Saturday, August 31, 2019

ಅಕ್ಕನ ವಿದೇಶದ ಪ್ರವಾಸ

ನಮ್ಮ ಮನದಲ್ಲಿದ್ದದ್ದು ಹೊರಗೆ ಹಾಕಬಹುದು.. ಇನ್ನೊಬ್ಬರ ಪಾದರಕ್ಷೆಯಲ್ಲಿ  ನಿಂತು ನೆಡೆಯುವುದು ಹಗ್ಗದ ಮೇಲಿನ ನಡಿಗೆಯ ಹಾಗೆ..

ಇಂದೇಕೋ ಬೆಳಿಗ್ಗೆ ಆದಿಗುರು ಶಂಕರಾಚಾರ್ಯರ ನೆನಪು ಬಂತು.. ಅವರ ಪರಕಾಯ ಪ್ರವೇಶದ ಘಟನೆ ಯಾಕೋ ಬೇಡ ಬೇಡವೆಂದರೂ ಹೆಜ್ಜೆ ಹಾಕುತ್ತ ನನ್ನ ಮನದಲ್ಲಿ ಕೂತಿತು.. ಆ ಗುಂಗಿನಲ್ಲಿ ಬರೆದ ಛೆ ಛೆ ಛೆ ಬರೆಸಿದ ಲೇಖನವಿದು..

*****
"ಶ್ರೀಕಾಂತಾ.. ಎರಡು ವಾರಗಳ ಕಾಲ ಸಿಂಗಪೂರ್, ಮಲೇಷಿಯಾ, ಥೈಲ್ಯಾಂಡ್, ಬ್ಯಾಂಗಾಕ್ ಹೋಗುತ್ತಿದ್ದೇನೆ.. ಅರ್ಚನಾಳ ಜೊತೆ"

ನನ್ನ ಹೃದಯ ಬಡಿತದ ಅಂಕೆಗಳು ನಾಲ್ಕೈದು ಹೆಚ್ಚಾದವು.. ನನ್ನ ಹೋಂ ಥಿಯೇಟರಿನಲ್ಲಿ ಅಣ್ಣಾವ್ರ.. 
"ಹಾದಿಯ ಹಳ್ಳವೆ ದಾಟಲಸಾಧ್ಯ ಹೀಗಿರುವಾಗ ಹನುಮ
ಸಾಗರ ದಾಟುವ ಹಂಬಲ ಸಾಧ್ಯವೆ ಅಯ್ಯೋ ರಾಮರಾಮ
ಅಯ್ಯೋ ರಾಮರಾಮ..."

"ನಿಜವೇನೇ ಅಕ್ಕ"

"ಹೂ ಕಣೋ... ಪಾಸ್ ಪೋರ್ಟ್ ಬಂತು.. ಟ್ರಾವೆಲ್ ವೀಸಾ ಸಿಕ್ಕಿದೆ.. ವಿಮಾನದ ಸೀಟು ಬುಕ್ ಆಗಿದೆ"

ಒಂದು ನಿಮಿಷ.. ಅನೇಕ ವರ್ಷಗಳ ಅಕ್ಕನ ಸ್ವಭಾವ ಹಾಗೆ ಟ್ರೈಲರ್ ತರಹ ಕಣ್ಣ ಮುಂದೆ ಬಂತು.. ಎಲ್ಲಾದರೂ ಹೋಗೋಣ.. ಅಂದರೆ.. ಕಡೆ ಘಳಿಗೆಯಲ್ಲಿ ೨ X ೨ ಕಲ್ಲು ಹಾಕುವ ಪ್ರವೃತ್ತಿಯ ಅಕ್ಕ ಸಾಗರ ದಾಟಿ ಹೋಗುವ ಸಾಹಸ ಮಾಡಿದ್ದಾಳೆ ಅಂದಾಗ ಖುಷಿಯಾಯಿತು..

