Wednesday, January 22, 2020

ನರಕದ ಪಾಠ!!!

ಚಿತ್ರಗುಪ್ತ.. ಸೋತಿದ್ದ.. ಲೆಕ್ಕ ಪರಿಶೋಧಕ ಅಧಿಕಾರಿಗಳು ನರಕದಲ್ಲಿ ಚಿತ್ರಗುಪ್ತನನ್ನು ಚೆನ್ನಾಗಿ ರುಬ್ಬಿದ್ದರು.. ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಸಮರ್ಪಕವಾದ ಉತ್ತರ ನಿರೀಕ್ಷಿಸುತ್ತಿದ್ದ ಅಧಿಕಾರಿಗಳು ಯಮರಾಜನ ಬಳಿ ಅಪ್ಪಣೆ ಪಡೆದು.. ಚಿತ್ರಗುಪ್ತನನ್ನು ನರಕದಲ್ಲೆಲ್ಲ ಓಡಾಡಿಸಿ ಪ್ರತಿಯೊಂದಕ್ಕೂ ಉತ್ತರ ಕೇಳಿ ಕೇಳಿ ಬರೆದುಕೊಳ್ಳುತ್ತಿದ್ದರು..

ಪಾಪಿಗಳ ಒಳಹರಿವು ಹೆಚ್ಚಾಗಿದ್ದರಿಂದ ಮತ್ತು ಶಿಕ್ಷಾವಧಿ ದೀರ್ಘವಾಗಿದ್ದರಿಂದ ನರಕದೊಳಗೆ ಬಂದವರು ಹೊರಹೋಗುವುದು ತಡವಾಗುತ್ತಿತ್ತು ..ಆದರೆ ಒಳ ಹರಿವು ಹೆಚ್ಚಾಗಿದ್ದರಿಂದ ಜನಸಂಖ್ಖ್ಯೆ ಹೆಚ್ಚಾಗಿ.. ನರಕದ ಬೀದಿ ಬೀದಿಗಳಲ್ಲಿ ಜನದಟ್ಟಣೆ ಹೆಚ್ಚಾಗಿ.. ಯಮರಾಜನ ಕೋಣಕ್ಕೆ ಓಡಾಡಲು ಜಾಗವಿರದೆ.. ಅದರ ತೂಕ ಹೆಚ್ಚಾಗಿತ್ತು.. ಯಮರಾಜನನ್ನು ಅನತಿ ದೂರ ಹೊತ್ತೊಯ್ಯುವ ಹೊತ್ತಿಗೆ ಏದುಸಿರು ಬಿಡುತ್ತಾ ನೀರಿಗೆ ಹಂಬಲಿಸುತ್ತಿತ್ತು.. ಇದನ್ನು ಕಂಡಿದ್ದ ಯಮರಾಜ.. ಕೋಣಕ್ಕೆ ಸ್ವಲ್ಪ ಬಿಡುವುಕೊಟ್ಟು ಪ್ರತಿದಿನ ನರಕ ಲೋಕದಲ್ಲಿ ತಾವೇ ಓಡಾಡಲು ಶುರು ಮಾಡಿದ್ದರು.. ಆಗ ಕಂಡಿದ್ದು ಜನದಟ್ಟಣೆ. ಎಲ್ಲೆಲ್ಲೂ ಜನ.. ಎಲ್ಲೆಲ್ಲೂಆರ್ತನಾದ .. ಚೀರಾಟ.. ಕೂಗಾಟ... ಆಗ ಅನಿಸಿದ್ದು.. ಅರೆ ನರಕದ ಲೆಕ್ಕದ ಪುಸ್ತಕ ಪರೀಕ್ಷೆ ಮಾಡಿ ಸಂವತ್ಸರಗಳೇ ಆಗಿದೆ.. ಸರಿ ಈ ನೆಪದಲ್ಲಿ ಅಧಿಕಾರಿಗಳು ಪರೀಶೀಲನೆ ಮಾಡಿ.. ಈ ಜನದಟ್ಟಣೆಯ ಬಗ್ಗೆ ನಿಖರವಾದ ಕಾರಣ.. ಅದನ್ನು ಸರಿ ಪಡಿಸುವ ಮಾರ್ಗ ತಿಳಿಸಬಹುದು ಎಂದು ಅಂದುಕೊಂಡು.. ಬ್ರಹ್ಮನಿಗೆ ಅರ್ಜಿ ಹಾಕಿದಾಗ.. ಅದು ಲೆಕ್ಕ ಪತ್ರದ ಅಧಿಕಾರಿ ಕುಬೇರನ ಬಳಿ ಹೋಗಿ.. ಕಡೆಗೆ ಶಿವನ ಅನುಮತಿ ಪಡೆದು.. ಅಧಿಕಾರಿಗಳನ್ನು ಭೂಮಿಯಿಂದ ಬರಲು ಹೇಳಿದ್ದರು..

