Sunday, July 7, 2019

ಯೋಗ V/s ಯೋಗ್ಯತೆ....!

ಮದುಮಗನ ಹಾಗೆ ತಯಾರಿ ಮಾಡಿಸಿ ಕೂರಿಸಿದ್ದರು.. ಸುತ್ತ ಮುತ್ತಲು ನೋಡುತ್ತಾ.. ಆ ಒಂದು ಘಳಿಗೆಗೆ ಕಾಯುತ್ತ ಕುಳಿತಿದ್ದ.. ತಮಗೆ ವಯಿಸಿದ್ದ ಕಾರ್ಯಗಳನ್ನು ಮುತುವರ್ಜಿಯಿಂದ ನೋಡಿಕೊಳ್ಳುತ್ತಿದ್ದರು ..ಬಂದವರ ಯೋಗಕ್ಷೇಮ  ವಿಚಾರಿಸುತ್ತಾ ಅವರ ಬೇಕು ಬೇಡಗಳನ್ನು ಗಮನಿಸುತ್ತಾ ಬಂದವರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದರು..

ಬಂದವರು ಯಾರೂ ಕೂಡ ತಮಗೆ ಬೇಕಾದ ಅನುಕೂಲತೆಗಳು ಸಿಗಲಿಲ್ಲ ಅಥವ ತಾವು ಕರೆತಂದ ಸಂಬಂಧಿಗಳಿಗೆ ತಕ್ಕ ಉಪಚಾರ ಸಿಗಲೇ ಬೇಕು ಎನ್ನುವ ಧಾವಂತ ಅಲ್ಲಿದ್ದವರಿಗೆ ಇದ್ದದ್ದು ಅವರುಗಳ ಕಾಳಜಿಯಲ್ಲಿ ಕಾಣುತಿತ್ತು..

ಸುಮಾರು ಒಂದು ವಾರದ ಗಡ್ಡ ಮೀಸೆಯನ್ನು ನುಣುಪಾಗಿ ತೆಗೆದು.. ಕೆನ್ನೆಯನ್ನು ಫಳ ಫಳ  ಹೊಳೆಯುವಂತೆ ಮಾಡಿದ್ದರು.. ಆಗಾಗ ಬಂದು ಸುಮಾರು ಹನ್ನೆರಡು ಘಂಟೆಗೆ ಮಹೂರ್ತ.. ಆಗ ನಿಮ್ಮನ್ನು ಕರೆದು ಕೊಂಡು ಹೋಗುತ್ತೇವೆ.. ಸುಮಾರು ಒಂದು ಘಂಟೆಯ ಕಾರ್ಯಕ್ರಮ.. ಆಮೇಲೆ ಜೀವನದ ಇನ್ನೊಂದು ಮಗ್ಗುಲು ಶುರುವಾಗುತ್ತೆ ನಿಮಗೆ ಅಂತ ಹುರಿದುಂಬಿಸುತ್ತಿದ್ದರು.. ಆ ಕ್ಷಣಕ್ಕೆ ಕಾಯುತ್ತಾ ಕೂತಿದ್ದವ ಕೈಯಲ್ಲಿ ಕೈಗಡಿಯಾರ ಕಟ್ಟಿರಲಿಲ್ಲ.. ಆದರೆ ಆತನ ಎದುರಿಗೆ ಒಂದು ದೊಡ್ಡ ಗಡಿಯಾರ ನಾ ಇದ್ದೇನೆ ಎನ್ನುವ ಸುಳಿವು ಕೊಡುತ್ತಿತ್ತು..

