯರು ಶ್ರೀ ಪ್ರಕಾಶ್ ಅಂಬೆರ್ಕರ್ ಮತ್ತು ಶ್ರೀ ಗಂಗಾಧರ್ ಕಂಬಿಮಠ್ ಬಂದರು.. ಅವರ ಹಿಂದೆಯೇ ಕಮಾಂಡರ್ ಸಿಂಗ್ ಬಂದರು.. ಒಟ್ಟಿನಲ್ಲಿ ನಾನು ಸೇರಿ ಏಳು ಮಂದಿ ಅತಿಥಿಗಳಾಗಿ ಶಾಲೆಗೆ ಬಂದಿದ್ದೆವು.

ಅವರವರ ಕಾರ್ಯಕ್ಷೇತ್ರದಲ್ಲಿ ನುರಿತ ಪರಿಣಿತರ ಜೊತೆ ನಾ ಇದ್ದೆ ಅನ್ನೋದು ಹೆಮ್ಮೆ ಎನ್ನಿಸಿತು.. ಒಬ್ಬರೊಬ್ಬರ ಪರಿಚಯ ಮಾಡಿಕೊಂಡು ಶಾಲೆಯ ಸಭಾಂಗಣಕ್ಕೆ ಬಂದೆವು.. ವಿದ್ಯಾರ್ಥಿಗಳು ಪ್ರತಿಯೊಬ್ಬ ಅತಿಥಿಗೂ ಗೌರವ ರಕ್ಷೆ ನೀಡುತ್ತಲೇ.. ಶಾಲೆಯ ಬಗ್ಗೆ ತುಸು ಪುಟ್ಟ ವಿವರ ನೀಡಿದರು.. ಮಾತಿನಲ್ಲಿ ನಯವಿನಯ ಕಾಣುತ್ತಿತ್ತು.. ಅಧ್ಯಾಪಕ ವೃಂದ, ಕಾರ್ಯಕಾರಿಣಿ ಸಿಬ್ಬಂದಿ ಎಲ್ಲರೂ ಅಚ್ಚುಕಟ್ಟಾಗಿ ತಮ್ಮ ಕಾರ್ಯ ನಿರ್ವಹಿಸುತ್ತಿದ್ದರು...

ಅತಿಥಿಗಳ ಪುಟ್ಟ ಪರಿಚಯ.. ಕರತಾಡನಗಳೊಂದಿಗೆ ಸಭಾಂಗಣಕ್ಕೆ ಬಂದು ಕುಳಿತೆವು. ಎಲ್ಲರಿಗೂ ಒಂದು ಸಂತಸದ ಭಾವ  ತಮ್ಮ ಮೊಗದಲ್ಲಿ ಮನೆಮಾಡಿದ್ದು ಅವರನ್ನು ನೋಡಿದಾಗ ಅರಿವಾಗುತ್ತಿತ್ತು.

ಕಾರ್ಯಕ್ರಮ ಶುರುವಾಯಿತು.. ಮುಂದಿನ ಎರಡು ಘಂಟೆಗಳು ಹೇಗೆ ಕಳೆದೆವು ಅರಿವಾಗಲಿಲ್ಲ.. ಪುಟ್ಟ ಪುಟ್ಟ ಪುಟಾಣಿಗಳಿಂದ ನೆಡೆಯುತ್ತಿದ್ದ ಕಾರ್ಯಕ್ರಮ.. ಭೂತಾಯಿಯನ್ನು ರಕ್ಷಿಕೊಳ್ಳಬೇಕು ಎನ್ನುವ ಸಂದೇಶ  ಹೊತ್ತ ನೃತ್ಯಗಳು, ಹಾಡುಗಳು ಮನಸ್ಸೆಳೆದವು.. ಪ್ರತಿ ಕಾರ್ಯಕ್ರಮ ಮೂರರಿಂದ - ಐದು ನಿಮಿಷಗಳ ಒಳಗೆ ಇದ್ದರೂ.. ಅದಕ್ಕೆ ಸಿದ್ಧತೆ ಹಲವು ವಾರಗಳದ್ದು ಎಂದು ಅರಿವಾಗುತ್ತಿತ್ತು. ಎಲ್ಲಿಯೂ ಲಯತಪ್ಪದ ನಿರೂಪಣೆ, ಕಾರ್ಯಕ್ರಮದಲ್ಲಿ ರಂಗು ರಂಗಿನ ಪೋಷಾಕುಗಳಲ್ಲಿ ಸುಂದರವಾಗಿ ಕಾಣುತ್ತಿದ್ದ ಮಕ್ಕಳು, ಪುಟಿಯುವ ಉತ್ಸಾಹ.. ಮನಸ್ಸನ್ನು ಸೂರೆಗೊಂಡಿತ್ತು.

ಹಲವಾರು ವಿಭಾಗಗಳಲ್ಲಿ ವಿಜಯ ಸಾಧಿಸಿದ್ದ ಮಕ್ಕಳಿಗೆ ಬಹುಮಾನ ವಿತರಣೆ ಅತಿಥಿಗಳ ಉಪಸ್ಥಿತಿಯಲ್ಲಿ ವಿತರಿಸಿದರು. ಸ್ಪೂರ್ತಿಯ ಉತ್ತುಂಗದಲ್ಲಿದ್ದ ಮಕ್ಕಳು, ಖುಶಿಯ ಗೌರೀಶಂಕರದಲ್ಲಿದ್ದ ಆ ಮಕ್ಕಳ ತಂದೆ ತಾಯಿಯರು.. ಇದನ್ನೆಲ್ಲಾ ಕಂಡು ಅನುಭವಿಸುತ್ತಿದ್ದ ಮನಸ್ಸು ಹೇಳುತ್ತಿತ್ತು ಎಲ್ಲರೂ ಇಲ್ಲಿಗೆ ತಾವಾಗೇ ಬಂದಿಲ್ಲ.. ಬದಲಿಗೆ ಆ ದೇವನು ನಮ್ಮ ಶಾಲಾದಿನಗಳಿಗೆ ಮರಳಿ ಕರೆದೊಯ್ಯಲು ಸಿದ್ಧಪಡಿಸಿದ್ದ ಉಪಾಯ ಎಂದು ಅರಿವಾಗುತ್ತಿತ್ತು.




ರಾಷ್ಟ್ರಪಿತನಿಗೆ ಗೌರವ ಶ್ರದ್ಧಾಂಜಲಿ, ಶಾಲೆಯ ಗೀತೆ.. ಮತ್ತು ನಮ್ಮ ರಾಷ್ಟ್ರಗೀತೆ.. ಇದರಿಂದ ಈ ಸುಂದರ ಕಾರ್ಯಕ್ರಮಕ್ಕೆ ತೆರೆ ಎಳೆದರು.. ಭಾರತದ ಹಲವಾರು ಭಾಷೆಗಳಲ್ಲಿ ಸ್ವಾಗತ ಕೋರಿದ್ದು ಮತ್ತು ಧನ್ಯವಾದಗಳನ್ನು ಹೇಳಿದ್ದು ವಿಶೇಷ ಎನಿಸಿತ್ತು.

ಅತಿಥಿಗಳಿಗೆ ಲಘು ಉಪಹಾರ.. ನಂತರ..  ಬಂದ ಅತಿಥಿಗಳ ಒಟ್ಟಿಗೆ ಒಂದು ಫೋಟೋ ತೆಗೆಸಿಕೊಳ್ಳಬೇಕು ಎಂಬ ನನ್ನ ಆಸೆಗೆ ಪ್ರಕಾಶ್ ಸರ್ ಅವರು ನೆರವಾದರು. ನಮ್ಮ ಅನಿಸಿಕೆಯನ್ನು ರಿಜಿಸ್ಟರ್ ನಲ್ಲಿ ದಾಖಲಿಸಲು ಅವಕಾಶ ಕೊಟ್ಟರು.. ನಂತರ ಅತಿಥಿಗಳಿಗೆ ಕೊಟ್ಟ ನೆನಪಿನ ಕಾಣಿಕೆಯನ್ನು ಸ್ವೀಕರಿಸಲು ಸ್ವಾಗತಕಾರಿಣಿಯ ಹತ್ತಿರ ಬಂದಾಗ.. ಇನ್ನೊಂದು ವಿಶೇಷ ಕಾಯುತ್ತಿತ್ತು..

ಶಾಲಾ ಕಾರ್ಯಕಾರಿಣಿ ತಂಡ ಬಂದ ಅತಿಥಿಗಳಿಗೆ ಕೆಲವು ಪ್ರಶ್ನೆಗಳನ್ನು ಕೇಳಿದರು.. ಅದನ್ನು ಚಿತ್ರೀಕರಿಸಿಕೊಂಡರು ಕೂಡ..
ಸಂತೃಪ್ತಿಯಿಂದ ಮೂರು ಘಂಟೆಗಳನ್ನು ಕಳೆದ ಸಾರ್ಥಕತೆ ನಮ್ಮದಾದರೆ.. ನಮ್ಮನ್ನು ಆಹ್ವಾನಿಸಿ ತಮ್ಮ ಶಾಲಾ ಕಾರ್ಯಕ್ರಮಕ್ಕೆ ಒಂದು ರಂಗು ತಂದಿದ್ದೇವೆ ಎನ್ನುವ ಖುಷಿ ಶಾಲೆಯವರಿಗೆ.. ಹೂವಿಂದ ನಾರು ಸ್ವರ್ಗಕ್ಕೆ ಸೇರಿತೋ ಅಥವಾ ನಾರಿನಿಂದ ಹೂವಿಗೆ ಸಾರ್ಥಕ ಭಾವ ಸಿಕ್ಕಿತೋ.. ಆದರೆ ಎಲ್ಲರಿಗೂ ಖುಷಿ ತಂದದ್ದು ಈ ಸಮಾರಂಭದ ವಿಶೇಷವಾಗಿತ್ತು ಎಂದರೆ.. ಉತ್ಪ್ರೇಕ್ಷೆಯಲ್ಲ.. !!!!

ಹೊರಗೆ ಬಂದೆ.. ಕಾರು ಹತ್ತಿದೆ.. ದಾರಿಯಲ್ಲಿ ಬರುವಾಗ ಬೆಳಿಗ್ಗೆ ಗೋಡೆ ಗಡಿಯಾರ ಏತಕ್ಕೆ ಹಿಂದಕ್ಕೆ ಓಡುತ್ತಿತ್ತು ಎಂದು ಫಳ್ ಅಂತ ಹೊಳೆಯಿತು.. ಸರಿ ಕಾರನ್ನು ಸ್ವಲ್ಪ ಹೊತ್ತು ಬದಿಗೆ ನಿಲ್ಲಿಸಿದೆ.. ಹಾಗೆ ಆರಾಮಾಗಿ ಕೂತೆ.. ಮನಸ್ಸು ಹಕ್ಕಿಯ ಹಾಗೆ ಆಗಿತ್ತು..  ಬೆಳಿಗ್ಗೆಯಿಂದ ಇದ್ದ ಗೊಂದಲ ಪರಿಹಾರವಾಗಿತ್ತು.. !

ಶಿಸ್ತು ಬದ್ಧ ಬದುಕನ್ನು ರೂಪಿಸುವ ಈ ಶಾಲೆಗಳು ದೇಶದ ಅಭಿವೃದ್ಧಿ ಪಥವನ್ನು ನಿರ್ಧರಿಸುತ್ತದೆ
ಮಕ್ಕಳ ಸ್ಫೂರ್ತಿ, ಚಿಮ್ಮುವ ಉತ್ಸಾಹ.. ಅದರ ಹಿಂದೆ ಇದ್ದ ಅಧ್ಯಾಪಕರ ಪರಿಶ್ರಮ ಎದ್ದು ಕಾಣುತ್ತಿತ್ತು
ಎಲ್ಲಿಯೂ ಕಾರ್ಯಕ್ರಮ ಬೋರ್ ಅನ್ನಿಸಲಿಲ್ಲ
ಒಂದಾದ ಮೇಲೆ ಒಂದು ಕಾರ್ಯಕ್ರಮ ಬರುತ್ತಲೇ ಇತ್ತು..
ಸ್ವಯಂ ಸೇವಕರಾಗಿ ಪರಿಶ್ರಮಿಸುತ್ತಿದ್ದ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಸಹಕಾರ, ಮಾರ್ಗದರ್ಶನ, ಕಿರಿಯ ವಿದ್ಯಾರ್ಥಿಗಳು ಕೂಡ ಸಭಾಕಂಪನವಿಲ್ಲದೆ ಕಾರ್ಯಕ್ರಮವನ್ನು ನಿಭಾಯಿಸುತ್ತಿದ್ದ ರೀತಿ ವಾಹ್ ಎನ್ನಿಸಿತು..
ಕಡೆಯಲ್ಲಿ ರಾಷ್ಟ್ರಗೀತೆಯನ್ನು ಹಾಡುತ್ತಿದ್ದಾಗ ಕಂಡ ಶಿಸ್ತು ಇಷ್ಟವಾಯಿತು.. ಎಲ್ಲಾ ಮಕ್ಕಳು, ಅಧ್ಯಾಪಕರು, ಬಂದಿದ್ದ ಪೋಷಕರು ಎಲ್ಲರೂ ಒಕ್ಕೊರಲಿನಿಂದ ದನಿಗೂಡಿಸಿದ್ದು ರೋಮಾಂಚನದ ಅನುಭವ.. !

ಶಾಲಾ ದಿನಗಳು ಮಣ್ಣಿನ ಮುದ್ದೆಯಾಗಿದ್ದ ಮಕ್ಕಳಿಗೆ ಸರಿಯಾದ ರೂಪ, ಆಕಾರ ನೀಡುವ ಕುಂಬಾರನ ಚಕ್ರ ಎನ್ನುವುದನ್ನು ತೋರಿಸುತ್ತಿದ್ದ ಶಾಲೆಯಲ್ಲಿ.. ನಾವು ಕೂಡ ಪುಟ್ಟ ಪುಟಾಣಿಗಳಾಗಿದ್ದು ವಿಶೇಷ. ನಮಗೆ ಆ ಕ್ಷಣಕ್ಕೆ ನಮ್ಮ ಶಾಲಾದಿನಗಳಿಗೆ ಮರಳಿ ಹೋದಂತ ಅನುಭವ.. ಪಥ ಸಂಚಲನ, ಶಾಲಾ ಗೀತೆ, ನೃತ್ಯಗಳು, ರಾಷ್ಟ್ರಗೀತೆ, ಬಹುಮಾನ ವಿತರಣೆ ಮಾಡುವಾಗ ತಮ್ಮ ಸಹಪಾಠಿಗಳಿಗೆ ಬಹುಮಾನ ಸಿಕ್ಕಿದ್ದಾಗ ಪಡುವ ಸಂತಸ.. ಎಲ್ಲವೂ ಹಾಗೆ ಕಣ್ಣು ಮುಂದೆ ಬಂದಿತು..

ಇಂತಹ ಅದ್ಭುತ ರೀ-ವೈಂಡಿಂಗ್ ಕ್ಷಣಗಳಿಗೆ ನಮ್ಮನ್ನು ಕರೆದೊಯ್ಯುವಂತಹ ಅನುಭವಕ್ಕೆ ಸಾಕ್ಷಿಯಾದ ಶ್ರೀ ಪ್ರಕಾಶ್ ಜಿಂಗಾಡೆ ಅವರಿಗೂ ಮತ್ತು ರಿಯಾನ್ ಇಂಟರ್ನ್ಯಾಷನಲ್ ಶಾಲೆಯ ಆಡಳಿತ ಮಂಡಳಿ ಅವರಿಗೂ ನಮ್ಮ ಧನ್ಯವಾದಗಳು!!!