ಚಿತ್ರಗುಪ್ತನನ್ನು ಕರೆದು.. "ನೋಡ್ರಿ.. ನಮ್ಮ ಲೋಕದ ಪರಿಶೋಧನೆ ಆಗಬೇಕು.. ಇಬ್ಬರು ಅಧಿಕಾರಿಗಳು ಬರುತ್ತಾರೆ.. ನಮ್ಮ ಲೆಕ್ಕದ ಪುಸ್ತಕ.. ನಮ್ಮ ಉಗ್ರಾಣ.. ನಮ್ಮ ನರಕಲೋಕ ಹೀಗೆ ಎಲ್ಲವನ್ನೂ ತೋರಿಸಿ.. ಅವರು ಕೇಳಿದ ಪ್ರಶ್ನೆಗಳಿಗೆ ಸಮಪರ್ಕವಾದ ಉತ್ತರ ಕೊಡಿ.. ಇದನ್ನು ನೋಡಿ ಅವರು ತಿಳಿಸುವ ಮಾರ್ಗೋಪಾಯಗಳನ್ನು ಅಳವಡಿಸಿಕೊಳ್ಳೋಣ.. ಶತಮಾನಗಳಿಂದ ನಮ್ಮ ರೀತಿ ರಿವಾಜು ಬದಲಾಗೇ ಇಲ್ಲ.. ಅದನ್ನು ನಾವು ಬದಲಿಸಿಕೊಳ್ಳೋಣ.. ಅದೇನೋ ಐ ಎಸ್ ಓ ಅಂತೆಲ್ಲ ಹೇಳುತ್ತಾರಲ್ಲ.. ಅದನ್ನು ಮಾಡಿಸಿಕೊಳ್ಳೋಣ.. ಸರಿ ನಾ.   "

"ಆಗಲಿ ಯಮರಾಜರೇ . ಮಾಡೋಣ." ಅದರ ಆಳ ಅಗಲದ ಅರಿವಿಲ್ಲದೆ ಒಪ್ಪಿಕೊಂಡಿದ್ದ ಚಿತ್ರಗುಪ್ತರು ಈಗ ಬೆವರು ಸುರಿಸುತ್ತಿದ್ದರು..

ಎರಡು ದಿನದ ಪರಿಶೋಧನೆ ಮುಗಿಸಿ.. ಸಭೆ ಸೇರಿಸಿ.. ಯಮರಾಜರ ಮುಂದೆ ವಿವರ ಸಲ್ಲಿಸುತ್ತೇವೆ ಎಂದು ಹೇಳಿ ಕಳಿಸಿದ್ದರು..

ಚಿತ್ರಗುಪ್ತರು ಬೆವರು ಒರೆಸಿಕೊಳ್ಳುತ್ತಾ.. "ಯಮರಾಜರೇ.. ಅಧಿಕಾರಿಗಳ ಲೆಕ್ಕ ಪರಿಶೋಧನೆ ಮುಗಿದಿದೆಯಂತೆ.. ಅವರ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟೆ.. ಆದರೆ ಉಗ್ರಾಣದ ಬಗೆಗಿನ ಕೆಲವು  ಪ್ರಶ್ನೆಗಳಿಗೆ ನಾ ಉತ್ತರ ಹೇಳಲಾಗಿಲ್ಲ.. ಅದನ್ನು ನಿಮ್ಮ ಮುಂದೆಯೇ ಸಭೆಯಲ್ಲಿ ಬಗೆಹರಿಸಬಹುದು ಎಂದು ಹೇಳಿದೆ"

