Friday, June 6, 2014

ಆಸೆಯು ಕೈಗೂಡಿತು... ಆಸರೆ "ದೊರೆ"ತಾಯಿತು....!

ನೃಪತುಂಗ ರಸ್ತೆಯ ಮಾರ್ಥ ಆಸ್ಪತ್ರೆ.. ಕೊನೆ ದಿನಗಳನ್ನು ಎಣಿಸುತ್ತಿರುವ ತನ್ನ ತಾಯಿ.. ..

"ಮಂಜಣ್ಣ ಒಂದು ಲೋಟ ಹಾಲು ತಂದು ಕೊಡ್ತೀಯ... ".. ನಮ್ಮ ಅಪ್ಪನಿಗೆ ಅವರ ಅಕ್ಕ ಗೌರಿ ಹೇಳಿದಂತೆ.. "ಅದೇ ಕಡೆಯ ಆಹಾರ ನನ್ನ ಅಜ್ಜಿ ತೆಗೆದುಕೊಂಡದ್ದು.." ನಂತರ ಯಾವ ಆಹಾರ ಕೂಡ ಅವರ ದೇಹಕ್ಕೆ ತಲುಪಲಿಲ್ಲ ಎಂದು ಹೇಳುತ್ತಿದ್ದರು...

ಅದಕ್ಕಿಂತ ಹಿಂದಿನ ಕೆಲ ದಿನಗಳಲ್ಲಿ ಅಜ್ಜಿ ತನ್ನ ಸೊಸೆ ಅಂದ್ರೆ ನನ್ನ ಅಮ್ಮನಿಗೆ ಹೇಳಿದ ಕಿವಿ ಮಾತು.. ಅಮ್ಮ ಹಲವಾರು ಬಾರಿ ಹೇಳುತ್ತಿರುತ್ತಾರೆ .

"ನೋಡು ವಿಶಾಲು.. ನನ್ನ ಮಗನು ಸೇರಿ ನಿನ್ನ ನಾಲ್ಕು ಮಕ್ಕಳು ಸೇರಿ ... ನಿನಗೆ ಐದು ಮಂದಿ ಮಕ್ಕಳು..ಅವರನ್ನೆಲ್ಲ ನೀನು ಕಾಪಾಡುತ್ತೀಯ ಎಂದು ನನಗೆ ಗೊತ್ತು.. ಇಡಿ ಜಗತ್ತನ್ನೇ ನಿನ್ನ ಮನೆಯ ಕಡೆ ತಿರುಗಿ ನೋಡುವ ಹಾಗೆ ಮಾಡು.. ನನ್ನ ಆಶೀರ್ವಾದ ಸದಾ ನಿನ್ನ ತಲೆಯ ಮೇಲೆ ಇರುತ್ತದೆ .. "

ಎಲ್ಲಾ ಮಧುರ ಹೃದಯದ ಬಳಗವನ್ನು ಹೊತ್ತು ತಂದ ಸಂಭ್ರಮ.. 
ಪ್ರಾಯಶಃ ಅಪ್ಪನಿಗೆ ಸ್ಫೂರ್ತಿ ಕೊಟ್ಟದ್ದು ಅಜ್ಜಿಯ ತಾಳ್ಮೆಯ ನಡೆ.... ಅಮ್ಮನಿಗೆ ಛಲ ಕೊಟ್ಟದ್ದು ಅಜ್ಜಿಯ ಆ ಕೊನೆಯ ಮಾತುಗಳು..

ಅಲ್ಲಿಂದ ಎಂಥಹ ವಿಷಮ ಪರಿಸ್ಥಿತಿಯಲ್ಲೂ ಅಪ್ಪ ತಾಳ್ಮೆ ಕಳೆದುಕೊಳ್ಳಲಿಲ್ಲ... ಅಮ್ಮ ಎಂದೂ ಛಲದ ಗುರಿಯ ಬೆನ್ನು ಬಿಡಲಿಲ್ಲ.. ಆ ಐದು ಮಕ್ಕಳನ್ನು ಗುಬ್ಬಚ್ಚಿ ಗೂಡಿನಲ್ಲಿ ಬೆಚ್ಚಗೆ ಕಾಪಾಡುವ ಹಾಗೆ ಕಾಪಾಡಿಕೊಂಡು ಬಂದರು...