ಅರ್ಚನಾ ಅವರಿಗೆ ಕರೆ ಮಾಡಿ.. "ಅರ್ಚನಾ.. ನೀವು ವಿಮಾನದೊಳಗೆ ಹೋದ ಮೇಲೆ ಪೈಲಟ್ ಮೊಬೈಲ್ ನಂಬರ್ ಕೊಡಿ.. ಅವರಿಗೆ ಕರೆ ಮಾಡಿ.. ತಕ್ಷಣ..  ವಿಮಾನದ ಬಾಗಿಲು ಹಾಕೋಕೆ ಹೇಳ್ತೀನಿ.. ಇಲ್ಲ ಅಂದರೆ ಸುಯ್ ಅಂತ ವಾಪಸ್ ಬಂದರೂ ಬಂದಾಳು" ಅಂದಾಗ ಅರ್ಚನಾ ಅರಣ್ಯ ಭವನವೇ ನಡುಗುವ ಹಾಗೆ ಜೋರಾಗಿ ನಕ್ಕಿದ್ದರು..

*****
"ಮಂಜಣ್ಣ.. ಮಂಜಣ್ಣ.. " ಕೂಗಿದ ಕಡೆ ತಿರುಗಿದಾಗ.. ತನ್ನ ತಾಯಿ ..

ಮಂಜಣ್ಣ ಅಂದರೆ ನನ್ನ ಅಪ್ಪ "ಏನಮ್ಮ"

"ಕೃಷ್ಣವೇಣಿ ವಿದೇಶ ಪ್ರವಾಸಕ್ಕೆ ಹೋಗಿದ್ದಾಳಂತೆ ಕಣೋ.. ಅದಕ್ಕೆ ನಿನಗೆ ಹೇಳೋಣ ಅಂತ ಬಂದೆ"

"ಹೌದು ಅಮ್ಮ.. ಗೊತ್ತಾಯಿತು.. ಅಣ್ಣನಿಗೆ (ನನ್ನ ತಾತ) ಹೇಳೋಣ ಅಂತ ಆ ಕಡೆನೇ ಬರ್ತಾ ಇದ್ದೆ.. "

"ಅವರು ಆಗಲೇ ಅರಳಿ ಕಟ್ಟೆಯಲ್ಲಿ ಕೂತು ಬಂದು ಹೋದವರಿಗೆಲ್ಲ ಹೇಳುತ್ತಾ ಇದ್ದಾರೆ ತಮ ಮೊದಲ ಮೊಮ್ಮಗಳ ಸಾಧನೆಯ ಬಗ್ಗೆ.. ಗೋಪಾಲ ಅಂತೂ ತುಂಬಾ ಸಂತೋಷ ಪಡುತ್ತಿದ್ದಾನೆ.. ಅವನಿಗೆ ಮಕ್ಕಳು ಅಂದರೆ ಬಲು ಇಷ್ಟ.. ಕೃಷ್ಣವೇಣಿಗೆ ಮುಂಚೆ ಒಂದು ಹೋದಾಗ.. ಬಲು ಬೇಸರ ಪಟ್ಟಿದ್ದ.. ಇವಳ ಸಾಧನೆಯ ಬಗ್ಗೆ ಬ್ಲಾಗ್ ಓದುತ್ತಾಇರ್ತಾನೆ .. ಖುಷಿಯಾಗುತ್ತೆ ಮಂಜಣ್ಣ.. ನಿನ್ನ ಮಗಳ ಈ ಸಾಧನೆ.. ಎಲ್ಲರಿಗೂ ದಾರಿ ದೀಪ.. "

"ಮಂಜಣ್ಣ.. ಕೃಷ್ಣವೇಣಿ ವಾಪಸ್ ಬಂದ್ಲು ಅಂತ ನಮ್ಮ ವಾಟ್ಸಾಪ್ ಗ್ರೂಪಿನಿಂದ ಗೊತ್ತಾಯಿತು.. ಪ್ರವಾಸದ ಬಗ್ಗೆ ಪುಟ್ಟ ಮಾಹಿತಿ ಕೊಡೋಕೆ ಹೇಳ್ತೀನಿ.. "

ಅಪ್ಪನ ದನಿಗೆ ಇತ್ತ ತಿರುಗಿ

"ಅಣ್ಣ ಸ್ವಲ್ಪ ಹೊತ್ತು ಕಾಯ್ತಾ ಇರಿ.. ನನ್ನ ಜಿಮೈಲ್ ಚೆಕ್ ಮಾಡಿ ಹೇಳ್ತೀನಿ"

ಇಲ್ಲಿಂದ ಶುರು ಪರಕಾಯ ಪ್ರವೇಶ..