ಅಬ್ಬಾ.. ಬೆನ್ನ ಮೇಲೆ ಕೂತಿದ್ದ ಭೂತ ಹಾರಿ ಹೋದಂತ ಅನುಭವ..ಬೆಳಿಗ್ಗೆಯಿಂದಲೂ ಬೆನ್ನ ಮೇಲೆ  ಸವಾರಿ ಮಾಡುತ್ತಿದ್ದ ಪ್ರಶ್ನೆ ಎಂಬ ಭೂತ "ಗಡಿಯಾರ ಏತಕ್ಕೆ ಹಿಂದಕ್ಕೆ ಓಡುತ್ತಿತ್ತು" ಬಂದೂಕಿನಿಂದ ಹೊರಟ ಗುಂಡಿನಂತೆ ನೇರ ಉತ್ತರಸಿಕ್ಕಿದ್ದೆ ತಡ.. ನಾ ಹೋಗ್ತೀನಪ್ಪ ಅಂತ ಹಾರಿ ಹೋಯಿತು.. ಮನಸ್ಸು ಮಕ್ಕಳ ಹೆಜ್ಜೆನಾದಕ್ಕೆ ಕುಣಿಯತೊಡಗಿತ್ತು.. ಮತ್ತು ಈ ಬರಹ ಬರೆಸಿತು..

ಈ ಬರಹ ರಿಯಾನ್ ಶಾಲೆಯ ಎಲ್ಲಾ ಮಕ್ಕಳು ಮತ್ತು ಅಧ್ಯಾಪಕರಿಗೆ ಅರ್ಪಿತವಾಯಿತು!!!

Saturday, December 31, 2016

ಅಕ್ಕ(ಅ)ಣ್ಣ ... ಜನುಮದಿನಗಳ ಶುಭಾಶಯಗಳು

ಹೀಗೊಂದು ಸಂಭ್ರಮದ ನೆನಪು.. 

೧೯೭೯ಇಸವಿ .. ಕರುನಾಡಿನಲ್ಲಿ ಅನಂತ್ ನಾಗ್ ಮತ್ತು ಲಕ್ಷ್ಮಿ ಅದ್ಭುತ ಜೋಡಿಯಾಗುವತ್ತ ಹೆಜ್ಜೆ ಹಾಕಿದ್ದ ಕಾಲ. ಕನ್ನಡ ಚಿತ್ರದ ಇತಿಹಾಸದಲ್ಲಿಯೇ ಒಂದು ವಿಭಿನ್ನ ಚಿತ್ರ ಬಿಡುಗಡೆಯಾಗಿತ್ತು. ಅದುವೇ ನಾ ನಿನ್ನ ಬಿಡಲಾರೆ. ಯಶ್ವಸಿಯಾಗಿತ್ತು. ಶಿವಮೊಗ್ಗದ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿತ್ತು. ಆರಂಭಿಕ ದೃಶ್ಯಗಳು ಪ್ರೇಮಮಯವಾಗಿದ್ದವು ,ಹಾಸ್ಯಮಯವಾಗಿದ್ದವು. ಬರು ಬರುತ್ತಾ ದೆವ್ವ ಭೂತಗಳ ಚೇಷ್ಟೆ ಜಾಸ್ತಿಯಾಗಿ ಹೆದರಿಕೆಯಿಂದ ಅನೇಕ ಮಹಿಳೆಯರು ಮಕ್ಕಳು ಚಿತ್ರಮಂದಿರದಿಂದ ಓಡಿಹೋಗಿದ್ದ  ಉದಾಹರಣೆಗಳು ಇದ್ದವು. ಒಂದೆರಡು ಪ್ರದರ್ಶನಗಳಲ್ಲಿ ತುಂಬು ಗರ್ಭಿಣಿಯರಿಗೆ ಹೆದರಿಕೆಯಾಗಿ ಹೆತ್ತ ಘಟನೆಗಳು ನೆಡೆದಿದ್ದವು. ಹೀಗೆ ಒಂದು ರೀತಿಯಲ್ಲಿ ಹಾಡುಗಳಿಂದ, ಅಭಿನಯದಿಂದ ದಕ್ಷ ನಿರ್ದೇಶನದಿಂದ ಚಿತ್ರ ದುಡ್ಡನ್ನು ಬಾಚುತ್ತಿತ್ತು. ಇನ್ನೊಂದು ಕಡೆ ವೀಕ್ಷಕರನ್ನು ಭಯಪೀಡಿತರನ್ನಾಗಿ ಮಾಡುತ್ತಿತ್ತು. 

"ಎಂದೆಂದಿಗೂ ನಾ ನಿನ್ನ ಬಿಡಲಾರೆ ಬಾ ಚಿನ್ನ" ಹಾಡಿನಲ್ಲಿ ಉಪಯೋಗಿಸುವ ಟಿಕ್ ಟಿಕ್ ಚಿಟಿಕೆಯ ವಸ್ತು ಬಹಳ ಪ್ರಸಿದ್ಧವಾಗಿತ್ತು. 

ಅಕ್ಕ ನನ್ನನ್ನು ಮತ್ತು ನನ್ನ ತಮ್ಮನನ್ನು ನಮ್ಮ ಮನೆಯ ಅಕ್ಕ ಪಕ್ಕದವರ ಜೊತೆಯಲ್ಲಿ ಆ ಚಿತ್ರಕ್ಕೆ ಕರೆದೊಯ್ದಳು. ನಮಗೂ ಖುಷಿ ಚಿತ್ರ ನೋಡುವುದೆಂದರೆ. ಆಗ ನನಗೆ ಆರು ವರ್ಷ.. ತಮ್ಮನಿಗೆ ೪ ವರ್ಷ.  ಜೋಶ್ ನಲ್ಲಿ ಚಿತ್ರ ನೋಡಲು ಶುರುಮಾಡಿದೆವು. ಆ ಕಾಲಕ್ಕೆ ಎಷ್ಟು ಅರ್ಥವಾಗಿತ್ತೋ ಬಿಟ್ಟಿತೋ ದೇವರಿಗೆ ಗೊತ್ತು. ಆದರೆ ಎಲ್ಲವೂ ಚೆನ್ನಾಗಿ ಇತ್ತು. ಅನಂತ್ ನಾಗ್ ಆಸ್ಪತ್ರೆಯಿಂದ ಅರ್ಧ ರಾತ್ರಿಯಲ್ಲಿ ಎದ್ದು ಹೊರಗೆ ಹೋಗುತ್ತಾರೆ.. ಅವರನ್ನೇ ಅನುಸರಿಸಿಕೊಂಡು ಲಕ್ಷ್ಮಿ ಹೋಗುತ್ತಾರೆ. ಒಂದು ಸ್ಮಶಾನವನ್ನು ಹೊಕ್ಕ ಅನಂತ್.. ಹಾಗೆ ನಿಲ್ಲುತ್ತಾರೆ .. ಲಕ್ಷ್ಮಿ ಹಿಂದಿನಿಂದ ಬಂದು ರೀ ಎನ್ನುತ್ತಾ ಬೆನ್ನು ಮುಟ್ಟುತ್ತಾರೆ.. ಸರ್ರನೆ ತಿರುಗುವ ಅನಂತ್... 

ಚಿತ್ರಮಂದಿರಲ್ಲಿ ಹೋ ಎಂದು ಕೂಗಾಟ.. ಚೀರಾಟ.. ದೆವ್ವ ಅನಂತ್ ಮೈಮೇಲೆ ಬಂದಿರುತ್ತೆ.. 

ಆಗ ನನ್ನ ಅಕ್ಕ ತೊಡೆಯ ಮೇಲೆ ಕೂರಿಸಿಕೊಂಡಿದ್ದ ನನ್ನನ್ನು ಮತ್ತು ನನ್ನ ತಮ್ಮನನ್ನು ಸೀಟ್ ಕೆಳಗೆ ಕೂರಿಸಿ ಕಿವಿ ಮುಚ್ಚುತ್ತಾಳೆ.. ಹೆದರಿಕೆಯಾಗಬಾರದು ಎಂದು.. ದೆವ್ವದ ದೃಶ್ಯ ಮುಗಿದ ನಂತರ ಮತ್ತೆ ಸೀಟ್ ಮೇಲೆ ಕೂರಿಸುತ್ತಾಳೆ (ಆಗ.. ಚಿಕ್ಕವರಿದ್ದ ಕಾರಣ ಟಿಕೆಟ್ ಇರುತ್ತಿರಲಿಲ್ಲ) ಹೀಗೆ ಚಿತ್ರ ಮುಗಿಯುವವರೆಗೂ ನೆಡೆಯುತ್ತದೆ. ಚಿತ್ರ ಮುಗಿದಮೇಲೆ, ಬೆವರನ್ನು ಒರೆಸಿ ಮನೆಗೆ ಕರೆತರುತ್ತಾಳೆ. ಇದು ಅಕ್ಕನ ಪ್ರೀತಿ ಮಮತೆ. 

ಈ ಘಟನೆ ಏತಕ್ಕೆ ಉಲ್ಲೇಖ ಮಾಡಿದೆ ಎಂದರೆ.. ಪುಟ್ಟ ಘಟನೆ ಆದರೆ ತನ್ನ ತಮ್ಮಂದಿರ ಮೇಲಿನ ಕಾಳಜಿ ವ್ಯಕ್ತವಾಗುತ್ತದೆ. ಇದೆ ಅಕ್ಕ ತಾನು ಬೆಳೆದು ನಮ್ಮನ್ನು ಬೆಳೆಸಿದಳು.. ಹಬ್ಬ ಹರಿದಿನ ಎಂದರೆ... ನಾನು ಮತ್ತು ನನ್ನ ತಮ್ಮ ವಠಾರದ ತುದಿಯಲ್ಲಿ ಅಕ್ಕ ಕೆಲಸ ಮುಗಿಸಿಕೊಂಡು ಬರುವುದನ್ನೇ ಕಾಯುತ್ತಿದ್ದೆವು. ಅದೆಷ್ಟೇ ಹೊತ್ತು ಆಗಲಿ ಅಕ್ಕ ನಮ್ಮನ್ನು ನಿರಾಶೆಗೊಳಿಸುತ್ತಿರಲಿಲ್ಲ.. ಹಾಗೆಯೇ ನಾವು ಕೂಡ ಅಕ್ಕನನ್ನು ಬಾಗಿಲ ಬಳಿಯೇ ಕಾಯುವುದು ಬಿಡುತ್ತಿರಲಿಲ್ಲ.. 

ಇಂತಹ ಅಕ್ಕನ ಜನುಮದಿನವಿಂದು.. ಇಡೀ ವಿಶ್ವವೇ ಈ ದಿನವನ್ನು ಆಚರಿಸುತ್ತದೆ ಕಾರಣ.. ಕ್ಯಾಲೆಂಡರ್ ವರ್ಷ ಇಂದಿಗೆ ಮುಗಿಯುತ್ತದೆ .. ನಾವೂ ಹಾಗೆ ಶುಭ ಕೋರೋಣ ಅಲ್ಲವೇ.. :-)

ಅಕ್ಕ ಜನುಮದಿನದ ಶುಭಾಶಯಗಳು... 

*****

ಅಣ್ಣ ಶಾಲಾ ಕಾಲೇಜುದಿನಗಳಲ್ಲಿ ಓದಿನಲ್ಲಿ ಮುಂದು.. ತಾನು ಓದಿದ್ದನ್ನು ಸರಿಯಾಗಿ ಗ್ರಹಿಸುವುದರಲ್ಲಿ ಎತ್ತಿದ ಕೈ .. ಚಿಕ್ಕ ವಯಸ್ಸಿನಿಂದಲೂ ಓದುವ ಅಭ್ಯಾಸವಿದ್ದ ಇವನಿಗೆ.. ದೊಡ್ಡ ಕಾದಂಬರಿಗಳು ನೀರು ಕುಡಿದಷ್ಟು ಸುಲಭವಾಗಿ ಇವನ ಪಕ್ಕಕ್ಕೆ ಕೂತುಬಿಡುತ್ತಿದ್ದವು. ಇವನು ಕೂಡ ಒಮ್ಮೆ ಅದರ ಮೈ ತಡವಿ ಓದಲು ಕುಳಿತನೆಂದರೆ ಊಟ ತಿಂಡಿ ಯಾವುದು ಬೇಕಿಲ್ಲ.. ಒಮ್ಮೆ ಒಂದು ಪುಸ್ತಕ ಹಿಡಿದನೆಂದರೆ ಮುಗಿಯಿತು.. ಅದು ಓದಿ ಮುಗಿಸಿಯೇ ಏಳುತ್ತಿದ್ದ.. ಆ ಪಾಟಿ ಓದುವ ಹಸಿವು ..  

ಅಕ್ಕ ಕಾಲೇಜಿನ ಪಠ್ಯ ಪುಸ್ತಕವಾಗಿದ್ದ ವಿಷಯಗಳನ್ನು ಅಕ್ಕನ ಸಹಪಾಠಿಗಳು ಇವನ ಹತ್ತಿರ ಬಂದು ಪಾಠ ಹೇಳಿಸಿಕೊಳ್ಳುತ್ತಿದ್ದರು. ಪಾಠ ಅಂದರೆ.. ಆ ದಿನಗಳ ನೋಟ್ಸ್ ನಲ್ಲಿನ ಸಂದೇಹಗಳನ್ನು ನಿವಾರಿಸಿಕೊಳ್ಳುತ್ತಿದ್ದರು. 
ಕಾಲೇಜು ದಿನಗಳಲ್ಲಿ ಅಕ್ಕನ ಸಹಪಾಠಿಗಳಿಗೆ "ಲಾಜಿಕ್" ವಿಷಯ ಕಬ್ಬಿಣದ ಕಡಲೆಯಾಗಿತ್ತು. ನನ್ನ ಅಣ್ಣ ಅಕ್ಕನಿಗಿಂತ ಕೆಳತರಗತಿಯಲ್ಲಿ ಓದುತ್ತಿದ್ದರೂ, ಇವನಿಗೆ "ಲಾಜಿಕ್" ವಿಷಯ ಇವನಿಗೆ ಕರತಲಾಮಲಕ.. ಈ ವಿಷಯವನ್ನು ಅಕ್ಕ ತನ್ನ ಸಹಪಾಠಿಗಳಿಗೆ ಹೇಳಿದ್ದರಿಂದ, ಇವನು ಕಿರಿಯನಾಗಿದ್ದರೂ ಅವರಿಗೆ ಗುರುವಾಗಿ ಬಿಟ್ಟಿದ್ದ. 

ಬಾಲ್ಯದಲ್ಲಿ ಪಟ್ಟ ಅವಮಾನಗಳು, "ಅಪ್ಪನ ಕೆಲಸವೂ ಸಿಗೋಲ್ಲ" ಎಂದು ಮೂದಲಿಕೆ ಕೇಳಿದ್ದ ಈ ಹುಡುಗ ಇಂದು ತನ್ನ ಕಾಲಮೇಲೆ ತಾನು ನಿಂತಿದ್ದು ಅಷ್ಟೇ ಅಲ್ಲದೆ, ತನ್ನದೇ ಒಂದು ಆಫೀಸ್ ಶುರುಮಾಡಿ, ಅನೇಕರಿಗೆ ಕೆಲಸ ಕೊಟ್ಟಿರುವುದು ಸಾಧನೆಯೇ ಹೌದು. 