ಸೆಕೆಂಡುಗಳ ಮುಳ್ಳು ತನಗೇನೂ ಕೆಲಸವಿಲ್ಲ ಸುಮ್ಮನೆ ಯಾಕೆ ಸುತ್ತೋದು ಅಂತ ಮೆಲ್ಲಗೆ ಸುತ್ತುತ್ತಿತ್ತು.. ಸೆಕೆಂಡು ಮುಳ್ಳೇ ನಿಧಾನ ಮಾಡುವಾಗ ನನಗೇಕೆ ತರಾತುರಿ ಅಂತ ನಿಮಿಷದ ಮುಳ್ಳು ತನ್ನ ಪಾಡಿಗೆ ಮೆಲ್ಲನೆ ಹೆಜ್ಜೆ ಇಡುತ್ತಿತ್ತು.. ಹೋಗ್ರಲೇ.. ನಿಮಗಿಬ್ಬರಿಗೆ ಇರದ ಆತುರ ನನಗೇಕೆ.. ಹತ್ತಿರ ಬಂದಾಗ ನನ್ನ ಎಬ್ಬಿಸಿ ಅಂತ ಒಂದು ಸಂಖ್ಯೆಯ ಮೇಲೆ ಮಲಗಿತ್ತು..

ಮೆಲ್ಲನೆ ಮೆಲ್ಲನೆ ಸಮಯ ಸರಿಯುತ್ತಿತ್ತು.. ಆತಂಕದ ಕ್ಷಣವೋ ಮುಂದಿನ ಬಾಳಿನ ಹಾದಿಯನ್ನು ನೆನೆದು ಬರುವ ಯೋಚನೆಯೋ.. ಯೋಜನೆಯೋ ಅರಿಯದು.. ಆದರೆ ಎದೆ ಬಡಿತ ಮಾತ್ರ ಮಾಮೂಲಿಗಿಂತ ತುಸು ಹೆಚ್ಚೇ ಇತ್ತು..

ನೀವು ಸ್ವಲ್ಪ ಹೊತ್ತು ಕೂತಿರಿ.. ಈಗ ಬರುತ್ತೇವೆ ಅಂತ ಸುತ್ತ ಮುತ್ತಲಿದ್ದವರು ಒಬ್ಬನನ್ನೇ ಬಿಟ್ಟು ಹೋದರು.. ಯಥಾ ಪ್ರಕಾರ.. ಗೋಡೆಗಳು, ಗಡಿಯಾರ, ಸೆಕೆಂಡು, ನಿಮಿಷ, ಘಂಟೆಗಳ ಮುಳ್ಳನ್ನು ನೋಡುತ್ತಾ ಕೂತೆ ಇದ್ದ.. ಹಾಗೆ ಚೇರಿಗೆ ಒರಗಿಕೊಂಡು ಕಣ್ಣು ಮುಚ್ಚಿದ.. ಯಾವುದು ನೆನಪಿಗೆ ಬರುತ್ತಿಲ್ಲ.. ಎಷ್ಟೇ ಯೋಚನೆ ಮಾಡಿದರೂ ಊಹುಂ ನೆನಪಾಗುತ್ತಿಲ್ಲ.. ಕೆನ್ನಷ್ಟೇ ಸವರಿಕೊಂಡ.. ನುಣುಪಾಗಿ ನಾ ಇದ್ದೀನಿ ಕಣೋ ಎಂದು ಹೇಳುತ್ತಿತ್ತು.. ಹಾಗೆ ಸಣ್ಣ ಮಂಪರು..

ಮೆಲ್ಲಗೆ ಯಾರೋ ಭುಜದ ಮೇಲೆ ಕೈಯಿಟ್ಟ ಅನುಭವ.. ಕಣ್ಣು ಬಿಟ್ಟ.. ಸುಮಾರು ಮೂರು ಮಂದಿ ಕಣ್ಣ ಮುಂದೆ ಇದ್ದರು..