****
ಅಕ್ಕನ ದನಿಯಲ್ಲಿ/ಪದಗಳಲ್ಲಿ ಪ್ರವಾಸದ ಪುಟ್ಟ ವಿವರ

ಬರಿ ಆಗಸದಲ್ಲಿ, ಚಿತ್ರಗಳಲ್ಲಿ ಕಂಡಿದ್ದ ವಿಮಾನವನ್ನು ಹತ್ತಿರದಿಂದ ನೋಡಿದಾಗ.. ಅರೆ ನಾನೇನಾ ಹೋಗುತ್ತಿರುವುದು ಅನ್ನಿಸಿತು.. ದೊಡ್ಡ ದೊಡ್ಡ ರೆಕ್ಕೆಗಳು.. ವಿಮಾನದ ಸಿಬ್ಬಂಧಿಯ ತಪಾಸಣೆಗಳು.. ಬೋರ್ಡಿಂಗ್ ವಿವರ.. ಚೆಕ್-ಇನ್ ವಿಧಾನಗಳು ಎಲ್ಲವೂ ಹೊಸತು.. ಭವ್ಯವಾದ ಕಟ್ಟಡ.. ವೈಫೈ .. ಹೋಟೆಲುಗಳು, ಬಟ್ಟೆಗಳು ಬೇಕಾದ ಬೇಡವಾದ ಎಲ್ಲವೂ ಅಲ್ಲಿ ಸಿಗುತ್ತಿದ್ದವು.. ಏನೋ ಒಂದು ರೀತಿಯ ಪುಳಕ.. ತಣ್ಣನೆ ಗಾಳಿ.. ಮನದೊಳಗೆ ಕುತೂಹಲ ಮುಂದಿನ ಎರಡು ವಾರಗಳ ಸುಂದರ ಕ್ಷಣಗಳಿಗೆ ಮುನ್ನುಡಿಯಂತಿತ್ತು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..









ಮೃದುವಾದ ಸೀಟು.. ಸೀಟಿಗೆ ಅಂಟಿಕೊಂಡ ಟಿವಿ ಪರದೆ.. ಸಿನೆಮಾಗಳು, ಹಾಡುಗಳನ್ನು ನೋಡುವ ಅವಕಾಶ.. ಗಗನ ಸಖಿ ಹೇಳಿದ ತಕ್ಷಣ ಮೊಬೈಲನ್ನು ಆಫ್ ಅಥವಾ ಏರೋಪ್ಲೇನ್ ಮೋಡ್ ತಲುಪಿಸಿ, ಬೆಲ್ಟ್ ಬಿಗಿದುಕೊಂಡು.. ಉಸಿರು ಬಿಗಿ ಹಿಡಿದು ವಿಮಾನದ ಜೊತೆ ಜೊತೆಯಲ್ಲಿಯೇ ಮನಸ್ಸು ಹಾರಲು ಶುರು ಮಾಡಿತು.. ವಿಮಾನದ ಟೇಕ್ ಆಫ್ ಒಂದು ರೀತಿಯಲ್ಲಿ ಎದೆ ಝಲ್ ಎನಿಸಿದರೂ.. ವಿಭಿನ್ನ ಅನುಭವ ಕೊಟ್ಟಿತು..

ಮೋಡಗಳ ಮೇಲೆ ನಾನು.. ಅರ್ಚನಾಳ ಜೊತೆ ಮಾತು ಕತೆ.. ಪ್ರತಿಯೊಂದು ಕ್ಷಣವನ್ನು ನಗುತ್ತ ಅನುಭವಿಸುವ ಅರ್ಚನಾಳ ಜೊತೆ ಪ್ರವಾಸ ಅವಳ ನಗುವಿನಷ್ಟೇ ಸುಂದರವಾಗಿತ್ತು..

ಗಗನ ಸಖಿ ಇಲ್ಲವೇ ಗಗನ ಸಖ ಕೊಡುವ ತಿಂಡಿ ತಿನಿಸುಗಳು.. ಸೊಗಸು..

