Friday, May 31, 2019

ಸಾರ್ಥಕತೆ ಎನ್ನುವುದು ಹೇಗೆ .....!

ಸಾರ್ಥಕತೆ ಎನ್ನುವುದು ಹೇಗೆ ...ಅದರ ವಿಸ್ತಾರವೇನು.. ಅದರ  ಅಗತ್ಯತೆ ಏನು.. ಇದಕ್ಕೆ ಉತ್ತರವನ್ನು ಕಂಡುಹಿಡಿದವರಿಲ್ಲ.. ಒಬ್ಬರದು ಒಂದೊಂದು ವಿವರಣೆ... ಎಲ್ಲವೂ ಕಣ್ಣು ಕಾಣದವರು ಆನೆಯನ್ನು ಮುಟ್ಟಿ ನೋಡಿ ವಿವರಿಸಿದ ಹಾಗೆ.. ಒಂದೇ ಆದರೂ ಅನುಭವ ವಿಭಿನ್ನ ..

ತುಂಬು ಸಂಸಾರವನ್ನು ಎತ್ತಿ ಹಿಡಿದು... ಹತ್ತು ಮಕ್ಕಳಿಗೆ ಭವಿಷ್ಯ ನೀಡಿದ ಒಂದು ಹೆಂಗಸಿನ ಸಾರ್ಥಕ ಬದುಕಿನ ಒಂದು  ಕ್ಷಣಗಳ ಬಗ್ಗೆ ನಾ ಕಣ್ಣಾರೆ ಕಂಡ ಬಗ್ಗೆ ಒಂದು ಪುಟ್ಟ ಲೇಖನ... ಉತ್ಪ್ರೇಕ್ಷೆಯಿಲ್ಲ... ಅತೀಂದ್ರಿಯ ಶಕ್ತಿಯೂ ಅಲ್ಲ.. ಆದರೆ ಅದಕ್ಕಿಂತ ಮೇಲೆ ಇರುವ ಶಕ್ತಿ ನೆಡೆಸಿದ ಒಂದು ಘಟನೆ.. 

ನನ್ನ ಮನದನ್ನೆ ಸವಿತಾಳ ಅಜ್ಜಿ .. ಸಹಸ್ರಚಂದ್ರ ದರ್ಶನದ ಸಂಭ್ರಮ.. ಹತ್ತು ಮಕ್ಕಳು.. ಸೊಸೆಯಂದಿರು.. ಮೊಮ್ಮಕ್ಕಳು .. ಮರಿ ಮೊಮ್ಮಕ್ಕಳು.. ಬಂಧು ಮಿತ್ರರು.. ಊರಿನ ಹಿರಿ ಕಿರಿಯರು ನೆರೆದಿದ್ದ ಸಂಭ್ರಮ.. 

ಈ ಸಹಸ್ರ ಚಂದ್ರ ದರ್ಶನ ಅಂದರೆ ನಾ ಒಂದು ಕಡೆ ಓದಿದ್ದು. ಜೀವತಾವಧಿ... ಎಂಭತ್ತು ವಸಂತಗಳನ್ನು ಕಂಡಿದ್ದರೇ.. ಸಾವಿರ ಚಂದ್ರ ಅಂದರೆ ಸಾವಿರ ಹುಣ್ಣಿಮೆಯನ್ನು ಕಂಡಿದ್ದಾರೆ ಎಂದು ಶಾಸ್ತ್ರ ಹೇಳುತ್ತದೆ... ಆ ಅವಧಿಯಲ್ಲಿ ಮೂರು ತಲೆಮಾರುಗಳಿಗೆ ಬುನಾದಿ ಹಾಕಿರುತ್ತಾರೆ ಎನ್ನುವುದು ನಂಬಿಕೆ.. ಮಕ್ಕಳು.. ಮೊಮ್ಮಕ್ಕಳು.. ಮರಿ ಮೊಮ್ಮಕ್ಕಳು ಹೀಗೆ ..

ನಾ ಈ ರೀತಿಯ ಆಚರಣೆಯನ್ನು  ಮೂರು ಬಾರಿ ಕಂಡಿದ್ದೇನೆ.. ಒಂದು  ಅಮ್ಮನ ಸೋದರತ್ತೆಯ ಜೋಡಿಯದು.. ಎರಡನೆಯದು ನಾ ಸ್ವಾಮೀಜಿ ಎಂದು ಕರೆಯುವ ನನ್ನ ಮಡದಿಯ ಚಿಕ್ಕಪ್ಪನ ಅಪ್ಪ ಅವರ ಸಂಭ್ರಮ.. ಮೂರನೆಯದು ಸವಿತಾಳ ಅಜ್ಜಿ.. 

ಹಿರಿಕಿರಿಯರು ಕಿಕ್ಕಿರಿದು ಸೇರಿದ್ದರು.. ಅವರ ಮುಂದೆ ಈ ರೀತಿಯ ಸಂಭ್ರಮ ಒಂದು ಕಡೆಯಲ್ಲಿ ಸಂಕೋಚದ ಭಾವ ಮೂಡಿಸಿದರೆ..  ಇನ್ನೊಂದು ಬದಿಯಲ್ಲಿ ಸಾರ್ಥಕ ಬದುಕು ನೆಡೆಸುತ್ತಿರುವ ಅಜ್ಜಿಗೆ ತನ್ನ ಕಣ್ಣ ಮುಂದಿನ ಈ ವೈಭವದ ಸಂಭ್ರಮದ ಸಂತಸ.. 

ಎರಡೂ ಭಾವವನ್ನು ಅವರು ವ್ಯಕ್ತಪಡಿಸುತ್ತಿದ್ದ ರೀತಿಯನ್ನು ನನ್ನ ಕಣ್ಣುಗಳು ನನ್ನ ಮೂರನೇ ಕಣ್ಣಿನ ಮೂಲಕ  ಸೆರೆ ಹಿಡಿಯುತ್ತಿದ್ದವು.. ಅದನ್ನು ನೋಡೋದೇ ಒಂದು ಸಂತಸ ನನಗೆ... ಅವರ ಮುಖಭಾವ ಗಮನಿಸುತ್ತಲೇ ಇದ್ದೆ.. ಅವರ ಕೆಲವು ಕ್ಷಣದ ಮುಖ ಭಾವದಲ್ಲಿ ಏನೋ ಒಂದು ರೀತಿಯ ದುಗುಡ ಕಂಡು ಕಾಣದೆ ಇಣುಕುತಿತ್ತಾದರೂ.. ಸಂಭ್ರಮದ ಛಾಯೆ ಈ ದುಗುಡವನ್ನು ದೂರ ದೂರ ಸರಿಸುತ್ತಿತ್ತು.. 

ಮಂತ್ರೋಕ್ತ ಪೂಜೆ ಪುನಸ್ಕಾರಗಳು ಭರ್ಜರಿಯಾಗಿ ನೆಡೆದಿದ್ದವು.. ಮಂತ್ರೋಕ್ತ ಜಲ.. ಕಲಶದಲ್ಲಿ ಕಾಯುತ್ತಿತ್ತು.. ಇತ್ತೀಚೆಗಷ್ಟೇ ಕಾಶಿ ಯಾತ್ರೆ ಮಾಡಿದ್ದರಿಂದ ಗಂಗಸಮಾರಾಧನೆ ಕೂಡ ನೆಡೆದಿತ್ತು.. ಕಳೆದ ಐದು ವರ್ಷಗಳಲ್ಲಿ ಗಂಗಾನದಿಯನ್ನು ಗಂಗೆಯನ್ನಾಗಿ ಮಾಡಿದ ಕೀರ್ತಿ ಮೋದಿ ಸರ್ಕಾರಕ್ಕೆ ಸಲ್ಲಬೇಕು.. ಆ ಗಂಗಾಜಾಲವನ್ನು ಮಂತ್ರೋಕ್ತ ಸಹಿತ ಆಹ್ವಾನಿಸಿ ರುದ್ರ ಚಮಕಗಳೆಲ್ಲ ಮುಗಿದಿತ್ತು.. ಮಂತ್ರದಿಂದ ಸಿದ್ಧವಾಗಿದ್ದ ಜಲದಿಂದ ಸಹಸ್ರ ಚಂದ್ರ ದರ್ಶನದ ಹೀರೋಯಿನ್ ಅವರಿಗೆ ಜಲಾಭಿಷೇಕ.. (ಇದಕ್ಕೆ ಪರ್ಯಾಯ ಪದ ತಕ್ಷಣಕ್ಕೆ ಹೊಳೆಯುತ್ತಿಲ್ಲ ಹಾಗಾಗಿ ಜಲಾಭಿಷೇಕ ಎನ್ನುವ ಪದವನ್ನು ಉಪಯೋಗಿಸಿದ್ದೇನೆ)... ನೆಡೆಯುವ ಹೊತ್ತು..


ಮನೆಯ ಮಕ್ಕಳಾದಿಯಾಗಿ ಬಂಧು ವರ್ಗವೆಲ್ಲ ಸರತಿಯಲ್ಲಿ ಬಂದು ತಮ್ಮ ಗೌರವ ಸೂಚಿಸಿದ್ದರು... ಬಂದವರೆಲ್ಲ ಈ ಕಳಸದ ಜಲದಿಂದ ಅಭ್ಯಂಜನ ನೆಡೆದಿತ್ತು... ಆಗ ಅವರ ಮುಖಭಾವವನ್ನೇ ಗಮನಿಸುತ್ತಿದ್ದೆ.. ಸಂತಸ.. ದುಃಖ.. ಅಭಿಮಾನ.. ಉತ್ಸಾಹ.. ಎಲ್ಲವೂ ಕಾಣುತಿತ್ತು.. ಮುಖದ ಮೇಲೆ ಹರಿಯುತ್ತಿದ್ದ ಮಂತ್ರಜಲ ಧಾರೆ.. ಅವರ ಮುಖಭಾವವನ್ನು ಕಾಮನಬಿಲ್ಲಿನ ಕಾಂತಿಯಂತೆ  ಬದಲಿಸುತ್ತಲೇ ಇತ್ತು.. 

ನಂತರ ಹೊಸವಸ್ತ್ರವನ್ನು ಉಟ್ಟು.. ಮುಂದಿನ ಕಾರ್ಯಕ್ರಮಕ್ಕೆ ಅಣಿಯಾಗಿದ್ದರು.. ದೇವರಿಗೆ ಪೂಜೆ..ಮಂಗಳಾರತಿ.. ಹೀಗೆ ಕಾರ್ಯಗಳು ನೆಡೆದಿದ್ದವು.. ಅಜ್ಜಿಯ ಮುಖಭಾವದಲ್ಲಿ ಯಾರನ್ನೋ ನಿರೀಕ್ಷೆ ಮಾಡುತ್ತಿರುವ ನೋಟ.. ಸುತ್ತ ಮುತ್ತಲು ತಿರು ತಿರುಗಿ ನೋಡುತ್ತಲೇ ಇದ್ದರು.. ನನ್ನ ಕ್ಯಾಮೆರಾ ಕೂಡ ಕೇಳಿತು ..

"ಏನು ಶ್ರೀ ಅದು ಅಜ್ಜಿ ಯಾರನ್ನು ನಿರೀಕ್ಷೆ ಮಾಡುತ್ತಿದ್ದಾರೆ?".. 

"ಗೊತ್ತಿಲ್ಲ ನಿಕೋನ್ .. ನೋಡೋಣ ಕಾದು ನೋಡೋಣ" ಎಂದು ಹೇಳಿದೆ.. 


ಕೊಂಚ ಗದ್ದಲ.. ಕೊಂಚ ಗಲಿಬಿಲಿ.. ನೋಡಿದರೆ.. ಅಜ್ಜಿ ಮನೆಯ ಕಾಂಪೌಂಡ್ ಮೇಲೆ ಒಂದು ವಾನರ ಬಂದು ಕೂತಿತ್ತು.. ಅಲ್ಲಿದ್ದವರೊಬ್ಬರು ಮಾವಿನಹಣ್ಣು ಕೊಟ್ಟರು.. ಅಚ್ಚುಕಟ್ಟಾಗಿ ಸಿಪ್ಪೆ ಸುಲಿದು ತಿಂದುಹಾಕಿತು .. ಇನ್ನೊಂದು ಮಾವಿನ ಹಣ್ಣು ಅದಕ್ಕೂ ಅದೇ ಗತಿಯಾಯಿತು.. ಬಾಳೆ ಹಣ್ಣು ಕೊಟ್ಟರು.. ತಿಂದಿತು.. ಹಾಗೆ ಮತ್ತೆ ಅಜ್ಜಿಯ ಕಡೆ ಕ್ಯಾಮೆರಾ ತಿರುಗಿಸಿದೆ.. ಸ್ವಲ್ಪ ಹೊತ್ತಿನಲ್ಲಿಯೇ . ಅದೇ ವಾನರ.. ಹೋಮದ ಕುಂಡದ ಹತ್ತಿರ ಬಂದು ಅಲ್ಲಿದ್ದ ಪದಾರ್ಥವನ್ನು ತಿಂದಿತು.. ನಂತರ ಅಜ್ಜಿಯ ಕಾಲು ಬುಡದಲ್ಲಿ ಕೂತಿತು.. ಪಕ್ಕದಲ್ಲಿಯೇ ಕೂತಿದ್ದ ಅಜ್ಜಿಯ ಹಿರಿಯ ಸೊಸೆ ಮತ್ತು ಮಗ.. ಮೆಲ್ಲಗೆ ಅಲ್ಲಿದ ಹಣ್ಣು ಕೊಟ್ಟರು.. ಪುರೋಹಿತರು ನೈವೆದ್ಯ ಮಾಡಬೇಕು ಎಂದರು.. ಸೊಸೆ ಮತ್ತು ಮಗ ಅದಕ್ಕೆ ಸಿದ್ಧವಾಗಬೇಕೆಂದಿದ್ದಾಗ... ವಾನರ ಒಂದು ಲೋಟದಲ್ಲಿದ್ದ ಕಲೆಸಿದ ಮೊಸರನ್ನವನ್ನು ಅಚ್ಚುಕಟ್ಟಾಗಿ ನಾವು ಊಟ ಮಾಡುವಂತೆ ತಿಂದು ಮುಗಿಸಿತು.. ನಂತರ ಹಾಲು.. ಜೇನು ತುಪ್ಪ.. ಎಲ್ಲವನ್ನು ತಿಂದು ಮುಗಿಸಿತು.. ನಂತರ ಪಂಚ ಪಾತ್ರೆಯಲ್ಲಿದ್ದ ನೀರಿನಲ್ಲಿ ಕೈಯನ್ನು ಅದ್ದಿ.. ಕೊಡವಿಕೊಂಡು.. ಮೆಲ್ಲಗೆ ಜಾಗ ಖಾಲಿ ಮಾಡಿತು.. 






ಊರಿನವರ ಪ್ರಕಾರ .. ಮಂಗಗಳು ಬಂದಿದ್ದೆ ಅಥವಾ ಕಾಣಿಸಿಕೊಂಡಿದ್ದೆ ಬಲು ಅಪರೂಪವಂತೆ.. ಒಂದು ರೀತಿಯಲ್ಲಿ ಪವಾಡ ಎನಿಸಿತು.. ವಾನರ ತಿಂದು ಮುಗಿಸಿದ್ದನ್ನೆಲ್ಲ ಫೋಟೋ ತೆಗೆದೇಬಂದು .. ಸುಮಾರು ಹೊತ್ತಾದ ಮೇಲೆ.. ಯಾಕೋ ಅಜ್ಜಿಯ ಮುಖ ನೋಡಿದೆ ..ತಮ್ಮ ಆಶಯ ಈಡೇರಿದ ಭಾವ.. ಅವರು ಯಾರನ್ನು ನಿರೀಕ್ಷಿಸಿದ್ದರೋ ವಾನರ ರೂಪದಲ್ಲಿ ಬಂದು ದರ್ಶನ ನೀಡಿದರು ಎನ್ನುವ ತೃಪ್ತಿ ಭಾವ.. ಅವರ ಮೊಗದಲ್ಲಿತ್ತು.. 

ಆಗಸವನ್ನೊಮ್ಮೆ ನೋಡಿದೆ.. ಅಣ್ಣಾವ್ರ ನಾದಮಯ ಹಾಡಿನ ಒಂದು ಸಾಲು ಮನದಲ್ಲಿ ಹಾಡತೊಡಗಿತು .. 

"ಸುರರು ಬಂದು, ಹರಿಯ ಕಂಡು ಹರುಷದಿ ಭುವಿಯೆ ಸ್ವರ್ಗ ಭುವಿಯೆ ಸ್ವರ್ಗ ಎನುತಿರಲು ನಾದಮಯ ಈ ಲೋಕವೆಲ್ಲಾ ಕೊಳಲಿಂದ ಗೋವಿಂದ ಆನಂದ ತಂದಿರಲು ನಾದಮಯ ಈ ಲೋಕವೆಲ್ಲ ನಾದಮಯ" 

ಅಲ್ಲವೇ.. ತನಗೆ ಬೇಕಾದವರನ್ನು ವಾನರ ರೂಪದಲ್ಲಿ ದರ್ಶನ ಕೊಡಿಸಿದ ಆ ಮಹಾಮಹಿಮನ ಪವಾಡವನ್ನು ಕಂಡು ಅಜ್ಜಿಯು ಸಂತಸ ಪಟ್ಟ ಕ್ಷಣ ಒಂದು ಕಡೆಯಲ್ಲಾದರೆ.. ನಿರ್ಲಿಪ್ತ ಮನಸ್ಸಿನಿಂದ.. ಅಂದುಕೊಂಡ ಕಾರ್ಯ ಆಗಿಯೇ ಆಗುತ್ತದೆ ಎನ್ನುವ ಪವಾಡ ಸಾದೃಶ್ಯ ಕಂಡ ಸಂತಸ ನಮಗೆ 

ಒಂದು ಸಾರ್ಥಕತೆಯನ್ನು ಕಣ್ಣಾರೆ ಕಂಡ ತೃಪ್ತಿ ನಮಗೆ.. 

ಅದರ ಕೆಲವು ಚಿತ್ರಗಳು ನಿಮಗಾಗಿ.. !!!