" ಹೇಗಿದ್ದೀರಾ.. "
"ನಾನು ಆರಾಮಾಗಿದ್ದೀನಿ"
"ಸಿದ್ಧವಾಗಿದ್ದೀರಾ"
"ಹಾ ಸಿದ್ಧವಾಗಿದ್ದೀನಿ.. ಬೆಳಿಗ್ಗೆ ನಿಮ್ಮವರು ಹೇಳಿದರು ಸುಮಾರು ಹನ್ನೆರಡು ಘಂಟೆಗೆ ಹೊತ್ತಿಗೆ ಹೋಗೋದು ಅಂತ.. ಒಂದು ಘಂಟೆಯ ಕಾರ್ಯಕ್ರಮ ಅಂತ.. ನಾ ಸಿದ್ಧವಾಗಿದ್ದೀನಿ.. "
"ಓಹೋ ಗುಡ್ .. ನಿಮಗೆ ಒಂದು ವಿಷಯ ಹೇಳಬೇಕಿತ್ತು.. "
"ಹೇಳಿ ಸರ್... "
"ನಿಮ್ಮ ಜೊತೆ ಬರಬೇಕಿದ್ದವರು ಬರಲಾಗೋಲ್ಲ ಅಂತ ಲೆಟರ್ ಬರೆದಿಟ್ಟಿದ್ದಾರೆ.. ಯಾವುದೋ ಒಂದು ತುರ್ತು ಕೆಲಸ ಅಂತೇ.. ಏಳು ಮನೆಗೆ ಬೆಳಕು ನೀಡಬೇಕು ಅಂತ ಹೇಳಿದ್ದಾರೆ.. ನಾವು ಎಷ್ಟೋ ರೀತಿಯಲ್ಲಿ ಅವರನ್ನು ಸಮಾಧಾನ ಪಡಿಸಲು ಪ್ರಯತ್ನ ಮಾಡಿದೆವು.. ಆದರೆ ಅವರು ತಾವು ಮಾಡಬೇಕಾದ ಕೆಲಸದಲ್ಲಿ ಸಂಪೂರ್ಣ ನಂಬಿಕೆ ಮತ್ತು ಪರಿಶ್ರಮ ಹಾಕಿದ್ದರಿಂದ.. ಆ ಕೆಲಸವನ್ನು ಮಾಡಲೇ ಬೇಕು ಅಂತ ಹೊರಟೆ ಬಿಟ್ಟಿದ್ದಾರೆ.. ಅವರು ಕೊಟ್ಟ ಲೆಟರ್ ನಿಮಗೆ ಕೊಡುತ್ತಿದ್ದೇನೆ.. ನೀವು ಅದನ್ನು ಓದಿ ನಿಮ್ಮ ಮುಂದಿನ ಯೋಜನೆ ಹೇಳಿದರೆ ಅದಕ್ಕೆ ತಕ್ಕ ಹಾಗೆ ನಾವು ಸಿದ್ಧರಾಗುತ್ತೇವೆ.. "

ಹತ್ತು ಸೆಕೆಂಡುಗಳು ಗಡಿಯಾರವನ್ನೇ ನೋಡುತ್ತಿದ್ದ.. ಸೆಕೆಂಡು ಮುಳ್ಳು ಇನ್ನೂ ನಿಧಾನವಾಗಿ ತಿರುಗತೊಡಗಿತು.... ಸರಿ ಸರ್.. ಅವರ ಇಚ್ಛೆ ಅದೇ ಆಗಿದೆ ಅಂದರೆ ಇನ್ನೇನು ಮಾಡೋಕೆ ಆಗುತ್ತೆ.. ಹಾಗಾದ್ರೂ ಅವರು ಅಂದುಕೊಂಡ ಕಾರ್ಯ ನೆರವೇರಲಿ.. ಏಳು ಮನೆಗಳಿಗೆ ಬೆಳಕು ನೀಡೋದು ಸಣ್ಣ ಕೆಲಸವೇನಲ್ಲ .. ಹಾಗೆ ಆಗಲಿ ಸರ್.. "