ನಮ್ಮ ಮನೆಯಲ್ಲಿ ಇವನ ಮಾತು ವೇದವಾಕ್ಯ . ಇವನು ಆಯೋಜಿಸುವ ಕಾರ್ಯಕ್ರಮಗಳಿಗೆ ನಾನು ಮತ್ತು ನನ್ನ ತಮ್ಮ ಓಕೆ ಎಂದು ಹೇಳುವುದಷ್ಟೇ ಕೆಲಸ.,. ಅವನಿಗೆ ಹೆಗಲಿಗೆ ಹೆಗಲು ಕೊಟ್ಟು ಅವನ ಜೊತೆಯಲ್ಲಿ ನಿಂತರೆ ಸಾಕು.. ಹೂವಿನ ಸರ ಎತ್ತಿದಷ್ಟು ಸಲೀಸು ಎಲ್ಲಾ ಕಾರ್ಯಕ್ರಮಗಳು. 

ಡಿಸೆಂಬರ್ ೨೬ ರಂದು ಜನುಮದಿನ ಆಚರಿಸಿಕೊಂಡ ಇವನಿಗೆ ಆ ತಿಮ್ಮಪ್ಪನ ಆಶೀರ್ವಾದವೇ ಸಿಕ್ಕಿದೆ. ಕಾರಣ ಅಂದು ನಮ್ಮ ಇಡೀ ಪರಿವಾರ ಇವನ ಜನುಮದಿನವನ್ನು ಆಚರಿಸಲು ನಿರ್ಧರಿಸಿದ್ದು ತಿಮ್ಮಪ್ಪನ ಆವಾಸ ಸ್ಥಾನ ತಿರುಪತಿಯಲ್ಲಿ.. 

ವಿಜಯ ನಿನ್ನ ಹೆಸರಿನಂತೆ ನಿನ್ನ ಪ್ರತಿ ಕೆಲಸ, ಕನಸು, ಪರಿಶ್ರಮ ನಿನ್ನ ಹೆಸರಿನಂತೆಯೇ ಆಗಲಿ.. 

ಜನುಮದಿನದ ಶುಭಾಶಯಗಳು ವಿಜಯ... !!!!
*****

ಇದು ಡಬಲ್ ಧಮಾಕ.. ಡಿಸೆಂಬರ್ ನಲ್ಲಿ ಎರಡು ಎರಡು ಸಂಭ್ರಮಗಳು.. ಅಕ್ಕನದು ಡಿಸೆಂಬರ್ ೩೧, ಅಣ್ಣನದು ಡಿಸೆಂಬರ್ ೨೬.. ಇಬ್ಬರಿಗೂ ಒಂದೇ ಶುಭಾಷಯ ಒಟ್ಟಿಗೆ ಹೇಳುವ ಸಂಭ್ರಮ ನನ್ನದು ಮತ್ತು ನಮ್ಮೆಲ್ಲರದು. 

Sunday, December 11, 2016

ಸ್ಮಶಾನ.. ಪಾಠ ಕಲಿಸುವ "ಪಾಕ"ಶಾಲೆ

ಒಂದು ವಿಚಿತ್ರ ಮನಸ್ಸು.. ವಿಚಿತ್ರ ಆಸೆ.. ವಿಚಿತ್ರವಾಗಿ ಯೋಚಿಸುವ ಹೃದಯ..

ಅರಿವಿಲ್ಲ..

ಗೊತ್ತಾಗೊಲ್ಲ

ಕಾರಣ ಹೀಗೆ ಅಂತ ಹೇಳೋಕೆ ಆಗೋಲ್ಲ.. ನಾ ಯಾವಾಗಲೂ ತಮಾಷೆಯಾಗಿ ಹೇಳುತ್ತಿದ್ದೆ..

ಹೋಟೆಲಿನಲ್ಲಿ ಯಾರಾದರೂ ಸಿಕ್ಕರೆ.. ತಮ್ಮ ಕುರ್ಚಿಯ ಪಕ್ಕದಲ್ಲಿಯೇ ಇನ್ನೊಂದು ಕುರ್ಚಿ ಹಾಕಿ.. ಅಥವಾ ಬೆಂಚಾದರೆ ಸ್ವಲ್ಪ ಜರುಗಿಕೊಂಡು ಜಾಗ ಕೊಡುತ್ತಾರೆ..

ಬಸ್ ನಿಲ್ದಾಣದಲ್ಲಿ ಸಿಕ್ಕರೆ.. ಕೂರಲು ಪಕ್ಕಕ್ಕೆ ಒತ್ತಿ ಜಾಗ ಕೊಡುತ್ತಾರೆ..

ಮದುವೆ ಮುಂಜಿ ಮಾಡುವ ಛತ್ರದಲ್ಲಿ ಸಿಕ್ಕರೆ.. ಪಕ್ಕದಲ್ಲಿ ಅಥವಾ ಯಾವುದೋ ಮೂಲೆಯಲ್ಲಿ ಖಾಲಿ ಇರುವ ಚೇರ್ ಹುಡುಕಿ ಅದನ್ನು ತಂದು ತಮಗೆ ಇಷ್ಟವಾದವರ ಜೊತೆ ಹರಟುತ್ತಾರೆ..

ಆಸ್ಪತ್ರೆ, ದೇವಸ್ಥಾನ ಇಲ್ಲಿಯೂ ಕೂಡ ಇದೆ ಪುನರ್ವಾರ್ತನೆ ಆಗುತ್ತದೆ..

ಆದರೆ ನನ್ನ ಕುತೂಹಲ ಒಂದು ವಿಚಿತ್ರ ಹಂತ ಮುಟ್ಟಿತ್ತು.. ಸ್ಮಶಾನದಲ್ಲಿ ಬೇರೆಯವರ ಶವ ಸಂಸ್ಕಾರಕ್ಕೆ ಹೋದಾಗ ಅಲ್ಲಿ ನಮ್ಮ ಪರಿಚಯಸ್ತರು ಸಿಕ್ಕಾಗ ಹೇಗೆ ಇರುತ್ತದೆ.. ?

ಶವಸಂಸ್ಕಾರದ ಪದ್ಧತಿ ಮಣ್ಣು ಮಾಡುವುದು ಆದರೆ.. ಗೋರಿಗಳನ್ನು ಅಥವಾ ಸ್ಮಾರಕಗಳನ್ನು ಕಟ್ಟಿರುತ್ತಾರೆ.. ಆಗ ಯಾವುದಾದರೂ ಒಂದು ಸಮಾಧಿಯ ಮೇಲೆ ಕೂತು.. ಇನ್ನೊಂದು ಸಮಾಧಿಯ ಧೂಳನ್ನು ಕೈಯಲ್ಲಿ ಒರೆಸಿ ಕೂರಲು ಹೇಳುತ್ತಾರೆ.. ಆದರೆ ಶವಸಂಸ್ಕಾರದ ಪದ್ಧತಿ ಅಗ್ನಿಗೆ ಆಹುತಿ ಮಾಡುವುದು ಎಂದರೆ.. ಕೊಂಚ ಕಷ್ಟ.. ಆದರೂ ಬೆಂಗಳೂರಿನಂತಹ ಮಹಾನಗರಗಳಲ್ಲಿ... ವಾಸಿಸಲು ಕಡಿಮೆ ಆಗುತ್ತಿರುವ ಸನ್ನಿವೇಶದಲ್ಲಿ ಈ ರೀತಿಯ ಕಟ್ಟಿಗೆಯಲ್ಲಿ ಸುಡುವ ಪದ್ದತಿ ಕಡಿಮೆ.. ವಿದ್ಯುತ್ ಚಿತಾಗಾರ ಬಹಳವಾಗಿದೆ  .. ಆದರೂ ಕಟ್ಟಿಗೆಯಲ್ಲಿ ಸುಡುವ ಶಾಸ್ತ್ರ ಬದ್ಧ ಸಂಸ್ಕಾರ ನೋಡಲು ಚೆನ್ನ (ಕ್ಷಮೆ ಇರಲಿ) ಅಥವಾ ಆ ಶಾಸ್ತ್ರ ಸಂಪ್ರದಾಯದ ಪರಿ ಮನೆಯವರಿಗೆ ಕೊಂಚ ತೃಪ್ತಿ ತರುವುದು ಸಹಜ.. (ಇದು ನನ್ನ ವೈಯುಕ್ತಿಕ ಅಭಿಪ್ರಾಯ.. ಕಾರಣ ಅಪ್ಪನ ಸಂಸ್ಕಾರ.. ಕಣ್ಣು ಮುಚ್ಚಿ ಕಣ್ಣು ತೆರೆಯುದರ ಒಳಗೆ ವಿದ್ಯುತ್ ಚಿತಾಗಾರದಲ್ಲಿ ಮುಗಿದು ಹೋಗಿತ್ತು)..

ಇಂದು ನನ್ನ ಅಣ್ಣನ ಮನೆಯ ನೆರೆಹೊರೆಯವರ ಮನೆಯಲ್ಲಿ ಹಿರಿಯರು ಕಾಲನ ಕರೆಗೆ ಓಗೊಟ್ಟು ತಮ್ಮನ್ನು ಪ್ರೀತಿಸುವ ಪರಿವಾರವನ್ನು ತ್ಯಜಿಸಿ ಹೊರನೆಡೆದಿದ್ದರು.. ತುಂಬು ಸಂಸಾರದಿಂದ ಬಂದಿದ್ದ ಅವರು.. ಸುಮಾರು ೬೦ ವಸಂತಗಳ ಸುವರ್ಣ ವೈವಾಹಿಕ ಜೀವನವನ್ನು ಪೂರೈಸಿ ತಮ್ಮ ಕುಟುಂಬದ ಏಳು ಬೀಳುಗಳನ್ನು ಸಮನಾಗಿ ಕಂಡು ಅದರ ಏಳಿಗೆಗೆ ಶ್ರಮಿಸಿದ ಜೀವ ಇಂದು ಎಲ್ಲರ ಹೃದಯಕಮಲದಲ್ಲಿ  ನೆನಪುಗಳನ್ನು ಬಿಟ್ಟು ಹೊರಟಿದ್ದರು.

ಅವರ ದುಃಖ ಅವರಿಗೆ..ಮಡದಿ, ಅಮ್ಮ, ತಂಗಿ, ಚಿಕ್ಕಮ್ಮ, ದೊಡ್ಡಮ್ಮ, ಅಜ್ಜಿ,  ಆಂಟಿ ಹೀಗೆ ಹಲವಾರು ಬಂಧಗಳ ಹ್ಯಾಟ್ ಧರಿಸಿದ್ಧ ಆ ಹಿರಿಯ ಜೀವ ಇಂದು ಬರಿ ನೆನಪಾಗಿ ಉಳಿದದ್ದು ಎಲ್ಲರಲ್ಲೂ ದುಃಖವನ್ನು ಒತ್ತರಿಸಿ ತರುತ್ತಿತ್ತು..

ಚಿತಾಗಾರಕ್ಕೆ ಹೋದಾಗ.. ಸಹಜವಾಗಿಯೇ ನನ್ನ ಮನಸ್ಸು ಕದಡಿದ ಸರೋವರವಾಗಿತ್ತು.. ಸಾವು ಮನುಷ್ಯನನ್ನು ಹೇಗೆ ಬದಲಿಸುತ್ತೆ (ಕ್ಷಣ ಮಾತ್ರ.. ಆದರೂ ಸರಿ) ಸ್ಮಶಾನ ವೈರಾಗ್ಯ.. ಅಯ್ಯೋ ಬದುಕು ಇಷ್ಟೇ.. ಇಂದು ಅವರು ನಾಳೆ ನಾವು.. ಈ ರೀತಿಯ ಮಾತುಗಳು ಸಹಜವಾಗಿಯೇ ಕೇಳಿಬರುತ್ತಿದ್ದವು.. ಇಲ್ಲಿಯೂ ಅದಕ್ಕೆ ಹೊರತೇನೂ ಆಗಿರಲಿಲ್ಲ.. ಆದರೆ ನನ್ನ ವಿಚಿತ್ರ ಕಣ್ಣುಗಳಿಗೆ ಕಂಡ ಕೆಲವು ದೃಶ್ಯಗಳು ಅಕ್ಷರ ರೂಪದಲ್ಲಿ ಬರಲು ಶ್ರಮಿಸಿದವು.. ಹಾಗಾಗಿ ಈ ಲೇಖನ ನಿಮ್ಮ ಮುಂದೆ..

ಒಳಗೆ ಹೋಗುತ್ತಲೇ.. ಒಂದು ಮಾರುತಿ ವ್ಯಾನ್.. ಅದರೊಳಗೆ ಕೂರಲು ಆಗದಷ್ಟು ಮಡಿಕೆ ಕುಡಿಕೆಗಳು ಮತ್ತು ಸಂಸ್ಕಾರಕ್ಕೆ ಬೇಕಾಗುವ ಪದಾರ್ಥಗಳು.. ಅಚ್ಚರಿ ಎನಿಸಿತು.. ಆದರೂ ಈ ಮಹಾನಗರದಲ್ಲಿ ಈ ರೀತಿಯ ದುಃಖತಪ್ತ ಸಂದರ್ಭದಲ್ಲಿ ಬೇಕಾಗುವ ಪರಿಕರಗಳನ್ನು ಹುಡುಕಿಕೊಂಡು  ಅಲೆಯುವುದನ್ನು ಕಡಿಮೆ ಮಾಡಲು ಸಿದ್ಧತೆಕಂಡು ಮನಸ್ಸಿಗೆ ಆಹ್ ಎಲ್ಲವೂ ಪೂರ್ವಸಿದ್ಧತಾಮಯ ಎನ್ನಿಸಿತು..
ಎಲ್ಲವೂ ಸಿದ್ಧ.. ಈ ಕ್ಷಣಿಕ ಜಗತ್ತಿನಲ್ಲಿ ಓಡಾಡಲು ಸಮಯವಿಲ್ಲ.. ಹಾಗಾಗಿ ನಾ ಸಿದ್ಧ !!!

ಅಲ್ಲಿನ ಸಿಬ್ಬಂಧಿಗಳಿಗೆ ಸಾವು, ಕಳೇಬರ, ಡೆಡ್ ಬಾಡಿ, ಸಂಸ್ಕಾರ ಇವೆಲ್ಲವೂ ನಾವು ದಿನನಿತ್ಯ ಕಚೇರಿಗೆ ಹೋಗಿ ಫೈಲ್, ಲ್ಯಾಪ್ಟಾಪ್, ಪ್ರಾಜೆಕ್ಟ್ ಅನ್ನುವಂತೆ ಅದು ಅವರ ಕೆಲಸ ಅಲ್ಲವೇ.. ನಾವುಗಳು ಅಲ್ಲಿಗೆ ಹೋಗಿ ಬಂದ ಮೇಲೆ ಸ್ನಾನ ಮಾಡುತ್ತೇವೆ .. ಅವರು ಸ್ನಾನ ಮಾಡಿಕೊಂಡು ಅಲ್ಲಿಗೆ ಬರುತ್ತಾರೆ.. ಅಷ್ಟೇ ವ್ಯತ್ಯಾಸ..