Wednesday, May 8, 2019

ಕಣ್ಣೀರಲ್ಲ ಶ್ರೀ ಪನ್ನೀರು ಪನ್ನೀರು

ಮಳೆ ಬರುತ್ತದೆ.. ಬರಬಹುದು.. ಬಂದರೆ.. ಈ ರೇ ರೇ ರೇ ಗಳಲ್ಲಿ ದಿನವೂ ಆಫೀಸಿಗೆ ಹೋಗುವಾಗ ಛತ್ರಿ ತೆಗೆದುಕೊಂಡು ಹೋಗುವ ಅಭ್ಯಾಸ ಮಾಡಿಕೊಂಡೆ.. ಆ ದಿನದಿಂದ ಒಂದು ದಿನವೂ ಮಳೆಯ ಸುಳಿವಿಲ್ಲ.. ಆದರೂ ಛಲ ಬಿಡದ ತ್ರಿವಿಕ್ರಮನಂತೆ ಛತ್ರಿ ಬ್ಯಾಗಿನೊಳಗೆ ಇರುತ್ತಿತ್ತು..

ನಿನ್ನೆ ಮಧ್ಯಾನ್ಹ ಸಿಹಿ ವಾರ್ತೆ ಕೇಳಿದ ಮೇಲೆ.. ಮನಸ್ಸು ಹಗುರಾಗಿತ್ತು.. ಅದೇ ಗುಂಗಿನಲ್ಲಿ ವಾಟ್ಸಾಪ್ ಸ್ಟೇಟಸ್ ಹಾಕಿದೆ..

"ಸವಿತಾ ನಗುತ್ತಿದ್ದಾಳೆ..
ತನ್ನ ಮಗಳು ೮೬% ನಲ್ಲಿ
ಜೀವನದ ಮೊದಲ ಘಟ್ಟ ದಾಟಿದ್ದಾಳೆ ಎಂದು"
#ಸವಿತಾರ್ಥಕತೆ!!!

ಮನಸ್ಸು ಇನ್ನೂ ಹಗುರಾಯಿತು.. ಸಂಜೆ ಆಫೀಸಿನಿಂದ ಹೊರಟೆ..

ಒಂದೆರಡು ಮಳೆ ಹನಿ ಬಿದ್ದವು..

"ಯಾಕೆ ಟೀ ಹನಿಗಳು" ಅಂದೇ..

"ಶ್ರೀ ನಿಮ್ಮ ಅಣ್ಣಾವ್ರ ಹಾಲುಜೇನು ಚಿತ್ರದ ಶೈಲಿಯಲ್ಲಿ "ಕಣ್ಣೀರಲ್ಲ ಶ್ರೀ ಪನ್ನೀರು ಪನ್ನೀರು"

 "ವಾಹ್ ಸೂಪರ್ ಟೀ.. ಎಂಥಹ ಮಾತು.. ಖುಷಿಯಾಯಿತೇ"

"ಹೌದು ಶ್ರೀ.. ನಾವು ಪಟ್ಟ ಶ್ರಮ ಒಂದು ಘಟ್ಟಕ್ಕೆ ಬಂದು ನಿಂತಿದೆ.. ಇಷ್ಟೆಲ್ಲಾ ಮಾನಸಿಕ ಒತ್ತಡದ ನಡುವೆಯೂ ನಮ್ಮ ಕಂದಮ್ಮ ಇಷ್ಟು ಚೆನ್ನಾಗಿ ಓದಿದ್ದಾಳೆ.. ಅದಕ್ಕಿಂತ ಇನ್ನೇನು ಬೇಕು.. ಅವಳಿಗೆ ಶುಭವಾಗುತ್ತೆ ಶ್ರೀ.. ನೀನು ಇದ್ದೀಯ ಜೊತೆಯಲ್ಲಿ. ಅದಕ್ಕಿಂತ ಇನ್ನೇನು ಬೇಕು ಅವಳಿಗೆ"

"ಹಾ ಟೀ.. ನನಗೂ ಒಂದೊಮ್ಮೆ ಅನಿಸಿತ್ತು .. ಅವಳು ಎಷ್ಟು ಅಂಕ ತೆಗೆಯುತ್ತಲೋ ತೆಗೆಯಲಿ.. ಯಾವುದೇ ಒತ್ತಡ ಹಾಕೋದು ಬೇಡ ಅಂತ ..ಅವಳು ಇಷ್ಟು ಅಂಕ ತೆಗೆದಿದ್ದಾಳೆ ಅಂದರೆ.. ಅದು ಅವಳ ಮಾನಸಿಕ ಒತ್ತಡವನ್ನು ನಿಭಾಯಿಸಿದ ರೀತಿಗೆ ಶರಣು ಎನ್ನಬೇಕು.. ಮತ್ತು ಆ ಶ್ರೇಯಸ್ಸು ಅವಳಿಗೆ ಸಲ್ಲಬೇಕು.. ತನ್ನ ಪಾಡಿಗೆ ತನ್ನ ಪ್ಲಾನ್ ಪ್ರಕಾರ ಓದುತ್ತಾ ಸಾಗಿದ್ದು.. ಮಧ್ಯೆ ಮಧ್ಯೆ.. ಮೊಬೈಲು, ಸಿನಿಮಾ, ಟಿವಿ.. ಹೀಗೆಲ್ಲಾ ಇದ್ದರೂ ಓದುವುದರಿಂದ ದೂರವಿರಲಿಲ್ಲ.. ಇದೆ ರೀತಿ ಇನ್ನು ಐದರಿಂದ - ಏಳು ವರ್ಷ ಓದಿಬಿಟ್ಟರೆ.. ಅವಳ ಹಾದಿ ಸುಂದರವಾಗಿರುತ್ತೆ.. "

"ನಿಜ ಶ್ರೀ... ನಾನಿದ್ದೇನೆ ಅವಳ ಜೊತೆಯಲ್ಲಿ ಮಾನಸಿಕ ಧೈರ್ಯ ತುಂಬುವುದಕ್ಕಾಗಿ.. ಜೊತೆಗೆ ನಾನು ಅವಳಿಗೆ ಹೇಳಿದ್ದೆ ಪಮ್ಮಿ ಅಕ್ಕನ ತರಹ ಚಾರ್ಟರ್ಡ್ ಅಕೌಂಟೆಂಟ್ ಆಗು ಅಂತ.. ಅದನ್ನು ನಿಜ ಮಾಡುವುದೇ ಅವಳ ಗುರಿಯಾಗಬೇಕು.. ಅದನ್ನು ನನಸು ಮಾಡೋದಕ್ಕೆ ನೀ ಇದ್ದೀಯ ಜೊತೆಯಲ್ಲಿ.. ಅಷ್ಟು ಸಾಕು ನನಗೆ.. "

ಆಗಸ ನೋಡಿದೆ ..ಅದರ ತುಂಬೆಲ್ಲ ಸವಿತಾಳ ಆ ಮುಗ್ಧ ನಗು ಮೊಗವೆ ಕಾಣುತ್ತಿತ್ತು.. ಹಾಗೆ ಅವಳ ಜೊತೆ ಮಾತಾಡಿಕೊಂಡು.. ಮೆಟ್ರೋ ಹತ್ತಿ.. ನನ್ನ ಬೈಕ್ ಹತ್ತಿರ ಬಂದಾಗಲೂ ಮಳೆಯ ಹನಿಗಳಿದ್ದವೇ  ಹೊರತು ಭೋರ್ಗರೆಯುವ ಮಳೆ ಇರಲಿಲ್ಲ.. ಸರಿ ಬೈಕಿನಲ್ಲಿ ಹಾಡಾಡಿಕೊಂಡು ಬರುತ್ತಿದ್ದೆ..

ಒಮ್ಮೆ ಆಗಸ ನೋಡಿದೆ.. ಮತ್ತೆ ಸವಿತಾ ಕಂಡಳು.. "ಟೀ ಒಂದು ಪ್ರಶ್ನೆ"

"ಹೇಳು ಶ್ರೀ"

"ಆನಂದಭಾಷ್ಪ ಅಂದೇ. .. ಬರೀ ಒಂದೆರಡು ಹನಿಗಳು ಮಾತ್ರ ಬಿದ್ದವು.. ಅಷ್ಟೇನಾ ಖುಷಿಯಾಯ್ತಾ "

"ಹಾ ಶ್ರೀ.. ಕುಶಿಯಾಯ್ತು.. ಓಹ್ ಗೊತ್ತಾಯ್ತು.. ಇರು ಒಂದು ಕ್ಷಣ.. ನಿನಗೆ ಮ್ಯಾಜಿಕ್ ತೋರಿಸುತ್ತೇನೆ"

"ಏನು ಟೀ ಮ್ಯಾಜಿಕ್"

"ಇರಪ್ಪ ..ಇಂದು ನಿನ್ನ ಇಷ್ಟದ ಮಂಗಳವಾರ.. ನನ್ನಿಷ್ಟದ ತಾರೀಕು (ಏಳು)... ಎರಡೂ ಇದ್ದ ಮೇಲೆ ಇನ್ನೊಂದು ನಿನಗೆ ಇಷ್ಟವಾದುದನ್ನು ಕಳಿಸುತ್ತೇನೆ.. "

ಅರೆ ಕ್ಷಣ.. ಭೋರ್ಗರೆತ ಶುರುವಾಯಿತು.. ಕಣ್ಣು ಕಾಣದಷ್ಟು ದಪ್ಪ ದಪ್ಪ ಹನಿಗಳ ಮಳೆ.. ಬೈಕ್ ಓಡಿಸಲಾಗಲಿಲ್ಲ.. ತಕ್ಷಣ.. ರಸ್ತೆಯ ಅಂಚಿನಲ್ಲಿದ್ದ ಅಂಗಡಿಯ ಮುಂದೆ ಬಂದು.. ಮೊಬೈಲು, ವಾಚು, ಪರ್ಸ್ ಎಲ್ಲವನ್ನೂ ಬ್ಯಾಗಿನಲ್ಲಿ ಹಾಕಿ.. ಕನ್ನಡಕವನ್ನು ಜೇಬಿನಲ್ಲಿ ಹಾಕಿಕೊಂಡು.. ಮತ್ತೆ ಬೈಕ್ ಬಳಿ ಬಂದೆ.. ಅಲ್ಲಿಯ ತನಕ ನನ್ನ ಕಾರ್ಯವನ್ನು ನೋಡುತ್ತಿದ್ದ ಅಕ್ಕ ಪಕ್ಕದ ಮಂದಿ ಸುಮ್ಮನಿದ್ದರು.. ಬೈಕ್ ಬಳಿ  ಬಂದು. .. ಬೈಕ್ ಸ್ಟಾರ್ಟ್ ಮಾಡಿದಾಗ.. ಅಲ್ಲಿದ್ದ ಒಬ್ಬ ತಲೆ ಚಚ್ಚಿಕೊಂಡದ್ದು ಕಣ್ಣಿಗೆ ಬಿಟ್ಟು.. ನಸು ನಗುತ್ತಾ "ಟೀ ಸೂಪರ್" ಎಂದು ಸಲ್ಯೂಟ್ ಹೊಡೆದದ್ದೇ.. ಸೀದಾ ಮನೆ ಕಡೆ..  ಆ ಮಳೆಯಲ್ಲಿ ಬೈಕ್ ಚಾಲನೆ.. ಸುಂದರ ಅನುಭವ ಕೊಟ್ಟಿತು.. ಹಾಗೆ ನನ್ನ SSLC ದಿನಗಳ ಕಡೆಗೆ ಜಾರಿತು..

"ಶ್ರೀಕಾಂತ ಇವತ್ತು ನಿನ್ನ ರಿಸಲ್ಟ್.. ಶಾಲೆಗೆ ಹೋಗಿ ನೋಡಿಕೊಂಡು ನನ್ನ ಆಫೀಸ್ ಹತ್ತಿರ ಬಾ" ಅಂತ ನನ್ನ ಅಪ್ಪ ಹೇಳಿ ಆಫೀಸಿಗೆ ಹೋದರು..

ನಾನು ಠಾಕು ಠೀಕಾಗಿ ಸಿದ್ಧವಾಗಿ.. ಶಾಲೆಯ ಹತ್ತಿರ ಹೋದೆ.. ನೋಟೀಸ್ ಬೋರ್ಡಿನಲ್ಲಿ ಫಲಿತಾಂಶ ಹಾಕಿದ್ದರು.. ನನ್ನ ರೋಲ್ ನಂಬರ್ ಹುಡುಕುತ್ತಾ ಬಂದಾಗ ಅಚ್ಚರಿ ಕಾದಿತ್ತು.. ನನ್ನ ನಂಬರಿಗೆ ಒಂದು ಗೆರೆ ಎಳೆದಿದ್ದರು. .. ಅಲ್ಲಿ ಇನ್ಯಾರ ನಂಬರಿಗೂ ಹಾಗೆ ಮಾಡಿರಲಿಲ್ಲ.. ಸರಿ ಮಾರ್ಕ್ಸ್ ಎಷ್ಟು ಬಂದಿದೆ ಎಂದು ತಿಳಿದುಕೊಂಡು.. ಅಪ್ಪನ ಆಫೀಸಿಗೆ ಹೋದೆ.. ಹೇಳಿದೆ..

"ಅಣ್ಣ ಫಸ್ಟ್ ಕ್ಲಾಸಿನಲ್ಲಿ ಪಾಸಾಗಿದ್ದೇನೆ.. ಇದು ನೋಡಿ ಮಾರ್ಕ್ಸ್"

"ನನಗೆ ಗೊತ್ತು.. ನೋಡಿಲ್ಲಿ ಬರೆದುಕೊಂಡು ಬಂದಿದ್ದೇನೆ" ಎಂದು ತೋರಿಸಿದರು.. "ಆಫೀಸಿಗೆ ಬರುವಾಗ ಶಾಲೆಗೆ ಹೋಗಿ ನಿನ್ನ ರಿಸಲ್ಟ್ ನೋಡಿ.. ನನ್ನ ಬಾಸ್ ಸೀತಾರಾಮುಗೆ ಹೇಳಿದ್ದೀನಿ.. ನಾನೇ ನಿನ್ನ ನಂಬರ್ ಕೆಳಗೆ ಗೆರೆ ಎಳೆದದ್ದು. "

ಅಪ್ಪನ ಬಾಸ್ ಸೀತಾರಾಮು ಸರ್ ಹತ್ತಿರ ಹೋಗಿ ಹೇಳಿದೆ.. "ಖುಷಿ ಆಯ್ತು ಶ್ರೀಕಾಂತ.. ಕೆ ಆರ್ ಪಟ್ಟ ಕಷ್ಟಕ್ಕೆ ಸರಿಯಾದ ಬೆಲೆ ಸಿಗುತ್ತಿದೆ.. ಶುಭವಾಗಲಿ.. ಮುಂದೆ ಏನು ಓದುತ್ತೀಯ ನಿರ್ಧಾರ ಮಾಡಿ ಹೇಳು.. ನನ್ನ ಕೈಲಾದ ಸಹಾಯ ಮಾಡುತ್ತೇನೆ" ಎಂದರು ... ಅವರು ನುಡಿದಂತೆಯೇ.. ನನ್ನ ಪೂರ್ಣ ವಿದ್ಯಾಭ್ಯಾಸಕ್ಕೆ ಅವರ ಸಹಾಯ ಇತ್ತು.. ಇಂದು ನಾನು ಏನಾದರೂ ಆಗಿದ್ದೇನೆ ಎಂದರೆ ಅದಕ್ಕೆ ಭದ್ರ ತಳಪಾಯ ಹಾಕಿದ್ದು.. ಸೀತಾರಾಮ್ ಸರ್..

 ಇದೆಲ್ಲ ನೆನೆದು..ಮಳೆಯಿಂದ ನೆನೆದು ಮನೆಗೆ ಬಂದಾಗ.. ಮಗಳು ಫುಲ್ ಕುಶಿಯಲ್ಲಿದ್ದಳು.. ಹಾಗೆ ಒದ್ದೆ ಬಟ್ಟೆಯಲ್ಲಿಯೇ.. ಕಂಗ್ರಾಜುಲೇಷನ್ ಪಾಪ  ಎಂದು ಹೇಳಿ ಅಪ್ಪಿಕೊಂಡು ಸಿಹಿ ತಿನ್ನಿಸಿದೆ..

ಹೊರಗೆ ಬಂದು ನೋಡಿದೆ.. ಆನಂದಭಾಷ್ಪ ಇನ್ನೂ ಧಾರಾಕಾರವಾಗಿ ಸುರಿಯುತ್ತಲೇ ಇತ್ತು.. ಅವಳ ಫೋಟೋ ನೋಡಿದೆ .. ಸೂಪರ್ ಶ್ರೀ ಎಂದಳು ನನ್ನ ಟೀ!!!

Sunday, March 24, 2019

ಗಂಗೆಯೇ ಮಡಿಲು ಗಂಗೆಯೇ ಕಡಲು...!

ಒಂದು ಕುಗ್ರಾಮ..ಅಮೋಘ ಇತಿಹಾಸವಿದ್ದರೂ ಕುಗ್ರಾಮವಾಗಿತ್ತು ..  ಮಳೆ ಬೆಳೆ ಎಂದರೆ ಅದೇನು ಅಂತ ಜನಗಳಿಗೆ ಮರೆತೇ ಹೋಗಿತ್ತು..  ಜಪ ತಪಗಳು ನೆಡೆದೆ ಇತ್ತು.. ಆದರೂ ಆ ಹಳ್ಳಿಗೆ ಭರವಸೆಯ ಬೆಳಕು ಮರೀಚಿಕೆ ಆಗಿತ್ತು.. ಪ್ರತಿ ಮಳೆಗಾಲದಲ್ಲಿಯೂ ದಟ್ಟವಾದ ಮೋಡಗಳು ಆವರಿಸಿಕೊಂಡು ಜನರಿಗೆ ಮಳೆ  ಬರಬಹುದೇನೋ ಎಂಬ ಆಶಯ ಬಿತ್ತುತ್ತಿತ್ತೇ ವಿನಃ ಮಳೆಯ ಸೋಂಕಿಲ್ಲದೆ ಸೊರಗಿತ್ತು.. ಬರುಬರುತ್ತಾ ಜನರು ಮಳೆ, ಮೋಡ, ಹನಿ, ಬೆಳೆ ಈ ಪದಗಳು ಪಠ್ಯ ಪುಸ್ತಕದ ಪದಗಳಾಗಿವೆ ಎಂದು ಮಾತ್ರ ತಿಳಿಯುವ ಹಾಗಿತ್ತು..