ವಿದೇಶದ ನೆಲದಲ್ಲಿ ಮೊದಲ ಹೆಜ್ಜೆ.. ಸಿಂಗಪೂರ್ ನಲ್ಲಿ ರಾಜಾಕುಳ್ಳ ಸಿನೆಮಾದಲ್ಲಿ ನೋಡಿದ ಸಿಂಗಪೂರ್.. ಇಂದು ನೋಡುವ ಸಿಂಗಪೂರ್  ಬದಲಾಗಿದ್ದರೂ ಕ್ಷಣಕ್ಕೂ ಕ್ಷಣಕ್ಕೂ ಸೊಗಸಾದ ಅನುಭವ ಕೊಡುತಿತ್ತು.. ಗಗನಚುಂಬಿ ಕಟ್ಟಡಗಳು.. ಸ್ವಚ್ಛವಾದ ಅಗಲವಾದ ರಸ್ತೆಗಳು.. ಉದ್ಯಾನವನಗಳು, ಕಾರಂಜಿಗಳು.. ಯಾವುದು ನೋಡಬೇಕು ಯಾವುದನ್ನು ಬಿಡಬೇಕು ಎಲ್ಲವೂ ಸುಂದರಮಯ.. ಬಬ್ರುವಾಹನ ಚಿತ್ರದ "ಈ ಸಮಯ ಆನಂದಮಯ" ಎನ್ನುವ ಹಾಡು ನೆನಪಿಸಿಕೊಂಡೆನು..






ಅಲ್ಲಿಂದ ಮುಂದೆ ಹತ್ತು ದಿನಗಳು ಕಣ್ಣು ಮುಚ್ಚಿ ಕಣ್ಣು ಬಿಡುವ ಮುಂಚೆ ಕಳೆದು ಹೋಯಿತೇನೋ ಅನ್ನುವ ಅನುಭವ.. ಆದರೆ ಆ ದಿನಗಳಲ್ಲಿ ಕಳೆದ ಕ್ಷಣಗಳು ಅವರ್ಣನೀಯ..

ಸಾಗರದಲ್ಲಿ ಸ್ಕೂಬಾ ಡೈವಿಂಗ್, ಪ್ಯಾರಾ ಗ್ಲೈಡಿಂಗ್ ಅದ್ಭುತ ಎನಿಸಿತು.. ಸಾಹಸ ಮಾಡಲು ಹಿಂದೇಟು ಹಾಕುತ್ತಿದ್ದ ಮನಸ್ಸು.. ಅಲ್ಲಿಗೆ ಹೋದ ತಕ್ಷಣ.. ನಿರಾಳವಾಗಿ ಇದ್ದ ಬದ್ದ ಸಾಹಸ ಕ್ರೀಡೆಗಳಲ್ಲಿ ನುಗ್ಗಿ ಎಂಜಾಯ್ ಮಾಡಿದೆ.. ಟೋರಾ ಟೋರಾ, ಜಾಯಿಂಟ್ ವೀಲ್ ಮುಂದಾದ ಅಮ್ಯೂಸ್ಮೆಂಟ್ ಪಾರ್ಕಿನಲ್ಲಿ ಪಡೆದ ಅನುಭವಗಳನ್ನು ವರ್ಣಿಸಲು ನನ್ನಲ್ಲಿ ಪದಗಳಿಲ್ಲ.




ಅದು ಏನಾಗಿತ್ತು ನನಗೆ ಗೊತ್ತಿಲ್ಲ. ನನ್ನ ಜೀವನದಲ್ಲಿ ಹಾಕದೆ ಇದ್ದ ರೀತಿಯ ಬಟ್ಟೆಗಳೆಲ್ಲ ತಗೊಂಡಿದ್ದೆ... ಜೀನ್ಸ್ ಪ್ಯಾಂಟ್, ಟ್ರೀ ಫೋರ್ಥ್, ಟೀ ಶರ್ಟ್, ಗಾಗಲ್ಸ್.. ಪಾದರಕ್ಷೆಗಳು, ಜಾಕೆಟ್ ಎಲ್ಲವೂ ಹೊಸತನದಿಂದ ಕೂಡಿತ್ತು..



