Wednesday, May 8, 2019

ಕಣ್ಣೀರಲ್ಲ ಶ್ರೀ ಪನ್ನೀರು ಪನ್ನೀರು

ಮಳೆ ಬರುತ್ತದೆ.. ಬರಬಹುದು.. ಬಂದರೆ.. ಈ ರೇ ರೇ ರೇ ಗಳಲ್ಲಿ ದಿನವೂ ಆಫೀಸಿಗೆ ಹೋಗುವಾಗ ಛತ್ರಿ ತೆಗೆದುಕೊಂಡು ಹೋಗುವ ಅಭ್ಯಾಸ ಮಾಡಿಕೊಂಡೆ.. ಆ ದಿನದಿಂದ ಒಂದು ದಿನವೂ ಮಳೆಯ ಸುಳಿವಿಲ್ಲ.. ಆದರೂ ಛಲ ಬಿಡದ ತ್ರಿವಿಕ್ರಮನಂತೆ ಛತ್ರಿ ಬ್ಯಾಗಿನೊಳಗೆ ಇರುತ್ತಿತ್ತು..

ನಿನ್ನೆ ಮಧ್ಯಾನ್ಹ ಸಿಹಿ ವಾರ್ತೆ ಕೇಳಿದ ಮೇಲೆ.. ಮನಸ್ಸು ಹಗುರಾಗಿತ್ತು.. ಅದೇ ಗುಂಗಿನಲ್ಲಿ ವಾಟ್ಸಾಪ್ ಸ್ಟೇಟಸ್ ಹಾಕಿದೆ..

"ಸವಿತಾ ನಗುತ್ತಿದ್ದಾಳೆ..
ತನ್ನ ಮಗಳು ೮೬% ನಲ್ಲಿ
ಜೀವನದ ಮೊದಲ ಘಟ್ಟ ದಾಟಿದ್ದಾಳೆ ಎಂದು"
#ಸವಿತಾರ್ಥಕತೆ!!!

ಮನಸ್ಸು ಇನ್ನೂ ಹಗುರಾಯಿತು.. ಸಂಜೆ ಆಫೀಸಿನಿಂದ ಹೊರಟೆ..

ಒಂದೆರಡು ಮಳೆ ಹನಿ ಬಿದ್ದವು..

"ಯಾಕೆ ಟೀ ಹನಿಗಳು" ಅಂದೇ..

"ಶ್ರೀ ನಿಮ್ಮ ಅಣ್ಣಾವ್ರ ಹಾಲುಜೇನು ಚಿತ್ರದ ಶೈಲಿಯಲ್ಲಿ "ಕಣ್ಣೀರಲ್ಲ ಶ್ರೀ ಪನ್ನೀರು ಪನ್ನೀರು"

 "ವಾಹ್ ಸೂಪರ್ ಟೀ.. ಎಂಥಹ ಮಾತು.. ಖುಷಿಯಾಯಿತೇ"

"ಹೌದು ಶ್ರೀ.. ನಾವು ಪಟ್ಟ ಶ್ರಮ ಒಂದು ಘಟ್ಟಕ್ಕೆ ಬಂದು ನಿಂತಿದೆ.. ಇಷ್ಟೆಲ್ಲಾ ಮಾನಸಿಕ ಒತ್ತಡದ ನಡುವೆಯೂ ನಮ್ಮ ಕಂದಮ್ಮ ಇಷ್ಟು ಚೆನ್ನಾಗಿ ಓದಿದ್ದಾಳೆ.. ಅದಕ್ಕಿಂತ ಇನ್ನೇನು ಬೇಕು.. ಅವಳಿಗೆ ಶುಭವಾಗುತ್ತೆ ಶ್ರೀ.. ನೀನು ಇದ್ದೀಯ ಜೊತೆಯಲ್ಲಿ. ಅದಕ್ಕಿಂತ ಇನ್ನೇನು ಬೇಕು ಅವಳಿಗೆ"