ಹೀಗೆ ಸಾಗುತ್ತ ಹೋದ ಕಾಲದಲ್ಲಿ ... ಒಂದು ದಿನ ಒಬ್ಬರು ಸಂತ ತೀರ್ಥಯಾತ್ರೆಯ ಹಾದಿಯಲ್ಲಿ ಆ ಊರಿಗೆ ಬಂದರು.. ನೀರಿಗಾಗಿ ಬವಣೆ ಪಡುತ್ತಿದ್ದ ಹಳ್ಳಿಯನ್ನೊಮ್ಮೆ ಸುತ್ತು ಹಾಕಿ.. ಊರಿನ ಮಧ್ಯಭಾಗದಲ್ಲಿದ್ದ ಅರಳಿ ಕಟ್ಟೆಗೆ ನಮಸ್ಕರಿಸಿ ಕುಳಿತುಕೊಂಡರು.. ಜನರಿಗೆಲ್ಲ ಕೆಲಸ ಕಾರ್ಯ ಏನೂ ಇರಲಿಲ್ಲ.. ದಿನವೂ ತಮ್ಮ ಊರಿನ ಭಾಗ್ಯದ ಬಗ್ಗೆ ಶಾಪ ಹಾಕುತ್ತ ಹಿಂದಿನ ಜೀವನವನ್ನು ನೆನೆಸಿಕೊಂಡು ಇಂದಿನ ಕಾಲದ ಬಗ್ಗೆ ಕೋಪದಿಂದ ಮಾತಾಡೋದೇ ಆಗಿತ್ತು ಕೆಲಸ..

ತನ್ನ ಪಾಡಿಗೆ ತಾನು ಕೂತಿದ್ದ ಸಂತನನ್ನು ಕಂಡು ಆ ಊರಿನ ಪ್ರಮುಖರಲ್ಲಿ ಒಬ್ಬರಾಗಿದ್ದ ಜ್ಞಾನದೇವ.. "ಸ್ವಾಮೀ ನಮಸ್ಕಾರ... ತಾವು ಯಾವ ಊರಿನವರು.. ಎಲ್ಲಿಗೆ ನೆಡೆಯುತ್ತಿದೆ ನಿಮ್ಮ ಪಯಣ.. ಈ ಊರಿಗೆ ಬಂದ ವಿಶೇಷವೇನು.. ಹೀಗೆ ಉಭಯಕುಶಲೋಪರಿ ಮಾತುಗಳನ್ನ ಕೇಳಿ.. ಕಣ್ಣು ಬಿಟ್ಟ ಸಂತ .. "ಮೆಲ್ಲನೆ ನಸು ನಕ್ಕು.. ತೀರ್ಥಯಾತ್ರೆಗೆ ಹೊರಟಿದ್ದೆ .. ನಿಮ್ಮ ಊರಿನ ಮಗ್ಗುಲಲ್ಲಿ ಹೋಗುವಾಗ ನಿಮ್ಮ ಊರಿನ ಹೆಸರು ನನ್ನ ಕಾಡಿತು.. ಮಳೆಹಳ್ಳಿ ಎಂಬ ಹೆಸರು.. ಯಾಕೋ ನನ್ನ ತಡೆದು ನಿಲ್ಲಿಸಿತು. ಮಳೆಗಾಲವಾದರೂ ಭೂಮಿ ಬಿರಿದು ಬಾಯಿ ಬಿಟ್ಟಿದೆ..ಊರ ಮುಂದಿನ  ದೇವಸ್ಥಾನದಲ್ಲಿ ಪೂಜೆ ಪುನಸ್ಕಾರ ಕಾಣದೆ ಜೇಡರ ಬಲೆ ಕಟ್ಟಿದ್ದು ಕಂಡೆ..  ಜಾನುವಾರುಗಳು ಸೊರಗಿ ನಿಂತಿವೆ.. ಹೊಲಗದ್ದೆಗಳು ನೀರು ಕಾಣದೆ ಬರಡಾಗಿವೆ.. ಅದಕ್ಕಾಗಿ ನನ್ನ ತೀರ್ಥಯಾತ್ರೆಯನ್ನು ಕೊಂಚ ಮುಂದೆ ಮಾಡಿ.. ಈ ಹಳ್ಳಿಯಲ್ಲಿ ಕೆಲವು ದಿನಗಳನ್ನು ಕಳೆಯೋಣ ಅಂತ ಬಂದೆ.. ತೊಂದರೆಯಾಯಿತೇ.. ?"

"ಅಯ್ಯೋ ಸ್ವಾಮೀ ತೊಂದರೆಯೇನು ಬಂತು.. ನಮ್ಮ ಊರಲ್ಲಿ ತೊಂದರೆ ಎನ್ನೋದು ಹಾಸಿಕೊಂಡು ಮಲಗಿಬಿಟ್ಟಿದೆ.. ಹೊಸ ತೊಂದರೆ ಬರಲು ಸಾಧ್ಯವೇ ಇಲ್ಲ" ಮಾತಿನಲ್ಲಿ ಉದಾಸೀನ ರಾಜ್ಯಭಾರ ಮಾಡುತ್ತಿತ್ತು..

"ನಿಮ್ಮ ಹಳ್ಳಿಯನ್ನು ಮೂರು ಸಾರಿ ಸುತ್ತಿ ಬಂದಿದ್ದೇನೆ.. ನಾ ಹೇಳೋದನ್ನ ನೀವು ಕೇಳಿದರೆ.. ನಿಮ್ಮ ಊರಿನ ಹಣೆಬರಹವನ್ನು ನಾ ಕೊಂಚ ಬದಲಿಸಬಲ್ಲೆ ಆದರೆ ನಿಮ್ಮ ಸಹಕಾರವಿಲ್ಲದೆ ನಾ ಏನೂ ಮಾಡೋಕೆ ಆಗಲ್ಲ.. ಆಗುತ್ತಾ?"

"ಸರಿ ಸ್ವಾಮಿ.. ನಾವೂ ಏನೇನೂ ನೋಡಿ ಆಯ್ತು.. ಇದನ್ನು ನೋಡುತ್ತೇವೆ.. ಕೇಳುತ್ತೇವೆ.. ಅದೇನೋ ಹೇಳ್ತಿರೋ ಹೇಳಿ.. "
ಮಾತಿನಲ್ಲಿ ಬೇಜವಾಬ್ಧಾರಿ ಅನ್ನೋದಕ್ಕಿಂತ ಬೇಸರವೇ ಹೆಚ್ಚು ಮನೆ ಮಾಡಿತ್ತು.. "ಆಶಾಕಿರಣ" ಅಂದರೇನು  ಎಂದರೆ ಅದು ಆಶಾ ಮತ್ತು ಕಿರಣ ಇಬ್ಬರ ಹೆಸರು ಎನ್ನುವ ಮಟ್ಟಕ್ಕೆ ಹೋಗಿತ್ತು..

ಆ ಸಂತರು ತಮ್ಮ ಜೋಳಿಗೆಯಿಂದ ಒಂದು ರುದ್ರಾಕ್ಷಿ ಮಾಲೆ ತಗೆದು.. ಪಕ್ಕದಲ್ಲಿಟ್ಟುಕೊಂಡರು.. ಅವರ ಕೈಯಲ್ಲಿ ಒಂದು ಕರಿದಾರ ಕಟ್ಟಿಕೊಂಡಿದ್ದರು.. ಹಾಕಿದ್ದ ಉಡುಪು ಪೂರ್ಣ ಕಪ್ಪು..

ಅಷ್ಟುಹೊತ್ತಿಗೆ ಊರ ಜನರೆಲ್ಲಾ ಸೇರಿದ್ದರು.. ಕೆಲಸವಿರಲಿಲ್ಲ.. ಹೇಗೋ ಹೆಂಗೋ ಬೆಳಗಿನ ತಿಂಡಿಯಾಗಿತ್ತು.. ಇನ್ನು ಊಟದ ಸಮಯದ ತನಕ ಮಾಡೋಕೆ ಕೆಲಸವಿದ್ದರೆ ತಾನೇ.. ಸಂತರ ಚಟುವಟಿಕೆಗಳನ್ನೇ ನೋಡುತ್ತಾ ಕೂತಿದ್ದರು..

"ನೀವು ಒಬ್ಬೊಬ್ಬರೇ ನನ್ನ ಬಳಿಗೆ ಬನ್ನಿ... ನಿಮ್ಮ ಹೆಸರು ಬರೆದು.. ನಿಮ್ಮ ಮನೆಯಿಂದ ಒಂದು ಚೊಂಬು ನೀರನ್ನು ತಂದು ಈ ಅರಳಿಕಟ್ಟೆಯ ಹಿಂಭಾಗದಲ್ಲಿರುವ ಕೆರೆಯೊಳಗೆ ಹಾಕುತ್ತಾ ಹೋಗಿ .. "

ಜನಕ್ಕೆ ಹುಚ್ಚು ಅನ್ನಿಸಿತು.. ಕುಡಿಯೋದಕ್ಕೆ ನೀರಿಲ್ಲ.. ಇನ್ನೂ ಗುಂಡಿಯೊಳಗೆ ಸುರಿಯೋಕೆ ಎಲ್ಲಿಂದ ತರೋದು.. "ಸ್ವಾಮೀ ನೀರೆಲ್ಲಿ ಇದೆ ..ನೀರೇ ಇಲ್ಲ.. ಇನ್ನೂ ಗುಂಡಿಯೊಳಗೆ ಸುರಿಯೋದು... ಎಲ್ಲಿಂದ ತರೋದು.. ಆಗದು ಆಗದು " ಎನ್ನುತ್ತಾ ಎಲ್ಲರೂ ತಲೆ ಅಲ್ಲಾಡಿಸತೊಡಗಿದಾಗ.. ಸುಮಾರು ತೊಂಬತ್ತು ವರ್ಷಕ್ಕೂ ಹೆಚ್ಚಿನ ಅಜ್ಜ.. ತನ್ನ ಜೋಳಿಗೆಯಿಂದ ಒಂದು ಪುಟ್ಟ ನೀರಿನ ಸೀಸೆ ತೋರಿಸಿ.."ಸ್ವಾಮಿಗಳೇ ನಂತಾವ ಈಟೆ ನೀರಿರೋದು.. ಹಾಕ್ಲಾ?"

"ಅಜ್ಜ ಹನಿ ಹನಿಗೂಡಿದರೆ ಹಳ್ಳ ಅಂತಾರಲ್ವ.. ಹಾಕಿ ಅಜ್ಜ"

ಅಲ್ಲಿದ್ದ ಒಬ್ಬ ಪುಟ್ಟ ಬಾಲಕ.. "ಅಜ್ಜ ನಿನಗೆ ಊರುಗೋಲಾಗಿ ನಾ ಬರುವೆ.. " ಎನ್ನುತ್ತಾ ಅಜ್ಜನನ್ನು ಮೆಲ್ಲಗೆ ಕೆರೆಯ ದಂಡೆಗೆ ಕರೆದೊಯ್ದ.. ಅಜ್ಜ ತನ್ನ ಎರಡು ಕೈಗಳನ್ನು ಆಗಸಕ್ಕೆ ಮುಗಿಯುತ್ತಾ "ದೇವರೇ.. ಈ ಸಂತ ನಮ್ಮ ಈ ಹಳ್ಳಿಗೆ ಏನೋ ಒಳ್ಳೇದು ಮಾಡೋಕೆ ಬಂದವ್ರೆ.. ಅವರ ಆಸೆ ಕೈಗೂಡಲಿ ಕಣ್ಣಪ್ಪ" ಎನ್ನುತ್ತಾ "ಹರ ಹರ ಮಹಾದೇವ" ಎಂದು ಕೂಗಿ ತನ್ನ ಬಳಿಯಿದ್ದ ಸೀಸೆಯ ನೀರನ್ನು ಕೆರೆಗೆ ಹಾಕಿದ..

ಎಲ್ಲರೂ ಒಮ್ಮೆ ನಸು ನಕ್ಕರೂ.. ಆದರೂ ಎಲ್ಲರಿಗೂ ಏನೋ ತವಕ ಏನೋ ಆಗುತ್ತೆ ಅಂತ

ಆ ಪುಟ್ಟ ಬಾಲಕ ತನ್ನ ಗೆಳೆಯರ ಗುಂಪನ್ನು ಕರೆದು ತುಸು ಕಿವಿಯಲ್ಲಿ ಏನೋ ಹೇಳಿ.. ಎಲ್ಲರೂ ಓಡಿ ಹೋಗಿ.. ಪುಟ್ಟ ಪುಟ್ಟ ಪಾತ್ರೆಗಳಲ್ಲಿ ನೀರನ್ನು ತಂದು ತಂದು ಸುರಿಯತೊಡಗಿದರು.. ಬಾಲಕರ ನಂಬಿಕೆಯ ಶ್ರಮ ನೋಡಿ.. ಮಿಕ್ಕವರು ನಾವು ಹಾಗೆ ಮಾಡೋಣ ಅಂತ ಶುರು ಮಾಡಿದರು... ಈ ಸುದ್ದಿ ಕಾಳ್ಗಿಚ್ಚಿನಂತೆ ಸುತ್ತ ಮುತ್ತಲ ಹಳ್ಳಿಗಳಿಗೆಲ್ಲಾ ಹರಡಿತು.. ಗಾಡಿಗಳನ್ನು ಕಟ್ಟಿಕೊಂಡು ಬಂದು ತಮ್ಮ ಕೈಲಾದ ಸಹಾಯ ಮಾಡತೊಡಗಿದರು.. ಹಳ್ಳಿಗಳಲ್ಲಿನ ತರುಣರು.. ಸನಕೆ, ಗುದ್ದಲಿ, ಪಿಕಾಸಿ ಹೀಗೆ ಅನೇಕ ಹತಾರಗಳನ್ನು ತೆಗೆದುಕೊಂಡು.. ಹಳ್ಳಕೊಳ್ಳವಾಗಿದ್ದ ಕೆರೆಯನ್ನು ಸಮತಟ್ಟು ಮಾಡಿದರು.. ನೀರು ನಿಧಾನವಾಗಿ ಹರಡಿಕೊಳ್ಳತೊಡಗಿತು.. ಒಳ್ಳೆಯ ಪವಾಡವೆನ್ನುವಂತೆ.. ನಿಧಾನವಾಗಿ ಮೊಣಕಾಲತನಕ ತುಂಬುವಷ್ಟು ಒಂದು ಕಡೆ ನೀರು ಜಮಾ ಆಗಿತ್ತು...

ಅಂದು ಪೂರ್ಣಚಂದ್ರ ತುಂಬಿದ ರಾತ್ರಿಯಾಗಿತ್ತು.. ಸಂತರು  ಸ್ನಾನ ಜಪತಪಾದಿಗಳನ್ನು ಮುಗಿಸಿ.. ಅರಳಿಕಟ್ಟೆಯಲ್ಲಿಯೇ ಆಗಸ ನೋಡುತ್ತಾ ಕೂತಿದ್ದರು... ಹಳ್ಳಿಯವರೆಲ್ಲ ಹೊತ್ತಾಗಿತ್ತು ಅಂತ ತಮ್ಮ ತಮ್ಮ ಮನೆಗಳಿಗೆ ತೆರಳಿ ಮಲಗಿದರು.. ಸುಮಾರು ನಡುರಾತ್ರಿ ಸಂತರು ... ತಮ್ಮ ಜೋಳಿಗೆಯಿಂದ ಒಂದು ರುದ್ರಾಕ್ಷಿ ಮಾಲೆಯನ್ನು ಕೈಗೆ ತೆಗೆದುಕೊಂಡು.. ಮಿಕ್ಕಿದ್ದನ್ನು ಕಟ್ಟೆಯಲ್ಲಿಯೇ ಬಿಟ್ಟು,  ಮೆಲ್ಲಗೆ ಎದ್ದು ನಿಧಾನವಾಗಿ ಆ ಕತ್ತಲೆಯಲ್ಲಿ ಕೆರೆಯೆಡೆಗೆ ತೆರಳಿದರು.... ಮನದಲ್ಲಿ ಶಾಂತಚಿತ್ತರಾಗಿ.. ಪೂರ್ವ ದಿಕ್ಕಿಗೆ ನಿಂತು ಮೊಣಕಾಲುದ್ದದ ನೀರಿನಲ್ಲಿ ನಿಂತು ತಮಗೆ ಗೊತ್ತಿದ್ದ ಮಂತ್ರವನ್ನು ಜಪಿಸತೊಡಗಿದರು... ತಣ್ಣನೆ ಗಾಳಿ.. ಕಾಲಕೆಳಗೆ ತಣ್ಣಗಿದ್ದ ಮಣ್ಣು.. ಸೊಳ್ಳೆಯ ಝೇಂಕಾರ.. ಸುತ್ತಮುತ್ತಲ ಹಳ್ಳಿಯ ನಾಯಿಗಳ ಬೊಗಳುವಿಕೆ.. ನರಿಗಳ ಊಳಿಡುವಿಕೆ.. ಯಾವುದು ಅವರ ಕಿವಿಗೆ ಬೀಳುತ್ತಿಲ್ಲ ಎನ್ನುವಷ್ಟು ತನ್ಮಯತೆಯಿಂದ ಜಪಿಸತೊಡಗಿದರು..

ಬೆಳಕಾಗಿತ್ತು.. ಹಳ್ಳಿಯ ಪುಟ್ಟ ಬಾಲಕರು... ಅರಳಿಕಟ್ಟೆಯ ಬಳಿಗೆ ಬಂದಾಗ ಸಂತರ ಕಮಂಡಲ, ಬ್ರಹ್ಮದಂಡ, ಜೋಳಿಗೆ ಮಾತ್ರ ಇತ್ತು... ಅಚ್ಚರಿಯಿಂದ ಅತ್ತಿತ್ತ ಹುಡುಕಾಟತೊಡಗಿದಾಗ.. ಒಬ್ಬ ಬಾಲಕ  ನೋಡ್ರೋ ನಮ್ಮ ಸಾಮಿಗಳು ಅಲ್ಲಿ ಇದ್ದಾರೆ.. ಎಂದು ಬೆರಳು ಮಾಡಿ ತೋರಿಸಿದ..