ಇಡೀ ಪ್ರವಾಸದ ಸೂತ್ರಧಾರಿ
ಅರ್ಚನಾ 

ಒಂದು ಅಚ್ಚರಿ ಕಾಯುತಿತ್ತು.. ನಮ್ಮ ಬೊಬ್ಬ ರಾಮಯ್ಯನ ಕುಟುಂಬ ಭರತ್ ಮಲೇಷಿಯಾದಲ್ಲಿ ಇತ್ತೀಚಿಗಷ್ಟೇ ಕೆಲಸದ ಮೇಲೆ ಬಂದದ್ದು ಗೊತ್ತಿತ್ತು.. ಅವನಿಗೆ ಸಂದೇಶ ಕಳಿಸಿದೆ.. ಅಕ್ಕ ಹೋಟೆಲಿನ ವಿಳಾಸ ಕೊಡಿ ಬರುತ್ತೇನೆ ಅಂದಿದ್ದ.. ಹೇಳಿದ ಹಾಗೆ ಸಿಕ್ಕಿದ.. ಒಂದಷ್ಟು ಮಾತು.. ಒಂದಷ್ಟು ಉಪಹಾರ.. ಒಂದೆರಡು ಫೋಟೋಗಳು.. ಖುಷಿ ಕೊಟ್ಟವು.. ನಮ್ಮ ನೆಲದಲ್ಲಿ ಸಿಗುವುದು ಮಾತಾಡುವುದು ಇದ್ದೆ ಇರುತ್ತದೆ.. ವಿದೇಶದಲ್ಲಿಯೂ ಈ ರೀತಿಯ ಒಂದು ಭೇಟಿ ಸಂತಸ ತಂದಿತು..


ನಾ ಹಾಕುತ್ತಿದ್ದ ಫೋಟೋಗಳಿಗೆ ನನ್ನ ಕೋರವಂಗಲ ಕುಟುಂಬದ ಸದಸ್ಯರು ಹಾಕುತ್ತಿದ್ದ ಪ್ರತಿಕ್ರಿಯೆಗಳು ಪ್ರವಾಸದ ಸುಖಾನುಭವಗಳನ್ನು ಇನ್ನಷ್ಟು ಹೆಚ್ಚಿಸುತ್ತಿತ್ತು..

ಇದನ್ನು ಹೇಳುತ್ತಾ ಹೋದರೆ ಅದೊಂದು ದೊಡ್ಡ ಲೇಖನವಾಗುತ್ತದೇ.. ಪರಕಾಯ ಪ್ರವೇಶದ ಕಾಲಾವಧಿ ಕಡಿಮೆ ಇರುವುದರಿಂದ.. ಕೆಲವು ಚಿತ್ರಗಳನ್ನು ಹಾಕಿ ಈ ಲೇಖನ ಮುಗಿಸುತ್ತೇನೆ.. ಇಲ್ಲಿ ನನ್ನ ಚಿತ್ರಗಳನ್ನೇ ಹಾಕಿದ್ದೀನಿ.. ವಿದೇಶದ ನೆಲದ ಸೌಂದರ್ಯವನ್ನು ವರ್ಣಿಸುವ ಚಿತ್ರಗಳಿಲ್ಲ ಎನ್ನಬೇಡಿ.. ನನ್ನ ಕಣ್ಣುಗಳಲ್ಲಿ ಧುಮುಕುತ್ತಿದ್ದ ಖುಷಿಯನ್ನು ನಿಮ್ಮ ಜೊತೆ ಹಂಚಿಕೊಳ್ಳಬೇಕು ಎನ್ನುವ ಆಶಯದಿಂದ ಬರಿ ಸೆಲ್ಫಿ ಅಥವಾ ನಾನಿರುವ ಚಿತ್ರಗಳನ್ನು ಹಾಕಿದ್ದೀನಿ.. ಎಂಜಾಯ್..









ನೋಡಿ ಆನಂದಿಸಿ.. ನಿಮ್ಮ ಶುಭ ಹಾರೈಕೆಗಳು ಸದಾ ಇರಲಿ..