ಒಬ್ಬೊಬ್ಬರದು ಒಂದೊಂದು ರೀತಿಯ ಸಂಪ್ರದಾಯ.. ಕೆಲವರು ಮಂತ್ರಘೋಷಗಳ ನಡುವೆ ಕಾರ್ಯ ನೆಡೆಸಿದರೆ.. ಕೆಲವರದು ತಮಟೆ ಸದ್ದಿನ ಜೊತೆಯಲ್ಲಿ.. ಇನ್ನೂ ಕೆಲವರದು ಆಗಲೇ ಮೈಯಲ್ಲಿ ತುಂಬಿಕೊಂಡ ಪರಮಾತ್ಮನ ವರಪ್ರಸಾದದಿಂದ ತೂರಾಡುತ್ತಾ ತಮಗೆ ಬಂದ ರೀತಿಯಲ್ಲಿ ಶವಸಂಸ್ಕಾರ ಮಾಡುವ ಪದ್ಧತಿ.. ಏನೇ ಆದರೂ ಅವರವರ ಭಾವಕ್ಕೆ ಅವರವರ ಭಕುತಿಗೆ ... !
ತಾವು ಬದಕಲು... ಬದುಕಿ ಬಾಳಿದ ಜೀವಿಗೆಕಾಯುತ್ತಿರುವ ಕ್ಷಣ 

ಆ ರುದ್ರಭೂಮಿಯ ಒಬ್ಬ ಕೆಲಸಗಾರ ಅಕ್ಷರಶಃ  ತೂರಾಡುತ್ತಾ ಬಂದ.. ಎಲ್ಲವೂ ಸಿದ್ಧವಾಗಿದೆಯೇ.. ಏನಾದರೂ ಬೇಕಿತ್ತೆ.. ಹೇಳಿ.. ಅಂದಾಗ.. ಯಾರೂ ಮಾತಾಡದೆ ಇದ್ದದ್ದು ನೋಡಿ.. ಆಗಲಿ.. ಬಾಡಿ ಬರಲಿ, ಪೂಜಾರಪ್ಪ ಬರಲಿ, ಸೌದೆ ಬರಲಿ.. ಬರಲಿ ಬರಲಿ ಬರಲಿ ಬರಲಿ.. ಹೀಗೆ ಏನೇನೂ ಬಡಬಡಿಸುತ್ತಾ ಹೋದ..

ಹಿರಿಯ ಚೇತನವನ್ನು ಕಳೆದುಕೊಂಡ ನೋವು ಒಬ್ಬರಿಗೆ.. ಆ ಸಮಯದಲ್ಲಿಯೂ ತಮ್ಮ ವೃತ್ತಿಪರತೆ, ತಮ್ಮ ಹೊಟ್ಟೆ ಪಾಡು ನೋಡಿಕೊಳ್ಳುವ ತವಕ ಇನ್ನೊಬ್ಬರಿಗೆ.. ನಗು ಬರುತ್ತೆ ಆದರೂ ಇದು ಸಹಜಧರ್ಮ.. ನಮ್ಮ ನೋವು ನಮಗೆ.. ಅವರ ಹೊಟ್ಟೆ ಪಾಡು ಅವರಿಗೆ.. ತಪ್ಪಿಲ್ಲ..

ಚಿತೆ ಸಿದ್ಧಮಾಡುವ ಸಿಬ್ಬಂದಿ ಕೂಡ.. "ಅಯ್ಯೋ ಬಿಡಿ ಅಣ್ಣ.. ದಿನಕ್ಕೆ ಎಷ್ಟು ನೋಡ್ತೀವಿ.. ನಮಗೇನೂ ಹೊಸದೇ.. ನಮಗೆ ಇಷ್ಟು ಕೊಡಿ.. ಸರಿಯಾಗಿ ಚಿತೆ ಉರಿದು ಬೂದಿಯಾಗುವವರೆಗೂ ನಾವು ನೋಡಿಕೊಳ್ಳುತ್ತೇವೆ.. ಆಫೀಸ್ ಕಟ್ಟುವ ಹಣಕ್ಕೂ ನಮಗೂ ಸಂಬಂಧ ಇಲ್ಲ.. ನಾವು ತಾನೇ ಇದನ್ನು ಮೆಂಟೇನ್ ಮಾಡೋದು .. ಇಲ್ಲಿ ಚೌಕಾಸಿ ಮಾಡಬಾರದ್ ಅಲ್ಲವೇ ಅಣ್ಣ .. " ಮಾತಿರಲಿಲ್ಲ ನನ್ನ ಬಳಿ..

ಎಲ್ಲವೂ ಸರಿ.. ಎಲ್ಲವೂ ತಪ್ಪು.. ಯಾವುದು ಸರಿ ಯಾವುದು ತಪ್ಪು.. ಅರಿವಿಲ್ಲ.. ಆ ಕ್ಷಣಕ್ಕೆ ಎಲ್ಲವೂ ಸರಿ ಎನ್ನಿಸತೊಡಗಿತು ಅವರವರ ದೃಷ್ಟಿಕೋನದಲ್ಲಿ.. :-)

ಕೇಶಮುಂಡನ ಮಾಡುವ ವ್ಯಕ್ತಿ.. ಅಲ್ಲಿಯೇ ಬಿದ್ದಿದ್ದ ಇದ್ದಲಿನಲ್ಲಿ ತನ್ನ ಮೊಬೈಲ್ ಸಂಖ್ಯೆ ಬರೆದದ್ದು ನನಗೆ ಮೊದಲು ನಗು ತಂದರೂ.. ನಂತರ ಅಬ್ಬಾ ಇಂತಹ ಅಡ್ವಟೈಸ್ಮೆಂಟ್ / ಮಾರ್ಕೆಟಿಂಗ್ ಅನ್ನಿಸಿತು..  ಆತನಿಗೂ ಇದು ತನ್ನ ಕೆಲಸ.. ಸರಿ ಎನ್ನಿಸಿತು.. ಹೌದು ಕೆಲವು ದೊಡ್ಡ / ಪುಟ್ಟ ವಿಷಯಗಳು ಭೂತಾಕಾರವಾಗಿ ಕಾಡುವುದೇ ಇಂತಹ ಸನ್ನಿವೇಶದಲ್ಲಿ.. ಎಲ್ಲವೂ ಇದ್ದರೂ.. ಕೇಶ ಮುಂಡನ ಮಾಡುವವ ಇಲ್ಲದೆ ಹೋದರೇ.. ರೇ ರೇ ರೇ ರೇ... !
ಕಾಗುಣಿತ ಹೇಗೆ ಇರಲಿ.. ಆದರೆ ವೃತ್ತಿಪರತೆ ಮೆಚ್ಚುವ ಅಂಶ.. 
ಹೀಗೆ ನನ್ನ ಮಾನಸ ಸರೋವರದಲ್ಲಿ ಅಲೆಅಲೆಯಾಗಿ ಏಳುತ್ತಿದ್ದ ಅನೇಕ ಪ್ರಶ್ನೆ ಉತ್ತರಗಳ ನಡುವೆ.. ಆ ಬಿರುಬಿಸಿಲಿಗೆ ತಲೆ ನೋವು ಶುರುವಾಗಿ.. ಹಾಗೆ ಕಂಬಕ್ಕೆ ಒರಗಿ ಕೂತಿದ್ದೆ.. ಆ ಕಡೆ ಕೇಶ ಮುಂಡನ ಕಾರ್ಯ ತುಸು ತಡವಾಗಿತ್ತು.. ಕಾರಣ ಕೇಶ ಮುಂಡನ ಮಾಡುವವ ಇನ್ನೊಂದು ಕಡೆ ಬ್ಯುಸಿ.. ಕಾಯುತ್ತಿದ್ದ ಕೂತಿದ್ದವರು ಹಲವರು ಇಲ್ಲಿ.. ಕಾಯುತ್ತಾ ಕಾಯುತ್ತಾ ಹಾಗೆ ಕಂಬಕ್ಕೆ ಒರಗಿ ಕೂತಿದ್ದ ನನಗೆ, ಯೋಚನಾ ಲಹರಿಯ ಅಲೆಗಳು ಮನದ ಕಡಲಿಗೆ ಬಡಿದು ಬಡಿದು ಹಾಗೆ ಕಣ್ಣುಗಳು ತಮ್ಮ ಕೋಣೆಯ ಕದವನ್ನ ಮುಚ್ಚಿಕೊಂಡ ಹೊತ್ತು..

ಏನಿಲ್ಲಾ ಎಂದರೂ ಸುಮಾರು ಇಪ್ಪತ್ತು ಇಪ್ಪತೈದು ನಿಮಿಷ ಮನಸ್ಸು ಆ ಸ್ಥಳದಿಂದ ಆಗಸ ಮಾರ್ಗದಲ್ಲಿ ದೇವಲೋಕದಲ್ಲೆಲ್ಲಾ ಓಡಾಡುತ್ತಿತ್ತು.. ಭುವಿಯಲ್ಲಿ ನೆಡೆಯುತ್ತಿದ್ದ ಕಾರ್ಯಕ್ರಮಗಳು ನನ್ನನ್ನು ಅಲ್ಲಿಂದ ಕರೆತರಲು ಸೋತಿದ್ದವು..

ಟಪಕ್ .. ಧಪ್.. ಮಡಿಕೆ ಒಡೆದ ಸದ್ದಿಗೆ.. ಅಚಾನಕ್ ನನ್ನ ಮನಸ್ಸು ಭುವಿಗೆ ಇಳಿಯಿತು.. ಅರೆ ಇದೇನಿದು.. ಸ್ಮಶಾನದಲ್ಲಿ ನಿದ್ದೆಯೇ.. ಅಯ್ಯೋ ದೇವರೇ.. ಅನ್ನಿಸಿತು.. ಯಾರು ಗಮನಿಸಿದ್ದರೋ ಇಲ್ಲವೋ ತಿಳಿಯದು.. ಆದರೆ ನಾ ಇಪ್ಪತ್ತು ಇಪ್ಪತ್ತೈದು ನಿಮಿಷ ನಿದ್ರಿಸಿದ್ದು ಮಾತ್ರ ಸುಳ್ಳಲ್ಲ.. {ನನಗೆ ಅರಿವಿಲ್ಲದೆ ಒಂದು ಆಸೆ ಕಾಡುತ್ತಿತ್ತು... ಸ್ಮಶಾನದಲ್ಲಿ ನಿದ್ದೆ ಮಾಡಬಹುದೇ.. ಮಾಡಿದರೆ ಅದರ ಸವಿ ಹೇಗೆ ಇರುತ್ತದೆ.. ಅದು ನೆರೆವೇರಿತು.. ವಿಚಿತ್ರ ಆಸೆ.. ಆದರೆ ನಿಜ :-)}

ಕಣ್ಣು ಬಿಟ್ಟು ನೋಡಿದೆ.. ಆಗಲೇ ಮುಂದಿನ ಕಾರ್ಯಗಳು ನೆರೆವೇರುತ್ತಿದ್ದವು... ಇನ್ನೇನು ಸಂಸ್ಕಾರದ ಅಂತಿಮ ಹಂತ ತಲುಪಿತ್ತು.. ಬಂದವರೆಲ್ಲ ತಮ್ಮ ಅಂತ್ಯ ನಮನಗಳನ್ನು ಆ ಹಿರಿಯ ಜೀವಕ್ಕೆ ಸಲ್ಲಿಸಿದ್ದು ಆಗಿತ್ತು.. ಕೆಲವೇ ಕ್ಷಣಗಳು ದೇವರು ಮಾಡಿದ ಈ ಜೀವವೆಂಬ ಮಡಿಕೆ ಅಗ್ನಿಯ ಜೊತೆಯಲ್ಲಿ ಆಲಿಂಗನಕ್ಕೇ ಸಿದ್ಧವಾಗಿತ್ತು.. ಧಗ ಧಗ ಉರಿಯುತ್ತಿದ್ದ ಅಗ್ನಿ ತನ್ನ ಕೆನ್ನಾಲಿಗೆಯನ್ನು ಚಾಚಿಕೊಂಡು ಆ ಹಿರಿಯ ಜೀವವನ್ನು ತನ್ನ ಮಡಿಲಿಗೆ ಸೇರಿಸಿಕೊಂಡ.. ಇನ್ನೊಂದು ಐದಾರು ತಾಸುಗಳು.. ಹಲವಾರು ವಸಂತಗಳನ್ನು ಕಂಡ ಆ ಬ್ರಹ್ಮನ ಕೃತಿ ಒಂದು ಮಡಿಕೆಯೊಳಗೆ ಬೂದಿಯಾಗಿ.. ಕಾವೇರಿ ಮಡಿಲನ್ನು ಸೇರುವ ಕ್ಷಣಗಳು ದೂರವಿರಲಿಲ್ಲ..

ಸುಮಾರು ಹೊತ್ತು ಆ ಚಿತೆಯನ್ನೇ ನೋಡುತ್ತಾ ನಿಂತಿದ್ದೆ.. ಕಾಲುಗಳು ನೋಯುತ್ತಿದ್ದವು.. ತಲೆ ಸಿಕ್ಕಾ ಪಟ್ಟೆ ಸಿಡಿಯುತ್ತಿತ್ತು.. ತಲೆಯ ಮೇಲೆ ಯಾರೋ ಗದಾಪ್ರಹಾರ ಮಾಡುತ್ತಿರುವಂತೆ.. . ಮನಸ್ಸು ಭಾರವಾಗಿತ್ತು.. ಪಕ್ಕದಲ್ಲಿ ನೋಡಿದೆ.. ಇನ್ನೊಂದು ದೇಹದ ಅಂತ್ಯಸಂಸ್ಕಾರಕ್ಕೆ ಕಾಯುತ್ತಿದ್ದ ಚಿತೆಯ ಮೇಲೆ ಬಾಳಿ ಬದುಕಬೇಕಾದ ಪಾರಿವಾಳ ಕೂತಿತ್ತು..

ತನ್ನ ನಿತ್ಯ ಬದುಕಿಗೆ ಆಹಾರ ಹುಡುಕುತ್ತಿರುವ ಪಾರಿವಾಳ!!!

ಒಂದರ ಸಾಹಸಿ ಬದುಕಿನ ಅಂತ್ಯ.. ಇನ್ನೊಂದರದ್ದು ಬದುಕಲು ಪಡುತ್ತಿದ್ದ ಸಾಹಸ  :-(

Tuesday, December 6, 2016

ಕಣ್ಣಂಚಿನ ನೋಟ - 360° ಕೋನದಲ್ಲಿ

ಕಣ್ಣಂಚಿನ ನೋಟ - 90° ಕೋನದಲ್ಲಿ
ಕಣ್ಣಂಚಿನ ನೋಟ - 180° ಕೋನದಲ್ಲಿ
ಕಣ್ಣಂಚಿನ ನೋಟ - 270° ಕೋನದಲ್ಲಿ

ತನ್ನ ಮನಗೆದ್ದ ಹುಡುಗಿ ವೀಣಾ.. ಬಂದಳು.. ನೋಡಿದಳು.. ಮಾತಾಡಿದಳು.. ಒಮ್ಮೆ ಜೋರಾಗಿ ಚಿಗುಟಿಕೊಂಡ.. ಹೌದು ಕನಸಲ್ಲ ಇದು.. ಉದಯ ಮ್ಯೂಸಿಕ್ ನಲ್ಲಿ ಕಿಲಾಡಿಜೋಡಿ ಚಿತ್ರದ "ಕನಸಿನಲಿ ನೋಡಿದೆನು ಕನವರಿಸಿ ಕೂಗಿದೆನು" ಹಾಡು ಬಂದಾಗಲಂತೂ.. ಅರೆ ಕನಸಲ್ಲ ಇದು ನನಸು.. ಎಂದಿತು ಕೃಷ್ಣಕಾಂತನ ಮನಸ್ಸು..