"ಶಭಾಷ್ ಚಿತ್ರಗುಪ್ತರೇ.. ಬಹಳ ಒಳ್ಳೆಯ ಕೆಲಸ ಮಾಡಿದ್ದೀರಿ.. ನಿಮಗೆ ಮುಂದಿನ ಸಾಲಿನ ವೇತನ ಮೌಲ್ಯಮಾಪನದಲ್ಲಿ ಒಳ್ಳೆಯ ಅಂಕಗಳನ್ನು ಕೊಡುತ್ತೇನೆ.. ಶುಭವಾಗಲಿ.. ಆಗಲಿ ಅವರಿಗೆ ಬರಲು ಹೇಳಿ"

ಚಿತ್ರಗುಪ್ತರ ಎರಡು ಚಪ್ಪಾಳೆಗೆ.. ಆ ಅಧಿಕಾರಿಗಳು.. ಸಭೆಗೆ ಬಂದು.. ತಮಗೆ ನಿಗದಿಯಾಗಿದ್ದ ಆಸನದಲ್ಲಿ ಕೂತು... ತಮ್ಮ ವಿವರಗಳನ್ನೆಲ್ಲ ಓದತೊಡಗಿದರು.. ..

ಯಮರಾಜರು.. "ಅಧಿಕಾರಿಗಳೇ.. ನಿಮ್ಮ ಬಗ್ಗೆ ನಮ್ಮ ಚಿತ್ರಗುಪ್ತರು ಎಲ್ಲ ಹೇಳಿದ್ದಾರೆ.. ಇಲ್ಲಿ ಏನು ಸರಿಯಿದೆ ಎನ್ನುವುದು ಬೇಡ..ನಿಮ್ಮ ಕಾರ್ಯ ವೈಖರಿಯ ಬಗ್ಗೆ ನಮಗೆ ನಂಬಿಕೆಯಿದೆ .. ನಮಗೆ ಬೇಕಿರುವುದು ಯಾವ ವಿಚಾರವಾಗಿ ನಾವು ಮುತುವರ್ಜಿವಹಿಸಬೇಕು.. ಯಾವ ಯಾವ ರೀತಿ- ರಿವಾಜುಗಳನ್ನು ಉತ್ತಮ ಪಡಿಸಬಹುದು ಅದನ್ನು ಹೇಳಿ.. ಮಿಕ್ಕ ವಿವರಗಳನ್ನು ನೀವು ನಮಗೆ ಒಪ್ಪಿಸಿ.. ಅದನ್ನು ನಾ ಪರಿಶೀಲಿಸುತ್ತೇವೆ.. ನಿಮಗೂ ಹೊತ್ತಾಗುತ್ತದೆ ಅಲ್ಲವೇ.. "

ಯಮರಾಜರ ಈ ಮಾತು ಚಿತ್ರಗುಪ್ತನ ಕಾಲುಗಳಲ್ಲಿ ನಡುಕ ಹುಟ್ಟಿಸಿತು.. ಜೊತೆಯಲ್ಲಿ ಅಧಿಕಾರಿಗಳ ಮೊಗದಲ್ಲಿ ಸಮಾಧಾನ ತಂದಿತು..

"ರಾಜರೇ.. ನಿಮ್ಮ ನರಕಲೋಕ ಉತ್ತಮ ಸ್ಥಿತಿಯಲ್ಲಿ ಇರುವಂತೆ ನಿಮ್ಮ ಸಿಬ್ಬಂಧಿ ನೋಡಿಕೊಂಡಿದ್ದಾರೆ.. ಚಿತ್ರಗುಪ್ತರ ಕಾರ್ಯ ವೈಖರಿ,  ಅವರ ಜ್ಞಾನ, ಅವರ ಆಡಳಿತ ಎಲ್ಲವೂ ಸೊಗಸಾಗಿದೆ.. ಎರಡು ಮಾತಿಲ್ಲ.. ಎಲ್ಲೂ ಯಾವ ತಪ್ಪು ಕಾಣಿಸುತ್ತಿಲ್ಲ.. ದಟ್ಟಣೆ ಜಾಸ್ತಿಯಿದೆ.. ಅದು ಇರಲಿ ಬಿಡಿ.. ತಪ್ಪಿತಸ್ಥರ ವಿಚಾರಣೆ.. ಶಿಕ್ಷೆ.. ಅದರ ಅವಧಿ ಇವುಗಳು ಅದಕ್ಕೆ ಕಾರಣ.. ನಮಗೆ ಅರ್ಥವಾಗುತ್ತೆ.. ಆದರೆ ನಮಗೆ ಬೇಕಿರುವ ವಿವರ.. ಚಿತ್ರಗುಪ್ತರು ನನ್ನ ಬಳಿ ಇಲ್ಲ ಅಂದಿದ್ದಕ್ಕೆ ನಿಮ್ಮ ಮುಂದೆ ಈ ಚರ್ಚೆ.. "