"ಹಾ ಟೀ.. ನನಗೂ ಒಂದೊಮ್ಮೆ ಅನಿಸಿತ್ತು .. ಅವಳು ಎಷ್ಟು ಅಂಕ ತೆಗೆಯುತ್ತಲೋ ತೆಗೆಯಲಿ.. ಯಾವುದೇ ಒತ್ತಡ ಹಾಕೋದು ಬೇಡ ಅಂತ ..ಅವಳು ಇಷ್ಟು ಅಂಕ ತೆಗೆದಿದ್ದಾಳೆ ಅಂದರೆ.. ಅದು ಅವಳ ಮಾನಸಿಕ ಒತ್ತಡವನ್ನು ನಿಭಾಯಿಸಿದ ರೀತಿಗೆ ಶರಣು ಎನ್ನಬೇಕು.. ಮತ್ತು ಆ ಶ್ರೇಯಸ್ಸು ಅವಳಿಗೆ ಸಲ್ಲಬೇಕು.. ತನ್ನ ಪಾಡಿಗೆ ತನ್ನ ಪ್ಲಾನ್ ಪ್ರಕಾರ ಓದುತ್ತಾ ಸಾಗಿದ್ದು.. ಮಧ್ಯೆ ಮಧ್ಯೆ.. ಮೊಬೈಲು, ಸಿನಿಮಾ, ಟಿವಿ.. ಹೀಗೆಲ್ಲಾ ಇದ್ದರೂ ಓದುವುದರಿಂದ ದೂರವಿರಲಿಲ್ಲ.. ಇದೆ ರೀತಿ ಇನ್ನು ಐದರಿಂದ - ಏಳು ವರ್ಷ ಓದಿಬಿಟ್ಟರೆ.. ಅವಳ ಹಾದಿ ಸುಂದರವಾಗಿರುತ್ತೆ.. "

"ನಿಜ ಶ್ರೀ... ನಾನಿದ್ದೇನೆ ಅವಳ ಜೊತೆಯಲ್ಲಿ ಮಾನಸಿಕ ಧೈರ್ಯ ತುಂಬುವುದಕ್ಕಾಗಿ.. ಜೊತೆಗೆ ನಾನು ಅವಳಿಗೆ ಹೇಳಿದ್ದೆ ಪಮ್ಮಿ ಅಕ್ಕನ ತರಹ ಚಾರ್ಟರ್ಡ್ ಅಕೌಂಟೆಂಟ್ ಆಗು ಅಂತ.. ಅದನ್ನು ನಿಜ ಮಾಡುವುದೇ ಅವಳ ಗುರಿಯಾಗಬೇಕು.. ಅದನ್ನು ನನಸು ಮಾಡೋದಕ್ಕೆ ನೀ ಇದ್ದೀಯ ಜೊತೆಯಲ್ಲಿ.. ಅಷ್ಟು ಸಾಕು ನನಗೆ.. "

ಆಗಸ ನೋಡಿದೆ ..ಅದರ ತುಂಬೆಲ್ಲ ಸವಿತಾಳ ಆ ಮುಗ್ಧ ನಗು ಮೊಗವೆ ಕಾಣುತ್ತಿತ್ತು.. ಹಾಗೆ ಅವಳ ಜೊತೆ ಮಾತಾಡಿಕೊಂಡು.. ಮೆಟ್ರೋ ಹತ್ತಿ.. ನನ್ನ ಬೈಕ್ ಹತ್ತಿರ ಬಂದಾಗಲೂ ಮಳೆಯ ಹನಿಗಳಿದ್ದವೇ  ಹೊರತು ಭೋರ್ಗರೆಯುವ ಮಳೆ ಇರಲಿಲ್ಲ.. ಸರಿ ಬೈಕಿನಲ್ಲಿ ಹಾಡಾಡಿಕೊಂಡು ಬರುತ್ತಿದ್ದೆ..