ಚಿ.  ವಿಷ್ಣು ಕಲಾಕುಂಚ 
ಊರಿನವರೆಲ್ಲ ಅಲ್ಲಿಗೆ ಬಂದು ಆ ದೃಶ್ಯವನ್ನು ಎವೆಯಿಕ್ಕದೆ ನೋಡತೊಡಗಿದರು.. ಕಪ್ಪು ವಸ್ತ್ರದ, ಶ್ವೇತ ಕೇಶರಾಶಿ, ಬಿಳಿ ಗಡ್ಡದ ಸ್ವಾಮಿಗಳು ರುದ್ರಾಕ್ಷಿಯನ್ನು ಕೈಯಲ್ಲಿ ಹಿಡಿದು ಜಪಿಸುತ್ತಿದ್ದರು.. ಯಾರಿಗೂ ಹತ್ತಿರ ಹೋಗುವ ಧೈರ್ಯ ಬರಲಿಲ್ಲ.. ಆದರೆ ಅಚ್ಚರಿ ಎನ್ನುವಂತೆ.. ಮೊಳಕಾಲುದ್ದ ಇದ್ದ ನೀರು ಅವರ ಮಂಡಿಯ ತನಕ ಬಂದಿತ್ತು.. ಸಂಜೆ ಸೂರ್ಯಾಸ್ತ ಆಗುವ ತನಕ ಅಲ್ಲಿಂದ ಕದಲಿರಲಿಲ್ಲ ಅವರು.. ಊರಿನ ಜನರೂ ತಮ್ಮ ಕೆಲಸ ಕಾರ್ಯ ಬಿಟ್ಟು.. ಊಟ ತಿಂಡಿ ಮರೆತು.. ಅಲ್ಲಿನ ದೃಶ್ಯವನ್ನೇ ನೋಡುತ್ತಾ ಕೂತಿದ್ದರು..

ಸಂಜೆ ಸೂರ್ಯಾಸ್ತ.. ಆಗಸದಲ್ಲಿ ರಂಗು ತುಂಬಿದ್ದ ಸೂರ್ಯ ಅಸ್ತಮಿಸುತ್ತಿದ್ದ.. ಸಂತರು ತಮ್ಮ ಬೊಗಸೆಯಲ್ಲಿ  ನೀರು ತುಂಬಿಕೊಂಡು ಮೂರು ಬಾರಿ ಅಸ್ತಮಿಸುತ್ತಿದ್ದ ಸೂರ್ಯನ ಕಡೆ ತಿರುಗಿ ಅರ್ಘ್ಯ ಕೊಟ್ಟರು.. ಸೂರ್ಯದೇವನಿಗೆ ನಮಿಸಿ.. ಮೆಲ್ಲನೆ ಕೆರೆಯಿಂದ ಹೊರಗೆ ಬಂದು.. ಒದ್ದೆಯಾಗಿದ್ದ ಮೈಯನ್ನು ಒರೆಸಿಕೊಂಡು, ಜೋಳಿಗೆಯಲ್ಲಿದ್ದ ಕಾವಿಬಟ್ಟೆಯನ್ನು ಧರಿಸಿ.. ವಿಭೂತಿ ಬಳಿದು ಕೊಂಡು.. ಮತ್ತೆ ಜಪಕ್ಕೆ ಕೂತರು...

ಫಲಾಹಾರಗಳು ಬಂದಿದ್ದರೂ, ಅದನ್ನು ಮುಟ್ಟಿರಲಿಲ್ಲ.. ಕತ್ತಲಾಯಿತು.. ಇನ್ನೊಂದು ದಿನ ಕಳೆಯಿತು.. ಅರಳೀಕಟ್ಟೆಯಲ್ಲಿಯೇ ಜಪಮಾಡುತ್ತಾ ಕೂತಿದ್ದ ಅವರ ಮೊಗದಲ್ಲಿ ಅದೇನೋ ಕಾಂತಿಯಿತು.. ಸಮಾಧಾನವಿತ್ತು... ಆಶಯವಿತ್ತು.. ತಾನು ಕೈಗೊಂಡ ಕಾರ್ಯ ಪೂರ್ತಿಯಾಗುತ್ತೆ ಎನ್ನುವ ವಿಶ್ವಾಸ ಅವರ ಮೊಗದಲ್ಲಿ ಎದ್ದು ಕಾಣುತಿತ್ತು..

ಮಧ್ಯರಾತ್ರಿಯಲ್ಲಿ ಸಿಡಿಲು, ಮಿಂಚು, ಗುಡುಗು ಕೂಡಿದ ಆರ್ಭಟ ಶುರುವಾಯಿತು.. ಹಳ್ಳಿಗರಿಗೆ ಕುತೂಹಲ ಏನಿದು ಶಬ್ದ ಎಂದು.. ಸೆಕೆ ಎಂದು ಹೊರಗೆ ಮಲಗಿದ್ದವರೆಷ್ಟೋ ಜನಕ್ಕೆ ಈ ಆರ್ಭಟ ಕೇಳಿ ಎದ್ದು ಕುಳಿತರು... ದಪ್ಪ ದಪ್ಪ ಹನಿಗಳ ಮಳೆ ಶುರುವಾಯಿತು.. ನೋಡು ನೋಡುತ್ತಲೇ ಎಲ್ಲರೂ ಮನೆಯಿಂದ ಹೊರಗೆ ಆ ಬೆಳದಿಂಗಳ ಬೆಳಕಲ್ಲಿಯೇ ಮಳೆಯಲ್ಲಿ ಮಿಂದು ನಲಿದರು..

ಒಂದು ವಾರ ಸತತ ಮಳೆಯಿಂದ.. ಸುತ್ತ ಮುತ್ತಲ ಎಲ್ಲಾ ಕೆರೆಕಟ್ಟೆಗಳು ಕೋಡಿ ಬಿದ್ದವು.. ಹೈನುಗಾರಿಕೆಗೆ ಬಲ ಬಂದಿತು.. ರೈತರು ಬೇಸಾಯ ಆರಂಭಿಸಿದರು.. ಎಲ್ಲರೂ ಈ ಊರಿಗೆ ಮತ್ತೆ ಈ ತರಹ ಬರಗಾಲ ಬರಬಾರದೆಂದು..ನೀರನ್ನು ಶೇಖರಿಸುವ ಕಾಯಕ್ಕೆ ಬಿದ್ದರು.. ಜೊತೆಗೆ ಸಂಜೆಯಲ್ಲಿ ಕಾಲ ಹರಣ ಮಾಡದೆ ತಮಗೆ ಗೊತ್ತಿದ್ದ ಅನೇಕ ವಿಷಯಗಳನ್ನು ಎಲ್ಲರಿಗೂ ಹೇಳಿಕೊಡತೊಡಗಿದರು.. ನೀರಿನ ಬೆಲೆಯನ್ನು ಸಾರುವ ಗೋಡೆಬರಹಗಳು ಎದ್ದು ಬಂದವು..

ಎಲ್ಲೆಡೆ ಸಂಭ್ರಮ.. ಎಲ್ಲೆಡೆ ಖುಷಿ.. ಸಂತರು ಹಳ್ಳಿಯ ಜನರಿಗೆ ಹೇಳಿದ್ದು ಇಷ್ಟೇ..

"ಅಸಾಧ್ಯ ಎಂದು ಯಾವತ್ತೂ ಹೇಳಬೇಡಿ.. ಒಂದೇ ಅಕ್ಷರ ತೆಗೆದುಬಿಡಿ.. ಆಗ ಅದು ಆಗುತ್ತೆ "ಸಾಧ್ಯ".. ಒಂದಾಗಿದ್ದಾರೆ ಎಲ್ಲವೂ ಸಾಧ್ಯ.. " ಎನ್ನುತ್ತಾ ಕೈಮುಗಿದು.. ಇನ್ನೊಂದು ಹಳ್ಳಿಗೆ ಹೋಗುತ್ತಿದ್ದೇನೆ.. ಮತ್ತೆ ಮರಳಿ ಬರುತ್ತೇನೆ ಎಂದು ಎಲ್ಲರಿಗೂ ಕೈ ಬೀಸುತ್ತಾ ಹೊರಟರು..

ಎಲ್ಲಿಗೆ ಅಂದ್ರ.. ಇನ್ನೊಂದು ಹಳ್ಳಿಗೆ.. ಇನ್ನೊಂದು ಕುಗ್ರಾಮಕ್ಕೆ.. ಇನ್ನೊಂದು ಅಭಿವೃದ್ಧಿಯ ಹಾದಿಯನ್ನು ನೋಡಲು.. !

ನಾವೂ ಅವರ ಬರುವಿಕೆಗೆ ಕಾಯಬೇಕೆ ಅಥವ ನಾವೇ ಕೆಲಸ ಶುರು ಹಚ್ಚಿಕೊಳ್ಳೋಣವೇ.. !!!!

(ನನ್ನ ಪ್ರೀತಿಯ ಸಹೋದರಿಯಾರಾದ ಸಮೀಕ್ಷಾ ವಿ ಚಿನ್ನು ಮತ್ತು ಸೌಮ್ಯ ಭಗವತ್ ಅವರ ಬರಹಗಳನ್ನು ಓದಿದಾಗ ಮನದಲ್ಲಿ ಒಂದು ರೀತಿಯ ಸ್ಫೂರ್ತಿ ತುಂಬಿಬಂದಿತ್ತು.. ಅದರಲ್ಲೂ ಶ್ರೀ ನರೇಂದ್ರ ಮೋದಿಯವರ ಗಂಗಾ ನದಿಯಲ್ಲಿನ ದೃಶ್ಯ ಮನದಲ್ಲಿ ಎಬ್ಬಿಸಿದ ತರಂಗಗಳು ಈ ಲೇಖನಕ್ಕೆ ಸ್ಫೂರ್ತಿ.. ನನ್ನ ಅಣ್ಣನ ಮಗ ವಿಷ್ಣುವಿಗೆ ಈ ಚಿತ್ರವನ್ನು ಬರೆದು ಕೊಡು ಎಂದಾಗ.. ಶಾಲೆಯ ಪರೀಕ್ಷೆಗಳು ಇದ್ದರೂ.. ಸಮಯ ಮಾಡಿಕೊಂಡು ಬಿಡಿಸಿದ ಈ ಚಿತ್ರದ ಸುತ್ತಲೂ ಈ ಲೇಖನವನ್ನು ಹೆಣೆಯಲು ಸ್ಫೂರ್ತಿ ನೀಡಿತು..  ಈ ಲೇಖನದ ಆಶಯವನ್ನು ಅರ್ಥೈಸಿಕೊಳ್ಳಲು ಓದುಗರಿಗೆ ಬಿಟ್ಟಿದ್ದೇನೆ ......ಶುಭವಾಗಲಿ)


ಕೃಪೆ : ಸೌಮ್ಯ ಭಾಗವತ್ ಫೇಸ್ಬುಕ್ ಫೋಟೋ 

Thursday, December 27, 2018

ತಾಯಿ ನಿಮಿಷಾಂಬಾ ...ನಿಮಿಷಾಂಬೆಯ ಸನ್ನಿದಿಯಲ್ಲಿ ಪದಗಳ "ನೆರೆ"

"ಮಹೇಶ ನನಗೊಂದು ಟವಲು ಹಾಕಿಬಿಡಿ.."
"ಅಣ್ಣ ಆಗಲೇ ಹಾಕಾಯ್ತು.. "
"ಅರೆ ನಾ ಈಗ ತಾನೇ ಹೇಳಿದ್ದು!!!"
"ನಿಮಗೋಸ್ಕರ ಟವಲ್ ಅಲ್ಲಿ ಹಾಕಿಬಿಟ್ಟಿದ್ದೇನೆ.." ಜೋರಾದ ನಗು..

ನನ್ನ  ಪಾಲಿಗೆ ಹೀಗೆ ಶುರುವಾಗಿದ್ದು.. ಪದಕಮ್ಮಟದ ನಾಲ್ಕನೇ ಆವೃತ್ತಿ..

ಚುಮುಚುಮು ಚಳಿಯಲ್ಲಿ ನಾಯಂಡಹಳ್ಳಿ ಮೆಟ್ರೋ ನಿಲ್ದಾಣದ ಹತ್ತಿರ ನಾನು ಗುರು, ಮತ್ತೆ ಗುರು ಜೂನಿಯರ್ ನಿಂತಿದ್ವಿ.. ನಾಗ್ ಅಲಿಯಾಸ್ ನಾಗೇಂದ್ರ ಬಂದ್ರು.. ಉಮೇಶ್ ಸರ್ ಬಂದ್ರು.. ಸಮರ್ಥ್ ನಮಗೆ ಕೊಂಚ ಮುಂಚೆ ಸಿಕ್ಕಿದ್ರು.. ಮಹೇಶ ಇದ್ದ ಟೆಂಪೋ ಟ್ರಾವೆಲ್ಲರ್ ನಮ್ಮ ಬಳಿ ಬಂದು ನಿಲ್ತು.. ಉಭಯಕುಶಲೋಪರಿ ಸಾಂಪ್ರತ ಮಾಡುತ್ತಲೇ.. ಒಳಗೆ ನುಗ್ಗಿದೆವು..

ಶ್ರೀ ರಾಜಕುಮಾರ್ ಅವರು ಆಗಲೇ ಆಸೀನರಾಗಿದ್ದರು.. ಪರಿಚಯವಾದ ನಂತರ ನಮ್ಮ ಬಂಡಿ ಹೊರಟಿತು.. ಇನ್ನೊಂದು ಬಂಡಿಯಲ್ಲಿ ಪ್ರವೀಣ್ ಭಟ್ ಸಂಪ, ಮಲ್ಲೇಶ, ಶ್ರೀನಿಧಿ ಸರ್, ಮೇಡಂ ಒಬ್ಬರು, ಚೌಡಯ್ಯ ಇದ್ದರು.. ಶ್ರೀರಂಗಪಟ್ಟಣದಲ್ಲಿ ಸಿಗೋಣ ಅಂತ ಗಾಡಿ ಬರ್ ಅಂತ ಹೊರಟೆ ಬಿಟ್ಟಿತು..

ಮಾತು ಮಾತು ಮಾತು ಬರಬಿಡದೆ ಸಾಗಿತ್ತು ಮಾತಿನ ಲಹರಿ.. ನಾಲ್ಕು ದಿನದ ಹಿಂದಷ್ಟೇ ಬಿಡುಗಡೆಯಾಗಿ ಬಾರಿ ಸದ್ದು ಮಾಡುತ್ತಿದ್ದ ಕೆ.ಜಿಎಫ್ ಚಿತ್ರದಿಂದ ಮಾತು ಆರಂಭವಾಯಿತು.. ಪ್ರಪಂಚದ ಎಲ್ಲಾ ವಿಷಯಗಳ ಬಗ್ಗೆ ಚರ್ಚೆ, ಹಾಸ್ಯ ಸಾಗಿತ್ತು..

ರಾಹುಲ್ ದ್ರಾವಿಡ್ ನನ್ನ ಇಷ್ಟದ ಆಟಗಾರ.. ಯಾವ ಪಿಚ್ ಇರಲಿ, ಯಾವುದೇ ಬೌಲರ್ ಇರಲಿ, ತಾಳ್ಮೆಯಿಂದ ಅದಕ್ಕೆ ತಕ್ಕ ಆಟವಾಡುತ್ತಿದ್ದರು.. ನಮ್ಮ ಬಂಡಿಯಲ್ಲಿದ್ದ ರಾಜಕುಮಾರ್ ಕೂಡ ಹಾಗೆ.. ಕ್ರಿಕೆಟ್, ಸಿನಿಮಾ, ಚುನಾವಣೆ, ರಾಜಕೀಯ, ಸಾಮಾನ್ಯ ವಿಷಯ ಯಾವುದೇ ಇರಲಿ ಅದ್ಭುತವಾಗಿ ಮಾತಾಡುತ್ತಿದ್ದರು.. ನಾನೂ ಮಾತಾಡುತ್ತಲೇ ಯೋಚಿಸುತ್ತಿದ್ದೆ ಯಾವ ವಿಷಯ ಮಾತಾಡೋಣ ಅಂತ.. ಶ್ರೀರಂಗ ಪಟ್ಟಣ ಬರುವ ತನಕ ಯೋಚಿಸುತ್ತಲೇ ಇದ್ದೆ.. ಕಾರಣ ಅಂಬರದ ಕೆಳಗೆ ಯಾವ ವಿಷಯವೇ ಆದರೂ ಅದ್ಭುತವಾಗಿ ಮಾಹಿತಿ ನೀಡುತ್ತಿದ್ದರು..

ಪದಕಮ್ಮಟದ ತಾಣಕ್ಕೆ ಬಂದೆವು.. ಆಗಲೇ ಬಿರುಸಿನ ಚಟುವಟಿಕೆ ನೆಡೆದಿತ್ತು..
ಪದಕಮ್ಮಟದ ತಾಣ 
ಸೊಗಸಾದ ಇಡ್ಲಿ, ವಡೆ, ಮತ್ತು ಪೊಂಗಲ್. .ಆಹಾ ಖಾರವಾದ ಚಟ್ನಿ.. ಸೂಪರ್ ಇತ್ತು.. ಆ ಚಳಿಗೆ ಮೆಣಸು ಸಿಗುತ್ತಿದ್ದ ಪೊಂಗಲ್ ಎರಡು ರೌಂಡ್ ಬಾರಿಸಿದೆವು..
ಚಳಿಗೆ ರುಚಿಕರವಾದ ತಿನಿಸು 
ಅಲ್ಲಿ ನೆಡೆಯುತ್ತಿದ್ದ ಸಿದ್ಧತೆಗಳಿಗೆ ನಾವು ಒಂದಷ್ಟು ಕೈಜೋಡಿಸಿದೆವು.. ಬಂದವರು ಸ್ವಾಗತ ಕಟ್ಟೆಯಲ್ಲಿ ನೋಂದಣಿ ಮಾಡಿಕೊಂಡು ಕಿರುಹೊತ್ತಿಗೆ, ಲೇಖನಿಗಳನ್ನ ತೆಗೆದುಕೊಂಡು ಆಸೀನರಾಗುತ್ತಿದ್ದರು ..ಬಂದವರ ಜೊತೆ ಮಾತು, ಒಂದು ಸೆಲ್ಫಿ.. ನಗು, ಹಾಸ್ಯ ಸಾಗಿತ್ತು..