ಅವರು ಕೊಟ್ಟ ಲೆಟರ್ ಇನ್ನೊಮ್ಮೆಓದಿದೆ .. ಕಣ್ಣುಗಳು ಹಾಗೆ ಮಂಜಾದವು.. ಅಗಸ ನೋಡುತ್ತಾ ಕೆನ್ನೆಯನ್ನೊಮ್ಮೆ ಮುಟ್ಟಿ ನೋಡಿದೆ.. ನುಣುಪಾಗಿತ್ತು.. ಮುಂದಿನ ದಿನಗಳು ಇಷ್ಟು ನುಣುಪಾಗಿರೋಲ್ಲ ಅಂತ ಸೂಚನೆ ನೀಡಿತ್ತೋ . ಅಥವಾ ಹೇಗಾದರೂ ಆಗಲಿ.. ಏನಾದರೂ ಆಗಲಿ.. ಮುಂದಿನ ಬದುಕು ಹೀಗೆ ನುಣುಪಾಗಿ ಇಟ್ಟುಕೊಳ್ಳೋದು ನಿನಗೆ ವಯಿಸುತ್ತಿರುವ ಕರ್ತವ್ಯ ಅಂತೋ.. ಒಟ್ಟಿನಲ್ಲಿ ನುಣುಪಾಗಿರೋದು ಮುಖ್ಯವಾಗಿತ್ತು..

ಜೀವನದ ಹಾದಿ ಹೇಗಾದರೂ ಇರಲಿ.. ಹೆಜ್ಜೆ ಇಡುತ್ತಾ ಸಾಗೋದು ಮುಖ್ಯ ಅನ್ನಿಸಿತು.. ಗಡಿಯಾರ ನೋಡಿದೆ.. ನೋಡು ಗುರು.. ನನ್ನ ಕಡೆ ಯಾರೇ ನೋಡಲಿ ಬಿಡಲಿ .. ನನ್ನೊಳಗೆ ಇರುವ ಸೆಲ್ ಅಥವಾ ಬ್ಯಾಟರಿಯಲ್ಲಿ ಶಕ್ತಿ ಇರುವ ತನಕ ನೆಡೆಯುತ್ತಲೇ ಇರುತ್ತೇನೆ.. ಅದೇ ಜೀವನ ಎಂದಿತು.. !!!

ಜೀವನದ ಪಾಠ ಹೇಳಿಕೊಟ್ಟ ಗಡಿಯಾರಕ್ಕೆ ಒಂದು ಸಲಾಂ ಹೊಡೆದು ಹೆಜ್ಜೆ ಹಾಕುತ್ತ ಹೊರಬಂದ!!!

(ಸುಮಾರು ಹನ್ನೊಂದು ಘಂಟೆ ಮೂವತ್ತು ನಿಮಿಷ ಇರಬಹುದು... ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಕೂತಿದ್ದೆ.. ಕಣ್ಣಿನ ಬಳಿ ಶಸ್ತ್ರ ಚಿಕಿತ್ಸೆ ಆಗಬೇಕಿತ್ತು.. ಇನ್ನೊಂದು ಮೂವತ್ತು ನಿಮಿಷ ಆಪರೇಷನ್ ಥೀಯೇಟರಿಗೆ ಕರೆದೊಯ್ಯುತ್ತಿದ್ದರು.. ಆಗ ಡಾಕ್ಟರ್ ನನ್ನ ಬಳಿ ಬಂದು.. 

"ಶ್ರೀಕಾಂತ್.. ನಿಮ್ಮ ಆರೋಗ್ಯ ಸುಧಾರಿಸಿದೆ.. ಈ ಶಸ್ತ್ರ ಚಿಕಿತ್ಸೆ ಆಗಿಬಿಟ್ಟ ಮೇಲೆ ನೀವು ಆರಾಮಾಗಿರಬಹುದು.." 

ಎಂದಾಗ.. ಅಬ್ಬಾ ಈ ಒಂದು ವಾರದ ಯಾತನೆ ಮುಗಿಯುತ್ತೆ.. ಮತ್ತೆ ನನ್ನ 
ಜೀವನಕ್ಕೆ ಮರಳಿ ಬರಬಹುದು ಅನ್ನಿಸಿತು.. ಕಾರಣ ಹಿಂದಿನ ದಿನವಷ್ಟೇ ಮಗಳು ಶಸ್ತ್ರ ಚಿಕಿತ್ಸೆ ಮುಗಿಸಿ, ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಮನೆಗೆ ಮರಳಿದ್ದಳು.. .. ಮನದಲ್ಲಿ ಹಕ್ಕಿ ಹಾರುತ್ತಿತ್ತು.. 