ಒಮ್ಮೆ ಆಗಸ ನೋಡಿದೆ.. ಮತ್ತೆ ಸವಿತಾ ಕಂಡಳು.. "ಟೀ ಒಂದು ಪ್ರಶ್ನೆ"

"ಹೇಳು ಶ್ರೀ"

"ಆನಂದಭಾಷ್ಪ ಅಂದೇ. .. ಬರೀ ಒಂದೆರಡು ಹನಿಗಳು ಮಾತ್ರ ಬಿದ್ದವು.. ಅಷ್ಟೇನಾ ಖುಷಿಯಾಯ್ತಾ "

"ಹಾ ಶ್ರೀ.. ಕುಶಿಯಾಯ್ತು.. ಓಹ್ ಗೊತ್ತಾಯ್ತು.. ಇರು ಒಂದು ಕ್ಷಣ.. ನಿನಗೆ ಮ್ಯಾಜಿಕ್ ತೋರಿಸುತ್ತೇನೆ"

"ಏನು ಟೀ ಮ್ಯಾಜಿಕ್"

"ಇರಪ್ಪ ..ಇಂದು ನಿನ್ನ ಇಷ್ಟದ ಮಂಗಳವಾರ.. ನನ್ನಿಷ್ಟದ ತಾರೀಕು (ಏಳು)... ಎರಡೂ ಇದ್ದ ಮೇಲೆ ಇನ್ನೊಂದು ನಿನಗೆ ಇಷ್ಟವಾದುದನ್ನು ಕಳಿಸುತ್ತೇನೆ.. "

ಅರೆ ಕ್ಷಣ.. ಭೋರ್ಗರೆತ ಶುರುವಾಯಿತು.. ಕಣ್ಣು ಕಾಣದಷ್ಟು ದಪ್ಪ ದಪ್ಪ ಹನಿಗಳ ಮಳೆ.. ಬೈಕ್ ಓಡಿಸಲಾಗಲಿಲ್ಲ.. ತಕ್ಷಣ.. ರಸ್ತೆಯ ಅಂಚಿನಲ್ಲಿದ್ದ ಅಂಗಡಿಯ ಮುಂದೆ ಬಂದು.. ಮೊಬೈಲು, ವಾಚು, ಪರ್ಸ್ ಎಲ್ಲವನ್ನೂ ಬ್ಯಾಗಿನಲ್ಲಿ ಹಾಕಿ.. ಕನ್ನಡಕವನ್ನು ಜೇಬಿನಲ್ಲಿ ಹಾಕಿಕೊಂಡು.. ಮತ್ತೆ ಬೈಕ್ ಬಳಿ ಬಂದೆ.. ಅಲ್ಲಿಯ ತನಕ ನನ್ನ ಕಾರ್ಯವನ್ನು ನೋಡುತ್ತಿದ್ದ ಅಕ್ಕ ಪಕ್ಕದ ಮಂದಿ ಸುಮ್ಮನಿದ್ದರು.. ಬೈಕ್ ಬಳಿ  ಬಂದು. .. ಬೈಕ್ ಸ್ಟಾರ್ಟ್ ಮಾಡಿದಾಗ.. ಅಲ್ಲಿದ್ದ ಒಬ್ಬ ತಲೆ ಚಚ್ಚಿಕೊಂಡದ್ದು ಕಣ್ಣಿಗೆ ಬಿಟ್ಟು.. ನಸು ನಗುತ್ತಾ "ಟೀ ಸೂಪರ್" ಎಂದು ಸಲ್ಯೂಟ್ ಹೊಡೆದದ್ದೇ.. ಸೀದಾ ಮನೆ ಕಡೆ..  ಆ ಮಳೆಯಲ್ಲಿ ಬೈಕ್ ಚಾಲನೆ.. ಸುಂದರ ಅನುಭವ ಕೊಟ್ಟಿತು.. ಹಾಗೆ ನನ್ನ SSLC ದಿನಗಳ ಕಡೆಗೆ ಜಾರಿತು..