ಅಸಾಧ್ಯದ ಮಾತನ್ನು ಸಾಧ್ಯವಾಗಿಸಿದ ಅರ್ಚನಳಿಗೆ ಧನ್ಯವಾದಗಳು.. !!!


****
"ಮಂಜಣ್ಣ ಏನೇ ಆಗಲಿ ಸವಾಲಿಗೆ ಅಂಜದ ಕೃಷ್ಣವೇಣಿಗೆ ಒಳ್ಳೆಯ ಧೈರ್ಯ ತುಂಬಿಸಿ ಬೆಳೆಸಿದ್ದೀಯಾ.. ನಮ್ಮ ಕಂದ ಈ ಮಟ್ಟಿಗೆ ಸಾಧಿಸಿರೋದು ಬಹಳ ಹೆಮ್ಮೆ ಎನ್ನಿಸುತ್ತೆ.. ಕಷ್ಟಗಳಿಗೆ ಕಣ್ಣೀರಾಕದೆ.. ಆ ನೀರನ್ನೇ ಆಶಾವಾದದ ಗಿಡಕ್ಕೆ ಹಾಕಿದಾಗ ಬೆಳೆಯುವ ಹೆಮ್ಮರವೇ ಈ ಸಾಧನೆ ಆಲ್ವಾ ಮಂಜಣ್ಣ.. "

"ಹೌದು ಅಮ್ಮ.. ಮನೆ ಕಟ್ಟಿದಳು, ಕಾರು ಕೊಂಡಳು, ಈಗ ವಿದೇಶ ಪ್ರವಾಸ.. ಇವೆಲ್ಲವೂ ಸಾಧನೆಯೇ ಹೌದು.. ಅನುಗ್ರಹ ಸದನದ ತಾಕತ್ತು ಅದು ಅಮ್ಮ.. ಇದಕ್ಕೆ ಸ್ಪೂರ್ತಿಯ ಸೆಲೆ ನನ್ನ ವಿಶಾಲೂ.. ಅವಳ ಮಾರ್ಗದರ್ಶನ ಸದಾ ನೆರಳಾಗಿ ಹರಸುತ್ತೆ... "

"ಹೌದು ಕಣೋ ಮಂಜಣ್ಣ.. ಈ ಬರಹದ ಪ್ರಿಂಟ್ ಕೊಡು.. ನನ್ನ ಅರಳಿ ಕಟ್ಟೆ ಬಳಗಕ್ಕೆ ಈ ಸಾಹಸದ, ಸ್ಪೂರ್ತಿಯ ಕತೆಯನ್ನು ಎಲ್ಲರಿಗೂ ಹೇಳುತ್ತೇನೆ.. "

"ಸರಿ ಅಣ್ಣ.. ನೀವು ಕಟ್ಟೆಯ ಕಡೆಗೆ ಹೋಗುತ್ತೀರಿ.. ಪ್ರಿಂಟ್ ತರ್ತೀನಿ.. "

"ನನ್ನ ಕುಟುಂಬಕ್ಕೆ ಶುಭವಾಗಲಿ.. ಸದಾ ಸಾಧಿಸುತ್ತೀರಿ.. ಬೆಳೆಯುತ್ತಿರಿ"

ಅಜ್ಜಯ್ಯ ಹೆಜ್ಜೆ ಹಾಕುತ್ತಾ ಅರಳಿಕಟ್ಟೆಯ ಕಡೆಗೆ ಹೆಜ್ಜೆ ಹಾಕಿದರು.."

2 comments:

  1. ನಿಮ್ಮ ಲೇಖನ ಪರಕಾಯಪ್ರವೇಶ ಎನ್ನಿಸುವುದೇ ಇಲ್ಲ. ಸಾಕ್ಷಾತ್ ನಿಮ್ಮದೇ ಅನುಭವ ಎನ್ನಿಸುವ ಹಾಗಿದೆ. ಇನ್ನು ಅರ್ಚನಾ ಹಾಗು ಕೃಷ್ಣವೇಣಿ ಮೇಡಮ್ ಇವರ ಸಾಧನೆಯ ಬಗೆಗೆ ಅಭಿಮಾನವೆನಿಸಿತು.

    ReplyDelete
  2. tumba manamohakavagi pravasada anubhava neediddiri...

    ReplyDelete