"ಆಗಲಿ ಹೇಳಿ"

"ಉಗ್ರಾಣದಲ್ಲಿ ಎಣ್ಣೆಯ ಬಳಕೆ ಹೆಚ್ಚಾಗುತ್ತಿದೆ.. ಎಲ್ಲಿ ನೋಡಿದರೂ .. ಎಣ್ಣೆಯ ನೆಲ.. ಬರಿ ಎಣ್ಣೆಯ ಕಮಟು ವಾಸನೆ.. ಐದು ವರ್ಷಗಳ ಕರಪತ್ರಗಳಿಗೆ ಹೋಲಿಕೆ ಮಾಡಿ ನೋಡಿದರೆ.. ಇತ್ತೀಚಿನ ವರ್ಷಗಳಲ್ಲಿ ಎಣ್ಣೆಯ ಬಳಕೆ ಸಿಕ್ಕಾಪಟ್ಟೆ ಹೆಚ್ಚಾಗಿದೆ.. ಜೊತೆಯಲ್ಲಿ ಎಣ್ಣೆಯ ದಾಸ್ತಾನು ಕೂಡ ಅತಿ ಹೆಚ್ಚಾಗಿದೆ.. ಕತ್ತಿ, ಭರ್ಜಿ, ಶೂಲ, ಕತ್ತರಿ, ಗರಗಸ ಇನ್ನೂ ಅನೇಕ ಶಸ್ತ್ರಗಳು ತುಕ್ಕು ಹಿಡಿದಿವೆ.. ಅದರ ಉಪಯೋಗ ಕ್ಷೀಣಿಸಿದೆ.. ಇದಕ್ಕೆ ಉತ್ತರ ಕೇಳಿದರೆ.. ಇವರು ಕೊಡಲಿಲ್ಲ.. " ಎನ್ನುತ್ತಾ ಚಿತ್ರಗುಪ್ತರ ಕಡೆ ಅನುಮಾನದ ದೃಷ್ಟಿ ಬೀರಿದರು..

"ಅಧಿಕಾರಿಗಳೇ" ಎನ್ನುತ್ತಾ ಚಿತ್ರಗುಪ್ತರ ಕಡೆಗೆ ದೃಷ್ಟಿ ಬೀರಿ.. ಕೈಯಿಂದ ಸಮಾಧಾನವಾಗಿರುವಂತೆ ಚಿತ್ರಗುಪ್ತರಿಗೆ ತಿಳಿಸಿ.. "ನೋಡಿ.. ಭೂಲೋಕದಿಂದ ಬರುವ ನರಮಾನವರ ದಟ್ಟಣೆ ಹೆಚ್ಚಾಗುತ್ತಿದೆ.. ಅದು ಅಪಘಾತಗಳಿಂದ, ದ್ವೇಷ ಅಸೂಯೆಗಳಿಂದ, ಅಸ್ತಿ ವಿವಾದ, ಕಳ್ಳತನಗಳಿಂದ, ದುಷ್ಕೃತ್ಯಗಳಿಂದ, ಯುದ್ಧಗಳಿಂದ, ಭಯೋತ್ಪಾದನೆಗಳಿಂದ, ಅನಾರೋಗ್ಯಗಳಿಂದ .. ಹೀಗೆ ನೂರಾರು ಕಾರಣಗಳಿಂದ ಒಳ ಹರಿವು ಹೆಚ್ಚಾಗಿದೆ.. ಆದರೆ ಇಲ್ಲಿ ಮುಖ್ಯವಾಗಿರೋದು ಎಣ್ಣೆಯ ಬಳಕೆ ಮತ್ತು ಅದರ ದಾಸ್ತಾನು. ಇದಕ್ಕೆ ಮೊದಲ ಕಾರಣವೇನೆಂದರೆ.. ಇತ್ತೀಚಿನ ಸಿನೆಮಾಗಳು.. "
ಅಧಿಕಾರಿಗಳಿಗೆ ತಲೆ ಗಿರ್ ಅಂತು "ರಾಜರೇ.. ಎಣ್ಣೆ ಓಕೆ ಸಿನಿಮಾ ಯಾಕೆ" 