ಹೋದವಾರವಷ್ಟೇ ತಂದಿದ್ದ ನೀಲಿ ಜೀನ್ಸ್ ಪ್ಯಾಂಟನ್ನು ಮನೆಯ ಹತ್ತಿರವಿದ್ದ ಟೇಲರ್ ಬಳಿಕೊಂಡೊಯ್ದು ಉದ್ದ ಸರಿಮಾಡಿಸಿಕೊಂಡು ಬರಲು ಹೊರಟ.. ಮನಸ್ಸು ಹಗುರಾಗಿತ್ತು.. "ನಾಳಿನ ಭಾಗ್ಯಕೆ ಕಾದಿದೆ ಮಡಿಲು" ಬಭೃವಾಹನ ಚಿತ್ರದ ಹಾಡಿನ ಒಂದು ಎಳೆ ಮನದಲ್ಲಿ ಹರಿದಾಡಿತು..  ಬೆಳಿಗ್ಗೆ ಪಾರ್ಕಿನ ಬಳಿ ಮಾತಾಡಿದಾಗಿನಿಂದ .. ಊಟ ತಿಂಡಿ ಏನೂ ಬೇಕಿರಲಿಲ್ಲ.. ಆದರೆ ಎಷ್ಟು ಹೊತ್ತು ಆ ನಶೆಯಲ್ಲಿ ಇರೋಕಾಗುತ್ತೆ ಅಲ್ವೇ.. ಹೊಟ್ಟೆಯಲ್ಲಿದ್ದ ಹುಳಗಳು.. ಬೇಕೇ ಬೇಕು ಊಟ ಬೇಕು ಅಂತ ಕೂಗಲು ಶುರುಮಾಡಿತು..

ಟೇಲರ್ ಅಂಗಡಿಗೆ ಪ್ಯಾಂಟ್ ಕೊಟ್ಟು.. ಹತ್ತು ನಿಮಿಷ ಬರುತ್ತೇನೆ ಎಂದು ಹೇಳಿ. ಹತ್ತಿರದಲ್ಲಿಯೇ ಇದ್ದ ಪಾನಿಪುರಿ ಗಾಡಿಯ ಬಳಿ ಹೆಜ್ಜೆ ಹಾಕಿದ.. ಪಾನಿಪುರಿ ಗಾಡಿಯವನಿಗೆ ಒಂದು ಸಲ್ಯೂಟ್ ಹೊಡೆದ.. "ಸರ್ ನಮಸ್ಕಾರ.. ಒಂದೈದು ನಿಮಿಷ ನಿಮ್ಮ ಬ್ರಾಂಡ್ ರೆಡಿ ಆಗುತ್ತೆ"

ವಾರದಲ್ಲಿ ಕನಿಷ್ಠ ಎರಡು ಮೂರು ಬಾರಿಯಾದರೂ ಅಲ್ಲಿ ಪಾನಿ ಪುರಿ ತಿನ್ನುತ್ತಿದ್ದರಿಂದ ಚಿರಪರಿಚಿತನಾಗಿದ್ದ .. ಮತ್ತೆ ಅದೇ ಗುಂಗಿಗೆ ಶರಣಾದ..ಏನೋ ಒಂದು ರೀತಿಯ ಸುಖ ಸಿಗುತ್ತಿತ್ತು..

"ಸರ್ .. ಗುರುಗಳೇ.. ಯಜಮಾನರೇ.." ಎಂದು ಹೇಳಿ.. ಗಾಡಿಯವ ಅವನ ಕೈ ಮುಟ್ಟಿದಾಗಲೇ.. ಮತ್ತೆ ಭುವಿಗೆ ಬಂದದ್ದು..
ಒಂದು ರಾಶಿ ಮಾತಾಡುವ ಇವರು ಯಾಕೆ ಸೈಲೆಂಟ್.. ಈ ಪ್ರಶ್ನೆ ಗಾಡಿಯವನ ಮನದಲ್ಲಿ ಮೂಡಿದ್ದರೂ, ಸವಿಯಾದ ಪಾನಿಪುರಿ ಕಾಲೇಜು ಯುವತಿಯರ ಬಾಯಲ್ಲಿ ಮಾಯವಾಗುವಂತೆ, ಗಾಡಿಯವನ ಮನದಲ್ಲಿ ಹಾಗೆ ಮರೆಯಾಯಿತು.. ಕಾರಣ ಸಂಜೆ.. ಅವನ ಗಾಡಿಗೆ ಗ್ರಾಹಕರು ಹೆಚ್ಚು.. :-)

ತನ್ನ ಯಥಾಪ್ರಕಾರದ ಖೋಟಾ ಮುಗಿಸಿ.. ಟೇಲರ್ ಅಂಗಡಿಯಿಂದ ಪ್ಯಾಂಟ್ ಪಡೆದು ಮನೆಗೆ ಬಂದ.. ಗಡಿಯಾರ ನೋಡಿದಾಗ ಒಂಭತ್ತು ಮೂವತ್ತಾಗಿತ್ತು.. ತನ್ನ ಇಷ್ಟದ ಕಾರ್ಯಕ್ರಮ "ಥಟ್ ಅಂತ ಹೇಳಿ" ಕಾರ್ಯಕ್ರಮ ನೋಡುತ್ತಾ ಹಾಗೆ ಮಂಚದ ಮೇಲೆ ಉರುಳಿಕೊಂಡ.. ನಿದ್ರಾದೇವಿ ಯಾವಾಗ ಅವರಿಸಿಕೊಂಡಿದ್ದಳೋ ಅರಿವಿಲ್ಲ..

ಬೆಳಿಗ್ಗೆ ಎದ್ದಾಗ ಹತ್ತು ಘಂಟೆ.. ಅಲ್ಲಿಯ ತನಕ ರಾತ್ರಿ ಹಾಕಿದ್ದ ಟಿವಿ ಓಡುತ್ತಲೇ ಇತ್ತು.. ಯಥಾ ಪ್ರಕಾರ .. ತನ್ನ ಕಾರ್ಯಕ್ರಮ ಮುಗಿಸಿ..  ಆಂಜನೇಯ ದೇವಸ್ಥಾನಕ್ಕೆ ಹೋದ.. ಕೆಲ ಹೊತ್ತು ಅಲ್ಲಿಯೇ ಕೂತು ಜಪ ಮಾಡಿಕೊಂಡು ಕಣ್ಣು ತೆಗೆದಾಗ ಮನಸ್ಸು ತಹಬದಿಗೆ ಬಂದಿತ್ತು.. ಚಪ್ಪಲಿ ಮೆಟ್ಟಿಕೊಂಡು ತನ್ನ ಬೈಕ್ ಹತ್ತಿರ ಬಂದಾಗ.. ಒಂದು ಚೀಟಿ ಕನ್ನಡಿಗೆ ಮೆತ್ತಿಕೊಂಡದ್ದು ಕಾಣಿಸಿತು..ಯಾವುದೋ ಜಾಹಿರಾತಿನ ಚೀಟಿ ಎಂದು ಬಿಸಾಕಲು ಹೋದವನಿಗೆ ಕಂಡದ್ದು.. "ಸರ್ .. ಕ್ಷಮಿಸಿ.. ಸಮಯ ಹೇಳೋದು ಮರೆತಿದ್ದೆ.. ಸಂಜೆ ಏಳು ಘಂಟೆಗೆ ನ್ಯೂ ಶಾಂತಿ ಸಾಗರ್ ಹತ್ತಿರ ಬನ್ನಿ.. ಒಂದು ಟೇಬಲ್ ಕಾದಿರಿಸುತ್ತೇನೆ.. "

ಏನಪ್ಪಾ ಇದು... ಏನು ನೆಡೆಯುತ್ತಿದೆ.. ಈಕೆ ಹುಡುಗಿಯೇ.. ಪತ್ತೇದಾರಳೆ.. ಏನೂ ಅರಿವಾಗುತ್ತಿಲ್ಲ.. ಗೊಂದಲದ ಗೂಡಾಗಿದ್ದ ಕೃಷ್ಣಕಾಂತ ಒಮ್ಮೆ ಜೋರಾಗಿ ಉಸಿರು ಒಳಗೆ ತೆಗೆದುಕೊಂಡು ಹೊರಕ್ಕೆ ಹಾಕಿದ.. ತಾಳ್ಮೆ, ಪ್ರಶಾಂತತೆ.. ಯಾವುದೇ ವಿಷಮ ಪರಿಸ್ಥಿತಿಯಲ್ಲೂ ವಿವೇಕದಿಂದ ವರ್ತಿಸುತ್ತಿದ್ದ ಅವನಿಗೆ.. ತನ್ನ ಮನಸ್ಸು ಕೊಂಚ ಗಲಿಬಿಲಿಗೊಂಡಿದ್ದರೂ, ಬೆಳಗಿನ ದೇವಸ್ಥಾನದ ಭೇಟಿ ಅವನಿಗೆ ಹಿತ ನೀಡಿ ಮನಸ್ಸನ್ನು ಶಾಂತಗೊಳಿಸಿತ್ತು

"ನೀರಲ್ಲಿ ಮುಳುಗಿದವನಿಗೆ ಮಳೆಯೇನು ಚಳಿಯೇನು"  ಎಂಬ ಗಾದೆಯಂತೆ, ಅದೇನಾಗುತ್ತೋ ನೋಡಿಯೇ ಬಿಡೋಣ.. ಎಂದು ಯೋಚಿಸುತ್ತಾ ಮನೆಗೆ ಬಂದ..

ಕಚೇರಿಯ ಕೆಲಸ ಒಂದು ಖಂಡುಗ ಇತ್ತು.. ನಿಧಾನಕ್ಕೆ ತನ್ನ ಕೆಲಸದ ಮತ್ತಿನ ಲೋಕಕ್ಕೆ ಜಾರಿದ.. ಮಧ್ಯಾನ್ಹದ ಊಟದ ಅರಿವಿಲ್ಲ... ತನ್ನ ಕೋಣೆಯಲ್ಲಿ ಬೆಳಕು ಕಡಿಮೆಯಾದಾಗಲೇ ಅವನಿಗೆ ಅರಿವಾದದ್ದು.. ಸಂಜೆಯಾಗಿದೆ ಎಂದು!

ಸಮಯನೋಡಿಕೊಂಡ ಸಂಜೆ ೬. ೨೫ ಆಗಿದೆ.. ಅರೆ ಅರೆ ಏನಾಯ್ತು ಇದು.. ಎಂದು ಗಡಿಬಿಡಿಯಿಂದ ಎದ್ದು.. ಮೋರೆ ತೊಳೆದುಕೊಂಡು.. ಆ ಹುಡುಗಿ ಹೇಳಿದ್ದ ಬಿಳಿ ಶರ್ಟ್ ಮತ್ತು ನೀಲಿ ಜೀನ್ಸ್ ತೊಟ್ಟು.. ಉರಿಯುತ್ತಿದ್ದ ದೇವರ ದೀಪಕ್ಕೆ ಇನ್ನಷ್ಟು ಎಣ್ಣೆ ಹಾಕಿ... ದೇವರಿಗೆ ಕೈಮುಗಿದು ಹೊರಟ..

ನ್ಯೂ ಶಾಂತಿಸಾಗರ್ ಹತ್ತಿರ ಬಂದಾಗ ೬.೫೫ ಆಗಿತ್ತು.. ಅಬ್ಬಾ ಇನ್ನೂ ಐದು ನಿಮಿಷ ಇದೆ.. ಸದ್ಯ ಸಮಯಕ್ಕಿಂತ ಮುಂಚೆಯೇ ಬಂದೆ.. ಎಂದು ನಿಡಿದಾದ ಉಸಿರು ಬಿಟ್ಟು ಬೈಕನ್ನು ಪಕ್ಕದಲ್ಲಿಯೇ ನಿಲ್ಲಿಸಿ, ಹೆಲ್ಮೆಟ್ ಸಿಕ್ಕಿಸಿ ಬೀಗ ಹಾಕಿಕೊಂಡು ಹೋಟೆಲ್ ಬಾಗಿಲ ಬಳಿ ನೆಡೆದ..

"ನಮಸ್ಕಾರ್ ಕೃಷ್ಣಕಾಂತ್.. ಹೇಗಿದ್ದೀರಾ.. " ಅಪರಿಚಿತ ಧ್ವನಿಗೆ ಚಕ್ ಅಂತ ಹಿಂದೆ ತಿರುಗಿ ನೋಡಿದ..

ಏಕ್ ದಂ ಅಪರಚತ ವ್ಯಕ್ತಿ.. ಅಪರಿಚಿತ ಧ್ವನಿ..

"ಸರ್ ನೀವು?"

"ಅದೆಲ್ಲಾ ಆಮೇಲೆ .. ಮೊದಲು ಬನ್ನಿ ಒಳಗೆ ಹೋಗೋಣ.. ನಿಮಗಾಗಿ ಒಬ್ಬರು ಕಾಯುತ್ತಿದ್ದಾರೆ.. "

ಹೃದಯ ಬಾಯಿಗೆ ಬಂದಿತ್ತು.. ಯಾರಪ್ಪ ಇದು.. ನೋಡಲು ಚೆಲುವಾಂತ ಚೆನ್ನಿಗನೇ ಆಗಿದ್ದರೂ.. ಇವ ಯಾರೂ ಅನ್ನುವ ಪ್ರಶ್ನೆ.. ಬಸ್ ನಿಲ್ದಾಣಕ್ಕೆ ಬಂದು.. ಯಾವ ಆಟೋ ನಾ ಹೋಗುವ ಜಾಗಕ್ಕೆ ಬರುತ್ತಾನೆ ಎನ್ನುವ ಗೊಂದಲದ ತರಹವೇ ಕೃಷ್ಣಕಾಂತನಿಗೂ ಕಾಡುತ್ತಿತ್ತು..

ಹೃದಯದ ಬಡಿತ ಜೋರಾಗಿಯೇ ನಗಾರಿ ಬಾರಿಸಲು ಶುರುಮಾಡಿತ್ತು..

"ಸರ್ ನೀವು ಯಾರೂ ಅಂತ ಹೇಳಲಿಲ್ಲ.. ಬೇರೇ ಯಾರನ್ನೋ ತಪ್ಪಾಗಿ ತಿಳಿದುಕೊಂಡಿದ್ದೀರಿ ಅನ್ನಿಸುತ್ತದೆ" ಕೃಷ್ಣಕಾಂತ್ ಬಡಬಡಿಸುತ್ತಲೇ ಇದ್ದಾ..