ಛಲದೊಲ್ ಸುಯೋಧನ ಅನ್ನುವಂತೆ.. ಛಲದಲ್ಲಿ ಅಮ್ಮ ನಿಂತರೆ.. ಅಮ್ಮ ನಿನ್ನಷ್ಟೇ ಛಲ ನನ್ನಲ್ಲಿದೇ.. ಅಪ್ಪನಷ್ಟೇ ತಾಳ್ಮೆ ನನ್ನಲ್ಲಿದೆ ಎಂದು ಸಾಧಿಸಿ ತೋರಿಸಿದ್ದಾಳೆ ನನ್ನ(ಮ್ಮ) ಅಕ್ಕಾ..

*********************
"ಆಸೆಯು ಕೈಗೂಡಿತು.. ಆಸರೆ ದೊರೆತಾಯಿತು.. ಚಿಂತೆ ದೂರವಾಯಿತು.. ಮನಸು ಹಗುರವಾಯಿತು.. "

ಯಾಕೋ ಇಂದು ಈ ಹಾಡು ತುಂಬಾ ಕಾಡುತ್ತಿತ್ತು.. ಅಣ್ಣಾವ್ರ ಸೂಪರ್ ಎಂಟ್ರಿ ಈ ಹಾಡಿನಲ್ಲಿ..

ಸರಿ ಸುಮಾರು ಈ ಸಿನಿಮಾ ಬಿಡುಗಡೆಯಾದ ೧೯೭೮-೭೯ ವರ್ಷದಲ್ಲಿಯೇ ಅಪ್ಪ ಬೆಂಗಳೂರಿಗೆ ಬರಬೇಕೆಂಬ ಹಂಬಲ ಹೊತ್ತಿದ್ದರು.. ಬೆಂಗಳೂರಿಗೆ ಬಂದು ಏನ್ ಮಾಡ್ತೀಯ ಎನ್ನುವ ಕಾಲೆಳೆಯುವ ಪ್ರಶ್ನೆ ಒಂದು ಕಡೆಯಾದರೆ.. ಮಂಜಣ್ಣ ಬೆಂಗಳೂರಿಗೆ ಹೋಗು.. ನಿನ್ನ ಮಕ್ಕಳು ಮುಂದೆ ಬರುತ್ತಾರೆ ಎನ್ನುವ ಸುಂದರ ಬೆನ್ನು ತಟ್ಟುವ ನುಡಿ.. ...

ಬೆನ್ನು ತಟ್ಟುವ ನುಡಿಯ ಜಾಡಲ್ಲೇ ಬೆಂಗಳೂರಿಗೆ ಬಂದು.. ಈ ಮಾಯಾನಗರಿಯಲ್ಲಿ ಕೇವಲ ಒಂದು ನೂರು ರೂಪಾಯಿಗೆ ಮನೆ ಬಾಡಿಗೆಗೆ ಕೊಡಿಸಿದವರು ಅವರ ಮಾವನ ಮಗನಾದ ಗುಂಡ ಎನ್ನುವವರು... ನಮ್ಮ ಮನೆಯ ಪ್ರತಿ ಏಳಿಗೆಯನ್ನು ನೋಡಿದ ಆ ಮಹನೀಯ ನಮ್ಮ ಮೆಚ್ಚಿನ "ಗುಂಡ ಮಾವ" ನಮ್ಮನ್ನು ಅಗಲಿ ಐದಾರು ವರ್ಷ ಆಯಿತು.. ಅವರ ಆಶೀರ್ವಾದ ನಮ್ಮ ಮನೆಯನ್ನು ಕಾಪಾಡುತ್ತಿದೆ ಎಂದರೆ ತಪ್ಪಿಲ್ಲ..
ಹಾಲಿನಂಥ ಮನಸ್ಸು ಉಕ್ಕಿದಾಗ ಸಿಗುವ ಸಂತಸ... ಆಹಾ!!!