"ಹೇಳುತ್ತೀನಿ ಇರಿ.. ನೋಡಿ ಉಗ್ರಾಣದಲ್ಲಿ ಶಸ್ತ್ರಗಳ ಉಪಯೋಗ ಕಡಿಮೆ ಎಂದಿರಿ.. ಹೌದು..ಮೊದಲು ಕತ್ತಿ ,ಗುರಾಣಿಗಳು, ಚಾಕು, ಭರ್ಜಿಗಳು ಈಟಿಗಳು ಪೌರಾಣಿಕ ಸಿನೆಮಾಗಳಲ್ಲಿ ಮತ್ತು ಐತಿಹಾಸಿಕ ಸಿನೆಮಾಗಳಲ್ಲಿ ಉಪಯೋಗವಾಗುತ್ತಿದ್ದವು.. ಜನರು ಕುತೂಹಲದಿಂದ ನೋಡುತ್ತಿದ್ದರು.. ಇಲ್ಲಿಗೆ ಬಂದಾಗಲೂ ಅವರ ಅಪರಾಧಕ್ಕೆ ತಕ್ಕ ಶಿಕ್ಷೆ ಕೊಡುವಾಗ.. ಶಸ್ತ್ರಗಳ ಉಪಯೋಗವಾಗುತ್ತಿತ್ತು.. ಆದರೆ ಇತ್ತೀಚಿಗೆ ಬರಿ ಲಾಂಗ್, ಕತ್ತಿ, ಚಾಕು, ಇವೆಲ್ಲಾ ಸಿನೆಮಾಗಳಲ್ಲಿ ಯತೇಚ್ಛವಾಗಿ
ಉಪಯೋಗವಾಗುತ್ತಿದೆ.. ಜನಕ್ಕೆ ಅವುಗಳನ್ನು ನೋಡಿ ನೋಡಿ ಬೇಸತ್ತಿದ್ದಾರೆ.. ಸಿನಿಮಾ ಸಾಕು ಅಂತ ಬೀದಿಯಲ್ಲಿ ಓಡಾಡುತ್ತಿದ್ದಾರೆ ಅಲ್ಲೂ ಈ ಪುಡಿ ರೌಡಿಗಳು ಇದನ್ನೇ ಉಪಯೋಗಿಸುತ್ತಾರೆ..ಮಾಧ್ಯಮಗಳಲ್ಲಿಯೂ ಇದರದ್ದೇ ಮಾತುಕತೆ.. ಜನರು ಮನೆಯಲ್ಲಿ ತರಕಾರಿ ಕತ್ತರಿಸಲು ಕೂಡ ಬೇಸರ ಮಾಡಿಕೊಳ್ಳುವ ಹಂತಕ್ಕೆ ತಲುಪಿದ್ದಾರೆ.. ಇನ್ನೂ ಉಳಿದ ಶಿಕ್ಷೆ ಅಂದರೆ ಕಾದ ಎಣ್ಣೆಯಲ್ಲಿ ಮುಳುಗೇಳಿಸುವುದು.. ಜನರಿಗೆ ಈ ಬೋಂಡಾ, ಬಜ್ಜಿ, ಗೋಬಿ, ಅದು ಇದು ಅಂತ ಕರಿದ ಪದಾರ್ಥಗಳ ಮೇಲೆ ವಿಪರೀತ ವ್ಯಾಮೋಹ.. ಅದೆಷ್ಟೇ ಹೊಟ್ಟೆ ತುಂಬಿದ್ದರೂ .. ಬೋಂಡಾ ಬಜ್ಜಿ ಅಂದರೆ ಬಾಯಲ್ಲಿ ನೀರು.. ಹಾಗಾಗಿ.. ಈ ಬಾಣಲೆಗಳನ್ನು ನೋಡಿದ ತಕ್ಷಣ ಅವರೇ ಭಟರ ಕೈಗಳನ್ನು ಬಲವಂತವಾಗಿ ಬಿಡಿಸಿಕೊಂಡು ಎಣ್ಣೆ ಬಾಣಲೆಯೊಳಗೆ ಧುಮುಕಿ ಮತ್ತೆ ಸಾಲಿಗೆ ಬಂದು ನಿಲ್ಲುತ್ತವೆ.. ಹಾಗಾಗಿ ಬಾಣಲಿಯಲ್ಲಿ ಬಿದ್ದವರೇ ಮತ್ತೆ ಮತ್ತೆ ಬಂದು ಬೀಳುತ್ತಿರುವುದರಿಂದ ಎಣ್ಣೆ ಎಲ್ಲಾ ಕಡೆ ಚೆಲ್ಲುತ್ತಿದೆ.. ಜೊತೆಯಲ್ಲಿ ಎಣ್ಣೆಯು ಅಧಿಕವಾಗಿ ಉಪಯೋಗವಾಗುತ್ತಿರುವುದರಿಂದ   ಅದರ ದಾಸ್ತಾನು ತುಸು ಹೆಚ್ಚಾಗಿಯೇ ಇದೆ . ಒಂದು ಸಾರಿ ಬಾಣಲಿಯಲ್ಲಿ ಬಿದ್ದವರು ಸಮಾಧಾನವಾಗದೆ ಮತ್ತೆ ಮತ್ತೆ ಬಾಣಲಿಯಲ್ಲಿ ಮಜ್ಜನ ಎಂಬ ರೀತಿಯಲ್ಲಿ ಬೀಳುತ್ತಲೇ ಇರುತ್ತಾರೆ ಮತ್ತೆ ಅಲ್ಲಿಂದ ಮೇಲೆತ್ತಲು ಪ್ರಯತ್ನ ಪಟ್ಟರು ಮತ್ತೆ ಮತ್ತೆ ಜಾರಿಕೊಂಡು ಅಲ್ಲಿಗೆ ಹೋಗಿ ಬೀಳುತ್ತಾರೆ.. ಹಾಗಾಗಿ ಜನರ ದಟ್ಟಣೆ ಹೆಚ್ಚಾಗಲು ಕಾರಣ. "