".... .. ನೀವೇ ಕೃಷ್ಣಕಾಂತ್ ತಾನೇ.. ನಾ ಸರಿಯಾಗಿಯೇ ಗುರುತಿಸಿದ್ದೇನೆ.. ಮೊದಲು ಬನ್ನಿ.. "

"ಸರ್.. .ನಾ ಇಲ್ಲಿ ಒಬ್ಬರಿಗೆ ಕಾಯುತ್ತಿದ್ದೇನೆ.. ಅವರು ಬಂದ ಮೇಲೆ ಒಳಗೆ ಹೋಗಬೇಕು.. ನೀವು ಕನ್ಫ್ಯೂಸ್ ಮಾಡಿಕೊಂಡಿದ್ದೀರಾ ಅನ್ಸುತ್ತೆ"

ತುಸು ಗಡಸು ದನಿಯಲ್ಲಿ ಆತ "ಕೃಷ್ಣಕಾಂತ್.. ನೀವು ಬರದೇ ಹೋದರೇ.. ನಾನು ನಿಮ್ಮನ್ನು ಎತ್ತಿಕೊಂಡು ಒಳಗೆ ಹೋಗುತ್ತೇನೆ.. ಕೂಸುಮರಿ ಮಾಡಿಕೊಂಡು.. ನಡೀರಿ ಸರ್ ಒಳಗೆ"

ಬೇರೆ ದಾರಿಯಿಲ್ಲದೆ "ಸರ್.. ಅದು.. ನೋಡಿ.. ದಯವಿ.. ಸರ್.. ಪ್ಲೀಸ್... ಛೆ... ನೋಡಿ ಸರ್.. "

"ಕೃಷ್ಣಕಾಂತ್ ಮಾತು ಆಮೇಲೆ.. ಮೊದಲು ಒಳಗೆ ನೆಡೆಯಿರಿ" ತುಸು ಗದರಿದ ದನಿಯಲ್ಲಿ ಹಾಗೆ ಕೃಷ್ಣಕಾಂತನನ್ನು ತಳ್ಳಿಕೊಂಡೇ ಒಳಗೆ ಹೊರಟ...

ಬೇರೆ ದಾರಿ ಕಾಣದೆ.. ಕೃಷ್ಣಕಾಂತ್ ದೇವರ ಮೇಲೆ ಭಾರ ಹಾಕಿ... ಹೋಟೆಲ್ ಒಳಗೆ ಕಾಲಿಟ್ಟ..

ಟೇಬಲ್ ನಂಬರ್ ೮ ಖಾಲಿ ಇತ್ತು.... . ಮಂದ ಬೆಳಕು ಸ್ಪಷ್ಟವಾಗಿ ಕಾಣುತ್ತಿರಲಿಲ್ಲ.. ನಿಧಾನಕ್ಕೆ ಆ ಟೇಬಲ್ ಕಡೆ ಇಬ್ಬರೂ ಹೆಜ್ಜೆ ಇಟ್ಟರು..

ಕೃಷ್ಣಕಾಂತನಿಗೆ.. ಪಾಪ ಆ ಹುಡುಗಿ ಹೊರಗೆ ಕಾಯುತ್ತಿರುತ್ತಾಳೆ.. ಈ ಮಂಗಮನುಷ್ಯ ನೋಡಿದರೆ ನನ್ನನ್ನು ಯಾರೋ ಅಂದುಕೊಂಡು ಬಲವಂತವಾಗಿ ಕರೆದೊಯ್ಯುತ್ತಿದ್ದಾನೆ..  ಆಕೆಯ ಮೊಬೈಲ್ ನಂಬರ್ ಇದ್ದಿದ್ದ್ರೆ.. ಒಂದು ಸಂದೇಶ ಆದರೂ ಕಳಿಸಬಹುದಿತ್ತು ಛೆ.. ಕೋಪ ಉಕ್ಕುತ್ತಿತ್ತು.. ಆದರೆ ಏನೂ ಮಾಡುವಂತೆ ಇರಲಿಲ್ಲ..

ಟೇಬಲ್ ಎಂಟರಲ್ಲಿ ಒಂದು ಫಲಕ ಇತ್ತು "R E S E R V E D"

"ಕೃಷ್ಣಕಾಂತ್.. ಇಲ್ಲಿಯೇ ಕೂತಿರೀ.. ಎರಡು ನಿಮಿಷ ಬಂದೆ.. "

ಮಾಯಾಬಜಾರ್ ಚಿತ್ರ ನೋಡಿದ ಅನುಭವ.. ಏನಾಗುತ್ತಿದೆ ಅರಿವಾಗುತ್ತಿಲ್ಲ.. ಏನಾಗಬೇಕಿತ್ತೋ ಆಗುತ್ತಿಲ್ಲ  .. ಪಾಪ ಆ ಹುಡುಗಿ ಹೊರಗೆ ಕಾಯುತ್ತಿರುತ್ತಾಳೆ.. ಓಕೆ ಓಕೆ ಈ ವ್ಯಕ್ತಿ ಬಂದ ಕೂಡಲೇ ಸ್ವಲ್ಪ ದಬಾಯಿಸಿ.. ಹೊರಟು ಬಿಡಬೇಕು.. ಪಾಪ ಆ ಹುಡುಗಿಯನ್ನು ಕಾಯಿಸುವುದು ಸರಿಯಲ್ಲ.. ಮನಸ್ಸನ್ನು ಸಿದ್ಧಮಾಡಿಕೊಂಡು ಒಂದು ಲೋಟ ನೀರು ಕುಡಿದು.. ಸುಮ್ಮನೆ ಕುಳಿತಿದ್ದ..

ಒಂದೆರಡು  ಕ್ಷಣಗಳು ಯುಗಗಳ ತರಹ ಉರುಳಿತು ..

".. ನಮಸ್ಕಾರ ಕೃಷ್ಣಕಾಂತ್ ಹೇಗಿದ್ದೀರಾ"

ಕೋಗಿಲೆ ಧ್ವನಿ.. ನಾ ಕೇಳಿದ ಧ್ವನಿ.. ತಾನಿಷ್ಟ ಪಟ್ಟ ಧ್ವನಿ ..

ಕುತ್ತಿಗೆ ನೋವಾಗುತ್ತೆ ಎಂದು ಗೊತ್ತಿದ್ದರೂ.. ೨೭೦ ಡಿಗ್ರಿ ತಿರುಗಿದ...

ಕಣ್ಣು ಊರಗಲವಾಯಿತು.. ಮೈ ಮೆಲ್ಲನೆ ಬೆವರಲು ಶುರುಮಾಡಿತು.. ಅಯ್ಯೋ ಈ ಹುಡುಗಿ ಯಾರನ್ನೋ ಕರೆತಂದಿದ್ದಾಳೆ.. ಏನೂ ಗ್ರಹಚಾರವೋ ನಾನೇಕೆ ಒಪ್ಪಿಕೊಂಡೆ ಇಲ್ಲಿಗೆ ಬರಲು.. ಅರೆ ನಾನೆಲ್ಲಿ ಒಪ್ಪಿಕೊಂಡೆ.. ಅವಳು ಹೇಳಿದಳು.. ನಾ ಕುರಿಯಂತೆ ಇಲ್ಲಿಗೆ ಬಂದಿದ್ದೇನೆ.. ಛೆ ಯೋಚಿಸಬೇಕಿತ್ತು.. ದುಡುಕಿಬಿಟ್ಟೆ..ಸುತ್ತಮುತ್ತಲು ಒಳ್ಳೆ ಘನತೆ ಗೌರವ ಕಾಪಾಡಿಕೊಂಡಿದ್ದೇನೆ... ಈಗ ಏನಾಗುತ್ತೋ.. ಗಣಪ.. ನನ್ನ ಮಾನ ಮರ್ಯಾದೆ ಎಲ್ಲವೂ ನಿನ್ನ ಕೈಯಲ್ಲಿ.. ಒಂದೆರಡು ಅರೆ ಘಳಿಗೆಗಳಲ್ಲಿ ಕಣ್ಣು  ಮುಚ್ಚಿ ಹಾಗೆ ಧ್ಯಾನಿಸಿದ...

"ವೀಣಾ.. ಇವರೇ ನಿನ್ನನ್ನು ಕಾಡುತ್ತಿದ್ದ ಕೃಷ್ಣಕಾಂತ್.. .. ಏನ್ರಿ.. ನಮ್ಮ ಹುಡುಗೀನೇ ಬೇಕಿತ್ತಾ ನಿಮಗೆ.. ನಿಮಗೆ ಸ್ವಲ್ಪವೂ ಬೇಸರವಾಗುವುದಿಲ್ಲವೇ.. ಏನ್ರಿ ಆಗಿಂದ ನೋಡುತ್ತಿದ್ದೇನೆ.. ಏನೂ ಮಾತಾಡುತ್ತಿಲ್ಲ.. ದಿನಾ ಕಣ್ಣರಳಿಸಿಕೊಂಡು ನೋಡೋಕೆ ಆಗುತ್ತೆ.. ಮಾತಾಡೋಕೆ ಆಗೋಲ್ವಾ.. ಸುಮ್ಮನೆ ಯಾಕ್ರೀ ಕೂತಿದ್ದೀರಾ ಮಾತಾಡ್ರಿ ಕೃಷ್ಣಕಾಂತ್.. " ತೀಕ್ಷ್ಣ ನುಡಿಗಳು ಮೊದಲೇ ಗಾಬರಿಯಾಗಿ ಜೇನುಗೂಡಾಗಿದ್ದ ಮನಸ್ಸು..  ಕಲ್ಲು ಬಿದ್ದ ಜೇನು ಗೂಡಾಗಿತ್ತು..

ಬಾಯಲ್ಲಿ ನೀರಿನ ಪಸೆ .. ಕೆ ಆರ್ ಎಸ್ ಅಣೆಕಟ್ಟಿನ ರೀತಿಯಲ್ಲಿ ಒಣಗಿದ ವಾಟೆಗರಿಯಾಗಿತ್ತು.. ನಾಲಿಗೆಯಿಂದ ತುಟಿಯನ್ನು ಒಮ್ಮೆ ಸವರಿಕೊಂಡು .. ಸುತ್ತಲೂ ನೋಡಿದ.. ಯಾರೂ ಗಮನಿಸುತ್ತಿಲ್ಲ ಎಂದು ಅರಿತ ಮೇಲೆ.. ಟೇಬಲ್ ಮೇಲಿದ್ದ ನೀರಿನ ಲೋಟವನ್ನ ಎತ್ತಿಕೊಳ್ಳಲು ಹೋದ..

"ಸರ್ ಕ್ಷಮಿಸಿ.. ನೀವು  ಗಾಬರಿಯಾಗಿದ್ದೀರಾ.. ದಯಮಾಡಿ ಕ್ಷಮಿಸಿ.. ಇವರು ಸುಮ್ಮನೆ ನಿಮ್ಮನ್ನು ಗೋಳು ಹುಯ್ದುಕೊಳ್ಳುತ್ತಿದ್ದಾರೆ.. ತಗೋಳಿ ನೀರು ಕುಡಿಯಿರಿ.. " ಜೇನುದನಿ ಬಂದ ಕಡೆ ಮತ್ತೆ ಕಣ್ಣು ಅರಳಿಸಿದ..

ಇಬ್ಬರೂ ಜೋರಾಗಿ ನಗಲು ಶುರುಮಾಡಿದರು.. ಇಬ್ಬರೂ "ಕೃಷ್ಣಕಾಂತ್ ದಯಮಾಡಿ  ಕ್ಷಮಿಸಿ.. ಇದು ಇವಳದೆ ಪ್ಲಾನ್.. ನಮ್ಮನ್ನು ಕ್ಷಮಿಸಿ.. ಪ್ಲೀಸ್ ರಿಲ್ಯಾಕ್ಸ್ ಆಗಿ.. ಕಾಫಿ ಹೇಳಲೇ.. ನಿಮಗೆ"

ಪೇಲವ ನಗೆ ಬಿಸಾಕಿ "ಹೂ ಸರ್" ಎಂದ ಕೃಷ್ಣಕಾಂತ್..

"ಓಕೆ.. ವಿಷಯಕ್ಕೆ ಬರುತ್ತೇನೆ.. ನೋಡಿ ಕೃಷ್ಣಕಾಂತ್.. ನಾನು ರೇವ್.. ಸಾರಿ ರೇವಂತ್ ಅಂತ.. ಇವಳಿದ್ದಾಳಲ್ಲ ಇವಳ ತರಲೆ ಸಹಿಸಿಕೊಳ್ಳಲು ಈಕೆಯನ್ನು ಕೈ ಹಿಡಿಯುತ್ತಿರುವವನು.. ಇನ್ನೂ ಎಷ್ಟು ಕೀಟಲೆ ಸಹಿಸಿಕೊಳ್ಳಬೇಕು ಗೊತ್ತಿಲ್ಲ.. ನೀವು ಒಡವೆ ಅಂಗಡಿಯಿಂದ ಇವಳು ಹೊರಬಂದಿದ್ದನ್ನು ನೋಡಿದ್ದಿರಲ್ಲ.... ನೋಡಿ ಈ ಉಂಗುರ ತರಲು ಹೋಗಿದ್ದಳು.. ಇದು ನಮ್ಮಿಬ್ಬರ ನಿಶ್ಚಿತಾರ್ಥದ ಸಂಕೇತ.. ಇನ್ನೊಮ್ಮೆ ತರಕಾರಿ ಅಂಗಡಿಯ ಬಳಿ ಸಿಕ್ಕಾಗ.. ಮಿಂಚಿನಂತೆ ಬಂದು ಮಾಯವಾಗಿದ್ದಳಲ್ವ.. ಅಂದು ನಮ್ಮಿಬ್ಬರ ನಿಶ್ಚಿತಾರ್ಥದ ಹಿಂದಿನ ದಿನವಾಗಿತ್ತು.. ಇವಳ ಮನೆಯಲ್ಲಿಯೇ ಆ ಕಾರ್ಯಕ್ರಮ ನೆಡೆದಿತ್ತು  ಆದ್ದರಿಂದ..ಕಡೆ ಘಳಿಗೆಯಲ್ಲಿ ಅಡಿಗೆ ಭಟ್ಟರು ಹೇಳಿದ ಕೆಲವು ತರಕಾರಿಗಳನ್ನು ತರಲು ಇವಳು ಬಂದಿದ್ದಳು.. ಮತ್ತು ಸೀರೆಗೆ ಜಿಗ್ ಜಾಗ್, ಕುಚ್ಚು ಕಟ್ಟಲು ಕೊಟ್ಟಿದ್ದು, ಬ್ಲೌಸ್ ಅದಕ್ಕೆ ಹೊಂದುವಂತಹ ಬಳೆಗಳು ಇದನ್ನೆಲ್ಲಾ ತರಲು ಹೋಗಿದ್ದಳು.. ಅವಾಗ ನೀವು ಅಚಾನಕ್ ಇವಳ ಎದುರಿಗೆ ಬಂದಿರಿ.. ಆದರೆ ಇಬ್ಬರಿಗೂ ಆ ಮಂದಬೆಳಕಲ್ಲಿ ಏನು ಮಾಡಬೇಕು ಎಂದು ತೋಚದೆ.. ನಿಮ್ಮ ಪಾಡಿಗೆ ನೀವು ಹೋದಿರಿ.. ಅವಳ ಪಾಡಿಗೆ ಅವಳು ಹೋದಳು.."

ಮಂತ್ರ  ಮುಗ್ಧನಾಗಿ ಕೇಳುತ್ತಲೇ ಇದ್ದಾ ಕೃಷ್ಣಕಾಂತ್..