ನನ್ನ ಅಪ್ಪನನ್ನು ಯಾವಾಗಲೂ "ದೊರೆ" ಎನ್ನುತ್ತಿದ್ದರು.. ಅವರು ಸುಮಾರು ಮೂವತ್ತು ವರ್ಷಗಳ ಹಿಂದೆ ಮಾತು ಇನ್ನೂ ನನ್ನ ಕಿವಿಯಲ್ಲಿ ಪ್ರತಿಧ್ವನಿಯಾಗುತ್ತಿರುತ್ತದೆ..

"ನೋಡು ದೊರೆ.. ಕಷ್ಟ ಬರುತ್ತೆ ಹೋಗುತ್ತೆ.. ನಿನ್ನ ಮಕ್ಕಳು ನಿನ್ನನ್ನು ದೊರೆಯ ಹಾಗೆ ನೋಡಿಕೊಳ್ಳುತ್ತಾರೆ.."

ಚದುರಿ ಹೋದ ಕಷ್ಟಗಳು ಸುಖದ ಊಟವನ್ನು ಹೊತ್ತು ತರುತ್ತವೆ.. !

ಅಜ್ಜಿ ಹೇಳಿದ ಮಾತಿನಂತೆ.. ನಮ್ಮ ಅಮ್ಮ ಅಪ್ಪ ನಮ್ಮನ್ನು ಯಾರ ಮನೆಯ ಬಾಗಿಲಿಗೂ ಹೋಗಲು ಬಿಡದೆ.. ಎಲ್ಲರೂ ನಮ್ಮ ಮನೆಯ ಕಡೆ ತಿರುಗಿನೋಡುವಂತೆ ಮಾಡಿದ್ದು ನನ್ನ ಅಪ್ಪ ಅಮ್ಮನ ಸಾಹಸವೆ ಸರಿ.. ಸೋದರ ಮಾವನ ಮಾತು ನಿಜವಾಗಿತ್ತು.. ದೊರೆಯ ಹಾಗೆ ಬಾಳಿದ ನನ್ನ ಅಪ್ಪ ಕಂಡ ಕನಸ್ಸನ್ನು ನನಸಾಗಿದ್ದನ್ನು ನೋಡಲು ನಮ್ಮೊಂದಿಗೆ ದೈಹಿಕವಾಗಿ ಇರಲಿಲ್ಲ.. ಆದರೆ ನಮ್ಮ ಮನದಲ್ಲಿ ಮನೆಮಾಡಿದ್ದರು....

ಕನಸ್ಸಿನ ಸದನ ಕಣ್ಣ ಮುಂದೆ ನಿಜವಾದಾಗ!!!

*********************

ದೇವಲೋಕದಲ್ಲಿ ಹಾಗೆಯೇ ಹವಾ ಸೇವನೆಗೆ ಹೋಗಿದ್ದ ಅಪ್ಪ.. ಸಂತಸದಿಂದ ಹಾಡಿ ಕೊಂಡು ಬರುತ್ತಿದ್ದರು..

"ಆಸೆಯು ಕೈಗೂಡಿತು.. ಆಸರೆ ದೊರೆತಾಯಿತು.. ಚಿಂತೆ ದೂರವಾಯಿತು.. ಮನಸು ಹಗುರವಾಯಿತು.. "