ಅಧಿಕಾರಿಗಳ ಬಾಯಿ ಕಟ್ಟಿಹೋಗಿತ್ತು.. ತರ್ಕಬದ್ಧವಾದ ಉತ್ತರ ಸಿಕ್ಕಿದ್ದರಿಂದ ಅವರಿಗೆ ಬದಲಾವಣೆಗೆ ದಾರಿ ಕೊಡಲು ಆಗುತ್ತಿರಲಿಲ್ಲ.. ಹೇಗೆ ಯೋಚಿಸಿದರೂ ಯಮರಾಜರ ಮತ್ತು ಚಿತ್ರಗುಪ್ತರ ಆಡಳಿತ ವೈಖರಿಯಲ್ಲಿ ಲೋಪವಿರಲಿಲ್ಲ... ಇದಕ್ಕೆ ಏನು ಹೇಳುವುದು ಎಂದು ಯೋಚಿಸುತ್ತಿರುವಾಗ..
"ಅಧಿಕಾರಿಗಳೇ.. ಇದಕ್ಕೆ ನೀವೇ ಏನಾದರೂ ಪರಿಹಾರ ಸೂಚಿಸಿ"

ತಲೆ ಕೆರೆದುಕೊಂಡ ಅಧಿಕಾರಿಗಳು.. "ಯಮರಾಜ ಪ್ರಭುಗಳೇ.. ನಮಗೆ ಹೊಳೆಯುತ್ತಿಲ್ಲ.. ನೀವೇ ಇದಕ್ಕೆ ಒಂದು ಪರಿಹಾರ ಹೇಳಿ.. ನಾವು ಭೂಲೋಕದಲ್ಲಿ ಚರ್ಚಿಸಿ ಇದಕ್ಕೆ ಒಂದು ಮಾರ್ಗ ಕಂಡು ಹಿಡಿಯುತ್ತೇವೆ.. "