ಆಲ್ವಾ.. ವಿಶ್ವಾಸವೇ ಪ್ರಗತಿಯ ಕಿರಣ!!!


ಸ್ವಾಗತ ಕಟ್ಟೆ 

ಬಂದ ಗೆಳೆಯರು

ಗುರುತಿನ ಬಿಲ್ಲೆ ಲಗತ್ತಿಸಿದ ಸಮಯ 
ಹಿರೇಮಗಳೂರಿನಿಂದ ಶ್ರೀ ಕಣ್ಣನ್ ಅವರು ಬರುವವರಿದ್ದರು.. ಅವರ ಬರುವಿಕೆಗಾಗಿ ಎಲ್ಲರೂ ಎದುರು ನೋಡುತ್ತಿದ್ದರು.. ಆ ಕ್ಷಣ ಬಂದೆ ಬಿಟ್ಟಿತು.. ಎಲ್ಲರೂ ಅವರನ್ನು ಸ್ವಾಗತಿಸಿ ಆಜಾದ್ ಸರ್ ಪದಕಮ್ಮಟದ ನೆನಪಿನ ಬಿಲ್ಲೆಯನ್ನು ಅವರ ಕೋಟಿಗೆ ಸಿಕ್ಕಿಸಿದಾಗ ಕಾರ್ಯಕ್ರಮಕ್ಕೆ ಒಂದು ಮಿಂಚಿನ ಗತಿ ಬಂದಿತು..

ಬಾಲು ಸರ್ ಅವರ ಸ್ಫೂರ್ತಿಯುತ ಸಿದ್ಧತೆ, ಮತ್ತು ಅದಕ್ಕೆ ಬೇಕಾದ ಸಲಕರಣೆಗಳು ಮತ್ತು ಸಹಾಯ ಹಸ್ತ ನೀಡುವವರು ಇದ್ದದರಿಂದ ಎಲ್ಲವೂ ಸುಗವಾಗಿ ಸಾಗಿತ್ತು.. ವೇದಿಕೆಗೆ ಮುಖ್ಯ ಅತಿಥಿಗಳನ್ನು ಸ್ವಾಗತಿಸಿದರು.. ಸುಸ್ವರದ ಗಾಯಕರಿಂದ ನಾಡಗೀತೆಯೊಂದಿಗೆ ಪದಕಮ್ಮಟದ ನಾಲ್ಕನೇ ಆವೃತ್ತಿ ಆರಂಭವಾಯಿತು.. ಶ್ರೀಮತಿ ವಾಣಿ ಅವರಿಂದ ಪ್ರಾರ್ಥನೆ ಗೀತೆ ಸೊಗಸಾಗಿತ್ತು..
ಪ್ರಾರ್ಥನೆ ಗೀತೆ - ಶ್ರೀಮತಿ ವಾಣಿ ಅವರಿಂದ 
ಸಭಾಂಗಣ ತುಂಬುತ್ತಲೇ ಇತ್ತು.. ಸ್ವಾಗತ ಕಟ್ಟೆಯಲ್ಲಿ ನೋಂದಣಿ ಮಾಡಿಕೊಳ್ಳುವವರ ಸಂಖ್ಯೆ ಏರುತ್ತಲೇ ಇತ್ತು.. ತಿಂಡಿ ಕಾಫಿ ಸಾಗಿತ್ತು.. ಜ್ಯೋತಿಯ ಬೆಳಗುವ ಮೂಲಕ ಸಾಂಕೇತಿಕವಾಗಿ ಶುರುವಾದ ಕಮ್ಮಟ ಸರಾಗವಾಗಿ ಸಾಗಿತು..
ದೀಪಂ ಜ್ಯೋತಿ ಪರಬ್ರಹ್ಮ 
ಶ್ರೀ ಜೆಬಿಆರ್ ಸರ್ ಅವರಿಂದ ಪ್ರಾಸ್ತಾವಿಕ ಭಾಷಣ ಮತ್ತು ಶ್ರೀ ನಾಗೇಂದ್ರ ಅವರಿಂದ ನಿರೂಪಣೆ ಒಳಗೊಂಡಿತ್ತು
ನಾಗ್ ಅಲಿಯಾಸ್ ನಾಗೇಂದ್ರ ನಿರೂಪಣೆಯಲ್ಲಿ 

ಜೆಬಿಆರ್ ಸರ್.. ಸುಂದರ ಮಾತಿನ ಶುರುವಾತು
ಶ್ರೀ ಕಣ್ಣನ್  ಅವರ ಜಲಲ ಜಲಲ ಧಾರೆಯ ನೆರೆ ಆ ಅಂಗಣವನ್ನು ತುಂಬಿತ್ತು.. ಸುಮಾರು ಒಂದು ಒಂದೂವರೆ ಘಂಟೆಗಳ ಕಾಲ ಅದ್ಭುತವಾಗಿ ಮಾತಾಡಿದ ಮಹನೀಯರು.. ಸುಮಾರು ಎರಡು ಸಾವಿರ ವರ್ಷಗಳ ಕಾಲಕ್ಕೆ ನಮ್ಮನ್ನು ಹಾಸ್ಯ ಬಂಡಿಯಲ್ಲಿ ಕೊಂಡೊಯ್ದದ್ದೆ ಅಲ್ಲದೆ.. ಕರುನಾಡಿನ ಭಾಷೆಯ ಎಲ್ಲೆಗಳನ್ನು ಪರಿಚಯಿಸಿದರು.. ಆಡು ಭಾಷೆ, ಗ್ರಾಮ್ಯ ಭಾಷೆ, ಶುದ್ಧ ಭಾಷೆ ಹೀಗೆ ಹತ್ತಾರು ವಿಧಗಳನ್ನು ಘಟನೆಗಳ ಆಧಾರದ ಮೇಲೆ ಹೇಳಿದ್ದು, ಅದಕ್ಕೆ ಹಾಸ್ಯ ಲೇಪನ ಬೆರೆಸಿದ್ದು ಸೊಗಸಾಗಿತ್ತು.. ಅಕ್ಷರಶಃ ಮಂತ್ರ ಮುಗ್ಧರಾಗಿ ಕೂತಿದ್ದವರೆಲ್ಲ ಮಾತು ಮುಗಿದಾಗ ಜೋರಾದ ಚಪ್ಪಾಳೆ ತಟ್ಟಬೇಕೆಂದು ಮರೆತುಹೋಗುವಷ್ಟು ತನ್ಮಯತೆಯಿಂದ ಇದ್ದರು.. ನಾ ಇಲ್ಲಿಗೆ ಮಾತು ಮುಗಿಸುತ್ತಿದ್ದೇನೆ.. ಶುಭವಾಗಲಿ ಎಂದಾಗಲೇ ಅರೆ ಮಾತು ಇಷ್ಟು ಬೇಗ ಮುಗಿದು ಹೋಯಿತೇ ಎಂದು ಅಚ್ಚರಿಪಡುವ ಹಾಗೆ ಆಗಿತ್ತು..

ಪದಗಳ ನೆರೆ
ಪದಗಳ ಪ್ರವಾಹ
ಪದಗಳ ಬಿರುಗಾಳಿ
ಪದಗಳ ಮಳೆಯನ್ನೇ ಹರಿಸಿದ ಆ ಸಮಯ ಅದ್ಭುತ ಎನ್ನಬಹುದು..

ಪದಕಮ್ಮಟದ ಸ್ಮರಣಿಕೆಯನ್ನು ಬಿಡುಗಡೆ ಮಾಡಿ ಎಲ್ಲರಿಗೂ ಹಂಚಿದರು... ಆ ಸ್ಮರಣಿಕೆಯನ್ನು ಸಿದ್ಧಪಡಿಸಿದ ಸಹಾಯ ಹಸ್ತಗಳಿಗೆ ನಮನ ಸಲ್ಲಿಸುತ್ತಾ ರಕ್ಷಾಪುಟವನ್ನು ಸಿದ್ಧಪಡಿಸಿದ ಸೃಷ್ಟಿಕರ್ತರಿಗೆ ಒಂದು ಸಲಾಂ ಹೇಳಿ ಕಾರ್ಯಕ್ರಮಕ್ಕೆ ತಿರುವು ನೀಡಿದರು..
ಸ್ಮರಣಿಕೆ ಬಿಡುಗಡೆ ಮಾಡಿದ ಸಮಯ 
ಅಲ್ಲಿಂದ ಶ್ರೀ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಅವರಿಂದ ಭಾಷೆ ವಿನಿಯೋಗ.. ... ಭಾಷೆ ಬೆಳೆದು ಬಂದಂತ ಹಾದಿ, ಅದಕ್ಕೆ ಇನ್ನೊಂದು ರೂಪ.. ಹೀಗೆ ತಮ್ಮ ಮೂಸೆಯಲ್ಲಿದ್ದ ವಿಷಯಗಳನ್ನು ಬಂದಿದ್ದವರಿಗೆ ತಲುಪಿಸಿದರು.. ಸೊಗಸಾದ ಕಾರ್ಯಕ್ರಮ ಹಂತಹಂತವಾಗಿ ಮೇಲೇರುತ್ತಿತ್ತು.. ಯಶ್ವಸಿಯಾಗುತ್ತಿತ್ತು..
ಶ್ರೀ ಶಂಕರ್ ನಾರಾಯಣ ಅವರ ಮಾತುಗಳು ಸೊಗಸು 
ಪ್ರಶ್ನೆ ಉತ್ತರಗಳ ಸಂವಾದ ನೆಡೆಯಿತು.. ತಮ್ಮ ಸಂದೇಹಗಳಿಗೆ ಉತ್ತರದ ಪೋಷಾಕುಗಳನ್ನು ಹೊದ್ದಿಸಿ ಸಂತಸ ಪಟ್ಟರು.

ಮುಂದೆ ಇದ್ದದ್ದು ಇದುವರೆಗೂ ಉತ್ತರ ಪ್ರದೇಶಕ್ಕೆ ಹೋಗಿದ್ದ ನಾವೆಲ್ಲರೂ ಮಧ್ಯ ಪ್ರದೇಶದ ಕರೆಗೆ ಓಗೊಟ್ಟು.. ಬಿಸಿ ಬೇಳೆ ಬಾತು, ಮೊಸರನ್ನ, ಉಪ್ಪಿನಕಾಯಿ, ಲಾಡುಗಳನ್ನು ಬೇಸರಿಸದೆ ಅದಕ್ಕೆ ದಾರಿ ತೋರಿಸಿದೆವು..
ಪುಷ್ಕಳ ಭೋಜನ 

ಇದರ ಮಧ್ಯೆ .. ಬಂದಿದ್ದವರ ಸ್ವ ಪರಿಚಯ ನೆಡೆಯಿತು.. ಊಟವಾದ ಮೇಲೆ. ... ನಾವು ಹೊರಟಿದ್ದು ಗಮಕದ ಶಾಲೆಗೇ.. ಶ್ರೀಮತಿ ವಿಜಯಮಾಲ ರಂಗನಾಥ್ ಅವರ ದನಿಯಲ್ಲಿ ಗಮಕದ ವಾತಾವರಣಕ್ಕೆ ಜಾರಿದೆವು..
ಗಮಕಿ ಮೇಡಂ ವಿಜಯಮಾಲ ರಂಗನಾಥ್ 

ಶ್ರೀ ಅನಾರ್ಕಲಿ ಸಲೀಮ್ ಅವರ ಮಾತುಗಳು.. ಅವರ ಪರಿಶ್ರಮ ಪದಕಮ್ಮಟದ ಯಶಸ್ಸಿಗೆ ಒಂದು ಕಾರಣ..

ಅನಾರ್ಕಲಿ ಸಲೀಂ ಮಾತುಗಳು ಸೂಪರ್ 

ಮಾಧ್ಯಮದ ಪ್ರತಿನಿಧಿಗಳು ಇಡೀ ದಿನ ನಮ್ಮ ಜೊತೆ ಇದ್ದದ್ದು ವಿಶೇಷವಾಗಿತ್ತು..
ಸುದ್ದಿಗಳು ಪಸರಿಸುವುದೇ ಇವರಿಂದ ಅಲ್ಲವೇ 

ಪುಸ್ತಕಗಳ ಸಾಮ್ರಾಟ್ ಎಂದೇ ಹೆಸರಾದ ಪುಸ್ತಕದ ಮನೆಯ ಶ್ರೀ ಅಂಕೇಗೌಡರು ಆಗಮಿಸಿದ್ದು ಪದಕಮ್ಮಟಕ್ಕೆ ಭೂಷಣವೆನಿಸಿತು. ಹತ್ತಲ್ಲ, ನೂರಲ್ಲ, ಸಾವಿರವಲ್ಲ, ಲಕ್ಷಗಟ್ಟಲೆ ಪುಸ್ತಕಗಳನ್ನು ಹೊಂದಿರುವ ಇವರು ನಿಜಕ್ಕೂ ಸರಸ್ವತಿ ಪುತ್ರರೇ ಹೌದು..
ಶ್ರೀ ಅಂಕೇಗೌಡರು 

ಹ ಹ ಹ.. ಕಾರ್ಯಕ್ರಮದ ಪಟಗ್ರಾಹಿಗಳು (ಅಜಾದ್ ಸರ್ ಮಾತಿನಲ್ಲಿ)

ಅಧ್ಯಕ್ಷತೆ ವಹಿಸಿದ್ದ ಶ್ರೀ ವಸಂತ್ ಕುಮಾರ್ ಪೆರ್ಲ ಅವರಿಂದ ಪದಕಮ್ಮಟಕ್ಕೆ ಶುಭನುಡಿಗಳು .. ಇಡೀ ದಿನದ ಕಾರ್ಯಕ್ರಮವನ್ನು ತಮ್ಮ ಅನುಭವದ ಮೂಸೆಯಲ್ಲಿ ರೂಪಿಸಿದ್ದು ಸೊಗಸಾಗಿತ್ತು..  ಅತಿಥಿಗಳ ಜೊತೆಯಲ್ಲಿ ಮಾತುಕತೆ, ಸಂವಾದ ಕಾರ್ಯಕ್ರಮದಲ್ಲಿ ಉತ್ತಮವಾಗಿ ತೊಡಗಿಸಿಕೊಂಡಿದ್ದ ಅಧ್ಯಕ್ಷರಿಗೆ ಧನ್ಯವಾದಗಳು.
ಶ್ರೀ ವಸಂತ್ ಕುಮಾರ್ ಪೆರ್ಲ ಸರ್ 

ಶ್ರೀ ಆಜಾದ್ ಅವರಿಂದ ಪದಕಮ್ಮಟದ ಬಗ್ಗೆ ಒಂದು ಸಿಂಹಾವಲೋಕನ.. ಮತ್ತೆ ಈ ಕಾರ್ಯಕ್ರಮಕ್ಕೆ ಸಹಾಯ ಹಸ್ತಗಳನ್ನು ನೀಡಿದ ಎಲ್ಲರಿಗೂ ಒಂದು ನೆನಪಿನ ಕಾಣಿಕೆ ಕೊಟ್ಟು ಗೌರವಿಸುವುದರಿಂದ ಈ ಕಾರ್ಯಕ್ರಮ ಸಂಪನ್ನವಾಯಿತು...
ಶಕ್ತಿ ಅಜಾದ್ ಸರ್ 


ಸಭಾಂಗಣದ ನೋಟ 

ಸಭಾಂಗಣದ ನೋಟ 
ಇದರ ಮಧ್ಯದಲ್ಲಿ ಬಾಲು ಸರ್ ಈ ಕಾರ್ಯಕ್ರಮದ ಯಶಸ್ಸಿಗೆ ಮತ್ತು ಅತಿಥಿಗಳನ್ನು ಆಹ್ವಾನಿಸುವ ಜವಾಬ್ಧಾರಿ ಹೊತ್ತಿದ್ದ ಸಹಾಯ ಹಸ್ತಗಳಿಗೆ ಅಭಿನಂದನೆ ಹಾಗೂ ಧನ್ಯವಾದಗಳನ್ನು ಸಲ್ಲಿಸಿದರು.. ಹಾಗೆಯೇ ಸಾಮಾಜಿಕ ಜಾಲತಾಣಗಳನ್ನು ಹೇಗೆ ಉಪಯುಕ್ತವಾಗಿ  ಸಮಾಜಕ್ಕೆ ಒಂದು ಕೊಡುಗೆಯಾಗಿ ನೀಡಬಹುದು ಮತ್ತು ಭಾಷೆಯ ಉಪಯುಕ್ತತೆಯನ್ನು ಹೇಗೆ ತಲುಪಿಸಬಹುದು ಎನ್ನುವುದನ್ನು ತಿಳಿಸಿದರು..
ಕಾರ್ಯಕ್ರಮದ ಸಜ್ಜಿಕೆಯ ರೂವಾರಿ ಮತ್ತು ಶಕ್ತಿ 
ಬಂದವರನ್ನೆಲ್ಲ ಒಂದು ಚೌಕಟ್ಟಿನಲ್ಲಿ ಬಂಧಿಸಬೇಕೆಂಬ ನಮ್ಮೆಲ್ಲರ ಹಂಬಲಕ್ಕೆ ತಲೆಬಾಗಿ ವೇದಿಕೆಯನ್ನು ಆಕ್ರಮಿಸಿಕೊಂಡೆವು.. ಒಂದು ಸುಂದರ ಗುಂಪಿನ ಸೊಗಸಾದ ಚಿತ್ರ ನಮ್ಮೆಲ್ಲರ ಕಣ್ಮನಗಳಲ್ಲಿ ದಾಖಲಾಯಿತು..
ಒಂದು ಗುಂಪು.. ಪದಕಮ್ಮಟದ ಗುಂಪು 

ಸಪ್ಪೆ ಎನಿಸಿತಾ.. ಇರಿ ಸರ್.. ಇದು ಪದಕಮ್ಮಟದ ಕಾರ್ಯಕ್ರಮ ವಿವರ..

ಮುಂದೈತೆ ತಮಾಸೆ ಅಬ್ಬಾ!!!