ಅಲ್ಲಿಯೇ ಅವರ ಅಮ್ಮ ತಡೆದು "ಏನೋ ಮಂಜಣ್ಣ.. ಸಂತಸದಲ್ಲಿ ಹಾಡುತ್ತಿದ್ದೀಯ.. ಏನಾಯಿತು..." ಅಂದರು

"ಅಮ್ಮಾ ನಿನ್ನ ಮಾತಿನಂತೆ.. ಆಯಿತಮ್ಮ.. ನನ್ನ ಸಂಸಾರ ಗೆದ್ದು ಬಿಟ್ಟಿತು.... ನಿನ್ನ ಅನುಗ್ರಹ ತುಂಬಿದ ಮಾತುಗಳು ನನ್ನ ಸದನದಲ್ಲಿ ನೆಲೆಯಾಗಿ ನಿಂತು ಬಿಟ್ಟಿದೆ.. ಅಲ್ಲಿ ನೋಡಮ್ಮ ನನ್ನ ಮುದ್ದು ಮಗಳು ಹಾಡುತ್ತಾ ಆನಂದ ಭಾಷ್ಪದಲ್ಲಿ ಮುಳುಗುತ್ತಿದ್ದಾಳೆ.. ಎಲ್ಲರಿಗೂ ನನ್ನದೇ ಚಿಂತೆ.. ಅಯ್ಯೋ ದೇವರೇ.. ಈ ಸುಂದರ ದೃಶ್ಯ ನೋಡಲು ನಾನು ಕೂಡ ಅವರ ಜೊತೆ ಇರಬಾರದಿತ್ತೆ ಅನ್ನುವಷ್ಟು ಭಾವ ಉಕ್ಕಿ ಹರಿಯುತ್ತಿದೆ..

ಆನಂದ ದುಃಖ ಎರಡರ ಮಧ್ಯದ ಹಾದಿಯಲ್ಲಿ!!!

"ನನ್ನ ಮಡದಿ ಬಿಕ್ಕುತ್ತಿದ್ದಾಳೆ, ನನ್ನ ಮಗಳು ಕಣ್ಣೀರಾಗುತ್ತಿದ್ದಾಳೆ.. ನನ್ನ ಮಗ ಸೊಸೆ ಇವರ ಜೊತೆಯಲ್ಲಿ ಭಾವುಕರಾಗಿದ್ದಾರೆ.."

ಅಮ್ಮ ಯಾಕೋ ಈ ಹಾಡು ಹೇಳಬೇಕೆನಿಸುತ್ತಿದೆ

"ಕಂದಾ ನೊಂದು ಅತ್ತಾಗ,
ಯಾರೂ ಕಾಣದಾದಾಗ
ಸಂತೈಸಲೆಂದು ಓಡೋಡಿಬರುವ ತಾಯಂತೆ ನೀನು ಬಂದೆ

ಗಾಳಿ ಬೀಸಿ ಬಂದಾಗ, ಜ್ಯೋತಿ ಹೆದರಿ ಹೋದಾಗ
 ಆ ದೀಪದಲ್ಲಿ ನೀ ಜೀವವಾಗಿ ಹೋರಾಡಲೆಂದು ಬಂದೆ
ಉಸಿರಾಡುವಾಸೆ ತಂದೆ

ಆಸೆಯು ಕೈಗೂಡಿತು ಆಸರೆ ದೊರೆತಾಯಿತು
ಚಿಂತೆ ದೂರವಾಯಿತು ಮನಸು ಹಗುರವಾಯಿತು"

ಅಪ್ಪ ದೇವಲೋಕದಲ್ಲಿ ತನ್ನ ಅಮ್ಮನಿಗೆ ಹೇಳುತ್ತಿದ್ದರು.. "ಅಮ್ಮ ನೀನೆ ನನಗೆ ಶಕ್ತಿ ಕೊಟ್ಟದ್ದು.. ನಿನ್ನ ಪದಗಳೇ ನನಗೆ ಶಕ್ತಿ"

ಇಲ್ಲಿ ಭೂಲೋಕದಲ್ಲಿ ಮಕ್ಕಳು ಹೇಳುತ್ತಿದ್ದರು.. "ಅಪ್ಪ ನಿಮ್ಮ ತಾಳ್ಮೆಯ ಶಕ್ತಿಯೇ ನಮಗೆ.. ಅಮ್ಮನ ಛಲವೇ ನಮಗೆ ಶ್ರೀ ರಕ್ಷೆ"

                                                        *********************

 ಪ್ರಿಯ ಓದುಗರೇ ಏನೇನೋ ಬರೆದೆ ಅನ್ನಿಸುತ್ತಿದ್ದೆಯೇ..