"ಶ್ರೀಕಾಂತ ಇವತ್ತು ನಿನ್ನ ರಿಸಲ್ಟ್.. ಶಾಲೆಗೆ ಹೋಗಿ ನೋಡಿಕೊಂಡು ನನ್ನ ಆಫೀಸ್ ಹತ್ತಿರ ಬಾ" ಅಂತ ನನ್ನ ಅಪ್ಪ ಹೇಳಿ ಆಫೀಸಿಗೆ ಹೋದರು..

ನಾನು ಠಾಕು ಠೀಕಾಗಿ ಸಿದ್ಧವಾಗಿ.. ಶಾಲೆಯ ಹತ್ತಿರ ಹೋದೆ.. ನೋಟೀಸ್ ಬೋರ್ಡಿನಲ್ಲಿ ಫಲಿತಾಂಶ ಹಾಕಿದ್ದರು.. ನನ್ನ ರೋಲ್ ನಂಬರ್ ಹುಡುಕುತ್ತಾ ಬಂದಾಗ ಅಚ್ಚರಿ ಕಾದಿತ್ತು.. ನನ್ನ ನಂಬರಿಗೆ ಒಂದು ಗೆರೆ ಎಳೆದಿದ್ದರು. .. ಅಲ್ಲಿ ಇನ್ಯಾರ ನಂಬರಿಗೂ ಹಾಗೆ ಮಾಡಿರಲಿಲ್ಲ.. ಸರಿ ಮಾರ್ಕ್ಸ್ ಎಷ್ಟು ಬಂದಿದೆ ಎಂದು ತಿಳಿದುಕೊಂಡು.. ಅಪ್ಪನ ಆಫೀಸಿಗೆ ಹೋದೆ.. ಹೇಳಿದೆ..

"ಅಣ್ಣ ಫಸ್ಟ್ ಕ್ಲಾಸಿನಲ್ಲಿ ಪಾಸಾಗಿದ್ದೇನೆ.. ಇದು ನೋಡಿ ಮಾರ್ಕ್ಸ್"

"ನನಗೆ ಗೊತ್ತು.. ನೋಡಿಲ್ಲಿ ಬರೆದುಕೊಂಡು ಬಂದಿದ್ದೇನೆ" ಎಂದು ತೋರಿಸಿದರು.. "ಆಫೀಸಿಗೆ ಬರುವಾಗ ಶಾಲೆಗೆ ಹೋಗಿ ನಿನ್ನ ರಿಸಲ್ಟ್ ನೋಡಿ.. ನನ್ನ ಬಾಸ್ ಸೀತಾರಾಮುಗೆ ಹೇಳಿದ್ದೀನಿ.. ನಾನೇ ನಿನ್ನ ನಂಬರ್ ಕೆಳಗೆ ಗೆರೆ ಎಳೆದದ್ದು. "

ಅಪ್ಪನ ಬಾಸ್ ಸೀತಾರಾಮು ಸರ್ ಹತ್ತಿರ ಹೋಗಿ ಹೇಳಿದೆ.. "ಖುಷಿ ಆಯ್ತು ಶ್ರೀಕಾಂತ.. ಕೆ ಆರ್ ಪಟ್ಟ ಕಷ್ಟಕ್ಕೆ ಸರಿಯಾದ ಬೆಲೆ ಸಿಗುತ್ತಿದೆ.. ಶುಭವಾಗಲಿ.. ಮುಂದೆ ಏನು ಓದುತ್ತೀಯ ನಿರ್ಧಾರ ಮಾಡಿ ಹೇಳು.. ನನ್ನ ಕೈಲಾದ ಸಹಾಯ ಮಾಡುತ್ತೇನೆ" ಎಂದರು ... ಅವರು ನುಡಿದಂತೆಯೇ.. ನನ್ನ ಪೂರ್ಣ ವಿದ್ಯಾಭ್ಯಾಸಕ್ಕೆ ಅವರ ಸಹಾಯ ಇತ್ತು.. ಇಂದು ನಾನು ಏನಾದರೂ ಆಗಿದ್ದೇನೆ ಎಂದರೆ ಅದಕ್ಕೆ ಭದ್ರ ತಳಪಾಯ ಹಾಕಿದ್ದು.. ಸೀತಾರಾಮ್ ಸರ್..