"ಆದರೆ ಶ್ರೀಕಾಂತ್.. ನಿಮ್ಮ ಪತ್ನಿ..ಸವಿತಾಳನ್ನು ಉಳಿಸಲು ತುಂಬಾ ಪ್ರಯತ್ನ ಪಟ್ಟೆವು.. ಆಗಲಿಲ್ಲ.. " 

"ಡಾಕ್ಟರ್.. ಸೆಕೆಂಡ್ ಒಪೀನಿಯನ್ ತಗೊಳ್ಳಿ.. ಹೇಗಾದರೂ ಮಾಡಿ ಉಳಿಸಿಕೊಡಿ.. " ಗಂಟಲು ತುಂಬಿ ಬಂದಿತ್ತು.. ಕಣ್ಣುಗಳಲ್ಲಿ ನೀರು ತುಂಬಿತ್ತು.. ಆದರೆ ಶಸ್ತ್ರ ಚಿಕಿತ್ಸೆ ಆಗಬೇಕಾದ ಕಾರಣ ಅಳುವ ಹಾಗೆ ಇರಲಿಲ್ಲ.. ಕಣ್ಣುಗಳಿಗೆ ಚಿಕಿತ್ಸೆ ಆಗಬೇಕಿತ್ತು.. 

"ಶ್ರೀಕಾಂತ್.. ನಾವೂ ಪೂರ್ಣ ಪರೀಕ್ಷೆ ಮಾಡಿದ್ದೇವೆ.. ಮತ್ತು ಎಲ್ಲಾ ರೀತಿಯ ಚಿಕಿತ್ಸೆ ಕೊಟ್ಟಿದ್ದೇವೆ.. ಉಳಿಯುವ ಸಾಧ್ಯತೆ ಇಲ್ಲವೇ ಇರಲಿಲ್ಲ.. ಹಾಗಾಗಿಯೂ ಮೂರು ದಿನ ಉಳಿಸಿಕೊಂಡೆವು.. ಆದರೆ ಯಾವುದೇ ಚಿಕಿತ್ಸೆ ತಲುಪುತ್ತಿಲ್ಲ.. "

"ಅಂದ್ರೆ ಬ್ರೈನ್ ಡೆಡ್ ಡಾಕ್ಟರ್"

"ಸರಿಯಾಗಿ ಹೇಳಿದಿರಿ.. ಇನ್ನೂ ನಿಮಗೆ ಏನೂ ಹೇಳಬೇಕಿಲ್ಲ.. ಆದರೆ ಒಂದು ಅವಕಾಶ ಇದೆ ಅವರನ್ನು ಬದುಕಿಸಿಕೊಳ್ಳಲು"

"ಹೇಳಿ ಡಾಕ್ಟರ್"

"ಅವರ ಅಂಗಗಳನ್ನ ದಾನ ಮಾಡಬಹುದು.. ಸುಮಾರು ಏಳು ಮಂದಿಗೆ ಬೆಳಕಾಗಬಹುದು.. ಅದು ನೀವು ಒಪ್ಪಿಗೆ ಕೊಟ್ಟರೆ ಮಾತ್ರ"

"ಡಾಕ್ಟರ್ ಅವಳು ನನ್ನ ಜೊತೆಯಲ್ಲಿ ಸದಾ ಇರುತ್ತಾಳೆ..  ಆದರೆ ಭೌತಿಕವಾಗಿ ನನ್ನ ಜೊತೆಯಲ್ಲಿ ಇಲ್ಲದೆ ಹೋದರು.. ವರ್ಚುಯಲ್ ಆಗಿ ಇನ್ನೊಬ್ಬರಿಗೆ ಬೆಳಕಾಗಿರುತ್ತಾಳೆ.. ಆಗಲಿ ಡಾಕ್ಟರ್ ಅದೇನೋ ಕಾಗದ ಪತ್ರಗಳಿಗೆ ಸಹಿ ಬೇಕೋ ಕೊಡಿ ಹಾಕುತ್ತೇನೆ.. ಮೊದಲು ಆ ಕೆಲಸ ಆಗಲಿ.. ನೀವೇ ಹೇಳಿದ ಹಾಗೆ ನನ್ನ ಶಸ್ತ್ರ ಚಿಕಿತ್ಸೆ ತಡವಾದರೂ ತೊಂದರೆಯಿಲ್ಲ.. ಆದರೆ ಅವಳ ಅಂಗಗಳು ಸಮಯ ಮೀರದ ಹಾಗೆ ಇನ್ನೊಬ್ಬರಿಗೆ ಬೆಳಕಾಗಲಿ ಡಾಕ್ಟರ್.. "