ಹೌದು ಈ ಸಮಾರಂಭ ಒಂದು ರೀತಿಯಲ್ಲಿ ನನಸಾಗಲೇ ಬೇಕು ಎಂಬ ಹಠ ಹೊತ್ತ ಕನಸ್ಸಿನ ದಾರಿಯ ಒಂದು ತಿರುವು .. !

ಕಷ್ಟಗಳನ್ನೇ ಹೂವಿನ ದಾರಿಯನ್ನಾಗಿ ಮಾಡಿಕೊಂಡರೆ!!!
ಅವಮಾನ, ತಿರಸ್ಕಾರ, ಬಡತನದ ಬಿಸಿಲ ಚಾಟಿ ಏಟು, ನಿಂದನೆ, ಇದರ ಜೊತೆಯಲ್ಲಿ ಜೀವನ ತಾನಂದುಕೊಂಡ ಹಾಗೆ ಆಗದೆ ಬೇರೆ ಮಾರ್ಗವನ್ನು ತುಳಿದಾಗ.. ಆ ಕಲ್ಲು ಮುಳ್ಳಿನ ಹಾದಿಯನ್ನೇ ಹೂವಿನ ಹಾದಿಯನ್ನಾಗಿ ಮಾಡಿಕೊಂಡ ಅಪ್ಪ ಒಂದು ಕಡೆಯಾದರೆ... ಅಪ್ಪನಿಗಿಂತ ತಾನೂ ಏನು ಕಮ್ಮಿಯಿಲ್ಲ.. ಅಮ್ಮನ ಛಲ..  ಅಪ್ಪನ ತಾಳ್ಮೆ ಎರಡನ್ನು ಮೇಳೈಸಿಕೊಂಡು..ಅಪ್ಪನ ಕನಸ್ಸನ್ನು ನನಸು ಮಾಡಿದ ಸುಂದರ ಮನದ ಅಕ್ಕ ಇನ್ನೊಂದು ಕಡೆ!!!

ಖಾಲಿ ಜಾಗವನ್ನು ಭಾವನೆಗಳಿಂದ ತುಂಬಲು ಸಿದ್ಧವಿರುವ ಸ್ಥಳ.... 

ಕೋರವಂಗಲ ರಂಗಸ್ವಾಮಿ ಮಂಜುನಾಥ ಅವರ ಕುಟುಂಬ ಭದ್ರವಾಗಿ ಈ ಮಾಯಾನಗರಿ ಬೆಂಗಳೂರಿನಲ್ಲಿ ನೆಲೆ ಊರಲು.. . ಎಲ್ಲರ ಅನುಗ್ರಹದ ಆಶೀರ್ವಾದ ಪಡೆದು ಸದನವನ್ನು "ಅನುಗ್ರಹ ಸದನ" ಮಾಡಿಕೊಂಡ ಅಪರೂಪದ ಸಂಭ್ರಮ ನನ್ನಿಂದ ಹೀಗೆಲ್ಲ ಬರೆಯಿಸಿತು.. ..

ಗುದ್ದಲಿ ಪೂಜೆಯ ಸಂಭ್ರಮದಲ್ಲಿ ಅಕ್ಕಾ

ಸ್ಫೂರ್ತಿ ಎಲ್ಲ ಕಡೆಯೂ ಇರುತ್ತದೆ... ಮನಸ್ಸಿನ ಕಣ್ಣಿಟ್ಟು ನೋಡಬೇಕು ಎಂದು ಹೇಳುತ್ತಾರೆ.. ನಿಜ ನನ್ನ ಅಕ್ಕ, ನನ್ನ ಅಪ್ಪ, ನನ್ನ ಅಮ್ಮ, ನನ್ನ ಅಣ್ಣ ಇವರ ಜೀವನದ ಏರಿಳಿತಗಳು ಕೊಡುವ ಸ್ಫೂರ್ತಿ ನಿಜಕ್ಕೂ ಅವರ್ಣನೀಯ....