"ಆಮೇಲೆ.. ಸುಮಾರು  ದಿನಗಳು ನಿಮಗೆ ಇವಳು ಕಾಣಲಿಲ್ಲ .. ಇವಳಿಗೆ ನೀವು ಕಾಣಲಿಲ್ಲ.. ಕಾರಣ.. ಇವಳ ಆಫೀಸ್ ವಿಳಾಸ ಬದಲಾಗಿದ್ದು. .. ಕೆಲಸ ಒತ್ತಡ ಹೆಚ್ಚಿದ್ದು.. ಜೊತೆಯಲ್ಲಿ ನಮ್ಮಿಬ್ಬರ ಓಡಾಟ.. ಇವೆಲ್ಲವೂ ನಿಮ್ಮ ಕಣ್ಣಿಂದ  ಈ ಸುಂದರಿಯನ್ನು ಕೊಂಚ ದೂರ ಇರಿಸಿತ್ತು.. ಹಾಗೆಯೇ ಈ ಸುಂದರಿಯೂ ಕೂಡ ನಿಮ್ಮನ್ನು ಮಿಸ್ ಮಾಡಿಕೊಂಡದ್ದು ಇದೆ ಕಾರಣಕ್ಕೆ.. ಇಂದು ನಾವು ಮೂವರು ಒಂದೇ ಸೂರಿನಡಿ ಕೂತಿದ್ದೇವೆ.. ಈಗ ನನ್ನ ಮಾತು ಮುಗಿಯಿತು.. ನಿಮ್ಮ ಸರದಿ.. "

ರೇವಂತ್ ಉಫ್ ಇಂದು ಉಸಿರು ಬಿಟ್ಟು.. ಒಂದು ಲೋಟ ತಣ್ಣಗಿನ ನೀರನ್ನು ಗಟಗಟ ಕುಡಿದು.. ವೀಣಾಳ ಕಡೆ ನಗೆ ಬೀರಿ ಕಣ್ಣು ಹೊಡೆದ..

"ಸರ್.. ನಾ.. ಏನೂ.... ಹೇಗೆ.. ಛೆ.. ಉಫ್.. ಏನೂ ಗೊತ್ತಾಗು.. ಛೆ.. "

"ಕೃಷ್ಣಕಾಂತ್.. ದಯಮಾಡಿ ಗಾಬರಿ ಮಾಡಿಕೊಳ್ಳಬೇಡಿ.. ನಿಮ್ಮ ಗೊಂದಲ ನನಗೆ ಅರ್ಥವಾಗುತ್ತೆ.. ಇದೆಲ್ಲ ನಾ ಇವರಿಗೆ ಹೇಳಿದ್ದೆ.. ಗಾಬರಿ ಮಾಡಿಕೊಳ್ಳಬೇಡಿ.. ನಿಮ್ಮ ಬಗ್ಗೆ ಎಲ್ಲವನ್ನು ಹೇಳಿದ್ದೇನೆ.. ನಿಮ್ಮ ನಡೆನುಡಿ ನನಗೆ ಇಷ್ಟವಾಗಿದೆ.. ನಿಮ್ಮಂತಹ ಅದ್ಭುತ ವ್ಯಕ್ತಿಯ ಸ್ನೇಹದ ವಲಯದಲ್ಲಿ ನಾನಿರಬೇಕು ಎಂದು ಬಯಸುತ್ತೇನೆ.... ಛೆ.. ನಾವಿಬ್ಬರೂ ಬಯಸುತ್ತೇವೆ.. ನಿಮ್ಮ ಸ್ನೇಹದ ಬಂಧನ ನಮಗೆ ಸಿಗಬಹುದೇ.. "

ಕೃಷ್ಣಕಾಂತನಿಗೆ ಏನೂ ಹೇಳಬೇಕೋ ತೋಚದೆ.. ಸುಮ್ಮನೆ ಕೂತುಕೊಂಡ.. ಇನ್ನೊಂದು ಲೋಟ ನೀರು ಒಳಗೆ ಹೋಯಿತು..

ಅಷ್ಟರಲ್ಲಿ ಕಾಫಿ ಬಂತು.. ಗಾಬರಿಗೊಂಡಿದ್ದ ದೇಹ.. ಹೋಟೆಲಿನ ಎಸಿ.. ಕೊಂಚ ತಲೆನೋವು ತಂದಿತ್ತು.. ಕಾಫಿ ಕುಡಿದು ಮತ್ತೊಮ್ಮೆ ನೀರನ್ನು ಕುಡಿದು.. ಜೋರಾಗಿ ನಿಟ್ಟುಸಿರು ಬಿಟ್ಟ..

ವೀಣಾ ಮತ್ತು ರೇವಂತ್ ಮುಸಿ ಮುಸಿ ನಗುತ್ತಲೇ ಇದ್ದರು..

"ಕೃಷ್ಣಕಾಂತ್.. ನಿಮ್ಮ ಗೊಂದಲ ನಮಗೆ ಅರ್ಥವಾಗುತ್ತೆ.. ನೋಡಿ.. ನಾವಿಬ್ಬರೂ ಯಾಕೆ ಇಷ್ಟು ಓಪನ್ ಮೈಂಡೆಡ್ ಅಂದ್ರೆ..ನಮ್ಮಿಬ್ಬರ ಮಧ್ಯೆ ನಮಗೆ ನಂಬಿಕೆ ಇದೆ.. ಅಪಾರ ನಂಬಿಕೆ ಇದೆ.. ನಮಗಿಬ್ಬರಿಗೂ ನಮ್ಮ ಮೇಲೆ ನಂಬಿಕೆ ಇದೆ.. ತಪ್ಪು, ಅನುಮಾನ, ಸಂಶಯ, ದುರಾಸೆ, ಶಂಕೆ ಇದು ಯಾವುದೂ ನಮಗೆ ಗೊತ್ತಿಲ್ಲ.. ಪ್ರೀತಿಯೇ ನಮ್ಮುಸಿರು ಇದು ನಮ್ಮ ಬಾಳಿನ ಧ್ಯೇಯ.. ಒಂದು ವರ್ಷದಿಂದ ನೀವು ಇವಳನ್ನು ನೋಡುತ್ತಿದ್ದರೂ, ಒಮ್ಮೆಯೂ ಕೆಟ್ಟ ನೋಟದಿಂದ ನೀವು ನೋಡಿಲ್ಲ ಎಂದು ಇವಳೇ ಹಲವಾರು ಬಾರಿ ಹೇಳಿದ್ದಾಳೆ .. ಜೊತೆಯಲ್ಲಿ ಇವಳು ಕೂಡ ನಿಮ್ಮ ಬಗ್ಗೆ ಆಗಾಗ ಏನು ಬಂತು.. ನಾವು ಭೇಟಿಯಾದಾಗೆಲ್ಲ ನನಗೆ ಹೇಳುತ್ತಲೇ ಇದ್ದಳು.. ಹಾಗಾಗಿ ನಿಮಗೆ ಅರಿವಿಲ್ಲದೆ .. ಎಷ್ಟೋ ದಿನ ನಾ ಕೂಡ ನಿಮ್ಮನ್ನು ಗಮನಿಸಿದ್ದೇನೆ.. ಸಂಜೆ ನೀವು ಆಫೀಸಿನಿಂದ ಮನೆಗೆ ಬರುವಾಗ.. .. ನೀವು ಎಲ್ಲರನ್ನು ಹಾಗೆ ಗಮನಿಸುವುದಿಲ್ಲ ಎಂದು ತಿಳಿಯಿತು..  ನಿಮ್ಮ ಸುತ್ತಲ ಮುತ್ತಲ ಪ್ರದೇಶದಲ್ಲಿ ನಿಮ್ಮ ಬಗ್ಗೆ ಒಳ್ಳೆಯ ಬಹಳ ಒಳ್ಳೆಯ ಅಭಿಪ್ರಾಯವಿದೆ ಎಂದು ಈ ಬಡಾವಣೆಯ ಜನರಿಂದ ತಿಳಿಯಿತು.. .. ಇದೆಲ್ಲ ತಿಳಿದ ಮೇಲೆ, ವೀಣಾ ಕೂಡ ನಿಮ್ಮಂತಹ ಸ್ನೇಹಿತ ನಮ್ಮ ಬಾಳಿನಲ್ಲಿ ಇದ್ದರೇ  ಚೆನ್ನಾ ಅಂದಳು.. ನನಗೆ ನಾವು ಮೂವರು ಒಂದು ಅದ್ಭುತ ಸ್ನೇಹಿತರಾಗಬಹುದು ಎನ್ನಿಸಿತು.. ಹಾಗಾಗಿ ನೀವು ಇಲ್ಲಿದ್ದೀರಿ.. " ಎಂದು ತಮ್ಮ ಹೃದಯವನ್ನು ಮುಟ್ಟಿ ತೋರಿಸಿದಾಗ... ಕೃಷ್ಣಕಾಂತ್ ಮೂಕವಿಸ್ಮಿತನಾಗಿದ್ದ..

ವೀಣಾ ತನ್ನ ಕುರ್ಚಿಯಿಂದ ಎದ್ದು .ಕೈ ಚಾಚಿ . "ಕೃಷ್ಣಕಾಂತ್ ನಮ್ಮ ಸ್ನೇಹದ ಬಂಧನಕ್ಕೆ ಸ್ವಾಗತ ಶುಭ ಸ್ವಾಗತ.."  ಎಂದಾಗ ಅರಿವಿಲ್ಲದೆ ತನ್ನ ಕೈಯನ್ನು ಚಾಚಿದ.. ಪುಸಕ್ ಅಂತ ರೇವಂತ್ ಕೃಷ್ಣಕಾಂತನ ಕೈ ಎಳೆದುಕೊಂಡು "ಒಯೆ ಇವನು ನನ್ನ ಸ್ನೇಹಿತ.. ಅಲ್ವೇನೋ ಕಾಂತಾ"

ಸೋಲೊಪ್ಪಿಕೊಳ್ಳದ ವೀಣಾ "ಕಾಂತಾ ನಾ ತಾನೇ ನಿನ್ನ ಮೊದಲು  ನೋಡಿದ್ದು.. ಹಾಗಾಗಿ ನಾನೇ ತಾನೇ ನಿನ್ನ ಮೊದಲ ಸ್ನೇಹಿತೆ.. "

ಮಕ್ಕಳ ಜಗಳ ಕೃಷ್ಣಕಾಂತನಿಗೆ ಮಜಾ ಕೊಡುತ್ತಿತ್ತು..

ಇಷ್ಟು ಹೊತ್ತಾದರೂ.. ಪೂರ್ಣವಾಗಿ ಮಾತಾಡಲು ಅವಕಾಶ ಸಿಕ್ಕದ ಕೃಷ್ಣಕಾಂತ್ ಧೈರ್ಯ ಮಾಡಿ.. ವೀಣಾಳ ಕೈಯನ್ನು ಹಿಡಿದುಕೊಂಡು.. ಅದರ ಮೇಲೆ ರೇವಂತ್ ಕೈ ಇಟ್ಟು. "ವೀಣಾ- ರೇವಂತ್ ಇಂದಿನಿಂದ ನಾವು ಒಂದೇ ಪ್ರಾಣ.. ಮೂರು ದೇಹ .. ನಿಮಗಿಬ್ಬರಿಗೂ ಶುಭವಾಗಲಿ.. ಮದುವೆಗೆ ಈ ನಿಮ್ಮ ಸ್ನೇಹಿತನ ಕರೆಯೋದು ಮರೆಯಬೇಡಿ.. "

ಅಚಾನಕ್ ಕೃಷ್ಣಕಾಂತ್ ಅಷ್ಟೊಂದು ಸಲುಗೆಯಿಂದ ಮಾತಾಡಿದ್ದು ವೀಣಾ ಮತ್ತು ರೇವಂತ್ ಇಬ್ಬರಿಗೂ ಆಶ್ಚರ್ಯವಾಯಿತು.. ಆದರೂ ಕೃಷ್ಣಕಾಂತನ ಸ್ನೇಹಪರ ಮನಸ್ಸು ಅರಿತಿದ್ದ ಇಬ್ಬರಿಗೂ ಅವನ ಮಾತು ಮತ್ತು ಕೃತಿ ಮೆಚ್ಚುಗೆಗೆ ಪಾತ್ರವಾಯಿತು..

"ಹೌದು ರೇವಂತ್.. ಒಂದು ಮಾತು ನಿನ್ನಲ್ಲಿ.. ಮುಚ್ಚು ಮರೆಯಿಲ್ಲದೆ ಹೇಳುತ್ತೀಯಾ"

"ಹಾ ಕೃಷ್ಣಕಾಂತ್.. ನಿನ್ನ ಪ್ರಶ್ನೆ ನನಗೆ ಗೊತ್ತು .. ವೀಣಾಳನ್ನು ಮದುವೆಯಾಗುವ ಗಂಡು ನಾನು.. ನನಗೆ ಏಕೆ ನಿನ್ನ ಮೇಲೆ ಅನುಮಾನ, ಅಸೂಯೆ ಬರದೆ.. ನಿನ್ನನ್ನು ಸ್ನೇಹಿತನಂತೆ ಕಾಣುತ್ತಿದ್ದೇನೆ ಎನ್ನುವ ಸಂದೇಹ ತಾನೇ.. ನೋಡು.. ನನಗೆ ವೀಣಾಳ ಬಗ್ಗೆ ನನ್ನ ಪರಿಚಯಿಸ್ಥರಿಂದ ತಿಳಿದಿತ್ತು.. ಅವಳು ಹೇಗೆ.. ಅವಳ ಮಾತುಕತೆ ಹೇಗೆ.. ಎಲ್ಲವೂ ತಿಳಿದಿತ್ತು.. ಅವಳ ರೂಪಕ್ಕೆ ಅಷ್ಟೇ ಅಲ್ಲಾ ನಾ ಮರುಳಾಗಿದ್ದು.. ಅವಳ ಗುಣಕ್ಕೂ ಮಾರುಹೋಗಿದ್ದೆ.. ಮದುವೆ ಆದರೆ ಇವಳನ್ನೇ ಎಂದು ನಿರ್ಧರಿಸಿದೆ..ನಾನು ಈ ನಿರ್ಧಾರಕ್ಕೆ ಬಂದ ಮೇಲೆ ಅಲ್ಲಿ ಸಂಶಯಕ್ಕೆ ಅವಕಾಶವೇ ಇಲ್ಲ ಅಲ್ಲವೇ.. ನಿನ್ನ ಬಗ್ಗೆ ತಿಳಿಯಬೇಕಾದರೆ ನಾ ಬಹಳ ಶ್ರಮ ಪಡಬೇಕಾಯಿತು ಕಾರಣ.. ನೀ ಯಾರು ಎಂದು ತಿಳಿಯುದಕ್ಕಿಂತ ನೀ ಹೇಗೆ ಎಂದು ತಿಳಿಯಬೇಕಿತ್ತು. ಬಡಾವಣೆಯ ಸಮಿತಿಯ ಕಾರ್ಯಕ್ರಮದ ಬಗ್ಗೆ ಭಾಗವಹಿಸಲು ವೀಣಾ ಹೋಗಿದ್ದಳು.. ಆಗ ನಾ ಅವಳ ಮನೆಗೆ ಬಂದಿದ್ದೆ.. ಅವಳನ್ನು ಹುಡುಕಿಕೊಂಡು ಬಡಾವಣೆಯ ಸಮಿತಿಯ ಸದನಕ್ಕೆ ಬಂದಾಗ.. ನೀ ನೆಡೆದುಹೋಗುತ್ತಿರುವುದು ಕಂಡು ಬಂತು.. ಅಲ್ಲಿದ್ದ ಅಧ್ಯಕ್ಷರು ನಿನ್ನ ಬಗ್ಗೆ, ನಿನ್ನ ವ್ಯಕ್ತಿತ್ವದ ಬಗ್ಗೆ ಕೆಲವು ಮಾತನ್ನು ಹೇಳಿದರು. ನನಗೆ ಬಲು ಇಷ್ಟವಾಯಿತ್ತು.. ನನಗೆ ಅಲ್ಲಾ ವೀಣಾಳಿಗೂ ಕೂಡ.. ಅಲ್ಲಿಂದ ನಿನ್ನ ಬಗ್ಗೆ ತಿಳಿಯುವ ಕುತೂಹಲ ಶುರುವಾಗಿತ್ತು.. ಜೊತೆಯಲ್ಲಿ ನಿನ್ನ ಬಗ್ಗೆ ಕಿವಿ ತೂತಾಗುವಷ್ಟು ಇವಳು ಹೇಳಿದ್ದರಿಂದ ನನಗೂ ನಿನ್ನ ಮೇಲೆ ಒಂದು ರೀತಿಯ ಕ್ರಶ್ ಆಗಿತ್ತು!.. ಹಾಗಾಗಿ ನಾವು ಇಲ್ಲಿ"

"ಸೂಪರ್ ಕಣೋ.. .. ರೇವಂತ್" ಒಂದು ಹೈ ಫೈವ್ ಹೊಡೆದು.. ಗಟ್ಟಿಯಾಗಿ ತಬ್ಬಿಕೊಂಡ... ವೀಣಾಳನ್ನೇ ನೋಡುತ್ತಾ ಕಣ್ಣು ಮಿಟುಕಿಸಿದ..