"ನಿಜವಾಗಿಯೂ ಶ್ರೀಕಾಂತ್ ನೀವು ಗ್ರೇಟ್.. ಈ ಪರಿಸ್ಥಿತಿಯಲ್ಲೂ ಈ ತರಹದ ನಿರ್ಧಾರ.. ತುಂಬಾ ವಿರಳ.. ಗ್ರೇಟ್ ನೀವೂ ಮತ್ತು ನಿಮ್ಮ ಕುಟುಂಬದವರು" ಅಂತ ಹೇಳಿ ಹೊರಟರು ಮುಂದಿನ ಸಿದ್ಧತೆ ಮಾಡಿಕೊಳ್ಳಲು.. 

ನಾನು  ಗ್ರೇಟ್ ಅಂತ ಹೇಳಿದ್ದಕ್ಕೆ ಖುಷಿ ಪಡಲೋ.. ಅಥವ ಗ್ರೇಟ್ ಕೆಲಸ ಮಾಡಿ ನಮ್ಮನ್ನು ಉಳಿಸಿದ ಸವಿತಾ ಗ್ರೇಟ್ ಅಂತ ಹೇಳಿ ಸಮಾಧಾನಪಟ್ಟುಕೊಳ್ಳಲೋ.. ಅಂತ ತೊಯ್ದಾಡುತ್ತಿದ್ದಾಗ.. ಅಪಘಾತ ಆಗುವ ಸ್ವಲ್ಪ ಹೊತ್ತಿನ ಮುಂಚೆ ನನ್ನ ಕಾರಿನಲ್ಲಿ ಬರುತ್ತಿದ್ದ ಹಾಡಿನ ಸಾಲು ನೆನಪಿಗೆ ಬಂತು.. 

"ಯೋಗವೋ ಒಮ್ಮೆ ಬರುವುದು ನಮಗೆ.. 
ಯೋಗ್ಯತೆ ಒಂದೇ ಉಳಿವುದೇ ಕೊನೆಗೆ"

ಎಷ್ಟು ನಿಜ.. ಯೋಗ ನಮಗೆ.. ಯೋಗ್ಯತೆ ಅವಳಿಗೆ!!!

ಇಂದಿಗೆ ಎರಡು ವರ್ಷ.. ಡಾಕ್ಟರ್ ಅವಳಿಲ್ಲ ಅಂತ ಹೇಳಿ..ಅವಳ ನೆನಪು ಸದಾ ಇದ್ದರೂ.. ಅವಳು ಗುಪ್ತಗಾಮಿನಿಯಾಗಿ ಪ್ರೀತಿಸುತ್ತಿದ್ದ ನನ್ನ ಬರಹದ ಮೂಲಕ ಅವಳಿಗೊಂದು ನಮನ!!!)


6 comments:

  1. absly stunning write up !!!!! hats off !

    ReplyDelete
  2. ಶ್ರೀಕಾಂತ,ಕಣ್ಣೀರಿಡಿಸುವ ಲೇಖನ. ಅಂಗಾಂಗದಾನ ಮಾಡಿ ಹೋದವರಿಗೂ ನಮನ. ನಿಮಗೂ ನಮನ. ನಿಮ್ಮ ಮಗಳಿಗೆ ಶುಭವಾಗಲಿ.

    ReplyDelete
  3. VERY WELL WRITTEN AS ALWAYZZZZ... SOME PEOPLE ARE GREAT WITHOUT BEING TOLD... WELL DONE...

    ReplyDelete
    Replies
    1. Thank you leela... being a doctor you can understand the situation!!!

      Delete