ಸಾಧನೆಯ ಸಂಭ್ರಮದಲ್ಲಿ

ಅಕ್ಕಾ ನಿನಗೊಂದು ಹಾಟ್ಸ್ ಆಫ್.. ಅಪ್ಪನ ಕನಸ್ಸನ್ನು ನನಸು ಮಾಡಿ.. ನಾವಿಂದು ಹಾಡುವ ಹಾಡಿಗೆ ನೀ ಸ್ಪೂರ್ತಿಯಾಗಿರುವೆ....

"ಗಾಳಿ ಬೀಸಿ ಬಂದಾಗ, ಜ್ಯೋತಿ ಹೆದರಿ ಹೋದಾಗ
ಆ ದೀಪದಲ್ಲಿ ನೀ ಜೀವವಾಗಿ ಹೋರಾಡಲೆಂದು ಬಂದೆ 
ಉಸಿರಾಡುವಾಸೆ ತಂದೆ

ಆಸೆಯು ಕೈಗೂಡಿತು ಆಸರೆ ದೊರೆತಾಯಿತು
ಚಿಂತೆ ದೂರವಾಯಿತು ಮನಸು ಹಗುರವಾಯಿತು"

10 comments:

  1. ' ಗುಂಡ ಮಾವ ' ನಿಮ್ಮನ್ನೆಲ್ಲ ಅಗಲಿದರೂ ಅವರ ಆಶೀರ್ವಾದ ನಿಮ್ಮನ್ನೆಲ್ಲ ಕಾಪಿಡುತ್ತಿರುವುದು ಸಮಾಧಾನಕರ .. !!

    ReplyDelete
  2. ಹಿರಿಯರನ್ನು ಅತಿ ಗೌರವಾದರ ಮಾಡುವ ನಿಮ್ಮ ಮನಸ್ಸು ಮತ್ತು ನಡೆಗೆ ನಮೋ ನಮಃ ಶ್ರೀಮನ್... ದೇವರು ನಿಮ್ಮೆಲ್ಲ ಹಿತವರಿಗೆ ಆನಂದ ಆರೋಗ್ಯ ಸಮೃಧ್ದಿ ನೀಡಲಿ.

    ReplyDelete
  3. ನಿಮ್ಮ ಕುಟುಂಬದವರ ಬಗ್ಗೆ ಕೇಳಿದಾಗ ಖುಷಿಯಾಗುತ್ತೆ... ಒಬ್ಬೊಬ್ಬರ ಏಳಿಗೆಗೆ ಎಷ್ಟು ಸಂತಸ ಪಡುತ್ತೀರಿ :)...... ಹೊಸ ಮನೆಯ ಶುಭಾಶಯಗಳು... ಪ್ರತಿ ಕೋಣೆಯು ಪ್ರೀತಿಯ ತವರಾಗಲಿ, ಪ್ರತಿ ಮೂಲೆಯಲ್ಲೂ ನಗೆಯ ಕಾಣಿಕೆ ಸಿಗಲಿ,,, :)

    ReplyDelete
  4. ಶ್ರೀಕಾಂತ ನಿನ್ನ ಬರವಣಿಗೆಯನ್ನು ಓದುವಾಗ, ಒಳ್ಳೆ ಎದುರು ಕೂತು ಮಾತನಾಡಿದಂತೆ ಭಾಸವಾಯಿತು. ನಿನ್ನ ಈ ಭಾವನಾ ಲಹರಿಯಲ್ಲಿ ನಾನೂ ಕೂಡ ಕೆಲ ಕ್ಷಣ ಮೈಮರೆತುಬಿಟ್ಟೆ. ನಿನ್ನ ಅಭಿಮಾನ, ನಿನ್ನ ವಿಶಾಲ ಮನಸ್ಸು ಹೀಗೆ ಇರಲಿ, ನಿನ್ನ ಬಿಚ್ಚು ಮನಸ್ಸಿನ ಹೃದಯಸ್ಪರ್ಶಿ ಮಾತುಗಳಿಗೆ ಹೋಲಿಕೆ ಮಾಡಲಾರೆ.