ಈ ವಿಚಾರಗಳಲ್ಲಿ ಚಿತ್ರಗುಪ್ತನ ತಲೆ ಮೊಲದಂತೆ ಚುರುಕು.. ಯಮರಾಜರ ಹತ್ತಿರ ಹೋಗಿ.. ಕಿವಿಯಲ್ಲಿ ಏನೋ ಉಸುರಿದರು .. ಯಮರಾಜರ ಮೊಗ ದೀಪ ಹೊತ್ತಿಸಿದ ಗುಡಿಯಂತೆ ಆಯ್ತು.. "ಭಲಾ ಚಿತ್ರಗುಪ್ತರೇ.. ಭಲಾ.. ನೀವು ನಮ್ಮ ಜೊತೆಯಲ್ಲಿ ಇರುವುದೇ ನಮ್ಮ ಭಾಗ್ಯ.. ಆಯ್ತು. ಅಧಿಕಾರಿಗಳೇ.. ಇಲ್ಲಿ ಕೇಳಿ.. " ಎಂದು ಗಂಟಲು ಸರಿ ಮಾಡಿಕೊಂಡು ಕಣ್ಣುಗಳಲ್ಲಿಯೇ ಚಿತ್ರಗುಪ್ತರನ್ನು ಅಭಿನಂದಿಸಿ..

"ನೀವು ಭೂಲೋಕಕ್ಕೆ ಹೋದಮೇಲೆ.. ಸಿನಿಮಾ ನಿರ್ದೇಶಕರ ಮಂಡಳಿಗೆ ಹೋಗಿ.. ಚಿತ್ರಗಳನ್ನು ತೆಗೆಯುವ ಮೊದಲು ಕತೆ ಕಾದಂಬರಿಗಳನ್ನು ಓದಿ ಚರ್ಚಿಸಿ, ಉತ್ತಮ ಚಿತ್ರಕತೆ, ಉತ್ತಮ ನಟರ ಕೈಯಲ್ಲಿ ಪಾತ್ರ ಮಾಡಿಸಿ, ಇಂಪಾದ ಸಂಗೀತ, ಉತ್ತಮ ಸಾಹಿತ್ಯ, ಸಂಭಾಷಣೆ ಇದೆಲ್ಲ ಇರುವಂತೆ ನೋಡಿಕೊಳ್ಳಿ, ಹೊಡೆದಾಟ ಅಗತ್ಯ ಇದ್ದರೆ ಮಾತ್ರ ಇರಲಿ, ಸಿನಿಮಾದಲ್ಲಿ ಹೊಡೆದಾಟವಿರಲಿ ತಪ್ಪಿಲ್ಲ.. ಆದರೆ ಹೊಡೆದಾಟದ ಮಧ್ಯೆ ಸಿನಿಮಾ ಇರದಂತೆ ನೋಡಿಕೊಳ್ಳಿ. ನಟರಿಗೆ ಉತ್ತಮ ನಟನಾ ತರಬೇತಿ  ಕೊಡಿಸುವಂತೆ ಹೇಳಿ,, ಹೊಡೆದಾಟದಲ್ಲಿ ಚಾಕು, ಭರ್ಜಿ, ಕತ್ತಿ ಇದೆಲ್ಲ ಬಿಟ್ಟು.. ದೇಹಕ್ಕೆ ಕಸರತ್ತು ನೀಡುವ ಹೊಡೆದಾಟಗಳನ್ನು ಆಯೋಜಿಸಲು ಹೇಳಿ.. ಇದು ಒಂದು ಮಾರ್ಗ."
"ಎರಡನೆಯದು.. ಗೋಬಿ, ಬೋಂಡಾ, ಬಜ್ಜಿ ಇವೆಲ್ಲಾ ನಾಲಿಗೆಗೆ ರುಚಿ ನೀಡುತ್ತವೆ.. ಆದರೆ ಅದರಿಂದ ಹೃದಯದ ಕಾಯಿಲೆ, ರಕ್ತದೊತ್ತಡ ಹೀಗೆ ನೂರೆಂಟು ರೋಗಗಳು ಅಟಕಾಯಿಸಿಕೊಳ್ಳುತ್ತವೆ.. ಚಳಿಗಾಲದಲ್ಲಿ, ಮಳೆಗಾಲದಲ್ಲಿ ಕರಿದ ಪದಾರ್ಥಗಳನ್ನು ತಿನ್ನಬೇಕು ಅದು ಒಳ್ಳೆಯದು ಆದರೆ ವರ್ಷವೆಲ್ಲಾ ಅದನ್ನೇ ತಿನ್ನದಂತೆ ಆರೋಗ್ಯ ವಿಕಾಸ ಯೋಜನನೆಗಳನ್ನು ಚೆನ್ನಾಗಿ ವಿವರಿಸಿ.."
"ಇವೆರಡನ್ನು ನೀವು ಚೆನ್ನಾಗಿ ಪಾಲಿಸುವಂತೆ ನೋಡಿಕೊಂಡರೆ.. ನಮ್ಮ ನರಕ ಲೋಕ ಮೊದಲಿನಂತೆ ಆಗುತ್ತದೆ.. ಏನಂತೀರಾ"