ತುಂಟ ಸದಸ್ಯರ ಗುಂಪೇ ಇರುವಾಗ ಹಾಸ್ಯಕ್ಕೆ ಕೊರತೆಯೇ.. ಮಲೆನಾಡಿನಲ್ಲಿ ಸಿಕ್ಕ ಸಿಕ್ಕಲ್ಲೆ ಹೊರಹುಮ್ಮುವ ನೀರಿನ ಒರತೆಯಂತೆಯೇ ಕ್ಷಣ ಕ್ಷಣಕ್ಕೂ ಹಾಸ್ಯದ ಝರಿ ಉಗಮವಾಗುತ್ತಲೇ ಇತ್ತು..
ಮಹಿಷಾಸುರ 

ಬಕಾಸುರಾಸ್ 

ಕಸ್ತೂರಿ ನಿವಾಸದವರು 

ಒಂದೇ ತಟ್ಟೆ ಮೂರು ಬಾಯಿ

ಎತ್ತಿಕೋ ಚಳುವಳಿ 

ಕಷ್ಟ ಪಟ್ಟು ಎತ್ತಿಕೋ ಚಳುವಳಿ 

ಅಪ್ಪ ಮಗನ ಜುಗಲ್ ಬಂದಿ 

ಲೆಕ್ಕ ಬಿಡಿಸಿದ ಪ್ರವೀಣ್ ಮಾಸ್ತರು 

ಬಿಡಿಸಿದ ಲೆಕ್ಕವನ್ನು ವಿವರಿಸಿದ ಮಲ್ಲೇಶ್ ಸಾರು 

ಎಷ್ಟೋ ಬಾರಿ ನಮ್ಮ ಅಬ್ಬರದ ನಗು ಕಾರ್ಯಕ್ರಮದ ಲಹರಿಗೆ ಅಡಚಣೆಯಾಗಿ. ಅಲ್ಲಿದ್ದವರು ಕೈಯೆತ್ತಿ.. ಸನ್ನೆ ಮಾಡಿ ನಿಶ್ಯಬ್ಧ ಎಂದು ಹೇಳಿದ್ದುಂಟು.. ಆದರೆ ಹರಿಯುವ ನೀರಿಗೆ ಯಾರು ಹೊಣೆ.. ಹಾರುವ ಹಕ್ಕಿಗೆ ಎಲ್ಲಿ ಮನೆ.. ಎಂಥ ಮರುಳಯ್ಯ ಇದು ಎಂಥಾ ಮರುಳು ಎನ್ನುವ ಹಾಗೆ ಆ ಕ್ಷಣಕ್ಕೆ ಸುಮ್ಮನಾದರೂ.. ಮತ್ತೆ ನಲ್ಲಿಯ ನೀರು ಜೋರಾಗಿ ನುಗ್ಗಿ ಬರುವ ಹಾಗೆ ಮತ್ತೆ ಶುರುವಾಗುತ್ತಿತ್ತು ನಮ್ಮ ತರಲೆಗಳು..

ಅಲ್ಲಿದ್ದ ಫಲಕಗಳು ಹಾಸ್ಯಕ್ಕೆ ಅಡಿಪಾಯ ಹಾಕಿದ್ದವು.. ಅದನ್ನೇ ಪ್ರಾಪರ್ಟಿಯಾಗಿ ಉಪಯೋಗಿಸಿಕೊಂಡು ಹಲ್ಲು ಬಿಡಲು ನೂರಾರು ಕಾರಣಗಳು ಸಿಕ್ಕಿದವು.. ಊಟ ಮಾಡುವಾಗ ತರಲೆ, ಕೂತಿದ್ದಾಗ ತರಲೆ..ಹೀಗೆ ಸಾಗಿತ್ತು ನಮ್ಮ ಪಯಣ..

ನಿಮಿಷಾಂಬ ದೇವಾಲಯ ಹತ್ತಿರದಲ್ಲಿಯೇ ಇದೆ.. ಹೋಗಿ ಬರೋಣ ಅಂತ ಹೊರಟೆವು.. ಆದರೆ ಆ ತಾಯಿ ತನ್ನ ಒಡಲಲ್ಲಿ ಈ ಭಕ್ತರಿಗೆ ಇಟ್ಟುಕೊಂಡಿದ್ದ ಪ್ರಸಾದ ನಮಗೆ ಕಂಡಿರಲಿಲ್ಲ..

ದೇವಸ್ಥಾನಕ್ಕೆ ಹೋದೆವು. ದರುಶನ ಪಡೆದೆವು.. ತಾಯಿಗೆ ನಮಿಸಿ.. ಮನದಲ್ಲಿದ್ದ ಅರ್ಜಿಗಳನ್ನು ಗುಜರಾಯಿಸಿ.. ಹೊರಕ್ಕೆ ಬಂದೆವು. .. ಅಲ್ಲೊಬ್ಬ Voot ಅಪ್ಲಿಕೇಶನ್ ನಲ್ಲಿ ಬಿಗ್ ಬಾಸ್ ನೋಡುತ್ತಿದ್ದವ ಅಚಾನಕ್ ಆಗಿ.. ಲೋ ಓಡ್ರಪ್ಪ.. ತಮಿಳುನಾಡಿನಲ್ಲಿ ಪ್ರವಾಹ ಬತ್ತೈತಂತೆ ಅಂದಾಗ.. ನಾವು ಸುಮ್ಮನೆ ಅಯ್ಯೋ ತಲೆ ಕೆಟ್ಟಿರಬೇಕು ಆತನಿಗೆ ಅಂದು ಕೊಂಡೆವು....ತಮಿಳುನಾಡಿನಲ್ಲಿ ಪ್ರವಾಹ ಬಂದರೆ ನಾವ್ಯಾಕೆ ಓಡಬೇಕು ಎನ್ನುವುದು ನಮ್ಮ ಲಾಜಿಕ್!!!

ನದಿ ಹತ್ತಿರ ಒಂದು ಸೆಲ್ಫಿ ಅಂತ ನಿರ್ಧಾರಮಾಡಿದೆವು..

ಸರಿ ಎಲ್ಲರೂ ನದಿಯ ಕಡೆಗೆ ನೆಡೆದೆವು.. ಮೊಬೈಲ್ ನೋಡುತ್ತಿದ್ದವ.. ಬ್ಯಾಡ ಕನ್ರಲಾ.. ನೆರೆ ಬತ್ತೈತೆ.. ಕಾವೇರಿ ನದಿಯಲ್ಲಿ ಪ್ರವಾಹ ಬತ್ತೈತೆ... ಅಂದಾಗಲೂ ನಾವು ತಲೆ ಕೆಡೆಸಿಕೊಳ್ಳದೆ.. ಮಳೆ ಇಲ್ಲ ಮುಸುಡಿ ಇಲ್ಲ.. ಪ್ರವಾಹ ಎಲ್ಲಿ ಬತ್ತೈತೆ ಎಂದುಕೊಂಡು .. ಸಮಯವಿದ್ದಿದ್ದರೆ ತೆಪ್ಪದಲ್ಲಿ ಒಂದು ಸುತ್ತು ಹೋಗಬಹದಿತ್ತು ಅಂದು ಕೊಂಡೆವು ಆದರೆ ಸಮಯವಿರಲಿಲ್ಲ..

ಅಚಾನಕ್ ಆಗಿ ನೀರಿನ ಮಟ್ಟ ಏರಿತು.. ನಮ್ಮ ಮಲ್ಲೇಶ ಮತ್ತು ನಾಗರಾಜ್ ಜೊತೆಯಲ್ಲಿ ಪ್ರವೀಣ್ ನದಿಯಿಂದ ಒಬ್ಬರನ್ನು ಎಳೆದು ದಡಕ್ಕೆ ತಂದರು..

ಯಾರವಳು.. ಯಾರವಳು?
ಆ ವೀರ ವನಿತೆ ಆ ಲಕ್ಷ್ಮವ್ವ
ನಿಮಿಶಾಂಬ ಮರೆಯದ ಲಕ್ಷಮ್ಮವ್ವ
ಕನ್ನಡ ನಾಡಿನ ವೀರ ರಮಣೀಯ
ಪದಕಮ್ಮಟದ ಸ್ವಾಗತಕಾರಣಿಯ ಚರಿತೆಯ ನಾನು ಹಾಡುವೆ..
ನೋಯದೆ ನೆಂದ ತಂಡ 
ತಲೆ ಮೇಲೆ ಏನೋ ಬಿತ್ತು.. ನೋಡಿದರೆ ತನ್ನ ಬಟ್ಟೆಯಂತೆ ಮುಖವನ್ನು ಕೆಂಪಗೆ ಮಾಡಿಕೊಂಡಿದ್ದ ಲಕ್ಷ್ಮಿಪ್ರಿಯ ಅಲಿಯಾಸ್ ಡಿಟಿಪಿ ಒನಕೆ ಓಬವ್ವನಿಗಿಂತ ರುದ್ರವ್ವ ಆಗಿದ್ದಳು ಎಂಬಲ್ಲಿಗೆ ಪದಕಮ್ಮಟದ ಈ ಲೇಖನ ಸಮಾಪ್ತಿಯಾಯಿತು!!!

Wednesday, December 19, 2018

ಆಹ್ಲಾದ ಕೊಟ್ಟ ಒಂದು ದಿನ 16-Dec-2018!!!

"ಶ್ರೀಕಾಂತಾ ಭಾನುವಾರ ಹೀಗಿದೆ ಒಂದು ಕಾರ್ಯಕ್ರಮ.. ಬಾ ನೀನು ನಿನಗೆ ಇಷ್ಟವಾಗುತ್ತದೆ.. " ನನ್ನ ಸಹೋದರ ರಜನೀಶನ ಕರೆಗೆ ಒಪ್ಪಿಕೊಂಡಿದ್ದೆ..

ಕೆಲವು ಬಾರಿ ಹೀಗಾಗುತ್ತದೆ.. ಯಾವ ಕಾರ್ಯಕ್ರಮ, ಏನು ಅದರ ವಿಶೇಷ, ಯಾರ್ಯಾರು ಬರ್ತಾರೆ ಏನೂ ಗೊತ್ತಿರೋಲ್ಲ / ಗೊತ್ತುಮಾಡಿಕೊಳ್ಳುವ ಪ್ರಯತ್ನ ನಾ ಮಾಡೋಲ್ಲ..ಸುಮ್ಮನೆ ಆ ಕ್ಷಣವನ್ನು ಸುಖಿಸುವ ಮನಸ್ಥಿತಿ ಹೊತ್ತು ಹೋಗುತ್ತೇನೆ.. ಭಾನುವಾರ ಕಿಕ್ಕಿರಿದು ಸೇರಿಕೊಂಡಿದ್ದ ಎರಡು ಕಾರ್ಯಕ್ರಮಗಳು ಒಂದು ರಜನೀಶ ಹೇಳಿದ ಕಾರ್ಯಕ್ರಮ (ಇನ್ನೂ ಹೇಳಿಲ್ಲ ಆಲ್ವಾ ನಾನು :-) ) ಇನ್ನೊಂದು ನನ್ನ ನೆಚ್ಚಿನ ೩ಕೆ ತಂಡದಿಂದ ಆಚರಿಸುವ ರಾಜ್ಯೋತ್ಸವ.. ೩ಕೆ ಕಾರ್ಯಕ್ರಮದ ಬಗ್ಗೆ ನಿಮಗೆಲ್ಲಾ ಕಿವಿ ತೂತಾಗುವಷ್ಟು ಹೇಳಿದ್ದೇನೆ.. ಹಾಗಾಗಿ ಮತ್ತೆ ನಿಮಗೆಲ್ಲ ಬೋರ್ ಹೊಡೆಸೋಲ್ಲ

ಅಕ್ಕ ಬರ್ತೀನಿ ಅಂದ್ಲು, ಅಣ್ಣ ಬರ್ತೀನಿ ಅಂದ.. ನಮ್ಮ ಚಿಕ್ಕಪ್ಪ ಬರ್ತಾ ಇದ್ದೀನಿ ಅಂದ್ರು, ನನ್ನ ಸಹೋದರ ಮಡದಿ ಸುಮಾ ಮಾತೆ ಬರ್ತೀನಿ ಅಂದಿದ್ರು.. ಆ ಕಾರ್ಯಕ್ರಮದ ಸ್ಥಳಕ್ಕೆ ಅಕ್ಕನ ಜೊತೆಯಲ್ಲಿ ಹೋದಾಗ , ಅಣ್ಣ, ಚಿಕ್ಕಪ್ಪ, ಸುಮಾ ಮಾತೆ, ಮತ್ತು ರಜನೀಶ ಸಿಕ್ಕಿದರು..

ಭಾನುವಾರದ ಚಳಿ ಚಳಿ... ಬಿಸಿಬಿಸಿ ರುಚಿ ರುಚಿ ಉಪ್ಪಿಟ್ಟು.. ಕೇಸರಿಬಾತ್ ವಾಹ್.. ರುಚಿಯಾಗಿತ್ತು.. ಮಾತಾಡುತ್ತಾ ಕೆಲವು ಆತ್ಮೀಯರ ಪರಿಚಯ ಮಾಡಿಕೊಂಡು.. ಒಂದು ಕೋಣೆಯೊಳಗೆ ಸೇರಿಕೊಂಡಾಗ ಕಾರ್ಯಕ್ರಮದ ಪೂರ್ಣ ವಿವರ ಸಿಕ್ಕಿತು..

ಶಾಲಾ ಮಕ್ಕಳಿಗೆ ನಮ್ಮ ಭವ್ಯ ಗ್ರಂಥಗಳಾದ ಶ್ರೀ ಮಹಾಭಾರತ ಮತ್ತು ಶ್ರೀ ರಾಮಾಯಣದ ಬಗ್ಗೆ ಅರಿವು ಮೂಡಿಸುವ ಸಲುವಾಗಿ  ಪರೀಕ್ಷೆಗಳನ್ನು ಏರ್ಪಡಿಸುತ್ತಾರೆ.. ಆ ಮಕ್ಕಳು ಉತ್ಸಾಹದಿಂದ ಬರೆದ ಉತ್ತರ ಪತ್ರಿಕೆಯ ಮೌಲ್ಯಮಾಪನ ಮಾಡುವ ಕಾಯಕಕ್ಕೆ ಅಳಿಲು ಸೇವೆ ಮಾಡೋದು ನಮ್ಮ ಕೆಲಸವಾಗಿತ್ತು.. ಕರ್ನಾಟಕದಿಂದ ಸುಮಾರು ೬೦-೬೫ ಸಾವಿರ ವಿದ್ಯಾರ್ಥಿಗಳು ಬರೆದ ಉತ್ತರಪತ್ರಿಕೆಯನ್ನು ಅಂಕ ಎನ್ನುವ ಕಲ್ಲಿಗೆ ಒರೆ ಹಚ್ಚುವ ಕೆಲಸ..

ಶಾಲಾದಿನಗಳಲ್ಲಿ ನಾವು ಓದಿರಲಿ ಓದದೇ ಪರೀಕ್ಷೆ ಬರೆದಿರಲಿ.. ಅಂಕಗಳು ಕಡಿಮೆ ಬಂದಾಗ.. ಮೇಷ್ಟ್ರು ಯಾವುದೋ ಕೆಟ್ಟ ಮನಸ್ಥಿತಿಯಲ್ಲಿ ಅಂಕ ಕೊಟ್ಟಿದ್ದಾರೆ ಇನ್ನೊಂದು ಹತ್ತು ಅಂಕ ಕೊಟ್ಟಿದ್ದಾರೆ ಅವರ ಆಸ್ತಿಯೇನು ಕರಗುತ್ತಿತ್ತೇ. .ಹೀಗೆ ಅನೇಕ ರೀತಿಯ ಯೋಚನೆಗಳು ಮಾತಾಗಿ ಹೊರಬರುವುದು ಸರ್ವೇಸಾಮಾನ್ಯ.. ಅಂದು ನಾವು ಆ ಚಾಲಕನ ಕುರ್ಚಿಯಲ್ಲಿ ಕೂತಾಗ ಅರಿವಾಗಿತ್ತು.. ಆ ಕಷ್ಟದ ಪರಿ.. :-)

ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಬರೆದ ಉತ್ತರ ಪತ್ರಿಕೆಗಳು.. ಅದಕ್ಕೆ ಮಾದರಿ ಉತ್ತರ ಹೊಂದಿದ್ದ ಪ್ರಶ್ನೆ ಪತ್ರಿಕೆ.. ಅಂಕ ಪಟ್ಟಿ.. ಪ್ರಶ್ನೆ ಪತ್ರಿಕೆ ಇವೆಲ್ಲವನ್ನೂ ಕೊಟ್ಟು ಜೊತೆಗೆ ಕೆಂಪು ಬಣ್ಣದ ಲೇಖನಿಯನ್ನು ಕೊಟ್ಟು ಶ್ರೀ ಸತೀಶ್ ಅವರು ಹೇಗೆ ಮೌಲ್ಯಮಾಪನ ಮಾಡಬೇಕು ಎನ್ನುವ ಒಂದು ಪುಟ್ಟ ತಿಳುವಳಿಕೆ ಕೊಟ್ಟರು..

ಆಯ್ಕೆ ನಮ್ಮದಾಗಿತ್ತು ಭಾರ ಹೊರಬಹುದಾದ ಮಹಾಭಾರತವೋ ಅಥವಾ ನಮ್ಮ ಬದುಕಿನ ರಾಮಾಯಣದ ಜೊತೆಗೆ ಶ್ರೀ ರಾಮಾಯಣವೋ..

ನನಗೂ ಒಂದು ಪುಟ್ಟ ಕವರ್ ಕೊಟ್ಟರು.. ನಾ ಶುರು ಮಾಡಿದೆ.. ಕೊನೆಯಲ್ಲಿ ಲಘುವಾಗಿ ನಗು, ಹಾಸ್ಯದ ಜೊತೆಗೆ ಮೌಲ್ಯ ಮಾಪನ ಶುರುವಾಯಿತು.. ವಿದ್ಯಾರ್ಥಿಗಳು ಉತ್ತರಿಸಿದ ರೀತಿ ಕೆಲವೊಮ್ಮೆ ನಗು ತಂದರೂ ಅವರ ಕ್ರಿಯಾಶೀಲತೆಗೆ ಉದಾಹರಣೆಯಾಗಿತ್ತು.. ಜೊತೆಯಲ್ಲಿ ನಮ್ಮ ಧರ್ಮಗ್ರಂಥಗಳು ಎಂದು ಪ್ರಪಂಚವೇ ಒಪ್ಪುವ ಈ ಪೌರಾಣಿಕ ಕಥೆಗಳನ್ನು ಸಮಾಜದ ಮೂಲೆ ಮೂಲೆಗೂ ತಲುಪಿಸಿ ಇನ್ನಷ್ಟು ಹೆಚ್ಚಿನ ಅರಿವು ಮೂಡಿಸಬೇಕು ಎನ್ನುವ ಅಂಶವೂ ಹೊಳೆಯಿತು..