    ReplyDelete
  5. ಹಿರಿಯರ ಬಗ್ಗೆ ತಾವು ತೋರುವ ಆಧರ ಮತ್ತು ಎಲ್ಲರ ಏಳಿಗೆಯನ್ನು ಖುಷಿಯಿಂದ ನೋಡುವ ತಮ್ಮ ಮುಕ್ತ ಮನಸ್ಸು ನಮಗೆಲ್ಲ ಮಾದರಿ.

    ಶುಭ ಸಮಾರಂಭದ ಉತ್ತಮ ಬರವಣಿಗೆ.

    ReplyDelete
  6. ಶ್ರೀಕಾಂತಣ್ಣಾ,
    ಹೊಸ ಮನೆಯ ಪ್ರೀತಿಯ ಮನಗಳಿಗೆ ಪ್ರೀತಿ ತುಂಬಿದ ಶುಭಾಷಯಗಳು...
    ಅದೆಷ್ಟು ಚಂದವಲ್ವಾ ದೊಡ್ದ ಮನೆಯ ಪ್ರೀತಿಯಲ್ಲಿ ಸಿಗೋ ದೊಡ್ಡಪಾಲು..ಇಡೀ ಕುಟಂಬ ಅದ್ಯಾವುದೋ ಹಳೆಯ ನೋವಿನ ಭಾವವನ್ನ ಅಂಗಳದಲ್ಲಿ ಬಿಚ್ಚಿಟ್ಟು ಕೂತು ಬೆಳದಿಂಗಳ ಊಟ ಮಾಡೋದು..
    ನೋವ ಹರವೋವಾಗಲೂ ಅಲ್ಲಿ ನಲಿವಿನ ಕೇಕೆ...ಸಾಧನೆಯ ಹಾದಿಯಲ್ಲಿ ಹಿಂತಿರುಗಿ ನೋಡಿದಾಗ ಸಿಕ್ಕಿರೋ ಸಾರ್ಥಕ್ಯದ ಕಣ್ಣೀರ ಹನಿ.
    ಅಕ್ಕ ಅಂದರೆ ಇಷ್ಟ,ಅಕ್ಕನ ಸಾಧನೆಗಳು ನಿಜವಾದ ಸ್ಪೂರ್ತಿ ಅನ್ನೋ ನಿಮಗೊಂದು ನಮನ.
    ಹೀಗೊಂದು ಸಾರ್ಥಕ್ಯ ಕ್ಷಣವನ್ನ ಮಿಸ್ ಮಾಡಿಕೊಂಡೆ ಅನಿಸಿಬಿಡ್ತು...
    ಭಾವ ಎದೆಯೊಳಗೆ ಜೋಪಾನ ಭಾವೂಕ ಹನಿಗಳ ಜೊತೆ.

    ReplyDelete
  7. ಶ್ರೀ...
    ಅಂದು ಅಕ್ಕನವರ ಸಂಭ್ರಮದ ಕಾರ್ಯಕ್ರಮಕ್ಕೆ ನಾವೂ ಬಂದಿದ್ದೆವು...
    ನಿಮ್ಮ ಮನೆಯವರ ಒಡನಾಟ.. ಬಾಂಧವ್ಯ ತುಂಬಾ ಖುಷಿ ಕೊಟ್ಟಿತು...

    ಅಕ್ಕ.. ಅಮ್ಮ.. ವಿಜಯ್ ಎಲ್ಲರನ್ನೂ ನೋಡಿ ತುಂಬಾ ಖುಷಿ ಆಯ್ತು...

    ನಿಮ್ಮ ಮಮತೆಯ ಸವಿ ನಮಗೂ ಉಣಿಸಿದ್ದಕ್ಕೆ ಪ್ರೀತಿಯ ನಮನಗಳು...

    ReplyDelete
  8. Good one ... congratulations... !! and ur writing is tremendous :)

    ReplyDelete
  9. Congratulations to Akka and you :)

    ReplyDelete
  10. ಅಕ್ಕನ ಪರಿಶ್ರಮ... ತಮ್ಮನ ಹೆಮ್ಮೆ...
    ಅಭಿನಂದನೆಗಳು.... :)

    ReplyDelete