ಸುಲಿದ ಬಾಳೆಹಣ್ಣಿನಂತೆ ಪರಿಹಾರ ಕೊಟ್ಟ ಯಮಧರ್ಮರಾಜರಿಗೆ ಮತ್ತು ಇದರ ರೂವಾರಿ ಚಿತ್ರಗುಪ್ತರಿಗೆ ಧನ್ಯವಾದಗಳು ಎಂದು ತಮ್ಮ ವಿವರದ ಕಡತಗಳನ್ನು ಯಮರಾಜರಿಗೆ ಒಪ್ಪಿಸಿ ಭೂಲೋಕದೆಡೆಗೆ ಪಯಣಬೆಳೆಸಿದರು..

ತಲೆಯಲ್ಲಿನ ಯೋಚನೆಗಳು ಯೋಜನೆಗಳಾಗಿ ಕಾರ್ಯರೂಪಕ್ಕೆ ಬರುವ ಹಾದಿಯಲ್ಲಿ ಹೆಜ್ಜೆ ಹಾಕತೊಡಗಿದರು.. !!!!

3 comments:

  1. ಅಹಾ! ಶ್ರೀಕಾಂತರೆ,ನೀವು ಅಂದರೆ ಚಿತ್ರಗುಪ್ತರು ಸೂಚಿಸಿದ ಉಪಾಯಗಳು ಬಹಳ ಚೆನ್ನಾಗಿವೆ. ಇವನ್ನು ಪಾಲಿಸಿದರೆ ನರಕ,ನಾಕ ಹಾಗು ಭೂಲೋಕ ಈ ಮೂರೂ ಲೋಕಗಳಲ್ಲಿ ಸಮಸ್ಯೆಗಳು ಬಗೆ ಹರಿಯುವದರಲ್ಲಿ ಸಂಶಯವಿಲ್ಲ. ಆದುದರಿಂದ ಈ ಮೂರೂ ಲೋಕಗಳಿಗೆ ಕಾಲಕಾಲಕ್ಕೆ ಸಮಂಜಸವಾದ ಸಲಹೆ ನೀಡಲು ನಿಮ್ಮನ್ನೇ consultant ಎಂದು ನಿಯಮಿಸಿಕೊಳ್ಳುವುದು ಉತ್ತಮ ಎಂದು ನನಗೆ ಅನಿಸುತ್ತದೆ. ಅಲ್ಲದೆ ಈ ಲೋಕಗಳಲ್ಲಿ ದೊರೆಯುವ ಅನುಭವಗಳಿಂದ, ನೀವು ನಮಗೆ ಒಳ್ಳೊಳ್ಳೆಯ ವಿನೋದಬರಹಗಳನ್ನು ನೀಡಿ, ನಗಿಸುತ್ತ ಇರುವಿರಿ ಎನ್ನುವ ನಂಬುಗೆಯೂ ನನಗಿದೆ!

    ReplyDelete
  2. Abba ellinda ellige Connection..so creative.. How can you think such concepts...beautiful!

    ReplyDelete
  3. ಶ್ರೀ ಅಣ್ಣಾ ಸೂಪರ್.. ಅದು ಹೇಂಗೆ ಈ ಥರಾದ್ದು ಹೊಳೆಯುತ್ತದೆ ನಿಮಗೆ..

    ReplyDelete