ನನಗೆ ತುಂಬಾ ಇಷ್ಟವಾದ ಉತ್ತರ :
ಗಾಂಧಾರಿಗೆ ಆ ಹೆಸರು ಬರಲು ಕಾರಣವೇನು?
ಆಕೆ ಗಂಧ ಹಚ್ಚಿಕೊಳ್ಳುತ್ತಿದ್ದರಿಂದ ಗಾಂಧಾರಿ ಎಂದು ಹೆಸರು ಬಂತು.. !

ಇನ್ನೊಬ್ಬರು ಮೇಡಂ ಹೇಳುತ್ತಿದ್ದರು.. : ರಾಮಾಯಣದ ಒಂದು ಪ್ರಶ್ನೆಗೆ ಹುಡುಗ ಬರೆದ ಉತ್ತರ
(ಆ ಹುಡುಗನಿಗೆ ಏನು ಬರೆಯಬೇಕು ಎಂಬ ಗೊಂದಲವಿತ್ತು ಅನ್ನಿಸುತ್ತೆ) ಇದು ಯಾರು ಬರೆದ ಕಥೆಯೋ ನನಗಾಗಿ ಬಂಡ ವ್ಯಥೆಯೋ :-)

ಸುಂದರ ಸಮಾಗಮದ ದಿನ.. ಒಂದು ವಿಭಿನ್ನ ಅನುಭವ ಕೊಟ್ಟ ದಿನವಾಗಿತ್ತು.. ಜೊತೆಯಲ್ಲಿ ಫೇಸ್ಬುಕ್ ಪರಿಚಯದ ಸ್ವರ್ಣ ಪುಟ್ಟಿ ಅಲ್ಲಿ ಸಿಕ್ಕಿದ್ದು ಮಾತಾಡಿದ್ದೂ ವಿಶೇಷ..

ಊಟ ಸೊಗಸಾಗಿತ್ತು.. ಬಿಸಿಬೇಳೆ ಬಾತ್, ಮೊಸರನ್ನ, ಉದ್ದಿನ ವಡೆ, ಖಾರವಾದ ಚಟ್ನಿ, ಪಾಯಸ .. ಆಹಾ ಏನೋ ಹೇಳೋದು.. ಸೊಗಸು ಸೊಗಸು.. ಭಾನುವಾರದ ಅರ್ಧ ದಿನವನ್ನು ಸಾರ್ಥಕವಾಗಿ ವಿಭಿನ್ನ ಅನುಭವದೊಂದಿಗೆ ಕಳೆದ ಖುಷಿ ನನ್ನದಾಗಿತ್ತು..

ಅಲ್ಲಿಂದ ನೆಡೆದದ್ದು ೩ಕೆ ರಾಜ್ಯೋತ್ಸವಕ್ಕೆ (ಬೆಚ್ಚಿ ಬೀಳದಿರಿ.. ಮತ್ತೆ ಅದನ್ನೇ ಹೇಳಿ ಕೊರೆಯೋಲ್ಲ)

ಬಹುರಾಷ್ಟ್ರೀಯ ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿರುವ ಶ್ರೀಕಾಂತ್ ಮಂಜುನಾಥ್ ಈ ಚಿತ್ರದ ಬಗ್ಗೆ ಹೇಳುವ ಕವನವನ್ನು ಅವರ ಬಾಯಲ್ಲಿಯೇ ಕೇಳೋಣ ಎಂದು ನನ್ನ ಗೆಳೆಯ ನೂತನ್ ಹೇಳಿದಾಗ ಕೈಲಿದ್ದ ಕ್ಯಾಮೆರಾ ನನ್ನ ಮಗಳಿಗೆ ಕೊಟ್ಟು ಆರಾಮಾಗಿ ವೇದಿಕೆ ಹತ್ತಿದೆ..

"ಎಲ್ಲರಿಗೂ ನಮಸ್ಕಾರ" (ಗಂಟಲು ಕೆಳಗೆ ಕೂತಿತ್ತು,  ಸರಿ ಮಾಡಿಕೊಂಡು)
ನಮ್ಮ ಮನ ಮನೆಯಲ್ಲಿ ಸದಾ ನೆಲೆಸಿರುವ ಹರಿಣಿ ಮೇಡಂ ಯಾವಾಗಲೂ ಹೇಳುತ್ತಿದ್ದರು .. ಶ್ರೀಕಾಂತ ಪೀಠಿಕೆ ಇಲ್ಲದೆ ನೀನು ಏನೂ ಹೇಳೊಲ್ಲ.. ಅದೇ ಅಪವಾಧ, ಆಪಾದನೆ,  ಪ್ರಶಂಸೆ ಹೊತ್ತು ಶುರು ಮಾಡುತ್ತೇನೆ .. ನನಗೆ ಬಂದ ಭಾವಕ್ಕೆ ಒಂದಷ್ಟು ವಿಚಿತ್ರ ಪದಗಳನ್ನು ಸೇರಿಸಿ ಇದನ್ನು ಮಾಡಿದ್ದೇ, ನೀವು ಅದನ್ನೇ ಮಾಡಿ, ಕೇಳಿ, ನೋಡಿ....


ಮೊದಲಿಗೆ ಶಶಿಕಿರಣ್ ಮುಲ್ಲೂರು ಸೆರೆ ಹಿಡಿದ ಈ ಚಿತ್ರ ತುಂಬಾ ಮನಸ್ಸಿಗೆ ತಾಕೀತು.. ಈ ಚಿತ್ರದಲ್ಲಿ ಏನೋ ಇದೆ ಎನ್ನುವ ವಿಚಾರಗಳು ಮನದಲ್ಲಿ ಮೂಡಿದವು.. ರವಿ ಕಾಣದ್ದನ್ನು ಕವಿ ಕಂಡ.. ಕವಿ ಕಾಣದನ್ನು ಈ ಕಪಿ ಕಂಡ .. ಕಪಿ ಅಂದರೆ ಕನ್ಯಾ ಪಿತೃ ನನ್ನ ಮಗಳಿಗೆ ತಂದೆ..

(ಕಿಸಿಕಿಸಿ ನಕ್ಕರು ಅಲ್ಲಿದ್ದವರು)

ಕಾನೂನು ಬಲ್ಲವರು..
ಕಾನೂನಿನ ಸಲಹೆಗಾರರು
ಸುಮ್ಮನೆ ಕುಳಿತಿಹರೆ?
ಇಲ್ಲಾ ಇಲ್ಲಾ .. !

(ಖಂಡಿತ ಇಲ್ಲ.. ಸುಮ್ಮನೆ ಕೂತಿಲ್ಲ)

ಗೋಡೆ ಶಿಥಿಲವಾಗಿದೆ,
ಬಾಗಿಲು ಹಳೆಯದಾಗಿದೆ,
ಅದಕ್ಕೆ ತಗಲಾಕಿದ ಬೀಗ ಪುಟ್ಟದಾಗಿದೆ!

(ಗೋಡೆ ಶಿಥಿಲವಾಗಿದೆ, ಬಾಗಿಲು ಹಳೆಯದು ಆದರೂ ಅಲ್ಲೊಂದು ಆಶಾ ಭಾವವಿದೆ.. ಬಾಗಿಲಿಗೆ ಹಾಕಿದ ಬೀಗ ಪುಟ್ಟದಾಗಿದೆ ಅಂದರೆ.. ಸಮಸ್ಯೆಗಳು ದೊಡ್ಡದಾಗಿರಬಹುದು ಆದರೆ ಅದಕ್ಕೆ ಪರಿಹಾರ ಪುಟ್ಟದಾಗಿರುತ್ತದೆ ಎನ್ನುವ ಭಾವನೆ ನನಗೆ ಕಾಣಿಸಿತು)

ಬಾಗಿಲುಗಳು ಅಳಕವಾಗಿದೆ,
ಹಾಕಿದ ಬೀಗದ ಹಂಗಿಲ್ಲ,
ಚಿಲಕ ನಿಲ್ಲೋಲ್ಲ !

(ಬಾಗಿಲುಗಳು ಸಡಿಲವಾಗಿದೆ, ಬೀಗದ ಹಂಗಿಲ್ಲ.. ಚಿಲಕವಿಲ್ಲದಿದ್ದರೆ ಬೀಗಕ್ಕೆ ಬೆಲೆಯಿಲ್ಲ)

ಕಾನೂನು ಬಲ್ಲವರು..
ಕಾನೂನಿನ ಸಲಹೆಗಾರರು
ಸುಮ್ಮನೆ ಕುಳಿತಿಹರೆ?
ಇಲ್ಲಾ ಇಲ್ಲಾ .. !

(ಖಂಡಿತ ಇಲ್ಲ ಎಂದು ಹೇಳುತ್ತೇನೆ)

ಅಲ್ಲೊಂದು ಆಶಾಭಾವವಿದೆ
ಅಲ್ಲೊಂದು ಉತ್ಸಾಹವಿದೆ
ಅಲ್ಲೊಂದು ಚೈತನ್ಯವಿದೆ!

ಬಾಗಿಲಿಗೆ ಸಿಕ್ಕಿಸಿದ ಅಂಚೆ ಪೆಟ್ಟಿಗೆ,
ಬಾಗಿಲ ಕೊನೆಯಲ್ಲಿ ಅರಳುತ್ತಿರುವ ಗಿಡ,
ಗೋಡೆ, ಬಾಗಿಲುಗಳನ್ನ ಕಾಯುತ್ತಿರುವ ಕಂಡೂ ಕಾಣದಂತಿರುವ ಚಾವಣಿ!

(ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲೊಂದು ಪುಟ್ಟ ಗಿಡ ಅರಳುತ್ತಿದೆ.. )

ಕಾನೂನು ಬಲ್ಲವರು..
ಕಾನೂನಿನ ಸಲಹೆಗಾರರು
ಸುಮ್ಮನೆ ಕುಳಿತಿಹರೆ?
ಇಲ್ಲಾ ಇಲ್ಲಾ .. !

(ಖಂಡಿತ ಇಲ್ಲ ಇಲ್ಲ ಎಂದು ಹೇಳುತ್ತೇನೆ)

ಅಂಚೆ ಡಬ್ಬದ ಕೇಸರಿ ಬಣ್ಣ,
ಬಾಗಿಲ ಕೊನೆಯಲ್ಲಿ ಹಸಿರು ವರ್ಣ,
ಗೋಡೆಗೆ ಬಳಿದಿರುವ ಬಿಳಿ ರಂಗು,
ಮಾಸಲಾಗಿದ್ದರೂ ಕಾಣುವ ನೀಲಿ,
ನಮ್ಮ ಧ್ವಜವನ್ನೇ ಹೋಲುತ್ತದೆ ಅಲ್ಲವೇ!

(ಇಷ್ಟಾದ ಮೇಲೆ.. ಅಂಚೆ ಡಬ್ಬದ ಬಣ್ಣ ಕೇಸರಿ, ಗಿಡ ಬಣ್ಣ ಹಸಿರು, ಗೋಡೆಯ ಬಣ್ಣ ಬಿಳಿ, ನೀಲಿ ಬಣ್ಣವಿದೆ.. ಇದೆಲ್ಲ ನೋಡಿದಾಗ ೧೯೪೭ ಇಂದ ನಮಗೆ ಗೊತ್ತಿರೋದು ಈ ಬಣ್ಣಗಳು ನಮ್ಮ ಧ್ವಜದ ಸಂಕೇತ.. )

ಕಾನೂನು ಬಲ್ಲವರು..
ಕಾನೂನಿನ ಸಲಹೆಗಾರರು
ಸುಮ್ಮನೆ ಕುಳಿತಿಹರೆ?
ಇಲ್ಲಾ ಇಲ್ಲಾ .. !

(ಖಂಡಿತ ಇಲ್ಲ ಇಲ್ಲ)

ಶಿಥಿಲವಾದದನ್ನು ಬಿಗಿ  ಮಾಡುತ್ತಿದ್ದಾರೆ
ನಮ್ಮ ಧ್ವಜದ ಮತ್ತೆ ಹಾರಾಡಲು ಸಿದ್ಧವಾಗುತ್ತಿದೆ
ನಮ್ಮ ದೇಶದ ಪ್ರಗತಿಯ ಪಥದಿ ಸಾಗುತ್ತಿದೆ
ಎಂಬ ಭಾವವನ್ನು ಬಿತ್ತರ ಮಾಡುತ್ತಿದ್ದಾರೆ
(Present condition ಗಮನಿಸಿದಾಗ ಬೆಳವಣಿಗೆಯ ಹಾದಿಯಲ್ಲಿದೆ.. ಇದು political agenda ಅಲ್ಲ.. ನಮ್ಮ ದೇಶ ಸಾಗುತ್ತಿರುವ ಹಾದಿ ಎಂದು ಹೇಳುತ್ತೇನೆ)

ಕಾನೂನು ಬಲ್ಲವರು..
ಕಾನೂನಿನ ಸಲಹೆಗಾರರು
ಸುಮ್ಮನೆ ಕುಳಿತಿಲ್ಲ
ಸುಭದ್ರ ಭಾರತಕ್ಕೆ ಅಡಿಪಾಯ ಹಾಕುತ್ತಿದ್ದಾರೆ!!!

(ಖಂಡಿತ ಸುಮ್ಮನೆ ಕುಳಿತಿಲ್ಲ ಬದಲಿಗೆ ಇನ್ನಷ್ಟು ಭದ್ರ ಪಡಿಸುತ್ತಿದ್ದಾರೆ.. ಇದು ನನ್ನ ಕವಿತೆಯ ಆಶಯ..)

(ಪುಟ್ಟ ಚಪ್ಪಾಳೆಗಳು ಬಂದವು)

೩ಕೆ ತಂಡಕ್ಕೆ ಒಂದು ಸಲಾಂ !!!

ಕೊನೆಯ ಮಾತು.. ಈ ಚಿತ್ರವನ್ನು ನೋಡಿದಾಗ Law Associates board ನೋಡಿದಾಗ ಮನಸ್ಸಿಗೆ ಬಂದದ್ದು ..

೧) ಕಳೆದ ವರ್ಷ (೨೦೧೭) ನನಗೆ ಕಾನೂನಿನ ಮಾರ್ಗದರ್ಶನ ಬೇಕಿದ್ದಾಗ ಸಹಾಯ ಮಾಡಿದ ನನ್ನ ಹೈಸ್ಕೂಲ್ ಗೆಳೆಯ
     ​ಕೃಷ್ಣೋಜಿ‌ ರಾವ್, ವೃತ್ತಿಯಲ್ಲಿ ವಕೀಲ.
೨) ನನ್ನ ಅದ್ಭುತ ಗೆಳತಿ ನಿವೇದಿತಾ ಚಿರಂತನ್,  ಕಾನೂನು ಪದವೀಧರರು.
೩) ೩ಕೆ ತಂಡದ ಜೆವಿಎಂ ನಾಯ್ಡು, ಇವರು ನನ್ನ ಸ್ನೇಹಿತರು ಹಾಗೂ ವೃತ್ತಿಯಲ್ಲಿ ವಕೀಲರು..

ಈ ಮೂವರು ಅದ್ಭುತ ಗೆಳೆಯರಿಗೆ ನನ್ನ ಕವನವನ್ನು ಅರ್ಪಿಸುತ್ತಿದ್ದೇನೆ.. ಮತ್ತು ಈ ಅವಕಾಶ ನೀಡಿದ ೩ಕೆ ತಂಡಕ್ಕೆ ಒಂದು ಸಲಾಂ ಎಂದು ಹೇಳಿ ಮಾತು ಮುಗಿಸಿದೆ..!


ಮನದೊಳಗೆ ಇದ್ದ ಭಯ ಎಂಬ ಭೂತವನ್ನು ಅಟ್ಟಿ ಹೊರಹಾಕಿದ ಖುಷಿ ಮನದಲ್ಲಿ ಮೂಡಿತ್ತು.. !!!

ರಾತ್ರಿ ಮನೆಗೆ ಹೋದಾಗ.. ಒಂದು ಸುಂದರ ಭಾನುವಾರವನ್ನು ಭಾವನೆಗಳ ಕಣಜದಲ್ಲಿ ಹೊತ್ತು ಓಡಾಡಿದ ಸಾರ್ಥಕ ಭಾವ ಮೂಡಿತ್ತು.. !!!

Wednesday, October 24, 2018

Happie Bdday - ನಿವ್ಸೀ ಅಂದ್ರೆ CB!!!

ಒಂದು ಪುಸ್ತಕ ಬಾರಿ ಸದ್ದು ಮಾಡುತ್ತಿತ್ತು.. ನನಗೆ ಯಾಕೋ ಆ ನಿಶ್ಯಬ್ಧದ ಹೊತ್ತಿನಲ್ಲಿ ಈ ಸದ್ದು ಹಿಂಸೆ ಮಾಡುತ್ತಿದೆ ಅನ್ನಿಸಿತು.. ಕಪಾಟಿನ ಹತ್ತಿರ ಹೋದೆ.. ಕಿವಿಯಾನಿಸಿ ಕೇಳಿದೆ.. ಯಾವ ಕಡೆಯಿಂದ ಸದ್ದು ಬರುತ್ತಿದೆ ಎಂದು ಸೂಕ್ಷ್ಮವಾಗಿ ಗಮನಿಸಿದಾಗ ಗೊತ್ತಾಯಿತು..

ಮೆಲ್ಲಗೆ ಆ ಪುಸ್ತಕವನ್ನು ಕೈಗೆತ್ತಿಕೊಂಡೆ.. ಒಂದೊಂದೇ ಪುಟ ತೆಗೆಯುತ್ತಾ ಹೋದೆ.. ೨೦೧೮ನೇ ಪುಟದ ೧೦ನೇ ಸಾಲಿನ ೨೪ನೇ ಪದದಲ್ಲಿ ಒಂದು ಆಕೃತಿ ಹೊರ ಬರಲು ಸಾಹಸ ಮಾಡುತ್ತಿತ್ತು.. ಏನಪ್ಪಾ ಇದು ಎಂದು ಅಚ್ಚರಿಯಾಗಿ ಮೆಲ್ಲನೆ ಆ ೨೪ ನೇ ಪದವನ್ನು ಬಿಡಿಸಿ.. ಆ ಪದಗಳಿಗೆ ಸಿಕ್ಕಿಹಾಕಿಕೊಂಡ ಆ ಆಕೃತಿಯನ್ನು ಬಿಡಿಸಿ ಮೆಲ್ಲನೆ ಕೈಕೊಟ್ಟು ಪುಸ್ತಕದಿಂದ ಹೊರ ಬರಲು ಸಹಾಯ ಮಾಡಿದೆ..