"ಹಹಹಹಃ.. ಕಾಂತಾ.. ನಿನ್ನ ಇನ್ನೊಂದು ಪ್ರಶ್ನೆ ಏನು ಗೊತ್ತಾ.. ನಾ ಯಾಕೆ ನಿನ್ನ ಸತಾಯಿಸಿದೆ ಅಂತ ಅಲ್ವೇ.. ನಾಳೆ ಸಂಜೆ ಸಿಗೋಣ ಅನ್ನೋ ಮಾತನ್ನು.. ನಿನ್ನೆ ಬೆಳಿಗ್ಗೆ ನೀನು ಪಾರ್ಕ್ ಹತ್ತಿರ ಸಿಕ್ಕಾಗಲೇ ಹೇಳಬಹುದಿತ್ತು ಅಂತ ತಾನೇ.. ಇದೆಲ್ಲಾ ಈ ರೇವಂತನಾದೆ ಕಿತಾಪತಿ.. ಸುಮ್ಮನೆ ಒಂದು ಸ್ವಲ್ಪ ನಿನ್ನ ಗೋಳು ಹುಯ್ದುಕೊಳ್ಳೋಣ ಅಂತ ಪ್ಲಾನ್ ಮಾಡಿದ... ಪ್ಲೀಸ್ ನನ್ನ ಕ್ಷಮಿಸು.. ಮತ್ತೆ ನಾ ರೇವಂತನ ಮಾತನ್ನೇ ಹೇಳುತ್ತೇನೆ.. ಈ ಬಡಾವಣೆಯಲ್ಲಿ ನೆಡೆಯುವ ಕಾರ್ಯಕ್ರಮಕ್ಕೆ ನೀ ಬರುವುದು, ಗೌರವದಿಂದ ನೆಡೆದುಕೊಳ್ಳುವುದು, ನಿನ್ನನ್ನು ಹಿರಿಯರು ಕಿರಿಯರು ಎನ್ನದೆ ಅಭಿಮಾನದಿಂದ ನೋಡುವುದು.. ಇದೆಲ್ಲವೂ ನನಗೆ ತುಂಬಾ ಇಷ್ಟವಾಗಿತ್ತು.. ರೇವಂತ್ ಪರಿಚಯವಾದ ಮೇಲೆ ನಿನ್ನ ಬಗ್ಗೆ ಎಲ್ಲವನ್ನು ಹೇಳಿದ್ದೆ.. ಹಾಗಾಗಿ ನಮ್ಮಿಬ್ಬರ ಮಧ್ಯೆ ಯಾವುದೇ ರೀತಿಯ ಅಡ್ಡಿ ಆತಂಕಗಳೂ ಇರಲಿಲ್ಲ.. ನಿನ್ನಂತಹ ಸ್ನೇಹಿತ ನಮಗೆ ಬೇಕಿತ್ತು ಅನ್ನಿಸಿತು. .ಹಾಗೆ ಇವತ್ತು ನಾವು ಮೂವರು ಇಲ್ಲಿದ್ದೇವೆ.. ನೀ ದೇವಸ್ಥಾನಕ್ಕೆ ಹೋಗೋದನ್ನು ಇವನು ನೋಡಿದ.. ಇವನೇ ನಿನ್ನ  ಬೈಕಿಗೆ ಆ ಚೀಟಿ ಸಿಕ್ಕಿಸಿದ್ದು.. "


"ನಾ ಏನು ಹೇಳಲಿ ನಿಮ್ಮ ಪ್ರೀತಿಗೆ. ನನಗೆ ಅರಿವಿಲ್ಲದೆ ನಾ ವೀಣಾಳ ಬಗ್ಗೆ ಆಕರ್ಷಿತನಾಗಿದ್ದೆ.. ಆದರೆ ನೀವಿಬ್ಬರೂ ಜಾಸೂಸಿ ಕೆಲಸ ಮಾಡಿ.. ನನ್ನ ಬಗ್ಗೆ ವಿವರ ಕಲೆಹಾಕಿದ್ದು ಮಾತ್ರವಲ್ಲದೆ.. ನನ್ನನ್ನು ನಿಮ್ಮ ಸ್ನೇಹಿತ ಎಂದು ಗುರುತಿಸಿದಿರಿ.. ಅದು ಖುಷಿಯಾಯಿತು.. ಗೆಳೆತನ ಎಂದರೆ ಇದೆ ಅಲ್ಲವೇ.. " ಕೃಷ್ಣಕಾಂತ್ ಕಣ್ಣಲ್ಲಿ ನೀರು.

"ನೋಡು ಕಾಂತ.. ಗೆಳೆತನಕ್ಕೆ ಹೆಣ್ಣು ಗಂಡು ಭೇದವಿಲ್ಲ.. ಒಳ್ಳೆಯ ಮನಸ್ಸುಗಳು ಒಳ್ಳೆಯದನ್ನೇ ನೋಡುತ್ತವೆ ಎನ್ನುವುದಕ್ಕೆ ನಾವು ಮೂವರು ಉದಾಹರಣೆ.. ಹೌದು ನಿನ್ನ ಮನದಲ್ಲಿ ಒಂದು ಸಂದೇಹ ಇನ್ನೂ ಇದೆ ಎನ್ನಿಸುತ್ತದೆ.. ನಿಜ  ತಾನೇ"

"ಹೌದು ರೇವಂತ.. ನೀ ಅಸೂಯೆ ಪಡಬೇಕಾದ ಸಂದರ್ಭ.. ಅನುಮಾನ ಪಡುವ ಎಲ್ಲಾ ಸಾಧ್ಯತೆಗಳು ಇದ್ದರೂ ಕೂಡ.. ನೀ ಇಷ್ಟು ಕೂಲ್ ಆಗಿ ವರ್ತಿಸಿದ್ದು... ವೀಣಾಳ ಮನದಲ್ಲಿ ಇದ್ದ ಗೊಂದಲ ತುಂಬಿದ ಸ್ನೇಹದ ಮಾಲೆಯ ನೂಲಿಗೆ ನೀ ಇನ್ನಷ್ಟು ಬಲ ಕೊಟ್ಟಿದ್ದು ಆಶ್ಚರ್ಯ ಎನ್ನಿಸುತ್ತದೆ.. ನಾವೆಲ್ಲರೂ ಮನುಷ್ಯರೇ ಅಲ್ಲವೇ.. ಅನುಮಾನ, ಅಸೂಯೆ, ನಾನು ನನ್ನದು ಎನ್ನುವ ಮೋಹ ಯಾರನ್ನೂ ಬಿಡುವುದಿಲ್ಲ.. ಹಾಗಾಗಿ ಈ ಪ್ರಶ್ನೆ ಅಷ್ಟೇ.. "

"ಕಾಂತಾ.. ನಮ್ಮ ಕುಟುಂಬದಲ್ಲಿ ನೆಡೆದ ಒಂದು ಘಟನೆ.. ನನ್ನ ಮನಸ್ಸನ್ನು ಈ ರೀತಿ ಕೂಲ್ ಆಗಿ ಇರಲು, ಮತ್ತು ಜಗತ್ತನ್ನು ಪ್ರೀತಿಸಲು ಅವಕಾಶ ಮಾಡಿಕೊಟ್ಟಿತು.. ನಮ್ಮ ಚಿಕ್ಕಪ್ಪನ ಮಗನ ಜೀವನದಲ್ಲಿ ಸರಿ ಸುಮಾರು ಹೀಗೆ ಒಂದು ಘಟನೆ.. ಸುಂದರ ಹೆಂಡತಿ, ಗೌರವಯುಕ್ತ  ಕೆಲಸ, ಕೈತುಂಬಾ ಸಂಬಳ, ಮುದ್ದಾದ ಮಕ್ಕಳು.. ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದರೂ ಕೂಡ.. ವಾರದ ಕೊನೆಯಲ್ಲಿ ಊರು ಸುತ್ತೋದು, ಪ್ರವಾಸ, ಎಲ್ಲವೂ ಇತ್ತು.. ಹೆಂಡತಿ ತುಂಬಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಳು. ಸಹಜವಾಗಿಯೇ ಅಂತರ್ಜಾಲ ತಾಣದಲ್ಲಿ ತುಂಬಾ ಹೆಸರುವಾಸಿಯಾಗಿದ್ದಳು.. ಮೊದಲು ಮೊದಲು ಗಂಡ ಇದನ್ನೆಲ್ಲಾ ಇಷ್ಟಪಡುತ್ತಿದ್ದ.. ಆದರೆ ಬರುಬರುತ್ತಾ.. ಅವನಿಗೆ ಸಂದೇಹ ಮೂಡಲು ಶುರುವಾಯಿತು.. ತನ್ನ ಹೆಂಡತಿ ತನಗೆ ಮೋಸ ಮಾಡುತ್ತಿರಬಹುದೇ ಎಂಬ ಅನುಮಾನ.. ಅದಕ್ಕೆ ತಕ್ಕಂತೆ.. ಹೆಂಡತಿಯ ಫೋನ್ ಸದಾ ಬ್ಯುಸಿ.. ಫೇಸ್ಬುಕ್, ವಾಟ್ಸಾಪ್ ಗಳಲ್ಲಿ ಸಂದೇಶಗಳ ಸುರಿಮಳೆ.. ಹೀಗಿದ್ದರೂ ಹೆಂಡತಿ ಎಂದೂ ತನ್ನ ಮನೆಯನ್ನು, ಮನದಾತನನ್ನು, ಮಕ್ಕಳನ್ನು ಪಕ್ಕಕ್ಕೆ ಸರಿಸಿರಲಿಲ್ಲ.. ಆದರೆ ಗಂಡನಿಗೆ ಶುರುವಾದ ಅನುಮಾನ ಪಿಶಾಚಿ.. ಅವಳ ಸಂಸಾರವನ್ನೇ ಬಲಿ ತೆಗೆದುಕೊಂಡಿತು.. ಒಂದು ಕೆಟ್ಟ ಘಳಿಗೆಯಲ್ಲಿ ಹೆಂಡತಿ ಮಾಡಿದ ಅಡಿಗೆಗೆ ವಿಷ ಬೆರೆಸಿದ.. ಎಲ್ಲರೂ ತಿಂದು  ಸಾಯಬೇಕೆಂಬುದು ಅವನ ಪ್ಲಾನ್ ಆಗಿತ್ತು.. ಆದರೆ ಅದೇನಾಯಿತೋ ಏನೋ.. ದುರದುಷ್ಟಕರ.. ಆಫೀಸಿನಿಂದ ಕರೆಬಂತು  ಎಂದು.. ವಾರಾಂತ್ಯದಲ್ಲಿ ಆಫೀಸಿಗೆ ಹೋದ.. ಬರುವಷ್ಟರಲ್ಲಿ ಊಟ ಮಾಡಿ,ಮಲಗಿಕೊಂಡ ಮಕ್ಕಳು, ಹೆಂಡತಿ ಮರಳಿ ಬಾರದ ಲೋಕಕ್ಕೆ ಹೋಗಿಯೇ ಬಿಟ್ಟಿದ್ದರು.. ಅವನಿಗೆ ಹುಚ್ಚು ಹಿಡಿಯಿತು.. ಈಗಲೂ ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.. " ರೇವಂತ್ ಕಣ್ಣೀರು ಒರೆಸಿಕೊಂಡ.. ವೀಣಾ ಅವನ ಭುಜದ ಮೇಲೆ ಕೈಯಿಟ್ಟು.. ಒಮ್ಮೆ ತಟ್ಟಿದಳು..

"ಸಾರೀ ಕಾಂತ ಸ್ವಲ್ಪ ಭಾವುಕನಾಗಿ ಬಿಟ್ಟೆ.. .. ವೀಣಾ ನಿನ್ನ ಬಗ್ಗೆ ಎಲ್ಲಾ ಹೇಳಿದಾಗ.. ನನಗೆ ಮೊದಲು ಅಸೂಯೆ ಬಂದರೂ ಕೂಡ.. ಮೇಲಿನ ಘಟನೆ ನನ್ನ ಮನಸ್ಸನ್ನು ತಿಳಿಮಾಡಿತು.. ಹಾಗಾಗಿ ನಾ ವೀಣಾಳಿಗೆ ಸಪೋರ್ಟ್ ಮಾಡಿದೆ.. ಹಾಗಾಗಿ ಇಂದು ನಾವು ಇಲ್ಲಿ :-)

ಇಷ್ಟು ಕೇಳಿ.. ಕೃಷ್ಣಕಾಂತ್ ಕಣ್ಣಲ್ಲಿ ನೀರು..

"ಯಾಕೋ ಏನಾಯಿತು".. ವೀಣಾ-ರೇವಂತ್ ಇಬ್ಬರೂ ಗಾಬರಿಯಾಗಿ ಕೇಳಿದರು,,

"ಇದು ಕಣ್ಣೀರಲ್ಲ ಪನ್ನೀರು ಪನ್ನೀರು.. ಚಿನ್ನದಂಥ ಸ್ನೇಹಿತರಿರುವಾಗ ಕಣ್ಣೀರೇತಕೆ ಮನಸನು ಅರಿತು ನಗುತಾ ಇರಲು ಚಿಂತೆಯ ಮಾತೇಕೆ.. ನೀವ್ ಜೊತೆಯಿರಲು ನಮ್ಮಿ ಜಗಕೆ ಆ ಸ್ವರ್ಗವೇ ಜಾರಿದಂತೆ"

"ವಾಹ್.. ಅಣ್ಣಾವ್ರ ಭಕ್ತ.. ಕಣೋ ನೀನು.. " ರೇವಂತ್ ಆಲಂಗಿಸಿಕೊಂಡ..

ಕೃಷ್ಣಕಾಂತ್ ಎರಡು ಕೈಯನ್ನು ಚಾಚಿದ.. ವೀಣಾ ಮತ್ತು ರೇವಂತ್ ಇಬ್ಬರೂ ಕೃಷ್ಣಕಾಂತನಿಗೆ ಒಂದು ಹಗ್ ಕೊಟ್ಟರು..
ಸ್ನೇಹದ ಕಂಗಳು - ಅಂತರ್ಜಾಲದಲ್ಲಿ ಕಂಡದ್ದು 

ಹೋಟೆಲಿನಲ್ಲಿ ಮೆಲ್ಲಗೆ ಹಾಡು ಬರುತ್ತಿತ್ತು .. "ಕಣ್ಣಂಚಿನ ಈ ಮಾತಲಿ ಏನೇನೂ ತುಂಬಿದೆ"