 ಇದೆಲ್ಲ ನೆನೆದು..ಮಳೆಯಿಂದ ನೆನೆದು ಮನೆಗೆ ಬಂದಾಗ.. ಮಗಳು ಫುಲ್ ಕುಶಿಯಲ್ಲಿದ್ದಳು.. ಹಾಗೆ ಒದ್ದೆ ಬಟ್ಟೆಯಲ್ಲಿಯೇ.. ಕಂಗ್ರಾಜುಲೇಷನ್ ಪಾಪ  ಎಂದು ಹೇಳಿ ಅಪ್ಪಿಕೊಂಡು ಸಿಹಿ ತಿನ್ನಿಸಿದೆ..

ಹೊರಗೆ ಬಂದು ನೋಡಿದೆ.. ಆನಂದಭಾಷ್ಪ ಇನ್ನೂ ಧಾರಾಕಾರವಾಗಿ ಸುರಿಯುತ್ತಲೇ ಇತ್ತು.. ಅವಳ ಫೋಟೋ ನೋಡಿದೆ .. ಸೂಪರ್ ಶ್ರೀ ಎಂದಳು ನನ್ನ ಟೀ!!!

6 comments:

  1. ಯಾವಾಗ್ಲೂ ನೀವು...ಶೀತು ಖುಷಿಯಾಗಿರ್ಬೇಕು ಅದನ್ನ ನೋಡಿ ಸವಿತ ಕೂಡ ನಗ್ತಾ ಇರ್ಬೇಕು....ನಿಮ್ಮ ಸಾಲುಗಳನ್ನು ನೋಡಿ ಖುಷಿಯಾಯ್ತು ....ಒಟ್ಟೊಟ್ಟಿಗೆ ತುಸು ಕಣ್ಣೀರು ತುಂಬಿಕೊಂಡಿತು..ಮಗುಗೆ ಒಳ್ಳೆದಾಗ್ಲಿ☺☺

    ReplyDelete
  2. ಅಣ್ಣಾ .... ಸೂಪರ್. ಅತ್ತಿಗೆಯ ಸಂತಸವೂ ಕಣ್ಮುಂದೆ ಬಂತು. ಹೀಗೆ ಖುಷಿಯಾಗಿರಿ.. ನೀವೇನೂ ಒತ್ತಡ ಹಾಕುವುದೇ ಬೇಡ. ಅವಳಿಗೆ ಏನು ಆಗಬೇಕೋ ಅದೇ ಗುರಿ ತಲುಪುವ ತಾಕತ್ತು ,ಛಲ ಎರಡನ್ನೂ ಶೀತಲ್ ಗೆ ಮೈಗೂಡಿಸಿಬಿಟ್ಟಿದ್ದೀರಿ. ಇನ್ನು ಹುರುಪು, inspiration ಎರಡನ್ನು ನೀವು ಬೆಳೆಸೋ ಕಂದಮ್ಮಗೆ ಹೊರಗಿಂದ ಕೊಡೋ ಅಗತ್ಯವೇ ಇಲ್ಲ. ಅದು ನಿಮ್ಮಲ್ಲೇ ಇದೆ . ಅವಳಿಗೂ transfer ಆಗುತ್ತೆ.

    ReplyDelete
  3. ಮಳೆ ಹೊಡೆದು ತಂಪಾದ ಅನುಭವ ಆಯ್ತು. ಶೀತಲ್ ಅಭಿವೃದ್ಧಿ ಹೊಂದಲಿ; ನೀವಿಬ್ಬರೂ ಖುಶಿಯಾಗಿರಿ.

    ReplyDelete