ನೀಳ ಕಪ್ಪುಕೂದಲು.. ಸುಮಾರು ಐದುವರೆ ಅಡಿ ಎತ್ತರ.. ತುಸು ಶ್ವೇತ ವರ್ಣ ತುಸು ಶ್ಯಾಮಲಾ ವರ್ಣದ ತ್ವಚ್ಛೆ.. ನೋಡಿದೊಡನೆ ಆಹಾ ಎನಿಸುವ ದಟ್ಟ ಕಾಡಿಗೆಯ ಕಣ್ಣುಗಳು.. ತಿದ್ದಿ ತೀಡಿದಂಥಹ ನಾಸಿಕ.. ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕು ಎನಿಸುವ ಚೆಲುವೆ ಪುಸ್ತಕದಿಂದ ಒಂದೊಂದೇ ಹೆಜ್ಜೆ ಇಡುತ್ತಾ ಹೊರಬಂದಳು..

"ಶ್ರೀ.. ಹೇಗಿದ್ದೀಯಾ . "

"ನಮಸ್ಕಾರ.. ನಾ ಆರಾಮು ನೀವು"

"ಏನ್ ಶ್ರೀ ಇದು ನೀವು ತಾವು ಅಂತೆಲ್ಲ.. ನೀನು ನನ್ನ ಸೃಷ್ಟಿ ಮಾಡಿದವ.. ನಾ ನಿನ್ನ ಅಭಿಮಾನಿ.. ಗೌರವ ಮನದಲ್ಲಿ ಇದೆ ಅಷ್ಟು ಸಾಕು.. "

"ಸರಿ.. ಈಗ ನೀ ಬಂದ ಕಾರಣ ಹೇಳು?"

"ಒಂದು ಕೇಸ್ ಸಿಕ್ಕಿದೆ.. ಅದನ್ನು ಪತ್ತೆ ಮಾಡಬೇಕಿತ್ತು.. ಅದಕ್ಕೆ ಪುಸ್ತಕದಿಂದ ಹೊರಬರಲು ಒದ್ದಾಡುತ್ತಿದ್ದೆ.. ನೀ ಬಂದೆ.. ನನ್ನ ಹೊರಬಿಟ್ಟೆ.. ಈಗ ಆ ಕೇಸು ಬಹಳ ಮುಖ್ಯ.. ಅದಕ್ಕೆ ನಾ ಹೊರಟೆ.. ನೀ ಇಲ್ಲೇ ಇರು.. ಆದಷ್ಟು ಬೇಗ ಬರುವೆ.. ಎಲ್ಲಿಗೂ ಹೋಗಬೇಡ"

"ಸರಿ ಕಣೋ  .. ಹೋಗಿ ಬಾ" ನಾ ಇಲ್ಲೇ ಕಾಯುತ್ತಿರುವೆ.. ಕಪಾಟಿನ ಹತ್ತಿರ..

                                                                    *****
ಕೇಸಿನ ಜಾಡು ಹಿಡಿದು ಹೊರಟಳು ಪುಸ್ತಕದಿಂದ ಹೊರಬಂದ ನಾಯಕಿ.. ದಾರಿಯುದ್ದಕ್ಕೂ ಅಮೋಘ ಪೇಂಟಿಂಗ್ ಗಳು ಸಾಲಾಗಿ ಜೋಡಿಸಿದ್ದವು.. ಒಂದು ಗಹನವಾದ ಕೇಸಿನ ಯೋಚನೆಯಲ್ಲಿ ಹೆಜ್ಜೆ ಇಟ್ಟವಳಿಗೆ ದಾರಿಯಲ್ಲಿ ಕಾಣುತಿದ್ದ ದೃಶ್ಯಗಳು ಅವಳ ಯೋಚನಾ ಲಹರಿಯನ್ನು ತಪ್ಪಿಸಲು ಸೋಲುತ್ತಿದ್ದವು..


ತನ್ನ ಮೊಬೈಲಿನಲ್ಲಿ ಇದ್ದ ನಕ್ಷೆ ನೋಡುತ್ತಾ ಸರಿಯಾದ ಜಾಡಿನಲ್ಲಿ ಹೋಗುತ್ತಿದ್ದೇನೆ ಎಂದು ಖಚಿತ ಪಡಿಸಿಕೊಂಡಳು.. ಅದ್ಭುತವಾದ ಚಿತ್ರಗಳು.. ಮರಗಳಿಗೆ.. ಮನೆಗಳಿಗೆ ನೇತು ಹಾಕಿದ್ದರು .. ಒಂದಕ್ಕಿಂತ  ಒಂದು ಅದ್ಭುತ ಚಿತ್ರಗಳು..





ಹಾರುತಿದ್ದ ಕೂದಲನ್ನು ಕಿವಿಯ ಹಿಂದೆ ಸರಿಸಿಕೊಂಡು.. ಕಣ್ಣಿಗೆ ಏರಿಸಿದ್ದ ಕೂಲಿಂಗ್ ಕನ್ನಡಕ ಮತ್ತೆ ಸರಿ ಪಡಿಸಿಕೊಂಡು ಮುಂದಕ್ಕೆ ಹೆಜ್ಜೆ ಇಟ್ಟಳು..

ಮಕ್ಕಳ ಚಿತ್ರಗಳು, ನೃತ್ಯಗಾರ್ತಿಯ ಚಿತ್ರಗಳು..ಮುದ್ದು ಮುದ್ದು ತಾಯಂದಿರ ಫೋಟೋಗಳು.. ಒಂದೇ ಎರಡೇ.. ಎಲ್ಲವೂ ಸೊಗಸು..

ಹಾಕಿಕೊಂಡಿದ್ದ ಜಾಕೆಟ್ ತೆಗೆದು ತನ್ನ ಹೆಗಲ ಮೇಲೇರಿಸಿಕೊಂಡು.. ಜೇಬಿನಲ್ಲಿದ್ದ ಬಬಲ್ ಗಮ್ ರಜನಿ ಸ್ಟೈಲ್ ನಲ್ಲಿ ಬಾಯಿಗೆ ಹಾಕಿಕೊಂಡು ಜಗಿಯುತ್ತಾ ಹೋದಳು..

ಇಲ್ಲಿ ಆತ್ಮದ ಗೆಳೆಯರು ಸಿಗುತ್ತಾರೆ.. ಎಂಬ ಫಲಕ ಓದಿ ಕುತೂಹಲದಿಂದ ಹೆಜ್ಜೆ ಹಾಕಿದಳು..

ಟ್ರಿಂಗ್ ಟ್ರಿಂಗ್ .. ಕರೆ ಘಂಟೆ ಸದ್ದು ಮಾಡಿತು.. ಮೆಲ್ಲಗೆ ಬಾಗಿಲು ತೆಗೆಯಿತು.. ಒಳಗೆ ನೋಡಿದರೆ ಜನವೋ ಜನ ಅಂದು ಕೊಂಡರೆ ಊಹುಂ soul friends ಅಂದರೆ ಸಾವಿರಾರು ಇರುತ್ತಾರೆಯೇ.. ಇಲ್ಲವೇ ಇಲ್ಲ.. ಇದ್ದವರು ಕೆಲವೇ ಕೆಲವರು.. ಎಲ್ಲರ ಮೊಗವನ್ನು ನೋಡುತ್ತಾ.. ಹಾಕಿದ್ದ ಹೈ ಹೀಲ್ಡ್ಸ್ ಸ್ಲಿಪ್ಪರ್ ತೆಗೆದು ಒಳಗೆ ಹೆಜ್ಜೆ ಇಟ್ಟಳು..

ಏನಪ್ಪಾ ಈ ಸಂಭ್ರಮ ಎಂದು ಹಾಗೆ ಕಣ್ಣರಳಿಸಿ ನೋಡಿದಳು.. ಅಲ್ಲೊಂದು ಸ್ವಾಗತ ಫಲಕ ಕಾಣಿಸಿತು.. 


ನಿವ್ಸೀ ಅಂದ್ರೆ.... hmmm

ನೇರಳೆ ಬಣ್ಣದ 
ರೈನ್ ಕೋಟ್ ಹುಡುಗಿ....

ಅವಳದೇ ಲೋಕ
ಬಣ್ಣಗಳ ಪಾಕ....

ಬೆರಗು ಮೂಡಿಸಿ
ಕಂಗೊಳಿಸುವ ಕಲೆ....

ಮಾತು ಮೀರಿಸುವ
ಪ್ರೀತಿಯ ಸಂಕೋಲೆ....

ಜೀವ ತುಂಬಿಸೆ 
ಒಳಗಣ್ಣಿನ ಕ್ಯಾಮೆರಾ....

ಆಗಾಗ ಶಾಯರೀ 
ಘಜಲ್ಗಳ ಸಾಹಸ....

ರಂಗುರಂಗು ಇವಳ ಲೋಕ
ನಿವ್ಸೀ ಮುದ್ದ್ಮುದ್ದು ಆಗಾಗ....

Happie Bdday Nivsy
Stay Blessed N Colorful 
May your world of Colors
Brighten every moment of your Life
Lovs n hugs,

                                          Roopa..............! 

ಅದನ್ನು ನೋಡಿದವಳೇ.. ಕನ್ನಡಕ ತೆಗೆದು ಜಾಕೆಟ್ ತುದಿಗೆ ಸಿಕ್ಕಿಸಿಕೊಂಡು .."ಇಲ್ಲಿ ನಿವೇದಿತಾ ಅಂದ್ರೆ ಯಾರು ಮುಂದೆ ಬನ್ನಿ" ಬೇಗ ಬನ್ನಿ.. ನಾ ಕೇಸನ್ನು ಬೇಗ ಮುಗಿಸಬೇಕು"

ಯಾರೂ ತುಟಿ ಪಿಟಿಕ್ ಅನ್ನಲಿಲ್ಲ.. .. 
"ನೋಡ್ರಿ ಸಿಬಿ.. ಬೇಗ ಬನ್ನಿ.. ನನಗೆ ಹೆಚ್ಚುಹೊತ್ತಿಲ್ಲ .. ಶ್ರೀ ಅಲ್ಲಿ ಕಾಯ್ತಾ ಇದ್ದಾನೆ .ನಾ ಬೇಗ ಹೋಗಬೇಕು.. ಬೇಗ ಬನ್ನಿ.. "

ಸದ್ದಿಲ್ಲ .. ಎಲ್ಲರೂ ಎಲ್ಲರನ್ನು ನೋಡುತ್ತಿದ್ದರು ..

"nivsi" ಬೇಗ ಬಾರಮ್ಮ.ಪುರುಸೊತ್ತಿಲ್ಲ .. ನನ್ನ ಗಡಿಯಾರ ಆಗಲೇ ಮುಂದಕ್ಕೆ ಓಡುತ್ತಿದೆ.. ತುಂಬಾ ಕೆಲ್ಸಗಳು ಇವೆ.. "

ಇಲ್ಲ.. ಎಲ್ಲರೂ ಸುಮ್ಮನಿದ್ದರೆ ಹೊರತು ಯಾರು ನಿವೇದಿತಾ, ಯಾರು ಸಿಬಿ.. ಯಾರು nivsi ಅಂತ ಯಾರಿಗೂ ಗೊತ್ತಾಗಲಿಲ್ಲ .

ನೋಡ್ರಿ.. ನನಗೆ ಇವತ್ತು ನಾಮಕರಣ ಮಾಡ್ತೀನಿ ಅಂತ ಹೇಳಿದ್ರು .. .ಅದಕ್ಕೆ ನಿಮ್ಮನ್ನು ಹುಡುಕಿಕೊಂಡು ಬಂದಿರೋದು ..ಬನ್ನಿಪಾ ದಯವಿಟ್ಟು.. ಹೆಸರಿಲ್ಲದೆ ಈ ಜಗತ್ತಿನಲ್ಲಿ ಇರೋಕೆ ಆಗೋಲ್ಲ ..

ಹಿಂದಿನಿಂದ ಬೌ ಎನ್ನುತ್ತಾ ಸದ್ದು ಮಾಡಿ.. ಹೊರಬಂದರು.. ನಗುವಿನ ಒಡತಿ.. ಅವಳ ಕೈಯನ್ನು ಹಿಡಿದು.. ಅವಳ ಕೈಯಿಂದಲೇ ಒಂದು ದಾರವನ್ನು ಎಳೆಸಿದರು... ಫಲಕ ನೋಡಿ ಖುಷಿಯಾಯಿತು ..

ಜೇನು ದನಿಯೊಂದು ಮಾತಾಡಿತು . "ಇಂದಿನಿಂದ ನಿಮ್ಮ ಹೆಸರು ಮೃಣಾಲಿನಿ.. ಶ್ರೀ ಬರೆಯುವ ಸಾಹಸ/ಪತ್ತೇದಾರಿ/ಕುತೂಹಲಕಾರಿ ಕತೆಗಳನ್ನು ಭೇದಿಸಿ ನುಗ್ಗುವ ನಾಯಕಿ ನೀವೇ.. ಇವತ್ತಿಂದ ನಿಮ್ಮ ನಾಮಕರಣವಾಗಿದೆ.. ಶುಭವಾಗಲಿ ಎಂದು .. ಅವಳ ಕಿವಿಯಲ್ಲಿ "ಮೃಣಾಲಿನಿ.. ಮೃಣಾಲಿನಿ.. ಮೃಣಾಲಿನಿ" ಎಂದು ಮೂರು ಬಾರಿ ಹೇಳಿದರು ..

ನಿವೇದಿತಾ ಅಕ್ಕ.. ನಿಮಗೆ ಧನ್ಯವಾದಗಳು ಅದ್ಭುತ ಹೆಸರು ಕೊಟ್ಟಿದ್ದೀರಾ... ಅದಕ್ಕೆ ಧನ್ಯವಾದಗಳು.. ನಿಮ್ಮ ಇಬ್ಬರು ಅದ್ಭುತ ಸ್ನೇಹಿತರು.. ನಾ ಬರುವ ದಾರಿಯುದ್ದಕ್ಕೂ ನಿಮ್ಮ ಕೈಗಳಿಂದ, ಕಣ್ಣುಗಳಿಂದ ಅರಳಿದ ಕಲಾಕೃತಿಗಳನ್ನು ನಿಲ್ಲಿಸಿದ್ದರು.. ಆದರೆ ನಿಮಗೆ ಜನುಮದಿನದ ಶುಭಾಶಯ ಕೋರುವುದಕ್ಕಾಗಿ ಅಲ್ಲಿ ನಿಲ್ಲದೆ ಬೇಗ ಬೇಗ ಬಂದೆ.. ನನಗೆ ಹೆಸರು ಬೇಕಿತ್ತು.. ನಿಮಗೆ ಶುಭ ಹಾರೈಸಬೇಕಿತ್ತು.. ಜನುಮದಿನದ ಶುಭಾಶಯಗಳು ನಿವೇದಿತಾ ಚಿರಂತನ್ ... ಅಲಿಯಾಸ್ ನಿವಿ.. ಅಲಿಯಾಸ್ ನಿವ್ಸ್ ಅಲಿಯಾಸ್ ಸಿಬಿ..

"ಮೃಣಾಲಿನಿ  .. ನನಗೆ ಇಷ್ಟವಾದ ಹೆಸರಿದು.. ಹಾಯ್  ಸೋಲ್ ಫ್ರೆಂಡ್ಸ್ .. ನಿಮಗೆ ಹೇಗೆ ಧನ್ಯವಾದಗಳು ಹೇಳಿದರೂ ಕಡಿಮೆ.. ಧನ್ಯವಾದಗಳು ರೂಪಕ್ಕ.. ಧನ್ಯವಾದಗಳು ಶ್ರೀ.. ಧನ್ಯವಾದಗಳು ಮೃಣಾಲಿನಿ.. !!!

                                                                             *****
ಶ್ರೀ ಕಾಯುತಿದ್ದ .. ಸಂತಸದಿಂದ ನಲಿಯುತ್ತಾ ಬಂದ ಮೃಣಾಲಿನಿ ಪುಸ್ತಕದೊಳಗೆ ನಗುತ್ತಾ ಹೋಗಿ ಪುಸ್ತಕದೊಳಗೆ ಪದವಾದಳು ಮುಂದಿನ ಕೇಸಿನ ಬಗ್ಗೆ ಯೋಚಿಸುತ್ತಾ ಆಹಾ ಎಂಥಹ ದಿನ ನನಗೆ ನಾಮಕರಣವಾಗಿದೆ.. ಧನ್ಯವಾದಗಳು ನಿವೇದಿತಾ ಅಕ್ಕಾ.. ಎನ್ನುತ್ತಾ ಪುಸ್ತಕದಲ್ಲಿ ಕಥೆಯಾದಳು.. ಮುಂದೆ ಬರಲಿದೆ "ಮೃಣಾಲಿನಿ ಕಥಾಲೋಕ"   .    

(ಮೇಲೆ ಕಾಣಿಸಿದ ಚಿತ್ರಗಳು ನಿವೇದಿತಾ ಚಿರಂತನ್ ಅವರ ಅದ್ಭುತ ಕಲಾಕೃತಿಗಳಲ್ಲಿ ಕೆಲವು ಮಾತ್ರ.. ಕಲಾವಿದೆ, ಚಿತ್ರಗಾರ್ತಿ, ಅದ್ಭುತ ಛಾಯಾಗ್ರಾಹಕಿ, ಕತೆಗಾರ್ತಿ, ಅದ್ಭುತ ಮಾತುಗಾರ್ತಿ.. ಎಲ್ಲಕ್ಕಿಂತ ಮಿಗಿಲಾಗಿ ನಮ್ಮಯ ಅದ್ಭುತ ಆತ್ಮದ ಗೆಳತೀ.. )

"DFR ಮತ್ತು ನನ್ನ ಕಡೆಯಿಂದ ಜನುಮದಿನದ ಶುಭಾಶಯಗಳು ಸಿಬಿ"